30 ಡಿಸೆಂಬರ್ 2009

ಇದೊಂದು ಸಾರ್ಥಕತೆಯೋ? ಅಥವಾ ಸ್ವಾರ್ಥವೋ?



ಇಂಥಹದೊಂದು ಯೋಚನೆ ನನ್ನ ತಲೆಗೆ ಬಂದದ್ದು ಇಂದು ಬೆಳ್ಳಿಗ್ಗೆ ವಿಷ್ಣುವರ್ಧನ್ ತೀರಿಕೊಂಡ ಸುದ್ದಿ ತಿಳಿದ ಮೇಲೆ. ಅಯ್ಯೊ ಪಾಪ ಹೋಗಬಾರದಿತ್ತು, ಚಿನ್ನದಂತಹ ಮನುಷ್ಯ, ಎಂಥಹ ಅದ್ಬುತ ನಟ, ಇತ್ತೀಚೆಗೆ ಆಧ್ಯಾತ್ಮಿಕತೆ ಕಡೆಗೆ ಬಹಳ ಬದಲಾಗಿದ್ದರು. ಅವರ ವ್ಯಕ್ತಿತ್ವ ಬಗೆಗೆ ಅವರ ಬಗೆಗೆ ನಮಗೆ ನಮ್ಮವರೆ, ನಮ್ಮ ಮನೆಯವರೇ ಕಳೆದುಹೋದರೆಂಬಷ್ಟು ನೋವಾಗುತ್ತದೆ.ಮುಂಜಾನೆದ್ದು ಟಿ.ವಿ.ಮುಂದೆ ಕುಳಿತು ಅಲ್ಲಿರುವ ದೃಶ್ಯ ನೋಡುವಾಗ ನಮಗೆ ತಿಳಿಯದಂತೆ ಕಣ್ಣು ಒದ್ದೆಯಾಗುತ್ತವೆ. ಅಯ್ಯೋ ಇನ್ನಷ್ಟು ವರ್ಷವಿರಬಾರದಾಗಿತ್ತೆ ಎನಿಸುತ್ತದೆ. ನಿನ್ನೆ ಮಧ್ಯಾಹ್ನ ನನ್ನ ಸ್ನೇಹಿತ ಅಶ್ವತ್ ಅವರು ಹೋದರು ಎಂದು ತಿಳಿಸಿದಾಗ, ನಮ್ಮವರೇ ನಮ್ಮ ಮನೆಯವರೇ ಕಳೆದುಹೋದರೆಂಬಂತೆ ಮಂಕಾಗಿಬಿಟ್ಟೆ. ನಾನು ಅವರನೆಂದು ಕಂಡಿಲ್ಲ, ಮಾತನಾಡಿಸಿಲ್ಲ, ಅವರ ಬಗ್ಗೆ ಅತಿ ಹೆಚ್ಚು ಗೊತ್ತಿಲ್ಲ, ನಾನು ಆನಂದಿಸಿರುವುದು ಅವರ ಗಾಯನವನ್ನು ಮಾತ್ರ. ನನಗೆ ತಿಳಿದಿರುವುದು ಅವರ ಗಾಯನ ಮತ್ತು ಕನ್ನಡಕ್ಕೆ ಅವರು ಸಲ್ಲಿಸಿದ ಕೊಡುಗೆ. ವೈಯಕ್ತಿಕವಾಗಿ ನಾವೆಂದು ಆತ್ಮೀಯರಲ್ಲ, ಆದರೂ ಇಂಥಹದ್ದು ಆಗುವುದು ಯಾಕೆ? ಗೆಳೆಯ ಗೆಳತಿಯರನ್ನು ಕಳೆದುಕೊಂಡಷ್ಟೆ ನೋವಾಗುವುದಾದರೂ ಏಕೆ? ದಿನಕ್ಕೊಮೆಯಾದರೂ ಅಶ್ವತ್ ಅವರ ಗಾಯನ ಕೇಳುವಂತೆ ಮಾಡಿದ ಅವರ ಕಂಚಿನ ಕಂಠ ನಮ್ಮನ್ನು ಸಂಪೂರ್ಣ ಆವರಿಸಿತ್ತೆ? ಅಯ್ಯೋ ಈ ಜನರು ಯಾಕಾದರೂ ಸಾಯುತ್ತಾರೆ, ಅಭಿಮಾನಿಗಳು ಎಂದಾಕ್ಷಣ ಸಾಯಬೇಕೆ? ಅವರೇನು ಮಾಡಿದ್ದರು ನಮಗೆ ನಮ್ಮ ಸಮಾಜಕ್ಕೆ ಎನ್ನುವ ಅನೇಕ ಜನಸಮೂಹಕ್ಕೆ ನನ್ನ ಬಳಿ ಉತ್ತರವಿದೆ. ಅವರು ನನಗೆ ನೇರ ಸಂಬಂಧವಿಲ್ಲದಿದ್ದರೂ ನನಗೆ ಸಹಾಯ ಮಾಡಿರುವುದು ಅತಿ ಹೆಚ್ಚು, ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗೆಳತಿ ನನ್ನನಗಳಿ ದೂರಾದಾಗ ನನಗೆ ನೆರವಾಗಿ ಸಾಂತ್ವಾನ ಹೇಳಿದ್ದು ಅವರ ಆ ಗೀತೆಗಳು. ಮೌನ ತಬ್ಬೀತು ಎನ್ನುವಾಗ ನನ್ನೊಳಗೆ ಅಡಗಿರುವ ಅದೆಷ್ಟೋ ನೋವುಗಳು ಹರಿದು ಬರುತ್ತವೆ, ಸಮಧಾನ ಗೊಳಿಸುತ್ತವೆ. ಅದರಂತೆಯೇ, ಹೇಳಿ ಹೋಗು ಕಾರಣ ಎಂದು ಅವರ ಗಾನ ಬಂದೊಡನೆ ನಾನು ಕಳೆದುಹೋದ ದಿನಗಳ ನೆನೆದು ಮರುಗುತ್ತೇನೆ ನಂತರ ಪ್ರೀತಿಯಲ್ಲಿ ಸೋಲೆಂಬುದಾಗಲಿ ನೋವಾಗಲಿ ಇಂದಿನದಲ್ಲವೆಂದು ಸಮಧಾನವಾಗುತ್ತದೆ. ಎಲ್ಲರೂ ಎಲ್ಲಾ ಕಾಲದಲ್ಲಿಯೂ ಅನಿಭವಿಸುತ್ತಿರುವುದನ್ನು ನಾವು ಇಂದು ಅನುಭವಿಸುತ್ತಿದ್ದೇವೆ, ಮೋಸ ವಂಚನೆ, ಸುಖ, ದುಃಖ ಇವೆಲ್ಲವೂ ಎಂದೆಂದಿಗೂ ಇದ್ದವು ಇಂದು ನಾಳೆಯೂ ಇರುತ್ತವೆಂಬುದನ್ನು ನಾವು ಅರಿಯಲು ಸಹಾಯ ಮಾಡುವುದೇ ಅಶ್ವತ್ ರವರ ಗಾನಸುಧೆ.

ಸಂಗೀತವೆಂಬುದು ಬರಿಯ ಸಂತೋಷಕ್ಕೆ ಮಾತ್ರವಲ್ಲ ಅದರಿಂದ ಗುಣವಾಗದ ರೋಗವಿಲ್ಲ, ಮನುಷ್ಯನ ನೆಮ್ಮದಿಯ ಬದುಕಿಗೆ, ನೋವಿನಿಂದ ಹೊರಬರಲು ಸಂಗೀತ ಬಹಳ ಮುಖ್ಯವಾದದ್ದು, ನನ್ನಂತಹ ಸಾವಿರಾರು ನೊಂದ ಮನಗಳಿಗೆ ಶಕ್ತಿ ತುಂಬವ ಗಾಯನಗಳು ಕಡಿಮೆ ಅಲ್ಲ. ಆದರೇ, ರಾಜಕಾರಣಿಗಳು ತಿವಾರಿ ತನ್ನ ಎಂಬತ್ತನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳದ ಬಗ್ಗೆಗೆ ದೂರಾದಾಗ, ಅಯ್ಯೋ ಇಂಥಹ ನನ್ಮಕ್ಕಳು ಸಾಯಬಾರದೇ ಎನಿಸುತ್ತದೆ.ದೇವೇಗೌಡರು ಪದೇ ಪದೇ ಗಾನ ಹಾಡುವಾಗ ಈ ಮುದುಕನಿಗೆ ಸಾವು ಬರುವುದೆಂದು ಎನಿಸುತ್ತದೆ? ನಮ್ಮ ಅನೇಕ ಪ್ರೋಫೆಸರ್ ಗಳು ವಯಸ್ಸಿನ ಮಿತಿಯಿಲ್ಲದೇ ಕೆಟ್ಟದ್ದಾಗಿ ವರ್ತಿಸಿದ್ದಾಗ ಛೀ ಥೂ ಅನಿಸುತ್ತದೆ. ಅದರಂತೆಯೇ ಮೊನ್ನೆ ಎಂ.ಪಿ.ಪ್ರಕಾಶ್ ಅವರು ಬರೆದ ಒಂದು ಕಥೆ ಓದುತ್ತಿದ್ದಾಗ ಅಯ್ಯೊ ಇವರು ಇರಬೇಕಿತ್ತು ರಾಜಕೀಯದಲ್ಲಿ ಎನಿಸುತ್ತಿತ್ತು, ನನ್ನ ನೆಚ್ಚಿನ ಬರಹಗಾರರಾದ ತೇಜಸ್ವಿ ಅವರು ಹೋದಾಗ ನಿಜಕ್ಕೂ ಅದೆಷ್ಟು ವ್ಯತೆಯಾಯಿತೆಂದರೇ ಹೇಳತೀರದು. ರಾಜಶೇಖರ್ ರೆಡ್ಡಿ ಹೋದಾಗಲೂ ಅಷ್ಟೇ.ಯಾರ ಸಾವು ನಮಗೆ ಸಂತೋಷ ಕೊಡುವುದಿಲ್ಲ, ಅಂಥಹ ವೀರಪ್ಪನ್ ಸತ್ತಾಗಲೂ, ಪ್ರಭಾಕರನ್ ಹೋದಾಗಲೂ, ನಮಗೆ ನೋವಾಗಿತ್ತು. ಸತ್ತಾಗ ನಾವು ಅವರನ್ನು ಕಾಣುವುದು ಕೇವಲ ಮನುಷ್ಯರಾಗಿ, ಅಲ್ಲಿ ಒಳ್ಳೆಯವರು ಕೆಟ್ಟವರೆಂಬ ಭೇಧವಿರುವುದಿಲ್ಲ. ಎಲ್ಲ ಜೀವವೂ ಒಂದೆ ಎಂದು ನೆನೆಯುತ್ತೇವೆ. ಬದುಕಿದ್ದಾಗ ನೋವು ಕೊಡುವವರನ್ನು, ಮೋಸ ಮಾಡುವವರನ್ನು ಅವರಿಗೆ ಕೆಟ್ಟದ್ದಾಗಲೀ ಎಂದು ಬಯಸಿದರೂ, ಅವರಿಗೆ ಕೆಟ್ಟದ್ದಾದಾಗ ಮರುಗುತ್ತೇವೆ, ಕೊರಗುತ್ತೇವೆ. ನನ್ನ ಜೀವದ ಗೆಳತಿ ಹೋದಾಗ ನನ್ನ ಜೀವವೇ ಹೋದಂತಾಗಿ ಅವಳಿಗೆ ಶಾಪವಿತ್ತರೂ ಅವಳ ಕಣ್ಣಲ್ಲಿ ನೀರು ಬಂದರೇ ನಾನು ಕರಗುತ್ತೇನೆ ಕಳೆದೇಹೋಗುತ್ತೇನೆ, ಕಾರಣ ನಾನು ಮನುಷ್ಯನೇ!!! ಇದೆಲ್ಲವೂ ನಮ್ಮ ಸ್ವಾರ್ಥಕ್ಕೆ ಅನಿಸುತ್ತದೆ ನಮ್ಮವರಾಗಿರುವ ತನಕ ಅವರಿಗೆ ಏನು ಆಗದಿರಲಿ ಎನ್ನುವ ಬಯಕೆ ನಮ್ಮವರಲ್ಲದೇ ಹೋದರೇ ಹಾಳಾಗಲೀ ಎನ್ನುವ ತವಕ. ಇದು ಸ್ವಾರ್ಥವೋ? ಅಥವಾ ಸಾರ್ಥಕತೆಯೋ? ಒಳ್ಳೆಯವರು ಮಾತ್ರ ಇರಲಿ ಎಂಬ ಬಯಕೆ ಇರಬಹುದೇ? ಅದಕ್ಕಾಗಿಯೇ ನಾವು ಅಂಥವರನ್ನು ಬಹಳ ಕಾಲ ಇರಲಿ ಎಂದು ಹಾರೈಸುತಿರುವುದೇ? ಉತ್ತರ ನಿಮಗೆ ಬಿಟ್ಟದ್ದು...

24 ಡಿಸೆಂಬರ್ 2009

ದುರ್ಜನರೆಂದರೆ ಒಂದೇ ಜಾತಿಯ ಮೃಗಗಳಲ್ಲವೇ???

ನಾನು ಇಲ್ಲಿ ನಮ್ಮ ಸಮಾಜದಲ್ಲಿರುವ ಜಾತಿಯ ಬಗೆಯಾಗಲಿ ಅದರ ಪರಿಣಾಮದ ಬಗೆಯಾಗಲಿ ಮಾತನಾಡುತ್ತಿಲ್ಲ. ಇದೊಂದು ಸತ್ಯ ಮತ್ತು ನೈಜ ಘಟನೆ, ನಾನು ಓದಿದ ಪರಿಸರ ವಿಜ್ನಾನ ವಿಭಾಗದಲ್ಲಿ ಇಂದಿಗೂ ನಡೆಯುತ್ತಿರುವ ದಾರುಣ ಕಥೆ. ಸಮಾಜದ ಏಳಿಗೆಯ ಬಗ್ಗೆ ತಿಳುವಳಿಕೆ ನೀಡಬೇಕಿದ್ದ ವಿವಿಯಲ್ಲಿ, ನಡೆಯುತ್ತಿರುವ ಜಾತಿಯತೆ, ಶೋಷಣೆ, ಅಧಿಕಾರ ದುರ್ಬಲತೆ, ದುರ್ನಡತೆಯ ಬಗ್ಗೆ ಬರೆಯತೊಡಗಿದ್ದೇನೆ. ಇದೂ ಯಾರ ಮೇಲಿನ ವಿರುದ್ದವೂ ಅಲ್ಲ ಇರುವುದನ್ನು ನೇರ ಹೇಳಿ ಮುಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತಿದ್ದೇನೆ.ಯುನಿವರ್ಸಿಟಿಯಲ್ಲಿನ ಕೊಳಕು ವ್ಯವಸ್ಥೆ ಓದಿರುವ ಸರ್ವರಿಗೂ ತಿಳಿದಿರುತ್ತದೆ, ಅದರ ಆಳ ಅಗಲ ಮಾತ್ರ ತಿಳಿದಿರುವುದಿಲ್ಲ. ಅದರ ಸಂಪೂರ್ಣ ಚಿತ್ರಣ ನಿಮ್ಮ ಮುಂದಿಡುತ್ತೇನೆ. ನಿರ್ಧಾರ ನಿಮಗೆ ಬಿಟ್ಟದ್ದು. ಪರಿಸರ ವಿಜ್ನಾನವೆಂಬ ವಿಷಯ ಇತ್ತಿಚೆಗೆ ಬಾರಿ ಚರ್ಚೆಯಲ್ಲಿದೆ.ಅದು, ಜಾಗತಿಕ ತಾಪಮಾನದಿಂದ ಇರಬಹುದು, ಅರಣ್ಯನಾಶದಿಂದ ಇರಬಹುದು, ಕಳೆದು ಹೋದ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಇರಬಹುದು, ಹೀಗೆ ಏನು ಹೇಳಿದರೂ ಪರಿಸರ ಸರ್ವನಾಶವೆನ್ನುವುದರಿಂದ ಬದಲಾವಣೆಯ ತನಕ ಬೊಬ್ಬೆ ಹೊಡೆಯುತ್ತಿದ್ದೇವೆ. ಆದರೇ ಅದನ್ನೇ ಐದಾರು ವರ್ಷ ಓದಿದವರು, ಅದರಲ್ಲೇ ಡಾಕ್ಟರೇಟ್ ತೆಗೆದುಕೊಂಡವರ ಬದುಕು ಹೇಗಿದೆ, ಓದಲು ಅವರು ಪಡುತ್ತಿರುವ ಪಾಡೇನು ಎಂಬುದು ಅಲ್ಪ ಜನರಿಗೂ ತಿಳಿದಿಲ್ಲ. ಪರಿಸರ ವಿಜ್ನಾನ ವಿಷಯವು ಕರ್ನಾಟಕದ ಎಲ್ಲ ವಿವಿ ಗಳಲ್ಲಿಯೂ ೧೯೯೨ರಿಂದ ನಡೆಯುತ್ತಿದೆ. ಪ್ರತಿ ವರ್ಷವೂ ಕನಿಷ್ಟ ೨೦ ವಿಧ್ಯಾರ್ಥಿಗಳು ಓದಿ ಹೊರಗೆ ಬರುತ್ತಿದ್ದಾರೆ. ೫೦-೧೦೦ ರ ತನಕ ಪಿ.ಎಚ್.ಡಿ ಪದವಿಗಳು ಹೊರಬಂದಿವೆ. ಆದರೇ ಉನ್ನತ ಉದ್ದೆಯಲ್ಲಿರುವವರ ಸಂಖ್ಯೆ ಒಂದೂ ಸಿಗುವುದಿಲ್ಲ. ಸರ್ಕಾರಿ ಕೆಲಸ ಸಿಗುವ ಅವಕಾಶವಿಲ್ಲದೇ, ಒದ್ದಾಡಿ ತಮ್ಮ ವಿಷಯದ ಬಗ್ಗೆ ಕೆಲಸ ಮಾಡದೇ ಬೇರೆ ಕ್ಷೇತ್ರಗಳಲ್ಲಿ ಮಾಡುತ್ತಿದ್ದಾರೆ. ಇವೆಲ್ಲದರ ನಡುವೆ ಬೆಂಗಳೂರು ವಿವಿ ಯಲ್ಲಿ ನಡೆಯುತ್ತಿರುವ ಅಸಹ್ಯಕರ ಸಂಗತಿಯನ್ನು ನಿಮ್ಮ ಮುಂದಿಡುತೇನೆ.
ವಿಭಾಗವನ್ನು ಪ್ರೊಫೆಸರ್ ಸೋಮಶೇಖರ್ ಕಳೆದ ಆರೇಳು ವರ್ಷಗಳಿಂದಲೂ ಆಳುತ್ತಾ ಬಂದಿದ್ದರು. ಇದರ ನಡುವೆ ಅವರ ವಿದ್ಯಾರ್ಥಿನಿಯಾದ ನಂದಿನಿಯನ್ನು ಅವರೇ ಆಯ್ಕೆ ಮಾಡಿ, ಪಿ.ಎಚ್.ಡಿ ಕೊಡಿಸಿ ತಂದು ಕುರಿಸಿದರು. ರೀಡರ್ ಆಗಲು ಅರ್ಹತೆ ಇಲ್ಲದವರನ್ನು ಆಯ್ಕೆ ಮಾಡಿರುವುದನ್ನು ಚರ್ಚಿಸಿ, ಅದೇ ವಿಭಾಗದ ವಿಶ್ವನಾಥ್ ಎಂಬವರು, ಕೋರ್ಟಿಗೆ ಹೋಗಿದ್ದರು. ಕೋರ್ಟ್ ಎಂದ ಮೇಲೆ ಅದು ಒಂದೆರಡು ವರ್ಷಕ್ಕೆ ಮುಗಿಯುವಂತೆ ಕಾಣಲಿಲ್ಲ ಅದು ಮುಂದುವರೆಸಲು ಆಗದೇ ಅವರು ಅದನ್ನು ಹಿಂದಕ್ಕೆ ಪಡೆಯುವಂತೆ ಮಾಡಲಾಯಿತು.ಅಲ್ಲಿಯೂ ಜಾತಿಯತೆ ನಡೆಯಿತೆಂಬುದನ್ನು ನೀವು ಒಪ್ಪಲೇಬೇಕು. ನಮ್ಮ ಇಂದಿನ ಸಮಾಜದಲ್ಲಿ ಕೊಲೆಗಾರನಾಗಿದ್ದರೂ, ನಮ್ಮ ಜಾತಿಯವೆನೆಂದೊಡನೆ ಅವನನ್ನು ಕ್ಷಮಿಸುವ, ಅಥವಾ ತಪ್ಪಿತಸ್ಥನಲ್ಲನೆನ್ನುವ ಮನಸ್ಥಿತಿ ಬಹಳಷ್ಟು ಮಂದಿಗಿದೆ.ಅದರಂತೆಯೇ ನಮ್ಮ ಜಾತಿಯಲ್ಲಿಯೇ ಒಡಕಿದ್ದರೇ ಬೇರೆಯವರು ನಮ್ಮ ಮೇಲೆ ಸವಾರಿ ಮಾಡುತ್ತಾರೆಂಬುದನ್ನು ಅರಿತ ಇಬ್ಬರೂ ರಾಜಿಯಾದರು. ಒಮ್ಮೆಗೆ ನಂದಿನಿಯವರ ಪ್ರೊಬೆಶನರಿ ಮುಗಿದ ತಕ್ಷಣ ಹಿಂದಿನಿಂದ ಆಳ್ವಿಕೆಯಲ್ಲಿದ್ದ ಸೋಮಶೇಖರ್ ವಿರುದ್ದ ಹೋಗಿ ಅವರ ಚೇರ್ ಪದವಿಯನ್ನು ಕಬಳಿಸಿದರು.ಅಲ್ಲಿಂದ ಶುರುವಾದ ಇವರ ಕಥೆಗಳು ರಣರಂಗವಾಗಿದ್ದು ಬಹಳ ಕಡಿಮೆ ಸಮಯದಲ್ಲಿ. ಅವರಿಗೆ ಅಷ್ಟು ವರ್ಷದಿಂದ ಇದ್ದ ಕುರ್ಚಿ ಹೋಯಿತಲ್ಲಾ ಎಂದು ಚಿಂತೆ. ಇವರಿಗೆ ನನ್ನ ಅಧಿಕಾರ ತೋರಿಸಬೇಕೆನ್ನುವ ಹಟ. ಸಣ್ಣ ಪುಟ್ಟ ವಿಷಯಗಳಿಗೆ ಕುಲ ಸಚಿವರ ಬಳಿಗೆ ಹೋಗುವುದು, ಕೋರ್ಟಿಗೆ ಹೋಗುವುದು, ಜಾತಿ ನಿಂದನೆ ಎನ್ನುವುದು, ಮಹಿಳೆಯ ಮೇಲೆ ದೌರ್ಜನ್ಯವೆನ್ನುವುದು, ಹೀಗೆ ಇವರಿಬ್ಬರೂ ಸೇರಿ ತಯಾರಿಸಿದ ಪಟ್ಟಿಗಳ ರಿಪೋರ್ಟ್ ಪುಟಗಳ ಸಂಖ್ಯೆ ೧೩೦. ನೂರ ಮೂವತ್ತು ಪುಟಗಳಿಗೆ ಒಂದು ಪಿ.ಎಚ್.ಡಿ ಪ್ರಬಂದ ಬರೆಯಬಹುದಿತ್ತು. ಈ ರಿಪೋರ್ಟ್ ತಯಾರಿಸಲು ಇವರ ಸಮಯ ಎಷ್ಟು ವ್ಯಯಿಸಿರಬಹುದು ನೀವೆ ಯೋಚಿಸಿ. ೫೦-೬೦ ಸಾವಿರ ರೂಪಾಯಿ ಸಂಬಳ ಪಡೆದು ಇವರು ಮಾಡುತ್ತಿರುವ ಕೆಲಸ ಇದು.ಇದನ್ನು ಬರೆಯಲು ಇವರು ತಮ್ಮ ಕೈಕೆಳಗಿರುವ ಪಿ.ಎಚ್.ಡಿ ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದಾರೆ, ಹಲವು ದೂರುಗಳನ್ನು ಕೊಡಿಸಿದ್ದಾರೆ, ವಿದ್ಯಾರ್ಥಿಗಳ ಸಹಿ ಸಂಗ್ರಹ ಮಾಡಿದ್ದಾರೆ. ಹೆದರಿಸಿ ಬೆದರಿದ್ದಾರೆ.ಯಾವ ವಿದ್ಯಾರ್ಥಿಯು ತನ್ನ ವಿದ್ಯಾಬ್ಯಾಸ ಕೆಡಿಸಿಕೊಳ್ಳಲು ಬಯಸುವುದಿಲ್ಲ, ಅವರು ಹೇಳಿದಂತೆ ಪತ್ರ ಬರೆದಿದ್ದಾರೆ. ಅವರ ಜೊತೆ ಹೋಗಿ ಪೋಲಿಸ್ ಮುಂದೆ ನಿಂತಿದ್ದಾರೆ. ಕೆಲವು ವಿದ್ಯಾರ್ಥಿಗಳು ಇದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

ಮೊನ್ನೆ ಶನಿವಾರ ನನ್ನ ಪಿಎಚ್.ಡಿ ಕೆಲಸಕ್ಕೆಂದು ಅಲ್ಲಿನ ಲ್ಯಾಬ್ ಗೆ ಹೋದಾಗ ನಡೆದ ಕಥೆಯನ್ನು ಕೇಳಿ. ಎರಡನೇ ಬಾರಿಗೆ, ನಂದಿನಿ ಮುಖ್ಯಸ್ಥೆಯಾಗಿದ್ದಾರೆ, ಆದ್ದರಿಂದ ಅವರು ಸ್ಟಾಕ್ ಚೆಕಿಂಗ್ ಮಾಡಲು ಹೊರಟಿದ್ದಾರೆ, ಆ ಸಮಯಕ್ಕೆ ಸರಿಯಾಗಿ, ಸೋಮಶೇಖರ್ ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿದ್ದಾರೆ. ಸೋಮಶೇಖರ್ ಅದನ್ನು ಕೇಳಲು ಬರುವ ಸಮಯಕ್ಕೆ ನಡೆದ ವಾಗ್ವಾದ ಹೀಗಿದೆ, ನಂದಿನಿ ನೀನು ಮಾಡುತ್ತಾ ಇರುವುದು ಸರಿಯಿಲ್ಲ, ಸ್ವಲ್ಪ ನೋಡಿ ನಡೆದುಕೊ. ಅದಕ್ಕೆ ಪ್ರತ್ಯುತ್ತರ, ನೀನು ಅರಚುಬೇಡ, ನನಗೂ ನಿನಗಿಂತ ಜೋರಾಗಿ ಕಿರುಚೋಕೆ ಬರುತ್ತದೆ. ಇವೆಲ್ಲಾ ಅವರು ಬಳಸಿರುವ ಪದಗಳು. ಅದು ವಿಭಾಗದ ಕಾರಿಡಾರ್ ನಲ್ಲಿ ನಿಂತು. ವಿದ್ಯಾರ್ಥಿಗಳ ಸಮ್ಮುಖದಲ್ಲಿ. ಇಲ್ಲಿ ನಿಮಗೆ ಒಂದು ಬಹುಮುಖ್ಯ ಸಂಗತಿ ಹೇಳಲೇ ಬೇಕಾಗುತ್ತದೆ, ಸಾಯಿನಾಥ್ ಎಂಬ ಮನುಷ್ಯ ನಂದಿನಿಯವರ ಪತಿದೇವರು, ನಮ್ಮಲ್ಲಿ ಹೆಂಡತಿ ಅಧಿಕಾರದಲ್ಲಿದ್ದರೆ ಗಂಡ ಮೂಗು ತೂರಿಸುವುದು ರಾಜಕೀಯದಲ್ಲಿ ಸಾಮಾನ್ಯ ಆದರೇ, ಒಂದು ವಿವಿ ಮಟ್ಟದಲ್ಲಿ ಇದು ನಡೆಯುತ್ತದೆಯೆಂದರೇ ನಮ್ಮ ವ್ಯವಸ್ಥೆಯ ಬಗ್ಗೆ ವಾಕರಿಕೆ ಬರುತ್ತದೆ. ಇವರು, ವಿಭಾಗಕ್ಕೆ ಬರುವುದು, ಅವರ ಹೆಂಡತಿಯ ರೂಮಿನಲ್ಲಿ ಗಂಟೆಗಟ್ಟಲೇ ಕೂರುವುದು, ಇದು ದಿನ ನಿತ್ಯದ ಚಟುವಟಿಕೆ. ಬರುವುದು ತಪ್ಪಲ್ಲ, ಆದರೇ ಸದಾ ಅಲ್ಲೇ ಕುಳಿತಿರುವುದು ಅವಶ್ಯಕತೆಯೇ? ಅದರಂತೆಯೇ, ನಾನು ನಿಮಗೆ ನಮ್ಮ ವಿಭಾಗದಲ್ಲಿದ್ದ ಕೆಲವು ಪ್ರೊಫೆಸರ್ ಎಂಬ ಮಹಾಶಯರ ಬಗ್ಗೆಯೂ ತಿಳಿಸಿಕೊಡಬೇಕಾಗುತ್ತದೆ. ಹುಡುಗಿಯರ ಮೈ ಮುಟ್ಟಿ, ಅವರ ಮೈ ಸವರಿ ಪಾಠ ಮಾಡುವ ಒಬ್ಬ ಪ್ರೋಫೆಸರ್ ಇದ್ದರು. ಹುಡುಗರನ್ನು ಆದಷ್ಟೂ ಗೇಲಿ ಮಾಡುತ್ತಿದ್ದ ಮಹಾಶಯರವರು. ಹುಡುಗರನ್ನು ಬೈಯ್ಯುವುದು, ಅವರನ್ನು ಉಗಿಯುವುದು, ಉತ್ತರ ಪತ್ರಿಕೆಯಲ್ಲಿ ತಪ್ಪಾಗಿ ಬರೆದಿದ್ದರೇ ಅದನ್ನು ಎಲ್ಲರ ಮುಂದೆ ಓದಿ ಹಂಗಿಸುವುದು, ಹೀಗೆ ಅವರ ತರಗತಿಯಲ್ಲಿ ಕುಳಿತುಕೊಳ್ಳುವುದಕ್ಕೆ ಬಹಳ ಮುಜುಗರಪಡಬೇಕಾಗಿತ್ತು. ಅದರಂತೆಯೇ ಪಿ.ಎಚ್.ಡಿ ವಿದ್ಯಾರ್ಥಿಗಳು ಇವರ ವಿದ್ಯಾರ್ಥಿಗಳು ಅವರ ವಿದ್ಯಾರ್ಥಿಗಳ ನಡುವೆ ಕೂಡ ಮಾತುಕತೆ ನಡೆಯದಂತೆ ಹೇಳಿದ್ದಾರೆ.ಸರ್ವರಿಗೂ ಶಿಕ್ಷಕರಾಗಬೇಕಿದ್ದ ಇವರುಗಳು, ಇರುವ ಹತ್ತು ವಿದ್ಯಾರ್ಥಿಗಳನ್ನು ಬೇರ್ಪಡಿಸಿ ಆಳುತ್ತಿರುವುದು ದುರದೃಷ್ಟಕರ. ಪತ್ರ ಬರೆಸುವುದು, ಅದನ್ನು ಪೋಸ್ಟ್ ಮಾಡಿಸುವುದು. ಇದು ಇದೊಂದೆ ಯುನಿವರ್ಸಿಟಿ ಕಥೆಯಲ್ಲ, ಕುವೆಂಪು, ಮೈಸೂರು ವಿವಿಯಲ್ಲಿಯೂ ಇದೆ.

ಇದಕ್ಕೆಲ್ಲಾ ನ್ಯಾಯ ಸಿಗುವುದು ಎಂದು? ಅಧಿಕಾರದ ಮೋಹದಲ್ಲಿ, ವಿದ್ಯಾರ್ಥಿಗಳನ್ನು ದುರುಪಯೋಗ ಪಡಿಸಿಕೊಂಡು, ಮಾತೆತ್ತಿದರೆ ನಿನ್ನ ಪಿ.ಎಚ್.ಡಿ ಮಣ್ಣು ಪಾಲಾಗುತ್ತದೆ, ನಿನ್ನ ಮಾರ್ಕ್ಸ್ ಹೋಗುತ್ತದೆ, ನಿನ್ನ ಡಿಗ್ರಿ ಹೋಗುತ್ತದೆ ಎಂದು ಹೆದರಿಸಿದಾಗ ವಿದ್ಯಾರ್ಥಿಗಳು ಹೆದರಿ ಅವರಿಗೆ ಬೇಕಾದ ಪತ್ರವನ್ನು ಬರೆಯುತ್ತಾರೆ, ದೂರನ್ನು ನೀಡುತ್ತಾರೆ, ಅದನ್ನು ಯಾರು ಗಂಬೀರವಾಗಿ ಸ್ವೀಕರಿಸುವ ಅವಶ್ಯಕತೆಯಿರುವುದಿಲ್ಲ.ಜಾತಿಯತೆಯ ಹೆಸರಿನಲ್ಲಿ ದೂರು ನೀಡಿಸುವುದು, ಜಾತಿ ನಿಂದನೆ ಮಾಡಿದ ಎಂದು ದೂರು ನೀಡುವುದು, ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡುತಿದ್ದಾರೆಂದು ದೂರು ನೀಡುವುದು ಹೀಗೆ, ನ್ಯಾಯ ನೀಡಬೇಕಾದವರು ಅದನ್ನು ದುರುಪಯೋಗ ಪಡಿಸಿಕೊಂಡು, ನಿಜಕ್ಕೂ ಶೋಷಿತ ಹೆಣ್ಣು ಮಕ್ಕಳನ್ನು ಅನುಮಾನದಿಂದ ಕಾಣುವಂತಾಗಿದೆ. ತಮ್ಮ ಜಾತಿಯವರನ್ನೇ ಇಟ್ಟುಕೊಂಡು ಅಧಿಕಾರ ನಡೆಸುವುದು, ಸಂಶೋಧನೆಯ ಗಂಧವೇ ತಿಳಿಯದ ಮೂರ್ಖ ಶೀಖಾಮಣಿಗಳಿಗೂ ಪಿ.ಎಚ್.ಡಿ ಕೊಡಿಸುವುದು, ಇರುವ ಒಂದೊಂದು ಪ್ರಾಜೆಕ್ಟ್ ನಲ್ಲಿನ ಡಾಟಾ ಬಳಸಿಕೊಂಡೂ ೨೦-೩೦ ಪೇಪರ್ ಮಾಡುವುದು, ಐದಾರು ಡಾಕ್ಟರೇಟ್ ಕೊಡಿಸುವುದು, ಹಿಂದಿನ ವಿದ್ಯಾರ್ಥಿಯ ಪ್ರಬಂದವನ್ನೇ ಸ್ವಲ್ಪ ಅದುಲು ಬದಲು ಮಾಡಿ ಒಪ್ಪಿಸುವುದು. ಒಂದಾ ಎರಡಾ, ಇವಕ್ಕೆಲ್ಲಾ ಕೊನೆಯೊಂದಿದೆಯಾ? ಇದರ ಹಿಂದೆ ಅತಿ ಬುದ್ದಿವಂತರೆನಿಸಿಕೊಂಡ ಬಹಳಷ್ಟು ಜನರ ಕೈವಾಡವಿದೆ, ಸರ್ಕಾರವಿದೆ, ಲೋಕಾಯುಕ್ತರನ್ನೆ ದಡ್ಡರನ್ನಾಗಿಸಿ, ಒಬ್ಬರ ವಿರುದ್ದ ಒಬ್ಬರು ದೂರು ನೀಡಿದ್ದಾರೆಂದರೆ ಅವರ ಕೈಚಳಕ ನಿಮಗೆ ತಿಳಿಯುತ್ತದೆ. ಕಳ್ಳರ ಸಂತೆ ಸಿನೆಮಾದಂತೆ, ಇವರೆಲ್ಲರೂ ಒಂದೇ ಯಾರನ್ನು ಕೊಳೆತು ನಾರುತ್ತಿರುವ ಸಮಾಜದಿಂದ ಪಾರುಮಾಡಲಾಗುವುದಿಲ್ಲ. ನೀವು ಅವರ ವಿರುದ್ದ ಹೋದರೇ ಒಂದು ನೀವು ಹುಚ್ಚರು, ಕೆಲಸಕ್ಕೆ ಬಾರದವರು, ಅಥವಾ ನಕ್ಸಲರು ಎಂದಾರು. ಇಲ್ಲದಿದ್ದರೇ ಜಾತಿಯತೆಯಿಂದ ಬಂದಿದ್ದಾನೆ, ಎನ್ನುವರು. ಜಾತಿ ಧರ್ಮ, ಮಹಿಳಾ ಸಬಲೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳು ಒಂದೆರಡಲ್ಲ. ಜಗತ್ತು ಪ್ರಳಯ, ತಾಪಮಾನವೆಂದು ಬೊಬ್ಬೆ ಹೊಡೆಯುತ್ತಿರುವಾಗ ಇವರುಗಳು ಹೀಗೆ ಲಜ್ಜೆ ಗೆಟ್ಟು ಕುಣೀಯುತ್ತಿರುವುದನ್ನು ತಡೆಯುವುದು ಹೇಗೆ?

ಮತ್ತೆ ಮತ್ತದೇಕೋ ಸುತ್ತುವ ಹಂಬಲ !!!!!!!!!!

ಇದೇನು ಕಥೆನಪ್ಪಾ ಈ ನನ್ಮಗ ಬರೆದಿರೋದನ್ನೆ ಓದೋಕೆ ಆಗಿಲ್ಲಾ ಓದಿ ಉಗಿಯೋಕೂ ಸಮಯ ಸಿಕ್ತಿಲ್ಲ, ಆದರೂ ಬರೆದು ಬರೆದು ಓದಿ ಓದಿ ಅಂತಾ ಜೀವ ತಿನ್ನೋಕೆ ಬರ್ತಾನೆ ಎಂದುಕೊಳ್ಳಬೇಡಿ.ಇದು ಮತ್ತೊಮ್ಮೆ ಚಾರಣದ ಬಲಿಗೆ ಸಿಕ್ಕಿ ನಲಿದು ನಲುಕಿದ ಕಥೆ. ಹಿಮಾಲಯದಂತಹ ಪರ್ವತಗಳನ್ನೇರಿ ಬರುವ ಕಾಲದಲ್ಲಿ ನಮ್ಮೂರಿನ ಅಕ್ಕ ಪಕ್ಕದ ಊರಿನ ಬೆಟ್ಟ ಗುಡ್ಡ ಹತ್ತಿ ಬಂದು ಅಯ್ಯೋ ಎನ್ನುವ ಮಟ್ಟಕ್ಕೆ ಬರೆಯುತೇನೆಂದು ದೂರಬೇಡಿ.ನೀವು ಯಾವ ದೇಶದ ಯಾವ ಮೂಲೆಗೆ ಹೋಗಿ ಬಂದರೂ ನಿಮ್ಮ ಮನಸ್ಥಿತಿಯಂತೂ ಬದಲಾಗುವುದಿಲ್ಲ. ಯೂರೋಪ್ ದೇಶಕ್ಕೆ ನಮ್ಮೂರಿನ ಕಂಡಕ್ಟರ್ ಹೋದರೇ ಅಥವಾ ಡ್ರೈವರ್ ಹೋದರೇ ಅಲ್ಲಿನ ಬಸ್ಸುಗಳು ಮತ್ತು ಅಲ್ಲಿನ ಡ್ರೈವರ್ ಗಳನ್ನು ಮಾತನಾಡಿಸಲು ಇಚ್ಚಿಸುತ್ತಾರೆ ವಿನಾಃ ಅಲ್ಲಿನ ದೇಶದ ಇನ್ನುಳಿದವರನ್ನಲ್ಲಾ!ಹಾಗೆಯೇ ನನ್ನಂಥಹ ಸೋಮಾರಿಗಳು ಯಾವ ಬೆಟ್ಟ ಏರಿದರೂ ಊರಿಗೆ ಮರಳಿ ಬಂದ ಮೇಲೆ ಒಂಬತ್ತು ಗಂಟೆಗೆ ಏಳುವುದು ತಪ್ಪುವುದಿಲ್ಲ. ನನ್ನ ಸೋಮಾರಿತನ ಕಡಿಮೆಯಾಗುವುದಿಲ್ಲ.ಕಳೆದ ವಾರ ಹಾಗೆಯೇ ಮನಸ್ಸಿಗೆ ಬೇಸರವಾಗಿದ್ದರಿಂದ ಎಲ್ಲಾದರೂ ಹೋಗಿಬರಬೇಕೆಂದು ನಿರ್ಧರಿಸಿದೆ, ನೆಂಟರ ಮನೆಗಳಿಗೆ ಹೋಗುವ ಖಾಯಿಲೆ ನನಗೆ ಇಲ್ಲದಿರುವುದರಿಂದ ನನ್ನ ಸ್ನೇಹಿತ ನವೀನನ ಊರಿಗೆ ಹೋಗಿ ಬರಲು ನಿರ್ಧರಿಸಿದೆ, ಅವನಿಗೆ ಫೋನ್ ಮಾಡಿ ಶನಿವಾರ ನಿಮ್ಮೂರಿಗೆ ಪಯಣವೆಂದೆ ಅದಕ್ಕೆ ಅವನು ಒಪ್ಪಿದ. ನಾನು, ವಿಜಿ, ಕಿರಣ ಮತ್ತು ನವಿನ ಎರಡು ಬೈಕ್ ಗಳಲ್ಲಿ ಹೋಗುವುದು ಎಂದು ತೀರ್ಮಾನಿಸಿ ಹೊರಟೆವು. ಒಬ್ಬನೇ ಹೋಗಿ ಇದ್ದು ಬರೋಣವೆಂದರೇ ಮೂರು ಜನ ಸೇರಿದೆವು. ನಾಲ್ಕು ಜನರು ನಾಲ್ಕು ದಿಕ್ಕಿನಂತೆ ಅರ್ಥವಿಲ್ಲದ ಚರ್ಚೆ ಮಾಡಿಕೊಂಡು, ಒಬ್ಬ ಕೋಳಿ ಬೇಕು, ಒಬ್ಬ ಹಂದಿ ಮಾಂಸ ಬೇಕು, ಒಬ್ಬ ಹೆಂಡ ಬೇಕು, ಒಬ್ಬನಿಗೆ ಸಿಗರೇಟು ಮತ್ತೊಬ್ಬನಿಗೆ ಅದು ಇದು ಅಂತಾ ಇಲ್ಲಿಂದ ಹೊರಡುವಾಗಲೇ ಮಧ್ಯಾಹ್ನ ಮೂರಾಯಿತು.

ಮನೆಯಿಂದ ಬ್ಯಾಗು ಕ್ಯಾಮೆರಾ ರಗ್ಗು ಬಟ್ಟೆ ಬರಿ ಅಂತಾ ಹಾಕಿಕೊಂಡು ಹೊರಟೆವು. ಇಲ್ಲಿಂದಾ ಯಲಹಂಕ ದಾಟಿ, ದೊಡ್ಡ ಬಳ್ಳಾಪುರ ಬಳಸಿಕೊಂಡು, ಚಿಕ್ಕಬಳ್ಳಾಪುರ ದಾರಿಯಲ್ಲಿ ಹೊರಟರೆ, ಹತ್ತು ಕಿಲೋಮೀಟರ್ ಕಳೆದ ಮೇಲೆ ಎಡಕ್ಕೆ ತಿರುಗಿಸಿಕೊಂಡು ನಾಲ್ಕು ಕೀಮಿ ಹೋದ ನಂತರ ಕಾಣುವುದೇ ದೊಡ್ಡರಾಯಪ್ಪನ ಹಳ್ಳಿ.ಊರು ನಮ್ಮೂರ ಹಳ್ಳಿಗಳಂತೆಯೇ ಇದ್ದರೂ ಊರಿಗಿಂತ ಊರಿನ ಹಿಂದಿರುವ ಗುಡ್ಡಗಳು ಸುಂದರವಾಗಿವೆ.ಅವುಗಳು ನಿಮ್ಮ ಕಣ್ಣುಗಳನ್ನು ಆಕರ್ಷಿಸುತ್ತವೆ ಎಂದರೇ ತಪ್ಪಾಗದು.ಊರಿನ ಹಿಂದೆ ಸಣ್ಣ ಪುಟ್ಟ ನಾಲ್ಕಾರು ಗುಡ್ಡಗಳಿವೆ, ಅಲ್ಲಿರುವ ಗುಡ್ಡಗಳು, ಹಸಿರಿದಿದ್ದರೇ ನಮ್ಮೂರಿನ ಕಡೆ ಇರುವ ಬೆಟ್ಟಗಳಂತೇಯೇ ಕಾಣುತಿದ್ದವು.ಊರಿಗೆ ಪ್ರವೇಶಿಸುತ್ತಿದಂತೆ ವಯಸ್ಸಾದ ಮುದುಕು ಮುದುಕಿಯರು ದನ, ಕುರಿ, ಮೇಕೆಗಳ ಹಿಂಡಿನೊಂದಿಗೆ ಬರುತ್ತಿರುವುದು ಸಾಮಾನ್ಯವಾಗಿತ್ತು.ವಯಸ್ಸಾದವರು ಹಳ್ಳಿಗಳಲ್ಲಿ ಅಡ್ಡಾಡುವುದರ ಸಂಕೇತ ಹಳ್ಳಿಯಲ್ಲಿನ ವಲಸೆ ಸಂಖ್ಯೆ ಏರಿದೆ ಎಂದು ಅಥವಾ ಶ್ರಮಜೀವಿಗಳೆಂದು. ನಮ್ಮೂರಿಗೆ ಬಂದರೇ ಬರುವ ಮುನ್ನವೇ ಸಾಲು ಸಾಲಾಗಿ ನನ್ನಂತಹ ಕೆಲಸಕ್ಕೆ ಬಾರದ ಸೋಮಾರಿಗಳು ಕೈನಲ್ಲಿ ಮೋಬೈಲ್ ಹಿಡಿದು ರಿಂಗ್ ಟೋನ್ ಕೇಳುತ್ತಾ ಕುಳಿತಿರುತ್ತಾರೆ, ಇಲ್ಲವೆಂದರೇ ದೇವೇಗೌಡ, ಯಡ್ಯೂರಪ್ಪ ಅಂತಾ ರಾಜಕೀಯದ ಗುಂಗಿನಲ್ಲಿರುತ್ತಾರೆ.ಅದೂ ಇಲ್ಲದಿದ್ದರೇ ಜಾತಿ ರಾಜಕಾರಣದಲ್ಲಿರುತ್ತಾರೆ.ಈ ಊರಿನಲ್ಲಿ ಅಂತಹ ಸನ್ನಿವೇಶಗಳು ಕಾಣಲಿಲ್ಲ. ಕಾರಣ ಕುಳಿತು ಹರಟೆ ಹೊಡೆಯುವಷ್ಟು ಪ್ರಕೃತಿ ಅವರಿಗೆ ಸಂಪೂರ್ಣ ಬೆಂಬಲ ನೀಡಿಲ್ಲ.ಸಾವಿರ ಅಡಿ ಆಳದಲ್ಲಿ ಬೋರ್ ಕೊರೆದರೆ ಅವರಿಗೆ ನೀರು ಸಿಗುವ ನಂಬಿಕೆ ಇರುವುದಿಲ್ಲ, ಅದಲ್ಲದೇ ಎಲ್ಲರಿಗೂ ಬೋರ್ ಕೊರೆದು ವ್ಯವಸಾಯ ಮಾಡುವುದು ಎಲ್ಲರಿಗೂ ಸಾಧ್ಯವಾಗುವ ಕೆಲಸವಲ್ಲ, ಬಹಳಷ್ಟು ರೈತರು ಮಳೆರಾಯನನ್ನು ನಂಬಿ ಬದುಕುತ್ತಿರುವುದರಿಂದ ಸಮಯ ಪ್ರಜ್ನೆ, ಸಮಯಕ್ಕೆ ತಕ್ಕ ತೀರ್ಮಾನಗಳು ಬಹುಮುಖ್ಯವಾಗುತ್ತವೆ.ಅವರು ನಮ್ಮ ನೀರಾವರಿ ಜಮೀನಿನ ರೈತರಂತೆ ಟೀ ಅಂಗಡಿ ಮುಂದೆ ಕುಳಿತು ಕಾಲಹರಣ ಮಾಡುವ ಸಾಹಸ ಮಾಡಲಾಗುವುದಿಲ್ಲ. ಅವರ ಮನೆಗೆ ಬಂದೊಡನೆ ನಮ್ಮ ಪರಿಚಯವಾಯಿತು, ಅವರ ಪರಿಚಯ ನಮಗಾಯಿತು. ನಾವು ಮಾಡಹೊರಟಿರುವ ಕಾರ್ಯಪ್ರಲಾಪವನ್ನು ಅಜ್ಜಿಯ ಮುಂದಿಟ್ಟೊಡನೆ, ಅವರು, ಬೆಟ್ಟದ ಮೇಲೆ ಕರಡಿ ಬಂದಿದೆಯಂತೆ, ಒಬ್ಬ ದನ ಕಾಯುವ ಹುಡುಗನಿಗೆ ಪರಚಿ ಗಾಯ ಮಾಡಿದೆಯಂತೆ!! ಜೋಪಾನವೆಂದರು!! ನಾವೇ ನಾಲ್ಕು ಜನ ನಾಡು ಮೃಗಗಳಿರುವಾಗ ಕರಡಿ ಏನು ಮಾಡಲಾದೀತು ಎಂದು ಹಾಸ್ಯ ಮಾಡಿ ಹೊರಟವು. ಇದ್ದ ನಾಲ್ಕು ಜನರಲ್ಲಿ, ಸಂಪೂರ್ಣ ನಾಸ್ತಿಕತೆ, ಅಪೂರ್ಣ ನಾಸ್ಕಿಕತೆ, ಆಸ್ತಿಕತೆ ,ಸಂಪೂರ್ಣ ಆಸ್ತಿಕತೆ ಎಲ್ಲವೂ ಇದ್ದವು. ಬೆಟ್ಟದ ಮೇಲಿರುವ ದೇವರ ಗುಡಿ ಯಾವುದು, ಯಾವ ಉತ್ಸವ ನಡೆಯುತ್ತದೆ, ಅಲ್ಲಿ ಮಾಂಸ ಮಾಡಬಹುದೇ, ಹಂದಿಮಾಂಸ ಮಾಡುವುದು ಸರಿಯೇ? ಅಲ್ಲೇ ಮಾಡುವುದೇ, ಅಲ್ಲಿಂದ ಸ್ವಲ್ಪ ದೂರದಲ್ಲಿ ಮಾಡುವುದೇ?? ಹೀಗೆ ಹತ್ತು ಹಲವು ಬಾರಿ ಚರ್ಚೆಗಳಾಗಿ, ಅಲ್ಲಿಗೆ ಹೋದ ಮೇಲೆ ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಮಾಡುವುದೆಂದು ಹೊರಟೆವು.

