ಸಂಗೀತವೆಂಬುದು ಬರಿಯ ಸಂತೋಷಕ್ಕೆ ಮಾತ್ರವಲ್ಲ ಅದರಿಂದ ಗುಣವಾಗದ ರೋಗವಿಲ್ಲ, ಮನುಷ್ಯನ ನೆಮ್ಮದಿಯ ಬದುಕಿಗೆ, ನೋವಿನಿಂದ ಹೊರಬರಲು ಸಂಗೀತ ಬಹಳ ಮುಖ್ಯವಾದದ್ದು, ನನ್ನಂತಹ ಸಾವಿರಾರು ನೊಂದ ಮನಗಳಿಗೆ ಶಕ್ತಿ ತುಂಬವ ಗಾಯನಗಳು ಕಡಿಮೆ ಅಲ್ಲ. ಆದರೇ, ರಾಜಕಾರಣಿಗಳು ತಿವಾರಿ ತನ್ನ ಎಂಬತ್ತನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳದ ಬಗ್ಗೆಗೆ ದೂರಾದಾಗ, ಅಯ್ಯೋ ಇಂಥಹ ನನ್ಮಕ್ಕಳು ಸಾಯಬಾರದೇ ಎನಿಸುತ್ತದೆ.ದೇವೇಗೌಡರು ಪದೇ ಪದೇ ಗಾನ ಹಾಡುವಾಗ ಈ ಮುದುಕನಿಗೆ ಸಾವು ಬರುವುದೆಂದು ಎನಿಸುತ್ತದೆ? ನಮ್ಮ ಅನೇಕ ಪ್ರೋಫೆಸರ್ ಗಳು ವಯಸ್ಸಿನ ಮಿತಿಯಿಲ್ಲದೇ ಕೆಟ್ಟದ್ದಾಗಿ ವರ್ತಿಸಿದ್ದಾಗ ಛೀ ಥೂ ಅನಿಸುತ್ತದೆ. ಅದರಂತೆಯೇ ಮೊನ್ನೆ ಎಂ.ಪಿ.ಪ್ರಕಾಶ್ ಅವರು ಬರೆದ ಒಂದು ಕಥೆ ಓದುತ್ತಿದ್ದಾಗ ಅಯ್ಯೊ ಇವರು ಇರಬೇಕಿತ್ತು ರಾಜಕೀಯದಲ್ಲಿ ಎನಿಸುತ್ತಿತ್ತು, ನನ್ನ ನೆಚ್ಚಿನ ಬರಹಗಾರರಾದ ತೇಜಸ್ವಿ ಅವರು ಹೋದಾಗ ನಿಜಕ್ಕೂ ಅದೆಷ್ಟು ವ್ಯತೆಯಾಯಿತೆಂದರೇ ಹೇಳತೀರದು. ರಾಜಶೇಖರ್ ರೆಡ್ಡಿ ಹೋದಾಗಲೂ ಅಷ್ಟೇ.ಯಾರ ಸಾವು ನಮಗೆ ಸಂತೋಷ ಕೊಡುವುದಿಲ್ಲ, ಅಂಥಹ ವೀರಪ್ಪನ್ ಸತ್ತಾಗಲೂ, ಪ್ರಭಾಕರನ್ ಹೋದಾಗಲೂ, ನಮಗೆ ನೋವಾಗಿತ್ತು. ಸತ್ತಾಗ ನಾವು ಅವರನ್ನು ಕಾಣುವುದು ಕೇವಲ ಮನುಷ್ಯರಾಗಿ, ಅಲ್ಲಿ ಒಳ್ಳೆಯವರು ಕೆಟ್ಟವರೆಂಬ ಭೇಧವಿರುವುದಿಲ್ಲ. ಎಲ್ಲ ಜೀವವೂ ಒಂದೆ ಎಂದು ನೆನೆಯುತ್ತೇವೆ. ಬದುಕಿದ್ದಾಗ ನೋವು ಕೊಡುವವರನ್ನು, ಮೋಸ ಮಾಡುವವರನ್ನು ಅವರಿಗೆ ಕೆಟ್ಟದ್ದಾಗಲೀ ಎಂದು ಬಯಸಿದರೂ, ಅವರಿಗೆ ಕೆಟ್ಟದ್ದಾದಾಗ ಮರುಗುತ್ತೇವೆ, ಕೊರಗುತ್ತೇವೆ. ನನ್ನ ಜೀವದ ಗೆಳತಿ ಹೋದಾಗ ನನ್ನ ಜೀವವೇ ಹೋದಂತಾಗಿ ಅವಳಿಗೆ ಶಾಪವಿತ್ತರೂ ಅವಳ ಕಣ್ಣಲ್ಲಿ ನೀರು ಬಂದರೇ ನಾನು ಕರಗುತ್ತೇನೆ ಕಳೆದೇಹೋಗುತ್ತೇನೆ, ಕಾರಣ ನಾನು ಮನುಷ್ಯನೇ!!! ಇದೆಲ್ಲವೂ ನಮ್ಮ ಸ್ವಾರ್ಥಕ್ಕೆ ಅನಿಸುತ್ತದೆ ನಮ್ಮವರಾಗಿರುವ ತನಕ ಅವರಿಗೆ ಏನು ಆಗದಿರಲಿ ಎನ್ನುವ ಬಯಕೆ ನಮ್ಮವರಲ್ಲದೇ ಹೋದರೇ ಹಾಳಾಗಲೀ ಎನ್ನುವ ತವಕ. ಇದು ಸ್ವಾರ್ಥವೋ? ಅಥವಾ ಸಾರ್ಥಕತೆಯೋ? ಒಳ್ಳೆಯವರು ಮಾತ್ರ ಇರಲಿ ಎಂಬ ಬಯಕೆ ಇರಬಹುದೇ? ಅದಕ್ಕಾಗಿಯೇ ನಾವು ಅಂಥವರನ್ನು ಬಹಳ ಕಾಲ ಇರಲಿ ಎಂದು ಹಾರೈಸುತಿರುವುದೇ? ಉತ್ತರ ನಿಮಗೆ ಬಿಟ್ಟದ್ದು...
ಇಲ್ಲಿ ಮೂಡಿರುವ ಅಕ್ಷರಗಳು ಕೇವಲ ಅಕ್ಷರಗಳಲ್ಲ, ನನ್ನಂತರಾಳದಿಂದ ಹೊಮ್ಮುತ್ತಿರುವ ಭಾವನೆಗಳ ಅಲೆಗಳು. ಒಂದೊಂದು ಪದವೂ ನನ್ನೊಳಗಿನಿಂದ ಅರಳುತ್ತಿರುವ ಪ್ರೀತಿಯ ಸುಮಧುರ ಸುಗಂಧದ ಪರಿಮಳವೂ. ಚಟುವಟಿಕೆಗಳ ಮೂಲಕ ಪರಿಸರ ಶಿಕ್ಷಣವನ್ನು ಸೀಕೋ ಸಂಸ್ಥೆಯು ಕಲಿಸುತ್ತಿದೆ. ಅದರ ಜೊತೆಯಲ್ಲಿ ನೀರು ನಿರ್ವಹಣೆ, ಪರಿಸರ ಸಂರಕ್ಷಣೆ, ನೈರ್ಮಲ್ಯ, ಸಮಗ್ರ ಜಲಸಂರಕ್ಷಣೆ, ನದಿ ಆರೋಗ್ಯ, ಪರಿಸರ ಸಾಹಿತ್ಯ, ಸಮಗ್ರ ಗ್ರಾಮೀಣಾಭಿವೃದ್ಧಿಯ ಕುರಿತು ಸಮಾನ ಮನಸ್ಕರುಗಳ ಅಭಿಪ್ರಾಯ ಅನಿಸಿಕೆಗಳನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಈ ಮೂಲಕ ಎಲ್ಲರನ್ನು ಒಳಗೊಂಡು ಸಂರಕ್ಷಣೆಯೊಂದಿಗೆ ಮುಂದಿನ ಪೀಳಿಗೆಗೆ ಉತ್ತಮ ಭೂಮಿಯನ್ನು ಬಿಟ್ಟು ಹೋಗೋಣ.
30 ಡಿಸೆಂಬರ್ 2009
ಇದೊಂದು ಸಾರ್ಥಕತೆಯೋ? ಅಥವಾ ಸ್ವಾರ್ಥವೋ?
ಸಂಗೀತವೆಂಬುದು ಬರಿಯ ಸಂತೋಷಕ್ಕೆ ಮಾತ್ರವಲ್ಲ ಅದರಿಂದ ಗುಣವಾಗದ ರೋಗವಿಲ್ಲ, ಮನುಷ್ಯನ ನೆಮ್ಮದಿಯ ಬದುಕಿಗೆ, ನೋವಿನಿಂದ ಹೊರಬರಲು ಸಂಗೀತ ಬಹಳ ಮುಖ್ಯವಾದದ್ದು, ನನ್ನಂತಹ ಸಾವಿರಾರು ನೊಂದ ಮನಗಳಿಗೆ ಶಕ್ತಿ ತುಂಬವ ಗಾಯನಗಳು ಕಡಿಮೆ ಅಲ್ಲ. ಆದರೇ, ರಾಜಕಾರಣಿಗಳು ತಿವಾರಿ ತನ್ನ ಎಂಬತ್ತನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳದ ಬಗ್ಗೆಗೆ ದೂರಾದಾಗ, ಅಯ್ಯೋ ಇಂಥಹ ನನ್ಮಕ್ಕಳು ಸಾಯಬಾರದೇ ಎನಿಸುತ್ತದೆ.ದೇವೇಗೌಡರು ಪದೇ ಪದೇ ಗಾನ ಹಾಡುವಾಗ ಈ ಮುದುಕನಿಗೆ ಸಾವು ಬರುವುದೆಂದು ಎನಿಸುತ್ತದೆ? ನಮ್ಮ ಅನೇಕ ಪ್ರೋಫೆಸರ್ ಗಳು ವಯಸ್ಸಿನ ಮಿತಿಯಿಲ್ಲದೇ ಕೆಟ್ಟದ್ದಾಗಿ ವರ್ತಿಸಿದ್ದಾಗ ಛೀ ಥೂ ಅನಿಸುತ್ತದೆ. ಅದರಂತೆಯೇ ಮೊನ್ನೆ ಎಂ.ಪಿ.ಪ್ರಕಾಶ್ ಅವರು ಬರೆದ ಒಂದು ಕಥೆ ಓದುತ್ತಿದ್ದಾಗ ಅಯ್ಯೊ ಇವರು ಇರಬೇಕಿತ್ತು ರಾಜಕೀಯದಲ್ಲಿ ಎನಿಸುತ್ತಿತ್ತು, ನನ್ನ ನೆಚ್ಚಿನ ಬರಹಗಾರರಾದ ತೇಜಸ್ವಿ ಅವರು ಹೋದಾಗ ನಿಜಕ್ಕೂ ಅದೆಷ್ಟು ವ್ಯತೆಯಾಯಿತೆಂದರೇ ಹೇಳತೀರದು. ರಾಜಶೇಖರ್ ರೆಡ್ಡಿ ಹೋದಾಗಲೂ ಅಷ್ಟೇ.ಯಾರ ಸಾವು ನಮಗೆ ಸಂತೋಷ ಕೊಡುವುದಿಲ್ಲ, ಅಂಥಹ ವೀರಪ್ಪನ್ ಸತ್ತಾಗಲೂ, ಪ್ರಭಾಕರನ್ ಹೋದಾಗಲೂ, ನಮಗೆ ನೋವಾಗಿತ್ತು. ಸತ್ತಾಗ ನಾವು ಅವರನ್ನು ಕಾಣುವುದು ಕೇವಲ ಮನುಷ್ಯರಾಗಿ, ಅಲ್ಲಿ ಒಳ್ಳೆಯವರು ಕೆಟ್ಟವರೆಂಬ ಭೇಧವಿರುವುದಿಲ್ಲ. ಎಲ್ಲ ಜೀವವೂ ಒಂದೆ ಎಂದು ನೆನೆಯುತ್ತೇವೆ. ಬದುಕಿದ್ದಾಗ ನೋವು ಕೊಡುವವರನ್ನು, ಮೋಸ ಮಾಡುವವರನ್ನು ಅವರಿಗೆ ಕೆಟ್ಟದ್ದಾಗಲೀ ಎಂದು ಬಯಸಿದರೂ, ಅವರಿಗೆ ಕೆಟ್ಟದ್ದಾದಾಗ ಮರುಗುತ್ತೇವೆ, ಕೊರಗುತ್ತೇವೆ. ನನ್ನ ಜೀವದ ಗೆಳತಿ ಹೋದಾಗ ನನ್ನ ಜೀವವೇ ಹೋದಂತಾಗಿ ಅವಳಿಗೆ ಶಾಪವಿತ್ತರೂ ಅವಳ ಕಣ್ಣಲ್ಲಿ ನೀರು ಬಂದರೇ ನಾನು ಕರಗುತ್ತೇನೆ ಕಳೆದೇಹೋಗುತ್ತೇನೆ, ಕಾರಣ ನಾನು ಮನುಷ್ಯನೇ!!! ಇದೆಲ್ಲವೂ ನಮ್ಮ ಸ್ವಾರ್ಥಕ್ಕೆ ಅನಿಸುತ್ತದೆ ನಮ್ಮವರಾಗಿರುವ ತನಕ ಅವರಿಗೆ ಏನು ಆಗದಿರಲಿ ಎನ್ನುವ ಬಯಕೆ ನಮ್ಮವರಲ್ಲದೇ ಹೋದರೇ ಹಾಳಾಗಲೀ ಎನ್ನುವ ತವಕ. ಇದು ಸ್ವಾರ್ಥವೋ? ಅಥವಾ ಸಾರ್ಥಕತೆಯೋ? ಒಳ್ಳೆಯವರು ಮಾತ್ರ ಇರಲಿ ಎಂಬ ಬಯಕೆ ಇರಬಹುದೇ? ಅದಕ್ಕಾಗಿಯೇ ನಾವು ಅಂಥವರನ್ನು ಬಹಳ ಕಾಲ ಇರಲಿ ಎಂದು ಹಾರೈಸುತಿರುವುದೇ? ಉತ್ತರ ನಿಮಗೆ ಬಿಟ್ಟದ್ದು...
24 ಡಿಸೆಂಬರ್ 2009
ದುರ್ಜನರೆಂದರೆ ಒಂದೇ ಜಾತಿಯ ಮೃಗಗಳಲ್ಲವೇ???
ವಿಭಾಗವನ್ನು ಪ್ರೊಫೆಸರ್ ಸೋಮಶೇಖರ್ ಕಳೆದ ಆರೇಳು ವರ್ಷಗಳಿಂದಲೂ ಆಳುತ್ತಾ ಬಂದಿದ್ದರು. ಇದರ ನಡುವೆ ಅವರ ವಿದ್ಯಾರ್ಥಿನಿಯಾದ ನಂದಿನಿಯನ್ನು ಅವರೇ ಆಯ್ಕೆ ಮಾಡಿ, ಪಿ.ಎಚ್.ಡಿ ಕೊಡಿಸಿ ತಂದು ಕುರಿಸಿದರು. ರೀಡರ್ ಆಗಲು ಅರ್ಹತೆ ಇಲ್ಲದವರನ್ನು ಆಯ್ಕೆ ಮಾಡಿರುವುದನ್ನು ಚರ್ಚಿಸಿ, ಅದೇ ವಿಭಾಗದ ವಿಶ್ವನಾಥ್ ಎಂಬವರು, ಕೋರ್ಟಿಗೆ ಹೋಗಿದ್ದರು. ಕೋರ್ಟ್ ಎಂದ ಮೇಲೆ ಅದು ಒಂದೆರಡು ವರ್ಷಕ್ಕೆ ಮುಗಿಯುವಂತೆ ಕಾಣಲಿಲ್ಲ ಅದು ಮುಂದುವರೆಸಲು ಆಗದೇ ಅವರು ಅದನ್ನು ಹಿಂದಕ್ಕೆ ಪಡೆಯುವಂತೆ ಮಾಡಲಾಯಿತು.ಅಲ್ಲಿಯೂ ಜಾತಿಯತೆ ನಡೆಯಿತೆಂಬುದನ್ನು ನೀವು ಒಪ್ಪಲೇಬೇಕು. ನಮ್ಮ ಇಂದಿನ ಸಮಾಜದಲ್ಲಿ ಕೊಲೆಗಾರನಾಗಿದ್ದರೂ, ನಮ್ಮ ಜಾತಿಯವೆನೆಂದೊಡನೆ ಅವನನ್ನು ಕ್ಷಮಿಸುವ, ಅಥವಾ ತಪ್ಪಿತಸ್ಥನಲ್ಲನೆನ್ನುವ ಮನಸ್ಥಿತಿ ಬಹಳಷ್ಟು ಮಂದಿಗಿದೆ.ಅದರಂತೆಯೇ ನಮ್ಮ ಜಾತಿಯಲ್ಲಿಯೇ ಒಡಕಿದ್ದರೇ ಬೇರೆಯವರು ನಮ್ಮ ಮೇಲೆ ಸವಾರಿ ಮಾಡುತ್ತಾರೆಂಬುದನ್ನು ಅರಿತ ಇಬ್ಬರೂ ರಾಜಿಯಾದರು. ಒಮ್ಮೆಗೆ ನಂದಿನಿಯವರ ಪ್ರೊಬೆಶನರಿ ಮುಗಿದ ತಕ್ಷಣ ಹಿಂದಿನಿಂದ ಆಳ್ವಿಕೆಯಲ್ಲಿದ್ದ ಸೋಮಶೇಖರ್ ವಿರುದ್ದ ಹೋಗಿ ಅವರ ಚೇರ್ ಪದವಿಯನ್ನು ಕಬಳಿಸಿದರು.ಅಲ್ಲಿಂದ ಶುರುವಾದ ಇವರ ಕಥೆಗಳು ರಣರಂಗವಾಗಿದ್ದು ಬಹಳ ಕಡಿಮೆ ಸಮಯದಲ್ಲಿ. ಅವರಿಗೆ ಅಷ್ಟು ವರ್ಷದಿಂದ ಇದ್ದ ಕುರ್ಚಿ ಹೋಯಿತಲ್ಲಾ ಎಂದು ಚಿಂತೆ. ಇವರಿಗೆ ನನ್ನ ಅಧಿಕಾರ ತೋರಿಸಬೇಕೆನ್ನುವ ಹಟ. ಸಣ್ಣ ಪುಟ್ಟ ವಿಷಯಗಳಿಗೆ ಕುಲ ಸಚಿವರ ಬಳಿಗೆ ಹೋಗುವುದು, ಕೋರ್ಟಿಗೆ ಹೋಗುವುದು, ಜಾತಿ ನಿಂದನೆ ಎನ್ನುವುದು, ಮಹಿಳೆಯ ಮೇಲೆ ದೌರ್ಜನ್ಯವೆನ್ನುವುದು, ಹೀಗೆ ಇವರಿಬ್ಬರೂ ಸೇರಿ ತಯಾರಿಸಿದ ಪಟ್ಟಿಗಳ ರಿಪೋರ್ಟ್ ಪುಟಗಳ ಸಂಖ್ಯೆ ೧೩೦. ನೂರ ಮೂವತ್ತು ಪುಟಗಳಿಗೆ ಒಂದು ಪಿ.ಎಚ್.ಡಿ ಪ್ರಬಂದ ಬರೆಯಬಹುದಿತ್ತು. ಈ ರಿಪೋರ್ಟ್ ತಯಾರಿಸಲು ಇವರ ಸಮಯ ಎಷ್ಟು ವ್ಯಯಿಸಿರಬಹುದು ನೀವೆ ಯೋಚಿಸಿ. ೫೦-೬೦ ಸಾವಿರ ರೂಪಾಯಿ ಸಂಬಳ ಪಡೆದು ಇವರು ಮಾಡುತ್ತಿರುವ ಕೆಲಸ ಇದು.ಇದನ್ನು ಬರೆಯಲು ಇವರು ತಮ್ಮ ಕೈಕೆಳಗಿರುವ ಪಿ.ಎಚ್.ಡಿ ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದಾರೆ, ಹಲವು ದೂರುಗಳನ್ನು ಕೊಡಿಸಿದ್ದಾರೆ, ವಿದ್ಯಾರ್ಥಿಗಳ ಸಹಿ ಸಂಗ್ರಹ ಮಾಡಿದ್ದಾರೆ. ಹೆದರಿಸಿ ಬೆದರಿದ್ದಾರೆ.ಯಾವ ವಿದ್ಯಾರ್ಥಿಯು ತನ್ನ ವಿದ್ಯಾಬ್ಯಾಸ ಕೆಡಿಸಿಕೊಳ್ಳಲು ಬಯಸುವುದಿಲ್ಲ, ಅವರು ಹೇಳಿದಂತೆ ಪತ್ರ ಬರೆದಿದ್ದಾರೆ. ಅವರ ಜೊತೆ ಹೋಗಿ ಪೋಲಿಸ್ ಮುಂದೆ ನಿಂತಿದ್ದಾರೆ. ಕೆಲವು ವಿದ್ಯಾರ್ಥಿಗಳು ಇದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
ಮೊನ್ನೆ ಶನಿವಾರ ನನ್ನ ಪಿಎಚ್.ಡಿ ಕೆಲಸಕ್ಕೆಂದು ಅಲ್ಲಿನ ಲ್ಯಾಬ್ ಗೆ ಹೋದಾಗ ನಡೆದ ಕಥೆಯನ್ನು ಕೇಳಿ. ಎರಡನೇ ಬಾರಿಗೆ, ನಂದಿನಿ ಮುಖ್ಯಸ್ಥೆಯಾಗಿದ್ದಾರೆ, ಆದ್ದರಿಂದ ಅವರು ಸ್ಟಾಕ್ ಚೆಕಿಂಗ್ ಮಾಡಲು ಹೊರಟಿದ್ದಾರೆ, ಆ ಸಮಯಕ್ಕೆ ಸರಿಯಾಗಿ, ಸೋಮಶೇಖರ್ ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿದ್ದಾರೆ. ಸೋಮಶೇಖರ್ ಅದನ್ನು ಕೇಳಲು ಬರುವ ಸಮಯಕ್ಕೆ ನಡೆದ ವಾಗ್ವಾದ ಹೀಗಿದೆ, ನಂದಿನಿ ನೀನು ಮಾಡುತ್ತಾ ಇರುವುದು ಸರಿಯಿಲ್ಲ, ಸ್ವಲ್ಪ ನೋಡಿ ನಡೆದುಕೊ. ಅದಕ್ಕೆ ಪ್ರತ್ಯುತ್ತರ, ನೀನು ಅರಚುಬೇಡ, ನನಗೂ ನಿನಗಿಂತ ಜೋರಾಗಿ ಕಿರುಚೋಕೆ ಬರುತ್ತದೆ. ಇವೆಲ್ಲಾ ಅವರು ಬಳಸಿರುವ ಪದಗಳು. ಅದು ವಿಭಾಗದ ಕಾರಿಡಾರ್ ನಲ್ಲಿ ನಿಂತು. ವಿದ್ಯಾರ್ಥಿಗಳ ಸಮ್ಮುಖದಲ್ಲಿ. ಇಲ್ಲಿ ನಿಮಗೆ ಒಂದು ಬಹುಮುಖ್ಯ ಸಂಗತಿ ಹೇಳಲೇ ಬೇಕಾಗುತ್ತದೆ, ಸಾಯಿನಾಥ್ ಎಂಬ ಮನುಷ್ಯ ನಂದಿನಿಯವರ ಪತಿದೇವರು, ನಮ್ಮಲ್ಲಿ ಹೆಂಡತಿ ಅಧಿಕಾರದಲ್ಲಿದ್ದರೆ ಗಂಡ ಮೂಗು ತೂರಿಸುವುದು ರಾಜಕೀಯದಲ್ಲಿ ಸಾಮಾನ್ಯ ಆದರೇ, ಒಂದು ವಿವಿ ಮಟ್ಟದಲ್ಲಿ ಇದು ನಡೆಯುತ್ತದೆಯೆಂದರೇ ನಮ್ಮ ವ್ಯವಸ್ಥೆಯ ಬಗ್ಗೆ ವಾಕರಿಕೆ ಬರುತ್ತದೆ. ಇವರು, ವಿಭಾಗಕ್ಕೆ ಬರುವುದು, ಅವರ ಹೆಂಡತಿಯ ರೂಮಿನಲ್ಲಿ ಗಂಟೆಗಟ್ಟಲೇ ಕೂರುವುದು, ಇದು ದಿನ ನಿತ್ಯದ ಚಟುವಟಿಕೆ. ಬರುವುದು ತಪ್ಪಲ್ಲ, ಆದರೇ ಸದಾ ಅಲ್ಲೇ ಕುಳಿತಿರುವುದು ಅವಶ್ಯಕತೆಯೇ? ಅದರಂತೆಯೇ, ನಾನು ನಿಮಗೆ ನಮ್ಮ ವಿಭಾಗದಲ್ಲಿದ್ದ ಕೆಲವು ಪ್ರೊಫೆಸರ್ ಎಂಬ ಮಹಾಶಯರ ಬಗ್ಗೆಯೂ ತಿಳಿಸಿಕೊಡಬೇಕಾಗುತ್ತದೆ. ಹುಡುಗಿಯರ ಮೈ ಮುಟ್ಟಿ, ಅವರ ಮೈ ಸವರಿ ಪಾಠ ಮಾಡುವ ಒಬ್ಬ ಪ್ರೋಫೆಸರ್ ಇದ್ದರು. ಹುಡುಗರನ್ನು ಆದಷ್ಟೂ ಗೇಲಿ ಮಾಡುತ್ತಿದ್ದ ಮಹಾಶಯರವರು. ಹುಡುಗರನ್ನು ಬೈಯ್ಯುವುದು, ಅವರನ್ನು ಉಗಿಯುವುದು, ಉತ್ತರ ಪತ್ರಿಕೆಯಲ್ಲಿ ತಪ್ಪಾಗಿ ಬರೆದಿದ್ದರೇ ಅದನ್ನು ಎಲ್ಲರ ಮುಂದೆ ಓದಿ ಹಂಗಿಸುವುದು, ಹೀಗೆ ಅವರ ತರಗತಿಯಲ್ಲಿ ಕುಳಿತುಕೊಳ್ಳುವುದಕ್ಕೆ ಬಹಳ ಮುಜುಗರಪಡಬೇಕಾಗಿತ್ತು. ಅದರಂತೆಯೇ ಪಿ.ಎಚ್.ಡಿ ವಿದ್ಯಾರ್ಥಿಗಳು ಇವರ ವಿದ್ಯಾರ್ಥಿಗಳು ಅವರ ವಿದ್ಯಾರ್ಥಿಗಳ ನಡುವೆ ಕೂಡ ಮಾತುಕತೆ ನಡೆಯದಂತೆ ಹೇಳಿದ್ದಾರೆ.ಸರ್ವರಿಗೂ ಶಿಕ್ಷಕರಾಗಬೇಕಿದ್ದ ಇವರುಗಳು, ಇರುವ ಹತ್ತು ವಿದ್ಯಾರ್ಥಿಗಳನ್ನು ಬೇರ್ಪಡಿಸಿ ಆಳುತ್ತಿರುವುದು ದುರದೃಷ್ಟಕರ. ಪತ್ರ ಬರೆಸುವುದು, ಅದನ್ನು ಪೋಸ್ಟ್ ಮಾಡಿಸುವುದು. ಇದು ಇದೊಂದೆ ಯುನಿವರ್ಸಿಟಿ ಕಥೆಯಲ್ಲ, ಕುವೆಂಪು, ಮೈಸೂರು ವಿವಿಯಲ್ಲಿಯೂ ಇದೆ.
