29 ಮೇ 2018

ಪರಿಸರ ಸಂರಕ್ಷಣೆ: ಅವೈಜ್ಞಾನಿಕ ಪರಿಸರವಾದಿ ಮತ್ತು ತೋರಿಕೆಯ ಪರಿಸರ ಪ್ರೇಮಿಗಳಿಂದ ನರಳುತ್ತಿರುವ ಪರಿಸರ ವ್ಯವಸ್ಥೆ!!!



ನಮಸ್ಕಾರ ಸ್ನೇಹಿತರೇ,
ಶೀರ್ಷಿಕೆಯನ್ನು ಗಮನಿಸಿದಾಗಲೇ ತಮಗೆ ನನ್ನ ಲೇಖನದ ತಿರುಳು ತಿಳಿದಿರುತ್ತದೆ. ನಾನು ಇದನ್ನು ಬಹಳ ಆಕ್ರೋಶ ಮತ್ತು ಕೋಪದಿಂದಲೇ ಬರೆಯುತ್ತಿದ್ದೇನೆ. ಇತ್ತಿಚಿನ ದಿನಗಳಲ್ಲಿ ಎಲ್ಲವೂ ಟ್ರೆಂಡ್ ಆಗುತ್ತದೆ. ರಾತ್ರಾರಾತ್ರಿ ಹೀರೋಗಳಾಗುತ್ತಾರೆ, ಜನಪ್ರಿಯರಾಗುತ್ತಾರೆ, ಜನಪ್ರಸಿದ್ದೀಯ ಉತ್ತುಂಗಕ್ಕೂ ಹೋಗುತ್ತಾರೆ. ಇದು ಎಲ್ಲಾ ಕ್ಷೇತ್ರದಲ್ಲಿಯೂ ಅದರಲ್ಲಿ ಭಾರತದಲ್ಲಿ ಆಗುತ್ತಿರುವ ಮಾರಕ ಪ್ರಕ್ರಿಯೆ. ಮಾರಕ ಎನ್ನುವ ಪದಬಳಕೆಯ ಉದ್ದೇಶವಿದೆ. ಯಾವುದು ದಿಡೀರ್ ಪ್ರಸಿದ್ದಿಯಾಗಬಾರದು ಅದು ಹೆಚ್ಚು ಕಾಲ ಉಳಿಯುವುದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಗಮನಿಸಿನೋಡಿ, ಕೆಲವರು ಇದ್ದಕ್ಕಿದ್ದಂತೆ ಪ್ರಸಿದ್ದಿಯಾದರು, ಸಿನೆಮಾ, ಕಿರುತೆರೆ, ರಿಯಾಲಿಟಿ ಶೋ, ಸಾರ್ವಜನಿಕ ಕ್ಷೇತ್ರ, ಕ್ರಿಕೇಟ್, ರಾಜಕೀಯ, ಪರಿಸರ ಸಂರಕ್ಷಣೆ, ರೈತ ಹೋರಾಟ, ಧರ್ಮ, ಜಾತಿ, ಭಾಷೆ, ರಾಜ್ಯ, ದೇಶ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಅಷ್ಟೆ. ಅವರೆಲ್ಲರ ಮುಖ ನಿಧಾನವಾಗಿ ಬದಲಾಗುತ್ತಾ ಹೋಯಿತು, ಕೆಲವರು ತೆರೆಮರೆಗೆ ತೆರಳಿದರು, ಆದರೇ ಅವರು ಮಾಡಿದ ಹಾನಿ? ಅದನ್ನು ತುಂಬಲು ಸಾಕಷ್ಟು ವರ್ಷ ಬೇಕಾಗುತ್ತದೆ ಮತ್ತು ಇವರಿಂದ ಪ್ರೇರೇಪಿತರಾಗಿರುವ ಎರಡನೆಯ ದರ್ಜೆಯ ನಾಯಕರು ಇನ್ನುಷ್ಟು ಹಾಳು ಮಾಡುತ್ತಾರೆ. 


ಸದ್ಯಕ್ಕೆ ಜೂನ್ ಐದು ಹತ್ತಿರವಿರುವುದರಿಂದ ಪರಿಸರ ಸಂರಕ್ಷಣೆಯಲ್ಲಿ ಈ ಮಹಾನುಭಾವರು ಮಾಡಿರುವ ಯಡವಟ್ಟುಗಳನ್ನೊಮ್ಮೆ ನೋಡೋಣ. ಅದಕ್ಕೂ ಮುಂಚೆ ಪರಿಸರ ಮತ್ತು ಪರಿಸರ ವ್ಯವಸ್ಥೆ ಕುರಿತು ಕೆಲವೊಂದು ಸರಳ ವಿಚಾರಗಳನ್ನು ತಿಳಿದುಕೊಳ್ಳೋಣ. ಪರಿಸರವೆಂದರೇನು? ಪರಿಸರ ವ್ಯವಸ್ಥೆಯೆಂದರೇನು? ನಮ್ಮ ಸುತ್ತು ಮುತ್ತಲಿರುವ ಜೀವವಿರುವ ಮತ್ತು ಇಲ್ಲದೇಯಿರುವ ಎಲ್ಲವನ್ನೂ ಸೇರಿಸಿ ಪರಿಸಅರವೆನ್ನುತ್ತೇವೆ. ಅಂದರೇ, ಮುಗಿಯಿತು ಇಲ್ಲಿಗೆ ನಿಮಗೆ ಇಷ್ಟವಿರಲಿ ಇಲ್ಲದೇಯಿರಲಿ, ಸುತ್ತ ಮುತ್ತವಿರುವ ಎಲ್ಲವೂ ಪರಿಸರದ ಅಂಗ. ಅದರಂತೆಯೇ ಪರಿಸರ ವ್ಯವಸ್ಥೆಯೆಂದರೇನು? ಅಲ್ಲಿ ಏನು ನಡೆಯುತ್ತದೆ? ಪರಿಸರದಲ್ಲಿ ಒಂದು ವ್ಯವಸ್ಥೆಯಿದೆ, ಅದರಲ್ಲಿ ಜೀವವಿರುವ ಜೀವಿಗಳ ನಡುವೆ, ಮತ್ತು ಜೀವವಿಲ್ಲದೇಯಿರುವ ವಸ್ತುಗಳ ನಡೆಯುವ ಚಟುವಟಿಕೆಗಳೆಲ್ಲವನ್ನೂ ಸೇರಿಸಿಕೊಂಡು ಪರಿಸರ ವ್ಯವಸ್ಥೆಯೆನ್ನಲಾಗಿದೆ. ಇದರಲ್ಲಿಯೂ ಅಷ್ಟೇ ಎಲ್ಲವೂ ಸೇರುತ್ತವೇ, ಸೇರಲೇಬೇಕು. ಇನ್ನೂ ನೇರವಾಗಿ ನಿಮಗೆ ಹೇಳಬೇಕೆಂದರೆ ಈ ಸೃಷ್ಟಿಯಲ್ಲಿರುವ ಪ್ರತಿಯೊಂದು ಬೇಕೆ ಬೇಕು ಮತ್ತು ಯಾವುದನ್ನೂ ನಿರ್ಲಕ್ಷಿಸುವಂತಿಲ್ಲ, ಜೀವವಿರಲಿ ಇಲ್ಲದೇಯಿರಲಿ ಎಲ್ಲದರ ಪಾತ್ರವೂ ಇದೆ. ಇದನ್ನು ನಾವು ಪಾಲಿಸುತ್ತಿದ್ದೇವಾ? ನಾವೇನು ಮಾಡುತ್ತಿದ್ದೇವೆನ್ನುವುದನ್ನು ಅವಲೋಕಿಸೋಣ.


ಇತ್ತಿಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಅಂತರಾಷ್ಟ್ರೀಯ ದಿನಗಳಿವೆ. ಅವುಗಳು ದಿನ ದಿನಕ್ಕೂ ಹೆಚ್ಚೆಚ್ಚು ಪ್ರಸಿದ್ದಿಯಾಗುತ್ತಿವೆ. ಅದರಲ್ಲಿ ಒಂದು ವಿಶ್ವ ಪರಿಸರ ದಿನ. ವಿಶ್ವ ಪರಿಸರ ದಿನದ ಉದ್ದೇಶವೊಂದೆ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಜನರಿಗೆ ತಲುಪಿಸುವುದು, ಅದಕ್ಕಾಗಿ ವರ್ಷಕ್ಕೊಂದು ವಿಷಯವನ್ನಿಟ್ಟುಕೊಂಡು ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಆದರೇ ಭಾರತದಲ್ಲಿ ಆಗುತ್ತಿರುವ ಬೆಳವಣಿಗೆಗಳು ಅಚ್ಚರಿ ಮತ್ತು ಆತಂಕವನ್ನುಂಟು ಮಾಡುತ್ತಿವೆ. ನೀವು ಹಾಗೆಯೇ ಗಮನಿಸಿ ಪರಿಸರವೆಂದರೆ ಬಹುತೇಕರ ಬಾಯಲ್ಲಿ ಬರುವುದು ಗಿಡ ನೆಡುವುದು, ಮರ ಬೆಳೆಸುವುದು. ಇದರಿಂದ ಆಚೆಗೆ ಮಾತನಾಡುವವರು ಬಹಳ ಕಡಿಮೆ. ಅರಣ್ಯ ಇಲಾಖೆ ಸೇರಿದಂತೆ ಅನೇಕರು ಕೋಟಿ ಕೋಟಿ ಗಿಡಗಳನ್ನು ನೆಡುತ್ತಿದ್ದೇವೆ ಎನ್ನುತ್ತಿದ್ದಾರೆ, ಇವುಗಳನ್ನು ಅನೇಕ ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ ಮತ್ತು ಅವರು ನೆಟ್ಟಿದ್ದಾರೆ. ಪ್ರತಿ ವರ್ಷಕ್ಕೂ ಕೋಟಿ ಗಿಡಗಳನ್ನು ನೆಟ್ಟಿದ್ದಾದರೇ ನಮ್ಮ ರಾಜ್ಯ ಸಂಪೂರ್ಣ ಕಾಡಾಗಬೇಕಿತ್ತು ಅಲ್ವಾ? ನೆಟ್ಟ ಗಿಡಗಳೆಲ್ಲಿ? ಪರಿಸರ ದಿನದಂದು ಗಿಡಗಳನ್ನು ನೆಟ್ಟು ಆ ಕಡೆಗೆ ತಿರುಗಿಯೂ ನೋಡದ ಅದೆಷ್ಟೋ ಪರಿಸರವಾದಿಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಒಂದೊಂದು ಗಿಡವನ್ನು ಅರಣ್ಯ ಇಲಾಖೆಯ ನರ್ಸರಿಯಲ್ಲಿ ಬೆಳೆಸಲು ಕನಿಷ್ಠ ಒಂದು ವರ್ಷ ಕಷ್ಟಪಟ್ಟಿರುತ್ತಾರೆ, ಆ ಸಸಿಗಳನ್ನು ಸಬ್ಸಿಡಿ ರೂಪದಲ್ಲಿ ಮಾರಲಾಗುತ್ತದೆ. ಖಾಸಗಿ ನರ್ಸರಿಯಲ್ಲಿ 50-60 ರೂಪಾಯಿಗೆ ಮಾರುವ ಗಿಡಗಳನ್ನು ಇಲಾಖೆಯು ಕೇವಲ 5-10 ರೂಪಾಯಿಗಳಿಗೆ, ಕೆಲವೊಮ್ಮೆ ಉಚಿತವಾಗಿಯೇ ನೀಡುತ್ತಿದೆ. ಸಸಿ ಬೆಳೆಸಲು ಹಾಕಿದ ವೆಚ್ಚ ಯಾರ ಹಣ?


ಮೇಲಿನ ಸಾಲುಗಳ ಅರ್ಥವಿಷ್ಟೆ, ಗಿಡ ನೆಡುವುದು ಮುಖ್ಯವಲ್ಲ ಅದರ ಬಗ್ಗೆ ಎಚ್ಚರಿಕೆ ವಹಿಸಿ ಬೆಳೆಸುವುದು ಮುಖ್ಯ. ಪ್ರತಿವರ್ಷ ತೋರಿಕೆಯ ಪರಿಸರಪ್ರೇಮವನ್ನು ನಿಲ್ಲಿಸಬೇಕು. ಅದಲ್ಲದೆ ಪರಿಸರವೆಂದರೇ ಕೇವಲ ಮರಗಳು ಮಾತ್ರವಲ್ಲ ಎನ್ನವುದನ್ನು ಅರಿಯಬೇಕು. ಇದರಲ್ಲಿಯೇ ಇನ್ನೊಂದನ್ನು ಗಮನಿಸೋಣ, ವೈಜ್ಞಾನಿಕವಾಗಿ. ಒಂದು ಕೋಟಿ ಗಿಡಗಳನ್ನು ನೆಡುತ್ತೀರೆಂದೇ ಪರಿಗಣಿಸೋಣ, ನೀವು ಎಲ್ಲಿ ನೆಡುತ್ತಿದ್ದೀರಿ? ಅಷ್ಟು ಜಾಗವೆಲ್ಲಿದೆ? ಜಾಗ ಸಿಕ್ಕಿತ್ತೆನ್ನೋಣ, ಅದಕ್ಕೆ ನೀರೆಲ್ಲಿಂದ? ಕುಡಿಯುವುದಕ್ಕೆ ನೀರಿಲ್ಲವೆಂದು ಪರದಾಡುತ್ತಿರುವಾಗ ಮರ ಬೆಳೆಸಲು ನೀರನ್ನು ಎಲ್ಲಿಂದ ತರುತ್ತೀರಿ? ನೀವು ನೆಡುತ್ತಿರುವ ಸಸಿಗಳಾವು? ಯಾವ ಜಾತಿಯವು? ಯಾವುದು ನರ್ಸರಿಯಲ್ಲಿ ಸಿಗುತ್ತದೆಯೋ ಅದನ್ನು ನೀವು ತಂದು ನೆಡುತ್ತಿರಿ, ಅದು ಆ ವಾತಾವರಣಕ್ಕೆ ಹೊಂದುತ್ತದೆಯೇ? ಗೊತ್ತಿಲ್ಲ. 


ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹುಚ್ಚಾಟದ ಅತಿರೇಕದಲ್ಲಿರುವ ಎರಡು ವಿಷಯಗಳು. ಮೊದಲನೆಯದಾಗಿ ಕೆಲವರು ಸಂದೇಶಗಳನ್ನು ಕಳುಹಿಸುತ್ತಾರೆ, ನೀವು ತಿನ್ನುವ ಹಣ್ಣಿನ ಬೀಜಗಳನ್ನು ಎಸೆಯಬೇಡಿ, ಮಳೆಗಾಲದಲ್ಲಿ ನೀವು ಹೊರಗೆ ಹೋದಾಗ ಎಸೆಯಿರಿ, ಅವುಗಳು ಮರಗಳಾಗುತ್ತವೆ, ಎಂಥಹ ಮೂರ್ಖತನದ ಪರಮಾವಧಿ? ಯಾವ ಬೀಜ ಎಲ್ಲಿ ಮೊಳಕೆಯಾಗುತ್ತದೆ? ಯಾವ ಜಾಗದಲ್ಲಿ ಬೆಳೆಯಬೇಕು? ಎನ್ನುವ ಕನಿಷ್ಠ ಜ್ಞಾನವೂ ಇಲ್ಲವೆ? ಎರಡನೆಯ ವಿಷಯ, ಸೀಡ್‍ಬಾಲ್. ಈ ಪದವನ್ನು ಕೇಳಿದರೆ ನನಗೆ ಮೈಯೆಲ್ಲಾ ಕುದಿಯುತ್ತದೆ. ಏನಿದು ಸೀಡ್‍ಬಾಲ್? ಎಂದು ತಿಳಿಯೋಣ. ಯಾವುದೋ ಜಾತಿಯ ಮರಗಳ ಬೀಜಗಳನ್ನು ಸಂಗ್ರಹಿಸಿ, ಅದಕ್ಕೆ ಮಣ್ಣು/ಗೊಬ್ಬರದ ಸಹಾಯದಿಂದ ಉಂಡೆಮಾಡಿಕೊಳ್ಳುವುದು, ಮುಂಗಾರು ಶುರುವಾದಾಗ ಖಾಲಿ ಜಾಗಕ್ಕೆ ತೆರಳಿ ಎಸೆಯುವುದು. ಎಸೆದಾಗ ಅವುಗಳೆಲ್ಲವು ಬೆಳೆದು ಮರವಾಗುವುದೆಂಬುದು ಇವರ ನಂಬಿಕೆ. ಇದನ್ನು ವೈಜ್ಞಾನಿಕವಾಗಿ ನೋಡೋಣ. ಮೊದಲನೆಯದಾಗಿ ಯಾವ ಜಾತಿಯ ಬೀಜಗಳಿವು? ಯಾವುದೋ ಜಾತಿಯವು. ಇವುಗಳನ್ನು ಖಾಲಿ ಜಾಗದಲ್ಲಿ ಎಸೆಯುತ್ತಾರೆ. ಈ ಖಾಲಿ ಜಾಗ ಇದಕ್ಕೂ ಮುಂಚೆ ಏನಾಗಿತ್ತು? ಪ್ರಕೃತಿಯಲ್ಲಿ ಕೆಲವು ಜಾಗಗಳು ಬರಡಾಗಿಯೇ ಇರಬೇಕು. ಬರಡು ಪ್ರದೇಶವನ್ನು ಹಸಿರು ಪ್ರದೇಶವಾಗಿಸುತ್ತೇವೆಂದರೆ ಏನರ್ಥ? ಮಲೆನಾಡನ್ನು ಬಯಲು ಸೀಮೆ ಮಾಡಿದರೆ ಎಷ್ಟು ಅಪಾಯವೋ ಅಷ್ಟೆ ಅಪಾಯ, ಬರಡು ಪ್ರದೇಶವನ್ನು ಹಸಿರು ಪ್ರದೇಶವನ್ನಾಗಿಸುವುದು. ಮರ ಬೆಳೆಸುತ್ತೇನೆಂಬ ಹುಂಬತನದಿಂದ ಎಲ್ಲೆಂದರಲ್ಲಿ ಸಿಕ್ಕಿ ಸಿಕ್ಕಿದ ಜಾತಿಯ ಮರಗಳನ್ನು ಹಾಕಿದರೆ ಅಲ್ಲಿನ ಪರಿಸರದ ಮೇಲೆ ಎಂಥಹ ವ್ಯತಿರಿಕ್ತ ಪರಿಣಾಮ ಬೀರುವುದು ಆಲೋಚಿಸಿ. 


ನೀವು ಯಾವುದಾದರೂ ನಿಸರ್ಗದತ್ತ ಕಾಡನ್ನು ನೋಡಿ, ಅದನ್ನು ಗಮನಿಸಿ. ನೀವುಗಳು ಚಾರಣಿಗರಾದರೇ ಅದರ ಅನುಭವವಿರುತ್ತದೆ. ಇಲ್ಲದೇ ಇದ್ದರೂ ನಾನು ಅದನ್ನು ವಿವರಿಸುತ್ತೇನೆ. ಕಾಡಿನಲ್ಲಿ ಒಂದೇ ರೀತಿಯ ಮರಗಳಿರುವುದಿಲ್ಲ, ಅದಿದ್ದರೆ ಅದನ್ನು ಕಾಡು ಎನ್ನುವುದಿಲ್ಲ, ನೆಡುತೋಪು ಎನ್ನಬೇಕು. ಪ್ರತಿ ಕಾಡಿನಲ್ಲಿಯೂ ಸಣ್ಣ ಪುಟ್ಟ ಗಿಡಗಳು, ಪೊದೆಗಳು ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುತ್ತವೆ. ಮರಗಳು ಹೆಚ್ಚಾದರೆ ನೆರಳು ಹೆಚ್ಚಾದರೆ ಅದೆಷ್ಟೋ ಜಾತಿಯ ಗಿಡಗಳು ಬರುವುದಿಲ್ಲ.  ಅದರಂತೆಯೇ ಪ್ರತಿಯೊಂದು ಕಾಡಿನ ತುತ್ತ ತುದಿಯನ್ನು ನೋಡಿ, ಅಲ್ಲೆಲ್ಲಾ ಹುಲ್ಲುಗಾವಲಿರುತ್ತದೆ. ಕೆಲವು ಪ್ರಾಣಿಗಳಿಗೆ ಹುಲ್ಲು ಬೇಕು, ಕೆಲವಕ್ಕೆ ಹಣ್ಣು ಬೇಕು, ಕೆಲವಕ್ಕೆ ಆ ಪ್ರಾಣಿಗಳೇ ಬೇಕು. ಇದು ಪ್ರಕೃತಿಯ ನಿಯಮ. ವೈವಿಧ್ಯತೆಯಿಂದರಬೇಕು. ಅಂತಹ ಪರಿಸರವನ್ನು ನೀವುಗಳು ಒಂದೇ ಜಾತಿಯ ಬೀಜಗಳನ್ನು ಎಸೆದು ಹಾಳು ಮಾಡುತ್ತಿರುವುದು ನಿಮಗೆ ತಿಳಿಯುತ್ತಿಲ್ಲವೇ? ಆದರೇ, ನಾನು ಗಮನಿಸಿದಂತೆ, ಕೆಲವು ಭಾಗದಲ್ಲಿ ಅದರಲ್ಲಿಯೂ ಸಿರಸಿಯ ನಮ್ಮ ಸ್ನೇಹಿತರಾದ ಉಮಾಪತಿ ಭಟ್ಟರು, ಅಲ್ಲಿನ ಕಾಡಿನಲ್ಲಿ ನಶಿಸುತ್ತಿರುವ ಪ್ರಭೇಧಗಳ ಬೀಜಗಳನ್ನು ಆಯ್ದು ತಂದು ಸೀಡ್‍ಬಾಲ್ ಮಾಡಿ ನಿಯಮಿತವಾಗಿ ಅದೇ ಕಾಡಿಗೆ ಎಸೆಯುತ್ತಿದ್ದಾರೆ. ಇದನ್ನು ನಾನು ಸಂಪೂರ್ಣವಾಗಿ ಬೆಂಬಲಿಸದೇ ಇದ್ದರೂ ಅವರಲ್ಲಿ ಸ್ವಲ್ಪವಾದರೂ ವೈಜ್ಞಾನಿಕ ಪ್ರಜ್ಞೆಯಿರುವುದು ನೆಮ್ಮದಿಯ ವಿಷಯ. ಆದರೇ ಬಹುತೇಕರು ಮಾಡುತ್ತಿರುವುದು ಮಾತ್ರ ಮಾರಕ.


ಇದೇ ರೀತಿಯ ಇನ್ನೊಂದಿಷ್ಟು ಉದಾಹರಣೆಗಳನ್ನು ಮಾತ್ರ ನೀಡುತ್ತೇನೆ. ಅದರ ಕುರಿತು ವಿವರವಾಗಿ ಮತ್ತೊಮ್ಮೆ ಚರ್ಚಿಸೋಣ. ನೀವು ಗಮನಿಸಿರುವ ಹಾಗೆ ಎಲ್ಲೆಂದರಲ್ಲಿ ಮಳೆ ನೀರು ಕೊಯ್ಲು ಮಾಡಿಸುವುದು. ಎಲ್ಲಿ ಮಾಡಿಸುವುದು ಸೂಕ್ತ ಎನ್ನುವ ಪರಿಜ್ಞಾನವೇ ಇಲ್ಲದೆ ಮಾಡಿಸುವುದು, ಅದರಂತೆಯೇ ಚೆಕ್‍ಡ್ಯಾಮ್‍ಗಳು, ಕೃಷಿ ಹೊಂಡ ಇವುಗಳು ಯಾವ ವಾತಾವರಣಕ್ಕೆ ಬೇಕು, ಎಲ್ಲಿಗೆ ಬೇಡ ಎನ್ನುವುದನ್ನೆ ಆಲೋಚಿಸದೆ ನಿರ್ಮಿಸುವುದು. 

ಕೊನೆಹನಿ: ಇದಕ್ಕೆಲ್ಲಾ ಮೂಲ ಕಾರಣ ಸೋಗಿನ ಪರಿಸರ ಪ್ರೇಮ ಮತ್ತು ಪ್ರಚಾರಕ್ಕಾಗಿ ಮಾಡುವ ಪರಿಸರ ಸಂರಕ್ಷಣೆ. ವೈಜ್ಞಾನಿಕವಾಗಿ ಪರಿಸರವನ್ನು ಕಾಣಲಾಗದೆ ಇರುವುದು. ಭಾರತದ ಮಟ್ಟಿಗೆ ಪರಿಸರ ಸಂರಕ್ಷಣೆ ನಮ್ಮ ಜೀವನದ ಅಂಗವಾಗಿದ್ದ ಸಂಪ್ರದಾಯ ನಮ್ಮದು. ಇದನ್ನು ಮೂರ್ನಾಲ್ಕು ಸಾಲುಗಳಲ್ಲಿ ಹೇಳುತ್ತೇನೆ. ಮೂವತ್ತು ವರ್ಷ ಹಿಂದಕ್ಕೆ ಹೋಗಿ, ಮನೆಯಲ್ಲಿ ದನ ಕರುಗಳಿದ್ದವು, ಯಾವುದೇ ಆಹಾರ ಉಳಿದರು ದನಕರುಗಳಿಗೆ ಕಲಗಚ್ಚಾಗುತ್ತಿತ್ತು, ಸೀಮೆ ಗೊಬ್ಬರದ ಮಾತಿಲ್ಲ, ಸಗಣಿ ಗೊಬ್ಬರ, ಔಷಧಿ ಎನ್ನುವಂತೆಯೆ ಇರಲಿಲ್ಲ, ಮನೆಯ ಹಿಂದೆ ನುಗ್ಗೆ ಮರ, ಮುಂದಕ್ಕೆ ತೊಂಡೆ ಚಪ್ಪರ, ಪಾತ್ರೆ ತೊಳೆದ ನೀರು ಬಾಳೆ ಮರ, ನಮ್ಮ ತರಕಾರಿ ನಮ್ಮಲ್ಲಿಯೇ ಬೆಳೆಯುತ್ತಿದ್ದವು. ಸ್ನಾನ ಮಾಡಿದ ನೀರು ಕೂಡ ಯಾವುದೋ ಒಂದು ಗಿಡಕ್ಕೆ ಹೋಗುತ್ತಿತ್ತು, ಸೋಪು ಕಡಿಮೆಯಿತ್ತು ಸೀಗೆಕಾಯಿ ಹೆಚ್ಚಿತ್ತು, ಬಟ್ಟೆ ತೊಳೆಯುವುದಕ್ಕೆ ನದಿ ದಂಡೆ, ಎಲ್ಲರೊಂದಿಗೂ ಮಾತುಕತೆ, ಒಣಗಿಸುವುದಕ್ಕೆ ಸೂರ್ಯನ ಬೆಳಕು ಹೀಗಿತ್ತು ಬದುಕು. ಈಗೇನಾಯ್ತು? ಎನ್ನುವುದು ನಿಮಗೆ ಗೊತ್ತಿದೆ. 

ಪರಿಸರ ದಿನ, ಪರಿಸರ ಸಂರಕ್ಷಣೆಯೆಂದರೆ ಕೇವಲ ಗಿಡ ನೆಡುವುದು ಮಾತ್ರವಲ್ಲ ಅವೈಜ್ಞಾನಿಕವಾಗಿ ಮಾಡುವುದೂ ಅಲ್ಲ ಎನ್ನುವುದಕ್ಕೆ ಈ ನನ್ನ ಮಾತುಗಳು. ನಿಮಗೆ ಯಾವುದೇ ಬಿನ್ನಾಭಿಪ್ರಾಯಗಳಿದ್ದರೂ ನೀವು ನನ್ನೊಂದಿಗೆ ಚರ್ಚಿಸಬಹುದು. ಸುಳ್ಳು ಪರಿಸರವಾದಿಗಳ ಬಗ್ಗೆ ಎಚ್ಚರವಿರಲಿ, ಇವರು ರಾಜಕಾರಣಿಗಳಂತೆಯೇ ಮಾರಕ. 

28 ಮೇ 2018

ಕೇವಲ ಅನುದಾನಕ್ಕಾಗಿ ಸಂಶೋಧನ ಸಂಸ್ಥೆಗಳು ಮತ್ತು ಹೆಸರಿಗಾಗಿ ಗುಂಪುಗಾರಿಕೆ !!!


ನಮಸ್ಕಾರ ಸ್ನೇಹಿತರೆ,
ಇದೊಂದು ಲೇಖನವನ್ನು ಸಾಕಷ್ಟು ವರ್ಷಗಳಿಂದ ಬರೆಯಲೇಬೇಕೆಂದಿದ್ದವನು ನಾನು. ಅದಕ್ಕೆ ಈಗ ಸಮಯ ಕೂಡಿಬಂದಿದೆ. ಅನೇಕರಿಗೆ ಸಂಶೋಧನೆ ಹೇಗೆ ನಡೆಯುತ್ತದೆ ಅದರ ಮಾನದಂಡಗಳೇನು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಇರುವುದಿಲ್ಲ. ಆದ್ದರಿಂದ ಈ ಲೇಖನ ದೀರ್ಘವಾದರೂ ಅನುಸರಿಸಿಕೊಂಡು ಓದಬೇಕಾಗಿ ವಿನಂತಿ. ನಾನು ಈ ಲೇಖನವನ್ನು ಕೆಲವು ಸಂಸ್ಥೆಗಳ ಮತ್ತು ಕೆಲವು ಸಂಶೋಧಕರನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯುತ್ತಿದ್ದರೂ ಅವರುಗಳ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ನಿಮಗೆ ಈ ರೀತಿಯ ಸಂಶೋಧಕರು ಹಾದಿ ಬೀದಿಯಲ್ಲಿಯೂ ಸಿಗುವ ಕಾಲ ಒದಗಿಬಂದಿದೆ. ಇರಲಿ ಅದೆಲ್ಲವನ್ನೂ ವಿವರವಾಗಿ ತಿಳಿಸುತ್ತೇನೆ. ಈ ಲೇಖನವನ್ನೂ ಯಾವ ಹಿನ್ನಲೆಯಲ್ಲಿ ಓದಬೇಕೆನ್ನುವುದನ್ನು ತಿಳಿಸುತ್ತೇನೆ. ಅದೇ ರೀತಿ ಇದನ್ನು ಬೇರೆ ಬೇರೆ ಭಾಗಗಳಾಗಿ ವಿಂಗಡಿಸಿ ವಿವರಿಸುತ್ತೇನೆ. ಮೊದಲನೆಯದಾಗಿ, ಭಾರತದಲ್ಲಿ ಸಂಶೋಧನೆ ಹೇಗೆ ನಡೆಯುತ್ತಿದೆ? ವಿವಿಧ ಆಯಾಮಗಳೇನು? ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಸಂಶೋಧನೆ ಹೇಗೆ? ಮಾನದಂಡಗಳೇನು? ಉಪಯೋಗಗಳೇನು? ಇದರೊಳಗಿರುವ ರಾಜಕೀಯ, ಗುಂಪುಗಾರಿಕೆ, ಮೋಸಗಳೇನು? ಎನ್ನುವುದನ್ನೂ ಸೂಕ್ಷ್ಮವಾಗಿ ತಿಳಿಯೋಣ. ಇತ್ತೀಚೆಗೆ ನಮಗಾದ ಕೆಟ್ಟ ಅನುಭವವನ್ನು ನಿಮ್ಮ ಮುಂದಿಡುತ್ತೇನೆ.

ಸಂಶೋಧನೆಯೆಂಬುದು ಎಲ್ಲಾ ಕ್ಷೇತ್ರಗಳಲ್ಲಿಯೂ ನಡೆದರೂ ನಾನು ಇಲ್ಲಿ ವಿವರಿಸುವುದು ಕೇವಲ ಡೆವಲಪ್‍ಮೆಂಟ್ ಸೆಕ್ಟರ್ ಎಂದು ಕರೆಯಲ್ಪಡುವ ಕೆಲವು ಕ್ಷೇತ್ರಗಳ ಕುರಿತು ಮಾತ್ರ. ಅವುಗಳೆಂದರೇ, ನೀರು, ಪರಿಸರ, ನೈರ್ಮಲ್ಯಕ್ಕೆ ಸಂಬಂಧಿಸಿದವು ಎನ್ನಬಹುದು. ಈ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯ, ಸರ್ಕಾರಿ ಸಂಶೋಧನ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ನಡೆಸುತ್ತವೆ. ವಿದ್ಯಾರ್ಥಿಗಳು ತಮ್ಮ ಪಿಎಚ್‍ಡಿಗೆಂದು ಸಂಶೋಧನೆ ಮಾಡುತ್ತಾರೆ. ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಂಡು ಅದರ ಕುರಿತು ಸಮಗ್ರ ಅಧ್ಯಯನ ನಡೆಸುತ್ತಾರೆ ಇದು ಮೂರರಿಂದ ಐದು ವರ್ಷ ಸಮಯ ತೆಗೆದುಕೊಳ್ಳುತ್ತದೆ. ಇದರ ಜೊತೆಗೆ ಅಲ್ಲಿನ ಉಪನ್ಯಾಸಕರು, ಪ್ರೋಫೆಸರುಗಳು ಕೂಡ ಕೆಲವೊಂದು ಸಂಶೋಧನ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಇದಕ್ಕಾಗಿ ಅನೇಕ ಸರ್ಕಾರಿ ಇಲಾಖೆಗಳು ಧನಸಹಾಯ ನೀಡುತ್ತವೆ. ಈ ಸಂಶೋಧನೆಯಲ್ಲಿ ಕಂಡುಹಿಡಿದ ಹೊಸ ಅಂಶಗಳನ್ನು ಪ್ರಬಂಧವಾಗಿ ಸಲ್ಲಿಸಬೇಕು. ಅದರ ಜೊತೆಗೆ ಕೆಲವೊಂದು ಲೇಖನಗಳನ್ನು ನಿಯತಕಾಲಿಕ (ಜರ್ನಲ್‍ಗಳಲ್ಲಿ) ಪ್ರಕಟಿಸಬೇಕಾಗುತ್ತದೆ. 

ಈ ನಿಯತಕಾಲಿಕಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನೊಮ್ಮೆ ತಿಳಿಯೋಣ. ನಿಯತಕಾಲಿಕಗಳು ನಮ್ಮ ವಾರ ಪತ್ರಿಕೆ, ಮಾಸ ಪತ್ರಿಕೆಗಳಂತೆ ಎಂದು ಕಲ್ಪಿಸಿಕೊಳ್ಳಿ. ಇದರಲ್ಲಿ ಹೇಗೆ ನಮ್ಮ ಬರಹಗಳನ್ನು ವಿಮರ್ಶಕರು ವಿಮರ್ಶಿಸಿ ಪ್ರಕಟಿಸುತ್ತಾರೋ ಅದೇ ರೀತಿ ಅಲ್ಲಿಯೂ ಪ್ರಕಟಿಸಲಾಗುತ್ತದೆ. ಆದರೇ, ಅಲ್ಲಿ ಕೆಲವೊಂದು ವ್ಯತ್ಯಾಸಗಳಿರುತ್ತವೆ. ಅನೇಕ ಜರ್ನಲ್‍ಗಳು ಬೇರೆ ಬೇರೆ ರೀತಿಯಲ್ಲಿ ಹಣ ಪಡೆದು ಪ್ರಕಟಿಸುತ್ತಾರೆ, ಇವುಗಳನ್ನು ಪೇಯ್ಡ್ ಜರ್ನಲ್‍ಗಳು ಎನ್ನುತ್ತೇವೆ. ಈ ರೀತಿ ಹಣ ಪಡೆಯುವ ಜರ್ನಲ್‍ಗಳಲ್ಲಿ ಯಾವೆಲ್ಲಾ ರೀತಿಯಲ್ಲಿ ಪಡೆಯುತ್ತಾರೆನ್ನುವುದು ಗಮನಾರ್ಹ. ಕೆಲವು ಜರ್ನಲ್‍ಗಳು ಪುಟಕ್ಕಿಷ್ಟು ಎಂದು ದೇಣಿಗೆ ಸಂಗ್ರಹ ಮಾಡುತ್ತವೆ, ಕೆಲವು ಜರ್ನಲ್‍ಗಳು ಚಂದಾದಾರರಾಗಿ ಎಂದು ದೇಣಿಗೆ ಸಂಗ್ರಹಿಸುತ್ತಾರೆ, ಮತ್ತು ಕೆಲವು ಜರ್ನಲ್‍ಗಳು ನಮ್ಮ ಸಂಪಾದಕರ ತಂಡಕ್ಕೆ ಸೇರಿದರೆ ನಿಮ್ಮ ಲೇಖನಗಳನ್ನು ಪ್ರಕಟಿಸಿಕೊಳ್ಳಬಹುದೆಂದು ದೇಣಿಗೆ ಸಂಗ್ರಹಿಸುತ್ತಾರೆ. ಇವುಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಜರ್ನಲ್‍ಗಳಿರುತ್ತವೆ. ಇದೇ ರೀತಿ ಇನ್ನೊಂದು ರೀತಿಯ ಜರ್ನಲ್‍ಗಳಿವೆ ಅವುಗಳಿಗೆ ಯಾವುದೇ ದೇಣಿಗೆ ನೀಡುವ ಅವಶ್ಯಕತೆಯಿಲ್ಲ. ಅಲ್ಲಿ ಗುಣಮಟ್ಟ ಮಾತ್ರವೇ ಮುಖ್ಯ ಪಾತ್ರವಹಿಸುತ್ತದೆ. ಇದು ಬಹಳ ಕಠಿಣವಾದ ಹಾದಿ. ಆದರೆ, ಈ ರೀತಿಯ ಜರ್ನಲ್‍ಗಳಲ್ಲಿ ಲೇಖನಗಳನ್ನು ಪ್ರಕಟಿಸಿದರೆ ಗೌರವ ಹೆಚ್ಚು. 