ಕರಡಿಯ ಬಗ್ಗೆ ನಾವು ಅಜ್ಜಿಯ ಎದುರು ಸ್ವಲ್ಪ ಹಗುರವಾಗಿ ಮಾತನಾಡಿ ಬಂದಿದ್ದರೂ ನಮ್ಮೊಳಗೆ ಕರಡಿಯನ್ನು ಅಟ್ಟಿ ಓಡಿಸುವಷ್ಟು ಧೈರ್ಯವಿದೆ ಎಂದಾಗಲಿ, ಅದು ಬರಲಿ ನೋಡೆ ಬಿಡುವ ಎನ್ನುವ ಮನಸ್ಥೈರ್ಯವಾಗಲಿ ಇರಲಿಲ್ಲ. ಕರಡಿಯ ಬಗ್ಗೆ ಬಹಳಷ್ಟು ಚರ್ಚೆಯಾಗತೊಡಗಿತು, ಕಾಡು ಪ್ರಾಣಿಗಳಲ್ಲಿ, ಬಹಳ ಕುಚೇಷ್ಟೆ ಪ್ರಾಣಿ ಎಂದರೇ ಕರಡಿ, ಅದು ಮನುಷ್ಯನನ್ನು ತಿನ್ನುವುದಿಲ್ಲ ಆದರೆ ನಮ್ಮ ಉಮೇಶ್ ರೆಡಿಯಂತೆ, ಒಂದು ಬಗೆಯ ಮೋಜು ಪಡೆಯುತ್ತದೆ, ಮನುಷ್ಯನ ದೇಹದ ಮೇಲೆ ಆಟವಾಡಿ ಕಿರುಕುಳು ಕೊಟ್ಟು ಸಾಯಿಸಲು ಬಯಸುತ್ತದೆ. ಪ್ರೀತಿಯಿಂದ ಮಾಡುತ್ತದೋ ಅಥವಾ ಮೋಜಿನಿಂದಲೋ ಅಥವಾ ಇನ್ನೆನು ಇರುತ್ತದೆಯೋ ಅದರ ಅಂತರಾಳ ಅದಕ್ಕೆ ಗೊತ್ತು. ನಾನು ಆಗ್ಗಾಗ್ಗೆ ಕರಡಿಯನ್ನು ನಮ್ಮ ಕನ್ನಡದ ಕೆಲವು ನಟರಿಗೆ ಮತ್ತು ನಿರ್ದೇಶಕರಿಗೆ ಹೋಲಿಸುತ್ತೇನೆ. ಅವರು ತೆಗೆಯುವ ಸಾಕಷ್ಟು ಸಿನೆಮಾಗಳು ಹಾಗೆಯೇ, ಅದನ್ನು ನಮ್ಮ ಮೇಲೆ ಅಥವಾ ಕನ್ನಡದ ಮೇಲೆ ಸೇಡು ತೀರಿಸಲು ತೆಗೆಯುತ್ತಾರೋ ಅಥವಾ ಪ್ರೀತಿಯಿಂದಲೋ ತಿಳಿಯುವುದಿಲ್ಲ.ಕುಳಿತು ನೋಡುತ್ತಿದ್ದರೆ ಸಹಿಸಲಾರದ ಅಸಹನೆ ಮೂಡುತ್ತದೆ.ಅಂತೂ ನವೀನ ನಮ್ಮನ್ನು ನವೀನ ದಾರಿಯಲ್ಲಿ ಕರೆದೊಯ್ಯುವ ಸಾಹಸ ಮಾಡಿ ದಾರಿ ತಪ್ಪಿಸಿ, ಸಂಜೆ ಐದು ಮೂವತ್ತಕ್ಕೆ ಮನೆ ಬಿಟ್ಟವರು ರಾತ್ರಿ ಎಂಟು ಗಂಟೆಯ ತನಕ ದಾರಿ ಹುಡುಕುವುದರಲ್ಲಿಯೇ ಕಳೆದೆವು. ನಾನು ಒಮ್ಮೊಮ್ಮೆ ಬಹಳ ನಿರಾಸಕ್ತಿಯಿಂದ ವರ್ತಿಸುತ್ತೇನೆ, ಅದಕ್ಕೆ ಇದೊಂದು ನಿದರ್ಶನ. ಅವನು ಬೆಟ್ಟಕ್ಕೆ ಹೋಗುತ್ತಿದ್ದೇವೆ ರಾತ್ರಿ ಅಲ್ಲಿ ಇರಬೇಕೆಂದು ಹೇಳಿದರು, ನಮ್ಮ ಕೈಯಲ್ಲಿ ಒಂದೇ ಒಂದು ಟಾರ್ಚ್ ಇರಲಿಲ್ಲ, ಪೆಟ್ರೋಲ್, ಅಥವಾ ಡೀಸೇಲ್ ಇರಲಿಲ್ಲ, ಮೂಲಭೂತವಾಗಿ ಬೇಕಿದ್ದ ಔಷಧಿಗಳು ಇರಲಿಲ್ಲ, ಕೊನೆ ಪಕ್ಷ ಒಂದು ಬಾಟಲಿ ನೀರು ಇರಲಿಲ್ಲ. ನನ್ನ ದಡ್ಡತನದಿಂದಾಗಿ ಎಲ್ಲರೂ ವ್ಯಥೆ ಪಡುವಂತಾಯಿತು. ಕೊನೆಗೆ ನಡೆಯಲಾಗದೇ, ನಡೆದ ದಣಿವನ್ನು ತಣಿಸಲು ನೀರಿಲ್ಲದೇ ಕೊರಗುವಂತಾಯಿತು. ಅಷ್ಟು ಸುತ್ತಿಬಳಸಿ ಕೊನೆಗೆ ಬೆಟ್ಟಕ್ಕೆ ಹತ್ತುವ ದಾರಿ ಸಿಕ್ಕಿತು. ಆ ಊರಿಗೆ ನಾನು ಹೊಸಬ, ನವೀನನಿಗೆ ಅಲ್ಲಿನ ಬಗ್ಗೆ ತಿಳಿದಿದ್ದರೂ ಅವನು ಅಪರೂಪಕ್ಕೊಮ್ಮೆ ಹೋಗುವುದರಿಂದ ಸದ್ಯದಲ್ಲಾದ ದಾರಿ ಬದಲಾವಣೆಗಳು ಅವನನ್ನು ದಾರಿ ತಪ್ಪುವಂತೆ ಮಾಡಿದೆವು. ಮೊದಲೇ ನಮ್ಮ ಕಿರಣನಿಗೆ ದೇವಸ್ಥಾನದಲ್ಲಿ ಹಂದಿಮಾಂಸ ಬೇಯಿಸುವುದು ಇಷ್ಟವಿರಲಿಲ್ಲ, ನನಗೋ ಹೊಟ್ಟೆ ಹಸಿದು ಸುಸ್ತಾಗಿದ್ದೆ, ಇನ್ನೂ ವಿಜಿಯಂತೂ ಅನ್ನ ಕಂಡು ಶತಮಾನವಾದವನಂತೆ ಹಂಬಲಿಸುತ್ತಿದ್ದ. ಬಹುಸಂಖ್ಯಾಂತರ ಮುಂದೆ ನವೀನನ ಉತ್ಸಾಹ ಉಡುಗಿ ಹೋಯಿತು. ನೀರು ಸಿಕ್ಕಿದ್ದಲ್ಲಿ ಅಡುಗೆ ಮಾಡಿ, ಊಟ ಮಾಡಿದ ನಂತರ ಹೋಗುವುದೆಂದು ತೀರ್ಮಾನಿಸಿದೆವು.ಸ್ವಲ್ಪ ದೂರ ನಡೆದ ಮೇಲೆ, ಸ್ವಲ್ಪ ಮಟ್ಟದಲ್ಲಿ ಹರಿಯುವ ನೀರು ಕಂಡಿತು. ಅಲ್ಲಿಯೇ ಎಂದು ತೀರ್ಮಾನವೂ ಆಯಿತು.ನವೀನ ನಮಗೆ ಇನ್ನೂ ಸ್ವಲ್ಪ ದೂರ ನಡೆದರೇ ಅಲ್ಲಿ ಸುಂದರವಾದ ಹೊಂಡವಿದೆ ಅಲ್ಲಿಯೇ ಹೋಗಿ ಅಡುಗೆ ಮಾಡೋಣವೆಂದು ತಿಳಿಸಿದ. ನವೀನ ಎನ್ನುವ ವ್ಯಕ್ತಿಯ ಮೇಲೆ ನಂಬಿಕೆ ಕಳೆದುಕೊಂಡಿದ್ದ ಮೂವರು ಬಕಾಸುರರಿಗೆ ಅವನ ಮಾತಿನಲ್ಲಿ ನಂಬಿಕೆ ಬರಲಿಲ್ಲ.ನೀರು ಸರಿಯಿಲ್ಲವೆಂದರೂ ಕೇಳದೇ ಅಯ್ಯೊ ಇದೆಲ್ಲಾ ನೈಸರ್ಗಿಕ ನೀರು, ಇಲ್ಲಿ ಸರ್ವವೂ ಶುಭ್ರವಾಗಿರುತ್ತದೆ, ಯಾವುದೇ ಕಲ್ಮಶವಿರುವುದಿಲ್ಲವೆಂದು ವಾದಿಸಿ, ನೀರನ್ನು ಮೊಗೆದು, ಅದನ್ನು ಸೋಸಿ ತುಂಬಿಸಿಕೊಂಡು ಅಡುಗೆ ಮಾಡೋಣವೆಂದು ನೆನೆದೆವು. ಕಡೆಗೂ ಅಲ್ಲಿಯೇ ಅಡುಗೆ ಮಾಡುವುದೆಂದು, ಮಾಡಿದ ನಂತರ ಹೊರಡುವುದೆಂದು ಮೇಲಕ್ಕೆ ಹೋಗಿ ಮಲಗುವುದೆಂದು ತೀರ್ಮಾನವಾಯಿತು.ಅಡುಗೆ ಮಾಡಲು ಶುರುಮಾಡುವ ಮುನ್ನವೇ ಕಿರಣ ಮಲಗುವ ಯೋಜನೆಯ ಬಗ್ಗೆ ಚರ್ಚಿಸತೊಡಗಿದ. ಇಲ್ಲೇ ಮಲಗೋಣ ಊಟವಾದ ಮೇಲೆ ಅಲ್ಲಿಗೆ ಹೋಗುವುದು ಬೇಡ, ಹಂದಿ ತಿಂದು ದೇವಸ್ಥಾನಕ್ಕೆ ಹೋಗುವುದು ಸರಿಯಿಲ್ಲ, ಅದು ಇದು ಎಂದು ಕಥೆ ಹೇಳತೊಡಗಿದ.

ಸದಾ ಶಿಸ್ತಿನ ಸಿಪಾಯಿಯಾಗಿರುವ ಕಿರಣ, ಅಡುಗೆ ಮಾಡುವಾಗ ನಡೆಸಿದ ತಂತ್ರಗಳಂತೂ ನಮ್ಮ ಸಹನೆಯನ್ನು ಪರೀಕ್ಷಿಸುತ್ತಿರುವಂತೆ ಎನಿಸುತ್ತಿತ್ತು. ಈರುಳ್ಳಿಯನ್ನು ಸಮನಾಗಿ ಹೆಚ್ಚಿ ಹಾಕುವ ತನಕ ಬಿಡಲಿಲ್ಲ, ಮೆಣಸಿನ ಕಾಯಿಯನ್ನು ಉದ್ದುದ್ದ ಕತ್ತರಿಸಿ, ಅದನ್ನು ನಾಲ್ಕು ಸಮನಾದ ಭಾಗವಾಗಿ ಕತ್ತರಿಸಿ,ಟೋಮೋಟೋ ಅನ್ನು ಆದಷ್ಟೂ ಕ್ರಮವಾಗಿ ಉತ್ತರಿಸಿ ಹಾಕತೊಡಗಿದ. ಅದೆಲ್ಲವೂ ಸರಿ ಬೇಗ ಪಾತ್ರೆಗೆ ಹಾಕಿ ಒಮ್ಮೆ ಬೇಯಿಸಿ ತಿಂದರೇ ಸಾಕೆನ್ನುವ ನನ್ನ ಬಯಕೆಯಂತೂ ಆದಷ್ಟೂ ನಿಧಾನವಾಗತೊಡಗಿತು. ಕೊನೆಗೊಮ್ಮೆ ಎಣ್ಣೆ ಹಾಕಿ ಒಗ್ಗರಣೆ ಹಾಕೋಣವೆಂದರೂ ಕೇಳದೆ, ಇಲ್ಲ ಮೊದಲು ಈರುಳ್ಳಿ, ಮೆಣಸಿನಕಾಯಿ ಎಣ್ಣೆಯಲ್ಲಿ ಬೇಯಲಿ, ನೀರಿಲ್ಲದೇ ಮಾಂಸ ಉಪ್ಪು ಹಿಡಿದರೇ ಮಾತ್ರ ರುಚಿ, ಅದು ಇದೂ ಎಂದು ನಮ್ಮನ್ನು ಮತ್ತೆ ಮತ್ತೆ ಪರೀಕ್ಷಿಸಿದ. ಅಯ್ಯೊ ನಿನಗೆ ಇಷ್ಟ ಬಂದಂತೆ ಮಾಡಿ ನಮ್ಮ ಜೀವ ಉಳಿಸಿಕೊಡು ಎಂದು ಗೊಗರೆದ ಮೇಲೆ, ಅಡುಗೆ ಕಾರ್ಯದಿಂದ ನಮ್ಮನ್ನು ಮುಕ್ತಿಗೊಳಿಸಿದ. ಅಂತೂ ಇಂತೂ ಹೊಟ್ಟೆ ಭರ್ತಿ ಆಗುವಷ್ಟು ಹಂದಿ ಮಾಂಸ, ಕೋಳಿ ಮಾಂಸ ಹೆಂಡ ಸಿಗರೇಟ್ ಸೇರಿದ ಮೇಲೆ ಇನ್ನೂ ಬೆಟ್ಟದ ಮೇಲಾದರೇನು, ಕೇಳಗಾದರೇನು ವ್ಯತ್ಯಾಸ ಸರಿ ಇಲ್ಲೇ ಮಲಗುವುದೆಂದು ನಿರ್ಧರಿಸಿ ಕಾಲು ನೀಡಿದೆವು. ಅನುಭವಸ್ಥ ನವಿನನ ಮಾತು ಉಪಯೋಗಕ್ಕೆ ಬರಲಿಲ್ಲ.ಮುಂಜಾನೆ ಸಮಯದಲ್ಲಿ ತಡೆಯಲಾರದಷ್ಟು ಚಳಿಯಾಗುವುದು, ತಣ್ಣನೆ ಗಾಳಿ ಬೀಸುವುದು, ನಮ್ಮನ್ನು ತತ್ತರಿಸುವಂತೆ ಮಾಡುವುದೆಂಬ ಅವನ ಮಾತುಗಳು ನಮ್ಮನ್ನು ಬ್ಲಾಕ್ ಮೆಲ್ ಮಾಡುತ್ತಿರುವಂತೆ ಕಾಣಿಸಿತು. ಅದೇನೆ ಆಗಲಿ ಕಂಬಳಿಯಿದೆ, ರಗ್ಗುಗಳಿವೆ, ಜರ್ಕಿನ್ ಗಳಿವೆ, ಶ್ವೆಟರ್ ಗಳಿವೆ ನೋಡೆ ಬಿಡೋಣವೆಂದು, ನೈಸರ್ಗಿಕ ಚಳಿಗೆ ಸವಾಲೆಸೆದು ಮಲಗಿದೆವು. ಮಲಗಿದೆವು ಎನ್ನುವ ಪದ ಇಲ್ಲಿ ಅನರ್ಥವಾಗುತ್ತದೆ.ಕಣ್ಣು ಮುಚ್ಚಿ ಅರೆಗಳಿಗೆಯೂ ಆಗಿರಲಿಲ್ಲ, ಗಾಳಿ ಬೀಸತೊಡಗಿತು, ಅದೊಂದು ಗಾಳಿಯಲ್ಲ, ಶೀತಲ ಮಾರುತ, ಅದರ ಬಿರುಸಿಗೆ ನಮ್ಮ ಪಾತ್ರೆಗಳು, ನಮ್ಮ ಬಾಟಲಿಗಳು ಎತ್ತೆಲ್ಲಾ ಓಡಾಡತೊಡಗಿದವು, ನಾವು ಹಾಕಿದ ಬೆಂಕಿ ಉರಿ ನಿಲ್ಲಲ್ಲಿಲ್ಲ. ಅದನ್ನು ಉರಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ನಾನು ನೆಮ್ಮದಿಯಾಗಿ ಕಿರಣನ ರಗ್ಗನ್ನು ಕಿತ್ತುಕೊಂಡು ಕಾಲು ಚಾಚಿದೆ.ಕಿರಣ ಚಳಿ ತಡೆಯಲಾರದೇ ಅಲ್ಲಿ ಸುತ್ತ ಮುತ್ತಲಿಂದ ಸೌದೆಯನ್ನು ತಂದು, ಇದ್ದ ಸೀಮೆ ಎಣ್ಣೆಯನ್ನು ಸುರಿದು, ಸುತ್ತ ಮರೆ ಮಾಡಿ ಬೆಂಕಿಯ ಶಾಖ ಪಡೆಯಲು ಪ್ರಯತ್ನಿಸುತ್ತಲೇ ಇದ್ದ, ಅದೆಷ್ಟು ಹೊತ್ತು ಹಾಗೆ ಮಾಡಿದನೋ ತಿಳಿಯದು, ಬೆಳ್ಳಿಗ್ಗೆ ಎದ್ದು ಅವನ ಕಣ್ಣುಗಳನ್ನು ಕಂಡಾಗಲೇ ಅರ್ಥವಾದದ್ದು ಅವನು ರಾತ್ರಿಯಿಡಿ ಮಾಡಿದ ನಿದ್ದೆಯ ಸೊಬಗು.ಕಣ್ಣು ಕೆಂಪಾಗಿ, ಅರಳಿದ್ದವು. ಎಷ್ಟು ಹೊತ್ತಿಗೆ ಮಲಗಿದರೂ ಮುಂಜಾನೆ ಐದು ಗಂಟೆಗೆ ಏಳುವ ಚಾಳಿ ಅವನಿಗಿದೆ. ಎದ್ದವನು ಸುಮ್ಮನೆ ಇರುವ ಜಾಯಮಾನದವನೂ ಅಲ್ಲ, ಜೊತೆಗಿದ್ದವರ ಮೇಲೆ ಅವನು ಸೇಡು ತೀರಿಸಿಕೊಳ್ಳುವ ಸುಸಮಯವೇ ಮುಂಜಾನೆ. ನಮಗೆ ಮುಂಜಾನೆಯ ನಿದ್ದೆಯೇ ಬದುಕು ಅವನಿಗೆ ಅದನ್ನು ಸರ್ವನಾಶ ಮಾಡುವುದೇ ನಿತ್ಯ ಕ್ರಿಯೆ. ಬೆಳಿಗ್ಗೆ ಅವನು ಮತ್ತು ನವಿನ ಇಬ್ಬರೂ ಎದ್ದು, ಕೈಯಲ್ಲಿದ್ದ ಕ್ಯಾಮೆರಾ ಹಿಡಿದು ಬಗೆ ಬಗೆಯ ಭಂಗಿಯ ಫೋಟೋ ತೆಗೆಯುವದರಲ್ಲಿ ತಲ್ಲೀನರಾಗಿದ್ದರು. ನನಗೆ ಅವರ ಮಾತುಗಳು ಎಲ್ಲಿಂದಲೊ ಬರುತ್ತಿರುವಂತೆ ಕೇಳುತ್ತಿದ್ದವು. ಅಂತೂ ನನ್ನನ್ನು ಕೂಡ ಎಬ್ಬಿಸಿದರು. ಮಗಾ ಒಂದು ಸಲ ನೋಡು ಹೇಗಿದೆ ನೋಡೂ, ಮೋಡ ನೋಡು, ಸೀನರಿ ನೋಡು ಅದು ಇದು ಎಂದು ಕಥೆ ಹೇಳತೊಡಗಿದರು. ನಾನು ಕಂಬಳಿಯ ಒಳಗಿಂದಲೇ ಕ್ಯಾಮೆರಾದಲ್ಲಿ ಫೋಟೋ ತೆಗೆದಿರಿ, ನಂತರ ನೋಡುತ್ತೇನೆ ಎಂದೆ.ನಂತರ ಬಹಳ ಕಷ್ಟ ಪಟ್ಟು ಎದ್ದು ನೋಡಿದೆ, ಕಣ್ಣು ಬಿಟ್ಟ ಒಂದೆರಡು ನಿಮಿಷ ಏನು ಕಾಣದಿದ್ದರೂ ನಂತರ ನೋಡಿದೆ. ಅದೊಂದು ಬರಿ ಗುಡ್ಡವಲ್ಲ, ಮೋಡವೇ ಕೈಗೆಟಗಿದಂತೆ ಭಾವಿಸುವಂತಹ ಸುಂದರ ಲೋಕ. ಅದೆಂಥಹ ಸುಂದರ ತಂಗಾಳಿ, ಅದೆಂಥಹ ಸೊಬಗು, ಅಬ್ಬಬ್ಬಾ ನಿಜಕ್ಕೂ ನಾವು ಬೆಟ್ಟದ ಮೇಲೆ ಹೋಗಿ ಮಲಗಬೇಕಿತ್ತು ಎನಿಸಿತು. ಸುತ್ತಣ ಗುಡ್ಡಗಳು ಸೂರ್ಯನ ಕಿರಣಗಳಿಂದ ಮಿಂಚುತ್ತಿದ್ದವು. ಬೆಟ್ಟದ ತಳಭಾಗದಲ್ಲಿದ್ದ ಕೆರೆಯ ಸೊಬಗಂತೂ ಹೇಳಲು ಸಾಲದು, ಅದೊಂದು ಅದ್ಬುತ ಅನುಭವ, ಅಲ್ಲಿಂದ ಕೆಳಗಿಳಿಯಲು ಮನಸ್ಸು ಬರುತ್ತಿರಲಿಲ್ಲ, ಆದರೇ ಹೊಟ್ಟೆಯದೇ ಬೇರೆಯ ಯೋಚನೆ. ಅದು ನಮ್ಮ ಕಣ್ಣಿನ ಮಾತಿಗೆ ಸ್ಪಂದಿಸಲು ಸಿದ್ದವಿರಲಿಲ್ಲ. ನಂತರ ಅಲ್ಲಿಂದ ಸ್ವಲ್ಪ ಮೇಲೆ ಹತ್ತಿ ಹೋದೆವು, ಅಲ್ಲಿಯೆ ಒಂದು ಆಲದ ಮರವಿದೆ, ಬಂಡೆಯ ಮೇಲಿನ ಆಲದ ಮರದಡಿಯಲ್ಲಿ ಸುಂದರ ಹೊಂಡ, ಮರದ ನೆರಳು ಆ ನೀರಿನಲ್ಲಿ ಕಾಣುತ್ತಿರುವುದನ್ನು ಕಂಡರೇ ಅದೆಂಥಹ ಸೊಗಸು ನೋಡಿಯೇ ಅನುಭವಿಅಸಬೇಕು. ಸ್ವಲ್ಪ ಹೊತ್ತು ಅಲ್ಲೆಲ್ಲಾ ಅಡ್ಡಾಡಿ ಕೆಳಗೆ ಇಳಿಯಲು ನಿರ್ಧರಿಸಿದೆವು. ಇಳಿಯುವ ದಾರಿಯುದ್ದಕ್ಕೂ ಆ ಬಂಡೆಯನ್ನು ಒಡೆಯಲು, ಪ್ರಯತ್ನಿಸಿದ ಕುರುಹುಗಳಿದ್ದವು.

ಕೆಳಗಿಳಿದ ಮೇಲೆ ಅಜ್ಜಿಯೊಂದಿಗಿನ ಮಾತುಕತೆಯಿಂದ ತಿಳಿದ ವಿಷಯೆಂದರೇ ಆ ಬೆಟ್ಟದಲ್ಲಿ ದಶಕಗಳ ಹಿಂದೆಲ್ಲಾ ದನಗಳ ಜಾತ್ರೆ, ಉತ್ಸವಗಳು, ಬಹಳಷ್ಟು ನಡೆಯುತ್ತಿದ್ದವು. ಕಾಲ ಕ್ರಮೇಣ ಅವೆಲ್ಲಾ ಕರಗಿದವು. ಅಲ್ಲಿ ದೊರೆಯುತ್ತಿದ್ದ ಔಷದಿ ಸಸ್ಯಗಳು ಮರೆಯಾದವು. ಕಲ್ಲು ಒಡೆಯುವುದು, ಸಾಮಾನ್ಯವಾಯಿತು. ಇದು ಎಲ್ಲ ಊರಿನ ದುರಂತ ಇದ್ದದ್ದನ್ನು ಕಳೆದುಕೊಂಡು ಹೀಗೆತ್ತೆಂಬ ಕನಸಿನ ಗೋಪುರವನ್ನು ಬಣ್ಣಿಸುವುದು ನಮ್ಮ ಅಜ್ಜಿಯರ ಗುಣ, ಹಾಗಿದಿದ್ದರೆ ಅದೆಷ್ಟು ಚೆನ್ನಾಗಿರುತ್ತಿದೆಂಬುದು ನಮ್ಮ ಅನಿಸಿಕೆ, ನಾವು ನಮ್ಮತನವನ್ನು ನಿಜಕ್ಕೂ ಉಳಿಸಲು ಪ್ರಯತ್ನಿಸಿದ್ದೇವಾ?

16 ಡಿಸೆಂಬರ್ 2009

ಬದುಕಿನ ಸಾರ್ಥಕತೆಗೆ ಅರ್ಥವಿದೆಯಾ!!!!

ಬದುಕು ಒಮ್ಮೊಮ್ಮೆ ಒಂದೊಂದು ಬಗೆಯಾಗಿ ಹರಿದು ಹಂಚಿಹೋಗುವುದನ್ನು ನೋಡುತ್ತಿದ್ದರೆ ಬದುಕಿನ ಅರ್ಥವೇನು? ಸಾರ್ಥಕತೆಯ ಅರ್ಥವೇನು?ಇವೆಲ್ಲವೂ ಆಗುವುದರ ಹಿಂದಿನ ರಹಸ್ಯವೇನು ಹೀಗೆ ಹತ್ತು ಹಲವಾರು ಒಮ್ಮೊಮ್ಮೆ ಸಾವಿರಾರು ಪ್ರಶ್ನೆಗಳು ತಾನೇ ತಾನಾಗಿ ಉದ್ಬವಿಸುತ್ತವೆ. ಪ್ರಶ್ನೆಗಳೇ ಜೀವನವಾಗಿ ನಡೆಯುವಾಗ ನಮಗೆ ಜೀವನವೆಂಬುದು ನಿಜಕ್ಕೂ ಅಸಹನೀಯವೆನಿಸುತ್ತದೆ. ಓದುವಾಗ ಪರೀಕ್ಷೆಯ ಕಾಟಕ್ಕೆ ಕೊರಗುತ್ತಿದ್ದ ನಾವು ಓದಿದ ಮೇಲೆ ಕೆಲಸ ಹುಡುಕಲು ಪರದಾಡುತ್ತ ನಮ್ಮನ್ನು ನಾವೆ ಕೊಲೆಗೈಯ್ಯುತ್ತಾ ಹೋಗುತ್ತೇವೆ.ಕೆಲಸ ಸಿಕ್ಕಿದ ಮೇಲೆ ನಮ್ಮ ಮತ್ತು ನಮ್ಮ ಜೊತೆಯವರೊಂದಿಗೆ ಇಲ್ಲಸಲ್ಲದ ವಿಷಯಕ್ಕೆ ಮನಸು ಬೇಸರಗೊಳ್ಳುತ್ತದೆ. ನಮ್ಮ ಮೇಲಧಿಕಾರಿಯೆಂಬ ಮನುಷ್ಯ ನಮ್ಮ ಸ್ವಾತಂತ್ರ್ಯವನ್ನೆಲ್ಲಾ ಕಸಿದುಕೊಂಡವನಂತೆ ನಮ್ಮ ಮೇಲೆ ಸದಾ ಸವಾರಿ ಮಾಡುವವನಂತೆ ಕಾಣುತ್ತಾನೆ. ಮನುಷ್ಯ ತಾನೊಂದು ಬಗೆದರೆ ದೇವವೊಂದು ಬಗೆಯುತ್ತಾನೆಂಬುದು ಬಹಳಷ್ಟು ಬಾರಿ ಸತ್ಯವೆನಿಸುತ್ತದೆ. ನಾವು ಬಯಸುವುದೇನೆಂಬುದೆ ನಮ್ಮ ಮುಂದಿರುವ ಸವಾಲು!!! ನಿಜಕ್ಕೂ ನಮಗೆ ಇರುವ ಅಗತ್ಯತೆ ಏನೆಂಬುದು ನಮಗೆ ಅದೆಷ್ಟೋ ಬಾರಿ ತಿಳಿದಿರುವುದಿಲ್ಲ. ಇರುವುದರಲ್ಲಿ ಸಂತೋಷಪಡುವುದಿಲ್ಲವೆನ್ನುವುದಕ್ಕಿಂತ ನಮಗೆ ಬೇಕಿರುವುದನ್ನು ತಿಳಿಯುವ ಸಾಮರ್ಥ್ಯ ನಮಗಿರುವುದಿಲ್ಲ. ಕಾರಣಗಳು ಹಲವಿರಬಹುದು, ನನಗೆ ತಿಳಿದಂತೆ ಜೀವನಕ್ಕೆ ಬೇಕಿರುವ ಅವಶ್ಯಕತೆಗಳು ಮತ್ತು ಅನಿವಾರ್ಯತೆಗಳ ನಡುವೆ ಇರುವ ತೆಳ್ಳನೆಯ ವ್ಯತ್ಯಾಸವನ್ನು ಅರಿತಿರುವುದಿಲ್ಲ. ನಮಗೊಂದು ಕೆಲಸದ ಅನಿವಾರ್ಯತೆ ಇರುತ್ತದೆ, ಅದರೆ ನಮಗೆ ನಮ್ಮ ಆಸಕ್ತಿಯುಳ್ಳ ವಿಷಯದಲ್ಲಿ ನಮಗೆ ಕೆಲಸ ಬೇಕಿರುವ ಅವಶ್ಯಕತೆಯಿರುತ್ತದೆ. ಆದರೆ ನಮಗೆ ಆಸಕ್ತಿಯಿರುವ ವಿಷಯದಲ್ಲಿ ನಾವು ಕಾಯ್ದು ಉದ್ದಾರವಾಗುವ ತಾಳ್ಮೆ ಸಹನೆ ನಮಗಿರುವುದಿಲ್ಲ ಅಥವಾ ನಮ್ಮ ಸಮಾಜ ನಮ್ಮ ಸುತ್ತ ಮುತ್ತಲಿನ ಪರಿಸರ ಅದಕ್ಕೆ ಅನಿವು ಮಾಡಿಕೊಡುವುದಿಲ್ಲ. ಉದಾಹರಣೆಗೆ ಬಹಳಷ್ಟೂ ಮಕ್ಕಳು ಚಿಕ್ಕವರಿರುವಾಗ ನಾಟಕ, ಅಭಿನಯದಲ್ಲಿ ಆಸಕ್ತಿಯಾಗಿರುತ್ತಾರೆ ಅತ್ತುತ್ತಮ ಗಾಯಕರಾಗುವ ಎಲ್ಲ ಲಕ್ಷಣಗಳು ಇರುತ್ತವೆ, ಆದರೆ ಪೋಷಕರ ಮುಂಜಾಗೃತೆಯಿಂದಾಗಿ, ಅಥವಾ ಅವರ ಕಹಿ ಅನುಭವದಿಂದಾಗಿ ಅವರನ್ನು ದೂರವಿಡುತ್ತದೆ. ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಮನೆಯ ಮಗನಾಗಿ ಅವನಿಗೆ ಅವನದೆ ಹಲವಾರು ಜವಬ್ದಾರಿಗಳಿದ್ದು ಅವನ ಆಸೆ ಕನಸುಗಳನ್ನು ಬಲಿ ಕೊಡಬೇಕಾಗುವುದು.

ಇಂಥಹ ಸನ್ನಿವೇಶಗಳು ಹೆಣ್ಣು ಗಂಡುಗಳಿಬ್ಬರಿಗೂ ಅನ್ವಯಿಸುತ್ತದೆ. ಇಲ್ಲಿ ಭೇಧ ಭಾವವಿರುವುದಿಲ್ಲ.ಒಳ್ಳೆಯ ಗಾಯಕರು, ಡ್ಯಾನ್ಸ್ ಮಾಡುತ್ತಿದ್ದ, ಕ್ರ‍ಿಕೇಟ್, ಫುಟ್ ಬಾಲ್, ಅಥವಾ ಪ್ರಥಮ ರ‍್ಯಾಂಕ್ ಬಂದ ಬಹಳಷ್ಟು ನನ್ನ ಸ್ನೇಹಿತರು ತಮಗೆ ಹೊಂದದ ಅಥವಾ ಆಸಕ್ತಿಯಿಲ್ಲದ ಉದ್ಯೋಗದಲ್ಲಿ ಸೋಮಾರಿಗಳಾಗುವಂತೆ ಮಾಡಿಬಿಟ್ಟಿದೆ. ಹೈಸ್ಕೂಲಿನ ಜೀವನದಲ್ಲಿದ್ದ ಬಹಳಷ್ಟು ಬುದ್ದಿವಂತರೆನಿಸಿಕೊಂಡ ಸ್ನೇಹಿತರು ಸರ್ಕಾರಿ ಉದ್ಯೋಗದಲ್ಲಿದ್ದರೂ ಅವರಲ್ಲಿ ಸಮಾಜದ ಬಗ್ಗೆ ಬಹಳಷ್ಟು ಕಾಳಜಿಯಿದ್ದರೂ ಅವರ ಕೈಗಳನ್ನು ಕಟ್ಟಿ ಹಾಕಿ, ಸಾಕಪ್ಪ ಈ ಉದ್ಯೋಗ ಈ ಸಮಾಜ ಈ ಜನತೆ ಎನ್ನುವಂತೆ ಮಾಡುವ ಈ ಜೀವನದ ಅರ್ಥವೇನು? ಪ್ರತಿಯೊಬ್ಬ ಯುವಕನು ತನ್ನ ಸಮಾಜ ತನ್ನ ದೇಶದ ಏಳಿಗೆಗಾಗಿ ಏನಾದರೊಂದು ಮಾಡಬೇಕು ನನ್ನ ಜನತೆಯನ್ನು ನನ್ನ ಪ್ರಾಣಕಿಂತ ಪ್ರೀತಿಸಿ ಅದರ ಉನ್ನತಿಯ ಬಗ್ಗೆ ಹಲವಾರು ಕನಸುಗಳನ್ನು ಕಾಣುತ್ತಾನೆ. ಯಾವೊಬ್ಬ ಯುವಕನೂ ಕೇವಲ ತನ್ನ ಏಳಿಗೆಯಾದರೆ ಸಾಕೆಂದು ಬಯಸುವುದಿಲ್ಲ, ಹಾಗೆ ಬಯಸಿದ್ದೇ ಆದ್ದಲ್ಲಿ ಅವನು ಯುವಕನೇ ಅಲ್ಲ ಅವನೊಬ್ಬ ವಯಸ್ಸಾದ ತನ್ನ ಜೀವನ ಮುಗಿಯುತ್ತಿದೆಯೆಂದು ನಿರ್ಧರಿಸಿ ತನ್ನ ಸ್ಥಿರತೆಗಾಗಿ ಪ್ರಯತ್ನಿಸುವ ಮಧ್ಯಮ ವಯಸ್ಕ.ತನ್ನಯ ಬಗ್ಗೆ ತನಗೆ ನಂಬಿಕೆ ಇಲ್ಲದವನು ಮಾತ್ರ ತನ್ನ ವೈಯಕ್ತಿಕ ಏಳಿಗೆಗೆ ಪ್ರಯತ್ನಿಸುತ್ತಾನೆ ಅಥವಾ ಅದರ ಬಗ್ಗೆ ಶ್ರಮಿಸುತ್ತಾನೆ.ತನ್ನತನದಲ್ಲಿ ತನ್ನ ಆದರ್ಶಗಳಲ್ಲಿ ನಂಬಿಕೆ ಉಳ್ಳವನು ತಾನು ಬೆಳೆದು ತನ್ನವರನ್ನು ತನ್ನ ಸಮಾಜ, ತನ್ನ ದೇಶವನ್ನು ಮೇಲೆತ್ತಲು ಅಥವಾ ತನ್ನ ಕೈಮೀರಿ ಅದಕ್ಕೆ ಋಣ ತೀರಿಸಲು ಚಿಂತಿಸುತ್ತಾನೆ. ಕೇವಲ ಚಿಂತಿಸಿದರೇ ಬಂದ ಫಲವೇನು? ಅದನ್ನು ಕಾರ್ಯರೂಪಕ್ಕೆ ತರುವ ಮಾರ್ಗವೇನು? ಕಾರ್ಯರೂಪಕ್ಕೆ ತರಲು ನಿಜಕ್ಕೂ ಸಾಧ್ಯವಿದೆಯಾ? ಇದ್ದರೇ ಅದರ ಮಾರ್ಗವೇನು? ಪ್ರತಿಯೊಬ್ಬ ಭಾರತೀಯನು ತನ್ನ ಅಂತರಾಳಕ್ಕೆ ಒಪ್ಪುವ ಕೆಲಸ ಮಾಡಿದರೇ ಮಾತ್ರ ಅದರ ಕನಸು ನನಸಾಗಲು ಸಾಧ್ಯ. ಪಿ.ಎಚ್.ಡಿ ಮಾಡುವ ವಯಸ್ಸಿಗೆ ಇಲ್ಲಸಲ್ಲದ ರಾಜಕೀಯ ನಮ್ಮನ್ನು ಸುತ್ತಿರುತ್ತದೆ. ಐದಾರು ವರ್ಷಗಳು ಯುನಿವರ್ಸಿಟಿಗಳಲ್ಲಿ ಕುಳಿತು ಗೈಡ್ ಗಳ ಗುಲಾಮಗಿರಿ ಮಾಡಿದವನು ಹೊರಬಂದೊಡನೆ ತನಗೆ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸುವಲ್ಲಿ, ತನ್ನ ಶಿಷ್ಯ ವೃಂದವನ್ನು ಗುಲಾಮರನ್ನಾಗಿಸಿಕೊಳ್ಳುತ್ತಾನೆ. ಅವನೊಂದಿಗೆ ಅವನ ಆದರ್ಶಗಳು ನೆಲ ಕಚ್ಚುತ್ತವೆ.ಇದರಂತೆಯೇ ಎಲ್ಲ ಸರ್ಕಾರಿ ಇಲಾಖೆಗಳಲ್ಲಿಯೂ ನೀವು ನಮ್ಮ ಮಹರಾಜರನ್ನು ಕಾಣಬಹುದು. ಅದಕ್ಕೊಂದು ನಿದರ್ಶನವೆಂದರೆ, ನಮ್ಮ ಮಾಲಿನ್ಯ ನಿಯಂತ್ರಣ ಇಲಾಖೆ, ವಿಜ್ನಾನದ ಗಂಧವೇ ಇಲ್ಲದವರನ್ನೂ ನೀವು ಅಲ್ಲಿ ವೈಜ್ನಾನಿಕ ಅಧಿಕಾರಿಗಳಾಗಿ ಕಾಣಬಹುದು, ಒಮ್ಮೆ ಅವರಲ್ಲಿಗೆ ಹೋಗಿ ಮಾಲಿನ್ಯದ ಬಗ್ಗೆ ಕುರಿತು ಕೇಳಿ ನೋಡಿ, ಅದೊಂದು ವಿಷಯ ಬಿಟ್ಟು ಇಲಾಖೆಯಲ್ಲಿರುವ ಎಲ್ಲಾ ರಾಜಕೀಯವನ್ನು, ಜಾತಿಯತೆಯನ್ನು ನಿಮ್ಮ ಕಿವಿಗೆ ಊದುತ್ತಾರೆ. ಸಾಮಾನ್ಯ ಜ್ನಾನವೂ ಇರುವುದಿಲ್ಲ. ಇನ್ನೂ ಕೆಲವು ಅಧಿಕಾರಿಗಳಂತೂ ಅವರಲ್ಲಿಗೆ ಮಾಹಿತಿ ಕೇಳಿ ಹೋದರೆ ಹಾವು ಕಡಿದಂತೆ ಆಡುತ್ತಾರೆ. ಅವರ ಬಳಿಗೆ ಹೋಗಿ ನೀವು ನಮ್ಮ ಜನತೆಯ ಸೇವೆಗೆ ಇರುವವರು ನಮಗೆ ಬೇಕಿರುವ ಮಾಹಿತಿ ನೀಡಿ ಸೇವೆ ನೀಡಬೇಕೆಂದರೆ, ನಿಮ್ಮ ತಿಥಿಯ ದಿನಾಂಕ ನಿಗದಿಪಡಿಸಿಬಿಟ್ಟಾರು ಜೋಕೆ. ಎಲ್ಲರೂ ಹೀಗಿರುತ್ತಾರೆನ್ನುವುದಿಲ್ಲ, ಆದರೆ ಬಹಳಷ್ಟೂ ಮಂದಿ ಹೀಗೆಯೇ ಇರುತ್ತಾರೆ,ನಾನು ನನಗೆ ಅತಿ ಮೆಚ್ಚುಗೆಯಾದ ಒಬ್ಬ ವ್ಯಕ್ತಿಯ ಬಗ್ಗೆ ಹೇಳಲೇಬೇಕು, ಅವರು ನೀರಾವರಿ ಇಲಾಖೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ದ್ವಿತೀಯ ದರ್ಜೆಯ ಗುಮಾಸ್ತೆಯಾಗಿದ್ದಾರೆ, ಅವರ ಬಳಿಯಲ್ಲಿ ಅರ್ಧ ಗಂಟೆಯಷ್ಟು ಕುಳಿತರೆ ನಿಮ್ಮ ಕಾಲೆಜಿನಲ್ಲಿ ತಿಳಿಸದ ಅದೆಷ್ಟೋ ನಿರಾವರಿಗೆ, ಡ್ಯಾಂ ಗಳಿಗೆ ಸಂಬಂದಪಟ್ಟ ವಿಷಯಗಳನ್ನು ನಿಮಗೆ ಹೇಳಿಕೊಡುತ್ತಾರೆ.ಯಾವ ಇಂಜಿನಿಯರುಗಳಿಗೂ ಕಡಿಮೆಯೆನಿಸುವುದಿಲ್ಲ. ಆದರೇ ಮೊದಲು ಹೇಳಿದ ಅಧಿಕಾರಿಗಳಿಗೆ, ನಮ್ಮಂತೆಯೇ ಒಲ್ಲದ ಮನಸ್ಸಿನಿಂದ ಕೆಲಸ ಮಾಡುವ ಕರ್ಮ ಬಂದಿರುವುದೆನ್ನುವುದು ನನ್ನ ಅನಿಸಿಕೆ.ಆದರೇ ಇವರ ಅಚ್ಚು ಮೆಚ್ಚಿನ ವಿಷಯವೆಂದರೇ, ರಾಜಕೀಯ, ಜಾತಿಯತೇ, ಮತೀಯತ, ಪ್ರಾಂತೀಯತೆ, ಸಂಬಳ ಹೆಚ್ಚಳ ಕೊರತೆ,ಅದರಲ್ಲಿನ ಲೋಪ ದೋಷಗಳು.

ನಾನು ಕಂಡಂತೆ ಎಲ್ಲರೂ ರಾಜಕೀಯದ ಬಗ್ಗೆ ಮಾತನಾಡುತ್ತಾರೆ, ಈಗ ಇರುವ ಮಹನೀಯರನ್ನೇ ತಡೆಯಲಾಗುತ್ತಿಲ್ಲ ಇನ್ನೂ ಇವರನ್ನೂ ಅವರೊಂದಿಗೆ ಸೇರಿಸಿದರೆ ನಮ್ಮ ಬದುಕಿನ ಗತಿ ಏನು?ಜಾತಿಯತೆಯ ಬಗ್ಗೆ ಎಂದರೇ ಪ್ರತಿಯೊಂದು ಜಾತಿಗೂ ನಾಲ್ಕು ಜನರು ಮಠಾಧೀಶರಿದ್ದಾರೆ, ಅವರು ಇರುವ ಜಾತಿಯನ್ನು ಮತ್ತೆ ಒಳ ಪಂಗಡಗಳಾಗಿ ಹಂಚಿ ಹರಿದಿದ್ದಾರೆ ಇನ್ನು ಇವರನ್ನೂ ಸೇರಿಸಿದರೆ ನಮ್ಮ ಗೋಳನ್ನು ಕೇಳಲು ಭೂಮಿಯ ಮೇಲೆ ಜನರೇ ಇಲ್ಲದಂತೆ ಮಾಡಿ ಬಿಡುತ್ತಾರೆ.ಇಂಥವುಗಳನ್ನು ತಗ್ಗಿಸುವ ಮಾರ್ಗವದರೂ ಯಾವುದು??

10 ಡಿಸೆಂಬರ್ 2009

ಬೇಸತ್ತ ಬದುಕಿಗೊಂದು ಪರ್ಯಾಯ ಪಯಣ!!!




