29 ಅಕ್ಟೋಬರ್ 2012

ಏನೋ ಗೀಚಬೇಕೂ ಮಾಸಿ ಹೋಗುವ ಮುನ್ನಾ!!

ಆಯುಧಪೂಜೆ ಮುಗಿಸಿಕೊಂಡು ಊರಿನಿಂದ ಆತುರಾತುರವಾಗಿ ಬೆಂಗಳೂರಿಗೆ ಬಂದು ತಲೆ ಹೋಗುವಷ್ಟು ಕೆಲಸವಿರುವಾಗಲೂ ನನ್ನ ಉಢಾಫೆತನದ ಕಥೆಯನ್ನು ಹೇಳಲು ನನ್ನ ಉಢಾಪೆಯನ್ನು ಪ್ರದರ್ಶಿಸುತ್ತಿದ್ದೇನೆ. ಕೆಟ್ಟ ಗಳಿಗೆಯೂ, ದುಷ್ಟ ಬುದ್ದಿಯೋ, ವಿನಾಶ ಕಾಲಕ್ಕೆ ವೀಪರೀತ ಬುದ್ದಿಯೆಂಬಂತೆಯೋ ಅಥವಾ ವಿನಾಶ ಕಾಲಕ್ಕೆ ಕೋತಿ ಮೊಟ್ಟೆ ಇಟ್ಟಿತೆಂಬಂತೆಯೋ ತಿಳಿದಿಲ್ಲ ಒಮ್ಮೊಮ್ಮೆ ದುಃಖಗಳು ಒಟ್ಟೋಟ್ಟಿಗೆ ಬರುತ್ತವೆ. ಕಷ್ಟವನ್ನು ಯಾರೂ ಪೇಟೇಂಟ್ ಮಾಡಿಕೊಂಡಿಲ್ಲ ಕಾಪಿ ರೈಟ್ಸ್ ಚಿಂತೆಯಯೂ ಇಲ್ಲ. ಇದು ಎಲ್ಲರಿಗೂ ಅತಿಯಾಗಿ ಉಚಿತವಾಗಿ ದೊರೆಯುತ್ತದೆ. ಮಧ್ಯಮ ವರ್ಗ ಮತ್ತು ಕೆಳವರ್ಗದವರಿಗೆ ಹೇರಳವಾಗಿಯೇ ಬರುತ್ತದೆ. ನಾನು ಕೆಳ ವರ್ಗಕ್ಕೆ ಸೇರಿದವನಾದ್ದರಿಂದ ಕಷ್ಟಗಳು ಅತಿಯಾಗಿಯೇ ಬಂದಿವೆ. ಊರಿಗೆ ಹಬ್ಬ ಮಾಡುವುದಕ್ಕೆಂದು ಹೋಗಲು ನಿರ್ಧರಿಸಿದೆ, ಹಾಗೆಯೇ ನನ್ನ ಕೆಲವು ಆತ್ಮೀಯ ಸ್ನೇಹಿತರನ್ನು ಕರೆದೆ. ನಂದ ಹೊಸದಾಗಿ, ಹತ್ತು ತಿಂಗಳ ಹಿಂದೆ ಒಂದು ಟೆಂಟ್ ತಂದು ಅದನ್ನು ಉದ್ಘಾಟನೆ ಮಾಡಲು ಸತತವಾಗಿ ಪ್ರಯತ್ನಿಸುತ್ತಿದ್ದರಿಂದ, ನಾವು ಭಾನುವಾರ ಬೆಂಗಳೂರಿನಿಂದ ಹೊರಟು ವಿರಾಜಪೇಟೆಯ ಹತ್ತಿರವಿರುವ ತಡಿಯಂಡಮೊಳ್ ಗೆ ಹೋಗಿ ರಾತ್ರಿ ಅಲ್ಲಿಯೇ ತಂಗುವುದಾಗಿ ನಿರ್ಧರಿಸಿದೆವು. ಕೆಲವೊಮ್ಮೆ ಯಾವೊಂದು ಕೆಲಸವೂ ಸರಿಯಾಗಿ ಆಗುವುದಿಲ್ಲ, ಏನನ್ನು ಮಾಡುವುದಕ್ಕೂ ಮನಸ್ಸು ಇರುವುದಿಲ್ಲ. ಈ ಬಾರಿಯೂ ಅಷ್ಟೇ ನನಗೆ ಊರಿಗೆ ಹೋಗುವುದಕ್ಕಾಗಲೀ, ತಡಿಯಂಡಮೋಳ್ ಗೆ ಹೋಗುವುದಕ್ಕಾಗಲೀ ಮನಸಿಲ್ಲದಿದ್ದರೂ, ಮುಂಚಿತವಾಗಿಯೇ ಅವರಿಗೆ ಹೇಳಿದ್ದೆ ಎಂಬ ಸೌಜನ್ಯಕ್ಕಾಗಿ ಹೊರಟೆ. ಕೆಲವೊಮ್ಮೆ ಈ ದಾಕ್ಷಿಣ್ಯ, ಸೌಜನ್ಯ ನಮಗೆ ಬಹಳಷ್ಟೂ ಇರಿಸು ಮುರಿಸು ಮಾಡುತ್ತವೆ. ಹಳ್ಳಿಯಲ್ಲಿಯಾದರೇ, ಸರಿಯಾಗಿ ಹೇಳುತ್ತಾರೆ, ಮುಲಾಜಿಗೆ ಬಸಿರಾಗೋಕೆ ಆಗುತ್ತಾ? ಎಂದು. ಅದೇನೆ ಇರಲಿ ವಿಷಯಕ್ಕೆ ಬರೋಣ.

ನಾನು ಮಧು, ನಂದ ಮತ್ತು ಸುಧಿ, ಕೆಂಗೆರಿ ನೈಸ್ ಕಾರಿಡಾರ್ ಬಳಿ ಸೇರಿ, ಎರಡು ಬೈಕ್ ಗಳಲ್ಲಿ ಸುಮಾರು ಎಂಟು ಮುವತ್ತಕ್ಕೆ ಹೊರಟೆವು. ಮೈಸೂರು ಬೆಂಗಳೂರು ರಸ್ತೆಯಲ್ಲಿ ಅದೆಷ್ಟು ವಾಹನಗಳು ಚಲಿಸುತ್ತವೆಂದರೆ ಹೇಳತೀರದು. ಇತ್ತೀಚೆಗೆ ಸ್ವಂತ ವಾಹನಗಳ ಸಂಖ್ಯೆ ಅತಿಯಾಗುತ್ತದೆ. ಇದು ಹೀಗೆ ಮುಂದುವರೆದರೆ, ದೇಶದ ರಸ್ತೆಗಳೆಲ್ಲ ವಾಹನ ನಿಲುಗಡೆಗೆ ಪಾರ್ಕಿಂಗ್ ಏರಿಯಾ ಆಗುತ್ತದೆ. ಬೆಂಗಳೂರು ಸಿಟಿ ಒಳಗೆ ಇರುವಷ್ಟೇ ದಟ್ಟನೆ ವಾರದ ಕೊನೆಯಲ್ಲಿ ಮತ್ತು ಈ ದಸರಾ ಸಮಯದಲ್ಲಿರುತ್ತದೆ. ಒಂದು ಕ್ಷಣಕ್ಕೆ ಕೂಡ ಆಚೇ ಈಚೆ ತಿರುಗುವ ಹಾಗಿಲ್ಲ, ಕನ್ನಡಿ ನೋಡದೇ ಗಾಡಿ ಓಡಿಸುವುದಕ್ಕೆ ಸಾಧ್ಯವೇ ಇಲ್ಲ. ಅದರಲ್ಲಿಯೂ ಬೈಕ್ ಗಳಲ್ಲಿ ಹೋಗುವಾಗ ಬಹಳ ಎಚ್ಚರಿಕೆಯಲ್ಲಿರಬೇಕಾಗುತ್ತದೆ. ಇತ್ತೀಚೆಗೆ ಬರುವ ಕಾರುಗಳಲ್ಲಿ ಪವರ್ ಸ್ಟೇರಿಂಗ್ ಇರುವುದರಿಂದ ಮತ್ತು ರಸ್ತೆಗಳು ಚೆನ್ನಾಗಿರುವುದರಿಂದ ರಾಕೇಟ್ ವೇಗದಲ್ಲಿ ಕಾರುಗಳನ್ನು ಚಲಿಸುತ್ತಾರೆ. ವಿಪರ್ಯಾಸವೆಂದರೇ ಅದನ್ನು ಕಂಟ್ರೋಲ್ ಮಾಡುವ ಮಟ್ಟಕ್ಕೆ ಅವರಿಗೆ ತರಬೇತಿ ಇರುವುದಿಲ್ಲ. ನೀವು ಸಾಮಾನ್ಯವಾಗಿ ಗಮನಿಸಿದರೇ, ವೈಟ್ ಬೋರ್ಡುಗಳೇ ಹೆಚ್ಚು ಆಕ್ಸಿಡೆಂಟ್ ಆಗುವುದು. ಕಾರಣ ಅವರಿಗೆ ಕಂಟ್ರೋಲಿಂಗ್ ಕೆಪಾಸಿಟಿ ಇರುವುದಿಲ್ಲ. ಚನ್ನಪಟ್ಟಣದ ಬಳಿಯಲ್ಲಿ ಎರಡು ಕಾರುಗಳು ಗುದ್ದಾಡಿಕೊಂಡು ನಿಂತಿದ್ದವು. ಪಾಪ ಎರಡು ದೊಡ್ಡ ಕಾರುಗಳೇ! ಆದರೇನೂ ಮಾಡುವುದು ವೇಗದಿಂದ ಬಂದು ಹಂಪ್ಸ್ ಬಳಿಯಲ್ಲಿ ಕಂಟ್ರ‍ೋಲಿಗೆ ಸಿಗದೆ ಮುಂದಿದ್ದ ಕಾರಿಗೆ ಗುದ್ದಿದ್ದ. ಒಂದು ನಿಮಿಷದ ತಪ್ಪಿಗೆ ಇಡೀ ದಿನವೇ ಹಾಳಾಗಿ ಹೊಗಿತ್ತು. ಇಂಥಹ ವೇಗ ಯಾಕೆ ಬೇಕು? ಹತ್ತು ನಿಮಿಷ ತಡವಾಗಿ ಹೋದರೇನು ತಪ್ಪು? ಮೈಸೂರು ಎಲ್ಲಿಗಾದರೂ ಓಡಿ ಹೋಗುತ್ತದೆಯೇ? ಅಂತು ನಿಂತು ನಾವು ಸ್ವಲ್ಪ ಎಚ್ಚರಿಕೆಯಿಂದಲೇ ನಿಧಾನವಾಗಿ ಮಂಡ್ಯ ತಲುಪಿದೆವು. ಜನರು ಅದೆಷ್ಟರ ಮಟ್ಟಿಗೆ ಸುಲಿಗೆ ಮಾಡುವುದಕ್ಕೆ ತಯರಾಗಿದ್ದಾರೆಂದರೇ, ಅಬ್ಬಾ ಎನಿಸುತ್ತದೆ. ಮಂಡ್ಯದಲ್ಲಿ ತಿಂಡಿಗಾಗಿ ನಿಲ್ಲಿಸಿ ತಿಂಡಿ ತಿಂದೆವು, ನಾಲ್ಕು ಜನರ ತಿಂಡಿಯ ಬೆಲೆ ಕೇವಲ ಮೂನ್ನೂರ ಮುವತ್ತು. ಭಗವಂತನೇ ಕಾಪಾಡಬೇಕೆಂದು ಬೇಡಿ ಹೊರಟೆವು.

ತಿನ್ನುವ ಊಟ ತಿಂಡಿ ಈ ಮಟ್ಟಕ್ಕೆ ದುಬಾರಿಯಾಗಿರುವುದು ಕಣ್ಣೀರು ತರಿಸುತ್ತದೆ. ರೂಪಾಯಿ, ನೂರಕ್ಕೆ ಹೋಗಲಿ ಸಾವಿರಕ್ಕೆ ಬೆಲೆ ಇಲ್ಲದ ಸ್ಥಿತಿ ಬಂದೊದಗಿದೆ. ಹೀಗೆ ಹೋದರೆ ನಾವೆಲ್ಲಿಗೆ ತಲುಪುತ್ತೇವೆಂಬುದು ಭಯ ಉಂಟು ಮಾಡುತ್ತದೆ. ಅದೇನೆ ಆಗಲಿ, ಜಗತ್ತೇ ಆ ಹಾದಿಯಲ್ಲಿ ನಡೆದಿರುವಾಗ ನಾನೊಬ್ಬ ಚಿಂತಿಸಿ ಸುಧಾರಣೆ ತರುವ ಅಗತ್ಯವಿಲ್ಲ ಬಿಡಿ. ಅಲ್ಲಿಂದ ಮುಂದೆ ಹೋಗುವಾಗ ನೆನಪಾಗಿದ್ದು, ಅಲ್ಲಿ ಅಡುಗೆ ಮಾಡಲು ಬೇಕಿರುವ ಪಾತ್ರೆ ಮತ್ತು ಸೌದೆ ಕಡಿಯಲು ಮಚ್ಚು. ಮೈಸೂರಿಗೆ ಹೋಗದೇ, ಇಲವಾಲ ಬೈಪಾಸಿನಲ್ಲಿ ಹೋಗೋಣವೆನ್ನುವ ಸಮಯಕ್ಕೆ ಕಿರಣನ ನೆನಪಾಗಿ, ಅವನ ಮನೆಗೆ ಹೋಗಿ ಒಂದು ದೊಡ್ಡ ಪಾತ್ರೆ ಮತ್ತೂ ಮಚ್ಚು ತರಲು ಸಿದ್ದವಾದೆವು. ಕಿರಣನ ಅಪ್ಪ ಅಮ್ಮ ಬಹಳ ಒಳ್ಳೆಯವರು. ಸಾಮಾನ್ಯವಾಗಿ ಎಲ್ಲ ಅಪ್ಪ ಅಮ್ಮಂದಿರು ಬೇರೆಯವರ ಮಕ್ಕಳ ವಿಷಯದಲ್ಲಿ ಬಹಳ ಒಳ್ಳೆಯವರು. ಇದು ಹಳೆಯ ಮಾತು, ನಮ್ಮ ಅಪ್ಪ ಅಮ್ಮನ ವಿಷಯದಲ್ಲಿಯೂ ಅಷ್ಟೇ ನನ್ನ ಸ್ನೇಹಿತರೆಲ್ಲರೂ ಒಳ್ಳೆಯವರಂತೆ ಕಾಣುತ್ತಾರೆ ನಾನು ಮಾತ್ರ ಕೆಟ್ಟವನು. ಆದರೇ, ಸಿಟಿಯಲ್ಲಿ ಹಾಗಿಲ್ಲ, ಇಲ್ಲಿ ಬೇರೆ ಮಕ್ಕಳೆಲ್ಲಾ ಕೆಟ್ಟವರು ತಮ್ಮ ಮಕ್ಕಳು ಮಾತ್ರ ದೇವರುಗಳು. ಸ್ವಾರ್ಥದ ಉತ್ತುಂಗವೆಂದರೇ ಇದು. ಪುಟ್ಟಾ ಅವನ ಜೊತೆ ಹೋಗಬೇಡ ಅವನು ಕೆಟ್ಟವನು ಎನ್ನುತಾರೆ, ಅದೇ ನನ್ನೂರಿನಲ್ಲಿ ನೋಡು ಅವನ ಜೊತೆ ಹೋಗಿ ಕಲಿ ಎನ್ನುತ್ತಾರೆ. ನಗರದ ಜನರಿಗೆ ಕಲಿಯುವುದೇನಿದ್ದರೂ ಪುಸ್ತಕದಲ್ಲಿ ಮಾತ್ರ, ಹಳ್ಳಿಯ ಜನರಿಗೆ ಜನರ ಜೊತೆ ಕಲಿಯಬೇಕು. ಪುಸ್ತಕ ಹಿಡಿದು ಕೂತವನಿಗೆ ಅಲ್ಲಿ ಬೆಲೆ ಇಲ್ಲ. ಅದೇನೆ ಇರಲಿ, ವಿಷಯಕ್ಕೆ ಬರೋಣ. ಕಿರಣನ ಮನೆಯಿಂದ ಒಂದು ದೊಡ್ಡ ಪಾತ್ರೆ ಅದಕ್ಕೊಂದು ಮುಚ್ಚುಳ ಮತ್ತು ಕಡಿದರೂ ಹರಿಯದ ಒಂದು ಮಚ್ಚನ್ನು ತೆಗೆದುಕೊಂಡು ಮೈಸೂರು ಬಿಟ್ಟೆವು.

ಬಿಳಿಕೆರೆಯ ಬಳಿಗೆ ನಮ್ಮ ವಿಜಿ ಬಂದು ಎರಡು ಗಂಟೆಗಳೇ ಕಳೆದಿದ್ದವು. ಅವನ ಕಾಲಡಿಯಲ್ಲಿದ್ದ ಸಿಗರೇಟು ತುಂಡುಗಳೇ ಹೇಳುತ್ತಿದ್ದವು. ಅವನು ಬಂದು ಬಹಳ ಸಮಯವಾಗಿದೆಯೆಂದು. ಎಲ್ಲರೂ ಮತ್ತೊಮ್ಮೆ ಅವನಿಗೆ ಕಂಪನಿ ಕೊಡುವುದಕ್ಕೆಂದು ಪರಿಸರಕ್ಕೆ ನಾಲ್ಕು ಸಿಗರೇಟು ಹೊಗೆಯನ್ನು ಸೇರಿಸಿದೆವು. ಬಹಳ ತಿಂಗಳುಗಳ ತರುವಾತ ನನ್ನ ಹಳೆಯ ಕುದುರೆ (ನನ್ನ ಬೈಕ್) ನನ್ನ ಕೈಗೆ ಸಿಕ್ಕಿತ್ತು. ಸಿಕ್ಕಿದ ಖುಷಿಯಲ್ಲಿ ಕೇವಲ ಹತ್ತೇ ಹತ್ತು ನಿಮಿಷದಲ್ಲಿ ಹುಣಸೂರು ತಲುಪಿದೆವು. ಅಲ್ಲಿಂದ ಗೋಣಿಕೊಪ್ಪ ತಲುಪುವುದಕ್ಕೆ ಸ್ವಲ್ಪ ಹೆಚ್ಚಿನ ಸಮಯವೇಬೇಕಾಯಿತು. ಕಾಡಿನೊಳಗಿನ ಆ ರಸ್ತೆ ಅಷ್ಟು ಚೆನ್ನಾಗಿರಲಿಲ್ಲ. ಅದರ ಜೊತೆಗೆ ಕಾಡಿನ ನಡುವೆ ಹೋಗುವಾಗ ಯಾವುದಾದರೂ ಪ್ರಾಣಿ ಸಿಗಲೆಂಬ ಆಸೆ. ಗುಂಡಿಗಳೇ ರಸ್ತೆಯಾಗಿದ್ದ ಹಾದಿಯಲ್ಲಿ ಚಲಿಸಿ ಗೋಣಿಕೊಪ್ಪವನ್ನು ತಲುಪಿದೆವು. ಅಲ್ಲಿ, ಟೀ ಕುಡಿದು, ರಾತ್ರಿ ಊಟ ಮಾಡಲು ಬೇಕಿದ್ದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡೆವು. ಅಲ್ಲಿಂದ ವಿರಾಜಪೇಟೆ ತಲುಪಿ ಮೂರ‍್ನಾಲ್ಕು ಅಂಗಡಿಗಳಿಗೆ ಅಲೆದು ಒಂದೆರಡು ಒಲ್ಡ್ ಮಂಕ್, ಸ್ವಲ್ಪ ಥಮ್ಸ್ ಅಪ್, ಹತ್ತೆನ್ನರಡು ಲೀಟರ್ ನೀರು, ಒಂದೆರಡು ಕೆಜಿ ಕೋಳಿಯನ್ನು ಕೊಂಡು ಹೊರಟೆವು. ವಿರಾಜಪೇಟೆ ಬಿಡುವಾಗಲೇ ಸಂಜೆ ಐದು ದಾಟಿತ್ತು. ಕತ್ತಲಾಗುವ ಮುನ್ನಾ ಬೆಟ್ಟದ ತುದಿಯನ್ನಾದರೂ ತಲುಪುವ ಬಯಕೆ ನನ್ನದಿತ್ತು. ನನಗೊಬ್ಬನಿಗಿದ್ದರೆ ಬಂತೇ ಭಾಗ್ಯ? ಎಲ್ಲರಿಗೂ ಇರಬೇಕಲ್ಲ. ವಿರಾಜಪೇಟೆಯಲ್ಲಿ ಸಿಗರೇಟು ಕೊಳ್ಳದೇ, ತಡಿಯಂಡಮೋಳ್ ಬೆಟ್ಟದ ತುದಿಯಲ್ಲಿ ಅಂಗಡಿಗೆ ಹುಡುಕಲು ಯತ್ನಿಸತೊಡಗಿದರು ನಮ್ಮ ದಂಡಾಧಿಕಾರಿಗಳು. ಅಂತೂ ಇಂತೂ ತಡಿಯಂಡಮೋಳ್ ಬೆಟ್ಟದ ಪಾದಕ್ಕೆ ಹೋದಾಗ ಸಂಜೆ ಆರುವರೆಯಾಗಿತ್ತು. ಸೂರ‍್ಯ ನಮ್ಮ ಮುಖವನ್ನು ನೋಡಲು ಇಷ್ಟವಿಲ್ಲದೇ ಮರೆಯಾಗಿದ್ದ. ನಮ್ಮ ಮುಖವನ್ನು ನೋಡಲು ಯಾರು ತಾನೇ ಇಷ್ಟಪಡುತ್ತಾರೆ ಬಿಡಿ.

ನಾನು ಮುಂದುವರೆಯುವ ಮುನ್ನಾ ತಡಿಯಂಡಮೋಳ್ ಬಗ್ಗೆ ನಾಲ್ಕು ಸಾಲುಗಳನ್ನು ನಿಮಗೆ ಹೇಳಿಬಿಡುತ್ತೇನೆ. ತಡಿಯಂಡಮೋಳ್ ಕರ್ನಾಟಕದ ಎರಡನೇ ಎತ್ತರದ ಬೆಟ್ಟ. ಇದು ಸಮುದ್ರ ಮಟ್ಟದಿಂದ ಸುಮಾರು 5724 ಅಡಿಗಳಷ್ಟು ಎತ್ತರದಲ್ಲಿದೆ. ವಿರಾಜಪೇಟೆಯಿಂದ ಸುಮಾರು 25 ಕೀಮೀ ಮತ್ತು ಮಡಿಕೇರಿಯಿಂದ ಸುಮಾರು 35 ಕೀಮಿಯಷ್ಟು ದೂರವಿದೆ. ಇದನ್ನು ತಲುಪುವ ಮಾರ್ಗ ಮಧ್ಯದಲ್ಲಿ, ಮೈಸೂರು ಅರಸರು ಕಟ್ಟಿಸಿರುವ ಹತ್ತೊಂಬತ್ತನೇ ಶತಮಾನದ ನಾಲ್ಕ್ನಾಡು ಅರಮನೆಯಿದೆ. ಅರಮನೆಯ ಜಾಗದಿಂದ ಮೇಲಕ್ಕೆ ಸುಮಾರು ಆರು ಕೀಮಿಗಳಷ್ಟು ಎತ್ತರಕ್ಕೆ ಬೈಕಿನಲ್ಲಿ ಅಥವಾ ಜೀಪಿನಲ್ಲಿ ಹೋಗಬಹುದು. ಅಲ್ಲಿಗೆ ಹೋದರೆ, ಥಾರು ರಸ್ತೆ ಕೊನೆಗೊಳ್ಳುತ್ತದೆ. ಅಲ್ಲಿಂದ ನೀವು ಸುಮಾರು ಆರು ಕೀಮೀ ರಷ್ಟು ದೂರ ನಡೆದು ಬೆಟ್ಟವನ್ನು ಏರಿದ್ದಾದ್ದರೇ ಕೇರಳ ಗಡಿಯನ್ನು ದಾಟುತ್ತೀರ ಮತ್ತು ತಡಿಯಂಡಮೋಳಿನ ತುದಿಯಲ್ಲಿರುತ್ತೀರ. ದೂರಕ್ಕೆ ಎಲ್ಲೆಲ್ಲಿಯೋ ಒಂದೊಂದು ಮನೆಗಳಿದ್ದರೂ ಆ ಮನೆಯನ್ನು ತಲುಪುವುದು ಕಷ್ಟಕರ.

ನಾವು ಹೀಗೆಲ್ಲಾ ಸರ್ಕಸ್ ಮಾಡಿಕೊಂಡು ಬೆಟ್ಟದ ತಪ್ಪಲಿಗೆ ಬಂದಾಗ ಕತ್ತಲಾಗಿತ್ತು. ಇತ್ತೀಚೆಗೆ ನಾನು ಬಹಳ ಸೋಮಾರಿಯಾಗಿದ್ದೇನೆ. ಯಾವಾಗ ಸೋಮಾರಿಯಾಗಿರಲಿಲ್ಲವೆಂದು ಕೇಳಬೇಡಿ. ನಾನು ಸುತ್ತಾಡುವುದರಲ್ಲಿ ಸ್ವಲ್ಪ ಶ್ರಮ ವಹಿಸುತ್ತಿದ್ದೆ. ಈಗ ಅದಕ್ಕೂ ನಿರಾಸಕ್ತನಾಗಿದ್ದೇನೆ. ನಾನು ಈ ಬಗೆಯ ನಿರಾಸಕ್ತನಾದದ್ದು ಯಾವಾಗವೆಂಬುದೇ ತಿಳಿಯಲಿಲ್ಲ. ನಾವು ನಮ್ಮನ್ನು ಪ್ರತಿನಿತ್ಯ ಗಮನಿಸಬೇಕಾಗುತ್ತದೆ. ಇಲ್ಲದಿದ್ದರೇ ಒಂದು ದಿನ ನಾವು ಸಂಪೂರ್ಣ ಸರ್ವನಾಶಕ್ಕೆ ಬಂದಾಗ ಅಯ್ಯೋ ಭಗವಂತ ನಾನು ಮುಳುಗಿ ಹೋದೇನಾ? ಎನಿಸುತ್ತದೆ. ಹಡಗಿನಲ್ಲಿ ಕುಳಿತವ ಕ್ಷಣ ಕ್ಷಣಕ್ಕೂ ಎಚ್ಚರವಹಿಸಬೇಕಾಗುತ್ತದೆ. ಹಡಗಿನೊಳಕ್ಕೆ ನೀರು ನುಗ್ಗಿ ಬರುವ ಮುನ್ನವೇ ಅವನು ಎಚ್ಚರಿಕೆವಹಿಸಬೇಕು. ನಾನು ಅಷ್ಟೇ, ಅಲ್ಲಿಗೆ ಹೋದಾಗ ತಿಳಿದದ್ದು, ಚಾರಣಕ್ಕೆಂದು ಹೋಗಿದ್ದೇನೆ, ಒಂದು ಟಾರ್ಚ್ ಇಲ್ಲ, ಕಾಲಿಗೆ ಬೂಟ್ಸ್ ಇಲ್ಲ, ಜರ್ಕೀನ್ ಇಲ್ಲ, ಒಂದು ರಗ್ಗು ಇಲ್ಲ, ಸ್ವೆಟರ್ ಇಲ್ಲ, ಬೆಂಕಿಪೊಟ್ಟಣವಿಲ್ಲ, ಜಿಗಣೆಗಳ ತವರೂರಿಗೆ ಕಾಲಿಟ್ಟಿದ್ದೇನೆ, ಅದನ್ನು ಎದುರಿಸುವ ಯಾವೊಂದು ತಯಾರಿಯೂ ಆಗಿಲ್ಲ. ಒಂದು ಸಣ್ಣ ಹಿಟ್, ಚಿಕ್ಕ ಪುಟ್ಟ ಹೊಗೆಸೊಪ್ಪು, ಉಪ್ಪು, ಹೀಗೆ ಏನಾದರೂ ಇದ್ದಿದ್ದರೇ ಆಗುತ್ತಿತ್ತು ಇದಾವುದು ಇಲ್ಲ. ಹೀಗೆ ಯಾರದೋ ಸ್ನೇಹಿತರ ಮನೆಗೆ ಹೋಗುವ ಹಾಗೆ ಬರಿಗೈಯಲ್ಲಿ ಹೋಗಿದ್ದೇನೆಂದರೇ ನನ್ನ ಉಢಾಫೆತನಕ್ಕೆ ಹಿಡಿದ ಕೈಗನ್ನಡಿಯಲ್ಲವೇ? ದೇವರು ಸದಾ ನಮ್ಮೊಂದಿಗಿರುತ್ತಾನೆಂದು ಹೇಳಲಾಗುವುದಿಲ್ಲ. ಹಿಂದೆ ಬಹಳಷ್ಟೂ ಬಾರಿ ನಮ್ಮನ್ನು ಕಾಪಾಡಿದ್ದಾನೆ, ಯಡಕುಮೇರಿಯಲ್ಲಿ ಹೊಳೆದಾಟುವಾಗ ಯಮನ ಹಗ್ಗ ಕತ್ತಿಗೆ ಸುತ್ತಿದ್ದನ್ನು ತೆಗೆದಿದ್ದಾನೆ, ಒಂಬತ್ತು ಗುಡ್ಡದಲ್ಲಿ ಯಮನ ಮನೆಯ ಬಾಗಿಲಲ್ಲಿ ಮಲಗಿದ್ದವರನ್ನು ಎಬ್ಬಿಸಿ ಕರೆದು ತಂದಿದ್ದಾನೆ, ಅನೇಕ ಲಾಂಗ್ ರೈಡ್ ಗಳಲ್ಲಿ ಕೈಹಿಡಿದಿದ್ದಾನೆ, ಅದನ್ನೆ ನಾವು ಉಢಾಫೆತನದಿಂದ ನೋಡಿದರೆ, ಎತ್ತರದ ಬೆಟ್ಟಕ್ಕೆ ಏರಿಸಿ ಒಮ್ಮೆಗೆ ದೊಪ್ಪೆಂದು ಎಸೆಯುವುದಿಲ್ಲವೇ? ಅದು ಈ ಭಾರಿಯಾಗುತ್ತದೆಂಬ ಬಲವಾದ ನಂಬಿಕೆ ನನಗೆ ಬರಲಾರಂಬಿಸಿತು.

ಡಾಂಬರು ರಸ್ತೆ ಕೊನೆಯಾಗುವ ಸ್ಥಳದಲ್ಲಿ ಯಾರೊ, ಮನೆ ಕಟ್ಟಿಸುತ್ತಿದ್ದರು. ಮನೆ ಅರ್ಧ ಕಟ್ಟಿ ನಿಂತಿತ್ತು. ಎಲ್ಲರೂ ಇಲ್ಲಿಯೇ ಉಳಿಯಬಹುದೆಂದು ಸೂಚಿಸಿದರು. ಆದರೇ ನನಗೆ ಆ ಜಾಗ ಅಷ್ಟು ಸಮಂಜಸವೆನಿಸಲಿಲ್ಲ. ಕಾರಣ ಅದು ಅಂಥಹ ರಕ್ಷಿತ ಸ್ಥಳವಲ್ಲ. ಪ್ರಾಣಿಗಳು ಅಡ್ಡಾಡುವಂತಿತ್ತು. ಆನೆಗಳು ಹೆಚ್ಚಿರುವ ಸ್ಥಳವಾದ್ದರಿಂದ ನಾವು ಸೂಕ್ಷ್ಮವಾಗಿ ಪರಿಗಣಿಸಬೇಕಿತ್ತು. ಅಲ್ಲಿಯೇ ಗಾಡಿ ನಿಲ್ಲಿಸಿ ಅಲ್ಲಿ ಕೆಲವು ಮನೆಗಳಿವೆ ವಿಚಾರಿಸೋಣವೆಂದೆ. ಆದರೇ, ನಮ್ಮ ಸ್ನೇಹಿತ ವರ್ಗದವರು ಅಲ್ಲಿಯೇ ತಂಗೋಣವೆಂದರು. ನಾನು ಇಲ್ಲಿ ನೋಡುವುದಕ್ಕಿಂತ ಮೇಲೊಮ್ಮೆ ಹೋಗಿ ಯಾವುದಾದರೂ ಮನೆಯಲ್ಲಿ ನೋಡೋಣ, ಅವರು ನಮಗೆ ಅಡುಗೆ ಮಾಡಿಕೊಡಲು ಒಪ್ಪಿದರೇ ಅಥವಾ ನಾವೇ ಮಾಡಿಕೊಳ್ಳಲು ಅನುಮತಿ ನೀಡಿ ನಾಲ್ಕು ಸೌದೆ ನೀಡಿದರೆ ಒಲಿತೆಂದು ತಿಳಿಸಿದೆ. ಮಳೆ ಸುರಿದು ನಮಗೆ ಹೊರಗಡೆ ಸೌದೆ ಸಿಗುವುದು ಅಸಾಧ್ಯವಾಗಿತ್ತು, ಅದನ್ನು ಒತ್ತಿಸಲು ನಮ್ಮ ಬಳಿಯಲ್ಲಿ ಸೀಮೆ ಎಣ್ಣೆಯಾಗಲಿ ಹೆಚ್ಚಿನ ಪೇಪರ್ ಆಗಲಿ ಇರಲಿಲ್ಲ. ಸ್ವಲ್ಪ ಮೇಲಕ್ಕೆ ಗಾಡಿಯಲ್ಲಿ ಒಬ್ಬರೊಬ್ಬರೇ ಹೋದರು, ನಾನು ನಡೆದುಕೊಂಡು ಹೋದೆ. ಹೋಗಿ ಇನ್ನೂ ಮುಂದೆ ಹೋಗುವಾಗ ಕವಲು ದಾರಿ ಬಂತು ಮಳೆಯ ಹನಿಗಳು ಶುರುವಾಯಿತು. ಅದೇ ಸಮಯಕ್ಕೆ ಯಾರೋ ದಾರಿಹೋಕರು ಬಂದರು. ಅವನನ್ನು ವಿಚಾರಿಸಿದೆವು. ನಾವು ಯಾವೊಂದು ತೀರ್ಮಾನಕ್ಕೂ ಬರಲಾಗಲಿಲ್ಲ. ಕಡೆಯದಾಗಿ, ಅಲ್ಲೊಂದು ಅರಣ್ಯ ಇಲಾಖೆಯ , ಅಲ್ಲಿಗೆ ಹೋಗಿ ನೋಡೋಣವೆಂದು ಹೊರಟೆವು. ಕಷ್ಟಪಟ್ಟು, ಓಡೋಡಿ, ಗಾಡಿಯನ್ನು ಓಡಿಸಿಕೊಂಡು ಬಂದು ಅರಣ್ಯ ಇಲಾಖೆಯ ಕಚೇರಿಯನ್ನು ತಲುಪಿದೆವು.

ಕಚೇರಿಯ ಮುಂದೆ ನಿಂತು ಒಳಕ್ಕೆ ಹೋಗಬೇಕೋ ಬೇಡವೋ? ಎಂದು ಯೋಚಿಸುತ್ತಿದ್ದೆವು. ಆಫೀಸಿನ ಮುಂಬಾಗದಲ್ಲಿ ಮೈದಾನವಿದ್ದು ಇಲ್ಲಿ ಟೆಂಟ್ ಹೊಡೆಯಬಹುದೆಂಬ ಲೆಕ್ಕಾಚಾರದಲ್ಲಿದ್ದಾಗಲೇ ಜೋರು ಮಳೆ ಬಂತು. ಮಳೆ ನಮ್ಮನ್ನು ಬಲವಂತವಾಗಿ ಕಚೇರಿಯ ಹತ್ತಿರಕ್ಕೆ ಹೋಗುವಂತೆ ಪ್ರೇರೇಪಿಸಿತು. ನಾವು ಕಚೇರಿಯ ಹೊರಾಂಡಕ್ಕೆ ಬಂದು ಕುಳಿತೆವು. ಕುಳಿತು ಸೇದಲು ಸಿಗರೇಟು ಇಲ್ಲದಿದ್ದರಿಂದ, ನಾಲ್ಕ್ನಾಡು ಅರಮನೆಯ ಬಳಿಯಲ್ಲಿ ತಂದಿದ್ದ ಬೀಡಿಯನ್ನು ಸೇದಿದೆವು. ಸೇದಿ ಸ್ವಲ್ಪ ಸಮಯದ ನಂತರ ಅಥವಾ ಸೇದುವಾಗಲೇ ನಮ್ಮ ಮುಂದಿನ ಯೋಜನೆಯನ್ನು ರೂಪಿಸತೊಡಗಿದೆವು. ಹತ್ತು ಹದಿನೈದು ನಿಮಿಷಗಳ ಬ್ರೈನ್ ಸ್ಟಾರ್ಮಿಂಗ್ ಆದಮೇಲೆ ಒಂದು ತೀರ್ಮಾನಕ್ಕೆ ಬಂದೆವು. ಇದು ಅರಣ್ಯ ಇಲಾಖೆಯವರ ಆಫೀಸು, ಅವರ ಅನುಮತಿಯಿಲ್ಲದೆ ಇಲ್ಲಿ ತಂಗುವುದು ಸೂಕ್ತವಲ್ಲ. ನಕ್ಷಲರ ಸಮಸ್ಯೆ ಇರುವುದರಿಂದ ನಮ್ಮನ್ನು ಅವರು ಹೇಗೆ ಪರಿಗಣಿಸುತ್ತಾರೆಂದು ಹೇಳಲಾರದು. ಇಲ್ಲಿಗೆ ಬಂದೆವು ಮಳೆ ಬರುತ್ತಿತ್ತು ನೀವ್ಯಾರು ಇರಲಿಲ್ಲ ಅದಕ್ಕೆ ನಾವು ಇಲ್ಲಿ ಉಳಿದೆವೆಂದರೇ ಯಾರಾದರು ಒಪ್ಪಿಯಾರೆ? ನಮ್ಮ ಮನೆ ಬೀಗ ಹಾಕಿರುವ ಸಮಯದಲ್ಲಿ ಯಾರಾದರು ದಾರಿ ಹೋಕರು ನಮ್ಮ ಮನೆಗೆ ಬಂದು ನೀವ್ಯಾರು ಇರಲಿಲ್ಲ ಅದಕ್ಕೆ ಬಂದು ಉಳಿದೆವೆಂದರೇ? ನಾವು ಒಪ್ಪುತ್ತೇವಾ? ಇದು ಯಾಕೋ ಮನಸ್ಸಿಗೆ ಬಹಳವಾಗಿ ಕೊರೆಯತೊಡಗಿತು. ಇಲ್ಲಿ ನ್ಯಾಯ ಅನ್ಯಾಯ ಎನ್ನುವುದಕಿಂತ ನೀತಿ ಮುಖ್ಯವೆನಿಸಿತು. ಮನೆಯ ಸುತ್ತ ಒಮ್ಮೆ ಸುತ್ತಾಡಿ ಬಂದೆವು. ಹೇಳುವುದಕ್ಕೆ ಆಫೀಸಾದರೂ, ಇದು ಮನೆಯಂತೆಯೇ ಇತ್ತು. ಮನೆಯ ಹಿಂಬದಿಯಲ್ಲಿ, ಒಂದು ಸ್ನಾನದ ಮನೆಯಂತೆ, ಅದಕ್ಕೊಂದು ಒಲೆಯೂ ಇತ್ತು. ಮನೆಯ ಕಿಟಕಿ ತೆಗೆದು ನೋಡಿದಾಗ, ಯಾರೋ ಆಗ ತಾನೆ, ಬಿಸಿ ನೀರು ಕಾಯಿಸಿಕೊಂಡು, ಸ್ನಾನ ಮಾಡಿ ಪೂಜೆ ಮಾಡಿರುವಂತೆ ಕಾಣಿಸಿತು. ಅದಕ್ಕೆ ಸಾಕ್ಷಿಯಂತೆ, ಒಲೆಯಲ್ಲಿ ಬೆಂಕಿಯಿತ್ತು, ಮನೆಯೊಳಗೆ ದೇವರ ದೀಪ ಉರಿಯುತಿತ್ತು.