ಈ ಗೌರವವೆನ್ನುವುದನ್ನು ಹೇಗೆ ಪರಿಗಣಿಸಲಾಗುತ್ತದೆ ಎನ್ನುವುದನ್ನೊಮ್ಮೆ ನೋಡೋಣ. ಪ್ರತಿಯೊಂದು  ಲೇಖನಗಳಿಗೂ ಇಂತಿಷ್ಟು ಅಂಕಗಳಿರುತ್ತವೆ, ಕೆಲವೊಂದು ಜರ್ನಲ್‍ಗಳಿಗೆ ಅದರದ್ದೇ ಆದ ಅಂಕಗಳು (ಇಂಪಾಕ್ಟ್ ಫ್ಯಾಕ್ಟರ್) ಇರುತ್ತವೆ. ಸಂಶೋಧನವಲಯದಲ್ಲಿ ಮುಂಬಡ್ತಿಪಡೆಯಲು ಇದು ಅವಶ್ಯಕ. ತಾವುಗಳು ಎಷ್ಟು ಪುಸ್ತಕಗಳನ್ನು ಬರೆದಿದ್ದೀರಿ, ಎಷ್ಟು ಅಂಕಣಗಳು, ಎಷ್ಟು ಕಮ್ಮಟಗಳಲ್ಲಿ ಭಾಗವಹಿಸಿದ್ದೀರೆನ್ನುವುದೆಲ್ಲವೂ ಮುಖ್ಯವಾಗುತ್ತದೆ. ಕೆಲವರು ತಮ್ಮದೇ ಐಡಿಯಾಗಳನ್ನು ಸಾಧಿಸಲು ಗುಂಪುಗಾರಿಕೆ ಮಾಡುತ್ತಾರೆ. ಅದು ಹೇಗೆ ನಡೆಯುತ್ತದೆಂದು ಹೇಳುತ್ತೇನೆ. ಉದಾಹರಣೆಗೆ ನಾನು ಕಮ್ಮಟವನ್ನು ಆಯೋಜಿಸಿದಾಗ ನಿಮ್ಮನ್ನು ನಿಮ್ಮ ಸ್ನೇಹಿತರನ್ನು ಕರೆಯುವುದು, ನೀವು ನಿಮ್ಮ ಸ್ನೇಹಿತರು ಆಯೋಜಿಸುವಾಗ ನನ್ನನ್ನು ನನ್ನ ಸ್ನೇಹಿತರನ್ನು ಕರೆಯುವುದು, ಹೊರಗಿನವರನ್ನು ದೂರವಿಡುವುದು. ನನ್ನ ಬೆನ್ನು ನೀವು ಕೆರೆಯಿರಿ ನಿಮ್ಮದನ್ನು ನಾನು. ಅದೇ ರೀತಿ ಲೇಖನಗಳನ್ನು ಪ್ರಕಟಿಸುವಾಗ ಲೇಖಕರು ಕೆಲವು ವಿಮರ್ಶಕರ ಹೆಸರನ್ನೂ ಸೂಚಿಸಬೇಕು, ಅದು ಅವರಿಗೆ ಬೇಕರುವವರನ್ನೇ ಸೂಚಿಸುತ್ತಾರೆ. ಈಗಾಗಲೇ ಹೇಳಿರುವಂತೆ, ಅಲ್ಲಿನ ಸಂಪಾದಕರಲ್ಲಿ ಇವರೋ ಇವರ ಸ್ನೇಹಿತರೋ ಇದ್ದೇ ಇರುತ್ತಾರೆ. ಇತ್ತೀಚಿನ ನನ್ನ ಅನುಭವವನ್ನು ಹೇಳುತ್ತೇನೆ. 

ಇತ್ತೀಚೆಗೆ ಪ್ರಸಿದ್ದ ಸಂಸ್ಥೆಯೊಂದರ ಕೆಲವು ಸಂಶೋಧಕರು ಒಂದು ಲೇಖನವನ್ನು ಪ್ರಕಟಿಸಿದ್ದರು. ಅದು ಹೇಗಿತ್ತೆಂದರೆ. ಅವರು ಒಂದು ನದಿಕೊಳ್ಳದ ಕೇವಲ ಒಂದಿಷ್ಟು ಭಾಗವನ್ನು ಮಾತ್ರ ತೆಗೆದುಕೊಂಡು ಅಧ್ಯಯನ ಮಾಡಿದ್ದರು. ಇದು ಅನೇಕರು ಮಾಡುತ್ತಿರುವ ರೀತಿ. ಶೀರ್ಷಿಕೆಗೂ ಅವರ ಅಧ್ಯಯನ ಕ್ಷೇತ್ರಕ್ಕೂ ಸಂಭಂಧವೇ ಇರುವುದಿಲ್ಲ. ಉದಾಹರಣೆಗೆ, ಹಾಸನ ಜಿಲ್ಲೆಯಲ್ಲಿ ಬಾನುಗೊಂದಿ ಎನ್ನುವ ಸಣ್ಣ ಹಳ್ಳಿಯ ಕುರಿತು ಅಧ್ಯಯನ ಮಾಡಿ, ಇಡೀ ಹಾಸನವನ್ನು ಅಧ್ಯಯನ ಮಾಡಿದ್ದೀನಿ, ಎಂದರೆ? ನೀವುಗಳು ಉಗಿಯುವುದಿಲ್ಲವೆ? ಅಲ್ಲಯ್ಯ ನೀನು ಕೇವಲ ಒಂದು ಹಳ್ಳಿಯ ಕುರಿತು ಅಧ್ಯಯನ ಮಾಡಿ ಇಡೀ ಜಿಲ್ಲೆಯಲ್ಲಿಯೇ ನಡೆಸಿದೆ ಎನ್ನುತ್ತಿಯಾ? ಎಂದು. ಇಂಥವರ ಮತ್ತೊಂದು ಮುಖವೆಂದರೆ, ಇಲ್ಲಿಯವರೆಗೂ ಯಾರೂ ಇತಂಹ ಅಧ್ಯಯನವನ್ನೇ ಮಾಡಿಲ್ಲವೆನ್ನುವಂತೆ ಬಿಂಬಿಸುವುದು. ಇದು ಸಂಶೋಧನೆಗಾಗಿ ಅನುದಾನ ಪಡೆಯುವುದು ಸುಲಭ, ಅನುದಾನ ನೀಡುವ ಸಂಸ್ಥೆಯವರು ಹೇಳಿಕೊಳ್ಳಬಹುದು ಇದು ನಾವೇ ಮಾಡಿಸಿದ್ದೆಂದು. ನಾವೇ ಈ ಅಧ್ಯಯನ ನಡೆಸಿದವರಲ್ಲಿ ಮೊದಲಿಗರೆಂದು ತೋರಿಸುವುದು. ಉತ್ತಮ ಸಂಶೋಧಕನಾದವನು ಇಲ್ಲಿಯ ತನಕ ಈ ವಿಷಯಕ್ಕೆ ಸಂಬಂಧಹಿಸಿದಂತೆ ಏನೆಲ್ಲಾ ಸಂಶೋಧನೆ ನಡೆದಿದೆ, ಏನೆಲ್ಲಾ ಕೊರತೆಗಳಿವೆ ಎನ್ನುವುದನ್ನು ಅರಿಯಬೇಕು. ಕೊರತೆಯಿರುವ ವಿಷಯದ ಕುರಿತು ಸಂಶೋಧನೆ ನಡೆಸಬೇಕು ಅಥವಾ ಸಂಶೋಧನೆ ಬೇರೆ ಆಯಾಮಗಳನ್ನು ತೋರಿಸಿಕೊಡಬೇಕು. ಆದರೆ, ಕೆಲವರು ಈ ಹಿಂದೆ ಅನೇಕರು ನಡೆಸಿರುವ ಸಂಶೋಧನೆಗಳ ಯಾವೊಂದನ್ನು ಇವರು ಉಲ್ಲೇಖಿಸುವುದೇ ಇಲ್ಲ. ವಾಸ್ತವವಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ, ಅಂದಅರೆ ಹವಮಾನ ವೈಪರಿತ್ಯ ಮತ್ತು ನೀರಿನ ಒಳಹರಿವು ಹಾಗೂ ಅಂತರ್ಜಲದ ಏರುಪೇರಿಕೆ ಕುರಿತಂತೆ ಅನೇಕ ಅಧ್ಯಯನಗಳು ನಿಮಗೆ ಸಿಗುತ್ತವೆ. ಆದರೇ, ಇವರುಗಳು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದ್ದರು. 

ಇಂಥಹ ಸಂಸ್ಥೆಗಳ ಮತ್ತು ಈ ವರ್ಗದ ಸಂಶೋಧಕರಲ್ಲಿ ಮತ್ತೊಂದು ಅಂಶವಿದೆ. ದತ್ತಾಂಶಗಳ ಕೊರೆತಯಿದೆ,  ಮಾಹಿತಿಯೇ ಸಿಗುವುದಿಲ್ಲ, ಅಂದರೆ ಇಲಾಖೆಗಳಲ್ಲಿ ಒಳಹರಿವು, ಹೊರಹರಿವು, ಅಂತರ್ಜಲದ ಮಟ್ಟ ಕುರಿತಂತೆ ದತ್ತಾಂಶಗಳೇ ಇಲ್ಲ ಇದ್ದರೂ ಅವುಗಳ ಮೇಲೆ ಭರವಸೆ ಇಡುವಂತಿಲ್ಲ ಎನ್ನವುದು. ಇದಕ್ಕೆ ಮೂಲಕಾರಣ ಈ ಸಂಸ್ಥೆಗಳು ಮಾಹಿತಿ ಸಂಗ್ರಹಣೆಗಾಗಿ ಲಕ್ಷಾಂತರೆ ಅನುದಾನವನ್ನು ಪಡೆಯುವು ಇವರ ಮೂಲ ಉದ್ಧೇಶ. ನನ್ನ ಪ್ರಶ್ನೆ ಸರ್ಕಾರಿ ಇಲಾಖೆಗಳಲ್ಲಿಯೇ ಎಲ್ಲಾ ರೀತಿಯ ಮಾಹಿತಿಗಳು ದೊರೆಯುವಾಗ, ಅಥವಾ ನಿಮಗೆ ಬೇಕಿರುವ ಮಾಹಿತಿಗಳು ದೊರೆಯುವಾಗ ನೀವು ಲಕ್ಷಾಂತರ ರೂಗಳನ್ನು ಅದಕ್ಕಾಗಿ ವ್ಯಯಿಸುವುದೇಕೆ? ಈ ಯೋಜನೆಗಳ ರೂಪುರೇಷೆಗಳನ್ನೊಮ್ಮೆ ಗಮನಿಸೋಣ, ಹೆಚ್ಚೆಂದರೆ ಮೂರರಿಂದ ಐದು ವರ್ಷದ ಯೋಜನೆಗಳಾಗಿರುತ್ತವೆ. ಐದು ವರ್ಷದ ಮಾಹಿತಿ ಅದರಲ್ಲಿಯೂ ಹವಮಾನ ವೈಪರೀತ್ಯಕ್ಕೆ ಸಂಭಂದಿಸಿದಂತೆ ಯಾವ ತಿರ್ಮಾನಕ್ಕೆ ಬರಲಾಗುತ್ತದೆ ಹೇಳಿ. ವೈಜ್ಞಾನಿಕವಾಗಿ ನೋಡಿದರೆ ಇದೊಂದು ಮೋಸ. 

ಇವರು ನಡೆಸಿದ ಸಂಶೋಧನೆಯ ಲೇಖನಗಳನ್ನು ಲಕ್ಷಾಂತರ ರೂಪಾಯಿಗಳನ್ನು ನೀಡಿ ಪ್ರಕಟಿಸುವುದು. ಇದರ ಅವಶ್ಯಕತೆಯಾದರೂ ಏನಿದೆ? ಏಕೆಂದರೆ ಅಷ್ಟೆಲ್ಲ ದೇಣಿಗೆ ನೀಡಿದ ಮೇಲೆ ಅವರುಗಳು ಬೇರೆಯವರು ಪ್ರಶ್ನಿಸಲು ಬಿಡುವುದಿಲ್ಲ. ನೀವು ಪ್ರಶ್ನಿಸಬೇಕೆಂದರೆ ಕನಿಷ್ಠ ಇಷ್ಟು ಹಣವೆಂದು ಕೊಡಬೇಕು. ದುಡ್ಡು ಕೊಟ್ಟು ಏನು ಪ್ರಶ್ನಿಸುವುದು ಬೇಡ ಬಿಡಿ ಎನ್ನುತ್ತಾರೆ. ಇದನ್ನೇ ದಂಧೆ ಮಾಡಿಕೊಂಡು ದೊಡ್ಡ ಮಾಫಿಯಾವಾಗಿದೆ, ಸಂಶೋಧನೆ ಮತ್ತು ಪ್ರಕಟನೆಗಳು. 


ಉತ್ತಮ ಸಂಶೋಧಕನ ನಡುವಳಿಕೆಗಳು ಹೇಗಿರಬೇಕು?: ಮೊದಲಿಗೆ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನಾ ಆ ವಿಷಯಕ್ಕೆ ಸಂಬಂಧಿಸಿದಂತೆ ಈವರೆಗೂ ನಡೆದಿರುವ ಎಲ್ಲಾ ಸಂಶೋಧನೆಯನ್ನು, ಲೇಖನಗಳನ್ನು, ಈಗಾಗಲೇ ಲಭ್ಯವಿರುವ ದತ್ತಾಂಶಗಳನ್ನು ಕೂಡಿಹಾಕಬೇಕು. ಅದರಲ್ಲಿರುವ ನ್ಯೂನ್ಯತೆ/ಕೊರತೆಗಳನ್ನು ಪಟ್ಟಿಮಾಡಬೇಕು. ನಂತರ ಯೋಜನೆಯ ಉದ್ದೇಶಗಳನ್ನು ಸಿದ್ದಪಡಿಸಬೇಕು. ಈ ಕ್ಷೇತ್ರದಲ್ಲಿ, ಆ ವಿಷಯದಲ್ಲಿ ಯಾರೆಲ್ಲಾ ಕೆಲಸ ಮಾಡಿರುತ್ತಾರೆ ಅವರೆಲ್ಲರನ್ನೂ ಗಣನೆಗೆ ತೆಗೆದುಕೊಂಡು ಚರ್ಚಿಸಬೇಕು. ಪ್ರಮುಖವಾಗಿ ಸರ್ಕಾರಿ ಇಲಾಖೆಗಳಲ್ಲಿರುವ ದತ್ತಾಂಶವನ್ನು ಪಡೆಯಬೇಕು. ಏಕೆಂದರೆ, ಸರ್ಕಾರದಲ್ಲಿ ಅನೇಕ  ವರ್ಷಗಳಿಂದ ಕೂಡಿಟ್ಟಿರುವ ಮಾಹಿತಿಗಳು ಸಿಗುತ್ತವೆ ಮತ್ತು ಅದಕ್ಕಾಗಿಯೇ ಹಣವಿಯೋಗವಾಗಿರುತ್ತದೆ. ಮತ್ತೊಮ್ಮೆ ಹಣ ವ್ಯಯಿಸುವ ಅಗತ್ಯತೆಯಿರುವುದಿಲ್ಲ. ಅದರ ಜೊತೆಗೆ ಬೇರೆ ಬೇರೆ ಕ್ಷೆತ್ರಗಳಲ್ಲಿ ಆಗಿರುವ ಸಂಬಂಧಪಟ್ಟ ಸಂಶೋಧನೆಯ ಮುಖ್ಯ ಅಂಶಗಳನ್ನು ಗುರುತು ಹಾಕಿಕೊಳ್ಳಬೇಕು. ಎರಡನೆಯದಾಗಿ, ಲೇಖನಗಳನ್ನು ಪ್ರಕಟಿಸಿಕೊಳ್ಳುವಾಗ ಹಣ/ದೇಣಿಗೆ ನೀಡಿ ಪ್ರಕಟಿಸುವುದನ್ನು ನಿಲ್ಲಿಸಬೇಕು ಮತ್ತು ಉತ್ತಮ ಗುಣಮಟ್ಟದ ಜರ್ನಲ್‍ಗಳಲ್ಲಿ ಪ್ರಕಟಿಸಿಕೊಳ್ಳಬೇಕು. ಏಕೆಂದರೆ, ಅಂತಹ ಜರ್ನಲ್‍ಗಳಲ್ಲಿ ವಿಮರ್ಶೆಯಾಗಿರುತ್ತದೆ ಅದು ಸಂಶೋಧಕನ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ನಿಂದಿಸುವವರು, ವಿಮರ್ಶಕರಿಲ್ಲದೇ ಇದ್ದರೇ ನಾವು ಮಾಡಿದ್ದೇ ಸರಿಯೆಂದು ಅಹಂಮ್ಮಿನಲ್ಲಿ ಸಾಗುತ್ತದೆ. ಮೂರನೆಯದಾಗಿ, ಒಬ್ಬ ಸಂಶೋಧಕ ಮುಕ್ತವಾದ ವಿಮರ್ಶೆಗೆ ಚರ್ಚೆಗೆ ಸಿದ್ದನಿರಬೇಕು. ವಿಮರ್ಶಿಸುವವರನ್ನೆಲ್ಲ ದೂರವಿಟ್ಟು ಹೊಗಳುವವರ ಜೊತೆಗೆ ಸಾಗಿದರೆ ಅವನ ಬೌದ್ಧಿಕ ಗುಣಮಟ್ಟ ಹಳ್ಳಹಿಡಿಯುತ್ತದೆ. ನಾಲ್ಕನೆಯದಾಗಿ ನಮ್ಮೆಲ್ಲ ಸಂಶೋಧನೆಯ ಫಲಿತಾಂಶಗಳನ್ನು ಜನರೊಂದಿಗೆ ಹಂಚಿಕೊಳ್ಳಬೇಕು. ಸಾಧ್ಯವಾದಷ್ಟೂ ಸ್ಥಳೀಯ ಭಾಷೆಯಲ್ಲಿ ಮುಕ್ತವಾಗಿ ಬರೆಯಬೇಕು.


ಕೊನೆಹನಿ: ಸಂಶೋಧನೆ ಯಾವುದೇ ಕ್ಷೇತ್ರದಲ್ಲಿಯೇ ಇರಲಿ ಅದು ಜನ ಸಾಮಾನ್ಯರಿಗೆ ಅನುಕೂಲವಾಗುವಂತಿರಬೇಕು. ಸಂಶೋಧಕನಿಗೆ ಜವಬ್ದಾರಿ ಮತ್ತು ನೈತಿಕತೆಯಿರಬೇಕು. ಕೇವಲ ಅನುದಾನ ಪಡೆಯುವುದಕ್ಕಾಗಿ, ಹಣಕ್ಕಾಗಿ, ಹೆಸರುಗಳಿಕೆಗಾಗಿ, ಮುಂಬಡ್ತಿಗಾಗಿ ಹಾದಿತಪ್ಪಿಸುವ ಸಂಶೋಧನೆಯನ್ನು ಎಂದಿಗೂ ಮಾಡಬಾರದು. ಅದೊಂದು ಬೌದ್ದಿಕ ಸೂಲೆಗಾರಿಕೆಯಾಗುತ್ತದೆ. ಇವೆಲ್ಲವೂ ಜನಸಾಮಾನ್ಯರಿಗೆ ಮುಕ್ತವಾಗಿ ಸಿಗುವಂತೆ ಮತ್ತು ತಿಳಿಯುವಂತೆ  ಮಾಧ್ಯಮ ಮಿತ್ರರು ಸಹಕರಿಸಬೇಕಾಗಿ ವಿನಂತಿ. 



05 ಮೇ 2018

ನನ್ನನಿಸಿಕೆ: ಪ್ರಕಾಶ್ ರೈ - ಬಿಜೆಪಿ ವಾಕ್ಸಮರ


ನಾನು ಈ ವಿಷಯದ ಕುರಿತು ಬರೆಯಬೇಕೇ? ಬೇಡವೇ? ಎಂದು ಬಹಳ ದಿನಗಳಿಂದಲೂ ಆಲೋಚಿಸುತ್ತಿದ್ದೆ. ಅದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೇ, ಅದ್ಯಾಕೋ ಇದರ ಕುರಿತು ನನ್ನ ನಿಲುವನ್ನು ಪ್ರಕಟಿಸಬೇಕೆಂದು ಮನಸ್ಸಾಗಿ ಬರೆಯುತ್ತಿದ್ದೇನೆ. ನಾನು ಪ್ರತಿ ಬಾರಿ ಹೇಳುವಂತೆ, ದಯವಿಟ್ಟು ಸಂಪೂರ್ಣ ಲೇಖನವನ್ನು ಓದಲು ಸಾಧ್ಯವಾದರೆ ಓದಿ, ಸಂಪೂರ್ಣ ಓದಿದ ನಂತರ ನಿಮ್ಮ ಪ್ರತಿಕ್ರಿಯೆ ಬರಲಿ. ಯಾವುದೋ ನಾಲ್ಕ ಸಾಲುಗಳನ್ನು ಓದಿ ಅಥವಾ ಶೀರ್ಷಿಕೆಯನ್ನು ನೋಡಿ ಪ್ರತಿಕ್ರಿಯಿಸಬೇಡಿ. ನೀವು ಓದುವುದು ಬಿಡುವುದು ನಿಮಗೆ ಸೇರಿದ್ದು, ನೀವು ಓದಲೇಬೇಕೆಂಬ ನಿಯಮವಿಲ್ಲ. 

ನಾನು ಹೇಳುತ್ತಿರುವ ವಿಷಯ, ಪ್ರಕಾಶ್ ರೈ ಮತ್ತು ಬಿಜೆಪಿಯ ನಡುವಿನ ವಾಕ್ಸಮರದ ಕುರಿತು. ನನ್ನ ಅನೇಕ ಮಾತುಗಳು ಕೆಲವರಿಗೆ ಅರ್ಥವಾಗುವುದಿಲ್ಲ ಮತ್ತು ಹಲವರಿಗೆ ಹಿಡಿಸುವುದಿಲ್ಲ. ಅದಕ್ಕೂ ವಿವರಣೆ ನೀಡುತ್ತೇನೆ. ನಾವು ಯಾವುದೇ ವಿಷಯವನ್ನು ಕೇಳುವಾಗ ನಮ್ಮ ಪೂರ್ವ ಅನುಭವದೊಂದಿಗೆ ಹೋಲಿಕೆ ಮಾಡಿ ಅಥವಾ ನಮ್ಮ ಅನುಭವದ ಪೆಟ್ಟಿಗೆಯೊಳಗೆಯೇ ನೋಡುತ್ತೇವೆ. ಅಂದರೆ, ನಾನು ನನ್ನೂರು ಬಾನುಗೊಂದಿಯ ಬಗ್ಗೆ ಹೇಳುವಾಗ ನೀವು ನಿಮ್ಮೂರನ್ನು ಕಲ್ಪಸಿಕೊಳ್ಳುತ್ತೀರಿ, ನಾನು ಕಾವೇರಿ ನದಿ ದಂಡೆ ಅಂದರೆ ನೀವು, ಎಂದೋ ಕಂಡಿರುವ ನದಿ ದಂಡೆಯನ್ನು ಕಲ್ಪಿಸಿಕೊಳ್ಳುತ್ತೀರಿ. ನಾನು ಅಮೇರಿಕಾದ ಹಳ್ಳಿಯಂದರೂ ಅದೇ ಕಲ್ಪನೆ ನಿಮಗೆ ತಿಳಿಯದೇ ಬಂದಿರುತ್ತದೆ. ನಾನು ಕೇರಳಕ್ಕೆ ಹೋಗುವ ಮುನ್ನಾ ನನ್ನ ಸ್ನೇಹಿತ ಬಿನು ಕುಮಾರ್ ಅವರ ಊರಿನ ಬಗ್ಗೆ ಹೇಳಿದರೆ ನನಗೆ ನನ್ನೂರು ತಲೆಯೊಳಗೆ ಬರತಿತ್ತು. ಅಲ್ಲಿಗೆ ಹೋಗಿ ಬಂದ ಮೇಲೆ ನನ್ನ ಅನುಭವ ಬೇರೆಯಾಗಿದ್ದು. ಕೇರಳದಲ್ಲಿ ಹಳ್ಳಿ, ಪಟ್ಟಣವೆಂಬ ಬೇಧಭಾವವೇ ಇಲ್ಲ, ಎಲ್ಲಿಂದ ಎಲ್ಲಿಗೆ ಹೋದರೂ ಮನೆಗಳು, ಉತ್ತಮ ರಸ್ತೆಗಳು, ಆದರೆ ನಾನು ಹೋಗುವ ಮುನ್ನಾ? ನನ್ನ ತಲೆಯೊಳಗಿನ ಕೇರಳವೇ ಬೇರೆ. ಅದೇ ರೀತಿ ನನ್ನ ಮಾತುಗಳನ್ನು ಮುಕ್ತವಾಗಿ ಕೇಳಿ, ಓದಿ, ನಿಮ್ಮ ಭೂತದೊಂದಿಗೆ ಹೋಲಿಕೆ ಮಾಡಬೇಡಿ. 

ಪ್ರಕಾಶ್ ರೈ ಮತ್ತು ಬಿಜೆಪಿಯ ಅದರಲ್ಲಿಯೂ ಕರ್ನಾಟಕ ಬಿಜೆಪಿಯ ವಾಕ್ಸಮರವನ್ನೊಮ್ಮೆ ಅವಲೋಕಿಸೋಣ. ಸಾಧ್ಯವಾದಷ್ಟು ಮುಕ್ತವಾಗಿ ಮತ್ತು ಪಕ್ಷಾತೀತವಾಗಿ ನೋಡೋಣ. ಪ್ರಕಾಶ್ ರೈ ವಾದಗಳೇನು? ಬಿಜೆಪಿಯವರ ವಾದವೇನು?  ಅಥವಾ ಅವರ ಪ್ರತಿಕ್ರಿಯೆಗಳೇನು? ಇಷ್ಟೊಂದು ದೊಡ್ಡ ಮಟ್ಟದ ಚರ್ಚೆಗಳು ಆಗೋಕೆ ಕಾರಣವೇನು? ಇವೆಲ್ಲವನ್ನೂ ಗಮನಿಸೋಣ. ವ್ಯಕ್ತಿ ಸ್ವಾತಂತ್ರ್ಯ ಅದರಲ್ಲಿಯೂ ವಾಕ್ ಸ್ವಾತಂತ್ರ್ಯ ಬಹಳ ಮುಖ್ಯ. ಯಾವುದೇ ಸಮಾಜ, ದೇಶ ಬದಲಾಗಬೇಕು, ಬೆಳವಣಿಗೆಯಾಗಬೇಕಾದರೆ ಚರ್ಚೆಗಳಾಗಬೇಕು, ಚರ್ಚೆಗಳು ಮುಕ್ತವಾಗಿರಬೇಕು. ಪ್ರಶ್ನಿಸಬೇಕು, ಪ್ರಶ್ನಿಸುವವರನ್ನು ಹತ್ತಿಕ್ಕಬಾರದು. ಭಾರತ ಬುದ್ದಿವಂತರ ನಾಡು ಎಂದು ಹೆಸರು ಗಳಿಸಿದ್ದು, ಬೆಳೆದಿದ್ದು ಆ ಸ್ವಾತಂತ್ರ್ಯದಿಂದ. ಉದಾಹರಣೆಗೆ, ಹೊಯ್ಸಳರ ಕಾಲದ ದೇವಸ್ಥಾನಗಳನ್ನು ನೋಡಿ, ಅದೆಷ್ಟು ಸುಂದರ ಎನಿಸುತ್ತವೆ. ಅದಕ್ಕೆ ಮೂಲ ಕಾರಣ ಸ್ವಾತಂತ್ರ್ಯ. ಆದರೇ ಇತ್ತೀಚಿನ ಬೆಳವಣಿಗೆಯಲ್ಲಿ, ಅದರಲ್ಲಿಯೂ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಎಲ್ಲರ ಕೈಯಲ್ಲಿರುವುದು ಮತ್ತು ಸಾಕಷ್ಟು ಎಡವಟ್ಟುಗಳನ್ನು ಮಾಡುತ್ತಿವೆ. ಇದನ್ನು ವಿಶ್ಲೇಷಿಸಲು ಸಾಕಷ್ಟು ಆಯಾಮಗಳಲ್ಲಿ ನೋಡಬೇಕು. 

ಎಲ್ಲರ ಕೈಯಲ್ಲಿ ಮೊಬೈಲ್ ಇಂಟರ್‍ನೆಟ್ ಇರುವುದು, ಮನಸ್ಸಿಗೆ ಬಂದದ್ದನ್ನು ಹಾಕುವುದು, ಬರೆಯುವುದು ಮತ್ತು ಮಾತಿನ ಮೇಲೆ ಹಿಡಿತವಿಲ್ಲದೆ, ಕೆಟ್ಟ ಭಾಷೆಯನ್ನು ಬಳಸುವುದು ಆತಂಕಕಾರಿ ಬೆಳವಣಿಗೆ. ಎರಡನೆಯದಾಗಿ, ಸಮಗ್ರವಾಗಿ ಮಾತನ್ನು ಅಥವಾ ವಾದವನ್ನು ಆಲಿಸದೇ, ಕೇವಲ ಆಯ್ದ ತುಣುಕುಗಳನ್ನು ಎಡಿಟ್ ಮಾಡಿ ಜನರನ್ನು ಹಾದಿ ತಪ್ಪಿಸುತ್ತಿರುವುದು. ಮೂರನೆಯದಾಗಿ, ಪ್ರತಿಯೊಂದು ವಿಷಯಕ್ಕೂ ಭಾವಾತ್ಮಕವಾಗಿ, ಪ್ರತಿಕ್ರಿಯಿಸುವುದು. ನಾಲ್ಕನೆಯದಾಗಿ, ಎಲ್ಲದ್ದಕ್ಕೂ ಭಾಷೆ, ರಾಜಕೀಯ ಪಕ್ಷ, ಜಾತಿ, ಧರ್ಮದ ನಂಟು ಹಾಕುತ್ತಿರುವುದು. ಐದನೇಯದಾಗಿ, ವ್ಯಕ್ತಿ ಆರಾಧನೆ ಅಥವಾ ವ್ಯಕ್ತಿ ನಿಂಧನೆ ಹೆಚ್ಚಾಗುತ್ತಿರುವುದು. ಇವೆಲ್ಲವನ್ನು ಒಂದೊಂದಾಗಿ, ನೋಡುತ್ತಾ ಹೋಗೋಣ. ಅವುಗಳು ಪ್ರಕಾಶ್ ರೈ ರವರ ವಿಚಾರಕ್ಕೆ ಸೇರಿಸಕೊಂಡು ಅವಲೋಕಿಸೋಣ. 

ಈ ಬೆಳವಣಿಗೆಗಳು ಶುರುವಾಗಿದ್ದು, ಗೌರಿ ಲಂಕೇಶ್‍ರವರ ಹತ್ಯೆಯ ಸಮಯದಿಂದ. ಪ್ರಕಾಶ್ ರೈ ರವರು ಗೌರಿ ಹತ್ಯೆಗೆ ಸಂಘ ಪರಿವಾರದವರ ಕೈವಾಡವಿದೆ ಎಂದು ಆರೋಪಿಸಿದರು ಮತ್ತು ಬುದ್ದಿಜೀವಿಗಳ ರಕ್ಷಣೆಗೆ ಪ್ರಧಾನ ಮಂತ್ರಿಗಳು ನಿಲ್ಲಬೇಕು, ಇದರ ಕುರಿತು ಪ್ರತಿಕ್ರಿಯೆ ನೀಡಬೇಕೆಂದರು. ಒಬ್ಬ ಸ್ನೇಹಿತ ತನ್ನ ಸ್ನೇಹಿತೆಯ ಕೊಲೆಯಾಗಿದ್ದಾಗ ಭಾವಾನಾತ್ಮಕವಾಗಿ ವ್ಯವಸ್ಥೆಯನ್ನು ದೂರುವುದು ಸರ್ವೇಸಾಮಾನ್ಯ. ಅವರ ಸ್ಥಾನದಲ್ಲಿ ನಾನಿದ್ದರೂ ಅದನ್ನೇ ಮಾಡುತ್ತಿದ್ದೆ. ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು, ಕೇಳಿದರು, ಇದರಲ್ಲಿ ತಪ್ಪೇನು? ಅವರು ರಾಜ್ಯ ಸರ್ಕಾರವನ್ನೂ ಆಗ್ರಹಿಸಿದರು ಎನ್ನುವುದನ್ನು ಮರೆಯಬಾರದು. ಬಿಜೆಪಿಗರ ವಾದ ಅಥವಾ ಪ್ರತಿವಾದ ಏನಿರಬೇಕಿತ್ತು? ಮತ್ತು ಏನಾಯ್ತು? ಪ್ರತಾಪ್ ಸಿಂಹ, ಅನಂತ ಕುಮಾರ್ ಹೆಗ್ಡೆ ಸೇರಿದಂತೆ ಬಾಯಿಗೆ ಬಂದಂತೆ ಬೈದರು? ಅವರ ಮಗನ ಸಾವು ಮತ್ತು ಎರಡನೆಯ ಮದುವೆಯ ವಿಷಯವನ್ನು ತುಚ್ಛವಾಗಿ ನಿಂದಿಸಿದರು. ಇದರ ಅವಶ್ಯಕತೆಯಿತ್ತಾ? ಜನ ಪ್ರತಿನಿಧಿಯಾದವರು, ಸಂಸದರು ಬಳಸುವ ಪದಗಳಲ್ಲ ಅವುಗಳು. 

ಸರ್ವೇಸಾಮಾನ್ಯವಾಗಿ ಎಡಪಂಥಿಯರು ಪ್ರಕಾಶ್ ರೈರವರನ್ನು ಅವರೆಲ್ಲಾ ಕಾರ್ಯಕ್ರಮಗಳಿಗೆ ಆಹ್ವಾನಿಸೊತೊಡಗಿದರು. ಮೂಲತಃ ಪ್ರಕಾಶ್ ರೈ ಎಡಪಂಥೀಯ ಸಿದ್ದಾಂತವನ್ನು ಓದಿ ಬೆಳೆದವರು. ಹಾಗೆಂದ ಮಾತ್ರಕ್ಕೆ ಅವರು ಹಿಂದೂ ವಿರೋಧಿ ಅಥವಾ ಸಂಪ್ರದಾಯದ ವಿರೋಧಿ ಎನ್ನುವಂತಿಲ್ಲ. ಅವರು ಬೆಳೆದದ್ದು ವಿಜಯಮ್ಮ ಮತ್ತು ಬಿ.ಸುರೇಶರವರ ಮನೆಯಲ್ಲಿ. ಸಾಮಾಜಿಕ ಕಳಕಳಿ ಅವರಿಗೆ ಗೌರಿ ಸತ್ತ ಮೇಲೆ ಬಂದದ್ದಲ್ಲ. ಅದಕ್ಕೂ ಮುಂಚೆಯೇ ಅವರು ಆ ಕಾರ್ಯದಲ್ಲಿ ತೊಡಗಿದ್ದರು, ಹಳ್ಳಿಗಳನ್ನು ದತ್ತು ಪಡೆದಿದ್ದರು. ರೈತರಿಗೆ, ಶಾಲೆಗಳಿಗೆ, ಮಕ್ಕಳಿಗೆ ಸಹಾಯ ಮಾಡುತ್ತಾ ಬಂದಿದ್ದರು ಕೂಡ. ಬಿಡುವಿನ ವೇಳೆಯಲ್ಲಿ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕೆಲವರ ಆರೋಪಗಳು, ಪ್ರಕಾಶ್ ರೈ ಪಬ್ಲಿಸಿಟಿಗೆ, ದುಡ್ಡಿಗೆ ಹೀಗೆಲ್ಲಾ ಮಾಡುತ್ತಿದ್ದಾರೆಂದು. ನನ್ನ ಪ್ರಕಾರ ಅವರಿಗೆ ಅದೆರಡರ ಅವಶ್ಯಕತೆಯಾಗಲಿ, ಅನಿವಾರ್ಯತೆಯಾಗಲಿ ಇಲ್ಲವೇ ಇಲ್ಲ. ತನ್ನ ಪ್ರತಿಭೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಹೆಮ್ಮೆಯ ನಟ ಅವರು. ಅವರ ಜೀವನಕ್ಕೆ ಏನು ಬೇಕು ಅದೆಲ್ಲವನ್ನು ದುಡಿದು ಸಂಪಾದಿಸಿದ್ದಾರೆ, ಅದೆಲ್ಲವೂ ಅವರ ಶ್ರಮದ ಫಲ. ದಿಡೀರನೇ ಕರ್ನಾಟಕದ ಮೇಲೆ ಪ್ರೀತಿ ಬಂತು ಎಂದು ಕೆಲವರು ಹಂಗಿಸಿದ್ದಾರೆ. ದುಡಿಯುವ ಸಮಯದಲ್ಲಿ ಎಲ್ಲಿ ಸಾಧ್ಯವಾಗುತ್ತದೆ ಅಲ್ಲಿಗೇ ಹೋಗಲೇ ಬೇಕು ದುಡಿಯಲೇ ಬೇಕು. ನಾನು ದುಡಿಮೆಗೆ ಬೆಂಗಳೂರಿಗೆ ಬಂದಿದ್ದೇನೆ, ದುಡಿದ ನಂತರ ಊರಿಗೆ ಹೋಗಿ ಅಲ್ಲಿನವರಿಗೆ ಏನಾದರೂ ಮಾಡಬೇಕೆಂಬ ಹಂಬಲವಿದೆ. ಆದರೇ ಸಂಪಾದನೆಗಿಂತ ಮುಂಚೆ ಮಾಡಲಾಗುವುದಿಲ್ಲ. ರೈ ಕೂಡ ಹಾಗೇಯೆ ಮಾಡುತ್ತಿದ್ದಾರೆಂಬುದು ನನ್ನ ಅನಿಸಿಕೆ. 

ಕೆಲವು ಕಾಂಗ್ರೇಸ್ಸಿಗರು ಮತ್ತು ಎಡಪಂಥೀಯರು, ಅವರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದಂತೂ ನಿಜ. ಆ ಹಾದಿಯಲ್ಲಿ ಅವರು ಮೇವಾನಿಯ ಜೊತೆ ಸೇರಿದ್ದು ನನಗೆ ಸರಿ ಎನಿಸಲಿಲ್ಲ. ಮೇವಾನಿ ಜಾತಿಯ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಯುವ ರಾಜಕಾರಣಿ. ಜಾತಿ ಧರ್ಮಗಳ ಮೀರಿ ಬೆಳೆಯಬೇಕಿರುವ ಕಾಲಘಟ್ಟದಲ್ಲಿ ಇದು ಬೇಕಿರಲಿಲ್ಲ. ರೈ ರವರು ಮೋದಿಯನ್ನು ದೂರುವ ಸಲುವಾಗಿ ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಂಡಿದ್ದು ಸರಿಯಿಲ್ಲ. ಆದರೇ, ಅವರ ಸಮರ್ಥನೆ ಸರಿಯಿದೆ, ಮೋದಿ ಮತ್ತು ರಾಹುಲ್ ವಯಸ್ಸಿನ ವ್ಯತ್ಯಾಸವಿದೆ, ಆದರೆ ನೆನಪಿರಲಿ ರಾಹುಲ್ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷ. ಮೋದಿಯನ್ನು ಸೋಲಿಸುವ ಉದ್ದೇಶದಿಂದ, ಯೋಗ್ಯತೆಯಿಲ್ಲದೆ ಆ ಹುದ್ದೆಯಲ್ಲಿರುವ ಕಾಂಗ್ರೇಸ್ ಅನ್ನು ಬೆಂಬಲಿಸುವುದು ಆತಂಕಕಾರಿ ವಿಷಯ. ಮೋದಿಯನ್ನು ವಿರೋಧಿಸಿ ಆದರೆ ಅವರ ಸ್ಥಾನಕ್ಕೆ ನಿಮ್ಮ ಆಯ್ಕೆ ಯಾವುದು? ರಾಹುಲ್ ಗಾಂಧಿಯೇ? ಮಮತಾ ಬ್ಯಾನರ್ಜಿಯೇ? ಲಾಲೂ ಪ್ರಸಾದ್ ಯಾದವ್? ಯಾರು ನಿಮ್ಮ ನಾಯಕ? ಇದು ದೇಶದ ವಿಷಯ. ಸದ್ಯಕ್ಕಂತೂ ಮೋದಿಯನ್ನು ಬಿಟ್ಟರೇ ಬಿಜೆಪಿಯಲ್ಲಿಯೇ ಮತ್ತೊಬ್ಬ ಒಳ್ಳೆಯ ನಾಯಕನಿದ್ದಾರೆಂಬ ನಂಬಿಕೆ ನನಗಿಲ್ಲ. ಅದರಂತೆಯೇ, ಆದಿತ್ಯನಾಥ್ ಯೋಗಿಯ ವಿಷಯದಲ್ಲಿಯೂ ಅಷ್ಟೆ, ಉತ್ತರ ಪ್ರದೇಶ, ಕರ್ನಾಟಕದಂತೆ ಅಲ್ಲಾ, ಅದು ಬಹಳ ದೊಡ್ಡ ರಾಜ್ಯ, ಶಿಕ್ಷಣದಲ್ಲಿ ಹಿಂದುಳಿದು, ಹೆಚ್ಚೂ ಕಡಿಮೆ ಗೂಂಡಾ ರಾಜ್ಯ ಎನಿಸಿಕೊಂಡಿತ್ತು. ಅದನ್ನು ಸುಧಾರಿಸುವುದು ಸುಲಭದ ಮಾತಲ್ಲ. 