ಸೋಮಾರಿತನ ಅನ್ನೋದು ಎಷ್ಟರಮಟ್ಟಿಗೆ ಬೆನ್ನತ್ತಿದೆಯೆಂದರೇ, ಸದಾ ಮಲಗಿದಿದ್ದರೇ ಚೆನ್ನಾಗಿರುತಿತ್ತು ಅನ್ಸುತ್ತೆ. ಜಗತ್ತು ಬರಿ ರಾತ್ರಿಗಳಿಂದಲೇ ತುಂಬಿದಿದ್ದರೇ ಸೊಗಸಾಗಿರುತ್ತಿತ್ತು. ಮುಂಜಾನೆ ಏಳುವುದು, ಹತ್ತಾರು ಮೈಲಿ ತನಕ ಬೈಕ್ ಹತ್ತಿ ಹೊಗೆ ಕುಡಿದು ಆಫೀಸಿಗೆ ಹೋಗುವುದು,ಆಫೀಸಿಗೆ ಬಂದರೇ ಬೆಳ್ಳಿಗ್ಗೆಯಿಂದ ರಾತ್ರಿವರೆಗೆ ಬರೀ ಮೀಟೀಂಗೂ ಮೀಟೀಂಗೂ ಅಬ್ಬಬ್ಬಾ ಜೀವನದ ಬಗ್ಗೆ ತಾತ್ಸಾರ ಮೂಡುವುದಕ್ಕೆ ಇದಕ್ಕಿಂತ ಬೇರೇನೂ ಬೇಡವೆನಿಸುತ್ತದೆ. ಜಗತ್ತಿನ ಬಗ್ಗೆ ತಿಳಿಯುವುದಕ್ಕೆ ಅಂತ ಒಮ್ಮೊಮ್ಮೆ ಪ್ರಯತ್ನಿಸಿ ನೋಡಿ! ನಿಮ್ಮ ತಲೆ ಕೆಟ್ಟಿರುವುದು ಸಾಬಿತಾಗುತ್ತದೆ. ಕುಳಿತು ಮಲಗಿ ಸಾಕಾಗಿ ಕೊನೆಗೆ ಒಮ್ಮೆ ಅರಣ್ಯವಾಸ ಮಾಡಿಬರೋಣ ಅಂತಾ ಹೊರಟೆವು. ನಾನು ಮತ್ತೆ ನನ್ನ ಗೆಳೆಯರಾದ, ನಂದ, ಮಹೇಶ, ಯೋಗಿ ಮತ್ತು ವಿಜಿ ಚಾರಣ ಮಾಡೊಣವೆಂದು ನಿರ್ಧರಿಸಿದೆವು. ಬೆಂಗಳೂರಿನಿಂದ ಹೊರಡುವಾಗ ರಾತ್ರಿ ಸುಮಾರು ಹನ್ನೆರಡಾಗಿತ್ತು. ಬಸ್ಸಿನಲ್ಲಿ ಕುಳಿತು ಹೊರಟೆವು, ನಮ್ಮ ಮೊದಲನೆ ಪ್ಲಾನ್ ಪ್ರಕಾರ ನಾವು ಮುಂಜಾನೆ ೫-ಅಥವಾ ೬ ಗಂಟೆಗೆ ಸಕಲೇಶಪುರದಿಂದ ಚಾರಣ ಆರಂಭಿಸಬೇಕಿತ್ತು. ಆದರೇ ನಮ್ಮ ತಂಡದಲ್ಲಿದ್ದ ಬಕಾಸುರ ಭಕ್ತಾದಿಗಳು ಕೋಳಿ ತೆಗೆದುಕೊಳ್ಳದೇ ಹೋಗಲು ಸಾಧ್ಯವೇ ಇಲ್ಲವೆಂದು ತೀರ್ಮಾನಿಸಿ, ಕೋಳಿ ತೆಗೆದುಕೊಂಡು ಸಕಲೇಶಪುರ ಬಿಡುವಾಗ ಹತ್ತು ಗಂಟೆಯಾಯಿತು. ನಾನು ಭರ್ಜರಿಯಾಗಿ ಮೂರ್ನಾಲ್ಕು ಇಡ್ಲಿ ಮತ್ತು ಚಿತ್ರಾನ್ನ ತಿಂದು ನನ್ನ ದೇಹಕ್ಕೆ ಬೇಕಿದ್ದ ಇಂಧನವನ್ನು ಭರ್ತಿಮಾಡಿಕೊಂಡೆ. ಅಂತೇಯೇ ನಮ್ಮ ತಂಡದಲ್ಲಿದ್ದವರೆಲ್ಲರೂ ಬಕಾಸುರನಿಗೆ ಪ್ರತಿಸ್ಪರ್ಧಿಗಳಾಗಿದ್ದರಿಂದ ಅವರ ಇಂಧನದ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ.ಮೊದಲೇ ತಡವಾಗಿದ್ದರಿಂದ ರಾತ್ರಿಯ ನಮ್ಮ ತಂಗುವ ತಾಣಕ್ಕೆ ಹೋಗಲು ತಡವಾಗುತ್ತದೆಂದು ಬಸ್ಸು ಹಿಡಿದು ಕಾಡುಮನೆ ಎಸ್ಟೆಟ್ ಹತ್ತಿರಕ್ಕೆ ಹೋಗಿ ಅಲ್ಲಿದ್ದ ರೈಲಿನ ಹಳಿಯನ್ನು ತಲುಪಿದೆವು. ಬಸ್ಸು ಇಳಿದ ತಕ್ಷಣವೇ ನಾವು ಚಾರಣಕ್ಕೆ ಹೊರಟವರೆಂದು ಅಲ್ಲಿದ್ದ ತೋಟದವರೊಬ್ಬರು ನಮ್ಮೊಡನೆ ಸ್ವಲ್ಪ ದೂರ ಬಂದು ಚಾರಣದ ಬಗ್ಗೆ ಸ್ವಲ್ಪ ಹೇಳಿ ನಮ್ಮಯ ಬಗ್ಗೆ ಕೇಳಿ ತಿಳಿದು ಹೋದರು. ಅವರ ನನ್ನ ನಡುವೆ ನಡೆದ ಮಾತಿನ ಸಾರಾಂಶವಿಷ್ಟೆ, ಅಲ್ಲಿರುವ ಎಲ್ಲ ಸಣ್ಣಪುಟ್ಟ ತೊರೆಗಳಿಗೂ ಒಂದಲ್ಲ ಒಂದು ಡ್ಯಾಂ ಕಟ್ಟುತ್ತಿದ್ದಾರೆ, ಅದರಿಂದ ಆಗುವ ಅನೂಕಲ ಅನಾನೂಕೂಲತೆಯ ಬಗ್ಗೆ ಏನು ತಿಳಿಸಿಲ್ಲ.
ಇದು ಎಲ್ಲರ ಬದುಕಿನಲ್ಲಿಯೂ ಆಗುವಂತಹದ್ದೆ, ಹಳ್ಳಿಯಾದರೇನು, ಪಟ್ಟಣವಾದರೇನು? ಸರ್ಕಾರ ಮಾಡುವ ಕಾರ್ಯಗಳ ಬಗ್ಗೆ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ತಲುಪುವುದು ತೀರಾ ವಿರಳ. ನಮ್ಮ ಜನತೆಯೂ ಅಷ್ಟೆ ಅದರ ಬಗ್ಗೆ ತಿಳಿಯಲು ಹೋಗುವುದು ಅತಿ ವಿರಳ. ನಾನು ಇದನ್ನು ಹಲವಾರು ಬಗ್ಗೆ ಪರೀಕ್ಷಿಸಿದ್ದೇನೆ. ಯಾವ ಅಧಿಕಾರಿಗಳು ಜನತೆಗೆ ಬೇಕಿರುವ ಬಗ್ಗೆ ಮಾಹಿತಿ ಕೊಟ್ಟು ಸಹಕರಿಸುವಂತೆ ಕಾಣುವುದಿಲ್ಲ.ಅಂತೂ ಇಂತೂ ರೈಲ್ವೇ ಹಳಿಗಳ ಮೇಲೆ ಕಾಲಿರಿಸಿದ್ದೇ ತಡ ನನ್ನ ಮಿತ್ರರೂ ಕ್ಯಾಮೇರಾ ತೆಗೆದು ಫೋಟೋ ತೆಗೆಯಲು ಆರಂಭಿಸಿದರು. ಬನ್ನಿ ಬನ್ನಿ ನಾವು ಬಹಳ ದೂರ ಹೋಗಬೇಕು ನಾಳೆ ಸಂಜೆ ತನಕ ಫೋಟೋ ತೆಗೆಯಬಹುದು ಎಂದರೇ, ಅಯ್ಯೊ ಸುಮ್ಮನೆ ಇರಪ್ಪ ಮೊದಲನೆ ಸಾರಿ ಬಂದಿದ್ದೇವೆ ಆದಷ್ಟೂ ಫೋಟೋ ತೆಗಿಬೇಕು ಎಂದರು. ಏನೋ ಮಾಡಿಕೊಂಡು ಹಾಳಾಗಿ ಎಂದು ಮುನ್ನೆಡೆದೆ. ಹಳಿಯ ಕೆಲಸ ಮಾಡುತ್ತಿದ್ದವರೊಡನೆ ಮಾತನಾಡಲು ನೊಡಿದರೆ ಅಲ್ಲಿದ್ದವರೆಲ್ಲರೂ ತೆಲುಗು ನಾಡಿನವರು.ನನ್ನ ಹರುಕು ಮುರುಕು ತೆಲುಗು ಬಳಸಿ ಮಾತನಾಡುತ್ತ ಮುನ್ನೆಡೆದೆ. ನಿಜವಾಗಿಯೂ ಶ್ರಮಜೀವಿಗಳು ತೆಲುಗು ನಾಡೀನವರು.ರಾಜ್ಯ ಬಿಟ್ಟು ರಾಜ್ಯಕ್ಕೆ ಕೇವಲ ಕೂಲಿ ಕೆಲಸಕ್ಕೆ ಬರುವುದು ಸಾಮಾನ್ಯ ಸಂಗತಿಯಲ್ಲ. ಅನಿವಾರ್ಯತೆ ಅನ್ನದ ಮಹಿಮೆಯೆಂದರೇ ಇದು ಎನ್ನುವುದಕ್ಕೆ ಇದೊಂದು ಉದಾಹರಣೆ. ಗದ್ದೆ ಕೆಲಸಕ್ಕೂ ಸೋಮಾರಿತನ ಬಂದು ನಮ್ಮ ಜನರನ್ನು ಗದ್ದೆಗೆ ಕರೆದು ಹೋಗಬೇಕೆಂದರೆ ಎರಡು ಬಾಟಲ್ ಓ ಸಿ ತೋರಿಸಲೇಬೇಕು. ಎಷ್ಟು ನಡೆದರೂ ಉದ್ದಕ್ಕೂ ಬರೀ ರೈಲ್ವೆ ಹಳಿಗಳೇ ಕಾಣುತಿದ್ದವು. ಆದರೂ ರಲ್ವೇ ಅನ್ನೋದು ನಿಜಕ್ಕೂ ಶ್ಲಾಘನೀಯ. ಅಂಥಹ ಕಾಡಿನ ಮಧ್ಯೆಯಲ್ಲಿಯೂ ಕೂಡ ರೈಲ್ವೇ ತೆಗೆದುಕೊಂಡು ಹೋಗಿರುವುದು ಹೆಮ್ಮೆಯ ವಿಚಾರ. ಬಹಳಷ್ಟೂ ಕೆಲಸಗಳು, ರೈಲ್ವೆ ಕಾಮಗಾರಿ, ರಸ್ತೆಗಳು ಅಂದಿನ ಕಾಲದಲ್ಲಿ ಮರ ಸಾಗಣೆ ಮಾಡಲು ಇಂಗ್ಲೀಷರು ಬಳಸಿರುವುದು ಸತ್ಯವಾದರೂ ನಮ್ಮ ಈಗಿನ ಪರಿಸ್ತಿಯಲ್ಲಿ ಕೇವಲ ಅವುಗಳನ್ನು ಸುಸ್ಥಿತಿಗೆ ತರಲು ಪರದಾಡಬೇಕಿದೆ. ನಾವು ಅದರಲ್ಲಿ ಮುಂದೆ ಇದ್ದಿವಿ, ಇದರಲ್ಲಿ ಮುಂದೆ ಇದ್ದಿವಿ, ಎಂದು ನಮ್ಮ ಬೆನ್ನನ್ನು ನಾವೇ ಚಪ್ಪರಿಸುತ್ತಾ ಓಡಾಡುವುದು ನಮ್ಮನ್ನು ನಮ್ಮ ನೈಜ ಸ್ಥಿತಿಯ ಬಗ್ಗೆ ಕಣ್ಣು ಮುಚ್ಚುವಂತಾಗಿಸಿದೆ. ನಮ್ಮ ಅಹಂ ನಿಂದಾಗಿ ಅಂಧತೆಯಲ್ಲಿ ಮುಳುಗಿರುವುದು ಸತ್ಯವಾದರೂ, ಅವುಗಳೆಲ್ಲವನ್ನು ನಾವು ಒಪ್ಪುವುದಿಲ್ಲ. ಕೇವಲ ಮಂಗಳೂರು ಬೆಂಗಳೂರು ನಡುವೆ ರೈಲು ಓಡಾಡಿದರೇ ಆಗಬುಹುದಾದ ಅನೂಕೂಲತೆಯ ಬಗ್ಗೆ ನಮ್ಮ ರಾಜ ದೊರೆಗಳು ಪ್ರಸ್ತಾಪಿಸುವುದಿಲ್ಲ.
ಅದೇನೆ ಇರಲಿ, ನಮ್ಮ ಚಾರಣದ ಬಗ್ಗೆ ತಮಗೆ ಹೆಚ್ಚು ತಿಳಿಸೋಣ, ಅಲ್ಲಿಂದ ಹೋಗುವಾಗ ಹಲವಾರು ಬಾರಿ ರೈಲನ್ನು ಕಂಡೆವು. ಎರಡು ರೈಲು ಪ್ರಯಾಣಿಕರನ್ನು ಕರೆದೋಯ್ದದ್ದನ್ನು ಬಿಟ್ಟರೆ ಮಿಕ್ಕೆಲ್ಲಾ ರೈಲುಗಳು ಗೂಡ್ಸ್ ರೈಲುಗಳು.ಕಬ್ಬಿಣದ ಅದಿರನ್ನು ತುಂಬಿಕೊಂಡು ಹೋಗುವ ರೈಲನ್ನು ಕಂಡಾಗ ನನಗೆ ನೆನಪಾದದ್ದು, ನಮ್ಮ ಹಾಸನ ಮಂಗಳೂರು ರಾಷ್ಟ್ರೀಯ ಹೆದ್ದಾರಿ. ಅದೆಷ್ಟೂ ಬಾರಿ ಅದನ್ನು ದುರಸ್ತಿಗೊಳಿಸಿದರೂ ಅದು ಸರಿಯಾಗುತ್ತಲೇ ಇಲ್ಲ, ಅಂಥಹ ಸಮಯದಲ್ಲಿ ನಮ್ಮ ರೈಲಿನಲ್ಲಿ ಸಾಗಿಸಿದರೇ, ವಾಯು ಮಾಲಿನ್ಯ, ಮತ್ತು ಆರ್ಥಿಕ ತೊಂದರೆಯನ್ನು ತಪ್ಪಿಸಬಹುದು. ವರ್ಷಕ್ಕೆ ನಾಲ್ಕಾರು ಬಾರಿ ರಸ್ತೆಗೆ ತಾರು ಬಳಿಯುವುದನ್ನಾದರೂ ತಪ್ಪಿಸಬಹುದೇನೋ!! ರಸ್ತೆಯುದ್ದಕ್ಕೂ ನಾವು ಸಕಲೇಶಪುರದಿಂದ ಫ್ಲಾಸ್ಕ್ ಗೆ ತುಂಬಿಸಿದ್ದ ಓಂದು ಲೀಟರ್ ಟೀ ಸವಿಯುವುದು ಜೊತೆಗೊಂದು ಸಿಗರೇಟು ಸೇದಿ ವಾಯುಮಾಲಿನ್ಯದ ಬಗ್ಗೆ ಭಾಷಣ ಬಾರಿಸುತ್ತಾ ಹೊರಟೆವು. ಅಂತೂ ಇಂತೂ ನಡೆದು ಓಡೋಡಿ ಮಳೆ ಬರುವ ಮುನ್ನಾ ಎಡುಕುಮೇರಿ ಎಂಬ ರೈಲ್ವೆ ನಿಲ್ದಾಣ ತಲುಪಿದೆವು. ಉದ್ದುದ್ದ ಸೇತುವೆಗಳು ೧೦೦ರಿಂದ ೨೦೦ ಅಡಿಗಳಷ್ಟೂ ಆಳವಾಗಿದ್ದವು, ಒಂದೊಂದು ಸೇತುವೆಗಳು ಅರ್ಧ ಕೀಮೀ ಅಷ್ಟೂ ಉದ್ದವಿದ್ದವು. ಮಧ್ಯದಲ್ಲಿ ರೈಲು ಬಂದರೇ ನಮ್ಮ ಗತಿ ಏನು? ಎನ್ನುವ ಪ್ರಶ್ನೆಯೂ ಬಹಳ ಸಾರಿ ನಮ್ಮ ಮುಂದೆ ಬಂದಿತ್ತು. ಆದರೂ ಆರು ವರ್ಷದಿಂದ ಹಿಂದೆ ನಾನು ಹೋಗಿದ್ದಾಗ ಇದ್ದ ಪರಿಸ್ಥಿತಿಗೂ ಈಗಿನ ಸ್ಥಿತಿಗೂ ಬಹಳ ವ್ಯತ್ಯಾಸವಿದೆ.ಹಿಂದೆ ನಾವು ಹೋದಾಗ ಹೆಚ್ಚೆಂದರೆ, ಹತ್ತು ಜನರನ್ನು ಕಂಡಿರಲಿಲ್ಲ. ಆದರೇ ಈ ಬಾರಿ ದಾರಿ ಉದ್ದಕ್ಕೂ ಜನರೇ ತುಂಬಿದ್ದರು. ನಾವು ಕಾಡಿನ ಮಧ್ಯೆ ಇದ್ದಿವೆಂಬ ಅರಿವು ಇಡೀ ದಿನ ಬರಲೇ ಇಲ್ಲ.ಒಂದು ಮಂಡಲದ ಹಾವನ್ನು ಬಿಟ್ಟರೇ ಮಿಕ್ಕಿದ್ದೇನೂ ಕಾಣಲಿಲ್ಲ. ರಾತ್ರಿ ನಾವು ತೆಗೆದುಕೊಂಡು ಹೋಗಿದ್ದ ಕೋಳೀ ಮಾಂಸವನ್ನು ಮಾಡಲು ಸಿದ್ದತೆ ಮಾಡುವಾಗ ಬರೋ ಅಂತಾ ಮಳೆ ಶುರುವಾಯಿತು.ಕುಮಾರಣ್ಣ ಅನ್ನೋ ಒಬ್ಬ ಮಹಾಸ್ವಾಮಿ ನಮ್ಮ ಕಡೆಗೆ ಕರುಣೆ ತೋರಿಸಿ, ನಮಗೆ ಅನ್ನದಾನ ನೀಡಿ, ಜೊತೆಗೆ ರಾತ್ರಿ ಇಡಿ ನಮ್ಮ ಜೊತೆ ಹರಟೆ ಹೊಡೆದು ನಮಗೆ ಜೊತೆಗಾರನಾಗಿದ್ದ.ಕುಡಿತ ಎಂತವನನ್ನು ಮೂಢನಾಗಿಸುತ್ತೆ ಅನ್ನೋದಕ್ಕೆ ನಮ್ಮ ಕುಮಾರನ್ನ ಒಂದು ಸೂಕ್ತ ಉದಾಹರಣೆ, ನಮ್ಮ ಜೊತೆ ಕುಡಿದು ಅವರ ಬಾಸ್ ಬಗ್ಗೆ ಕೆಟ್ಟದ್ದಾಗಿ ಮಾತನಾಡಿ ಕಡೆಗೆ ಉಗಿಸಿಕೊಂಡು ಹೋದ. ಕುಡಿದಾಗ ಜಗತ್ತಿಗೆ ನಾನೇ ದೊಡ್ಡವನೆಂಬ ಭಾವನೆ ಮೂಡುವುದು ನಿಜಕ್ಕೂ ಹೆಮ್ಮೆಯ ವಿಷಯ.ಅಂಥಹ ಆತ್ಮವಿಶ್ವಾಸ ಬರುವುದಾದರೂ ಹೇಗೆಂಬುದು ನನಗೆ ಅರಿಯದ ವಿಷಯ.
ದಿನವಿಡಿ ನಡೆದು ಹೋದದ್ದಕ್ಕೆ ನಿದ್ದೆ ಬಂದಿರುವುದು ಅರಿವಾಗಲಿಲ್ಲ. ಮುಂಜಾನೆ ನಾಲ್ಕು ಗಂಟೆಗೆ ರೈಲಿನಲ್ಲಿ ಹೋಗೋಣವೆಂದು ಎದ್ದೆವು ರೈಲು ಅಲ್ಲಿ ನಿಲ್ಲಿಸುವುದಿಲ್ಲವಾದರೂ ಅಲ್ಲಿನ ರೈಲ್ವೆ ಸಿಬ್ಬಂದಿ ನಿಲ್ಲಿಸಿಕೊಡುವ ಭರವಸೆಯಿತ್ತರು. ಹತ್ತಲು ಪರದಾಡಿದಾಗ ರೈಲಿನಲ್ಲಿದ್ದವರೆಲ್ಲರೂ ಗಾಬರಿಗೊಂಡು ರೈಲಿನ ಬಾಗಿಲು ತೆಗೆಯಲೇ ಇಲ್ಲ.ಅಂತೂ ಐದು ನಿಮಿಷ ನಿಂತಿದ್ದ ರೈಲು ಹೊರಟು ಹೊಯಿತು. ಮುಂದೆನೂ ಎಂದು ಅಲ್ಪ ಸ್ವಲ್ಪ ದೂರ ನಡೆದು ಕುಳಿತೆವು. ಸುತ್ತಲೂ ಕತ್ತಲಾಗಿತ್ತು, ಕುಳಿತ ಸ್ವಲ್ಪ ಸಮಯದಲ್ಲಿಯೇ ಸುತ್ತಣ ಮೋಡದ ಬಣ್ಣ ಬದಲಾಗತೊಡಗಿತ್ತು, ಆ ಸುಂದರ ತಾಣದ ಬಗ್ಗೆ ಹೊಗಳುವ ಅವಶ್ಯಕತೆಯಿಲ್ಲ ಅದನ್ನು ಅನುಭವಿಸಿಯೇ ತೀರಬೇಕು.ಊರು ಬಿಟ್ಟು ಮುಂಜಾನೆ ಸಮಯದಲ್ಲಿ ಅಥವಾ ಮುಸ್ಸಂಜೆಯಲ್ಲಿ ಕಾಡಿನಲ್ಲಿ, ಬೆಟ್ಟದ ಮೇಲೆ, ನದಿ ದಂಡೆಯಲ್ಲಿ, ಸೇತುವೆಯ ಮೇಲೆ, ಮಳೆಯಲ್ಲಿ, ಮಂಜಿನಲ್ಲಿ, ಇವುಗಳ ಅನುಭವಗಳು ಬೆಂಗಾಡಿನ ಬದುಕಿಗೆ ಹಸಿರು ಛಾವಣಿಯಿದ್ದ ಹಾಗೆ.ಬೆಂಗಳೂರು ಟ್ರಾಫಿಕ್ ನಲ್ಲಿ ಬೇಸತ್ತಿದ್ದ ನನಗಂತೂ ಎಲ್ಲಿಲ್ಲದ ಆನಂದ ಉಕ್ಕಿ ಬಂತು. ಅಲ್ಲೇ ಇರೋಣವೆನ್ನುವಷ್ಟು.ಆದರೂ ಹೊರಡಬೇಕಿತ್ತಲ್ಲ ರೈಲಿನ ಹಳಿಯ ಮೇಲೆ ನಡೆಯಲು ಯಾರಿಗೂ ಇಷ್ಟವಿರಲಿಲ್ಲ, ಅಲ್ಲಿಂದ ದೂರದ ಒಂದು ಹಾದಿಯನ್ನು ಗುರಿಯಾಗಿಟ್ಟುಕೊಂಡು ನಡೆದೆವು. ರೈಲಿನ ಹಳಿಯಿಂದ ದಿಡೀರನೆ, ಕೆಳಕ್ಕೆ ಹೆಚ್ಚು ಕಡಿಮೆ ನೂರು ಅಡಿಗಳಷ್ಟು ಆಳಕ್ಕೆ ಒಮ್ಮೆಗೆ ಜಾರಿ ಇಳಿದೆವು. ನಾವಿದ್ದ ವೇಷ ಭೂಷಣಗಳು ಬಣ್ಣ ಬದಲಾದವು.ಕೆಳಗೆ ದಣಿವು ತಣಿಸಲು ಕುಳೀತು ಟೀ ಕಾಯಿಸಿ ಕುಡಿದು, ಹೊರಡಲು ಸಿದ್ದರಿದ್ದಾಗ ಮೇಲಿನಿಂದ ಯಾರೋ ಅಪರಿಚಿತರ ಆ ದಾರಿಯಲ್ಲಿ ಹೋಗಬೇಡಿ, ನದಿ ತುಂಬಿ ಹರಿಯುತ್ತಿದೆ, ದಾಟಲಾಗುವುದಿಲ್ಲವೆಂದರು. ನಮ್ಮ ನಮ್ಮಲ್ಲೇ ವಾದ ವಿವಾದಗಳು ಆಗಿ, ಕಡೆಗೆ ಒಮ್ಮೆ ನದಿ ದಂಡೆಗೆ ಹೋಗಿ ನೋಡುವ ತೀರ್ಮಾನವಾಯಿತು. ಹೊರಟ ಐದಾರು ನಿಮಿಷದಲ್ಲಿಯೇ, ಅದೇ ದಾರಿಯಲ್ಲಿ ಒಂದು ಕಾಡೆಮ್ಮೆ ನಡೆದ ಹೆಜ್ಜೆ ಗುರುತು ಕಂಡಿತು. ಅದು ಒಂದೇ ಹೋಗಿರುವುದರಿಂದ ಕಾಡುಕೋಣವಿರಬಹುದೆಂಬುದನ್ನು ಊಹಿಸಿ ಬಹಳ ಹೆಚ್ಚರವಾಗಿ ಮುನ್ನೆಡೆದೆವು. ದಾರಿ ಉದ್ದಕ್ಕೂ ಕಾಲಿಗೆ ನೂರಾರು ಜಿಗಣೆಗಳು ಹತ್ತುತ್ತಿದ್ದವು, ಅವುಗಳನ್ನು ಕೀಳುವುದಕ್ಕೆ ಅಂತಾ ನಿಂತರೂ ಮುಗಿದೇ ಹೋಯಿತು, ಕೈಗಳಿಗೆ ಹತ್ತಿ ಬಿಡುತ್ತಿದ್ದವು. ಮುಂದುವರೆದು ಹೋದರೇ, ದಾರಿಯಲ್ಲಿ ಆನೆಯ ಲದ್ದಿಯ ಸಾಲು ಸಾಲು, ಒಂದೆಡೆಗೆ ಭಯ ಶುರುವಾಯಿತು. ಬಲಗಡೆಗೆ ಎತ್ತರದ ಬೆಟ್ಟವಿದೆ, ಎಡಕ್ಕೆ ಪ್ರಪಾತವಿದೆ, ಹಿಂದೆ ಓಡಲು ಆಗುವುದಿಲ್ಲ, ಆನೆ ಬಂದರೇ ಅಥವಾ ಯಾವುದೇ ಮೃಗ ಸಿಕ್ಕರೂ ನಮ್ಮ ಅಂದಿನ ಅಥವಾ ಈ ಜನ್ಮದಿನವನ್ನು ಕಾಣುವುದು ನಿಶ್ಚಯವೆನಿಸಿತು.ಇರುವುದು ಐದು ಜನ ವನ್ಯಮೃಗಗಳು ನಮಗೆ ಹಾನಿ ಮಾಡಲೇಬೇಕೆಂದು ಮಾಡದಿದ್ದರೂ ಅವುಗಳ ಕ್ಷೇಮಕ್ಕಾಗಿಯಾದರೂ ನಮ್ಮ ಮೇಲೆ ಧಾಳಿ ಮಾಡಬಹುದಲ್ಲವೇ?ಏನಾದರೊಂದು ಆಗಲಿ ಎಂದು ಬಹಳ ಎಚ್ಚರದಿಂದ ಮುನ್ನೆಡೆದೆವು ಅದೆಷ್ಟೂ ದೂರ ನಡೆದೆವೂ ಅತೀ ವೇಗದಿಂದ ನಡೆದೆವು. ಕನಿಷ್ಟ ಹದಿನೈದು ಕೀಲೋಮೀಟರ್ ನಷ್ಟಾದರೂ ನಡೆದಿದ್ದೇವೆಂಬುದು ನಮ್ಮ ಅನಿಸಿಕೆ. ನದಿಯ ಸದ್ದು ಕೇಳುತ್ತಿತ್ತೇ ವಿನಾಃ ಅದರ ಸುಳಿವು ಸಿಗುತ್ತಲೇ ಇರಲಿಲ್ಲ, ನಮಗೆ ಒಂದೆಡೆಗೆ ಆನೆಯ ಭಯ ಮತ್ತೊಂದೆಡೆಗೆ ನದಿ ತುಂಬಿ ಹರಿಯುತ್ತಿದ್ದರೇ ಮತ್ತೆ ಇದೇ ದಾರಿಯಲ್ಲಿ ನಡೆಯುವುದು ಅಸಾಧ್ಯ.ನಾವು ನಡೆಯುತ್ತಿದ್ದ ದಾರಿಯೂ ಆನೆ ದಿನ ನಿತ್ಯ ನದಿಗೆ ಹೋಗುವ ಹಾದಿ, ಆನೆ ಕೆಳಗೆ ನಮಗೆ ಸಿಗದಿದ್ದರೇ ಮೇಲಿನಿಂದ ಅಲ್ಲಿಗೆ ಮತ್ತೆ ಬಂದೇ ಬರುತ್ತದೆ. ಕೇಳಗೆ ಇದ್ದರೇ ಮೇಲಕ್ಕೆ ಹೋಗಲೇ ಬೇಕು, ಇದೆಂಥಹ ಹಣೆಬರಹವಾಯಿತ್ತಲ್ಲ. ಕಾಡು, ನೋಡುವುದಕ್ಕೆ ಸೊಗಸು, ಅಲ್ಲಿನ ಮೃಗಗಳ ನೆನಪಾದರೇ, ಜೀವದ ಜೊತೆಗೆ ಆಡುವ ಸೆಣಸಾಟ ಯಾರಿಗೂ ಬೇಡದ ವಸ್ತು.ಕಾಡಿಗೆ ಹೋಗುವವರು ಪ್ರಾಣಿಗಳನ್ನು ಎದುರಿಸಲು ಎಲ್ಲ ಸಿದ್ದತೆ ಮಾಡಿ ಹೋದರೆ ಅದು ಸಾರ್ಥಕ ಇಲ್ಲದೇ ಇದ್ದರೆ ಒಂದು ಭಯ ಇಲ್ಲವೇ ನಮ್ಮ ಶವವೂ ಸಿಗುವುದಿಲ್ಲ. ಅಂತೂ ಇಂತೂ ನದಿಯ ದಂಡೆಗೆ ಬಂದೆವು, ಇತ್ತ ಕಡೆಯಿಂದ ನೋಡಿದರೇ ಆ ಬದಿಯಲ್ಲಿ, ರಾಷ್ಟ್ರೀಯ ಹೆದ್ದಾರಿ ೪೮ ಇದೆ, ಅಬ್ಬಾ ಎನಿಸಿತು. ನದಿ ಅಂಥ ವೇಗದಲ್ಲೇನೂ ಹರಿಯುತ್ತಿಲ್ಲವೆಂದು ತೀರ್ಮಾನಿಸಿ ಕುಳಿತೆವು.ಇಲ್ಲಿ ಕೂರುವುದು ಬೇಡ ಬಂದ ವೇಗದಲ್ಲಿಯೇ ನದಿಯನ್ನು ದಾಟಿ ಬಿಡುವುದು ಉತ್ತಮವೆಂದು ತೀರ್ಮಾನಿಸಿ ನದಿ ದಾಟಲು ಸಿದ್ದರಾದೆವು. ನದಿಗೆ ಇಳಿದು ಸ್ವಲ್ಪ ದೂರ ನಡೆದಾಕ್ಷಣ ತಿಳಿಯುತು ನದಿಯ ವೇಗ ಬಹಳ ಹೆಚ್ಚಿತ್ತು. ನಮಗೆ ಎಲ್ಲಿಲ್ಲದ ನಿರಾಶೆ ಮೂಡಿತು. ಮಾಡುವುದೇನು?ಯಾರೊಬ್ಬರೂ ಹಿನ್ನೆಡೆಯಲು ಸಿದ್ದರಿರಲಿಲ್ಲ.ಅಂತೆಯೇ ಮುನ್ನೆಡೆಯಲು ಆಗುತ್ತಿರಲಿಲ್ಲ. ಬದಿಯಲ್ಲಿ ಇಪ್ಪತ್ತು ಅಡಿಗಳಷ್ಟು ಉದ್ದದು ಒಂದು ಮರದ ಬಡಿ ಬಿದ್ದಿತ್ತು, ಅದನ್ನು ಹಿಡಿದು ದಾಟಲು ಯತ್ನಿಸಿದೆವು, ಬಡಿಯು ಹಸಿವಾಗಿತ್ತು, ಕನಿಷ್ಟ ಮುವತ್ತು ಕೆಜಿಯಷ್ಟಾದರೂ ಇದ್ದಿರಬೇಕು. ಅದನ್ನು ಬಳಸಿ ಎದ್ದು ಬಿದ್ದು ಎರಡು ಗಂಟೆಗಳ ಸತತ ಪ್ರಯತ್ನದಿಂದ ನದಿ ದಂಡೆಯನ್ನು ತಲುಪಿದೆವು.ತಲುಪಿದ ಕೂಡಲೇ ಪೂರ್ತಿ ಒದ್ದೆಯಾಗಿದ್ದ ನಮ್ಮ ಬ್ಯಾಗುಗಳನ್ನು ಬಿಸಿಲಿಗೆ ಇಟ್ಟು ನೀರಿನಲ್ಲಿ ಕಾಲು ಬಿಟ್ಟು ಮಲಗಿದೆವು.

13 ಅಕ್ಟೋಬರ್ 2009

ಬರವಣಿಗೆಯ ಬದುಕಿನಲ್ಲಿ ಉಳಿಯುವುದೇನು??

ಸದಾ ಕೆಲಸದ ಒತ್ತಡದಲ್ಲಿ, ಅಥವಾ ಇಲ್ಲ ಸಲ್ಲದ ಸುತ್ತಾಟದಲ್ಲಿ ಬರವಣಿಗೆಯನ್ನ ಕಡೆಗಣಿಸಿ ಕುಳಿತಿರುತ್ತೇನೆ ಎನಿಸುತ್ತದೆ. ನಾನೊಬ್ಬ ಹವ್ಯಾಸಿ ಬರವಣಿಗೆಗಾರನಲ್ಲದಿದ್ದರೂ ಬರವಣಿಗೆಯೆಂಬುದೊಂದು ನನ್ನ ಸ್ನೇಹಿತ, ನಾನದರ ಶತ್ರುವೆಂಬುದು ಸತ್ಯ.ಮನಸ್ಸಿಗೆ ಬಂದದ್ದನ್ನು ಬರೆದು ಬರವಣಿಗೆಯ ಮೇಲೆ ಸೇಡು ತೀರಿಸಿಕೊಳ್ಳುವುದೆಂದರೂ ತಪ್ಪಿಲ್ಲ. ಬರವಣಿಗೆ ಎಂಬುದರ ಗೀಳು ನನಗೆ ಹೇಗೆ ಬಂತು ಅದನ್ನು ಯಾಕೆ ಬರೆಯುತ್ತಿದ್ದೇನೆಂಬುದಂತೂ ನನಗೆ ತಿಳಿದಿಲ್ಲ. ಕುಳಿತಾಗ ನಾಲ್ಕು ಅಕ್ಷರ ಗೀಚುವುದು, ಅದನ್ನು ನಿಮ್ಮ ಮುಂದಿಟ್ಟು ಬೈಗುಳವನ್ನು ಪಡೆಯುವುದು ಎಂದಿನ ದಿನಚರಿಯಾಗಿದೆ. ಒಮ್ಮೊಮ್ಮೆ ಹುಚ್ಚನಂತೆ ಅಥವ ಹುಚ್ಚುಹಿಡಿದವನಂತೆ ಮಾತನಾಡುವುದು ನನ್ನ ಚಾಲಿಯಾಗಿದೆ. ಯಾರು ಕಿವಿ ಮುಚ್ಚಿದರೂ, ಮಾತನಾಡುವುದೇ ನನ್ನ ಕಸುಬೆಂದರೆ ಮುಖದ ಮೇಲೆ ಬೇರೆಯವರ ಎಂಜಲು ಬಿದ್ದಿರುತ್ತದೆ. ನೈಸರ್ಗಿಕ ವಿಕೋಪಕ್ಕೆ ತುತ್ತಾದ ಉತ್ತರ ಕರ್ನಾಟಕದ ಬಗ್ಗೆ ನೆನೆದು ಮಾತೆಂಬುದು ಬಾಯಿಂದ ಮುಂದೆ ಬರುತ್ತಲೇ ಇಲ್ಲ. ಸಾವು ಎನ್ನುವ ಪದ ಸದಾ ನಮ್ಮ ಬಾಯಿಯ ತುದಿಯಲ್ಲಿಯೇ ಇರುತ್ತದೆ, ಎಂತೆಂಥವರಿಗೆಲ್ಲಾ ಸಾವು ಬಂತು ನಿನಗೆ ಬರಲಿಲ್ಲವೇ ಅಂತಾ ಬೈಯ್ಯುವುದಿರಲಿ, ನಾನು ಬದುಕಿದ್ದೇನು ಬಂತು ಸಾಯಬಾರದೇ, ಹೀಗೆ ಸಾವಿನ ಬಗ್ಗೆ ಬಹಳ ಹಗುರವಾಗಿ ಮಾತನಾಡುವವರೆಲ್ಲಾ ಅಥವಾ ಜೀವನವನ್ನು ಹಗುರವಾಗಿ ಪರಿಗಣಿಸಿರುವವರೆಲ್ಲಾ ಒಮ್ಮೆ ಉತ್ತರ ಕರ್ನಾಟಕವನ್ನು ನೆನೆದರೇ ಮತ್ತೆಂದೂ ಆ ಬಗ್ಗೆ ಮಾತನಾಡಲಾರೆವು.

ಈ ಭೂಮಿ ನನ್ನದು ಈ ಮನೆ ನನ್ನದು ಇದು ನನ್ನದು ಅದು ನನ್ನದು ಎಂದು ಬೊಬ್ಬೆ ಹೊಡೆಯುತ್ತಿರುವ ನಾವುಗಳು, ಒಮ್ಮೆ ಒಂದೇ ಬಾರಿಗೆ ಉಟ್ಟುಡುಗೆಯನ್ನು ಬಿಟ್ಟು ಸಾವಿಗೆ ಅಂಜಿ ಅಥವಾ ನಿಸರ್ಗದ ಕೋಪಕ್ಕೆ ಬೆದರಿ ಊರು ಬಿಟ್ಟು, ಮನೆ ಮಠವನ್ನೆಲ್ಲಾ ತೊರೆದು ಬಂದು ಯಾವುದೋ ಊರು, ಯಾರೋ ನೀಡಿದ ಗಂಜಿಯನ್ನು ಕುಡಿಯುತ್ತಾ ಕುಳಿತಾಗ ಆಗುವ ಮಾನಸಿಕ ವೇದನೆ ಮತ್ತೊಂದಿಲ್ಲ. ತನಗೆಂದು ಕೂಡಿಟ್ಟ ಹಣ, ಆಸ್ತಿ, ಬಂಗಾರ ಎಲ್ಲವೂ ಒಂದೇ ಕ್ಷಣದಲ್ಲಿ ಕರಗಿ ನನಗೂ ಸಿಗದೇ ಪರರಿಗೂ ಸಿಗದೇ ಹೋಯಿತ್ತಲ್ಲವೆನ್ನುವ ಆಘಾತದಿಂದ ಹೊರಬರುವುದು ನಾವು ನೆನೆದಷ್ಟು ಸುಲಭವಲ್ಲ. ಉಳ್ಳವರು, ಹೊಸ ಮನೆ ಮಠ ಕಟ್ಟಿಕೊಳ್ಳಬಹುದು, ಇಲ್ಲದೇ ಇರುವವರೇನಾಗಬೇಕು?

ಎಲ್ಲವನ್ನೂ ನೈಸರ್ಗಿಕ ವಿಕೋಪವೆನ್ನಲಾಗುತ್ತದೆಯೇ? ಆಗುವುದೆಲ್ಲವೂ ಶನೀಶ್ವರನಿಂದ ಎನ್ನುವುದು ಯಾವ ನ್ಯಾಯ? ಯಾವುದೂ ಶಾಶ್ವತವಲ್ಲವೆನ್ನುವುದು ಬಹಳ ಸಾರಿ ನಮಗೆ ತಾತ್ವಿಕ ಬದುಕನ್ನು ಕಲಿಸುತ್ತದೆ ಆದರೂ, ನಾವು ದಿನ ನಿತ್ಯ ಹೊಡೆದಾಡುವು ಅಥವಾ ಮೋಸಮಾಡುವಾಗ ಅವೆಲ್ಲವೂ ನಮ್ಮ ಮನಸ್ಸಿಗೆ ಬರಲಾರದು. ಹೆತ್ತ ತಂದೆತಾಯಿಯರನ್ನು ಶತ್ರುಗಳಂತೆ ಕಾಣುವ ಮಕ್ಕಳ ಕಣ್ಣಿಗೆ ಜೀವನ ಅಲ್ಪವೆನಿಸುವುದಿಲ್ಲ. ಮಕ್ಕಳ ಜೀವನದೊಂದಿಗೆ ಆಟವಾಡಿ ತಮ್ಮ ಪ್ರತಿಷ್ಠೆ ಮೆರೆಯಲೆತ್ನಿಸುವ ತಂದೆತಾಯಿಯರಿಗೆ ಮಕ್ಕಳ ಜೀವನ ಚಿಕ್ಕದು ಅದನ್ನು ಅವರು ಆನಂದದಿಂದ ಆನದಿಸಲೆನಿಸುವುದಿಲ್ಲ. ಒಮ್ಮೆ ಕುಳಿತು ಚಿಂತಿಸಿದರೆ, ಈ ಬದುಕು, ಈ ದುಡಿಮೆ, ಈ ಜಂಜಾಟ, ಈ ಹೋರಾಟ, ಇವೆಲ್ಲವೂ ಯಾಕೆಂಬುದರ ಅರ್ಥ ಸಿಗುವುದಿಲ್ಲ. ಹಗಲು ರಾತ್ರಿ ಓದಿ, ಪುಸ್ತಕ ಬಿಟ್ಟರೇ ಮತ್ತೇನೂ ತಿಳಿಯದೆಂಬಂತೆ ಹಟ ಬಿದ್ದು ರಾಂಕ್ ಪಡೆದ ವಿದ್ಯಾರ್ಥಿಗೆ ಕೆಲಸ ಸಿಕ್ಕ ಕೆಲವೇ ದಿನಗಳಲ್ಲಿ, ನಾನು ನನ್ನ ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಮಜ ಮಾಡಲಿಲ್ಲ, ಅದನ್ನು ಆನಂದಿಸಲಿಲ್ಲವೆಂಬ ಕೊರಗುಂಟಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಕೊನೆಯ ಸಾಲಿನಲ್ಲಿ ಕುಳಿತು ಬೊಬ್ಬೆ ಹೊಡೆಯುತ್ತಿದ್ದ ಸ್ನೇಹಿತರೂ ಕೊನೆಗೊಮ್ಮೆ ಅಯ್ಯೋ ಓದದೇ ಬರೆಯದೇ ಹಾಳಾಗಿ ಹೋದೆವಲ್ಲವೆನ್ನುವಾಗ ಪಶ್ಚತ್ತಾಪ ಉಕ್ಕಿ ಬರುತ್ತದೆ. ಇಂಥಹ ಸನ್ನಿವೇಶದಲ್ಲಿ ಯಾರು ಸರಿ ಯಾರು ತಪ್ಪು? ಯಾವುದು ಸರಿ ಯಾವುದು ತಪ್ಪು? ಅಸಲಿಗೆ ಸರಿ ತಪ್ಪು ಎಂಬುದನ್ನು ಅರಿಯುವ ಅಥವಾ ಅಳೆಯುವ ಮಾಪನ ಯಾವುದು? ಸಂತೋಷವೆಂದರೇನು? ಆತ್ಮ ತೃಪ್ತಿ ಎಂದರೇನು? ಸಂತೋಷ ಬೇರೆ ಆತ್ಮತೃಪ್ತಿ ಬೇರೆಯೇ? ಅಥವಾ ಎರಡು ಒಂದೇ? ಇಂಥ ನೂರಾರು ಮೂರ್ಖ ಪ್ರಶ್ನೆಗಳು ನನ್ನ ತಲೆಯಲ್ಲಿ ಎಂದೆಂದಿಗೂ ಜೀವಂತವಾಗಿರುತ್ತವೆ.

21 ಸೆಪ್ಟೆಂಬರ್ 2009

ಬಹಳ ದಿನಗಳ ತರವಾತ!!!

ಬಹಳ ದಿನಗಳಿಂದ ಬರೆಯದೇ ಉಳಿದರಿಂದಲೋ ಏನೋ! ಬರೆಯಲು ಹೊರಟರೆ ಪದಗಳೆ ಹೊರಡುತ್ತಿಲ್ಲವೆನಿಸುತ್ತಿದೆ. ಬಹಳ ದಿನದ ಕಾರಣಗಳಿಂದಲ್ಲ, ನಿನ್ನ ತಲೆಯಲ್ಲಿ ಏನೂ ಉಳಿದಿಲ್ಲ ಅದಕ್ಕೇ ಏನೂ ಬರೆಯಲಾಗುತ್ತಿಲ್ಲವೆಂದರೇ ಅದು ನಿಮ್ಮ ಬುದ್ದಿವಂತಿಕೆ ಎನ್ನಲೇ ಬೇಕಾಗುತ್ತದೆ. ಅದೇನೆ, ಇರಲಿ, ಬಹಳ ದಿನದ ಬಳಿಕ, ಒಂದು ವರ್ಷದ ನಂತರ ಮರಳಿ ಬೆಂಗಳೂರು ಜೀವನಕ್ಕೆ ಮರಳಿದ್ದು ಒಂದೆಡೆಗೆ ಸಂತೋಷವೆನಿಸಿದರೂ, ಮತ್ತೊಂದೆಡೆಗೆ ಇದೆಂಥಹ ಬದುಕಯ್ಯ ಏನಿಸಿದೆ ನನಗೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಸಂಚಾರದ ದುರ್ವ್ಯವಸ್ಥೆ, ಒಂದು ಬಡಾವಣೆಯಿಂದ ಮತ್ತೊಂದೆಡೆಗೆ ಹೋಗಲು ತೆಗೆದುಕೊಳ್ಳುವ ಶ್ರಮ, ಸಮಯ ನನ್ನನ್ನು ತಲ್ಲಣಗೊಳಿಸಿದೆ. ಇದೇನಪ್ಪ, ಹಳ್ಳಿ ಹೈದ ಪೇಟೆಗೆ ಬಂದ ರೀತಿಯಲ್ಲಿ ಹೇಳ್ತೀಯಾ ಅಂದುಕೊಂಡರೂ ಸರಿನೇ, ನನಗೆ ಅನಿಸಿದ್ದನ್ನು ನಾನು ಹೇಳಿ ನಿಮ್ಮ ತಲೆಗೆ ಹುಳು ಬಿಡುವುದಂತೂ ಸತ್ಯ. ಬೆಂಗಳೂರು ಅಂದರೇ, ಅಯ್ಯೋ ಟ್ರಾಫಿಕ್ ಗೋಳು, ಮಳೆ ಬಂದರೇ ನಡೆಯುವುದಕ್ಕೆ ಆಗುವುದಿಲ್ಲ, ಆಟೋದವರು ಕರೆದ ಕಡೆಗೆ ಬರುವುದಿಲ್ಲ, ಹಣ ಸುಳಿಗೆ ಮಾಡ್ತಾರೆ, ಬಸ್ ಗಳಲ್ಲಿ ಹತ್ತಿ ಇಳಿದರೇ ಮುಗಿದೇ ಹೋಯಿತು ನೂರು ರೂಪಾಯಿ ಹೇಗೆ ಖರ್ಚು ಆಯಿತೆಂಬುದೇ ತಿಳಿಯುವುದಿಲ್ಲ. ದುಡ್ಡು ಎನ್ನುವುದಕ್ಕೆ ಬೆಲೆ ಇಲ್ಲವೇ ಇಲ್ಲ. ಹೀಗೆ ಸಮಸ್ಯೆಗಳ ಪಟ್ಟಿಯನ್ನು ಮಾಡಿ ಕುಳಿತುಕೊಂಡರೇ ನಿದ್ದೆ ಬರುವುದಿಲ್ಲ, ಮನೆಯಂಗಳದಲ್ಲಿ ಸೊಳ್ಳೆ ಹಾವಳಿ, ಸೊಳ್ಳೆ ಹೋಗಲಿ ಅಂತಾ ಹೇಳಿ ಸೊಳ್ಳೆ ಬತ್ತಿ ಹಚ್ಚಿದರೇ ಅದರ ವಾಸನೆ ಕುಡಿದು ನಾನು ಸಣ್ಣ ಆಗಿದ್ದೇನೆ ಹೊರತು, ಆ ಸೊಳ್ಳೆಗಳಲ್ಲ. ಅವುಗಳು ನೆಮ್ಮದಿಯಾಗಿ ಅದರೊಂದಿಗೆ ಹೊಂದಿಕೊಳ್ಳುತ್ತಿವೆ. ಅವುಗಳಿಗೆ ಸೊಳ್ಳೆಬತ್ತಿಯೇ ಆರೋಗ್ಯಕರ ಔಷಧಿಯಾಗಿ ಪರಿಣಮಿಸಿದೆ.
ಅಭಿವೃದ್ದಿಯೆಂಬುದು ಬೇಡವೇ ಎನ್ನುವ ಪ್ರಶ್ನೆ ಬರುತ್ತದೆ, ಮೆಟ್ರೋ ರೈಲು ಬರುತ್ತದೆಂದು ರಸ್ತೆಯ ಬದಿಯಲ್ಲಿದ್ದ ಮರಗಳನ್ನೆಲ್ಲಾ ಕಡಿದು ಹಾಕಿದ್ದಾಗಿದೆ. ಮೆಟ್ರೋ ರೈಲು ಎಷ್ಟು ಸರಿ ತಪ್ಪು ಎಂಬುದು ಸಾರ್ವಜನಿಕರ ಮುಂದೆ ಬಂದೇ ಇಲ್ಲ. ನಮ್ಮ ಬೆಂಗಳೂರಿಗೆ ಬರುವ ರೈಲಿನ ಬಗ್ಗೆ ಎಲ್ಲರಲ್ಲಿಯೂ ಕುತೂಹಲವಿದೆ. ಆದರೇ, ಅದರಿಂದಾಗುವ ಅನುಕೂಲತೆ ಅನಾನೂಕೂಲತೆಯ ಬಗೆಗೆ ನಾವು ಹೆಚ್ಚಿನ ಗಮನ ನೀಡಿದಂತೆ ಕಾಣುತ್ತಿಲ್ಲ. ರೈಲ್ವೆ ಹೆಸರಿನಲ್ಲಿ ಕಡಿದ ಮರಗಳೆಷ್ಟು? ಆ ಮರಗಳಿಂದ ಪರಿಸರಕ್ಕೆ ಆಗುತ್ತಿದ ಅನುಕೂಲತೆಗಳೇನು? ಒಂದು ಮರದಿಂದ ವಾರ್ಷಿಕ ಇಷ್ಟಿಷ್ಟೂ ಇಂಗಾಲವನ್ನು ತಗ್ಗಿಸುತ್ತದೆಂಬುದು ನಮಗೆಲ್ಲರಿಗೂ ತಿಳಿದಿದೆ. ಸರ್ಕಾರ ಮೆಟ್ರೋ ಎಂಬ ಬಿಳಿ ಐರಾವತದ ಹೆಸರಿನಲ್ಲಿ, ಹಸುರಾಗಿದ್ದ ಬೆಂಗಳೂರನ್ನು ಬರಡಾಗಿಸಿರುವುದಂತೂ ಸತ್ಯ. ಆದರೂ, ಬೆಂಗಳೂರಿಗರ ತೃಪ್ತಿಯಿರುವುದು, ಸದ್ಯದ ಟ್ರಾಫಿಕ್ ಎಂಬ ರಕ್ಕಸಿಯಿಂದ ಮುಕ್ತಿ ದೊರೆತರೆ ಸಾಕೆಂದು. ಅಂತೂ ಬಹಳ ಸಂತೋಷದಿಂದ ಬೆಂಗಳೂರಿಗೆ ಮರಳಿ ಬಂದ ನನಗೆ ಆದ ಗೊಂದಲಗಳು ಒಂದೆರಡಲ್ಲ. ಇದು ನಾನಿದ್ದ ಬೆಂಗಳುರಾ! ನಾನಿದ್ದ ಎಂದು ಹೇಳಿದ್ದೇನೆ ಹೊರತು ನನ್ನ ಬೆಂಗಳೂರು ಎಂದಿಲ್ಲ. ಅದು ನನ್ನಿಂದ ಹೇಳುವುದು ಸಾಧ್ಯವಿಲ್ಲ. ಈ ಬೆಂಗಳೂರು ಬದಲಾಗುತ್ತಿರುವುದರ ಬಗ್ಗೆ ನಾನು ಕೇಳಿದ್ದೆ ಆದರೇ, ಈ ಬಾರಿ ಕಣ್ಣಾರೆ ನೋಡೀ ಆನಂದಿಸುವ ಸುಯೋಗ ಬಂದಿದೆ. ಇಲ್ಲಿನ ಜನಜೀವನ ಕುಸಿಯುತ್ತಿರುವ ಹಣದ ಮೌಲ್ಯ, ಮಾನವಿಕ ಮೌಲ್ಯಗಳು ನನ್ನನ್ನು ಹುಬ್ಬೆರಿಸುವಂತೆ ಮಾಡಿದೆ. ನೂರು ರೂಪಾಯಿ ಎಂಬುದಕ್ಕೆ ಬೆಲೆ ಎಂಬುದನ್ನು ಬೆಂಗಳೂರು ಮರೆತು ಬಹಳ ದಿನಗಳೇ ಕಳೆದಿವೆ. ಇದೊಂದು ಊರು ಇಲ್ಲಿ ನೆಮ್ಮದಿಯಾಗಿರಬಹುದೆಂಬುದು ಭ್ರಮೆಯೆನಿಸಿದೆ. ಬಸ್ಸಿನಲ್ಲಿ ಓಡಾಡಬೇಕೆಂದರೆ, ದಿನದ ಪಾಸ್ ಪಡೆಯಲೇ ಬೇಕು, ಇಲ್ಲದ್ದಿದ್ದರೇ ಒಂದು ದಿನಕ್ಕೆ ಅದೆಷ್ಟೂ ಹಣವ್ಯಯಿಸಬೇಕಾಗುತ್ತದೆಂಬುದು ನಿಮಗೆ ಅರಿವಾಗುವುದಿಲ್ಲ. ಒಂದೊಂದು ವಸ್ತುವಿನ ದರಗಳು ಶರವೇಗದಲ್ಲಿ ಗಗನ ಮುಟ್ಟಿವೆ. ಹೋಟೆಲ್ ನಲ್ಲಿ, ಊಟ ತಿಂಡಿಯ ದರಗಳಂತೂ ತಿಂದಿರುವುದನ್ನು ಕಕ್ಕಿಸಿಬಿಡುವಷ್ಟೂ ಭಯ ಹುಟ್ಟಿಸುತ್ತದೆ. ನರಕಯಾತನೆ ಎಂದರೇನೆಂಬುದನ್ನು ಅರಿಯದ ನಾನು, ಬೆಂಗಳೂರಿನ ಜೀವನವೆಂದರೇ ಇದೇ ಇರಬೇಕೆಂದು ತೀರ್ಮಾನಿಸಿದ್ದೇನೆ. ಈ ನನ್ನ ಮಾತುಗಳು ಕೆಲವರಿಗೆ ಬಾಲಿಷವೆನಿಸಬಹುದು, ಬೆಂಗಳೂರಿನಲ್ಲಿ ಎಂಬತ್ತು ಲಕ್ಷದಷ್ಟು ಜನ ಬದುಕುತಿಲ್ಲವೇ? ಕುಣಿಯಲಾರದವರಿಗೆ ನೆಲ ಡೊಂಕು ಎಂಬಂತೆ ಇವನು ಎಲ್ಲಿಗೆ ಹೋದರೂ ಒಂದಲ್ಲ ಒಂದು ಕೊರತೆಯನ್ನು ಹುಟ್ಟು ಹಾಕುತ್ತಾನೆ ಎಂದರೂ ಅಡ್ಡಿಯಿಲ್ಲ. ನನಗೆ ಅನಿಸಿದ್ದನ್ನು ನಾನು ಹೇಳಿದ್ದೇನೆ.