ಇದೆಲ್ಲವನ್ನೂ ಗಮನಿಸಿದ ಮೇಲೆ ಒಂದು ತೀರ್ಮಾನಕ್ಕೆ ಬಂದೆವು. ಹೇಗೂ ನಾವು ಈ ಜಡಿ ಮಳೆಯಲ್ಲಿ ಹೊರಗಡೆ ಅಡುಗೆ ಮಾಡುವುದಕ್ಕೆ ಸಾಧ್ಯವಿಲ್ಲ, ಟೆಂಟ್ ಇರುವುದರಿಂದ ಮಲಗಲು ಪ್ರಯತ್ನಿಸಬಹುದು. ಮೊದಲು ಹೊಟ್ಟೆಗೆ ಬಿದ್ದರೆ ನಂತರ ನಿದ್ದೆಯ ಬಗ್ಗೆ ಯೋಚಿಸಬಹುದು. ಯಾರೂ ಇಲ್ಲದ ಮನೆಗೆ ಹೋಗಿ ಅಡುಗೆ ಮಾಡಿಕೊಂಡು ಊಟಮಾಡುವುದು ನೈತಿಕವಾಗಿ ಸರಿಯಿಲ್ಲ. ಇದು ಕೇವಲ ಸಿನೆಮಾದಲ್ಲಿ ಮಾತ್ರ ಕಾಮೆಡಿಯಾಗುತ್ತದೆ, ನಿಜ ಜೀವನದಲ್ಲಿ ಕಂಬಿಯ ಹಿಂದೆ ಗಾನ ಬಜಾನ ಹಾಡಬೇಕಾಗುತ್ತದೆ. ಆದ್ದರಿಂದ, ಮೊದಲು ಹಿಂದಿನ ಅವರ ಸ್ನಾನದ ಮನೆಯ ಒಲೆಯಲ್ಲಿ ಅಡುಗೆ ಮಾಡಿ ಮುಗಿಸೋಣ. ಚೆನ್ನಾಗಿ ಒಣಗಿರುವ ಸೌದೆಗಳಿವೆ, ಒಂದು ಗಂಟೆಯಲ್ಲಿ ತಂದಿರುವ ಕೋಳಿ ಮತ್ತು ಅಕ್ಕಿಯಿಂದ ಅನ್ನವನ್ನೂ ಬೆಯಿಸಬಹುದು. ಮೊದಲು ಹೋಗಿ ನಮ್ಮ ಪಾತ್ರೆಯ ಅಳತೆಗೆ ಒಲೆಯನ್ನು ಸಿದ್ದ ಮಾಡಿದೆವು. ಅಲ್ಲಿದ್ದ ಒಲೆಯು ನೀರು ಕಾಯಿಸುವ ಅಂಡೆಯನ್ನು ಇಡುವುದಕ್ಕಾದ್ದರಿಂದ ಅಲ್ಲಿಯೇ ಸುತ್ತ ಇದ್ದ ಮೂರು ಕಲ್ಲುಗಳನ್ನು ತಂದು ನಮ್ಮಲ್ಲಿದ್ದ ಪಾತ್ರೆಯ ಅಳತೆಗೆ ಸಿದ್ದಮಾಡಿದೆವು. ವಿಜಿ ಮತ್ತು ಮಧು ಅಡುಗೆ ಉಸ್ತುವಾರಿ ತೆಗೆದುಕೊಂಡರು. ನಾನು ಮತ್ತು ನಂದ ಅವರಿಗೆ ಬೇಕಿರುವ ಸಹಾಯಕ್ಕೆ ಸಹಾಯಕರಾದೆವು. ನಾನು ಅಲ್ಲಿಯೇ ಇದ್ದ ಕಲ್ಲುಗಳಿಂದ ಒಲೆಯನ್ನು ಸಿದ್ದ ಮಾಡಿದೆ. ಇನ್ನೂ ನಮ್ಮ ಜೊತೆ ಬಂದಿದ್ದ ನಂದನ ತಮ್ಮ ಸುಧಿ, ಅಮಾಯಕನಂತೆಯೋ ಅಥವಾ ತಾನು ಈ ಜಗತ್ತಿಗೆ ಸಂಬಂಧಿಸಿದವನಲ್ಲವೆನ್ನುವಂತೆಯೋ, ತನ್ನ ಪಾಡಿಗೆ ತಾನು ಐಪೋಡ್ ಹಿಡಿದು ಹಾಡು ಕೇಳಲು ಕುಳಿತ. ನಾವು ಅವನಿಗೆ ಜವಬ್ದಾರಿ ಹೊರಿಸುವ ಧೈರ್ಯ ಮಾಡಲಿಲ್ಲ.

ನಾನು ಅಕ್ಕಿಯನ್ನು ತೊಳೆದುಕೊಟ್ಟು, ಅನ್ನಕ್ಕೆ ಇಟ್ಟೆ. ವಿಜಿ ನಳ ಮಹರಾಜನಾದ. ಮಧು, ಈರುಳ್ಳಿ, ಟೋಮೋಟೋ, ಇತ್ಯಾದಿಗಳನ್ನು ಕೋಳಿ ಸಾರಿಗೆ ತಯಾರು ಮಾಡತೊಡಗಿದ. ಇದರ ನಡುವೆ ನನಗೆ ಸ್ವಲ್ಪ ಅಂಜಿಕೆಯಾಗತೊಡಗಿತು. ಯಾರಾದರೂ ಬಂದರೇ ಏನು ಹೇಳುವುದು? ಯಾರದೋ ಮನೆಯಲ್ಲಿ ಹೀಗೆ ಕದ್ದು ಅಡುಗೆ ಮಾಡುವುದು ಅದೆಷ್ಟೂ ನಾಚಿಕೆಗೇಡುತನ ಎನಿಸಿತ್ತು. ಇದನ್ನು ಹೇಳಿದಾಗ ಎಲ್ಲರೂ ನನ್ನ ಮಾತಿಗೆ ಒಪ್ಪಿದರೂ, ಮತ್ತೊಮ್ಮೆ ಬಂದರೇ 200-300 ಕೊಟ್ಟರೆ ಆಯ್ತು ಬಿಡು ಎಂದರು. ಇದು ಹಣ ಕೊಡುವ ಮಾತಲ್ಲ, ಮಾನ ಮರ‍್ಯಾದೆಯ ಮಾತೆಂಬುದನ್ನು ಅವರಿಗೆ ಅರ್ಥ ಮಾಡಿಸಬೇಕಾಯಿತು. ಅನ್ನ ತಯಾರಾಯಿತು. ಅಲ್ಲಿಯೇ ಇದ್ದ ಒಂದು ಬಾಳೆ ಎಲೆಯನ್ನು ತಂದೆವು, ಅದರ ಮೇಲೆ ಅನ್ನ ಸುರಿದು. ಕೋಳಿ ಸಾರು ಮಾಡಲು ತಯಾರಾದೆವು. ನನಗೆ ಅಂಥಹ ಸಮಯದಲ್ಲಿ ಸ್ವಲ್ಪ ತಾಳ್ಮೆ ಕಡಿಮೆ. ಎಲ್ಲವೂ ಬೇಗ ಆಗಬೇಕೆನ್ನುವವನು. ಇತರೆ ಸಮಯದಲ್ಲಿಯೂ ಅಷ್ಟೇ ತಾಳ್ಮೆಗೇಡಿ ನಾನು. ಇದರಿಂದಲೇ ಎಲ್ಲರೊಡನೆ ಜಗಳವಾಡುತ್ತೇನೆ. ಅದೇ ಸಮಯಕ್ಕೆ ಮಧು, ಈರುಳ್ಳಿಯನ್ನು ಅಳತೆ ಇಟ್ಟು ಕತ್ತರಿಸುತ್ತಿದ್ದ, ನಾನು ನೋಡಿ ಬೇಸತ್ತಿ ಹೋದೆ. ಗುರು ಇದು ಮನೆಯಲ್ಲ, ಬೇಗ ಮುಗಿಸು ಎಂದರೂ ಕೆಳಲಿಲ್ಲ. ಅದರ ಜೊತೆಗೆ ಸುಧಿ, ಅದೇನೋ ಮಾತಾಡುವುದು, ಇದರ ಮಧ್ಯದಲ್ಲಿ ನಂದ ಜಿಗಣೆಯ ಜೊತೆ ಆಟವಾಡಲು ನಿಂತ. ಮೊದಲೇ ಇದ್ದದ್ದು ಒಂದೇ ಒಂದು ಟಾರ್ಚ್. ಅದಕ್ಕೆ ಮೂರು ಬ್ಯಾಟರಿ ಬೇಕೆಂದು ತಿಳಿದಿದ್ದರೂ ಅವನು ಕೇವಲ ಎರಡೂ ಬ್ಯಾಟರಿ ತಂದಿದ್ದ. ದೇವರ ದಯೆಯಿಂದ ನನ್ನ ಕ್ಯಾಮೆರಾಗೆ ನಾಲ್ಕು ಬ್ಯಾಟರಿ ಬೇಕಿದ್ದರಿಂದ ಚಾರ್ಜರ್ ಬ್ಯಾಟರಿಯನ್ನು ಅದಕ್ಕೆಂದು ಉಪಯೋಗಿಸಿದೆವು. ಅದನ್ನು ಇವನು ಅಡುಗೆ ಮಾಡುವ ಸಮಯದಲ್ಲಿ ನನಗೆ ಜಿಗಣೆ ಹತ್ತಿದೆ, ಇರು ನೋಡೋಣ ಅದೆಷ್ಟು ದಪ್ಪವಾಗಬಹುದೆಂದು ಪರೀಕ್ಷೀಸತೊಡಗಿದ. ನಾನಂತೂ ಅದೆಷ್ಟರ ಮಟ್ಟಿಗೆ ತಾಳೆ ಕಳೆದುಕೊಂಡಿದ್ದೆಯೆಂದರೇ ಮನ ಬಂದಂತೆ ಬೈಯ್ಯತೊಡಗಿದೆ.

ಕೋಳಿ ಸಾರು ಬೇಯ್ಯುತ್ತಿದೆ, ಸಮಯ ಸುಮಾರು ಎಂಟೂವರೆ, ಯಾವುದೋ ಶಬ್ದ ಗುರ‍್ರ‍್ ಗುರ‍್ರ‍್ ಎಂದಂತೆ ಬರತೊಡಗಿತು. ಇರುವುದೊಂದೆ ಟಾರ್ಚ್, ಐದು ಜನರು ಎತ್ತ ನೋಡುವುದು. ಸುತ್ತಲೂ ಕತ್ತಲು, ಮಳೆ ಸುರಿದು ನಿಂತಿದೆ ಆದರೂ ಹನಿ ಬೀಳುತ್ತಿವೆ. ಇದೆಂಥಹ ಶಬ್ದವೆಂಬುದನ್ನು ಅರಿಯಲಾಗುತ್ತಿಲ್ಲ. ಯಾವುದೋ ಪ್ರಾಣಿ ಬಂದಿದೆಯೆಂಬುದು ಖಾತರಿ ಮಾಡಿಕೊಂಡರು. ನಾನು ಮುಂದೆ ಹೋಗಿ ನೋಡೋಣವೆಂದು ಒಂದೆಜ್ಜೆ ಮುಂದಿಟ್ಟೆ, ಹರೀ ಹೋಗಬೇಡ! ಎಂದರು. ಯಾರೆಂದರೆಂಬುದು ಅರಿವಿಲ್ಲ. ಮೂವರ ಬಾಯಿಂದಲೂ ಬಂದಿತ್ತು ಮಾತು. ನಾನು ಕ್ಷಣಕ್ಕೆ ಬೆಚ್ಚಿ ಬಿದ್ದೆ. ಅಯ್ಯೋ! ಯಾವ ಪ್ರಾಣಿ ಇರಬಹುದು?! ಪ್ರಶ್ನಾಚಕ, ಆಶ್ಚರ್ಯಸೂಚಕ! ಭಯ! ಆತಂಕ!ನಿಶಬ್ದತೆ! ಅಳುಕು! ಯಾವುದಿಲ್ಲ ನಮ್ಮ ಮೊಗದಲ್ಲಿ? ಎಲ್ಲಾ ಭಾವನೆಗಳ ಮಿಶ್ರಿತ. ನಗುವೊಂದು ಬಿಟ್ಟು ಮಿಕ್ಕಿದ್ದೆಲ್ಲಾ ಇದೆ. ನಗು ಬರುವ ಸಮಯವಲ್ಲ. ಚಾರ್ಲೀ ಚಾಪ್ಲೀನ್ ಅಲ್ಲಾ, ಮತ್ತೊಬ್ಬ ಹುಟ್ಟಿ ಬಂದರೂ ನಮ್ಮನ್ನು ನಗಿಸಲು ಸಾಧ್ಯವಿಲ್ಲ ಬಿಡಿ. ನಗಿಸಿವುದಿರಲಿ, ನಮ್ಮೊಳಗಿದ್ದ ಭಯವನ್ನು ಕಡಿಮೆ ಮಾಡುವ ಶಕ್ತಿಯೂ ಇರಲಿಲ್ಲ. ಅದು ಇದ್ದಿದ್ದರೇ ಆ ದೇವರಿಗೆ ಮಾತ್ರ. ಆತನಿಗೆ ಮಾತ್ರವೇ ಸಾಧ್ಯವಿತ್ತು. ಇದೆಲ್ಲವೂ ನಡೆಯುವಾಗ, ಯಾವುದೋ ಪ್ರಾಣಿ ಕೋಳಿ ಮಾಂಸದ ವಾಸನೆಯನ್ನು ಹಿಡಿದು ಬಂದಿದೆಯೆಂಬುದು ಖಾತ್ರಿಯಾಗಿತ್ತು. ಆದರೇ, ಆ ಪ್ರಾಣಿ ಯಾವುದು? ಚಿರತೆಗಳಿವೆಯೆಂಬುದು ನಂದನ ಅನಿಸಿಕೆ, ಚಿರತೆ ಬಂದಿರಬಹುದೇ? ಬಂದಿದ್ದರೇ? ನರಿಗಳಿವೆಯೆಂಬುದು ವಿಜಿಯ ಅಭಿಪ್ರಾಯ, ನರಿಗಳೆಂದರೇ ಎಷ್ಟಿರಬಹುದು? ಅದರ ಜೊತೆಗೆ ಕಾಳಿಂಗ ಸರ್ಪಗಳು ಹೆಚ್ಚಿರುವ ಸ್ಥಳ ಕೂಡ ಹೌದು. ಕಾಳಿಂಗ ಸರ್ಪವೂ ಪಾಲು ಕೇಳಿ ಬಂದರೇ? ಎರಡು ಕೆಜಿ ಕೋಳಿ ಮಾಂಸ ನಮಗೆ ಈ ಮಟ್ಟಕ್ಕೆ ಹಿಂಸೆ ಕೊಡುವುದೇ? ಮೂರಿಂಚು ಮಾಂಸಕ್ಕೆ ಅದೆಷ್ಟೋ ಜನರು ಬಲಿಯಾಗಿದ್ದಾರೆ, ಇನ್ನೂ ಕೋಳಿಗೆ ಪ್ರಾಣ ಕಳೆದುಕೊಳ್ಳುವುದು ದೊಡ್ಡದೇನಲ್ಲ ಎನಿಸಿತು.

ಕೋಳಿ ಮಾಂಸಕ್ಕೆ ಈ ಬಗೆಯೆಂದರೇ, ಇನ್ನೂ ಹಂದಿ ಮಾಂಸ ತೆಗೆದುಕೊಂಡು ಹೋಗೋಣವೆನ್ನುತ್ತಿದ್ದೆವಲ್ಲಾ? ಎಂಬ ಭಯದ ಜೊತೆಗೆ ಸಮಾಧಾನವಾಯಿತು. ದೆವ್ವಗಳು ಇರಬಹುದೆಂಬ ಊಹಾಪೋಹಗಳು ನಮ್ಮ ಖಾಕ್ ಬ್ರದರ್ಸ್ ಕಡೆಯಿಂದ ಬಂದಿತು. ಇಷ್ಟೇಲ್ಲಾ ನಡೆಯುವಾಗಲೂ ಆ ಶಬ್ದ ಕಡಿಮೆಯಾಗಲಿಲ್ಲ. ನಾನು ಟಾರ್ಚ್ ಹಿಡಿದು ಆ ಕಡೆಗೆ ಈ ಕಡೆಗೆ ಹಿಡಿಯುವುದು ತಪ್ಪಲಿಲ್ಲ. ಒಂದೆಡೆ, ಯಾರಾದರೂ ಬಂದರೆಂಬ ಭಯವಿತ್ತು, ಮತ್ತೊಂದೆಡೆಗೆ ಅಲ್ಲಿ ಯಾವುದೋ ಪ್ರಾಣಿ ಬಂದಿದೆಯಲ್ಲಾ ಎಂಬ ಆತಂಕ, ಯಾವುದಕ್ಕೆ ಗಮನಕೊಡಬೇಕೆಂಬುದೇ ಚಿಂತೆಯಾಯಿತು. ಈ ಭಯ ಈ ಆತಂಕದಲ್ಲಿ ಜೀವನ ಮಾಡುವುದು ದುಸ್ತರ. ಚಿಕನ್ ಶೇ.90 ರಷ್ಟು ಬೆಂದಿತ್ತು. ನಾನು ವಿಜಿ ಇಲ್ಲಿಯೇ ಬೆಂಕಿಯ ಬಳಿಯಲ್ಲಿ ಕುಳಿತು ಊಟ ಮುಗಿಸಿದರೆ ನಮಗೆ ಒಳ್ಳೆಯದೆಂದು ವಾದಿಸಿದೆವು. ಮಿಕ್ಕಿದವರು ಇಲ್ಲಿ ಕೂರುವುದು ಕಷ್ಟ ಮನೆಯ ಮುಂಬಾಗಕ್ಕೆ ಹೋಗೋಣ, ಇಲ್ಲಿದ್ದರೆ ನಾವು ನಾಲ್ಕು ಕಡೆಗೂ ಗಮನವಿಡಬೇಕು, ಮುಂದೆ ಇದ್ದರೆ ಒಂದು ಕಡೆಗೆ ಸಾಕೆಂದರು. ಸರಿಯಾಗಿ ಒಂಬತ್ತು ಗಂಟೆಗೆ ಅಡುಗೆ ಸಿದ್ದವಾಯಿತು. ನಾವು ಅಲ್ಲಿ ಅಡುಗೆ ಮಾಡಿದ್ದೇವೆಂಬ ಯಾವ ಸುಳಿವು ಸಿಗದಂತೆ ಎಲ್ಲವನ್ನು ಶುಚಿಗೊಳಿಸಿದೆವು. ಒಲೆಗೆಂದು ಇಟ್ಟಿದ್ದ ಕಲ್ಲುಗಳನ್ನು ಎಸೆದೆವು. ನನಗೆ ಒಂದು ನಂಬಿಕೆಯಿತ್ತು, ಬ್ಯಾಗಿನಲ್ಲಿ ಎರಡು ಫುಲ್ ಬಾಟಲಿ ಒಲ್ಡ್ ಮಂಕ್ ಇದೆ, ಅದು ಒಂದು ಸುತ್ತು ನಮ್ಮ ದೇಹಕ್ಕೆ ಸೇರಿದರೇ ಸಾಕು, ಚಿರತೆಯ ಮೊಲೆಯಲ್ಲಿ ಹಾಲು ಕರೆದು ಕುಡಿಯುವ ಧೈರ್ಯ ನಮ್ಮ ಹುಡುಗರಿಗೆ ಬಂದೇ ಬರುತ್ತದೆ ಎಂದು.

ಅಡುಗೆ ಮನೆಯಿಂದ (ಸ್ನಾನದ ಮನೆಯಿಂದ) ಅನ್ನ, ಸಾರು ಎಲ್ಲವನ್ನು ತಂದು ಊಟಕ್ಕೆ ತಯಾರು ಮಾಡಿದೆವು. ವಿಚಿತ್ರವೆನಿಸಿದ್ದು ಮತ್ತೊಂದು. ನಾವು ವಿರಾಜಪೇಟೆಯಿಂದ ಹತ್ತು ಲೀಟರು ನೀರು ತಂದೆವು. ಅಲ್ಲಿ ನೀರು ಸಿಗದಿದ್ದರೆ ಸಮಸ್ಯೆಯಾಗಬಾರದೆಂದು. ಆದರೇ, ಇಲ್ಲಿ ಮಳೆ ಸುರಿದು ಹೆಜ್ಜೆ ಇಟ್ಟಲೆಲ್ಲ ಶುದ್ದ ನೀರು ಹರಿಯುತ್ತಿತ್ತು. ಹೆಚ್ಚಿದ್ದರೇ ತೊಂದರೆ ಇಲ್ಲ ನೀರಿಲ್ಲದ್ದಿದ್ದರೇ? ಒಂಬತ್ತು ಗುಡ್ಡ ಬಾಗ -2 ಆಗುತ್ತಿತ್ತು. ಎಲ್ಲವನ್ನು ತಯಾರಿ ಮಾಡಿ, ಮಾಮೂಲಿ ಕಾಡಿನಲ್ಲಿ ಕೂರುವಂತೆಯೇ, ಸುತ್ತಲೂ ಗಮನಿಸುವ ನಿಟ್ಟಿನಲ್ಲಿ ಕುಳಿತೆವು. ಸುಧಿಯನ್ನು ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲವಾದ್ದರಿಂದ, ನಾನು, ವಿಜಿ, ಮಧು ಮತ್ತು ನಂದ ನಾಲ್ಕು ದಿಕ್ಕುಗಳನ್ನು ಗಮನಿಸುವ ಜವಬ್ದಾರಿ ವಹಿಸಿಕೊಂಡೆವು. ಕುಳಿತು ಹತ್ತು ನಿಮಿಷ ಸುತ್ತಲೂ ಟಾರ್ಚ್ ಬಿಡುವುದು ನೋಡುವುದು ಮಾಡಿದೆವು. ಎಣ್ಣೆ ಹೊಟ್ಟೆ ಸೇರಿದಮೇಲೆ ಅದರ ಅರಿವೇ ಬರಲಿಲ್ಲ. ಆದರೂ, ಆ ಶಬ್ದ ಮಾಡಿದ್ದು ಏನು? ಎನ್ನುವಾಗ ಅದು ಮರಗಳ ನಡುವೆ ವೇಗವಾಗಿ ಚಲಿಸುತ್ತಿದ್ದ ಗಾಳಿ ಮಾಡುತ್ತಿದ್ದ ಶಬ್ದ. ಅದಕ್ಕೆ ತಕ್ಕಂತೆ ಮೇಳೆ ಒದಗಸಿಕೊಡುತ್ತಿದ್ದದ್ದು, ಗುಡುಗು ಮತ್ತು ಮಿಂಚು. ಅದೇನೆ, ಆಗಲಿ ಸಮಯ ಹತ್ತಾಯಿತು, ಅರಣ್ಯ ಇಲಾಖೆಯವರು ಬರುವಂತೇ ಕಾಣುತ್ತಿಲ್ಲ, ಇದೇ ಜಗಲಿಯ ಮೇಲೆ ಮಲಗೋಣ. ಮುಂಜಾನೆ ಐದಕ್ಕೆ ಎದ್ದು ಬೆಟ್ಟ ಏರಲು ಹೋಗೋಣವೆಂದು ತೀರ್ಮಾನಿಸಿದೆವು. ಎಣ್ಣೆ ಖಾಲಿಯಾಗಿತ್ತು, ಚಿಕನ್ ಅಂತೂ ಅದ್ಬುತಾವಾಗಿತ್ತು. ಎಲ್ಲವೂ ಸಮರ್ಪಕವಾಗಿತ್ತು. ಮುಗಿಸಿ ಎದ್ದು, ತೊಳೆದು ಇಡುವ ಸಮಯವೂ ಬಂತು. ಇನ್ನೂ ಎಣ್ಣೆ ಇದ್ದಿದ್ದರೇ, ಚಿಕನ್ ಇದ್ದಿದ್ದರೇ ಎಂದು ಮುಗಿಸಿದೆವು.

ಇಷ್ಟೇಲ್ಲಾ ಮೋಜು ಇರುವಾಗ, ನಾವು ನಾಲ್ಕು ಹೆಜ್ಜೆ ಕುಣಿಯಬಾರದೇ? ಕುಣಿಯೋಣವೆಂದು ಮೊಬೈಲ್ ನಿಂದ ಹಾಡು ಹಾಕಿದೆವು. ನಂತರ ಲಾಪಟಾಪಿನಲ್ಲಿ ಹಾಡು ಹಾಕಿ ಕುಣಿಯಬೇಕು, ಯಾರೊ ಬರುವ ಶಬ್ದ ಮತ್ತು ಟಾರ್ಚ್ ಬೆಳಕು ಬಿತ್ತು. ಯಾರು ಕುಡಿದ್ದಿದ್ದವರು? ಎಲ್ಲವೂ ಇಳಿದು ಹೋಗಿತ್ತು. ಎರಡೇ ಕ್ಷಣಕ್ಕೆ ನಾವ್ಯಾರು ಕುಡಿದೇ ಇಲ್ಲವೆನ್ನುವಂತಾದರು. ಬಂದವರಿಗೂ ನಮ್ಮನ್ನು ಕಂಡು ಭಯವಾಗಿತ್ತು. ಬಂದವರು ಕೇವಲ್ ಇಬ್ಬರು, ತುಂಬಾ ತೆಳ್ಳಗಿದ್ದರು. ನಾವು ದಢೂತಿಗಳು ಐದು ಜನರು! ಮಾತಿಗೆ ಇಳಿಯಲು ಸ್ವಲ್ಪ ಅಂಜಿದರು. ನಂತರ ಯಾರಿಗೋ ಫೋನ್ ಮಾಡಿ ಮಾತನಾಡಿದರು. ಆ ಕಡೆಯಿದ್ದ ವ್ಯಕ್ತಿ ಕೇಳಿತು, ಹೇಗಿದ್ದಾರೆ? ನಾನು ಬರಲೇ ಬೇಕಾ? ಎಂದು. ನಂತರ ಅವರು ಹೊರಗೆ ಬಂದು ಖಾಲಿಯಾಗಿದ್ದ ಬಾಟಲಿಗಳನ್ನು ಎರಡೆರಡು ಬಾರಿ ಟಾರ್ಚ್ ಬಿಟ್ಟು ನೋಡಿದರು. ಎಲ್ಲವನ್ನೂ ಕುಡಿದು ಮುಗಿಸಿದ್ದಾರೆಂಬ ಬೇಸರ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಮೊದಲಿಗೆ ಅವರು ಹೊರಗಡೆ ಟೆಂಟ್ ಹೊಡೆದು ಮಲಗಿ ಎಂದರೂ, ನಂತರ ಅಲ್ಲಿಯೇ ಮಲಗಿ ಎಂದರು. ಬೇಕೆಂದರೇ ಒಳಗೆ ಬಂದು ಮಲಗಬಹುದೆಂಬುದನ್ನು ಹೇಳಿದರು. ನಾವು ಹೊರಗಡೆ ಜಗಲಿಯಲ್ಲಿಯೇ ಮಲಗಿದೆವು. ಕೊನೆಗೂ ನಂದನ ಟೆಂಟ್ ಮೇಲೇರಲಿಲ್ಲ. ಅದನ್ನೇ ಹಾಸಿಕೊಂಡು ಮಲಗಿದೆವು. ಭರ್ಜರಿ ಗಾಳಿ, ಭಯಂಕರ ಚಳಿ ಆದರೂ ಮಲಗಿದೆವು, ಮುಂಜಾನೆ ಕಣ್ಣು ತೆರೆದಾಗ ಗಂಟೆ ಆರಾಗಿತ್ತು.

ನಾನು ವಿಜಿ ಹೊರಗೆ ಬಂದು ಹಿಂದಿನ ದಿನ ಬಚ್ಚಿಟ್ಟುಕೊಂಡಿದ್ದ ಸಿಗರೇಟು ಸೇದಿದೆವು. ಸುತ್ತೆಲ್ಲಾ ಮಂಜು ಮುಸುಕಿದೆ, ಅದ್ಬುತಾವಾಗಿದೆ ಪರಿಸರ. ನನ್ನಾಕೆ ನಿಸರ್ಗ ನನ್ನನ್ನು ಬಿಗಿದಪ್ಪುತ್ತಿದ್ದಾಳೆ. ಸ್ವರ್ಗಕ್ಕೆ ನಾಲ್ಕೇ ಗೇಣು. ಎಲ್ಲರೂ ಎದ್ದು ಹೊರಟೆವು. ಸುಮಾರು ಏಳು ಗಂಟೆಗೆ ಬೆಟ ಏರಳು ಶುರು ಮಾಡಿದೆವು. ಏನೂ ಕಾಣಿಸುತ್ತಲ್ಲ. ಬರೀ ಮಂಜು ಮಾತ್ರ. ನಮ್ಮ ಜೊತೆಗೆ ಅಲ್ಲಿಯೇ ಇದ್ದ ಎರಡು ನಾಯಿಗಳು ಬಂದವು. ಈ ನಾಯಿಗಳು ಬಹಳ ಬುದ್ದಿವಂತರು. ಒಂದು ಕಪ್ಪನೆಯ ನಾಯಿ ಮತ್ತೊಂದು ಕೆಂಚ ನಾಯಿ. ಒಂದು ಮುಂದೆ ಹೋಗುತ್ತಿತ್ತು ಮತ್ತೊಂದು ಹಿಂದೆ ಬರುತ್ತಿತ್ತು. ನಮ್ಮನ್ನು ಅದೆಷ್ಟು ಹುಷಾರಾಗಿ ಕರೆದೊಯ್ದೆವೆಂದರೇ ಹೇಳತೀರದು. ಸ್ವಲ್ಪ ಆಚೀಚೆ ಸದ್ದಾದರೂ ಸರಿಯೇ ಓಡಿ ಹೋಗುತ್ತಿದ್ದೋ, ಬೊಗಳುತ್ತಿದ್ದವು. ಒಟ್ಟಾರೆಯಾಗಿ ಎರಡು ಉತ್ತಮ ಭೇಟೆ ನಾಯಿಗಳೆಂಬುದನ್ನು ಒಪ್ಪಬೇಕು. ಬೆಟ್ಟದ ತುತ್ತ ತುದಿಗೆ ಹೋದಾಗ ಸುಮಾರು ಒಂಬತ್ತು ಗಂಟೆಯಾಗಿತ್ತು. ಕಡಿಮೆಯೆಂದರೂ 80ಕೀಮೀ ವೇಗದಲ್ಲಿ ಗಾಳಿ ಬೀಸುತ್ತಿತ್ತು. ಹತ್ತುವರೆ ತನಕವೂ ಕಾಯ್ದೆವು. ಮಂಜು ಕಡಿಮೆಯಾಗಲಿಲ್ಲ ಹಾಗೆಯೇ ಇಳಿದು ಬಂದೆವು.

19 ಜುಲೈ 2012

ಶ್ರಾವಣ ಮಾಸಕ್ಕೆ ಸುಸ್ವಾಗತ....ಬಾಲ್ಯದೆರಡು ಪುಟಗಳು!!!