ನಾನು ಗಮನಿಸಿದ ಹಾಗೆ, ಪ್ರಕಾಶ್ ರೈ ಬೇರೆ ನಟರಂತೆ ಅಲ್ಲಾ. ಅವರು ಸಿದ್ದಾಂತಗಳೊಂದಿಗೆ ಬೆಳೆದವರು. ಚೆನ್ನಾಗಿ ಓದಿಕೊಂಡವರು, ಅವರ ಸ್ನೇಹ ವರ್ಗ ಕೂಡ ಪ್ರಜ್ಞಾವಂತರಿಂದ ಕೂಡಿದೆ. ವಿಚಾರವಂತರ ಬಳಗ ಹೊಂದಿದ್ದಾರೆ. ತಳ ಮಟ್ಟದಲ್ಲಿನ ವಾಸ್ತವಿಕತೆ ಗೊತ್ತಿದೆ, ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಬಂದವರು, ರಾತ್ರೋರಾತ್ರಿ ಸ್ಟಾರ್ ಆದವರಲ್ಲ. ಸುಮ್ಮನೆ ಕಾಟಾಚಾರಕ್ಕೆ ಮಾತನಾಡುವುದಿಲ್ಲ ಕೂಡ. ಅವರಿಗೆ ಉತ್ತರ ನೀಡುವ ಸಾಮಥ್ರ್ಯ ಬಹುತೇಕ ಕರ್ನಾಟಕದ ಬಿಜೆಪಿಯವರಲ್ಲಿ ಇದ್ದಂತೆ ನನಗೆ ಕಾಣಲಿಲ್ಲ, ಹಾಗಾಗಿಯೇ ಪ್ರಕಾಶ್ ರೈರವರನ್ನು ಕೆಟ್ಟ ಭಾಷೆಯಿಂದ ನಿಂದಿಸಿದರು, ಕೊನೆಗೆ ಯಾವ ಮಟ್ಟಕ್ಕೆ ಇಳಿಯಿತೆಂದರೆ ವಿವೇಕತನವೇ ಇಲ್ಲದ ಪ್ರಥಮ್, ಹುಚ್ಚ ವೆಂಕಟ್‍ರವರ ಮಾತುಗಳಿಗೆ ಮನ್ನಣೆ ನೀಡಿ, ಪ್ರಚಾರ ನೀಡಿದರು. 

ಇನ್ನೂ ಕರ್ನಾಟಕದ ಬಿಜೆಪಿಯ ವಿಷಯಕ್ಕೆ ಬರೋಣ. ನಾನು ಸೇರಿದಂತೆ ಕೋಟ್ಯಾಂತರ ಜನರು ಬಿಜೆಪಿಯನ್ನು ಬೆಂಬಲಿಸಿದ್ದೆವು. ಅದಕ್ಕೊಂದಿಷ್ಟು ಕಾರಣಗಳಿದ್ದವು, ನಿರೀಕ್ಷೆಗಳಿದ್ದವು. ಅದರ ಜೊತೆಗೆ ಕಾಂಗ್ರೇಸ್ ಬಗ್ಗೆ ತಿರಸ್ಕಾರ ಮತ್ತು ಬೇಸರವಿತ್ತು. ಬಿಜೆಪಿ ಬೆಳೆದಿದ್ದು, ವಿದ್ಯಾವಂತರ ಮತ್ತು ಪ್ರಜ್ಞಾವಂತರ ಪಕ್ಷವಾಗಿ. ಹಾಗಾಗಿಯೇ, ಇತ್ತೀಚಿನ ದಿನಗಳ ತನಕ ಗ್ರಾಮೀಣ ಪ್ರದೇಶ ಮತ್ತು ಸ್ಲಂ ಗಳಲ್ಲಿ ಬಿಜೆಪಿಗೆ ಓಟ್ ಕಡಿಮೆಯಿರುತ್ತಿತ್ತು. ನೀವು ಕರ್ನಾಟಕದಲ್ಲಿ ಬಿಜೆಪಿ ಬೆಳೆದು ಬಂದ ಹಾದಿಯನ್ನು ಗಮನಿಸಿದರೆ, ಮೊದಲೆಲ್ಲಾ ದಕ್ಷಿಣ ಕನ್ನಡದಲ್ಲಿಯೇ ಹೆಚ್ಚಿರುತ್ತಿತ್ತು. ಇದಕ್ಕೆ ಕಾರಣ, ಅದು ವಿದ್ಯಾವಂತರ ಜಿಲ್ಲೆ ಎನ್ನುವ ಮಾತಿತ್ತು. ಎಲ್‍ಕೆ ಅಡ್ವಾಣಿಯವರು ಯಡ್ಯೂರಪ್ಪರವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆಂದು ತಿಳಿದ ತಕ್ಷಣ ಅವರಿಂದ ದೂರ ಉಳಿದರು. ಪ್ರತಿ ವರ್ಷ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬರುತ್ತಿದ್ದರು, ಆದರೇ ನಂತರ ದೂರ ಇಟ್ಟರು. ಕಾರಣ ಆ ಪಕ್ಷದಲ್ಲಿನ ನೈತಿಕತೆ. ವಾಜಪೇಯಿ, ಮುರಳಿ ಮನೋಹರ್ ಜೋಷಿ, ಅಡ್ವಾಣಿಯವರನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ. ಆದರೇ, ಕರ್ನಾಟಕದಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿಯ ನಾಯಕರುಗಳ ನಡುವೆ ಅಂತಹ ದೊಡ್ಡ ವ್ಯತ್ಯಾಸವೇನೂ ಕಾಣುವುದಿಲ್ಲ. ಅದರಲ್ಲಿಯೂ ಇಂದಿನ ಕಾರ್ಯಕರ್ತರ ದೃಷ್ಟಿಯಲ್ಲಿ ಬಿಜೆಪಿ ಇರುವುದು ಹಿಂದುಗಳಿಗೆ ಮಾತ್ರ, ಅದಿಲ್ಲದೇ ಇದ್ದರೇ ಹಿಂದೂಗಳೇ ಇರುವುದಿಲ್ಲವೆಂದು ನಂಬಿದ್ದಾರೆ ಮತ್ತು ನಂಬಿಸುತ್ತಿದ್ದಾರೆ. 

ಹಾಗಾಗಿಯೇ ಪ್ರಕಾಶ್ ರೈ ವಿಷಯವನ್ನೂ ಪದೇ ಪದೇ ಧರ್ಮಕ್ಕೆ ಅಂಟಿ ಹಾಕುವುದು. ಮೊನ್ನೆ ಒಬ್ಬ ಪತ್ರಕರ್ತ ಮಂಡ್ಯದಲ್ಲಿ ಪ್ರಕಾಶ್ ರೈರವರನ್ನು ಬೇಕೆಂದೇ ಪ್ರಚೋದಿಸಿದ. ಆ ವಿಡಿಯೋವನ್ನು ಸಂಪೂರ್ಣವಾಗಿ ಹಾಕಲಿಲ್ಲ. ಕೇವಲ ಒಂದು ತುಣುಕನ್ನು ಹಾಕಿ, ಅದರಲ್ಲಿ ನಾನು ಹಿಂದೂ ಅಲ್ಲ ಎನ್ನುವುದನ್ನು ಹೈಲೈಟ್ ಮಾಡಲಾಗಿತ್ತು. ಈ ವಿಷಯಕ್ಕೆ ಸಂಭಂಧಿಸಿದಂತೆ ಸ್ವಲ್ಪ ಚರ್ಚಿಸೋಣ. ಹಿಂದೂ ದೇಶ ಎಂದರೇ ಏನು? ಭಾರತ ಯಾವಾತ್ತಾದರೂ ಹಿಂದೂ ದೇಶವಾಗಿತ್ತು? ಹಿಂದೂ ಎನ್ನವುದೇನು? ಹಾಗೆಂದು ಧರ್ಮವಿದೆಯಾ? ಇದೆಲ್ಲವೂ ಹೇಗೆ ಹುಟ್ಟಿತು? ಇದರ ಕುರಿತು ಪ್ರೋ. ಎಸ್.ಎನ್. ಬಾಲಗಂಗಾಧರರವರು ಕಳೆದ ನಲ್ವತ್ತು ವರ್ಷದಿಂದ ಸಂಶೋಧನೆ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಅವರ ಪುಸ್ತಕಗಳ ಮೂಲಕ ಅಥವಾ ಭಾಷಣಗಳ ಮೂಲಕ ತಿಳಿದುಕೊಳ್ಳಿ. ಸಂಕ್ಷಿಪ್ತವಾಗಿ ಹೇಳುವುದಾದರೇ ಹಿಂದೂ ಧರ್ಮವೆಂಬುದೇ ಇಲ್ಲ. ಮುಸಲ್ಮಾನರಿಗೆ, ಕ್ರೈಸ್ತರಿಗೆ ನಿದಿಷ್ಟವಾದ ಒಂದು ಪುಸ್ತಕವಿದೆ, ಅದರಂತೆಯೇ ಅವರು ಜೀವನ ಸಾಗಿಸಬೇಕು, ದೇವರನ್ನು ಕಾಣಬೇಕು. ನಮಗೆ ಹಾಗಿಲ್ಲ. ಭಾರತ ಸಂಸ್ಕøತಿ, ಸಂಪ್ರದಾಯಗಳ, ಆಚರಣೆಗಳ ದೇಶ. ನಮ್ಮಲ್ಲಿ ಧರ್ಮ ಎಂಬ ಪದ ಬಳಕೆಯೇ ಬೇರೆ, ಅದು ರಿಲಿಜಿನ್ ಅಲ್ಲಾ. ದಯೇಯೇ ಧರ್ಮದ ಮೂಲವಯ್ಯ – ಇಲ್ಲಿ ಧರ್ಮ ಎಂದರೆ ರಿಲಿಜಿನ್ ಅಲ್ಲ. ಹಾಗಾಗಿ ಈ ಹಿಂದೂ ಸ್ಥಾನ್ ಮಾಡುವುದು, ಹಿಂದೂ ರಾಷ್ಟ್ರ ಮಾಡುವುದು ಹೇಗೆ? ಮತ್ತೊಂದು ಉತ್ತಮ ಉದಾಹರಣೆ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು. ಅಲ್ಲಿ ಜೈನರು, ಬುದ್ದರು, ವೈಷ್ಣವರು, ಶೈವರು ಹೀಗೆ ಬಂದು ಹೋಗುತ್ತಿರುತ್ತಾರೆ ಯಾವುದೂ ಉಳಿದಿದ್ದು?

ನಮ್ಮೂರಿನ ಹತ್ತಿರ ಹಂಡ್ರಂಗಿ ಇದೆ. ಅಲ್ಲಿ ಘೋರಿಗಳಿವೆ. ಮಾಸ್ಮಾಲಮ್ಮ ಅಂತಾ ಜಾತ್ರೆ ಮಾಡ್ತಾರೆ, ಎಲ್ಲಾ ಜಾತಿಯವರು ಹೋಗ್ತಾರೆ, ಹರಕೆ ಕಟ್ತಾರೆ. ಈ ಧರ್ಮವೇ ಬರೋದಿಲ್ಲ. ಅದೇ ರೀತಿ ಸಾಕಷ್ಟು ಊರುಗಳು ನಿಮಗೆ ಸಿಗುತ್ತವೆ. ಇದು ಕರ್ನಾಟಕ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲಿಯೂ ಕೂಡ. ಮೊಘಲರು ನಮ್ಮ ಮೇಲೆ ಆಕ್ರಮಣ ಮಾಡಿದರು, ನಾಶ ಮಾಡಿದರು, ಆದರೇ ನಮ್ಮ ಅನೇಕರು, ಅಕ್ಬರ್, ಔರಂಗಜೇಬ್, ಷಹಾಜಹಾನ್ ರವರ ಘೋರಿಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದರರ್ಥವೇನು? ನಾವು ಚಿಕ್ಕವರಿದ್ದಾಗ ಇಂಥವುಗಳು ನಮ್ಮ ತಲೆಯೊಳಕ್ಕೆ ಬರಲೇ ಇಲ್ಲ. ಬಹುಶಃ ಮಾಧ್ಯಮಗಳು ಕಡಿಮೆಯಿತ್ತು? ರಾಜಕಾರಣಿಗಳು ಈ ಮಟ್ಟಕ್ಕೆ ಇಳಿದಿರಲಿಲ್ಲ. ಇರಲಿ, ಇಲ್ಲಿ ರೈ ರವರು ಹೇಳುತ್ತಿರುವುದು ಅದನ್ನೇ. ಇದು ಎಲ್ಲರ ದೇಶವೆಂದು. ಅದನ್ನ ಅವರು ಜ್ಯಾತ್ಯಾತೀತ ಅನ್ನೊ ಪದವನ್ನು ಬಳಸುತ್ತಿದ್ದಾರೆ ಅಷ್ಟೆ. ವೈವಿಧ್ಯತೆಯೇ ಬದುಕು. ಬಿನ್ನಾಭಿಪ್ರಾಯಗಳಿರಬೇಕು. ಚರ್ಚೆಗಳಾಗಬೇಕು. ಪ್ರಶ್ನೆಗೆ ಉತ್ತರ ಕೊಡಬೇಕು ಮತ್ತು ಹುಡುಕಬೇಕು. ಅದನ್ನು ಬಿಟ್ಟು ಪ್ರಶ್ನೆಗೆ ಪ್ರಶ್ನೆ ಹಾಕುವುದಲ್ಲ. ಪಲಾಯನವಾದ ಮಾಡುವುದಲ್ಲ. 

ಈ ಲೇಖನಕ್ಕೆ ನೇರ ಸಂಭಂಧವಿಲ್ಲದೇಯಿದ್ದರೂ ಒಂದು ಮಾತನ್ನು ಹೇಳುತ್ತೇನೆ. ಇತ್ತೀಚಿನ ದಿನಗಳಲ್ಲಿ ಪಲಾಯನವಾದದ ಇನ್ನೊಂದು ಮುಖವಿದು. ಇದು ಭ್ರಷ್ಟಾಚಾರವನ್ನು ಬಿಗಿದಪ್ಪಿರುವುದರ ಪರಿಣಾಮ. ಇದಕ್ಕೆ ಯಾರೊಬ್ಬರೂ ಹೊರತಲ್ಲ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂದರೆ, ಬಿಜೆಪಿ ಮಾಡಿಲ್ವಾ? ಬಿಜೆಪಿ ಮಾಡಿದೆ ಎಂದರೇ ಕಾಂಗ್ರೇಸ್ ಮಾಡಿಲ್ವ? ವಂಶ ರಾಜಕೀಯ, ಅವರೂ ಮಾಡಿಲ್ವ? ಹೀಗೆ ಎಲ್ಲವನ್ನೂ ಸಮರ್ಥಿಸಿಕೊಳ್ಳವುದು. ಅವರು ಕಚಡ ತಿಂದರೇ ನೀವು ತಿನ್ನೋದಾ? ಪ್ರಕಾಶ್ ರೈ ಮೋದಿಯನ್ನು ಪ್ರಶ್ನಿಸಿದರೆ, ಸಿದ್ದರಾಮಯ್ಯರವರನ್ನು ಪ್ರಶ್ನಿಸಲಿ ಎನ್ನವುದು. ದಿನೇಶ್ ಗುಂಡೂರಾವ್ ಯೋಗಿಯನ್ನು ಬೈದರೆ ಮುಲ್ಲಾನನ್ನು ಬೈಯ್ಯಲಿ ಎನ್ನುವುದು. ಇದೆಲ್ಲಿಗೆ ತಲುಪಿತೆಂದರೆ ಆಸಿಫಾ ರೇಪ್ ವಿಷಯಕ್ಕೂ, ಹಿಂದೂ ಹುಡುಗಿಗೆ ಯಾಕೆ ಪ್ರತಿಭಟಿಸಿಲ್ಲ ಎಂದು ಕೇಳುವುದು. ಏನಾಗಿದೆ ರೀ ನಮ್ಮ ಜನಕ್ಕೆ. ನಾಚಿಕೆ ಮಾನ ಮರ್ಯಾದೆ ಅನ್ನೊದೆಲ್ಲಾ ಮಾರಿ ಕೊಂಡ್ರಾ? 

ಮತ್ತೊಂದು ಮುಖ್ಯವಾದ ವಿಷಯ. ಕಾವೇರಿ ವಿಷಯದಲ್ಲಿ ನಿಮ್ಮ ನಿಲುವೇನು? ಆಗ ಎಲ್ಲಿ ಹೋಗಿದ್ದರು? ಅಲ್ಲಾ ಸ್ವಾಮೀ. ಪ್ರಕಾಶ್ ರೈ ನಿಲುವಿಂದ ಏನಾಗುತ್ತೆ? ಅವರು ಯಾರು? ಇಂಜಿನಿಯರ್? ಜಲತಜ್ಞ? ಪರಿಣಿತ? ನಾನು ಗಮನಿಸಿದ್ದೇನೆ, ಟಿವಿಗಳಲ್ಲಿ ನಟರನ್ನ, ಸೆಲೆಬ್ರಿಟಿಗಳನ್ನ, ರಾಜಕಾರಣಿಗಳನ್ನ ತಂದು ಕೂರಿಸಿ ಕಾರ್ಯಕ್ರಮ ಮಾಡ್ತಿರಲ್ಲ. ನಿಮಗೆ ಒಂದು ನದಿಯ ಬಗ್ಗೆ ಏನಾದರೂ ಗೊತ್ತಾ? ಮೊನ್ನೆ ಅವರ ವಿಡಿಯೋ ಬಹಳ ಖುಷಿಯಾಯ್ತು. ನಾನು ಸತತ ಹತ್ತು ವರ್ಷಗಳ ಕಾಲ ನೀರಿನ ಬಗ್ಗೆ ಸಂಶೋಧನೆ ಮಾಡಿದ್ದೀನಿ, ಅದರಲ್ಲಿ ಆರು ವರ್ಷ ನದಿಯ ಕುರಿತು, ನನಗೆ ಇವರೆಲ್ಲರೂ ಮಾತನಾಡುವಾಗ ಅಸಹ್ಯ ಎನಿಸುತ್ತೆ. ವ್ಯವಸ್ತೆಯ ಕುರಿತು ಬೇಸರ ಜಿಗುಪ್ಸೆ ಕೂಡ ಬರುತ್ತೆ. ಹಾಗಾಗಿಯೇ ನಾನು ಹೆಚ್ಚಿನ ಬಾರಿ ಮಾಧ್ಯಮಗಳನ್ನು ಉಗಿದು ಉಪ್ಪಿನಕಾಯಿ ಹಾಕುವುದು. ಇವರು ತೋರಿಸುವ ಎಲ್ಲವನ್ನೂ ಜನರು ನಂಬುತ್ತಾರೆ. 

ಉಪಸಂಹಾರ: ಬಿಜೆಪಿಗರೇ ನಿಮ್ಮ ಪಕ್ಷವನ್ನು ಕಟ್ಟಿ ಬೆಳೆಸಲು ಸಾಕಷ್ಟು ಜನರು ಶ್ರಮಿಸಿದ್ದಾರೆ. ಬಿಜೆಪಿ ಉತ್ತಮ ಉದ್ದೇಶವನ್ನಿಟ್ಟುಕೊಂಡು ಆದರ್ಶಗಳನ್ನು, ಸಂಸ್ಕøತಿ, ಸಂಸ್ಕಾರವನ್ನು ಜೊತೆಗಿಟ್ಟುಕೊಂಡು ಬೆಳೆದ ಪಕ್ಷ. ದೇಶದ ಗೌರವ, ಘನತೆಯನ್ನು ಎತ್ತಿ ಹಿಡಿಯಬೇಕು. ಅದನ್ನು ಕೀಳುಮಟ್ಟದ ರಾಜಕೀಯಕ್ಕೆ ಬಳಸಿ, ಕೆಟ್ಟ ಭಾಷೆಯಿಂದ ಹಾಳು ಮಾಡಬೇಡಿ. ಮೊದಲು ಓದಿಕೊಂಡು, ವಿಚಾರಗಳನ್ನು ತಿಳಿದು ಮಾತನಾಡಿ. ಪ್ರಕಾಶ್ ರೈ ಹೆಂಡತಿಯನ್ನು ಬೈದದ್ದು ಒಂದು ಹೆಣ್ಣಿಗೆ ಮಾಡಿದ ಅವಮಾನವೆಂಬುದನ್ನು ಮರೆಯಬೇಡಿ. ಪ್ರಕಾಶ್ ರೈ ರವರೆ ನೀವು ಮೋದಿಯನ್ನು ಬಿಜೆಪಿಯನ್ನು ದೂರುವ ಉತ್ಸಾಹದಲ್ಲಿ ರಾಹುಲ್ ಗಾಂಧಿಯಂತವರನ್ನು ಅಪ್ಪುವುದು ಸರಿಯಿಲ್ಲ. ಯೋಗ್ಯತೆಯಿರುವ ನಾಯಕರೊಂದಿಗಿರಿ, ಯಾವುದೇ ಪಕ್ಷದಲ್ಲಿರಲೇಬೇಕೆಂಬ ನಿಯಮವಿಲ್ಲ. ಎಲ್ಲರನ್ನೂ ಪ್ರಶ್ನಿಸೋಣ ಪಕ್ಷಾತಿತವಾಗಿ. 

10 ಮಾರ್ಚ್ 2018

ಅಮ್ಮನಿಗಾಗಿ ನಾಲ್ಕು ಸಾಲುಗಳು!!!!!



ನಾನು ಈ ಬರವಣಿಗೆಯನ್ನು ದಿಡೀರನೇ ಬರೆಯುತ್ತಿದ್ದೇನೆ. ಏಕೆಂದರೆ ಈ ದಿನ ವಿಶ್ವ ಮಹಿಳೆಯರ ದಿನ. ಇದನ್ನು ಈ ದಿನವೇ ಬರೆದರೆ ಬರಹಕ್ಕೊಂದು ಬೆಲೆ ಸಿಗಬಹುದೆಂದು ಮತ್ತು ಮಹಿಳೆಯರಿಗೊಂದು ಕಿರು ಗೌರವವನ್ನು ನೀಡಬಹುದೆಂಬುದು ನನ್ನ ಬಯಕೆ. ಆತುರದಲ್ಲಿ ಬರೆಯುವುದರಿಂದ ಸ್ವಲ್ಪ ಚಿಕ್ಕದಾಗಿರುತ್ತದೆಂಬುದು ನನ್ನ ಭಾವನೆ ಮತ್ತು ಕೆಲವು ತಪ್ಪುಗಳು ಇರಬಹುದು, ಏಕೆಂದರೆ ಇದನ್ನು ಯಾವುದೇ ಮಾರ್ಪಾಡು ಮಾಡದೆ ಹಾಗೆಯೇ ಹಾಕುತ್ತೇನೆ. ಹೆಣ್ಣು ಗಂಡಿನ ನಡುವೆ ಬೇಧ ಭಾವವನ್ನು ಏಕೆ ಮಾಡಿದರು ಯಾರು ಮಾಡಿದರು ಎನ್ನುವುದು ನನಗೆ ಗೊತ್ತಿಲ್ಲ ಮತ್ತು ಆ ವಿಷಯದ ಕುರಿತು ಮಾತನಾಡುವಷ್ಟು ಪಾಂಡಿಂತ್ಯ ನನಗಿಲ್ಲ. ನಾನು ನನ್ನನುಭವವನ್ನು ಮಾತ್ರ ಹಂಚಿಕೊಳ್ಳಬಹುದು. ಇಲ್ಲಿ ಯಾವುದೇ ಸರಿ ತಪ್ಪಿಲ್ಲ ಇದು ನನ್ನನುಭವ ಮತ್ತು ನನ್ನನಿಸಿಕೆ ಕೂಡ.

ಮಹಿಳೆ ಎಂದ ಕೂಡಲೇ ನನಗೆ ನೆನಪಾಗುವುದು ನನ್ನ ತಾಯಿ. ನನ್ನ ತಾಯಿ ಎಂದ ಕೂಡಲೇ ನೆನಪಾಗುವುದು ಅಬಲೆ, ಸೂಕ್ಷ್ಮ ಮನಸ್ಸಿನವಳು, ಅಳುಬುರುಕಿ, ಎಲ್ಲದಕ್ಕೂ ಕಣ್ಣೀರು ಹಾಕುವವಳು, ಎಲ್ಲವನ್ನೂ ಮನಸ್ಸಿಗೆ ಹಾಕಿಕೊಂಡು ತನ್ನೊಳಗೆ ಕೊರಗುವವಳು. ಇದರಿಂದಾಚೆಗೆ ನೋಡಿದಾಗ ನನ್ನ ತಾಯಿಯ ಶಕ್ತಿ ನನಗೆ ತಿಳಿಯುತ್ತದೆ. ಆಚೇಗೆ ಮತ್ತೂ ಈಚೆಗೆಂದರೇನು? ನಮ್ಮೆದುರು ಕಾಣುವುದು ಒಂದು ಅದರ ಹಿಂದೆ ಇರುವುದು ಮತ್ತೊಂದು. ಅದನ್ನು ನೀವು ಗಮನಿಸಬೇಕಾದರೇ ತಾಳ್ಮೆ ಮತ್ತು ಅದರದ್ದೇ ಶ್ರದ್ದೆ ಮತ್ತು ಸಂಯಮವಿರಬೇಕು. ಹಿಂದಿನ ಅನೇಕ ಮಹಿಳೆಯರು ನನ್ನ ತಾಯಿತಂತೆಯೇ ಇದ್ದವರು ಕೆಲವರು ಒಗ್ಗಿಕೊಂಡರು, ಕೆಲವರು ಬೇಸತ್ತಿದರು. ಪ್ರತಿಯೊಂದು ವ್ಯಕ್ತಿಗೂ ಭಾವನೆಗಳಿರುತ್ತವೆ ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಅದು ಹೆಚ್ಚು. ಈ ಭಾವನೆಗಳು ಕೇಳುವುದು ಕೇವಲ ಒಂದು ಕಿವಿಯನ್ನು ಮಾತ್ರ. ಕಿವಿಯನ್ನು? ಹೌದು. ನಮಗೆ ಬೇಸರವಾದಗ, ಸಂತೋಷವಾದಗ ಅದನ್ನು ಕೇಳುವ ಎರಡು ಕಿವಿಗಳಿದ್ದರೆ ಸಾಕು. ಮನಸ್ಸು, ಹೃದಯ ಇವೆಲ್ಲವೂ ನಾವು ನೀಡುವ ವಿವರಣೆಗಳು ಮಾತ್ರ.

ನಾನು ಹೇಳುವುದನ್ನು ನೀನು ಕೇಳಿದರೆ ನನಗೆ ಸಮಾಧಾನ. ಅದೊಂದು ರೀತಿಯ ಸಮಾಧಾನ. ನೀನು ನನ್ನನ್ನು ಅಣಕಿಸಬಾರದು, ನನ್ನನ್ನು ಗೇಲಿ ಮಾಡಬಾರದು, ನನ್ನ ಬಗ್ಗೆ ಯಾರೊಂದಿಗೂ ಹೇಳಬಾರದು. ನಿನ್ನ ಪ್ರೀತಿ ಮಮತೆ ಅಕ್ಕರೆ ಇದ್ಯಾವುದು ಬೇಡ ನನಗೆ. ನೀನು ಕೇವಲ ಹೂಂ ಅನ್ನು ಸಾಕು ಅದು ನನಗೆ ಆನೆ ಬಲ ನೀಡುತ್ತದೆ. ಇದು ಎಲ್ಲರ ಮನಸ್ಥಿತಿ. ನನ್ನ ತಾಯಿಯೂ ಹಾಗೆಯೇ ಭಾವನೆಗಳ ಹೊತ್ತು ತಾನು ಬೆಳೆದ ಬಳಗವನ್ನು ಬಿಟ್ಟು ಮದುವೆಯಾಗಿ ನನ್ನೂರಿಗೆ ಬಂದವಳು. ತವರಲ್ಲಿ ಅವಳ ಮಾತಿಗೆ ಓಗೊಡುವ ಕಿವಿಗಳೇನು ಹೃದಯಗಳೇ ಇದ್ದವು, ಅಕ್ಕ, ತಂಗಿ, ಅಪ್ಪ, ಅಮ್ಮ, ತಮ್ಮಂದಿರು, ಅಕ್ಕ ಪಕ್ಕದ ಮನೆಯವರು, ಗೆಳತಿಯರು. ಆದರೇ ಬಂದ ಊರಲ್ಲಿ ಏನಿದೆ? ಹಳ್ಳಿ. ಗಂಡನಿಗೆ ದುಡಿಮೆಯ ಚಿಂತೆ, ತುಂಬಿದ ಮನೆ, ಸಣ್ಣ ಜನ. ಹಳ್ಳಿಗಳೆಂದರೆ ಅದರಲ್ಲಿಯೂ ಒಟ್ಟು ಕುಟುಂಬವನ್ನು ಸಿನೆಮಾದಲ್ಲಿ ತೋರಿಸುವುದೇ ಬೇರೆ ವಾಸ್ತವಿಕತೆಯೇ ಬೇರೆ. ಅದೊಂದು ರೀತಿಯಲ್ಲಿ ಒಬ್ಬರ ತಟ್ಟೆಯನ್ನು ಮತ್ತೊಬ್ಬರು ನೋಡಿ ಅಸೂಯೆಪಟ್ಟು ಊಟ ಮಾಡುವ ದೃಶ್ಯಗಳು ತುಂಬಿದ ಸಿನೆಮಾ.

ಹೃದಯ ವಿಶಾಲತೆಯ ನಡುವೆ ಬೆಳೆದು ಬಂದ ನನ್ನಮ್ಮ. ಈ ಸಣ್ಣ ಜನರ, ಸಣ್ಣ ಮನಸ್ಥಿತಿಯವರ ನಡುವೆ ಕಂಗಾಳಾದಳು. ಅಪ್ಪನೋ ಆ ಕಾಲದಲ್ಲಿ ಬಿಎ ಓದಿದವರು ಉತ್ತಮ ಕೆಲಸ ಸಿಗಬಹುದೆಂದು ನಂಬಿದವರು. ಆದರೇ ಪರಿಸ್ಥಿತಿ ಇಂದಿನಂತೆಯೇ ಇತ್ತು. ಲಂಚ, ಶಿಫಾರಸ್ಸು ಇಲ್ಲದೇ ಕೆಲಸ ಗಿಟ್ಟಿಸುವುದು ಅಸಾಧ್ಯವಾಗಿತ್ತು. ಹೊಲದಲ್ಲಿ ದುಡಿಯಲು ಮನಸ್ಸಿಲ್ಲ ಆದರೇ ವಿಧಿಯಿಲ್ಲ. ಇನ್ನೂ ನನ್ನಮ್ಮನ ಮಾತು ಕೇಳುವ ಸಮಯವೆಲ್ಲಿ, ಭಾವನೆಗಳ ವ್ಯಕ್ತಪಡಿಸುವ ಸ್ವಾತಂತ್ರ್ಯವೆಲ್ಲಿ? ಸುಖವನ್ನೇ ಅನುಭವಿಸಿ ಬೆಳೆದ ನನ್ನಮ್ಮ ಗದ್ದೆ ಕೆಲಸ, ಹೊಲದ ಕೆಲಸಕ್ಕೂ ಹೋದಳು. ನಮ್ಮ ಅಜ್ಜನ ಮನೆ ದೊಡ್ಡ ಮನೆ, ಸಾಕಷ್ಟು ಜಮೀನು ಇಂದಿಗೂ ನನ್ನ ಸೋದರ ಮಾವಂದಿರು ಕೋಟ್ಯಾಧೀಶರು. ಆದರೆ ನನ್ನಜ್ಜಿ ಬಿಎ ಓದಿರುವುದರಿಂದ ಸರ್ಕಾರಿ ಕೆಲಸ ಸಿಗಬಹುದೆಂಬ ಆಸೆಯನ್ನಿಟ್ಟು ಮದುವೆ ಮಾಡಿಕೊಟ್ಟರು. ನನ್ನಜ್ಜನಿಗೆ ಇಷ್ಟವಿರಲಿಲ್ಲ ನನ್ನಮ್ಮನನ್ನು ಹಳ್ಳಿಗೆ ಮದುವೆ ಮಾಡಿಸಲು.

ಇದರ ನಡುವೆ ಮನೆ ವಿಭಾಗವಾಯಿತು. ಜವಬ್ದಾರಿ ಹೆಚ್ಚಾಯಿತೋ ಅಥವಾ ನೆಮ್ಮದಿಯಾಯಿತೋ! ಹೊಟ್ಟೆಗಿದ್ದರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ ಹೊಟ್ಟೆಗಿಲ್ಲವೆನ್ನುವ ಪರಿಸ್ಥಿತಿ. ದಿನದೂಡುತ್ತಾ ಹೋದರು ಕನಸುಗಳ ಬೆನ್ನತ್ತಿಯೋ ಅಥವಾ ನಂಬಿಕೆಯಿಟ್ಟೋ. ಅಪ್ಪನಿಗೆ ದುಡಿದು ತಂದು ಹಾಕುವ ಹೊಣೆ. ದೊಡ್ಡವರ ಮನೆಯಿಂದ ಬಂದವಳು ಕೂಲಿ ಕೆಲಸಕ್ಕೆ ಕಳುಹಿಸಬಾರದು, ತಾನು ಓದಿದವ, ವಿದ್ಯಾವಂತ ಅಡ್ಡದಾರಿ ಹಿಡಿಯಬಾರದು. ಅಷ್ಟೊತ್ತಿಗಾಗಲೇ ಮಲ್ಲಪ್ಪರವರ ಜೊತೆ ಗುರುತಿಸಿಕೊಂಡಿದ್ದರೂ ಎಂದೂ ಯಾವುದಕ್ಕೂ ಕೈಚಾಚಲಿಲ್ಲ. ಮಲ್ಲಪ್ಪನವರೆ ಕರೆದು ಹೋಗಿ ಹಾರಂಗಿ ಇಲಾಖೆಯಲ್ಲಿಯಾದರೂ ಕೆಲಸಕ್ಕೆ ಸೇರು. ಇದು ಸದ್ಯಕ್ಕೆ ಗುತ್ತಿಗೆ ಆಧಾರದ ಕೆಲಸ ಮುಂದೊಂದು ದಿನ ಖಾಯಂ ಆಗಬಹುದೆಂದರು. ಆದಿನ ಅವರ ಸಂಬಳ ತಿಂಗಳಿಗೆ 91 ರೂಪಾಯಿಗಳು. ಮಲ್ಲಪ್ಪರವರ ಜೊತೆಯಲ್ಲಿದ್ದವರೆಲ್ಲರೂ ಕಾಂಟ್ರ್ಯಾಕ್ಟ್‍ದಾರರಾದರು ಕೆಲವರು ಅವರನ್ನೇ ತುಳಿದು ರಾಜಕೀಯದಲ್ಲಿ ಮುಂದೆ ಬಂದರು. ಇರಲಿ, ನಮ್ಮಪ್ಪ ಹಾಕಿದ ಹೆಜ್ಜೆಯ ಬಹುಶಃ ನನ್ನನ್ನು ನೀತಿವಂತನಾಗಿಸಿದೆ. ನಮ್ಮಪ್ಪನಿಗೆ ದುಡಿಯುವುದೇ ಚಿಂತೆ ನಮ್ಮಮ್ಮನಿಗೆ ನನ್ನನ್ನು ಸಲುಹಬೇಕು. ಗದ್ದೆಯ ಕೆಲಸವನ್ನೂ ಮಾಡಬೇಕು. ನಮ್ಮಪ್ಪ ಬಹಳ ಸ್ವಾಭಿಮಾನಿ ಮತ್ತು ಮುಂಗೋಪಿ ಕೂಡ.

ನಮ್ಮಮ್ಮ ಅದೆಷ್ಟು ಸಹನಾಮೂರ್ತಿಯೆಂದರೆ ಅವರು ಯಾರೊಂದಿಗೂ ಜಗಳವಾಡಿದ್ದನ್ನು ಕಂಡಿಲ್ಲ. ಎಲ್ಲರನ್ನೂ ಬಹಳ ಅಕ್ಕರೆಯಿಂದ ಪ್ರೀತಿಯಿಂದ ಕಾಣುತ್ತಾರೆ. ನಮ್ಮದು ಊರೋಳಗೆ ಹಳೆಯ ಮನೆಯಿತ್ತು. ಆ ಬೀದಿಯಲ್ಲಿರುವಾಗ ನಮ್ಮ ಬೀದಿಯ ಎಲ್ಲಾ ಮಕ್ಕಳನ್ನು ತನ್ನ ಮಕ್ಕಳಂತೆ ಕಾಣುತ್ತಿದ್ದರು. ಆ ದಿನಗಳೇ ಬೇರೆ. ನಾವೆಲ್ಲರೂ ಒಂದೇ ಮನೆಯವರಂತೆ ಬೆಳೆದೆವು. ಅಲ್ಲಿ ಹಿರಿಯ ಕಿರಿಯ ಮಕ್ಕಳಿದ್ದರೂ ಯಾರೂ ಜಗಳವಾಡುತ್ತಿರಲಿಲ್ಲ. ಕೆಲವರು ನಮ್ಮ ಸಹಾಯದಿಂದ ಇಂದು ಉನ್ನತ ಹುದ್ದೆಯಲ್ಲಿದ್ದಾರೆ ಅವರಿಗೆ ಅದೆಲ್ಲವೂ ನೆನಪಿಲ್ಲ ಅಥವಾ ಅದೇನೂ ಮಹಾವೆನಿಸಿರಬಹುದು. ನಮ್ಮಮ್ಮ ನಮಗೆ ಇಲ್ಲದ ಕಾಲದಲ್ಲಿಯೂ ಬೇರೆಯವರಿಗೆ ನೀಡಿದ್ದಾರೆ. ಇದು ನನ್ನೊಳಗೆ ನನಗೆ ತಿಳಿಯದೇ ಬಂದಿರುವ ಗುಣ. ನಾನೂ ಅನೇಕ ಬಾರಿ ಯೋಚಿಸಿದ್ದೇನೆ, ನನ್ನ ಬಳಿಯೇ ಇಲ್ಲ ನಾನೇಕೆ ಬೇರೆಯವರಿಗೆ ಸಹಾಯ ಮಾಡಲು ಹಾತೊರೆಯುತ್ತಿದ್ದೇನೆಂದು. ಇದಕ್ಕೆ ಕಾರಣ ನನ್ನ ತಾಯಿ.