26 ಆಗಸ್ಟ್ 2009

ಕೊಳೆತು ನಾರುವ ಜಗದೊಳಗೆ ನಾನೆನ್ನುವುದೆಲ್ಲಿ!!!


ನಾನು ಹಾಗೆ ನಾನು ಹೀಗೆ, ಇದು ನನ್ನದು ಅದು ನಿನ್ನದು, ಎಂದು ದಿನ ಬೆಳಗಾದರೇ ಬೊಬ್ಬೆ ಹೊಡೆಯುವ ನನ್ನಂಥವರ ದರ್ಪ ಇಳಿಸುವ ಮಾರ್ಗವೆಂದರೇ, ಅದು ನಮ್ಮ ಆಡಳಿತ ವರ್ಗದರೊಂದಿಗೆ ಒಂದು ತಿಂಗಳು ಬದುಕಿ ಬಾ ಎಂದು ತಳ್ಳುವುದು. ಇದೇನಪ್ಪಾ, ಏನೇನೋ ಹೇಳಿ ತಲೆಗೆ ಹುಳು ಬಿಡೋಕೆ ನೋಡ್ತಾ ಇದ್ದಾನೆ ಎನಿಸಿದರೇ, ದಯವಿಟ್ಟು ಮುಂದಕ್ಕೆ ಓದೋಕೆ ಹೋಗಬೇಡಿ. ಹೇಗೂ ಬಿಡುವಾಗಿದ್ದಿನಿ, ಅದೇನು ಹೇಳ್ತಾ ಇದ್ದಾನೆ ನೋಡೆ ಬಿಡೋಣ ಎನಿಸಿದರೇ, ದಯವಿಟ್ಟು ನಿಮ್ಮ ಆರು ನಿಮಿಷಗಳನ್ನ ನನ್ನ ಬರವಣಿಗೆಗೆ ಮೀಸಲಿಡಿ. ನಾನು ಇದ್ದಕ್ಕಿದ್ದ ಹಾಗೆ ಬರೆಯೋಕೆ ಹೊರಟಿರುವ ವಿಷಯ, ನಮ್ಮ ಅಧಿಕಾರಿ ವರ್ಗ ಸಾಮಾನ್ಯ ಜನತೆಯ ಮೇಲೆ ಸವಾರಿ ಮಾಡುವುದರ ಬಗ್ಗೆ. ಇದೇನೂ ಹೊಸತಲ್ಲ, ನಾವು ದಿನ ನಿತ್ಯ ನೋಡುತ್ತಲೇ ಬಂದಿರುವಂತಹದ್ದು, ಆದರೇ, ಅವರ ದರ್ಪ, ದೌರ್ಜನ್ಯ, ನಿರ್ಲಕ್ಷತನ, ಸಾರ್ವಜನಿಕರೆಡೆಗಿನ ಕೋಪ ತಾಪಗಳ ಕುರಿತು ಕೆಲವೊಂದು ವಿಷಯಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಒಂದು ಸಣ್ಣ ಪುಟ್ಟ ವಾಸ ಸ್ಥಳ ದೃಢಿಕರಣ ಪತ್ರ, ಓದಿದ ಶಾಲೆಯಲ್ಲಿ ವ್ಯಾಸಾಂಗ ಪತ್ರ, ಪಡಿತರ ಚೀಟಿ, ಪಾಸ್ ಪೋರ್ಟ್, ಪಾನ್ ಕಾರ್ಡ್, ಮತದಾರ ಗುರುತಿನ ಚೀಟಿ, ಅಷ್ಟೆಲ್ಲಾ ಯಾಕೆ, ನಮ್ಮ ದುಡ್ಡನ್ನು ಇಡಲು ಬ್ಯಾಂಕ್ ಖಾತೆ ತೆರೆಯುದಕ್ಕೆ ದಿನ ನಿತ್ಯ ಎಷ್ಟು ಜನ ಪರದಾಡುತ್ತಿಲ್ಲ. ಎರಡರಿಂದ ಮೂರು ನಿಮಿಷವೂ ಹಿಡಿಯದ ಒಂದು ವ್ಯಾಸಾಂಗ ಪತ್ರವನ್ನು, ಅಥವಾ ವಾಸ ಸ್ಥಳ ಪತ್ರವನ್ನು ಬರೆದು ಕೊಡಲು ಮೂರು ಮೂರು ದಿನಗಳು ಅಲೆಯಬೇಕಾಗಿರುವುದು ಸೋಜಿಗವೇ ಸರಿ.
ನಾನು ಮೊನ್ನೆ ನಾನು ಓದಿದ ಶಾಲೆಯಲ್ಲಿ ಹೋಗಿ, ವ್ಯಾಸಾಂಗ ಪತ್ರ ಬೇಕು ಎಂದು ಕೇಳಿದರೇ, ಇಂದು ಆಗುವುದಿಲ್ಲ ನಾಳೆ ಬನ್ನಿ ಎಂದು ಹೇಳಿದ. ಸ್ವಾಮಿ ದಿನ ಕೆಲಸ ಬಿಟ್ಟು ಬರಲಾಗದು, ದಯವಿಟ್ಟು ಬರೆದುಕೊಡಿ ಎಂದೆ, ಇಲ್ಲ ರೀ ಸುಮ್ಮನೇ ತಲೆ ತಿನ್ನಬೇಡಿ, ದಯವಿಟ್ಟು ಒಂದೆರಡು ದಿನ ಬಿಟ್ಟೂ ಬನ್ನಿ, ಯಾವುದೋ ಮೀಟಿಂಗ್ ಗೆ ಅಂತಾ ರೆಡಿ ಮಾಡ್ತಾ ಇದ್ದಿನಿ ಎಂದ. ಗುರುವೇ, ಈಗ ಹೇಳಿದ್ರಿ ನಾಳೆ ಬನ್ನಿ ಅಂತಾ ಆಗಲೇ ಮೂರು ದಿನ ಬಿಟ್ಟು ಅಂತೀರಾ!! ಎಂದೆ. ನನ್ನ ಸ್ನೇಹಿತ ನೀನು ಮತ್ತೊಮ್ಮೆ ಕೇಳಿದರೇ ಮುಂದಿನ ವರ್ಷ ಬಾ ಎಂದಾನು, ಎಂದ. ಅದು ಸರಿಯೇ ಎಂದು ಅಲ್ಲೇ ಪಕ್ಕದಲ್ಲಿದ್ದ ಕುರ್ಚಿಯನ್ನು ಎಳೆದು ಕುಳಿತೆ. ಬಂದವರಿಗೆಲ್ಲಾ ಅವನು ಅದೇ ಕಥೆಯನ್ನು ಹೇಳತೊಡಗಿದ. ನನ್ನ ಸ್ನೇಹಿತ ಬೇಸತ್ತು, ಹತ್ತು ರೂಪಾಯಿ ಕೊಟ್ಟರೇ ಈಗಲೇ ಬರೆದು ಕೊಟ್ಟಾನು ಎಂದ. ನಾನು ಅಯ್ಯೋ ಕರ್ಮವೇ ನಾನು ಓದಿದ್ದು ಸತ್ಯ, ಅದನ್ನು ಬರೆದು ಕೊಡಲು ಲಂಚವೇ? ಎಂದೆ. ಅಣ್ಣ ನಿನ್ನ ಬಡಾಯಿಗಳನ್ನು ಬಿಡು, ನೀನು ಹತ್ತು ರೂಪಾಯಿ ಮುಖ ನೋಡಿದರೇ, ನಿನ್ನ ಒಂದು ದಿನದ ಸಂಬಳವೆಷ್ಟು? ನೀನು ಬಂದು ಹೋಗಲು ಖರ್ಚೆಷ್ಟು? ಎಂದ. ಅದನ್ನು ಯೋಚಿಸಿ, ಅದು ಸರಿಯೆನಿಸಿತು. ಆದರೇ, ನಾನು ಲಂಚ ಕೊಡುವುದೇ, ಎಂದು ಸುಮ್ಮನೆ ಕುಳಿತಿದ್ದೆ, ದುಡ್ಡಿನ ಬಗ್ಗೆ ವ್ಯಾಮೋಹವಿಲ್ಲದಿದ್ದರೂ, ವಿದ್ಯಾವಂತನಾಗಿ ಲಂಚ ಕೊಡುವುದೇ? ಎನಿಸಿತು. ಲಂಚ ತೆಗೆದುಕೊಳ್ಳುವವನು ವಿದ್ಯಾವಂತನೇ ತಾನೆ ಎನಿಸಿ ಸುಮ್ಮನಾದೆ. ಅದೇ ಸಮಯಕ್ಕೆ ನನ್ನ ಸ್ನೇಹಿತನೊಬ್ಬ ಆಗಮಿಸಿದ, ಓ ಏನ್ ಸರ್ ನೀವು ಇಲ್ಲಿ ಎಂದ. ಗುಮಾಸ್ತನನ್ನು ಏಕವಚನದಲ್ಲಿ ಬಲು ಆತ್ಮೀಯವಾಗಿ ಮಾತನಾಡಿಸಿದ. ನಾನು ಇದ್ದ ವಿಷಯವನ್ನು ಹೇಳಿದೆ. "ಇವರದ್ದು ಬರೆದುಕೊಡು ಮೊದಲು ನೀನು, ನಿಮ್ಮ ಪ್ರಿನ್ಸಿಪಾಲರು ಸ್ಕೂಲು ಉದ್ದಾರ ಮಾಡೊದನ್ನ ನಾನು ಕಂಡಿಲ್ಲವೇ" ಎಂದ. ಅವನು ನನಗೆ, ಹಿಂದಿನ ಮಾಹಿತಯನ್ನು ಹುಡುಕಬೇಕು, ಅದು ಇದು ಎಂದು ಬೆದರಿಸಿದ್ದ, ನಾನು, "ಅಣ್ಣ ಅದನ್ನ ಕೊಟ್ಟರೇ ನಾನೇ ಹುಡುಕಿಕೊಡ್ತಿನಿ", ಎಂದೆ. ಸರಿ ಎಂದು ತೆಗೆದು ನನ್ನ ಮುಂದಿಟ್ಟ, ಹೆಚ್ಚೆಂದರೇ, ಐದು ನಿಮಿಷವೂ ಇರಲಾರದು ನನ್ನ ಮಾಹಿತಿಯನ್ನು ತೋರಿಸಿದೆ, ಅವನು ಬರೆಯಲು ಹಿಡಿಯುವ ಸಮಯವನ್ನು ಗುರುತಿಸಿದೆ, ಬರಿಯ ಎರಡು ವರೆ ನಿಮಿಷದಲ್ಲಿ ಬರೆದು ಮುಗಿಸಿದ, ಒಟ್ಟು ಐದು ನಿಮಿಷದಲ್ಲಿ ಸಹಿಯೂ ಆಯಿತು. ಇಷ್ಟು ಕೆಲಸಕ್ಕೆ, ಮೂರು ದಿನ ನಾಲ್ಕು ದಿನ ಎಂದನಲ್ಲ, ಎಂದೆ. ನನ್ನ ಸ್ನೇಹಿತ, ಲಂಚ ಕೊಡದಿದ್ದರೇ, ಅಥವ ಗುರುತಿನವರ ಬೆಂಬಲವಿಲ್ಲದಿದ್ದರೇ, ಸರ್ಕಾರಿ ಕಛೇರಿಯಲ್ಲಿ ಏನು ನಡೆಯದು ಎಂದ. ನಾನು ನಮ್ಮಪ್ಪನ ಬಳಿಗೆ ಬಂದು ಏನು ಕಾಲ ಆಯಿತು ನೋಡಿ ಒಂದು ವ್ಯಾಸಾಂಗ ಪತ್ರ ಬರೆಯುವುದಕ್ಕೆ ಇಷ್ಟು ಸತಾಯಿಸಿದ ಎಂದೆ. ಅವರು "ನೀನೆಂಥವನು? ಮೊದಲೇ, ಪ್ರಿನ್ಸಿಪಾಲರ ಹತ್ತಿರ ಹೋಗಿ ಕೇಳಬೇಕಿತ್ತು, ಗುಮಾಸ್ತ ನಿನ್ನನ್ನು ಕೆಲಸವಿಲ್ಲದೇ ಅಲೆದಾಡುವವನು ಎಂದು ತಿಳಿದಿರಬೇಕು, ಅದಕ್ಕೆ ನಾಳೆ ನಾಡಿದ್ದು ಎಂದವನೆ", ಎಂದರು. ಅದು ಸರಿಯೇ ಬಿಡಿ, ನನ್ನ ವೇಷ ಭೂಷಣಗಳು ಅದಕ್ಕೆ ಪೂರಕವಾಗಿದ್ದವು ಎಂದೆ.
ಮಾರನೆಯ ದಿನ, ಪಂಚಾಯಿತಿಗೆ ಹೊರಟೆ, ಅಲ್ಲಿ ಹೋದರೇ, ಯಾರು ಏನು ಎಂದು ಕೇಳಿದ, ಇಂಥವರ ಮಗ ಎಂದು ಹೇಳಿದೆ. ಸರಿ, ಎಂದವನು, ಬರೆದುಕೊಟ್ಟ. ಜೊತೆಯಲ್ಲಿದ್ದ ನನ್ನ ಸ್ನೇಹಿತ, ಹತ್ತು ರೂಪಾಯಿ ಕೋಡೋ ಮಾರಾಯ, ಜಿಪುಣ ನೀನು ಎಂದ. ಯಾಕೋ ಕೊಡಬೇಕು ಎಂದರೇ, ಮತ್ತೆ ಪುಣ್ಯಕ್ಕೆ ಬರೆದುಕೊಡ್ತಾನ ಅವನು, ಬೇರೆ ಕೆಲಸ ಇರೋದಿಲ್ವಾ ಅವನಿಗೆ. ಅವನಿಗೇನೂ ಲಕ್ಷಾಂತರ ರೂಪಾಯಿ ಸಂಬಳವೇ ಎನ್ನತೊಡಗಿದ. ಇದು ಲಂಚವೋ? ಅಥವಾ ಜನರೇ ಅಳವಡಿಸಿಕೊಂಡಿರುವ ಮಾರ್ಗವೋ ಅಂತೂ ಅವನಿಗೆ ಟೀ, ಸಿಗರೇಟು ಸೇವನೆ ಮಾಡಿಸಿ ಕೈತೊಳೆದುಕೊಂಡೆ. ತಾಲೂಕು ಕಛೇರಿಗೆ ಹೋಗಿ, ತಹಸಿಲ್ದಾರರ ಸಹಿ ಬೇಕು ಎಂದರೇ, ನಾಳೆ ಬನ್ನಿ ಎಂದ, ನೋಡಿ ಸ್ವಾಮಿ ಎಂದರೇ, ಮುವತ್ತು ರೂಪಾಯಿ ಕೊಡಿ ಎಂದ, ಅಯ್ಯೋ ಕರ್ಮವೇ, ಕೊಡದೇ ಇದ್ದರೇ ನಾಳೆ ಬರಬೇಕು, ಕೊಟ್ಟರೇ, ಲಂಚವನ್ನು ಪ್ರೋತ್ಸಾಹಿಸಿದಂತೆ, ಅಷ್ಟರಲ್ಲಿಯೇ, ಅಪ್ಪ ಅಲ್ಲಿಗೆ ಬಂದರು. ಸರಿ ಅವನಿಗೆ ಯಾಕೆ ಕೊಡ್ತಿಯಾ ಕೊಡದೇ ಇದ್ದರೂ ಸಹಿ ಮಾಡಿಸಿ ಇಲ್ಲೇ ಇಟ್ಟಿರ್ತಾನೆ, ಸಂಜೆ ತೆಗೆದುಕೊಂಡರೇ ಆಯಿತು ಎಂದರು. ಸರಿಯೆಂದು ಹೊರಟೆ.
ಲಂಚವೆನ್ನುವು ಜೀವನದ ಮಾರ್ಗವೇ ಆಗಿದೆ, ಇನ್ನು ಕೆಲವು ಕಛೇರಿಗಳಲ್ಲಿ, ಬಂದವರನ್ನು ಮಾತನಾಡಿಸುವ ಸೌಜನ್ಯವೂ ಇರುವುದಿಲ್ಲ. ಕೆಲವು ನಿವೃತ್ತಿಯಾದ ಸರ್ಕಾರಿ ನೌಕರರ ಜೀವನವನ್ನು ನೋಡಿ, ನಿವೃತ್ತಿಯಾದ ಮಾರನೆಯ ದಿನದಿಂದ ಅವರನ್ನು ಮಾತನಾಡಿಸುವ ನಾಯಿಯೂ ಇರುವುದಿಲ್ಲ, ಅವರ ಜೀವನವೆಲ್ಲವನ್ನು, ಒಂದು ಹಣ ಮಾಡುವುದರಲ್ಲಿ, ಇಲ್ಲವೇ, ಜನರನ್ನು ನಿಂದಿಸುವುದರಲ್ಲಿ, ಸಾರ್ವಜನಿಕರ ಜೊತೆಯಲ್ಲಿ ಸದಾ ಕಾದಾಡುವುದರಲ್ಲಿಯೇ ಜೀವನ ಕಳೆದಿರುತ್ತಾರೆ. ಒಳ್ಳೆಯ ಸ್ನೇಹಿತರಿರುವುದಿಲ್ಲ, ಸಹದ್ಯೋಗಿಗಳು ಇವರಂತೆಯೇ ಇರುವುದರಿಂದ ಹಾಸ್ಯವೆಂಬುದಾಗಲೀ, ರಸವೆಂಬುದಾಗಲೀ ಇರುವುದೇ ಇಲ್ಲ. ಯಾಂತ್ರಿಕತೆಯಿಂದ ಮನಸ್ಸೆಂಬುದನ್ನೇ ಮರೆತಿರುತ್ತಾರೆ. ಇವುಗಳಿಗೆ ಸೇರುವ ಅನೇಕರೆಂದರೇ, ಪೋಲಿಸರು, ಡಾಕ್ಟರುಗಳು, ಸರ್ಕಾರಿ ಇಂಜಿನಿಯರುಗಳು, ಗುಮಾಸ್ತರುಗಳು. ದುಡಿಮೆಯಲ್ಲವನ್ನು ಕೂಡಿಡಬೇಕು, ಸಿಕ್ಕಿದಷ್ಟನ್ನು ದೋಚಿಬಿಡಬೇಕೆನ್ನುವುದೇ ಇವರುಗಳ ಮುಖ್ಯ ಉದ್ದೇಶವಿರುತ್ತದೆ. ಸಾಮಾನ್ಯವಾಗಿ, ಸರ್ಕಾರಿ ನೌಕರರು ಒಂದೆಡೆ ಸೇರಿದ್ದಲ್ಲಿ, ಹತ್ತು ನಿಮಿಷ ನಿಂತು ಮಾತನ್ನು ಆಲಿಸಿದರೇ, ಅವರ ಮಾತುಕತೆಗಳು, ಒಂದು ತಮ್ಮ ಸಂಬಳ ಬಡ್ತಿಯೆಡೆಗೆ ಇರುತ್ತದೆ, ಇಲ್ಲವೇ ಇಲ್ಲಸಲ್ಲದ ರಾಜಕೀಯದ ಬಗ್ಗೆಗಿರುತ್ತದೆ. ಅವರ ಕೆಲಸಗಳನ್ನು ಕುರಿತು ಮಾತನಾಡುವ, ಚರ್ಚಿಸುವ ನೌಕರರನ್ನು ಕಾಣುವುದು ತೀರ ಅಪರೂಪವೇ ಸರಿ.
ಇವರನ್ನು ಬಿಟ್ಟರೇ ಮುಂದಿನ ಪಂಕ್ತಿಯಲ್ಲಿ ದೇಶವನ್ನಾಳುವುವರೆಂದರೇ, ನಮ್ಮ ಪತ್ರಕರ್ತರು. ತಲೆ ಬುಡವಿಲ್ಲದೇ ಹರಟುವ ಒಂದು ವರ್ಗವೇ ಇದು ಎಂದರೂ ತಪ್ಪಿಲ್ಲ. ಇತ್ತೀಚೆಗಂತೂ, ಲೆಕ್ಕವಿಲ್ಲದಷ್ಟೂ ಚಾನೆಲ್ ಇರುವುದರಿಂದ, ಸಣ್ಣ ಪುಟ್ಟ ದಿಪ್ಲೋಮಾ ಮಾಡಿದವರು, ತಮ್ಮ ಬೈಕಿನ ಮುಂದಕ್ಕೆ ಪ್ರೆಸ್ ಎಂಬುದನ್ನು ಒತ್ತಿಸಿಕೊಂಡು ಹೊರಡುತ್ತಾರೆ. ಅವರು ನಮ್ಮ ನಾಯಕರನ್ನು ಕೇಳುವ ಪ್ರಶ್ನೆಗಳನ್ನು ಕೇಳಿದರೇ ಅಬ್ಬಾ ಎನಿಸುತ್ತದೆ. ಕೆಲವರಂತೂ, ಮೈಕ್ ಎನ್ನುವುದನ್ನು ನಾಯಕರ ಕೈಯ್ಯಿಗೆ ಕೊಟ್ಟು ಅವರು ಹೇಳುವುದನ್ನೆಲ್ಲವನ್ನು, ಪ್ರಸಾರದ ಜೊತೆಗೆ ಪ್ರಚಾರ ಮಾಡುತ್ತಾರೆ. ಮೊನ್ನೆ ಮರು ಚುನಾವಣೆಯ ಸಮಯದಲ್ಲಿ, ಬಹುತೇಕ ಅಭ್ಯರ್ಥಿಗಳ ಸಂಪೂರ್ಣ ಪ್ರಚಾರವನ್ನು ಟಿವಿ ಚಾನೆಲ್ ಗಳೇ ಪ್ರಸಾರ ಮಾಡಿದವು. ಯಾರೊಡನೆಯೋ ಮಾತನಾಡುತ್ತಿದ್ದಾಗ, ಹೇಳುತ್ತಿದ್ದರು, ಮೊಟ್ಟ ಮೊದಲು, ರಾಜರುಗಳು ದೇಶವನ್ನು ಹಾಳು ಮಾಡಿದರು, ಆಮೇಲೆ ಪುರೋಹಿತಶಾಹಿಗಳು ಅದನ್ನು ಮುಂದುವರೆಸಿದರು, ತದನಂತರ ಬ್ರಿಟಿಷರು ಬಂದರು, ಆದಾದ ಮೇಲೆ ರಾಜಕಾರಣಿಗಳ ಸರದಿ ಮುಗಿಯಿತು, ಈಗಿರುವುದು ನಮ್ಮ ಪತ್ರಕರ್ತರ ಸರದಿಯೆಂದು. ಅದು ನನಗೂ ಹೌದೆನಿಸಿತು.ತಲೆ ಬುಡ ತಿಳಿಯದ ಮಹಾಶಯರೂ ಕೂಡ ಅತೀ ವಿಸ್ಮಯ ವಿಷಯಗಳಾದ ಪರಿಸರ, ಎಕಾಲಜಿ, ಜಾಗತಿಕ ತಾಪಮಾನದ ಬಗ್ಗೆ ಗಂಟೆ ಗಂಟಲೆ ಎಪಿಸೋಡ್ ಗಳನ್ನು ನಿರ್ಮಾಣಮಾಡುತ್ತಾರೆಂದರೆ ಮೆಚ್ಚಲೇಬೇಕು. ಹಳ್ಳಿಗಳ್ಳಲ್ಲಿ, ಒಂದು ದಾರಿ ದೀಪ ಹೋದರೆ ಅದನ್ನು ಹಾಕಿಸಲು ತಿಂಗಳುಗಳೇ ಕಳೆಯುತ್ತವೆ. ಒಂದು ನಲ್ಲಿ ರಿಪೇರಿ ಮಾಡಿಸಲು, ಅಥವಾ ಸುಟ್ಟು ಹೋದ ಮೋಟರನ್ನು ರಿಪೇರಿ ಮಾಡಿಸಲು ಎಷ್ಟು ದಿನಗಳಾಗುತ್ತವೆಂಬುದರ ಅರ್ಥವೇ ಸಿಗುವುದಿಲ್ಲ. ಸರಿಯಾದ ಸಮಯಕ್ಕೆ ನಮ್ಮೂರಿಗೆ ಬಸ್ ಬಂದ ದಿನದ ನೆನಪೇ ಇಲ್ಲ. ನೀರಾವರಿಗೆಂದು ಹಾರಂಗಿ ನಾಲೆಯಿಂದ ನೀರು ಬಿಡುವ ದಿನ ಯಾವುದೆಂಬುದನ್ನು, ಅಲ್ಲಿನ ಸ್ಥಳಿಯ ದಿನ ಪತ್ರಿಕೆಗಳಲ್ಲಿ ಬರುವುದೇ ಇಲ್ಲ, ನದಿಗೆ ನೀರು ಬಿಡುವುದರ ಬಗ್ಗೆ ಸುದ್ದಿ ಹೊರಡುವುದೇ ಇಲ್ಲ, ಹೊರಟರೂ ಅದು ಆಕಾಶವಾಣಿಯಲ್ಲಿ ಬರುವುದರಿಂದ ನಮ್ಮೂರಿನಲ್ಲಿ ರೆಡಿಯೋ ಎಂಬುದು ಮೂಲೆಗುಂಪಾಗಿ ದಶಕವೇ ಕಳೆದಿದೆ.
ಆದರೂ, ನನಗೆ ಅಥವ ನನ್ನಂಥ ಬಹಳ ಜನಸಾಮಾನ್ಯರಿಗೆ ಅನಿಸುವ ಪ್ರಶ್ನೆಗಳೆಂದರೇ, ನಮ್ಮ ದೇಶ ಬದಲಾಗುವುದಿಲ್ಲವೇ? ಅಥವ ಇದಕ್ಕಿಂತಲೂ ಹೀನಾಯ ಸ್ಥಿತಿಗೆ ಹೋಗುವುದೇ? ಇದಕ್ಕೆಲ್ಲಾ ಪರಿಹಾರವಿಲ್ಲವೇ? ಇದೆಲ್ಲವೂ ನಿರಂತರವೇ? ಬದುಕಿನಲ್ಲಿ ಏರಿಳಿತವೆಂಬುದು ಸಾಮಾನ್ಯವಾದರೂ, ನಮ್ಮ ಬದುಕು ಸದಾ ಇಳಿತದಲ್ಲಿಯೇ ಹೊರತು, ಏರಿಕೆ ಕಂಡಿಲ್ಲವಲ್ಲ. ಇನ್ನೂ ಪ್ರಪಾತಕ್ಕೆ ಇಳಿದರೇ, ನನ್ನ ಮುಕ್ಕಾಲು ಆಯುಷ್ಯ ಮುಗಿಯಿತಲ್ಲ, ಏರುವುದೆಂದರೂ ಅದು ಆಗುವುದೆಂದು? ಅದು ಆಗಲೂ ಬಂದಿತೇ? ಇದು ಒಬ್ಬನ ವೈಯಕ್ತಿಕ ಬದುಕಿನ ಕಥೆಯಲ್ಲ, ಎಲ್ಲರ ಸರ್ವ ಸಾರ್ವಜನಿಕರೆನಿಸಿಕೊಂಡವರ, ಭವ್ಯಭಾರತದ ಬದುಕೆ ಹೀಗೆಂದರೇ, ಎಂಥವನಿಗೂ ಭಯ ಹುಟ್ಟುವುದು ಸಾಮನ್ಯ ಸಂಗತಿಯಲ್ಲವೇ? ಭರವಸೆಯ ಮಿಂಚು ಆಗೊಮ್ಮೆ ಈಗೊಮ್ಮೆ ಬಂದು ಹೋದರೂ, ಮಿಂಚೆಂದೂ ಶಾಶ್ವತ ಬೆಳಕಲ್ಲ, ದೇಶದ ಪ್ರಗತಿಗೆ, ಬೇಕಿರುವು ಬೆಳಕಿನ ಹಾದಿಯೇ ಹೊರತು, ಹೀಗೆ ಬಂದು ಹಾಗೆ ಹೋಗುವ ಮಿಂಚೂ ಅಲ್ಲ, ಸಣ್ಣ ಪುಟ್ಟ ದೀಪಗಳೂ ಅಲ್ಲ.

30 ಜುಲೈ 2009

ನನ್ನೊಳಗೆ ನಾನಾಗೆ ಉಳಿದ ನಿನ್ನತನ........!!!