ಶ್ರಾವಣ ಮಾಸಕ್ಕೆ ಸುಸ್ವಾಗತ....ಎಂದು ಬರೆದು ಫೇಸ್ ಬುಕ್ಕಿಗೆ ಹಾಕಲು ಹೋದೆ. ತಕ್ಷಣ ನನ್ನ ಬಾಲ್ಯದ ದಿನಗಳು ನೆನಪಾದವು. ಶ್ರಾವಣ ಆಚರಿಸುತ್ತಿದ್ದ ದಿನಗಳು. ನನಗೆ ನಗರದಲ್ಲಿ ಹೇಗೆ ಆಚರಿಸುತ್ತಾರೆಂಬುದರ ಅರಿವಿಲ್ಲ. ಆದರೇ, ನನ್ನೂರಿನಲ್ಲಿ ನನ್ನ ಬಾಲ್ಯದಲ್ಲಿ ಆಚರಿಸುತ್ತಿದ್ದ ಶ್ರಾವಣವಂತು ಬಹಳ ಚೆನ್ನಾಗಿ ನೆನಪಿದೆ. ಪ್ರತಿ ವರ್ಷವೂ ನಾಲ್ಕು ಶ್ರಾವಣ ಶನಿವಾರ ಮತ್ತು ನಾಲ್ಕು ಶ್ರಾವಣ ಸೋಮವಾರ ಬರುತ್ತದೆ. ನನ್ನೂರಿನ ಈ ಕಥೆಗಳು ಕೆಲವರಿಗೆ ಹೊಸದಾಗಿ ಕಾಣಿಸಬಹುದು. ಹಿಂದಿನ ದಿನಗಳಲ್ಲಿ ವಾರಕ್ಕೊಮ್ಮೆ ಮಾತ್ರ ಸ್ನಾನ ಮಾಡುತ್ತಿದ್ದೆವು. ನಮ್ಮ ಮನೆಯಲ್ಲಿ ನಮ್ಮಪ್ಪ ಸರ್ಕಾರಿ ಕೆಲಸದಲ್ಲಿದ್ದ ಕಾರಣ, ವಾರದಲ್ಲಿ ಎರಡು ದಿನ ರೂಢಿಯಾಗಿತ್ತು. ಶನಿವಾರ ನಮ್ಮ ಮನೆ ದೇವರ ವಾರವಾಗಿದ್ದು, ಬುಧವಾರ ಲಕ್ಷ್ಮೀ ದೇವಿಯ ವಾರವಾಗಿತ್ತು. ಗಂಡು ಮತ್ತು ಹೆಣ್ಣು ದೇವರಿಗೆ ಸಮಪಾಲು. ನಾವು ಮೊದಲಿದ್ದ ಮನೆ ಬಹಳ ಇಕ್ಕಟ್ಟಿನದ್ದು, ಚಿಕ್ಕ ಮನೆ. ಆ ದಿನಗಳಲ್ಲಿ, ಸೌದೆಗೆ ಬಹಳ ಕಷ್ಟವಿತ್ತು. ನನಗೆ ನೆನಪಿರುವ ಹಾಗೆ, ನಾನು ಅಮ್ಮ ಅದೆಷ್ಟೋ ದಿನ ಬೆರಣಿ ಎತ್ತಿದ್ದೀವಿ, ಊರಿನ ಪಕ್ಕದಲ್ಲಿಯೇ ಇದ್ದ ಗೋಮಾಳ, ಹೊಂಗೆ ತೋಪಿಗೆ ಹೋಗಿ, ಸಣ್ಣ ಸಣ್ಣ ಪುರುಳೆ (ಸೌದೆ ಕಡ್ಡಿ) ಗಳನ್ನು ಆಯ್ದು ತಂದಿದ್ದೇವೆ. ಅದನ್ನೆಲ್ಲಾ ನೆನಪು ಮಾಡಿಕೊಂಡರೇ ನಿಜಕ್ಕೂ ಕಣ್ಣು ತೇವವಾಗುತ್ತದೆ. ಒಲೆಗೆ ಬೆಂಕಿ ಹಾಕುವುದು ದೊಡ್ಡ ಕೆಲಸವಾಗುತ್ತಿತ್ತು, ಹೆಚ್ಚಿಗೆ ಸೀಮೆ ಎಣ್ಣೆ ಹಾಕುವಂತಿರಲಿಲ್ಲ, ಕೊಡುತ್ತಿದ್ದದ್ದು ಮೂರು ಲೀಟರ್, ಅದರಲ್ಲಿ ಅಡುಗೆಗೂ ಬೇಕಿತ್ತು.
ಬಹಳ ವಿಚಿತ್ರವೆನಿಸುತ್ತದೆ, ಸರ್ಕಾರದ ರೀತಿ ನೀತಿಗಳು. ನಮ್ಮಪ್ಪ ಸರ್ಕಾರಿ ಕೆಲಸದಲ್ಲಿದ್ದ ಕಾರಣ ನಮಗೆ ಹಸಿರು ಕಾರ್ಡ್ ಇರಲಿಲ್ಲ. ಈಗ ಬಿಪಿಎಲ್ ಅನ್ನುವುವು ಆ ದಿನಗಳಲ್ಲಿ ಹಸಿರು ಕಾರ್ಡ್, ಕೇಸರಿ ಕಾರ್ಡ್. ನಮ್ಮ ಮನೆಗೆ ಕೇಸರಿ ಕಾರ್ಡ್ ಕೊಟ್ಟಿದ್ದರು. ನಾವು ಮುಂದುವರೆದವರೆಂಬುದು ಅವರ ತಿರ್ಮಾನ. ನಮ್ಮ ಮನೆಯಲ್ಲಿ ಬಡತನ ಹಾಸು ಹೊಕ್ಕಿತ್ತು. ನಮ್ಮೂರಿನಲ್ಲಿ ಅದೆಷ್ಟೊ ಜನರಿಗೆ ಹತ್ತು ಇಪ್ಪತ್ತು ಎಕರೆ ಜಮೀನು ಇದ್ದರೂ, ಅವರೆಲ್ಲಾ ಹಸಿರು ಕಾರ್ಡ್ ಪಡೆದಿದ್ದರು. ಅವರಿಗೆ ಮೂರು ರೂಪಾಯಿಗೆ ಒಂದು ಲೀಟರ್ ಸೀಮೆ ಎಣ್ಣೆ, ನಮಗೆ ಏಳು ರೂಪಾಯಿ. ಮೊದಲ ಆದ್ಯತೆ ಹಸಿರು ಕಾರ್ಡಿದ್ದವರಿಗೆ, ನಮಗೆ ಕೊಡಲೇ ಬೇಕೆಂಬ ಕಡ್ಡಾಯವೂ ಇಲ್ಲ. ಒಂದೊಂದು ದಿನ ನಮ್ಮಮ್ಮ ಪಕ್ಕದ ಮನೆಯವರ ಕಾರ್ಡ್ ಗಳನ್ನೆಲ್ಲಾ ಕೊಡಿಸುತ್ತಿದ್ದರು. ನಾನು ಸೊಸೈಟಿಗೆ ಹೋದರೇ, ಅವನು ತರವಾರಿ ಕಾನೂನು ಮಾಡತೊಡಗಿದ. ಒಬ್ಬರಿಗೆ ಒಂದು ಕಾರ್ಡಿಗೆ ಮಾತ್ರ ಕೊಡುವುದು, ಕಾರ್ಡ್ ಇರುವ ಮನೆಯವರೇ ಬರಬೇಕು, ಹೀಗೆ ಏನೆಲ್ಲಾ ಕಾನೂನುಗಳು. ಸತ್ಯವಾಗಿಯೂ ಹೇಳುತ್ತೇನೆ, ಬಡವರು ಬದುಕಲು ಯೋಗ್ಯವಲ್ಲದ ಸಮಾಜ ಮತ್ತು ದೇಶ ಭಾರತ. ಬೇರೆ ದೇಶದಲ್ಲಿ ಹೇಗಿದೆಯೆಂಬುದು ಗೊತ್ತಿಲ್ಲ, ಆದರೇ ನಮ್ಮಲ್ಲಿ ಮಾತ್ರ ಬಹಳ ಕಷ್ಟ. ಅವರಿವರನ್ನು ಗೋಗರಿದುಕೊಂಡು, ಅವರನ್ನು ಕರೆದುಕೊಂಡು ಹೋಗಿ, ಸಾಲಿನಲ್ಲಿ ನಿಂತು ಅಂತೂ ಇಂತೂ ಸೀಮೆ ಎಣ್ಣೆ ತರುತ್ತಿದ್ದೆ. ಕೆಲವರ ಮನೆಗಳಲ್ಲಿ ಕರೆಂಟ್ ಇರಲಿಲ್ಲ, ಪಾಪ ಅವರು ದೀಪದಿಂದಲೇ ಜೀವನ ಸಾಗಿಸಬೇಕಿತ್ತು, ಸೀಮೆ ಎಣ್ಣೆ ಇಲ್ಲದೇ ಅದೆಷ್ಟೋ ಮನೆಯವರ ಮಕ್ಕಳು ಓದುತ್ತಿರಲಿಲ್ಲ, ನನ್ನ ಕೆಲವು ಸ್ನೇಹಿತರು ಬೇರೆಯವರ ಮನೆಗೆ ಹೋಗಿ ಹೋಂವರ್ಕ್ ಮಾಡುತ್ತಿದ್ದ ದಿನವೂ ಇದೆ. ವಿಷಯಕ್ಕೆ ಬರೋಣ.
ಆಗ ಕಷ್ಟಪಟ್ಟು ಕಣ್ಣೀರು ಸುರಿಸಿ ಒಲೆ ಉರಿಸುತ್ತಿದ್ದೆ. ನೀರು ಹಿಡಿಯುವ ಕಷ್ಟವನ್ನು ನಾನು ಹಿಂದಿನ ಬ್ಲಾಗಿನಲ್ಲಿ ಬರೆದಿದ್ದೆ, ಆದ್ದರಿಂದ ನೀರಿನ ಸಮಸ್ಯೆಯ ಬಗ್ಗೆ ಇಲ್ಲಿ ಮಾತನಾಡೋದು ಬೇಡ. ಕೆಲವು ಮನೆಯವರಿಗೆ ವಾರದಲ್ಲಿ ಒಮ್ಮೆಯೇ ಸ್ನಾನದ ಭಾಗ್ಯ. ನಮ್ಮೂರಿನಲ್ಲಿ ಮಡಕೆ ತೆಗೆಯುವುದು ಅಥವಾ ಸೂತಕ ತೆಗೆಯುವುದು ಅನ್ನೋ ಒಂದು ಸಂಪ್ರದಾಯವಿದೆ. ಇದು ಎಲ್ಲೆಡೆಯಲ್ಲಿಯೂ ಸಾಮಾನ್ಯವಾಗಿದೆ. ವರ್ಷದಲ್ಲಿ ಯುಗಾದಿಗೆ, ಶ್ರಾವಣಕ್ಕೆ ಮತ್ತು ಆಯುಧಪೂಜೆಗೆ ಸೂತಕ ತೆಗೆಯುವುದು ವಾಡಿಕೆ. ಕೆಲವೊಮ್ಮೆ ಹತ್ತಿರದ ಸಂಭಂಧಿಗಳು ಸತ್ತರೆ, ಹೆತ್ತರೆ ಸೂತಕ ತೆಗೆಯುವುದು ಉಂಟು. ಸೂತಕ ತೆಗೆಯುವ ಸಂಧರ್ಭದಲ್ಲಿ ಮನೆಯಲ್ಲಿರುವ ಎಲ್ಲಾ ಪಾತ್ರೆ ಪಗಡೆಗಳನ್ನು ತೊಳೆಯುತ್ತಿದ್ದರು. ಶ್ರಾವಣ ಶುರುವಾಗುವ ಮುನ್ನವೇ ನಮ್ಮಮ್ಮ ನಿರ್ಧರಿಸುತ್ತಿದ್ದರು, ಯಾವ ವಾರ ಮಾಡುವುದೆಂದು. ನಾಲ್ಕು ವಾರ ಶ್ರಾವಣವಿದ್ದರೂ, ಯಾವುದಾದರು ಒಂದು ದಿನ ಮಾತ್ರ ಮಾಡಬೇಕಿತ್ತು. ಅದಾದ ಮೇಲೆ ಮನೆಯಲ್ಲಿ ಧೂಳು ಹೊಡೆಯುವುದು, ತೊಳೆಯುವುದು, ಬಣ್ಣ ಬಳಿಯುವುದು ನಡೆಯುತ್ತಿತ್ತು. ನಮ್ಮ ಮನೆ ಚಿಕ್ಕದ್ದಾದ್ದರಿಂದ ಮನೆಯ ಅರ್ಧ ಪಾತ್ರೆಗಳು ಅಟ್ಟದ ಮೇಲಿರುತ್ತಿದ್ದವು. ನಮ್ಮಮ್ಮನಿಗೆ ಪಾತ್ರೆ ತೆಗೆದುಕೊಳ್ಳುವುದೆಂದರೇ ಎಲ್ಲಿಲ್ಲದ ಅಕ್ಕರೆ. ನಾನು ಬಹಳ ಮನೆಗಳಲ್ಲಿ ನೋಡಿದ್ದೇನೆ, ಹೆಂಗಸರು ಅದೆಷ್ಟು ಪಾತ್ರೆ ಕೊಳ್ಳುತ್ತಾರೆಂದರೇ ಅಚ್ಚರಿಯಾಗುತ್ತದೆ. ಆದರೇ, ಅದ್ಯಾವುದನ್ನು ದಿನ ನಿತ್ಯವೂ ಬಳಸುವುದಿಲ್ಲ. ನಮ್ಮ ಮನೆಯಲ್ಲಿಯೇ ಹೇಳುವುದಾದರೇ, ಕನಿಷ್ಟವೆಂದರೂ ಮೂವತ್ತು ತಟ್ಟೆಗಳು, ಬೇರೆ ಬೇರೆ ಗಾತ್ರದ ಲೋಟಗಳಿವೆ. ಆದರೇ, ನಾವು ಊಟ ಮಾಡಲು ಕೊಡುವ ತಟ್ಟೆ ಬಹಳ ಹಳೆಯವು, ಚಿಕ್ಕವು. ಕುಡಿಯುವ ಲೋಟಗಳು ಅಷ್ಟೇ, ಎಲ್ಲವೂ ಅಟ್ಟದ ಮೇಲೆ ಅಧಿಕಾರ ನಡೆಸುತ್ತಿವೆ. ವರ್ಷಕ್ಕೊಮ್ಮೆ ಕೆಳಕ್ಕೆ ಇಳಿಸುವುದು ಸ್ನಾನ ಮಾಡಿಸಿ ಮಲಗಿಸುವುದು.
ಆ ದಿನಗಳಲ್ಲಿ ಅಟ್ಟದ ಮೇಲೆ ಹತ್ತಿ ಎಲ್ಲವನ್ನೂ ಇಳಿಸುವುದು, ತೊಳೆಯುವುದು ಮತ್ತೆ ಅಲ್ಲಿಗೇ ಜೊಡಿಸುವುದು ನನ್ನ ಕೆಲಸ. ಸುಣ್ಣ ಬಳಿಯುವುದಕ್ಕೆ ನಿಲ್ಲುತ್ತಿದ್ದೆ, ಆದರೇ ಗೆರೆಗೆರೆ ಬಳಿಯುತ್ತೀಯಾ ಎಂದು ಅಮ್ಮನೇ ಬಳಿಯುತ್ತಿದ್ದರು. ಸುಣ್ಣ ಬಳಿಯುವಾಗ, ಏಣಿಯನ್ನು ಇಡಿದು ನಿಲ್ಲಬೇಕಿತ್ತು. ಮತ್ತೆ ಒಂದು ಕೈಯಲ್ಲಿ ಸುಣ್ಣದ ಡಬ್ಬವನ್ನು ಎತ್ತಿ ಕೊಡಬೇಕಿತ್ತು. ಅಮ್ಮಾ, ಏಣಿಯ ಮೇಲೆ ನಿಂತು, ಬಳಿಯುತ್ತಿದ್ದರು. ಸ್ವಲ್ಪ ಆಚೆ ಈಚೆ ಆದರೇ ಅಮ್ಮನಿಂದ ಸಹಸ್ರನಾಮವಾಗುತ್ತಿತ್ತು. ಅದೆಷ್ಟು ಕಷ್ಟಪಡುತ್ತಿದರು ನಮ್ಮಮ್ಮ ಎನಿಸುತ್ತದೆ. ಎಲ್ಲ ಪಾತ್ರೆಯನ್ನು ತೊಳೆದ ಮೇಲೆ, ಬಿಸಿಲಲ್ಲಿ ಒಣಗಿಸಿ, ಮಡಿ ಬಟ್ಟೆಯಿಂದ ಒರೆಸಿ, ಕುಕ್ಕೆಯಲ್ಲಿ ತುಂಬಿ ಮತ್ತೆ ಅಟ್ಟದ ಮೇಲೆ ಇರಿಸುತ್ತಿದ್ದರು. ನಮ್ಮದು ಇದ್ದದ್ದು ಅಡುಗೆ ಮನೆ, ನಡುಮನೆ ಮತ್ತು ಬಚ್ಚಲು ಮನೆ ಮಾತ್ರ. ನಡು ಮನೆ ಕ್ಲೀನು ಮಾಡುವಾಗ ನಮ್ಮ ಬಿಡಾರ ಅಡುಗೆ ಮನೆಗೆ, ಅಡುಗೆ ಮನೆ ಬಳಿಯುವಾಗ ನಡುಮನೆಗೆ, ಅದೆಷ್ಟೋ ದಿನಗಳು, ವಕ್ರ ವಕ್ರವಾಗಿ ಮಲಗಿ ದಿನ ಕಳೆದಿದ್ದೇವೆ. ನಮ್ಮಮ್ಮ ಮುಂಜಾನೆ ಆರರಿಂದ ರಾತ್ರಿ ಹನ್ನೊಂದರ ತನಕ ಕೆಲಸ ಮಾಡಿ ಸುಸ್ತಾಗಿ ಅಡುಗೆ ಮಾಡುವುದಕ್ಕೂ ತ್ರಾಸವಿಲ್ಲದೇ ಹಾಗೆ ಮಲಗುತ್ತಿದ್ದರು. ಆ ಸಮಯದಲ್ಲಿ ನಾನು ಸ್ವಲ್ಪ ಅನ್ನ ಮಾಡಿ ಅಥವಾ ನಮ್ಮಪ್ಪ ಸ್ವಲ್ಪ ಟೋಮಾಟೋ ಸಾರು ಮಾಡಿ ಉಂಡು ಮಲಗುತ್ತಿದ್ದೆವು. ಕೆಲವೊಮ್ಮೆ ಪಕ್ಕದ ಮನೆಯವರಿಂದ ಸಾರು ತರುತ್ತಿದ್ದೆವು. ನಮ್ಮಪ್ಪನಿಗೆ ಬೇರೆಯವರ ಮನೆ ಸಾರು ಹಿಡಿಸುತ್ತಿರಲಿಲ್ಲ. ನನಗೆ ಆನಂದ, ವಿಭಿನ್ನ ರುಚಿಯಾಗಿರುತ್ತಿತ್ತು. ಪಾಪ ಕೆಲವು ಮನೆಯವರು ಕಾಯಿ ಹಾಕುತ್ತಿರಲಿಲ್ಲ. ಆಗ ಅಮ್ಮ ಹೇಳುತ್ತಿದ್ದರು, ಅಲ್ಲಾ, ಮನೆಯಲ್ಲಿರುವ ಕಾಯಿ ಹಾಕೋಕು ಕಷ್ಟನಾ? ಇನ್ನು ದುಡ್ಡು ಕೊಟ್ಟು ತರೋ ಹಾಗಿದ್ದರೇ ಏನು ಮಾಡುತ್ತಿದ್ದರೋ? ಎಂದು.
ಶ್ರಾವಣದ ಸಮಯದಲ್ಲಿ ಹಾರಂಗಿ ನಾಲಾ ನೀರು, ಊರೊಳಗೆ ಬರುತ್ತಿದ್ದರಿಂದ ಅಂಥಹ ಸಮಸ್ಯೆ ಆಗುತ್ತಿರಲಿಲ್ಲ. ಆದರೂ ನಮ್ಮಮ್ಮ ಸ್ವಲ್ಪ ಮಡಿವಂತಿಕೆ, ಕ್ಲೀನ್ ಜಾಸ್ತಿಯಾದ್ದರಿಂದ, ಕಾವೇರಿ ನಾಲೆಗೆ ಹೋಗಬೇಕು, ಅಲ್ಲಿ ನೀರು ಜೋರಾಗಿ ಹರಿಯುತ್ತದೆ. ಈ ನಾಲೆಯಲ್ಲಿ, ಗಲೀಜು ಮಾಡುತ್ತಾರೆ. ಈ ನೀರಿನಲ್ಲಿ ಎಲ್ಲವನ್ನೂ ತೊಳೆದಿರುತ್ತಾರೆ ಎನ್ನುತ್ತಿದ್ದರು. ಆಗ ನನಗೆ ವಿಪರೀತ ಕೋಪ ಬರುತ್ತಿತ್ತು. ಮನೆಯಿಂದ ಹತ್ತು ಹೆಜ್ಜೆಯಲ್ಲಿ ಹರಿಯುತ್ತಿರುವ ನೀರನ್ನು ಬಿಟ್ಟು ಒಂದು ಮೈಲಿ ದೂರದಲ್ಲಿರುವ ಕಾಲುವೆಗೆ ಹೋಗುವುದು ಯಾವ ಮೂರ್ಖತನ ಎನಿಸುತಿತ್ತು. ನಾನು ಪಾತ್ರೆ ಹೊರುವುದು, ಬಟ್ಟೆ ತೊಳೆಯುವುದು ಮಾಮೂಲಿಯಾಗಿತ್ತು. ನಮ್ಮಮ್ಮ ಬಟ್ಟೆ ತೊಳೆಯುವಾಗ ನಾನು ಪಾತ್ರೆ ತೊಳೆಯಬೇಕಿತ್ತು. ನನ್ನ ಅವಮಾನ ನನ್ನ ಮುಜುಗರ ನಮ್ಮಮ್ಮನಿಗೆ ಅರ್ಥವೇ ಆಗಲಿಲ್ಲ. ಕಾಲುವೆಗೆ ಬಂದ ಹೆಂಗಸರೆಲ್ಲಾ ನನ್ನನ್ನು ನೋಡಿ ಪರವಾಗಿಲ್ಲ ಹರಿ ಚೆನ್ನಾಗೆ ತೊಳಿತ್ತೀಯಾ ಪಾತ್ರೆಯಾ ಎಂದು ನಗುತ್ತಿದ್ದರು. ಬಟ್ಟೆ ಹೊರುವುದಕ್ಕೆ ಅಡ್ಡಿ ಇರಲಿಲ್ಲ, ಯಾಕೆಂದರೆ ಅದನ್ನು ಬೇಸಿನ್ ನಲ್ಲಿ ತುಂಬಿ ಕೊಡುತ್ತಿದ್ದರು. ಪಾತ್ರೆ ಮಾತ್ರ, ಕುಕ್ಕೆಯಲ್ಲಿ ನೀರೆಲ್ಲ ಸುರಿದು ಅಂಗಿ ಒದ್ದೆಯಾಗಿರುತ್ತಿತ್ತು.
ನಮ್ಮೂರಿನಲ್ಲಿ ಶ್ರಾವಣದ ವಿಶೇಷವೆಂದರೇ, ಎಲ್ಲರನ್ನು ಊಟಕ್ಕೆ ಕರೆಯುವುದು. ಊರಿನ ಅರ್ಧ ಜನರನ್ನು ಊಟಕ್ಕೆ ಕರೆಯಬೇಕಿತ್ತು. ಕೆಲವು ಮನೆಗಳಿಗೆ ಎಲ್ಲರೂ ನಮ್ಮ ಮನೆಯಲ್ಲಿಯೇ ಊಟಕ್ಕೆ ಬನ್ನಿ ಎನ್ನಬೇಕಿತ್ತು. ಇನ್ನು ಕೆಲವು ಮನೆಗಳಿಗೆ ಮನೆಗೆ ಒಬ್ಬರಂತೆ ಹೇಳುತ್ತಿದ್ದೆವು. ಅದರಲ್ಲಿ ಒಂದು ಮಜವಿದೆ, ನಮ್ಮ ಮನೆಗೆ ಯಾರಾದರೂ ಊಟಕ್ಕೆ ಹೇಳಲು ಬರುವಾಗ, ಅಕ್ಕಾ ಅಡುಗೆ ಮಾಡಬೇಡಿ ಎನ್ನುತ್ತಿದ್ದರು. ನಮ್ಮಪ್ಪು ಕುಳಿತಲ್ಲಿ ಅಡುಗೆ ಮಾಡಿಲ್ಲ ಅಂದ್ರೇ? ಎನುತ್ತಿದ್ದರು. ಊಟಕ್ಕೆ ಹೇಳಲು ಬಂದ ಹುಡುಗ ತಬ್ಬಿಬಾಗುತ್ತಿದ್ದ. ಬೇರೆ ಮನೆಯವರು ಆಯ್ತಪ್ಪ ಎನ್ನುತ್ತಿದ್ದರು, ನಮ್ಮನೆಯಲ್ಲಿ ತಲಹರಟೆ ಪ್ರಶ್ನೆ. ಹಾಗೆ ಮನೆಗೆ ಒಬ್ಬರಿಗೆ ಹೇಳುವಾಗ, ಅಕ್ಕಾ, ಅಣ್ಣ ಅಲ್ಲೇ ಊಟ ಮಾಡುತ್ತೇ ಎನ್ನುತ್ತಿದ್ದರು. ಆ ಸಮಯದಲ್ಲಿ ನಮ್ಮಪ್ಪ ನಾನ್ಯಾವಾಗ ಹೇಳ್ದೆ ನಿಂಗೆ ಅಲ್ಲೇ ಊಟ ಮಾಡ್ತೀನಿ ಅಂತಾ? ಎನ್ನುತ್ತಿದ್ದರು. ಊಟಕ್ಕೆ ಹೇಳಲು ಬಂದ ಹುಡುಗರು, ಹಣೆ ಬರಹವೇ ಎಂದುಕೊಂಡು ಹೋಗುತ್ತಿದ್ದರು. ಒಂದು ದಿನ ಕಡಿಮೆಯೆಂದರೂ 20-30 ಮನೆಯವರು ಊಟಕ್ಕೆ ಹೇಳುತ್ತಿದ್ದರು. ಎಲ್ಲರ ಮನೆಗೂ ಹೋಗಲೇಬೇಕಿತ್ತು. ಊಟ ಮಾಡದೇ ಇದ್ದರೂ ಸ್ವಲ್ಪ ಪಾಯಸವನ್ನಾದರೂ ಕುಡಿಯಲೇ ಬೇಕಿತ್ತು. ಕೆಲವರ ಮನೆಯವರು ಕರೆಯುತ್ತಾರೆಂದು ಕಾಯ್ದು ಕಾಯ್ದು ನಿದ್ದೆ ಬರುತ್ತಿತ್ತು. ಹತ್ತು ಹನ್ನೊಂದು ಹನ್ನೆರಡಾಗುತ್ತಿತ್ತು. ಆ ದಿನಗಳಲ್ಲಿ ನಮ್ಮನೆಯಲ್ಲಿ ಟಿವಿ ಇರಲಿಲ್ಲ, ನಾನು ಒಂಬತ್ತು ಗಂಟೆಗೆ ತಾಚಿ ಮಾಡುತ್ತಿದ್ದೆ. ನಮ್ಮಲ್ಲಿ ಸ್ನೇಹಿತರ ಮನೆಗೆ ಹೋಗಲೇ ಬೇಕಿತ್ತು, ಹಾಗೆಯೇ ಅವರುಗಳು ಬರುತ್ತಿದ್ದರು.
ಶ್ರಾವಣದ ಶನಿವಾರ ಉಪವಾಸವಿರಬೇಕಿತ್ತು. ಮುಂಜಾನೆ ಎಂಟು ಗಂಟೆಯ ಒಳಗೆ ಸ್ನಾನ ಮಾಡಿ ಶಾಲೆಗೆ ಹೋಗುತ್ತಿದ್ದೆ. ಮನೆಗೆ ಬರುವ ವೇಳೆ ಮನೆಯೆಲ್ಲಾ ತೊಳೆದು, ಶುಚಿಯಾಗಿರುತ್ತಿತ್ತು. ಅದನ್ನು ನೆನೆದರೆ ಇಂದಿಗೂ ಮನಸ್ಸು ಉಲ್ಲಾಸವಾಗುತ್ತದೆ. ನನಗೆ ಮುಂಜಾನೆ ಎದ್ದು ಮನೆಯಲ್ಲಿ ಉರಿಯುತ್ತಿರುವ ದೀಪವನ್ನು ನೋಡುವುದೆಂದರೆ ಎಲ್ಲಿಲ್ಲದ ಆಸೆ. ಮನೆ ಶುಚಿಯಾಗಿದ್ದಾಗ ಮನಸ್ಸು ಹಸನಾಗಿರುತ್ತದೆ. ನಾನು ಒಳಕ್ಕೆ ಕಾಲಿಡುವಾಗ ಬಹಳ ಖುಷಿ ಎನಿಸುತ್ತಿತ್ತು. ಶ್ರಾವಣದ ಸಾರು ಮಾಡುತ್ತಾರೆ. ಹೊಸ್ತಿಲಿಗೆ ಕುಂಬಳಕಾಯಿ ಒಡೆದು, ಕುಂಬಳಕಾಯಿ, ಆಲೊಗೆಡ್ಡೆ, ಬೀನ್ಸ್ ಕಾಳು, ಸಂಪಂಗಿ ಸೊಪ್ಪು ಹಾಕಿ ಮಾಡಿದರೇ ಬರುವ ಗಮ ಗಮ ವಾಸನೆ ಮೈ ಕಂಪಿಸುವಂತೆ ಮಾಡುತ್ತಿತ್ತು. ಸಂಜೆಯ ವೇಳೆ ಎಡೆ ಇಟ್ಟು, ದಾಸಯ್ಯನನ್ನು ಕರೆದು ತೀರ್ಥ ಹಾಕಿದರೇ ಶ್ರಾವಣ ಆಚರಿಸಿದಂತೆ. ಇಡೀ ಊರಿಗೆಲ್ಲಾ ಒಬ್ಬನೇ ದಾಸಯ್ಯ ಇದ್ದ ಕಾರಣ, ಅವರಿಗೆ ಬಹಳ ಡಿಮಾಂಡು. ಆ ಬೇಡಿಕೆಯ ನಡುವೆ ನಮ್ಮ ಮನೆಗೆ ಬೇಗ ಬರಲೆಂದು ನಮ್ಮಮ್ಮ ಅವರಿಗೆ ಕಾಫಿ, ಟೀ ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಇದು ತಮಾಷೆಗೆ ಮಾತ್ರ, ನಾನು ಹಾಗೆ ರೇಗಿಸುತ್ತಿದ್ದೆ. ನಮ್ಮಮ್ಮನನ್ನು ಕಂಡರೇ, ಬಹುತೇಕ ಇಡೀ ಬಾನುಗೊಂದಿಯೇ ಬಹಳ ಗೌರವದಿಂದ ಕಾಣುತ್ತದೆ. ಇದುವರೆಗೂ ನಮ್ಮಮ್ಮ ಒಬ್ಬರಿಗೆ ಬೈದದ್ದನ್ನು ನಾನು ಕಂಡಿಲ್ಲ. ಒಬ್ಬರ ಜೊತೆಗೆ ಜಗಳವಾಡಿಲ್ಲ. ಬಂದವರೆಲ್ಲರಿಗೂ, ಕುಡಿಯಲು ತಿನ್ನಲು ಕೊಡದ ದಿನಗಳಿರಲಿಲ್ಲ. ಇತ್ತೀಚೇಗೆ, ಬಹಳ ನೋವಿನಿಂದ ಜೀವನ ಮಾಡುತ್ತಾರೆ. ಕೆಲಸ ಮಾಡುವ ಆಸಕ್ತಿ ಕಡಿಮೆಯಾಗಿದೆ. ನಾನು ನಮ್ಮಮ್ಮನನ್ನು ಕಂಡಾಗಲೆಲ್ಲ, ನನ್ನ ಕಣ್ಣುಗಳು ತೇವವಾಗುತ್ತವೆ. ಅಷ್ಟೊಂದು ಲವಲವಿಕೆಯಿಂದ ಇದ್ದ ನಮ್ಮಮ್ಮು, ಈಗ ದಿನ ಪೂರ್ತಿ ಹಾಸಿಗೆ ಹಿಡಿದು, ಯಾವುದೋ ಲೋಕದಲ್ಲಿರುವಂತೆ ಚಿಂತಿಸುತ್ತಿರುತ್ತಾರೆ. ಈಗಲೂ ಕಣ್ಣು ಒದ್ದೆಯಾಗುತ್ತಿವೆ.
ಈ ಎಲ್ಲಾ ಆವರಣೆಗಳು ಈಗ ನನ್ನೂರಿನಿಂದ ಬಲು ದೂರಕ್ಕೆ ಹೋಗಿವೆ. ಸಂಪೂರ್ಣ ಚಿತ್ರಣವೇ ಬದಲಾಗಿದೆ. ಶ್ರಾವಣವೆಂದರೇ ಬರುವ ದಿನಗಳಲ್ಲಿ ಅದು ಒಂದು ಎನ್ನುವಂತಾಗಿದೆ. ಸೂತಕ ತೆಗೆಯುವುದು, ಊಟಕ್ಕೆ ಕರೆಯುವುದು ಮಾಯವಾಗಿದೆ. ವಾರಕ್ಕೊಮ್ಮೆ ಸ್ನಾನ ಮಾಡುತ್ತಿದ್ದ ನಾವುಗಳು ದಿನ ನಿತ್ಯ ಮಾಡಲಾಗಿದ್ದೇವೆ. ಆದರೂ ಶ್ರಾವಣವೆಂದಾಗ ನನ್ನೆಲ್ಲಾ ಬಾಲ್ಯ ನಗು ತರಿಸುತ್ತದೆ. ಸ್ನೇಹಿತರೆಲ್ಲರನ್ನು ಕರೆದು ಊಟ ಮಾಡಿಸುತ್ತಿದ್ದ ದಿನ, ನಾನು ಬಡವನೆಂಬ ಕೀಳರಿಮೆಯಲ್ಲಿಯೂ ನಗುತ್ತಿದ್ದ ದಿನಗಳು, ದೊಡ್ಡವರ ಮನೆಯರು ಊಟಕ್ಕೆ ಹೇಳಿದ ದಿನ, ಅವರು ಕರೆಯುವ ತನಕ ಕಾಯ್ದು ಊಟ ಮಾಡುತ್ತಿದ್ದ ದಿನಗಳು. ಐದು ನಿಮಿಷ ತಡವಾದರೂ ಸಹಿಸದ ನಾನು, ಹನ್ನೆರಡಾದರೂ ಹೋಗಿ ಉಂಡು ಬರುತ್ತಿದ್ದೆ. ಯಾರದ್ದೊ ಮನೆಯ ಮೂಲೆಯಲ್ಲಿ ಸದ್ದಿಲ್ಲದೇ ಊಟ ಮಾಡಿ ಬರುತ್ತಿದ್ದೆ. ಇಡೀ ಬಾಲ್ಯದ ಶ್ರಾವಣದಲ್ಲಿ ನೂರು ಮನೆಯಲ್ಲಿಯಾದರೂ ಊಟ ಮಾಡಿದ್ದೇನೆ, ಯಾರ ಮನೆಗೆ ಹೋದಾಗಲೂ ಹರಿ ಬಂದಾ ಬಾರಪ್ಪ, ಚೆನ್ನಾಗಿದ್ದೀಯಾ ಎಂದಿಲ್ಲ. ಒಳಕ್ಕೆ ಹೋಗುವುದು ಎಲ್ಲರು ಕುಳಿತಿರುವ ಪಂಕ್ತಿಯಲ್ಲಿ ಕುಳಿತುಕೊಳ್ಳುವುದು ಉಂಡು ಬರುವುದು. ಕೆಲವರ ಮನೆಯ ಹತ್ತಿರಕ್ಕೆ ಹೋದಾಗ, ಊಟ ನಡಿತಾ ಇದೇ ಇರ್ರೋ ಕುತ್ಕೊಳ್ಳಿವ್ರೀ, ಎನ್ನುತ್ತಿದ್ದರು. ಅರ್ಧ ಗಂಟೆ ಅವರ ಮನೆ ಮುಂದೆ ನಿಂತು ಉಂಡು ಬರುತ್ತಿದ್ದೆ. ಅಲ್ಪ ಮಟ್ಟದ ಹಣ ದುರಹಂಕಾರವನ್ನು ತುಂಬಿಸಿತು. ಇನ್ನೊಬ್ಬರ ಮನೆಗೆ ಹೋಗುವುದು ಅವಮಾನವೆನ್ನುವಂತಾಯಿತು. ಅಲ್ಲೊಂದು ಅಭಿಮಾನ ಅಕ್ಕರೆ, ಸಂಪ್ರದಾಯವಿತ್ತೆಂಬುದನ್ನೇ ಅಳಿಸಿಹಾಕಿದೆ.

18 ಜುಲೈ 2012

ಮೊಬೈಲ್ ಮಾಯೆ!!!

ನಾನು ಹಿಂದಿನ ಬ್ಲಾಗ್ ನಲ್ಲಿ ಬರೆದಿದ್ದೆ, ಮೊಬೈಲ್ ಮತ್ತು ನನ್ನ ಸಂಭಂಧವನ್ನು ಹೇಳುತ್ತೇನೆಂದು. ನಾನು ಮೊದಲ ಬಾರಿಗೆ ಮೊಬೈಲ್ ಎಂಬುದನ್ನು ಹಿಡಿದಿದ್ದು ಅಥವಾ ಕೊಂಡಿದ್ದು ಬಿಎಸ್ಸಿ ಮುಗಿದ ದಿನಗಳಲ್ಲಿ. ಬಿಎಸ್ಸಿ ಮುಗಿಸಿದ ನಂತರ ನಾನು ಬೆಂಗಳೂರಿಗೆ ಬಂದು ಇಲ್ಲಿ ಕೆಲಸಕ್ಕೆ ಸೇರುವುದೆಂದು ನಿರ್ಧರಿಸಿದೆ. ಆ ಸಮಯದಲ್ಲಿ ನಮ್ಮ ಭಾವನ ಮನೆಯಲ್ಲಿದ್ದು ಕೆಲಸ ಹುಡುಕುತ್ತಿದ್ದೆ. ನಮ್ಮ ಭಾವನ ಬಳಿಯಲ್ಲಿ ಹಳೆಯ ಸೀಮಾನ್ಸ್ ಮೊಬೈಲ್ ಇತ್ತು, ಅದು ರಿಂಗ್ ಆಗುವುದನ್ನು ಕೇಳಿದರೇ ಕಣ್ಣೀರು ಸುರಿಯುವಂತಿತ್ತು. ಕಿರೋ ಎನ್ನುವ ಕೀರಳು ಧ್ವನಿ. ಆ ಸಮಯಕ್ಕೆ ಭಾವನ ನಂಬರ್ ಅನ್ನು ನಾನು ಎಲ್ಲಾ ಕಡೆಯಲ್ಲಿಯೂ ಕೊಟ್ಟಿದ್ದೆ. ಬೆಂಗಳೂರೆಂಬ ದರಿದ್ರ ನಾಡಿಗೆ ಮೊದಲ ಬಾರಿ ಬಂದವನು ಬೇಗ ಬಹುಬೇಗ ಇಲ್ಲಿಂದ ದಾಟಬೇಕೆನಿಸುತ್ತದೆ. ನಾನು ಈಗ ಹೆಮ್ಮೆಯಿಂದ ಎಲ್ಲರಿಗೂ ಹೇಳುತ್ತೇನೆ, ನಮ್ಮ ಬೆಂಗಳೂರು ಎಂದು. ಸತ್ಯವಾಗಿಯೂ ಹೇಳುತ್ತೇನೆ, 2004ರಲ್ಲಿ ನಾನು ಬೆಂಗಳೂರನ್ನು ಬೈಯ್ದಷ್ಟನ್ನೂ ಇನ್ನಾರು ಬೈಯ್ದಿರಲಾರರು. ಬೆಂಗಳೂರು ನಮಗೆ ಬಹಳ ಭಯ ಹುಟ್ಟಿಸುತ್ತದೆ. ಎಂಟನೂರು ಜನರಿರುವ ಬಾನುಗೊಂದಿಯೆಂಬ ಸಣ್ಣ ಸುಂದರ ಹಳ್ಳಿಯಿಂದ ಬಂದ ನಾನು ದಿಡೀರನೇ ಅರವತ್ತು ಲಕ್ಷ ಜನರ ಈ ಸುಡುಗಾಡಿಗೆ ಬಂದರೇ, ಇಲ್ಲಿನ ಜನ, ಇಲ್ಲಿ ಏರಿಯಾಗಳು ಚೀ ಎನಿಸಿತ್ತು. ಬೆಂಗಳೂರನ್ನು ನೋಡುವುದಕ್ಕೆ ಬರುವುದಾದರೆ ಪರವಾಗಿಲ್ಲ, ಕೆಲಸ ಹುಡುಕಿಕೊಂಡು ಜೀವನ ಕಟ್ಟಿಕೊಳ್ಳಲು ಬರುವ ಹೊಸಬರು ಹುಚ್ಚಾಸ್ಪತ್ರೆ ಸೇರುವುದು ಗ್ಯಾರಂಟೀ.

ಬೆಂಗಳೂರಿಗೆ ಬಂದ ದಿನಗಳಲ್ಲಿ ನಮ್ಮ ಅಕ್ಕನ ಮನೆ ವಿಜಯನಗರದ ಪೈಪ್ ಲೈನ್ ನಲ್ಲಿತ್ತು. 87ನೇ ನಂಬರಿನ ಬಸ್ಸಿನಲ್ಲಿ ಮೆಜೆಸ್ಟಿಕ್ ಗೆ ಹೋಗುವುದು ಅಲ್ಲಿಂದ ಸುತ್ತಾಡಬೇಕಿತ್ತು. ಸತ್ಯವಾಗಿಯೂ ಹೇಳುತ್ತೇನೆ, ನಮ್ಮ ಭಾವನಿಗೆ ಇದ್ದ ತಾಳ್ಮೆ, ಸಹನೆ ನನಗೆ ಇಲ್ಲ, ಅದು ಬರುವುದೂ ಇಲ್ಲ. ನಾನು ಎಲ್ಲಿಗೆ ಹೋಗಬೇಕೆಂದರೂ ಅವರಿಗೆ ಒಂದು ರೂಪಾಯಿ ಕಾಯಿನ್ ಹಾಕಿ ಫೋನ್ ಮಾಡಿ ಕೇಳುತ್ತಿದ್ದೆ. ಬಹಳ ತಾಳ್ಮೆಯಿಂದ ವಿಳಾಸವನ್ನು ಹೇಳುತ್ತಿದ್ದರು. ಕೆಲವೊಮ್ಮೆ ಬೈಕ್ ಅನ್ನು ಕೊಟ್ಟು ಕಳುಹಿಸುತ್ತಿದ್ದರು. ಹತ್ತು ಹಲವು ಕಂಪನಿಗಳಿಗೆ ಅರ್ಜಿ ಹಾಕಿ ಇಂಟರ್ವ್ಯೂಗೆ ಹೋಗಿ ಬಂದು ಬೇಸತ್ತಿದೆ. ಅದೇ ಸಮಯಕ್ಕೆ ಬೆಂಗಳೂರು ವಿವಿಗೆ ಸೇರುವ ತೀರ್ಮಾನ ಮಾಡಿ ಕೆಲಸದ ವಿಷಯ ಕೈಬಿಟ್ಟೆ, ಅದು ಮುಂದೆ ಯಾವಾಗದರೂ ಹೇಳುತ್ತೇನೆ. ಈಗ ಮೊಬೈಲ್ ವಿಷಯವನ್ನು ಮಾತನಾಡೋಣ. ನನಗೆ ಬೆಂಗಳೂರಿಗೆ ಬಂದ ದಿನಗಳಲ್ಲಿ ಸುನೀಲ್ ಸಿಕ್ಕಿದ. ಸುನೀಲ್ ನಾನು ಮೈಸೂರಿನಲ್ಲಿ ಜೊತೆಯಲ್ಲಿಯೇ ಓದಿದ್ದೇವು. ಇಲ್ಲಿಗೆ ಬಂದಾಗ ಅವನ ಸ್ನೇಹಿತ ಶ್ರೀಕಂಠನನ್ನು ಪರಿಚಯಿಸಿದ. ಶ್ರೀಕಂಠ ಆ ಸಮಯಕ್ಕೆ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಂಸಿಎ ಓದುತ್ತಿದ್ದ. ಅವನು ಸಂಜೆ ಕಾಲೇಜಿಗೆ ಹೋಗುತ್ತಿದ್ದರಿಂದ ಬೆಳ್ಳಿಗ್ಗೆ ಆರಾಮಾಗಿರುತ್ತಿದ್ದ. ಹೊಸಕೆರೆ ಹಳ್ಳಿಯಲ್ಲಿನ ಸಾಂಕೇತಿ ಹಾಸ್ಟೇಲ್ ನಮ್ಮ ಮೀಟೀಂಗ್ ಪಾಯಿಂಟ್ ಆಯ್ತು. ಅವನು ನಮಗೆ ಗೈಡ್ ಮಾಡುತ್ತಿದ್ದ. ಅವನ ಬಳಿಯಲ್ಲಿಯೂ ಮೊಬೈಲ್ ಇಲ್ಲದಿದ್ದರಿಂದ ಅವನ ಹಾಸ್ಟೇಲ್ ಗೆ ಫೋನ್ ಮಾಡಿ ಹೋಗುತ್ತಿದ್ದೆ.