ಇದೆಲ್ಲವೂ ನಿಮಗೆ ಕೇವಲವೆನಿಸಬಹುದು. ಆದರೇ ಮೌಲ್ಯಗಳು ಎಂದಾಗ ಹೆಚ್ಚೆನಿಸುತ್ತದೆ. ಹಲವಾರು ರಾತ್ರಿಗಳು ನನಗಿನ್ನೂ ನೆನಪಿವೆ. ರಾತ್ರಿ ಊಟ ಮಾಡುವ ಸಮಯದಲ್ಲಿ ಅಮ್ಮ ಮೊಸರಲ್ಲಿಯೋ ಮಜ್ಜಿಗೆಯಲ್ಲಿಯೋ ಊಟ ಮಾಡಿದ್ದು. ನಾನು ಕೆಲವೊಮ್ಮೆ ರೇಗಿದ್ದು ಇದೆ. ಅಲ್ಲಮ್ಮ ನೀವು ಅವರ ಮನೆಗೆ ಸಾರು ಕೊಟ್ಟು ನೀವ್ಯಾಕೆ ಮೊಸರಲ್ಲಿ ಊಟ ಮಾಡೋದು ಅಂತಾ? ಆಗೆಲ್ಲಾ ನಮ್ಮಮ್ಮ ಅಯ್ಯೋ ಪಾಪಾ ಸಾರು ಮಾಡಿರಲಿಲ್ಲವಂತೆ ಬಿಡು. ಒಂದೊತ್ತು ಮೊಸರಲ್ಲಿ ಉಂಡರೇನು ಎಂದಿದ್ದಾರೆ. ನನಗೆ ಮೊದಲೆಲ್ಲಾ ಸಹಾಯದ ಕಲ್ಪನೆಯಿದ್ದದ್ದು ಹಾಗೆಯೇ. ಮೊದಲು ನಾವು ಚೆನ್ನಾಗಿದ್ದು ನಂತರ ಬೇರೆಯವರಿಗೆ ಸಹಾಯ ಮಾಡಬೇಕೆಂದು. ಆದರೆ ಅದು ಇಂದಿಗೂ ಯಶಸ್ವಿಯಾಗಿಲ್ಲ. ನಾನು ಸಹಾಯ ಮಾಡುವುದನ್ನು ನಿಲ್ಲಿಸಿಲ್ಲ ಅದರ ಜೊತೆಗೆ ನನ್ನ ಸಮಸ್ಯೆಗಳು ಪರಿಹಾರವಾಗಿಲ್ಲ. ಆದರೂ ಕೈಲಾದ ಸಹಾಯ ಮಾಡಬೇಕೆಂದು ಹಾತೊರೆಯುತ್ತದೆ ಮನಸ್ಸು ಇದೆಲ್ಲವೂ ನನ್ನಮ್ಮನಿಂದ ಬಂದ ಬಳುವಳಿ ಎನಿಸಿದೆ ನನಗೆ.

ಅಮ್ಮನೊಂದಿಗೆ ನಾನು ಕಳೆದ ದಿನಗಳು ಮಹತ್ವದವು. ಅವು ಪ್ರಮುಖವಾಗಿ ನನ್ನ ಬಾಲ್ಯದ ದಿನಗಳು, ಅಂದರೆ ಪ್ರೈಮರಿ ಮತ್ತು ಹೈಸ್ಕೂಲ್ ದಿನಗಳು. ಅಮ್ಮನೊಂದಿಗೆ ನಾನು ಗೋಮಾಳದಲ್ಲಿ ಸೌದೆ ಪುರಳೆಗಳನ್ನು ಆಯ್ದ ದಿನಗಳ ನೆನಪಿದೆ. ಅದೆಲ್ಲವನ್ನು ನನ್ನ ಹಳೆಯ ಬರಹಗಳಲ್ಲಿ ಬರೆದಿದ್ದೇನೆ ಆದರೂ ಅದನ್ನೊಮ್ಮೆ ಮೆಲುಕು ಹಾಕಿದರೆ ತಪ್ಪಿಲ್ಲವೆಂದು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ನನ್ನ ತಾಯಿ ಅದೆಂತಹ ಸಂಯಮ ದೇವತೆಯೆಂದರೆ ನನಗೆ ಆಶ್ಚರ್ಯವಾಗುತ್ತದೆ. ನನ್ನನ್ನು ಹೆತ್ತು ಹೊತ್ತು ಬೆಳೆಸಿದ ನನ್ನ ತಾಯಿ ನನ್ನನ್ನು ಕೇಳುತ್ತಾಳೆ, ನಿನಗೆ ಬೇಜಾರಿಲ್ಲವೆಂದರೆ ಒಂದು ಮಾತು ಹೇಳಬೇಕು ಅಂತಾ? ಏನಮ್ಮಾ? ಏನಿಲ್ಲಾ ಮುಂದಿನ ಸಲ ಬರುವಾಗ ಮನೆಗೆ ಮನೆ ಒರೆಸುವ ಕಡ್ಡಿಯನ್ನು ತರಬಹುದೇ? ಮೈಬಗ್ಗಿ ಒವರೆಸಲು ಕಷ್ಟವಾಗುತ್ತದೆ, ಅಣ್ಣನನ್ನು ಕೇಳಿದರೆ ತರುವುದಿಲ್ಲ. ಅಣ್ಣ ತರುವುದಿಲ್ಲವೆಂದಲ್ಲ, ಕೇಳಲು ಮನವೊಪ್ಪುವುದಿಲ್ಲ, ಮತ್ತೊಂದು ಮಗನು ತಂದರೇ! ಎನ್ನುವ ಪ್ರೀತಿ.

ಇದು ಕೇವಲ ನನ್ನಮ್ಮನ ಪ್ರೀತಿಯ ಮಾತಲ್ಲ. ನಿಮ್ಮೆಲ್ಲರ ಅಮ್ಮಂದಿರನ್ನು ಗಮನಿಸಿ. ಅವರೆಲ್ಲರೂ ಹಾಗೆ ಇರೋದು. ತನಗಿಲ್ಲದೇಯಿದ್ದರೂ ಹಸಿದವರಿಗೆ ಮೊದಲು ಕೊಡುವುದು ಅವರ ಪ್ರೀತಿ. ನೀವು ಈ ದಿನ ವಿಶ್ವ ಮಹಿಳಾ ದಿನಾಚರನೆಯನ್ನು ಆಚರಿಸುತ್ತಿದ್ದೇವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಸಂದೇಶವನ್ನು ನೋಡಿ, ಬಹುತೇಕ ಸಂದೇಶಗಳು ಮಹಿಳೆಯೆಂದರೇ ಕೇವಲ ತಾಯಿ ಮಾತ್ರವೆನ್ನುವಂತಿವೆ. ಇದರಲ್ಲಿ ತಪ್ಪೇನು ಇಲ್ಲ. ಏಕೆಂದರೆ ನಾವು ನಮ್ಮ ತಾಯಿಯನ್ನು ನೋಡಿಯೇ ಹೆಣ್ಣೆಂದರೇ ನನ್ನ ತಾಯಿ ಮತ್ತು ತಾಯಿ ಮಾತ್ರವೆನ್ನುವಂತೆ ಬೆಳೆದೆವು. ಹೆಣ್ಣನ್ನು ಏನೆಲ್ಲಾ ರೀತಿಯಲ್ಲಿ ಹೊಗಳಿದರೋ ಅದೆಲ್ಲವೂ ನಮ್ಮ ತಾಯಂದಿರಲ್ಲಿದೆ. ಆದ್ದರಿಂದ ಹೆಣ್ಣೆಂದರೆ ತಾಯಿ, ತಾಯಿ ಎಂದರೆ ಹೆಣ್ಣವಂತಿದೆ.

ಈ ದಿನಕ್ಕೂ ನಮ್ಮಮ್ಮ ಒಂದು ವಾರದಲ್ಲಿ ಮೂರ್ನಾಲ್ಕು ದಿನಗಳು ಪೂಜೆ ಪುನಸ್ಕಾರವಾಗುವ ತನಕ ತಿನ್ನುವುದಿಲ್ಲ. ಹಸಿವಿದ್ದು ಪೂಜೆ ಮಾಡುವುದರ ಕಷ್ಟ ನನಗೆ ಅರಿವಿದೆ. ವರ್ಷಕ್ಕೊಮ್ಮೆ ನಾನು ಉಪವಾಸವಿರುವುದುಂಟು. ಮನೆಗೆ ಅದೆಷ್ಟೆ ಜನರು ಬರಲಿ ತಾಳ್ಮೆಯಿಂದ ಅವರಿಗೆಲ್ಲರಿಗೂ ಉಪಚರಿಸುತ್ತಾಳೆ. ನಮ್ಮಲ್ಲಿ ಅಂದರೆ ಗೌಡರಲ್ಲಿ ಮಾಂಸ ಮಾಡದೇ ಬಂದವರನ್ನು ಕಳುಹಿಸುವುದಿಲ್ಲ. ಅದರಲ್ಲಿಯೂ ನದಿ ದಂಡೆಯ ಊರಾಗಿರುವುದರಿಂದ ಬಂದವರು ಮೀನನ್ನು ಇಷ್ಟಪಡುತ್ತಾರೆಂದು ಮೀನು ಮಾಡುವುದು, ನಮ್ಮಲ್ಲಿ ಒಳ್ಳೆಯ ದೇಸಿ ತಳಿ ಆಡು/ಮೇಕೆ ಸಿಗುತ್ತದೆಯೆಂದು ಮೇಕೆ ಮಾಂಸ, ಜೊತೆಗೆ ಕೋಳಿ ಫ್ರೈ ಚೆನ್ನಾಗಿರುತ್ತದೆಯೆಂದು ಅದನ್ನು ಮಾಡುವುದು. ಒಮ್ಮೊಮ್ಮೆ ನಾನೇ ರೇಗುತ್ತೇನೆ. ಮಾಡೋಕೆ ಕೆಲಸವಿಲ್ಲವೇ, ಇದೆಲ್ಲವನ್ನು ಮಾಡಬೇಕಾ? ಎಂದು. ನಮ್ಮಪ್ಪನೂ ಹಾಗೆಯೇ ಅವರಿಗೆ ಮನೆಗೆ ಯಾರಾದರೂ ಬಂದರೇ ಅವರಿಗ ಉಪಚರಿಸುವುದರಲ್ಲಿ ಅದೇನೋ ಒಂದು ಬಗೆಯ ಖುಷಿ. ನಾನು ನಮ್ಮ ಹಳೆಯ ಮನೆ ಬಹಳ ಚಿಕ್ಕ ಮನೆಯಾಗಿತ್ತು ಆ ದಿನಗಳಲ್ಲಿಯೂ ಅಷ್ಟೆ, ಹಬ್ಬಯೆಂದರೆ ಕನಿಷ್ಟ ನೂರು, ನೂರೈವತ್ತು ಜನರು ಬರುತ್ತಿದ್ದರು. ಅವರೆಲ್ಲರಿಗೂ ಸಂತೋಷದಿಂದಲೇ ಉಪಚರಿಸುತ್ತಿದ್ದಳು ನನ್ನಮ್ಮ.

ನಮ್ಮದು ಕೆಳ ಮಧ್ಯಮ ವರ್ಗ ನನ್ನ ತಂದೆ ಶ್ರಮಜೀವಿ, ನಿಷ್ಠಾವಂತ. ನಮ್ಮ ತಾಯಿ ಹೃದಯವಂತೆ. ಇವರ ಒಳ್ಳೆಯತನ ಮತ್ತು ಒಳ್ಳೆಯ ಗುಣ ಮತ್ತು ಅವರು ಮಾಡಿದ ದಾನ ಧರ್ಮವೇ ನನ್ನನ್ನು ಬೆಳೆಸಿದೆಯೆಂದರೆ ತಪ್ಪಿಲ್ಲ. ಈ ಜೀವನ ಅವರಿಬ್ಬರ ಶ್ರಮದ ಫಲ. ನೀವು ಗಮನಿಸಿ ನೋಡಿ, ನಾವು ಯಾವುದಾದರೂ ಕಾರ್ಯಕ್ರಮವಾದಾಗ ಸುಸ್ತಾಗಿದೆಯೆಂದು ಬೇಗ ಮಲಗುತ್ತೇವೆ. ಆದರೇ, ಕೊನೆಯಲ್ಲಿ ಮಲಗುವುದು ಅಮ್ಮ, ಬೇಗ ಏಳುವುದು ಅಮ್ಮ. ಬಂದವರೆಲ್ಲರನ್ನೂ ವಿಚಾರಿಸಿಕೊಳ್ಳುವುದು ಅಮ್ಮ. ಅಮ್ಮ ನಾನು ಮನೆಗೆ ತಡವಾಗಿ ಬಂದರೆ ಬೈಯುತ್ತಾಳೆ ಅದಕ್ಕೆ ಮೊದಲ ಕಾರಣ ಎಷ್ಟೊತ್ತಲ್ಲಿ ಊಟ ಮಾಡೋದು ಅಂತಾ. ಅಂದರೆ ನಾನು ಊಟ ಮಾಡಿಲ್ಲವಲ್ಲವೆಂಬುದು ಅವಳ ಕೊರಗು. ನಾನು ಕೆಲಸ ಮಾಡುವ ಶೈಲಿಯೇ ವಿಚಿತ್ರ. ಏಕೆಂದರೆ ನನ್ನ ಕೆಲಸ ನನ್ನ ತಲೆಯನ್ನು ನಂಬಿರುತ್ತದೆ. ಅದಕ್ಕೆ ನೆಮ್ಮದಿ ಮತ್ತು ಮನಸ್ಸಿದ್ದಾಗ ಮಾತ್ರ ಮಾಡಬೇಕು. ಒಮ್ಮೊಮ್ಮೆ ಮುಂಜಾನೆ ನಾಲ್ಕಕ್ಕೆ ಎದ್ದು ಬರೆಯತೊಡಗುತ್ತೇನೆ. ಒಮ್ಮೊಮ್ಮೆ ಕೆಲಸದಲ್ಲಿ ಮಗ್ನನಾಗಿ ಮಧ್ಯಾಹ್ನ ಮೂರಾದರೂ ಏನನ್ನು ತಿಂದಿರುವುದಿಲ್ಲ. ಆಗೆಲ್ಲಾ ನಮ್ಮಮ್ಮ ನಾನೆಷ್ಟೇ ರೇಗಿದರೂ ಹಟಕ್ಕೆ ಬಿದ್ದವಳಂತೆ ತಿನ್ನಿಸಿಯೇ ಕೆಲಸ ಮಾಡಲು ಬಿಡುವುದು.

ಇದು ನನಗೆ ಮಾತ್ರ ಮಾಡುತ್ತಾಳಾ? ಇಲ್ಲಾ ನನ್ನಪ್ಪನಿಗೂ ಅಷ್ಟೆ. ಮೊದಲು ತಿನ್ನಬನ್ನಿ ಅಮೇಲೆ ಕೆಲಸ ಮಾಡಿದರಾಯ್ತು. ಎನ್ನುತ್ತಾಳೆ. ಅಮ್ಮಾ ನಿಮ್ಮದು ಆಯ್ತಾ? ನೀವು ತಿಂದಿರಾ? ಎಂದರೆ, ಸಂಪೂರ್ಣ ನಿಶಬ್ದ. ನನ್ನ ಬಾಲ್ಯದ ದಿನಗಳನ್ನು ಬರೆಯಲು ಹೊರಟು ಬೇರೇನೋ ಹೇಳಿದೆ. ಎಲ್ಲವೂ ನನ್ನ ಜೀವನವೇ ಅಲ್ಲವೇ ಎಲ್ಲವನ್ನು ತಿಳಿದುಕೊಳ್ಳಿ ತಪ್ಪೇನು? ನನ್ನ ಬಾಲ್ಯದಲ್ಲಿ ನಮ್ಮಮ್ಮನಿಗೆ ನಾನೇ ಹೆಣ್ಣು ಮಗಳು ನಾನೇ ಗಂಡು ಮಗ. ನಮ್ಮಮ್ಮ ಬಹಳ ಸ್ವಚ್ಚತೆಯನ್ನು ಇಷ್ಟಪಡುವ ಮತ್ತು ಪಾಲಿಸುವ ತಾಯಿ. ಒಂದು ಚೂರು ಧೂಳಿರಬಾರದು. ಪಾತ್ರೆಗಳು ಹೊಳೆಯುತ್ತಿರಬೇಕು. ನನಗೆ ಇಂದಿಗೂ ಬಹಳ ಖುಷಿ ಕೊಡುವುದು ನನ್ನಮ್ಮ ನೀಲಿ ಹಾಕಿರುವ ಬನಿಯನ್ ಹಾಕಿಕೊಳ್ಳುವಾಗ. ಅದನ್ನು ನಾನು ಅನೇಕ ಬಾರಿ ಅಮ್ಮನಿಗೆ ಹೇಳಿದ್ದೇನೆ ಕೂಡ. ಅಮ್ಮ ನೀವು ನೀಲಿ ಹಾಕಿರುವ ಬನಿಯನ್ ಹಾಕೋದೆ ಒಂದು ರೀತಿಯ ಖುಷಿಯೆಂದು. ನಾವು ಬಟ್ಟೆ ತೊಳೆಯಲು ಎರಡು ಮೈಲಿ ದೂರ ನದಿ ದಂಡೆಗೆ ಹೋಗಬೇಕು. ಅಲ್ಲಿ ಚೆನ್ನಾಗಿರುವ ಕಲ್ಲಿಗೆ ಪೈಪೋಟಿ. ನಮ್ಮಮ್ಮ ಮುಂಜಾನೆ ಐದು ಗಂಟೆಗೆ ನನ್ನನ್ನು ಎಬ್ಬಿಸಿಕೊಂಡು ಹೊಗುತ್ತಿದ್ದಳು. ಅವರ ಬಾಲ್ಯದ ದಿನಗಳನ್ನು ನನ್ನೊಂದಿಗೆ ಹಂಚಿಕೊಂಡು. ಅವಳ ಕಷ್ಟ ಕಾರ್ಪಣ್ಯಗಳನ್ನು ಹೇಳುತ್ತಿದ್ದಳು, ಅವಳ ಕಣ್ಣೋದ್ದೆಯಾಗುವುದು ನನಗೆ ತಿಳಿಯುತ್ತಿತ್ತು. ಆದರೇ ನಾನೇನು ಮಾಡಲು ಸಾಧ್ಯ?

ನನಗೆ ಆ ಸಮಯದಲ್ಲಿ ಒಂದು ಧರ್ಮ ಸಂಕಟ. ಮುಂಜಾನೆ ಐದಕ್ಕೆ ಹೋಗುವುದು ಓಕೆ ಆದರೆ ಬರುವಾಗ ಎಂಟೋ ಒಂಬತ್ತೋ ಆಗಿರುತ್ತಿತ್ತು. ತಲೆಯ ಮೇಲೆ ಮಂಕ್ರಿಯನ್ನೋ, ಬೋಸಿಯನ್ನೋ ಹೊತ್ತುಕೊಂಡು ಊರೊಳಗೆ ಬರಬೇಕು. ಹೆಣ್ಣು ಮಕ್ಕಳು ನನ್ನನ್ನು ನೋಡುತ್ತಾರೆ. ಮುಜುಗರ. ಆದರೆ ನನ್ನಮ್ಮ ಮುಗ್ಧೆ ಅವಳಿಗೆ ಅದ್ಯಾವುದು ತಿಳಿಯುವುದಿಲ್ಲ. ಕೆಲವು ಅಮ್ಮಂದಿರು ಹಾಗೆಯೇ ಅವರಿಗೆ ಎಂದಿಗೂ ತನ್ನ ಮಕ್ಕಳು ಚಿಕ್ಕ ಮಕ್ಕಳಂತೆಯೇ ಎಂದು ಭಾವಿಸುತ್ತಾರೆ. ಹತ್ತನೆ ವಯಸ್ಸಿನ ಮಗುವನ್ನು ಹೇಗೆ ನೋಡಿಕೊಳ್ಳುತ್ತಿದ್ದರೋ ಅದೇ ರೀತಿ ನೋಡಿಕೊಳ್ಳುತ್ತಾರೆ, ಅದೇ ರೀತಿ ಮಾತನಾಡಿಸುತ್ತಾರೆ. ಅವರಲ್ಲಿ ಸ್ವಲ್ಪವೂ ಬದಲಾಗಿರುವುದಿಲ್ಲ. ನಾನು ಮದುವೆಯಾಗಿ ನಾಲ್ಕು ವರ್ಷವಾಗಿದೆ ಮಗಳು ಇದ್ದಾಳೆ, ಆದರೆ ಇಂದಿಗೂ ನಾನು ಊರಿಗೆ ಹೋದಾಗ ಗಡ್ಡ ತೆಗೆಸಿಲ್ಲವಾದರೇ ಗದರುತ್ತಾರೆ. ಶೇವ್ ಮಾಡಿಸಿಕೋ ಎನ್ನುತ್ತಾರೆ. ಅವರಿಗೆ ನಾವು ಗಡ್ಡ ಬಿಡುವುದು ಸ್ಟೈಲ್ ಎಂಬುದು ಒಪ್ಪುವುದಿಲ್ಲ. ನಾನು ಇತ್ತೀಚೆಗೆ, ಸೀಕೋ ಸಂಸ್ಥೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ನಂತರವಷ್ಟೆ ಫಾರ್ಮಲ್ಸ್ ಹಾಕುತ್ತಿರುವುದು, ಮುಂಚೆ ಎಲ್ಲಾ ಯಾವುದೋ ಜುಬ್ಬಾ ಇನ್ಯಾವುದೋ ಜೀನ್ಸ್ ಹಾಕಿ ಸುತ್ತಾಡುತ್ತಿದ್ದೆ. ನನ್ನಮ್ಮ ದಿನ ನಿತ್ಯ ನನಗೆ ಉಪದೇಶ ನೀಡುತ್ತಿದ್ದರು. ಅದೆಷ್ಟರ ಮಟ್ಟಿಗೆ ಎಂದರೇ ನಿಮ್ಮಪ್ಪ ಇರುವಷ್ಟು ನೀಟಾಗಿ ನೀನು ಇರುವುದಿಲ್ಲವಲ್ಲವೆಂದು. ಅಂದರೆ ನನ್ನ ತಾಯಿಯ ಮುಗ್ಧತೆ ಹಾಗೆಯೇ ಉಳಿದಿದೆ.

ನಾನು ನನ್ನ ಸ್ನೇಹಿತರ ಅನೇಕ ತಾಯಂದಿಯರನ್ನು ನೋಡಿದ್ದೇನೆ. ಅವರಲ್ಲಿ, ಕೆಲವರು ತಮ್ಮ ಮಕ್ಕಳು ವಯಸ್ಸಿಗೆ ಬಂದ ನಂತರ ಹೆಚ್ಚು ಗೌರವವನ್ನೋ ಮರ್ಯಾದೆಯನ್ನೋ ನೀಡುವಂತೆ ಕಾಣಿಸುತ್ತದೆ. ಅದರಲ್ಲಿ ತಪ್ಪಿಲ್ಲ. ಆದರೇ ಕೆಲವು ತಾಯಂದಿರು ಮಕ್ಕಳಿಗೆ ಹೆದರುವುದು ಇದೆ. ನನ್ನಜ್ಜಿಯೇ ಅದಕ್ಕೊಂದು ಉದಾಹರಣೆ. ಅವರು ಒಮ್ಮೊಮ್ಮೆ ನನ್ನೊಂದಿಗೆ ಕೆಲವೊಂದು ವಿಷಯವನ್ನು ನೇರವಾಗಿ ಹೇಳದೇ ಪೀಠಿಕೆ ಹಾಕಿ ಹೇಳುತ್ತಾರೆ. ಆ ಸಮಯದಲ್ಲಿ ನಾನು ಹೇಳುವುದು ಅವ್ವಾ ನೀನು ಬೇರೆ ಮೊಮ್ಮೊಕ್ಕಳ ಜೊತೆ ಹಾಗೆ ಮಾತನಾಡು. ನನ್ನ ಬಳಿಯಲ್ಲಿ ಬೇಡ, ನೇರವಾಗಿ ಹೇಳು. ನೀನು ಎತ್ತಿ ಆಡಿಸಿ ಬೆಳೆಸಿದ ಮಗು ನಾನು ಎಂದು. ಸ್ನೇಹಿತರೆ, ಜೀವನದಲ್ಲಿ ಪ್ರತಿಯೊಬ್ಬನ ಪಾತ್ರವೂ ಮುಖ್ಯ. ಕೇವಲ ಕಛೇರಿಗೆ ಹೋಗಿ ಹಣ ಸಂಪಾದನೆ ಮಾಡಿದರೆ ಮಾತ್ರ ದುಡಿಮೆಯಲ್ಲ. ಮನೆಯಲ್ಲಿ ಮಾಡುವುದು ದುಡಿಮೆಯೆ. ಹಾಗೆಯೇ ನಮ್ಮನ್ನು ಬೆಳೆಸಲು ನಮ್ಮ ತಂದೆ ತಾಯಂದರು ದುಡಿದರು. ಈಗ ನಾವು ದುಡಿಯಬೇಕು, ನಾಳೆ ನಮ್ಮ ಮಕ್ಕಳು. ಇದು ಅವರವರ ಕರ್ತವ್ಯ ಅಷ್ಟೆ. ಸನ್ನಿವೇಶಗಳು ಬದಲಾಗುತ್ತವೆ, ಉದ್ದೇಶವೊಂದೆ.

ನಮ್ಮ ಜೀವನವನ್ನು ತಿದ್ದುವಲ್ಲಿ, ಸ್ನೇಹಿತೆಯರ/ಗೆಳತಿಯರ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ. ನೀವು ಹೆಚ್ಚು ಹೆಣ್ಣು ಮಕ್ಕಳನ್ನು ಸ್ನೇಹಿತೆಯರಾಗಿ ಪಡೆದಿದ್ದರೆ, ನಿಮಗೆ ತಿಳಿಯದೆ ಹೆಣ್ಣು ಮಕ್ಕಳನ್ನು ಗೌರವಿಸುವುದು, ಸಭ್ಯಸ್ಥರಾಗಿ ಬದುಕುವುದು ಬರುತ್ತದೆ. ನನ್ನ ಎಂಎಸ್ಸಿ ಜೀವನದಲ್ಲಿ ಹೆಣ್ಣು ಮಕ್ಕಳು ಹೆಚ್ಚಿದ್ದರು. ನಾವು ಹದಿನೆಂಟು ಜನ ವಿದ್ಯಾರ್ಥಿಗಳಿದ್ದರೆ ಹುಡುಗಿಯರು ಹನ್ನೆರಡು ಜನರಿದ್ದರು. ಅವರೊಂದಿಗೆ ಬೆರೆತಾಗಿನಿಂದ ನನಗೆ ತಿಳಿಯದೇ ಹೆಣ್ಣು ಮಕ್ಕಳಿಗೆ ಗೌರವ ನೀಡುವುದು ಬಂತು. ಅದಕ್ಕೂ ಮುಂಚೆ ನನ್ನ ಬಿಎಸ್ಸಿ ಜೀವನದಲ್ಲಿಯೂ ನನ್ನಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ಆದರೆ, ಪಿಯುಸಿ ಜೀವನದಲ್ಲಿ ನಾನು ಈಗಿರುವಷ್ಟರ ಮಟ್ಟಿಗೆ ಸೂಕ್ಷ್ಮತೆಯಿರಲಿಲ್ಲವೆನಿಸುತ್ತೆ. ಈಗ ನನ್ನ ಪಿಯುಸಿ ಗೆಳತಿಯರೆಲ್ಲರೂ ನನ್ನೊಂದಿಗೆ ಚೆನ್ನಾಗಿದ್ದಾರೆ ಮತ್ತು ಅಚ್ಚರಿಯನ್ನು ತಿಳಿಸುತ್ತಾರೆ. ನೀನು ಪಿಯುಸಿಯಲ್ಲಿ ಹೇಗಿದ್ದೆ. ಈಗ ಅದೆಷ್ಟು ಬದಲಾವಣೆಯೆಂದು. ಆ ಸಮಯದಲ್ಲಿ ಸ್ವಲ್ಪ ಒರಟು ಸ್ವಭಾವದವನು ನಾನು. ಕಾಲೇಜಿಗೆ ಚಕ್ಕರ್ ಹಾಕಿ ಬೆಟ್ಟ ಗುಡ್ಡ ಹತ್ತುವುದೇ ಖಯಾಲಿಯಾಗಿತ್ತು. ಸಾಲದಕ್ಕೆ ಸಿಗರೇಟು ಸೇದುವುದೊಂದು ಒಳ್ಳೆಯ ಗುಣ ಸೇರಿತ್ತು. ಇದಕ್ಕೆ ಎರಡು ಕಾರಣಗಳು. ಮೊದಲನೆಯದಾಗಿ ನನ್ನ ವಯಸ್ಸು ಮತ್ತು ಎರಡನೆಯದಾಗಿ ಊರಿನ ಹಿನ್ನಲೆಯೂ ಇರಬಹುದು. ಹಳ್ಳಿಗಳಲ್ಲಿ ಹೆಣ್ಣನ್ನು ಅದರಲ್ಲಿಯೂ ವಯಸ್ಸಿನ ಹುಡುಗರು ಹೆಣ್ಣುಮಕ್ಕಳ ಕುರಿತು ಅಂಥಹ ಉತ್ತಮ ಭಾವನೆಗಳನ್ನು ಹೊಂದಿಲ್ಲವೆನ್ನುವುದು ಇಂದಿಗೂ ನನ್ನ ಅನುಭವ. ಅದೇನೆ ಇರಲಿ ಅವರನ್ನು ಪುಸ್ತಕಗಳಿಗೆ ಒರೆ ಹಚ್ಚಿದರೆ ಮಾತ್ರ ಸುಧಾರಣೆ ತರಬಹುದೆಂಬುದು ನನ್ನ ನಂಬಿಕೆ. ಪುಸ್ತಕಳು ನಮಗೆ ತಿಳಿಯದೇ ನಮ್ಮನ್ನು ಸಭ್ಯಸ್ಥರಾನ್ನಾಗಿಸುತ್ತವೆ.

ಗೆಳತಿಯರ ವಿಷಯಕ್ಕೆ ಬಂದಾಗ ನನ್ನ ಪಿಎಚ್‍ಡಿಯಲ್ಲಿ ಪವಿತ್ರಳ ಪಾತ್ರವೂ ದೊಡ್ಡದಿದೆ. ಪವಿತ್ರ ಅವರ ಅಮ್ಮ ಇಂದಿಗೆ ನಮ್ಮೊಂದಿಗಿಲ್ಲ. ಆದರೇ, ನಾನು ಎಂಎಸ್ಸಿ ದಿನಗಳಿಂದ ಇತ್ತೀಚಿನ ಅಂದರೆ 2012-13 ರ ತನಕವೂ ಅವರಿಗೆ ಫೋನ್ ಮಾಡಿ ಮನೆಗೆ ಬರ್ತಾ ಇದ್ದೀನಿ, ಚಿಕನ್ ಮಾಡಿ, ಬಿರ್ಯಾನಿ ಮಾಡಿ ಎಂದು ಹೇಳಿ ಮಾಡಿಸಿಕೊಂಡು ತಿಂದು ಬರುತ್ತಿದ್ದೆ. ಅವರು ಬೆಂಗಳೂರು ವಿವಿಗೆ ಬರುವಂತಿದ್ದರೆ ನನಗಿಷ್ಟವೆಂದು ಬಿರ್ಯಾನಿ ಮಾಡಿ ತರುತ್ತಿದ್ದರು. ಆ ನಿಸ್ವಾರ್ಥ ಸೇವೆ, ಮಮತೆಯೇ ಹೆಣ್ಣನ್ನು ಅತಿ ಎತ್ತರಕ್ಕೆ ಕೂರಿಸಿದೆ. ಈಗಲೂ ನನ್ನ ಅನೇಕಾ ಎಂಎಸ್ಸಿ ಗೆಳತಿಯರು ಸಲಹೆ ಸೂಚನೆಗಳಿಗೆ ಕರೆ ಮಾಡುತ್ತಾರೆ, ಅವರ ಮನದೊಳಗೆ ನಾನು ಒಬ್ಬ ಅಣ್ಣನೋ ತಮ್ಮನೋ ಆಗಿ ಅವರಿಗೆ ನೆರವಾಗಬಹುದೆಂಬ ಭರವಸೆಯನ್ನು ಮೂಡಿಸಿರುವುದು ಹೆಮ್ಮೆಯ ಸಂಗತಿ.

ಜೀವನದಲ್ಲಿ ಬರುವ ಮತ್ತೊಬ್ಬ ಪ್ರಮುಖಳೆಂದರೆ ಅದು ಹೆಂಡತಿ. ಅಮ್ಮನ ಸ್ಥಾನವನ್ನು ತುಂಬುವವಳೇ ಹೆಂಡತಿ. ಹೆಂಡತಿಯೇ ತಾಯಿಯಾಗಿ, ತಾಯಿಯ ಪಾತ್ರವನ್ನು ಮುಂದುವರೆಸುತ್ತಾ ಹೋಗುತ್ತಾಳೆ. ನನ್ನ ಹೆಂಡತಿ ಮಾಡುವ ಶೇ.10ರಷ್ಟು ಕೆಲಸವನ್ನು ನಾನು ಮಾಡುವುದಿಲ್ಲ. ಅವಳು ಎಲ್ಲವನ್ನೂ ನಿಭಾಯಿಸುವ ರೀತಿ ಹೆಮ್ಮೆ ಎನಿಸುತ್ತದೆ. ನನ್ನ ಈ ದಿನದ ಯಶಸ್ವಿಗೆ ಅಥವಾ ಅಲ್ಪ ಸ್ವಲ್ಪ ಹೆಸರಿಗೆ ನನ್ನ ಹೆಂಡಿತಿಯ ಕೊಡುಗೆ ಅಪಾರ. ನಾನು ಎರಡು ವಾರದ ನನ್ನ ಮಗಳನ್ನು ಬಿಟ್ಟು ಒಂದು ತಿಂಗಳು ರಾಜಾಸ್ಥಾನಕ್ಕೆ ಹೋಗಿದ್ದೆ. ಈಗಲೂ ನನ್ನ ಮಗಳು ಆರು ತಿಂಗಳ ಕೂಸು, ಆದರೇ ನನ್ನ ಹೆಂಡತಿ ಸಂಸಾರವನ್ನು ಸಲಹುತ್ತಿರುವುದರಿಂದ ನಾನು ಸುತ್ತಾಡುತ್ತೇನೆ. ಆ ಬೆಂಬಲ, ಸಹಕಾರವಿಲ್ಲದೇ ಇದ್ದರೆ ಏನನ್ನು ಮಾಡಲಾಗುತ್ತಿರಲಿಲ್ಲ.

ತಾಯಿ, ಹೆಂಡತಿ, ಅಕ್ಕ, ತಂಗಿ, ಮಗಳು, ಸ್ನೇಹಿತೆ ಇವೆಲ್ಲವೂ ಕೇವಲ ಪಾತ್ರಗಳು. ಅಲ್ಲಿ ಯಾರೇ ಬಂದರೂ ಅವರು ಆ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಇದರಲ್ಲಿ ಅತಿಶಯೋಕ್ತಿಯಿಲ್ಲ.ಹೆಣ್ಣು ತಪ್ಪು ಮಾಡಿದರೂ ಅದರ ಹಿಂದೆ ಗಂಡಸಿನ ಪಾತ್ರವಿದ್ದೇಯಿರುತ್ತದೆ. ಯಾವುದೇ ಹೆಣ್ಣನ್ನು ಅವಮಾನಿಸಿದರೆ ಅದು ಕೇವಲ ಹೆಣ್ಣನ್ನು ಅವಮಾನಿಸಿದ್ದಲ್ಲ. ಒಬ್ಬ ತಾಯಿ, ಒಬ್ಬ ಅಕ್ಕ, ಒಬ್ಬ ತಂಗಿ, ಒಬ್ಬ ಸ್ನೇಹಿತೆ, ಒಬ್ಬ ಹೆಂಡತಿ, ಒಬ್ಬ ಮಗಳು ಇವರೆಲ್ಲರನ್ನೂ ಅವಮಾನಿಸಿದ ಹಾಗೆ. ನಾನು ಶಾಲೆಗಳ ವಿಷಯದಲ್ಲಿ ಈ ಮಾತನ್ನು ಹೇಳುತ್ತಿರುತ್ತೇನೆ. ಪ್ರತಿಯೊಂದು ಶಾಲೆಗೂ ಶಿಕ್ಷಕಿಯರಿರಬೇಕೆಂದು. ಶಿಕ್ಷಕಿಯರಿರುವ ಶಾಲೆಗೂ ಕೇವಲ ಶಿಕ್ಷಕರಿರುವ ಶಾಲೆಗೂ ಬಹಳ ವ್ಯತ್ಯಾಸವಿದೆ ಮತ್ತು ಅದನ್ನು ನಾನು ಬಹಳ ಸೂಕ್ಷ್ಮತೆಯಿಂದ ಗಮನಿಸಿದ್ದೇನೆ.

ನಮ್ಮ ಸಂಸ್ಕøತಿಯಲ್ಲಿ ಹೆಣ್ಣಿಗೆ ದೇವತೆಯ ಸ್ಥಾನ ನೀಡಿದ್ದೇವೆಂದು ಬೊಬ್ಬೆ ಹೊಡೆಯುವ ಕೆಲವರಿಗೆ ನನ್ನದೊಂದು ಕಿವಿಮಾತು. ಸ್ಥಾನ ನೀವು ನೀಡಿದ್ದಲ್ಲ, ಅದು ಅವಳು ಪಡೆದದ್ದು ಮತ್ತು ಅದಕ್ಕೆ ಅವಳು ಸಂಪೂರ್ಣ ಅರ್ಹಳು. ನೀವು ಕೊಡುವಂತಹದ್ದು ಏನು ಇಲ್ಲ. ಎಲ್ಲಾ ಅವಳ ಸಂಪಾದನೆ. ಜಗತ್ತಿನಲ್ಲಿ ಪ್ರತಿಯೊಂದಕ್ಕೂ ತನ್ನದೇ ಸ್ಥಾನಮಾನಗಳು, ಮಹತ್ವಗಳಿವೆ. ಸಣ್ಣ ಇರುವೆಯಿಂದ ಹಿಡಿದು ದೊಡ್ಡ ತಿಮಿಂಗಿಲಗಳ ತನಕ ಎಲ್ಲವೂ ಬೇಕು. ಜೇನ್ನೊಣಗಳ ಸಂತತಿ ಕಡಿಮೆಯಾದರೇ ಇಡೀ ಪರಿಸರ ವ್ಯವಸ್ಥೆಯೇ ಹಾಳಾಗುತ್ತದೆಯೆಂಬುದನ್ನು ತಿಳಿದಿದ್ದೇವೆ. ಆದ್ದರಿಂದ ಹೆಣ್ಣು ಗಂಡು ಎಂಬ ಬೇಧವೂ ಬೇಡ. ಅವರ ಗೌರವವನ್ನೂ ಅವರಿಗೆ ನೀಡೋಣ. ಅವರ ಹಕ್ಕನ್ನು ಅವರಿಗೆ ನೀಡೋಣ. ಮೀಸಲಾತಿ ಎನ್ನುವ ಕಣ್ಣೊರೆಸುವ ತಂತ್ರ ಬೇಡವೇ ಬೇಡ. ಹೆಸರಿಗೆ ಮಾತ್ರ ಮಹಿಳೆಯರು ಸದಸ್ಯರು, ಅಧ್ಯಕ್ಷರು ನಿಜವಾದ ಅಧಿಕಾರ ಅವರ ಗಂಡನೋ ಅಥವಾ ಅಧಿಕಾರಿಯೋ ಅಥವಾ ಅವರ ಪಕ್ಷದ ಮುಖಂಡನೋ ನಡೆಸುತ್ತಾನೆ.