ಹಳೆಯ ನೆನಪುಗಳನ್ನು ಮರೆತವನು, ಅಥವಾ ನೆನಪುಗಳೆಂಬುದನ್ನೆ ಮನಸ್ಸಿಗೆ ತರದವನು ನಿಜಕ್ಕೂ ಸುಖಿಯೆನಿಸುತ್ತದೆ ನನಗೆ. ಸದಾ ಇಲ್ಲ ಸಲ್ಲದ ನೆನಪುಗಳಿಂದಲೇ ಮನಸ್ಸು ಹಗುರಾಗುತ್ತದೆ, ಮರುಗುತ್ತದೆ, ಕರಗುತ್ತದೆ, ಹಗುರಾಗುತ್ತದೆ, ಬಿಕ್ಕಳಿಸುತ್ತದೆ, ಆಕಳಿಸುತ್ತದೆ, ಹುಚ್ಚನಂತೆ ನಗುತ್ತದೆ, ನಗಿಸುತ್ತದೆ, ಎಲ್ಲವೂ ಅರೆ ಕ್ಷಣದಲ್ಲಿ, ಕ್ಷಣಾರ್ಧದಲ್ಲಿ, ಅರಿವಿಲ್ಲದಂತೆ ನಡೆದುಹೋಗುತ್ತದೆ, ಅಲ್ಲಿ ಚಿಂತಿಸುವುದಕ್ಕೂ ಸಮಯವಿಲ್ಲ, ಚಿಂತನೆಗೂ ಬಿಡುವಿಲ್ಲ. ಮುಂಜಾನೆ ಮೂರು ಮುಕ್ಕಾಲಿಗೆ ಎಚ್ಚರವಾಗಿ ಕಣ್ಣು ಬಿಟ್ಟು ನೋಡಿದರೇ ನಾ ಕಂಡದ್ದೆಲ್ಲಾ ಕನಸೆಂದು ಮಗ್ಗುಲು ಬದಲಾಯಿಸಿ ಮಲಗಬೇಕು. ಕನಸಿಗೂ, ನನಸಿನ ನೆನಪುಗಳಿಗೂ ಒಂದಕ್ಕೊಂದು ಸಂಬಂಧವಿದೆಯಾ? ಎರಡೂ ಒಂದೇಯಾಗಿದೆಯಾ? ನನಗದೊಂದು ತಿಳಿದಿಲ್ಲ.ನೆನೆಪಂದರೇನು, ಸದಾ ನನ್ನನ್ನು ಕಾಡುತ್ತದೆ ಎನಿಸಿದರೂ, ನನ್ನೊಳಗೆ ಹೊಸ ಹುರುಪನ್ನು ಹುಟ್ಟಿಸಿ ನನ್ನನ್ನು ಹೊಸ ಮನುಷ್ಯನನ್ನಾಗಿಸುತ್ತದೆ ಎನ್ನುವುದು ಸತ್ಯ. ಇವೆಲ್ಲಾ ಹೇಗೆ, ಸಾಧ್ಯವೆನ್ನುವುದೇ ನನ್ನ ಮುಂದಿರುವ ಅದನ್ನು ತಮ್ಮಗಳ ಮುಂದಕ್ಕಿಡುತ್ತಿರುವ ಪ್ರಶ್ನೆ. ಮೊನ್ನೆ ಎಲ್ಲಿಯೋ ಬರೆದಿದ್ದ ಒಂದು ಉಕ್ತಿಯನ್ನು ಓದಿದಾಗ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆಯಾಯಿತು. "ಕೊಲೆಗಾರನನ್ನು ಕ್ಷಮಿಸಬಲ್ಲೆ, ಆದರೇ ನಂಬಿಕೆ ದ್ರೋಹಿಯನ್ನು ಸಹಿಸಲಾರೆ".
ನಾನು ಈ ಸಾಲನ್ನು ನೆನೆದು ಮನೆಗೆ ಬಂದರೇ, ನನಗೆ ಇದೇನೆಂಬುದು ಅರ್ಥವಾಗುತ್ತಿಲ್ಲ, ಆದರೂ ನನ್ನನ್ನು ಬಾಧಿಸತೊಡಗಿತ್ತು. ಇದು, ಕೊಲೆಗಿಂತ ಘೋರ ಅಪರಾಧ ಮತ್ತೊಂದಿಲ್ಲವೆಂದರೇ, ನಂಬಿಕೆ ದ್ರೋಹ ಅದಕ್ಕಿಂತ ದೊಡ್ಡದು. ಕಾರಣವಿಷ್ಟೇ, ಕೊಲೆ ಮಾಡಿದ ಮೇಲೆ ಆ ಜೀವ ಕೊಲೆಗಾರನನ್ನು ಎಂದೆಂದಿಗೂ ತಿರುಗಿ ಕಾಣುವುದಿಲ್ಲ. ಆದರೇ, ಮೋಸ ಮಾಡಿದವನು, ಬೆನ್ನಿಗೆ ಚೂರಿ ಹಾಗಿದವನು, ನಂಬಿಸಿ ಕೈಕೊಟ್ಟು ಹೋದವನು, ನಂಬಿಕೆಯ ಮೇಲೆ ಭಾವನೆಗಳ ಜೊತೆ ಆಟವಾಡಿ ದೂರಾದವನು, ಇವರೆಲ್ಲರೂ ಅಷ್ಟೇ, ಕ್ಷಮೆಗೆ ಅನರ್ಹರು. ಇಲ್ಲಿ, ಆಗುವ ಬದಲಾವಣೆ ರಾತ್ರೋ ರಾತ್ರಿ ಆಗುತ್ತದೆ. ನಿನ್ನೆಯವರೆಗೂ ಚೆನ್ನಾಗಿದ್ದ ಗೆಳತಿ, ಮಾರನೆ ಬೆಳ್ಳಿಗೆ ಹೊತ್ತಿಗೆ ಮಾತನ್ನೇ ನಿಲ್ಲಿಸಿರುತ್ತಾಳೆ. ನನ್ನೊಂದಿಗೆ, ಕಳೆದ ನನ್ನಲ್ಲಿದ್ದ ನನ್ನ ಎಲ್ಲಾ ಕನಸುಗಳನ್ನು ದೋಚಿ ಹೋದಳೇನೋ, ನಾನು ಎಂಬ ಇಷ್ಟೆತ್ತರದ ದೇಹ ಒಮ್ಮೆಗೆ ಹೇಳ ಹೆಸರಿಲ್ಲದಂತೆ, ಕರಗಿ, ಕರಕಲು ಮಸಿಯಾಗಿ ಮಣ್ಣಾಗಿ ಹೋಗುತ್ತದೆ. ಇವೆಲ್ಲವೂ ಆಗುವುದು ಕೇವಲ ಅರೆಗಳಿಗೆಯಲ್ಲಿ. ಜೊತೆಯಲ್ಲಿ ಹೆಣೆದ ಕನಸುಗಳು, ಕುಳಿತು ಒಟ್ಟಿಗೆ ನೆಕ್ಕಿದ ಐಸ್ ಕ್ರೀಂ, ದೂರದ ಬೆಟ್ಟದಿಂದ ಸೂರ್ಯಹುಟ್ಟುವಾಗಿನಿಂದ ದಿಗಂತದಲ್ಲಿ ಅವನು ಕಣ್ಮರೆಯಾಗುವ ತನಕ, ಕಣ್ಣಲ್ಲಿ ಕಣ್ಣಿಟ್ಟು ನಾನೆಂಬುದನ್ನು ಮರೆತು ನಿನ್ನೊಳಗೆ ಬೆರೆತು ಹೋದ ದಿನಗಗಳವೆಲ್ಲವೂ ಮಾಸಿಹೋಗುವುದಕ್ಕೆ ಇಲ್ಲಾ ನೀನು ಅವುಗಳನ್ನು ದೋಚಿಹೋಗುವುದಕ್ಕೆ ಹಿಡಿದಿದ್ದು ಕೇವಲ ಅರೆಗಳಿಗೆ. ಇಂತಹದ್ದು ಉಂಟಾ? ಅಥವಾ ಹೀಗೂ ಉಂಟೇ? ಎಂದು ನನ್ನನ್ನು ನಾನು ಕೇಳಲು ತ್ರಾಣವಿಲ್ಲದೇ, ನಿಂತ ನಿಲ್ಲಲ್ಲೇ ಸತ್ತು ಹೋಗಿದ್ದಾಗ ಎಚ್ಚರಾದೀತೆ. ಸತ್ತಮೇಲೆ ಉಳಿಯುವುದೇನು ಇಲ್ಲವೆನ್ನುವುದು ನಂಬುಗೆ, ಬದುಕಿಯೂ ಸತ್ತಂತೆ ಬದುಕುವುದಿದೆಯಲ್ಲ ಅದಕ್ಕಿಂತ ನರಕಯಾತನೆ ಮತ್ತೊಂದಿಲ್ಲ, ಮೋಸ ಹೋದ ಮನಸ್ಸು, ಕಳೆದು ಹೋದ ಕನಸುಗಳು, ನಂಜಿಹೋದ ಭರವಸೆಗಳು, ಎಲ್ಲದರೊಂದಿಗೆ ಹೊಡೆದಾಡುತ್ತಿದ್ದ ಮನಸ್ಸು ಎಲ್ಲದಕ್ಕೂ ಹೊಂದಿಕೊಳ್ಳುವಂತೆ ತಿರುಗಿದ ದಿನವಂತೂ ಹೇಳತೀರದು. ಸತ್ತರೂ ಸರಿಯೇ, ಸೋತರೂ ಸರಿಯೇ ಆದರೇ, ನಮ್ಮ ವಿರುದ್ದ ಮನಸ್ಸುಗಳೊಂದಿಗೆ, ಹೊಂದದ ಪರಿಸ್ಥಿತಿಯೊಂದಿಗೆ ಬದುಕುವುದು ಅಸಾಧ್ಯ ಸಾಧನೆ. ಅಥವ ನಿರರ್ಥಕ ಬದುಕು.
ಮೋಸಕ್ಕೆ ಹುಟ್ಟಿಲ್ಲಾ, ಮೋಸಕ್ಕೆ ಸಾವಿಲ್ಲ, ಇದು ಇಂದು ನಿನ್ನೆಯದಲ್ಲ, ನನಗೊಬ್ಬನಿಗೆ ಮೀಸಲಾದುದು ಅಲ್ಲಾ, ಸರ್ವರಿಗೂ ಸಮಪಾಲು ಎನಿಸಿದರೂ ಒಬ್ಬೊಬ್ಬರಿಗೆ ಹೆಚ್ಚು ನನಗೆ ಸಿಕ್ಕಂತೆ ಬಂಪರ್ ಸಿಕ್ಕರೂ ಸಿಗಬಹುದು, ಕೆಲವೊಬ್ಬರಿಗೆ ಕಡಿಮೆ ಸಿಗಬಹುದು, ಕೆಲವರಿಗೆ ಸಿಗದೇ ಇದ್ದರೂ ಇರಬಹುದು. ಮೋಸಕ್ಕೆ ಮೋಸವುಂಟಾ? ಮೋಸ ಮಾಡುವವರಿಗೂ ಮೋಸವಾಗುತ್ತದೆಯಾ? ಆಗಲೇ ಬೇಕು, ಅವರಿಗೆ ಮೋಸ ಮಾಡಲು ಭೂಲೋಕದಲ್ಲಿ ಇಲ್ಲದಿದ್ದರೂ ಪರಲೋಕದಲ್ಲಿರುವ ದೇವರಿಲ್ಲವೇ, ಎಂದು ಮನಸ್ಸಿಗೆ ನೆಮ್ಮದಿ ತರಲು ಪ್ರಯತ್ನಿಸುತ್ತೇನೆ. ಇಲ್ಲಾ, ಅದು ಆಗುವುದೆಂತು, ಆಗುವುದಾದರೂ ಹೇಗೆ, ದಿನ ನಿತ್ಯ ನಿನ್ನಯ ಪೂಜೆ ಮಾಡಿಯೇ, ಅವಳನ್ನು ಕಾಣಲು ಹೊರಡುತ್ತಿದ್ದದ್ದು, ಮರಳಿ ದಿನ ಮುಗಿಯುವ ಮುನ್ನ ನಿನ್ನಯ ಮುಂದೆ ಪ್ರಾರ್ಥನೆ ಮಾಡಿ ಮಲಗುತ್ತಿದ್ದೆ. ಒಮ್ಮೊಮ್ಮೆ ಅವಳು ತಡವಾಗಿ ಬಂದರೇ, ನನ್ನ ಮೊಬೈಲ್ ತೆಗೆಯದಿದ್ದರೂ ನಿನ್ನನ್ನೇ ಕೇಳುತ್ತಿದ್ದೆ, ಅಯ್ಯೊ ದೇವರೇ, ಏನಾಯಿತು ಅವಳಿಗೆ, ಅಪ್ಪ ಅಮ್ಮನ ಭಯದಿಂದ ಹೀಗಿರಬಹುದೆಂದು ಸುಮ್ಮನಿರುತಿದ್ದೆ. ಹುಡುಕಾಟಿಕೆಗೆ, ಇಂದು ಸಿಗುವುದಿಲ್ಲವೆಂದರೂ, ದೇವರೆ ಅವಳಿಗೆ ಒಮ್ಮೆ ನನ್ನೊಂದಿಗೆ ಬರುವ ಮನಸ್ಸು ಕೊಡು ಎನ್ನುತ್ತಿದ್ದೆ. ನಿನ್ನಿಂದಲೇ ಅವಳು ನನಗೆ ದೊರೆತದ್ದು ಎಂದು, ನಿನಗೆ ವಾರಕ್ಕೊಮ್ಮೆ ಪೂಜೆ ಮಾಡಿಸಿ, ಬರಿಗಾಲಲ್ಲಿ ನಡೆದು ಬರುತ್ತಿದೆ, ಆ ದಿನಕ್ಕೆಂದು ಕುಡಿಯುವುದು, ಸೇದುವುದು, ಮಾಂಸಹಾರಿ ಇವೆಲ್ಲವನ್ನೂ ದೂರವಿಟ್ಟಿದ್ದೆ. ಆದರೇ, ಇಂದು ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಲೂ ನೀನು ಅವಳನ್ನು ಬೆಂಬಲಿಸಿರಬೇಕು. ನನಗೆ ಕೇಡುಗಾಲ ಶುರುವಾಯಿತೆಂಬುದನ್ನು ನೀನು ಅವಳಿಗೆ ತಿಳಿಸಿರಲೇಬೇಕು, ಮನುಷ್ಯರ ಕೇಡುಗಾಲ ಅರಿಯಲು ನಿನ್ನನ್ನು ಬಿಟ್ಟರೇ, ಮತ್ತ್ಯಾರಿಗೆ ಸಾಧ್ಯ?
ಇದಾದ ಮರುಕ್ಷಣವೇ, ಯೋಚನೆ ಬದಲಾಗುತ್ತದೆ, ದೇವರು ಎಲ್ಲಿದ್ದಾನೆ? ಯಾರು ದೇವರು? ಯಾರಿಗೆ ಯಾರು ಶಿಕ್ಷೆ ಕೊಡುವವರು? ಸಹಸ್ರ ಸಹಸ್ರ ಅಮಾಯಕರನ್ನು ಬಾಂಬ್ ಹಾಕಿ ಕೊಲೆಗೈಯ್ಯುವವರಿಗೆ, ಪಾಪ ಪ್ರಜ್ನೆಯೆಂಬುದಿದೆಯೇ? ಸತ್ತ ಹೆಣವನ್ನು ಮುಂದಿಟ್ಟುಕೊಂಡು, ಲಂಚಕೋರುವ ಡಾಕ್ಟರುಗಳು, ಪೋಲಿಸರು, ಬಸ್ ಗಳಲ್ಲಿ, ಹೆಂಗಸಿನ ಕೊರಳಲ್ಲಿ ಮಾಂಗಲ್ಯ ಸರ ಕದಿಯುವ ಕದೀಮರು, ತಿಂಗಳಿಡಿ ದುಡಿದು ಬರುತ್ತಿರುವಾಗ ಸಂಬಳದ ಹಣವನ್ನೆಲ್ಲಾ ಕದ್ದು ಹೋಗುವ ಕಳ್ಳರು, ಲಂಚವೇ ದೇವರೆಂದು ಬಡವರ ರಕ್ತ ಹೀರುವ ಅಧಿಕಾರಿಗಳು, ಹೆಂಡತಿಗೆ ಹೊಡೆದು ಬಡಿದು ಹಿಂಸೆ ಕೊಟ್ಟು ಸಾಯಿಸಲು ಹಿಂದೆ ಮುಂದೆ ನೋಡದ ಪಾಪಿಗಳು, ನ್ಯಾಯ ಕೇಳಲು ಅಥವಾ ಆದ ಅನ್ಯಾಯವನ್ನು ಸರಿ ಪಡಿಸಿಕೊಳ್ಳಲು ಬರುವ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುವವರು, ಏನೂ ಅರಿಯದ ನಾಲ್ಕಾರು ವರ್ಷದ ಮಕ್ಕಳ ಮೇಲೆ ಎಸಗುವ ಅತ್ಯಾಚಾರ, ಗಂಡ ಕಳೆದು ಹೆಣ್ಣುಮಗಳನ್ನು ಒಂಟಿಯಾಗಿ ಬಿಡಲು ಬಯಸದ ನೀಚ ಗಂಡಸುತನವುಳ್ಳವರು, ಪರೀಕ್ಷೆಯೆಂಬುದನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳನ್ನು ಗುಲಾಮರಾಗಿಸಿಕೊಳ್ಳುವ ಪ್ರೋಫೆಸರ್ ಗಳು, ಗುರು ದೇವೋ ಭವವೆನಿಸಿಕೊಳ್ಳುವವರು, ಮಳೆಯಿಂದಾಗಿ ಜಮೀನು ಮುಳುಗಡೆಯಾಗಿದೆಯೆಂದು ಹೋದಾಗ ಲಂಚ ಕೇಳುವ ಅಧಿಕಾರಿಗಳು, ಮುಳುಗಡೆಯಾದ ಜಮೀನಿನಲ್ಲಿ ಏನೇನು ಇಲ್ಲದಿದ್ದರೂ ಹಣಕೊಟ್ಟವರ ಭೂಮಿಯಲ್ಲಿ ಬಂಗಾರವೇ ಹೋಯಿತೆಂದು ಬರೆದು ಕೊಡುವವರು, ಹಣ ಕೊಟ್ಟರೇ ಬೇಕಾದಷ್ಟು ಮಾರ್ಕ್ಸ್ ಹಾಕಿಸಿಕೊಡುವ ಬ್ರೋಕರ್ ಗಳು, ಹೋಟೆಲ್ ನಲ್ಲಿ ಕ್ಯಾಮೆರಾ ಇಟ್ಟು ಸಿ.ಡಿ.ಮಾಡಿ ಧಂದೆ ನಡೆಸುವವರು, ಆಪತ್ತಿನಲ್ಲಿ, ಮಧ್ಯರಾತ್ರಿಯಲ್ಲಿ ಪರದಾಡುತ್ತ ಆಟೋ ಹುಡುಕುವಾಗ ಹತ್ತು ಪಟ್ಟು ಹೆಚ್ಚು ಕೇಳುವ ಆಟೋ ಡ್ರೈವರ್ ಗಳು, ಕಾಲೇಜು ಹುಡುಗರೆಂದಾಕ್ಷಣ ಬಸ್ ನಿಲ್ಲಿಸದೇ ಹೋಗುವ ಬಸ್ ಡ್ರೈವರ್ ಗಳು, ಸಾಲದ ಭಾಧೆಯಿಂದ ಸತ್ತ ರೈತರ ಹೆಸರನ್ನು ನೂರಾರು ಬಾರಿ ತೋರಿಸಿ ಅವರ ಮನೆ ಮಂದಿಯೆಲ್ಲಾ ತಲೆ ತಗ್ಗಿಸುವ ಹಾಗೆ ಮಾಡುವ ನಮ್ಮ ಟಿ.ವಿ.ಚಾನೆಲ್ ಗಳು, ಅಪ್ಪಿ ತಪ್ಪಿ ರಾತ್ರಿ ಸಿಕ್ಕರೇ ಜೇಬಿನಲ್ಲಿರುವ ಹಣವೆಲ್ಲವನ್ನು ಕಿತ್ತು ಕಳುಹಿಸುವ ಪೋಲಿಸರು, ಮನ ಬಂದಂತೆ ಸೇಡು ತೀರಿಸಿಕೊಳ್ಳಲು, ಸ್ವಪ್ರತಿಷ್ಠೆ ಮೆರೆಯುಲು ಬರೆಯುವ ಲೇಖಕರು, ಹಣ ಕೊಟ್ಟರೇ ಯಾರೀಗೂ ಕೆಲಸ ಕೊಡಿಸುವ ರಾಜಕಾರಣಿಗಳು, ಎಲೆ ಬದಲಾಯಿಸುವಂತೆ ಪಕ್ಷ ಬದಲಾಯಿಸಿ ಮರು ಚುನಾವಣೆ ಮಾಡುವ ನೀಚ ರಾಜಕಾರಣಿಗಳು, ಜೊತೆಯಲ್ಲಿ ಕೆಲಸ ಮಾಡುವವರ ವಿರುದ್ದ ಇಲ್ಲಸಲ್ಲದ ದೂರನ್ನು, ಚಾಡಿಯನ್ನು ಹಬ್ಬಿಸುವವರು, ಸದಾ ಪಕ್ಕದ ಮನೆಯವರ ಕೆಡುಕನ್ನೆ ಬಯಸುವವರು, ಬಿಟ್ಟಿ ದುಡ್ಡಿಗೆ ಕನಸುಕಾಣುವವರು, ಅನಾಥಾಶ್ರಮವೆಂದು ದುಡ್ಡು ಹೊಡೆಯುವವರು, ವಿಧವಾ ಪಿಂಚೆಣಿಯನ್ನು ನುಂಗಿ ನೀರು ಕುಡಿಯುವವರು, ಇಪ್ಪತ್ತು ಮೂವತ್ತು ವರ್ಷ ಸಾಕಿ ಸಲಹಿದ ಅಪ್ಪ ಅಮ್ಮಂದಿರನ್ನು ದಿಕ್ಕರಿಸಿ ದೂರ ಹೋಗುವ ಮಕ್ಕಳಿಗೆ, ಅಣ್ಣ ತಮ್ಮ ಎಂದು ಹಣ ಪಡೆದು ಹಿಂದುರಿಗಿಸದೇ ಹೋಗುವ ಆಪ್ತ ಶತ್ರುಗಳು, ಇರುವ ತನಕ ಪ್ರಾಣ ಕೊಟ್ಟು ಕಾಪಾಡಿದ ಗೆಳೆಯನನ್ನು ನೀಚನೆಂದು ದೂರಿ ಹೋಗುವ ಗೆಳತಿಯರು, ಅವರ ಮನೆಯಲ್ಲೇ ಉಂಡು ತಿಂದು ಬೆಳೆದು ಕಡೆಗೆ ಅವರ ಮನೆಯಲ್ಲಿದ್ದುದ್ದೆಲ್ಲವನ್ನೂ ದೋಚುವ ಪರಮ ಪಾಪಿಗಳು, ಅಪ್ಪನ ಜೇಬಿನಲ್ಲಿ ಹಣ ಕದ್ದು,ಕದ್ದೇ ಇಲ್ಲವೆಂದು, ಕದ್ದಿದ್ದರೂ, ಅದು ನನಗಲ್ಲದೇ ಮತ್ತಾರಿಗೆ ಆ ಹಣವೆಂದು ವಾದಿಸುವ ನೀಚ ಮಕ್ಕಳು,ಒಂದು ಗಂಟೇಯೂ ಪಾಠ ಮಾಡದೇ, ನಲ್ವತ್ತು ಸಾವಿರದಷ್ಟು ಸಂಬಳವನ್ನು ದೋಚುತ್ತಿರುವ ಕೆಲವು ಪ್ರೋಫೆಸರ್ ಗಳು, ಏನೇನೂ ಮಾಡದೇ, ಲಕ್ಷಾಂತರ ರೂಪಾಯಿಯನ್ನು ಯೋಜನೆಗೆಂದು ಸಂಶೋಧನೆಗೆಂದು ಪಡೆಯುತ್ತಿರುವವರು, ಅಣ್ಣ ತಮಂದಿರೆಂದು ಬೊಗಳೆ ಹೊಡೆದರೂ, ಸದಾ ಅವರ ಮನೆ ಹಾಳಾಗಲಿ ಎಂದು ಹಾರೈಸುವ ಸಹೋದರರು, ಇವರಾರಿಗೂ ಇಲ್ಲವೇ ಪಾಪ ಪ್ರಜ್ನೆ?
ಪಾಪಪ್ರಜ್ನೆ ಇದ್ದರೂ ಮಾಡುತ್ತಿರಬೇಕೆಂದರೇ ಅದಕ್ಕೆ ಅವರು ನಂಬಿರುವ ದೇವರ ಕುಮ್ಮಕ್ಕು ಇರಲೇಬೇಕಲ್ಲವೆ? ದೇವರಿಲ್ಲವೆಂದು ಬೀಗುವವರು ಕಡಿಮೆ ಮಂದಿ. ದೇವರಿದ್ದಾನೆಂದು ಕೊಂಡಾಡುವರು ಅತಿ ಹೆಚ್ಚು, ನಾನಾ ಹೆಸರಿರಲಿ, ಎಲ್ಲರಿಗೂ ದೇವರೆಂಬುವನಿದ್ದಾನೆ ಅವನು ಹೇಳಿಯೇ ಈ ಕೆಲಸಗಳನ್ನು ಮಾಡಿಸುತ್ತಿದ್ದಾನೆಂಬುದು ಅವರ ವಾದ. ತಾವು ಮಾಡಿದ ಪಾಪವೆಲ್ಲವನ್ನು ಕಳೆದುಕೊಳ್ಳುವುದಕ್ಕೆಂದು ಒಂದೊಂದು ಪಶ್ಚತ್ತಾಪದ ದಾರಿಯನ್ನು ತೋರಿಸಿದ ಭಗವಂತ ಯಾರೆಂಬುದು ನನಗಂತೂ ತಿಳಿದಿಲ್ಲ. ಆದರೂ, ಈ ಭಗವಂತನನ್ನು ಸೃಷ್ಟಿಸಿದಾತನೇ, ಪಶ್ಚತಾಪವನ್ನು ಸೃಷ್ಟಿಸಿರಬೇಕು. ತಪ್ಪು ಮಾಡುವುದು ಹರಕೆ ಕಟ್ಟುವುದು ಅದನ್ನು ತೀರಿಸುವುದು ಮತ್ತದೇ ತಪ್ಪುಗಳನ್ನು ಮಾಡುವುದು ನಿವಾರಣೆ ಮಾಡಿಸುವುದು. ನಾನಿಲ್ಲಿ ಸರಿ ತಪ್ಪು ಎನ್ನುವುದನ್ನು ಯಾವುದೇ ಮಾನದಂಡವನ್ನಿರಿಸಿಕೊಂಡು ಹೇಳುತ್ತಿಲ್ಲ, ನನ್ನ ಪೂರ್ತಿ ಮಾತುಗಳು, ಕೇವಲ ಪಾಪ ಪ್ರಜ್ನೆ ಎನ್ನುವ ಅಥವಾ ಬೇರೆಯವರ ಜೀವನದ ಜೊತೆಗೆ ಆಡುವ, ಆಡಿದರೂ ಅದನ್ನು ಒಪ್ಪಿಕೊಳ್ಳದ ಬಿಗಿವಂತ ನಾಗರೀಕರಿಗೆ ಮಾತ್ರ. ಅಪರೂಪಕ್ಕೊಮ್ಮೆ ತಪ್ಪು ಮಾಡುವವರಿಗೆ, ಅಥವಾ ಮೋಸ ಹೋಗುವವರಿಗೆ ಅದರಿಂದ ನೋವಾಗಬಹುದು, ಸದಾ ತಪ್ಪನ್ನೆ ಮಾಡುವವರು, ಅಥವಾ ತಪ್ಪೇ ಜೀವನವನ್ನು ರೂಡಿಸಿಕೊಂಡವರಿಗೆ ನೋವಾದಿತೆ? ಮೊದಲ ಬಾರಿ ಪಿ.ಯು.ಸಿಯಲ್ಲಿ ಫೇಲಾದಾಗ ಮುಖ ತೋರಿಸುವುದಕ್ಕೆ, ಹಿಂಜರಿಯುತ್ತಿದ್ದೆ, ಫೇಲಾದೆನೆಂಬ ಕೊರಗಿತ್ತು. ಎರಡನೇ ಬಾರಿಗೆ ಅದರ ಅರಿವೇ ಮರೆತುಹೋಗಿತ್ತು, ಅದು ಅಲ್ಲದೇ, ನನ್ನ ಡಿಗ್ರೀ ಸಮಯದಲ್ಲಿ, ನನ್ನ ಸ್ನೇಹಿತರಿಗೆ ಫೇಲಾಗಿದ್ದೇವೆಂದು ಹೇಳಿಕೊಳ್ಳುವುದೇ ಒಂದು ಹೆಮ್ಮೆಯ ಸಂಗತಿಯಾಗಿತ್ತು. ಕೆಲವೊಮ್ಮೆ, ನನ್ನಂಥಹ ಕುಡುಕರಿಗೆ, ಕುಡಿತವೇ, ಜೀವನದ ಅತಿ ಅಗಮ್ಯ ವೃತ್ತಿಯೆಂದು ಬಿಂಬಿಸಿ ಮೆರೆಸುವ ಚಟವುಂಟಾಗುತ್ತದೆ. ನನ್ನಂಥ ಮುಟ್ಠಾಳರಿಗೆ, ಕುಡಿತದಿಂದ, ಮನೆ ಮಠ, ಕಳೆದುಕೊಂಡ, ಹೆಂಡತಿ ಮಕ್ಕಳು ಬೀದಿಗೆ ಬಂದ ದೃಶ್ಯಗಳು ಕಾಣುವುದಿಲ್ಲ, ಕಂಡರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮನ್ನು ಅವುಗಳು ಕಾಡುವುದಿಲ್ಲವೇಕೆ, ಸಮಜಾಯಿಸಿ ಕೆಲವೊಮ್ಮೆ ಉತ್ತರ ಕೊಡುತ್ತೇವೆ, ಮತ್ತೊಮ್ಮೆ, ಅದು ನಮ್ಮ ಆಂತರಿಕ ವಿಷಯವೆನ್ನುತ್ತೇವೆ. ನನ್ನ ಕುಡಿತ, ನನ್ನು ಮೋಜು, ನನ್ನ ಮೋಹ, ವ್ಯಾಮೋಹ, ದಾಹ ಪ್ರತಿಯೊಂದು ನನಗರಿಯದ, ಅಥವ ನನ್ನ ಜೊತೆ ಬೆರೆತು ಬಾಳುವ ಹಲವಾರು ಜೀವಗಳಿಗೆ ಕೆಡುಕನ್ನು ತರುತ್ತದೆಂಬುದನ್ನು ನೆನೆಯುವುದಿಲ್ಲ.
ತಪ್ಪು ಮಾಡುವುದನ್ನು ನಿಲ್ಲಿಸಲು ಬಯಸುವುದಿಲ್ಲ ಮನಸ್ಸು, ಅದರಲ್ಲಿ ನಮಗೆ ಅರಿಯದ ನಮ್ಮ ಅಹಂ ತುಂಬಿರುತ್ತದೆ, ನಾನು ಎಂಬ ನಾನತ್ವ ಹೆಚ್ಚಿರುತ್ತದೆ. ಏನು ಮಾಡಿದರೂ ನಾನು ಎಂಬುವನು ಕಿರೀಟದಿಂದ ಕೆಳಗಿಳಿಯುವುದಿಲ್ಲ, ನಾನು ಸೋಲುವುದೇ? ನಾನು ಬಾಗುವುದೇ? ಅಸಾಧ್ಯವೆನಿಸುತ್ತದೆ. ಕೆಟ್ಟದ್ದಾದರೂ ಸರಿಯೇ, ಒಲಿತಾದರೂ ಸರಿಯೇ, ನಾನು ಜಯಿಸಲೇಬೇಕು. ಅಹಂ ನಿಂದಾಗಿ ಇದುವರೆಗೆ ಎಂಥೆಂಥವರೂ ಏನಾದರೆಂಬುದನ್ನು ತಿಳಿದಿದ್ದರೂ, ಅಹಂ ನಿಂದ ಹೊರಬರುವ ಸಾಹಸ ಮಾಡುವುದಿಲ್ಲ. ಇಷ್ಟಕ್ಕೂ ಅಹಂನೊಂದಿಗೆ ಬದುಕುವಾಗ ಏನನ್ನು ಸಾಧಿಸುತ್ತಾರೆಂಬುದು ನನಗೆ ತಿಳಿದಿಲ್ಲ. ಮನ ಬಿಚ್ಚಿ ನಗುವುದಿಲ್ಲ, ಮನ ಬಿಚ್ಚಿ ಅಳುವುದಿಲ್ಲ, ಒಳ್ಳೆಯದನ್ನು ಮನಸಾರೆ ಪ್ರೀತಿಸಿ ಆನಂದಿಸುವುದಿಲ್ಲ, ಸುಂದರವಾಗಿದ್ದರೇ ಅದನ್ನು ಹೊಗಳುವುದಿಲ್ಲ, ಪ್ರಶಂಸಿಸುವುದಿಲ್ಲ. ನಾನು ಮಾಡಿದ್ದೇ ಸರಿಯೆಂದು ಮುನ್ನುಗುವುದನ್ನು ಬಿಟ್ಟರೇ ಮತ್ತೇನು ಮಾಡುವುದಿಲ್ಲ. ನಾನು ನನ್ನ ಜೀವನದಲ್ಲಿ ಹತ್ತು ಹುಡುಗನನ್ನು ಪ್ರೀತಿಸಿದೆ, ಕಾಡಿಸಿದೆ, ಮೋಹಿಸಿದೆ, ನಾನು ಹತ್ತಾರು ಹುಡುಗಿಯರ ಜೊತೆ ಅಲೆದಾಡಿದೆ, ಮೋಹಿಸಿದೆ, ಎಂದು ಮೆಚ್ಚಿ ಮೆರೆದಾಡುವವರಿಗೆ, ಆಂತರಿಕೆ ಪ್ರೀತಿಯೆಂಬುದು, ಅಥವಾ ಮೋಸದ ಎಳೆಯಲ್ಲಿನ ನೋವಿನ ಶಬ್ದ ಕೇಳುವುದುಂಟೇ? ಪ್ಲರ್ಟಿಂಗ್ ಎನ್ನುವುದೇ ಸ್ವೆಚ್ಚೆ ಎನ್ನುವುದನ್ನು, ಅಥವಾ ಸ್ವಾತಂತ್ರ್ಯದ ಪ್ರತೀಕ ಎನ್ನುವಂತೆ ಬಿಂಬಿಸುವ ಜನರಿರುವ ತನಕ, ಭಾವನ ಲೋಕದಲ್ಲಿ ನೆಮ್ಮದಿ ನೆಲೆಸಲು ಬಂದೀತೆ? ಏನು ಮಹಾ ಆದದ್ದು, ಎನ್ನುವಂತೆ, ಅಥವಾ ಏನೂ ಆಗಿಲ್ಲವೆನ್ನುವಂತೆ, ಈ ಬೀದಿಯಲ್ಲಿ ಹೊಡೆದರೇ ಆ ಬೀದಿಯಲ್ಲಿ ಹೊಸ ಮನುಷ್ಯನಾಗಿ ಬರುವವಂತವನಿಗೆ, ಈ ಮೇಲಿನ ಸಾಲುಗಳು ಅರ್ಥವಿಲದಂತವಾಗುವುದು ಸರಿಯೇ? ಆದರೇ, ತಿಂಡಿ ತಿನ್ನಲು ಕುಳಿತ ತಟ್ಟೆಯಲ್ಲಿ ಉಳಿದ ನೀರನ್ನು ಟೇಬಲ್ಲಿನ ಮೇಲೆ ಚೆಲ್ಲಿ ಅದರಿಂದ ಅಂದ ಚೆಂದದ ರಂಗೋಲಿ ಬಿಡಿಸಲು ಹಾತೊರೆಯುವ ಮನಸ್ಸುಳ್ಳ ವ್ಯಕ್ತಿಗಳಿಗೆ ಸಾಮಾನ್ಯವೆಂದು ಒಪ್ಪಲು ಸಾಧ್ಯವಾಗುವುದಿಲ್ಲ. ಒಂದು ಮಧ್ಯರಾತ್ರಿ, ಎರಡು ಗಂಟೆಯ ವೇಳೆಗೆ ನಿನಗೆ ನಾನು ಫೋನ್ ಮಾಡಿ ನನಗೆ ಒಂದು ಕೆಟ್ಟ ಸ್ವಪ್ನ ಬಿತ್ತು ಅಂತಾ ಹೇಳಿದೆ, ನೆನಪಿದೆಯಾ? ನಾನು ನೀನು ದೇವರ ಬಳಿ ಹೋಗಿ, ದೇವರೇ, ನಮಗೆ ಈ ಜನ, ಈ ಜಿಗಿಜಿಗಿ, ಸದಾ ಗುಯ್ಯ್ ಎನ್ನುವ ಟ್ರಾಫಿಕ್, ಬೆಳಿಗ್ಗೆ ರಾತ್ರಿ ದುಡಿಮೆ, ಹಸಿವು, ನರಕ, ಮೋಸ, ವಂಚನೆ, ಮರುಕ, ದುಃಖ, ಯಾರೋ ಮಾಡುವ ತಪ್ಪಿಗೆ ನಾವು ತೆರುವೆ ದಂಡ, ಅಳು, ಸಾಮಾಜಿಕ ಪ್ರತಿಷ್ಟೆ, ಹೆಸರು, ಮರ್ಯಾದೆಯೆಂಬ ಮುಖವಾಡ, ಇವೆಲ್ಲವೂ ಇಲ್ಲದ ಸ್ಥಳಕ್ಕೆ ನಮ್ಮನ್ನು ಬಿಡು, ನಮಗೆ ಹಸಿವು ಆಗಬಾರದು, ದಾಹವೆನಿಸಬಾರದು, ನಿನ್ನಂತೆಯೇ, ಇರಬೇಕು, ಆದರೇ, ಕನಸುಗಳು ಇರಬೇಕು, ದನಿವಾಗಬಾರದು, ದುಡಿಮೆಯಿರಬಾರದು, ಒಂದು ಬಗೆಯ ಮಕ್ಕಳಾಟವೆನಿಸಿದರೂ ಸರಿಯೇ ಇದು ನಮಗೆ ಬೇಕು ಎಂದು ಕೇಳಿದೆವು.
ದೇವರು, ಈ ಬಗೆಯ ಅರ್ಜಿ ಇದುವರೆಗೂ ಒಂದು ಬಂದಿರಲಿಲ್ಲ, ನಿಮ್ಮದೇ ಮೊದಲದ್ದು, ಆಗಲಿ ತಪಸ್ಸು, ನೀವು ಸ್ವರ್ಗಕ್ಕೆ ಬರಬೇಡಿ, ಅಲ್ಲಿಯೂ ಇತ್ತೀಚೆಗೆ, ಲಂಚ, ಮಂಚ, ಹೆಚ್ಚಾಗಿದೆ, ನಿಮಗೆ ನನ್ನ ಸೂಚನೆಯೆಂದರೇ, ಒಂದು ಸುಂದರವಾದ ಮರುಭೂಮಿ, ಜನಜಂಗುಳಿಯಿಲ್ಲ, ಪಕ್ಕದಲ್ಲಿಯೇ ಸುಂದರವಾದ ಓಯಾಸಿಸ್, ನಿಮಗೆ ಬೇಕಾದ ಮರುಭೂಮಿಯ ಹಣ್ಣುಗಳು ಹಸಿವೆ ಇಲ್ಲವೆಂದಾಗ ಉನ್ನಲು ತಿನ್ನಲು ಏನು ಬೇಕು? ಎಂದನು. ನಮಗೂ ಅದು ಸರಿಯೆಂದು ಅಲ್ಲಿಗೆ, ಹೋದೆವು, ನನಗೆ ಮರಳಲ್ಲಿ ಆಡುವುದು, ಗೂಡು ಕಟ್ಟುವುದು, ನನ್ನವಳ ಮುಖವನ್ನೇ ನೋಡುತ್ತಾ ಇರುವುದು. ಒಂದು ದಿನ ಗೂಡು ಕಟ್ಟಲು ನನ್ನನು ಬಿಟ್ಟು ನಮ್ಮ ಓಯಾಸಿಸ್ ಬಿಟ್ಟು ಇನ್ನೊಂದು ಓಯಾಸಿಸ್ ಬಳಿಗೆ ನನ್ನವಳು ಹೋಗಿದ್ದಳು. ನಾನು ಹುಡುಕಿ ಹುಡುಕಿ ಬಂದಾಗ, ಅಲ್ಲಿಗೆ ಹೋದದ್ದು ಯಾಕೆ ಎನ್ನಲು, ಅಯ್ಯೊ ಅಲ್ಲಿ ಕುಳಿತು ಕುಳಿತು ಬೇಸರವಾಗಿತ್ತು ಅದಕ್ಕೆ ಬಂದೆ ಎಂದಳು. ಅಷ್ಟೊತ್ತಿಗೆ ಎಚ್ಚರವಾಯಿತು. ಇದನ್ನು ಅವಳಿಗೆ ಹೇಳಿದ ತಕ್ಷಣ, ಅಯ್ಯೊ ಕರ್ಮವೇ, ಎಂಥಹ ಘೋರ ಕನಸು, ಮರುಭೂಮಿಯಲ್ಲಿ ಅದು ಬರಿ ನಿನ್ನ ಮುಖವನ್ನು ನೋಡಿ ಬದುಕೋದಾ ಇದಕ್ಕಿಂತ ನರಕ ಮತ್ತೊಂದು ಇದ್ಯಾ? ಈ ಮಾತು ಇಂದು ಸತ್ಯವಾಯಿತು. ನನ್ನ ಜೊತೆ ಬದುಕುವುದಕ್ಕಿಂತ ಮಹಾ ಪಾಪ ಮತ್ತೊಂದಿಲ್ಲವೆನ್ನುವುದನ್ನು ನಿರೂಪಿಸಿ ಹೋದಳು.

21 ಜುಲೈ 2009

ನಾನು ಎಂದರೇ! ನನ್ನತನವೆಂದರೇ?


ಇಲ್ಲಿ ಬರೆದಿರುವುದರಲ್ಲಿ ಹೆಚ್ಚಿನವು ಕಲ್ಪನೆಯಿಂದ ಬಂದದ್ದು, ಇಲ್ಲಿ ಹೇಳಿರುವುದೆಲ್ಲಾ ಸತ್ಯವೆಂದು ದಯವಿಟ್ಟು ಪರಿಗಣಿಸಬೇಡಿ, ನನ್ನೊಳಗಿರುವ ಗೊಂದಲಮಯ ವಿಚಾರಗಳನ್ನು ಹತ್ತಿಕ್ಕಲು ಬರೆದಿದ್ದೇನೇ ಹೊರತು, ನನ್ನನ್ನು ಸಮರ್ಥಿಸಿಕೊಳ್ಳುವುದಕ್ಕಾಗಲೀ, ಇತರರನ್ನು ದೂರುವುದಕ್ಕಾಗಲೀ ಬರೆದಿರುವುದಲ್ಲ, ನಾನು ಏನೆಂಬುದು ಸಂಪೂರ್ಣವಾಗಿ ನನಗೆ ತಿಳಿಯದಿರುವುದರಿಂದ ನನ್ನ ಬಗ್ಗೆ ನಾನು ಹುಡುಕುತ್ತಿರುವ ನನ್ನತನದ ಬಗ್ಗೆ ಅಥವಾ ಸದಾ ಬೀಗುವ ನಾನು ಎಂಬುದರ ಬಗ್ಗೆ ಸ್ವಲ್ಪ ತರ್ಕಿಸಿದ್ದೇನೆ. ಈ ಪ್ರಶ್ನೆಗಳು ಕೆಲವೊಮ್ಮೆ ನಿಮ್ಮನ್ನು ಕಾಡಿದ್ದಿರಬಹುದು, ಅಥವಾ ತಮಗೆ ಉತ್ತರ ಸಿಕ್ಕಿದ್ದರೂ ಇರಬಹುದು, ಅಥವಾ ಆ ಗೋಜಿಗೆ ಹೋಗದೇ ಸಂತೋಷವಾಗಿದ್ದರೂ ಇರಬಹುದು. ಅದು ನನಗೆ ಬಹುಮುಖ್ಯವೆನಿಸುವುದಿಲ್ಲ. ಹೀಗೆ ಓದಿ ಹಾಗೆ ಮರೆತರೇ, ಅಥವಾ ಈ ಅಂಕಣವನ್ನು ಪೂರ್ಣವಾಗಿ ಓದುವ ತನಕ ತಮಗೆ ಸಂಯಮವಿದ್ದರೇ ಅಷ್ಟೇ ಸಾಕು. ಓದಿದ ಮೇಲೆ ನನ್ನ ಮೇಲೆ ಅನುಮಾನ ಬಂದರೂ ಅದನ್ನು ನನ್ನ ಬಳಿಯಲ್ಲಿ ಕೇಳದಿದ್ದರೇ ಸಂತೋಷ. ನೀವು ನನಗೆ ಸಂತೋಷವಾಗುವಂತೆ ನಡೆದುಕೊಳ್ಳುತೀರಾ ಎಂಬ ನಂಬಿಕೆ ನನಗಿದೆ.

ನಾನೆಂದರೇ ಏನೆಂಬುದು ನನಗೆ ಒಂದಿಷ್ಟೂ ತಿಳಿದಿಲ್ಲ, ತಿಳಿಯುವ ಸಾಹಸವಂತೂ ಮಾಡಿದ್ದೇನೆ, ಮಾಡಿ ಸೋತಿದ್ದೇನೆಂದರೇ ತಪ್ಪಾಗುವುದು, ಗೆದ್ದಿದ್ದೇನೆಂದರೆ ಮಹಪರಾಧವಾಗುವುದು. ನಾನು ಎಂಬುದು ನನಗೆ ಸಂಬಂಧಪಟ್ಟ ವಿಷಯವಾದರೂ ನಾನು ನನಗೆ ನಾನಾಗಿಯೇ ಕಂಡುಕೊಂಡಿದ್ದೇನೆ. ಒಬ್ಬ ಮಗನಾಗಿ, ಒಮ್ಮೊಮ್ಮೆ ಕೇವಲ ಅಮ್ಮನ ಮಗನಾಗಿ ಅಪ್ಪನ ಪರಮ ವೈರಿಯಾಗಿ, ಕೆಲವೊಮ್ಮೆ ಅಪ್ಪನ ಪ್ರೀತಿಯ ಮಗನಾಗಿ ಅಮ್ಮನ ದಾರಿ ತಪ್ಪಿದ ಮಗನಾಗಿ ಕಾಣಿಸಿದ್ದೇನೆ. ತಂಗಿಗೆ ಆದರ್ಶ ಅಣ್ಣನಾಗಿ ಕಂಡರೂ ಒಮ್ಮೊಮ್ಮೆ ಅವಳಿಗೆ ಜನ್ಮಜನ್ಮಾಂತರದ ಶತ್ರುವೆನಿಸಿದ್ದೇನೆ. ಅಕ್ಕನಿಗೆ ನಾನೇ ಅವಳ ಪ್ರಿಯಮಿತ್ರನೆಂದು ನಡೆದು ಕೊಂಡದ್ದು ಇದೆ, ಅವಳಿಂದ ಥೂ ದೂರ ಹೋಗು ನನ್ನೊಂದಿಗೆ ಮಾತನಾಡಬೇಡವೆನ್ನುವಂತೆ ಉಗಿಸಿಕೊಂಡದ್ದು ಇದೆ.ಅವನು ನನ್ನ ತಮ್ಮನೇ ಅಲ್ಲವೆನ್ನುವಷ್ಟರ ಮಟ್ಟಿಗೆ ವೈರತ್ವವನ್ನು ಸಾಧಿಸಿದ್ದು ಇದೆ. ಚಿಕ್ಕಂದಿನಿಂದ ಮುದ್ದು ಮಾಡಿ ನನ್ನ ತುಂಟ ಮಾತುಗಳನ್ನು ಸವಿಯುತಿದ್ದ ಅಜ್ಜ ಅಜ್ಜಿಯರು ನನ್ನ ಮೊಮ್ಮಗ ಹಾಳಾಗಿ ಹೋದ ಎನ್ನುವಂತೆ ಬಾಳಿದ್ದೇನೆ. ಜೊತೆಯಲ್ಲಿ ಓದಿದ ನನ್ನ ಹಲವಾರು ಮಿತ್ರರಿಗೆ ಕೆಲವೊಮ್ಮೆ ಆತ್ಮೀಯ ಗೆಳೆಯನಾದರೂ ಹಲವಾರು ಬಾರಿ ಮುನಿಸಿ ದೂರಾಗಿ ಹೋಗುವವರೆಗೂ, ಬೇರೆಯವರ ಬಳಿಯಲ್ಲಿ ನನ್ನ ಬಗ್ಗೆ ಚಾಡಿ ಹೇಳಿ ನನ್ನನ್ನು ಹುಟ್ಟು ನೀಚನೆನಿಸುವ ತನಕವೂ ನನ್ನ ದೂರ್ತ ಮನಸನ್ನು ತೋರಿಸಿದ್ದೇನೆ. ನನ್ನ ಗೆಳತಿಯನ್ನು ಗಾಢವಾಗಿ ಪ್ರೀತಿಸಿ ನಿನಗಾಗಿಯೇ ನಾನು ಹುಟ್ಟಿರುವುದು ಬದುಕಿರುವುದೆಂದು ಆಣೆ ಭಾಷೆಮಾಡಿದ್ದರೂ, ಅವಳೊಡನೆ ಜಗಳವಾಡಿ ಅವಳು ಕಣ್ಣೀರಿಟ್ಟಾಗ ಅವಳ ಕಾಲಿಗೆ ಬಿದ್ದು ಕ್ಷಮೆ ಕೇಳುವ ಮಟ್ಟಕ್ಕೂ ಹೋಗಿದ್ದೇನೆ.ಅವಳು ನನ್ನನ್ನು ಬಿಟ್ಟು ಏಕಾಂಗಿಯಾದಾಗ ನನಗೆ ಬದುಕೆಂಬುದು ಇಲ್ಲವೇ ಇಲ್ಲವೆನ್ನುವಂತೆ ಕೊರಗಿದ್ದೇನೆ, ನನ್ನೊಳಗೆ ಅತ್ತಿದ್ದೇನೆ. ನೀನು ನಂಬಿಸಿ ನನ್ನನ್ನು ಕಾರಣವನ್ನು ಹೇಳದೇ ಹೋದದ್ದಕ್ಕೆ ಮರುಗಿದ್ದೇನೆ. ದೂರಿದ್ದೇನೆ, ದೂಷಿಸಿದ್ದೇನೆ. ನಿನ್ನನ್ನು ದೇವತೆಯಂತೆ ಬಿಂಬಿಸಿ ಕವನ ಬರೆದ ಕೈಗಳು ನೀನೊಬ್ಬ ನಡತೆಗೆಟ್ಟವಳು ಎನ್ನುವ ತನಕ ಹೋಗಿವೆ, ನನ್ನ ಭಾವನೆಗಳಿಗೆ ಅರ್ಥ ಬಂದದ್ದು ನಿನ್ನಿಂದ ಎಂದು ಭಾವಿಸಿದ್ದ ಅಂತರಾಳ, ನೀನು ನನ್ನ ಭಾವನೆಗಳೊಂದಿಗೆ ಆಡಿ ಹೋದವಳೆಂದು ನಿಟ್ಟುಸಿರು ಬಿಟ್ಟಿದೆ.

ನಾನು ಎಂದರೇ, ಏನು? ಯಾರು? ಚಿಕ್ಕವನಿದ್ದಾಗ ಕಾಲುವೆಯಲ್ಲಿ ಸ್ನಾನ ಮಾಡಲೂ ಹೋಗಿ, ಹೆದರಿಕೊಂಡು ಜ್ವರ ಬಂದು ಅಮ್ಮ ನನ್ನನ್ನು ಶನಿದೇವರ ದೇವಸ್ಥಾನಕ್ಕೆ ತಾಯಿತಿ ಕಟ್ಟಿಸಲು ಕರೆದೊಯ್ದಾಗ, ಶನಿದೇವರು ಪೂಜಾರಿಯ ಮೈಮೇಲೆ ಬಂದಿದೆ ಎಂದಾಗ ನನ್ನ ಜೀವವೇ ಹೋದಂತಾಗಿ ಭಯದಿಂದ ನಡುಗಿ ನಿಂತು ದೇವರನ್ನು ಬೇಡುತ್ತಿದ್ದನಲ್ಲ ಅವನೇನಾ ನಾನು? ನನಗೆ ಶನಿಕಾಟವಿದೆಯೆಂದು ಅಮ್ಮನ ನಂಬಿಕೆಯೊಂದಿಕೆ ನನ್ನ ನಂಬಿಕೆಯನ್ನು ಬೆಳಸಿ ಮುಂಜಾನೆ ಐದಕ್ಕೆ ಎದ್ದು ಅಮ್ಮನ ಜೊತೆ ತಣ್ಣೀರು ಸ್ನಾನ ಮಾಡಿ ಅರಳಿ ಮರ ಸುತ್ತಿ ಬರುತ್ತಿದವನಾ? ಅಥವಾ ಈ ದೇವರು, ದಿಂಡಿರು ಎಂದು ಮರ ಸುತ್ತುವುದು, ಮೈಮೇಲೆ ಬರುವುದೆಲ್ಲಾ ಜನರನ್ನು ಮೋಸಗೊಳಿಸಲು ಮಾಡುತ್ತಿರುವ ಧಂಧೆ ಎಂದು ಅವರನ್ನು ನೇರ ದೂರಿ ಬಂದೆನಲ್ಲ ಅವನೇನಾ ನಾನು? ಪ್ರತಿ ವರ್ಷವೂ ಏಪ್ರಿಲ್ ತಿಂಗಳಂದು, ಮುಂಜಾನೆಗೆ ಎದ್ದು ಬೇಲೂರಿಗೆ ಹೋಗಿ ಅಲ್ಲಿನ ಕೆರೆಯಲ್ಲಿ ಮುಳುಗೆದ್ದು ಪೂಜೆ ಮಾಡಿಸಿಕೊಂಡು ಬರುತ್ತಿದ್ದವನು, ಈಗ ಬೇಲೂರಿಗೆ ಹೋದರೂ ಪೂಜೆ ಮಾಡಿಸದೇ ಅಲ್ಲಿನ ಚಿತ್ತಾರಗಳ, ಕೆತ್ತನೆಗಳ ಬಗ್ಗೆ ಫೋಟೋ ತೆಗೆದು ಬರುವಂತೆ ಆಯಿತಲ್ಲಾ ನನ್ನ ಮನಸ್ಸು, ಅವನೇನಾ? ಅಮ್ಮ, ಬೆಳಿಗ್ಗೆ ಎಬ್ಬಿಸುವಾಗ, ಕಡ್ಡಾಯವಾಗಿ ಬಲದೇ ಮಗ್ಗಿಲಿಗೆ ತಿರುಗಿ ಎದ್ದು ದೇವರ ಫೋಟೋ ನೋಡಿ ಕೈಮುಗಿದು ದೇವರನ್ನು ಮನಸಾರೇ ಬೇಡಿ ದಿನ ಆರಂಭಿಸುತ್ತಿದ್ದವನು ನಾನಾ? ಅಥವಾ ಇರುವ ಕೋಣೆಯಲ್ಲಿ ಒಂದೇ ಒಂದು ದೇವರ ಫೋಟೋ ಇರುವುದಿರಲಿ, ದೇವರೆಂಬುವದರ ಬಗ್ಗೆ ನಿರಾಸಕ್ತಿ ಹೊಂದಿದವನು ನಾನಾ? ಪರೀಕ್ಷೆ ಎಂಬುದು ಸಮೀಪಿಸುವಾಗ ಅಯ್ಯೋ ದೇವರೇ ಈ ಪರಿಕ್ಷೆಯಿಂದ ನನ್ನನ್ನು ಪಾರುಮಾಡು ಎಂದು ಬೇಡಿದವನು ನಾನಾ? ಪರೀಕ್ಷೆ ಬರೆದು ಮುಗಿದ ಮೇಲೆ ಅಯ್ಯೋ ದೇವರೇ ನನ್ನನ್ನು ಪಾಸು ಮಾಡು ಎಂದು ಬೇಡಿದವನು ನಾನಾ? ನಾನು ಹಗಲಿರುಳು ಓದಿ ಬಂದದ್ದಕ್ಕೆ ಈ ಮಟ್ಟಕ್ಕೆ ಬಂದೆ ಎಂದು ಬೀಗಿದವನು ನಾನಾ?

ತಾತಾ ನನ್ನೆದುರು ಕುಳಿತು ಸರಾಯಿಯ್ ಕುಡಿಯುತಿದ್ದಾಗ, ನಮ್ಮೂರಿನ ಹಲವರು ಕುಡಿದು ಬೀದಿಯಲ್ಲಿ ಜಗಳವಾಡುತಿದ್ದಾಗ ಅಪಹಾಸ್ಯದಿಂದ ಅವರನ್ನು ರೇಗಿಸಿ, ಕುಡಿದು ಸಾಯ್ತಾ ಇದ್ದಿರಲ್ಲೋ ಮುಠ್ಠಾಳರ ಅದರಲ್ಲೇನಿರುತ್ತೋ? ಎನ್ನುತ್ತಿದ್ದವನು, ಕುಡಿದು, ಕುಣಿದು ಕುಪ್ಪಳಿಸಿದಾಗ ನನ್ನೊಳಗಿನ ಆತ್ಮ ಜಾಗೃತಗೊಂಡು ಮಂಕೆ ನೀನು ಮಾಡುತ್ತಿರುವುದೇನೆಂದು ಎಚ್ಚರಿಸಿದಾಗ ಅದರಿಂದ ದೂರ ಹೋದೆನಲ್ಲ ಅವನಾ? ನಮ್ಮೂರಿನ ಹರಿಜನ ಕೇರಿಯ ಕೆಲವು ಹೆಂಗಸರು ಕುಡಿದು ಬೈಯ್ಗುಳ ಸುರಿಮಳೆಗಯ್ಯುವಾಗ ಥೂ ಇದೆಂತಾ ಹೆಂಗಸು ಎನ್ನುತ್ತಿದ್ದನಲ್ಲ ಅವನೇನಾ ನಾನು? ಅಥವಾ ಕಾಲೆಜಿಗೆ ಸೇರಿದಾಗ ನನ್ನ ಜೊತೆಗಾರರು(ಹುಡುಗಿಯರು) ಕುಡಿದಾಗ ಮಹಿಳೆಯೆಂದರೇ ಹೀಗಿರಬೇಕು, ಅವರಿಗೆ ಬೇಕಾದುದನ್ನು ಅವರು ಪಡೆದು ಅನುಭವಿಸಬೇಕೆಂದು ಬಯಸಿತ್ತಲ್ಲ ಮನಸ್ಸು ಅದು ನಾನಾ? ಅಯ್ಯೋ ನನ್ನನ್ನು ಇಂಟರ್ನಲ್ ನಲ್ಲಿ ನನ್ನ ಮಾರ್ಕ್ಸ್ ಕಡಿಮೆಯಾಗುತ್ತದೆಂದು ಉಪನ್ಯಾಸಕರ ಕಣ್ಣಿಗೆ ಬೀಳದೇ ಮರೆಯಾಗಿ ಓಡಾಡುತ್ತಿದ್ದವನು, ಪ್ರಪಂಚದ ವಿಷಯ ನನಗೇಕೆ, ಅದರಲ್ಲಿ ನನಗೆ ಆಸಕ್ತಿ ಇಲ್ಲ ನನ್ನ ಕೆಲಸ ಓದಿ ಪಾಸಾಗುವುದಷ್ಟೇ ಎಂದು ಸಾಗಿಸಿದ ದಿನಗಳಿವೆ. ಮರುದಿನವೇ, ಉಪನ್ಯಾಸಕ ವಿರುದ್ದ ತಿರುಗಿಬಿದ್ದು, ಹೋದರೇ ಹೋಯಿತು ಈ ಮಾರ್ಕ್ಸು ಈ ಡಿಗ್ರೀ ಯಾರಿಗೆ ಬೇಕು ಎಂದು ಕುಲಪತಿಗಳಿಗೆ ದೂರು ನೀಡಲು ಹೋದದ್ದು ಇದೆ. ಓದಿ ಉದ್ದಾರವಾಗುವುದು ಅಷ್ಟರಲ್ಲಿಯೇ ಇದೆ, ಓದದೇ ಬದುಕಿದವರಿಲ್ಲವೇ? ಈ ಪುಸ್ತಕಗಳು ಯಾರೋ ಅವರ ತೀಟೆ ತೀರಿಸಿಕೊಳ್ಳಲು ಬರೆದಿದ್ದಾರೆ ಇದಕ್ಕೆಲ್ಲಾ ಕೊನೆ ಹೇಳಬೇಕೆಂದು ಎಸೆದು ಇನ್ನು ಮುಂದೆ ಕಾಲೆಜಿಗೆ ಗುಡ್ ಬೈ ಎಂದು ಕೆಲಸಕ್ಕೆ ಹೋದವನು, ಮರಳಿ ಬಂದು ಕಾಲೇಜು ಸೇರಿ ಹೆಚ್ಚು ಓದಬೇಕು, ಓದು ಎಂಬುದಿರುವುದು ನನ್ನ ಸ್ವಂತ ಬುದ್ದಿಯನ್ನು ವಿಕಸನಗೊಳ್ಳಲಿರುವುದೇ ಹೊರತು, ಪರರ ಜೊತೆಗೆ ನನ್ನನ್ನು ಹೋಲಿಸಿನೋಡುವುದಕ್ಕಲ್ಲವೆಂದವನು ನಾನಾ?