ಇದಕ್ಕೆಲ್ಲಾ ನ್ಯಾಯ ಸಿಗುವುದು ಎಂದು? ಅಧಿಕಾರದ ಮೋಹದಲ್ಲಿ, ವಿದ್ಯಾರ್ಥಿಗಳನ್ನು ದುರುಪಯೋಗ ಪಡಿಸಿಕೊಂಡು, ಮಾತೆತ್ತಿದರೆ ನಿನ್ನ ಪಿ.ಎಚ್.ಡಿ ಮಣ್ಣು ಪಾಲಾಗುತ್ತದೆ, ನಿನ್ನ ಮಾರ್ಕ್ಸ್ ಹೋಗುತ್ತದೆ, ನಿನ್ನ ಡಿಗ್ರಿ ಹೋಗುತ್ತದೆ ಎಂದು ಹೆದರಿಸಿದಾಗ ವಿದ್ಯಾರ್ಥಿಗಳು ಹೆದರಿ ಅವರಿಗೆ ಬೇಕಾದ ಪತ್ರವನ್ನು ಬರೆಯುತ್ತಾರೆ, ದೂರನ್ನು ನೀಡುತ್ತಾರೆ, ಅದನ್ನು ಯಾರು ಗಂಬೀರವಾಗಿ ಸ್ವೀಕರಿಸುವ ಅವಶ್ಯಕತೆಯಿರುವುದಿಲ್ಲ.ಜಾತಿಯತೆಯ ಹೆಸರಿನಲ್ಲಿ ದೂರು ನೀಡಿಸುವುದು, ಜಾತಿ ನಿಂದನೆ ಮಾಡಿದ ಎಂದು ದೂರು ನೀಡುವುದು, ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡುತಿದ್ದಾರೆಂದು ದೂರು ನೀಡುವುದು ಹೀಗೆ, ನ್ಯಾಯ ನೀಡಬೇಕಾದವರು ಅದನ್ನು ದುರುಪಯೋಗ ಪಡಿಸಿಕೊಂಡು, ನಿಜಕ್ಕೂ ಶೋಷಿತ ಹೆಣ್ಣು ಮಕ್ಕಳನ್ನು ಅನುಮಾನದಿಂದ ಕಾಣುವಂತಾಗಿದೆ. ತಮ್ಮ ಜಾತಿಯವರನ್ನೇ ಇಟ್ಟುಕೊಂಡು ಅಧಿಕಾರ ನಡೆಸುವುದು, ಸಂಶೋಧನೆಯ ಗಂಧವೇ ತಿಳಿಯದ ಮೂರ್ಖ ಶೀಖಾಮಣಿಗಳಿಗೂ ಪಿ.ಎಚ್.ಡಿ ಕೊಡಿಸುವುದು, ಇರುವ ಒಂದೊಂದು ಪ್ರಾಜೆಕ್ಟ್ ನಲ್ಲಿನ ಡಾಟಾ ಬಳಸಿಕೊಂಡೂ ೨೦-೩೦ ಪೇಪರ್ ಮಾಡುವುದು, ಐದಾರು ಡಾಕ್ಟರೇಟ್ ಕೊಡಿಸುವುದು, ಹಿಂದಿನ ವಿದ್ಯಾರ್ಥಿಯ ಪ್ರಬಂದವನ್ನೇ ಸ್ವಲ್ಪ ಅದುಲು ಬದಲು ಮಾಡಿ ಒಪ್ಪಿಸುವುದು. ಒಂದಾ ಎರಡಾ, ಇವಕ್ಕೆಲ್ಲಾ ಕೊನೆಯೊಂದಿದೆಯಾ? ಇದರ ಹಿಂದೆ ಅತಿ ಬುದ್ದಿವಂತರೆನಿಸಿಕೊಂಡ ಬಹಳಷ್ಟು ಜನರ ಕೈವಾಡವಿದೆ, ಸರ್ಕಾರವಿದೆ, ಲೋಕಾಯುಕ್ತರನ್ನೆ ದಡ್ಡರನ್ನಾಗಿಸಿ, ಒಬ್ಬರ ವಿರುದ್ದ ಒಬ್ಬರು ದೂರು ನೀಡಿದ್ದಾರೆಂದರೆ ಅವರ ಕೈಚಳಕ ನಿಮಗೆ ತಿಳಿಯುತ್ತದೆ. ಕಳ್ಳರ ಸಂತೆ ಸಿನೆಮಾದಂತೆ, ಇವರೆಲ್ಲರೂ ಒಂದೇ ಯಾರನ್ನು ಕೊಳೆತು ನಾರುತ್ತಿರುವ ಸಮಾಜದಿಂದ ಪಾರುಮಾಡಲಾಗುವುದಿಲ್ಲ. ನೀವು ಅವರ ವಿರುದ್ದ ಹೋದರೇ ಒಂದು ನೀವು ಹುಚ್ಚರು, ಕೆಲಸಕ್ಕೆ ಬಾರದವರು, ಅಥವಾ ನಕ್ಸಲರು ಎಂದಾರು. ಇಲ್ಲದಿದ್ದರೇ ಜಾತಿಯತೆಯಿಂದ ಬಂದಿದ್ದಾನೆ, ಎನ್ನುವರು. ಜಾತಿ ಧರ್ಮ, ಮಹಿಳಾ ಸಬಲೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳು ಒಂದೆರಡಲ್ಲ. ಜಗತ್ತು ಪ್ರಳಯ, ತಾಪಮಾನವೆಂದು ಬೊಬ್ಬೆ ಹೊಡೆಯುತ್ತಿರುವಾಗ ಇವರುಗಳು ಹೀಗೆ ಲಜ್ಜೆ ಗೆಟ್ಟು ಕುಣೀಯುತ್ತಿರುವುದನ್ನು ತಡೆಯುವುದು ಹೇಗೆ?
ಮತ್ತೆ ಮತ್ತದೇಕೋ ಸುತ್ತುವ ಹಂಬಲ !!!!!!!!!!
16 ಡಿಸೆಂಬರ್ 2009
ಬದುಕಿನ ಸಾರ್ಥಕತೆಗೆ ಅರ್ಥವಿದೆಯಾ!!!!
ಬದುಕು ಒಮ್ಮೊಮ್ಮೆ ಒಂದೊಂದು ಬಗೆಯಾಗಿ ಹರಿದು ಹಂಚಿಹೋಗುವುದನ್ನು ನೋಡುತ್ತಿದ್ದರೆ ಬದುಕಿನ ಅರ್ಥವೇನು? ಸಾರ್ಥಕತೆಯ ಅರ್ಥವೇನು?ಇವೆಲ್ಲವೂ ಆಗುವುದರ ಹಿಂದಿನ ರಹಸ್ಯವೇನು ಹೀಗೆ ಹತ್ತು ಹಲವಾರು ಒಮ್ಮೊಮ್ಮೆ ಸಾವಿರಾರು ಪ್ರಶ್ನೆಗಳು ತಾನೇ ತಾನಾಗಿ ಉದ್ಬವಿಸುತ್ತವೆ. ಪ್ರಶ್ನೆಗಳೇ ಜೀವನವಾಗಿ ನಡೆಯುವಾಗ ನಮಗೆ ಜೀವನವೆಂಬುದು ನಿಜಕ್ಕೂ ಅಸಹನೀಯವೆನಿಸುತ್ತದೆ. ಓದುವಾಗ ಪರೀಕ್ಷೆಯ ಕಾಟಕ್ಕೆ ಕೊರಗುತ್ತಿದ್ದ ನಾವು ಓದಿದ ಮೇಲೆ ಕೆಲಸ ಹುಡುಕಲು ಪರದಾಡುತ್ತ ನಮ್ಮನ್ನು ನಾವೆ ಕೊಲೆಗೈಯ್ಯುತ್ತಾ ಹೋಗುತ್ತೇವೆ.ಕೆಲಸ ಸಿಕ್ಕಿದ ಮೇಲೆ ನಮ್ಮ ಮತ್ತು ನಮ್ಮ ಜೊತೆಯವರೊಂದಿಗೆ ಇಲ್ಲಸಲ್ಲದ ವಿಷಯಕ್ಕೆ ಮನಸು ಬೇಸರಗೊಳ್ಳುತ್ತದೆ. ನಮ್ಮ ಮೇಲಧಿಕಾರಿಯೆಂಬ ಮನುಷ್ಯ ನಮ್ಮ ಸ್ವಾತಂತ್ರ್ಯವನ್ನೆಲ್ಲಾ ಕಸಿದುಕೊಂಡವನಂತೆ ನಮ್ಮ ಮೇಲೆ ಸದಾ ಸವಾರಿ ಮಾಡುವವನಂತೆ ಕಾಣುತ್ತಾನೆ. ಮನುಷ್ಯ ತಾನೊಂದು ಬಗೆದರೆ ದೇವವೊಂದು ಬಗೆಯುತ್ತಾನೆಂಬುದು ಬಹಳಷ್ಟು ಬಾರಿ ಸತ್ಯವೆನಿಸುತ್ತದೆ. ನಾವು ಬಯಸುವುದೇನೆಂಬುದೆ ನಮ್ಮ ಮುಂದಿರುವ ಸವಾಲು!!! ನಿಜಕ್ಕೂ ನಮಗೆ ಇರುವ ಅಗತ್ಯತೆ ಏನೆಂಬುದು ನಮಗೆ ಅದೆಷ್ಟೋ ಬಾರಿ ತಿಳಿದಿರುವುದಿಲ್ಲ. ಇರುವುದರಲ್ಲಿ ಸಂತೋಷಪಡುವುದಿಲ್ಲವೆನ್ನುವುದಕ್ಕಿಂತ ನಮಗೆ ಬೇಕಿರುವುದನ್ನು ತಿಳಿಯುವ ಸಾಮರ್ಥ್ಯ ನಮಗಿರುವುದಿಲ್ಲ. ಕಾರಣಗಳು ಹಲವಿರಬಹುದು, ನನಗೆ ತಿಳಿದಂತೆ ಜೀವನಕ್ಕೆ ಬೇಕಿರುವ ಅವಶ್ಯಕತೆಗಳು ಮತ್ತು ಅನಿವಾರ್ಯತೆಗಳ ನಡುವೆ ಇರುವ ತೆಳ್ಳನೆಯ ವ್ಯತ್ಯಾಸವನ್ನು ಅರಿತಿರುವುದಿಲ್ಲ. ನಮಗೊಂದು ಕೆಲಸದ ಅನಿವಾರ್ಯತೆ ಇರುತ್ತದೆ, ಅದರೆ ನಮಗೆ ನಮ್ಮ ಆಸಕ್ತಿಯುಳ್ಳ ವಿಷಯದಲ್ಲಿ ನಮಗೆ ಕೆಲಸ ಬೇಕಿರುವ ಅವಶ್ಯಕತೆಯಿರುತ್ತದೆ. ಆದರೆ ನಮಗೆ ಆಸಕ್ತಿಯಿರುವ ವಿಷಯದಲ್ಲಿ ನಾವು ಕಾಯ್ದು ಉದ್ದಾರವಾಗುವ ತಾಳ್ಮೆ ಸಹನೆ ನಮಗಿರುವುದಿಲ್ಲ ಅಥವಾ ನಮ್ಮ ಸಮಾಜ ನಮ್ಮ ಸುತ್ತ ಮುತ್ತಲಿನ ಪರಿಸರ ಅದಕ್ಕೆ ಅನಿವು ಮಾಡಿಕೊಡುವುದಿಲ್ಲ. ಉದಾಹರಣೆಗೆ ಬಹಳಷ್ಟೂ ಮಕ್ಕಳು ಚಿಕ್ಕವರಿರುವಾಗ ನಾಟಕ, ಅಭಿನಯದಲ್ಲಿ ಆಸಕ್ತಿಯಾಗಿರುತ್ತಾರೆ ಅತ್ತುತ್ತಮ ಗಾಯಕರಾಗುವ ಎಲ್ಲ ಲಕ್ಷಣಗಳು ಇರುತ್ತವೆ, ಆದರೆ ಪೋಷಕರ ಮುಂಜಾಗೃತೆಯಿಂದಾಗಿ, ಅಥವಾ ಅವರ ಕಹಿ ಅನುಭವದಿಂದಾಗಿ ಅವರನ್ನು ದೂರವಿಡುತ್ತದೆ. ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಮನೆಯ ಮಗನಾಗಿ ಅವನಿಗೆ ಅವನದೆ ಹಲವಾರು ಜವಬ್ದಾರಿಗಳಿದ್ದು ಅವನ ಆಸೆ ಕನಸುಗಳನ್ನು ಬಲಿ ಕೊಡಬೇಕಾಗುವುದು.