21 ಫೆಬ್ರವರಿ 2018

ಶ್ರಮಜೀವನಕ್ಕೆ ಬಲಿಯಾದವರಿಲ್ಲ, ಅವರ ಸೋಮಾರಿತನಕ್ಕೆ ಬೇಸತ್ತು ಸತ್ತವರು ಸಾವಿರಾರು ಜನರಿದ್ದಾರೆ!!!




ಬರೆಯುವುದಕ್ಕೆ ಮನಸ್ಸಿದ್ದಾಗ ಬರೆದುಬಿಡಬೇಕು. ಆಲೋಚನೆಗಳು, ಚಿಂತನೆಗಳು ಯಾವಾಗ ಬರುತ್ತವೆ, ಯಾವಾಗ ಬತ್ತುತ್ತವೆಂದು ಹೇಳಲಾಗುವುದಿಲ್ಲವೆಂದು ತೀರ್ಮಾನಿಸಿ ಬರೆಯಲು ಶುರು ಮಾಡಿದೆ. ಆದರೇ ಶುರುಮಾಡಿ ಒಂದು ವಾರವಾಗಿತ್ತು. ಅದೇನೇ ಆಗಲಿ, ಈ ದಿನ ಇದನ್ನು ಬರೆದು ಮುಗಿಸಬೇಕೆಂದು ಕುಳಿತಿದ್ದೇನೆ. ಈ ಬರವಣಿಗೆ ಬಿಟ್ಟು ಬಿಟ್ಟು ಬರೆದಿರುವುದರಿಂದ ಓದಿಸಿಕೊಂಡು ಹೋಗುತ್ತದೆಯೆಂಬ ಸಂಪೂರ್ಣ ನಂಬಿಕೆ ನನಗಿಲ್ಲ. ಆದರೂ ಸಾಧ್ಯವಾದಷ್ಟೂ ತಿದ್ದುಪಡಿ ಮಾಡಿದ್ದೇನೆಂಬ ಅಲ್ಪ ತೃಪ್ತಿಯಿದೆ. ಇಂದಿನ ಜನರ ಮನಸ್ಥಿತಿಯ ಕುರಿತು ಅದರಲ್ಲಿಯೂ ಸರ್ಕಾರಿ ನೌಕರರನ್ನು ಕುರಿತು ನಾಲ್ಕು ಮಾತನಾಡಬೇಕೆಂದು ತೀರ್ಮಾನಿಸಿದ್ದೇನೆ. ಈ ಬರವಣಿಗೆಯಿಂದ ಅವರನ್ನು ಟಾರ್ಗೇಟ್ ಮಾಡುತ್ತಿದ್ದೇನೆಂದು ಅಥೈಸಿಕೊಳ್ಳಬಾರದು. ನನ್ನ ಮಾತಿಗೆ ಅವರು ಕಿವಿಗೊಡುವುದಿಲ್ಲವೆಂಬುದು ನನಗೆ ತಿಳಿದಿದೆ. ಆದರೂ ನಾನು ಹೇಳುವುದನ್ನು ಹೇಳಿ ಮುಗಿಸುತ್ತೇನೆ. ಇದನ್ನು ಒಪ್ಪುವುದಿಲ್ಲವೆನ್ನುವುದು ನನಗೆ ತಿಳಿದಿದೆ, ಅದರ ಬಗ್ಗೆ ನನಗೇನೂ ಬೇಸರವಿಲ್ಲ. ಆದರೆ ಚಿಂತನೆಗಳು ಮೊಳಗಲಿ. ಯಾವುದೇ ಹೊಸತರ ಆಲೋಚನೆಗಳು ಬಂದಾಗ ಯಾರೂ ಒಪ್ಪವುದಿಲ್ಲ, ಏಕೆಂದರೆ ಅದು ಹಳೆ ಬದುಕಿನ ಹಾದಿಯಲ್ಲಿ ಬದುಕುತ್ತಿರುವ ಅಥವಾ ಆಲೋಚಿಸುವ ತಲೆಯೊಳಕ್ಕೆ ಹೋಗುವುದು ಕಷ್ಟವಾಗುತ್ತದೆ. ಹಾಗೆಂದ ಮಾತ್ರಕ್ಕೆ ಇಂತಹ ವಿಚಾರದಲ್ಲಿ ಚಿಂತನೆಯೇ ಬೇಡ, ಚರ್ಚೆಯೇ ಬೇಡವೆಂದರೆ ಮುಂದೊಂದು ದಿನ ದೊಡ್ಡ ಅನಾಹುತ ಸಂಭವಿಸಬಹುದು.

ನಿಮ್ಮಲ್ಲಿ ಸಾಕಷ್ಟು ಜನರು ಶಿವರಾಮ ಕಾರಂತರ ನಾವು ಕಟ್ಟಿದ ಸ್ವರ್ಗವನ್ನು ಓದಿಲ್ಲವೆಂದು ನಂಬಿ ಬರೆಯುತ್ತಿದ್ದೇನೆ. ಓದದೇ ಇರುವ ಪ್ರತಿಯೊಬ್ಬರು ಅದನ್ನೊಮ್ಮೆ ಓದಲೇ ಬೇಕೆಂದು ಶಿಫಾರಸ್ಸು ಮಾಡುತ್ತೇನೆ. ನಿಜವಾಗಿಯೂ ಹೇಳುತ್ತೇನೆ, ನಾನು ತಾರತಮ್ಯ ಮಾಡುವುದು ಎರಡೇ ವಿಷಯದಲ್ಲಿ. ಒಂದು ಓದದೇ ಇರುವವರ ಕುರಿತು, ಮತ್ತೊಂದು ದೇಶ ಸುತ್ತಾಡದೇ ಇರುವವರು ಕುರಿತು. ನನಗೆ ಈ ಎರಡನ್ನು ಮಾಡದೆ ಮಾತನಾಡುವವರು ಒಂದು ರೀತಿಯಲ್ಲಿ ಹಿಡಿಸದೆ ಇರುವವರು. ನೀವು ಓದದೇ ಮತ್ತು ಲೋಕ ಸುತ್ತಾಡದೇ ನನ್ನೊಂದಿಗೆ ಮಾತ್ರವಲ್ಲ ಯಾರೊಂದಿಗೂ ಚರ್ಚಿಸಲು ಯೋಗ್ಯರಲ್ಲ. ಓದು ಎಂದಾಕ್ಷಣ ಯಾವುದನ್ನು ಓದಬೇಕು, ಏಕೆ ಓದಬೇಕು, ಹೇಗೆ ಓದಬೇಕು ಎನ್ನುವ ಮಾತು ಬರುತ್ತದೆ. ಕೇವಲ ನಿಮ್ಮ ವೃತ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಓದಿಕೊಂಡು ಮಾತನಾಡಿದರೆ, ನೀವು ನನಗೆ ಆಸ್ಥಾನ ಕವಿಯಂತೆ ಕಾಣುತ್ತೀರೆ ಹೊರತು ವಿದ್ವತ್ತರಾಗಿಯಲ್ಲ. ನಾನು ಪರಿಸರ ವಿಜ್ಞಾನದ ವಿಷಯದಲ್ಲಿ ಸ್ನಾತಕೊತ್ತರ ಪದವಿಯನ್ನು ಪಡೆದಿದ್ದೇನೆ, ಅದರ ಕುರಿತು ನನ್ನ ಪಾಂಡಿತ್ಯವನ್ನು ಸುರಿಸಿದರೆ ಅಲ್ಲೇನಿದೆ ವಿಶೇಷತೆ? ಅದನ್ನು ಹೊರತುಪಡಿಸಿ, ಮಾನವಿಕ ವಿಜ್ಞಾನದಲ್ಲಿಯೂ, ಸಮಾಜ ಶಾಸ್ತ್ರದಲ್ಲಿಯೋ, ಸಾಹಿತ್ಯದಲ್ಲಿಯೋ ಮಾತನಾಡಿದರೆ ಅದನ್ನು ನನ್ನ ಯೋಗ್ಯತೆ ಮೀರಿದ ಜ್ಞಾನವೆನ್ನಬಹುದು.

ಓದುವ ವಿಷಯವನ್ನು ಮತ್ತಷ್ಟೂ ಚರ್ಚಿಸೋಣ. ನನ್ನ ಯುವರಾಜ ಕಾಲೇಜು ಮತ್ತು ಮಹರಾಜ ಕಾಲೇಜಿನ ದಿನಗಳ ನೆನಪು ಬರುತ್ತದೆ. ಆ ದಿನಗಳಲ್ಲಿ ಮೋಜು ಗೋಜು, ರತಿ ವಿಜ್ಞಾನಗಳು ಉತ್ತುಂಗದಲ್ಲಿದ್ದವು. ಆ ದಿನಗಳಲ್ಲಿ ಆ ರೀತಿಯ ಪುಸ್ತಕಗಳನ್ನು ಓದುತ್ತಿದ್ದವರ ಸಂಖ್ಯೆ ನಮ್ಮ ಹಾಸ್ಟೆಲಿನಲ್ಲಿ ಅಪಾರವಾಗಿತ್ತು. ಅದರಲ್ಲಿ ನಾನು ಒಬ್ಬನಾಗಿದ್ದೆನೆಂಬುದನ್ನು ಯಾವ ನಾಚಿಕೆಯಿಲ್ಲದೇ ಒಪ್ಪಿಕೊಳ್ಳುತ್ತೇನೆ. ಇದನ್ನು ಏಕೆ ಇಲ್ಲಿ ಪ್ರಸ್ತಾಪಿಸಿದೆಯೆಂದರೆ, ನನಗೆ ಆ ದಿನದಲ್ಲಿ ಈ ಮಟ್ಟಕ್ಕೆ ಭೌದ್ಧಿಕವಾಗಿ ಬೆಳೆಯುತ್ತೇನೆಂಬ ಕನಸು ಕೂಡ ಇರಲಿಲ್ಲ. ನಮ್ಮಲ್ಲಿ ಬಹಳಷ್ಟು ಜನರಿಗೆ ಇದು ಸರ್ವೇ ಸಾಮಾನ್ಯ. ಅದನ್ನು ನಾವು ಹಂಗಿಸಬಾರದು. ಮೊನ್ನೆ ಮೊನ್ನೆ ತನಕ ಹಾಗಿದ್ದವನು ಈಗ ಬಹಳ ಸಾಚಾ ತರಹ ಆಗಿದ್ದಾನೆ? ಎಂಬ ಮಾತುಗಳು ಕೇಳಿ ಬರುತ್ತಿರುತ್ತವೆ. ಮಹಾತ್ಮ ಗಾಂಧಿಯವರನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಅವರು ಜಗತ್ಪ್ರಸಿದ್ದಿಯಾಗುತ್ತಾರೆಂದು ಅವರಿಗೂ ನಂಬಿಕೆಯಿರಲಿಲ್ಲ. ಆದರೆ ಅದು ಜೀವನದಲ್ಲಿ ಶಿಸ್ತು ಸಂಯಮದಿಂದ ಮುನ್ನುಗಿದಂತೆ ದಾರಿ ಮತ್ತು ಗುರಿ ದೊಡ್ಡದಾಗುತ್ತಾ ಹೋಗಿತು.

ಅದರಂತೆಯೇ, ನನ್ನ ಕಾಲೇಜು ದಿನಗಳು. ಅದು ಆ ದಿನದ ಆ ವಯಸ್ಸಿನ ಆ ಸಂಘದ ಅನುಭವವೆಂದರು ತಪ್ಪಿಲ್ಲ. ಕಾಲ ಬದಲಾದಂತೆ ನಾನು ಬೇರೆ ಬೇರೆ ಪುಸ್ತಕಗಳನ್ನು ಓದುವುದಕ್ಕೆ ಆರಂಭಿಸಿದೆ. ಕೆಲವರು ಯಾವುದನ್ನೂ ಓದದೇ ಅಲ್ಲಿಯೇ ನಿಂತರು. ಅವರು ನನಗಿಂತ ನಾಲ್ಕಾರು ಪಟ್ಟು ಹೆಚ್ಚು ಹಣ ಸಂಪಾದಿಸಿರಬಹುದು, ಹೆಸರು ಕೀರ್ತಿಯೂ ಇರಬಹುದು. ಆದರೇ ನಾನು ಓದಿರುವ ಪುಸ್ತಕಗಳು ಮತ್ತು ಪುಸ್ತಕಗಳನ್ನು ಓದುವಾಗ ನಾನು ಅನುಭವಿಸಿರುವ ಆನಂದವನ್ನು ಆನಂದಿಸಲಾರರು. ಒಂದೊಂದು ವಯಸ್ಸಿಗೆ ಒಂದೊಂದು ರೀತಿಯ ಪುಸ್ತಕಗಳು ಆನಂದಗೊಳಿಸುತ್ತವೆ. ಅದನ್ನು ಅನುಭವಿಸುತ್ತಾ ಮುನ್ನುಗ್ಗಬೇಕು. ನನ್ನ ಪದವಿ ಮತ್ತು ಸ್ನಾತಕ್ಕೊತ್ತರದ ದಿನಗಳಲ್ಲಿ ಭೈರಪ್ಪರವರು ಮತ್ತು ರವಿ ಬೆಳಗೆರೆ ಅಚ್ಚುಮೆಚ್ಚು ಅನಿಸುತ್ತಿತ್ತು. ಅದರ ನಡುವೆ, ಸತ್ಯಕಾಮರವರ ಪುಸ್ತಕಗಳು, ನಾಗತೀಹಳ್ಳಿ ಚಂದ್ರಶೇಖರವರ ಪುಸ್ತಕಗಳು ಹೆಚ್ಚು ಹಿಡಿಸಿದ್ದವು. ಈಗ ಅವರನ್ನು ಓದುವುದಕ್ಕೆ ಮನಸ್ಸು ಬರುವುದಿಲ್ಲ. ಆದರೆ ಅವರ ಕೃತಿಗಳಿಂದ ನನಗೆ ಬಹಳ ಅನುಕೂಲವಾಗಿದೆ, ಅದನ್ನೇ ಮೆಲುಕು ಹಾಕುತ್ತ ಜೀವನ ಸವೆಸಲು ಅಥವಾ ಆ ನೆನಪುಗಳಲ್ಲಿಯೇ ಸಾಯಲು ನಾನು ಸಿದ್ದನಿರಲಿಲ್ಲವೆನ್ನುವುದು ಹೆಮ್ಮೆಯನ್ನು ತಂದಿದೆ.

ನನ್ನ ನೆಚ್ಚಿನ ಲೇಖಕರಲ್ಲಿ ತೇಜಸ್ವಿ, ಕಾರಂತರು ಅಗ್ರಗಣ್ಯರು ನಂತರದ ಸ್ಥಾನ ಕುವೆಂಪುರವರಿಗೆ. ಭಾಷೆಯ ವಿಷಯ ಬಂದರೆ ಮೊದಲ ಸ್ಥಾನ ಕುವೆಂಪುರವರಿಗೆ. ಅನುಭವದ ವಿಷಯಕ್ಕೆ ಬಂದರೆ ತೇಜಸ್ವಿ ಮತ್ತು ಕಾರಂತರಿಗೆ. ತೇಜಸ್ವಿ ಮತ್ತು ಕಾರಂತರು, ಏಕೆ ಅಷ್ಟೊಂದು ಇಷ್ಟವಾಗುತ್ತಾರೆಂದರೇ ಇಬ್ಬರೂ ಸಾಕಷ್ಟು ಓದಿಕೊಂಡವರು. ತೇಜಸ್ವಿಯವರು ಸುಮಾರು 1965 ರಿಂದಲೇ ಜಿಯೋಗ್ರಾಫಿಕ್ ಮಾಗ್‍ಜಿನ್ ಓದುತ್ತಾ ಬಂದವರು. ಕಾರಂತರಂತೂ ಕಾಲಿಡದ ಜಾಗವಿಲ್ಲ, ಕೈ ಹಾಕದ ಕ್ಷೇತ್ರವಿಲ್ಲ. ಅವರು ಜೀವನವನ್ನು ಆನಂದಿಸಿದವರು, ಅನುಭವಿಸಿದವರು, ಅವರ ಜೀವನವೇ ಅವರ ಬರವಣಿಗೆಯೊಳಗಿದೆ. ಆಡುವ ಮಾತು, ನಡೆಯುವ ರೀತಿ, ಜೀವಿಸುವ ವಿಧಾನ ಎಲ್ಲವೂ ಒಂದೇ ಆದರೆ ಮಾತ್ರ ಜೀವನಕ್ಕೆ ಮೌಲ್ಯ ಸೇರಿಕೊಳ್ಳುವುದು. ಹೇಳುವುದೊಂದು ಮಾಡುವುದೊಂದು ಆದರೆ? ಅದೇನೇ ಇರಲಿ, ಓದುವಾಗಲೂ ಅಷ್ಟೆ, ಎಷ್ಟು ವೈವಿಧ್ಯತೆಯ ಲೇಖಕರನ್ನು ಓದುತ್ತೀವೋ ಅಷ್ಟೂ ವೈವಿದ್ಯಮಯವಾಗುತ್ತದೆ ನಮ್ಮ ಬದುಕು. ಉದಾಹರಣೆಗೆ, ನೀವು ತರಾಸರು, ಮಾಸ್ತಿಯವರನ್ನು ಓದುವಾಗ ಸಿಗುವ ಜಗತ್ತೇ ಬೇರೆ, ಯಂಡಮೂರಿ ವೀರೇಂದ್ರರ ಜಗತ್ತೇ ಬೇರೆ, ಹಾಗೇಯೇ ದೇವನೂರರ ಮತ್ತು ಅನಂತಮೂರ್ತಿರವರ ಬರವಣಿಗೆಯ ಸಮಾಜವೇ ಬೇರೆ. ಇರಲಿ ವಿಷಯಕ್ಕೆ ಬರೋಣ.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಸಂಘ ಕಟ್ಟಿ ಹೋರಾಡುವುದು ಸಾಮಾನ್ಯವಾಗಿದೆ. ಎಲ್ಲಾ ಕಾರ್ಮಿಕರು, ನೌಕರರು, ರೈತರು, ವಿದ್ಯಾರ್ಥಿಗಳು, ಆದರೆ ಯಾವುದೇ ಸರ್ಕಾರ ಇವರ್ಯಾರ ಮನವಿಯನ್ನು ಕೇಳುವಷ್ಟು ಸಂಯಮ ತೋರುತ್ತಿಲ್ಲ. ಬೆಂಗಳೂರಿನ ಫ್ರೀಡಂ ಪಾರ್ಕ್ ಅಂತೂ ಚಳುವಳಿಗಾಗಿಯೇ ನಿರ್ಮಿಸಿರುವ ವೇದಿಕಯಾಗಿದೆ. ನೀವು ಆ ಹಾದಿಯಲ್ಲಿ ಹೋದರೇ ಯಾವುದಾದರೂ ಒಂದು ಜಾಥಾ ಇದ್ದೇ ಇರುತ್ತದೆ. ಇದೆಲ್ಲವನ್ನೂ ಸಮಗ್ರವಾಗಿ ನೋಡಬೇಕಾದ ಅನಿವಾರ್ಯತೆಯಿದೆ. ಆದರೇ, ನಮ್ಮಲ್ಲಿ ಎಲ್ಲವನ್ನೂ ಸಮಗ್ರವಾಗಿ ನೋಡುವ ಮನೋಭಾವ ಬಾರದಿರುವುದು ದುರಂತ. ಸರ್ಕಾರಿ ನೌಕರರು ಎಂದಾಕ್ಷಣ ಎಲ್ಲಾ ನೌಕರರು ಒಂದಾಗುವುದಿಲ್ಲ. ವಿವಿಧ ಇಲಾಖೆಯವರು, ಅದರಲ್ಲೂ ವಿವಿಧ ದರ್ಜೆ, ಮಹಿಳಾ ಮತ್ತು ಪುರುಷ ಹೀಗೆ ಒಂದು ಒಗ್ಗಟ್ಟಿರುವುದಿಲ್ಲ. ಬಿಸಿಯೂಟದವರು ಪ್ರತಿಭಟನೆ ಮಾಡಿದರೆ ಅವರ ಶಾಲೆಯಲ್ಲಿರುವ ಶಿಕ್ಷಕರು ಸೇರುವುದಿಲ್ಲ, ಅಂಗನವಾಡಿಯವರು ಪ್ರತಿಭಟನೆಗೆ ಅಡುಗೆಯವರು ದನಿಗೂಡಿಸುವುದಿಲ್ಲ. ಅಷ್ಟೆಲ್ಲಾ ಏಕೆ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ಬೇರೆ, ಪ್ರೌಢಶಾಲೆಯ ಶಿಕ್ಷಕರ ಸಂಘ ಬೇರೆ, ಅಷ್ಟಕ್ಕೇ ನಿಲ್ಲುವುದಿಲ್ಲ, ಪ್ರತಿಯೊಂದು ಜಾತಿಯ, ಪ್ರತಿಯೊಂದು ವಿಷಯದ ಆಧಾರದಲ್ಲಿ ಸಂಘ ಸಂಸ್ಥೆಗಳು, ಸಾರಿಗೆಯಲ್ಲಿ ವಿವಿಧ ವಿಭಾಗಗಳು. ಹಾಗಾಗಿ ಸರ್ಕಾರವೂ ಎಲ್ಲಿ ಹೆಚ್ಚಿನ ಸಂಖ್ಯೆಯ ನೌಕರರಿದ್ದಾರೆ ಅವರಿಗೆ ಬೇಗ ಮಣಿಯುತ್ತದೆ, ಎನ್ನುವ ನಂಬಿಕೆಯಿದೆ. ಅದಕ್ಕಿಂತಲೂ ಶಿಕ್ಷಕರ ಕ್ಷೇತ್ರ, ಪದವೀಧರರ ಕ್ಷೇತ್ರದಿಂದ ಚುನಾವಣೆ ನಡೆಯುವುದು ಒಂದು ಕಾರಣವೂ ಇದೆ. ಇಡೀ ಸಮಾಜವೇ ಒಂದು ಕುಟುಂಬ, ಎಲ್ಲಾ ನೌಕರರು ಒಂದೂ ಎನ್ನುವ ಭಾವ ನಮ್ಮಲ್ಲಿ ಬಂದಿಲ್ಲ. ನಮ್ಮಲ್ಲಿ ಹೋಲಿಕೆಯ ಜೀವನ ಮುಗಿಲು ಮುಟ್ಟಿದೆ. ಎಲ್ಲರೂ ಬೇರೆ ಇಲಾಖೆಯವರನ್ನೋ ಅಥವಾ ಬೇರೆ ದರ್ಜೆಯವರನ್ನೋ ನೋಡಿ ಹೋಲಿಕೆ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಖಾಸಗಿ ಕ್ಷೇತ್ರದಲ್ಲಿ ಹೆಚ್ಚು ದುಡಿಯುತ್ತಿರುವವರನ್ನು ಹೋಲಿಕೆ ಮಾಡಿಕೊಳ್ಳುತ್ತಾರೆ. ನೀವು ಯಾವುದರ ಹಿಂದೆ ಹೋದರೂ ಅಷ್ಟೆ, ಅದು ನಿಮಗೆ ತೃಪ್ತಿ ಕೊಡುವುದಿಲ್ಲ. ಮನುಷ್ಯನ ಬೇಕುಗಳಿಗೆ ಕೊನೆಯಿಲ್ಲ. 

ಇದನ್ನು ಇನ್ನಷ್ಟು ಆಳಕ್ಕೆ ಚರ್ಚಿಸೋಣ. ನಾನು ಅನೇಕರನ್ನು ಈ ಪ್ರಶ್ನೆ ಕೇಳಿದ್ದೇನೆ. ನಿಮಗೆ ತಿಂಗಳಿಗೆ ನೆಮ್ಮದಿಯ ಬದುಕನ್ನು ನಡೆಸಲು ಎಷ್ಟು ಸಂಬಳ ಬೇಕು ಮತ್ತು ಯಾವ್ಯಾವುದಕ್ಕೆ ಎಷ್ಟು ಬೇಕೆಂದು. ಅವರುಗಳಿಂದ ನನಗೆ ಶೇ. ಒಂದರಷ್ಟು ನಿರ್ದಿಷ್ಟ ಉತ್ತರ ಬಂದಿಲ್ಲ. ತಿಂಗಳಿಗೆ ಸುಮಾರು 30-40 ಸಾವಿರ ಎನ್ನುತ್ತಾರೆ, ದಿಡೀರನೇ ಏರಿಸುತ್ತಾರೆ. ಅವರ ಬೇಕುಗಳು ಹೆಚ್ಚಾಗುತ್ತಾ ಹೋಗುತ್ತವೆ. ದಿನ ನಿತ್ಯದ ಖರ್ಚು ಹೆಚ್ಚಾಗುತ್ತಿದೆ ಅದರಲ್ಲಿ ಸಂಶಯವಿಲ್ಲ. ಆದರೇ ಅದಕ್ಕೊಂದು ಲೆಕ್ಕ ಅಂತಾ ಬೇಕಲ್ಲವೇ? ಉದಾಹರಣೆಗೆ. ನಾನು ಇಲ್ಲಿಂದ ಶಬರಿಮಲೈಗೆ ಹೋಗಿ ಬರುವುದಕ್ಕೆ ನನಗೆ ರೈಲಿನ ಖರ್ಚನ್ನು ಕಳೆದು 2 ಸಾವಿರ ರೂಪಾಯಿಗಳು ಬೇಕು. ಯಾವುದಕ್ಕೆ ಬೇಕು? ದೇವಸ್ಥಾನದಿಂದ ರೈಲ್ವೇ ನಿಲ್ದಾಣ ತಲುಪಲು ನಂತರ ಅಲ್ಲಿನ ಬಸ್ಸಿನ ಖರ್ಚು, ಊಟ, ವಸತಿ ಮತ್ತು ಪ್ರಸಾದ. ಪ್ರತಿಯೊಂದಕ್ಕೂ ಲೆಕ್ಕ ಹಾಕಿಯೇ ಹೋಗುತ್ತೇನೆ. ಅದರಂತೆಯೇ, ದುಡಿಯುವ ವರ್ಗವು ಏಕೆ ನಮಗೆ ಇಷ್ಟು ಬೇಕೆನ್ನುವುದನ್ನು ನಿಗದಿ ಮಾಡಿಕೊಳ್ಳುವುದಿಲ್ಲ. ಯಾರೋ ಸೈಟ್ ತೆಗೆದು ಮನೆ ಕಟ್ಟಿದರೆ ನಾನು ಕಟ್ಟಬೇಕೆಂಬ ಹಟ ಏಕೆ? ಯಾರೋ ಒಬ್ಬ ಮಕ್ಕಳನ್ನು ಇಂಟರ್‍ನ್ಯಾಷನಲ್ ಸ್ಕೂಲಿನಲ್ಲಿ ಓದಿಸುತ್ತಾರೆಂದರೆ ನಾನು ಏಕೆ ಓದಿಸಬೇಕು? ರಜಾ ದಿನ ಕಳೆಯಲು ಯಾರೋ ಗೋವಾಗೆ ಹೋದರೆ ನಾನೂ ಯಾಕೆ ಅಲ್ಲಿಗೆ ಹೋಗಬೇಕು? ಹೆಚ್ಚು ಹಣ ಸಂಪಾದನೆ, ಹೆಚ್ಚು ಸಂಬಳದ ಬೇಡಿಕೆ ಇವೆಲ್ಲವೂ ಬೇರೊಬ್ಬರ ಜೊತೆಗೆ ಹೋಲಿಕೆ ಮಾಡಿಕೊಳ್ಳುತ್ತಿರುವುದರ ಪರಿಣಾಮವೆಂಬುದು ನನ್ನ ಅನಿಸಿಕೆ. ವಸ್ತು ಪ್ರಾಧಾನ್ಯತೆಯ ಬದುಕು ದಿನ ದಿನಕ್ಕೆ ಮಹತ್ವ ಪಡೆದುಕೊಳ್ಳುತ್ತಿದೆಯೆನ್ನುವುದು ನನ್ನ ವಾದ. ಅದರಲ್ಲಿ ತಪ್ಪೇನು ಎನ್ನಲೂಬಹುದು, ತಪ್ಪಿಲ್ಲ ಆದರೆ ನೆಮ್ಮದಿಯ ಅರ್ಥ ಬದಲಾಗಿಸುತ್ತದೆ. 

ಕೋಟ್ಯಾಂತರ ಜನರು ಸೇರಿ ಹೆಚ್ಚು ಹೆಚ್ಚು ಸಂಬಳಕ್ಕೆ ಬೇಡಿಕೆಯಿಡುವುದಕ್ಕಿಂತ ನಮಗೆ ಬೇಕಿರುವ ಅವಶ್ಯತೆಗಳನ್ನು ಸರ್ಕಾರವೇ ಭರಿಸುವಂತಾಗಲಿ ಎಂದು ಏಕೆ ಕೇಳುವುದಿಲ್ಲ. ಉದಾಹರಣೆಗೆ. ನಮ್ಮ ಸಂಬಳದ ಬೇಡಿಕೆ ಯಾವುದಕ್ಕೆ? ಮೊದಲನೆಯದಾಗಿ ಮಕ್ಕಳ ವಿದ್ಯಾಬ್ಯಾಸ - ಸರ್ಕಾರವೇ ಗುಣಮಟ್ಟದ ಉಚಿತ ಶಿಕ್ಷಣವನ್ನು ನೀಡಲಿ, ಎಲ್ಲಾ ಸರ್ಕಾರಿ ಶಾಲೆಗಳು ಅಬಿವೃದ್ದಿಯಾಗಲಿ ಎಂದು ಬೇಡಿಕೆ ಏಕೆ ಇಡಬಾರದು? ಎರಡನೆಯದಾಗಿ – ಆರೋಗ್ಯ ಸರ್ಕಾರವೇ ಗುಣಮಟ್ಟದ ಉಚಿತ ಆರೋಗ್ಯ ಸೌಕರ್ಯವನ್ನು ನೀಡಲಿ, ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಅಬಿವೃದ್ದಿಯಾಗಲಿ ಎಂದು ಬೇಡಿಕೆ ಏಕೆ ಇಡಬಾರದು? ಮೂರನೆಯದಾಗಿ - ದಿನ ನಿತ್ಯ ಬಳಕೆಯ ವಸ್ತುಗಳು - ಬೆಲೆಯನ್ನು ಇಳಿಕೆ ಮಾಡಲಿ. ನಾವು ಹೆಚ್ಚು ಸಂಬಳ ಪಡೆದರೂ ಮತ್ತೆ ಅದನ್ನು ಖರ್ಚು ಮಾಡುತ್ತೇವೆ. ಅದಕ್ಕಿಂದ ಬೆಲೆಯನ್ನೇ ಇಳಿಸಿದರೆ? ಅದೇ ರೀತಿ ಕೆಲವು ಕಚೇರಿಗೆ ಕೆಲಸಕ್ಕೆ ಹೋಗುವವರು, ಬೆಳ್ಳಿಗ್ಗೆಯಿಂದ ಸಂಜೆಯ ತನಕ ಕಚೇರಿಯಲ್ಲಿಯೇ ಇರುತ್ತಾರೆ, ಸಾರ್ವಜನಿಕ ಸಾರಿಗೆಯನ್ನು ಉತ್ತಮಗೊಳಿಸಿದರೆ ಕಚೇರಿಗೆ ಬರುವ ಎಲ್ಲರೂ ವಾಹನ ತರುವುದು, ಅದಕ್ಕೆ ಇಂಧನವೆಚ್ಚ ಭರಿಸುವುದು ತಪ್ಪುವುದಿಲ್ಲವೇ? ನಾವು ಲಕ್ಷ ಸಂಬಳ ಪಡೆದು 95 ಸಾವಿರ ಖರ್ಚು ಮಾಡುವುದಕ್ಕಿಂತ 20 ಸಾವಿರ ಪಡೆದು 15 ಸಾವಿರಕ್ಕೆ ಜೀವನ ನಡೆಸುವುದು ಬುದ್ದಿವಂತಿಕೆ ಎನಿಸುವುದಿಲ್ಲವೇ? ಆಲೋಚಿಸಿ. 

ಸಂಬಳ ಹೆಚ್ಚಾಗಬೇಕೆಂಬುದು ಪ್ರತಿಯೊಬ್ಬರ ದನಿಯಾಗಿದೆ. ಅದರಲ್ಲಿ ತಪ್ಪಿಲ್ಲ. ಆದರೆ ಯಾವ ಮಾನದಂಡದಿಂದ ಸಂಬಳ ಹೆಚ್ಚಾಗಬೇಕೆಂಬುದು ನನ್ನ ಪ್ರಶ್ನೆ. ನಾನು ಕಳೆದ ಹತ್ತು ವರ್ಷದಿಂದ ಖಾಸಗಿ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಐಸೆಕ್ ಎಂಬ ಸಂಸ್ಥೆಯಲ್ಲಿ ಸತತ ಎರಡು ವರ್ಷ ಕೇವಲ ಆರು ಸಾವಿರ ರೂಪಾಯಿಗಳಿಗೆ ಕೆಲಸ ಮಾಡಿದ್ದೇನೆ. ಮೊನ್ನೆ ಅಂದರೆ ಮೂರು ತಿಂಗಳ ಹಿಂದೆ ನವದೆಹಲಿಯ ಒಂದು ಸಂಸ್ಥೆಯ ಕೆಲಸಕ್ಕಾಗಿ ಒಂದು ದಿನಕ್ಕೆ ಐದು ಸಾವಿರ ರೂಗಳನ್ನು ಪಡೆದಿದ್ದೇನೆ. ಪಡೆದಿದ್ದೇನೆ ಎನ್ನುವುದಕ್ಕಿಂತ ಚಾರ್ಜ್ ಮಾಡಿದ್ದೇನೆ. ಇದು ನಾನು ಬೆಳೆದು ಬಂದ ಹಾದಿ ಮತ್ತು ನಾನು ನನ್ನನ್ನು ಮಾರುಕಟ್ಟೆಯಲ್ಲಿ ತೋರಿಸಿಕೊಂಡಿರುವ ರೀತಿ. ಇದನ್ನು ಏಕೇ ಉಲ್ಲೇಖಿಸುತ್ತಿದ್ದೇನೆ ಎನ್ನುವುದನ್ನು ವಿವರಿಸುತ್ತೇನೆ. ನನಗೆ ಆ ಸಂಸ್ಥೆ ದಿನಕ್ಕೆ 5 ಸಾವಿರ ರೂಪಾಯಿಗಳನ್ನು ನೀಡುತ್ತದೆಯೆಂದರೆ ನನ್ನಿಂದ ಎಷ್ಟು ಸಾವಿರ ರೂಪಾಯಿಗಳ ಕೆಲಸವನ್ನು ಮಾಡಿಸಿರಬಹುದು? ಇದನ್ನು ಇನ್ನೊಂದು ಉದಾಹರಣೆಯೊಂದಿಗೆ ವಿವರಿಸುತ್ತೇನೆ. ನಮ್ಮದು ಸ್ವಲ್ಪ ಅಡಿಕೆ ತೋಟವಿದೆ, ಅದರಲ್ಲಿ ಕೆಲವೊಂದು ಕೆಲಸಗಳು ನಿರಂತರವಾಗಿರುತ್ತವೆ. ಕಳೆ ತೆಗೆಯುವುದು, ಪಾತಿ ಮಾಡುವುದು, ಗೊಬ್ಬರ ಹಾಕುವುದು, ನೀರು ಹಾಯಿಸುವುದು ಹೀಗೆ. ಇದೆಲ್ಲವನ್ನೂ ಕೆಲಸದವರನ್ನು ಕರೆದು ಮಾಡಿಸುತ್ತೇವೆ. ಅವರಿಗೆ ಯಾವ ಮಾನದಂಡದಲ್ಲಿ ದುಡ್ಡು ಕೊಡುತ್ತೇವೆ? ಮಾಡಿದ ಕೆಲಸದ ಮೇಲೆ. ಇದು ವರ್ಷ ವರ್ಷಕ್ಕೆ ಏರುತ್ತಿದೆ. ಕೆಲಸಕ್ಕೆ ಜನರು ಬಂದರೇ ಸಾಕು ಕೂಲಿ ಎಷ್ಟಾದರೂ ಆಗಲಿ ಎನ್ನುವ ಹಂತಕ್ಕೆ ಕೆಲವು ಜಿಲ್ಲೆಯ ಕೃಷಿಕರು ತಲುಪಿದ್ದಾರೆ. ನಾನು ಇಲ್ಲಿಯವರೆಗೂ ವೇತನ ಪಡೆದ ಎಲ್ಲಾ ಸಂಸ್ಥೆಗಳಲ್ಲಿಯೂ ಅಥವಾ ಗುತ್ತಿಗೆ ಕೆಲಸದಲ್ಲಿಯೂ ಅವರು ನೀಡಿದ ಟಾರ್ಗೆಟ್/ಗುರಿಗಿಂತ ಹೆಚ್ಚನ್ನೂ ಮಾಡಿದ್ದೇನೆ ಹೊರತು ಅದಕ್ಕಿಂತ ಕಡಿಮೆ ಮಾಡಿಲ್ಲ. ನನಗೆ ಲಾಭ ನಷ್ಠ ಎನ್ನುವ ಮಾತೇ ಉದ್ಬವವಾಗಿಲ್ಲ. ನನ್ನ ಹಳೆಯ ಬರವಣಿಗೆಯನ್ನು ನೋಡಿದರೆ ನನ್ನ ಕಾರ್ಯವೈಖರಿ ನಿಮಗೆ ತಿಳಿಯುತ್ತದೆ. ಐಸೆಕ್ ದಿನಗಳಲ್ಲಿ ಮುಂಜಾನೆ 8ರಿಂದ ರಾತ್ರಿ ಹತ್ತರವರೆಗೆ ಕೆಲಸ ಮಾಡಿದ್ದೇನೆ. ನನ್ನನ್ನು ಯಾರೂ ಮಾಡೆಂದು ಹೇಳಲಿಲ್ಲ. ನಾನು ಮಾಡಿದೆ, ನಾನು ಕಲಿತೆ, ನಾನು ಬೆಳೆದೆ. 