ಜಾತಿಯೆಂಬುದೇ, ಬಹುಮುಖ್ಯ ಅದೊಂದು ಜೀವನದ ಮಹತ್ತರ ಬೇಡಿಕೆಗಳಲ್ಲಿ, ಒಂದು ನಮ್ಮ ಸನಾತನಿಯವಾದದ್ದು, ಅದನ್ನು ಕಡೆಗನಿಸಬಾರದ್ದು, ಅದನ್ನು ಪಾಲಿಸಬೇಕೆಂದು, ನಮ್ಮ ಗುರುತು ಎಂಬುದೊಂದಿದ್ದರೇ, ಅದು ನಮ್ಮ ಜಾತಿಯಿಂದಲೇ ಎಂಬ ಪುಂಡರ ಭೋಧನೆಗೆ ಸಿಲುಕಿ ನನ್ನನ್ನು ನಾನು ಜಾತಿಯ ಕುರುಡು ಆರಾಧಕನಂತೆ ನಟಿಸಿದ್ದು ನಾನಾ? ಅದು ಅತಿರೇಕಕ್ಕೆ ಹೋಗಿ, ಒಕ್ಕಲಿಗರ ಸಂಘಕ್ಕೆ ಸದಸ್ಯತ್ವ ಪಡೆಯಲು ಹೋದದ್ದು ನಾನಾ? ಅಥವಾ ಈ ಜಾತಿ, ಈ ಧರ್ಮ ಇವೆಲ್ಲಾ ನಮ್ಮ ಸಮಾಜಕ್ಕೆ ಅಂಟಿರುವ ಕ್ಯಾನ್ಸರ್ ಹುಣ್ಣುಗಳು ಇವುಗಳನ್ನು ಬುಡಸಮೇತ ಕೀಳದ ಹೊರತು ಆರೋಗ್ಯಕರ ಸಮಾಜ ಕಲ್ಪಿಸಲಾರದೆಂದು, ಜಾತಿಯ ಬಗ್ಗೆ ಧರ್ಮದ ಬಗ್ಗೆ ಮಾತನಾಡುವವರನ್ನು ದೂರವಿಟ್ಟು ಒಬ್ಬನೇ ಹೊರಟವನು ನಾನಾ? ಇದಕ್ಕೊಂದು ಉದಾಹರಣೆಯಾಗಿ ನನ್ನ ಕಾಲೇಜಿನಲ್ಲಿ ನಡೆದುದ್ದನ್ನು ಹೇಳುತ್ತೇನೆ. ನಾನು ಜ್ನಾನ ಭಾರತಿಯಲ್ಲಿದ್ದಾಗ, ಇಂದಿಗೂ ಅದರ ಪರಿಸ್ಥಿತಿ ಬದಲಾಗಿಲ್ಲ, ಅದು ಬದಲಾಗುವುದು ಇಲ್ಲ. ಎರಡು ಬಣದವರು ವಿದ್ಯಾರ್ಥಿಗಳ ಮನಸ್ಸಲ್ಲಿ ಜಾತಿ ಬೀಜ ಬಿತ್ತಿ ಉಪಯೋಗಿಸುತ್ತಿದ್ದರು. ನನ್ನನ್ನು ಬಳಸಿಕೊಂಡರೆಂದರೇ ತಪ್ಪಿಲ್ಲ, ಆ ದಿನಗಳಲ್ಲಿ, ನಾನು ಅವರ ಮಾತನ್ನು ತಪ್ಪಿದರೇ ನನ್ನ ಡಿಗ್ರೀ ಹೋಗುವುದೆಂದು ಹೆದರಿಸಿದ್ದರು, ಅದು ನೇರ ಬೆದರಿಕೆಯಲ್ಲ! ಒಂದು ಬಗೆಯ ಭಾವನಾತ್ಮಕ ಬೆದರಿಕೆಗಳು,ಇನ್ನೊಂದೆಡೆ ನಮ್ಮನ್ನು ಬ್ಲಾಕ್ ಮೇಲ್ ಮಾಡುವಂತವುಗಳು. ನಮ್ಮ ಜಾತಿಯವನಾಗಿ ಹೀಗೆ ಆಡ್ತೀಯಾ ಅಂತಾ! ನಾನು ಜಾತಿ ಕಟ್ಟಿಕೊಂಡೂ ಏನಾಗ್ಬೇಕು ಸರ್ ನಮಗೆ ಎಂದರೇ, ಅಯ್ಯೋ ನಿನ್ನ ಏನ್ ಮಾತಾಡ್ತೀಯಾ ನೀನು, ಎಂದು ದೇಶದ ರಾಜಕಾರಣವನ್ನೆ ನಮ್ಮ ಕಿವಿಗೆ ತುಂಬಲು ನೋಡಿದರು. ಇನ್ನೊಂದು ಬಣದವರು ನೀವು ಜಾತಿಯತೆ ಮಾಡ್ತಿರಾ, ಜಾತಿ ಅಂತಾ ಹೋದರೇ, ನಿನ್ನ ಓದು ಏನಾಗುತ್ತೇ ಗೊತ್ತಾ ಎಂದು, ಅವರು ಹೇಳಿದ್ದನ್ನು ಕಾಗದದಲ್ಲಿ ಬರೆದುಕೊಡಿ, ಅವರ ವಿರುದ್ದ ಒಂದು ಲಿಖಿತ ದೂರು ಕೊಡಿ, ಅವರನ್ನು ನಾಳೆಯಿಂದಲೇ ಕುರ್ಚಿಯಿಂದ ಇಳಿಸೋಣವೆಂದು ಪೀಡಿಸತೊಡಗಿದರು. ನನಗಂತೂ ದಿನ ಕಳೆಯುವುದು ಆಗುತ್ತಿರಲಿಲ್ಲ, ಯಾರು ಸಿಕ್ಕರು , ಕಾಗದ ಬರೆದು ಕೊಡು, ದೂರು ಕೊಡು ಎಂದು ನನ್ನನ್ನು, ನನ್ನ ಸ್ನೇಹಿತರಿಗೂ ತಿಳಿಸು ಎಂದು ಕಾಡುವುದೇ ಆಯಿತು. ಯಾರೊಬ್ಬರೂ ಓದಿನ ಬಗೆಗೆ, ಸಮಾಜದ, ಪರಿಸರದ ಕಡೆ ಪಕ್ಷ ನಮ್ಮ ವಿದ್ಯಾರ್ಥಿಗಳ ಬಗೆಗೂ ಮಾತನಾಡುತ್ತಿರಲಿಲ್ಲ. ಕಟ್ಟ ಕಡೆಗೆ, ನನಗೇ ಬೇಸರ ಬಂದು, ಇದು ಹೀಗೆ ಮುಂದುವರೆದರೇ, ನಾನು ಕುಲಪತಿಗಳ ಬಳಿಗೆ ಹೋಗುತ್ತೇನೆ, ನನ್ನ ಈ ಕೊಳಕು ಡೀಗ್ರೀ ನೂ ಬೇಡ, ಇವರ ಸಹವಾಸನೂ ಬೇಡ, ಎಂದು ಹೇಳಿದ ವಿಷಯ ಇಬ್ಬರಿಗೂ ತಿಳಿದು, ಇಬ್ಬರೂ ನನ್ನ ಶತ್ರುಗಳಾದರು. ಈಗಲೂ ನಾನು ಓದಿದ ಆ ವಿಭಾಗಕ್ಕೆ ಹೋಗಲು ಹಿಂಜರಿಕೆ, ಮತ್ತು ಅಸಹ್ಯವಾಗುತ್ತದೆ. ಇಡೀ ವ್ಯವಸ್ಥೆಯೇ ಹೀಗಿರುವಾಗ ನಾನೊಬ್ಬ ದೂರಿದರೇ ಏನು ಲಾಭವಾದೀತು. ನಾನು ಈ ಪರಿಸ್ಥಿಯಲ್ಲಿದ್ದಾಗ ಅದನ್ನು ಬಳಸಿಕೊಂಡು ನನ್ನ ಬಗ್ಗೆ ಅಪಪ್ರಚಾರ ಮಾಡಿದ ನನ್ನ ಸ್ನೇಹಿತರ ಮಾರ್ಕ್ಸ್ ಕಾರ್ಡುಗಳಲ್ಲಿ ಮಾರ್ಕ್ಸ್ ನನಗಿಂತ ಬಹುಪಾಲು ಹೆಚ್ಚು ಪಡೆದರು. ನಾನು ಆ ಅಂಕಪಟ್ಟಿಗಳಿಂದ ಏನೂ ಲಾಭ ಪಡೆದಿಲ್ಲವೆನ್ನುವುದು ಸೋಜಿಗದ ಸಂಗತಿ.

ಇದೊಂದು ಗೊಂದಲವೋ? ದ್ವಂದ್ವವೋ ತಿಳಿದಿಲ್ಲ. ಒಮ್ಮೊಮ್ಮೆ ಗೊಂದಲವೆನಿಸಿದರೂ ಮತ್ತೊಮ್ಮೆ ಇದು ಗೊಂದಲವಲ್ಲ, ದ್ವಂದ್ವವೆನಿಸುತ್ತದೆ. ಕೇವಲ ಎರಡು ದಿಕ್ಕುಗಳಿದ್ದಾಗ, ದ್ವಂದ್ವವೆನಿಸುವುದು ಸಹಜ. ಆದರೇ, ಕತ್ತಲೆಯ ಕೋಣೆಯಲ್ಲಿ ಒಬ್ಬನೇ ಉಳಿದಾಗ, ಎಲ್ಲ ದಿಕ್ಕುಗಳು ಒಂದೇ ತೆರನಾಗಿ ಕಾಣುತ್ತದೆ. ಅಸಲಿಗೆ ಅಲ್ಲಿ, ದಿಕ್ಕುಗಳೆಂಬುದೇ ಇರುವುದಿಲ್ಲ, ಎತ್ತ ನೋಡಿದರೂ ಒಂದೇ ತೆರನಾಗಿ ಕಾಣುತ್ತದೆ, ಏನೂ ತೋಚದ, ಎಲ್ಲೋ ಕಳೆದು ಹೋದ ಭಾವನೆ ಮೂಡುತ್ತದೆ. ಬದುಕೆಂಬುದು ಕೊನೆಯ ಘಟ್ಟದಲ್ಲಿದೆ ಎನಿಸುವುದು ಒಂದು ಬಗೆಯಾದರೇ, ಜೀವನ ಮುಗಿದು ಹೋಯಿತೆಂದು, ಅಥವಾ ಜೀವನದಲ್ಲಿ ನಾನು ಮುಳುಗಿ ಹೋದೆ ಎಂಬ ಕೊರಗು ಉಂಟಾಗುತ್ತದೆ. ಇದು ಸರಿ ಅದು ತಪ್ಪು ಎಂದು ಚಿಂತಿಸುಲು ಯತ್ನಿಸುವ ಮನಸ್ಸು ಒಮ್ಮೆ ಮೂಡಿದರೂ, ಮತ್ತೊಮ್ಮೆ, ಜೀವನ ಬಂದ ಹಾಗೆ ಸ್ವೀಕರಿಸುವುದನ್ನು ಬಿಟ್ಟು ಅದನ್ನು ನಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವ ಶಕ್ತಿಯನ್ನು ಕೊಟ್ಟವಾರಾರು ಎನ್ನುವ ಪ್ರಶ್ನೆ ಮೂಡುತ್ತದೆ. ಜೀವನ ನನ್ನದು ನನ್ನ ಆಸೆಗೆ ನನ್ನ ಮನಸ್ಸಿಗೆ ತಕ್ಕಂತೆ ಯೋಚಿಸಿ ಅದನ್ನು ರೂಪಿಸಿಕೊಳ್ಳುವ ಹಕ್ಕು ನನಗಿಲ್ಲವೇ, ನನ್ನ ಬದುಕಿನ ಮೇಲೆ, ನನ್ನ ದೇಹದ ಮೇಲೆ ನನ್ನ ಹಕ್ಕು ಸಾಧಿಸುವುದನ್ನು ತಡೆಯಲು ಅನ್ಯರಿಗೆ ಹಕ್ಕನ್ನು ಕೊಟ್ಟವರಾರು? ನನ್ನಿಷ್ಟಕ್ಕೆ ತಕ್ಕಂತೆ, ಬಟ್ಟೆ ತೊಡುವುದು, ಗಡ್ಡ ಬಿಡುವುದು, ತಲೆ ಕೂದಲು ಬಾಚುವುದಕ್ಕೂ ಬಿಡುವುದಿಲ್ಲವಲ್ಲ, ನಾನು ಹೀಗೆ ಇರುತ್ತೇನೆ, ಯಾರ ಮಾತನ್ನು ಕೇಳುವುದಿಲ್ಲ. ಕೇಳುವ ಅನಿವಾರ್ಯತೆ ನನಗಿಲ್ಲವೆಂದರೂ, ಅದರಂತೆ ಹಲವು ತಿಂಗಳುಗಳು ಬದುಕಿದರೂ, ಮತ್ತದೆ ಏಕಾತನತೆ ಕಾಡುತ್ತದೆ, ಮರಳಿ ಮಣ್ಣಿಗೆಯೆಂಬಂತೆ, ಅದೇ ಹಳೆಯ ಶೈಲಿಗೆ ಹೋಗೋಣವೆನಿಸುತ್ತದೆ. ನನ್ನ ಮೇಲೆ ಹಿಡಿತ ಸಾಧಿಸಲೂ ಯಾರಾದರೂ ಹವಣಿಸಿದರೇ, ಪ್ರಯತ್ನಿಸಿದರೇ, ಅವರಿಗೆ ಸಿಗದಂತೆ, ನನ್ನನ್ನು, ನನ್ನತನವನ್ನು ಉಳಿಸಿಕೊಳ್ಳಲು ಹೋರಾಡತೊಡುಗುತ್ತದೆ. ಇದು ನಾನು, ನಾನು ಎಂದು ಬೊಬ್ಬೆ ಹೊಡೆಯುತ್ತದೆ. ಮರುಗಳಿಗೆಯಲ್ಲಿಯೇ, ಅದು ಬದಲಾಗಿ, ಜೀವನವೆಂಬುದು ಶಾಶ್ವತವಾ? ಈ ಹೋರಾಟ ಈ ಜಂಜಾಟವೆಲ್ಲಾ ಅನವಶ್ಯಕತೆಯೆನಿಸುತ್ತದೆ.

ಬಾಳೆಂಬ ಪಯಣದಲ್ಲಿ, ನಾನೊಬ್ಬ ಸಹ ಪಯಣಿಗನಾಗಿ ಪಯಣಿಸುತ್ತಿದ್ದೇನೆ, ಇದು ಮುಗಿದ ನಂತರ ನಾನು ಇಳಿದು ಹೋಗಲೇ ಬೇಕು, ನಾನು ಈಗ ಕುಳಿತಿರುವ ಸ್ಥಳ ನಿನ್ನೆ ಮತ್ತಾರೋ ಕುಳಿತದ್ದು, ನಾಳೆ ಇನ್ಯಾರಿಗೋ ಅದನ್ನು ಬಿಟ್ಟು ಹೋಗುತ್ತೇನೆ. ಅದಕ್ಕಾಗಿ ಈ ಹೋರಾಟ, ಈ ನೂಕಾಟವೇಕೆ? ಎನಿಸುತ್ತದೆ.ಆದರೂ, ಒಮ್ಮೊಮ್ಮೆ, ಈ ಜೀವನವೆಂಬುದರಲ್ಲಿ, ನಾನು ಇಲ್ಲೇ ಉಳಿದು ಹೋಗುವವನಂತೆ, ಸಾಧಿಸಿ ತೋರಬೇಕೆಂದು, ದುಡಿಮೆಗೆ, ಸಾಮಾಜಿಕ ಕಾಳಜಿಗೆ ಮುಳುಗುತ್ತೇನೆ. ನಾನು ಈ ಸಮಾಜದಿಂದ ಪಡೆದು ಮೇಲಕ್ಕೆ ಬಂದಿದ್ದೇನೆ ಅದನ್ನು ಬಡ್ಡಿ ಸಮೇತ ಹಿಂದಿರುಗಿಸಬೇಕು ನನಗೆ ಯಾರ ಹಂಗು ಬೇಡ, ಇಲ್ಲಿಂದ ನಾನು ಏನನ್ನು ಹೊತ್ತು ಹೋಗುವುದಿಲ್ಲ, ನನ್ನಿಂದ ಸಾಧ್ಯವಾದಷ್ಟನ್ನು ಇಲ್ಲಿಗೆ ನೀಡಿ ಹೋಗಬೇಕು. ಬದುಕನ್ನು ಅರ್ಥಪೂರ್ಣವಾಗಿಸಬೇಕೆಂದು ಬಯಸುತ್ತೇನೆ. ಅರ್ಥವೆಂದರೇನು? ಈ ಅರ್ಥ ನನ್ನಿಂದ ನಾನು ಮಾಡಿದ್ದು. ಅಥವಾ ನನ್ನ ಪೂರ್ವಜರು ಮಾಡಿದ್ದಿರಬೇಕು. ಅದು ಅವರ ಜೀವನಕ್ಕೆಂದು ಮಾಡಿದ್ದೇ ಹೊರತು ನಾನು ಅದನ್ನು ಪಾಲಿಸಲೇಬೇಕೆಂಬ ನಿಯಮವೇನು? ಜೀವನವೆಂಬುದು ಸ್ವಂತಿಕೆಯ, ಆಸಕ್ತಿಯ ವಿಷಯ. ಒಂದು ರೈಲಿನಲ್ಲಿ ಪಯಣಿಸುವಾಗ, ಒಬ್ಬ ಮೇಲಿನ ಹಾಸಿಗೆಯಲ್ಲಿ ಮಲಗಲು ಬಯಸುತ್ತಾನೆ, ಮತ್ತೊಬ್ಬ ಕಿಟಕಿಯ ಬದಿಯಲ್ಲಿ ಕೂರಲು ಬಯಸುತ್ತಾನೆ, ಫುಟ್ ಬೋರ್ಡ್ ಸಿಕ್ಕರೂ ಸಾಕೆಂದು ಬಯಸುವವರೂ, ಸೀಟು ಸಿಕ್ಕರೂ ಬಿಟ್ಟು ಫುಟ್ ಬೋರ್ಡ್ ಬಳಿ ನಿಲ್ಲಲು ಬಯಸುವವರು, ನಿಂತೆ ಪಯಣಿಸಲು ಹೊರಡುವವರು ಹೀಗೆ ಅವರಿಚ್ಚೆಯಂತೆ ಅವರಿಗೆ ದೊರಕಿದಂತೆ ರೂಪಿಸಿಕೊಳ್ಳುತ್ತಾರೆ. ಅಲ್ಲಿ ಕೆಲವರು ಇದು ನನ್ನದು ಎಂದು ವಾದಿಸುತ್ತಾ, ಜಗಳವಾಡುತ್ತ ಕಳೆಯುತ್ತಾರೆ. ಹಾಗಿರುವಾಗ ನಾನೇಕೆ, ಯಾರೋ ಎಂದೋ ಬರೆದು ಹೋದ ಜೀವನ ಪದ್ದತಿಯನ್ನು ಅನುಕರಿಸಬೇಕೆನಿಸುತ್ತದೆ. ನಾನು ನಿನ್ನೆಯ ಬಗ್ಗೆ ಅಥವಾ ಕಳೆದು ಹೋದ ದಿನಗಳ ಬಗ್ಗೆ, ನನ್ನ ಬದುಕಿನಲ್ಲಿ ಬಂದು ಹೋದ ಪಾತ್ರಗಳ ಬಗ್ಗೆ ಚಿಂತಿಸುವುದನ್ನು ಮರೆತಿದ್ದೇನೆ. ಬಿಡದೇ ಕಾಡುವ ನೆನಪುಗಳು ಬಹಳ ಕಡಿಮೆಯೆಂದರೂ ತಪ್ಪಿಲ್ಲ.

ನಾನು ಇಂದಿನ ಈ ದಿನದ ಬಗ್ಗೆ ಇದನ್ನು ಸದುಪಯೋಗಿಸಿಕೊಳ್ಳುವುದರ ಬಗ್ಗೆ ಹೆಚ್ಚಿನ ಗಮನವಹಿಸುತ್ತೇನೆ. ಇಳಿದು ಹೋದ ನನ್ನ ಸಹ ಪಯಣಿಗನನ್ನು ಕಾಯುವುದನ್ನು ನಿಲ್ಲಿಸಿದ್ದೇನೆ. ಅವನ ಪಾತ್ರ ಮುಗಿಯುತು. ನಾನಾಗೆ ಅವನನ್ನು ಇಳಿಸಲಿಲ್ಲ. ಅವನಿಗೆ ಬೇಸರ ಬಂದು ಹೋದಳೋ ಅಥವಾ ನನ್ನ ಸಂಗಡ ಸಿಗದ ಆಂತರಿಕ ಸಂತೋಷವನ್ನು ಬೇರೆಡೆ ಹುಡುಕಿ ಹೋದಳೋ ಹೋದರೇ ಹೋಗಲಿ, ಹೋದದ್ದು ಆಯಿತು ಮತ್ತೆ ಅವಳು ನನ್ನ ಬಾಳಲ್ಲಿ ಬರಲಿ ಎಂಬ ಬಯಕೆ ಎನಗಿಲ್ಲ. ಬಂದರೂ ಅವಳಿಗೆ ಕೊಟ್ಟ ಸ್ಥಾನವನ್ನು ಮತ್ತೆ ಕೊಡುತ್ತೇನೆಂದು ಭರವಸೆ ಕೊಡಲಾರೆ. ನಾನು ನಿನಗಿಂತ ಬಹಳ ದೂರಕ್ಕೆ ಸಾಗಿದ್ದೇನೆ. ನೀನು ಬಯಸುವ ಆ ಮಧುರ ದಿನಗಳು ನನಗಿಲ್ಲ. ಹಾಗೆಂದು ಈಗ ನಡೆಯುತ್ತಿರುವ ದಿನಗಳು ಅಪ್ರಿಯವೆನಿಸುವುದಿಲ್ಲ. ನನ್ನ ಜೊತೆಯಲ್ಲಿ ಇನ್ನೂ ಹಲವಾರು ಸಹಪಯಣಿಗರು ಇದ್ದಾರೆ ಅವರಿಗೆ, ಅವರಿಂದ ನನಗೆ ಸಿಗುತ್ತಿರುವ ಸಂತೋಷ ಸಾಕು. ನೀನು ಬಿಟ್ಟು ಹೋದಾಗ ನನ್ನ ಬಾಳಿಗೆ ಆಗಮಿಸಿದ, ಅಥವಾ ನೀನು ಕುಳಿತಿದ್ದ ಸ್ಥಳದಲ್ಲಿ ಈಗ ಕುಳಿತಿರುವವರನ್ನು ನಾನು ಎದ್ದೇಳಿ ಎನ್ನಲಾರೆ. ನಿನಗೆ ನಿನ್ನ ಜೀವನದ ಆಯ್ಕೆಗಳು ಮುಖ್ಯವಾಗುವಂತೆ ನನಗೂ ಮುಖ್ಯವಾಗುತ್ತವೆ. ಪ್ರೀತಿ ಪ್ರೇಮ, ಸ್ನೇಹ ಸಂಭಂಧಗಳು ಶಾಶ್ವತವೆಂದೂ ಸಾವಿರ ಸಾವಿರ ಹೇಳಬಹುದು, ನನಗೆ ಎರಡು ಕಡೆಯಿಂದ ಒಂದೇ ಮಟ್ಟದಲ್ಲಿ ತಲ್ಲೀನತೆಯಿದ್ದರೇ ಮಾತ್ರ ಅಲ್ಲಿ ಒಂದು ಗಮ್ಯತೆ ಮೂಡುತ್ತದೆ. ನಾನು ಮಾತನಾಡುವ ಮಾತಿಗೆ ಬೆಲೆ ಬರುವುದು ಕೇಳುಗರಿದ್ದರೇ ಮಾತ್ರ, ಕೇಳುಗರು ನಿದ್ದೆ ಹೋದರೂ ನಾನು ಮಾತನಾಡುತ್ತಿದ್ದರೇ, ಅದು ಕೇವಲ ರಾಜಕಾರಣಿಗಳ ಬುಡುಬುಡುಕೆ ಮಾತುಗಳಾಗುತ್ತವೆ.

ಆದರೂ ನನಗೆ ಅರಿಯದಂತೆ ನನ್ನೊಳಗೆ ಬಂದು ನನ್ನನ್ನು ಹೊಸ ಜಗತ್ತಿಗೆ ಕರೆದೊಯ್ದವಳೆಂದರೇ ನಿಸರ್ಗ. ಅವಳ ಮೋಹಕ್ಕೆ ಸಿಳುಕಿದೆನೆಂದರೇ, ಅವಳು ಉಬ್ಬಿ ಹೋದಾಳು! ಇಲ್ಲವೆಂದರೇ, ನನಗೆ ನಾನೇ ಮೋಸ ಮಾಡಿಕೊಂಡಂತಾಗುತ್ತದೆ. ಜೀವನದಲ್ಲಿ ಅವನಿಲ್ಲದಿದ್ದರೇ, ಅವಳಿಲ್ಲದಿದ್ದರೇ ಎಂದು ಎಲ್ಲರೂ ಹೇಳುವಂತೆ, ಹುಟ್ಟಿನಿಂದಲೇ ಬೆಳೆದು ಬಂದ ನಿಸರ್ಗದೆಡೆಗಿನ ಮೋಹ ನನ್ನನ್ನು ಬದಲಾಯಿಸಿತೆಂದರೂ ತಪ್ಪಲ್ಲ. ಪ್ರತಿ ಬಾರಿಯೂ ನಾನು ನನ್ನಯ ಬಗ್ಗೆ ಬರೆಯುತ್ತಲೇ ಇದ್ದೇನೆ, ಆದರೇ ಒಮ್ಮೆಯೂ ನಿನ್ನಯ ಬಗ್ಗೆ ಬರೆದಿರಲಿಲ್ಲ, ನನ್ನ ಬರವಣಿಗೆಗಗಳಲ್ಲಿ ಆಗೊಮ್ಮೆ ಈಗೊಮ್ಮೆ ಬಂದ ಹೋದರೂ, ಸಂಪೂರ್ಣವಾಗಿ ಬರೆದಿರಲಿಲ್ಲ, ಮೊದಲ ಬಾರಿಗೆಂಬಂತೆ ನಿನ್ನಯ ಬಗ್ಗೆಯೇ ಬರೆಯುತ್ತೇನೆ. ನಾನು ಬರೆಯುತ್ತೇನೆ, ಎನ್ನುವುದಕ್ಕಿಂತ ನೀನು ಬರೆಸಿಕೊಳ್ಳುತ್ತಿದ್ದೀಯಾ ಎಂದರೇ ತಪ್ಪಲ್ಲ. ನನ್ನ ಬರವಣಿಗೆಗಳು ಮೊದಲು ಶುರುವಾದದ್ದು ನಿನ್ನಯ ಬಗೆಗಿನ ನನ್ನ ಪ್ರೇಮವನ್ನು ಪ್ರಕಟಿಸುವುದಕ್ಕೆಂಬುದು ನಿನಗೆ ತಿಳಿದಿದೆ. ಆದರೇ, ನಂತರ ನಾನು ನಿನಗೆ ಬೇಡವೆನಿಸಿದರೂ ಬೇಡದ ಹತ್ತು ಹಲವು ವಿಷಯಗಳನ್ನು ಅರೆಬೆಂದ ಮಡಿಕೆಯಂತೆ ಅರ್ಧ ಬರೆದು ನಿಲ್ಲಿಸಿದೆ. ನೀನು ಯಾರು? ನಿನಗೊಂದು ಹೆಸರಿಡಲೇ, ನಾ ಇಟ್ಟ ಹೆಸರು ನಿನಗೆ ಮೆಚ್ಚುಗೆಯಾದಿತೇ? ನನಗೆ ಅದು ತಿಳಿಯುವುದಿಲ್ಲ.

ನಾನು ನಿನ್ನ ಸಂಪೂರ್ಣ ಗುಣಗಾನ ಮಾಡಲಾರೆ, ನೀನು ನನ್ನ ಬದುಕಲ್ಲಿ ಬಂದು, ನನ್ನಲ್ಲಾದ ಬದಲಾವಣೆಯ ಒಂದು ಮುಖವನ್ನು ತೋರಿಸುವ ಪ್ರಯತ್ನ ಮಾಡುತ್ತೇನೆ. ತಪ್ಪಿದ್ದರೇ, ಮುನಿಸಿ ನನ್ನಿಂದ ದೂರಾಗಬೇಡ. ಖುಷಿಯಾದರೇ, ಅಪ್ಪಿ ಮುದ್ದಾಡಲೂ ಬೇಡ ಸಂತೋಷ ತಡೆಯಾರದೇ ಎದೆ ಒಡೆದು ಸತ್ತರೂ ಸತ್ತೆ ನಾನು. ನೀನು ನನ್ನ ಬಾಳಿಗೆ ಬಂದಾಗ ನನ್ನ ಬಾಳು ಬರುಡಾಗಿತ್ತು. ಆದ್ದರಿಂದಲೇ, ನನಗೆ ನೀನು ಮೆಚ್ಚುಗೆಯಾದದ್ದು. ದಿನ ನಿತ್ಯ ಕುಡಿದು ಬದುಕಿ, ಹತ್ತಾರು ಸಿಗರೇಟು ಸೇದಿ ಕೆಮ್ಮಿ ಸಾಯುತ್ತಿದ್ದವನನ್ನು ಸಿಗರೇಟಿನಿಂದು ದೂರ ಮಾಡಿ ಸಾಧಿಸಿದ ಶಕ್ತಿ ನಿನ್ನದು. ಕುಡಿತವೆಂಬುದು ನನ್ನ ಮನೆಯ ದೇವರೆಂದು ನಂಬಿ ಅದರಂತೆ ದಿನ ಸಂಜೆ ಆರು ಗಂಟೆಯಾಗುವುದನ್ನೇ ಕಾಯುತ್ತಿದ್ದವನೂ ಕೂಡ ಕುಡಿತದಿಂದ ದೂರಾಗುವಂತೆ ಮಾಡಿದ್ದು ನಿನ್ನ ಮಹಿಮೆಯೇ ಸರಿ. ಜೀವನ ಪರ್ಯಂತ ಅದನ್ನು ಬಿಡದಿದ್ದರೂ ಪ್ರಾಮಾಣಿಕವಾಗಿ ಕೆಲವು ತಿಂಗಳುಗಳ ಮಟ್ಟಿಗೆ ನಾನು ಬಿಟ್ಟದ್ದು ಸತ್ಯ.

ಮೂಗಿನ ಮೇಲೆ ಕೋಪ ತರಿಸಿಕೊಂಡು ರೇಗುತಿದ್ದವನನ್ನು ನಿನ್ನನ್ನು ಕಂಡಾಗ ನಿನ್ನೊಡನೆ ಮಾತನಾಡುವಾಗ ಅದೆಷ್ಟೂ ತಲ್ಲೀನನಾಗುತ್ತೇನೆಂದರೇ ನನಗೆ ಅಚ್ಚರಿ.ಆದರೂ ನಿನ್ನಿಂದ ನಾನು ದೂರಾಗಿ ಉಳಿದಿದ್ದು ಮತ್ತೊಮ್ಮೆ ಬಂದಾಗ ನನ್ನಲ್ಲಿ ಏನೇನೂ ಬದಲಾವಣೆ ಆಗದಿದ್ದರೂ ನಿನ್ನಲ್ಲಾದ ಬದಲಾವಣೆಗೆ ನಾನು ತತ್ತರಿಸಿ ಹೋಗಿದ್ದೆ. ನೀನು ನನಗೆ ಕೊಟ್ಟ ವಿವರಣೆ ಸರಿಯಿತ್ತಾದರೂ, ಅದರಿಂದ ನನಗೆ ಸಮಾಧಾನಕ್ಕಿಂತ ಆದ ನೋವೇ ಹೆಚ್ಚು. ನಮ್ಮ ಜೀವನವೆಂಬುದು ಒಂದು ಗಡಿಯಾರವೆಂದುಕೊಂಡರೇ, ನಾನೆಂಬುದು ದೊಡ್ಡ ಮುಳ್ಳು (ಗಂಟೆ), ನಮ್ಮ ಜೀವನದಲ್ಲಿ ಬರುವ ಜನರು ಅಲ್ಲಿರುವ ನಿಮಿಷದ, ಅಥವಾ ಸೆಕೆಂಡು ಮುಳ್ಳುಗಳಂತೆ. ನಮ್ಮ ಜೀವನದ ಗಂಟೆ ಬದಲಾಗುವುದಕ್ಕೆ ಒಂದು ಗಂಟೆ ಹಿಡಿದರೇ ಅವರ ಜೀವನ ನಮಗಿಂತ ೬೦ ರಷ್ಟೂ ಹೆಚ್ಚು ಬದಲಾಗಿರುತ್ತದೆ, ಕೆಲವರದ್ದು ೩೬೦ ಬಾರಿಯಷ್ಟು ಮುಂದಕ್ಕೆ ಹೋಗಿರುತ್ತದೆ. ಅದಕ್ಕಾಗಿಯೇ, ನಮ್ಮ ಜೀವನದಲ್ಲಿ ಹೈಸ್ಕೂಲ್ ಸಮಯದಲ್ಲಿ ಬಂದು ಹೋದ, ಅಥವಾ ಕಳೆದು ಹೋದ ಗೆಳತಿಯನ್ನು ಹಲವಾರು ವರ್ಷ ಕಳೆದ ಮೇಲೂ ಅದೇ ದೃಷ್ಟಿಯಂತೆ ನೋಡಲು ಬಯಸುತ್ತದೆ ನಮ್ಮ ಮನಸ್ಸು, ಆದರೇ ಅವರ ಮಕ್ಕಳು ಈ ವೇಳೆಗೆ ಹೈಸ್ಕೂಲ್ ಓದುತ್ತಿರುತ್ತಾರೆ. ನಮ್ಮ ಹಳೆಯ ನೆನಪುಗಳು ಅವರ ಸ್ಮೃತಿಪಟಲದಲ್ಲಿ ಮಂಕಾಗಿರುತ್ತವೆ, ಕೆಲವೊಮ್ಮೆ ಅಳಿಸಿಹೋಗಿದ್ದರೂ ಆಶ್ಚರ್ಯವಿಲ್ಲ.

ನಾನು ನಮ್ಮೂರಿನ ಕಟ್ಟೆಯ ಮೇಲೆ ನನ್ನ ಶಾಲೆಯ ದಿನಗಳಲ್ಲಿ ಕುಳಿತು ನೋಡುತ್ತಿದ್ದ ನದಿಗೂ ಇಂದೂ ಕುಳಿತು ನೋಡುವ ನದಿಗೂ ಸಾಕಷ್ಟು ವ್ಯತ್ಯಾಸವಾಗಿದೆ. ನನ್ನ ಮನಸ್ಸು ಇನ್ನೂ ನನ್ನ ಐದನೇ ತರಗತಿಯಲ್ಲಿ ಕುಣಿದು, ಮರಳಲ್ಲಿ ಮಲಗಿ ಮೈಗೆಲ್ಲಾ ಮರಳನ್ನು ಮೆತ್ತಿಸಿಕೊಂಡು ಮತ್ತೆ ನದಿ ನೀರಿಗೆ ಬೀಳಲು ಬಯಸುತ್ತದೆ. ಆದರೇ ನದಿ ಅದಕ್ಕೆ ಅವಕಾಶಕೊಡುವುದಿಲ್ಲ. ನನ್ನ ಆ ವಯಸ್ಸಿನ ಅಂದರೇ ಇಂದಿನ ಐದನೇ ವಯಸ್ಸಿನ ಹುಡುಗರು ನನ್ನ ಸ್ಥಾನವನ್ನು ವಹಿಸಿದ್ದಾರೆ. ಇದು ನಮ್ಮದು ನೀನು ವಯಸ್ಸಾದವನು ನಮ್ಮಿಂದ ದೂರವಿರು ಎಂದು ದೂಡುತ್ತಾರೆ.ನಾನು ಅವರ ಆಟಗಳನ್ನು ನೋಡುತ್ತಾ ಅಲ್ಲೇ ಮರಳಿನ ದಿಂಡಿನ ಮೇಲೆ ಕುಳಿತರೇ, ನಾನು ಅವರ ಮನೆಯವರಿಗೆ ಹೋಗಿ ಚಾಡಿ ಹೇಳುತ್ತೇನೆಂದು ಅನುಮಾನಿಸಿ ನೋಡುತ್ತಾರೆ. ಇವೆಲ್ಲವೂ ಗೊಂದಲಮಯವೇ ಸರಿ. ನಾನು ನಿನ್ನನ್ನು ಬಯಸಿ ಮರಳಿ ಮರಳಿ ನಿನ್ನಲ್ಲಿಗೆ ಬರಲು ಇಚ್ಚಿಸುತ್ತೇನೆ ಆದರೇ ನೀನು ನನ್ನುನ್ನು ದೂಡಲು ಪ್ರಯತ್ನಿಸುತ್ತೀಯಾ? ನಿಸರ್ಗವೆಂದರೇ ಇದೇನಾ?

ನೀನು ನನಗೆ ಬೇಕಿರುವುದೆಲ್ಲವನ್ನು ಕೊಟ್ಟೆ, ನೀನು ಕೊಟ್ಟೆ ಎನ್ನುವುದಕ್ಕಿಂದ ನಾನು ಬಳಸಿಕೊಂಡೆ, ಬಳಸಿಕೊಳ್ಳುವುದಕ್ಕಿಂತ ಬಸಿದುಕೊಂಡೆ. ನನ್ನ ಈ ಎಲ್ಲ ಬದಲಾವಣೆಗಳನ್ನು ಅಥವಾ ಜೀವನದ ಎಲ್ಲ ಆಗೂ ಹೋಗುಗಳನ್ನು ಬದಲಾವಣೆ, ಪರಿವರ್ತನೆ, ಎಂದು ವಿಭಿನ್ನಾ ಹೆಸರುಗಳನ್ನು ಕೊಟ್ಟವರಿದ್ದಾರೆ. ನನಗೆ ಅವೆಲ್ಲಾ ಅಷ್ಟು ಸಮಂಜಸವೆನಿಸುವುದಿಲ್ಲ. ಜೀವನದ ಪ್ರತಿಯೊಂದು ಹಂತದಲ್ಲಿಯೂ ಅದಕ್ಕೆ ತಕ್ಕಂತೆ ಆಟವಾಡುತ್ತೇವೆ, ಅದನ್ನು ಬೆಳವಣಿಗೆಯೆನ್ನಲು ಹೇಗೆ ಸಾಧ್ಯವೆನ್ನುವುದು ನನ್ನ ಪ್ರಶ್ನೆ. ಚಿಕ್ಕವನಿದ್ದಾಗ ಆಡುತ್ತಿದ್ದ ಆಟಗಳಲ್ಲಿ, ಮರಕೋತಿ, ಕಬ್ಬಡ್ಡಿ, ಮರಳಲ್ಲಿ ಮನೆ ಕಟ್ಟುವುದು, ಇವೆಲ್ಲಾ ಇಂದು ನಾನು ಆಡಲೂ ಹೋದರೇ ನನಗಿಂತ ಇಪ್ಪತ್ತು ವರ್ಷ ಚಿಕ್ಕ ಮಕ್ಕಳ ಜೊತೆಯಲ್ಲಿ ನಾನು ಸೋತು ಮುಖ ಊದಿಸಿಕೊಂಡು ಬರಬೇಕಾದೀತು. ಅದರಂತೆಯೇ, ನಾನು ನನಗಿಂತ ಬಹಳ ಚಿಕ್ಕವಯಸ್ಸಿನ ಕಿರಿಯವರನ್ನು ಇಪ್ಪತ್ತರ ಮಗ್ಗಿ ಹೇಳು ಎಂದು ಪೀಡಿಸಿ ನಿನಗೆ ಅಷ್ಟೂ ತಿಳಿಯುವುದಿಲ್ಲವೇ ಎಂದರೇ ಮುಟ್ಠಾಳತನದ ಪರಮಾವಧಿ ಎನಿಸುವುದು. ಅವರವರ ಪಾತ್ರಗಳನ್ನು ಅವರವರು ಆ ಸನ್ನಿವೇಶಕ್ಕೆ ತಕ್ಕಂತೆ ಆಡಿ ಹೋಗಬೇಕು, ಯಾರನ್ನೋ ಅನುಕರಣೆ ಮಾಡಲೂ ಹೋಗಿ ಹಾಗೆ ಆಗದಿದ್ದಾಗ ನೊಂದು ಸಾಯುವುದು ಅಷ್ಟು ಹಿತವಲ್ಲ.. ನಿಮ್ಮ ಜೀವನ ನಿಮ್ಮ ಅನಿಸಿಕೆ ನಿಮಗೆ ಬಿಟ್ಟದ್ದು ಇದು ನನ್ನೊಳಗೆ ಕೊರೆಯುತ್ತಿದ್ದ ಕೆಲವು ಹುಳುಗಳು...ಇದನ್ನು ಕುರಿತು ಮತ್ತೇ ಚರ್ಚೆ ಮಾಡಲು ಬರಬೇಡಿ....


15 ಜುಲೈ 2009

ನನ್ನೊಳಗೆ ಅವಿತು ಹೋಗುವ ಮುನ್ನ ನಿಮ್ಮ ಮಡಿಲಿಗೆ!!!!-3


ದೊಡ್ಡೆಗೌಡರ ತಂದೆಗೆ ಮೂವರು ಮಡದಿಯರು, ರಸಿಕತೆಯಿಂದ ಮದುವೆಯಾಗದಿದ್ದರೂ, ಅದೇಕೋ ಮದುವೆಯಾಗಿದ್ದರು. ಮದುವೆಯಾದ ಮೇಲೆ ಅದಕೊಂದು ಅರ್ಥಕೊಡುವುದಕ್ಕಾಗಿಯೇ ಮೊದಲನೆಯ ಹೆಂಡತಿಗೆ ಒಂಬತ್ತು ಹೆಣ್ಣು ಮಕ್ಕಳು, ಎರಡನೆಯವರಿಗೆ ೪ ಗಂಡುಮಕ್ಕಳು, ೩ ಹೆಣ್ಣುಮಕ್ಕಳು, ಮತ್ತು ಮೂರನೆ ಮುದ್ದಿನ ಹೆಂಡತಿಗೆ ೫ ಜನ ಗಂಡುಮಕ್ಕಳು ಜನಿಸಿದ್ದವು. ಮೂರನೆ ಹೆಂಡತಿಯ ಮೊದಲ ಮಗನೇ ದೊಡ್ಡೇಗೌಡ. ಒಟ್ಟೂ ಇಪ್ಪತ್ತೊಂದು ಮಕ್ಕಳ ತಂದೆ ಎನಿಸಿಕೊಂಡ, ಚೆಲುವೇಗೌಡ ಹೇಳಿಕೊಳ್ಳುವಷ್ಟೂ ಆಗರ್ಭನೇನೂ ಅಲ್ಲ. ಒಟ್ಟು ೫೦ಎಕರೆಯಷ್ಟೂ ಜಮೀನಿದ್ದರೂ, ಅದರ ಬಗ್ಗೆ ಅವರೆಂದು ತಲೆ ಹಾಕಲಿಲ್ಲ. ಊರು ಸುತ್ತುವುದು, ದನಗಳ ಸಂತೆ, ಜಾತ್ರೆ, ಇವುಗಳಲ್ಲಿಯೇ ಅವರ ಜೀವನ ಮುಗಿದಿತ್ತು. ಮನೆಯಲ್ಲಿ ಅದು ಬಡತನವೋ ಅಥವಾ ಜೀವನವೇ ಅದೋ ಎಂಬುದರ ಗೋಜಿಗೆ ಹೋಗಲಿಲ್ಲ. ಹೆಣ್ಣು ಮಕ್ಕಳೆಲ್ಲಾ ಬಹುಬೇಗ ಮದುವೆಯಾದರು, ಗಂಡು ಮಕ್ಕಳು ಭೂತಾಯಿಯನ್ನು ನಂಬಿ ಗೇಯ್ಯಲು ನಿಂತರು. ದೊಡ್ಡೇಗೌಡರಿಗೆ ಚಿಕ್ಕಂದಿನಿಂದಲೂ ಸಂಸಾರ ತಾಪತ್ರಯಗಳ ಬಗ್ಗೆ ಅಷ್ಟು ಆಸಕ್ತಿಯಿರಲಿಲ್ಲ. ಅವರಿಗೆ ಅಪ್ಪನಂತೆಯೇ ಊರು ಸುತ್ತಾಡುವುದು ಮೈಗೂಡಿದಂತಿತ್ತು. ಚಿಕ್ಕವರಿರುವಾಗ,ಕೋಳಿ ಕೂಗುವ ಮುನ್ನ ಮನೆ ಬಿಟ್ಟರೇ, ಮರಳಿ ಮನೆ ಸೇರುತಿದ್ದದ್ದು, ಸೂರ್ಯ ಮುಳುಗಿದ ಮೇಲೆ. ಭಯವೆಂಬುದು ಅವರ ಜನ್ಮಕ್ಕೆ ಒಗ್ಗಿರಲಿಲ್ಲ.

ಊರಿನ ಸುತ್ತಾ ಮುತ್ತಾ ಇಂದಿನಂತಿರಲಿಲ್ಲ, ಇಡೀ ಊರಿನಲ್ಲಿದ್ದದ್ದು, ೧೨ ಮನೆಗಳು ಮಾತ್ರ. ಆದರೂ ಜನಸಂಖ್ಯೆ ಮೂನ್ನೂರರಷ್ಟಿತ್ತು. ಒಂದೊಂದು ಮನೆಯಲ್ಲಿಯೂ, ಸರಾಸರಿ ಮೂವತ್ತು ಜನರಿದ್ದರು. ಊರೆಂಬುದು ಕಾಡಿನಿಂದ ಹೊರತಾಗಿರಲಿಲ್ಲ. ಊರು ಕಾಡು ಒಂದೆ ಎನ್ನುವುದಕ್ಕಿಂತ ಕಾಡಿನೊಳಗೆ ಮನೆಗಳಿದ್ದವು. ಮನೆಯ ಹಿಂದಿನ ಹಿತ್ತಲಿನಲ್ಲಿ ರಾತ್ರಿಯಲ್ಲಿ ಕಾಡು ಹಂದಿಗಳು ನುಗ್ಗುತ್ತಿದ್ದವು. ಕಾಡಿನಲ್ಲಿ, ಅನೇಕ ಕಾಡುಮೃಗಗಳಿರುತ್ತಿದ್ದವು. ಅಂದೂ ಇವುಗಳನ್ನು ಪ್ರಾಣಿಗಳು ಎನ್ನುತ್ತಿದ್ದರೂ, ಕಾಲ ಬದಲಾದಂತೆ ಮೃಗಗಳೆಂದು ಕರೆಯಲಾದವು. ಪ್ರಾಣಿಸಂಗ್ರಹಾಲಯವೆನ್ನುವ ಪದ ಕೊಡುವ ಮುದವನ್ನು ಮೃಗಾಲಯವೆನ್ನುವ ಪದ ಕೊಡಲಾರದು. ಕರಡಿ, ಚಿರತೆ, ಜಿಂಕೆ, ಆನೆ, ಹೀಗೆ ಹತ್ತು ಹಲವು ಪ್ರಾಣಿಗಳು ಆ ಕಾಡಿನಲ್ಲಿದ್ದವು. ಬೇಟೆಯೆಂದರೇ, ಮಲೆನಾಡಿನಂತೆ ಕೋವಿ ಹಿಡಿದು ಹೋಗುತ್ತಿರಲಿಲ್ಲ. ಬಲೆ ಹಾಕಿ, ಮೊಲ, ಜಿಂಕೆ, ಸಾರಗ ಹಿಡಿಯುವುದು, ಭರ್ಜಿ, ಈಟಿಯಿಂದ ಕೊಲ್ಲುವುದು. ಜೇನು ಬಸಿಯುವುದು ಸಾಮಾನ್ಯದವುಗಳು. ಅಷ್ಟೆಲ್ಲಾ ಪ್ರಾಣಿಗಳಿದ್ದು, ಅವುಗಳ ಹಾವಳಿ ತಿಳಿದಿದ್ದರೂ ಆ ಊರಿನಲ್ಲಿ ಒಂದೇ ಒಂದು ಕೆಟ್ಟ ಸಂಗತಿಗಳು ನಡೆಯುತ್ತಿರಲಿಲ್ಲ. ಅದಕ್ಕೆ ದೊಡ್ಡೇಗೌಡರ ಉತ್ತರವೇ ಬೇರೆ, ಆ ದಿನಗಳಲ್ಲಿ ಕಾಡು ಪ್ರಾಣಿಗಳಿಗೆ ಸಿಕ್ಕಿ ಸತ್ತವರ ಸುದ್ದಿಗಳು ಬಹಳ ಕಡಿಮೆಯಿರುತ್ತಿದ್ದವು, ಯಾಕೆಂದರೇ, ಅಂದು ಇಂದಿನಂತೆ ಅವುಗಳಿಗೆ ಮನುಷ್ಯನನ್ನು ತಿನ್ನಲೇಬೇಕೆಂಬ ದುರ್ದು ಇರಲಿಲ್ಲ. ಅಲ್ಲಿಯೇ ಸಾಕಷ್ಟು ಆಹಾರ ಸಿಗುತ್ತಿತ್ತು. ಇಲ್ಲದಿದ್ದರೇ, ಕಾಡಿನಲ್ಲಿ ಶತಮಾನಗಳಿಂದಲೂ ಮನುಷ್ಯರು ಬದುಕಲೂ ಬಂದೀತೆ? ನಾಗರಹೊಳೆ, ಬಂಡಿಪುರದಲ್ಲಿ ಇಂದಿಗೂ ಕಾಡು ಜನರು ಇದ್ದಾರೆಂದು ಹೇಳುತ್ತಾರೆ. ನಮ್ಮ ಹಾಸನ ಜಿಲ್ಲಾ ಗಡಿಯಲ್ಲಿನಲ್ಲಿದ್ದ ಮಲೆಕುಡಿ ಜನಾಂಗ ಈಗ ನಶಿಸಿಹೋಗಿದೆ. ಪ್ರಾಣಿ ಮತ್ತು ಮನುಷ್ಯರಿಬ್ಬರೂ ಸಮಾನರೆಂಬುದನ್ನು ಅವುಗಳು ಅರಿತಿದ್ದವು. ಇಲ್ಲದಿದ್ದರೇ, ದೇವರ ವಾಹನಗಳಾಗಿ ಪ್ರಾಣಿಗಳು ಬರುತ್ತಿದ್ದವೆ? ಚಾಮುಂಡೇಶ್ವರಿಯ ವಾಹನವಾಗಿ ಹುಲಿಯೇ ಬರಬೇಕೆಂದರೇ? ಇವೆಲ್ಲಾ ಆ ದೈವ ನಿಯಮ.