ಇಂಥಹ ಸನ್ನಿವೇಶಗಳು ಹೆಣ್ಣು ಗಂಡುಗಳಿಬ್ಬರಿಗೂ ಅನ್ವಯಿಸುತ್ತದೆ. ಇಲ್ಲಿ ಭೇಧ ಭಾವವಿರುವುದಿಲ್ಲ.ಒಳ್ಳೆಯ ಗಾಯಕರು, ಡ್ಯಾನ್ಸ್ ಮಾಡುತ್ತಿದ್ದ, ಕ್ರಿಕೇಟ್, ಫುಟ್ ಬಾಲ್, ಅಥವಾ ಪ್ರಥಮ ರ್ಯಾಂಕ್ ಬಂದ ಬಹಳಷ್ಟು ನನ್ನ ಸ್ನೇಹಿತರು ತಮಗೆ ಹೊಂದದ ಅಥವಾ ಆಸಕ್ತಿಯಿಲ್ಲದ ಉದ್ಯೋಗದಲ್ಲಿ ಸೋಮಾರಿಗಳಾಗುವಂತೆ ಮಾಡಿಬಿಟ್ಟಿದೆ. ಹೈಸ್ಕೂಲಿನ ಜೀವನದಲ್ಲಿದ್ದ ಬಹಳಷ್ಟು ಬುದ್ದಿವಂತರೆನಿಸಿಕೊಂಡ ಸ್ನೇಹಿತರು ಸರ್ಕಾರಿ ಉದ್ಯೋಗದಲ್ಲಿದ್ದರೂ ಅವರಲ್ಲಿ ಸಮಾಜದ ಬಗ್ಗೆ ಬಹಳಷ್ಟು ಕಾಳಜಿಯಿದ್ದರೂ ಅವರ ಕೈಗಳನ್ನು ಕಟ್ಟಿ ಹಾಕಿ, ಸಾಕಪ್ಪ ಈ ಉದ್ಯೋಗ ಈ ಸಮಾಜ ಈ ಜನತೆ ಎನ್ನುವಂತೆ ಮಾಡುವ ಈ ಜೀವನದ ಅರ್ಥವೇನು? ಪ್ರತಿಯೊಬ್ಬ ಯುವಕನು ತನ್ನ ಸಮಾಜ ತನ್ನ ದೇಶದ ಏಳಿಗೆಗಾಗಿ ಏನಾದರೊಂದು ಮಾಡಬೇಕು ನನ್ನ ಜನತೆಯನ್ನು ನನ್ನ ಪ್ರಾಣಕಿಂತ ಪ್ರೀತಿಸಿ ಅದರ ಉನ್ನತಿಯ ಬಗ್ಗೆ ಹಲವಾರು ಕನಸುಗಳನ್ನು ಕಾಣುತ್ತಾನೆ. ಯಾವೊಬ್ಬ ಯುವಕನೂ ಕೇವಲ ತನ್ನ ಏಳಿಗೆಯಾದರೆ ಸಾಕೆಂದು ಬಯಸುವುದಿಲ್ಲ, ಹಾಗೆ ಬಯಸಿದ್ದೇ ಆದ್ದಲ್ಲಿ ಅವನು ಯುವಕನೇ ಅಲ್ಲ ಅವನೊಬ್ಬ ವಯಸ್ಸಾದ ತನ್ನ ಜೀವನ ಮುಗಿಯುತ್ತಿದೆಯೆಂದು ನಿರ್ಧರಿಸಿ ತನ್ನ ಸ್ಥಿರತೆಗಾಗಿ ಪ್ರಯತ್ನಿಸುವ ಮಧ್ಯಮ ವಯಸ್ಕ.ತನ್ನಯ ಬಗ್ಗೆ ತನಗೆ ನಂಬಿಕೆ ಇಲ್ಲದವನು ಮಾತ್ರ ತನ್ನ ವೈಯಕ್ತಿಕ ಏಳಿಗೆಗೆ ಪ್ರಯತ್ನಿಸುತ್ತಾನೆ ಅಥವಾ ಅದರ ಬಗ್ಗೆ ಶ್ರಮಿಸುತ್ತಾನೆ.ತನ್ನತನದಲ್ಲಿ ತನ್ನ ಆದರ್ಶಗಳಲ್ಲಿ ನಂಬಿಕೆ ಉಳ್ಳವನು ತಾನು ಬೆಳೆದು ತನ್ನವರನ್ನು ತನ್ನ ಸಮಾಜ, ತನ್ನ ದೇಶವನ್ನು ಮೇಲೆತ್ತಲು ಅಥವಾ ತನ್ನ ಕೈಮೀರಿ ಅದಕ್ಕೆ ಋಣ ತೀರಿಸಲು ಚಿಂತಿಸುತ್ತಾನೆ. ಕೇವಲ ಚಿಂತಿಸಿದರೇ ಬಂದ ಫಲವೇನು? ಅದನ್ನು ಕಾರ್ಯರೂಪಕ್ಕೆ ತರುವ ಮಾರ್ಗವೇನು? ಕಾರ್ಯರೂಪಕ್ಕೆ ತರಲು ನಿಜಕ್ಕೂ ಸಾಧ್ಯವಿದೆಯಾ? ಇದ್ದರೇ ಅದರ ಮಾರ್ಗವೇನು? ಪ್ರತಿಯೊಬ್ಬ ಭಾರತೀಯನು ತನ್ನ ಅಂತರಾಳಕ್ಕೆ ಒಪ್ಪುವ ಕೆಲಸ ಮಾಡಿದರೇ ಮಾತ್ರ ಅದರ ಕನಸು ನನಸಾಗಲು ಸಾಧ್ಯ. ಪಿ.ಎಚ್.ಡಿ ಮಾಡುವ ವಯಸ್ಸಿಗೆ ಇಲ್ಲಸಲ್ಲದ ರಾಜಕೀಯ ನಮ್ಮನ್ನು ಸುತ್ತಿರುತ್ತದೆ. ಐದಾರು ವರ್ಷಗಳು ಯುನಿವರ್ಸಿಟಿಗಳಲ್ಲಿ ಕುಳಿತು ಗೈಡ್ ಗಳ ಗುಲಾಮಗಿರಿ ಮಾಡಿದವನು ಹೊರಬಂದೊಡನೆ ತನಗೆ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸುವಲ್ಲಿ, ತನ್ನ ಶಿಷ್ಯ ವೃಂದವನ್ನು ಗುಲಾಮರನ್ನಾಗಿಸಿಕೊಳ್ಳುತ್ತಾನೆ. ಅವನೊಂದಿಗೆ ಅವನ ಆದರ್ಶಗಳು ನೆಲ ಕಚ್ಚುತ್ತವೆ.ಇದರಂತೆಯೇ ಎಲ್ಲ ಸರ್ಕಾರಿ ಇಲಾಖೆಗಳಲ್ಲಿಯೂ ನೀವು ನಮ್ಮ ಮಹರಾಜರನ್ನು ಕಾಣಬಹುದು. ಅದಕ್ಕೊಂದು ನಿದರ್ಶನವೆಂದರೆ, ನಮ್ಮ ಮಾಲಿನ್ಯ ನಿಯಂತ್ರಣ ಇಲಾಖೆ, ವಿಜ್ನಾನದ ಗಂಧವೇ ಇಲ್ಲದವರನ್ನೂ ನೀವು ಅಲ್ಲಿ ವೈಜ್ನಾನಿಕ ಅಧಿಕಾರಿಗಳಾಗಿ ಕಾಣಬಹುದು, ಒಮ್ಮೆ ಅವರಲ್ಲಿಗೆ ಹೋಗಿ ಮಾಲಿನ್ಯದ ಬಗ್ಗೆ ಕುರಿತು ಕೇಳಿ ನೋಡಿ, ಅದೊಂದು ವಿಷಯ ಬಿಟ್ಟು ಇಲಾಖೆಯಲ್ಲಿರುವ ಎಲ್ಲಾ ರಾಜಕೀಯವನ್ನು, ಜಾತಿಯತೆಯನ್ನು ನಿಮ್ಮ ಕಿವಿಗೆ ಊದುತ್ತಾರೆ. ಸಾಮಾನ್ಯ ಜ್ನಾನವೂ ಇರುವುದಿಲ್ಲ. ಇನ್ನೂ ಕೆಲವು ಅಧಿಕಾರಿಗಳಂತೂ ಅವರಲ್ಲಿಗೆ ಮಾಹಿತಿ ಕೇಳಿ ಹೋದರೆ ಹಾವು ಕಡಿದಂತೆ ಆಡುತ್ತಾರೆ. ಅವರ ಬಳಿಗೆ ಹೋಗಿ ನೀವು ನಮ್ಮ ಜನತೆಯ ಸೇವೆಗೆ ಇರುವವರು ನಮಗೆ ಬೇಕಿರುವ ಮಾಹಿತಿ ನೀಡಿ ಸೇವೆ ನೀಡಬೇಕೆಂದರೆ, ನಿಮ್ಮ ತಿಥಿಯ ದಿನಾಂಕ ನಿಗದಿಪಡಿಸಿಬಿಟ್ಟಾರು ಜೋಕೆ. ಎಲ್ಲರೂ ಹೀಗಿರುತ್ತಾರೆನ್ನುವುದಿಲ್ಲ, ಆದರೆ ಬಹಳಷ್ಟೂ ಮಂದಿ ಹೀಗೆಯೇ ಇರುತ್ತಾರೆ,ನಾನು ನನಗೆ ಅತಿ ಮೆಚ್ಚುಗೆಯಾದ ಒಬ್ಬ ವ್ಯಕ್ತಿಯ ಬಗ್ಗೆ ಹೇಳಲೇಬೇಕು, ಅವರು ನೀರಾವರಿ ಇಲಾಖೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ದ್ವಿತೀಯ ದರ್ಜೆಯ ಗುಮಾಸ್ತೆಯಾಗಿದ್ದಾರೆ, ಅವರ ಬಳಿಯಲ್ಲಿ ಅರ್ಧ ಗಂಟೆಯಷ್ಟು ಕುಳಿತರೆ ನಿಮ್ಮ ಕಾಲೆಜಿನಲ್ಲಿ ತಿಳಿಸದ ಅದೆಷ್ಟೋ ನಿರಾವರಿಗೆ, ಡ್ಯಾಂ ಗಳಿಗೆ ಸಂಬಂದಪಟ್ಟ ವಿಷಯಗಳನ್ನು ನಿಮಗೆ ಹೇಳಿಕೊಡುತ್ತಾರೆ.ಯಾವ ಇಂಜಿನಿಯರುಗಳಿಗೂ ಕಡಿಮೆಯೆನಿಸುವುದಿಲ್ಲ. ಆದರೇ ಮೊದಲು ಹೇಳಿದ ಅಧಿಕಾರಿಗಳಿಗೆ, ನಮ್ಮಂತೆಯೇ ಒಲ್ಲದ ಮನಸ್ಸಿನಿಂದ ಕೆಲಸ ಮಾಡುವ ಕರ್ಮ ಬಂದಿರುವುದೆನ್ನುವುದು ನನ್ನ ಅನಿಸಿಕೆ.ಆದರೇ ಇವರ ಅಚ್ಚು ಮೆಚ್ಚಿನ ವಿಷಯವೆಂದರೇ, ರಾಜಕೀಯ, ಜಾತಿಯತೇ, ಮತೀಯತ, ಪ್ರಾಂತೀಯತೆ, ಸಂಬಳ ಹೆಚ್ಚಳ ಕೊರತೆ,ಅದರಲ್ಲಿನ ಲೋಪ ದೋಷಗಳು.
ನಾನು ಕಂಡಂತೆ ಎಲ್ಲರೂ ರಾಜಕೀಯದ ಬಗ್ಗೆ ಮಾತನಾಡುತ್ತಾರೆ, ಈಗ ಇರುವ ಮಹನೀಯರನ್ನೇ ತಡೆಯಲಾಗುತ್ತಿಲ್ಲ ಇನ್ನೂ ಇವರನ್ನೂ ಅವರೊಂದಿಗೆ ಸೇರಿಸಿದರೆ ನಮ್ಮ ಬದುಕಿನ ಗತಿ ಏನು?ಜಾತಿಯತೆಯ ಬಗ್ಗೆ ಎಂದರೇ ಪ್ರತಿಯೊಂದು ಜಾತಿಗೂ ನಾಲ್ಕು ಜನರು ಮಠಾಧೀಶರಿದ್ದಾರೆ, ಅವರು ಇರುವ ಜಾತಿಯನ್ನು ಮತ್ತೆ ಒಳ ಪಂಗಡಗಳಾಗಿ ಹಂಚಿ ಹರಿದಿದ್ದಾರೆ ಇನ್ನು ಇವರನ್ನೂ ಸೇರಿಸಿದರೆ ನಮ್ಮ ಗೋಳನ್ನು ಕೇಳಲು ಭೂಮಿಯ ಮೇಲೆ ಜನರೇ ಇಲ್ಲದಂತೆ ಮಾಡಿ ಬಿಡುತ್ತಾರೆ.ಇಂಥವುಗಳನ್ನು ತಗ್ಗಿಸುವ ಮಾರ್ಗವದರೂ ಯಾವುದು??
10 ಡಿಸೆಂಬರ್ 2009
ಬೇಸತ್ತ ಬದುಕಿಗೊಂದು ಪರ್ಯಾಯ ಪಯಣ!!!
ಅದೇನೆ ಇರಲಿ, ನಮ್ಮ ಚಾರಣದ ಬಗ್ಗೆ ತಮಗೆ ಹೆಚ್ಚು ತಿಳಿಸೋಣ, ಅಲ್ಲಿಂದ ಹೋಗುವಾಗ ಹಲವಾರು ಬಾರಿ ರೈಲನ್ನು ಕಂಡೆವು. ಎರಡು ರೈಲು ಪ್ರಯಾಣಿಕರನ್ನು ಕರೆದೋಯ್ದದ್ದನ್ನು ಬಿಟ್ಟರೆ ಮಿಕ್ಕೆಲ್ಲಾ ರೈಲುಗಳು ಗೂಡ್ಸ್ ರೈಲುಗಳು.ಕಬ್ಬಿಣದ ಅದಿರನ್ನು ತುಂಬಿಕೊಂಡು ಹೋಗುವ ರೈಲನ್ನು ಕಂಡಾಗ ನನಗೆ ನೆನಪಾದದ್ದು, ನಮ್ಮ ಹಾಸನ ಮಂಗಳೂರು ರಾಷ್ಟ್ರೀಯ ಹೆದ್ದಾರಿ. ಅದೆಷ್ಟೂ ಬಾರಿ ಅದನ್ನು ದುರಸ್ತಿಗೊಳಿಸಿದರೂ ಅದು ಸರಿಯಾಗುತ್ತಲೇ ಇಲ್ಲ, ಅಂಥಹ ಸಮಯದಲ್ಲಿ ನಮ್ಮ ರೈಲಿನಲ್ಲಿ ಸಾಗಿಸಿದರೇ, ವಾಯು ಮಾಲಿನ್ಯ, ಮತ್ತು ಆರ್ಥಿಕ ತೊಂದರೆಯನ್ನು ತಪ್ಪಿಸಬಹುದು. ವರ್ಷಕ್ಕೆ ನಾಲ್ಕಾರು ಬಾರಿ ರಸ್ತೆಗೆ ತಾರು ಬಳಿಯುವುದನ್ನಾದರೂ ತಪ್ಪಿಸಬಹುದೇನೋ!! ರಸ್ತೆಯುದ್ದಕ್ಕೂ ನಾವು ಸಕಲೇಶಪುರದಿಂದ ಫ್ಲಾಸ್ಕ್ ಗೆ ತುಂಬಿಸಿದ್ದ ಓಂದು ಲೀಟರ್ ಟೀ ಸವಿಯುವುದು ಜೊತೆಗೊಂದು ಸಿಗರೇಟು ಸೇದಿ ವಾಯುಮಾಲಿನ್ಯದ ಬಗ್ಗೆ ಭಾಷಣ ಬಾರಿಸುತ್ತಾ ಹೊರಟೆವು. ಅಂತೂ ಇಂತೂ ನಡೆದು ಓಡೋಡಿ ಮಳೆ ಬರುವ ಮುನ್ನಾ ಎಡುಕುಮೇರಿ ಎಂಬ ರೈಲ್ವೆ ನಿಲ್ದಾಣ ತಲುಪಿದೆವು. ಉದ್ದುದ್ದ ಸೇತುವೆಗಳು ೧೦೦ರಿಂದ ೨೦೦ ಅಡಿಗಳಷ್ಟೂ ಆಳವಾಗಿದ್ದವು, ಒಂದೊಂದು ಸೇತುವೆಗಳು ಅರ್ಧ ಕೀಮೀ ಅಷ್ಟೂ ಉದ್ದವಿದ್ದವು. ಮಧ್ಯದಲ್ಲಿ ರೈಲು ಬಂದರೇ ನಮ್ಮ ಗತಿ ಏನು? ಎನ್ನುವ ಪ್ರಶ್ನೆಯೂ ಬಹಳ ಸಾರಿ ನಮ್ಮ ಮುಂದೆ ಬಂದಿತ್ತು. ಆದರೂ ಆರು ವರ್ಷದಿಂದ ಹಿಂದೆ ನಾನು ಹೋಗಿದ್ದಾಗ ಇದ್ದ ಪರಿಸ್ಥಿತಿಗೂ ಈಗಿನ ಸ್ಥಿತಿಗೂ ಬಹಳ ವ್ಯತ್ಯಾಸವಿದೆ.ಹಿಂದೆ ನಾವು ಹೋದಾಗ ಹೆಚ್ಚೆಂದರೆ, ಹತ್ತು ಜನರನ್ನು ಕಂಡಿರಲಿಲ್ಲ. ಆದರೇ ಈ ಬಾರಿ ದಾರಿ ಉದ್ದಕ್ಕೂ ಜನರೇ ತುಂಬಿದ್ದರು. ನಾವು ಕಾಡಿನ ಮಧ್ಯೆ ಇದ್ದಿವೆಂಬ ಅರಿವು ಇಡೀ ದಿನ ಬರಲೇ ಇಲ್ಲ.ಒಂದು ಮಂಡಲದ ಹಾವನ್ನು ಬಿಟ್ಟರೇ ಮಿಕ್ಕಿದ್ದೇನೂ ಕಾಣಲಿಲ್ಲ. ರಾತ್ರಿ ನಾವು ತೆಗೆದುಕೊಂಡು ಹೋಗಿದ್ದ ಕೋಳೀ ಮಾಂಸವನ್ನು ಮಾಡಲು ಸಿದ್ದತೆ ಮಾಡುವಾಗ ಬರೋ ಅಂತಾ ಮಳೆ ಶುರುವಾಯಿತು.ಕುಮಾರಣ್ಣ ಅನ್ನೋ ಒಬ್ಬ ಮಹಾಸ್ವಾಮಿ ನಮ್ಮ ಕಡೆಗೆ ಕರುಣೆ ತೋರಿಸಿ, ನಮಗೆ ಅನ್ನದಾನ ನೀಡಿ, ಜೊತೆಗೆ ರಾತ್ರಿ ಇಡಿ ನಮ್ಮ ಜೊತೆ ಹರಟೆ ಹೊಡೆದು ನಮಗೆ ಜೊತೆಗಾರನಾಗಿದ್ದ.ಕುಡಿತ ಎಂತವನನ್ನು ಮೂಢನಾಗಿಸುತ್ತೆ ಅನ್ನೋದಕ್ಕೆ ನಮ್ಮ ಕುಮಾರನ್ನ ಒಂದು ಸೂಕ್ತ ಉದಾಹರಣೆ, ನಮ್ಮ ಜೊತೆ ಕುಡಿದು ಅವರ ಬಾಸ್ ಬಗ್ಗೆ ಕೆಟ್ಟದ್ದಾಗಿ ಮಾತನಾಡಿ ಕಡೆಗೆ ಉಗಿಸಿಕೊಂಡು ಹೋದ. ಕುಡಿದಾಗ ಜಗತ್ತಿಗೆ ನಾನೇ ದೊಡ್ಡವನೆಂಬ ಭಾವನೆ ಮೂಡುವುದು ನಿಜಕ್ಕೂ ಹೆಮ್ಮೆಯ ವಿಷಯ.ಅಂಥಹ ಆತ್ಮವಿಶ್ವಾಸ ಬರುವುದಾದರೂ ಹೇಗೆಂಬುದು ನನಗೆ ಅರಿಯದ ವಿಷಯ.
13 ಅಕ್ಟೋಬರ್ 2009
ಬರವಣಿಗೆಯ ಬದುಕಿನಲ್ಲಿ ಉಳಿಯುವುದೇನು??
21 ಸೆಪ್ಟೆಂಬರ್ 2009
ಬಹಳ ದಿನಗಳ ತರವಾತ!!!
26 ಆಗಸ್ಟ್ 2009
ಕೊಳೆತು ನಾರುವ ಜಗದೊಳಗೆ ನಾನೆನ್ನುವುದೆಲ್ಲಿ!!!
30 ಜುಲೈ 2009
ನನ್ನೊಳಗೆ ನಾನಾಗೆ ಉಳಿದ ನಿನ್ನತನ........!!!
ಮೋಸಕ್ಕೆ ಹುಟ್ಟಿಲ್ಲಾ, ಮೋಸಕ್ಕೆ ಸಾವಿಲ್ಲ, ಇದು ಇಂದು ನಿನ್ನೆಯದಲ್ಲ, ನನಗೊಬ್ಬನಿಗೆ ಮೀಸಲಾದುದು ಅಲ್ಲಾ, ಸರ್ವರಿಗೂ ಸಮಪಾಲು ಎನಿಸಿದರೂ ಒಬ್ಬೊಬ್ಬರಿಗೆ ಹೆಚ್ಚು ನನಗೆ ಸಿಕ್ಕಂತೆ ಬಂಪರ್ ಸಿಕ್ಕರೂ ಸಿಗಬಹುದು, ಕೆಲವೊಬ್ಬರಿಗೆ ಕಡಿಮೆ ಸಿಗಬಹುದು, ಕೆಲವರಿಗೆ ಸಿಗದೇ ಇದ್ದರೂ ಇರಬಹುದು. ಮೋಸಕ್ಕೆ ಮೋಸವುಂಟಾ? ಮೋಸ ಮಾಡುವವರಿಗೂ ಮೋಸವಾಗುತ್ತದೆಯಾ? ಆಗಲೇ ಬೇಕು, ಅವರಿಗೆ ಮೋಸ ಮಾಡಲು ಭೂಲೋಕದಲ್ಲಿ ಇಲ್ಲದಿದ್ದರೂ ಪರಲೋಕದಲ್ಲಿರುವ ದೇವರಿಲ್ಲವೇ, ಎಂದು ಮನಸ್ಸಿಗೆ ನೆಮ್ಮದಿ ತರಲು ಪ್ರಯತ್ನಿಸುತ್ತೇನೆ. ಇಲ್ಲಾ, ಅದು ಆಗುವುದೆಂತು, ಆಗುವುದಾದರೂ ಹೇಗೆ, ದಿನ ನಿತ್ಯ ನಿನ್ನಯ ಪೂಜೆ ಮಾಡಿಯೇ, ಅವಳನ್ನು ಕಾಣಲು ಹೊರಡುತ್ತಿದ್ದದ್ದು, ಮರಳಿ ದಿನ ಮುಗಿಯುವ ಮುನ್ನ ನಿನ್ನಯ ಮುಂದೆ ಪ್ರಾರ್ಥನೆ ಮಾಡಿ ಮಲಗುತ್ತಿದ್ದೆ. ಒಮ್ಮೊಮ್ಮೆ ಅವಳು ತಡವಾಗಿ ಬಂದರೇ, ನನ್ನ ಮೊಬೈಲ್ ತೆಗೆಯದಿದ್ದರೂ ನಿನ್ನನ್ನೇ ಕೇಳುತ್ತಿದ್ದೆ, ಅಯ್ಯೊ ದೇವರೇ, ಏನಾಯಿತು ಅವಳಿಗೆ, ಅಪ್ಪ ಅಮ್ಮನ ಭಯದಿಂದ ಹೀಗಿರಬಹುದೆಂದು ಸುಮ್ಮನಿರುತಿದ್ದೆ. ಹುಡುಕಾಟಿಕೆಗೆ, ಇಂದು ಸಿಗುವುದಿಲ್ಲವೆಂದರೂ, ದೇವರೆ ಅವಳಿಗೆ ಒಮ್ಮೆ ನನ್ನೊಂದಿಗೆ ಬರುವ ಮನಸ್ಸು ಕೊಡು ಎನ್ನುತ್ತಿದ್ದೆ. ನಿನ್ನಿಂದಲೇ ಅವಳು ನನಗೆ ದೊರೆತದ್ದು ಎಂದು, ನಿನಗೆ ವಾರಕ್ಕೊಮ್ಮೆ ಪೂಜೆ ಮಾಡಿಸಿ, ಬರಿಗಾಲಲ್ಲಿ ನಡೆದು ಬರುತ್ತಿದೆ, ಆ ದಿನಕ್ಕೆಂದು ಕುಡಿಯುವುದು, ಸೇದುವುದು, ಮಾಂಸಹಾರಿ ಇವೆಲ್ಲವನ್ನೂ ದೂರವಿಟ್ಟಿದ್ದೆ. ಆದರೇ, ಇಂದು ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಲೂ ನೀನು ಅವಳನ್ನು ಬೆಂಬಲಿಸಿರಬೇಕು. ನನಗೆ ಕೇಡುಗಾಲ ಶುರುವಾಯಿತೆಂಬುದನ್ನು ನೀನು ಅವಳಿಗೆ ತಿಳಿಸಿರಲೇಬೇಕು, ಮನುಷ್ಯರ ಕೇಡುಗಾಲ ಅರಿಯಲು ನಿನ್ನನ್ನು ಬಿಟ್ಟರೇ, ಮತ್ತ್ಯಾರಿಗೆ ಸಾಧ್ಯ?