ಎರಡನೇಯ ಎಂಎಸ್ಸಿ ಸಮಯಕ್ಕೆ ಮೊದಲ ಬಾರಿಗೆ ಮೊಬೈಲ್ ತೆಗೆದುಕೊಂಡೆ. ಎರಡು ವರ್ಷ ಕಷ್ಟಪಟ್ಟು ಹಣ ಉಳಿಸಿ, ನೋಕಿಯಾ 3315 ಮೊಬೈಲ್ ತೆಗೆದುಕೊಂಡೆ. ಅದನ್ನು geometry box ಎಂದೇ ಕರೆಯುತ್ತಿದ್ದೆವು. ನಮ್ಮೂರಿಗೆ ನನ್ನದೇ ಮೊದಲನೆಯ ಮೊಬೈಲ್ ಎಂಬ ಹೆಮ್ಮೆ. AIRTEL ಊರಿನಲ್ಲಿರಲಿಲ್ಲ. ಊರಿಗೆ ಹೋದರೇ, ಊರಿಂದ ಆಚೆಗೆ, ನಮ್ಮ ಗದ್ದೆಯ ಬಳಿಗೆಹೋಗಿ ಫೋನ್ ಬಳಸಬೇಕಿತ್ತು. ಫೋನ್ ಕರೆಗಳೇನು ಬರುತ್ತಿರಲಿಲ್ಲ, ಆದರೂ ನೆಟವರ್ಕ್ ಹುಡುಕಿಕೊಂಡು, ನಾನು, ಪಾಂಡು, ಪುರುಷೋತ್ತಮ ಹೋಗುತ್ತಿದ್ದೆವು. ಸಿಗರೇಟು ಸೇದುವ ಕಾರ್ಯವೂ ಜೊತೆಯಲ್ಲಿಯೇ ಮುಗಿಯುತ್ತಿತ್ತು. ನನಗೆ ಬಹಳ ನಗು ತರಿಸುತ್ತದೆ, ಆ ಸಮಯದಲ್ಲಿ ನನಗೆ ಮೊಬೈಲ್ ಅವಶ್ಯಕತೆಯಿಲ್ಲದಿದ್ದರೂ ಕೊಂಡುಕೊಂಡಿದ್ದೆ. ಅದೇ ಸಮಯದಲ್ಲಿ ನಮ್ಮ ಭಾವ ಮೊಬೈಲ್ ಬದಲಾಯಿಸುವುದಕ್ಕೆ ನಿರ್ಧರಿಸಿದ್ದರು. ಒಂದು ಮೊಬೈಲ್ ತೆಗೆದುಕೊಳ್ಳುವುದಕ್ಕೆ ಕನಿಷ್ಟ ಒಂದೆರಡು ತಿಂಗಳಾದರೂ ಚರ್ಚೆ ಮಾಡಿದ್ದೇವೆ. ಗಾಂಧೀನಗರವನ್ನೆಲ್ಲಾ ಸುತ್ತಾಡಿ ಕಡೆಗೆ, ಐದು ಸಾವಿರ ಕೊಟ್ಟು ಸಾಮ್ಸಂಗ್ ತೆಗೆದುಕೊಂಡರು. ಕಲರ್ ಸೆಟ್ ಚೆನ್ನಾಗಿತ್ತು, ಆದರೇ ಜೋರಾಗಿ ಕೇಳುತ್ತಿರಲಿಲ್ಲ. ನನ್ನ ಮೊಬೈಲ್ ಸ್ವಲ್ಪ ಸಮಸ್ಯೆ ಕೊಡುವುದಕ್ಕೆ ಶುರುವಾಯಿತು. ಅದಲ್ಲದೇ, ಆ ಸಮಯದಲ್ಲಿ ನಾನು ನನ್ನ ಕ್ಲಾಸ್ ಮೇಟ್ಸ್ ಗಳ ಹತ್ತಿರ ಜಗಳವಾಡಿದ್ದೆ. ಹುಡುಗಿಯರೆಲ್ಲಾ, ನೋಕಿಯಾ 1100, 1108, ಹಿಡಿದು ಬರುವಾಗ ನಾನು ಹಳೇ ಮೊಬೈಲ್ ಹಿಡಿಯುವುದು ನಾಚಿಕೆ ಎನಿಸಿತ್ತು. ಅದಲ್ಲದೇ, ಪೋಸ್ಟ್ ಪೈಡ್ ಹಚ್ ನಂಬರು ತೆಗೆದುಕೊಂಡು ಸಾವಿರಾರು ರೂಪಾಯಿ ಬಿಲ್ ಬಂದಿತ್ತು. ಆ ಸಮಯದಲ್ಲಿ ಕಿರಣ ದೇವನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ, ಕೈತುಂಬಾ ಸಂಪಾದನೆಯಿತ್ತು. ಮೊಬೈಲ್ ತೆಗೆದುಕೊಳ್ಳುವುದಕ್ಕೆ ಸಾಲ ಕೇಳಿದೆ. ಅವನು ಮೂರು ಸಾವಿರ ಕೊಟ್ಟ.

ನಾನು ಉಮೇಶನಿಗೆ ಹೇಳಿದ್ದೆ, ಒಂದು ಮೊಬೈಲ್ ಕೊಡಿಸು ಎಂದು. ಅವನು ಯಾರ ಬಳಿಯಲ್ಲಿಯೂ ಕಡಿಮೆ ದುಡ್ಡಿಗೆ ಕೊಡಿಸುವುದಾಗಿ ಹೇಳಿ ಶಾಂತಿನಗರಕ್ಕೆ ಕರೆದೊಯ್ದ. ನಾನು ನೋಕಿಯಾ 1100 ತೆಗೆದುಕೊಂಡು ಖುಷಿಯಲ್ಲಿ ಬಂದೆ. ಬಂದವನು, ಕಿರಣನಿಗೆ ಮೆಜೆಸ್ಟಿಕ್ ನಲ್ಲಿ ತೋರಿಸಿದೆ. ಅವನು ನೋಡಿದ ತಕ್ಷಣ ಈ ಮೊಬೈಲ್ ಗೆ ಮೂರು ಸಾವಿರ ಕೊಟ್ಟ, ವೇಸ್ಟ್ ಎಂದ. ನನ್ನೆದೆ ಕುಸಿಯಿತು. ಯಾಕೋ? ಎಂದೆ. ಮಗಾ ಇದು ಹಳೆದು ಕನೋ? ಬೇಡ ವಾಪಸ್ಸು ಕೊಟ್ಟು ಬಿಡು ಎಂದ. ಕಿರಣನಲ್ಲಿ ನನಗೆ ಇಂದಿಗೂ ಬಹಳ ಖುಷಿ ಆಗುವ ವಿಷಯವೇ ಇದು. ಇಷ್ಟವಿಲ್ಲವೆಂದರೇ ನೇರವಾಗಿ ಹೇಳುತ್ತಾನೆ. ಯಾವತ್ತೂ ಮುಚ್ಚು ಮರೆ ಮಾಡುವುದಿಲ್ಲ, ಕಳ್ಳಾಟವಿಲ್ಲ. ಮತ್ತೇ ಉಮೇಶನಿಗೆ ಫೋನ್ ಮಾಡಿ, ನನಗೆ ಬೇಡವೆಂದೆ. ಅವನು ಸಾಕಷ್ಟು ಬೈದ. ಅವನೂ ಅಷ್ಟೇ, ಅಂದಿನಿಂದ ಇಂದಿನ ತನಕವೂ ಅದೇ ಡೈಲಾಗ್. ವಾಪಾಸ್ಸು ಹೋಗಿ ಕೊಟ್ಟವನು, ಮೆಜೆಸ್ಟಿಕ್ ನಲ್ಲಿ ರಿಲಾಯನ್ಸ್ ಜಾಹಿರಾತು ನೋಡಿದೆ. 2500 ರೂಪಾಯಿಗೆ ಹ್ಯಾಂಡ್ ಸೆಟ್ ಮತ್ತು ಕರೆ ದರಗಳು 50ಪೈಸೆ ಮಾತ್ರ. ನಿರ್ಧಾರ ಮಾಡಿಬಿಟ್ಟೇ, ನನ್ನ ಕಾಟ ತಡೆಯಲಾರದೇ, ಕಿರಣ ಮತ್ತು ಉಮೇಶ ಇಬ್ಬರೂ ನಿನಗೆ ರಿಲಾಯನ್ಸ್ ಸರಿ ಅದನ್ನೇ ತೆಗೆದುಕೋ ಎಂದರು. 2006 ಏಪ್ರಿಲ್ ಹದಿನೇಳನೇ ತಾರೀಖಿನಂದು ಕೊಂಡದ್ದು ನಾನು ಈಗ ಬಳಸುತ್ತಿರುವ ನಂಬರು. ಬಹಳ ಬಾರಿ ಬದಲಾಯಿಸುವ ಪ್ರಯತ್ನ ಪಟ್ಟರೂ ಆಗಿಲ್ಲ.

ಇದಾದ ಮೇಲೆ, ಮೂರ್ನಾಲ್ಕು ಬಾರಿ ರಿಲಾಯನ್ಸ್ ಮೊಬೈಲ್ ಕಳೆದು ಹೋಯಿತು. ಹೈದರಾಬಾದಿಗೆ ಹೋದಾಗ ಅಲ್ಲಿ ಮೂರು ಮೊಬೈಲ್ ಕಳೆದು ಹೋಯಿತು. ಕಳೆದ ವರ್ಷ ಫೀಲ್ಡ್ ಗೆ ಹೋಗಿದ್ದಾಗ, ಹೊನ್ನಾಳಿಯಲ್ಲಿ ಮೊಬೈಲ್ ಕಳೆದು ಹೋಯ್ತು, ವರ್ಷದ ಆರಂಬದ ದಿನಗಳಲ್ಲಿ, ಮತ್ತೊಂದು ಮೊಬೈಲ್ ಬಿದ್ದು ಚೂರಾಯಿತು, ಕಡೆಗೆ ಈಗಿರುವ ದರಿದ್ರ ಮೊಬೈಲ್ ಬಂದಿದೆ. ಈ ಮೊಬೈಲ್ ಬಂದಾದ ಮೇಲೆ, ಅದ್ಯಾಕೋ ದಿನವೇ ಸರಿಯಿಲ್ಲವೆನಿಸಿದೆ. ಯಾರಾದರು ಕದ್ದರೂ ಸರಿ, ಇಲ್ಲದಿದ್ದಲ್ಲಿ ತೆಗೆದು ಎಸೆಯುವ ದಿನಗಳು ದೂರವಿಲ್ಲ.

ಹಾವಿಗೆ ಹಾಲೆರೆಯುವುದ ನಿಲ್ಲಿಸು, ಕಚ್ಚೊ ನಾಯಿಯಿಂದ ದೂರವಿದ್ದು, ಪ್ರೀತಿಸು ಕಾಮಧೇನುವನ್ನು!!!


              ಕೆಲಸದ ಒತ್ತಡದ ನಡುವೆಯೂ, ಮಾನಸಿಕ ನೋವಿನ ನಡುವೆಯೂ ಇದೊಂದು ಬರವಣಿಗೆಯನ್ನು ಬರೆದು ಮುಗಿಸಲು ಪಣ ತೊಟ್ಟಿದ್ದೇನೆ. ನಾನು ಬರೆಯುತ್ತಿರುವುದು ನನ್ನ ಓದುಗ ದೇವರನ್ನು ಮೆಚ್ಚಿಸಲೂ ಅಲ್ಲಾ ಓದುಗರನ್ನು ಹಿಡಿದು ಓದಿಸಲೂ ಅಲ್ಲಾ, ಕೆಲವೊಂದು ನೋವುಗಳು ಭಾವನೆಗಳು ಆರಿ ಹೋಗುವ ಮುನ್ನಾ, ಬರೆದಿಡಬೇಕು. ಮಲಗಿದ್ದಾಗ ಕನಸು ಬಂದಾಗಲೇ ಅದನ್ನು ಬರೆದಿಡಬೇಕು, ನಿದ್ದೆ ಬಂತು ಎಂದು ಮುಖ ತಿರುಗಿಸಿ ಮಲಗಿದರೇ, ಕನಸಿನ ಅರ್ಥ, ಸೌಂದರ್ಯ ನಿಮಗೆ ಸಿಗುವುದಿಲ್ಲ. ನಾನು ಮಧ್ಯಾಹ್ನ ನಮ್ಮ ಅಜ್ಜಿಗೆಂದು ಮೊಬೈಲ್ ತರುವುದಕ್ಕಿ ಹೋಗಿದ್ದೆ. ನಮ್ಮ ಅಜ್ಜಿ ಬಹಳ ದಿನಗಳ ಹಿಂದೆಯೇ ನನಗೊಂದು ಮೊಬೈಲ್ ಕೊಡಿಸು ಎಂದು ಕೇಳಿದ್ದರು. ನನ್ನ ಎತ್ತಿ ಆಡಿಸಿ ಪೋಷಿಸಿದ ನನ್ನಜ್ಜಿ ಮೊಬೈಲ್ ಕೇಳಿದ ಕೂಡಲೇ ತೆಗೆದುಕೊಡುವ ಮನಸ್ಸು ಮಾಡಲಿಲ್ಲ. ತೆಗೆಯುವೇ ತೆಗೆಯುವೇ ಎಂದು ಹತ್ತು ತಿಂಗಳುಗಳನ್ನೇ ಕಳೆದೆ. ಇಂದು ತೆಗೆಯಲೇ ಬೇಕೆಂದು ಅಂಗಡಿಗೆ ಹೋದೆ. ಹೋದವನು ಯಥಾ ಪ್ರಕಾರ ನನ್ನ ಕುಬ್ಜ ಮನಸ್ಸಿಗೆ ಕೆಲಸ ಕೊಟ್ಟೆ. ಅಂಗಡಿಗೆ ಹೋಗುವುದಕ್ಕೇ ಮುಂಚೆಯೇ ಇಂಟರ್ನೆಟ್ ನಲ್ಲಿ ಮೊಬೈಲ್ ಮಾಡೆಲ್ ನೋಡಿದೆ. ನಾನು ಮೊಬೈಲ್ ಕೊಳ್ಳುವ ಮುನ್ನಾ ಕನಿಷ್ಠ ಹತ್ತು ಜನರಿಗೆ ಫೋನ್ ಮಾಡಿದ್ದೆ. ಮೂರ್ನಾಲ್ಕು ದಿನ ಪರದಾಡಿ, ನಂತರ ನಿಧಾರ ಮಾಡಿದ್ದೆ. ಆದರೇ ಅಜ್ಜಿಗೆ ಮೊಬೈಲ್ ತೆಗೆಯುವಾಗ ಇಂಥಹ ಯಾವೊಂದು ಚರ್ಚೆ ನಡೆಯಲಿಲ್ಲ.
                  ಯಾವುದೋ ಒಂದು ಬೇಸಿಕ್ ಮಾಡೆಲ್ ತೆಗೆದರೇ ಆಯಿತೆಂದು ನಿರ್ಧರಿಸಿದೆ. ಅಂಗಡಿಗೆ ಹೋದವನೇ, ನೋಕಿಯಾದಲ್ಲಿ ಬೆಸಿಕ್ ಮಾಡೆಲ್ ಕೊಡಿ ಎಂದೆ. ಸರ್, ಬೇಸಿಕ್ ಮಾಡೆಲ್ ಅಂದ್ರೇ ಎಂಪಿತ್ರೀ, ರೇಡಿಯೋ ಬೇಕಾ? ಎಂದಾಗ ಇಲ್ಲ ಇಲ್ಲ ಪ್ಯೂರ್ ಬೇಸಿಕ್ ಮಾಡೆಲ್ ಎಂದು ನಗುನಗುತಾ ಹೇಳಿದೆ. ಒಂದು ಮೊಬೈಲ್ ಕೊಳ್ಳುವುದಕ್ಕೆ ಎರಡು ನಿಮಿಷ ಸಾಕಾಯ್ತು. ವಿಷಯ ಎರಡು ರೀತಿಯದ್ದಿದೆ. ಮೊದಲನೆಯದು ನಾನು ಇಲ್ಲಿಯ ತನಕ ಮೊಬೈಲ್ ಗಳ ಬಗ್ಗೆ ಮತ್ತು ಮೊಬೈಲ್ ನನ್ನ ಜೀವನದಲ್ಲಿ ಆಟವಾಡಿರುವುದರ ಬಗ್ಗೆ ಹೇಳುತ್ತೇನೆ. ಎರಡನೇಯದಾಗಿ ನಾನು ನಮ್ಮ ಅಜ್ಜಿಯ ವಿಷಯದಲ್ಲಿ ನಡೆದುಕೊಂಡ ರೀತಿಯದನ್ನು ವಿವರಿಸುತ್ತೇನೆ. ನಾವು ನಮ್ಮ ತಂದೆ ತಾಯಿಯ ಅಥವಾ ಹಿರಿಯರ ವಿಷಯದಲ್ಲಿ ನಡೆದುಕೊಳ್ಳುವ ರೀತಿ ನಿಜಕ್ಕೂ ಬೇಸರವನ್ನು ತರಿಸುತ್ತದೆ. ನಿನ್ನೆ ನಾನು ಮೊಬೈಲ್ ಕೊಳ್ಳುವ ಸಮಯದಲ್ಲಿ ಕಡಿಮೆ ದುಡ್ಡಿನ ಮೊಬೈಲ್ ಅನ್ನೇ ಹುಡುಕಿದೆ ಎನಿಸುತ್ತದೆ. ಅದು ಬಳಸಲು ಸುಲಭವೆನಿಸಿದರೂ, ಜೊತೆಯಲ್ಲಿಯೇ, ಅಜ್ಜಿಗೆ ಅಲ್ವಾ? ಮಾತನಾಡುವುದಕ್ಕೇ ಮಾತ್ರ ಇರುವುದು, ಅವರಿಗೆ ರೇಡಿಯೋ, ಕ್ಯಾಮೆರಾ, ಎಂಪಿತ್ರ‍ಿ ಏನೂ ಬೇಡವೆಂದು ನಿರ್ಧರಿಸಿದೆ. ಅದೆಲ್ಲವೂ ಇರುವ ಮೊಬೈಲ್ ಕೊಡಿಸಿದರೆ ತಪ್ಪೇನು? ಉಪಯೋಗಿಸದಿದ್ದರೇ ಇರಲಿ, ಒಳ್ಳೆಯ ಮೊಬೈಲ್ ಹಿಡಿದುಕೊಂಡು ಹೋದರೆ ತಪ್ಪಿಲ್ಲವಲ್ಲ. ನಾನು ಬ್ಲಾಕ್ ಆಂಡ್ ವೈಟ್ ಅಥವಾ ಕಡಿಮೆ ಮಟ್ಟದ ಮೊಬೈಲ್ ಹಿಡಿದುಕೊಂಡು ಹೋಗಲು ಮನಸ್ಸು ಒಪ್ಪುವುದಿಲ್ಲ. ಆದರೇ, ಅಪ್ಪ ಅಮ್ಮ ಅಜ್ಜಿಯ ವಿಷಯದಲ್ಲಿ ಮಾತ್ರ ಅವರಿಗೆ ಇದು ಸಾಕು, ಅದು ಸಾಕು ಎನ್ನುತ್ತೇವೆ. ನಾನು ಒಂದು ಜೊತೆ ಚಪ್ಪಲಿಗೆ ಮೂರು ಸಾವಿರ ಕೊಡುವುದಕ್ಕೆ ಹಿಂದೂ ಮುಂದೂ ನೋಡುವುದಿಲ್ಲ ಆದರೇ ಒಂದು ಮೊಬೈಲ್ ಗೆ ಹೀಗೆ ನೋಡಬೇಕಿತ್ತಾ? ಉಪಯೋಗಕ್ಕೇ ಬಾರದವರ ಜೊತೆ ಗಂಟೆಗಟ್ಟಲೇ ಹರಟೆ ಹೊಡೆಯುದಕ್ಕೆ ಹಣ ವ್ಯಯ ಮಾಡುತ್ತೇವೆ, ಮೂರು ಕಾಸಿಗೂ ಉಪಯೋಗಕ್ಕೆ ಬಾರದವರಿಗೆ ಉಣ್ಣಿಸಿ, ತಿನ್ನಿಸಿ, ಕುಡಿಸಿ ಕಳುಹಿಸುತ್ತೇವೆ. ನಮ್ಮನ್ನು ಹೆತ್ತು ಹೊತ್ತು ನಮಗೆ ಎಲ್ಲವನ್ನೂ ಕೊಟ್ಟವರ ಮೇಲೇಕೆ ಈ ಬಗೆಯ ಅಸಡ್ಡೆ ಎನಿಸಿತು.
                    ಮೂವತ್ತು ವರ್ಷ ನಮ್ಮನ್ನು ನೋಡಿಕೊಂಡವರನ್ನು ನಾವೇಕೆ ಹೀಗೆ ವಯಸ್ಸಾಯಿತೆನ್ನುವ ಕಾರಣಕ್ಕೆ ಕಡೆಗಣಿಸುತ್ತೇವೆ. ಮೂವತ್ತು ವರ್ಷ ಕಣ್ಣಿಗೆ ಎಣ್ಣೆ ಬಿಟ್ಟು ಕಾಯ್ದ ಅವರಿಗೆ ಮೂರು ವರ್ಷ ಸೇವೆ ಮಾಡುವುದಿಲ್ಲ. ಎಲ್ಲವನ್ನೂ ಹಣದಿಂದ ತೂಗುತ್ತೇವೆ. ಎಲ್ಲರೂ ಹೀಗೆ ಮಾಡುವುದಿಲ್ಲ ಆದರೇ ನಾನು ಮಾಡಿದ್ದೇನೆ. ಇದರ ಬಗ್ಗೆ ನನಗೆ ನನ್ನ ಬಗ್ಗೆ ತೀವ್ರ ಅಸಮಾಧಾನವಿದೆ. ಬೈಕ್ ಹತ್ತಿ ಊರೂರು ಸುತ್ತುವುದಕ್ಕೆ ಸಾವಿರಾರು ಕಳೆದಿದ್ದೇನೆ, ನಾಯಿ ನರಿಗಳಿಗೆ ಹಣ ವ್ಯಯ ಮಾಡಿದ್ದೇನೆ. ನಂಬಿಸಿ ಕೈಕೊಟ್ಟ ಅನೇಕರಿಗೆ ಸಾಲತೆತ್ತಿ ಕೈ ಸುಟ್ಟುಕೊಂಡಿದ್ದೇನೆ. ಐದು ರೂಪಾಯಿ ಟೀ ಕುಡಿಸುವುದಕ್ಕೆ ಲೆಕ್ಕ ಹಾಕುವವರಿಗೆ ಸಾವಿರ ಸಾವಿರ ಚೆಲ್ಲಿದ್ದೇನೆ. ಮೋಸಗಾರರನ್ನು ಸಾಕುವ ಮನಸ್ಸು ನಮ್ಮನ್ನು ಸಾಕಿದವರನ್ನು ಯಾಕೆ ಇಷ್ಟೊಂದು ಕೆಟ್ಟದ್ದಾಗಿ ನಡೆಸಿಕೊಡುತ್ತದೆ. ದಿನಕ್ಕೆ ಒಂದು ಸಿಗರೇಟು ಕಡಿಮೆ ಮಾಡಿದರೂ, 300 ರೂಪಾಯಿ ಉಳಿಯುತ್ತದೆ, ಅದನ್ನು ಮೂರು ಜನರ ಮೊಬೈಲ್ ಗೆ ರೀಚಾರ್ಜ್ ಮಾಡಿಸಿದರೇ ತಿಂಗಳಿಡೀ ಮಾತನಾಡುತ್ತಾರೆ, ಸಂತೋಷದಿಂದಿರುತ್ತಾರೆ. ನಾವು ಬೇಕಿಲ್ಲದ ಮೂರನೇ ದರ್ಜೆ ಸಿನೆಮಾ ನೋಡುವ ದುಡ್ಡನ್ನು ನಮ್ಮ ಪೋಷಕರೆಡೆಗೆ ಹಾಕಿದರೂ ಸಾಕು ಆನಂದ ಸಾಗರದಲ್ಲಿ ಮಿಯ್ಯುತ್ತಾರೆ. ನಾನು ಮನೆಗೆಂದು ಏನನ್ನು ತೆಗೆದುಕೊಂಡು ಹೋದಾಗಲೂ ನಮ್ಮಪ್ಪ ಅಮ್ಮ ಹೇಳಿರುವುದು ಒಂದೇ ಮಾತು, ಅಯ್ಯೋ ಇದನ್ನೆಲ್ಲಾ ಯಾಕೆ ತರುತ್ತೀಯಾ? ಸುಮ್ಮನೆ ದುಂದು ವೆಚ್ಚ ಮಾಡಬೇಡ, ನೀನು ಉಳಿಸಿಕೋ ಎಂದು. ಒಂದು ಸೀರೆ ಕೊಂಡೊಯ್ದರೂ ಅಷ್ಟೇ, ನನಗೆ ಯಾಕೆ ಮನೆಯಲ್ಲೇ ಇಷ್ಟೊಂಡು ಸೀರೆ ಇಲ್ವಾ? ಎನ್ನುತ್ತಾರೆ. ಮರುಕ್ಷಣವೇ ಅರ್ಧ ಊರಿಗೆ ತೋರಿಸಿರುತ್ತಾರೆ ನಮ್ಮ ಹರಿ ತಂದಿದ್ದು, ಎಂದು.
           ನನ್ನ ಅನೇಕಾ ಮಹಾನುಭಾವರಿದ್ದಾರೆ, ಜೊತೆಯಲ್ಲಿಯೇ ಕುಡಿದಿರುತ್ತಾರೆ, ಆಮೇಲೆ ಹೇಳುತ್ತಾರೆ, ಅಯ್ಯೋ ಆ ನನ್ಮಗನ, ಅವನು ನಾಲ್ಕು ಕಾಸು ಬಿಚ್ಚಲ್ಲ, ಕಂಜ್ಯೂಸ್, ಕೇಳಿದರೇ ಕುಡಿಸಬೇಕಾಗುತ್ತೆ ಅಂತಾ ಕುಡಿಯೋದನ್ನೇ ಬಿಟ್ಟಿದ್ದೀನಿ ಅಂತಾ ನಾಟಕ ಆಡ್ತಾನೆ ಎಂದವರು ಇದ್ದಾರೆ. ನಿಯತ್ತಿಲ್ಲದ ನಾಯಿಗಳನ್ನು ಸಾಕುವುದಕ್ಕಿಂತ ಕಾಮಧೇನುವಿನಂಥಹ ಅಪ್ಪ ಅಮ್ಮನ ಬಗ್ಗೆ ಒಲವು ತೋರಿಸುವುದು ಉತ್ತಮವಲ್ಲವೇ? ನಾನು ಇಲ್ಲಿ ಯಾರನ್ನೂ ಬೆರಳು ಮಾಡಿ ತೋರಿಸುತ್ತಿಲ್ಲಾ. ಓದಿದವರಾರು ಇದು ನನಗೆ ಇವನು ಹೇಳುತ್ತಿದ್ದಾನೆಂದು ಭಾವಿಸುವುದು ಬೇಡ. ನನ್ನ ಅನೇಕ ಸ್ನೇಹಿತರು, ಗೆಳತಿಯರು ನನಗೆ ಪ್ರಾಣಕಿಂತ ಮಿಗಿಲು. ಆದರೇ, ಕೆಲವರು ದ್ರೋಹಿಗಳು ಅಷ್ಟೇ. ಜಗತ್ತನ್ನು ದುಡ್ಡಿನಿಂದಲೇ ಅಳೆದವರಿದ್ದಾರೆ ಅಂಥವರ ಬಗ್ಗೆ ಹೇಳಿದ್ದೇನು. ಅವರಿಂದ ದೂರವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ ಕೂಡ. ಆದರೂ, ಬೆನ್ನತ್ತಿ ಬರುವ ಭೂತದಂತೆ ಒಮ್ಮೊಮ್ಮೆ ಕಾಡುತ್ತಾರೆ. ಒಮ್ಮೆ ರುಚಿ ನೋಡಿದ ಬೆಕ್ಕು ಪದೇ ಪದೇ ಬರುವ ಹಾಗೆ. ಜೀವನದಲ್ಲಿ ಹಣ ಮುಖ್ಯವಾಗುವುದಿಲ್ಲ, ಕೇವಲ ಅಪ್ಪ ಅಮ್ಮ, ಮತ್ತೂ ಸತ್ಯವಾದ ನಾಲ್ಕು ಜನ ಸ್ನೇಹಿತರು. ನಿಮ್ಮ ಇರುವಿಕೆಗಾಗಿ ಬರುವವರು ನಿಮ್ಮಲ್ಲಿರುವುದನ್ನು ದೋಚುವ ತನಕ ಮಾತ್ರ. ಪ್ರೀತಿಗೆ ಬರುವವರ ನಿಮ್ಮಲ್ಲಿ ಏನೂ ಇಲ್ಲದಿದ್ದರೂ ಬರುತ್ತಾರೆ, ಜೊತೆಗಿರುತ್ತಾರೆ. ಹಾವಿಗೆ ವಿಷ ಎರೆಯುವ ಬುದ್ದಿಯನ್ನು ಬಿಡಬೇಕು ನಾವು. ಯಾವುದೋ ಮೋಹಕ್ಕೆ ಬಲಿಯಾಗಿ, ಬೇಡದ ನಾಯಿಯನ್ನು ಸಾಕಿ ಸಾಲ ಮಾಡುವುದಕ್ಕಿಂತ ಪ್ರೀತಿಯ ಅರಮನೆ ಕಟ್ಟುವುದು ಲೇಸು.

06 ಜುಲೈ 2012

ತಳ ಬುಡವಿಲ್ಲದ ಬರವಣಿಗೆ!! ಓದುವುದು ವ್ಯರ್ಥ!!!


ಎಕನಾಮಿಕ್ ಹಿಸ್ಟರಿ ಪೇಪರ್ ಮುಗಿಸಬೇಕು, ಪರಿಸರಕ್ಕೆ ಸಂಬಂದಿಸಿದ ಪೇಪರ್ ಮುಗಿಸಬೇಕು, ಡಿಎಫ಼್ ಗೆ ಕೆಲವು ನಿಯಮಗಳನ್ನು ಬರೆದು ಮುಗಿಸಬೇಕು. ಅಲ್ಲಾಡದೇ ಕೂತು ಮಾಡಿದರೂ ಮೂರು ವಾರಕ್ಕೆ ಆಗುವಷ್ಟು ಕೆಲಸವಿದೆ. ಇದರ ನಡುವೆ ಆಫೀಸಿನಲ್ಲಿ ಇಂಟರನೆಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲವಲ್ಲವೆಂದು ಯೋಚಿಸುವಾಗ ಇಂದು ಬೆಳ್ಳಗ್ಗೆ ತಲೆಯಲ್ಲಿ ಒಡಾಡಿದ ಹುಳುಗಳು ನೆನಪಿಗೆ ಬಂದೆವು. ಬೆಳ್ಳಿಗ್ಗೆ ನಳಪಾಕ ಮಾಡುವ ಸಮಯದಲ್ಲಿ, ಆ ದೇವಿಯ ಅನುಗ್ರಹದಂತೆ ಟೊಮೋಟೊ ಬಾತ್ ಮಾಡಿದೆ. ದೇವಿಯನ್ನು ನೆನಪಿಸಿಕೊಂಡು ಮಾಡಿದ್ದರಿಂದ ಅದ್ಬುತವಾಗಿಯೇ ಬಂತು. ಅದಾದ ಮೇಲೆ ಎಣ್ಣೆ ಅಂಟಿದ್ದ ಪಾತ್ರೆಗಳನ್ನು ತೊಳೆಯುತ್ತಿದ್ದೆ. ವಿಮ್ ಕಂಪನಿಯವರ ಲಿಕ್ವಿಡ್ ಹಾಕಿ ಉಜ್ಜಿದ ತಕ್ಷಣ ಎಣ್ಣೆಯಲ್ಲ ಮಾಯವಾಯಿತು. ನನಗೆ ಅನೇಕ ವಸ್ತುಗಳ ಹೆಸರು ಗೊತ್ತಿಲ್ಲ. ಅನೇಕ ಹೋಟೆಲುಗಳಿಗೆ ಹೋದಾಗಲೂ ಅಷ್ಟೇ, ಏನು ಚೆನ್ನಾಗಿದೆ ನಿಮ್ಮಲ್ಲಿ ಎಂದು ಕೇಳುತ್ತೇನೆ. ಆ ಮೆನು ನೋಡಿ ನಿರ್ಧರಿಸಿದರೇ ನಮ್ಮ ಗತಿ ಅಷ್ಟೇ. ನಾನು ವಿಜಿ ಒಮ್ಮೆ ಹೋಟೆಲಿನಲ್ಲಿ ಕುಳಿತಾಗ ಅವನು ಆರ್ಡರ್ ಮಾಡಿದ, ಹರಿಯಾಲಿನೋ ಹಳಿಯಾಲೀನೋ ಕಬಾಬ್ ಅಂತೆ, ಬಂದ ಮೇಲೆ ನೋಡಿದರೇ ವಡೆ, ಸ್ವಲ್ಪ ಪುದಿನ ಗಿದಿನ ಚೆನ್ನಾಗಿ ಹಾಕಿದ್ದರು. ಈ ವಿಷಯ ಬಂದದ್ದು ಯಾಕೆಂದರೇ, ನನಗೆ ಆ ಪಾತ್ರೆ ತೊಳೆಯುವ ಲಿಕ್ವಿಡ್ ಹೆಸರು ಗೊತ್ತಿಲ್ಲ, ಈಗೆಲ್ಲಾ ಮಾಲುಗಳಾಗಿರುವುದರಿಂದ ಕೇಳುವ ಅವಶ್ಯಕತೆ ಇಲ್ಲ. ಅಲ್ಲಿರುವುದನ್ನು ಎತ್ತು ಕೊಂಡು ಬಂದು ಬಿಲ್ ಪಾವತಿ ಮಾಡಿಬರುವುದಷ್ಟೆ.

ನನಗೆ ಚೆನ್ನಾಗಿಯೇ ನೆನಪಿದೆ, ನಾವು ಪ್ರತಿ ತಿಂಗಳ ಮೊದಲನೇ ವಾರದಲ್ಲಿ ಇಡೀ ತಿಂಗಳಿಗೆ ಬೇಕಾಗಿರುವ ಸಾಮಾನುಗಳನ್ನು ತರಬೇಕಿತ್ತು, ಅದರಲ್ಲೇನು ವಿಶೇಷ ಎನ್ನಬೇಡಿ. ಅದನ್ನು ಬರೆಯುವುದಕ್ಕೆ ಕೂರುವುದು, ಪಟ್ಟಿ ತಯಾರಿಸುವುದು ಅದ್ಬುತಾವೆನಿಸುತ್ತದೆ. ನಾನು ಹೈಸ್ಕೂಲಿಗೆ ಹೋದಮೇಲೆ ನಾನೇ ಬರೆಯುವುದು ತರುವುದು ಆಯ್ತು. ಬರೆಯುವ ಸಮಯದಲ್ಲಿ ನಾನು ಅಪ್ಪ ಅಮ್ಮ ಮೂವರು ಸಂಪೂರ್ಣವಾಗಿ ನಮ್ಮನ್ನು ತೊಡಗಿಸಿಕೊಳ್ಳುತ್ತಿದ್ದೇವು. ಅಮ್ಮಾ ಅಡುಗೆ ಮನೆಯಲ್ಲಿ ಎಲ್ಲಾ ಡಬ್ಬಿಗಳನ್ನು ನೋಡಿ ನೋಡಿ ಹೇಳುತ್ತಿದ್ದರೇ, ನಾನು ಬರೆಯುವುದು, ಅಪ್ಪ ಎಷ್ಟು ಬೇಕೆಂದು ಹೇಳುವುದು ನಡೆಯುತ್ತಿತ್ತು. ಅಮ್ಮನ ಸರದಿ ಮುಗಿದ ಮೇಲೆ, ಅಪ್ಪನ ಸರದಿ, ಬ್ಲೇಡ್, ಶೇವಿಂಗ್ ಕ್ರ‍ೀಂ ಹೀಗೆ, ಅದಾದ ನಂತರ ನನಗೆ ಬೇಕಿರುವ ಪೆನ್ನು ಪೆನ್ಸಿಲ್ ಹೀಗೆ ನಡೆಯುತ್ತಿತ್ತು. ಒಂದು ತಿಂಗಳಿಗೆ ಆಗುವಷ್ಟು ಒಮ್ಮೆ ತಂದರೇ ಮುಂದಿನ ತಿಂಗಳು ಐದನೇಯ ತಾರೀಖಿನ ತನಕ ಆ ಅಂಗಡಿಗೆ ಕಾಲು ಇಡುತ್ತಿರಲಿಲ್ಲ. ಅದಲ್ಲದೇ, ಅದೆಲ್ಲವೂ ಸಾಲದ ಲೆಕ್ಕದಲ್ಲಿ ತರುತ್ತಿದ್ದೆ. ಒಂದು ಸಾಮಾನು ಹೆಚ್ಚು ಕಡಿಮೆಯಾಗಿದ್ದರೇ ನಾಳೆ ಸ್ಕೂಲಿಗೆ ಹೋದಾಗ ಕೇಳಿಕೊಂಡು ಬರಬೇಕಿತ್ತು. ಇದಾದ ನಂತರ ಪ್ರತಿ ಗುರುವಾರ ಕೊಣನೂರಿನಲ್ಲಿ ಸಂತೆ ಇರುತ್ತಿತ್ತು. ತರಕಾರಿ ತರುವ ಜವಬ್ದಾರಿ ನನ್ನ ತಲೆಯ ಮೇಲೆ ಬಿತ್ತು. ಇಪ್ಪತ್ತು ರೂಪಾಯಿ ಕೊಡುತ್ತಿದ್ದರು, ಅದರಲ್ಲಿ ಮನೆಗೆ ಬೇಕಿರುವ ಎಲ್ಲಾ ಸಾಮಾನುಗಳನ್ನು ತೆಗೆದುಕೊಳ್ಳುತ್ತಿದ್ದೆ. ನನಗೆ ಅಚ್ಚರಿ ಏನೆಂದರೇ, ನಾನು ಈಗ ತರುವ ಅದೇ ತರಕಾರಿಯನ್ನೇ ಅಂದೂ ತರುತ್ತಿದ್ದೆ. ಹಾಗಲಕಾಯಿ, ತೊಂಡೆಕಾಯಿ, ಬದನೆಕಾಯಿ, ಆಲೂಗೆಡ್ಡೆ. ಇದರ ನಡುವೆ ನನಗೆ ಇಷ್ಟವಾಗುವ ಕರೀಮೀನು, ಒಣಗಿದ ಮೀನು, ಉಪ್ಪು ಮೀನನ್ನು ತರುತ್ತಿದ್ದೆ, ಕಡೆಯದಾಗಿ ಕಡ್ಲೆಪುರಿ ಇರಲೇಬೇಕಿತ್ತು. ಇಷ್ಟೇಲ್ಲವೂ ಇಪ್ಪತ್ತು ರೂಪಾಯಿಗೆ, ಅದರಲ್ಲಿಯೇ ಎರಡು ರೂಪಾಯಿ ಉಳಿಸಿ ಅರ್ಧ ಮಸಾಲ ಪೂರಿ ತಿಂದಿರುವ ದಿನಗಳಿವೆ.