ಹೀಗೆ ಗೌಡರ ಮನಸ್ಸು ವಿಕಾಸನಗೊಳ್ಳುವುದಕ್ಕೆ ಪರಿಸರದೊಂದಿಗಿನ ಅವರ ನಿಕಟ ಸಂಬಂಧವೇ ಕಾರಣವೆಂದರೂ, ಗೌಡರು ಮಾತ್ರ ನಾನು ಏನನ್ನೋ ಹುಡುಕುತ್ತಾ ಹೋದೆ ಅದು ಸಿಗಲೇ ಇಲ್ಲವೆನ್ನುತ್ತಾರೆ. ಅವರು ಮುಂಜಾನೆ ಮುಸುಕಿನಲ್ಲೇ ಎದ್ದು ಹೊರಡುತಿದ್ದರು. ಹಳ್ಳಿ ಮುಸುಕಿಗೆ ಎದ್ದು, ಗಂಡಸರು ದನಗಳನ್ನು ಹಟ್ಟಿಯಿಂದ ಹೊರಕ್ಕೆ ಕಟ್ಟಿಹಾಕಿ, ಎತ್ತುಗಳನ್ನು ಉಳುವುದಕ್ಕೆಂದು ಹೊಲಗಳಿಗೆ ಹೋಗುತ್ತಿದ್ದರು. ಮನೆಯಲ್ಲಿನ ಹೆಂಗಸರು ಎದ್ದು ಕೊಟ್ಟಿಗೆಗಳಿಗೆ ಹೋಗಿ ಹಾಲು ಕರೆದು ಬಂದು, ಕೊಟ್ಟಿಗೆ ಶುಚಿಮಾಡಿದ ನಂತರ ಮನೆ ಮುಂದಿನ ಬೀದಿಯನ್ನು ಗುಡಿಸಿ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ತಿಪ್ಪೆಗೆ ಹಾಕಿ ಬರುತ್ತಿದ್ದರು. ಆಗ, ಹಾಲು ಮಾರುವುದಾಗಲೀ, ಕೊಳ್ಳುವುದಾಗಲೀ ಇರಲೇ ಇಲ್ಲ. ಎಷ್ಟು ಕರೆಯುವ ಹಸು ಎಮ್ಮೆಗಳು ಇದ್ದರೂ ಅವುಗಳು ಮನೆಯಲ್ಲಿರುವು ಮಕ್ಕಳ ಬಾಣಂತದಲ್ಲಿಯೇ ಮುಗಿಯುತ್ತಿದ್ದವು.

ದೊಡ್ಡೆಗೌಡರೂ, ಹುಡುಗನಾಗಿದ್ದಾಗ, ಮುಸುಕಿಗೆ ಎದ್ದು, ನಿನ್ನೆ ರಾತ್ರಿ ಬಿಟ್ಟಿದ್ದ ಬಲೆಯಲ್ಲಿ ಮೀನು ಹೆಚ್ಚಾಗಿ ಬಿದ್ದಿದ್ದರೇ, ಅವುಗಳನ್ನು ಅಲ್ಲೇ ಹತ್ತಿರದ ಅವರ ಮೆಣಸಿನ ಹೊಲದಲ್ಲಿ ಹಾಕಿ ಒಂದೆರಡನ್ನು ತನ್ನೊಂದಿಗೆ ತೆಗೆದುಕೊಂಡು ಅವಗಳ ಸಿಪ್ಪೆ ಎರೆದು ಕಾಡಿನೊಳಗಿನಿಂದ ಬೆಟ್ಟ ಹತ್ತುತ್ತಿದ್ದರು.ಅಲ್ಲಿ ಬೆಂಕಿ ಹಚ್ಚಿ ಮೀನುಗಳನ್ನು ಸುಟ್ಟು ತಿಂದು ಬಲೆ ಬೀಸಿದ ಜಾಗದಲ್ಲಿ, ಮೊಲ ಸಿಕ್ಕರೇ ಹಿಡಿದು ತಿಂದು, ಕಾಡು ಇಲಿಗಳನ್ನು ಹಿಡಿಯಲು ನೋಡುತಿದ್ದರು. ಕೆಲವೊಮ್ಮೆ ಕಡ್ಡಿ ಜೇನು, ಸಿಗುತ್ತಿತ್ತು. ಹೆಜ್ಜೇನು ಕಸಿಯಲು ಪ್ರಯತ್ನಿಸಿದ್ದರೂ, ಅದು ಅವರಿಂದ ಆಗುವುದಿಲ್ಲವೆಂದು ಸುಮ್ಮನಿರುತ್ತಿದ್ದರು. ಆದರೇ, ಅವರಿಗೆ ಸುಮಾರು, ೯ ವರ್ಷದವರಿರುವಾಗಲೇ ಆಗಿನ್ನು ಕಂಬಳಿಯ ನದಿಗೆ ಕಟ್ಟೆ ಕಟ್ಟಿರಲಿಲ್ಲ. ನದಿಯಲ್ಲಿ ದೊಡ್ಡ ಬಾಳೆ ಮೀನು ಸುಮಾರು ೬ಕೆ.ಜಿ. ಬರುತಿತ್ತು ಅಂಥಹದ್ದನ್ನು ಒಂದು ಸಣ್ಣ ಬಲೆಯಿಂದ ಹಿಡಿದು ತಂದಿದ್ದರು. ಅದನ್ನು ನೋಡಿದ ಊರಿನ ಜನ ಅವರನ್ನು ಅನುಮಾನದಿಂದ ಗೌರವ ಕೌತುಕಗಳಿಂದ ಕಾಣತೊಡಗಿದರು. ಇಂಥಹ ನೂರಾರು ಸಾವಿರಾರು ಕಥಗಳು ದೊಡ್ಡೆಗೌಡರ ಬಾಲ್ಯದಲ್ಲಿ ನಡೆದಿವೆ. ಹತ್ತರ ವಯಸ್ಸಿನಲ್ಲಿಯೇ ಅವರು ಮುನ್ನೂರು ಅಡಿ ಎತ್ತರದ ಮರಗಳನ್ನು ಏರುತ್ತಿದ್ದರು. ಜೇನು ಕಸಿಯುವುದು ಅವರಿಗೆ ಕಲೆಯಾಗಿ ಬೆಳೆದಿತ್ತು. ಒಂದೇ ಒಂದು ಜೇನ್ನೊಣವೂ ಕಚ್ಚಿಲ್ಲ.ಆಷಾಡದಲ್ಲಿ ನದಿ ತುಂಬಿ ಹರಿಯುತ್ತಿದ್ದರೂ ಲೆಕ್ಕಿಸದೇ ಈ ದಡದಿಂದ ಆ ದಡಕ್ಕೇ ಈಜುತಿದ್ದರು. ಅವರ ಲೆಕ್ಕಾಚಾರಗಳು ಕೈಕೊಟ್ಟ ಸನ್ನಿವೇಶಗಳು ಬಹಳ ಕಡಿಮೆಯಾಗಿತ್ತು. ನಿಸರ್ಗದ ವಿಚಾರದಲ್ಲಿ, ನದಿಯಲ್ಲಿನ ಮೀನುಗಳ ವಿಷಯದಲ್ಲಿ, ಕಾಡಿನ ಮರಗಿಡಗಳ, ಪ್ರಾಣಿಗಳ ವಿಷಯದಲ್ಲಿ ಅದೊಂದು ಭಂಡಾರವಾಗಿಯೇ ಬೆಳೆಯಿತು.

ಅವರು ಬೆಟ್ಟದ ಮೇಲಿದ್ದ ಬಸವಣ್ಣನನ್ನು ವಹಿಸಿಕೊಂಡಿರುವುದರಿಂದ ಇದು ಸಾಧ್ಯವೆಂಬುದು ಹಲವರ ಅಭಿಪ್ರಾಯ. ಅವರು ಹಗಲಿರುಳೆನ್ನದೇ ಕಾಡಿನಲ್ಲಿ ಅಲೆದಾಡಿದ್ದರಿಂದ ಅಲ್ಲಿನ ಭೂತವೋ, ಕಾಳಿಯೋ ಅವರ ಮೈಯಲ್ಲಿ ಆಡುತ್ತದೆಂದು ಚಿಕ್ಕಂದಿನಲ್ಲಿ, ಅವರನ್ನು ಹತ್ತಿರದ ಊರುಗಳ ಮಂತ್ರವಾದಿಗಳಿಗೆ ಕರೆದೊಯ್ದಿದ್ದರು. ತಡೆ ಹೊಡೆಸುವುದು ನವಗ್ರಹ ಶಾಂತಿ ಮಾಡಿಸುವುದು ನಡೆಯಿತು. ಮನೆದೇವರಿಗೆ ಹೋಗಿ ಮುಡಿಕೊಟ್ಟು ಬಂದರು. ಕಟ್ಟ ಕಡೆಗೆ ಇವರ ಬಗ್ಗೆ ಆಸೆಯನ್ನು ತೊರೆದರು. ಇರುವ ಇಪ್ಪತೊಂದು ಮಕ್ಕಳಲ್ಲಿ ಇವರನ್ನೇ ಪೂರ್ಣಮಟ್ಟದಲ್ಲಿ ಕಾಣಲೂ ಬಂದೀತೆ? ದೊಡ್ಡೇಗೌಡರು ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ಮನೆ ತೊರೆದು ಹೊರಟರು. ಎಲ್ಲಿ ಹೋದರು ಎಲ್ಲಿ ಇದ್ದರೆಂಬುದರ ಸುಳಿವೇ ಇರಲಿಲ್ಲ. ಅವರು ಮರಳಿ ಬಂದದ್ದು ಅವರ ಇಪ್ಪತ್ತೆರಡೇನೇ ವಯಸ್ಸಿನಲ್ಲಿ. ಅಂದರೇ ಒಂಬತ್ತು ವರ್ಷಗಳು ಅವರು ಅನೇಕಾ ಊರುಗಳನ್ನು ಸುತ್ತಾಡಿ ಬಂದಿದ್ದರು. ಆ ಸಮಯಕ್ಕೆ ಸರಿಯಾಗಿ ಅವರ ನೆಚ್ಚಿನ ತಾಣಗಳಾದ ಅವರೂರಿನ ನದಿ, ಬೆಟ್ಟ, ಕಾಡು ಪರಿಸರ ಎಲ್ಲವೂ ಬದಲಾಗತೊಡಗಿತ್ತು. ಮನೆಯಲ್ಲಿನ ಎಲ್ಲ ಅಣ್ಣ ತಮ್ಮಂದಿರೂ ಮದುವೆಯಾಗಿ ಅಪ್ಪ ತೀರಿದ ನಂತರ ಬೇರೆ ಬೇರೆಯಾಗಿ ಸಂಸಾರ ನಡೆಸುತಿದ್ದರು. ಕಂಬಳ ನದಿಗೆ ಕಟ್ಟೆ ಕಟ್ಟಿ ಮುಂದಿನ ಹಲವಾರು ಊರುಗಳಿಗೆ ನೀರೊದಗಿಸುವ ಯೋಜನೆ ನಡೆಯುತ್ತಿತ್ತು. ಮೊದಲು ಹರಿಯುತ್ತಿದ್ದ ನದಿಯನ್ನು ಕೆಲಸದ ಸಲುವಾಗಿ ಬೇರೊಂದು ಮಾರ್ಗ ಬದಲಾಯಿಸಿದ್ದರು. ಮನುಷ್ಯನ ದುರಾಸೆಯ ಚಿತ್ರಗಳು ಅಂದಿನಿಂದಲೇ ಅವರ ಕಣ್ಣಲ್ಲಿ ಕಾಣತೊಡಗಿದವು. ನೆಪ ಬರಿಯ ನದಿಯನ್ನು ಬದಲಾಯಿಸುವುದಾದರೂ ಅಲ್ಲಿನ ಮರಗಳನ್ನು ಕಡಿದು ಸಾಗಿಸುವುದು ಮೊದಲಾಯಿತು. ಬೆಲೆ ಬಾಳುವ ಮರಗಳೆಲ್ಲಾ ಹೋಗುವುದಲ್ಲದೇ, ಕೆಲಸಗಾರರಾಗಿ ಬಂದಿದ್ದ ಜನರು ರಾತ್ರಿಯಾಯಿತೆಂದರೇ ಕಾಡಿಗೆ ನುಗ್ಗಿ ಬೇಟೆಯೆಂಬ ಹೆಸರಲ್ಲಿ ಅಲ್ಲಿದ್ದ ಪ್ರಾಣಿಗಳನ್ನೆಲ್ಲಾ ಹೊಡೆದು ತಿಂದರು.

ಊರಿನಲ್ಲಿರಲು ಗೌಡರ ಮನಸ್ಸು ಯಾಕೋ ಒಗ್ಗುತ್ತಿರಲಿಲ್ಲ. ಅವರಿಗೆ ಏನೋ ಒಂದು ಕೊರತೆಯಿದೆ ಎನಿಸುತಿತ್ತು. ಇಡೀ ದೇಶವೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿತ್ತು. ಆದರೇ ಕಂಬಳಿ ಮಾತ್ರ ನಿದ್ದೆಯಿಂದ ಏಳಲೇ ಇಲ್ಲ. ಈ ಊರಿನ ಜನರು ಅಣೆಕಟ್ಟೆಯಿಂದ ಎಲ್ಲೆಲ್ಲಿ ಸಾಧ್ಯವೋ ಆ ಜಾಗವನ್ನೆಲ್ಲಾ ಸಮ ಮಾಡೀ ವ್ಯವಸಾಯಕ್ಕೆ ಅಣಿಮಾಡತೊಡಗಿದರು. ದೇಶಕ್ಕೇ ಸ್ವಾತಂತ್ರ್ಯ ಬಂತಂತೆ ಎಂದು ಒಮ್ಮೇ ಹೇಳಿದ್ದನ್ನು ಬಿಟ್ಟರೇ ಸ್ವಾತಂತ್ರ್ಯದ ಬಗ್ಗೆ ಇತ್ತೀಚಿನ ತನಕ ಊರಿನವರಿಗೆ ತಿಳಿದಿರಲಿಲ್ಲ. ಈಗಲೂ ಅಷ್ಟೇ ಸ್ವಾತಂತ್ರ್ಯ ದಿನವೆಂದರೇ, ಮಕ್ಕಳು ಸಾಲಾಗಿ ಊರು ಸುತ್ತಾ ಮೆರವಣಿಗೆ ಬರುತ್ತಾರೆ ಚಾಕೊಲೇಟ್ ಕೊಡುತ್ತಾರೆ. ಅದಕ್ಕಾಗಿ ಆಟವಾಡಿಸುತ್ತಾರೆ. ಮಕ್ಕಳಿಗೆ ಬಹುಮಾನವಾಗಿ ಶಾಲೆಗಳಲ್ಲಿ ಒಂದು ಲೋಟ, ಪ್ಲೇಟು, ಬಟ್ಟಲು ಇವುಗಳನ್ನು ಕೊಡುತ್ತಾರೆ. ಒಮ್ಮೆ ದೊಡ್ಡೇಗೌಡರು, ಮೇಷ್ಟ್ರೇ ಮಕ್ಕಳು ಗೆದ್ದದ್ದಕ್ಕೆ ಈ ಪಾತ್ರೆ ಪಗಡೆ ಕೊಡುತ್ತೀರಲ್ಲ ಯಾಕೆ ನಾಳೆಯಿಂದ ಅಡುಗೆ ಮಾಡಿಕೊಂಡಿರಿ ಶಾಲೆಗೆ ಬರಬೇಡಿ ಅಂತಲೋ ಎಂದರು. ಅದಕ್ಕೆ ಮೇಷ್ಟ್ರು ಇಲ್ಲ ಯೆಜಮಾನ್ರೇ ಮಕ್ಕಳಿಗೆ ಪೆನ್ನು, ಪೆನ್ಸಿಲ್ ಕೊಟ್ಟರೇ ಎರಡೇ ದಿನಕ್ಕೆ ಮುರಿದು ಹಾಳುಮಾಡುತ್ತಾರೆ, ಎಂದರು.ಗೌಡರು ಮೇಷ್ಟ್ರ ಜಾಣ್ಮೆಗೆ ತಲೆತೂಗಲೇ ಬೇಕಾಯಿತು. ಆ ಊರಿನಲ್ಲಿ ಸ್ವಾತಂತ್ರ್ಯದ ಬಗ್ಗೆಯಾಗಲೀ ದೇಶದ ಬಗ್ಗೆಯಾಗಲೀ, ಅಥವಾ ಇಂದಿನ ರಾಜಕಾರಣಿಗಳ ಬಗ್ಗೆಯಾಗಲೀ ಅಂಥಹ ಕುತೂಹಲ ಕೆರಳಿಸುವಂತದ್ದು ಏನು ಇಲ್ಲ. ಊರಿನ ಕೆಲವು ಮಂದಿ ಪುಡಾರಿಗಳಾಗಿ ಎರಡು ಮೂರು ಪಕ್ಷದ ಬಿತ್ತಿ ಚಿತ್ರಗಳನ್ನು ಹಾಕುತ್ತಾರೆ. ಚುನಾವಣ ಸಮಯದಲ್ಲಿ ಅವರ ಜೇಬಿಗೆ ದುಡ್ಡು ಬಿಟ್ಟುಕೊಂಡು ಜನರಿಗೆ ಮೂರು ದಿನ ಬಾಡೂಟ ಮಾಡಿಸಿ, ಲೋಕಲ್ ಸರಾಯಿ ಕುಡಿಸಿದರೇ ಮುಗಿಯಿತು. ಯಾರು ಗೆದ್ದರೂ ಸೋತರು ಅವರಿಗೆ ಚಿಂತೆಯಿಲ್ಲ.

ನಾನು ಕುಳಿತಿರುವಲ್ಲಿಗೆ, ಊರಿನ ಮಧ್ಯ ವಯಸ್ಸನ್ನು ದಾಟಿದ ಒಬ್ಬರು ಬಂದು ಅಯ್ಯಾ ಎಂದರು. ನಾನು ಅವರ ಮುಖವನ್ನೊಮ್ಮೆ ನೋಡಿದೆ, ನಿನ್ನೆ ಬೆಳ್ಳಿಗ್ಗೆ ಅಂಗಡಿಗೆ ಸಿಗೆರೇಟು ಕೊಳ್ಳಲು ಹೋದಾಗ ನೋಡಿದ ಮುಖವೆನಿಸಿತು. ತಾತ ಅವರ ಮುಖವನ್ನು ನೋಡಿ, ಏನೋ ಸುಬ್ಬನ ಸವಾರಿ ನಮ್ಮನೆ ತನಕ? ಎಂದರು. "ಅಯ್ಯಾ ನಮ್ಮನೆ ಬಿಳಿ ಹಸ ನಿಲ್ಲುತಾನೆ ಇಲ್ಲ, ಆಸ್ಪತ್ರೆಗೆ ಹೊಡ್ಕೊಂಡು ಹೋಗಿದ್ದೆ ಮೂರು ದಪಾ," ಅಂದರು? ನನಗೆ ಸ್ವಲ್ಪ ದಿಗಿಲಾಯಿತು, ಇವರು ಆಡುತ್ತಿರುವ ಭಾಷೆ ಯಾವುದು? ಆಸ್ಪತ್ರೆಗೆ ಹೊಡೆದುಕೊಂಡು ಹೋದ ಹಸು ನಿಲ್ಲುತ್ತಿಲ್ಲ ಅಂದರೇ!?. ನನ್ನ ಮುಖದಲ್ಲಿ ಮೂಡಿದ ಬದಲಾವಣೆಯನ್ನು ಗಮನಿಸಿ, ಇರು ಮಗಾ ಹೇಳ್ತಿನಿ ಅಂದರು. "ಸರಿ ಏನ್ ಮಾಡ್ಬೇಕೋ ಸುಬ್ಬಾ? ನಾಳೆ ಹೊತ್ತು ಮೂಡೋ ಹೊತ್ತಿಗೆ ಬಂದು ಹೋಗು" ಎಂದರು. ಅವನು, "ಅಯ್ಯಾ ಒಸಿ ನೆಸೆ", ಎಂದು ಹಳ್ಳು ಕಿರಿದ. ನೆಸೆ ಡಬ್ಬಿಯನ್ನು ಕುಟ್ಟಿ, ಬೆರಳಿನಿಂದ ತೆಗೆದು ಮೂಗಿನ ಒಳಕ್ಕೆ ಎರಡು ಬೆರಳನ್ನು ತೂರಿಸುವಂತೆ ಮಾಡಿದ. ಕ್ಷಣಾರ್ಧದಲ್ಲಿ, ದಬ ದಬನೇ ಸೀನತೊಡಗಿದ. ಬೀದಿಯಲ್ಲಿ ಆಡುತ್ತಿದ್ದ ಮಗು ಬೆಚ್ಚಿ ಬಿದ್ದಿತೇನೋ ಎಂದು ಮಗುವನ್ನು ನೋಡಿದೆ. ಯಾರೇ ಕೂಗಾಡಲೀ,ಊರೇ ಹೋರಾಡಲೀ ಎನ್ನುವಂತೆ ಅದರ ಪಾಡಿಗೆ ಅದು ಆಡುತ್ತಿತ್ತು. ನೆಸೆ ಸಿಕ್ಕಿದ ಮೇಲೆ, ಮಾತಿಗೆ ಸಿದ್ದನಾಗುವವನಂತೆ ಜಗ್ಗಲಿಯ ಮೇಲೆ ಆಸೀನನಾದ. ಅಯ್ಯಾ ಕುಳ್ಳಣ್ಣನ ಮಗ ಲಕ್ಸ್ಮಂಗೆ ಹೆಣ್ಣಿನ ಕಡೇರೋ ಬಂದಿದ್ರು, ಎಂದ. ಅದು ಒಂದು ಬಗೆಯ ಅಪಹಾಸ್ಯವೋ, ಅಥವಾ ಆಶ್ಚರ್ಯವೋ ತಿಳಿಯಲಿಲ್ಲ. ಬರಲೀ ಬಿಡೋ ಹುಡುಗ ಮದ್ವೆ ಆಗ್ಬಾರ್ದ?ಎಂದರು. ನೀವು ಸರಿ, ಆಗಲೀ ಬಿಡಿ, ಊರಿಗೆ ಮೂರು ಊಟ ಸಿಗ್ತದೆ, ಎಂದ. ಅವನು ನಮ್ಮ ನಾಗಣ್ಣನ ವಾರಿಗೆಯವನು, ನಾಗಣ್ಣನ ಹುಡುಗ ಹತ್ತನೇ ಕ್ಲಾಸು ಕಣಯ್ಯ, ಎಂದ. ನನಗೆ ಹೊಳೆಯಿತು, ಹುಡುಗನಿಗೆ ವಯಸ್ಸಾಗಿದೆ, ಹುಡುಗನೆನಿಸಿಕೊಳ್ಳುವ ವಯಸ್ಸು ದಾಟಿದೆ!. ಊರಿನ ಚರಂಡಿ ಕಾಮಗಾರಿಯಲ್ಲಿ ನಡೆದಿರುವ ಬಾರಿ ಹಗರಣದ ಬಗ್ಗೆ ಹೇಳಿ, ಅದೊಂದು ವಿರೋಧ ಪಕ್ಷದವರ ಕೈವಾಡದಿಂದಲೇ ಮಾಡಿರುವಂತಿದೆ. "ಚರಂಡಿ ಕೆಲಸಕ್ಕೆ ಹತ್ತು ಸಾವಿರ ಬಿಲ್ ಮಾಡವರೇ, ಆಗಿರೋದು ಬರೀ ಎರಡು ಸಾವರ ಅಷ್ಟೆಯಾ!" ಅಂದ. "ಹೋದ ಸತಿ, ನೋಡಿದ್ರ ಸ್ಕೂಲಿಗೆ ಕಾಪೌಂಡ್ ಕಟ್ಟ್ಸಕೆ ಅಂತಾ ೩೦ಸಾವರ ತಗೊಂಡ್ರು ಈ ವರ್ಸ ಬಿದ್ದೇ ಹೋಗಯ್ತೆ, ಎಲ್ಲನೂ ಹಿಂಗೆ ಇವರ್ದು, ಇವರು ಮಾತ್ರ ತಿಂದು ತೇಗಬೇಕು, ಬೇರೆಯವರು ತಿನ್ನೊಗಿಲ್ಲ, ನಮ್ಮ ವಠಾರದವಕ್ಕೆ ಅವೆಲ್ಲಾ ಅರ್ಥ ಆಗಕಿಲ್ಲ, ಅವರ ಮನೆ ತವೆ ಹೋಗಿ, ನಿಂತ್ಕತವೆ". ನನಗೆ ತಲಬುಡ ಅರ್ಥ ಆಗಲಿಲ್ಲ. ಗೌಡರು ನಿನಗೆ ಬೇಕಾ, ಆ ಗುತ್ತಿಗೆ ಕೆಲಸ? ಮಾಡಿಸ್ತೀಯಾ? ಎಂದದ್ದಕ್ಕೆ ನನ್ ಕೈಯ್ಯಲ್ಲಿ ಆಗುತ್ತಾ ಎಂದ. ಸರಿ ನಡಿ ಊರ ಉಸಾಬರಿ ಯಾಕೆ ನಿಂಗೆ ಎಂದರು.

ನಾಲ್ಕ ಗಂಟೆ ಸಮಯಕ್ಕೆ, ಗೌಡರು ನನ್ನನ್ನು ಕರೆದುಕೊಂಡು, ಹೊರಟರು. ಬಾ ಇಲ್ಲೇ ಬರೋಣ ಅಂತಾ. ನದಿ ದಂಡೆಯಿಂದ ಹೊರಟು, ಅವರ ಬಾಲ್ಯದಿಂದ ಇಲ್ಲಿನ ತನಕ ಆದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಹೇಳಿದರು.ನಾನು ಕುತೂಹಲಕ್ಕಾಗಿ ಸುಬ್ಬಣ್ಣ ಹೇಳಿದ್ದನ್ನು ಕೇಳಿದೆ. ಊರಿನಲ್ಲಿ, ಬಹುಸಂಖ್ಯೆಯಲ್ಲಿ, ಒಕ್ಕಲಿಗರೇ ಇದ್ದರೂ, ಅವರಲ್ಲಿ ಎರಡು ಪಂಗಡಗಳಿವೆ, ಈ ಒಳಜಗಳ, ಆ ಎರಡು ಪಂಗಡಗಳ ನಡುವೆ. ಅನ್ಯೋನ್ಯತೆ ಎಣಿಸಿದರೂ, ಈ ಶೀತಲ ಸಮರವನ್ನು ಊರಿನ ಪ್ರಮುಖರು, ಉಪಯೋಗಿಸಿಕೊಂಡು ಅದನ್ನು ಆರದಂತೆ, ಬಳಸಿಕೊಳ್ಳುತ್ತಾರೆ. ಸ್ವಲ್ಪ ದೂರದ ನಂತರ, ಅಲ್ಲೇ ನಿಲ್ಲುವಂತೆ ಹೋಗಿ, ಒಂದು ಹಂಬನ್ನು ಕಿತ್ತು ತಂದರು, ಜೊತೆಗೆ ಒಂದೆರಡು ಗಿಡಗಳನ್ನು ತಂದರು. ನಾನು ಅದನ್ನು ನೋಡಿ, ಓ, ಈ ಹಂಬು ಔಷಧೀಗಾ ಎಂದೆ? ಗೌಡರು, ನಿನಗೆ ಗೊತ್ತಾ ಎಂದರು. ನನ್ನ ಓದಿನ ಬಗ್ಗೆ ಸ್ವಲ್ಪ ಹೇಳಿದೆ, ಈ ಗಿಡಗಳು ಅದರ ಮದ್ದು ಅದು ಇದು ಅಂತಾ ನನ್ನ ಬುದ್ದಿವಂತಿಕೆ ತೋರಿಸತೊಡಗಿದೆ. ಗೌಡರಿಗೆ ನನ್ನ ಮೇಲೆ ಇದ್ದಕ್ಕಿದ್ದ ಹಾಗೆ ಒಂದು ಬಗೆಯ ಹೆಮ್ಮೆ ಬಂದಂತನಿಸಿತು. ನಾನು ಹೇಳಿದೆ, ತಾತ, ನಿಜ ಹೇಳಬೇಕೆಂದರೆ, ಇವೆಲ್ಲಾ ಕಾಲೇಜಿನಲ್ಲಿ ಕಲಿಯಲೇ ಬೇಕು ಎನಿಸೋದಿಲ್ಲ ಎಂದೆ. ನೀನು ಹೇಳೋದು ಒಂದು ಲೆಕ್ಕದಲ್ಲಿ ಸರಿನೇ, ಎಂದರು. ಮನುಷ್ಯ ಪ್ರಕೃತಿಯ ವಿರುದ್ದ ನಡೆದರೆ ಅದು ಸಾಹಸ ಅಂದುಕೊಳ್ಳುತ್ತಾನೆ. ನದಿ ಹರಿಯೋದರ ವಿರುದ್ದ ಈಜುವುದು, ದೊಡ್ದ ಬಂಡೆಗಳನ್ನ ಏರುವುದು, ಹೀಗೆ ಅವೆಲ್ಲವೂ ಚೆಂದವೇ ಸರಿ. ಆದರೇ ನಿಸರ್ಗದ ನಿಯಮದ ವಿರುದ್ದ ಹೋಗುವುದು ಎಷ್ಟು ಸರಿ? ನನಗೆ ಅರ್ಥವಾಗಲಿಲ್ಲವೆಂಬುದು ಅವರಿಗೆ ತಿಳಿಯಿತು. ಈಗ, ಈ ಗಿಡದಿಂದ ಉಪಯೋಗವೇನು? ಗೊತ್ತಾ? ಇಲ್ಲವೆಂದು ತಲೆಯಾಡಿಸಿದೆ.

ಆಗಲೇ ಸುಬ್ಬಣ್ಣ ಬಂದಿದ್ದನಲ್ಲ, ಅವನ ಹಸುವಿಗೆ, ಸೂಜಿ ಚುಚ್ಚಿಸಿದರೂ ಕೂಡ, ಗರ್ಭ ನಿಲ್ಲುತ್ತಿಲ್ಲವಂತೆ. ಇವರುಗಳು ಎಲ್ಲವನ್ನು ಯಾಂತ್ರಿಕತೆಯಿಂದ ನೋಡುತ್ತಾರೆ. ಇಲ್ಲ, ಆರ್ಥಿಕತೆಯಿಂದ ನೋಡುತ್ತಾರೆ. ಪ್ರಾಣಿಗಳು ನಮ್ಮಂತೆಯೇ ಬದುಕುವ ಜೀವಿಗಳೆಂದು ತಿಳಿಯುವುದಿಲ್ಲ ಇವರಿಗೆ. ಅವುಗಳಿಗೂ, ದೈಹಿಕ ಆಸೆ ಇರುತ್ತದೆನಿಸುವುದಿಲ್ಲವಾ? ಈ ಪ್ರಶ್ನೆಗಳು ನನ್ನ ವಯಸ್ಸಿನ ಮಿತಿಗೆ ಮೀರಿದ್ದು ಎಣಿಸಿ ಅಲ್ಲಿಗೆ ತಡೆದರು. ನಾನು ಅವರನ್ನು ಮುಂದುವರೆಸಿ ಎನ್ನಲಿಲ್ಲ. ಆದರೂ, ಅವರ ಭಾವುಕತೆ ನನ್ನನ್ನು ತಲ್ಲಣಗೊಳಿಸಿತ್ತು. ಆಧುಣಿಕರಣದಿಂದಾಗಿ ನಾವು ಪ್ರಾಣಿಗಳ ನೈಸರ್ಗಿಕವಾದ ಬಹುಮುಖ್ಯವಾದ ಬೇಡಿಕೆಯನ್ನು ನಾಶಗೊಳಿಸಿದ್ದೇವೆ. ನಾನು ಚಿಕ್ಕವನಿದ್ದಾಗ, ಆದ್ರಾ ಮಳೆಯಲ್ಲಿ ಬೀದಿನಾಯಿಗಳು ಮೈಮರೆತು ಅಂಟಿಕೊಂಡಿರುವುದನ್ನು ಕಂಡು ಥೂ, ಚೀ ಎಂದು ಮುಖ ತಿರುಗಿಸಿಕೊಂಡು ಹೋಗುತಿದ್ದೆ. ಆದರೇ, ಅವೆಲ್ಲವೂ, ಮನುಷ್ಯನಂತೆಯೇ, ದೈಹಿಕ ಕಾಮನೆಗಳು ಎಣಿಸಿರಲಿಲ್ಲ. ತಾತನ ಮನಸ್ಸಿನಲ್ಲಿರುವ ವಿಚಾರಗಳು, ನನ್ನ ಬುದ್ದಿವಂತಿಕೆಯಿಂದ ಅರಿಯಲು ಸಾಧ್ಯವೇ ಇಲ್ಲವೆಂದು ತೀರ್ಮಾನಿಸಿದೆ.

ದೇಶ ಸುತ್ತಿನೋಡು, ಕೋಶ ಓದಿ ನೋಡು, ಅಂತಾ ಗಾದೆ ಇದೆಯಲ್ಲ. ಹಾಗೆ ಅದು ಒಂದರಿಂದ ಏನೂ ಬರಲ್ಲ, ಓದಲೂ ಬೇಕು, ನೋಡಲೂ ಬೇಕು. ಮೊದಲರ್ಧದಲ್ಲಿ ಗೌಡರು ಊರೂರು ಸುತ್ತಾಡಿದರು. ನಂತರ ಮನೆಯಲ್ಲಿ ಅವರ ಮಕ್ಕಳು, ಮೊಮ್ಮಕ್ಕಲು ಓದುವ ಎಲ್ಲ ತರಹದ ಪುಸ್ತಕಗಳನ್ನು ಓದಿದರು. ಈ ಮುದಕನಿಗೆ ನೋಡು ಈ ವಯಸ್ಸಿನಲ್ಲಿ ಓದುವ ಚಪಲ ಎಂದು ಜನ ರೇಗಿಸಿದರು. ಅವರಿಗೆ ಹತ್ತು ಭಾಷೆ ತಿಳಿಯುತ್ತಿತ್ತು. ಕನ್ನಡ, ಹಿಂದಿ, ಮಲಯಾಲಂ, ತೆಲುಗು, ತಮಿಳು, ತುಳು, ಕೊಡವ, ಅರೆ-ಭಾಷೆ ಕನ್ನಡ, ಹವ್ಯಕ ಕನ್ನಡ, ಇಂಗ್ಲೀಷ್ ಬರುತ್ತಿದ್ದವು. ಅವರು ಕೊಡಗಿನ ಕಾಫಿ ತೋಟದಲ್ಲಿ ಹತ್ತಾರು ವರ್ಷವಿದ್ದರು. ಇಂದಿಗೂ ವಿರಾಜಪೇಟೆ, ಗೋಣಿಕೊಪ್ಪಲಿನಲ್ಲಿ ಕೆಲವು ಎಸ್ಟೇಟ್ ಮಾಲಿಕರು ಇವರನ್ನು ನೆನೆಯುತ್ತಾರೆ. ಕೇರಳದ ಕಣ್ಣೂರಿನ ಟೀ ತೋಟದಲ್ಲಿ ಕೆಲಸಮಾಡಿದ್ದಾರೆ. ತೀರ್ಥಹಳ್ಳಿಯಲ್ಲಿದ್ದಾಗ ಹವ್ಯಕ ತಿಳಿದಿತ್ತು. ಹೀಗೆ ಅವರಿಗೆ ಭಾಷೆ ಬರುತ್ತಿದ್ದರಿಂದ ಅವರು ದಕ್ಷಿಣ ಭಾರತವನ್ನೂ ಸಂಪೂರ್ಣ ಅಲೆದಾಡಿದ್ದಾರೆ. ಅಲ್ಲಿನ ಜನರನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ಅಲ್ಲಿನ ಜನರ ಜೀವನದಲ್ಲಿ ಆದ ಬದಲಾವಣೆಗಳನ್ನು ನೇರವಾಗಿ ಕೆಲವೂಮ್ಮೆ ವಾರ್ತೆಗಳಿಂದ, ದಿನಪತ್ರಿಕೆಗಳಿಂದ ನೋಡಿದ್ದಾರೆ. ಅವರು, ಪಶ್ಚಿಮ ಘಟ್ಟಗಳು ಕರಗಿ ಬರಡಾದದ್ದನ್ನು ಕಂಡಿದ್ದಾರೆ. ಅವರ ವರ್ಣನೆ ನಮ್ಮ ವಿಜ್ನಾನಕ್ಕೆ ನಿಲುಕುವಂತಿಲ್ಲ ಎನಿಸಿತು. ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿನ ವಿಶೇಷತೆಗಳನ್ನು ಬಣ್ಣಿಸುತ್ತಾರೆ. ವನ್ಯಮೃಗಗಳನ್ನು ಹತ್ತಿರದಿಂದ ನೋಡಿದ್ದಾರೆ. ಕಾಡು ಜನರ ಜೊತೆ ಓಡಾಡಿದ್ದಾರೆ. ಚಾರ್ಮಾಡಿ, ಶಿರಡಿ, ತಡಿಯೆಂಡ್ ಮೋಲ್, ಪುಷ್ಪಗಿರಿ, ಬ್ರಹ್ಮಗಿರಿ, ವಯನಾಡ್, ಮದುಮಲೈ, ನಾಗರಹೊಳೆ, ಬಂಡಿಪುರ, ಬಿಳಿಗಿರಿ, ಮಹದೇಶ್ವರ ಬೆಟ್ಟ, ಸತ್ತಿ, ಎಲ್ಲವನ್ನು ಬರೀ ಗಾಲಲ್ಲಿ ನಡೆದು ಬಂದಿದ್ದಾರೆ. ಇದೊಂದು ಪವಾಡವೇ ಸರಿಯೆಂದು ನಮಗನಿಸಿದ್ದರೂ ಅವರಿಗೆ ಅದರಲ್ಲಿ ಹೆಚ್ಚಿನದೇನೂ ಅನಿಸುವುದಿಲ್ಲ. ಅವರು ಓದಿರುವುದು ಅಷ್ಟೇ, ಮಾರ್ಕ್ಸ್, ಡಾರ್ವಿನ್,ಲೆನಿನ್,ಟಾಗೋರ್,ಟಾಲ್ಸ್ ಟಾಯ್, ಜಿಡ್ಡೂ ಕೃಷ್ಣಮೂರ್ತಿ, ಹೀಗೆ ಎಲ್ಲರನ್ನೂ ಓದಿದ್ದಾರೆ ಅವರ ಬಗ್ಗೆ ಅವರಲ್ಲಿರುವ ವಿಶ್ಲೇಶಣೆಗಳು ನನಗೆ ಬಹಳ ಮೆಚ್ಚುಗೆಯಾದವು.

"ತಾತ ನಿಮಗೆ ಬರವಣಿಗೆ ಬರುತ್ತದೆ, ನೀವು ನಿಮ್ಮ ವಿಚಾರಗಳನ್ನೆಲ್ಲಾ ಯಾಕೆ ಬರೆಯಬಾರದಿತ್ತು? ನಿಮ್ಮ ಅನುಭವಗಳು ಈ ಮಾಹಿತಿ ಎಷ್ಟು ಅನುಕೂಲ ಆಗುತ್ತೆ ನಮ್ಮ ಜನಕ್ಕೆ" ಎಂದೆ. ಯಾವ ಜನರ ಬಗ್ಗೆ ಹೇಳ್ತಾಯಿದ್ದೀಯಾ ನೀನು? ನಮ್ಮ ಜನ ಅನ್ನಿಸಿಕೊಳ್ಳೋ ಇವರು ಹುಟ್ಟು ಸೋಮಾರಿಗಳು, ನಾನು ಬರೆದರೂ ಅದನ್ನ ಓದುವುದಿಲ್ಲ, ಏನು ಬರೆದವರೆ ಅಂತಾ ಹಾಗೆ ಹೇಳು ಅದನ್ನೇಲ್ಲಾ ಓದೋಕೆ ಸಮಯ ಇಲ್ಲ ಅಂತಾರೆ. ನೀನು ಹೇಳಿದ್ದಕ್ಕೆ, ಹೇಳ್ತಿನಿ ಕೇಳು. ನೀನು ಗಿಡಗಳ ಬಗ್ಗೆ, ಔಷಧಿಗಳ ಬಗ್ಗೆ ತಿಳ್ಕೊಳ್ಳೋಕೆ ಅಂತಾ ಊರೂರು ಅಲೆದಿದ್ದಿಯಾ, ನಮ್ಮೂರಿನಲ್ಲಿರುವ ಒಬ್ಬನೇ ಒಬ್ಬ ಇದರ ಬಗ್ಗೆ ತಿಳ್ಕೊಬೇಕು ಅಂತಾ ನನ್ನ ಹತ್ತಿರ ಕೇಳಿಲ್ಲ.ಈ ಸುಬ್ಬಣ್ಣನೇ ನೋಡು, ಇಲ್ಲದೇ ಇರೋ ರಾಜಕೀಯ ಮಾತಾಡಿ ಹೋದ, ಆ ಔಷಧಿ ಗಿಡ ನನಗೂ ತೋರಿಸಿ ಅಂತಾ ಕೇಳಲಿಲ್ಲ. ಎಲ್ಲರಿಗೂ ಸಿದ್ದವಾಗಿರೋ ಊಟ ಬೇಕು, ಇದು ಇವತ್ತಿನ ಪರಿಸ್ಥಿತಿ. ಆ ದಿನಗಳಲ್ಲಿ ನಾನು ಕಾಡು ಮೇಡು ಅಲೆದು ಬಂದೆ. ನನಗೆ ಅದರಿಂದ ಏನು ಲಾಭ ಬರುತ್ತೆ ಅಂತಾ ಅಲ್ಲ ಅಲ್ಲಿ ನನಗೆ ಸಂತೋಷ ಇತ್ತು. ಸಂತೋಷ ಅಂದರೇ, ಏನು? ಅದು ಆಸ್ತಿ ಮಾಡಿ, ಹೆಸರು ಮಾಡಿ ಬರೋದಾ? ಅದು ಆತ್ಮ ಸಂತೃಪ್ತಿ. ಅದು ನಿನ್ನೊಳಗೆ ಇರುತ್ತೆ, ಇನ್ನೊಬ್ಬರ ಹಿಂದೆ ಹರಸಿ ಹೋಗೋದಲ್ಲ. ತಿಳುವಳಿಕೆ ಅನ್ನೋದನ್ನ ಹೆಚ್ಚಿಸಿಕೊಳ್ಳಬೇಕು ಅದು ಇನ್ನೊಬ್ಬರಿಗೆ ಅನುಕೂಲ ಆಗಲಿ ಅಂತಾ ಅಲ್ಲ, ನಿನ್ನ ಮನಸ್ಸಿಗೆ ನೆಮ್ಮದಿ ಸಿಗಲಿ ಅಂತಾ. ನಾನು ನನ್ನ ಇಳಿವಯಸ್ಸಿನಲ್ಲಿ ಓದುವಾಗ ಸ್ವತಃ ನನ್ನ ಮಕ್ಕಳೇ ಕೇಳಿದರು, ನೀವು ಈ ವಯಸ್ಸಲ್ಲಿ ಅದೆಂತ ಪುಸ್ತಕನೆಲ್ಲಾ ಓದುತ್ತಾ ಕೂರೋದಾ? ಅವರಿಗೇನು ಗೊತ್ತು ಪುಸ್ತಕ ಓದುವುದರಲ್ಲೇನಿದೆ ಅಂತಾ.ಓದದೇ ಕೂಡ ಬದುಕಬಹುದು, ಬರೆಯದೇ ಕೂಡ ಬದುಕಬಹುದು. ಜನ ಸ್ವಂತಿಕೆಯಿಂದ ಬದುಕೋದನ್ನ, ಬದುಕುವ ಶೈಲಿಯನ್ನ ಕಲಿಬೇಕು. ಅವರನ್ನ ಇವರನ್ನ ನೋಡೀ ಅನುಕರಣೆ ಮಾಡೊದಲ್ಲ. ಬರವಣಿಗೇನೂ ಅಷ್ಟೇ, ಈ ಬರವಣಿಗೆ ಅಂತಾ ಬರೀತಿರಲ್ಲ ಅವರೆಲ್ಲಾ ಜನರ ಮೇಲೆ ಸವಾರಿ ಮಾಡುವ ಮಹಾ ದೊರೆಗಳೆ! ನೈಜತೆ ಎಲ್ಲಿ ಇರುತ್ತೇ ಹೇಳು? ಮನೆ ಒಳಗೆ ಕುಳಿತು, ನೀನು ಮಲೆಕುಡಿ ಜನಾಂಗದವರ ಬಗ್ಗೆ ಬರೆಯೋಕೆ ಆಗುತ್ತಾ, ಆ ಜನರ ಜೀವನದ ಬಗ್ಗೆ ಬರೆಯೋಕೆ ಆಗುತ್ತಾ? ಬರವಣಿಗೆ ಅಂದರೇ ಕಲ್ಪನೆ ಅನ್ನುತ್ತಾರೆ ಜನ, ಅದರಲ್ಲಿ ನನಗೆ ನಂಬಿಕೆಯಿಲ್ಲ. ಬರವಣಿಗೆ ಅಂದರೇ, ಅದು ಆ ದಿನದ ಆ ಸಮಾಜದ ಆಗೂ ಹೋಗುಗಳಿಗೆ ಕನ್ನಡಿ ಹಿಡಿದಂತಿರಬೇಕು.ನಮ್ಮ ಬರವಣಿಗೆಗಳು ಮುಂದಿನ ಪೀಳಿಗೆಗೆ ಮಾಹಿತಿ ನೀಡುವಂತಿರಬೇಕು. ನೀನು ಎಲ್ಲರಂತೇಯೇ ಬರೆದು ಕೂಡಬೇಡ. ದೇಶ ನೋಡು, ಪುಸ್ತಕ ಓದು, ಎಂದರು.ಇಲ್ಲ ತಾತ ನಾನು ಬರೆಯೋದಿಲ್ಲ ಅಷ್ಟು ಹೆಚ್ಚು ಓದುವುದು ಇಲ್ಲ. ನಾನು ಹುಟ್ಟು ಸೋಮಾರಿ ಎಂದೆ. "ಪರ್ವಾಗಿಲ್ಲ ಸತ್ಯ ಹೇಳ್ತಿಯಾ" ಅಂದರು. ಮನೆಯಿಂದ ಪೋನ್ ಮಾಡಿ ಅಪ್ಪ ಉಗಿದಿದ್ದರಿಂದ ಅಲ್ಲಿಂದ ಬೆಳ್ಳಿಗ್ಗೆ ಹಾಲಿನ ವ್ಯಾನ್ ಹತ್ತಿ ಹೊರಟೆ.

14 ಜುಲೈ 2009

ನನ್ನೊಳಗೆ ಅವಿತು ಹೋಗುವ ಮುನ್ನ ನಿಮ್ಮ ಮಡಿಲಿಗೆ!!!!---2


ದೊಡ್ಡೇಗೌಡ ಊರಿನ ಹಿರಿಯರಲ್ಲಿ ಒಬ್ಬರು. ಅವರಿಗೆ ಈಗ ವಯಸ್ಸು ಸುಮಾರು ನೂರು ದಾಟಿದೆಯೆಂದು, ಅವರ ವಯಸ್ಕರೆಲ್ಲರೂ ಬಹುಬೇಗ ಶಿವನ ಪಾದ ಸೇರಿದರು. ಬೇಗ ಎಂದರೇ ಯಾರೊಬ್ಬರೂ ಮರಿ ಮಕ್ಕಳನ್ನು ಕಾಣದೇ ಹೋದವರಿಲ್ಲ ಆದರೂ ಅದೆಲ್ಲಾ ದೊಡ್ಡೇಗೌಡರ ಲೆಕ್ಕದಲ್ಲಿ ಬಹಳ ಚಿಕ್ಕ ವಯಸ್ಸು. ಅವರ ವಯಸ್ಸಿನ ಲೆಕ್ಕಾಚಾರವೆಂದರೇ, ನಮ್ಮೂರ ಕೆರೆ ಕಟ್ಟಿಸಿದ ವರ್ಷ, ನಮ್ಮೂರ ಹೊಳೆಗೆ ಒಡ್ಡು ಕಟ್ಟಿಸಿದ ವರ್ಷ, ಅಡಿಕೆ ತೋಟ ಮಾಡಿದ ವರ್ಷ ಅಥವಾ ನಮ್ಮ ಸಣ್ಣಣ್ಣನ ಮದುವೆಯಾದ ವರ್ಷ. ಇವುಗಳ ಲೆಕ್ಕಾಚಾರ ಹಾಕಲು ನಾನು ಮತ್ತೊಂದು ಗೆಜೆಟರ್ ನನ್ನೇ ಹುಡುಕಬೇಕಾಯಿತು. ಅವರಲ್ಲಿ ಕ್ಯಾಲೆಂಡರ್ ಎಂಬುದರ ಗುರುತೇ ಇರಲಿಲ್ಲ. ಇದ್ದಿದ್ದರೂ ಅದನ್ನು ಉಪಯೋಗಿಸುವ ಮನಸ್ಸು ಮಾಡುತ್ತಿರಲಿಲ್ಲ. ಅವರಿಗೆ ನಮ್ಮ ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರ್ ಗಳ ಬಗ್ಗೆ ಅಷ್ಟೂ ಭರವಸೆಯಿರಲಿಲ್ಲ. ಒಂಟಿಕೊಪ್ಪಲ್ ಪಂಚಾಂಗ ನೋಡಿಸಬೇಕು ಇಲ್ಲವೇ ದೊಡ್ಡಯ್ಯನವರ ಬಳಿಗೆ ಹೋಗಬೇಕು. ದೊಡ್ಡಯ್ಯನವರೆಂದರೇ ಸುತ್ತಾ ಹಳ್ಳಿಗೆ ಶಂಕರಾಚಾರ್ಯರೆಂದು. ಆದರೂ, ಅವರ ಭಾಷೆಗಳು ಇವರಿಗೆ ಅರ್ಥವಾಗುವುದಷ್ಟರಲ್ಲಿಯೇ ಇತ್ತು. ದೊಡ್ಡೇಗೌಡರೆಂದರೇ, ಕೆಲವರಿಗೆ ಬಹಳ ಮರ್ಯಾದೆ ಇನ್ನೂ ಕೆಲವರಿಗೆ ಅದೊಂದು ಪಿಠೀಲು. ಎಂದರೇ, ಅವರು ಕಂಡವರನ್ನು ಮುಗ್ದವಾಗಿ ಕೂರಿಸಿ ಮಾತನಾಡಿಸುವುದು ಇಂದಿನ ನಮ್ಮ ಪೀಳಿಗೆಯವರಿಗೆ ಕೊರೆಯುವುದೆನಿಸುತಿತ್ತು. ನಾನು ಹೋದಾಗ ಮೊದಲೆರಡು ದಿನಗಳು ಅವರ ಹತ್ತಿರಕ್ಕೆ ಸುಳಿಯಬೇಡವೆಂದು ನನ್ನ ವಯಸ್ಸಿನ ಹುಡುಗರಾದ, ರಮೇಶ ಮತ್ತು ರವಿ. ಆದರೂ ನನ್ನ ಕುತೂಹಲಕ್ಕಾಗಿ ಒಂದು ಮಧ್ಯಾಹ್ನ ಅವರ ಬಳಿ ಕುಳಿತು ಕೇಳತೊಡಗಿದೆ. ಅವರು ನನ್ನ ಓದಿನ ಬಗ್ಗೆ ಮತ್ತು ನನ್ನ ಕೆಲಸದ ಬಗ್ಗೆ ಕೇಳಿದಾಗ ಅವರಿಗೆ ಅರ್ಥೈಸುವ ಸಾಮರ್ಥ ನನ್ನಲಿಲ್ಲವೆಂಬುದು ಸಾಬಿತಾಯಿತು. ಒಬ್ಬ ವಿಜ್ನಾನಿ ಅಥವಾ ಒಬ್ಬ ವಿದ್ಯಾವಂತನೆನೆಸಿಕೊಂಡವನು, ತನ್ನ ಸರಳ ಭಾಷೆಯಲ್ಲಿ ತನ್ನ ಜನರಿಗೆ ಹೇಳಲಾಗದ ನನ್ನ ವಿದ್ಯಾಬ್ಯಾಸ ಕುರಿತು ನನಗೆ ಒಂದು ಬಗೆಯ ಜಿಗುಪ್ಸೆ ಮೂಡಿತು. ಪರಿಸರ ವಿಜ್ನಾನವನ್ನು ನಾನು ಓದುತಿದ್ದೇನೆಂದಾಗ, ಅದರ ವಿವರಣೆ ಕೇಳಬಯಸಿದಾಗ, ಅವರಲ್ಲಿದ್ದ ಕಾಳಜಿ, ಕುತೂಹಲ ನನ್ನನು ಮೂಕನಾಗಿಸಿದವು. ನನ್ನ ಹರುಕು ಮುರುಕು ಕನ್ನಡ ಮಿಶ್ರಿತ, ಗ್ರಾಮೀಣ ಮತ್ತು ಪಟ್ಟಣ ಮಿಶ್ರಿತ ಭಾಷೆಯಲ್ಲಿ ಅವರಿಗೆ ಸಮಾಧಾನಪಡಿಸತೊಡಗಿದೆ. ಅವರು ನಮ್ಮ ಓದುಗ, ವಯಸ್ಕರಂತೆ, ಅದರಿಂದ ಲಾಭ ನೀರೀಕ್ಷಿಸುವ ಪ್ರಶ್ನೆಗಳನ್ನು ಹಾಕಲಿಲ್ಲ.