ಇದಾದ ಮರುಕ್ಷಣವೇ, ಯೋಚನೆ ಬದಲಾಗುತ್ತದೆ, ದೇವರು ಎಲ್ಲಿದ್ದಾನೆ? ಯಾರು ದೇವರು? ಯಾರಿಗೆ ಯಾರು ಶಿಕ್ಷೆ ಕೊಡುವವರು? ಸಹಸ್ರ ಸಹಸ್ರ ಅಮಾಯಕರನ್ನು ಬಾಂಬ್ ಹಾಕಿ ಕೊಲೆಗೈಯ್ಯುವವರಿಗೆ, ಪಾಪ ಪ್ರಜ್ನೆಯೆಂಬುದಿದೆಯೇ? ಸತ್ತ ಹೆಣವನ್ನು ಮುಂದಿಟ್ಟುಕೊಂಡು, ಲಂಚಕೋರುವ ಡಾಕ್ಟರುಗಳು, ಪೋಲಿಸರು, ಬಸ್ ಗಳಲ್ಲಿ, ಹೆಂಗಸಿನ ಕೊರಳಲ್ಲಿ ಮಾಂಗಲ್ಯ ಸರ ಕದಿಯುವ ಕದೀಮರು, ತಿಂಗಳಿಡಿ ದುಡಿದು ಬರುತ್ತಿರುವಾಗ ಸಂಬಳದ ಹಣವನ್ನೆಲ್ಲಾ ಕದ್ದು ಹೋಗುವ ಕಳ್ಳರು, ಲಂಚವೇ ದೇವರೆಂದು ಬಡವರ ರಕ್ತ ಹೀರುವ ಅಧಿಕಾರಿಗಳು, ಹೆಂಡತಿಗೆ ಹೊಡೆದು ಬಡಿದು ಹಿಂಸೆ ಕೊಟ್ಟು ಸಾಯಿಸಲು ಹಿಂದೆ ಮುಂದೆ ನೋಡದ ಪಾಪಿಗಳು, ನ್ಯಾಯ ಕೇಳಲು ಅಥವಾ ಆದ ಅನ್ಯಾಯವನ್ನು ಸರಿ ಪಡಿಸಿಕೊಳ್ಳಲು ಬರುವ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುವವರು, ಏನೂ ಅರಿಯದ ನಾಲ್ಕಾರು ವರ್ಷದ ಮಕ್ಕಳ ಮೇಲೆ ಎಸಗುವ ಅತ್ಯಾಚಾರ, ಗಂಡ ಕಳೆದು ಹೆಣ್ಣುಮಗಳನ್ನು ಒಂಟಿಯಾಗಿ ಬಿಡಲು ಬಯಸದ ನೀಚ ಗಂಡಸುತನವುಳ್ಳವರು, ಪರೀಕ್ಷೆಯೆಂಬುದನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳನ್ನು ಗುಲಾಮರಾಗಿಸಿಕೊಳ್ಳುವ ಪ್ರೋಫೆಸರ್ ಗಳು, ಗುರು ದೇವೋ ಭವವೆನಿಸಿಕೊಳ್ಳುವವರು, ಮಳೆಯಿಂದಾಗಿ ಜಮೀನು ಮುಳುಗಡೆಯಾಗಿದೆಯೆಂದು ಹೋದಾಗ ಲಂಚ ಕೇಳುವ ಅಧಿಕಾರಿಗಳು, ಮುಳುಗಡೆಯಾದ ಜಮೀನಿನಲ್ಲಿ ಏನೇನು ಇಲ್ಲದಿದ್ದರೂ ಹಣಕೊಟ್ಟವರ ಭೂಮಿಯಲ್ಲಿ ಬಂಗಾರವೇ ಹೋಯಿತೆಂದು ಬರೆದು ಕೊಡುವವರು, ಹಣ ಕೊಟ್ಟರೇ ಬೇಕಾದಷ್ಟು ಮಾರ್ಕ್ಸ್ ಹಾಕಿಸಿಕೊಡುವ ಬ್ರೋಕರ್ ಗಳು, ಹೋಟೆಲ್ ನಲ್ಲಿ ಕ್ಯಾಮೆರಾ ಇಟ್ಟು ಸಿ.ಡಿ.ಮಾಡಿ ಧಂದೆ ನಡೆಸುವವರು, ಆಪತ್ತಿನಲ್ಲಿ, ಮಧ್ಯರಾತ್ರಿಯಲ್ಲಿ ಪರದಾಡುತ್ತ ಆಟೋ ಹುಡುಕುವಾಗ ಹತ್ತು ಪಟ್ಟು ಹೆಚ್ಚು ಕೇಳುವ ಆಟೋ ಡ್ರೈವರ್ ಗಳು, ಕಾಲೇಜು ಹುಡುಗರೆಂದಾಕ್ಷಣ ಬಸ್ ನಿಲ್ಲಿಸದೇ ಹೋಗುವ ಬಸ್ ಡ್ರೈವರ್ ಗಳು, ಸಾಲದ ಭಾಧೆಯಿಂದ ಸತ್ತ ರೈತರ ಹೆಸರನ್ನು ನೂರಾರು ಬಾರಿ ತೋರಿಸಿ ಅವರ ಮನೆ ಮಂದಿಯೆಲ್ಲಾ ತಲೆ ತಗ್ಗಿಸುವ ಹಾಗೆ ಮಾಡುವ ನಮ್ಮ ಟಿ.ವಿ.ಚಾನೆಲ್ ಗಳು, ಅಪ್ಪಿ ತಪ್ಪಿ ರಾತ್ರಿ ಸಿಕ್ಕರೇ ಜೇಬಿನಲ್ಲಿರುವ ಹಣವೆಲ್ಲವನ್ನು ಕಿತ್ತು ಕಳುಹಿಸುವ ಪೋಲಿಸರು, ಮನ ಬಂದಂತೆ ಸೇಡು ತೀರಿಸಿಕೊಳ್ಳಲು, ಸ್ವಪ್ರತಿಷ್ಠೆ ಮೆರೆಯುಲು ಬರೆಯುವ ಲೇಖಕರು, ಹಣ ಕೊಟ್ಟರೇ ಯಾರೀಗೂ ಕೆಲಸ ಕೊಡಿಸುವ ರಾಜಕಾರಣಿಗಳು, ಎಲೆ ಬದಲಾಯಿಸುವಂತೆ ಪಕ್ಷ ಬದಲಾಯಿಸಿ ಮರು ಚುನಾವಣೆ ಮಾಡುವ ನೀಚ ರಾಜಕಾರಣಿಗಳು, ಜೊತೆಯಲ್ಲಿ ಕೆಲಸ ಮಾಡುವವರ ವಿರುದ್ದ ಇಲ್ಲಸಲ್ಲದ ದೂರನ್ನು, ಚಾಡಿಯನ್ನು ಹಬ್ಬಿಸುವವರು, ಸದಾ ಪಕ್ಕದ ಮನೆಯವರ ಕೆಡುಕನ್ನೆ ಬಯಸುವವರು, ಬಿಟ್ಟಿ ದುಡ್ಡಿಗೆ ಕನಸುಕಾಣುವವರು, ಅನಾಥಾಶ್ರಮವೆಂದು ದುಡ್ಡು ಹೊಡೆಯುವವರು, ವಿಧವಾ ಪಿಂಚೆಣಿಯನ್ನು ನುಂಗಿ ನೀರು ಕುಡಿಯುವವರು, ಇಪ್ಪತ್ತು ಮೂವತ್ತು ವರ್ಷ ಸಾಕಿ ಸಲಹಿದ ಅಪ್ಪ ಅಮ್ಮಂದಿರನ್ನು ದಿಕ್ಕರಿಸಿ ದೂರ ಹೋಗುವ ಮಕ್ಕಳಿಗೆ, ಅಣ್ಣ ತಮ್ಮ ಎಂದು ಹಣ ಪಡೆದು ಹಿಂದುರಿಗಿಸದೇ ಹೋಗುವ ಆಪ್ತ ಶತ್ರುಗಳು, ಇರುವ ತನಕ ಪ್ರಾಣ ಕೊಟ್ಟು ಕಾಪಾಡಿದ ಗೆಳೆಯನನ್ನು ನೀಚನೆಂದು ದೂರಿ ಹೋಗುವ ಗೆಳತಿಯರು, ಅವರ ಮನೆಯಲ್ಲೇ ಉಂಡು ತಿಂದು ಬೆಳೆದು ಕಡೆಗೆ ಅವರ ಮನೆಯಲ್ಲಿದ್ದುದ್ದೆಲ್ಲವನ್ನೂ ದೋಚುವ ಪರಮ ಪಾಪಿಗಳು, ಅಪ್ಪನ ಜೇಬಿನಲ್ಲಿ ಹಣ ಕದ್ದು,ಕದ್ದೇ ಇಲ್ಲವೆಂದು, ಕದ್ದಿದ್ದರೂ, ಅದು ನನಗಲ್ಲದೇ ಮತ್ತಾರಿಗೆ ಆ ಹಣವೆಂದು ವಾದಿಸುವ ನೀಚ ಮಕ್ಕಳು,ಒಂದು ಗಂಟೇಯೂ ಪಾಠ ಮಾಡದೇ, ನಲ್ವತ್ತು ಸಾವಿರದಷ್ಟು ಸಂಬಳವನ್ನು ದೋಚುತ್ತಿರುವ ಕೆಲವು ಪ್ರೋಫೆಸರ್ ಗಳು, ಏನೇನೂ ಮಾಡದೇ, ಲಕ್ಷಾಂತರ ರೂಪಾಯಿಯನ್ನು ಯೋಜನೆಗೆಂದು ಸಂಶೋಧನೆಗೆಂದು ಪಡೆಯುತ್ತಿರುವವರು, ಅಣ್ಣ ತಮಂದಿರೆಂದು ಬೊಗಳೆ ಹೊಡೆದರೂ, ಸದಾ ಅವರ ಮನೆ ಹಾಳಾಗಲಿ ಎಂದು ಹಾರೈಸುವ ಸಹೋದರರು, ಇವರಾರಿಗೂ ಇಲ್ಲವೇ ಪಾಪ ಪ್ರಜ್ನೆ?
ಪಾಪಪ್ರಜ್ನೆ ಇದ್ದರೂ ಮಾಡುತ್ತಿರಬೇಕೆಂದರೇ ಅದಕ್ಕೆ ಅವರು ನಂಬಿರುವ ದೇವರ ಕುಮ್ಮಕ್ಕು ಇರಲೇಬೇಕಲ್ಲವೆ? ದೇವರಿಲ್ಲವೆಂದು ಬೀಗುವವರು ಕಡಿಮೆ ಮಂದಿ. ದೇವರಿದ್ದಾನೆಂದು ಕೊಂಡಾಡುವರು ಅತಿ ಹೆಚ್ಚು, ನಾನಾ ಹೆಸರಿರಲಿ, ಎಲ್ಲರಿಗೂ ದೇವರೆಂಬುವನಿದ್ದಾನೆ ಅವನು ಹೇಳಿಯೇ ಈ ಕೆಲಸಗಳನ್ನು ಮಾಡಿಸುತ್ತಿದ್ದಾನೆಂಬುದು ಅವರ ವಾದ. ತಾವು ಮಾಡಿದ ಪಾಪವೆಲ್ಲವನ್ನು ಕಳೆದುಕೊಳ್ಳುವುದಕ್ಕೆಂದು ಒಂದೊಂದು ಪಶ್ಚತ್ತಾಪದ ದಾರಿಯನ್ನು ತೋರಿಸಿದ ಭಗವಂತ ಯಾರೆಂಬುದು ನನಗಂತೂ ತಿಳಿದಿಲ್ಲ. ಆದರೂ, ಈ ಭಗವಂತನನ್ನು ಸೃಷ್ಟಿಸಿದಾತನೇ, ಪಶ್ಚತಾಪವನ್ನು ಸೃಷ್ಟಿಸಿರಬೇಕು. ತಪ್ಪು ಮಾಡುವುದು ಹರಕೆ ಕಟ್ಟುವುದು ಅದನ್ನು ತೀರಿಸುವುದು ಮತ್ತದೇ ತಪ್ಪುಗಳನ್ನು ಮಾಡುವುದು ನಿವಾರಣೆ ಮಾಡಿಸುವುದು. ನಾನಿಲ್ಲಿ ಸರಿ ತಪ್ಪು ಎನ್ನುವುದನ್ನು ಯಾವುದೇ ಮಾನದಂಡವನ್ನಿರಿಸಿಕೊಂಡು ಹೇಳುತ್ತಿಲ್ಲ, ನನ್ನ ಪೂರ್ತಿ ಮಾತುಗಳು, ಕೇವಲ ಪಾಪ ಪ್ರಜ್ನೆ ಎನ್ನುವ ಅಥವಾ ಬೇರೆಯವರ ಜೀವನದ ಜೊತೆಗೆ ಆಡುವ, ಆಡಿದರೂ ಅದನ್ನು ಒಪ್ಪಿಕೊಳ್ಳದ ಬಿಗಿವಂತ ನಾಗರೀಕರಿಗೆ ಮಾತ್ರ. ಅಪರೂಪಕ್ಕೊಮ್ಮೆ ತಪ್ಪು ಮಾಡುವವರಿಗೆ, ಅಥವಾ ಮೋಸ ಹೋಗುವವರಿಗೆ ಅದರಿಂದ ನೋವಾಗಬಹುದು, ಸದಾ ತಪ್ಪನ್ನೆ ಮಾಡುವವರು, ಅಥವಾ ತಪ್ಪೇ ಜೀವನವನ್ನು ರೂಡಿಸಿಕೊಂಡವರಿಗೆ ನೋವಾದಿತೆ? ಮೊದಲ ಬಾರಿ ಪಿ.ಯು.ಸಿಯಲ್ಲಿ ಫೇಲಾದಾಗ ಮುಖ ತೋರಿಸುವುದಕ್ಕೆ, ಹಿಂಜರಿಯುತ್ತಿದ್ದೆ, ಫೇಲಾದೆನೆಂಬ ಕೊರಗಿತ್ತು. ಎರಡನೇ ಬಾರಿಗೆ ಅದರ ಅರಿವೇ ಮರೆತುಹೋಗಿತ್ತು, ಅದು ಅಲ್ಲದೇ, ನನ್ನ ಡಿಗ್ರೀ ಸಮಯದಲ್ಲಿ, ನನ್ನ ಸ್ನೇಹಿತರಿಗೆ ಫೇಲಾಗಿದ್ದೇವೆಂದು ಹೇಳಿಕೊಳ್ಳುವುದೇ ಒಂದು ಹೆಮ್ಮೆಯ ಸಂಗತಿಯಾಗಿತ್ತು. ಕೆಲವೊಮ್ಮೆ, ನನ್ನಂಥಹ ಕುಡುಕರಿಗೆ, ಕುಡಿತವೇ, ಜೀವನದ ಅತಿ ಅಗಮ್ಯ ವೃತ್ತಿಯೆಂದು ಬಿಂಬಿಸಿ ಮೆರೆಸುವ ಚಟವುಂಟಾಗುತ್ತದೆ. ನನ್ನಂಥ ಮುಟ್ಠಾಳರಿಗೆ, ಕುಡಿತದಿಂದ, ಮನೆ ಮಠ, ಕಳೆದುಕೊಂಡ, ಹೆಂಡತಿ ಮಕ್ಕಳು ಬೀದಿಗೆ ಬಂದ ದೃಶ್ಯಗಳು ಕಾಣುವುದಿಲ್ಲ, ಕಂಡರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮನ್ನು ಅವುಗಳು ಕಾಡುವುದಿಲ್ಲವೇಕೆ, ಸಮಜಾಯಿಸಿ ಕೆಲವೊಮ್ಮೆ ಉತ್ತರ ಕೊಡುತ್ತೇವೆ, ಮತ್ತೊಮ್ಮೆ, ಅದು ನಮ್ಮ ಆಂತರಿಕ ವಿಷಯವೆನ್ನುತ್ತೇವೆ. ನನ್ನ ಕುಡಿತ, ನನ್ನು ಮೋಜು, ನನ್ನ ಮೋಹ, ವ್ಯಾಮೋಹ, ದಾಹ ಪ್ರತಿಯೊಂದು ನನಗರಿಯದ, ಅಥವ ನನ್ನ ಜೊತೆ ಬೆರೆತು ಬಾಳುವ ಹಲವಾರು ಜೀವಗಳಿಗೆ ಕೆಡುಕನ್ನು ತರುತ್ತದೆಂಬುದನ್ನು ನೆನೆಯುವುದಿಲ್ಲ.
ತಪ್ಪು ಮಾಡುವುದನ್ನು ನಿಲ್ಲಿಸಲು ಬಯಸುವುದಿಲ್ಲ ಮನಸ್ಸು, ಅದರಲ್ಲಿ ನಮಗೆ ಅರಿಯದ ನಮ್ಮ ಅಹಂ ತುಂಬಿರುತ್ತದೆ, ನಾನು ಎಂಬ ನಾನತ್ವ ಹೆಚ್ಚಿರುತ್ತದೆ. ಏನು ಮಾಡಿದರೂ ನಾನು ಎಂಬುವನು ಕಿರೀಟದಿಂದ ಕೆಳಗಿಳಿಯುವುದಿಲ್ಲ, ನಾನು ಸೋಲುವುದೇ? ನಾನು ಬಾಗುವುದೇ? ಅಸಾಧ್ಯವೆನಿಸುತ್ತದೆ. ಕೆಟ್ಟದ್ದಾದರೂ ಸರಿಯೇ, ಒಲಿತಾದರೂ ಸರಿಯೇ, ನಾನು ಜಯಿಸಲೇಬೇಕು. ಅಹಂ ನಿಂದಾಗಿ ಇದುವರೆಗೆ ಎಂಥೆಂಥವರೂ ಏನಾದರೆಂಬುದನ್ನು ತಿಳಿದಿದ್ದರೂ, ಅಹಂ ನಿಂದ ಹೊರಬರುವ ಸಾಹಸ ಮಾಡುವುದಿಲ್ಲ. ಇಷ್ಟಕ್ಕೂ ಅಹಂನೊಂದಿಗೆ ಬದುಕುವಾಗ ಏನನ್ನು ಸಾಧಿಸುತ್ತಾರೆಂಬುದು ನನಗೆ ತಿಳಿದಿಲ್ಲ. ಮನ ಬಿಚ್ಚಿ ನಗುವುದಿಲ್ಲ, ಮನ ಬಿಚ್ಚಿ ಅಳುವುದಿಲ್ಲ, ಒಳ್ಳೆಯದನ್ನು ಮನಸಾರೆ ಪ್ರೀತಿಸಿ ಆನಂದಿಸುವುದಿಲ್ಲ, ಸುಂದರವಾಗಿದ್ದರೇ ಅದನ್ನು ಹೊಗಳುವುದಿಲ್ಲ, ಪ್ರಶಂಸಿಸುವುದಿಲ್ಲ. ನಾನು ಮಾಡಿದ್ದೇ ಸರಿಯೆಂದು ಮುನ್ನುಗುವುದನ್ನು ಬಿಟ್ಟರೇ ಮತ್ತೇನು ಮಾಡುವುದಿಲ್ಲ. ನಾನು ನನ್ನ ಜೀವನದಲ್ಲಿ ಹತ್ತು ಹುಡುಗನನ್ನು ಪ್ರೀತಿಸಿದೆ, ಕಾಡಿಸಿದೆ, ಮೋಹಿಸಿದೆ, ನಾನು ಹತ್ತಾರು ಹುಡುಗಿಯರ ಜೊತೆ ಅಲೆದಾಡಿದೆ, ಮೋಹಿಸಿದೆ, ಎಂದು ಮೆಚ್ಚಿ ಮೆರೆದಾಡುವವರಿಗೆ, ಆಂತರಿಕೆ ಪ್ರೀತಿಯೆಂಬುದು, ಅಥವಾ ಮೋಸದ ಎಳೆಯಲ್ಲಿನ ನೋವಿನ ಶಬ್ದ ಕೇಳುವುದುಂಟೇ? ಪ್ಲರ್ಟಿಂಗ್ ಎನ್ನುವುದೇ ಸ್ವೆಚ್ಚೆ ಎನ್ನುವುದನ್ನು, ಅಥವಾ ಸ್ವಾತಂತ್ರ್ಯದ ಪ್ರತೀಕ ಎನ್ನುವಂತೆ ಬಿಂಬಿಸುವ ಜನರಿರುವ ತನಕ, ಭಾವನ ಲೋಕದಲ್ಲಿ ನೆಮ್ಮದಿ ನೆಲೆಸಲು ಬಂದೀತೆ? ಏನು ಮಹಾ ಆದದ್ದು, ಎನ್ನುವಂತೆ, ಅಥವಾ ಏನೂ ಆಗಿಲ್ಲವೆನ್ನುವಂತೆ, ಈ ಬೀದಿಯಲ್ಲಿ ಹೊಡೆದರೇ ಆ ಬೀದಿಯಲ್ಲಿ ಹೊಸ ಮನುಷ್ಯನಾಗಿ ಬರುವವಂತವನಿಗೆ, ಈ ಮೇಲಿನ ಸಾಲುಗಳು ಅರ್ಥವಿಲದಂತವಾಗುವುದು ಸರಿಯೇ? ಆದರೇ, ತಿಂಡಿ ತಿನ್ನಲು ಕುಳಿತ ತಟ್ಟೆಯಲ್ಲಿ ಉಳಿದ ನೀರನ್ನು ಟೇಬಲ್ಲಿನ ಮೇಲೆ ಚೆಲ್ಲಿ ಅದರಿಂದ ಅಂದ ಚೆಂದದ ರಂಗೋಲಿ ಬಿಡಿಸಲು ಹಾತೊರೆಯುವ ಮನಸ್ಸುಳ್ಳ ವ್ಯಕ್ತಿಗಳಿಗೆ ಸಾಮಾನ್ಯವೆಂದು ಒಪ್ಪಲು ಸಾಧ್ಯವಾಗುವುದಿಲ್ಲ. ಒಂದು ಮಧ್ಯರಾತ್ರಿ, ಎರಡು ಗಂಟೆಯ ವೇಳೆಗೆ ನಿನಗೆ ನಾನು ಫೋನ್ ಮಾಡಿ ನನಗೆ ಒಂದು ಕೆಟ್ಟ ಸ್ವಪ್ನ ಬಿತ್ತು ಅಂತಾ ಹೇಳಿದೆ, ನೆನಪಿದೆಯಾ? ನಾನು ನೀನು ದೇವರ ಬಳಿ ಹೋಗಿ, ದೇವರೇ, ನಮಗೆ ಈ ಜನ, ಈ ಜಿಗಿಜಿಗಿ, ಸದಾ ಗುಯ್ಯ್ ಎನ್ನುವ ಟ್ರಾಫಿಕ್, ಬೆಳಿಗ್ಗೆ ರಾತ್ರಿ ದುಡಿಮೆ, ಹಸಿವು, ನರಕ, ಮೋಸ, ವಂಚನೆ, ಮರುಕ, ದುಃಖ, ಯಾರೋ ಮಾಡುವ ತಪ್ಪಿಗೆ ನಾವು ತೆರುವೆ ದಂಡ, ಅಳು, ಸಾಮಾಜಿಕ ಪ್ರತಿಷ್ಟೆ, ಹೆಸರು, ಮರ್ಯಾದೆಯೆಂಬ ಮುಖವಾಡ, ಇವೆಲ್ಲವೂ ಇಲ್ಲದ ಸ್ಥಳಕ್ಕೆ ನಮ್ಮನ್ನು ಬಿಡು, ನಮಗೆ ಹಸಿವು ಆಗಬಾರದು, ದಾಹವೆನಿಸಬಾರದು, ನಿನ್ನಂತೆಯೇ, ಇರಬೇಕು, ಆದರೇ, ಕನಸುಗಳು ಇರಬೇಕು, ದನಿವಾಗಬಾರದು, ದುಡಿಮೆಯಿರಬಾರದು, ಒಂದು ಬಗೆಯ ಮಕ್ಕಳಾಟವೆನಿಸಿದರೂ ಸರಿಯೇ ಇದು ನಮಗೆ ಬೇಕು ಎಂದು ಕೇಳಿದೆವು.