ಇಷ್ಟೊಂದು ಪೈಸಾ ಟೂ ಪೈಸಾ ತರಕಾರಿ ತರುತ್ತಿದ್ದ ನಾನು ಈಗ ಖರ್ಚು ಮಾಡುವ ರೀತಿ ನೋಡಿ ನನ್ನ ಗೆಳತಿಯೇ ಕೇಳಿದ್ದಾಳೆ, ನಿನಗೆ ದುಡ್ಡಿನ ಬೆಲೆ ಗೊತ್ತಿಲ್ಲವೆಂದು. ಆಗ ನನ್ನ ವಾದ ಸರಣಿಯೂ ಇರುತ್ತದೆ ಬಿಡಿ. ಅದೆಲ್ಲವೂ ಬಾಯಿಯಿಂದ ಅವಳನ್ನು ಗೆಲ್ಲಲೂ ಮಾತ್ರ, ಒಳ ಮನಸ್ಸು ಹೇಳುತ್ತಿರುತ್ತದೆ ಹೌದು ನಾನು ಮಾಡುತ್ತಿರುವುದು ತಪ್ಪೆಂದು, ಒಪ್ಪಿದರೇ ಅವಳು ಇನ್ನೂ ಮೇಲೆ ಹೋಗುತ್ತಾಳೆಂಬ ಆತಂಕ. ನಾನು ಹೇಳಹೊರಟದ್ದು ಬದಲಾದ ಜೀವನ ಮತ್ತು ಜೀವನ ಪದ್ದತಿಯ ಬಗ್ಗೆ. ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ ನಾನು ಇಂಥಹ ಒಂದು ಜಗತ್ತಿದೆ ಬರುತ್ತೇನೆಂದು. ಚಿಕ್ಕವನಿದ್ದಾಗ ಅಮ್ಮ ಪಾತ್ರೆ ತೊಳೆಯುವುದಕ್ಕೆ ಪರದಾಡುತ್ತಿದ್ದ ರೀತಿ ಅಯ್ಯೋ ಎನಿಸುತ್ತದೆ. ನಮ್ಮ ಮನೆಗೆ ನಲ್ಲಿಯೂ ಇರದ ಸಮಯದಲ್ಲಿ, ಪಕ್ಕದ ಮನೆಯವರ ನಲ್ಲಿಯಲ್ಲಿ ನೀರು ಹಿಡಿಯಬೇಕಿತ್ತು, ಆಗ ಊರಿಗೆ ಟ್ಯಾಂಕ್ ಇರಲಿಲ್ಲ ಆದ್ದರಿಂದ ಕರೆಂಟ್ ಬಂದ ಸಮಯದಲ್ಲಿ ನೀರು ಬರುತ್ತಿತ್ತು, ರಾತ್ರಿ ಒಂದು ಗಂಟೆ ಎರಡು ಗಂಟೆ ಎನ್ನುವುದನ್ನು ಲೆಕ್ಕಿಸದೇ ಅಮ್ಮಾ ನೀರು ಹಿಡಿಯುತ್ತಿದ್ದರು. ನನಗೆ ಖುಷಿ ಎನಿಸುವುದು ಆ ಸಮಯದಲ್ಲಿ ನಾನು ಮಲಗಿರುತ್ತಿದ್ದೆ, ಆದರೇ ನಮ್ಮಪ್ಪ ನೀರು ಹಿಡಿಯುವುದಕ್ಕೆ ಸಹಾಯ ಮಾಡುತ್ತಿದ್ದರು. ನಮ್ಮಪ್ಪನ ಬಗ್ಗೆ ಬೇರೇನೇ ಹೇಳಿದರೂ ಅವರು ಮನೆಯ ಕೆಲಸದ ವಿಚಾರದಲ್ಲಿ ಬಹಳ ಒಳ್ಳೆಯವರು. ಅಡುಗೆ ಮಾಡಲು ಸಹಾಯ ಮಾಡಿದ ದಿನಗಳು ಇವೆ, ಅಡುಗೆ ಮಾಡಿದ ದಿನಗಳು ಇವೆ.

ಪಾತ್ರೆ ತೊಳೆಯುವುದಕ್ಕೆ ನೀರಿಗೆ ಸಮಸ್ಯೆ ಇದ್ದಾಗ, ನಮ್ಮಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಹರಿಯುತ್ತಿದ್ದ ಹಾರಂಗಿ ನಾಲೆಗೋ ಅಥವಾ ಒಮ್ಮೊಮ್ಮೆ ಮನೆಯಿಂದ ಒಂದು ಕೀಮಿ ದೂರದಲ್ಲಿ ಹರಿಯುತ್ತಿದ್ದ ಕಟ್ಟೇಪುರ ಕಾಲುವೆಗೋ ಹೋಗುತ್ತಿದ್ದರು. ಇಡೀ ದಿನದ ಪಾತ್ರೆಯಲ್ಲವನ್ನೂ ತುಂಬಿಕೊಂಡು ಕಾಲುವೆಗೆ ಹೋಗಿ ತೊಳೆದುಕೊಂಡು ಬರುವುದು ನಮ್ಮಮ್ಮ ಅನುಸರಿಸಿದ ರೀತಿ. ಇದರಲ್ಲಿ ನನಗೆ ಬಹಳ ಸಮಸ್ಯೆಯಾಗುತ್ತಿತ್ತು, ಮುಸ್ಸಂಜೆಯ ಸಮಯದಲ್ಲಿಯೂ ಅಥವಾ ಮುಂಜಾನೆಯಲ್ಲಿಯೋ ಹೋಗುತ್ತಿದ್ದರಿಂದ ನಾನು ಅವರ ಜೊತೆಗೆ ಹೋಗಬೇಕಿತ್ತು. ನಮ್ಮಪ್ಪ ಅಮ್ಮನಿಗೆ ಬೈಯ್ಯುತ್ತಿದ್ದರು, ಅದೇನು ನಿಮಗೆ ಸಂಜೆ ಸಮಯದಲ್ಲಿ ಹೋಗುತ್ತಿರಾ? ಸ್ವಲ್ಪ ಮುಂಚಿತವಾಗಿ ಹೋಗಿ ಬಂದರೇನು? ಮುಸ್ಸಂಜೆ ಹೊತ್ತು ಹೇಗಿರುತ್ತದೆಯೋ ಹೇಗೋ? ಎಂದು. ಹೆಣ್ಣು ಮಕ್ಕಳು ಮುಸ್ಸಂಜೆಯ ಸಮಯದಲ್ಲಿ ಕಾಲುವೆ ಕಡೆಗೆ ಅಥವಾ ಕಟ್ಟೆಯ ಕಡೆಗೆ ಹೋಗುತ್ತಿರಲಿಲ್ಲ. ನಮ್ಮೂರಿನ ಸುತ್ತಲೂ ಕಾವೇರಿ ಹರಿಯುತ್ತದೆ. ಅದನ್ನು ನಿಮಗೆ ಬಣ್ಣಿಸಬೇಕೆಂದರೇ, ನೀವು ಒಂದು ಹುರುಳಿ ಬೀಜವನ್ನು ತೆಗೆದುಕೊಂಡರೇ, ಅದರ ಬಲಭಾಗದಿಂದ ಬಂದು ಎಡಭಾಗದಿಂದ ಹೊರಕ್ಕೆ ಹೋಗುತ್ತಿತ್ತು, ಗೊಂದಲವಾಗಬೇಡಿ. ಸರಿಯಾಗಿ ಹೇಳುತ್ತೇನೆ. ನಮ್ಮೂರಿಗೆ ಕಾವೇರಿ ನದಿ ಬಲಕ್ಕೆ ಹರಿದು ಬಂದು ಊರಿನ ಜಮೀನನ್ನು ಬಳಸಿ ಎಡಕ್ಕೆ ಹಾದು ಹೋಗುತ್ತಿತ್ತು. ಬಲಭಾಗದಲ್ಲಿ ಹರಿಯುವ ಕಡೆ, ಊರಿನವರು ಹೋಗಿ ಬಟ್ಟೆ ಬರೆಗಳನ್ನು ತೊಳೆಯುತ್ತಿದ್ದರು, ಅಲ್ಲಿಯೇ ಹೊಳೆ ಬಸಪ್ಪನ ಗುಡಿ ಇದ್ದಿದ್ದರಿಂದ, ದೇವರು ನಮ್ಮನ್ನು ಕಾಪಾಡುತ್ತಾನೆಂಬುದು ನಂಬಿಕೆ. ಆದರೇ, ಎಡಭಾಗದಲ್ಲಿ ಅರ್ಧ ವಯಸ್ಸಿಗೆ ಸತ್ತವರನ್ನು ಸುಡುವುದು, ಊಳುವುದು ವಾಡಿಕೆಯಾಗಿತ್ತು. ಆದ್ದರಿಂದ ಕಟ್ಟೆ ಕಡೆಗೆ ಹೋಗುವುದು, ಆ ಹಾದಿಯಲ್ಲಿ ನಡೆದಾಡುವುದು ಒಳ್ಳೆಯದಲ್ಲವೆಂಬ ನಂಬಿಕೆ ಬಲವಾಗಿತ್ತು. ನಮ್ಮಮ್ಮ ಮುಸ್ಸಂಜೆಯಲ್ಲಿ ಪಾತ್ರೆ ತೊಳೆಯಲು ಹೋಗುವುದು, ಮುಂಜಾನೆಯ ಸಮಯಕ್ಕೆ ಹೋಗುವುದು ನಮ್ಮಪ್ಪನಿಗೆ ಹಿಡಿಸುತ್ತಿರಲಿಲ್ಲ. ಮೊದಲಿನಿಂದಲೂ ನಮ್ಮಮ್ಮನ ಆರೋಗ್ಯ ಸರಿ ಇಲ್ಲದಿದ್ದರಿಂದಲೂ ಸ್ವಲ್ಪ ಜಾಸ್ತಿ ಕೆಲಸ ಮಾಡಿದ ದಿನಗಳು ಸುಸ್ತಾಗಿ ಮಲಗುತಿದ್ದರು. ಆ ದಿನಗಳಲ್ಲಿ ನಮ್ಮಪ್ಪನ ಹರಿಕಥೆ ಶುರುವಾಗುತ್ತಿತ್ತು, ಬೇಡವೆಂದರೂ ಕೇಳುವುದಿಲ್ಲ, ಮುಸ್ಸಂಜೆ, ಮುಂಜಾನೆ ಹೊಳೆಗೆ ಹೋಗುವುದು ಒಳ್ಳೆಯದಲ್ಲ ಅದಕ್ಕೆ ಹೀಗೆ ಆಗುವುದು, ಅದು ಇದು ಎಂದು ಬೈಯ್ಯುತ್ತಿದ್ದರು. ಬೈಗುಳಕ್ಕೆ ಪ್ರತಿಯಾಗಿ ನಮ್ಮಮ್ಮ ಹೋಗುವುದನ್ನೇನು ನಿಲ್ಲಿಸಲಿಲ್ಲ, ಆದರೇ, ನನ್ನನ್ನು ತಮ್ಮೊಂದಿಗೆ ಕರೆದೊಯ್ಯುವುದನ್ನು ಶುರುಮಾಡಿಕೊಂಡರು.

ನಾನು ಮನೆಗೆ ಸಾಮಾನು ತರುವಾಗ, ಸಬೀನಾ ಪೌಡರ್ ಮತ್ತು ವಿಮ್ ಬಾರನ್ನು ತರುತ್ತಿದ್ದೆ. ನನಗಿಂದಿಗೂ ತಿಳಿಯದ ವಿಷಯವೆಂದರೇ, ನಮ್ಮಮ್ಮ ಅವುಗಳನ್ನು ಮಿತವಾಗಿ ಬಳಸುತ್ತಿದ್ದರು. ಅದರ ಜೊತೆಗೆ, ಸಾಮಾನ್ಯವಾಗಿ ಬೂದಿ ಮತ್ತು ಹೊಳೆ ದಂಡೆಯ ಮಣ್ಣನ್ನು ಬಳಸುತ್ತಿದ್ದರು. ನಾನು ನಮ್ಮಮ್ಮನಿಗೆ ಬೈಯ್ಯುತ್ತಿದ್ದೆ, ಅಲ್ಲಾ, ಚೆನ್ನಾಗಿರುವ ಸಬೀನಾ ಇರುವಾಗ, ವಿಮ್ ಬಾರ್ ಇರುವಾಗ ನೀವು ಈ ಬೂದಿಯಲ್ಲಿ, ಆ ಮಣ್ಣಿನಲ್ಲಿ ಪಾತ್ರೆಯನ್ನು ಉಜ್ಜುತ್ತೀರಲ್ಲಾ? ಎಂದರೇ, ಅಮ್ಮ ಸಾವಧಾನದಿಂದ ಹೇಳುತ್ತಿದ್ದರು, ವಿಮ್ ಬಾರಿಗೆ ಏನು ಕಡಿಮೆ ದುಡ್ಡಾ? ಏಳು ರೂಪಾಯಿ. ಮಣ್ಣಿಗೆ ಬೂದಿಗೆ ದುಡ್ಡು ಕೊಡಬೇಕಾ? ಸಬೀನಾ ಪುಡಿ ಜೊತೆಗೆ ಬೂದಿ ಹಾಕಿ ತೊಳೆದರೇ ಪಾತ್ರೆ ಫಳ ಫಳವೆನ್ನುತ್ತದೆ, ಎನ್ನುತ್ತಿದ್ದರು. ಇಂದಿಗೂ ಅಷ್ಟೇ ನಮ್ಮ ಮನೆಯಲ್ಲಿ ಪಾತ್ರೆ ತೊಳೆಯುವ ಜಾಗದಲ್ಲಿ, ಬೂದಿ, ಮಣ್ಣು, ವಿಮ್ ಬಾರ್, ಜೊತೆಗೆ ತೆಂಗಿನ ನಾರು ಇರುತ್ತದೆ. ನಾವು ಪರಿಸರ ಸ್ನೇಹಿ, ಮರುಪಯೋಗದ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತೇವೆ, ಆದರೇ ನಿಜಕ್ಕೂ ಅದನ್ನು ಪಾಲಿಸುತ್ತಿರುವುದು, ಹಳ್ಳಿಯವರು ಮಾತ್ರ. ನನ್ನೂರಿನಲ್ಲಿ ಪಾತ್ರೆ ತೊಳೆಯುವುದಕ್ಕೆ ದಾರಿಯಲ್ಲಿ ಬಿದ್ದಿರುತ್ತಿದ್ದ ಭತ್ತದ ಹುಲ್ಲನ್ನು ಬಳಸುತ್ತಿದ್ದರು, ತೆಂಗಿನ ನಾರು, ತೆಂಗಿನ ಕಾಯಿಯ ಜುಟ್ಟನ್ನು ಬಳಸುತ್ತಿದ್ದರು. ಇಂದಿಗೂ ಅಷ್ಟೇ, ಹಬ್ಬದ ದಿನ ಹೆಚ್ಚು ಜನರಿಗೆ ಅಡುಗೆ ಮಾಡಬೇಕಾದ್ದ ಸಂದರ್ಭದಲ್ಲಿ ಪಾತ್ರೆಗಳಿಗೆ ಹೊರಗಿನಿಂದ ಮಣ್ಣಿನಲ್ಲಿ ಸಾರಿಸುತ್ತಾರೆ, ಹಾಗೆ ಮಾಡಿದರೆ ಮಸಿ/ಕಪ್ಪಾಗುವುದಿಲ್ಲವೆಂದು. ಮನೆಯಲ್ಲಿ ಇಡ್ಲಿ ಮಾಡುವಾಗ ಇಡ್ಲಿ ಪಾತ್ರೆಗೆ ಅಮ್ಮಾ ನೀರಿಗೆ ಬೂದಿಯನ್ನಿ ಮಿಕ್ಸ್ ಮಾಡಿ ವರೆಸುತ್ತಿದ್ದರು.

ನಾನು ಇದನ್ನೆಲ್ಲಾ ಯಾಕೆ, ಹೇಳಿದನೆಂದರೇ, ನಾನು ಮುಂಜಾನೆ ಪಾತ್ರೆ ತೊಳೆಯುವಾಗ ನನಗೆ ಕಿಂಚಿಷ್ಟೂ ಶ್ರಮವೆನಿಸಲಿಲ್ಲ. ನಾಲ್ಕು ಹನಿ ವಿಮ್ ಲಿಕ್ವಿಡ್ ನಿಂದ, ಉಜ್ಜಿದೆ, ನಲ್ಲಿಯಿಂದ ನೀರಿಗೆ ಹಿಡಿದೆ, ಮುಕ್ತಾಯವಾಯಿತು. ಐದು ನಿಮಿಷದಲ್ಲಿ ಹತ್ತು ಹನ್ನೆರಡು ಪಾತ್ರೆಗಳನ್ನು ತೊಳೆದೆ. ಪಾತ್ರೆಗಳಲ್ಲಿ ಮಸಿ ಇರಲಿಲ್ಲ, ಹೆಚ್ಚು ಕೊಳಕು ಇರಲಿಲ್ಲ. ಆ ದಿನಗಳಲ್ಲಿ ಪಾತ್ರೆಗಳೆಲ್ಲಾ ಕಪ್ಪಾಗಿರುತ್ತಿದ್ದವು, ಸೌದೆಯಲ್ಲಿ ಅಡುಗೆ ಮಾಡುತ್ತಿದ್ದರಿಂದ, ಅಡುಗೆ ಮಾಡುವಾಗ ಮಾಡಿದ ಮೇಲೆ ಎಲ್ಲ ಸಮಯದಲ್ಲಿಯೂ ಕಷ್ಟವೆನಿಸುತ್ತಿತ್ತು. ಈಗ ಎಲ್ಲವೂ ಸರಾಗವಾಗಿದೆ. ಅಂಗಡಿಗೆ ಹೋಗಿ ಅಲ್ಲಿಂದ ಫೋನ್ ಮಾಡಿ, ಎಸ್ ಎಂಎಸ್ ಮಾಡಿ ಕೇಳಬಹುದು, ಬೇಕಿರುವುದನ್ನು ಆಯ್ಕೆ ಮಾಡಿಕೊಂಡು ತೆಗೆದುಕೊಂಡು ಬರಬಹುದು. ದುಡ್ಡಿಗೆ ಮಾತ್ರ ಬೆಲೆಯಿಲ್ಲ. ಇಪ್ಪತ್ತು ರೂಪಾಯಿಗೆ ಅಷ್ಟೆಲ್ಲಾ ತರುತ್ತಿದ್ದ ನಾನು, ಈಗ ಅರ್ಧ ಲೀಟರ್ ಹಾಲು, ಒಂದು ಸಿಗರೇಟು ಮತ್ತೊಂದು ಮಿಂಟ್ ತೆಗೆದುಕೊಂಡು ಬರುತ್ತೇನೆ. ಇಪ್ಪತ್ತು ರೂಪಾಯಿಗೆ ಬರುವುದು ಅಷ್ಟು ಮಾತ್ರ. ಪಟ್ಟಣದ ಅನೇಕರಿಗೆ ನಾನು ಮೇಲೆ ಹೇಳಿದ ಮಾತುಗಳು ಒಪ್ಪುವುದಿಲ್ಲ, ಹಿಡಿಸುವುದು ಇಲ್ಲ.

ಇಷ್ಟೆಲ್ಲಾ ಬರೆದ ಮೇಲೆ ನನಗೆ ಅನಿಸಿದ್ದು, ಈ ಬರವಣಿಗೆಯನ್ನು ಬರೆದಿದ್ದು ವ್ಯರ್ಥ ನೀವು ಓದಿದ್ದು ವ್ಯರ್ಥ, ತಳವಿಲ್ಲ ಬುಡವಿಲ್ಲ.

27 ಜೂನ್ 2012

ಕನಸಲ್ಲಿಯೂ ಮೆರೆದ ವಾಸ್ತವಿಕತೆ!!!





ಕಳೆದವಾರ ಮಲಗಿದ್ದಾಗ ಇದ್ದಕ್ಕಿದ್ದ ಹಾಗೆಯೇ, ಎಚ್ಚರವಾಯಿತು, ನಿಧಾನವಾಗಿ ಕಣ್ಣು ಬಿಟ್ಟು ನೋಡಿದೆ. ಕತ್ತಲಾಗಿತ್ತು, ಆದರೇ ಕಣ್ಣಿನ ಅಂಚಿನಲ್ಲಿ ನೀರಿತ್ತು. ಇದೇನು ಕಣ್ಣೀರು, ಕನಸಿನಲ್ಲಿ ಅತ್ತಿದ್ದೀನಾ? ಅಂಥಹ ಕನಸು ಏನು ಬಿತ್ತು ಎಂದು ಹಿಂದಕ್ಕೆ ತಿರುಗಿದೆ. ಇತ್ತೀಚಿನ ದಿನಗಳಲ್ಲಿ ನಾನು ಮಾತನಾಡುವಾಗ ಹಲವಾರು ಬಾರಿ, ಸಾವಿನ ಬಗ್ಗೆ ಮಾತನಾಡಿದ್ದೇನೆ, ನಾನು ಸತ್ತರೇ? ಇಂಥಹ ಕುತೂಹಲ ನನಗೂ ಇದೆ, ನಾನು ಸತ್ತರೆ ಯಾರೆಲ್ಲ ಅಳಬಹುದು, ಎಷ್ಟು ಜನ ಸೇರಬಹುದು? ನನ್ನನ್ನು ಹೊಗಳುವವರೆಷ್ಟು, ದೂರುವವರೆಷ್ಟು? ಇದರ ನಡುವೆಯೇ ಈ ಕನಸ್ಸು ಬಿದ್ದಿದ್ದು ಅಚ್ಚರಿ ಎನಿಸಿತು. ಕನಸಿನ ಎಳೆಯನ್ನು ಬಿಡಿಸುತ್ತಾ ಹೋದೆ. ನಾನು ಬೈಕಿನಲ್ಲಿ ಆಫೀಸಿಗೆ ಬರುತ್ತಿರುವಾಗ, ದಾರಿ ಮಧ್ಯದಲ್ಲಿ ಯಾವುದೋ ಲಾರಿ ನನಗೆ ಡಿಕ್ಕಿ ಹೊಡೆದು ನಾನು ಒದ್ದಾಡುತ್ತಿದ್ದೆ. ನನ್ನನ್ನು ಅಲ್ಲಿಯೇ ಇದ್ದವರು ಆಸ್ಪತ್ರೆಗೆ ಸೇರಿಸಿದರು. ಅದು ನಾಗರಭಾವಿಯ ಪನೇಷಿಯಾ ಆಸ್ಪತ್ರೆ, ನಾನು ಜ್ನಾನ ತಪ್ಪಿದ್ದೇನೆ, ಆಸ್ಪತ್ರೆಗೆ ದಾಖಲು ಮಾಡಬೇಕು, ನನ್ನ ಕಡೆಯವರು ಯಾರೂ ಇಲ್ಲ. ನನ್ನ ಮೊಬೈಲ್ ನಲ್ಲಿರುವ ನಂಬರುಗಳನ್ನು ತೆಗೆಯಲು ನೋಡುತ್ತಾರೆ ಮೊಬೈಲ್ ಚೂರು ಚೂರಾದಂತಿದೆ, ಆದರು ಆನ್ ಆಯಿತು. ಆದರೇನು ಪ್ರಯೋಜನ, ಮೊಬೈಲಿಗೆ ಕೋಡ್ ಕೊಟ್ಟಿದ್ದೇನೆ, ಅದನ್ನು ಉಪಯೋಗಿಸಲು ಬರುತ್ತಿಲ್ಲ. ಅಲ್ಲಿ ನಿಂತಿದ್ದವರು ನನ್ನನ್ನು ಬೈಯ್ಯುತ್ತಿದ್ದಾರೆ. ಹೇಗೆ ಕಂಡು ಹಿಡಿಯುವುದು ಇವನು ಯಾರ ಕಡೆಯವನು ಎನ್ನುವಾಗಲೇ, ನನ್ನ ಗಾಡಿಯಲ್ಲಿದ್ದ ನನ್ನ ಆಫೀಸಿನ ಅಕ್ಷೆಸ್ ಕಾರ್ಡು ಸಿಗುತ್ತದೆ. ಅದರ ಹಿಂದೆ ಇಂದ ನಂಬರನ್ನು ತೆಗೆದು ಆಫೀಸಿಗೆ ಕರೆ ಮಾಡುತ್ತಾರೆ.

ನಮ್ಮ ಕಾರ್ಡಿನಲ್ಲಿರುವ ನಂಬರು ಗ್ಲೋಬಲ್ ಎಡ್ಜ್ ಕಛೇರಿಯದ್ದು, ಅಂತೂ ಕುಮಾರ್ ರವರಿಗೆ ನನ್ನ ಅಪಘಾತದ ವಿಷಯ ತಲುಪುತ್ತದೆ. ತಲುಪಿದರೇನು ಬಂತು ನೋಡಲೇನು ಆತುರದಲ್ಲಿ ಬರುವುದಿಲ್ಲ. ಅಯ್ಯೋ ಪಾಪವೆಂದು ಸುಮ್ಮನಾಗುತ್ತಾರೆ. ಆಸ್ಪತ್ರೆಯಲ್ಲಿ ನಾನು ಒಬ್ಬನೇ, ನಾನು ಸತ್ತಿದ್ದೇನೆಂಬುದರ ಅರಿವು ಅಲ್ಲಿದ್ದವರಿಗಿಲ್ಲ. ಪೋಲಿಸರು ಅಲ್ಲಿಗೆ ಆಗಮಿಸುತ್ತಾರೆ. ಹೌದಾ? ಮುಗಿತು, ಇಷ್ಟೇ ಪೋಲಿಸರ ಕೆಲಸ, ಬದುಕಿದಿದ್ದರೇ ನಾಲ್ಕು ಕಾಸಾದರೂ ಸಿಕ್ಕುತ್ತಿತ್ತು, ಈಗ ಅದೆಲ್ಲವೂ ಇಲ್ಲಾ. ಪೋಲಿಸರು ಮೊದಲು ಖಾತರಿ ಮಾಡಿಕೊಳ್ಳುತ್ತಾರೆ. ಕುಡಿದು ಸತ್ತಿಲ್ಲವೆನ್ನುವುದು ತೀರ್ಮಾನವಾದ ತಕ್ಷಣ ಲಾರಿ ಡ್ರೈವರಿನ ಬಳಿಗೆ ಹೋಗುತ್ತಾರೆ, ಅವರ ಜೇಬು ತುಂಬಿಸುವ ಕೆಲಸವೂ ನಡೆಯುತ್ತದೆ. ಯಾರು ಸತ್ತರೂ ಅತ್ತರೂ ಕೆಟ್ಟರೂ ಹಳೇ ಸಿನೆಮಾದಲ್ಲಿ ಬರುವ ವಜ್ರಮುನಿ, ಸುಧೀರ್, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು ತರಹ ನಮ್ಮ ಪೋಲಿಸರು, ಡಾಕ್ಟರುಗಳು, ಕೆಲವು ಅಧಿಕಾರಿಗಳು. ನನ್ನ ಕಡೆಯವರು ಯಾರೂ ಇಲ್ಲವೆಂದು ತಿಳಿದು ಒಂದು ಮೂಲೆಗೆ ನನ್ನ ಶವವನ್ನು ತಳ್ಳುತ್ತಾರೆ. ವಿಚಿತ್ರವೆಂದರೇ ನಾನು ಸತ್ತಿರುವುದು ಅವರಿಗೆ ಇನ್ನೂ ತಿಳಿದಿಲ್ಲ, ತಿಳಿದಿಲ್ಲವೋ ಅಥವಾ ತಿಳಿಯದಂತೆ ನಾಟಕವಾಡುತ್ತಿದ್ದರೋ ನನಗೆ ತಿಳಿದಿಲ್ಲ. ನಮ್ಮ ಆಫೀಸಿಗೆ ಮತ್ತೊಮ್ಮೆ ಫೋನ್ ಮಾಡುತ್ತಾರೆ, ಆ ಸಮಯಕ್ಕೆ ಕುಮಾರ್ ಆಫೀಸ್ ಬಿಟ್ಟಿರುತ್ತಾರೆ, ಈಗ ಹೇಗೆ ಕಂಡು ಹಿಡಿಯುವುದೆಂದು ಪರದಾಡುತ್ತಿರುವಾಗಲೇ, ಕನ್ನಡ ನ್ಯೂಸ್ ಚಾನೆಲ್ ಗಳಲ್ಲಿ ಸುದ್ದಿ ಮೂಡುತ್ತದೆ.

ಸುದ್ದಿ ತಿಳಿದ ತಕ್ಷಣ ಕೆಲವು ಸ್ನೇಹಿತರು, ನೆಂಟರು ಬರುತ್ತಾರೆ. ಶವ ತೆಗೆದುಕೊಳ್ಳುವ ಸಮಯದಲ್ಲಿ ಅವರಿವರು ನಾಲ್ಕು ಕಾಸು ಖರ್ಚು ಮಾಡುತ್ತಾರೆ. ಅಂತೂ ಇಂತೂ ಶವವನ್ನು ನನ್ನೂರಿಗೆ ಸಾಗಿಸಿ ನನ್ನ ತಂದೆ ತಾಯಿಯರು ಅಳುತ್ತಾ ನನ್ನ ಶವ ಸಂಸ್ಕಾರವನ್ನು ಮುಗಿಸುತ್ತಾರೆ. ಮುಗಿದ ಮೇಲೆ ಮನೆಯಲ್ಲಿದ್ದ ನೆಂಟರು, ಬಂಧು ಭಾಂಧವರು, ನಮ್ಮಪ್ಪನನ್ನು ವಿಚಾರಿಸುತ್ತಾ ಹೋಗುತ್ತಾರೆ. ಯಾವುದಾದರೂ ಎಲ್..ಸಿ ಇತ್ತಾ? ಬೇರೆ ಏನಾದರೂ ಇನ್ಸುರೆನ್ಸ್ ಮಾಡಿಸಿದ್ದನಾ? ಆಸ್ಪತ್ರೆಯಲ್ಲಿ ಹೆಚ್ಚು ಖರ್ಚು ಆಯ್ತಾ? ಅವರ ಆಫೀಸಿನವರು ಯಾರಾದರೂ ಬಂದಿದ್ದರಾ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಬೀಳುತ್ತವೆ. ನಮ್ಮಪ್ಪನಿಗೆ ಏನು ಹೇಳಬೇಕು, ಏನು ಮಾತನಾಡುವುದು ಏನು ತೋಚುವುದಿಲ್ಲ. ಆಸ್ಪತ್ರೆಯಲ್ಲಿ ಖರ್ಚು ಏನೂ ಆಗಲಿಲ್ಲ, ಆಸ್ಪತ್ರೆಗೆ ತರುವ ಮುಂಚೆಯೇ ಜೀವ ಹೋಗಿತ್ತಂತೆ, ಅವನ ಸ್ನೇಹಿತರು ಎಲ್ಲವನ್ನೂ ನೋಡಿಕೊಂಡು ಇಲ್ಲಿಗೆ ತಂದಿದ್ದಾರೆ, ಒಳ್ಳೆಯ ಹುಡುಗರು ಅವರು ಇದ್ದಿದ್ದಕ್ಕೇ ಆಯ್ತು, ಇಲ್ಲ ಅಂದಿದ್ದರೇ ಕಷ್ಟ ಆಗುತ್ತಿತ್ತು ಅಂತಾ ಕಣ್ಣು ಒರೆಸಿಕೊಳ್ಳುತ್ತಾರೆ.

ಬಂದಿದ್ದವರು ಸುಮ್ಮನಿರುವುದಿಲ್ಲವಲ್ಲ, ನಮ್ಮವರೆಲ್ಲರೂ ಅಷ್ಟೇ ಗಮನಿಸಿ ನೋಡಿ, ಬಹಳ ವ್ಯಾವಹಾರಿಕವಾಗಿ ಮಾತನಾಡುತ್ತಾರೆ. ಆಗಬೇಕಿರುವುದೇನು, ಯಾವುದು ಮುಖ್ಯ ಅದನ್ನೇ ಹೆಚ್ಚು ಚರ್ಚಿಸುತ್ತಾರೆ. ಸತ್ತು ಹೋದವನ ತಿಕ ಅತ್ತಲೋ ಇತ್ತಲೋ ಎಂಬುದೊಂದು ಗಾದೆ ಮಾತು. ಸತ್ತ ಮೇಲೆ ಅವನ ಬಗ್ಗೆ ಯೋಚಿಸಿ ಏನೂ ಬರುವುದಿಲ್ಲ. ಮಾಡುವುದರ ಬಗ್ಗೆ ಯೋಚಿಸಬೇಕು. ಏನಾದರೂ ಚೀಟೀ ಗೀಟೀ ಹಾಕಿದ್ದನಾ ನೋಡಬೇಕಿತ್ತು, ಬ್ಯಾಂಕಿನಲ್ಲಿ ಏನಾದರೂ ಇಟ್ಟಿದ್ದಾನಾ ನೋಡಬೇಕಿತ್ತು ಎನ್ನುತ್ತಾರೆ. ನನ್ನ ಅನೇಕಾ ಸ್ನೇಹಿತರಿಗೆ ಕೋಪ ಬರುತ್ತದೆ. ಅವನು ಸತ್ತಿದ್ದಾನೆ, ಪಾಪ ಅವರಿಗೆ ಸಮಾಧಾನ ಮಾಡುವುದನ್ನು ಬಿಟ್ಟು ದುಡ್ಡಿನ ಬಗ್ಗೆ ಮಾತನಾಡ್ತಾರಲ್ಲ ಎನ್ನುತ್ತಾರೆ. ಆದರೇ ಅದು ಆ ಕ್ಷಣದ ಅನಿವಾರ್ಯತೆಯೆಂಬುದು ಹುಡುಗರಿಗೆ ಅರಿವಾಗುವುದಿಲ್ಲ. ಅವರು ಮುಂದುವರೆಸುತ್ತಾರೆ, ಆಫೀಸಿನವರು ಯಾರು ಬಂದಿರಲಿಲ್ಲವೇ? ಆಫೀಸಿನಲ್ಲಿ ಕೇಳಬೇಕಿತ್ತು. ಅವರು ಮಾಡಿಸಿರ‍್ತಾರೆ, ನಮ್ಮ ಬೆಮ್ಮತ್ತಿ ಸುಜಾತನ ಮಗ ಸತ್ತಾಗ ನೋಡ್ಲಿಲ್ವಾ ಹತ್ತು ಲಕ್ಷ ಬಂತಂತೆ, ನಮ್ಮ ಅಣ್ಣಯ್ಯಣ್ಣನ ಗಿರಿಜೆ ಗಂಡ ಸತ್ತಾಗಲೂ ಅಲ್ವಾ ಮೂರು ಲಕ್ಷ ಕೊಟ್ಟರು. ಆಫೀಸಲ್ಲಿ ಪೋಲಿಸು ಕೇಸು ಗೀಸು ಅಂತಾ ಹೆದರ‍್ಕೊಂಡು ಕೊಡ್ತಾರೆ. ಅದಕ್ಕೆ ಪಕ್ಕದ್ದಲ್ಲಿದ್ದವನು, ಇಲ್ಲಾ ಆಕ್ಸಿಡೆಂಟ್ ಗೆಲ್ಲಾ ಕೊಡಕ್ಕಿಲ್ಲ. ಅದಕ್ಕೆ ಆ ಲಾರಿಯವನ ಹತ್ತಿರ ಏನಾದರೂ ಸಿಕ್ಕಿದರೇ ಅಷ್ಟೇ, ಇಲ್ಲಂದ್ರೇ ಕೇಸು ನಡೆಸ್ಕೊಬಹುದು.

ಅದರ ಮಧ್ಯೆ ನಮ್ಮಜ್ಜಿ ಬಂದು ಹೇಳ್ತಾರೆ. ಅಯ್ಯೋ ಬಿಡಿ ಅವನೇ ಇಲ್ಲಾ ಅಂದಮೇಲೆ ದುಡ್ಡು ತಗೊಂಡು ಏನು ಮಾಡೋದು. ಸಂಬಳ ಕಮ್ಮಿ ಅಂತಾ ಪರದಾಡ್ತಾ ಇದ್ದ. ಅದರಲ್ಲೂ ಅಲ್ಲಿ ಇಲ್ಲಿ ಸ್ವಲ್ಪ ಉಳಿಸಿದ್ದರಲ್ಲೇ, ಟಿವಿ, ಫ಼್ರ‍ಿಡ್ಜ್, ವಾಷಿಂಗ್ ಮೆಷಿನ್ ಏನೇನೋ ತಂದ. ಕಳೆದ ಸಲ ಬಂದಾಗಲೂ ಅದೇ ಹೇಳ್ತಾ ಇದ್ದ, ಅವ್ವಾ ಸಂಬಳ ಸಾಲದಿಲ್ಲ, ಈಗ ಮದುವೆ ಮಾಡ್ಕೊಂಡು ಸಂಸಾರ ಮಾಡೋಕೆ ಆಗುತ್ತಾ? ನೀನೇ ಅರ್ಥ ಮಾಡಿಕೋ? ಮದುವೆ ಆಗೋಕೆ ಇಲ್ಲಾ ಅಂದ್ರು ಐದು ಲಕ್ಷ ಬೇಕು, ಬ್ಯಾಂಕಲ್ಲಿ ಐವತ್ತು ಸಾವಿರ ಇಲ್ಲ ಏನು ಮಾಡಲೀ ಅಂದ. ಐದು ಲಕ್ಷ ಯಾಕೆ ಮದುವೆಗೆ ಅಂದಿದ್ದಕ್ಕೆ, ಅಯ್ಯೋ ಬೀಗರ ಊಟಕ್ಕೆ ಬೇಕಲ್ಲವಾ, ಹತ್ತು ಕ್ವಿಂಟಲ್ ಮಟನ್ ಅಂದ್ರೂ ಮೂರು ಲಕ್ಷ, ಇನ್ನೂ ಬಟ್ಟೇ ಬರೇ ಅಂದ್ರೇ? ಹದಿನೇಳು ಜನ ಅಜ್ಜಿಯಂದಿರು, ಅವರ ಮಕ್ಕಳು, ಮೊಮ್ಮಕ್ಕಳು, ಊರಿನವರು, ಅಪ್ಪನ ಕಡೆಯವರು ಕಮ್ಮಿ ಜನನಾ? ಎಂದಿದ್ದ. ಎಂದರು. ಬ್ಯಾಂಕಲ್ಲೂ ಏನು ದುಡ್ಡು ಇಟ್ಟಿಲ್ಲ ಬಿಡಿ.