ನಮ್ಮ ಸರ್ಕಾರಿ ನೌಕರರು ಸಂಬಳ ಹೆಚ್ಚಳದ ಮನವಿಯನ್ನು ಇಟ್ಟಿದ್ದಾರೆ. ಆದರೇ, ನನ್ನ ಪ್ರಶ್ನೆ, ಎಲ್ಲರಿಗೂ ಸಮಾನ ವೇತನ ಹೆಚ್ಚಳ ಏಕೆ ಆಗಬೇಕು? ಕೆಲವರು ಶ್ರಮಿಕರಿದ್ದಾರೆ ಕೆಲವು ಮೈಗಳ್ಳರಿದ್ದಾರೆ ಎಲ್ಲರಿಗೂ ಒಂದೇ ರೀತಿಯ ಸಂಬಳ ಏರಿಕೆ ಏಕಾಗಬೇಕು? ನಾನು ಗಮನಿಸಿರುವಂತೆ ಕೆಲವು ಅಧಿಕಾರಿಗಳು ಸಮಯಕ್ಕೆ ಮುಂಚೆ ಕಛೇರಿಗೆ ಬರುತ್ತಾರೆ, ಅವರು ಯಾವೊಂದೂ ಕಡತಗಳನ್ನು ವಿಳಂಬ ಮಾಡುವುದಿಲ್ಲ. ಆದರೇ, ಅದೇ ಇಲಾಖೆಯಲ್ಲಿರುವ ಕೆಲವರು ತಿಂಗಳುಗಟ್ಟಲೆ ಅಲೆಸುತ್ತಾರೆ. ಲಂಚ ಕೊಟ್ಟರೂ ಮಾಡುವುದಿಲ್ಲ, ಅವರ ಕಾರ್ಯ ವೈಖರಿಯನ್ನು ಅವಲೋಕಿಸಬಾರದೇಕೆ? ಉತ್ತಮ ಕೆಲಸ ಮಾಡುವವರಿಗೆ ಒಂದಲ್ಲ ಎರಡು ಬಡ್ತಿ ಕೊಡಲಿ ಬೇಡ ಎನ್ನುವವರಾರ್ಯಾರು? ಕೆಲವು ಸರ್ಕಾರಿ ಶಾಲೆಗಳಲ್ಲಿಯೇ ನೋಡಿ, ನಿಷ್ಠಾವಂತ ಶಿಕ್ಷಕರಿದ್ದಾರೆ ಅದೇ ರೀತಿ ಸೋಮಾರಿಗಳೂ ಇದ್ದಾರೆ. ಇಬ್ಬರಿಗೂ ಏಕೆ ಸಮಾನ ವೇತನ ಹೆಚ್ಚಳವಾಗಬೇಕು? ಇದನ್ನು ಇನ್ನೊಂದು ಉದಾಹರಣೆಯೊಂದಿಗೆ ನೋಡಿ, ಬ್ಯಾಂಕುಗಳಲ್ಲಿ ಸಾಮಾನ್ಯವಾಗಿ ಜನ ಸಂದಣಿಯಿರುತ್ತದೆ, ಅದೇ ರೀತಿ ಅಂಚೆ ಕಛೇರಿಯಲ್ಲಿಯೂ ಕೂಡ. ಅವರ್ಯಾಕೆ ಕೆಲಸದ ಒತ್ತಡ ನಾಳೆ ಮಾಡುತ್ತೇನೆಂದು ಹೇಳುವುದಿಲ್ಲ? ಕೇಂದ್ರ ಸರ್ಕಾರದ ಹಲವಾರು ಇಲಾಖೆಗಳು ಬಹಳ ಚೆನ್ನಾಗಿ ಕೆಲಸ ಮಾಡುತ್ತವೆ. ನೀವು ಹೇಳಬಹುದು, ಅವರಿಗೆ ಹೆಚ್ಚಿನ ಸಂಭಳವೆಂದು. ಆದರೆ ಈಗಿರುವ ಸೋಮಾರಿಗಳಿಗೆ ಮತ್ತೂ ಸಂಬಳ ಹೆಚ್ಚಿಸಿ ಏನು ಮಾಡುವುದು? ಅಷ್ಟಕ್ಕೂ ಸರ್ಕಾರಕ್ಕೆ ಹಣವೆಲ್ಲಿಂದ ಬರಬೇಕು?

ಖಾಸಗಿ ಸಂಸ್ಥೆಗಳಲ್ಲಿ ಎಲ್ಲರೂ ನಿಷ್ಠಾವಂತರೂ ಎನ್ನುವುದಿಲ್ಲ. ಆದರೆ ಅಲ್ಲಿನ ವ್ಯವಸ್ಥೆ ಸೋಮಾರಿತನವನ್ನು ದೂರವಿಡಿಸುತ್ತದೆ. ಭದ್ರತೆಯಿಲ್ಲದ ಕೆಲಸವೆಂದು ಹೆಚ್ಚೆಚ್ಚು ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ. ಪ್ರತಿ ಮೂರು ತಿಂಗಳಿಗೆ, ಆರು ತಿಂಗಳಿಗೆ, ಮತ್ತು ವರ್ಷಕ್ಕೆ ನಮ್ಮ ಮೇಲಧಿಕಾರಿಗಳು ನಮ್ಮ ಕಾರ್ಯ ವೈಖರಿಗೆ ಅಂಕಗಳನ್ನು ನೀಡಿ ಮೌಲ್ಯಮಾಪನ ಮಾಡುತ್ತಾರೆ. ಆ ಭಯದಿಂದಲೇ ಕೆಲಸ ಮಾಡಿದರೂ ಅಡ್ಡಿಯಿಲ್ಲ ಕನಿಷ್ಠ ಪಕ್ಷ ಕೆಲಸ ಮಾಡುತ್ತಾರೆ. ನಾನು ಭೇಟಿ ನೀಡಿದ ಅದೆಷ್ಟೋ ಶಾಲೆಗಳಿಗೆ ಮಾಸ್ಟರುಗಳು ಸರಿಯಾದ ಸಮಯಕ್ಕೇ ಬರುವುದಿಲ್ಲ, ಬಂದರೂ ಸಂಜೆಯವರೆಗೂ ಇರುವುದಿಲ್ಲ. ಅದನ್ನು ಖಾಸಗಿ ಶಾಲೆಯಲ್ಲಿ ಮಾಡಲಾಗುತ್ತದೆಯೇ? ಸರ್ಕಾರಿ ಶಾಲೆಯ ಶಿಕ್ಷಕರುಗಳು ಒಮ್ಮೆ ಕೇವಲ ಒಂದು ಬಾರಿ ಖಾಸಗಿ ಶಾಲೆಯ ಶಿಕ್ಷಕರೊಂದಿಗೆ ಹೋಲಿಕೆ ಮಾಡಿ ನೋಡಿ. ಸ್ವಇಚ್ಛೆಯಿಂದ ಹೋಲಿಕೆ ಮಾಡಿ, ಆತ್ಮ ಸಾಕ್ಷಿಗೆ ವಂಚಿಸಬೇಡಿ. ನಿಮ್ಮಲ್ಲಿ ಅದೆಷ್ಟು ಜನರು ಸಂಬಳಕ್ಕೆ ನ್ಯಾಯ ಒದಗಿಸಬೇಕೆಂದು ಕೆಲಸ ಮಾಡುತ್ತಿದ್ದಾರೆ. ನಾನು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾಗ ಒಮ್ಮೆ ಆಫೀಸಿಗೆ ಹೋದರೆ ಮುಗಿಯಿತು ಸಂಜೆಯ ತನಕ ನನ್ನ ವೈಯಕ್ತಿಕ ಕೆಲಸವನ್ನು ಮಾಡಲು ಸಾಧ್ಯವೇ ಇರಲಿಲ್ಲ. ಆದರೇ, ಬನ್ನಿ ನನ್ನೊಂದಿಗೆ ಅದೆಷ್ಟು ಅಧಿಕಾರಿಗಳು ಕೆಲಸದ ಸಮಯದಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆಂಬುದನ್ನು ತೋರಿಸುತ್ತೇನೆ. ಕಚೇರಿಗೆ ಸಹಿ ಹಾಕಿ, ನಾಮಕರಣದಿಂದ, ಮದುವೆ, ಬೀಗರ ಊಟಕ್ಕೆ ಹೋಗಿಬರುವವರನ್ನು ತೋರಿಸುತ್ತೇನೆ. ಕೆಲಸದ ಸಮಯ ಬೆಳ್ಳಿಗ್ಗೆ 10.30 ರಿಂದ ಸಂಜೆ 5.30ರವರಗೆ ಎಂದರೆ, ಆ ನೌಕರ ಅಲ್ಲಿರಬೇಕು, ಅಷ್ಟೆ. ಆದರೇ ಶೇಕಡ 20-30ರಷ್ಟು ನೌಕರರು ಇರುವುದೇ ಇಲ್ಲ. 

ಸರ್ಕಾರವೆಂದರೇ ಕೇವಲ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಮಾತ್ರವಲ್ಲ. ಎಲ್ಲಾ ನೌಕರರು ಸೇರುತ್ತಾರೆ. ಒಂದು ಉತ್ತಮ ಸಮಾಜ ಸರ್ಕಾರಿ ನೌಕರರ ಮೇಲೆ ನೇರ ಅವಲಂಬಿತವಾಗಿರುತ್ತದೆ. ಒಂದು ಕೆಲಸಕ್ಕೆ ಐದು ಬಾರಿ ಒಬ್ಬ ಓಡಾಡಬೇಕೆಂದರೆ ಅವನಿಗೆ ತೆಗಳುವ ಖರ್ಚು ವೆಚ್ಚ ಸಮಾಜದ ಮೇಲೆಯೇ ಬೀಳುತ್ತದೆ. ಅವನು ತನ್ನ ಕೆಲಸವನ್ನೆಲ್ಲಾ ಬಿಟ್ಟು ಬಂದಿರುತ್ತಾನೆ. ಒಂದು ಸಮಾಜ ಯಾವತ್ತಿಗು ಒಂದಕ್ಕೊಂದು ಬೆಸೆಯುವ ಕೊಂಡಿಯಂತೆ. ಎಲ್ಲಾ ಕೊಂಡಿಗಳು ಕೂಡಿದ್ದರೆ ಸಮಾಜ. ಬೆಸೆಯುವ ಕೊಂಡಿಗಳು, ಸಮಾನ ಅವಕಾಶ, ಸಮಾನ ಬೆಳವಣಿಗೆಯೊಂದಿಗಿರಬೇಕು. ನಾನು ದಿನ ನಿತ್ಯ ನಮ್ಮ ಮನೆಯ ಮುಂದೆ ಸಾಲು ಸಾಲು ಹೆಣ್ಣು ಮಕ್ಕಳು ಗಾರ್ಮೆಂಟ್ಸ್‍ಗೆ ಓಡುವುದನ್ನು ನೋಡಿದ್ದೇನೆ. ಮರಿಯಪ್ಪನ ಪಾಳ್ಯ, ಕೆಂಚನಪುರ ಕ್ರಾಸ್ ಕಡೆಯಿಂದ ಜೈರಾಮ್ ದಾಸ್ ಕಡೆಗೆ ನಡೆದು ಪರದಾಡುತ್ತ ಕೆಲಸಕ್ಕೆ ಹೋಗುವುದನ್ನು ಮತ್ತು ಮುಸ್ಸಂಜೆ ಕತ್ತಲಲ್ಲಿ ನಡೆದು ಬರುವುದನ್ನು ನೋಡಿದ್ದೇನೆ. ಇವರೆಲ್ಲರು ಶ್ರಮ ಜೀವಿಗಳು, ತಿಂಗಳಿಗೆ 5 ಸಾವಿರ ಬಂದರೆ ಹೆಚ್ಚು. ಐದು ನಿಮಿಷ ತಡವಾಗಿ ಆಫೀಸಿಗೆ ಹೋಗುವಂತಿಲ್ಲ. ಬೇಗ ಬರುವಂತಿಲ್ಲ. ಆಟೋ, ಬಸ್ಸಿನಲ್ಲಿ ಹೋದರೆ ಖರ್ಚಾದೀತು ಎಂದು ನಡೆದು ಹೋಗುತ್ತಾರೆ. ಇವರುಗಳ ನೋವು ನಮಗೆ ತಟ್ಟುವುದೇ ಇಲ್ಲ. ಅದಕ್ಕೂ ಇದಕ್ಕೂ ಏನು ಸಂಬಂಧ ಎನ್ನಬಹುದು. ಸಂಬಂಧವಿದೆ. ಸರ್ಕಾರಿ ಕೆಲಸ ನಿಮಗೆ ಸಿಕ್ಕಿರುವುದು ಇಂತಹವರ ಕೆಲಸ ಮಾಡುವುದಕ್ಕೆ ಎನ್ನುವುದನ್ನು ನೀವು ಮರೆತಿದ್ದೀರಿ. 
ಸರ್ಕಾರಿ ಶಾಲೆಯ ಶಿಕ್ಷಕರಿಗೆ, ಶಿಕ್ಷಕರಿಗೆ ಮಾತ್ರವೇನು. ಇಡೀ ಇಲಾಖೆಯ ಸಂಬಳ ಅಂತಾ ಇರೋದು ಬಡವರ, ಕೂಲಿ ಕಾರ್ಮಿಕರ ಮಕ್ಕಳು ನಿಮ್ಮ ಶಾಲೆಗೆ ಬರುತ್ತಿರುವುದರಿಂದ. ನೀವು ಅವರ ಋಣದಲ್ಲಿದ್ದೀರಿ ಎನ್ನುವುದನ್ನು ಮರೆಯಬೇಡಿ. ಶಾಲೆಗಳಲ್ಲಿ ದಾಖಲಾತಿ ಕುಸಿದಿದೆ ಇದಕ್ಕೆ ಕಾರಣ ಯಾರು? ಇದೇ ರೀತಿ ಪ್ರತಿಯೊಂದು ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲರೂ ಸಾರ್ವಜನಿಕರ ಕೆಲಸಕ್ಕೆ ನೀವು ಸಂಬಳ ಪಡೆಯುತ್ತಿದ್ದೀರಿ ಎನ್ನುವುದನ್ನು ಮರೆತಿರುವುದು ಏಕೆ? 

ಇದು ಎಲ್ಲಿಂದ ಶುರುವಾಯಿತೆಂದು ಹೇಳುವುದು ಕಷ್ಟವಾಗುತ್ತದೆ. ಆದರೂ ಈ ಲೇಖನವನ್ನು ಮುಗಿಸುವುದಕ್ಕಾಗಿ ಕೆಲವೊಂದು ಅಂಶಗಳನ್ನು ಹೇಳಿಬಿಡುತ್ತೇನೆ. ಕೆಲವೊಂದು ನಿಯಮಗಳಿರುತ್ತವೆ, ಅವುಗಳನ್ನು ಒಪ್ಪಿದರೂ ಸರಿ, ಒಪ್ಪದೇಯಿದ್ದರೂ ನಾವು ಪಾಲಿಸಲೇಬೇಕಾಗುತ್ತದೆ. ಪ್ರತಿಯೊಂದು ಚಿಕ್ಕ ಚಿಕ್ಕ ನಡುವಳಿಕೆಗಳು ಮನುಷ್ಯನನ್ನು ಬದಲಾಯಿಸುತ್ತಾ ಹೋಗುತ್ತವೆ. ಕೆಲವು ಬೆಳೆಸುತ್ತಾ ಹೋಗುತ್ತವೆ, ಕೆಲವೊಂದು ಮುಳುಗಿಸುತ್ತಾ ಹೋಗುತ್ತವೆ. ಈ ಕೆಳಗಿನ ಮಾತುಗಳನ್ನು ತಾವುಗಳು ಸಂಪೂರ್ಣವಾಗಿ ನಂಬುವುದಿಲ್ಲ, ಆದರೂ ಓದಿನೋಡಿ. 

ಒಂದು ಅಂಗಡಿಗೆ ಹೋಗುತ್ತೇವೆ, 8 ರೂಪಾಯಿಗೆ ವಸ್ತುವನ್ನು ಕೊಳ್ಳುತ್ತೇವೆ, ಬಾಕಿ ಎರಡು ರೂಪಾಯಿಗೆ ಚಾಕೋಲೇಟ್ ಕೊಟ್ಟು ಕಳುಹಿಸುತ್ತಾನೆ, ಇದು ಮೋಸವಲ್ಲವೇ? ನಮಗೆ ಕೋಪ ಬರುತ್ತದೆ, ವಿಧಿಯಿಲ್ಲದೆ ತಡೆದುಕೊಂಡು ಬರುತ್ತೇವೆ. ಇದು ಕೆಲವು ಟೋಲ್‍ಗಳಲ್ಲಿಯೂ ಸಾಮಾನ್ಯ. ಕೆಲವು ಹೋಟೆಲ್‍ನಲ್ಲಿ ತಿಂಡಿ ತಿಂದ ಮೇಲೆ ಬಿಲ್ ಪಾವತಿ ಮಾಡಿದಾಗ, ತರಕಾರಿ ಕೊಂಡಾಗ ಎಲ್ಲಾ ಕಡೆಯಲ್ಲಿಯೂ ಇದು ಸಾಮಾನ್ಯವಾಗಿದೆ. ಇದೆಲ್ಲವೂ ಮೋಸವೆಂದು ಅವರ್ಯಾರೂ ಒಪ್ಪುವುದಿಲ್ಲ. ಚಿಲ್ಲರೆಯಿಲ್ಲವೆನ್ನುವುದೊಂದು ನೆಪವಾಗಿರಲೂಬಹುದು. ಆದರೇ, ಆ ವ್ಯಕ್ತಿ ನಿಷ್ಠತೆಯಿಂದು, ನಿಯತ್ತಿನಿಂದ ದೂರ ಹೋಗುತ್ತಿರುತ್ತಾನೆಂಬುದನ್ನು ಅವನು ಗಮನಿಸುವುದೇ ಇಲ್ಲ. ಚಿಲ್ಲರೆ ಕೊಡದೆ ಯಾವುದೋ ಒಂದು ವಸ್ತುವನ್ನು ಕೊಟ್ಟು ಕಳುಹಿಸುವುದೇ ಅವನ ವೃತ್ತಿಯಾಗತೊಡಗುತ್ತದೆ. ಜನರು ಗಮನಿಸಿ ಗಮನಿಸಿ ಮುಂದೊಂದು ದಿನ ಅವನ ಅಂಗಡಿಗೆ ಹೋಗುವುದಕ್ಕೆ ಹಿಂಜರಿಯಬಹುದು, ಅಥವಾ ದೊಡ್ಡ ಗಲಾಟೆ ಮಾಡಲೂಬಹುದು. ನಾನು ನನ್ನ ಕೆಲವು ಸಹದ್ಯೋಗಿಗಳನ್ನು ನೋಡಿದ್ದೇನೆ, ಅವರಿಗೆ ಸರಿಯಾದ ಸಮಯಕ್ಕೆ ಆಫೀಸಿಗೆ ಬರಲು ಇಷ್ಟವಿರಲಿಲ್ಲ, ಯಾವುದೋ ಒಂದು ಕಾರಣ ಸಿಗುತ್ತಿತ್ತು. ಆದರೇ, ನನ್ನ ಗೆಳೆಯ ಪವನ್ ಕುಮಾರ್ ನನ್ನೊಂದಿಗೆ ಹಳೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಅವನು ಅದೇನೇ ಆದರೂ ಆಫೀಸಿನ ವೇಳೆಯಲ್ಲಿ ವೈಯಕ್ತಿಕ ವಿಷಯವನ್ನು ಚರ್ಚಿಸುತ್ತಿರಲಿಲ್ಲ. ಆಫೀಸು ಮುಗಿದ ಮೇಲೆ ಗಂಟೆಗಟ್ಟಲೆ ಹೊರಗಡೆ ನಿಂತು ಹರಟಿ ಹೋಗುತ್ತಿದ್ದೆವು. ಅವನ ಆ ನಡುವಳಿಕೆ ಕೆಲವು ದಿನ ನನಗೂ ಅಂಟಿತ್ತು ಎಂದರೇ ತಪ್ಪಿಲ್ಲ. 

ನೀವೂ ಗಮನಿಸಿ ನೋಡಿ, ನಿಮ್ಮ ಸುತ್ತ ಮುತ್ತಲೂ ಅನೇಕರು ನಿಯಮಬಾಹಿರವಾಗಿ ಬದುಕನ್ನು ನಡೆಸುತ್ತಿರುತ್ತಾರೆ. ಆದರೇ, ಅದ್ಯಾವುದು ನಿಮಗೂ ಅವರಿಗೂ ಸಮಸ್ಯೆಯೇ ಎನಿಸುವುದಿಲ್ಲ, ಏಕೆಂದರೆ, ಅದೂ ಮಾಮೂಲಿಯಾಗಿರುತ್ತದೆ. ಅವರು ಇರೋದೆ ಹಾಗೆ ಎನಿಸಿಬಿಡುತ್ತದೆ. ಎಷ್ಟು ಹೇಳಿದರೂ ಕೇಳುವುದಿಲ್ಲ. ಟೀ ಕುಡಿಯಲು ಗಂಟೆಗಟ್ಟಲೇ, ಊಟ ಮಾಡುವುದಕ್ಕೆ ಗಂಟೆಗಟ್ಟಲೇ ಹೋಗುವ ಅದೆಷ್ಟೋ ಜನರನ್ನು ನಾನು ನೋಡಿದ್ದೇನೆ. ಆದರೆ, ಅದೆಲ್ಲವನ್ನು ಕೆಲಸದ ಸಮಯದಲ್ಲಿ ಏಕೆ ಮಾಡಬೇಕೆಂಬುದು ನನ್ನ ಪ್ರಶ್ನೆ. ಇದ್ಯಾವುದೂ ನೈತಿಕ ಪ್ರಶ್ನೆಯಾಗುವುದೇ ಇಲ್ಲ. ನರೇಂದ್ರ ಮೋದಿಯವರು ದಿನದಲ್ಲಿ 18 ಗಂಟೆ ಕೆಲಸ ಮಾಡಿದ್ದಾರೆ, ಹನ್ನೆರಡು ವರ್ಷದಿಂದ ರಜೆ ತೆಗೆದುಕೊಂಡಿಲ್ಲವೆಂದು ಸಂದೇಶ ಕಳುಹಿಸುವವರು, ತಾವೇಕೆ ಆ ಹಾದಿಯಲ್ಲಿ ಕೆಲವು ತಿಂಗಳುಗಳು ಇರಬಾರದೆಂದು ಯೊಚಿಸುವುದಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ. ನಾನು ಎರಡು ಮಾತನ್ನು ಸದಾ ಹೇಳುತ್ತಿರುತ್ತೇನೆ ಮತ್ತು ನಂಬಿ ಬದುಕನ್ನು ಸಾಗಿಸುತ್ತಿದ್ದೇನೆ. ಮೊದಲನೆಯದಾಗಿ, ವರ್ಕ್ ನೆವರ್ ಕಿಲ್ಸ್ – ಕೆಲಸ ಯಾವತ್ತು ನಮ್ಮನ್ನು ಸಾಯಿಸುವುದಿಲ್ಲ. ಸದಾ ಕೆಲಸ ಮಾಡುತ್ತಿರಬೇಕು. ಎರಡನೆಯದಾಗಿ, ಯಾವೊಂದು ಬದಲಾವಣೆಯೂ ದುರಂತವೂ ರಾತ್ರೋ ರಾತ್ರಿ ಆಗುವುದಿಲ್ಲ. ನಮ್ಮ ಗುಣ, ಯಶಸ್ಸು, ನಡುವಳಿಕೆ ಎಲ್ಲವೂ ಅಷ್ಟೆ ದಿನ ದಿನ ಸಣ್ಣ ಪುಟ್ಟ ಬದಲಾವಣೆಯಿಂದ, ಚಿಂತನೆಗಳಿಂದ, ಚಟುವಟಿಕೆಗಳಿಂದ ಬೆಳೆಯುತ್ತವೆ. ಸೋಮಾರಿತನವೂ ಅಷ್ಠೆ, ದಿಡೀರನೇ ಯಾರೂ ಸೋಮಾರಿಗಳಾಗುವುದಿಲ್ಲ, ಅದೇ ರೀತಿ ಯಾರೊಬ್ಬರೂ ದಿಡೀರನೇ ಶ್ರಮ ಜೀವಿಗಳಾಗುವುದಿಲ್ಲ, ಯಾರೊಬ್ಬರೂ ದಿಡೀರನೇ ನಿಷ್ಟಾವಂತರಾಗುವುದಿಲ್ಲ, ಯಾರೊಬ್ಬರೂ ದಿಡೀರನೇ ಕ್ರೂರಿಗಳಾಗುವುದಿಲ್ಲ. 

ಈ ಲೇಖನವೂ ನಾಲ್ಕಾರು ವಿಷಯಗಳನ್ನು ಬೇರೆ ಬೇರೆ ಆಯಾಮಗಳಿಂದ ನೋಡಬೇಕಾಗಿರುವುದರಿಂದ ಕೆಲವು ಗೊಂದಲಗಳು ಮೂಡಿರಬಹುದು. ಸರಳವಾಗಿ ಹೇಳುವುದಾದರೇ ನಮ್ಮ ಆಲೋಚನಾ ಲಹರಿ ಇಡೀ ವಿಶ್ವವೇ ಒಂದು ಎನ್ನುವುದರ ಕಡೆಗೆ ಹರಿಯಲಿ ಮತ್ತು ಕೆಲಸ ಮಾಡುವುದು ನಮ್ಮ ಕರ್ತವ್ಯವಾಗಲಿ. ಹಣ ಬೇಡಿಕೆಯೇ ದುಡಿಮೆಯಾಗಬಾರದು. 

18 ಫೆಬ್ರವರಿ 2018

ಆತ್ಮೀಯ ಫೇಸ್‍ಬುಕ್ ಸ್ನೇಹಿತರಿಗೊಂದು ಮನವಿ!!!


ನಾನು ಇದನ್ನು ಬರೆಯುವ ಅನಿವಾರ್ಯತೆ ಬರುತ್ತದೆಯೆಂದು ನಿರೀಕ್ಷಿಸಿದ್ದೆ. ಅದರಂತೆ ಈ ದಿನ ಬಂದಿದೆ. ನಾನು ಹಾಕುವ ಪೋಸ್ಟ್‍ಗಳನ್ನು ನನ್ನ ಅನೇಕ ಸ್ನೇಹಿತರು ವೈಯಕ್ತಿಕವಾಗಿ ತೆಗೆದುಕೊಂಡಿರುವುದು ಗಮನಕ್ಕೆ ಬಂದಿದೆ. ನನ್ನ ಪೋಸ್ಟ್‍ಗಳು ಯಾರನ್ನು ವೈಯಕ್ತಿಕವಾಗಿ ಗುರಿಯಿಟ್ಟು ಹೇಳುವಂತವುಗಳಲ್ಲ. ಅವೆಲ್ಲವೂ ಜನೆರಲ್ ಪೋಸ್ಟ್‍ಗಳು. 
ನನಗೆ ಬಹುಷಃ ಎಲ್ಲಾ ಇಲಾಖೆಯಲ್ಲಿಯೂ, ಎಲ್ಲಾ ವೃತ್ತಿಯಲ್ಲಿರುವ ಆತ್ಮೀಯ ಗೆಳೆಯರಿದ್ದಾರೆ. ನಾನು ಎಲ್ಲರೊಂದಿಗೂ ಮುಕ್ತವಾಗಿ ಚರ್ಚಿಸುತ್ತೇನೆ. ಒಬ್ಬ ಆಟೋ ಡ್ರೈವರಿನಿಂದ ಹಿಡಿದು ರೈಲಿನಲ್ಲಿ ಪ್ರಯಾಣಿಸುವಾಗ ಸಿಗುವ ಟಿಟಿಯ ತನಕ ಅವರ ವೃತ್ತಿಯ ಕುರಿತು, ಅವರ ಜೀವನ ಶೈಲಿಯ ಕುರಿತು ಅರಿಯಲು ಯತ್ನಿಸುತ್ತೇನೆ. ಇದು ನನ್ನ ವೃತ್ತಿಯೋ ಪವೃತ್ತಿಯೋ ನನಗೆ ತಿಳಿಯದು. 


ನಾನು ಸರ್ಕಾರಿ ನೌಕರರ ಕುರಿತು ಪೋಸ್ಟ್ ಹಾಕಿದಾಗ ಕೆಲವರು ನಿಮ್ಮ ಸ್ನೇಹಿತರು ಇದ್ದಾರೆ ಅವರೆಲ್ಲರೂ ಹಾಗೇನಾ? ಎಂದರು. ಆತ್ಮೀಯರೇ, ನನ್ನ ಎಲ್ಲಾ ಸ್ನೇಹಿತರಿಗೂ ಅವರ ವೃತ್ತಿಯಲ್ಲಿಯೋ ಅಥವಾ ಜೀವನದಲ್ಲಿಯೋ ತಪ್ಪು ಮಾಡುತ್ತಿದ್ದಾರೆಂದು ತಿಳಿದರೆ ನಾನೇ ನೇರವಾಗಿ ಅವರಿಗೆ ಹೇಳುತ್ತೇನೆ. ಆ ಸಲುಗೆಯನ್ನು ಅವರೆಲ್ಲರೂ ನನಗೆ ನೀಡಿದ್ದಾರೆ. ಅದನ್ನು ಫೇಸ್‍ಬುಕ್ಕಿನಲ್ಲಿ ಹಾಕುವ ಅವಶ್ಯಕತೆಯಿಲ್ಲ. ಅದೇ ರೀತಿ ನಾನು ತಪ್ಪು ಮಾಡಿದಾಗಲೂ ಅವರು ನನ್ನೊಂದಿಗೆ ನೇರವಾಗಿ ಮಾತನಾಡಿ ಬೈದು ತಿದ್ದುವುದು ಇದೆ. ಫೇಸ್‍ಬುಕ್ಕಿನಲ್ಲಿ ಹಾಕುವ ಪೋಸ್ಟ್‍ಗಳು ಹೆಚ್ಚಿನ ಜನರಿಗೆ ತಲುಪಲಿ ಮತ್ತು ಅವರ ಆಲೋಚನೆಗಳೇನು ಎನ್ನುವುದನ್ನು ತಿಳಿಯುವುದು ನನ್ನ ಮೊದಲ ಉದ್ದೇಶ. ಎರಡನೆಯದಾಗಿ, ನಾನು ಸುತ್ತಾಡುವಾಗ ಜನರೊಂದಿಗೆ ಬೆರೆಯುವಾಗ ನನಗೆ ಬರುವ ವಿಷಯಗಳನ್ನು ನಾನು ಹಾಕುವುದು. ಇದೆಲ್ಲವೂ ನನ್ನ ತಲೆಯೊಳಗಿನಿಂದ ಬರುವುದಿಲ್ಲ, ಯಾರೋ ಎಲ್ಲಿಯೋ ಹೇಳಿದ್ದು, ಚರ್ಚಿಸಿದ್ದು, ತಿಳಿಸಿದ್ದು ಎಲ್ಲವನ್ನು ಒಟುಗೂಡಿಸಿ ಹಾಕುತ್ತೇನೆ.

ಆದ್ದರಿಂದ ನಾನು ಹಾಕುವ ಯಾವುದೇ ಪೋಸ್ಟ್‍ಗಳು ನಿಮಗ್ಯಾರಿಗೂ ನೇರವಾಗಿ ಸಂಬಂಧಿಸಿದಲ್ಲ. ಮತ್ತು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದೆನ್ನುವುದು ನನ್ನ ಮನವಿ. ಇದನ್ನು ಇನ್ನೂ ಸ್ವಲ್ಪ ವಿವರಿಸುತ್ತೇನೆ. 

ಉದಾಹರಣೆಗೆ: ಇಂದಿನ ಶಿಕ್ಷಕರು ಅದರಲ್ಲಿಯೂ ಸರ್ಕಾರಿ ಶಾಲಾ ಶಿಕ್ಷಕರು ಸರಿಯಿಲ್ಲವೆಂದು ಹಾಕಿದರೆ ಅದು ಸರಿಯಿಲ್ಲದ ಶಿಕ್ಷಕರಿಗೆ ಹೊರತು ನನ್ನ ಸ್ನೇಹಿತರಿಗೆ ಹೇಗೆ ಆಗುತ್ತದೆ? ನನ್ನ ಸ್ನೇಹಿತರಿಗೆ ನಾನೇ ನೇರವಾಗಿ ಹೇಳಬಹುದಲ್ಲವೇ? ಸರ್ಕಾರದ ಸಂಬಳ ಹೆಚ್ಚಳದ ಬದಲು ಉತ್ತಮ ಶಿಕ್ಷಣ, ಆರೋಗ್ಯ ಮತ್ತು ದಿನ ನಿತ್ಯ ಬಳಕೆ ವಸ್ತುಗಳ ಬೆಲೆಯನ್ನು ಅಗ್ಗವಾಗಿಸಿ ಎಂದು ಕೇಳಿ ಎಂದರೆ ಅದು ನನ್ನ ಸ್ನೇಹಿತರಿಗೆ ಎಂದು ಅರ್ಥವೇ?

ಪೋಲಿಸ್ ಇಲಾಖೆಯಲ್ಲಿ ಹಣ ನೀಡದೆ ಕೆಲಸವಾಗುವುದಿಲ್ಲವೆಂದು ಪೋಸ್ಟ್ ಹಾಕಿದರೆ ಅದು ನನ್ನ ಸ್ನೇಹಿತನಿಗೆ ಹಾಕಿದ ಪೋಸ್ಟ್ ಹೇಗಾಗುತ್ತದೆ? ನನ್ನ ಸ್ನೇಹಿತನಿಗೆ ನಾನೇ ನೇರವಾಗಿ ಹೇಳಬಹುದು. ನಮ್ಮೆಲ್ಲರ ಪೋಸ್ಟ್‍ಗಳು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮಾತ್ರ. ಎಲ್ಲರೂ ನಿಷ್ಠಾವಂತರಲ್ಲ, ಎಲ್ಲರೂ ಪ್ರಾಮಾಣಿಕರಲ್ಲ, ಆದ್ದರಿಂದ ಒಳ್ಳೆಯವರ ನೆರಳಲ್ಲಿ ಸೋಮಾರಿಗಳು ಹೆಚ್ಚಾಗುತ್ತಿದ್ದಾರೆ. ಪ್ರಾಮಾಣಿಕ ನೌಕರರು ಕಷ್ಟಪಟ್ಟು ಕೆಲಸ ಮಾಡಿದರೆ, ಸೋಮಾರಿಗಳು ಕಛೇರಿ ಬಿಟ್ಟು ಬೇರೆಲ್ಲಾ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಅದು ನಿಮಗೂ ಗೊತ್ತು ನಮಗೂ ಗೊತ್ತು. ಯಾರನ್ನೂ ವಹಿಸಿಕೊಳ್ಳುವುದು ಬೇಡ. ಮಾಧ್ಯಮದವರನ್ನು ಬೈಯ್ಯುತ್ತೇನೆ ನನ್ನ ಅನೇಕ ಕಾಸ್‍ಮೇಟ್‍ಗಳು ಎಲ್ಲಾ ಟಿವಿ ಚಾನೆಲ್‍ಗಳಲ್ಲಿಯೂ ಇದ್ದಾರೆ. ನಮ್ಮ ಜನರು ಸರಿಯಿಲ್ಲ ರೀ, ದುಡ್ಡು ತಗೋಂಡು ಓಟ್ ಹಾಕ್ತಾರೆ ಎಂದರೆ ಎಲ್ಲರೂ ದುಡ್ಡು ತೆಗೆದುಕೊಳ್ಳುತ್ತಾರೆಂದು ಅರ್ಥವೇ? ರಾಜಕೀಯ ಸಮಾವೇಶಕ್ಕೆ ದುಡ್ಡು ತಗೊಂಡು ಬರುತ್ತಾರೆಂದರೆ ಎಲ್ಲರೂ ಹಾಗೆ ಬರುತ್ತಾರೆಂದು ಅರ್ಥವೇ? ಇವೆಲ್ಲವೂ ಜನೆರಲ್ ಸ್ಟೇಟ್‍ಮೆಂಟ್‍ಗಳು ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. 

ಯಾವುದೇ ವರ್ಗದಲ್ಲಿ, ಯಾವುದೇ ವೃತ್ತಿಯಲ್ಲಿ, ಯಾವುದೇ ಊರಿನಲ್ಲಿ ಭ್ರಷ್ಟರಿದ್ದಾರೆನ್ನುವುದಾರೆ ಅವರನ್ನು ನಿಂದಿಸೋಣ. ಯಾರೇ ಜಾತಿ ಧರ್ಮ ಭಾಷೆಯ ಹೆಸರಲ್ಲಿ ದಬ್ಬಾಳಿಕೆ ಮಾಡಲು ಬಂದರೆ ಅವರನ್ನು ಓಡಿಸೋಣ. ಸಂಘ ಮತ್ತು ಸಂಘಟನೆಯ ಹೆಸರಲ್ಲಿ ಕಾರ್ಮಿಕರನ್ನು ನೌಕರರನ್ನು ದಾರಿ ತಪ್ಪಿಸಿದರೆ ಅವರನ್ನು ಓಡಿಸೋಣ. ಎಲ್ಲಾ ವರ್ಗದವರು, ಎಲ್ಲಾ ಕಾರ್ಮಿಕರು, ಎಲ್ಲಾ ವೃತ್ತಿಯವರು ಚೆನ್ನಾಗಿದ್ದರೆ ಮಾತ್ರ ಉತ್ತಮ ಸಮಾಜ. ನಾವು ಮಾತ್ರ, ನಮಗೆ ಮಾತ್ರವೆಂದರೆ ಸಮಾಜ ಬೆಳೆಯುವುದಿಲ್ಲ. ಉಳ್ಳವರು ಇಲ್ಲದವರನ್ನು ಜೊತೆಗೊಯ್ಯುವ ಮನೋಭಾವ ಬರಲಿ. ಎಷ್ಟು ದುಡಿಯುತ್ತೇವೆ ಎನ್ನುವುದಕ್ಕಿಂತ ಎಷ್ಟು ಉಳಿಸುತ್ತೇವೆಂಬುದು ಮುಖ್ಯ. 
To be cont....

17 ಫೆಬ್ರವರಿ 2018

ನಾನೇಕೆ ಶಬರಿಮಲೈಗೆ ಹೋಗುತ್ತೇನೆ.....