ದೇವರು, ಈ ಬಗೆಯ ಅರ್ಜಿ ಇದುವರೆಗೂ ಒಂದು ಬಂದಿರಲಿಲ್ಲ, ನಿಮ್ಮದೇ ಮೊದಲದ್ದು, ಆಗಲಿ ತಪಸ್ಸು, ನೀವು ಸ್ವರ್ಗಕ್ಕೆ ಬರಬೇಡಿ, ಅಲ್ಲಿಯೂ ಇತ್ತೀಚೆಗೆ, ಲಂಚ, ಮಂಚ, ಹೆಚ್ಚಾಗಿದೆ, ನಿಮಗೆ ನನ್ನ ಸೂಚನೆಯೆಂದರೇ, ಒಂದು ಸುಂದರವಾದ ಮರುಭೂಮಿ, ಜನಜಂಗುಳಿಯಿಲ್ಲ, ಪಕ್ಕದಲ್ಲಿಯೇ ಸುಂದರವಾದ ಓಯಾಸಿಸ್, ನಿಮಗೆ ಬೇಕಾದ ಮರುಭೂಮಿಯ ಹಣ್ಣುಗಳು ಹಸಿವೆ ಇಲ್ಲವೆಂದಾಗ ಉನ್ನಲು ತಿನ್ನಲು ಏನು ಬೇಕು? ಎಂದನು. ನಮಗೂ ಅದು ಸರಿಯೆಂದು ಅಲ್ಲಿಗೆ, ಹೋದೆವು, ನನಗೆ ಮರಳಲ್ಲಿ ಆಡುವುದು, ಗೂಡು ಕಟ್ಟುವುದು, ನನ್ನವಳ ಮುಖವನ್ನೇ ನೋಡುತ್ತಾ ಇರುವುದು. ಒಂದು ದಿನ ಗೂಡು ಕಟ್ಟಲು ನನ್ನನು ಬಿಟ್ಟು ನಮ್ಮ ಓಯಾಸಿಸ್ ಬಿಟ್ಟು ಇನ್ನೊಂದು ಓಯಾಸಿಸ್ ಬಳಿಗೆ ನನ್ನವಳು ಹೋಗಿದ್ದಳು. ನಾನು ಹುಡುಕಿ ಹುಡುಕಿ ಬಂದಾಗ, ಅಲ್ಲಿಗೆ ಹೋದದ್ದು ಯಾಕೆ ಎನ್ನಲು, ಅಯ್ಯೊ ಅಲ್ಲಿ ಕುಳಿತು ಕುಳಿತು ಬೇಸರವಾಗಿತ್ತು ಅದಕ್ಕೆ ಬಂದೆ ಎಂದಳು. ಅಷ್ಟೊತ್ತಿಗೆ ಎಚ್ಚರವಾಯಿತು. ಇದನ್ನು ಅವಳಿಗೆ ಹೇಳಿದ ತಕ್ಷಣ, ಅಯ್ಯೊ ಕರ್ಮವೇ, ಎಂಥಹ ಘೋರ ಕನಸು, ಮರುಭೂಮಿಯಲ್ಲಿ ಅದು ಬರಿ ನಿನ್ನ ಮುಖವನ್ನು ನೋಡಿ ಬದುಕೋದಾ ಇದಕ್ಕಿಂತ ನರಕ ಮತ್ತೊಂದು ಇದ್ಯಾ? ಈ ಮಾತು ಇಂದು ಸತ್ಯವಾಯಿತು. ನನ್ನ ಜೊತೆ ಬದುಕುವುದಕ್ಕಿಂತ ಮಹಾ ಪಾಪ ಮತ್ತೊಂದಿಲ್ಲವೆನ್ನುವುದನ್ನು ನಿರೂಪಿಸಿ ಹೋದಳು.
21 ಜುಲೈ 2009
ನಾನು ಎಂದರೇ! ನನ್ನತನವೆಂದರೇ?
ಮೂಗಿನ ಮೇಲೆ ಕೋಪ ತರಿಸಿಕೊಂಡು ರೇಗುತಿದ್ದವನನ್ನು ನಿನ್ನನ್ನು ಕಂಡಾಗ ನಿನ್ನೊಡನೆ ಮಾತನಾಡುವಾಗ ಅದೆಷ್ಟೂ ತಲ್ಲೀನನಾಗುತ್ತೇನೆಂದರೇ ನನಗೆ ಅಚ್ಚರಿ.ಆದರೂ ನಿನ್ನಿಂದ ನಾನು ದೂರಾಗಿ ಉಳಿದಿದ್ದು ಮತ್ತೊಮ್ಮೆ ಬಂದಾಗ ನನ್ನಲ್ಲಿ ಏನೇನೂ ಬದಲಾವಣೆ ಆಗದಿದ್ದರೂ ನಿನ್ನಲ್ಲಾದ ಬದಲಾವಣೆಗೆ ನಾನು ತತ್ತರಿಸಿ ಹೋಗಿದ್ದೆ. ನೀನು ನನಗೆ ಕೊಟ್ಟ ವಿವರಣೆ ಸರಿಯಿತ್ತಾದರೂ, ಅದರಿಂದ ನನಗೆ ಸಮಾಧಾನಕ್ಕಿಂತ ಆದ ನೋವೇ ಹೆಚ್ಚು. ನಮ್ಮ ಜೀವನವೆಂಬುದು ಒಂದು ಗಡಿಯಾರವೆಂದುಕೊಂಡರೇ, ನಾನೆಂಬುದು ದೊಡ್ಡ ಮುಳ್ಳು (ಗಂಟೆ), ನಮ್ಮ ಜೀವನದಲ್ಲಿ ಬರುವ ಜನರು ಅಲ್ಲಿರುವ ನಿಮಿಷದ, ಅಥವಾ ಸೆಕೆಂಡು ಮುಳ್ಳುಗಳಂತೆ. ನಮ್ಮ ಜೀವನದ ಗಂಟೆ ಬದಲಾಗುವುದಕ್ಕೆ ಒಂದು ಗಂಟೆ ಹಿಡಿದರೇ ಅವರ ಜೀವನ ನಮಗಿಂತ ೬೦ ರಷ್ಟೂ ಹೆಚ್ಚು ಬದಲಾಗಿರುತ್ತದೆ, ಕೆಲವರದ್ದು ೩೬೦ ಬಾರಿಯಷ್ಟು ಮುಂದಕ್ಕೆ ಹೋಗಿರುತ್ತದೆ. ಅದಕ್ಕಾಗಿಯೇ, ನಮ್ಮ ಜೀವನದಲ್ಲಿ ಹೈಸ್ಕೂಲ್ ಸಮಯದಲ್ಲಿ ಬಂದು ಹೋದ, ಅಥವಾ ಕಳೆದು ಹೋದ ಗೆಳತಿಯನ್ನು ಹಲವಾರು ವರ್ಷ ಕಳೆದ ಮೇಲೂ ಅದೇ ದೃಷ್ಟಿಯಂತೆ ನೋಡಲು ಬಯಸುತ್ತದೆ ನಮ್ಮ ಮನಸ್ಸು, ಆದರೇ ಅವರ ಮಕ್ಕಳು ಈ ವೇಳೆಗೆ ಹೈಸ್ಕೂಲ್ ಓದುತ್ತಿರುತ್ತಾರೆ. ನಮ್ಮ ಹಳೆಯ ನೆನಪುಗಳು ಅವರ ಸ್ಮೃತಿಪಟಲದಲ್ಲಿ ಮಂಕಾಗಿರುತ್ತವೆ, ಕೆಲವೊಮ್ಮೆ ಅಳಿಸಿಹೋಗಿದ್ದರೂ ಆಶ್ಚರ್ಯವಿಲ್ಲ.
ನಾನು ನಮ್ಮೂರಿನ ಕಟ್ಟೆಯ ಮೇಲೆ ನನ್ನ ಶಾಲೆಯ ದಿನಗಳಲ್ಲಿ ಕುಳಿತು ನೋಡುತ್ತಿದ್ದ ನದಿಗೂ ಇಂದೂ ಕುಳಿತು ನೋಡುವ ನದಿಗೂ ಸಾಕಷ್ಟು ವ್ಯತ್ಯಾಸವಾಗಿದೆ. ನನ್ನ ಮನಸ್ಸು ಇನ್ನೂ ನನ್ನ ಐದನೇ ತರಗತಿಯಲ್ಲಿ ಕುಣಿದು, ಮರಳಲ್ಲಿ ಮಲಗಿ ಮೈಗೆಲ್ಲಾ ಮರಳನ್ನು ಮೆತ್ತಿಸಿಕೊಂಡು ಮತ್ತೆ ನದಿ ನೀರಿಗೆ ಬೀಳಲು ಬಯಸುತ್ತದೆ. ಆದರೇ ನದಿ ಅದಕ್ಕೆ ಅವಕಾಶಕೊಡುವುದಿಲ್ಲ. ನನ್ನ ಆ ವಯಸ್ಸಿನ ಅಂದರೇ ಇಂದಿನ ಐದನೇ ವಯಸ್ಸಿನ ಹುಡುಗರು ನನ್ನ ಸ್ಥಾನವನ್ನು ವಹಿಸಿದ್ದಾರೆ. ಇದು ನಮ್ಮದು ನೀನು ವಯಸ್ಸಾದವನು ನಮ್ಮಿಂದ ದೂರವಿರು ಎಂದು ದೂಡುತ್ತಾರೆ.ನಾನು ಅವರ ಆಟಗಳನ್ನು ನೋಡುತ್ತಾ ಅಲ್ಲೇ ಮರಳಿನ ದಿಂಡಿನ ಮೇಲೆ ಕುಳಿತರೇ, ನಾನು ಅವರ ಮನೆಯವರಿಗೆ ಹೋಗಿ ಚಾಡಿ ಹೇಳುತ್ತೇನೆಂದು ಅನುಮಾನಿಸಿ ನೋಡುತ್ತಾರೆ. ಇವೆಲ್ಲವೂ ಗೊಂದಲಮಯವೇ ಸರಿ. ನಾನು ನಿನ್ನನ್ನು ಬಯಸಿ ಮರಳಿ ಮರಳಿ ನಿನ್ನಲ್ಲಿಗೆ ಬರಲು ಇಚ್ಚಿಸುತ್ತೇನೆ ಆದರೇ ನೀನು ನನ್ನುನ್ನು ದೂಡಲು ಪ್ರಯತ್ನಿಸುತ್ತೀಯಾ? ನಿಸರ್ಗವೆಂದರೇ ಇದೇನಾ?
ನೀನು ನನಗೆ ಬೇಕಿರುವುದೆಲ್ಲವನ್ನು ಕೊಟ್ಟೆ, ನೀನು ಕೊಟ್ಟೆ ಎನ್ನುವುದಕ್ಕಿಂದ ನಾನು ಬಳಸಿಕೊಂಡೆ, ಬಳಸಿಕೊಳ್ಳುವುದಕ್ಕಿಂತ ಬಸಿದುಕೊಂಡೆ. ನನ್ನ ಈ ಎಲ್ಲ ಬದಲಾವಣೆಗಳನ್ನು ಅಥವಾ ಜೀವನದ ಎಲ್ಲ ಆಗೂ ಹೋಗುಗಳನ್ನು ಬದಲಾವಣೆ, ಪರಿವರ್ತನೆ, ಎಂದು ವಿಭಿನ್ನಾ ಹೆಸರುಗಳನ್ನು ಕೊಟ್ಟವರಿದ್ದಾರೆ. ನನಗೆ ಅವೆಲ್ಲಾ ಅಷ್ಟು ಸಮಂಜಸವೆನಿಸುವುದಿಲ್ಲ. ಜೀವನದ ಪ್ರತಿಯೊಂದು ಹಂತದಲ್ಲಿಯೂ ಅದಕ್ಕೆ ತಕ್ಕಂತೆ ಆಟವಾಡುತ್ತೇವೆ, ಅದನ್ನು ಬೆಳವಣಿಗೆಯೆನ್ನಲು ಹೇಗೆ ಸಾಧ್ಯವೆನ್ನುವುದು ನನ್ನ ಪ್ರಶ್ನೆ. ಚಿಕ್ಕವನಿದ್ದಾಗ ಆಡುತ್ತಿದ್ದ ಆಟಗಳಲ್ಲಿ, ಮರಕೋತಿ, ಕಬ್ಬಡ್ಡಿ, ಮರಳಲ್ಲಿ ಮನೆ ಕಟ್ಟುವುದು, ಇವೆಲ್ಲಾ ಇಂದು ನಾನು ಆಡಲೂ ಹೋದರೇ ನನಗಿಂತ ಇಪ್ಪತ್ತು ವರ್ಷ ಚಿಕ್ಕ ಮಕ್ಕಳ ಜೊತೆಯಲ್ಲಿ ನಾನು ಸೋತು ಮುಖ ಊದಿಸಿಕೊಂಡು ಬರಬೇಕಾದೀತು. ಅದರಂತೆಯೇ, ನಾನು ನನಗಿಂತ ಬಹಳ ಚಿಕ್ಕವಯಸ್ಸಿನ ಕಿರಿಯವರನ್ನು ಇಪ್ಪತ್ತರ ಮಗ್ಗಿ ಹೇಳು ಎಂದು ಪೀಡಿಸಿ ನಿನಗೆ ಅಷ್ಟೂ ತಿಳಿಯುವುದಿಲ್ಲವೇ ಎಂದರೇ ಮುಟ್ಠಾಳತನದ ಪರಮಾವಧಿ ಎನಿಸುವುದು. ಅವರವರ ಪಾತ್ರಗಳನ್ನು ಅವರವರು ಆ ಸನ್ನಿವೇಶಕ್ಕೆ ತಕ್ಕಂತೆ ಆಡಿ ಹೋಗಬೇಕು, ಯಾರನ್ನೋ ಅನುಕರಣೆ ಮಾಡಲೂ ಹೋಗಿ ಹಾಗೆ ಆಗದಿದ್ದಾಗ ನೊಂದು ಸಾಯುವುದು ಅಷ್ಟು ಹಿತವಲ್ಲ.. ನಿಮ್ಮ ಜೀವನ ನಿಮ್ಮ ಅನಿಸಿಕೆ ನಿಮಗೆ ಬಿಟ್ಟದ್ದು ಇದು ನನ್ನೊಳಗೆ ಕೊರೆಯುತ್ತಿದ್ದ ಕೆಲವು ಹುಳುಗಳು...ಇದನ್ನು ಕುರಿತು ಮತ್ತೇ ಚರ್ಚೆ ಮಾಡಲು ಬರಬೇಡಿ....
15 ಜುಲೈ 2009
ನನ್ನೊಳಗೆ ಅವಿತು ಹೋಗುವ ಮುನ್ನ ನಿಮ್ಮ ಮಡಿಲಿಗೆ!!!!-3
ಊರಿನ ಸುತ್ತಾ ಮುತ್ತಾ ಇಂದಿನಂತಿರಲಿಲ್ಲ, ಇಡೀ ಊರಿನಲ್ಲಿದ್ದದ್ದು, ೧೨ ಮನೆಗಳು ಮಾತ್ರ. ಆದರೂ ಜನಸಂಖ್ಯೆ ಮೂನ್ನೂರರಷ್ಟಿತ್ತು. ಒಂದೊಂದು ಮನೆಯಲ್ಲಿಯೂ, ಸರಾಸರಿ ಮೂವತ್ತು ಜನರಿದ್ದರು. ಊರೆಂಬುದು ಕಾಡಿನಿಂದ ಹೊರತಾಗಿರಲಿಲ್ಲ. ಊರು ಕಾಡು ಒಂದೆ ಎನ್ನುವುದಕ್ಕಿಂತ ಕಾಡಿನೊಳಗೆ ಮನೆಗಳಿದ್ದವು. ಮನೆಯ ಹಿಂದಿನ ಹಿತ್ತಲಿನಲ್ಲಿ ರಾತ್ರಿಯಲ್ಲಿ ಕಾಡು ಹಂದಿಗಳು ನುಗ್ಗುತ್ತಿದ್ದವು. ಕಾಡಿನಲ್ಲಿ, ಅನೇಕ ಕಾಡುಮೃಗಗಳಿರುತ್ತಿದ್ದವು. ಅಂದೂ ಇವುಗಳನ್ನು ಪ್ರಾಣಿಗಳು ಎನ್ನುತ್ತಿದ್ದರೂ, ಕಾಲ ಬದಲಾದಂತೆ ಮೃಗಗಳೆಂದು ಕರೆಯಲಾದವು. ಪ್ರಾಣಿಸಂಗ್ರಹಾಲಯವೆನ್ನುವ ಪದ ಕೊಡುವ ಮುದವನ್ನು ಮೃಗಾಲಯವೆನ್ನುವ ಪದ ಕೊಡಲಾರದು. ಕರಡಿ, ಚಿರತೆ, ಜಿಂಕೆ, ಆನೆ, ಹೀಗೆ ಹತ್ತು ಹಲವು ಪ್ರಾಣಿಗಳು ಆ ಕಾಡಿನಲ್ಲಿದ್ದವು. ಬೇಟೆಯೆಂದರೇ, ಮಲೆನಾಡಿನಂತೆ ಕೋವಿ ಹಿಡಿದು ಹೋಗುತ್ತಿರಲಿಲ್ಲ. ಬಲೆ ಹಾಕಿ, ಮೊಲ, ಜಿಂಕೆ, ಸಾರಗ ಹಿಡಿಯುವುದು, ಭರ್ಜಿ, ಈಟಿಯಿಂದ ಕೊಲ್ಲುವುದು. ಜೇನು ಬಸಿಯುವುದು ಸಾಮಾನ್ಯದವುಗಳು. ಅಷ್ಟೆಲ್ಲಾ ಪ್ರಾಣಿಗಳಿದ್ದು, ಅವುಗಳ ಹಾವಳಿ ತಿಳಿದಿದ್ದರೂ ಆ ಊರಿನಲ್ಲಿ ಒಂದೇ ಒಂದು ಕೆಟ್ಟ ಸಂಗತಿಗಳು ನಡೆಯುತ್ತಿರಲಿಲ್ಲ. ಅದಕ್ಕೆ ದೊಡ್ಡೇಗೌಡರ ಉತ್ತರವೇ ಬೇರೆ, ಆ ದಿನಗಳಲ್ಲಿ ಕಾಡು ಪ್ರಾಣಿಗಳಿಗೆ ಸಿಕ್ಕಿ ಸತ್ತವರ ಸುದ್ದಿಗಳು ಬಹಳ ಕಡಿಮೆಯಿರುತ್ತಿದ್ದವು, ಯಾಕೆಂದರೇ, ಅಂದು ಇಂದಿನಂತೆ ಅವುಗಳಿಗೆ ಮನುಷ್ಯನನ್ನು ತಿನ್ನಲೇಬೇಕೆಂಬ ದುರ್ದು ಇರಲಿಲ್ಲ. ಅಲ್ಲಿಯೇ ಸಾಕಷ್ಟು ಆಹಾರ ಸಿಗುತ್ತಿತ್ತು. ಇಲ್ಲದಿದ್ದರೇ, ಕಾಡಿನಲ್ಲಿ ಶತಮಾನಗಳಿಂದಲೂ ಮನುಷ್ಯರು ಬದುಕಲೂ ಬಂದೀತೆ? ನಾಗರಹೊಳೆ, ಬಂಡಿಪುರದಲ್ಲಿ ಇಂದಿಗೂ ಕಾಡು ಜನರು ಇದ್ದಾರೆಂದು ಹೇಳುತ್ತಾರೆ. ನಮ್ಮ ಹಾಸನ ಜಿಲ್ಲಾ ಗಡಿಯಲ್ಲಿನಲ್ಲಿದ್ದ ಮಲೆಕುಡಿ ಜನಾಂಗ ಈಗ ನಶಿಸಿಹೋಗಿದೆ. ಪ್ರಾಣಿ ಮತ್ತು ಮನುಷ್ಯರಿಬ್ಬರೂ ಸಮಾನರೆಂಬುದನ್ನು ಅವುಗಳು ಅರಿತಿದ್ದವು. ಇಲ್ಲದಿದ್ದರೇ, ದೇವರ ವಾಹನಗಳಾಗಿ ಪ್ರಾಣಿಗಳು ಬರುತ್ತಿದ್ದವೆ? ಚಾಮುಂಡೇಶ್ವರಿಯ ವಾಹನವಾಗಿ ಹುಲಿಯೇ ಬರಬೇಕೆಂದರೇ? ಇವೆಲ್ಲಾ ಆ ದೈವ ನಿಯಮ.
ಹೀಗೆ ಗೌಡರ ಮನಸ್ಸು ವಿಕಾಸನಗೊಳ್ಳುವುದಕ್ಕೆ ಪರಿಸರದೊಂದಿಗಿನ ಅವರ ನಿಕಟ ಸಂಬಂಧವೇ ಕಾರಣವೆಂದರೂ, ಗೌಡರು ಮಾತ್ರ ನಾನು ಏನನ್ನೋ ಹುಡುಕುತ್ತಾ ಹೋದೆ ಅದು ಸಿಗಲೇ ಇಲ್ಲವೆನ್ನುತ್ತಾರೆ. ಅವರು ಮುಂಜಾನೆ ಮುಸುಕಿನಲ್ಲೇ ಎದ್ದು ಹೊರಡುತಿದ್ದರು. ಹಳ್ಳಿ ಮುಸುಕಿಗೆ ಎದ್ದು, ಗಂಡಸರು ದನಗಳನ್ನು ಹಟ್ಟಿಯಿಂದ ಹೊರಕ್ಕೆ ಕಟ್ಟಿಹಾಕಿ, ಎತ್ತುಗಳನ್ನು ಉಳುವುದಕ್ಕೆಂದು ಹೊಲಗಳಿಗೆ ಹೋಗುತ್ತಿದ್ದರು. ಮನೆಯಲ್ಲಿನ ಹೆಂಗಸರು ಎದ್ದು ಕೊಟ್ಟಿಗೆಗಳಿಗೆ ಹೋಗಿ ಹಾಲು ಕರೆದು ಬಂದು, ಕೊಟ್ಟಿಗೆ ಶುಚಿಮಾಡಿದ ನಂತರ ಮನೆ ಮುಂದಿನ ಬೀದಿಯನ್ನು ಗುಡಿಸಿ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ತಿಪ್ಪೆಗೆ ಹಾಕಿ ಬರುತ್ತಿದ್ದರು. ಆಗ, ಹಾಲು ಮಾರುವುದಾಗಲೀ, ಕೊಳ್ಳುವುದಾಗಲೀ ಇರಲೇ ಇಲ್ಲ. ಎಷ್ಟು ಕರೆಯುವ ಹಸು ಎಮ್ಮೆಗಳು ಇದ್ದರೂ ಅವುಗಳು ಮನೆಯಲ್ಲಿರುವು ಮಕ್ಕಳ ಬಾಣಂತದಲ್ಲಿಯೇ ಮುಗಿಯುತ್ತಿದ್ದವು.