ಅದೇ ಸಮಯಕ್ಕೇ ಬೆಂಗಳೂರಿನಿಂದ ಬಂದಿದ್ದ ಕೆಲವು ಹುಡುಗರು ಹೊರಡಲು ತಯರಾಗುತ್ತಾರೆ, ಬರ್ತೀವಿ ಅಂಕಲ್ ಆಗಿದ್ದು ಆಯ್ತು ಏನೂ ಮಾಡೋಕೆ ಆಗಲ್ಲವೆನ್ನುತ್ತಾರೆ. ಅಲ್ಲಿದ್ದ ಬಹಳ ಸ್ನೇಹಿತರು ಹೊರಡುತ್ತಾರೆ. ಅವರನ್ನು ನೋಡಿದ ನಮ್ಮಜ್ಜಿ ಮತ್ತು ಕೆಲವರು ಪಾಪಾ ಈ ಹುಡುಗರು ಬಹಳ ಕಷ್ಟ ಪಟ್ಟಿದ್ದಾರೆ. ಅಲ್ಲಿಂದ ಅವರಿಲ್ಲ ಅಂದ್ರೇ ಕಷ್ಟ ಆಗ್ತಿತ್ತು ಎಂದರು. ಅಲ್ಲಿದ್ದ ಯಾರೋ ಕೇಳಿದರು ನೀವು ಅವನ ಜೊತೆ ಕೆಲಸ ಮಾಡ್ತೀರೇನಪ್ಪಾ? ಹುಡುಗರು, ಇಲ್ಲಾ ನಾವು ಜೊತೆಯಲ್ಲಿ ಓದಿದವರು ಎಂದರು. ಅವರು ಮಾತು ಮುಂದುವರೆಸುತ್ತಾ, ನೋಡ್ರಪ್ಪಾ, ಅವನು ಕೆಲಸ ಮಾಡ್ತ ಇದ್ದ ಜಾಗಕ್ಕೆ ಸ್ವಲ್ಪ ಹೋಗಿ ಮಾತಾಡಿ. ದುಡ್ಡಿನ ಆಸೆಗೆ ಅಂತಾ ಅಲ್ಲ, ಅಪ್ಪ ಅಮ್ಮ ಇಬ್ಬರೂ ವಯಸ್ಸಾಗಿದ್ದಾರೆ, ಅವರಿಗೂ ರಿಟೈರ್ಡ್ ಆಗಿದೆ. ಪಾಪಾ ಏನು ಮಾಡ್ತಾರೆ ಮುಂದಕ್ಕೆ ಅಲ್ವಾ? ವಯಸ್ಸಿಗೆ ಬಂದ ಮಕ್ಕಳು ಹೋದರೇ ಬದುಕೋಕೆ ಆಗುತ್ತಾ? ಒಬ್ಬನೇ ಮಗಾ ಬೇರೆ, ಜೊತೆಯಲ್ಲಿ ಯಾರಾದರೂ ಇದ್ದಿದ್ದರೇ ನೋಡ್ಕೊತಾ ಇದ್ರು ಈಗ ಯಾರು ನೋಡ್ಕೊತಾರೆ ಅಲ್ವಾ? ನಾವೇನು ಇಲ್ಲೇ ಇರೋಕೆ ಆಗುತ್ತಾ. ಸ್ವಲ್ಪ ಆಫಿಸಿನವರ ಜೊತೆ ಮಾತಾಡೀ.

ನಮ್ಮಪ್ಪನನ್ನು ನೋಡಿ, ಅದ್ಯಾರೋ ಪ್ರೋಫೆಸರು, ಸಿ.ಎಂ. ಜೊತೆ ಇದಾರೆ ಅಂತೀದ್ರಲ್ಲಾ ಗೌಡ್ರೇ ಅಂದರು. ಹೂಂ ಕೆ.ವಿ..ರಾಜು ಅಂತಾ ಅವರ ಬಗ್ಗೆ ಆಗ್ಗಾಗ್ಗೆ ಹೇಳ್ತಾನೇ ಇದ್ದ, ಅವರಿಂದಾನೇ ಅಲ್ಲಿಗೆ ಸೇರ್ಕೊಂಡಿದ್ದು, ಅಲ್ಲಿಲ್ಲ ಅಂದಿದ್ರೇ, ಚೆನ್ನಾಗಿಯೇ ಇರ‍್ತಿದ್ದ ಎಂದರು. ಪಕ್ಕದ್ದಲ್ಲಿದ್ದ ವಿಜಿ ಮತ್ತು ನಂದ ನಗಲಾರದೇ ಇದ್ದರೂ ಅವರೆಲ್ಲಾ ಗಿತ್ತೋದೋರು, ಅವರೆಲ್ಲಾ ಎಲ್ಲಿ ಸಹಾಯ ಮಾಡ್ತಾರೆ, ಕೆಲಸ ಮಾಡಿಸಿಕೊಳ್ಳುವುದಕ್ಕೆ ಮಾತ್ರ ಎಂದರು. ಆದರೂ, ಅಲ್ಲಿ ಕೇಳಬಹುದಲ್ವಾ, ಅವರ ಆಫರ್ ಲೆಟ್ಟರ್ ಅಲ್ಲಿ ಇರುತ್ತೇ, ಎಲ್ಲಾ ಕಂಡಿಷನ್ಸ್, ಕವರೇಜ್ ಇರುತ್ತೆ, ಹೀಗೆ ಎಲ್ಲವನ್ನು ಚರ್ಚಿಸತೊಡಗಿದರು. ಅವನ ಆಫರ್ ಲೆಟ್ಟರ್ ಎಲ್ಲಿದೆ ಹುಡುಕಿ, ನೋಡೋಣ, ಅವನ ಲ್ಯಾಪ್ ಟಾಪ್ ನಲ್ಲಿ ಇರುತ್ತೇ ನೋಡಿದರೇ ಸಿಗಬಹುದು ಎಂದು ಹುಡುಕಿದರು. ಆಫರ್ ಲೆಟ್ಟರ್ ಅನ್ನೋ ಸುದ್ದಿನೇ ಇರಲಿಲ್ಲ. ಅಲ್ಲಿಂದ ಬಂದು ಡೆವಲಪ್ ಫೌಂಡೇಶನ್ ನಲ್ಲಿ ವಿಚಾರಿಸಿದರು. ಇಲ್ಲಿ ಚರ್ಚಿಸಿದ ಮೇಲೆ ತಿಳಿದು ಬಂದ ವಿಷಯವೇನೆಂದರೇ, ಹರೀಶನಿಗೆ ಆಫರ್ ಲೆಟ್ಟರ್ ಕೊಟ್ಟಿಲ್ಲ, ಅವನು ಕಾನೂನು ಪ್ರಕಾರ ನೋಡಿದರೇ ಇಲ್ಲಿ ಕೆಲಸ ಮಾಡುತ್ತಿದ್ದ ಎನ್ನುವುದಕ್ಕೆ ಯಾವುದೇ ಸಾಕ್ಷಿಯಿಲ್ಲ, ತಿಂಗಳು ತಿಂಗಳು ಸಂಬಳ ತೆಗೆದುಕೊಂಡಿಲ್ಲವೇ? ನೀವು ಸಂಬಳಕೊಟ್ಟಿದ್ದೀರಾ ಎಂದು ಕೇಳಿದರೇ, ಅದು ಗ್ಲೋಬಲ್ ಎಡ್ಜ್ ನಿಂದ ಕೊಟ್ಟಿರುವುದು, ಅಲ್ಲಿ ನಮೂದಿಸಿರುವುದು ಕನ್ಸಲ್ಟೆಂಟ್ ಕೆಲಸಕ್ಕಾಗಿ, ಅಂದರೇ ಅದು ಖಾಯಂ ಕೆಲಸವೂ ಅಲ್ಲಾ, ಅದಕ್ಕಾಗಿ ಅವನು ದಿನ ನಿತ್ಯ ಕೆಲಸಕ್ಕೆ ಬರುತ್ತಿದನೆಂಬುದಕ್ಕೆ ಸಾಕ್ಷಿಯೂ ಇಲ್ಲ.

ಇದೆಲ್ಲವನ್ನೂ ಕೇಳಿದ ನನ್ನ ಸ್ನೇಹಿತರು, ಹೇಳಿದರು, ಹೌದು ಮಗಾ, ಎಲ್ಲರೂ ಇರುವಾಗ ಮಾತ್ರ. ನಾವು ಚೆನ್ನಾಗಿರುವಾಗ ಎಲ್ಲರೂ ಇರ‍್ತಾರೆ. ನೋಡು, ಹರೀಶ ಹೇಳ್ತಾ ಇದ್ದ, ಕೆವಿರಾಜು ಹಾಗೆ, ಕುಮಾರ್ ಹೀಗೆ, ಭಾರತ ಅಧೋಗತಿಗೆ ಇಳಿದಿದೆ, ಡೆವಲಪ್ ಮೆಂಟ್ ಫೌಂಡೇಶನ್ ಇಂದ ಒಳ್ಳೇ ಸಂಶೋಧನೆ ಮಾಡಿ ಹಾಗೆ ಮಾಡ್ತಿನಿ ಹೀಗೆ ಮಾಡ್ತಿನಿ, ನಮ್ಮ ನೀತಿ ನಿಯಮ ಆದರ್ಶ ಇಟ್ಟು ಬದುಕಬೇಕು. ನಮ್ಮ ಜನಕ್ಕೆ ಏನು ಬೇಕು ಅನ್ನೋದನ್ನು ತಿಳ್ಕೊಂಡು ಅವರಿಗೆ ಅದನ್ನು ಕೊಡಬೇಕು. ಏನೇನೋ ಹೇಳ್ತಾ ಇದ್ದ, ಈಗ, ಅವರ ಅಪ್ಪ ಅಮ್ಮನಿಗೆ ನಾಲ್ಕು ಕಾಸು ಕೊಡೋಕೂ ತಯಾರಿಲ್ಲ ಇವರ ಆಫೀಸು. ದುಡಿಯೋ ಸಮಯದಲ್ಲಿ, ಬೆಳ್ಳಿಗ್ಗೆ ಒಂಬತ್ತರಿಂದ ರಾತ್ರಿ ಒಂಬ್ಬತ್ತರ ತನಕ ದುಡಿದಿದ್ದಾನೆ. ಈಗ ನೋಡಿದರೇ ಅವನು ದುಡಿದಿರೋದಕ್ಕೆ ತಿಂಗಳು ತಿಂಗಳು ಸಂಬಳ ಕೊಟ್ಟಿದ್ದೀವಿ ಬಿಡೀ. ಎನ್ನುತ್ತಾರೆ. ಡೆವಲಪ್ ಮೆಂಟ್ ಫೌಂಡೇಶನಿನಲ್ಲಿಯೇ ದುಡ್ಡಿಲ್ಲ ಇನ್ನೂ ನಾವು ಅವನಿಗೆ ಕೋಡೋದು ಎಲ್ಲಿಂದ ಎನ್ನುತ್ತಾರೆ. ನೋಡೋಣ ಸರ್ಕಾರದಿಂದ ಏನಾದರೂ ಕೋಡಿಸೋಕೆ ಆಗುತ್ತಾ ಎನ್ನುತ್ತಾರೆ. ಸರ್ಕಾರದಿಂದ ದುಡ್ಡೂ ಬರೋ ಅಷ್ಟೋತ್ತಿಗೆ ಇವರ ಸರ್ಕಾರ ಇರುತ್ತಾ ಮಗಾ?

ಕಡಿಮೆ ಸಂಬಳ ಸಿಕ್ಕಿದರೂ ಸರ್ಕಾರಿ ಕೆಲಸ ಉತ್ತಮ್ಮ ಅಂತಾ ಅವರಪ್ಪ ಹೇಳ್ತಾ ಇದ್ದಿದ್ದು ಸರಿನೇ ಆಯ್ತಲ್ವಾ? ಕೆಲಸ ಏನು ಮಾಡ್ತೀವಿ ಅನ್ನುವಷ್ಟೇ ಮುಖ್ಯ ಎಲ್ಲಿ ಮಾಡ್ತೀವಿ ಯಾರ ಜೊತೆ ಮಾಡ್ತೀವಿ ಅನ್ನೋದು ಕೂಡ ಕನೋ ಎಂದರು. ನೋಡು ಗಾರ್ಮೇಂಟ್ಸ್ ಅಲ್ಲಿ ಕೆಲಸ ಮಾಡುವವರನ್ನ ನೋಡು, ಬರೋದು ಐದು ಸಾವಿರ ಸಂಬಳ ಹೇಗೆ ಇರ‍್ತಾರೆ, ಅವರ ಹತ್ತಿರ ಹೇಗೆ ಹೋದರೂ ಐವತ್ತು ಸಾವಿರ ದುಡ್ಡಿರುತ್ತೇ ಕನೋ. ಅವರ ಸಂಬಳದ ಹತ್ತು ಪಟ್ಟು, ನಾವು ನಮ್ಮ ಸಂಬಳದ ಹತ್ತು ಪಟ್ಟು ಸಾಲ ಮಾಡಿರ್ತಿವಿ. ಅವರು ನೋಡು ಪ್ರತಿಯೊಬ್ಬರೂ ಯಾವ್ದೋ ಒಂದು ಇನ್ಸುರೆನ್ಸ್ ಮಾಡಿಸಿರ‍್ತಾರೆ. ಇವನು ಒಂದು ಇನ್ಸುರೆನ್ಸ್ ಮಾಡಿಸಿಲ್ವಲ್ಲೋ. ಫ್ಯಾಕ್ಟರಿಲೀ ಕೆಲಸ ಮಾಡುವಾಗ ಸತ್ತರೂ ಅವರು ಎರಡು ಲಕ್ಷ ಆದರೂ ಕೊಡ್ತಾರೆ ಆದರೇ ಈ ನನ್ಮಕ್ಳು ನಾಲ್ಕು ಕಾಸು ಬಿಚ್ಚಿಲಿಲ್ಲವಲ್ಲೋ? atleast ಅವನ ಶವ ನೋಡೋಕೆ ಬರಬಹುದಿತ್ತು ಅಲ್ವಾ? ಅದಕ್ಕೇ ಮಗಾ ಜನ ಜಾಸ್ತಿ ಓದಿದವರು, ದೇಶ ಉದ್ದಾರ ಮಾಡ್ತೀನಿ ಅಂತಾ ಹೋಗೋರು ಸಾಮಾನ್ಯ ಮನುಷ್ಯರ ಭಾವನೆಗೆ ಬೆಲೆ ಕೊಡಲ್ಲ, ಅವರಿಗೆ ದೊಡ್ಡೋರು ಮಾತ್ರ ಕಣ್ಣಿಗೆ ಕಾಣ್ತಾರೆ, ಸಣ್ಣವರು ಕಾಣಲ್ಲ. ಅವರು ಮಾತನಾಡುತ್ತಿರುವಾಗಲೇ ನನ್ನ ಕಣ್ಣಲ್ಲಿ ನೀರು ಬಂದಿದ್ದು. ನಾವು ನಮ್ಮ ಮನೆಯವರ ನೆಮ್ಮದಿಗೆ ಕನಸು ಕಾಣುವುದನ್ನು ಬಿಟ್ಟು ದೇಶದ ಬಗ್ಗೆ ಕಂಡರೇ ಅರ್ಥವಿರುವುದಿಲ್ಲ, ಆದ್ದರಿಂದ ನಾನು ಡೆವಲಪ್ ಮೆಂಟ್ ಫೌಂಡೇಶನ್ ಕೆಲಸ ಬಿಟ್ಟು, ನೆಮ್ಮದಿಯ ಬದುಕನ್ನು ಕಟ್ಟಿಕೊಡುವ ಸಂಸ್ಥೆಗೆ ಸೇರಲು ನಿರ್ಧರಿಸಿದ್ದೇನೆ.

12 ಜೂನ್ 2012

ನಿನ್ನಯ ಅರ್ಥಪೂರ್ಣ ಬದುಕಿಗೆ ನನ್ನ ಅರ್ಥ ಪೂರ್ಣ ಶುಭಕಾಮನೆಗಳು...!!!

ನಾನು ಏನನ್ನೋ ಬರೆಯುತ್ತಿದ್ದವನು ದಿಡೀರನೇ, ಫೇಸ್ ಬುಕ್ ನೋಡಿದೆ, ಅಲ್ಲಿ ಮಂಜೇಸ್ ಹುಟ್ಟಿದ ದಿನವನ್ನು ತೋರಿಸುತ್ತಿತ್ತು. ಹದಿನೈದು ದಿನಗಳ ಹಿಂದೆ ನೆನಪು ಮಾಡಿಕೊಂಡಿದ್ದೇ, ನಾನು ಮಂಜೇಶ್ ಮತ್ತು ಅಭಿನಂದನ್ ಗೆ ತಪ್ಪದೇ ಶುಭಾಷಯಕೋರಬೇಕೆಂದು ಆದರೇ, ಬಹಳ ತಡವಾದೆ. ಇದು ಮೊದಲನೆಯ ಬಾರಿಯಲ್ಲ. ಜನ್ಮ ದಿನದಂದು ಶುಭಾಷಯ ಕೋರಲಿಲ್ಲವೆಂದು ಬಹಳಷ್ಟು ಜನರ ಜೊತೆಗೆ ಜಗಳಮಾಡಿಕೊಂಡಿದ್ದೇನೆ. ಮೊನ್ನೆಯೂ ಅದೇ ರೀತಿಯ ಘಟನೆ ನಡೆಯಿತು. ಜೂನ್ ಒಂದನೇಯ ತಾರಿಖಿನಂದು ನಮ್ಮೂರ ಹಬ್ಬವಿತ್ತು. ಊರಿನಲ್ಲಿ ಹುಡುಗರೆಲ್ಲರೂ ಸೇರುವುದು, ನಂದ ಮತ್ತು ಕುಮಾರನ ಹುಟ್ಟಿದ ದಿನ ಜೂನ್ ಎರಡಾಗಿರುವುದರಿಂದ ಜೂನ್ ಒಂದರ ರಾತ್ರಿ ಅವರ ಜನ್ಮ ದಿನವನ್ನು ಆಚರಿಸೋಣವೆಂದು ನಂದ ಮತ್ತು ಕುಮಾರ ಇಬ್ಬರಿಗೂ ಹೇಳಿದ್ದೆ. ನಂದ ಆ ದಿನ ಬರಲಿಲ್ಲ, ಕುಮಾರ ಬಂದಿದ್ದ. ಕುಮಾರನ ಪಕ್ಕದಲ್ಲಿಯೇ ಕುಳಿತಿದ್ದೆ, ರಾತ್ರಿ. ಅದೇ ಸಮಯಕ್ಕೆ ನಂದನೂ ಫೋನ್ ಮಾಡಿದ್ದ. ಇಬ್ಬರಿಗೂ ಶುಭಾಷಯ ಕೋರಲಿಲ್ಲ. ಬೆಳ್ಳಿಗ್ಗೆ ಎದ್ದು ಬಹಳ ಬೇಸರವಾಯಿತು. ಜೊತೆಯಲ್ಲಿಯೇ ಕುಳಿತ್ತಿದ್ದರೂ ಅವರ ಜನುಮದಿನವನ್ನು ಆಚರಿಸಲಿಲ್ಲವಲ್ಲ. ಅದೂ ಹತ್ತು ಹನ್ನೆರಡು ಹುಡುಗರಿದ್ದರು. ಅವರೆಲ್ಲರೂ ಶುಭಕೋರಿದಿದ್ದರೇ ಎಂಥಹ ರೋಮಾಂಚನ ವಾತಾವರಣವನ್ನು ನಿರ್ಮಿಸಬಹುದಿತ್ತು. ಇದು ನನ್ನ ಬೇಜವಬ್ದಾರಿತನವೆನಿಸುತ್ತದೆ.
ಆದ್ದರಿಂದ ಇದೇ ಸಮಯವನ್ನು ಬಳಸಿಕೊಂಡು ಮಂಜೇಶನ ಬಗ್ಗೆ ನಾಲ್ಕು ಸಾಲುಗಳನ್ನು ಗೀಚುತ್ತೇನೆ. ಮಂಜೇಶನನ್ನು ನಾನು ಮೊದಲಿಗೆ ಕಂಡದ್ದು, ನನ್ನ ಪಿಯು ಬದುಕಿನ ಮೊದಲ ದಿನಗಳಲ್ಲಿ. ಅವನು ಅಂದಿಗೇ ಒಬ್ಬ ಬುದ್ದಿವಂತೆ ಮತ್ತು ಕೇವಲ ನನ್ನ ಕ್ಲಾಸ್ ಮೇಟ್. ನಾನು ಮೊದಲ ಸ್ವಲ್ಪ ದಿನಗಳು, ಮನೆಯಿಂದ ಬಾಕ್ಸ್ ತೆಗೆದುಕೊಂಡು ಹೋಗುತ್ತಿದ್ದೆ. ಸರ್ಕಾರಿ ಶಾಲಾ ಮೈದಾನದಲ್ಲಿ ಕುಳಿತು ಎಲ್ಲರೂ ಒಟ್ಟಿಗೆ ತಿಂಡಿ ತಿನ್ನುತ್ತಿದ್ದೆವು. ಬಾಕ್ಸ್ ತರುತ್ತಿದ್ದವರು ಮುಂದಿನ ಸಾಲಿನವರು, ಹೆಚ್ಚಿನ ಮಟ್ಟಿಗೆ ಗಾಂಧಿಗಳು ಎನ್ನಬಹುದು. ಅವರ ವಿರೋಧವೇನೇ ಇದ್ದರೂ ನಾನು ಅವರನ್ನು ಹಾಗೇಯೇ ಕರೆಯುತ್ತಿದ್ದೇನೆ. ನಿಮಗೆ ಬೇಸರವೆನಿಸಬಹುದು, ಆ ದಿನಗಳಲ್ಲಿ ನಾನು ಸ್ವಲ್ಪ ಮುಂದುವರೆದಿದ್ದೆ, ಅಂದರೇ, ಪ್ರಬುದ್ದತೆಯ ಕಡೆಗೆ ದಾಪುಗಾಲು ಹಾಕಿದ್ದೆ. ಪಿಯುಸಿಯಲ್ಲಿದ್ದಾಗ ನನ್ನೆಲ್ಲಾ ಯೋಚನೆಗಳು ಸಾಕಷ್ಟು ಮಟ್ಟಿಗೆ ಕುಡಿಯುವುದು, ಸೇದುವುದು, ಪಿಯುಸಿ ಫೇಲಾಗಿ ದುಡ್ಡು ಮಾಡುವುದರ ಬಗ್ಗೆಯೇ ಯೋಚಿಸುತ್ತಿದ್ದೆ. ಆಗ, ಊಟದಲ್ಲಿದ್ದ ಸಮಯದ್ದಲ್ಲಿ, ಬೆಳ್ಳಿಗ್ಗೆ ನಡೆದಿರುತ್ತಿದ್ದ ಎರಡು ಕ್ಲಾಸುಗಳ ಬಗ್ಗೆ, ಅಥವಾ ನಿನ್ನೆ ಲ್ಯಾಬಿನಲ್ಲಿ ನಡೆದಿರುವ ಘಟನೆಗಳ ಬಗ್ಗೆ, ಪ್ರಭದೇವ, ಪುರುಷೋತ್ತಮ ಹೇಳಿರುವ ಡೈಲಾಗುಗಳನ್ನು ಹಾಗೆಯೇ ಹೇಳುತ್ತಿದ್ದ ಒಬ್ಬ ವ್ಯಕ್ತಿಯೇ ಈ ಮಂಜೇಶ್ ಎಂಬುವನು. ಅವನು ಬಹಳ ಬುದ್ದಿವಂತ ಕನ್ನಡ ಮಾಧ್ಯಮದಿಂದ ಬಂದಿದ್ದರೂ ಬಹಳ ಶ್ರಮ ಹಾಕಿ ಓದುತ್ತಿದ್ದ, ಬಹಳ ಚುರುಕಾಗಿದ್ದ. ಅವನು ವಿಜ್ನಾನವಲ್ಲದೇ ಕಲಾ ವಿಭಾಗಕ್ಕೆ ಸೇರಿದಿದ್ದರೇ ನಿಜಕ್ಕೂ ಐಎಎಸ್ ಮಾಡುತ್ತಿದ್ದನೆಂಬುದು ನನ್ನ ಅಭಿಪ್ರಾಯ. ಪಿಯುಸಿಯಲ್ಲಿ ಆಗೊಮ್ಮೆ ಈಗೊಮ್ಮೆ ನಮ್ಮ ರೂಟಿನ ಬಸ್ಸಿನಲ್ಲಿ ಬರುತ್ತಿದ್ದ. ಇಲ್ಲದಿದ್ದರೇ ಅವನು ಸೋಮವಾರಪೇಟೆಯ ಬಸ್ಸಿನಲ್ಲಿ ಹೋಗುತ್ತಿದ್ದ.
ನನಗೂ ಓದುವ ಹುಡುಗರಿಗೂ ಆಗಿಬರುತ್ತಿರಲಿಲ್ಲ. ಆದ್ದರಿಂದ ನಾನು ಹೆಚ್ಚೇನೂ ಮಾತನಾಡಿಸುತ್ತಿರಲಿಲ್ಲ. ನಗು ಮುಖದಿಂದ ಅವನು ಎಲ್ಲರನ್ನು ಮಾತನಾಡಿಸಿದರು, ನಾನು ಅವನನ್ನು ಅಷ್ಟೇ ನಗು ಮುಖದಿಂದ ಮಾತನಾಡಿಸಿರುವುದು ಕಣ್ಣಿಗೆ ಸಿಗುತ್ತಿಲ್ಲ. ಎರಡನೆಯ ಪಿಯುಸಿಯ ಸಮಯದಲ್ಲಿ, ಟ್ಯೂಷನ್ನಿಗೆ ಹೋಗುವ ಸಮಯದಲ್ಲಿ, ಆಗ್ಗಾಗ್ಗೆ ಮಾತಿಗೆ ಸಿಗುತ್ತಿದ್ದ. ಅವನೊಂದಿಗೆ ನಮ್ಮ ಬ್ಯಾಚಿನ ಲ್ಯಾಬಿಗೆ ಬರುತ್ತಿದ್ದರಿಂದ, ಲ್ಯಾಬರೇಟರಿ, ರೆಕಾರ್ಡು, ನೋಟ್ಸ್ ಬಿಟ್ಟರೇ ಮತ್ತೇನೂ ಇರಲಿಲ್ಲ. ಅದೇ ಸಮಯಕ್ಕೆ ನನಗೆ ಬಿಂಧ್ಯಾ ಮತ್ತು ಸೌಮ್ಯಳ ಮೇಲೆ ನನಗೆ ತಿಳಿಯದ ಒಂದು ಶತ್ರುತ್ವ ಬೆಳೆದಿತ್ತು. ಮಂಜೇಶ ಅವರ ಜೊತೆಯಲ್ಲಿ ಚೆನ್ನಾಗಿದ್ದ ಕಾರಣ, ಮಂಜೇಶ, ವಿನೇಶನನ್ನು ಮಾತನಾಡಿಸುವುದನ್ನು ಕಡಿಮೆ ಮಾಡಿದ್ದೆ. ಮನುಷ್ಯನ ಸ್ವಭಾವವೇ ಹಾಗೆ, ನಾವು ಇಷ್ಟಪಟ್ಟವರು ಹೇಗಿದ್ದರೂ ಒಪ್ಪಿಕೊಳ್ಳುತ್ತೇವೆ, ಇಷ್ಟವಿಲ್ಲದೇ ಇದ್ದರೇ ಅಮೃತವೂ ಪಾಶಾನದಂತೆನಿಸುತ್ತದೆ. ಅದಾದ ಮೇಲೆ ಅವನನ್ನು ಒಂದು ದಿನ ಮೈಸೂರಿನಲ್ಲಿ ಕಂಡಿದ್ದೆ. ರಾಮಸ್ವಾಮಿ ಸರ್ಕಲ್ ನಿಂದ ಕೆಳಕ್ಕೆ ನಡೆದುಬರುವಾಗ ಸಿಕ್ಕಿದ್ದ, ಬಿಎಡ್ ಮಾಡುತ್ತಿದ್ದೇನೆಂದು ಹೇಳಿದ ನೆನಪನ್ನು ಬಿಟ್ಟರೇ ಮತ್ತಾವ ನಂಟು ಉಳಿದಿರಲಿಲ್ಲ.
ಇದಾದ ಬಹಳ ವರ್ಷಗಳ ತರುವಾತ ನಮ್ಮ ಭೇಟಿಯಾದದ್ದು, 2007ರಲ್ಲಿ. ಆ ಸಮಯದಲ್ಲಿ ನಮ್ಮೆಲ್ಲಾ ಪಿಯುಸಿ ಹುಡುಗರನ್ನು ಮತ್ತೆ ಸೇರಿಸಲು ಪ್ರಯತ್ನಿಸತೊಡಗಿದೆವು. ನನಗಿಂದಿಗೂ ನೆನಪಿದೆ, ಆ ದಿನಗಳು ನನಗೆ ಬಹಳ ಮುದ ನೀಡಿದ ಕ್ಷಣಗಳು. ನಾನು ನಂದಗೋಪಾಲ, ಬಿಸಿಲೆ ಘಾಟಿನಲ್ಲಿ ನಿಂತಿದ್ದೇವು, ಅಲ್ಲಿಗೆ ಒಂದು ಐದಾರು ಹುಡುಗರು ಕೂಗಾಡುತ್ತ ಬಂದರು. ಅವರು ಬರುವುದನ್ನು ಕಂಡು ನಾನು ನಂದನಿಗೆ ಹೇಳಿದೆ, ಇಂಥಹ ರೋಮಾಂಚಕ ಸ್ಥಳ ದರಿದ್ರ ಜನರು ನೆಮ್ಮದಿಯಾಗಿ ನಿಲ್ಲುವುದಕ್ಕೂ ಬಿಡುವುದಿಲ್ಲವೆಂದು. ಅಲ್ಲಿಂದ ಹೊರಡುವಾಗ ಒಬ್ಬನನ್ನು ಕಂಡೆ, ಎಲ್ಲೋ ಕಂಡ ನೆನಪು, ವಿಜಯ್ ಕುಮಾರ್ ಎಂದೆ. ಅವನೇ, ನಮ್ಮ ಬಜಾರ್ ಭೀಮಾ, ವಿಜಯ್ ಕುಮಾರ. ಅದಾದ ಸ್ವಲ್ಪ ದಿನದಲ್ಲಿಯೇ ಎಲ್ಲರೂ ಒಬ್ಬರಾದ ಮೇಲೊಬ್ಬರಂತೆ ಸಿಕ್ಕಿದರು. ನೇರವಾಗಿಯಲ್ಲದೇ ಇದ್ದರೂ, ಫೋನಿನಲ್ಲಿ ಮಾತನಾಡತೊಡಗಿದೆವು. ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಸೇರಿದೆವು ಕೂಡ. ಅದಕ್ಕೂ ಮುಂಚೆ, ಒಮ್ಮೆ ಊರಿಗೆ ಹೋಗಿದ್ದಾಗ ಮಂಜೇಶನಿಗೆ ಫೋನ್ ಮಾಡಿ ಊರಿಗೆ ಬರುವಂತೆ ಹೇಳಿದೆ. ಅವನಿಗೆ ನಮ್ಮೂರ ದಾರಿ ತಿಳಿದಿರಲಿಲ್ಲ, ಆದ್ದರಿಂದ ಶಿರಂಗಾಲ ದಾಟಿ ಮುಂದಕ್ಕೆ ಬರುತ್ತಿರು, ನಾನು ಬರುತ್ತೇನೆಂದು ಹೇಳಿ ಹೊರಟೆ. ನಾನು ಗಾಡಿಯಲ್ಲಿ ಹೋಗುತ್ತಿರುವಾಗ, ಯಾರೋ ಒಬ್ಬ ಆ ಕಡೆಯಿಂದ ಸುಜ಼ುಕಿ ಸಮುರಾಯಿಯಲ್ಲಿ ಬರಲೋ ಬೇಡವೋ ಎನ್ನುವ ವೇಗದಲ್ಲಿ ಬರುತ್ತಿದ್ದ. ಜೊತೆಯಲ್ಲೊಂದು ಬ್ಯಾಗು, ಬೆಂಗಳೂರಿನಲ್ಲಿಯಾದರೇ ಸೇಲ್ಸ್ ಎ಼ಕ್ಸಿಕುಟಿವ್ ಅಲ್ಲಿಯಾದರೇ ಒಂದು ಸ್ಕೂಲ್ ಮಾಸ್ಟರು ಅಥವಾ ಎಲ್ ಐಸಿಯವನು. ಇವನು ಮುಂದಕ್ಕೆ ಹೋದಮೇಲೆ ನೆನಪಾಯಿತು, ಅಯ್ಯೋ ಇದು ನಮ್ಮ ಮಂಜೇಶ ಎಂದು. ಅಂದು ಜೊತಯಲ್ಲಿ ಕುಳಿತು ಸಿಗರೇಟು ಸೇದಿದೆವು. ಅವನ ಇತಿಹಾಸವನ್ನೆಲ್ಲ ಹೇಳಿದ, ಅವನು ಚಿಂತನೆ ಮಾಡುವ ರೀತಿ ಬಹಳ ಮೆಚ್ಚುಗೆಯಾಯಿತು.
ವಿಚಿತ್ರವೆಂದರೇ ಅವನು ನನಗಿಂತ ನಮ್ಮಪ್ಪನಿಗೆ ಒಳ್ಳೆಯ ಸ್ನೇಹಿತನಾದ. ಅವರಿಬ್ಬರ ಆಲೋಚನ ಕ್ರಮಗಳು ಒಂದೇ ರಿತಿಯದ್ದಾಗಿದೆ. ನಮ್ಮಪ್ಪನಿಗೆ ಸರ್ಕಾರಿ ಕೆಲಸವೆಂದರೇ ಪ್ರಾಣ. ಸರ್ಕಾರಿ ಕೆಲಸದಲ್ಲಿರುವವರು ಬಹುಬೇಗ ಸ್ನೇಹಿತರಾಗುತ್ತಾರೆ. ಅದಕ್ಕೋ ಏನೋ ಅವರಿಬ್ಬರು ಒಳ್ಳೆಯ ಸ್ನೇಹಿತರಾದರು. ಇನ್ನೊಂದು ವಿಚಿತ್ರವೆಂದರೇ, ಮಂಜೆಶನ ತಂದೆ ಯೋಚಿಸುವುದು ನನ್ನ ರೀತಿಯಲ್ಲಿ. ಅವರು ಅದ್ಬುತಾ ಸ್ನೇಹಿತರಾಗುವ ಗುಣಗಳನ್ನು ಹೊಂದಿದ್ದಾರೆ. ಅದಾದ ಮೇಲೆ ನನ್ನ ಹಲವಾರು ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾನೆ, ಸಹಾಯ ಮಾಡಿದ್ದಾನೆ. ಹಣಕಾಸಿನಲ್ಲಿಯೂ ಸಹಾಯ ಮಾಡಿದ್ದಾನೆ. ನಾನು ಅವರ ಮನೆಯಲ್ಲಿ ಬಹಳ ದಿನ ಉಳಿದಿದ್ದೇನೆ, ಅಥಿತಿ ಸತ್ಕಾರವೆಂದರೇ ನಿಜಕ್ಕೂ ಅದು. ಅದೆಷ್ಟು ಪ್ರೀತಿಯಿಂದ ಕಾಣುತ್ತಾರೆಂದರೇ ನೀವು ಅನುಭವಿಸಿಯೇ ತೀರಬೇಕು. ಅವನ ಬಗ್ಗೆ ನನಗಿಂತ ವಿಜಿಗೆ ಬಹಳ ಹೆಮ್ಮೆ. ಅವನು ಹೇಳುತ್ತಿರುತ್ತಾನೆ, ಮಂಜೇಶನದ್ದು ಬಹಳ ಅಚ್ಚುಕಟ್ಟಿನ ಬದುಕು, ಚೆನ್ನಾಗಿ ಕಟ್ಟಿಕೊಂಡಿದ್ದಾನೆ. ಸ್ವಲ್ಪವೂ ಏರು ಪೇರಾಗದಂತೆ ಬಹಳ ಎಚ್ಚರಿಕೆ ವಹಿಸುತ್ತಾನೆಂದು. ನನ್ನದು ತದ್ವಿರುದ್ದ ಜೀವನ ಶೈಲಿಯಾಗಿರುವುದರಿಂದ ನಾನು ಒಮ್ಮೊಮ್ಮೆ ಹಿಯಾಳಿಸುತ್ತೇನೆ.
ಮಂಜೇಶನದ್ದು ಸುಖ ಸಾಂಸಾರಿಕ ಚಿತ್ರ. ಹಳೇ ಸಿನೆಮಾದಲ್ಲಿ ಬರುತ್ತಿದ್ದ ಹೀರೋ ತರಹ, ಸ್ವಲ್ಪ ಆರೋಗ್ಯದ ಸಮಸ್ಯೆ ಇರೋ ಅಪ್ಪಾ, ಮುಗ್ದ ಅಮ್ಮಾ, ಮುತ್ತಿನಂಥಹ ಹೆಂಡತಿ, ಚಿನ್ನದಂಥಹ ಮಗು. ಕೈತುಂಬಾ ಸಂಬಳ. ಬೆಳ್ಳಿಗ್ಗೆ ಆರು ಮೂವತ್ತಕ್ಕೆ ಏಳು, ನಿತ್ಯಕರ್ಮಗಳನ್ನು ಮುಗಿಸು, ಪೇಪರ್ ಓದು, ಹೊಟ್ಟೆ ಮುಂದೆ ಬಂದಿರುವುದಕ್ಕೆ ಹೋಗಿ ಬ್ಯಾಡ್ಮಿಟನ್ ಆಡು, ಬಂದು ಹೊಟ್ಟೆ ತುಂಬಾ ತಿನ್ನು, ಸ್ಕೂಲಿಗೆ ಹೋಗು, ಹೊಟ್ಟೆ ಮಾಸ್ಟರು ಬಂದರು, ಕುಳ್ಳ ಮಾಸ್ಟರು ಬಂದರು ಎಂದು ಮಕ್ಕಳು ಅರುಚುತ್ತಾವೆ. ಬಿಸಿ ಊಟ, ಮಣ್ಣು ಮಸಿ ಅಂತಾ ಪಾಠ ಮಾಡು, ಐದು ಗಂಟೆಗೆ ಮನೆ ಸೇರು, ಹೆಂಡತಿ ಕೈ ಕಾಫಿ ಕುಡಿ, ಮಗಳೊಂದಿಗೆ ಆಟವಾಡು, ಹೊಟ್ಟೆ ತುಂಬಾ ಉಂಡು ಮಲಗು. ಸಿಗರೇಟು ಸೇದುವುದಿಲ್ಲ, ಕುಡಿಯುದಿಲ್ಲ, ಯಾವುದೇ ಕೆಟ್ಟ ಚಟವೂ ಇಲ್ಲ ಕೆಟ್ಟ ಬುದ್ದಿಯೂ ಇಲ್ಲ. ತನ್ನದೇ ಸಾಂಸಾರಿಕ ಕೋಟೆಯೋಳಗೆ ತಿಂದು ಹೊಟ್ಟೆ ಬೆಳಸುವುದನ್ನು ಮಾಡುತ್ತಿದ್ದಾನೆ. ಯಾರದ್ದೇ ಮನೆಯ ಕಾರ್ಯಕ್ರಮಗಳಿಗೂ ತಪ್ಪದೇ ಹೋಗುತ್ತಾನೆ. ಕಷ್ಟಪಟ್ಟು ಕೆಇಎಸ್ ಮಾಡಿದ್ದಾನೆ. ದೇವರು ಅವನನ್ನು ಮತ್ತು ಅವನ ಕುಟುಂಬವನ್ನು ಚೆನ್ನಾಗಿಡಲೆಂದು ಹಾರೈಸುತ್ತೇನೆ. ಮಂಜೇಶನ ಬಗ್ಗೆ ಬರೆಯುತ್ತೇನೆಂದು ಹೊರಟು ನನ್ನಯ ಬಗ್ಗೇಯೇ

07 ಜೂನ್ 2012

ನಿನಗಾಗಿ ಬರೆದ ನಾಲ್ಕು ಸಾಲುಗಳು....