ನಾನು ಈ ಕುರಿತು ಬಹಳ ವರ್ಷಗಳ ಹಿಂದೆಯೇ ಬರೆಯಬೇಕೆಂದಿದ್ದೆ. ಆದರೆ ಸಮಯದ ನೆಪವೋ ಅಥವಾ ನನ್ನ ಸೋಮಾರಿತನವೋ ಬರೆಯುವುದಕ್ಕೆ ಬಿಟ್ಟಿರಲಿಲ್ಲ. ಈ ದಿನ ನಿರ್ಧಾರ ಮಾಡಿ ಬರೆಯುತ್ತಿದ್ದೇನೆ. ಬರೆಯುತ್ತಿದ್ದೇನೆ ಎನ್ನುವುದಕ್ಕಿಂತ ನಿಮ್ಮ ಮುಂದೆ ಒಪ್ಪಿಸುತ್ತಿದ್ದೇನೆ. ಈ ಬರವಣಿಗೆಯನ್ನು ಓದಿದ ನಂತರ ನಿಮ್ಮಲ್ಲಿ ಕೆಲವೊಂದು ಪ್ರಶ್ನಾರ್ಥಕತೆ ಮೂಡಿದರೆ ನಾನು ಧನ್ಯ. ನಾನು ಮೊನ್ನೆ ಫೇಸ್‍ಬುಕ್ಕಿನಲ್ಲಿ ಒಂದು ಪೋಸ್ಟ್ ಹಾಕಿದ್ದೆ, ಒಬ್ಬ ಹಿಂದೂ ಸಂಪ್ರದಾಯದ ವಿಜ್ಞಾನ ವಿದ್ಯಾರ್ಥಿ ಪೂಜೆ ಪುನಸ್ಕಾರ ಮಾಡಿದರೆ ಅವನನ್ನು ಕೆಲವರು ಪ್ರಶ್ನಿಸುತ್ತಾರೆ, ನೀನೊಬ್ಬ ವಿಜ್ಞಾನ ವಿದ್ಯಾರ್ಥಿಯಾಗಿ ಈ ದೇವರು ದಿಂಡಿರು ಎಲ್ಲವನ್ನೂ ನಂಬುತ್ತೀಯಾ? ಅನ್ಯಾಯ ಆಗುವಾಗ, ಕೊಲೆಗಡುಕರು ಹೆಚ್ಚಾಗುತ್ತಿರುವ ಈ ಸಮಾಜದಲ್ಲಿ ದೇವರೆಲ್ಲೆದ್ದಾನೆ? ಅದೆಲ್ಲವೂ ಅಪನಂಬಿಕೆ ಅಥವಾ ಮೂಡಬಂಬಿಕೆ, ಕಂದಾಚಾರಗಳು ಹೀಗೆ? ಆದರೇ ಅದೇ ಪ್ರಶ್ನೆಯನ್ನು ಇತರೆ ಧರ್ಮದವರಿಗೆ ಕೇಳುವುದಿಲ್ಲವೆಂದು. ಇದಕ್ಕೆ ಸಾಕಷ್ಟು ಬಿನ್ನಾಬಿಪ್ರಾಯಗಳು ಬಂದವು. ನಮ್ಮ ದೇಶದಲ್ಲಿ ಕೆಲವು ಗೊಂದಲಗಳಿವೆ, ಅದನ್ನು ತೀರ್ಮಾನಿಸಲು ಅಥವಾ ಅರ್ಥೈಸಲು ವರ್ಷಗಟ್ಟಲೆ ವ್ಯಯಿಸಬೇಕಾದೀತು. ಇದಕ್ಕೆ ಮೂಲ ಕಾರಣ ಎಲ್ಲವನ್ನೂ ಭಾವುಕರಾಗಿ ನೋಡುವುದು ಮತ್ತು ಅದನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿರುವುದು. ಭಾಷೆ, ಜಾತಿ, ಧರ್ಮ, ಲಿಂಗ ತಾರತಮ್ಯ, ಪ್ರಾದೇಶಿಕತೆ, ಎಲ್ಲವನ್ನೂ ಗಮನಿಸಿ ಭಾವನೆಗಳೊಂದಿಗೆ ಬೆರೆಸಿ ಕೆಲವೇ ಕೆಲವರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಜಾತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಾರೆ. ಭಾಷೆಯನ್ನು ಅಷ್ಟೆ. ವಿಜ್ಞಾನವನ್ನೂ ಅಷ್ಟೆ. ವಿಜ್ಞಾನ, ಸಂಪ್ರದಾಯ, ಆಚರಣೆಗಳು, ಆಧ್ಯಾತ್ಮ ಇದೆಲ್ಲದರ ಕುರಿತು ಸಮಗ್ರ ಜ್ಞಾನವನ್ನು ನಮ್ಮ ಶಿಕ್ಷಣ ವ್ಯವಸ್ಥೆ ಹೇಳಿಕೊಡಲಿಲ್ಲ. ಜ್ಯಾತ್ಯಾತೀತತೆ ಎನ್ನುವ ಪರಿಕಲ್ಪನೆಯನ್ನೆ ಹಲವರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಬದ್ದತೆಯ ಕೊರತೆ ರಾಜಕಾರಣಿಗಳಲ್ಲು ಮತ್ತು ಸಂಶೋದಕರಲ್ಲು ಇರುವುದರಿಂದ ನಾವು ಯಾವುದನ್ನು ಸರಿಯಾಗಿ ಕಲಿಸಿಲ್ಲ.

ಪೂಜೆ ಪುನಸ್ಕಾರ, ಆಚರಣೆಗಳ ಪ್ರಶ್ನೆಯನ್ನು  ಯಾರೋ ನನಗೆ ಕೇಳಿದ್ದಲ್ಲ. ನಾನೇ ನನಗೆ ಹತ್ತು ಹದಿನೈದು ವರ್ಷಗಳ ಹಿಂದೆ ಕೇಳಿದ್ದು. ಇದಕ್ಕೆ ಉತ್ತರ ಹುಡುಕುವ ಹುಮ್ಮಸ್ಸಿನಲ್ಲಿ ನನ್ನ ಮನಸ್ಸನ್ನು ಹದ್ದು ಬಸ್ತಿನ ಎಲ್ಲೆ ಮೀರಿ ಓಡಿಸಿದ್ದು. ಅದಕ್ಕೆ ತಾತ್ಕಲಿಕ ಉತ್ತರ ಸಿಕ್ಕಿದೆ. ಆ ಉತ್ತರವೇ ಶಾಸ್ವತವೆಂಬುದನ್ನು ನಾನು ನಂಬುವುದಿಲ್ಲ. ನಾನು ಬದುಕುತ್ತಿರುವ ಹಾದಿಯಲ್ಲಿ ಯಾವುದೂ ಶಾಸ್ವತವಲ್ಲವೆಂದು ನಂಬಿರುವವನು. ನಾನು ನಂಬಿರುವ ಈ ಸಿದ್ದಾಂತವೇ ಶಾಸ್ವತವಲ್ಲವೆನ್ನುವವನು ನಾನು. ಮತ್ತೆ ಇನ್ಯಾವದು ಸತ್ಯ? ಇದು ನಿಮ್ಮ ಪ್ರಶ್ನೆ. ಇರಲಿ ಅದಕ್ಕೆ ಮತ್ತೊಂದು ಬರವಣಿಗೆಯಲ್ಲಿ ವಿವರಣೆ ನೀಡುತ್ತೇನೆ. ನನ್ನ ಕೆಲವು ಅಂಶಗಳನ್ನು ತಾವುಗಳು ಒಪ್ಪುವುದಕ್ಕೆ ನನ್ನೊಡನೆ ಕೆಲವೊಂದು ಚರ್ಚೆಗಳಲ್ಲಿ ತಾವುಗಳು ಭಾಗವಹಿಸಬೇಕಾಗುತ್ತದೆ. ಹಾಗಾಗಿಯೇ ನಾನು ನನ್ನ ಬರವಣಿಗೆಗಳನ್ನು ಬ್ಲಾಗ್ ಬಿಟ್ಟು ಬೇರೆಡೆ ಎಲ್ಲಿಯೂ ಮುದ್ರಿಸುವ ಗೋಜಿಗೆ ಹೋಗಿಲ್ಲ. ಟ್ರೈಲರ್ ನೋಡಿ ಸಿನೆಮಾ ಬಗ್ಗೆ ತೀರ್ಮಾನ ಮಾಡುವವರು ಹೆಚ್ಚು ನಮ್ಮಲ್ಲಿ, ಊಹಾ ಪೋಹಗಳಿಗೆ ಮತ್ತು ಯಾವುದೋ ನಾಲ್ಕು ಸಾಲನ್ನು ಓದಿ ಪುಸ್ತಕವನ್ನು ತೀರ್ಮಾನಿಸುವುದು, ಒಂದು ದೃಶ್ಯದಿಂದ ಸಿನೆಮಾದ ಗುಣಮಟ್ಟವನ್ನು, ಒಂದೆರಡು ವಾಕ್ಯದ ಭಾಷಣ ಕೇಳಿ ಅವರ ವ್ಯಕ್ತಿತ್ವವನ್ನು ಅಳೆಯುವುದು ಸಾಮಾನ್ಯವಾಗಿದೆ. ಅದರಲ್ಲಿಯೂ ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮಗಳಿಂದಾಗಿ ಓದುಗರ ಸಂಖ್ಯೆ ಕಡಿಮೆಯಾಗಿದೆ. ಯಾವುದನ್ನೂ ಓದುವುದಿಲ್ಲ, ಕೇವಲ ಹೈಲೈಟ್ಸ್ ಸಿಕ್ಕರೆ ಸಾಕು, ದಿಡೀರನೆ ಪ್ರತಿಕ್ರಿಯಿಸಿಬಿಡುವುದು. ಅದು ತಪ್ಪೆಂದು ತಿಳಿದರು ಅದನ್ನು ತಿದ್ದಿಕೊಳ್ಳುವ ಮನಸ್ಸು ಮಾಡುವುದಿಲ್ಲ. ಆದ್ದರಿಂದ ನನ್ನ ಯಾವೊಂದು ಬರವಣಿಗೆಯನ್ನು ಅಂತಹ ಮನಸ್ಥಿತಿಯುಳ್ಳವರು ಓದುವುದೇ ಬೇಡ. ನನಗೆ ಪ್ರಶಂಸೆಯ ಹುಚ್ಚಿಲ್ಲವೆನ್ನುವುದನ್ನು ಅನೇಕ ಬಾರಿ ಹೇಳಿದ್ದೇನೆ ಅದರಂತೆಯೇ ಬದುಕುತ್ತಾ ಬಂದಿದ್ದೇನೆ. ನನಗೆ ಸ್ವಾಭಿಮಾನವೆಂದರೆ ಸ್ವಾವಲಂಬನೆಯ ಬದುಕು. ಹೊಗಳಿಕೆ ಮುಜುಗರ ಕೊಡುತ್ತದೆ, ಚರ್ಚೆ ಮಜ ಕೊಡುತ್ತದೆ. ನಾನು ಚರ್ಚಿಸಲು ಸಿದ್ದನಿರುತ್ತೇನೆ, ವಿವರವಾಗಿ ನಮ್ಮತನವನ್ನು ಬಿಟ್ಟು ಚರ್ಚಿಸಬೇಕು. 

ನನ್ನನ್ನು ಭೇಟಿ ಮಾಡಿ ನಂತರ ಚರ್ಚಿಸಿ ಅವರಿಗೆ ಸಮಯ ಸಿಕ್ಕಿ, ಅದರಲ್ಲಿಯೂ ನನ್ನ ಬರವಣಿಗೆಯಿಂದ ಅವರಿಗೆ ಕನಿಷ್ಠ ಭೌದ್ಧಿಕವಾಗಿ ಅನುಕೂಲವಾಗುತ್ತದೆಯೆಂದರೆ ಓದಲಿ, ಸುಮ್ಮನೆ ಕಾಲಹರಣಕ್ಕೋ ಅಥವಾ ನನ್ನ ಬಲವಂತಕ್ಕೋ ಓದುವುದು ಬೇಡ. ಇರಲಿ ವಿಷಯಕ್ಕೆ ಬರೋಣ. ಶಿರ್ಷಿಕೆಯಲ್ಲಿರುವಂತೆಯೇ ನಿಮ್ಮಲ್ಲಿಯೂ ಸಾಕಷ್ಟು ಜನರಿಗೆ ಕುತೂಹಲವಿರಬಹುದು ಅಥವಾ ಬೇಸರವಿರಬಹುದು ಅಥವಾ ಹೆಮ್ಮೆಯೂ ಇರಬಹುದು. ಮೊದಲನೆಯದಾಗಿ, ಇದ್ಯಾವ ಸೀಮೆಯ ದೇವರಿಗೆ ಹೋಗುವುದು, ಮುಂಜಾನೆ ಎದ್ದು ಊರಿನವರೆಲ್ಲರನ್ನು ಎಬ್ಬಿಸಿ ಅಯ್ಯಪ್ಪ ಅಂತ ಕೂಗಿ, ವರ್ಷವೆಲ್ಲ ಕುಡಿದು ಮಾಲೆ ಹಾಕಿಸಿದಾಗ ಮಾತ್ರ ಸಾಚಾ ಅನ್ನೋ ತರಹ ಇರೋದು, ಇಲ್ಲಿರುವ ಅಪ್ಪ ಅಮ್ಮನಿಗೆ ಸರಿಯಾಗಿ ಮರ್ಯಾದೆ ಕೋಡೋದಿಲ್ಲ ದೂರದ ಕೇರಳ ರಾಜ್ಯಕ್ಕೆ, ಅಯ್ಯೋ ಅದೆಲ್ಲ ಊರು ಸುತ್ತಾಡಿಕೊಂಡು ಟೂರ್ ಹೋಡೆಯೋಕೆ ಅಷ್ಟೆ, ದೇವರು ಇಲ್ಲಿಲ್ವಾ? ಅಯ್ಯೋ ಜನ ಮರುಳೋ ಜಾತ್ರೆ ಮರುಳೋ ಬಿಡಿ ಏನೋ ಮಾಡಲಿ. ಆದರೂ ನೋಡಿ, ಕೇರಳ ರಾಜ್ಯ ಕಮ್ಯೂನಿಸ್ಟ್ ಸರ್ಕಾರ ಅವರಿಗೆ ದೇವರಲ್ಲಿ ಅಂತಾ ನಂಬಿಕೆಯಿಲ್ಲ,. ಸರ್ಕಾರನೇ ಒಪ್ಪಿಕೊಂಡಿದೆ ಮಕರ ಜ್ಯೋತಿನೂ ಇಲ್ಲಾ ಏನೂ ಇಲ್ಲಾ ಅದು ವೈಜ್ಞಾನಿಕವಾಗಿ ನೋಡಿದರೆ ಮೋಸ ಅಂತಾ ನಮ್ಮ ಜನಕ್ಕೆ ಬುದ್ದಿಯಿಲ್ಲ, ಸುಮ್ಮನೆ ಸುತ್ತಾಡೋಕೇ ಸಾಯ್ತಾವೇ. ಕಮ್ಯೂನಿಷ್ಟ್‍ರು ನೋಡಿ ಬುದ್ದಿವಂತರು ಅದರಲ್ಲೂ ಕೇರಳದವರು ಎಷ್ಟೇ ಆದರೂ ಮೀನು ತಿನ್ನೋರು ನೋಡಿ ದೇವಸ್ಥಾನದ ಹೆಸರಲ್ಲಿ ಎಂಥಾ ಸಂಪಾದನೆ ರೀ? ಅತಿ ಹೆಚ್ಚು ಸಾಕ್ಷರತೆ ಇರೋದು ಕೇರಳದಲ್ಲಿ, ಅದರ ಜೊತೆ ಮಾಟ ಮಂತ್ರ ಅಂದರೆ ಕೇರಳ. ಅಲ್ಲಿನ ಜನ ಮಾಡಿಸುವುದಿಲ್ಲ, ಬೇರೆ ರಾಜ್ಯದವರು ಮಾಡಿಸ್ತಾರೆ. ನೋಡಿ ನಮ್ಮ ಮಾಜಿ ಮುಖ್ಯಮಂತ್ರಿಗಳು ಅಲ್ಲಿನ ಅದೆಷ್ಟೊ ದೇವಸ್ಥಾನಕ್ಕೆ ಹೋಗಿ ಬಂದಿದ್ದಾರೆ. ಇನ್ನೂ ಜನರು ಹೋಗದೇ ಇರುತ್ತಾರಾ? 

ನಾನು ಈ ರೀತಿಯ ಮಾತುಗಳನ್ನು ಯಾವುದೇ ಆಚರಣೆಯ ಕುರಿತು ಕೇಳುವಾಗ ಮೊದಲು ನನ್ನ ತಲೆಗೆ ಹೊರಟುವುದು ಸೋಮಾರಿತನದ ವಾಸನೆ. ಸೋಮಾರಿತನವೇ? ಅಂಧಾಚಾರ ಅಲ್ವಾ? ಮೂಢನಂಬಿಕೆಯಲ್ವಾ? ಯಾರೋ ಯಾವತ್ತೋ ಮಾಡಿದ್ದನ್ನೂ ನಂಬೋದು ಹೇಗೆ? ಮನುಷ್ಯ ಬೆತ್ತಲಾಗಿರಬಾರದು, ಅವನು ಧಿರಿಸನ್ನು ಧರಿಸಬೇಕೆಂಬುದನ್ನು ಯಾರೋ ಯಾವತ್ತೋ ಮಾಡಿದಲ್ಲವೇ? ಅದು ಸರಿಯೆಂಬುದು ಹೇಗೆ ಬಂತು ನಮ್ಮ ಆಲೋಚನೆಗೆ? ಸತ್ಯ ಸುಳ್ಳು, ನ್ಯಾಯ ಅನ್ಯಾಯ, ಧರ್ಮ ಅಧರ್ಮ ಇದೆಲ್ಲವೂ ಹೇಗೆ ಬಂತು? ಕೆಲವು ಶಾಲೆಗಳಲ್ಲಿ, ಶಾಲೆಗಳಲ್ಲಿ ಮಾತ್ರವೇನು ಜೀವನದಲ್ಲಿಯೂ ಶಿಸ್ತಿನಿಂದಿರಲು ಅನೇಕರಿಗೆ ಇಷ್ಟವಿಲ್ಲ ಅದನ್ನು ಒಪ್ಪುವುದಿಲ್ಲ. ಅದೇ ರೀತಿ ಧಾರ್ಮಿಕ ಆಧ್ಯಾತ್ಮಿಕ ಎಂದಾಕ್ಷಣ ಮೊದಲು ಬರುವುದು ನಿಷ್ಠೆ, ನಿಯತ್ತು, ಶಿಸ್ತು ಅದನ್ನು ಅನೇಕರು ಪಾಲಿಸಲು ದೂರ ಉಳಿಯುತ್ತಾರೆ. ಆದರೂ, ಕೆಲವರು ಅದನ್ನು ಮೀರಿ ಸಾಧಿಸುತ್ತಾರೆ ಅದು ನನಗೆ ಯಾವತ್ತಿಗೂ ಕುತೂಹಲ ಮತ್ತು ಹೆಮ್ಮೆಯ ವಿಷಯ. ಶಬರಿ ಮಲೈ ಪ್ರವಾಸದ ಕುರಿತು ಅಷ್ಟೆ, ನನಗೆ ಮೊದಲು ಮೂಡಿದ್ದು ಅನುಮಾನ ಅಥವಾ ತಾತ್ಸಾರ ನಂತರ ಬಂದದ್ದು ಕುತೂಹಲ ಅದಾಂತ ನಂತರ ನಿರಂತರ ಬದಲಾವಣೆ. ಮಾಂಸ ಸೇವಿಸಿ ದೇವಸ್ಥಾನಕ್ಕೆ ಹೋಗಬಾರದು ಅಷ್ಟೆ ಅದೊಂದು ನಿಯಮ, ಹೋದರೇನು? ದೇವರು ಹೇಳಿತ್ತಾ? ಸ್ವಾಮಿ ನಿಮ್ಮನ್ನ ದೇವರು ಕರೆದಿದ್ದಾನಾ? ಬನ್ನಿ ಎಂದು. ಇದೆಲ್ಲವೂ ಉಢಾಫೆತನ ಮತ್ತು ತಾವುಗಳು ನಿಯಂತ್ರಣದಲ್ಲಿರಲು ಆಗದೇ ಇರುವವರು ಮಾಡುವ ಹುನ್ನಾರ. ಉದಾಹರಣೆಗೆ: ಶಾಲೆಗೆ ವಿದ್ಯಾರ್ಥಿಗಳಿಗೆ ಸಮವಸ್ತ್ರವೇಕೆ? ಮಕ್ಕಳು ವಿದ್ಯೆಯನ್ನು ತಾನೇ ಕಲಿಯಬೇಕಿರುವುದು? ಅವರು ಯಾವ ಬಟ್ಟೆ ಹಾಕಿಕೊಂಡು ಬಂದರೇನು? ಬಟ್ಟೆ ಇಲ್ಲದೇ ಬಂದರೇನು? ವಿದ್ಯೆ ನಿಮಗೆ ಹೇಳಿದೆಯಾ? ನೀನು ಸಮವಸ್ತ್ರ ಹಾಕಿದರೇ ಮಾತ್ರ ನಾನು ನಿನಗೆ ಒಲಿಯುವದೆಂದು? ಇರಲಿ ಮುಂದಕ್ಕೆ ಹೋಗೋಣ.

ಈ ಮುಂದಿನ ಹತ್ತಾರು ಸಾಲುಗಳನ್ನು ಬಹಳ ಎಚ್ಚರವಾಗಿ ಓದಿಕೊಳ್ಳಿ ಇದು ತಮ್ಮ ವಿವೇಚನೆಗೆ ಮತ್ತು ಜ್ಞಾನಕ್ಕೆ ಮೀಸಲಾಗಿರುವುದು. ಇದರ ಕುರಿತು ಹೆಚ್ಚೇನೂ ವಿವರಣೆಯನ್ನು ನಾನು ನೀಡುವುದಿಲ್ಲ. ಪೂಜೆ, ದೇವರು ವಿಷಯ ಬಂದಾಗ ನಮ್ಮಲ್ಲಿ ಅಂದರೇ ಹಿಂದೂ ಸಂಪ್ರದಾಯದಲ್ಲಿ. ನಾನು ಹಿಂದೂ ಧರ್ಮವೆಂಬುದನ್ನು ಸಂಪೂರ್ಣವಾಗಿ ಒಪ್ಪಿಲ್ಲ ಅದರ ವಿವರಣೆಯ ಅಗತ್ಯತೆಯಿಲ್ಲಿ ಬೇಕಿಲ್ಲ. ಆದರೆ ನಮ್ಮೊದೊಂದು ಸಂಪ್ರದಾಯ ಶ್ರೀಮಂತ ದೇಶವೆಂಬುದನ್ನು ಯಾವುದೇ ಮುಲಾಜಿಲ್ಲದೆ ಒಪ್ಪುತ್ತೇನೆ. ನಮ್ಮಲ್ಲಿ ಕೋಟ್ಯಾಂತರ ದೇವರುಗಳಿದ್ದಾರೆ. ಪೂಜಿಸುವುದಕ್ಕೆ, ಶಾಪ ನೀಡುವುದಕ್ಕೆ, ಉದ್ದಾರ ಮಾಡುವುದಕ್ಕೆ ಹಾಳು ಮಾಡುವುಕ್ಕೆ ಎಲ್ಲದಕ್ಕೂ. ಇದರಲ್ಲಿ ಹಲವರ ಹಲವಾರು ರೀತಿಯ ವಾದಗಳಿವೆ. ಅದು ಕೆಲವೊಮ್ಮೆ ನಿಜವೆನಿಸಿದರೂ, ನಿಜವೇ? ಎನ್ನುವುದು ಮತ್ತೊಂದು ಪ್ರಶ್ನೆ. ದೇವರುಗಳನ್ನು ಜಾತಿಗೆ ಸೇರಿಸಿರುವಂತೆ ಕಾಣುವುದು. ಇದನ್ನು ಮುಂದುವರೆದ ಜಾತಿಯೆನಿಸಿಕೊಳ್ಳುವವರು ಮತ್ತು ಹಿಂದುಳಿದವರು ಎನಿಸಿಕೊಳ್ಳುವವರು ಇಬ್ಬರೂ ಹೇಳುತ್ತಾರೆ. ಸಾಮಾನ್ಯ ಪ್ರಜೆಯಾಗಿ ನಾನು ಅದನ್ನು ಒಪ್ಪಿಕೊಳ್ಳುವುದೂ ಇಲ್ಲ ಮತ್ತು ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಇತ್ತೀಚಿನ ದಿನಗಳಲ್ಲಿ ಗಮನಿಸಿರುವ ಹಾಗೆ, ಕೆಲವೊಂದು ಹಬ್ಬಗಳು ದಿಡೀರನೆ ಪ್ರಸಿದ್ದಿಯಾದವು. ವೈಕುಂಠ ಏಕಾದಶಿ, ವರಲಕ್ಷ್ಮಿ ಹಬ್ಬ ಇದಕ್ಕೆ ಉದಾಹರಣೆ. ಇವುಗಳೆಲ್ಲವೂ ಪುರುಹಿತಶಾಹಿ ನಮ್ಮ ಮೇಲೆ ಹೇರುತ್ತಿರುವ ಹಬ್ಬಗಳೆಂಬುದು ಕೆಲವರ ವಾದ. ಆ ರೀತಿ ಗಮನಿಸಿದರೆ ಸಂಕ್ರಾಂತಿ ಹಬ್ಬದಂದು ನಾವುಗಳು ಮಾಂಸ ತಿನ್ನುವುದು ರೂಢಿಯಾಗಿತ್ತು ಇತ್ತೀಚಿನ ದಿನಗಳಲ್ಲಿ ಆ ದಿನ ಮಕರ ಜ್ಯೋತಿ ಇರುವುದರಿಂದ ತಿನ್ನುವುದಿಲ್ಲ ಮತ್ತೂ ಎಳ್ಳು ಬೆಲ್ಲ ಬೀರುವುದು ಸಾಮಾನ್ಯವಾಗಿದೆ, ನಮ್ಮ ಬಾಲ್ಯದಲ್ಲಿ ಅದಿರಲಿಲ್ಲ. 

ನಮ್ಮಲ್ಲಿ ಹರಕೆ ಹೊರುವುದು ಸಾಮಾನ್ಯದ ಸಂಗತಿ. ವಿಧವಿಧವಾದ ಹರಕೆಯನ್ನು ಹೊರುತ್ತಿದ್ದರು. ಪೂಜೆಗಳು ಅಷ್ಟೆ, ಬ್ರಾಹ್ಮಣರನ್ನು ಕರೆಸಿ ಹೋಮ ಹವನಗಳನ್ನು ಮಾಡುವುದು ಕಡಿಮೆಯಿತ್ತು. ಕಡಿಮೆಯಿತ್ತು ಎನ್ನುವುದಕ್ಕಿಂತ ಇರಲೇ ಇಲ್ಲವೆಂದರೂ ಸರಿ. ಶನಿ ದೇವರ ಪೂಜೆಯನ್ನು ಬ್ರಾಹ್ಮಣ ಜಾತಿಯವರು ಮಾಡುತ್ತಿರಲಿಲ್ಲ, ಈಗ ಬೇಡಿಕೆ ಹೆಚ್ಚಾಗಿರುವುದರಿಂದ ಮಾಡುತ್ತಿದ್ದಾರೆಂಬುದು ಕೆಲವರ ವಾದ. ಶನಿ ದೇವರು, ದೆವ್ವ ಬರುವುದು, ದೆವ್ವ ಬಿಡಿಸುವುದು ಇವೆಲ್ಲವೂ ನಾವು ಚಿಕ್ಕವರಿದ್ದಾಗ ಬಹಳ ನೋಡಿದ್ದೆ. ದೇವರಿಗೆ ಬಲಿ ಕೊಡುವುದು ವಾಡಿಕೆಯಾಗಿತ್ತು. ಆದರೆ ಈಗ ಸತ್ಯನಾರಾಯಣ ಪೂಜೆ, ಗಣಪತಿ ಹೋಮ, ಹವನಗಳು ಸಾಮಾನ್ಯವಾಗಿವೆ. ಇವೆಲ್ಲವೂ ಪುರೂಹಿತಶಾಹಿಗಳ ನಮ್ಮ ಮೇಲೆ ಮಾಡುತ್ತಿರುವ ಸವಾರಿಯೆಂದು ನನ್ನೊಂದಿಗೆ ಕೆಲವರು ಹೇಳಿದ್ದಾರೆ. ನನಗೆ ಅದ್ಯಾವುದು ಮುಖ್ಯವೆನಿಸುವುದಿಲ್ಲ. ಅದನ್ನು ನನ್ನನುಭವದಲ್ಲಿಯೇ ಹೇಳಬೇಕೆಂದರೆ, ನಾನು ನಮ್ಮೂರಿನ ಪಕ್ಕದಲ್ಲಿರುವ ಸರಗೂರಿನ ಬ್ರಾಹ್ಮಣರ ಮನೆಗೆ ವಿಳ್ಯೆ ಎಲೆ ತರುವುದಕ್ಕೆ ಈಗಲೂ ಒಮ್ಮೊಮ್ಮೆ ಹೋಗುವುದುಂಟು, ಅವರು ಅವರ ಮನೆಯ ಕಾಂಪೌಂಡಿನ ಮೇಲೆ ಎಲೆ ಇಡುತ್ತಾರೆ, ನಾನು ಅಲ್ಲಿಯೇ ದುಡ್ಡು ಇಡುತ್ತೇನೆ ಬರುತ್ತೇನೆ. ಅವರು ನನ್ನನ್ನು ಮುಟ್ಟುವುದಿಲ್ಲ, ನಾನು ಅವರನ್ನು ಮುಟ್ಟುವುದಿಲ್ಲ. ನನಗೆ ಅದೆಂದಿಗೂ ಅಶ್ಪøಶ್ಯತೆ ಎನಿಸಿಲ್ಲ. ಅದು ಅವರ ಆಚರಣೆ. ಅದಕ್ಕೆ ನಾನ್ಯಾಕೆ ತಲೆಕೆಡಿಸಿಕೊಳ್ಳಬೇಕು. ನನಗೆ ಇವರಲ್ಲಿ ಎಲೆ ಬೇಡವೆಂದರೆ ಬೇರೆಡೆಗೆ ಹೋಗಿ ತರಬಹುದು. ದೇವರು ದೇವಸ್ಥಾನದ ವಿಷಯದಲ್ಲಿಯೂ ಅಷ್ಟೆ, ನಿಮಗೆ ಇಷ್ಟವಿಲ್ಲವೆಂದರೆ ಬಿಡಿ ಬೇರೆಯವರ ಮೇಲೇಕೆ ನೀವು ಹೇರಿಕೆ ಹಾಕಬೇಕು? ಈಗ ಹಿಂದಿನ ರೀತಿಯಲ್ಲಿ ಸಮಾಜವಿಲ್ಲ. ನೀವು ಎಲ್ಲಿ ಹೇಗೆ ಬೇಕಿದ್ದರೂ ಬದುಕಬಹುದು. ಆ ಸ್ವಾತಂತ್ರ್ಯ ನಿಮಗಿದೆ. ನೀವ್ಯಾಕೆ ಇನ್ನೂ ಅವರು ನಮ್ಮನ್ನು ತುಳಿಯುತ್ತಿದ್ದಾರೆ, ಇವರು ತುಳಿಯುತ್ತಿದ್ದಾರೆಂದು ನಂಬುತ್ತೀರಿ?

ಇಲ್ಲಿ ಸ್ವಲ್ಪ ವಿಷಯಾಂತರವಾದರೂ ಇದನ್ನು ಇಲ್ಲಿಯೇ ಹೇಳಿ ಮುಗಿಸುತ್ತೇನೆ. ಜಾತಿ ರಾಜಕೀಯ ಮಾಡುತ್ತಾರೆಂಬುದು ಕೆಲವರ ವಾದ. ಉದಹಾರಣೆಗೆ, ಒಕ್ಕಲಿಗ ಸಮುದಾಯದ, ಕುರುಬರ ಸಮುದಾಯದ, ಲಿಂಗಾಯತ ಸಮುದಾಯದ, ದಲಿತ ಸಮುದಾಯದ ನಾಯಕರುಗಳು ಮುಖಂಡರುಗಳಿದ್ದಾರೆ. ಅವರು ಅವರ ಜಾತಿಯನ್ನು ಮುಂದಿಟ್ಟುಕೊಂಡು ನಾಯಕರಾಗಿದ್ದಾರೆ. ಎಲ್ಲಾ ರೀತಿಯ ಸವಲತ್ತನ್ನು ಅನುಭವಿಸುತ್ತಿದ್ದಾರೆ. ಅವರುಗಳು ಅವರ ಜಾತಿಗೆ ಅಥವಾ ಜಾತಿಯ ಜನರಿಗೆ ಮಾಡಿರುವ ಸಹಾಯಗಳೇನು? ಯಾವುದೇ ಜಾತಿಯ ನಾಯಕರನ್ನು ನೋಡಿ ಅವರ ಎರಡನೆಯ ತಲೆಮಾರಿನ ನಾಯಕರನ್ನು ಬೆಳೆಯಲು ಬಿಟ್ಟಿಲ್ಲ. ನಿಜವಾಗಿಯೂ ಒಬ್ಬರಿಗೆ ತನ್ನ ಜಾತಿಯನ್ನು ಮೇಲೆ ತರಬೇಕೆಂದೆದಿದ್ದರೆ ಅವರೆಲ್ಲರನ್ನೂ ಗುರುತಿಸಿ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಬೇಕಿತ್ತು. ಧರ್ಮದ ವಿಷಯದಲ್ಲಿಯೂ ಅಷ್ಟೆ. ಪ್ರಾದೇಶಿಕತೆಯ ವಿಷಯದಲ್ಲಿಯೂ ಅಷ್ಟೆ. ಒಂದೇ ಒಂದು ಕ್ಷೇತ್ರವನ್ನು ತೋರಿಸಿ ಒಬ್ಬ ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ, ಮಂತ್ರಿಯೋ, ಸಂಸದರೋ ಸಂಪೂರ್ಣವಾಗಿ ಅಬಿವೃದ್ದಿ ಮಾಡಿರುವುದನ್ನು. ಒಂದೇ ಒಂದು ಜಾತಿಯನ್ನು, ಧರ್ಮವನ್ನೋ ತೋರಿಸಿ ಅವರ ಮುಖಂಡರು ಬೆಳೆಸಿರುವುದನ್ನು. ಭಾಷಾ ಹೋರಾಟಗಾರರ ಕೊಡುಗೆಯೇನು? ಭಾಷೆಗೆ? ಒಂದೇ ಒಂದು ಕೃತಿ? ಒಂದು ಕನ್ನಡ ಶಾಲೆಯನ್ನು ದತ್ತು ತೆಗೆದುಕೊಂಡು ಬೆಳೆಸಿರುವುದನ್ನು ತೋರಿಸಿ. ಹಿಂದೂ ಧರ್ಮ ದತ್ತು ಪಡೆದವರಂತೆ ಮಾತನಾಡುವ ಸಂಸದರುಗಳು ಒಂದು ದೇವಸ್ಥಾನ, ಒಂದು ಅನ್ನ ಸಂತರ್ಪನೆ, ಒಂದು ಆಶ್ರಮ ಮಾಡಿರುವುದನ್ನು ತೋರಿಸಿ. ಅದ್ಯಾವುದು ಅವರಿಗೂ ಬೇಡ, ಮತದಾರನಿಗೂ ಬೇಡ. ಸರ್ಕಾರದಿಂದ ಒಪ್ಪತ್ತಿನ ಊಟದ ಕ್ಯಾಂಟೀನ್ ಬದಲು ಉದ್ಯೋಗ ಕಲ್ಪಿಸಿ ಎಂದು ಕೇಳಲಿ. ಮತದಾರ ಬೇಡುವುದನ್ನು ನಿಲ್ಲಿಸುವುದಿಲ್ಲ. ಚುನಾಯಿತ ಪ್ರತಿನಿಧಿ ಅಷ್ಟೋ ಇಷ್ಟೋ ಹಾಕಿ ಇವರನ್ನು ಸಾಕುತ್ತಿದ್ದೇನೆಂಬ ಗುಂಗಿನಲ್ಲಿ ಬದುಕುತ್ತಾನೆ. ನಾನು ಇದನ್ನು ಬಹಳ ಹತ್ತಿರದಿಂದ ನೋಡಿದ್ದೇನೆ, ಕ್ರಿಕೇಟ್, ವಾಲಿಬಾಲ್, ನಾಟಕ ಹೀಗೆ ಕೆಲವು ರಾಜಕಾರಣಿಗಳು ದುಡ್ಡು ಕೊಡುತ್ತಾರೆ, ಚುನಾವಣೆ ಸಂದರ್ಭದಲ್ಲಿ ಇವರನ್ನು ಉಪಯೋಗಿಸಿಕೊಂಡು ದಬ್ಬಾಯಿಸಿ ಮತ ಹಾಕಿಸಿಕೊಳ್ಳುತ್ತಾರೆ. ಇವರಿಗೂ ಊರು ಉದ್ದಾರವಾಗುವುದು ಬೇಡ ಅವರಿಗೂ ಬೇಡ.

ಶಬರಿಮಲೈಗೆ ಹೋಗುವ ವಿಷಯಕ್ಕೆ ಬಂದರೆ, ನಾನು ಏಳು ಬಾರಿ ಹೋಗಿ ಬಂದಿದ್ದೇನೆ. ನಾನು ಹೋಗುವುದಕ್ಕೆ ಮುಂಚೆ ಹೋಗುತ್ತಿದ್ದವರನ್ನು ತೆಗೆಳಿದ್ದೇನೆ, ಬೈದಿದ್ದೇನೆ. ಅದೊಂದು ವಿಭಿನ್ನ ಅನುಭವ. ಆದರೆ ಹೋಗಲು ಪ್ರಾರಂಭಿಸಿದಾಗಿನಿಂದ ಆಗಿರುವ ಅನುಭವವೇ ಬೇರೆ ತೆರನದ್ದು. ಅದರಿಂದಾದ ಅನುಕೂಲಗಳನ್ನು ನಿಮ್ಮ ಮುಂದೆ ಇಡುತ್ತೇನೆ. ನಾನು ಮತ್ತು ನನ್ನ ಪೂಜೆ ಪುನಸ್ಕಾರಗಳು ಒಂದು ಬಗೆಯ ವಿಚಿತ್ರದಿಂದ ಕೂಡಿವೆ. ಅದು ವಿಭಿನ್ನತೆಯೆಂದರೂ ಸರಿಯೆ. ಮನುಷ್ಯ ತಾನೊಂದು ಜಗತ್ತು ಎನ್ನುವಂತೆ ಬದುಕಬೇಕು. ಅವನೊಳಗೆ ಹೊಸ ಸೃಷ್ಟಿಯನ್ನು ಸೃಷ್ಟಿಸಬಲ್ಲ. ನಾನು ಎಲ್ಲಾ ದೇವಸ್ಥಾನಗಳಿಗೂ ಹೋಗುವವನಲ್ಲ. ಅಂದರೇ ನಾನಾಗಿಯೇ ಬಯಸಿ ಹೋಗುವ ದೇವಸ್ಥಾನಗಳು ಬೆರಳೆಣಿಕೆಯಷ್ಟು ಮಾತ್ರ. ನಾನು ಪ್ರಯಾಣಿಸುವಾಗ ಯಾರಾದರೂ ಪುರಾತನ ದೇಗುಲಗಳು ಇವೆಯಂದರೆ ಹೋಗುತ್ತೇನೆ. ಹೊಸದಾಗಿ ಕಟ್ಟಿರುವ ದೇವಸ್ಥಾನಗಳಿಗೆ ಭೇಟಿ ನೀಡುವುದು ಕಡಿಮೆ. ಅಲ್ಲಿ ತೋರಿಕೆಯಿರುತ್ತದೆಯೆ ಹೊರತು ಭಕ್ತಿಯಿರುವುದಿಲ್ಲವೆಂದು ನನ್ನ ಅನಿಸಿಕೆ. ನಾನು ದೇವಸ್ಥಾನಗಳಿಗೆ ಮಾತ್ರವಲ್ಲ, ಮಸೀದಿ, ದರ್ಗಾ, ಚರ್ಚು ಮತ್ತು ಗುರದ್ವಾರಗಳಿದ್ದರೂ ಹೋಗುತ್ತೇನೆ. ನಾನು ಬಯಸಿ ಹೋಗುವ ದೇಗುಲಗಳಲ್ಲಿ ಬೇಲೂರು, ಧರ್ಮಸ್ಥಳ ಮತ್ತು ಶಬರಿಮಲೈ ಪ್ರಮುಖವಾದವು. ಧರ್ಮಸ್ಥಳಕ್ಕೆ ಹೋದಾಗ ಅವಕಾಶ ಸಿಕ್ಕಿದರೆ ಹೊರನಾಡು, ಶೃಂಗೇರಿ, ಸುಬ್ರಹ್ಮಣ್ಯಕ್ಕೆ ಹೋಗಿ ಬರುವುದು ಇದೆ. 