ದೊಡ್ಡೆಗೌಡರೂ, ಹುಡುಗನಾಗಿದ್ದಾಗ, ಮುಸುಕಿಗೆ ಎದ್ದು, ನಿನ್ನೆ ರಾತ್ರಿ ಬಿಟ್ಟಿದ್ದ ಬಲೆಯಲ್ಲಿ ಮೀನು ಹೆಚ್ಚಾಗಿ ಬಿದ್ದಿದ್ದರೇ, ಅವುಗಳನ್ನು ಅಲ್ಲೇ ಹತ್ತಿರದ ಅವರ ಮೆಣಸಿನ ಹೊಲದಲ್ಲಿ ಹಾಕಿ ಒಂದೆರಡನ್ನು ತನ್ನೊಂದಿಗೆ ತೆಗೆದುಕೊಂಡು ಅವಗಳ ಸಿಪ್ಪೆ ಎರೆದು ಕಾಡಿನೊಳಗಿನಿಂದ ಬೆಟ್ಟ ಹತ್ತುತ್ತಿದ್ದರು.ಅಲ್ಲಿ ಬೆಂಕಿ ಹಚ್ಚಿ ಮೀನುಗಳನ್ನು ಸುಟ್ಟು ತಿಂದು ಬಲೆ ಬೀಸಿದ ಜಾಗದಲ್ಲಿ, ಮೊಲ ಸಿಕ್ಕರೇ ಹಿಡಿದು ತಿಂದು, ಕಾಡು ಇಲಿಗಳನ್ನು ಹಿಡಿಯಲು ನೋಡುತಿದ್ದರು. ಕೆಲವೊಮ್ಮೆ ಕಡ್ಡಿ ಜೇನು, ಸಿಗುತ್ತಿತ್ತು. ಹೆಜ್ಜೇನು ಕಸಿಯಲು ಪ್ರಯತ್ನಿಸಿದ್ದರೂ, ಅದು ಅವರಿಂದ ಆಗುವುದಿಲ್ಲವೆಂದು ಸುಮ್ಮನಿರುತ್ತಿದ್ದರು. ಆದರೇ, ಅವರಿಗೆ ಸುಮಾರು, ೯ ವರ್ಷದವರಿರುವಾಗಲೇ ಆಗಿನ್ನು ಕಂಬಳಿಯ ನದಿಗೆ ಕಟ್ಟೆ ಕಟ್ಟಿರಲಿಲ್ಲ. ನದಿಯಲ್ಲಿ ದೊಡ್ಡ ಬಾಳೆ ಮೀನು ಸುಮಾರು ೬ಕೆ.ಜಿ. ಬರುತಿತ್ತು ಅಂಥಹದ್ದನ್ನು ಒಂದು ಸಣ್ಣ ಬಲೆಯಿಂದ ಹಿಡಿದು ತಂದಿದ್ದರು. ಅದನ್ನು ನೋಡಿದ ಊರಿನ ಜನ ಅವರನ್ನು ಅನುಮಾನದಿಂದ ಗೌರವ ಕೌತುಕಗಳಿಂದ ಕಾಣತೊಡಗಿದರು. ಇಂಥಹ ನೂರಾರು ಸಾವಿರಾರು ಕಥಗಳು ದೊಡ್ಡೆಗೌಡರ ಬಾಲ್ಯದಲ್ಲಿ ನಡೆದಿವೆ. ಹತ್ತರ ವಯಸ್ಸಿನಲ್ಲಿಯೇ ಅವರು ಮುನ್ನೂರು ಅಡಿ ಎತ್ತರದ ಮರಗಳನ್ನು ಏರುತ್ತಿದ್ದರು. ಜೇನು ಕಸಿಯುವುದು ಅವರಿಗೆ ಕಲೆಯಾಗಿ ಬೆಳೆದಿತ್ತು. ಒಂದೇ ಒಂದು ಜೇನ್ನೊಣವೂ ಕಚ್ಚಿಲ್ಲ.ಆಷಾಡದಲ್ಲಿ ನದಿ ತುಂಬಿ ಹರಿಯುತ್ತಿದ್ದರೂ ಲೆಕ್ಕಿಸದೇ ಈ ದಡದಿಂದ ಆ ದಡಕ್ಕೇ ಈಜುತಿದ್ದರು. ಅವರ ಲೆಕ್ಕಾಚಾರಗಳು ಕೈಕೊಟ್ಟ ಸನ್ನಿವೇಶಗಳು ಬಹಳ ಕಡಿಮೆಯಾಗಿತ್ತು. ನಿಸರ್ಗದ ವಿಚಾರದಲ್ಲಿ, ನದಿಯಲ್ಲಿನ ಮೀನುಗಳ ವಿಷಯದಲ್ಲಿ, ಕಾಡಿನ ಮರಗಿಡಗಳ, ಪ್ರಾಣಿಗಳ ವಿಷಯದಲ್ಲಿ ಅದೊಂದು ಭಂಡಾರವಾಗಿಯೇ ಬೆಳೆಯಿತು.
ಅವರು ಬೆಟ್ಟದ ಮೇಲಿದ್ದ ಬಸವಣ್ಣನನ್ನು ವಹಿಸಿಕೊಂಡಿರುವುದರಿಂದ ಇದು ಸಾಧ್ಯವೆಂಬುದು ಹಲವರ ಅಭಿಪ್ರಾಯ. ಅವರು ಹಗಲಿರುಳೆನ್ನದೇ ಕಾಡಿನಲ್ಲಿ ಅಲೆದಾಡಿದ್ದರಿಂದ ಅಲ್ಲಿನ ಭೂತವೋ, ಕಾಳಿಯೋ ಅವರ ಮೈಯಲ್ಲಿ ಆಡುತ್ತದೆಂದು ಚಿಕ್ಕಂದಿನಲ್ಲಿ, ಅವರನ್ನು ಹತ್ತಿರದ ಊರುಗಳ ಮಂತ್ರವಾದಿಗಳಿಗೆ ಕರೆದೊಯ್ದಿದ್ದರು. ತಡೆ ಹೊಡೆಸುವುದು ನವಗ್ರಹ ಶಾಂತಿ ಮಾಡಿಸುವುದು ನಡೆಯಿತು. ಮನೆದೇವರಿಗೆ ಹೋಗಿ ಮುಡಿಕೊಟ್ಟು ಬಂದರು. ಕಟ್ಟ ಕಡೆಗೆ ಇವರ ಬಗ್ಗೆ ಆಸೆಯನ್ನು ತೊರೆದರು. ಇರುವ ಇಪ್ಪತೊಂದು ಮಕ್ಕಳಲ್ಲಿ ಇವರನ್ನೇ ಪೂರ್ಣಮಟ್ಟದಲ್ಲಿ ಕಾಣಲೂ ಬಂದೀತೆ? ದೊಡ್ಡೇಗೌಡರು ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ಮನೆ ತೊರೆದು ಹೊರಟರು. ಎಲ್ಲಿ ಹೋದರು ಎಲ್ಲಿ ಇದ್ದರೆಂಬುದರ ಸುಳಿವೇ ಇರಲಿಲ್ಲ. ಅವರು ಮರಳಿ ಬಂದದ್ದು ಅವರ ಇಪ್ಪತ್ತೆರಡೇನೇ ವಯಸ್ಸಿನಲ್ಲಿ. ಅಂದರೇ ಒಂಬತ್ತು ವರ್ಷಗಳು ಅವರು ಅನೇಕಾ ಊರುಗಳನ್ನು ಸುತ್ತಾಡಿ ಬಂದಿದ್ದರು. ಆ ಸಮಯಕ್ಕೆ ಸರಿಯಾಗಿ ಅವರ ನೆಚ್ಚಿನ ತಾಣಗಳಾದ ಅವರೂರಿನ ನದಿ, ಬೆಟ್ಟ, ಕಾಡು ಪರಿಸರ ಎಲ್ಲವೂ ಬದಲಾಗತೊಡಗಿತ್ತು. ಮನೆಯಲ್ಲಿನ ಎಲ್ಲ ಅಣ್ಣ ತಮ್ಮಂದಿರೂ ಮದುವೆಯಾಗಿ ಅಪ್ಪ ತೀರಿದ ನಂತರ ಬೇರೆ ಬೇರೆಯಾಗಿ ಸಂಸಾರ ನಡೆಸುತಿದ್ದರು. ಕಂಬಳ ನದಿಗೆ ಕಟ್ಟೆ ಕಟ್ಟಿ ಮುಂದಿನ ಹಲವಾರು ಊರುಗಳಿಗೆ ನೀರೊದಗಿಸುವ ಯೋಜನೆ ನಡೆಯುತ್ತಿತ್ತು. ಮೊದಲು ಹರಿಯುತ್ತಿದ್ದ ನದಿಯನ್ನು ಕೆಲಸದ ಸಲುವಾಗಿ ಬೇರೊಂದು ಮಾರ್ಗ ಬದಲಾಯಿಸಿದ್ದರು. ಮನುಷ್ಯನ ದುರಾಸೆಯ ಚಿತ್ರಗಳು ಅಂದಿನಿಂದಲೇ ಅವರ ಕಣ್ಣಲ್ಲಿ ಕಾಣತೊಡಗಿದವು. ನೆಪ ಬರಿಯ ನದಿಯನ್ನು ಬದಲಾಯಿಸುವುದಾದರೂ ಅಲ್ಲಿನ ಮರಗಳನ್ನು ಕಡಿದು ಸಾಗಿಸುವುದು ಮೊದಲಾಯಿತು. ಬೆಲೆ ಬಾಳುವ ಮರಗಳೆಲ್ಲಾ ಹೋಗುವುದಲ್ಲದೇ, ಕೆಲಸಗಾರರಾಗಿ ಬಂದಿದ್ದ ಜನರು ರಾತ್ರಿಯಾಯಿತೆಂದರೇ ಕಾಡಿಗೆ ನುಗ್ಗಿ ಬೇಟೆಯೆಂಬ ಹೆಸರಲ್ಲಿ ಅಲ್ಲಿದ್ದ ಪ್ರಾಣಿಗಳನ್ನೆಲ್ಲಾ ಹೊಡೆದು ತಿಂದರು.
ಊರಿನಲ್ಲಿರಲು ಗೌಡರ ಮನಸ್ಸು ಯಾಕೋ ಒಗ್ಗುತ್ತಿರಲಿಲ್ಲ. ಅವರಿಗೆ ಏನೋ ಒಂದು ಕೊರತೆಯಿದೆ ಎನಿಸುತಿತ್ತು. ಇಡೀ ದೇಶವೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿತ್ತು. ಆದರೇ ಕಂಬಳಿ ಮಾತ್ರ ನಿದ್ದೆಯಿಂದ ಏಳಲೇ ಇಲ್ಲ. ಈ ಊರಿನ ಜನರು ಅಣೆಕಟ್ಟೆಯಿಂದ ಎಲ್ಲೆಲ್ಲಿ ಸಾಧ್ಯವೋ ಆ ಜಾಗವನ್ನೆಲ್ಲಾ ಸಮ ಮಾಡೀ ವ್ಯವಸಾಯಕ್ಕೆ ಅಣಿಮಾಡತೊಡಗಿದರು. ದೇಶಕ್ಕೇ ಸ್ವಾತಂತ್ರ್ಯ ಬಂತಂತೆ ಎಂದು ಒಮ್ಮೇ ಹೇಳಿದ್ದನ್ನು ಬಿಟ್ಟರೇ ಸ್ವಾತಂತ್ರ್ಯದ ಬಗ್ಗೆ ಇತ್ತೀಚಿನ ತನಕ ಊರಿನವರಿಗೆ ತಿಳಿದಿರಲಿಲ್ಲ. ಈಗಲೂ ಅಷ್ಟೇ ಸ್ವಾತಂತ್ರ್ಯ ದಿನವೆಂದರೇ, ಮಕ್ಕಳು ಸಾಲಾಗಿ ಊರು ಸುತ್ತಾ ಮೆರವಣಿಗೆ ಬರುತ್ತಾರೆ ಚಾಕೊಲೇಟ್ ಕೊಡುತ್ತಾರೆ. ಅದಕ್ಕಾಗಿ ಆಟವಾಡಿಸುತ್ತಾರೆ. ಮಕ್ಕಳಿಗೆ ಬಹುಮಾನವಾಗಿ ಶಾಲೆಗಳಲ್ಲಿ ಒಂದು ಲೋಟ, ಪ್ಲೇಟು, ಬಟ್ಟಲು ಇವುಗಳನ್ನು ಕೊಡುತ್ತಾರೆ. ಒಮ್ಮೆ ದೊಡ್ಡೇಗೌಡರು, ಮೇಷ್ಟ್ರೇ ಮಕ್ಕಳು ಗೆದ್ದದ್ದಕ್ಕೆ ಈ ಪಾತ್ರೆ ಪಗಡೆ ಕೊಡುತ್ತೀರಲ್ಲ ಯಾಕೆ ನಾಳೆಯಿಂದ ಅಡುಗೆ ಮಾಡಿಕೊಂಡಿರಿ ಶಾಲೆಗೆ ಬರಬೇಡಿ ಅಂತಲೋ ಎಂದರು. ಅದಕ್ಕೆ ಮೇಷ್ಟ್ರು ಇಲ್ಲ ಯೆಜಮಾನ್ರೇ ಮಕ್ಕಳಿಗೆ ಪೆನ್ನು, ಪೆನ್ಸಿಲ್ ಕೊಟ್ಟರೇ ಎರಡೇ ದಿನಕ್ಕೆ ಮುರಿದು ಹಾಳುಮಾಡುತ್ತಾರೆ, ಎಂದರು.ಗೌಡರು ಮೇಷ್ಟ್ರ ಜಾಣ್ಮೆಗೆ ತಲೆತೂಗಲೇ ಬೇಕಾಯಿತು. ಆ ಊರಿನಲ್ಲಿ ಸ್ವಾತಂತ್ರ್ಯದ ಬಗ್ಗೆಯಾಗಲೀ ದೇಶದ ಬಗ್ಗೆಯಾಗಲೀ, ಅಥವಾ ಇಂದಿನ ರಾಜಕಾರಣಿಗಳ ಬಗ್ಗೆಯಾಗಲೀ ಅಂಥಹ ಕುತೂಹಲ ಕೆರಳಿಸುವಂತದ್ದು ಏನು ಇಲ್ಲ. ಊರಿನ ಕೆಲವು ಮಂದಿ ಪುಡಾರಿಗಳಾಗಿ ಎರಡು ಮೂರು ಪಕ್ಷದ ಬಿತ್ತಿ ಚಿತ್ರಗಳನ್ನು ಹಾಕುತ್ತಾರೆ. ಚುನಾವಣ ಸಮಯದಲ್ಲಿ ಅವರ ಜೇಬಿಗೆ ದುಡ್ಡು ಬಿಟ್ಟುಕೊಂಡು ಜನರಿಗೆ ಮೂರು ದಿನ ಬಾಡೂಟ ಮಾಡಿಸಿ, ಲೋಕಲ್ ಸರಾಯಿ ಕುಡಿಸಿದರೇ ಮುಗಿಯಿತು. ಯಾರು ಗೆದ್ದರೂ ಸೋತರು ಅವರಿಗೆ ಚಿಂತೆಯಿಲ್ಲ.
ನಾನು ಕುಳಿತಿರುವಲ್ಲಿಗೆ, ಊರಿನ ಮಧ್ಯ ವಯಸ್ಸನ್ನು ದಾಟಿದ ಒಬ್ಬರು ಬಂದು ಅಯ್ಯಾ ಎಂದರು. ನಾನು ಅವರ ಮುಖವನ್ನೊಮ್ಮೆ ನೋಡಿದೆ, ನಿನ್ನೆ ಬೆಳ್ಳಿಗ್ಗೆ ಅಂಗಡಿಗೆ ಸಿಗೆರೇಟು ಕೊಳ್ಳಲು ಹೋದಾಗ ನೋಡಿದ ಮುಖವೆನಿಸಿತು. ತಾತ ಅವರ ಮುಖವನ್ನು ನೋಡಿ, ಏನೋ ಸುಬ್ಬನ ಸವಾರಿ ನಮ್ಮನೆ ತನಕ? ಎಂದರು. "ಅಯ್ಯಾ ನಮ್ಮನೆ ಬಿಳಿ ಹಸ ನಿಲ್ಲುತಾನೆ ಇಲ್ಲ, ಆಸ್ಪತ್ರೆಗೆ ಹೊಡ್ಕೊಂಡು ಹೋಗಿದ್ದೆ ಮೂರು ದಪಾ," ಅಂದರು? ನನಗೆ ಸ್ವಲ್ಪ ದಿಗಿಲಾಯಿತು, ಇವರು ಆಡುತ್ತಿರುವ ಭಾಷೆ ಯಾವುದು? ಆಸ್ಪತ್ರೆಗೆ ಹೊಡೆದುಕೊಂಡು ಹೋದ ಹಸು ನಿಲ್ಲುತ್ತಿಲ್ಲ ಅಂದರೇ!?. ನನ್ನ ಮುಖದಲ್ಲಿ ಮೂಡಿದ ಬದಲಾವಣೆಯನ್ನು ಗಮನಿಸಿ, ಇರು ಮಗಾ ಹೇಳ್ತಿನಿ ಅಂದರು. "ಸರಿ ಏನ್ ಮಾಡ್ಬೇಕೋ ಸುಬ್ಬಾ? ನಾಳೆ ಹೊತ್ತು ಮೂಡೋ ಹೊತ್ತಿಗೆ ಬಂದು ಹೋಗು" ಎಂದರು. ಅವನು, "ಅಯ್ಯಾ ಒಸಿ ನೆಸೆ", ಎಂದು ಹಳ್ಳು ಕಿರಿದ. ನೆಸೆ ಡಬ್ಬಿಯನ್ನು ಕುಟ್ಟಿ, ಬೆರಳಿನಿಂದ ತೆಗೆದು ಮೂಗಿನ ಒಳಕ್ಕೆ ಎರಡು ಬೆರಳನ್ನು ತೂರಿಸುವಂತೆ ಮಾಡಿದ. ಕ್ಷಣಾರ್ಧದಲ್ಲಿ, ದಬ ದಬನೇ ಸೀನತೊಡಗಿದ. ಬೀದಿಯಲ್ಲಿ ಆಡುತ್ತಿದ್ದ ಮಗು ಬೆಚ್ಚಿ ಬಿದ್ದಿತೇನೋ ಎಂದು ಮಗುವನ್ನು ನೋಡಿದೆ. ಯಾರೇ ಕೂಗಾಡಲೀ,ಊರೇ ಹೋರಾಡಲೀ ಎನ್ನುವಂತೆ ಅದರ ಪಾಡಿಗೆ ಅದು ಆಡುತ್ತಿತ್ತು. ನೆಸೆ ಸಿಕ್ಕಿದ ಮೇಲೆ, ಮಾತಿಗೆ ಸಿದ್ದನಾಗುವವನಂತೆ ಜಗ್ಗಲಿಯ ಮೇಲೆ ಆಸೀನನಾದ. ಅಯ್ಯಾ ಕುಳ್ಳಣ್ಣನ ಮಗ ಲಕ್ಸ್ಮಂಗೆ ಹೆಣ್ಣಿನ ಕಡೇರೋ ಬಂದಿದ್ರು, ಎಂದ. ಅದು ಒಂದು ಬಗೆಯ ಅಪಹಾಸ್ಯವೋ, ಅಥವಾ ಆಶ್ಚರ್ಯವೋ ತಿಳಿಯಲಿಲ್ಲ. ಬರಲೀ ಬಿಡೋ ಹುಡುಗ ಮದ್ವೆ ಆಗ್ಬಾರ್ದ?ಎಂದರು. ನೀವು ಸರಿ, ಆಗಲೀ ಬಿಡಿ, ಊರಿಗೆ ಮೂರು ಊಟ ಸಿಗ್ತದೆ, ಎಂದ. ಅವನು ನಮ್ಮ ನಾಗಣ್ಣನ ವಾರಿಗೆಯವನು, ನಾಗಣ್ಣನ ಹುಡುಗ ಹತ್ತನೇ ಕ್ಲಾಸು ಕಣಯ್ಯ, ಎಂದ. ನನಗೆ ಹೊಳೆಯಿತು, ಹುಡುಗನಿಗೆ ವಯಸ್ಸಾಗಿದೆ, ಹುಡುಗನೆನಿಸಿಕೊಳ್ಳುವ ವಯಸ್ಸು ದಾಟಿದೆ!. ಊರಿನ ಚರಂಡಿ ಕಾಮಗಾರಿಯಲ್ಲಿ ನಡೆದಿರುವ ಬಾರಿ ಹಗರಣದ ಬಗ್ಗೆ ಹೇಳಿ, ಅದೊಂದು ವಿರೋಧ ಪಕ್ಷದವರ ಕೈವಾಡದಿಂದಲೇ ಮಾಡಿರುವಂತಿದೆ. "ಚರಂಡಿ ಕೆಲಸಕ್ಕೆ ಹತ್ತು ಸಾವಿರ ಬಿಲ್ ಮಾಡವರೇ, ಆಗಿರೋದು ಬರೀ ಎರಡು ಸಾವರ ಅಷ್ಟೆಯಾ!" ಅಂದ. "ಹೋದ ಸತಿ, ನೋಡಿದ್ರ ಸ್ಕೂಲಿಗೆ ಕಾಪೌಂಡ್ ಕಟ್ಟ್ಸಕೆ ಅಂತಾ ೩೦ಸಾವರ ತಗೊಂಡ್ರು ಈ ವರ್ಸ ಬಿದ್ದೇ ಹೋಗಯ್ತೆ, ಎಲ್ಲನೂ ಹಿಂಗೆ ಇವರ್ದು, ಇವರು ಮಾತ್ರ ತಿಂದು ತೇಗಬೇಕು, ಬೇರೆಯವರು ತಿನ್ನೊಗಿಲ್ಲ, ನಮ್ಮ ವಠಾರದವಕ್ಕೆ ಅವೆಲ್ಲಾ ಅರ್ಥ ಆಗಕಿಲ್ಲ, ಅವರ ಮನೆ ತವೆ ಹೋಗಿ, ನಿಂತ್ಕತವೆ". ನನಗೆ ತಲಬುಡ ಅರ್ಥ ಆಗಲಿಲ್ಲ. ಗೌಡರು ನಿನಗೆ ಬೇಕಾ, ಆ ಗುತ್ತಿಗೆ ಕೆಲಸ? ಮಾಡಿಸ್ತೀಯಾ? ಎಂದದ್ದಕ್ಕೆ ನನ್ ಕೈಯ್ಯಲ್ಲಿ ಆಗುತ್ತಾ ಎಂದ. ಸರಿ ನಡಿ ಊರ ಉಸಾಬರಿ ಯಾಕೆ ನಿಂಗೆ ಎಂದರು.