ನಿನಗೆ ಖುಷಿಯಾದರೂ ಸರಿ, ಬೇಸರವಾದರೂ ಸರಿ,

ನನ್ನೆಲ್ಲಾ ಭಾವನೆಯನ್ನು ಸುರಿಯಬೇಕು ನಿನ್ನೆಡೆಗೆ,

ಬೈಯ್ಯುವ ನೆಪದಲ್ಲಿಯಾದರೂ ನನ್ನ ನೆನಪಿಸಿಕೊ ದಿನವೆಲ್ಲಾ,

ಕೋಪವಾದರೇನೂ ಖುಷಿಯಾದರೇನೂ ಎರಡೂ ನನ್ನಯ ಮೇಲಲ್ಲವೇ,

ಈಶ್ವರಪ್ಪನೇ ಹೇಳಲಿಲ್ಲವೇ, ಗೆಲ್ಲುವುದು ಮುಖ್ಯ ಮೂಲ ಬಿಜೆಪಿಯೋ, ವಲಸಿಗರೋ ಅದು ಎರಡನೆಯದ್ದು...


ನಿನ್ನ ನೋಡಲು ಮನ ತವಕಿಸುತಿದೆ,

ನಿನ ನೋಡುವಾಸೆ ನನ್ನೆದೆಯೊಳಗೆ ಹೆಮ್ಮರವಾಗುತ್ತಿದೆ,

ನಿನ್ನೊಂದಿಗೆ ಎರಡು ತಾಸು ಕೂರುವಾಸೆ ಕೈಗೂಡುವುದೆಂದು,

ನನ್ನೆರಡು ಸಾಲುಗಳಿಗೆ ಗೊಳ್ಳೆಂದು ನೀನಗುವುದೆಂದು


ನಾ ಏನಾದರೂ ಅದು ನಿನಗೋಸ್ಕರ

ಪ್ರೇಮಿ ಆದದ್ದೂ ನಿನಗೋಸ್ಕರ

ಕವಿಯಾದದ್ದು ನಿನಗೋಸ್ಕರ


ನನ್ನೆಲ್ಲವೂ ನೀನೇ,

ನನ್ನ ತನು ಮನವೆಲ್ಲವೂ ನೀನೇ

ನಾ ಬರೆಯುವುದು, ನಾ ಉಸಿರಾಡುವುದು ನಿನಗಾಗಿಯೇ,

ನನ್ನ ಉಸಿರಲ್ಲಿ ಹರಿದಾಡುವ ಹೆಸರು ನೀನೇ,

ನಾ ಮಲಗಿದ್ದ ಕ್ಷಣದಲ್ಲಿ ಕನವರಿಸುವ ಹೆಸರೂ ನೀನೇ...


ನನ್ನ ಮೊಂಡತನವಲ್ಲ ಅದು, ನನ್ನಲಿರುವ ಬಾಲ್ಯ,

ನಿನ್ನ ಬಿಟ್ಟಿರಲಾರದ ಪ್ರೀತಿ, ಸದಾ ನಿನ್ನೊಂದಿಗಿರಬೇಕೆಂಬ ಹಂಬಲ,

ನಿನ್ನ ಕಾಡಿಸಿಯೋ ಪೀಡಿಸಿಯೋ ನನ್ನೆಡೆಗೆ ಸೆಳೆಯುವ ಕಾತುರ

ಬಲಿ ಕೊಟ್ಟಾದರೂ ಸರಿ, ನಾ ಸತ್ತಾದರೂ ದೇವರ ವಶಿಸಿಕೊಳ್ಳಬೇಕೆಂಬುದು ಭಕ್ತನ ಆಸೆ,

ನನ್ನದೂ ಅಷ್ಟೇ ಅತ್ತಾದರೂ ಸರಿ, ಅಳುಕಾದರೂ ಸರಿ ನಿನ್ನ ಪ್ರೀತಿಯ ಪಡೆಯಬೇಕೆಂಬ ಸೆಲೆತ


ನಿಜಕ್ಕೂ ನಾನು ಕವಿಯಲ್ಲ, ಕವಿಯಾದದ್ದು ನಿನ್ನ ಬಣ್ಣಿಸುತ್ತಾ

ಮುಂಚೆ ಬರೆದಿಟ್ಟ ಸಾಲುಗಳಲ್ಲ ಇವುಗಳು ನಿನ್ನೊಡನೆ ಮಾತನಾಡುವಾಗ

ನಿನ್ನ ನೆನಪಿನ ಹೊತ್ತಿಗೆಯ ತೆಗೆದು ಮೆಲುಕುಹಾಕುವಾಗ ಬರೆಯುವ ಸಾಲುಗಳು,


ಕವಿಯಾಗುವೆನು ನಿನ್ನಯ ಚೆಲುವ ಬಣ್ಣಿಸಲು

ಲೇಖಕನಾಗುವೆನು ನಿನ್ನಯ ಒಳ್ಳೆತನವ ಬರೆಯಲು

ಭಕ್ತನಾಗುವೆನು ನಿನ್ನ ಪ್ರೀತಿಯ ಪೂಜಿಸಲು

ಅಭಿಮಾನಿಯಾಗುವೆನು ನಿನ್ನಯ ಆರಾಧಿಸಲು,

ಹುಳು ಮಾನವ ನಾನು ಅದಕ್ಕಲ್ಲವೇ ಇಷ್ಟೆಲ್ಲಾ ಆಸೆ ಕನಸುಗಳು


ನೀ ನನ್ನ ಹೊಗಳಿದರೂ ಬೈದರೂ ಎಲ್ಲದ್ದಕ್ಕೂ ನೀನೇ ಕಾರಣ

ಸರಿ ತಪ್ಪುಗಳಿಗೆ ದೇವರೇ ಕಾರಣ

ನನ್ನ ಪ್ರೀತಿಯ ವಿಷಯಗಳಿಗೆ ನೀನೇ ಕಾರಣ

ಹುಚ್ಚನಂತೇ ಪ್ರೀತಿಸಿದ್ದು ನಾನಲ್ಲ

ಪ್ರೀತಿಸಿಕೊಂಡಿದ್ದು ನೀನು, ನೀನಿಲ್ಲದಿದ್ದರೇ ನನ್ನ ಪ್ರೀತಿಗೆ ಬೆಲೆಯೆಲ್ಲಿತ್ತು ಹೇಳು?

ಬರೆದಿದ್ದು ನಾನಲ್ಲ ಬರೆಸಿಕೊಂಡಿದ್ದು ಆ ನಿನ್ನ ಮೋಹಕ ಚೆಲುವು,

ಆ ಚೆಲುವೆ ಇಲ್ಲದಿದ್ದರೇ ಈ ಪದಗಳೆಲ್ಲಿಂದ ಹುಟ್ಟಾವು?

ಪಿಯುಸಿ ಬದುಕಿನ ನಾಲ್ಕು ಪುಟಗಳು....!!!!!!!!

ಮೊನ್ನೆ ಭಾನುವಾರ ನಾನು ವಿಜಿ, ಸುನಿಲನ ಮದುವೆ ಬೀಗರ ಊಟ ಮುಗಿಸಿಕೊಂಡು ಕುಳಿತು ಹರಟುತ್ತಿರುವಾಗ ದಿಡೀರನೆ ಹೊಳೆದದ್ದು ನಮ್ಮ ಪಿಯುಸಿ ಹುಡುಗರೆಲ್ಲರನ್ನೂ ಮತ್ತೊಮ್ಮೆ ಸೇರಿಸಬಾರದೆಂಬ ಆಸೆ ಶುರುವಾಯಿತು. ನಾನು ಮತ್ತು ವಿಜಿ ಬಹಳಷ್ಟೂ ಸಲ ತುಂಬಾ ಯೋಜನೆಗಳನ್ನು ರೂಪಿಸಿರುವುದು ಕ್ಷಣ ಮಾತ್ರದಲ್ಲಿ. ಮುಂಚೆಯೂ ಅಷ್ಟೇ ಈಗಲೂ ಅಷ್ಟೇ, ಅದೆಷ್ಟೋ ಬಾರಿ ನಮ್ಮ ಲಾಂಗ್ ರೈಡ್ ಗಳು, ಮತ್ತು ದೂರದ ಟ್ರಿಪ್ ಗಳು ಕ್ಷಣ ಮಾತ್ರದಲ್ಲಿ ರೂಪುಗೊಂಡಿವೆ. ಕುಡಿಯುತ್ತ ಕುಳಿತಿದ್ದು, ಮರು ನಿಮಿಷವೇ, ಮಡೀಕೇರಿಗೆ ಹೋರಟಿದ್ದೇವೆ, ನಮ್ಮೂರಿಗೆ ಹೋಗಿದ್ದೇವೆ, ಚಿಕ್ಕಮಗಳೂರಿಗೆ, ಮೈಸೂರಿಗೆ, ಹೀಗೆ ಹತ್ತು ಹಲವು ಯಶಸ್ವಿ ಓಡಾಟಗಳು ನಮ್ಮ ನೆನಪಿನ ಹೊತ್ತಿಗೆಯಲ್ಲಿವೆ. ಅದರಂತೆಯೇ ಮೊನ್ನೆಯೂ ಶುರುವಾಗಿದ್ದು ಈ ನಮ್ಮ ಚಟುವಟಿಕೆ. ಜೂನ್ ಒಂದರಂದು ನಮ್ಮೂರಿನ ಊರ ಹಬ್ಬವಿದೆ. ಆದ್ದರಿಂದ ಆ ದಿನವೇ ಎಲ್ಲರನ್ನೂ ಸೇರಿಸುವ ಕೆಲಸ ಯಾಕೆ ಮಾಡಬಾರದೆಂದು ಯೋಚಿಸಿ, ನಿರ್ಧರಿಸಿದೆವು. ಅದಾದ ಹತ್ತೇ ನಿಮಿಷದಲ್ಲಿ ಎಲ್ಲರಿಗೂ ಫೋನ್ ಮಾಡಿದ್ದಾಯಿತು. ಎಲ್ಲರೂ ಒಪ್ಪಿದ್ದೂ ಆಯಿತು. ನಾನು ಅದಕ್ಕೆ ಒಂದು ಹಿನ್ನಲೆಯನ್ನು ಕಳೆದ ಬ್ಲಾಗ್ ನಲ್ಲಿ ಬರೆದಿದ್ದೆ. ಅದನ್ನು ನೀವು ಓದಿರಬಹುದು.

ನಾನು ನನ್ನ ಪಿಯುಸಿ ಜೀವನದ ಬಗ್ಗೆ ಅಲ್ಪ ಸ್ವಲ್ಪ ತಿಳಿಸಿಕೊಡಲು ಬಯಸುತ್ತೇನೆ. ಅದು ೧೯೯೮ ರ ಮೇ ತಿಂಗಳು, ನನ್ನ ಹತ್ತನೇ ತರಗತಿಯ ಪರೀಕ್ಷೆಯ ಫಲಿತಾಂಶ ಬಂದಿತ್ತು. ನಮ್ಮ ಹೊಸ ಮನೆಯ ತಳಪಾಯ (foundation) ಹಾಕಿದ್ದೇವು. ಸಿಮೇಂಟಿಗೆ ನೀರು ಹಾಕುವುದು ನನ್ನ ಕಾರ್ಯವಾಗಿತ್ತು. ಅದು ಆರದಂತೆ ಕಟ್ಟೆ ಕಟ್ಟಿ ಸೈಕಲಿನಿಂದ ಹೇರಬೇಕಿತ್ತು. ಒಮ್ಮೊಮ್ಮೆ ನನಗೆ ಆಶ್ಚರ್ಯವಾಗುತ್ತದೆ, ನಾನು ಚಿಕ್ಕವನಿದ್ದಾಗ ಎಷ್ಟೆಲ್ಲಾ ಕೆಲಸ ಮಾಡುತ್ತಿದೆಯೆಂದು. ಈಗ ಕಾಫಿ ಕುಡಿದ ಲೋಟವನ್ನು ಎತ್ತಿಡುವುದಿಲ್ಲ ಇಂಥಹ ಸೋಮಾರಿತನವನ್ನು ನನಗೆ ಆ ಬ್ರಹ್ಮ ಅದು ಹೇಗೆ ಅನುಗ್ರಹಿಸಿದನೆಂಬುದೇ ಅಚ್ಚರಿ. ನಾನು ಸೈಕಲ್ ಹತ್ತಿ ಶಾಲೆಗೆ ಹೋಗಿ ನನ್ನ ಹಣೆಬರಹವನ್ನು ತಿಳಿಯಲು ಹೋದೆ. ತುಂಬಾ ಸತ್ಯ ಹೇಳಬೇಕೆಂದರೇ ನನ್ನ ಇಡೀ ಜೀವನದಲ್ಲಿಯೇ ಮೊದಲನೇ ಬಾರಿ ನಾನು ನನ್ನ ರಿಸಲ್ಟ್ ನೋಡಿದ್ದು! ಆ ಹಿಂದಿನ ಎಲ್ಲಾ ರಿಸಲ್ಟ್ ಅನ್ನು ನಮ್ಮಪ್ಪನೇ ನೋಡಿರುತ್ತಿದ್ದರು ಅಥವಾ ನನ್ನ ಯಾರಾದರೂ ಕ್ಲಾಸ್ ಮೇಟ್ಸ್ ಹೇಳುತ್ತಿದ್ದರು. ಮೊದಲನೇ ಬಾರಿಗೆ ನೋಡುವಾಗ ಅಲ್ಲಿ ಪಾಸಾಗಿರುವವರ ನಂಬರ್ ಹಾಕಿರುತ್ತಾರಾ? ಫೇಲ್ ಆಗಿರುವವರ ನಂಬರ? ಎನ್ನುವುದೇ ಅನುಮಾನವಾಯಿತು. ಅಂತೂ ಪಕ್ಕದಲ್ಲಿರುವ ನನ್ನ ಅನೇಕಾ ಪರಿಚಯಸ್ಥ ಮುಖಗಳನ್ನು ನೋಡಿದೆ. ಏನಾಯ್ತು ಎಂದು ಕೇಳಿದರೇ, ಮೂರು ಹೋಗಿದೆ, ಎರಡು ಹೋಗಿದೆ, ಎಲ್ಲಾ ಡಮಾರು, ಇಂಥಹ ಉತ್ತರಗಳು. ಯಾರೊಬ್ಬರ ಮುಖದಲ್ಲಿಯೂ ಆತಂಕವಿಲ್ಲ,. ನನಗೆ ಆಗಲೇ ಅನಿಸತೊಡಗಿತ್ತು, ಸೋತಾಗ ಯಾವತ್ತೂ ಹಿಂಜರಿಯಬಾರದು. ಸೋಲನ್ನು ಧೈರ್ಯದಿಂದ ಒಪ್ಪಿಕೊಳ್ಳಬೇಕು. ನಾನು ನಾಲ್ಕು ಕೀಮೀ ದೂರ ಸೈಕಲ್ ಹೊಡೆಯುವಾಗೆಲ್ಲ ನನ್ನ ಮುಂದಿನ ಯೋಜನೆಗಳ ಬಗ್ಗೆ ಯೋಚಿಸುತ್ತಿದ್ದೆ, ಮುಂದೆ ಏನು ಮಾಡಬೇಕೆಂಬುದನ್ನು ಯೋಜಿಸತೊಡಗಿದ್ದೆ. ಶಾಲೆಯಿಂದ ಕೊಣನೂರಿನಲ್ಲಿಯೇ ಸೈಕಲ್ ನಿಲ್ಲಿಸಿ, ಕುಶಾಲನಗರದ ಅಜ್ಜಿಯ ಮನೆಗೆ ಹೋಗುವುದು, ಅಲ್ಲಿಂದ ವಿರಾಜಪೇಟೆಯ ನಮ್ಮ ಚಿಕ್ಕಮ್ಮನ ಮನೆಗೆ ಹೋಗುವುದು, ಸ್ವಲ್ಪ ವರ್ಷ ಅವರ ಕಾಫಿ ವರ್ಕ್ಸ್ ನಲ್ಲಿ ಕೆಲಸ ಮಾಡುವುದು, ಅಮೇಲೆ ಒಂದು ವ್ಯಾನು ತೆಗೆಯುವುದು, ದೊಡ್ಡ ಸಾಹುಕಾರನಾಗುವುದು. ಹೀಗೆ ಏನೇನೋ ತಲೆಯಲ್ಲಿ ಓಡಾಡತೊಡಗಿತ್ತು. ಅಪ್ಪನಿಗೆ ಮುಖ ತೋರಿಸುವ ಧೈರ್ಯವಂತೂ ಇರಲಿಲ್ಲ. ಅವರಿಗೆ ನಮ್ಮ ಕಷ್ಟವು ತಿಳಿದಿರಲಿಲ್ಲ.

ಶಾಲೆಯ ಆವರಣದೊಳಕ್ಕೆ ನುಂಗಿದೆ. ಸೈಕಲ್ ಸ್ಟಾಂಡಿನಲ್ಲಿ ಸೈಕಲ್ ನಿಲ್ಲಿಸಿ ರಿಸಲ್ಟ್ ಬೋರ್ಡಿನ ಕಡೆಗೆ ಹೊರಟೆ. ನನಗಿಂದಿಗೂ ನೆನಪಿದೆ, ಕಣ್ಣಿಗೆ ಕಟ್ಟಿದ ಹಾಗಿದೆ ಆ ದಿನ. ನಮ್ಮ ಶಾಲೆಯನ್ನು ನೋಡಿರುವ ಅನೇಕರಿಗೆ ಇದನ್ನು ವರ್ಣಿಸುವ ಅವಶ್ಯಕತೆಯಿಲ್ಲ. ತಿಳಿಯದಿದ್ದವರಿಗೆ ತಿಳಿಸಬೇಕು. ನನ್ನೆಲ್ಲಾ ಸ್ನೇಹಿತರಿಗೂ ನನ್ನ ಶಾಲೆಯನ್ನು ತೊರಿಸಿದ್ದೇನೆ! ಶಾಲೆಯ ಮುಂದೆ ಮೈದಾನವಿದೆ, ಅಲ್ಲೊಂದು ಸಿಮೇಂಟಿನಲ್ಲಿ ಕಟ್ಟಿಸಿರುವ ವೇದಿಕೆಯಿದೆ, ಅದಕ್ಕೆ ಒರಗಿಕೊಂಡಂತೆಯೇ, ಶಾಲೆಯ ಆಫೀಸ್ ರೂಂ ಮತ್ತು ಆ ದಿನಗಳ ಹತ್ತನೇಯ ಎ ಸೆಕ್ಷನ್ ಕೊಠಡಿಯಿದೆ. ಅದೇ ರೂಮಿನಲ್ಲಿ ನಾವು ಕುಳಿತುಕೊಳ್ಳುತ್ತಿದ್ದೇವು. ವರ್ಷವಿಡೀ ಪಾಠ ಕೇಳಿದ ಆ ರೂಮಿನಲ್ಲಿಯೇ ನಮ್ಮ ರಿಸಲ್ಟ್. ಅದು ಅದೃಷ್ಟದ ಕೊಠಡಿಯೋ? ಲತ್ತೆಯೋ? ತಿಳಿದಿಲ್ಲ. ಆ ರೂಮಿನಲ್ಲಿ ಮನ ಬಂದಂತೆ ಕುಣಿದಿದ್ದೆವು, ಆಡಿದ್ದೇವು, ಹೊಡೆಸಿಕೊಂಡಿದ್ದೇವು, ಕಿರು ಪರೀಕ್ಷೆಗಳಲ್ಲಿ ಧುಮುಕಿ ಹೊಡೆದಿದ್ದೇವು. ಅಂತೂ ಕಿಟಕಿಯ ಬಳಿಗೆ ಹೋದೆ, ರಿಸಲ್ಟ್ ಶೀಟುಗಳನ್ನು ಅಂಟಿಸಿಗ ಹಲಗೆ ದೂರದಲ್ಲಿಯೇ ಇತ್ತು. ಹೊರಗಡೆ ಹಾಕಿದರೇ ಹರಿದು ಹಾಕುತ್ತಾರೆಂಬ ಭಯ ಮಾಸ್ಟರುಗಳಿಗೆ, ಅಂಕೆಗಳು ಮಂಜಾಗಿ ಕಾಣುತ್ತಿದ್ದವು. ನಾನು ಕೆಳಗಡೆಯಿಂದಲೇ ನೋಡಿದೆ, ಜಸ್ಟ್ ಪಾಸಾಗಿರುವ ಪಟ್ಟಿ ಇತ್ತು. ನಂತರದ ಪಟ್ಟಿ ಮೂರನೇ ದರ್ಜೆ ಇದು ನನ್ನದೇ! ಆ ಸಾಲಿನಲ್ಲಿ ನಮ್ಮ ತರಗತಿಯ ಅನೇಕರ ಹೆಸರುಗಳಿದ್ದವು. ನನ್ನ ಕಣ್ಣು ನಾನೇ ನಂಬಲಿಲ್ಲ. ಖುಷಿಯಾಯಿತು, ಬಹಳ ಬೇಸರವಾಯಿತು. ನನಗೆ ಓದಲೂ ಏನೇನೂ ಇಷ್ಟವಿರಲಿಲ್ಲ. ಮತ್ತೇ ಓದಬೇಕು? ದೇವರೇ ನಾನು ನಿನ್ನನ್ನು ಪಾಸು ಮಾಡೆಂದು ಕೇಳಿರಲಿಲ್ಲ. ನನ್ನ ಕನಸುಗಳಿದ್ದದ್ದು, ನಾನು ನಾಲ್ಕಾರು ಲಾರಿಗಳ, ವ್ಯಾನುಗಳ ಮಾಲಿಕನಾಗಬೇಕೆಂಬುದು. ಅದು ನುಚ್ಚು ನೂರಾಗಿತ್ತು.

ನನಗೆ ವ್ಯಾಪಾರ ವ್ಯವಹಾರಗಳಲ್ಲಿ ಬಹಳ ಆಸ್ಥೆಯಿತ್ತು. ಇಂದಿಗೂ ಅಷ್ಟೇ, ಜಮೀನು, ಕೃಷಿ, ವ್ಯಾಪಾರದಲ್ಲಿರುವ ಆಸೆ ಈ ಪಟ್ಟಣದ ಕೂಲಿ ಕೆಲಸದಲಿಲ್ಲ. ಮನೆಗೆ ಬಂದೊಡನೆ ನನ್ನನ್ನು ನಮ್ಮಪ್ಪ ಕೇಳತೊಡಗಿದರು. ಏನು ಓದುತ್ತಿಯಾ ಎಂದು. ನನ್ನಾಣೆ ಹೇಳುತ್ತೀನಿ ನಾನು ಅಂದಿಗೆ ಶತ ಮೂರ್ಖ ಇಂದಿಗೂ ಮೂರ್ಖನೇ ಬಿಡಿ. ನಾನು ಎಲ್ಲಿಗೇ ಸೇರುತ್ತೇನೆ, ಏನನ್ನು ಓದುತ್ತೇನೆಂಬುದರ ಅರಿವೇ ಇರಲಿಲ್ಲ. ಹಾಸನದ ವೆಂಕಟೇಶ್ವರ ಕಾಲೇಜು ಎನ್ನುತ್ತಿದ್ದರು, ವಿರಾಜಪೇಟೆ, ಗೋಣಿಕೊಪ್ಪ, ಮೈಸೂರು, ಕುಶಾಲನಗರ ಹೀಗೆ ಎಲ್ಲಾ ಊರುಗಳ ಕಾಲೇಜುಗಳನ್ನು ಹೇಳಿದರು. ನನಗೆ ವಿರಾಜಪೇಟೆಗೆ ಸೇರಬೇಕೆಂಬುದೇ ಕನಸು, ಅಲ್ಲಿಗೆ ಸೇರಿದರೇ ಕಾಲೆಜಿಗೆ ಹೋಗುವುದರ ಜೊತೆಗೆ ವ್ಯಾಪಾರ ವ್ಯವಹಾರ ಕಲಿಯಬಹುದು ಎಂದು. ನಮ್ಮಪ್ಪನಿಗೆ ಓದುವವರು ಬರೀ ಓದಲೇ ಬೇಕು. ಇದರ ಮಧ್ಯೆ ಕುಶಾಲನಗರಕ್ಕೆ ಸೇರಿದರೇ ನಮ್ಮ ತಾತನ ಮುದ್ದಿನಿಂದ ಹಾಳಾಗುತ್ತಾನೆಂಬುದು ನಮ್ಮಪ್ಪನ ವಾದ. ಕುಶಾಲನಗರಕ್ಕೆ ಸೇರಲು ನನಗೂ ಆಸೆ, ಆದರೇ ಅಲ್ಲಿ ನಮ್ಮ ತಾತ ವ್ಯವಸಾಯಕ್ಕೆ ಹಾಕುತ್ತಾರೆ, ವ್ಯವಸಾಯ ಮನೆ ಮಕ್ಕಳೆಲ್ಲಾ ಸಾಯ ಅನ್ನುವ ಹಾಗೆ ಗದ್ದೆ ಉತ್ತು ಬರುವುದು ಅಷ್ಟೊಂದು ಹಣ ಕೊಡುವುದಿಲ್ಲ ಎನ್ನುವುದು ನನ್ನ ನಂಬಿಕೆ. ಇಷ್ಟೇಲ್ಲಾ ಒದ್ದಾಟದ ನಡುವೆ ಕೊನೆಯದಾಗಿ ಆಯ್ಕೆಯಾದದ್ದು ನಮ್ಮ ದಿ ಗ್ರೇಟ್ ಕನ್ನಡ ಭಾರತಿ ಕಾಲೇಜು, ಕುಶಾಲನಗರ.

ಕಾಲೇಜಿನ ಬಹುತೇಕ ಮಾಸ್ಟರುಗಳು ನಮ್ಮ ಮಾವನಿಗೆ ಪರಿಚಯವಿದ್ದರು. ಅವರೆಲ್ಲರೂ ಬೆಟ್ಟದಪುರ ಕಡೆಯವರಾಗಿದ್ದರಿಂದ ನಮ್ಮ ಅತ್ತೆ ಹೊಸೂರಿನವರಗಾಗಿದ್ದರಿಂದ ಹೆಚ್ಚು ಕಡಿಮೆ ನೆಂಟರೇ ಆಗಿದ್ದರು. ಆ ದಿನಗಳಲ್ಲಿ ಕೆಬಿ ಕಾಲೇಜು ದೊಡ್ದ ಮಟ್ಟದ ಹೆಸರು ಮಾಡಿತ್ತು. ಅಲ್ಲಿ ಸೀಟು ಸಿಗುವುದೇ ಕಷ್ಟವೆನ್ನುವ ಮಟ್ಟಕ್ಕಿತ್ತು. ಆದ್ದರಿಂದ, ನಮ್ಮ ತಾತ ನನ್ನನ್ನು ಕಾಲೇಜಿನ ಬೋರ್ಡ್ ಮೆಂಬರು ಮತ್ತು ಆ ದಿನದಲ್ಲಿ ಕಾಂಗ್ರೇಸ್ಸಿನ ಮುಖ್ಯ ಪುಟದಲ್ಲಿದ್ದ ಚಂದ್ರಕಲಾ ಅವರ ಮನೆಗೆ ಕರೆದೊಯ್ದರು. ಅವರ ಮನೆಗೆ ಹೋದಾಗ ಅವರು ನಮ್ಮ ತಾತನಿಗೆ ನೀಡಿದ ಗೌರವ ನೀಡಿ ಬೆರಗಾಗಿ ಹೋದೆ. ನಮ್ಮ ತಾತನ ಜೊತೆ ಮಾತನಾಡುವಾಗ ಅವರು ನಿಂತೆ ಇದ್ದರು. ಸೋಮವಾರಪೇಟೆ ತಾಲ್ಲೂಕಿಗೆ ಶಾಸಕರಾಗಲಿರುವ ಚಂದ್ರಕಲಾ ನಮ್ಮ ತಾತನಿಗೆ ಇಷ್ಟೊಂದು ಗೌರವ ಕೊಡುವುದೇ? ಆ ದಿನ ನಮ್ಮ ತಾತ ಮಾತನಾಡಿದ ಇಂಗ್ಲೀಷ್ ನನ್ನನ್ನೇ ಬೆಚ್ಚಿ ಬೀಳಿಸಿತು. ಆ ಮಟ್ಟಗಿನ ಇಂಗ್ಲೀಷ್ ಅನ್ನು ನಾನು ನಂತರ ಕೇಳಿದ್ದು ನನ್ನ ಬಿಎಸ್ಸಿ ಸಮಯದಲ್ಲಿ ಗ್ಯಾಲ್ವಿನ್ ವಿಲ್ಸನ್ ಬಾಯಿಂದ. ನಮ್ಮ ತಾತನಲ್ಲಿದ್ದ ಅನೇಕಾ ಗುಣಗಳನ್ನು, ನಾವಾರು ಗುರುತಿಸಲೇ ಇಲ್ಲ. ಅದೊಂದು ಅದ್ಬುತಾ ವ್ಯಕ್ತಿತ್ವ. ಅವರ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ.

ಚಂದ್ರಕಲಾ ಅವರು, ಅವರ ನೆಂಟರೇ ಆದ ಅಖಿಲಾ ಎಂಬ ಹುಡುಗಿಯನ್ನು ಕರೆದರು. ಅವಳು ಕೆಬಿ ಕಾಲೇಜಿನಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದಳು. ಇವರಿಗೆ ಒಂದು ಸೀಟನ್ನು ಮಾಡಿಕೊಡು ಎಂದರು. ಅವಳು ನನ್ನ ಅಂಕಪಟ್ಟಿ ನೋಡಿ ಆಗುವುದಿಲ್ಲವೆಂದಳು. ವಿಜ್ನಾನ ವಿಭಾಗವೆನ್ನುವಾಗ ಪ್ರಯತಿಸೋಣವೆಂದಳು. ಡೋನೆಶನ್ ಕಡಿಮೆ ಮಾಡಿಸಲು ನಮ್ಮ ತಾತ ಪ್ರಯತ್ನಿಸಿ ಅರ್ಧ ಕಟ್ಟುವಂತೆ ಒಪ್ಪಿಸಿದರು. ನಾನು ಮೊದಲನೆಯ ದಿನ ಅಲ್ಲಿ ಅರ್ಜಿ ತರಲು ಹೋಗಿದ್ದೆ. ಹೋದವನೇ, ನಮ್ಮ ಮಾವನ ಹೆಸರು ಹೇಳಿದಾಗ ಅಲ್ಲಿಯೇ ಅಖಿಲಾ ಅರ್ಜಿಯನ್ನು ನೀಡಿ ಅದನ್ನು ಭರ್ತಿಮಾಡಿದ ನಂತರ ಹಿಂದಿರುಗಿಸಲು ಹೇಳಿದಳು. ನನಗೆ ಅರ್ಜಿ ತುಂಬಿಸಲು ಸರಿಯಾಗಿ ಅರ್ಥವಾಗಲಿಲ್ಲ. ಪಕ್ಕದಲ್ಲಿಯೇ ಕುಳಿತಿದ್ದ ಒಬ್ಬಾತನನ್ನು ಕೇಳಿದೆ. ಅವನೋ, ಕಪ್ಪಗೆ ದಡೂತಿಯಂತಿದ್ದ. ಅವನು ನನ್ನನ್ನು ವಿಚಾರಿಸತೊಡಗಿದ. ನನ್ನೂರನ್ನು ಹೇಳುತ್ತಲೇ, ನಮ್ಮೂರ ಪುಟ್ಟೇಗೌಡರ ಮಗ ಕುಮಾರ ಅವನಿಗೆ ಸ್ನೇಹಿತನಂತೆ. ಅವನು ಬಿಇ ಓದಿದ್ದಾನೆಂದು ಕೆಲವರು ಹೇಳುತ್ತಿದ್ದರು, ಕೆಲವರು ಅವನು ಓದೇ ಇಲ್ಲವೆನ್ನುತ್ತಿದ್ದರು. ನನಗೆ ಅವನ ಬಗ್ಗೆ ಹೆಚ್ಚೇನೂ ತಿಳಿಯದಿದ್ದರೂ ಬಹಳ ತಿಳಿದವನಂತೆ ನಟಿಸಿದೆ. ಅವನು ನನ್ನನ್ನು ಕೇಳಿದ, science ? Arts? ನಾನು science ಎಂದೆ. ಮಿಕ್ಕಿದ್ದೆಲ್ಲವನ್ನೂ ಅವನೇ ಭರ್ತಿ ಮಾಡಿದ. ಅದರಲ್ಲಿದ್ದ, Physcis, Chemistry....ಇದಾವುದು ಅರ್ಥವಾಗಿರಲಿಲ್ಲ. ಭರ್ತಿ ಮಾಡಿದವನ ಹೆಸರು ಚನ್ನಕೇಶವ ಮೂರ್ತಿ, ಕೆಬಿ ಕಾಲೇಜಿನ ಪಿಟಿ ಮಾಸ್ಟರು.

ಇದಾದ ನಂತರ ಅಲ್ಲಿ ಇಲ್ಲಿ ಚಂಗಲು ಎತ್ತಿದೆ. ಕಾಲೇಜಿಗೆ ಸೇರುವ ದಿನ ಬಂದೇ ಬಿಟ್ಟಿತು. ನಾನು ನಮ್ಮ ಮಾವನನ್ನು ಕರೆದುಕೊಂಡು ಹೋದೆ. ನಮ್ಮ ಮಾವ ಓದಿರುವುದು ನಾಲ್ಕನೇಯ ಕ್ಲಾಸು. ಆ ಸತ್ಯ ಯಾರಿಗೂ ಗೊತ್ತಿಲ್ಲ. ಡಿಗ್ರೀ ಓದಿರಬಹುದು ಎನ್ನಬೇಕು ಆ ಮಟ್ಟಕ್ಕೆ ಅವನು ನಡೆದುಕೊಳ್ಳುತ್ತಾನೆ. ಕಾಲೇಜಿನ ಬಳಿಗೆ ಹೋದ ತಕ್ಷಣವೇ, ಅವನು ನನ್ನನ್ನು ಒಬ್ಬರ ಬಳಿಗೆ ಕರೆದುಕೊಂಡು ಹೋದ. ಅವನು ನೋಡಲು ಕಪ್ಪಿದ್ದರೂ ಲಕ್ಷಣವಾಗಿದ್ದ. ನಮ್ಮ ಮಾವ ಅವನಿಗೆ ನನ್ನ ಪರಿಚಯ ಮಾಡಿಸಿದ, ಅವನು ರಾಗ ಎಳೆದು, ಹೇಳಿದ ನಾನು ನಿಮಗೆ ತರಗತಿ ತೆಗೆದುಕೊಳ್ಳುತ್ತೇನೆ, ಚೆನ್ನಾಗಿ ಓದಬೇಕು ಎಂದು. ಪ್ರವೇಶ ಪಡೆಯುವ ಸಮಯಕ್ಕೆ ಫೋಟೋ ಬೇಕು ಎಂದರು. ನನ್ನಲ್ಲಿ ಫೋಟೋ ಇರಲಿಲ್ಲ. ಬಡ್ಡೀ ಮಕ್ಕಳು ನನ್ನನ್ನು ಓಡಿಸಿದರು. ನಾನು ಅಲ್ಲಿಂದ ಓಡಿಹೋಗಿ ಓಡಿಸ್ಸಿ ಕಲರ್ ಲ್ಯಾಬ್ ನಲ್ಲಿ ಫೋಟೋ ತೆಗೆಸಿಕೊಂಡು ಬಂದೆ. ಬಂದ ನಂತರ ಗೊತ್ತಾದದ್ದು ಫೋಟೋ ಇಲ್ಲದಿದ್ದರೂ ನಡೆಯುತಿತ್ತು ಎಂದು. ಆಗಲಿ ನನ್ನ ಫೋಟೋ ಕಾಲೇಜಿನ ರಿಜಿಸ್ಟರಿಗೆ ಅಂಟಿಸಲಾಯಿತು. ಗುರುತಿನ ಚೀಟಿಯನ್ನು ಕೊಟ್ಟರು. ಅಲ್ಲಿಗೆ ಮೊದಲ ಹಂತದ ಚುನಾವಣೆ ಮುಗಿಯಿತು.

ನಂತರ ಶುರುವಾಗಿದ್ದೇ ಕಥೆ, ನಾನು ನನ್ನೂರಿನಿಂದ ಒಡಾಡುವುದೋ? ಕುಶಾಲನಗರದಿಂದ ಎರಡು ಕೀಮೀ ದೂರವಿದ್ದ ಗುಮ್ಮನಕೊಲ್ಲಿಯಿಂದ ಓಡಾಡುವುದೋ? ಎಂಬುದು ಸಮಸ್ಯೆಗೆ ಬಂತು.ಸ್ವಲ್ಪ ದಿನ ಬಾನುಗೊಂದಿಯಿಂದ ಓಡಾಡತೊಡಗಿದೆ. ಶನಿವಾರ ಮಾತ್ರ ಬೆಳ್ಳಿಗ್ಗೆ ಒಂಬತ್ತು ಗಂಟೆಗೆ ಕಾಲೇಜು ಇರುತ್ತಿತ್ತು. ಮಿಕ್ಕಿದ ದಿನಗಳು ಹತ್ತು ಗಂಟೆಗೆ ಶುರುವಾಗುತ್ತಿತ್ತು. ಮೂರು ದಿನಗಳು ಲ್ಯಾಬೊರೇಟರಿ ಇರುತ್ತಿತ್ತು. ಆ ದಿನಗಳಲ್ಲಿ ಸ್ವಲ್ಪ ತಡವಾಗುತ್ತಿತ್ತು. ನಾನು ಬಸ್ ಹಿಡಿದು ಕೊಣನೂರು ತಲುಪಿ ಅಲ್ಲಿಂದ ಮತ್ತೆ ನನ್ನೂರಿಗೆ ಹೋಗುವಷ್ಟರಲ್ಲಿ ಕತ್ತಲಾಗುತ್ತಿತ್ತು. ಆಗ ಕುಶಾಲನಗರ ಮತ್ತು ಕೊಣನೂರಿಗೆ ಸಾಕಷ್ಟೂ ಬಸ್ಸುಗಳಿರಲಿಲ್ಲ. ಸಂಜೆ ನಾಲ್ಕು ಗಂಟೆಗೆ ಬಸ್ ಹೋದರೇ ಆರು ಗಂಟೆಯ ತನಕ ಕಾಯಬೇಕಿತ್ತು. ನಾನು ಕಾಲೇಜಿಗೆ ಬಂದ ಮೊದಲನೆಯ ದಿನ ನನ್ನ ಪಕ್ಕದಲ್ಲಿ ಅಕ್ಬರ್ ಆಲಿ ಎಂಬ ಮಹಾ ಪ್ರಜೆ ಕುಳಿತಿದ್ದ. ನಾನು ಕಂಡ ಅಮಾಯಕ ಪ್ರಜೆಗಳಲ್ಲಿ ಅಕ್ಬರ್ ಆಲಿಯೂ ಒಬ್ಬ. ಅದೆಷ್ಟೂ ಮುಗ್ದತೆಯಿತ್ತು ಎಂದರೇ, ಅವನು ಕನ್ನಡ ಮಾಧ್ಯಮದಲ್ಲಿ ಮತ್ತು ಅಲ್ಪ ಸ್ವಲ್ಪ ಉರ್ದು ಓದಿಕೊಂಡಿದ್ದವನನ್ನು ಇಲ್ಲಿ ವಿಜ್ನಾನ ವಿಭಾಗಕ್ಕೆ ಸೇರಿಸಿದ್ದರು. ಅವನಿಗೆ ಆಸೆಯಿತ್ತು ಆದರೇ ಬಹಳ ಹಿಂಜರಿಗೆ, ಕೀಳರಿಮೆ, ಭಯವಿತ್ತು. ಹೀಗೆ ಒಂದೆರಡು ದಿನಗಳಲ್ಲಿ ನನಗೆ ಲೋಕೇಶನ ಪರಿಚಯವಾಯಿತು. ನಾವಿಬ್ಬರೂ ಒಂದೇ ಬಸ್ಸಿನಲ್ಲಿ ಓಡಾಡಬೇಕಿದ್ದರಿಂದ ಬೇಗ ಪರಿಚಯವಾಗಿದ್ದಲ್ಲದೇ, ಬಹುತೇಕ ಸಮಾನ ಮನಸ್ಕರಾಗಿದ್ದೇವು. ಒಳ್ಳೆಯ ಸ್ನೇಹಿತರಾಗುವುದರಲ್ಲಿ ಅನುಮಾನವಿರಲಿಲ್ಲ. ಅಂತೇಯೇ ಒಳ್ಳೆಯ ಸ್ನೇಹಿತರೂ ಆದೆವು. ಪಿಯುಸಿಯ ಸ್ನೇಹ ನನಗೆ ಬಹಳ ಮೆಚ್ಚುಗೆಯಾಗುತ್ತದೆ. ನಾನು ಕಳೆದ ಎರಡು ವರ್ಷಗಳಲ್ಲಿ ಒಮ್ಮೆಯೂ ನಮ್ಮ ಮನೆಯವರ ವಿಷಯವನ್ನು ಮಾತನಾಡಿಲ್ಲ. ಯಾರ ಮಗಾ, ಹಿನ್ನಲೆ ಏನು? ಯಾವುದೂ ಬೇಕಿಲ್ಲ. ಅಲ್ಲಿ ಬೇಕಿರುವುದು ಕೇವಲ ಸ್ನೇಹ. ನೀನು ಎಂಥವನು? ನೀನು ನನ್ನ ಭಾವನೆಗಳಿಗೆ ಹೇಗೆ ಸ್ಪಂದಿಸುತ್ತೀಯಾ? ಇಷ್ಟೇ ನಮ್ಮ ಸ್ನೇಹದ ಬುನಾದಿ.