ವಿದ್ಯಾವಂತ ವಯಸ್ಕರು ನಮ್ಮ ವಿದ್ಯಾಬ್ಯಾಸದ ಬಗ್ಗೆ ಕೇಳುವ ಸಾಮಾನ್ಯ ಪ್ರಶ್ನೆಗಳು, ಇದನ್ನು ಓದಿದರೇ, ಹೇಗೆ ಪರ್ವಾಗಿಲ್ವಾ? ಉದ್ಯೋಗಾವಕಾಶಗಳು ಹೇಗಿವೆ? ಪರಿಸರ ವಿಜ್ನಾನ ವಿದೇಶದಲ್ಲಿ ಬಹಳ ಬೇಡಿಕೆಯಿದೆಯಂತೆ? ನೀವು ಕಂಪನಿಗಳಲ್ಲಿ ಯಾಕೆ ಕೆಲಸಕ್ಕೆ ಸೇರಿಲ್ಲ? ಒಳ್ಳೆ ಸಂಭಳ ಸಿಗುತ್ತಿತ್ತಲ್ಲವೇ? ನಿಮ್ಮ ಓಡಾಟಕ್ಕೆಲ್ಲಾ ನಿಮ್ಮ ಕಂಪನಿಯೇ ಕೊಡುತ್ತದೇಯೇ? ಇಂಥಹ ಒಂದೇ ಒಂದು ಪ್ರಶ್ನೆ ಬಾರದೇ, ಅದರ ಬಗ್ಗೆ ಕುತೂಹಲವನ್ನು ತೋರದೇ, ಪರಿಸರ ಅನ್ನೋದು ದೇವರ ಇನ್ನೊಂದು ರೂಪವೆಂದರು. ನನಗೆ ಇವರು ಹೇಳುತ್ತಿರುವುದೇನೆಂಬುದು ಅರ್ಥವಾಗಲಿಲ್ಲ. ದೇವರೆಂದರೇ, ಇವರು ವಾರಕ್ಕೊಮ್ಮೆ ಸ್ನಾನ ಮಾಡಿ ಹಣೆಗೆ ವಿಭೂತಿ ಬಳಿದುಕೊಂಡು ಮಾಡುವ ದೇವರ? ಹರಕೆ ಕಟ್ಟಿ ಹಂದಿ ಕೊಡುವ ದೇವರ ಇದ್ಯಾರು? ಆದರೂ ಅವರ ಮಾತುಗಳು ನನಗೆ ಏನೋ ಒಂದು ಬಗೆಯ ಒಗಟಾಗಿ ಕಾಣತೊಡಗಿತು. ತಾತ ದೇವರು ಅಂದರೇ, ಹೇಗೆ ಎಂದೆ? ದೇವರೆಂದರೇ ಹೇಗೆಂದರೇ ನಾನು ಏನು ಹೇಳಲಿ ಮಗಾ? ನಾನು ನೀನು ಇಬ್ಬರೂ ಮನುಷ್ಯರೇ ಅಲ್ಲವಾ? ನಾನು ನಿನಗಿಂತ ಮುಂಚಿತವಾಗಿ ಹುಟ್ಟಿದ್ದೇನೆ ಹೊರತು ಜಗತ್ತನ್ನೆಲ್ಲಾ ಅರೆದು ಕುಡಿದಿದ್ದೇನಾ? ಈ ಒಂದು ಮಾತು ಅವರ ಬಗೆಗೆ ನನ್ನೊಳಗೆ ಒಂದು ಅತ್ತ್ಯುನ್ನತ ಗೌರವ ಸ್ಥಾನವನ್ನು ಅಲಂಕರಿಸಿತು.


ಏನನ್ನೋ ನೆನೆದವರಂತೆ ಸ್ವಲ್ಪ ಸಮಯ ಸುಮ್ಮನಿದ್ದು, ಮತ್ತೆ ಮುಂದುವರೆಸಿದರು. ಪರಿಸರ, ನಿಸರ್ಗ, ನೆಲ,ಜಲ, ಕಾಡು, ಮರ ಗಿಡ ಇವೆಲ್ಲಾವೂ ಕೆಲವೊಮ್ಮೆ ದೇವರುಗಳಾಗಿ ನಮ್ಮನ್ನು ಕಾಪಾಡುತ್ತವೆ, ಕೆಲವೊಮ್ಮೆ ಅವುಗಳು ನಮ್ಮ ರಕ್ಕಸರಂತೆ ನಮ್ಮನ್ನು ದಹಿಸುತ್ತವೆ. ಅದು, ಬರಗಾಲವಾಗಿರಬಹುದು, ಪ್ರವಾಹವಾಗಿರಬಹುದು, ಅದರ ಜೊತೆ ಹೊಡೆದಾಡಲೂ ಬಂದೀತೆ? ಹಾಗೆಂದವರೇ, ಒಮ್ಮೆ ಕಣ್ಣು ಮುಚ್ಚಿ ಮೈಮರೆತವರಂತೆ ಕಾಣುತ್ತಾರೆ. ಇದೇನು ಭಾವಪರಾವಶತೆ? ಆಶ್ಚರ್ಯವಾಯಿತು, ದುಗುಡವೂ ಆಯಿತು. ಕಣ್ಣಲ್ಲಿ ನೀರಿದೆ, ಯಾವುದೋ ಗಾಢ ಧ್ಯಾನದಿಂದ ಎದ್ದವರಂತೆ, ಇಲ್ಲ ಯಾರೋ ಅವರ ಮನಸ್ಸನ್ನು ಕಲಕಿದಂತೆನಿಸಿತು. ನನ್ನಿಂದ ಏನಾದರೂ ತಪ್ಪಾಯಿತಾ? ಅಥವಾ ಯಾರದರೂ ಬಂದರಾ? ಸುತ್ತಲೂ ನೋಡಿದೆ, ಬೀದಿಯಲ್ಲಿ ಎದುರು ಮನೆಯವರ ಮಗುವೊಂದು ಮಣ್ಣಿನಲ್ಲಿ ಆಡುತ್ತಿತ್ತು. ಅದರ ವೇಷ ಭೂಷಣದಿಂದಲೇ ಭಾರತದ ಚಿತ್ರಣವನ್ನು ಅರಿಯಬಹುದಿತ್ತು. ಗಂಗಾ ನದಿಯಂತೆ ಹರಿಯುತ್ತಿರುವ ಅವನ ಮೂಗಿನನಿಂದ ಸುರಿದ ಸಿಂಬಳದ ಕುರುಹು ಕೆನ್ನೆಯ ಮೇಲೆಲ್ಲ ಇತ್ತು. ಯಾರೂ ಹೊಡೆದದ್ದಕ್ಕೋ ಅಥವಾ ಅವನಿಂದ ಯಾರು ಏನನ್ನು ದೋಚಿದರೋ, ಕಣ್ಣಿನಿಂದ ಹರಿದ ಬ್ರಹ್ಮಪುತ್ರನ ಗುರುತು ಕೆನ್ನೆಯ ಮೇಲೆಲ್ಲ ಹರಿದಾಡಿತ್ತು.ಕೆನ್ನೆಯ ಮೇಲೆ ಎಂದು ನಿಮಗೆ ಹೇಳಿದೆ, ಅಲ್ಲಿ ಕೆನ್ನೆಯೊಂದಿತ್ತು ಎನಿಸಲಿಲ್ಲ ನನಗೆ. ಕೆನ್ನೆಯಂತಿದ್ದ ಜಾಗವಿತ್ತು.ಅದು ದೇಶ ಕಂಡ ಬಡತನವೆಲ್ಲಾ ಮುದ್ದಾಗಿ ಸೊಂಪಾಗಿ ಬೆಳೆಯಬೇಕಿದ್ದ ಎಳೆ ಕಂದಮ್ಮನಲ್ಲಿದ್ದಂತಿತ್ತು. ಮೈ ಮೇಲೆ ಗಾಂಧಿವಾದಿಯಂತೆ ಅಲ್ಲದಿದ್ದರೂ ಬಟ್ಟೆಯನ್ನು ತ್ಯಜಿಸಲು ಸಿದ್ದನಿದ್ದೇನೆ, ಎನ್ನುವಂತೆ ಮೇಲಂಗಿ ಮಾತ್ರವಿತ್ತು. ಚಡ್ಡಿಯೆಂಬುದನ್ನು ಹಾಕಿದ ನೆನಪು ಅವನಿಗೆ ಇದ್ದಂತೆ ಕಾಣಲಿಲ್ಲ. ಸ್ನಾನವೆಂಬುದನ್ನು ತೊರೆದಿದ್ದ ಮಗುವೋ? ಅಥವ ಅದನ್ನು ಹೆತ್ತವರು ಅವನನ್ನು ಮಡಿಗುಡಿಯೆಲ್ಲಾ ವೈದಿಕ ಧರ್ಮದ ಪಾಲಿಸುವವರಿಗೆ ಮಾತ್ರ, ನಮಗೆ ಅವುಗಳೆಲ್ಲಾ ಬೇಡವೆನ್ನುವಂತೆ, ಮಗುವಿನ ಕಾಲುಗಳು ಮಣ್ಣಿಗೆ ಸವಾಲೆಸಿಯುವ ಬಣ್ಣಕ್ಕೆ ತಿರುಗಿದ್ದವು. ಇದು ಈ ಒಂದು ಮಗುವಿನ ಪರಿಸ್ಥಿತಿಯಲ್ಲ. ಕರ್ನಾಟಕದ ಬಹುತೇಕ ಹಳ್ಳಿಗಳ ಮಕ್ಕಳ ಸನ್ನಿವೇಶಗಳು ಹೀಗೆ ಇರುತ್ತಿದ್ದವು. ಆಂಧ್ರ, ತಮಿಳುನಾಡಿನಲ್ಲಿಯೂ ಇದು ಸಾಮಾನ್ಯ ಸಂಗತಿ. ಆದರೇ, ಕೇರ‍ಳದಲ್ಲಿ ಇಂಥಹ ದೃಶ್ಯಗಳು ಅಪರೂಪವಾಗುತ್ತವೆ.


ಮಕ್ಕಳೆಂದರೇ, ಬರೀ ಸಮವಸ್ತ್ರ ಧರಿಸಿ ಶಾಲೆಗೆ ಹೋಗುತ್ತಿರುವ, ಅಮ್ಮನ ಎದೆಹಾಲು ಕುಡಿಯುತ್ತಿರುವ, ಮಕ್ಕಳೆಲ್ಲರೂ ಒಟ್ಟಿಗೆ ಸೇರಿ ಆನಂದಿಸುತ್ತಿರುವ ದೃಶ್ಯವನ್ನೇ ಸದಾ ನೋಡುವ ಪಟ್ಟಣಿಗರಿಗೆ ಇಂಥವುಗಳು ಕಾಣಿಸುವುದಿಲ್ಲ. ನಾನು ನನ್ನ ಜೊತೆಗಾರ ಸಿಂಬ್ಬಂದಿಯವರೊಂದಿಗೆ ಹಳ್ಳಿಗಳಿಗೆ ಹೋದಾಗ ಅವರೆಲ್ಲರೂ ವ್ಯಥೆಪಟ್ಟು ಅಯ್ಯೋ ಪಾಪವೆಂದು, ಮರುಗಿ ಮಗುವಿನ ಫೋಟೋ ತೆಗೆದುಕೊಳ್ಳುವಾಗ ನಾನು ನನ್ನ ಪಾಡಿಗೆ ಇರುತ್ತಿದ್ದೆ. ಅದನ್ನು ಕಂಡ ಕೆಲವರು ಹರೀಶ್ ನಿಮಗೆ ಏನೂ ಅನ್ನಿಸುವುದಿಲ್ಲವಾ ಎನ್ನುತ್ತಿದ್ದರು.ಅದು ಸರಿಯೇ, ಅನ್ನಿಸಿದರೇ ಏನು ಮಾಡಲಿ ನನ್ನಿಂದ ಏನು ಸಾಧ್ಯವಾಗುತ್ತದೆ? ಮರುಗಬಹುದು, ಕೊರಗಬಹುದು ಅದನ್ನು ಬಿಟ್ಟರೇ? ಮರುಕ್ಷಣವೇ ಎನಿಸುತ್ತಿತ್ತು, ಏನಾದರೂ ಮಾಡಲೇಬೇಕೆಂದು.ಅದರ ಪ್ರತಿಕ್ರಿಯೆಯೇ ಸಿಇಇಕೊ ಆರಂಭಿಸಿದ್ದು.ಆದರೂ ನಾನು ಬೆಳೆದದ್ದು ಹಳ್ಳಿಯಲ್ಲಿ, ನನ್ನ ಬಾಲ್ಯದ ನೆನಪುಗಳು ಚೆನ್ನಾಗಿ ನೆನಪಿವೆ. ನನ್ನ ಜೊತೆಗಾರರೂ ಕೆಲವರು ಹೀಗೆ ಇರುತಿದ್ದರು. ಅವರಲ್ಲಿ ಬಡತನವಿರಲಿಲ್ಲ, ಆದರೇ,ಅದೇನೋ ಒಂದು ಬಗೆಯ ತಾತ್ಸಾರ, ಜೀವನದ ಬಗ್ಗೆಯ ನಿರ್ಲಕ್ಷತನ ತುಂಬಿ ತುಳುಕಾಡುತಿತ್ತು. ಅದಕ್ಕೆ ಕಾರಣ ಹುಡುಕುವ ಸ್ಥಿತಿ ನನ್ನದಲ್ಲ, ಅದನ್ನು ನಾನು ಬೇರೆಯಾಗಿಯೂ ನೋಡಿರಲಿಲ್ಲ. ನಮ್ಮ ಮನೆಯಲ್ಲಿನ ಶಿಕ್ಷಣ ಮತ್ತು ಜೀವನ ಶೈಲಿ ಮಿಕ್ಕ ಸ್ನೇಹಿತರ ಮನೆಗಿಂತ ಭಿನ್ನವಾಗಿತ್ತು. ಅದಕ್ಕೆ ಕಾರಣ ಅಪ್ಪ ವಿದ್ಯಾವಂತೆರೆಂದರೇ ತಪ್ಪಿಲ್ಲ. ನಾನು ಮಣ್ಣಿಗೆ ಆಡಲು ಹೋಗುವುದು ಬಂದು ಅಪ್ಪ ಅಮ್ಮ ಇಬ್ಬರ ಕೈಯಿಂದಲೂ ಗೂಸಾ ತಿನ್ನುವುದು ನನ್ನ ದಿನಚರಿಯಾಗಿತ್ತು. ಆದರೇ, ನಾನು ಕೈ ಕಾಲು ತೊಳೆಯದೇ ಮನೆ ಒಳಕ್ಕೆ ಕಾಲಿಡುವುದು ಅಸಾಧ್ಯವಾಗಿತ್ತು, ಒಂದು ಅಮ್ಮ ಹೊಡೆಯುತ್ತಾಳೆಂಬ ಭಯ ಮತ್ತೊಂದು ಅಮ್ಮ ಮನೆಯನ್ನು ಇಡುತ್ತಿದ್ದ ರೀತಿ. ನಮ್ಮೂರಿನಲ್ಲಿ ನಾನು ಕಂಡಿದ್ದ ಕೇಲವೇ ಕೆಲವು ಮನೆಗಳು ಬಹಳ ಚೊಕ್ಕಟವಾಗಿದ್ದವು. ಅವುಗಳಲ್ಲಿ ನಮ್ಮ ಮನೆಯೂ ಒಂದು. ಆದರೇ, ಕೊಳಕಾಗಿ ಬೆಳೆಯಲು ಆಶಿಸಿಸದವನು ನಾನೆಂದರೂ ಸರಿಯೇ. ಇಡೀ ಊರಿನ ಹುಡುಗರೆಲ್ಲರೂ ಮಣ್ಣಿನಲ್ಲಿ ಆಡಿ, ನದಿ ದಂಡೆಯಲ್ಲಿ ಕುಣಿದು, ಕುಪ್ಪಳಿಸಿ, ಮರಕೋತಿ ಆಡಲೂ ಹೋಗಿ ಕೈ ಮುರಿದುಕೊಂಡು ಮನೆಯಲ್ಲಿ ಪರಿಕ್ಷೆ, ಶಾಲೆಯೆಂಬ ಕೊರಗಿಲ್ಲದಿರುವಾಗ ನಾನು ಮಾತ್ರ ಮನೆಯಲ್ಲಿ ಕುಳಿತಿರುವುದು ಸಾಧ್ಯವಾಗಲಿಲ್ಲ.


ನಾನು ನನ್ನ ನೆನಪಿನ ಪುಟಗಳಿಂದ ಹೊರಬರುವುದನ್ನೇ ಕಾಯುತಿದ್ದ ಗೌಡ್ರು ಕೇಳಿದರೂ, "ಏನು ಕನಸಾ, ಹಳೆಯ ನೆನಪುಗಳಾ?". "ಇಲ್ಲ ತಾತ, ಆ ಮಗುವನ್ನು ನೋಡಿದೆ ಅಲ್ವಾ ಹಾಗೆ ನನ್ನ ಬಾಲ್ಯ ನೆನಪಾಯಿತು" ಎಂದೆ. "ಹೌದು ಮಗಾ, ನಮ್ಮ ಮನಸ್ಸು ವಿಚಿತ್ರ ಅನ್ಸುತ್ತೇ ಅಲ್ವಾ?" ಉತ್ತರ ಹೇಳುವ ತಾಕತ್ತು ನನಗಿದೆಯಾ? ವಿಚಿತ್ರವೆನ್ನಿಸುವುದು ಸತ್ಯ, ಆದರೇ ಅದಕ್ಕೆ ಕಾರಣ? "ಹೌದು ತಾತ" ಎಂದೆ. ತಾತ ಮುಂದುವರೆಸಿದರು, "ಮಗಾ, ನನಗೀಗ ನೂರು ದಾಟಿರಬಹುದು. ಬಿಳಿಯ ದೊರೆಗಳ ಕಾಲವನ್ನು ಕಂಡಿದ್ದೇನೆ, ರಾಜರನ್ನು ಕಂಡಿದ್ದೇನೆ, ರಾಜರೇ ನಾವೆಂದು ಬೀಗುತ್ತಿರುವ ಹೊಲಸು ರಾಜಕಾರಣಿಗಳನ್ನು ಕಂಡಿದ್ದೇನೆ. ಆದರೂ, ನನಗೆ ನಾನೇನೆಂಬುದು ಅರ್ಥವಾಗದೇ ಉಳಿದಿದೆ. ನನ್ನ ಬಳಿಗೆ ಕುಳಿತು ಮಾತನಾಡಲು ಹಿಂಜರಿಯುತಿದ್ದ ಕಾಲವೊಂದಿತ್ತು. ಅಂದು ನಾನು ಬಹಳ ಬುದ್ದಿವಂತನೆನಿಸಿಕೊಂಡಿದ್ದೆ ಅನ್ನುವುದಕ್ಕಿಂತ ನಾನು ಯಾರಿಗೂ ಎಂದಿಗೂ ತಲೆಬಾಗಿದವನಲ್ಲ. ಯಾರನ್ನು ನನಗೆ ತಲೆಬಾಗಿ ಎಂದು ಕೇಳಿದವನಲ್ಲ. ಆದ್ದರಿಂದ ಈ ಹುಚ್ಚನ ಸಹವಾಸವೇ ಬೇಡವೆನ್ನುತ್ತಿದ್ದರು. ನಾನು ಹಾಗೆಯೇ ಬದುಕಿದವನು. ಈಗಲೂ ಅಷ್ಟೇ ನನ್ನೊಂದಿಗೆ ಮಾತನಾಡಲು ಅಂಜುತ್ತಾರೆ ನನ್ನ ಮಾತುಗಳು ಅರ್ಥವಾಗುವುದಿಲ್ಲವೆನ್ನುತ್ತಾರೆ. ಕೆಲವರು ತಲೆ ತಿನ್ನುವ ಮುದುಕನೆನ್ನುತ್ತಾರೆ. ಮತ್ತೆ ಕೆಲವರು ಅವನಿಗೆ ದೈವಕೃಪೆಯಿದೆ, ಯಾವುದೋ ಕಾಣದ ಶಕ್ತಿಯೊಂದಿಗೆ ಮಾತನಾಡುತ್ತಾನೆಂಬುದನ್ನು ನಂಬಿದ್ದಾರೆ.............................................................................................................................. ಮುಂದಿನ ಸಂಚಿಕೆಗೆ,

08 ಜುಲೈ 2009

ನನ್ನೊಳಗೆ ಅವಿತು ಹೋಗುವ ಮುನ್ನ ನಿಮ್ಮ ಮಡಿಲಿಗೆ!!!!


ಏನಪ್ಪಾ ಇತ್ತೀಚೆಗೆ ನಮ್ಮನ್ನ ಮರೆತೆ ಬಿಟ್ಟೆ, ಇಷ್ಟೆ ಅಲ್ವಾ ಜನ ತೀಟೆ ತೀರಿದ ಮೇಲೆ ಅವಳ ಸಂಘಯಾಕೆ? ಈ ಮಾತನ್ನು ನನಗೆ ಕಳೆದ ಒಂದು ವಾರದಲ್ಲಿ ಕಡಿಮೆಯೆಂದರೂ, ದಿನಕ್ಕೊಬ್ಬರಂತೆ ಕೇಳಿದ್ದಾರೆ. ನನ್ನ ಬಗ್ಗೆ ನನಗೆ ಸ್ವಲ್ಪ ಅನುಮಾನ ನಾನ್ ಯಾವಾಗ ಇವರ ಜೊತೆ ತೀಟೆ ತೀರಿಸಿಕೊಳ್ಳುವ ಆಟಕ್ಕೆ ಹೋಗಿದ್ದೆ ಅಂತಾ! ಅದರ ಜೊತೆಗೆ ಭಯ ಬೇರೆ ನಾಳೆ ದಿನ ನಾನು ಮದುವೆಯಾದ ಮೇಲೂ ಹೀಗೆ ಹೇಳಿದರೆ ಗತಿ ಏನು ಅಂತಾ? ಅದು ಅಲ್ಲದೇ ಈಗ ಸಲಿಂಗ ಕಾಮಿಗಳಿಗೆ ಬೇರೆ ಪೂರ್ತಿ ಹಕ್ಕು ಸಿಕ್ಕಿದೆ. ಗಂಡಸರ ಎಸ್.ಎಂ.ಎಸ್ ಬಂದರೂ ಕಷ್ಟ ತುಂಬಾ ಸರಳವಾಗಿ ನೀವೂ ಹಾಗೇನಾ? ಎಂದು ಬಿಡುತ್ತಾರೆ. ಹೋಗಲಿ ಬಿಡಿ ಆ ಬಗೆಯ ಆಸೆಗಳೆನೂ ನನಗಿಲ್ಲ. ಮೊದಲೇ ಹೇಳಿದಂತೆ ಇತ್ತೀಚೆಗೆ ಕನ್ನಡ ಸಾಹಿತ್ಯ ಓದುವುದು ಹೆಚ್ಚಾಗಿದ್ದರಿಂದಲೋ ಏನೋ, ನನ್ನ ಸಂಶೋಧನೆಯ ಬಗ್ಗೆ ಬರೆಯೋಣವೆಂದರೂ ಕನ್ನಡದ ಬಗ್ಗೆ, ಇಲ್ಲವೇ, ಕನ್ನಡದಲ್ಲಿ ಬರೆಯತೊಡಗುತ್ತಿದ್ದೇನೆ. ಅದೇನೂ ಮಹಾ ಅಂತ ಅನ್ನಬೇಡಿ, ಕನ್ನಡ ಅನ್ನೊದು, ಅಥವಾ ಮಾತೃಭಾಷೆ ಅನ್ನೋದು ಒಂದು ಬಗೆಯ ಕಾಡುಜೇನಿನ ಹಾಗೆ, ಅದನ್ನು ಸವಿದರೇ ಗೊತ್ತು, ಎಷ್ಟು ತಿಂದರೂ ಹೊಟ್ಟೆ ತುಂಬುವುದಿಲ್ಲ, ಹಾಗೆಯೇ ಕನ್ನಡದ ವಿಷಯದಲ್ಲಿಯೂ ಅಷ್ಟೆ ಆ ಪದಗಳು ಆ ಸರಳತೆ, ಇವೆಲ್ಲಾ ಅದೆಷ್ಟೂ ಮುದನೀಡುತ್ತವೆನಿಸುತ್ತದೆ. ನನ್ನ ಜೀವನದಲ್ಲಿ ನಡೆದ ಒಂದು ಊರಿನ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೆತ್ನಿಸುತ್ತಿದ್ದೇನೆ. ನನಗೆ ನೇರ ಹೇಳುವುದನ್ನು ಬಿಟ್ಟರೇ ಈ ಕಥೆ ಹೇಳುವುದು ಸರಿಹೊಂದುವುದಿಲ್ಲ, ಆದರೂ ಹೇಳಲೇಬೇಕೆಂಬ ಹಟ ನನ್ನದು ಓದುವುದಿಲ್ಲವೆಂದು ಪಣತೊಟ್ಟರೇ ನಾನು ನಿಮ್ಮ ಶತ್ರುವಾಗಲಾರೆ.


ಅದೊಂದು ಪುಟ್ಟ ಹಳ್ಳಿ, ಇದೇನು ಯಾರು ಕಥೆ ಬರೆಯೋಕೆ ಶುರು ಮಾಡಿದರೂ ಬರೀ ಪುಟ್ಟ ಹಳ್ಳಿಯ ಬಗ್ಗೆಯೇ ಹೇಳುತ್ತಾರಲ್ಲವೆಂದುಕೊಳ್ಳಬೇಡಿ. ನನ್ನಂತ ಸಣ್ಣ ಮನುಷ್ಯ ಚಿಕ್ಕ ಊರಿನ ಬಗ್ಗೆ ಸಣ್ಣ ಕಥೆಗಳನ್ನು ಮೀರಿ ಇನ್ನೇನು ಬರೆಯಲಾದೀತು. ಅದೇನೆ ಇರಲಿ, ಆ ಊರಿನ ಹೆಸರೇ ನಿಮ್ಮನ್ನು ಆಕರ್ಷಿಸುವಂತಿದೆ, ಅದು ನಿಮ್ಮನ್ನು ಆಕರ್ಷಿಸದಿದ್ದರೂ ನನ್ನನ್ನು ತುಂಬಾ ಗಾಢ ಚಿಂತನೆಯಲ್ಲಿ ಮುಳುಗಿಸಿತ್ತು. ಆ ಊರಿನ ಹೆಸರು ಕಂಬಳಿ, ಆ ಊರಿನ ಹೆಸರು ಕೇಳಿದ ತಕ್ಷಣ ನನಗೆ ನೆನಪಾದ ಒಂದು ಚುಟುಕು ಹೇಳುತ್ತೇನೆ. ಪ್ರಿಯತಮೆ ಹೇಳಿದಳು ಪ್ರಿಯತಮನಿಗೆ,
ಪ್ರಿಯ ಈ ಊರಿನಲ್ಲಿ ಬಹಳ ಚಳಿ ಚಳಿ,
ಚೆನ್ನಾಗಿರುತ್ತಿತ್ತು ಇದ್ದಿದ್ದರೆ ಒಂದು ಕಂಬಳಿ,
ಅದಕ್ಕವನೆಂದ,
ಅದಕ್ಕೇನು ಪ್ರಿಯ ನಿನ್ನ ಚಳಿ ಹೋಗಲಾಡಿಸುವೆ ಇಲ್ಲದಿದ್ದರೂ ಕಂಬಳಿ,
ನೀನೊಮ್ಮೆ come ಬಳಿ.
ಎಂದನಂತೆ,


ಅದು ಸರಿಯೇ, ಮೈ ಶಾಖ ಹೆಚ್ಚಿಸಲು ಕಂಬಳಿ ಏನು ಬೇಕಿಲ್ಲವಲ್ಲ. ಈ ಊರಿಗೆ ಕಂಬಳಿ ಹೆಸರು ಬಂದಿದ್ದು ಹೇಗೆ ಎಂದು ಎಲ್ಲರನ್ನೂ ಕೇಳಿದೆ, ಇಲ್ಲಿ ಕಂಬಳಿ ಮಾಡುವವರಿದ್ದರೆಂಬುದು ನನ್ನ ನಂಬಿಕೆಯಾಗಿತ್ತು, ಇಲ್ಲ ಇಲ್ಲಿ ಅಂಥವುದ್ಯಾವುದೂ ಇರಲಿಲ್ಲ. ಆ ಊರಿನ ಮೂರು ಕಡೆಯಿಂದಲೂ ಬೆಟ್ಟದ ತಪ್ಪಲಿನಿಂದ ಆವರಿಸಿದ್ದು, ಅಲ್ಲಿ ಮಂಜು ಕಂಬಳಿಯಂತೆ ಕವಿಯುತಿತ್ತು ಮತ್ತು ಕಾಡು ಕಂಬಳಿಯಂತಿತ್ತು ಎಂಬುದು ಅವರ ವಿವರಣೆ. ಆದರೇ, ನಾನು ಹೋದಾಗ ಆ ಊರಿನಲ್ಲಿ ಕಾಡಿತ್ತೆಂಬುದರ ಕುರುಹು ಉಳಿದಿರಲಿಲ್ಲ. ಬರೀ ಬೋಳಾದ ಗುಡ್ಡಗಳಿದ್ದವು. ಆದರೂ ಏನೋ ಒಂದು ಬಗೆಯ ಆಕರ್ಷಣೆ ಅಲ್ಲಿತ್ತು. ಹೋದ ಊರಿನ ಚರಿತ್ರೆ ಹಿಡಿದು ಆ ಊರಿನ ಬಗ್ಗೆ ಆದಷ್ಟೂ ವಿಷಯಗಳನ್ನು ಸಂಗ್ರಹಿಸುವುದು ನನ್ನ ಚಟಗಳಲ್ಲಿ ಒಂದು. ಬಂದಿದ್ದು ಬಂದಾಗಿದ್ದೆ, ಊರನ್ನು ಸಂಪೂರ್ಣ ಸುತ್ತಾಡೋಣವೆಂದು ನನ್ನ ನೆಂಟರನ್ನು ಕೇಳಿದೆ. ಈ ಊರಿನಲ್ಲೇನಿದೆ, ಸುತ್ತಾ ಗುಡ್ಡಗಳು, ಆ ನದಿ ಬಿಟ್ಟರೇ ಎಂದರು. ಸರಿಯೆಂದು, ಊರಿನ ಅಂಗಡಿಯ ಬಳಿಗೆ ಹೋದವನು, ಸಿಗರೇಟು ಕೊಂಡು ಹೊರಟೆ.


ಹಳ್ಳಿಗಳಲ್ಲಿ, ನನಗೆ ಖುಷಿಯಾಗುವ ವಿಷಯವೆಂದರೇ, ಅಲ್ಲಿ ಅಪರಿಚಿತರೆನಿಸಿದವರ ಸಂಪೂರ್ಣ ವಿವರಣೆ ಪಡೆಯುವುದು. ನಾನು ಅಂಗಡಿಯ ಬಳಿಗೆ ಹೋದಾಗ, ನಾನು ಕೇಳಿದ ಸಿಗರೇಟ್ ಇರಲಿಲ್ಲ, ಯಾವೂರೋ ತಮ್ಮದು? ನಾನು ಹಿಂತಿರುಗಿ ನೋಡಿದೇ ಆಕಾಶವಾಣಿಯಲ್ಲ ಇದು, ಅಲ್ಲಿಯೇ ಇದ್ದ ಒಂದು ಮಧ್ಯಮ ವಯಸ್ಕನ ದ್ವನಿ. ನನ್ನೂರು ಬಾನುಗೊಂದಿ ಎಂದೆ, ಹಳ್ಳಿಗರ ಜಾಣ್ಮೆ ಮೆಚ್ಚಲೇ ಬೇಕು. ಊರಿನ ಹೆಸರು ಕೇಳಿದ ತಕ್ಷಣವೇ, ಹೋ ನೀವು ದೊಡ್ಡೇಗೌಡರ ಮನಗೆ ಬಂದಿರೋದಾ? ಏನ್ ಆಗ್ಬೇಕು ಅವರು ನಿಮಗೆ ಅದು ಇದು ಅಂತಾ ಶುರು ಆಗಿ ಕಡೆಗೆ, ನಮ್ಮಪ್ಪ, ಅಮ್ಮ ಅಜ್ಜ ಅಜ್ಜಿಯ ಬಗ್ಗೆ ಮಾತು ಮುಂದುವರೆಸುವ ಸಾಹಸ ಮಾಡಿದರು. ನಾನು ಈ ಪುಣ್ಯಾತ್ಮನ ಕೈಯ್ಯಿಗೆ ಸಿಕ್ಕರೆ ಎಲ್ಲರ ತಲೆಯನ್ನು ಕೆಡಿಸುವ ನನ್ನ ತಲೆಗೆ ಹುಳು ಸೇರುತ್ತದೆಂದು ಹೊರಟೆ.
ಆ ಊರಿನ ಗುಡ್ಡ ಹತ್ತಿ ನೋಡಿದಾಗಲೇ ಅಲ್ಲಿನ ವಿಸ್ಮಯ ನನಗೆ ಅರಿವಾಗಿದ್ದು, ಅದೊಂದು ಸುಂದರ ತಾಣ. ನಿಜಕ್ಕೂ ಆ ಬೆಟ್ಟದ ಮೇಲೆ ನಿಂತು ನೋಡಿದರೇ, ಹರಿಯುವ ನದಿ, ಅಲ್ಲಿನ ಮರಗಳ ತೋಪು, ಮನಮೋಹಕವಾಗಿತ್ತು. ಅಲ್ಲಿ ಹಿಂದೆ ಗಂಧದ ಮರಗಳಿದ್ದವೆಂಬುದಕ್ಕೇ ಸಾಕ್ಷಿಯಾಗಿ ಅದನ್ನು ಕಡಿದ ಜಾಗದಲ್ಲಿ ಮತ್ತೆ ಮೊಳೆತ ಗಿಡಗಳಿದ್ದವು. ಊರು ಬದಲಾಗಿದ್ದು ಕೇಲವೇ ವರ್ಷಗಳಲ್ಲಿ, ಅಂದರೇ, ಎಂಬತ್ತೈದರಿಂದ ಸುಮಾರು ತೊಂಬತ್ತೈದರ ವರೆಗೆ ಕೇವಲ ಹತ್ತು ವರ್ಷಗಳಲ್ಲಿ, ನಿಸರ್ಗದ ಮಡಿಲಾಗಿದ್ದ ಕಂಬಳಿ, ಮಂಜಿನಿಂದ ತಂಪಾಗಿರುತ್ತಿದ್ದ ಕಂಬಳಿ, ಬೇಸಿಗೆಯ ದಳಕ್ಕೆ ಕುಸಿದು, ಕಂಬಳಿ ಹುಳುಗಳ ಗೂಡಾಯಿತು. ಈ ಮಟ್ಟಿಗಿನ ಬದಲಾವಣೆ ಆಗಲೂ ಸಾಧ್ಯವೇ?


ಎಂಬತ್ತರ ಸುಮಾರಿಗೆ ಊರಿನಲ್ಲಿ ಇದ್ದದ್ದು, ೭೦ ಮನೆಗಳು ಈಗ ದುಪ್ಪಟ್ಟಾಗಿವೆ, ೧೪೦ ಮನೆಗಳಿವೆ. ಮೊದಲು ಒಂದು ಭಾಗದಲ್ಲಿ ನದಿ ಹರಿಯುತ್ತಿದ್ದು, ಆ ನದಿ ನೀರನ್ನು ಏತಗಳ ಮೂಲಕ ನೀರಾವರಿಗೆ ಬಳಸುತಿದ್ದರು. ಏತ ನೀರಾವರಿಯೆಂದರೇ ಕೆಲವರಿಗೆ ತಿಳಿದಿರುವುದಿಲ್ಲ. ಭಾವಿಯಿಂದ ನೀರೆತ್ತುವ ಸಾಧನ. ಕೆಲವೊಮ್ಮೆ ಎತ್ತುಗಳನ್ನು ಕಟ್ಟಿ, ಅನೂಕೂಲತೆಯಿಲ್ಲದವರು ಮನೆ ಮಂದಿ ಸೇರಿ ನೀರೆತ್ತಲೂ ತೊಡಗುತ್ತಿದ್ದರು. ಇಂಥಹ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಆಗಮಿಸಿದ್ದು, ಹಾರಂಗಿ ಜಲಾಶಯದ ನೀರು. ಕಾಲುವೆ ತೋಡಿ, ಇದ್ದ ಹೊಲವನ್ನು ಗದ್ದೆಗಳಾಗಿ ಪರಿವರ್ತಿಸುವ ಕೆಲಸ ರಭಸವಾಗಿ ನಡೆಯಿತು. ಆರಂಭದ ದಿನಗಳಲ್ಲಿ, ಹೊಲ ಭತ್ತ ಬೆಳೆಯುತ್ತಿದ್ದ ರೈತರು ಕ್ರಮೇಣ ತಮ್ಮ ಜಮೀನಿನ್ನಲಿದ್ದ ಮರಗಳನ್ನು ಕಡಿದು ಗದ್ದೆಯಾಗಿಸತೊಡಗಿದರು. ಅವರ ಕಣ್ಣುಗಳಲ್ಲಿ ದುಡ್ಡು ಸಂಪಾದನೆಯ ಕನಸು ಅವರನ್ನು ಮೀರಿ ಬೆಳೆಯತೊಡಗಿತ್ತು. ಮರ ಕಡಿದು ಮಾಡುವುದೇನು, ಮರ ಇದ್ದರೂ ಅದನ್ನು ಕಡಿಸಿ, ಮಂಚ ಕುರ್ಚಿ ಮಾಡಿಸಲು ಹಣ ಕೊಡುವವರಾರು? ಅಲ್ಲಿದ್ದ, ಹೊನ್ನೆ, ಬೀಟೆ, ತೇಗದ ಮರಗಳು, ಹೇಳ ಹೆಸರಿಲ್ಲದಂತೆ, ಬಿಟ್ಟಿಯಾಗಿಯೇ ದೋಚಲಾಯಿತು. ಹೊರಗಿನ ಪ್ರಪಂಚವನ್ನೇ ಕಾಣದ, ಕಂಬಳಿ ಎಂಬ ಊರಿಗೆ ದೂರದ ಊರಿನವರೆಲ್ಲಾ ಬಂದು ಅಲ್ಲಿದ್ದ ಸಂಪತ್ತನ್ನು ದೋಚುವುದರಲ್ಲಿ ಸಿರಿವಂತರಾಗತೊಡಗಿದರು.ಆದರೇ, ಊರಿಗೆ ನೀರು ಬಂದರೇ, ನಾವೆಲ್ಲಾ ರಾತ್ರೋ ರಾತ್ರಿ ಶ್ರೀಮಂತರಾಗುವೆಂಬ ಭ್ರಮೆಯಲ್ಲಿ ಕಂಬಳಿ ಹೊದ್ದು ಮಲಗಿದವರು ಕಂಬಳಿಯ ಜನರು.


ನನಗೆ ಆಶ್ಚರ್ಯವಾದ ವಿಷಯಗಳಲ್ಲಿ ಒಂದನ್ನು ನಾನು ನಿಮಗೆ ಹೇಳುವುದಕ್ಕೆ ಇಷ್ಟಪಡುತ್ತೇನೆ. ಅದೆಂದರೇ, ಆ ಊರಿನ ಹಬ್ಬಗಳು, ಮತ್ತು ಆಚರಣೆಗಳು. ಊರಿನ ಇತಿಹಾಸವನ್ನು ಬಣ್ಣಿಸುವಾಗ ಅವರ ಕಣ್ಣುಗಳಲ್ಲಿ ಕಾಣುವ ಸಂತೋಷಕ್ಕೆ ಮಿತಿಯಿಲ್ಲ ಅದರಂತೆಯೇ ಅವರು ಕಳೆದು ಹೋದ ದಿನಗಳಿಗೆ ಚಿಂತಿಸುವುದಿಲ್ಲ ಆದರೇ ಅದರ ನೆನಪು ಅವರನ್ನು ಕಾಡದೇ ಬಿಡುವುದಿಲ್ಲ. ನಮ್ಮ ಕೈಯ್ಯಲ್ಲಿ ಏನೂ ಇಲ್ಲವೆನ್ನುವುದನ್ನು ಅವರು ಒಪ್ಪಿದರೂ, ಇವೆಲ್ಲಾ ನಾವು ಬಯಸಿದ್ದಲ್ಲವೆನ್ನುತ್ತಾರೆ. ಕಾಣದ ದೇವರ ಕಡೆಗೆ ಕೈತೋರಿ ಎಲ್ಲ ಅವನು ಬಯಸಿದಂತೆ ನಡೆಯಿತೆನ್ನುತ್ತಾರೆ. ಮರುಗಳಿಗೆಗೆ, ಇವೆಲ್ಲಾ ನಾವೇ ನಮಗೆ ಮಾಡಿಕೊಂಡ ದ್ರೋಹವೆಂದು ಮರುಗುತ್ತಾರೆ. ಎಲ್ಲವನ್ನೂ ಒಗಟಾಗಿ ಆಡುತ್ತಾರೆನಿಸಿದರೂ ಅವರೊಳಗಿರುವ ನೋವನ್ನು ಹೊರಹಾಕಲು ಪದಗಳು ಸಿಗುತ್ತಿಲ್ಲವೆಂಬುದು ನನಗೆ ಅರ್ಥವಾಯಿತು. ಅಂಥಹ ನೋವುಂಟು ಮಾಡಿದ್ದೇನೆಂದು ನಾನು ಮರುಪ್ರಶ್ನೆ ಹಾಕಲಿಲ್ಲ, ಹಾಕಿದಿದ್ದರೇ ಇಂದು ನೀವು ನನ್ನನ್ನು ನೋಡಲಾಗುತ್ತಿರಲಿಲ್ಲವೆಂಬುದು ನನ್ನ ಅಭಿಪ್ರಾಯ.


ಹಿಂದಿನ ಜೀವನ ಇಂದಿನಷ್ಟು ದುಸ್ತರವಾಗಿರಲಿಲ್ಲ, ಊರಿಗೆ ಬಸ್ಸು, ಕಾರು ಇರಲಿಲ್ಲ, ಅದಕ್ಕೂ ಮಿಗಿಲಾಗಿ, ರಸ್ತೆಯೆಂಬುದೇ ಇರಲಿಲ್ಲ, ಕಾಡು ರಸ್ತೆಯೇ ಅವರಿಗೆ ಆಧಾರ. ಎತ್ತಿನ ಗಾಡಿಯ ಓಡಾಟ ಸಾಮಾನ್ಯವಾಗಿದ್ದರೂ, ಬಹಳ ಮಂದಿ ಬರಿಗಾಲಲ್ಲಿ ನಡೆದು ಹೋಗುತ್ತಿದ್ದರು. ಒಕ್ಕಲಿಗರೇ ಹೆಚ್ಚಿದ್ದ ಊರಿನಲ್ಲಿ, ಹರಿಜನರ ಕಾಲೋನಿ ಊರಿನಿಂದ ಹೊರಕ್ಕಿದ್ದದ್ದು ಬಿಟ್ಟರೇ ಮಿಕ್ಕ, ಮಡಿವಾಳರು, ನಾಯಕರು, ಆಚಾರರು, ಊರಿನ ಮಧ್ಯೆಯೇ ಇದ್ದರು. ಜಾತಿ ವ್ಯವಸ್ತೆಯೆಂಬುದು ಅವರೊಂದಿಗೆ ಬೆಳೆದು ಬಂದ ಒಂದು ಪದ್ದತಿಯಾಗಿತ್ತೆ ಹೊರತು ಅದನ್ನು ಬೆಳೆಸಿಕೊಂಡು ಹೋಗುವುದೇ ಅವರ ಗುರಿಯಾಗಿರಲಿಲ್ಲ.ಷಷ್ಠಿ ಶುರುವಾದರೇ ಮುಗಿಯಿತು, ಊರಿನ ಗಂಡಸರು ದನಗಳ ಜಾತ್ರೆಯ ನೆಪದಲ್ಲಿ, ಮೊದಲ ತಿಂಗಳು ರಾಮನಾಥಪುರ ನಂತರ, ಚುಂಚನಕಟ್ಟೆ, ಅನಂತರ ಹಾಸನದ ಜಾತ್ರೆ ಮುಗಿಸಿಯೇ ಮನೆ ಸೇರುತ್ತಿದ್ದದ್ದು. ಅದರಿಂದ ಅವರೇನೂ ಸಾವಿರಾರು ರೂಪಾಯಿ ಲಾಭ ಗಳಿಸುತ್ತಿರಲಿಲ್ಲ. ಆದರೂ, ಅದೊಂದು ಮೋಜೆನಿಸಿತ್ತು. ಅಲ್ಲಿಂದ ಬರುವ ವೇಳೆಗೆ ಮನೆಯಲ್ಲಿ ಬೆಳೆದ ಮಕ್ಕಳು, ಸುಗ್ಗಿಯ ಸ್ವಾಗತಕ್ಕಿರುತ್ತಿದ್ದರು. ಬಂದವರೇ, ಕಾಲಿಗೆ ಗೆಜ್ಜೆ ಕಟ್ಟಿ, ಕೋಲಾಟವಾಡುತ್ತಿದ್ದರು. ಊರಿನ ಮಧ್ಯಭಾಗದಲ್ಲಿ, ಅರಳಿಮರವಿತ್ತು, ಅದಕ್ಕೆ ಕಟ್ಟೇಯೇನೂ ಇರಲಿಲ್ಲ. ಆದರೂ ಮಾಗಿ ಚಳಿ ಮುಗಿದ ಮೇಲೆ, ಭರಣಿ ಮಳೆ ಬೀಳುವ ತನಕವೂ ಊರಿನ ಜನರೆಲ್ಲಾ ಅಲ್ಲೇಯೇ ಮಲಗುತ್ತಿದ್ದರು. ಅಂದರೇ, ದಂಪತಿಗಳ ನಡುವಿನ ರಾತ್ರಿ ಕಾರ್ಯಚಟುವಟಿಕೆಗಳು? ಇಂಥಹ ಮರುಳು ಮರುಳು ಪ್ರಶ್ನೆ ಯಾಕಾದರೂ ಬರುತ್ತದೆ ನಿಮ್ಮ ತಲೆಯಲ್ಲಿ?......................................................................................................................ಮುಂದಿನ ಸಂಚಿಕೆಗೆ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...