ನಾಲ್ಕ ಗಂಟೆ ಸಮಯಕ್ಕೆ, ಗೌಡರು ನನ್ನನ್ನು ಕರೆದುಕೊಂಡು, ಹೊರಟರು. ಬಾ ಇಲ್ಲೇ ಬರೋಣ ಅಂತಾ. ನದಿ ದಂಡೆಯಿಂದ ಹೊರಟು, ಅವರ ಬಾಲ್ಯದಿಂದ ಇಲ್ಲಿನ ತನಕ ಆದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಹೇಳಿದರು.ನಾನು ಕುತೂಹಲಕ್ಕಾಗಿ ಸುಬ್ಬಣ್ಣ ಹೇಳಿದ್ದನ್ನು ಕೇಳಿದೆ. ಊರಿನಲ್ಲಿ, ಬಹುಸಂಖ್ಯೆಯಲ್ಲಿ, ಒಕ್ಕಲಿಗರೇ ಇದ್ದರೂ, ಅವರಲ್ಲಿ ಎರಡು ಪಂಗಡಗಳಿವೆ, ಈ ಒಳಜಗಳ, ಆ ಎರಡು ಪಂಗಡಗಳ ನಡುವೆ. ಅನ್ಯೋನ್ಯತೆ ಎಣಿಸಿದರೂ, ಈ ಶೀತಲ ಸಮರವನ್ನು ಊರಿನ ಪ್ರಮುಖರು, ಉಪಯೋಗಿಸಿಕೊಂಡು ಅದನ್ನು ಆರದಂತೆ, ಬಳಸಿಕೊಳ್ಳುತ್ತಾರೆ. ಸ್ವಲ್ಪ ದೂರದ ನಂತರ, ಅಲ್ಲೇ ನಿಲ್ಲುವಂತೆ ಹೋಗಿ, ಒಂದು ಹಂಬನ್ನು ಕಿತ್ತು ತಂದರು, ಜೊತೆಗೆ ಒಂದೆರಡು ಗಿಡಗಳನ್ನು ತಂದರು. ನಾನು ಅದನ್ನು ನೋಡಿ, ಓ, ಈ ಹಂಬು ಔಷಧೀಗಾ ಎಂದೆ? ಗೌಡರು, ನಿನಗೆ ಗೊತ್ತಾ ಎಂದರು. ನನ್ನ ಓದಿನ ಬಗ್ಗೆ ಸ್ವಲ್ಪ ಹೇಳಿದೆ, ಈ ಗಿಡಗಳು ಅದರ ಮದ್ದು ಅದು ಇದು ಅಂತಾ ನನ್ನ ಬುದ್ದಿವಂತಿಕೆ ತೋರಿಸತೊಡಗಿದೆ. ಗೌಡರಿಗೆ ನನ್ನ ಮೇಲೆ ಇದ್ದಕ್ಕಿದ್ದ ಹಾಗೆ ಒಂದು ಬಗೆಯ ಹೆಮ್ಮೆ ಬಂದಂತನಿಸಿತು. ನಾನು ಹೇಳಿದೆ, ತಾತ, ನಿಜ ಹೇಳಬೇಕೆಂದರೆ, ಇವೆಲ್ಲಾ ಕಾಲೇಜಿನಲ್ಲಿ ಕಲಿಯಲೇ ಬೇಕು ಎನಿಸೋದಿಲ್ಲ ಎಂದೆ. ನೀನು ಹೇಳೋದು ಒಂದು ಲೆಕ್ಕದಲ್ಲಿ ಸರಿನೇ, ಎಂದರು. ಮನುಷ್ಯ ಪ್ರಕೃತಿಯ ವಿರುದ್ದ ನಡೆದರೆ ಅದು ಸಾಹಸ ಅಂದುಕೊಳ್ಳುತ್ತಾನೆ. ನದಿ ಹರಿಯೋದರ ವಿರುದ್ದ ಈಜುವುದು, ದೊಡ್ದ ಬಂಡೆಗಳನ್ನ ಏರುವುದು, ಹೀಗೆ ಅವೆಲ್ಲವೂ ಚೆಂದವೇ ಸರಿ. ಆದರೇ ನಿಸರ್ಗದ ನಿಯಮದ ವಿರುದ್ದ ಹೋಗುವುದು ಎಷ್ಟು ಸರಿ? ನನಗೆ ಅರ್ಥವಾಗಲಿಲ್ಲವೆಂಬುದು ಅವರಿಗೆ ತಿಳಿಯಿತು. ಈಗ, ಈ ಗಿಡದಿಂದ ಉಪಯೋಗವೇನು? ಗೊತ್ತಾ? ಇಲ್ಲವೆಂದು ತಲೆಯಾಡಿಸಿದೆ.
ಆಗಲೇ ಸುಬ್ಬಣ್ಣ ಬಂದಿದ್ದನಲ್ಲ, ಅವನ ಹಸುವಿಗೆ, ಸೂಜಿ ಚುಚ್ಚಿಸಿದರೂ ಕೂಡ, ಗರ್ಭ ನಿಲ್ಲುತ್ತಿಲ್ಲವಂತೆ. ಇವರುಗಳು ಎಲ್ಲವನ್ನು ಯಾಂತ್ರಿಕತೆಯಿಂದ ನೋಡುತ್ತಾರೆ. ಇಲ್ಲ, ಆರ್ಥಿಕತೆಯಿಂದ ನೋಡುತ್ತಾರೆ. ಪ್ರಾಣಿಗಳು ನಮ್ಮಂತೆಯೇ ಬದುಕುವ ಜೀವಿಗಳೆಂದು ತಿಳಿಯುವುದಿಲ್ಲ ಇವರಿಗೆ. ಅವುಗಳಿಗೂ, ದೈಹಿಕ ಆಸೆ ಇರುತ್ತದೆನಿಸುವುದಿಲ್ಲವಾ? ಈ ಪ್ರಶ್ನೆಗಳು ನನ್ನ ವಯಸ್ಸಿನ ಮಿತಿಗೆ ಮೀರಿದ್ದು ಎಣಿಸಿ ಅಲ್ಲಿಗೆ ತಡೆದರು. ನಾನು ಅವರನ್ನು ಮುಂದುವರೆಸಿ ಎನ್ನಲಿಲ್ಲ. ಆದರೂ, ಅವರ ಭಾವುಕತೆ ನನ್ನನ್ನು ತಲ್ಲಣಗೊಳಿಸಿತ್ತು. ಆಧುಣಿಕರಣದಿಂದಾಗಿ ನಾವು ಪ್ರಾಣಿಗಳ ನೈಸರ್ಗಿಕವಾದ ಬಹುಮುಖ್ಯವಾದ ಬೇಡಿಕೆಯನ್ನು ನಾಶಗೊಳಿಸಿದ್ದೇವೆ. ನಾನು ಚಿಕ್ಕವನಿದ್ದಾಗ, ಆದ್ರಾ ಮಳೆಯಲ್ಲಿ ಬೀದಿನಾಯಿಗಳು ಮೈಮರೆತು ಅಂಟಿಕೊಂಡಿರುವುದನ್ನು ಕಂಡು ಥೂ, ಚೀ ಎಂದು ಮುಖ ತಿರುಗಿಸಿಕೊಂಡು ಹೋಗುತಿದ್ದೆ. ಆದರೇ, ಅವೆಲ್ಲವೂ, ಮನುಷ್ಯನಂತೆಯೇ, ದೈಹಿಕ ಕಾಮನೆಗಳು ಎಣಿಸಿರಲಿಲ್ಲ. ತಾತನ ಮನಸ್ಸಿನಲ್ಲಿರುವ ವಿಚಾರಗಳು, ನನ್ನ ಬುದ್ದಿವಂತಿಕೆಯಿಂದ ಅರಿಯಲು ಸಾಧ್ಯವೇ ಇಲ್ಲವೆಂದು ತೀರ್ಮಾನಿಸಿದೆ.
ದೇಶ ಸುತ್ತಿನೋಡು, ಕೋಶ ಓದಿ ನೋಡು, ಅಂತಾ ಗಾದೆ ಇದೆಯಲ್ಲ. ಹಾಗೆ ಅದು ಒಂದರಿಂದ ಏನೂ ಬರಲ್ಲ, ಓದಲೂ ಬೇಕು, ನೋಡಲೂ ಬೇಕು. ಮೊದಲರ್ಧದಲ್ಲಿ ಗೌಡರು ಊರೂರು ಸುತ್ತಾಡಿದರು. ನಂತರ ಮನೆಯಲ್ಲಿ ಅವರ ಮಕ್ಕಳು, ಮೊಮ್ಮಕ್ಕಲು ಓದುವ ಎಲ್ಲ ತರಹದ ಪುಸ್ತಕಗಳನ್ನು ಓದಿದರು. ಈ ಮುದಕನಿಗೆ ನೋಡು ಈ ವಯಸ್ಸಿನಲ್ಲಿ ಓದುವ ಚಪಲ ಎಂದು ಜನ ರೇಗಿಸಿದರು. ಅವರಿಗೆ ಹತ್ತು ಭಾಷೆ ತಿಳಿಯುತ್ತಿತ್ತು. ಕನ್ನಡ, ಹಿಂದಿ, ಮಲಯಾಲಂ, ತೆಲುಗು, ತಮಿಳು, ತುಳು, ಕೊಡವ, ಅರೆ-ಭಾಷೆ ಕನ್ನಡ, ಹವ್ಯಕ ಕನ್ನಡ, ಇಂಗ್ಲೀಷ್ ಬರುತ್ತಿದ್ದವು. ಅವರು ಕೊಡಗಿನ ಕಾಫಿ ತೋಟದಲ್ಲಿ ಹತ್ತಾರು ವರ್ಷವಿದ್ದರು. ಇಂದಿಗೂ ವಿರಾಜಪೇಟೆ, ಗೋಣಿಕೊಪ್ಪಲಿನಲ್ಲಿ ಕೆಲವು ಎಸ್ಟೇಟ್ ಮಾಲಿಕರು ಇವರನ್ನು ನೆನೆಯುತ್ತಾರೆ. ಕೇರಳದ ಕಣ್ಣೂರಿನ ಟೀ ತೋಟದಲ್ಲಿ ಕೆಲಸಮಾಡಿದ್ದಾರೆ. ತೀರ್ಥಹಳ್ಳಿಯಲ್ಲಿದ್ದಾಗ ಹವ್ಯಕ ತಿಳಿದಿತ್ತು. ಹೀಗೆ ಅವರಿಗೆ ಭಾಷೆ ಬರುತ್ತಿದ್ದರಿಂದ ಅವರು ದಕ್ಷಿಣ ಭಾರತವನ್ನೂ ಸಂಪೂರ್ಣ ಅಲೆದಾಡಿದ್ದಾರೆ. ಅಲ್ಲಿನ ಜನರನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ಅಲ್ಲಿನ ಜನರ ಜೀವನದಲ್ಲಿ ಆದ ಬದಲಾವಣೆಗಳನ್ನು ನೇರವಾಗಿ ಕೆಲವೂಮ್ಮೆ ವಾರ್ತೆಗಳಿಂದ, ದಿನಪತ್ರಿಕೆಗಳಿಂದ ನೋಡಿದ್ದಾರೆ. ಅವರು, ಪಶ್ಚಿಮ ಘಟ್ಟಗಳು ಕರಗಿ ಬರಡಾದದ್ದನ್ನು ಕಂಡಿದ್ದಾರೆ. ಅವರ ವರ್ಣನೆ ನಮ್ಮ ವಿಜ್ನಾನಕ್ಕೆ ನಿಲುಕುವಂತಿಲ್ಲ ಎನಿಸಿತು. ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿನ ವಿಶೇಷತೆಗಳನ್ನು ಬಣ್ಣಿಸುತ್ತಾರೆ. ವನ್ಯಮೃಗಗಳನ್ನು ಹತ್ತಿರದಿಂದ ನೋಡಿದ್ದಾರೆ. ಕಾಡು ಜನರ ಜೊತೆ ಓಡಾಡಿದ್ದಾರೆ. ಚಾರ್ಮಾಡಿ, ಶಿರಡಿ, ತಡಿಯೆಂಡ್ ಮೋಲ್, ಪುಷ್ಪಗಿರಿ, ಬ್ರಹ್ಮಗಿರಿ, ವಯನಾಡ್, ಮದುಮಲೈ, ನಾಗರಹೊಳೆ, ಬಂಡಿಪುರ, ಬಿಳಿಗಿರಿ, ಮಹದೇಶ್ವರ ಬೆಟ್ಟ, ಸತ್ತಿ, ಎಲ್ಲವನ್ನು ಬರೀ ಗಾಲಲ್ಲಿ ನಡೆದು ಬಂದಿದ್ದಾರೆ. ಇದೊಂದು ಪವಾಡವೇ ಸರಿಯೆಂದು ನಮಗನಿಸಿದ್ದರೂ ಅವರಿಗೆ ಅದರಲ್ಲಿ ಹೆಚ್ಚಿನದೇನೂ ಅನಿಸುವುದಿಲ್ಲ. ಅವರು ಓದಿರುವುದು ಅಷ್ಟೇ, ಮಾರ್ಕ್ಸ್, ಡಾರ್ವಿನ್,ಲೆನಿನ್,ಟಾಗೋರ್,ಟಾಲ್ಸ್ ಟಾಯ್, ಜಿಡ್ಡೂ ಕೃಷ್ಣಮೂರ್ತಿ, ಹೀಗೆ ಎಲ್ಲರನ್ನೂ ಓದಿದ್ದಾರೆ ಅವರ ಬಗ್ಗೆ ಅವರಲ್ಲಿರುವ ವಿಶ್ಲೇಶಣೆಗಳು ನನಗೆ ಬಹಳ ಮೆಚ್ಚುಗೆಯಾದವು.
"ತಾತ ನಿಮಗೆ ಬರವಣಿಗೆ ಬರುತ್ತದೆ, ನೀವು ನಿಮ್ಮ ವಿಚಾರಗಳನ್ನೆಲ್ಲಾ ಯಾಕೆ ಬರೆಯಬಾರದಿತ್ತು? ನಿಮ್ಮ ಅನುಭವಗಳು ಈ ಮಾಹಿತಿ ಎಷ್ಟು ಅನುಕೂಲ ಆಗುತ್ತೆ ನಮ್ಮ ಜನಕ್ಕೆ" ಎಂದೆ. ಯಾವ ಜನರ ಬಗ್ಗೆ ಹೇಳ್ತಾಯಿದ್ದೀಯಾ ನೀನು? ನಮ್ಮ ಜನ ಅನ್ನಿಸಿಕೊಳ್ಳೋ ಇವರು ಹುಟ್ಟು ಸೋಮಾರಿಗಳು, ನಾನು ಬರೆದರೂ ಅದನ್ನ ಓದುವುದಿಲ್ಲ, ಏನು ಬರೆದವರೆ ಅಂತಾ ಹಾಗೆ ಹೇಳು ಅದನ್ನೇಲ್ಲಾ ಓದೋಕೆ ಸಮಯ ಇಲ್ಲ ಅಂತಾರೆ. ನೀನು ಹೇಳಿದ್ದಕ್ಕೆ, ಹೇಳ್ತಿನಿ ಕೇಳು. ನೀನು ಗಿಡಗಳ ಬಗ್ಗೆ, ಔಷಧಿಗಳ ಬಗ್ಗೆ ತಿಳ್ಕೊಳ್ಳೋಕೆ ಅಂತಾ ಊರೂರು ಅಲೆದಿದ್ದಿಯಾ, ನಮ್ಮೂರಿನಲ್ಲಿರುವ ಒಬ್ಬನೇ ಒಬ್ಬ ಇದರ ಬಗ್ಗೆ ತಿಳ್ಕೊಬೇಕು ಅಂತಾ ನನ್ನ ಹತ್ತಿರ ಕೇಳಿಲ್ಲ.ಈ ಸುಬ್ಬಣ್ಣನೇ ನೋಡು, ಇಲ್ಲದೇ ಇರೋ ರಾಜಕೀಯ ಮಾತಾಡಿ ಹೋದ, ಆ ಔಷಧಿ ಗಿಡ ನನಗೂ ತೋರಿಸಿ ಅಂತಾ ಕೇಳಲಿಲ್ಲ. ಎಲ್ಲರಿಗೂ ಸಿದ್ದವಾಗಿರೋ ಊಟ ಬೇಕು, ಇದು ಇವತ್ತಿನ ಪರಿಸ್ಥಿತಿ. ಆ ದಿನಗಳಲ್ಲಿ ನಾನು ಕಾಡು ಮೇಡು ಅಲೆದು ಬಂದೆ. ನನಗೆ ಅದರಿಂದ ಏನು ಲಾಭ ಬರುತ್ತೆ ಅಂತಾ ಅಲ್ಲ ಅಲ್ಲಿ ನನಗೆ ಸಂತೋಷ ಇತ್ತು. ಸಂತೋಷ ಅಂದರೇ, ಏನು? ಅದು ಆಸ್ತಿ ಮಾಡಿ, ಹೆಸರು ಮಾಡಿ ಬರೋದಾ? ಅದು ಆತ್ಮ ಸಂತೃಪ್ತಿ. ಅದು ನಿನ್ನೊಳಗೆ ಇರುತ್ತೆ, ಇನ್ನೊಬ್ಬರ ಹಿಂದೆ ಹರಸಿ ಹೋಗೋದಲ್ಲ. ತಿಳುವಳಿಕೆ ಅನ್ನೋದನ್ನ ಹೆಚ್ಚಿಸಿಕೊಳ್ಳಬೇಕು ಅದು ಇನ್ನೊಬ್ಬರಿಗೆ ಅನುಕೂಲ ಆಗಲಿ ಅಂತಾ ಅಲ್ಲ, ನಿನ್ನ ಮನಸ್ಸಿಗೆ ನೆಮ್ಮದಿ ಸಿಗಲಿ ಅಂತಾ. ನಾನು ನನ್ನ ಇಳಿವಯಸ್ಸಿನಲ್ಲಿ ಓದುವಾಗ ಸ್ವತಃ ನನ್ನ ಮಕ್ಕಳೇ ಕೇಳಿದರು, ನೀವು ಈ ವಯಸ್ಸಲ್ಲಿ ಅದೆಂತ ಪುಸ್ತಕನೆಲ್ಲಾ ಓದುತ್ತಾ ಕೂರೋದಾ? ಅವರಿಗೇನು ಗೊತ್ತು ಪುಸ್ತಕ ಓದುವುದರಲ್ಲೇನಿದೆ ಅಂತಾ.ಓದದೇ ಕೂಡ ಬದುಕಬಹುದು, ಬರೆಯದೇ ಕೂಡ ಬದುಕಬಹುದು. ಜನ ಸ್ವಂತಿಕೆಯಿಂದ ಬದುಕೋದನ್ನ, ಬದುಕುವ ಶೈಲಿಯನ್ನ ಕಲಿಬೇಕು. ಅವರನ್ನ ಇವರನ್ನ ನೋಡೀ ಅನುಕರಣೆ ಮಾಡೊದಲ್ಲ. ಬರವಣಿಗೇನೂ ಅಷ್ಟೇ, ಈ ಬರವಣಿಗೆ ಅಂತಾ ಬರೀತಿರಲ್ಲ ಅವರೆಲ್ಲಾ ಜನರ ಮೇಲೆ ಸವಾರಿ ಮಾಡುವ ಮಹಾ ದೊರೆಗಳೆ! ನೈಜತೆ ಎಲ್ಲಿ ಇರುತ್ತೇ ಹೇಳು? ಮನೆ ಒಳಗೆ ಕುಳಿತು, ನೀನು ಮಲೆಕುಡಿ ಜನಾಂಗದವರ ಬಗ್ಗೆ ಬರೆಯೋಕೆ ಆಗುತ್ತಾ, ಆ ಜನರ ಜೀವನದ ಬಗ್ಗೆ ಬರೆಯೋಕೆ ಆಗುತ್ತಾ? ಬರವಣಿಗೆ ಅಂದರೇ ಕಲ್ಪನೆ ಅನ್ನುತ್ತಾರೆ ಜನ, ಅದರಲ್ಲಿ ನನಗೆ ನಂಬಿಕೆಯಿಲ್ಲ. ಬರವಣಿಗೆ ಅಂದರೇ, ಅದು ಆ ದಿನದ ಆ ಸಮಾಜದ ಆಗೂ ಹೋಗುಗಳಿಗೆ ಕನ್ನಡಿ ಹಿಡಿದಂತಿರಬೇಕು.ನಮ್ಮ ಬರವಣಿಗೆಗಳು ಮುಂದಿನ ಪೀಳಿಗೆಗೆ ಮಾಹಿತಿ ನೀಡುವಂತಿರಬೇಕು. ನೀನು ಎಲ್ಲರಂತೇಯೇ ಬರೆದು ಕೂಡಬೇಡ. ದೇಶ ನೋಡು, ಪುಸ್ತಕ ಓದು, ಎಂದರು.ಇಲ್ಲ ತಾತ ನಾನು ಬರೆಯೋದಿಲ್ಲ ಅಷ್ಟು ಹೆಚ್ಚು ಓದುವುದು ಇಲ್ಲ. ನಾನು ಹುಟ್ಟು ಸೋಮಾರಿ ಎಂದೆ. "ಪರ್ವಾಗಿಲ್ಲ ಸತ್ಯ ಹೇಳ್ತಿಯಾ" ಅಂದರು. ಮನೆಯಿಂದ ಪೋನ್ ಮಾಡಿ ಅಪ್ಪ ಉಗಿದಿದ್ದರಿಂದ ಅಲ್ಲಿಂದ ಬೆಳ್ಳಿಗ್ಗೆ ಹಾಲಿನ ವ್ಯಾನ್ ಹತ್ತಿ ಹೊರಟೆ.
14 ಜುಲೈ 2009
ನನ್ನೊಳಗೆ ಅವಿತು ಹೋಗುವ ಮುನ್ನ ನಿಮ್ಮ ಮಡಿಲಿಗೆ!!!!---2
08 ಜುಲೈ 2009
ನನ್ನೊಳಗೆ ಅವಿತು ಹೋಗುವ ಮುನ್ನ ನಿಮ್ಮ ಮಡಿಲಿಗೆ!!!!