ಕಾಲೇಜು ಶುರುವಾದ ಕೆಲವೇ ದಿನಗಳಲ್ಲಿ ಕೊನೆಯ ಬೆಂಚಿಗೆ ಲಗ್ಗೆ ಹಾಕಿದೆ. ನಾನು ಎತ್ತರದಲ್ಲಿ ಬಹಳ ಕುಳ್ಳನಾಗಿದ್ದರೂ ಅದನ್ನು ಒಪ್ಪುವ ಮನಸ್ಥಿತಿ ಇರಲಿಲ್ಲ. ನನ್ನ ಹೈಸ್ಕೂಲು ದಿನಗಳಲ್ಲಿಯೂ ಅಷ್ಟೇ ಹಿಂದಿನ ಸಾಲೇ ಬೇಕು ನನಗೆ. ಮಾಸ್ಟರುಗಳು ದಿನ ನನ್ನನ್ನು ಕರೆದು ಮುಂದಕ್ಕೆ ಕೂರಿಸಿದ್ದರೂ ಮತ್ತೆ ಹಿಂದಿನ ಸಾಲಿಗೆ ಹೋಗುತ್ತಿದ್ದೆ. ಅಂತೂ ಇಂತೂ ಕೊನೆಯ ಸಾಲಿನಲ್ಲಿ ಕೂರುವ ನನ್ನ ಹಕ್ಕನ್ನು ನಾನು ಉಳಿಸಿಕೊಂಡೆ. ಅಲ್ಲಿಂದ ಶುರುವಾಗಿದ್ದು ನಮ್ಮ ಆಟಗಳು. ಎಲ್ಲರನ್ನೂ ರೇಗಿಸುವುದು, ಚೇಡಿಸುವುದು. ಮಾಸ್ಟರುಗಳಿಗೆ ಬೆಲೆಯಿಲ್ಲ. ಪಾಠ ಮಾಡುತ್ತಿದ್ದರೇ ಹರಟೆ ಹೊಡೆಯುವುದು. ಇದು ಎಷ್ಟರ ಮಟ್ಟಿಗೆ ಹೋಯಿತೆಂದರೇ, ಕ್ಲಾಸಿನಲ್ಲಿ ನಾಳೆ ನಡೆಯುವ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ವಿಚಾರ ಮಾತನಾಡುತ್ತಿದ್ದರೂ ಕೂಡ ನಾವು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆ ಮಟ್ಟಗಿನ ಉಢಾಫೆತನ, ಉದ್ದಡತನ ಅದೆಲ್ಲಿಂದ ನಮಗೆ ಬಂತೆಂಬುದೇ ತಿಳಿಯಲಿಲ್ಲ. ನಾನಂತೂ ಪಿಯುಸಿಯೇ ನನ್ನ ಕೊನೆಯ ಅಧ್ಯಾಯವೆಂಬುದು ನನ್ನ ತೀರ್ಮಾನವಾಗಿತ್ತು. ಸಾಧ್ಯವಾದಷ್ಟೂ ಖುಷಿಯಾಗಿರಬೇಕೆಂಬುದು ನನ್ನ ಅನಿಸಿಕೆಯಾಗಿತ್ತು. ನನ್ನ ಪಿಯುಸಿ ಜೀವನದಲ್ಲಿ ಮೂರ್ನಾಲ್ಕು ಅಧ್ಯಾಯಗಳಿವೆ. ಮೊದಲನೆಯದು ನಾನು ಊರಿನಿಂದ ಬಸ್ಸಿನಲ್ಲಿ ಓಡಾಡುವುದು. ಎರಡನೆಯದು, ಕ್ಲಾಸಿನಲ್ಲಿ ನಡೆಯುತ್ತಿದ್ದ ನಮ್ಮ ಆಟೋಟಗಳು, ತಲೆ ಹರಟೆಗಳು, ಮೂರನೆಯದು ಕ್ಲಾಸಿನಿಂದ ಹೊರಗೆ ಕುಶಾಲನಗರದಲ್ಲಿ ನಡೆಸುತ್ತಿದ್ದ ದರ್ಬಾರುಗಳು, ನಾಲ್ಕನೆಯದು ನಮ್ಮ ಅಜ್ಜಿ ಮನೆಯಲ್ಲಿದ್ದು ನಡೆಸುತ್ತಿದ್ದ ಪರಾಕ್ರಮಗಳು, ಐದನೆಯದು ನಾನು ಪಿಯುಸಿಯಲ್ಲಿ ಫೇಲಾದ ಮೇಲೆ ನಡೆದ ಘಟನೆಗಳು.

ಮೊದಲನೆಯ ಅಧ್ಯಾಯಯದ ತುಣುಕುಗಳನ್ನು ನಿಮ್ಮ ಮುಂದಿಡುತ್ತೇನೆ. ನಾನು ಊರಿನಿಂದ ಓಡಾಡುವಾಗ ನನಗೆ ಓದಲು ಸಮಯ ಸಿಗುತ್ತಿರಲಿಲ್ಲ. ನಾನು ಅದೇಕೆ ಅದನ್ನು ಆಯ್ಕೆ ಮಾಡಿಕೊಂಡೆನೆಂಬುದು ತಿಳಿಯಲಿಲ್ಲ. ಆರು ಗಂಟೆಗೆ ಏಳುವುದು ಸ್ನಾನ ಮಾಡಿ ಊಟ ತಿಂಡಿ ಇಲ್ಲದೆಯೇ ಹೋಗುವುದು ಕೆಲವು ದಿನಗಳು ಏನನ್ನೋ ತಿಂದು ಹೋಗುವುದು. ನಾನು ಸರಿಯಾಗಿ ತಿಂದ ನೆನಪೇ ಇಲ್ಲ. ಜೇಬಿನಲ್ಲಿ ಕಾಸು ಇರುತ್ತಿರಲಿಲ್ಲ. ಅದರ ಜೊತೆಗೆ ಸೇದುವುದು, ಕುಡಿಯುವುದು ಪರಿಚಯವಾಗಿತ್ತು. ನಿಜಕ್ಕೂ ಹೇಳುತ್ತೇನೆ, ವಯಸ್ಸಿನ ಮಕ್ಕಳಿಗೆ ಹಣದ ಅನಿವಾರ್ಯತೆ ಅದೆಷ್ಟೂ ಬೇಕೆನಿಸುತ್ತದೆಯೆಂದರೇ ಹೇಳತೀರದು. ಮತ್ತು ಆ ಸಮಯದಲ್ಲಿರುವ ಕೀಳರಿಮೆ ಅಷ್ಟಿಷ್ಟಲ್ಲ. ನಾನು ನನ್ನ ಬಗ್ಗೆ ನಿಜಕ್ಕೂ ಹೆಮ್ಮೆ ಪಡುವುದು ನನ್ನ ಪಿಯುಸಿ ಜೀವನದ ಬಗ್ಗೆ ಮಾತ್ರ. ನನಗೆ ಈಗ ಬಹಳ ಉಢಾಫೆತನ, ಹಣದ ಬೆಲೆ ನಿಜಕ್ಕೂ ಗೊತ್ತಿಲ್ಲ, ವಸ್ತುಗಳ ಬಗ್ಗೆ ಅಂತೂ ಕಾಳಜಿ ಇಲ್ಲವೇ ಇಲ್ಲ. ಆ ದಿನಗಳಲ್ಲಿ ನನ್ನ ಬಳಿಯಿದ್ದ ಕೆಲವೇ ಕೆಲವು ಬಟ್ಟೆಗಳನ್ನು ಒಂದು ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಂಡೂ ಐರಾನ್ ಮಾಡುತ್ತಿದ್ದೆ. ಒಂದೇ ಒಂದು ಡಬ್ಬಲ್ ಲೈನ್ ಇರುತ್ತಿರಲಿಲ್ಲ. ನಾನ್ನು ಮತ್ತು ಲೋಕೇಶ ಇಬ್ಬರೂ ಪೈಪೋಟಿಯಲ್ಲಿ ಐರಾನ್ ಮಾಡಿ ಬರುತ್ತಿದ್ದೇವು. ಬಸ್ಸಿನ್ನಲ್ಲಿ ಓಡಾಡುವಾಗ ಬಸ್ಸಿನ ಕಂಡಕ್ಟರ್ ಗಳಿಗೆ ಬಹಳ ಕಾಡಿಸುತ್ತಿದ್ದೇವು. ನಮ್ಮ ಬಸ್ಸಿನಲ್ಲಿ ಬರುತ್ತಿದ್ದ ಎಲ್ಲಾ ಹುಡುಗ ಹುಡುಗಿಯರಿಗೂ ನಮ್ಮ ಪರಿಚಯವಿತ್ತು. ಡಿಗ್ರೀ ಕಾಲೇಜು, ಸರ್ಕಾರಿ ಕಾಲೇಜು, ಪಾಲಿಟೆಕ್ನಿಕ್ ಗೆ ಬರುತ್ತಿದ್ದವರೆಲ್ಲರು ನಮಗೆ ಪರಿಚಯವಿದ್ದರು.

ಆ ದಿನಗಳಲ್ಲಿ ಕ್ರಿಕೇಟ್ ಹುಚ್ಚು ಅಷ್ಟಿಷ್ಟಿರಲಿಲ್ಲ, ನಾನು ಹೆಚ್ಚಿನ ಕಾಲ ಲೋಕೇಶನ ಊರಾದ ಶಿರಂಗಾಲದಲ್ಲಿಯೇ ಕಳೆಯುತ್ತಿದ್ದೆ. ನಾವು ಕೆಲವೊಮ್ಮೆ ಓದುವುದಕ್ಕೆಂದು ಸಿದ್ದತೆಯನ್ನು ಮಾಡಿದ್ದೇವು, ಆದರೇ ಹೆಚ್ಚಿನ ಕಾಲ ಕ್ರಿಕೇಟ್ ಆಡುವುದರಲ್ಲಿಯೇ ಕಳೆದೆವು. ನಮ್ಮೂರಿನ ಹಲವಾರು ಜನರಿಗೆ ಅವನು ಗೊತ್ತಿತ್ತು ಮತ್ತು ಅವರೂರಿನ ಅನೇಕರಿಗೆ ನಾನು ತಿಳಿದಿತ್ತು. ನನ್ನನ್ನು ಬಹುತೇಕ ಹುಡುಗರು ಶಿರಂಗಾಲದವನೆಂದು ತಿಳಿದಿದ್ದರು. ಆ ದಿನಗಳಲ್ಲಿ ಮೊಬೈಲ್ ಇರಲಿಲ್ಲ. ನಾವು ಹಿಂದಿನ ದಿನವೇ ತಿರ್ಮಾನ ಕೈಗೊಂಡು ನಾಳೆ ಯಾವ ಬಸ್ಸಿಗೆ ಬರಬೇಕೆಂದು ತೀರ್ಮಾನಿಸುತ್ತಿದ್ದೆವು. ಅದರಂತೆಯೇ ಅವನು ಆ ಬಸ್ಸಿನ ವೇಳೆಗೆ ಅಲ್ಲಿ ಇರದಿದ್ದರೇ ನಾನು ಇಳಿದು ಅವನಿಗೆ ಕಾಯುತ್ತಿದ್ದೆ. ಶೆಟ್ಟಿ ಬಹಳ ಬುದ್ದಿವಂತ, ಅವನಿಗೆ ವ್ಯವಹಾರ ವ್ಯಾಪಾರ ಹೇಳಿ ಮಾಡಿಸುತ್ತಿತ್ತು. ನಾನು ಈಗಲೂ ಹೇಳುತ್ತೇನೆ ನಿನಗೆ ಎಂಬಿಎ ಸರಿ ಹೋಗುತ್ತಿತ್ತು ಎಂದು. ಆದರೇ ಅವನ ಲೆಕ್ಕಚಾರಗಳೇ ಬೇರೆ ಇರುತ್ತಿದ್ದವು ನೀವು ಅವಗಳನ್ನು ಕೇಳಿದರೇ ಅವನ ಮುಖವನ್ನು ನೋಡುವುದಿಲ್ಲ ಅಂಥಹ ವ್ಯಕ್ತಿ. ಅವನು ಯಾರ‍್ಯಾರ ಮೇಲೋ ಪೈಪೋಟಿ ನಡೆಸುತ್ತಿದ್ದ. ಅವರ ನೆಂಟರೆಲ್ಲರಿಗಿಂತ ಹೆಚ್ಚೂ ಓದಬೇಕು ಸಾಧಿಸಬೇಕೆಂಬುದು ಅವನ ಕನಸಾಗಿತ್ತು. ನಮ್ಮೂರಿನಲ್ಲಿ ಆಯೋಜಿಸಿದ್ದ ಕ್ರಿಕೇಟ್ ಟೂರ್ನಿಯಲ್ಲಿ ಆಡಿ ಬಹುಮಾನವನ್ನು ಗೆದ್ದ.

ನಾನು ಲೋಕಿ ಕೊಣನೂರಿನ ಮಾರುತಿ ಮಿನಿ ಟಾಕೀಸ್ ಹಲವಾರು ಬ್ಲೂ ಸಿನೆಮಾಗಳನ್ನು ನೋಡಿದ್ದೇವೆ. ಆ ದಿನಗಳಲ್ಲಿ ಅದು ಮಹಾ ಪಾಪ ಈಗಲೂ ಮಹಾ ಪಾಪ ಬಿಡಿ. ಕೊಣನೂರಿನ ಬಸ್ ಸ್ಟಾಂಡ್ ಎದುರುಗಡೆಯಲ್ಲಿಯೇ ಇತ್ತು ಮಾರುತಿ ಟಾಕೀಸ್ ಅದು ಮಹಡಿಯ ಮೇಲೆ, ಇಡೀ ಜಗತ್ತಿಗೆ ಕಾಣುತ್ತಿತ್ತು. ಅದರ ಪಕ್ಕದಲ್ಲಿಯೇ ಇದ್ದ ಎಳನೀರು ಅಂಗಡಿಯ ಅರವಿಂದ ನನಗೆ ಸ್ನೇಹಿತ. ಅವನು ಹತ್ತನೆಯ ತರಗತಿಯಲ್ಲಿ ಧುಮಕಿ ಹೊಡೆದು ಅಂಗಡಿಯ ಸಾಹುಕಾರನಾಗಿದ್ದ. ಅವನು ನಮಗೆ ಎಲ್ಲಾ ಚಿತ್ರಗಳ ವಿಮರ್ಶೆ ನೀಡುತ್ತಿದ್ದ. ಅವನು ಹೇಳಿದರೇ ಮಾತ್ರ ಹೋಗುತ್ತಿದ್ದೆವು. ಅವನ ಅಂಗಡಿಯ ಹತ್ತಿರ ನಿಂತಿದ್ದು ಹತ್ತೇ ಸೆಕಂಡುಗಳಲ್ಲಿ ಮೇಲೇರುತ್ತಿದ್ದೆವು. ಇಳಿಯುವಾಗಲೂ ಅಷ್ಟೇ ಅದೆಷ್ಟು ಬೇಗ ಇಳಿಯುತ್ತಿದ್ದೆವೆಂದರೇ ಹೇಳತೀರದು. ಕುಶಾಲನಗರದಲ್ಲಿ ಕಾವೇರಿ ವಿಡಿಯೋ ಕೂಡ ಆ ಹೊತ್ತಿಗೆ ಬಹಳ ಪ್ರಸಿದ್ದಿ ಹೊಂದಿತ್ತು. ಆದರೇ ನಾವೇಕೆ ಒಂದು ದಿನವೂ ಅಲ್ಲಿಗೆ ಹೋಗಲಿಲ್ಲವೆಂಬುದು ನಿಗೂಢ. ಅಲ್ಲಿಗೆ ಹೋಗುವುದು ಬಹಳ ಸುಲಭವಗಿತ್ತು ಆದರೂ ನಾವು ಕೊಣನೂರಿನಲ್ಲಿಯೇ ನೋಡಿದೆವು. ಒಮ್ಮೆ ವಿಜಿಯನ್ನು ಕರೆದುಕೊಂಡು ಹೋಗಿದ್ದೆ. ನನ್ನೂರಿನ ಅನೇಕ ಹುಡುಗರು ನನ್ನನ್ನು ಕೇಳಿದ್ದರೂ ಕೂಡ. ಅಲ್ಲಿ ಹೋಗಿ ಸಿನೆಮಾ ನೋಡುವುದು ಪೋಲಿತನದ ಕೆಲಸವಾಗಿತ್ತು. ನಾನು ಪೋಲಿಯೆಂಬುದು ಎಂದೋ ತೀರ್ಮಾನವಾಗಿತ್ತು.

ಎರಡನೇಯ ಆವೃತ್ತಿಯಲ್ಲಿ ನಾನು ನನ್ನಜ್ಜಿಯ ಮನೆಯಲ್ಲಿದ್ದೆ. ನಮ್ಮ ಮಾವ ಬೇಡವೆಂದರೂ ನಮ್ಮ ಕಾಲೇಜಿಗೆ ಬರುತ್ತಿದ್ದ ಕೆಲವು ಸೀನಿಯರ‍್ಸ್ ಗಳನ್ನು ಪರಿಚಯ ಮಾಡಿಸಿದ್ದ. ಅವರ ಬೆಂಬಲವೂ ಚೆನ್ನಾಗಿತ್ತು. ನನ್ನ ತಲೆ ಆ ಸಮಯದಲ್ಲಿ ನಿಲ್ಲುತ್ತಿರಲಿಲ್ಲ. ಕಾಲು ಕೆರೆದು ಜಗಳವಾಡುವುದೂ ರೂಢಿಯಾಗಿಬಿಟ್ಟಿತ್ತು. ಕ್ರೀಕೇಟ್ ಆಡುವಾಗಂತೂ ಜಗಳವಾಡದ ದಿನವೇ ಇರುತ್ತಿರಲಿಲ್ಲ. ಈಗ ನೆನಪಿಸಿಕೊಂಡರೇ ಬಹಳ ಬೇಸರವೆನಿಸುತ್ತದೆ. ಕ್ಲಾಸಿನಲ್ಲಿಯೂ ಅಷ್ಟೇ ಜಗಳವಾಡುವುದು, ಹುಡುಗರನ್ನು ರೇಗಿಸುವುದು, ಹೆದರಿಸುವುದು ಇವೆಲ್ಲವನ್ನೂ ಏಕೆ ಮಾಡಿದೆ? ನನ್ನೆಲ್ಲಾ ಚಟಗಳು ಬಲವಾಗಿದ್ದು ಆ ದಿನಗಳಲ್ಲಿ, ನಾನು ಹೆಚ್ಚೆಚ್ಚು ಕುಡಿಯತೊಡಗಿದೆ, ವಿಪರೀತ ಸಿಗರೇಟು ಸೇದತೊಡಗಿದೆ. ಅದೆಲ್ಲವನ್ನು ಅದೇಕೆ ಮಾಡಿದೆನೆಂದರೆ ಉತ್ತರವಿಲ್ಲ. ಶಿವರಾತ್ರಿಯಂದು ಕುಡಿದು ಗಲಾಟೆ ಮಾಡಿಕೊಂಡೆ, ಕುಡಿದು ಕುಶಾಲನಗಾರದ ಸರ್ಕಾರಿ ಶಾಲೆ ಮೈದಾನದಲ್ಲಿ ಬಿದ್ದಿದ್ದೆ. ಕುಡುಕನೆಂಬ ಹೆಸರು ಬಳುವಳಿಯಾಗಿ ಬಂದದ್ದು ಅಂದೆ. ನನಗಿಂದಿಗೂ ಸ್ಪಷ್ಟವಾಗಿ ನೆನಪಿದೆ, ಅಂದು ಮಾರ್ಚ್ ತಿಂಗಳ 20ನೇ ತಾರಿಖು 2000ದ ಇಸವಿ, ಶಿವರಾತ್ರಿಯ ದಿನ. ನನಗೆ ಆಗ, ನಮ್ಮ ಕ್ಲಾಸಿನವರಲ್ಲದೇ ಆರ್ಟ್ಸ್ ಮತ್ತು ಕಾಮರ್ಸ್ ಹುಡುಗರೂ ಸ್ನೇಹಿತರಾಗಿದ್ದರು. ನಮ್ಮ ಕ್ಲಾಸಿನಲ್ಲಿ ಕುಡಿಯುವವರ ಸಂಖ್ಯೆ ಬಹಳ ಕಡಿಮೆಯಿತ್ತು, ಅದೇ ವರ್ಷದ ಹೊಸ ವರ್ಷದ ದಿನ ಅವರೆಲ್ಲರೂ ಪರಿಚಯವಾಗಿದ್ದರು. ಅವರೊಂದಿಗೆ ಶಿವರಾತ್ರಿಯಂದು ಸಂಜೆ ಒಂಬತ್ತರ ಸುಮಾರಿಗೆ ಕಾಳೇಘಾಟ್ ಬಾರಿನಲ್ಲಿ ಕುಡಿಯುವುದಕ್ಕೆ ಕುಳಿತು ಮುಗಿಯುವಾಗ ರಾತ್ರಿ ಒಂದು ಗಂಟೆಯಾಗಿತ್ತು. ಅಲ್ಲಿಂದ ಬಂದವರು ಕುಣಿಯುತ್ತಾ, ಸರ್ಕಾರಿ ಶಾಲೆ ಮೈದಾನವನ್ನು ತಲುಪಿದೆವು. ಬರುವ ಮಧ್ಯದಲ್ಲಿ ಯಾರೋ ಒಬ್ಬ ನಮ್ಮನ್ನು ದುರುಗುಟ್ಟಿ ನೋಡಿದನೆಂದು ಅವನೊಂದಿಗೆ ಜಗಳವಾಡಿ ಬಂದೆವು. ಮೈದಾನಕ್ಕೆ ಬಂದವನು, ಯತೀಶ ಕುಡಿಯುತ್ತಿದ್ದ ಒಂದು ಫುಲ್ ಬಾಟಲಿ ರಮ್ ಅನ್ನು ಕಿತ್ತುಕೊಂಡು ಗಟ ಗಟ ಎಂದು ಕುಡಿದುಬಿಟ್ಟೆ, ಕುಡಿದನ್ನು ಬಿಟ್ಟರೇ ಮತ್ತೇನೂ ನೆನಪಿಲ್ಲ ನನಗೆ. ಮುಂಜಾನೆ ಎದ್ದು ನೋಡಿದರೇ, ಮೈಮೇಲೆಲ್ಲ ವಾಂತಿಯ ಗುರುತುಗಳು, ನನಗೆ ನನ್ನ ಮೇಲೆ ಅಸಹ್ಯವೆನಿಸತೊಡಗಿತ್ತು, ಅಲ್ಲಿಂದ ಬರಿಗಾಲಲ್ಲಿ ನಡೆದು ಹಾಸ್ಟೇಲ್ ತಲುಪಿದೆ, ಸ್ವಲ್ಪ ಹೊತ್ತು ಕುಳಿತು ನಂತರ ನದಿಯ ದಂಡೆಗೆ ಹೋದೆ. ಸ್ನಾನ ಮಾಡಲೂ ತ್ರಾಣವಿರಲಿಲ್ಲ. ಅದು ಹೇಗೆ ನಡೆದುಕೊಂಡು ಮನೆ ಸೇರಿದೇನೋ ನೆನಪಿಲ್ಲ, ಬಂದವನ ರೂಮಿನಲ್ಲಿ ಮಲಗಿದೆ. ಮನೆಯಲ್ಲಿ ಆ ವೇಳೆಗೆ ನಾನು ಕುಡಿದು ಜಗಳ ಮಾಡಿಕೊಂಡಿರುವ ವಿಷಯ ತಲುಪಿತ್ತು. ಅಜ್ಜಿ ಮತ್ತು ಅಮ್ಮಾ ಕ್ಲಾಸು ತೆಗೆದುಕೊಂಡರು.

ನಾನು ಕುಡಿದು ಜಗಳ ಮಾಡಿಕೊಂಡಿದ್ದ ವಿಷಯವನ್ನು ಮನೆಗೆ ತಲುಪಿಸಿದ್ದು, ಅಂಗಡೀ ಕಿರಣನ ತಾಯಿ. ಸ್ವಲ್ಪ ದಿನಗಳ ಹಿಂದೆ ಕಿರಣನಿಗೆ ಹೊಡೆದಿದ್ದೆವು. ಅವನು ನಮ್ಮ ನೆಂಟರ ಹುಡುಗಿಯ ಹಿಂದೆ ಸುತ್ತಾಡುತ್ತಿದ್ದಾನೆಂದು ತಿಳಿದು, ಕೂಡ್ಲೂರಿನ ಸೋಮಾ ಬಂದು ನನ್ನನ್ನು ಕೇಳಿದ, ನಿಮ್ಮೂರಿನ ಹುಡುಗ ಹೀಗೆ ಮಾಡುತ್ತಿದ್ದಾನೆ, ಏನು ಮಾಡಲಿ ಎಂದು. ಅದಕ್ಕೆ ನಾನು, ನಾನು ಸೇರುತ್ತೇನೆಂದು ಹೇಳಿ ಜೊತೆಯಲ್ಲಿ ಹೊಡೆದಿದ್ದೆವು. ಇದನ್ನೇ ಬಳಸಿಕೊಂಡ ಅವನು ನನ್ನ ಬಗ್ಗೆ ಮನೆಯಲ್ಲಿ ಚೆನ್ನಾಗಿಯೇ ಪುಂಗಿ ಊದಿಸಿದ್ದ. ನಮ್ಮಮ್ಮ ಬಂದವರು, ನನ್ನನ್ನು ದೇವರ ಮನೆಗೆ ಕರೆದೊಯ್ದು, ಆಣೆ ಪ್ರಮಾಣ ಮಾಡಿಸತೊಡಗಿದರು. ಆ ಸಮಯದಲ್ಲಿ ನಮ್ಮಜ್ಜಿ ಹೇಳಿದ ಮಾತು ಮತ್ತು ಅವರು ಅದನ್ನು ನಿಭಾಯಿಸಿದ ರೀತಿ ಅದ್ಬುತವೆನಿಸುತ್ತದೆ. ನಾನು ಹಿಂದೆ ಮುಂದೆ ಯೋಚಿಸುತ್ತಿದ್ದೆ, ಸುಮ್ಮನೆ ಪ್ರಮಾಣ ಮಾಡಿ ನಾಳೆ ದಿನ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ನಾನು ಸುಮ್ಮನೆ ಮಾತು ಕೊಟ್ಟು ಪಜೀತಿಗೆ ಸಿಕ್ಕಿ ಹಾಕಿಕೊಂಡಿರುವುದು ಕೇವಲ ಒಂದು ವಿಷಯದಲ್ಲಿ, ಅದು ಪ್ರೀತಿಯ ವಿಷಯದಲ್ಲಿ ಮಾತ್ರ. ಬೇರೆಯವರಿಗೆ ಆಗುವುದಿಲ್ಲವೆನ್ನಬಹುದು, ಆದರೇ ಹುಡುಗಿಯರ ವಿಷಯದಲ್ಲಿ ಮಾತ್ರ ನಾನು ಪಜೀತಿಗೆ ಸಿಕ್ಕಿಹಾಕಿಕೊಂಡಿದ್ದೇನೆ. ನಾವು ಒಂದನ್ನು ಹೇಳಿದರೇ ಈ ಹುಡುಗಿಯರ ಮತ್ತೊಂದಾಗಿ ಅರ್ಥೈಸಿಕೊಳ್ಳುತ್ತಾರೆ. ಮದುವೆಯ ವಿಷಯದಲ್ಲಿಯಾದರೂ ಸರಿ ಪ್ರೇಮೆ ಸಲ್ಲಾಪವಾದರೂ ಸರಿ. ನೇರವಾಗಿ ನಾನು ನಿನ್ನನ್ನು ಮದುವೆಯಾಗುವುದಿಲ್ಲವೆಂದು ಯಾವ ಹುಡುಗಿಯ ಎದುರುಗಡೆಯಲ್ಲಿಯೂ ಹೇಳಲಾಗುವುದಿಲ್ಲ. ಅದರಂತೆಯೇ ಅವರಲ್ಲಿ ಏನಾದರೂ ಕೊಂಕಿದ್ದರೂ ಹೇಳಲಾಗುವುದಿಲ್ಲ. ಸ್ವಲ್ಪ ರೇಗಿದರೂ ಅಲ್ಲಿ ಮಹಬಾರತವಾಗುತ್ತದೆ. ಹೋಗಲಿ ಬಿಡಿ. ಅಜ್ಜಿ ಬಂದು ಅಮ್ಮನಿಗೆ ಹೇಳಿದರು, ನೋಡು ನೀನು ಆಣೆ ಪ್ರಮಾಣ ಮಾಡಿದ ಮಾತ್ರಕ್ಕೆ ಅವನು ಅದನ್ನೆಲ್ಲಾ ನಿಲ್ಲಿಸುವುದಿಲ್ಲ. ಒಳ್ಳೆಯ ಮಾತಿನಿಂದ ಹೇಳು, ಹೀಗೆಲ್ಲಾ ಮಾಡಬೇಡ, ಅಪ್ಪನ ಮರ‍್ಯಾದೆ ವಿಷಯ ಹಾಗೇ ಹೀಗೆ ಎಂದು ಒಂದತ್ತು ನಿಮಿಷ ಕಥೆ ಹೇಳಿದರು. ಆ ವಯಸ್ಸಿನಲ್ಲಿ, ಅದನ್ನೆಲ್ಲ ಕೇಳುವ ತಾಳ್ಮೆಯಾರಿಗಿತ್ತು. ನಾನು ಯೋಚನೆ ಮಾಡಿದೆ, ನನಗೆ ಚಿಂತೆ ಇದ್ದದ್ದು ಅಪ್ಪನದ್ದಲ್ಲ, ನಮ್ಮಮ್ಮನದ್ದು, ಅವರಿಗೆ ಮೊದಲೇ ಉಷಾರಿರಲಿಲ್ಲ. ನನ್ನ ಬಗ್ಗೆ ಯೋಚನೆ ಮಾಡಿ ಹಾಸಿಗೆ ಹಿಡಿದರೆಂಬ ಭಯವಾಯಿತು. ನನಗೆ ಇಂದಿಗೂ ಅಷ್ಟೇ ನಮ್ಮಮ್ಮನದ್ದೇ ಚಿಂತೆ, ಅವರು ಒಬ್ಬರೇ ಕುಳಿತು ಯೋಚನೆ ಮಾಡುತ್ತಾರೆ. ತಿಂಗಳಲ್ಲಿ ಹದಿನೈದು ದಿವಸ ಹಾಸಿಗೆ ಹಿಡಿದಿರುತ್ತಾರೆ. ಅಂತೂ ಅಲ್ಲಿಂದ ತಪ್ಪಿಸಿಕೊಂಡೆ ಎನಿಸಿತು. ಕುಡಿಯುವುದನ್ನು ನಿಲ್ಲಿಸಲಿಲ್ಲ, ಆದರೆ ಎಚ್ಚರಿಕೆ ವಹಿಸಿದೆ. ಜಗಳವಾಡುವುದನ್ನು ಕಡಿಮೆಮಾಡಿದೆ.

ಆ ದಿನಗಳಲ್ಲಿ ಅನುಭವಿಸಿದ ನರಕಯಾತನೆ ಹೇಳತೀರದು. ಜನರು ಕುಡಿಯುತ್ತಾರೆ, ಆದರೇ ನನ್ನನ್ನು ಕುಡುಕನೆಂದು ಕರೆಯುತ್ತಾರೆ. ಇದೆಂಥಹ ವಿಚಿತ್ರವೆನಿಸಿತ್ತು. ನನ್ನೊಂದಿಗೆ ಕುಡಿದ ಹತ್ತು ಹದಿನೈದು ಹುಡುಗರೆಲ್ಲರೂ ಸಾಚಾಗಳು, ನಾನು ಮಾತ್ರ ಕುಡುಕನಾದೆ. ಜನರ ಬಗ್ಗೆ ಬಹಳ ಅಸಹ್ಯವೆನಿಸಿತ್ತು. ಅದಾದ ಮೇಲೆ ಹನ್ನೆರಡು ಶಿವರಾತ್ರಿ ನಡೆದಿದೆ, ಇಲ್ಲಿಯ ತನಕವೂ ಒಂದೇ ಒಂದು ಶಿವರಾತ್ರಿಯ ದಿನ ಕುಡಿದಿಲ್ಲ ನಾನು. ನಾನು ಆ ಒಂದು ದಿನ ನಡೆದುಕೊಂಡ ರೀತಿಗೆ ಇಂದಿಗೂ ಮರುಗುತ್ತೇನೆ, ಇಂದಿಗೂ ಅಷ್ಟೇ ಬಹಳ ಎಚ್ಚರಿಕೆಯಿಂದ ಇದ್ದೇನೆ. ಜನರು ನಾವು ಕೆಳಗೆ ಬಿದ್ದಾಗ ಬಹಳ ಕೆಟ್ಟದ್ದಾಗಿ ನಡೆಸಿಕೊಳ್ಳುತ್ತಾರೆ, ಅವರಿಗೆ ಮಾತ್ರವೇ ಮಾನ, ಮರ‍್ಯಾದೆ, ಗೌರವ, ಸ್ವಾಭಿಮಾನವಿರುವುದೆಂದು ಬಿಂಬಿಸಿಕೊಳ್ಳುತ್ತಾರೆ. ನಾನು ಅಂದು ಅವರಾರಿಗೂ ಬೈಯ್ಯಲಿಲ್ಲ, ಆದರೇ ದೇವರಲ್ಲಿ ಕ್ಷಮೆ ಕೇಳಿದೆ, ಯಾಕೆ ನನ್ನನ್ನು ಹೀಗೆ ಮಾಡಿದೆ ಎಂದೆ. ನನ್ನದು ತಪ್ಪಿತ್ತು. ಯಾವುದೇ ಆಗಲೀ ಇತಿ ಮಿತಿಯಲ್ಲಿದ್ದರೇ ಮರ‍್ಯಾದೆ. ನಾನು ಮಿತಿ ಮೀರಿದ್ದೆ, ನನ್ನ ಅಹಂಗೆ ಕೊನೆಯಿರಲಿಲ್ಲ. ನಾನು ಬದಲಾದೆ, ಬುದ್ದಿ ಕಲಿತೆ, ಬುದ್ದಿ ಕಲಿತೆ ಎನ್ನುವುದಕ್ಕಿಂತ ಪರಿಸ್ಥಿತಿ ಕಲಿಸಿತೆಂದರೂ ಸರಿಯೇ...ಒಮ್ಮೊಮ್ಮೆ ನನಗೆ ಎನಿಸುತ್ತದೆ, ಆ ದಿನ ನನ್ನ ಜೊತೆ ಕುಡಿದವರು, ನನ್ನನ್ನು ಕುಡುಕನೆಂದು ಗೇಲಿ ಮಾಡಿದವರೆಲ್ಲಾ ಸುದ್ದಿಯೇ ಇಲ್ಲದಂತಿದ್ದಾರೆ. ನನ್ನನ್ನು ಕಂಡರೇ ಮಾತನಾಡಲು ಹಿಂಜರಿಯುತ್ತಾರೆ, ಅನುಮಾನವೂ ಇದೆ, ಒಂದು ಇವನು ನಿಜಕ್ಕೂ ಬದಲಾದನಾ? ಎಂದು, ಮತ್ತೊಂದು ಇದೆಲ್ಲಾ ಹಣೆಬರಹವಾ ಎಂದು..ಅವಮಾನವಾದಾಗ ಮಾತ್ರ ಬೆಳೆಯುತ್ತೇವೆ, ಅದನ್ನು ಒಳ್ಳೆಯ ದಾರಿಯಲ್ಲಿ ತೆಗೆದುಕೊಳ್ಳಬೇಕು, ಸೇಡಾಗಿ ಬೆಳಸಬಾರದು. ಸೋಲಿಗೆ ಕೊನೆಯಿಲ್ಲ, ಗೆಲುವಿಗೂ ಕೊನೆಯಿಲ್ಲ. ನಂಬಿಕೆಯ ಮೇಲೆ ನಿಂತಿರುತ್ತದೆ, ಬದುಕು, ನಮ್ಮ ಬದುಕಿನ ಎಲ್ಲಾ ಆಗು ಹೋಗುಗಳಿಗೆ ಕಾರಣ ಮೂವರು. ಒಂದು ನಾವು, ಮತ್ತೊಂದು ಪರಿಸ್ಥಿತಿ ಮಗದೊಂದು ಕಾಣದ ಕೈ.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...