ಅದೊಂದು ಪುಟ್ಟ ಹಳ್ಳಿ, ಇದೇನು ಯಾರು ಕಥೆ ಬರೆಯೋಕೆ ಶುರು ಮಾಡಿದರೂ ಬರೀ ಪುಟ್ಟ ಹಳ್ಳಿಯ ಬಗ್ಗೆಯೇ ಹೇಳುತ್ತಾರಲ್ಲವೆಂದುಕೊಳ್ಳಬೇಡಿ. ನನ್ನಂತ ಸಣ್ಣ ಮನುಷ್ಯ ಚಿಕ್ಕ ಊರಿನ ಬಗ್ಗೆ ಸಣ್ಣ ಕಥೆಗಳನ್ನು ಮೀರಿ ಇನ್ನೇನು ಬರೆಯಲಾದೀತು. ಅದೇನೆ ಇರಲಿ, ಆ ಊರಿನ ಹೆಸರೇ ನಿಮ್ಮನ್ನು ಆಕರ್ಷಿಸುವಂತಿದೆ, ಅದು ನಿಮ್ಮನ್ನು ಆಕರ್ಷಿಸದಿದ್ದರೂ ನನ್ನನ್ನು ತುಂಬಾ ಗಾಢ ಚಿಂತನೆಯಲ್ಲಿ ಮುಳುಗಿಸಿತ್ತು. ಆ ಊರಿನ ಹೆಸರು ಕಂಬಳಿ, ಆ ಊರಿನ ಹೆಸರು ಕೇಳಿದ ತಕ್ಷಣ ನನಗೆ ನೆನಪಾದ ಒಂದು ಚುಟುಕು ಹೇಳುತ್ತೇನೆ. ಪ್ರಿಯತಮೆ ಹೇಳಿದಳು ಪ್ರಿಯತಮನಿಗೆ,
ಪ್ರಿಯ ಈ ಊರಿನಲ್ಲಿ ಬಹಳ ಚಳಿ ಚಳಿ,
ಚೆನ್ನಾಗಿರುತ್ತಿತ್ತು ಇದ್ದಿದ್ದರೆ ಒಂದು ಕಂಬಳಿ,
ಅದಕ್ಕವನೆಂದ,
ಅದಕ್ಕೇನು ಪ್ರಿಯ ನಿನ್ನ ಚಳಿ ಹೋಗಲಾಡಿಸುವೆ ಇಲ್ಲದಿದ್ದರೂ ಕಂಬಳಿ,
ನೀನೊಮ್ಮೆ come ಬಳಿ.
ಎಂದನಂತೆ,
ಅದು ಸರಿಯೇ, ಮೈ ಶಾಖ ಹೆಚ್ಚಿಸಲು ಕಂಬಳಿ ಏನು ಬೇಕಿಲ್ಲವಲ್ಲ. ಈ ಊರಿಗೆ ಕಂಬಳಿ ಹೆಸರು ಬಂದಿದ್ದು ಹೇಗೆ ಎಂದು ಎಲ್ಲರನ್ನೂ ಕೇಳಿದೆ, ಇಲ್ಲಿ ಕಂಬಳಿ ಮಾಡುವವರಿದ್ದರೆಂಬುದು ನನ್ನ ನಂಬಿಕೆಯಾಗಿತ್ತು, ಇಲ್ಲ ಇಲ್ಲಿ ಅಂಥವುದ್ಯಾವುದೂ ಇರಲಿಲ್ಲ. ಆ ಊರಿನ ಮೂರು ಕಡೆಯಿಂದಲೂ ಬೆಟ್ಟದ ತಪ್ಪಲಿನಿಂದ ಆವರಿಸಿದ್ದು, ಅಲ್ಲಿ ಮಂಜು ಕಂಬಳಿಯಂತೆ ಕವಿಯುತಿತ್ತು ಮತ್ತು ಕಾಡು ಕಂಬಳಿಯಂತಿತ್ತು ಎಂಬುದು ಅವರ ವಿವರಣೆ. ಆದರೇ, ನಾನು ಹೋದಾಗ ಆ ಊರಿನಲ್ಲಿ ಕಾಡಿತ್ತೆಂಬುದರ ಕುರುಹು ಉಳಿದಿರಲಿಲ್ಲ. ಬರೀ ಬೋಳಾದ ಗುಡ್ಡಗಳಿದ್ದವು. ಆದರೂ ಏನೋ ಒಂದು ಬಗೆಯ ಆಕರ್ಷಣೆ ಅಲ್ಲಿತ್ತು. ಹೋದ ಊರಿನ ಚರಿತ್ರೆ ಹಿಡಿದು ಆ ಊರಿನ ಬಗ್ಗೆ ಆದಷ್ಟೂ ವಿಷಯಗಳನ್ನು ಸಂಗ್ರಹಿಸುವುದು ನನ್ನ ಚಟಗಳಲ್ಲಿ ಒಂದು. ಬಂದಿದ್ದು ಬಂದಾಗಿದ್ದೆ, ಊರನ್ನು ಸಂಪೂರ್ಣ ಸುತ್ತಾಡೋಣವೆಂದು ನನ್ನ ನೆಂಟರನ್ನು ಕೇಳಿದೆ. ಈ ಊರಿನಲ್ಲೇನಿದೆ, ಸುತ್ತಾ ಗುಡ್ಡಗಳು, ಆ ನದಿ ಬಿಟ್ಟರೇ ಎಂದರು. ಸರಿಯೆಂದು, ಊರಿನ ಅಂಗಡಿಯ ಬಳಿಗೆ ಹೋದವನು, ಸಿಗರೇಟು ಕೊಂಡು ಹೊರಟೆ.
ಹಳ್ಳಿಗಳಲ್ಲಿ, ನನಗೆ ಖುಷಿಯಾಗುವ ವಿಷಯವೆಂದರೇ, ಅಲ್ಲಿ ಅಪರಿಚಿತರೆನಿಸಿದವರ ಸಂಪೂರ್ಣ ವಿವರಣೆ ಪಡೆಯುವುದು. ನಾನು ಅಂಗಡಿಯ ಬಳಿಗೆ ಹೋದಾಗ, ನಾನು ಕೇಳಿದ ಸಿಗರೇಟ್ ಇರಲಿಲ್ಲ, ಯಾವೂರೋ ತಮ್ಮದು? ನಾನು ಹಿಂತಿರುಗಿ ನೋಡಿದೇ ಆಕಾಶವಾಣಿಯಲ್ಲ ಇದು, ಅಲ್ಲಿಯೇ ಇದ್ದ ಒಂದು ಮಧ್ಯಮ ವಯಸ್ಕನ ದ್ವನಿ. ನನ್ನೂರು ಬಾನುಗೊಂದಿ ಎಂದೆ, ಹಳ್ಳಿಗರ ಜಾಣ್ಮೆ ಮೆಚ್ಚಲೇ ಬೇಕು. ಊರಿನ ಹೆಸರು ಕೇಳಿದ ತಕ್ಷಣವೇ, ಹೋ ನೀವು ದೊಡ್ಡೇಗೌಡರ ಮನಗೆ ಬಂದಿರೋದಾ? ಏನ್ ಆಗ್ಬೇಕು ಅವರು ನಿಮಗೆ ಅದು ಇದು ಅಂತಾ ಶುರು ಆಗಿ ಕಡೆಗೆ, ನಮ್ಮಪ್ಪ, ಅಮ್ಮ ಅಜ್ಜ ಅಜ್ಜಿಯ ಬಗ್ಗೆ ಮಾತು ಮುಂದುವರೆಸುವ ಸಾಹಸ ಮಾಡಿದರು. ನಾನು ಈ ಪುಣ್ಯಾತ್ಮನ ಕೈಯ್ಯಿಗೆ ಸಿಕ್ಕರೆ ಎಲ್ಲರ ತಲೆಯನ್ನು ಕೆಡಿಸುವ ನನ್ನ ತಲೆಗೆ ಹುಳು ಸೇರುತ್ತದೆಂದು ಹೊರಟೆ.
ಆ ಊರಿನ ಗುಡ್ಡ ಹತ್ತಿ ನೋಡಿದಾಗಲೇ ಅಲ್ಲಿನ ವಿಸ್ಮಯ ನನಗೆ ಅರಿವಾಗಿದ್ದು, ಅದೊಂದು ಸುಂದರ ತಾಣ. ನಿಜಕ್ಕೂ ಆ ಬೆಟ್ಟದ ಮೇಲೆ ನಿಂತು ನೋಡಿದರೇ, ಹರಿಯುವ ನದಿ, ಅಲ್ಲಿನ ಮರಗಳ ತೋಪು, ಮನಮೋಹಕವಾಗಿತ್ತು. ಅಲ್ಲಿ ಹಿಂದೆ ಗಂಧದ ಮರಗಳಿದ್ದವೆಂಬುದಕ್ಕೇ ಸಾಕ್ಷಿಯಾಗಿ ಅದನ್ನು ಕಡಿದ ಜಾಗದಲ್ಲಿ ಮತ್ತೆ ಮೊಳೆತ ಗಿಡಗಳಿದ್ದವು. ಊರು ಬದಲಾಗಿದ್ದು ಕೇಲವೇ ವರ್ಷಗಳಲ್ಲಿ, ಅಂದರೇ, ಎಂಬತ್ತೈದರಿಂದ ಸುಮಾರು ತೊಂಬತ್ತೈದರ ವರೆಗೆ ಕೇವಲ ಹತ್ತು ವರ್ಷಗಳಲ್ಲಿ, ನಿಸರ್ಗದ ಮಡಿಲಾಗಿದ್ದ ಕಂಬಳಿ, ಮಂಜಿನಿಂದ ತಂಪಾಗಿರುತ್ತಿದ್ದ ಕಂಬಳಿ, ಬೇಸಿಗೆಯ ದಳಕ್ಕೆ ಕುಸಿದು, ಕಂಬಳಿ ಹುಳುಗಳ ಗೂಡಾಯಿತು. ಈ ಮಟ್ಟಿಗಿನ ಬದಲಾವಣೆ ಆಗಲೂ ಸಾಧ್ಯವೇ?
ಎಂಬತ್ತರ ಸುಮಾರಿಗೆ ಊರಿನಲ್ಲಿ ಇದ್ದದ್ದು, ೭೦ ಮನೆಗಳು ಈಗ ದುಪ್ಪಟ್ಟಾಗಿವೆ, ೧೪೦ ಮನೆಗಳಿವೆ. ಮೊದಲು ಒಂದು ಭಾಗದಲ್ಲಿ ನದಿ ಹರಿಯುತ್ತಿದ್ದು, ಆ ನದಿ ನೀರನ್ನು ಏತಗಳ ಮೂಲಕ ನೀರಾವರಿಗೆ ಬಳಸುತಿದ್ದರು. ಏತ ನೀರಾವರಿಯೆಂದರೇ ಕೆಲವರಿಗೆ ತಿಳಿದಿರುವುದಿಲ್ಲ. ಭಾವಿಯಿಂದ ನೀರೆತ್ತುವ ಸಾಧನ. ಕೆಲವೊಮ್ಮೆ ಎತ್ತುಗಳನ್ನು ಕಟ್ಟಿ, ಅನೂಕೂಲತೆಯಿಲ್ಲದವರು ಮನೆ ಮಂದಿ ಸೇರಿ ನೀರೆತ್ತಲೂ ತೊಡಗುತ್ತಿದ್ದರು. ಇಂಥಹ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಆಗಮಿಸಿದ್ದು, ಹಾರಂಗಿ ಜಲಾಶಯದ ನೀರು. ಕಾಲುವೆ ತೋಡಿ, ಇದ್ದ ಹೊಲವನ್ನು ಗದ್ದೆಗಳಾಗಿ ಪರಿವರ್ತಿಸುವ ಕೆಲಸ ರಭಸವಾಗಿ ನಡೆಯಿತು. ಆರಂಭದ ದಿನಗಳಲ್ಲಿ, ಹೊಲ ಭತ್ತ ಬೆಳೆಯುತ್ತಿದ್ದ ರೈತರು ಕ್ರಮೇಣ ತಮ್ಮ ಜಮೀನಿನ್ನಲಿದ್ದ ಮರಗಳನ್ನು ಕಡಿದು ಗದ್ದೆಯಾಗಿಸತೊಡಗಿದರು. ಅವರ ಕಣ್ಣುಗಳಲ್ಲಿ ದುಡ್ಡು ಸಂಪಾದನೆಯ ಕನಸು ಅವರನ್ನು ಮೀರಿ ಬೆಳೆಯತೊಡಗಿತ್ತು. ಮರ ಕಡಿದು ಮಾಡುವುದೇನು, ಮರ ಇದ್ದರೂ ಅದನ್ನು ಕಡಿಸಿ, ಮಂಚ ಕುರ್ಚಿ ಮಾಡಿಸಲು ಹಣ ಕೊಡುವವರಾರು? ಅಲ್ಲಿದ್ದ, ಹೊನ್ನೆ, ಬೀಟೆ, ತೇಗದ ಮರಗಳು, ಹೇಳ ಹೆಸರಿಲ್ಲದಂತೆ, ಬಿಟ್ಟಿಯಾಗಿಯೇ ದೋಚಲಾಯಿತು. ಹೊರಗಿನ ಪ್ರಪಂಚವನ್ನೇ ಕಾಣದ, ಕಂಬಳಿ ಎಂಬ ಊರಿಗೆ ದೂರದ ಊರಿನವರೆಲ್ಲಾ ಬಂದು ಅಲ್ಲಿದ್ದ ಸಂಪತ್ತನ್ನು ದೋಚುವುದರಲ್ಲಿ ಸಿರಿವಂತರಾಗತೊಡಗಿದರು.ಆದರೇ, ಊರಿಗೆ ನೀರು ಬಂದರೇ, ನಾವೆಲ್ಲಾ ರಾತ್ರೋ ರಾತ್ರಿ ಶ್ರೀಮಂತರಾಗುವೆಂಬ ಭ್ರಮೆಯಲ್ಲಿ ಕಂಬಳಿ ಹೊದ್ದು ಮಲಗಿದವರು ಕಂಬಳಿಯ ಜನರು.
ನನಗೆ ಆಶ್ಚರ್ಯವಾದ ವಿಷಯಗಳಲ್ಲಿ ಒಂದನ್ನು ನಾನು ನಿಮಗೆ ಹೇಳುವುದಕ್ಕೆ ಇಷ್ಟಪಡುತ್ತೇನೆ. ಅದೆಂದರೇ, ಆ ಊರಿನ ಹಬ್ಬಗಳು, ಮತ್ತು ಆಚರಣೆಗಳು. ಊರಿನ ಇತಿಹಾಸವನ್ನು ಬಣ್ಣಿಸುವಾಗ ಅವರ ಕಣ್ಣುಗಳಲ್ಲಿ ಕಾಣುವ ಸಂತೋಷಕ್ಕೆ ಮಿತಿಯಿಲ್ಲ ಅದರಂತೆಯೇ ಅವರು ಕಳೆದು ಹೋದ ದಿನಗಳಿಗೆ ಚಿಂತಿಸುವುದಿಲ್ಲ ಆದರೇ ಅದರ ನೆನಪು ಅವರನ್ನು ಕಾಡದೇ ಬಿಡುವುದಿಲ್ಲ. ನಮ್ಮ ಕೈಯ್ಯಲ್ಲಿ ಏನೂ ಇಲ್ಲವೆನ್ನುವುದನ್ನು ಅವರು ಒಪ್ಪಿದರೂ, ಇವೆಲ್ಲಾ ನಾವು ಬಯಸಿದ್ದಲ್ಲವೆನ್ನುತ್ತಾರೆ. ಕಾಣದ ದೇವರ ಕಡೆಗೆ ಕೈತೋರಿ ಎಲ್ಲ ಅವನು ಬಯಸಿದಂತೆ ನಡೆಯಿತೆನ್ನುತ್ತಾರೆ. ಮರುಗಳಿಗೆಗೆ, ಇವೆಲ್ಲಾ ನಾವೇ ನಮಗೆ ಮಾಡಿಕೊಂಡ ದ್ರೋಹವೆಂದು ಮರುಗುತ್ತಾರೆ. ಎಲ್ಲವನ್ನೂ ಒಗಟಾಗಿ ಆಡುತ್ತಾರೆನಿಸಿದರೂ ಅವರೊಳಗಿರುವ ನೋವನ್ನು ಹೊರಹಾಕಲು ಪದಗಳು ಸಿಗುತ್ತಿಲ್ಲವೆಂಬುದು ನನಗೆ ಅರ್ಥವಾಯಿತು. ಅಂಥಹ ನೋವುಂಟು ಮಾಡಿದ್ದೇನೆಂದು ನಾನು ಮರುಪ್ರಶ್ನೆ ಹಾಕಲಿಲ್ಲ, ಹಾಕಿದಿದ್ದರೇ ಇಂದು ನೀವು ನನ್ನನ್ನು ನೋಡಲಾಗುತ್ತಿರಲಿಲ್ಲವೆಂಬುದು ನನ್ನ ಅಭಿಪ್ರಾಯ.
ಹಿಂದಿನ ಜೀವನ ಇಂದಿನಷ್ಟು ದುಸ್ತರವಾಗಿರಲಿಲ್ಲ, ಊರಿಗೆ ಬಸ್ಸು, ಕಾರು ಇರಲಿಲ್ಲ, ಅದಕ್ಕೂ ಮಿಗಿಲಾಗಿ, ರಸ್ತೆಯೆಂಬುದೇ ಇರಲಿಲ್ಲ, ಕಾಡು ರಸ್ತೆಯೇ ಅವರಿಗೆ ಆಧಾರ. ಎತ್ತಿನ ಗಾಡಿಯ ಓಡಾಟ ಸಾಮಾನ್ಯವಾಗಿದ್ದರೂ, ಬಹಳ ಮಂದಿ ಬರಿಗಾಲಲ್ಲಿ ನಡೆದು ಹೋಗುತ್ತಿದ್ದರು. ಒಕ್ಕಲಿಗರೇ ಹೆಚ್ಚಿದ್ದ ಊರಿನಲ್ಲಿ, ಹರಿಜನರ ಕಾಲೋನಿ ಊರಿನಿಂದ ಹೊರಕ್ಕಿದ್ದದ್ದು ಬಿಟ್ಟರೇ ಮಿಕ್ಕ, ಮಡಿವಾಳರು, ನಾಯಕರು, ಆಚಾರರು, ಊರಿನ ಮಧ್ಯೆಯೇ ಇದ್ದರು. ಜಾತಿ ವ್ಯವಸ್ತೆಯೆಂಬುದು ಅವರೊಂದಿಗೆ ಬೆಳೆದು ಬಂದ ಒಂದು ಪದ್ದತಿಯಾಗಿತ್ತೆ ಹೊರತು ಅದನ್ನು ಬೆಳೆಸಿಕೊಂಡು ಹೋಗುವುದೇ ಅವರ ಗುರಿಯಾಗಿರಲಿಲ್ಲ.ಷಷ್ಠಿ ಶುರುವಾದರೇ ಮುಗಿಯಿತು, ಊರಿನ ಗಂಡಸರು ದನಗಳ ಜಾತ್ರೆಯ ನೆಪದಲ್ಲಿ, ಮೊದಲ ತಿಂಗಳು ರಾಮನಾಥಪುರ ನಂತರ, ಚುಂಚನಕಟ್ಟೆ, ಅನಂತರ ಹಾಸನದ ಜಾತ್ರೆ ಮುಗಿಸಿಯೇ ಮನೆ ಸೇರುತ್ತಿದ್ದದ್ದು. ಅದರಿಂದ ಅವರೇನೂ ಸಾವಿರಾರು ರೂಪಾಯಿ ಲಾಭ ಗಳಿಸುತ್ತಿರಲಿಲ್ಲ. ಆದರೂ, ಅದೊಂದು ಮೋಜೆನಿಸಿತ್ತು. ಅಲ್ಲಿಂದ ಬರುವ ವೇಳೆಗೆ ಮನೆಯಲ್ಲಿ ಬೆಳೆದ ಮಕ್ಕಳು, ಸುಗ್ಗಿಯ ಸ್ವಾಗತಕ್ಕಿರುತ್ತಿದ್ದರು. ಬಂದವರೇ, ಕಾಲಿಗೆ ಗೆಜ್ಜೆ ಕಟ್ಟಿ, ಕೋಲಾಟವಾಡುತ್ತಿದ್ದರು. ಊರಿನ ಮಧ್ಯಭಾಗದಲ್ಲಿ, ಅರಳಿಮರವಿತ್ತು, ಅದಕ್ಕೆ ಕಟ್ಟೇಯೇನೂ ಇರಲಿಲ್ಲ. ಆದರೂ ಮಾಗಿ ಚಳಿ ಮುಗಿದ ಮೇಲೆ, ಭರಣಿ ಮಳೆ ಬೀಳುವ ತನಕವೂ ಊರಿನ ಜನರೆಲ್ಲಾ ಅಲ್ಲೇಯೇ ಮಲಗುತ್ತಿದ್ದರು. ಅಂದರೇ, ದಂಪತಿಗಳ ನಡುವಿನ ರಾತ್ರಿ ಕಾರ್ಯಚಟುವಟಿಕೆಗಳು? ಇಂಥಹ ಮರುಳು ಮರುಳು ಪ್ರಶ್ನೆ ಯಾಕಾದರೂ ಬರುತ್ತದೆ ನಿಮ್ಮ ತಲೆಯಲ್ಲಿ?......................................................................................................................ಮುಂದಿನ ಸಂಚಿಕೆಗೆ
ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ
ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...
-
ಆತ್ಮೀಯರೇ, ನೀವು ನನ್ನ ಹಳೆಯ ಬರಹಗಳನ್ನು ಓದದೇ ಇದ್ದರೂ ಪರವಾಗಿಲ್ಲ, ಆದರೇ, ಈ ಲೇಖನವನ್ನು ಕಡ್ಡಾಯವಾಗಿಯೂ ಓದಬೇಕೆಂದು ವಿನಂತಿಸುತ್ತೇನೆ. ಒಮ್ಮೆ ಓದಿ, ನಂತರ ಪ್ರತಿ...
-
ಈ ಬರಣಿಗೆಯನ್ನು ನಾನು 2016ರ ರಲ್ಲಿ ನನ್ನೂರು ಬಾನುಗೊಂದಿಯ ಶಾಲಾಭಿವೃದ್ಧಿ ಮಾಡುತ್ತೇನೆಂದು ಹೊರಟು ಅನುಭವಿಸಿದ ಕಥನವನ್ನು ತಿಳಿಸಲು ಬಯಸಿ ಪ್ರಾರಂಭಿಸಿದೆ. ಆದರೆ...
-
ನಾನು ಏನನ್ನೋ ಬರೆಯುತ್ತಿದ್ದವನು ದಿಡೀರನೇ, ಫೇಸ್ ಬುಕ್ ನೋಡಿದೆ, ಅಲ್ಲಿ ಮಂಜೇಸ್ ಹುಟ್ಟಿದ ದಿನವನ್ನು ತೋರಿಸುತ್ತಿತ್ತು. ಹದಿನೈದು ದಿನಗಳ ಹಿಂದೆ ನೆನಪು ಮಾಡಿಕೊಂ...