ನಾನು ಒಂಟಿಯಾಗಿ ದೂರದ ಊರು ಅಂತಾ ಹೋಗಿದ್ದು ಬೇಲೂರು. ಬೇಲೂರು ನನ್ನ ಮನೆಯ ದೇವರು ಎನ್ನುವ ಕಾರಣಕ್ಕೆ ಹೋಗುತ್ತೇನೆಂದರೂ ತಪ್ಪಿಲ್ಲ. ನಾನು ಎಂಟನೆಯ ತರಗತಿಯಲ್ಲಿದ್ದಾಗಿನಿಂದಲೂ ಬೇಲೂರಿಗೆ ಹೋಗಿ ಬರುತ್ತಿದ್ದೇನೆ. ಪ್ರತಿ ವರ್ಷ ಜಾತ್ರೆಗೆ ಹೋಗುತ್ತಿದ್ದೆ. ಮಧ್ಯದಲ್ಲಿ ಐದಾರು ವರ್ಷಗಳು ನಾನು ಯಾವುದೇ ಪೂಜೆ ಪುನಸ್ಕಾರಗಳನ್ನು ಮಾಡುತ್ತಿರಲಿಲ್ಲ ಆ ಸಮಯದಲ್ಲಿ ಹೋಗುವುದನ್ನು ನಿಲ್ಲಿಸಿದ್ದೆ. ಅಲ್ಲಿನ ದೇವಸ್ಥಾನ ಬಹಳ ಖುಷಿ ಕೊಡುತ್ತದೆ ಆದರೆ, ಅಲ್ಲಿನ ಅರ್ಚಕರನ್ನು ನೋಡಿದಾಗ, ಅವರು ಪೂಜೆ ಮಾಡುವ ರೀತಿಯನ್ನು ಕಂಡಾಗ ನಿಜಕ್ಕೂ ಬೇಸರ ತರಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಈ ದೇಸಸ್ಥಾನವು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬಂದಿರುವುದರಿಂದ ಅವರು ಸಂಬಳಕ್ಕೆ ಪೂಜೆ ಮಾಡುವವರಾಗಿದ್ದಾರೆ. ಅವರಲ್ಲಿ ಭಕ್ತಿಯೂ ಕಾಣುವುದಿಲ್ಲ ಭಯವಂತು ಇಲ್ಲವೇ ಇಲ್ಲ. ಸಾವಿರಾರು ಪ್ರವಾಸಿಗರು ಬೇಲೂರಿಗೆ ಭೇಟಿ ನೀಡಿದರೂ ಕೂಡ ದೇಗುಲದಲ್ಲಿ ಮಂಗಳಾರತಿ ಪಡೆಯುವವರು ವಿರಳ ಮತ್ತು ಅಲ್ಲಿರುವ ಗೈಡ್‍ಗಳು ಅದರ ಕಡೆಗೆ ಹೆಚ್ಚು ಗಮನ ಹರಿಸುವುದಿಲ್ಲ. ಎರಡನೆಯದಾಗಿ ಧರ್ಮಸ್ಥಳ, ಹೆಸರಲ್ಲಿಯೇ ಒಂದು ಶಕ್ತಿಯಿದೆ ಎನಿಸುತ್ತದೆ. ಅಲ್ಲಿಗೆ ಪಯಣಿಸುವುದೇ ಒಂದು ಸೊಬಗು, ಕಾನನದಲ್ಲಿ, ಘಟ್ಟಗಳಿಂದ ಹೋಗಿ ಬರುವುದು, ನೇತ್ರಾವತಿಯ ಸ್ನಾನ, ಅಚ್ಚುಕಟ್ಟಾಗಿರುವ ವಸತಿ ಗೃಹಗಳು, ದೇಗುಲ, ಎಲ್ಲವೂ ಅಲ್ಲೊಂದು ಶಕ್ತಿಯಿದೆ ಎನಿಸುತ್ತದೆ. ಅದರ ಜೊತೆಗೆ ಅನ್ನ ಸಂತರ್ಪಣೆ. ಆದರೆ, ಇತ್ತೀಚೆಗೆ ಧರ್ಮಸ್ಥಳ ಬದಲಾಗುತ್ತಿದೆ. ವಾಣಿಜ್ಯಕರಣವಾಗಿದೆಯೆಂದು ನನಗನಿಸುತ್ತಿದೆ. ಉದಾಹರಣೆಗೆ: ಮಧ್ಯ ಮಧ್ಯ ಆಗ್ಗಾಗ್ಗೆ ದರ್ಶನವನ್ನು ನಿಲ್ಲಿಸುವುದು, ಅರ್ಚನೆ, ಅಭಿಷೇಕವೆಂದು. ಇದು ಉದ್ದೇಶಪೂರ್ವಕವಾಗಿ ಜನನಿಬಿಡತೆಯನ್ನು ತೋರಿಸಲು ಹೀಗೆ ಮಾಡುತ್ತಿದ್ದಾರೆಂಬುದು ಕೆಲವರ ವಾದ. ಇದು ಮೊದಲಿರಲಿಲ್ಲ. ಸಾಲುಗಳಲ್ಲಿ ನಿಂತಾಗ ಜ್ಯೂಸ್, ಬಿಸ್ಕತ್ ಇತರೆ ಕುರುಕು ತಿಂಡಿಗಳನ್ನು ಮಾರುವುದು. ಎಲ್ಲಿಯೋ ಭಕ್ತಿ ಕಡಿಮೆಯಾಗಿರಬಹುದೇ ಎನ್ನುವ ಅನುಮಾನ ನನ್ನಲ್ಲಿ ಬರುತ್ತದೆ. 

ಮೂರನೆಯದಾಗಿ, ಶಬರಿಮಲೈ. ನೀವು ಮಾಲೆ ಧರಿಸುವುದು, ಧರಿಸಿದ ನಂತರ ಅತ್ಯಂತ ಶುಚಿಯಾಗಿರುವುದು. ಬಿಸಿ ಬಿಸಿ ಆಹಾರವನ್ನು ಸೇವಿಸಬೇಕು. ಊಟಕ್ಕೆ ಮುಂಚೆ ಸ್ನಾನ ಪೂಜೆಯಾಗಬೇಕು. ಮನೆ ಸ್ವಚ್ಛವಾಗಿರಬೇಕು. ಸುಳ್ಳು ಹೇಳಬಾರದು, ಬೈಗುಳ, ಜಗಳವಿಲ್ಲ, ಅನ್ಯಾಯ ಅನಾಚಾರಗಳಿಲ್ಲ. ವರ್ಷದಲ್ಲಿ ನಾಲ್ಕೈದು ದಿವಸವಾದರೂ ನಾನು ಬಹಳ ನಿಯತ್ತಿನಿಂದ ಬದುಕಿದ್ದೆ ಎನ್ನುವ ಸಾರ್ಥಕತೆಯೇ ನಾನು ಶಬರಿಮಲೈಗೆ ಹೋಗಲು ಕಾರಣ. ಎಲ್ಲರೂ ಅಷ್ಟೇ ನಿಷ್ಟೆಯಿಂದ ಇರುತ್ತಾರೆಂದು ನಾನು ಹೇಳುವುದಿಲ್ಲ. ದೇವಸ್ಥಾನಗಳಲ್ಲಿ ನಮ್ಮವರು ನಡೆದುಕೊಳ್ಳುವ ರೀತಿಯನ್ನು ಮುಂದಿನ ಪ್ಯಾರಾದಲ್ಲಿ ಬರೆಯುತ್ತೇನೆ. ಶಬರಿ ಮಲೈಗೆ ಹೋಗಿ ಬರುವ ತನಕ ನಮ್ಮೊಳಗೆ ದೇವರಿದ್ದಾನೆಂದು ಜನರು ಭಾವಿಸುತ್ತಾರೆ ಅದೇ ರೀತಿ ಬೇರೆಯವರಲ್ಲಿಯೂ ದೇವರಿದ್ದಾನೆಂದು ನಾನು ಭಾವಿಸಿ ಗೌರವಿಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲೆಂದು ಭಜಿಸುತ್ತಿರುತ್ತೇವೆ. ಸ್ವಾಥದಿಂದ ಹೊರಕ್ಕೆ ಬೇಡುವುದು, ಬದುಕುವುದು ಇಲ್ಲಿ ಮಾತ್ರವೆನಿಸುತ್ತದೆ ನನಗೆ. ದಾರಿಯುದ್ದಕ್ಕೂ ಅಯ್ಯಪ್ಪನ ಶರಣು ಬಿಟ್ಟು ಬೇರಾವ ಮಾತುಗಳು ಬರುವುದಿಲ್ಲ, ಬಂದರೂ ಹೆಚ್ಚಿರುವುದಿಲ್ಲ. 

ಈ ಏಳು ವರ್ಷಗಳಲ್ಲಿ ಸಾಕಷ್ಟು ಜನರೊಂದಿಗೆ ಬೆರೆತಿದ್ದೇನೆ. ಸಾಕಷ್ಟು ಕಲಿತಿದ್ದೇನೆ. ಮೊದಲ ಮೂರು ಬಾರಿ ನಾನು ಕಾರಿನಲ್ಲಿ ಹೋಗಿದ್ದೆ. ಸ್ನೇಹಿತರೊಂದಿಗೆ ಹೋದಾಗಲೂ ಗುರುವಾಯೂರು, ಮದುರೈ, ಕೊಟ್ಟಾಣಿಕೆರೆ ಭಗವತಿ ದೇವಸ್ಥಾನಗಳನ್ನು ನೋಡಿ ಬಂದಿದ್ದೆ. ಆದರೆ, ಕಾರಿನಲ್ಲಿ ಹೋಗುವುದು ನನಗೆ ಅಷ್ಟು ಇಷ್ಟವಾಗಲಿಲ್ಲ. ಮೊದಲನೆಯದಾಗಿ, ಸತತ 12-13 ಗಂಟೆಗಳು ಕೂತಿರಬೇಕು, ಎರಡನೆಯದಾಗಿ, ಡ್ರೈವರ್ ರಾತ್ರಿ ನಿದ್ದೆ ಬಿಟ್ಟು ಗಾಡಿ ಓಡಿಸಬೇಕು ಅದು ಅಷ್ಟು ಸುರಕ್ಷಿತವಲ್ಲ, ಮೂರನೆಯದಾಗಿ ಆರ್ಥಿಕವಾಗಿ ನೋಡಿದರು ಅದು ಸ್ವಲ್ಪ ಹೆಚ್ಚಿನ ಖರ್ಚಿನದ್ದು. ಹಾಗಾಗಿಯೇ, ನಾನು ರೈಲಿನಲ್ಲಿ ಹೋಗಿ ಬರುವುದನ್ನು ಅಭ್ಯಸಿಸಿದೆ. ರಾತ್ರಿ 8ಗಂಟೆಗೆ ಇಲ್ಲಿ ಹತ್ತಿದರೆ ಬೆಳ್ಳಿಗ್ಗೆ 10 ಗಂಟೆ ಸುಮಾರಿಗೆ ಚೆಂಗನೂರು ತಲುಪುತ್ತೇನೆ, ಅಲ್ಲಿಂದ ಬಸ್ ಹಿಡಿದು ಸುಮಾರು 1 ಗಂಟೆಗೆ ಪಂಪಾ ಸೇರಬಹುದು. ಸ್ನಾನ ಮಾಡಿ ಬೆಟ್ಟ ಹತ್ತುವುದಕ್ಕೆ ಶುರು ಮಾಡಿದರೆ 5 ಗಂಟೆ ವೇಳೆಗೆ ದರ್ಶನವಾಗಿ, ವಿಶ್ರಾಂತಿ ಗೃಹದಲ್ಲಿ ವಿಶ್ರಮಿಸಬಹುದು. ನಂತರ ಅಲ್ಲೆಲ್ಲಾ ಸುತ್ತಾಡಿ ಏನೆಲ್ಲಾ ಬದಲಾವಣೆಗಳಾಗಿವೆ, ಯಾವ್ಯಾವ ಕಡೆಯಿಂದ ಜನರು ಬಂದಿದ್ದಾರೆ, ಹೇಗೆ ಬಂದಿದ್ದಾರೆಂದು ಕೆಲವರೊಂದಿಗೆ ಹರಟುವುದು. ಒಂದೇ ಜಾಗದಲ್ಲಿ ಮೂರ್ನಾಲ್ಕು ರಾಜ್ಯದ ಬೇರೆ ಬೇರೆ ಜನರ ಬದುಕನ್ನು ನೋಡಬಹುದು. ಮುಂಜಾನೆ ಎದ್ದು ಮತ್ತೊಮ್ಮೆ ದರ್ಶನ ಮಾಡಿ, ಅಭಿಷೇಕ ಮಾಡಿಸಿಕೊಂಡು ಪಂಪಾಗೆ ಇಳಿದು ಅಲ್ಲಿಂದ ಬಸ್ ಹಿಡಿದು ಚೆಂಗನೂರು ತಲುಪಿ ಮಧ್ಯಾಹ್ನ 3.30ಕ್ಕೆ ರೈಲು ಹತ್ತಿ ಕುಳಿತರೆ ನಾಳೆ ಮುಂಜಾನೆ 6.30ರ ಸುಮಾರಿಗೆ ಮೆಜೆಸ್ಟಿಕ್ ರೈಲ್ವೇ ನಿಲ್ದಾಣ ತಲುಪಬಹದು. ಮತ್ತೊಂದು ವಿಶೇಷವೆಂದರೆ, ಬೆಟ್ಟದಿಂದ ಇಳಿಯುವಾಗ ಕೆಲವರು ಗ್ಲೂಕೋಸ್ ಪುಡಿಯ ಪಾಕೆಟ್ ಹಿಡಿದು ಬರುತ್ತಿರುತ್ತಾರೆ, ಬೆಟ್ಟ ಹತ್ತುತ್ತಿರುವವರಿಗೆ ನೀಡಿ ಅವರಿಗೆ ಪ್ರೋತ್ಸಾಹಿಸುತ್ತಾರೆ. ಸಾಕಷ್ಟು ಭಕ್ತಾಧಿಗಳು ಅಲ್ಲಲ್ಲಿ ಕುಡಿಯುವ ನೀರನ್ನು ನೀಡುತ್ತಿರುತ್ತಾರೆ, ಉಚಿತ ಅನ್ನ ಸಂತರ್ಪಣೆಯನ್ನು ಮಾಡುತ್ತಾರೆ. ಇಡೀ ಶಬರಿಮಲೈನಲ್ಲಿ ಬಾಟಲಿ ನೀರಿಲ್ಲ. ಅಲ್ಲಲ್ಲಿಯೇ ಶುದ್ದೀಕರಿಸಿದ ನೀರಿನ ವ್ಯವಸ್ಥೆಯಿದೆ. ಬಯೋ ಟಾಯ್ಲೆಟ್‍ಗಳಿವೆ, ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿದೆ. ನಾನೊಬ್ಬ ಭಕ್ತನಾಗಿ ಅಲ್ಲದಿದ್ದರೂ ಒಬ್ಬ ಪರಿಸರ ವಿಜ್ಞಾನಿಯಾಗಿ ಗಮನಿಸುವ, ಕಲಿಯುವ ಸಾಕಷ್ಟು ಅಂಶಗಳು ನನಗೆ ದೊರೆತಿವೆ. 

ನಾವು ಯಾವುದನ್ನು ಅನುಭವಿಸುತ್ತೇವೆ ಅದರ ಬಗ್ಗೆ ಮಾತನಾಡಲು ಯೋಗ್ಯರಿರುತ್ತೇವೆ. ಅದನ್ನು ಅನುಭವಿಸದೇ ಹೊರಗಿನವರಾಗಿ ನಾವೆಷ್ಟೇ ಮಾತನಾಡಿದರೂ ಅನುಭವಿಸಿದಂತಾಗುವುದಿಲ್ಲ. ಹೆತ್ತವಳಿಗೆ ಮಾತ್ರ ಹೆರಿಗೆ ನೋವು ತಿಳಿದಿರುತ್ತದೆ. ದೂರದಿಂದ ನಾವೆಷ್ಟೆ ಮಾತನಾಡಿದರು ಅದು ಅನುಭವಕ್ಕೆ ಬರುವುದಿಲ್ಲ. ನಾನು ಶಬರಿಮಲೈಗೆ ಹೋಗುವುದಕ್ಕೆ ಶುರು ಮಾಡಿದ್ದು ಇದೇ ಉದ್ದೇಶಕ್ಕಾಗಿ, ಆ ಅನುಭವ ನನಗೆ ಬೇಕೆಂದು. ಅದು ಹೇಗೆ, ಮುಂಜಾನೆ ನಾಲ್ಕಕ್ಕೆ ಎದ್ದು ಕೊರೆಯುವ ಚಳಿಯಲ್ಲಿ ತಣ್ಣೀರ ಸ್ನಾನ, ಭಜನೆ, ಬರಿಗಾಲಲ್ಲಿ ನಡೆಯುವುದು. ಇದೆಲ್ಲವೂ ನನಗೆ ಕೌತುಕತ ಪ್ರಶ್ನೆಯಾಗಿತ್ತು. ಅದಕ್ಕೂ ಹಿಂದೆ ನಾವು ಶಬರಿಮಲೈಗೆ ಹೋಗುವವರನ್ನು ಬೈದಿದ್ದೆ, ದೂರಿದ್ದೆ, ಈಗ ನಾನೇ ಹೋದರೇ? ನನ್ನನ್ನು ಅಣಕಿಸುವುದಿಲ್ಲವೇ? ಅದೇ ಜೀವನ. ಕೆಲವರು ಯಾವತ್ತೋ ಏನೋ ಹೇಳಿದ್ದಕ್ಕೆ ಗಂಟುಬಿದ್ದು ಜೀವನವನ್ನೆ ಸವೆಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರನ್ನು ನೋಡುವಾಗ ಬಹಳ ನೋವಾಗುತ್ತದೆ. ರಾಹುಲ್ ಗಾಂಧಿಯನ್ನು ಅವರ ಮುಂದಿನ ಪ್ರಧಾನ ಮಂತ್ರಿಯೆಂದು ಒಪ್ಪಿಕೊಳ್ಳುವುದಕ್ಕೆ ಅದೆಷ್ಟು ಕಷ್ಟವಲ್ಲವೇ? ಆದರೇ, ಅವರು ಆ ಪಕ್ಷದಿಂದ ಹೊರಬರಲಾಗದೇ ಒದ್ದಾಡುತ್ತಿದ್ದಾರೆ. ನನಗೆ ಈ ರಾಜಕೀಯದ ಅದರಲ್ಲಿಯೂ ಕಾರ್ಯಕರ್ತರನ್ನು ನೋಡುವಾಗ ಕನಿಕರವುಂಟಾಗುತ್ತದೆ. ನೀವು ಸೂಕ್ಷ್ಮವಾಗಿ ಗಮನಿಸಿ, ಒಂದು ಹಳ್ಳಿಯಲ್ಲಿ ನಾಲ್ಕೈದು ಜನರು ಮಾತ್ರ ಅಲ್ಪ ಸ್ವಲ್ಪ ದುಡ್ಡು ಕಾಸು ಮಾಡಿಕೊಳ್ಳುತ್ತಾರೆ. ಮಿಕ್ಕಿದವರು ಪಕ್ಷ, ಪಕ್ಷ ಅಂತಾ ಸಾಯುತ್ತಾರೆ. ಇದೆಲ್ಲವೂ ಈ ಮೇಲಿನ ಸಾಲಿಗೆ ಸೇರುವ ಉದಾಹರಣೆಗಳು. ಬದಲಾವಣೆಗೆ ಸಿದ್ದವಿರುವುದಿಲ್ಲ. ಬದಲಾವಣೆ, ವಿಕಸನ ಯಾವತ್ತಿಗೂ ಸುಲಭದ ಹಾದಿಯಲ್ಲ. ಅದೊಂದು ರೀತಿಯ ಗರಗಸದ ಮೇಲೆ ನಡೆಯುವ ಸಾಹಸ. ನಿಮ್ಮನ್ನು ನೀವು ಕೊಯ್ಯ್ದುಕೊಳ್ಳಲು ಸಿದ್ದರಿರಬೇಕು. ಅದಕ್ಕೆ ನಾನೆಂದಿಗೂ ಸಿದ್ದನಾಗಿರುತ್ತೇನೆ. ಬದಲಾವಣೆ, ವಿಕಸನವಾಗಬೇಕು, ನಾವು ಅದನ್ನು ಒಪ್ಪುತ್ತಾ ಮುಂದೆ ಸಾಗಬೇಕು. ಈ ವಿಷಯದಲ್ಲಿಯೇ ನನಗೆ ಗಾಂಧೀಜಿ ಮಾದರಿಯಾಗುವುದು. ಅವರು ಜೀವನ ಕಳೆದಂತೆ ಬದಲಾಗುತ್ತಾ ಹೋದರು, ಅನುಭವಿಸುತ್ತಾ ವಿಕಸನಗೊಂಡರು. ಯಾವುದೋ ಒಂದು ಸಿದ್ದಾಂತಕ್ಕೆ ಅಂಟಿಕೊಳ್ಳಲಿಲ್ಲ. ಮಾರ್ಗ ಮಾತ್ರವೇ ಮುಖ್ಯವಾದದ್ದು, ಅದು ಸತ್ಯಾನ್ವೇಷಣೆ. ನಾನು ಈಗಲೂ ಅಷ್ಟೆ, ಇದನ್ನು ಹೀಗೆಯೇ ಮುಂದುವರೆಸುತ್ತೇನೆಂಬ ನಂಬಿಕೆಯಲ್ಲ, ಮುಂದೊಂದು ದಿನ ಸಾಕೆನಿಸಿದರೆ ನಿಲ್ಲಿಸಲು ಬಹುದು. ನಾನು ಯಾವುದಕ್ಕೂ ಅಂಟಿಕೊಂಡವನಲ್ಲ, ಅಂಟಿಕೊಳ್ಳುವುದೂ ಇಲ್ಲ. 

ದೇವರ ದಿಂಡಿರ ಪಾಪ ಪುಣ್ಯದ ವಿಷಯ ಕುರಿತು ನಾಲ್ಕು ಸಾಲುಗಳನ್ನು ಬರೆದುಬಿಡುತ್ತೇನೆ. ನಿಮಗೆ ಪಾಪ ಪುಣ್ಯದ ಕಲ್ಪನೆಯನ್ನು ಕೊಡದೇ ಇದ್ದಿದ್ದರೆ ಈ ಜನರು ಭಯದಿಂದ ಬದುಕುತ್ತಿರಲಿಲ್ಲ. ಪ್ರೀತಿ ಹರಡಲು ವರ್ಷಗಳು ಬೇಕು. ಭಯ ಹರಡಲು ಕ್ಷಣ ಸಾಕು. ದೇವರು ಇದ್ದಾನೆ, ಇಲ್ಲವೆನ್ನುವುದು ಇಲ್ಲಿ ಅವಶ್ಯಕತೆಯಲ್ಲ. ಆದರೆ, ಜನರು ಒಂದು ನಿಯಮವಾಗಿ ಬದುಕಬೇಕೆಂದರೆ ಇವುಗಳನ್ನು ಹಾಕಲೇಬೇಕಾದ ಅನಿವಾರ್ಯತೆಯಿದೆ. ಕಾನೂನು ಎಲ್ಲವನ್ನು ಕಾಪಾಡಲಾಗುವುದಿಲ್ಲ. ಯಾವುದೇ ಹೆಣ್ಣು ನಿನ್ನ ತಂಗಿಯಂತೆ, ತಾಯಿಯಂತೆ ಎಂದು ತಲೆಗೆ ತುಂಬುವುದು ಕೆಲಸ ಮಾಡುವಷ್ಟು ಹೆಣ್ಣಿಗೆ ಕಿರುಕುಳ ಕೊಟ್ಟರೆ ಜೈಲಿಗೆ ಹೋಗುತ್ತೀಯಾ ಎನ್ನುವುದು ಕೆಲಸ ಮಾಡುವುದಿಲ್ಲ ಇದು ನನ್ನ ನಂಬಿಕೆ. 

ಕೊನೆಯದಾಗಿ, ದೇವಸ್ಥಾನಗಳಲ್ಲಿ ನಮ್ಮ ಜನರು ನಡೆದುಕೊಳ್ಳುವುದರ ಕುರಿತು ನಾನು ಇಲ್ಲಿ ವಿವರವಾಗಿ ಬರೆಯುತ್ತಿದ್ದೇನೆ. ಇದು ಸಂಪೂರ್ಣವಾಗಿ ನನ್ನನುಭವ. ನೂರಾರು ಕಿಲೋಮೀಟರುಗಳಿಂದ ದೇವಸ್ಥಾನಗಳಿಗೆ ಬರುತ್ತಾರೆ, ಅದು ಯಾವುದೇ ದೇವಸ್ಥಾನವಿರಲಿ. ಆದರೆ, ಅಲ್ಲಿ ಅರ್ಧ ತಾಸು ಸಾಲಿನಲ್ಲಿ ನಿಂತಾಗ ಮುನ್ನುಗ್ಗಲು ಪ್ರಯತ್ನಿಸುತ್ತಾರೆ, ಜಗಳಕ್ಕೆ ಬೀಳುತ್ತಾರೆ, ಅರಚಾಡುತ್ತಾರೆ, ಕಿರುಚಾಡುತ್ತಾರೆ. ದೇವರ ಸಾನಿಧ್ಯಕ್ಕೆ ಅಥವಾ ಗರ್ಭಗುಡಿಯ ಬಳಿಗೆ ಬರುತ್ತಾರೆ, ನೂಕಾಡಿ/ತಳ್ಳಾಡಿ ಸರಿಯಾಗಿ ದೇವರ ವಿಗ್ರಹವನ್ನು ನೋಡದೆ ಹೊರಕ್ಕೆ ಬರುತ್ತಾರೆ. ದೇವರ ಮುಂದೆ ಬಂದು ನಿಂತಾಗ ಕಣ್ಣು ಮುಚ್ಚುತ್ತಾರೆ. ನಾನು ಶಬರಿ ಮಲೈಗೆ ಹೋದಾಗಲೂ ಅಷ್ಟೆ, ಪಂಪಾ ನದಿಯಲ್ಲಿ ಸ್ನಾನ ಮಾಡಿ ಉಪಯೋಗಿಸಿದ ಬಟ್ಟೆಯನ್ನು, ಬಾಕಿ ಉಳಿದ ಸೋಪು, ಶಾಂಪೂ ಇತರೆ ವಸ್ತುಗಳನ್ನು ನದಿಗೆ ಬಿಟ್ಟು ಮಲೀನ ಮಾಡುತ್ತಾರೆ. ಮಾಲೆ ಹಾಕಿದಾಗಲೂ ಕೆಲವರು ಅಂಗಡಿಯವರಿಗೆ ಮೋಸ ಮಾಡಿ ಬರುವುದನ್ನು ನಾನು ಕಂಡಿದ್ದೇನೆ. ಅಲ್ಲಲ್ಲಿಯೇ ಶೌಚಾಲಯಗಳಿದ್ದರೂ ದಾರಿ ಬದಿಯಲ್ಲಿಯೇ ಶೌಚಾ ಮಾಡುವವರನ್ನು ಕೆಲವೊಮ್ಮೆ ನಾನೆ ಗದರಿಸಿರುವುದುಂಟು. 

ಉಪಸಂಹಾರವೆನ್ನುವುದಾದರೇ, ನೀವು ಯಾವುದನ್ನು ಮಾಡಿದರೂ ನಿಷ್ಟೆಯಿಂದ ನಿಮ್ಮ ಸ್ವಂತ ಮನಸ್ಸಿನಾಳದ ಪ್ರೀತಿಯಿಂದ ಮಾಡಬೇಕು. ಭಕ್ತಿಯೆನ್ನುವುದು ಪ್ರೀತಿಯ ಇನ್ನೊಂದು ಭಾವನೆ. ವಿಗ್ರಹವೋ, ಧೈವವೋ, ವ್ಯಕ್ತಿಯೋ ಮುಖ್ಯವಲ್ಲ ನಿಮ್ಮ ಮನಸ್ಸಿಗೆ ನೆಮ್ಮದಿ ಮುಖ್ಯ. ನೀವು ಕೇದಾರನಾಥಕ್ಕೆ ಹೋದರೂ ನಿಮ್ಮ ಮನಸ್ಸಿನೊಳಗೆ ಕಲ್ಮಶವಿದ್ದರೆ ಏನೂ ಮಾಡಲಾಗುವುದಿಲ್ಲ. ಆದರೇ, ಎಲ್ಲವನ್ನೂ ಅನುಭವಿಸಲು ಪ್ರಯತ್ತಿಸಬಹುದು. ಹಿಡಿಸದೇ ಇದ್ದರೆ ಕಿತ್ತೆಸೆದು ಹೋಗಲು ಸಿದ್ದರಾಗಿರಬೇಕು. 

07 ಫೆಬ್ರವರಿ 2018

ಜೀವನದ ಸಂತಸದ ಪಯಣದಲ್ಲಿ ಕನಸುಗಳು ಮತ್ತು ಮೌಲ್ಯಗಳು: ನನ್ನನುಭವ


ನಮಸ್ಕಾರ ಸ್ನೇಹಿತರೆ,
ಈ ಲೇಖನ ಬಹಳ ಉದ್ದವಾಗಿದೆ, ಅದನ್ನು ಎಡಿಟ್ ಮಾಡುವ ಮನಸ್ಸು ಬರಲಿಲ್ಲ, ಆದ್ದರಿಂದ ದಯವಿಟ್ಟು ಅನುಸರಿಸಿಕೊಂಡು ಸಮಯಕೊಂಡು ನಿರಾಳವಾಗಿ ಓದಿ ಮತ್ತು ನಿಮಗೆ ಇಷ್ಟವಾದರೂ ಅಥವಾ ಇಷ್ಟವಾಗದೇ ಇದ್ದರೂ ಬೇರೆಯವರೊಂದಿಗೆ ಹಂಚಿಕೊಳ್ಳಿ. ಉತ್ತಮ ಸಮಾಜ ನಿರ್ಮಾಣ ನಮ್ಮ ನಿಮ್ಮ ಗುರಿ.


ಸಾಕಷ್ಟು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದ್ದಿದರೂ ನನ್ನ ಸೋಮಾರಿತನ ಬರೆಯುವುದನ್ನು ತಡೆಯುತ್ತದೆ. ಒಮ್ಮೊಮ್ಮೆ ನಿನ್ನ ಬರಹವನ್ನು ಯಾರು ಓದುತ್ತಾರೆಂದು ಇಷ್ಟು ಗಂಬೀರವಾಗಿ ಬರೆಯುತ್ತೀಯಾ ಎಂದು ತಲೆಯೊಳಗಿರುವ ಮೂನ್ನೂರು ಗ್ರಾಂ ಮಾಂಸದ ಯಾವುದೋ ನರ ಕೇಳುತ್ತದೆ. ಯಾರೇಕೆ ಓದಬೇಕು, ನಾನು ಹೇಳುವುದನ್ನ ನಾನು ಹೇಳಬೇಕು, ಒಪ್ಪುವುದು ಬಿಡುವುದು ಅವರಿಗೆ ಸೇರಿದ್ದು, ಅಂಗಡಿಗೆ ಹೋದವರೆಲ್ಲರೂ ಎಲ್ಲವನ್ನು ಕೊಂಡು ತರುತ್ತಾರಾ? ಹಾಗೆಂದು ಅಂಗಡಿಯವನು ತೋರಿಸದೆ ಇರುತ್ತಾನಾ? ನಮ್ಮಲ್ಲಿರುವ ಐಡಿಯಾಗಳನ್ನು, ಐಡಿಯಾಲಜಿಯನ್ನ ಮಣ್ಣಾಗುವ ಮುನ್ನ ಚಿನ್ನವಿರುವವರ ತಲೆಗೋ ಅಥವಾ ಹೃದಯಕ್ಕೋ ಅರ್ಪಿಸಬೇಕು, ಅವರು ಅದನ್ನು ಬೆಳೆಸುತ್ತಾ ಹೋಗುತ್ತಾರೆ. ಪಿಠಿಕೆ ಹೆಚ್ಚಾಯಿತು ಅಥವಾ ಗೊಂದಲಗಳು ಶುರುವಾಯಿತು ನಿಮಗೆ. ಗೊಂದಲಗಳು ಎಂದಾಕ್ಷಣ ಒಂದು ಮಾತು ನಿಮಗೆ ಹೇಳಬೇಕು, ನಾನು ಬಹಳ ಗೊಂದಲದಲ್ಲಿದ್ದೀನಿ ಎನ್ನುತ್ತಾರೆ. ಅದು ಹೇಗೆ ಗೊಂದಲದಲ್ಲಿರುವವನಿಗೆ ತಾನು ಗೊಂದಲದಲ್ಲಿದ್ದೀನಿ ಎಂದು ತಿಳಿಯುತ್ತದೆ? ಗೊಂದಲಮಯ ಎಂದರೇನು? ಏನು ತೋಚದ ಪರಿಸ್ಥಿತಿ ಅಲ್ವಾ? ಇರಲಿ ಮುಂದಕ್ಕೆ ಹೋಗೋಣ.

ನಾನು ನಿನ್ನೆಯ ದಿವಸ ತರಿಕೆರೆ ತಾಲ್ಲೂಕಿನ ಹಾದಿಕೆರೆ ಸರ್ಕಾರಿ ಪ್ರೌಢಶಾಲೆಗೆ ಹೋಗಿದ್ದೆ. ಅಲ್ಲಿನ ಮುಖ್ಯ ಶಿಕ್ಷಕ ಗಿರೀಶ್ ಸರ್ ಬಹಳ ಹೃದಯವಂತ, ನಿಷ್ಠಾವಂತ, ಶ್ರಮ ಜೀವಿ, ಪ್ರಾಮಾಣಿಕ, ನುಡಿದಂತೆ ನಡೆಯುವ, ನಡೆಯುವಂತೆ ನುಡಿಯುವ ವ್ಯಕ್ತಿತ್ವ, ಸ್ನೇಹ ಜೀವಿ, ಸರಳತೆ, ಹೀಗೆ ಯಾವೆಲ್ಲಾ ಒಳ್ಳೆಯ ಪದಗಳನ್ನು ಬಳಸಬಹುದೋ ಅದಕ್ಕೆಲ್ಲ ಅವರ ಗುಣಗಳು ಒಗ್ಗುತ್ತವೆ. ನಾನು ಇಲ್ಲಿಯವರೆಗೆ ಕಂಡಿರುವ ಮುಖ್ಯ ಶಿಕ್ಷಕರಲ್ಲಿ ಅಗ್ರ ಗಣ್ಯರು, ಇದರಲ್ಲಿ ಅತಿಶಯೋಕ್ತಿ ಇಲ್ಲ. ಅವರೊಂದಿಗೆ ನಡೆದ ಕೆಲವು ಚರ್ಚೆ ಮತ್ತು ಸಂವಾದವನ್ನು ಮಾತ್ರ ಇಲ್ಲಿ ಬರೆಯುತ್ತೇನೆ. ಅವರನ್ನು ಹೊಗಳುವುದು ಸುಲಭ, ನೀವುಗಳು ಅದನ್ನು ಇಲ್ಲಿ ಓದಿ ವಾಹ್ ಎಂದು ಇಲ್ಲಿಗೆ ಬಿಡುವುದು ಬೇಡ. ಕುತೂಹಲವಿದ್ದರೇ ನೇರವಾಗಿ ಅವರನ್ನೆ ಸಂಪರ್ಕಿಸಿ, ಶಾಲೆಗೆ ಭೇಟಿ ನೀಡಿ, ಮಾತನಾಡಿ, ಅದ್ಭುತವಾದ ಶಾಲೆ, ಉತ್ತಮ ಪರಿಸರದೊಳಗಿರುವ ಶಾಲೆ, ಮತ್ತು ಬಹಳ ಬೌದ್ಧಿಕ ಗುಣಮಟ್ಟವಿರುವ ಶಿಕ್ಷಕಿಯರು ಇರುವ ಶಾಲೆ, ನನಗೆ ಹೆಣ್ಣು ಮಕ್ಕಳು ಹೆಚ್ಚು ಚರ್ಚೆ ಮಾಡಿದರೆ ಬಹಳ ಸಂತೋಷವಾಗುತ್ತದೆ, ಅದು ಹೆಣ್ಣು ಮಗುವಿನ ತಂದೆ ಎನ್ನುವ ಕಾರಣಕ್ಕೂ ಇರಬಹುದು, ಆದ್ದರಿಂದ ನೀವೇ ಒಮ್ಮೆ ಭೇಟಿ ನೀಡಿ, ಒಂದು ಪಿಕ್ನಿಕ್ ಆದರೂ ಆಗಬಹುದು. ನಾವು ಆ ದಿನ ಚರ್ಚೆ ಮಾಡಿದ ಪ್ರಮುಖ ವಿಷಯಗಳು ಮತ್ತು ಗಿರೀಶ್ ಸರ್ ಅವರ ಪ್ರಮುಖ ಪ್ರಶ್ನೆ ಅಥವಾ ಅನಿಸಿಕೆ, ಸರ್, ನೀವು ನಿಮ್ಮ ಜೀವನವನ್ನು ನೋಡುವ ರೀತಿ ನನಗೆ ಬಹಳ ಇಷ್ಟವಾಯಿತು. ಎಂದು. ಆ ಹಿನ್ನಲೆಯನ್ನು ಇಟ್ಟಿಕೊಂಡು ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಈ ಬರವಣಿಗೆಯಲ್ಲಿ ನೀವು ಗಮನಿಸಬೇಕಾಗಿರುವ ಎರಡು ಪ್ರಮುಖ ಅಂಶಗಳು, ನನ್ನ ಅನಿಸಿಕೆಯಲ್ಲಿ ಜೀವನವನ್ನು ಹೇಗೆ ನೋಡುತ್ತೇನೆ ಅಥವಾ ವಿವರಿಸುತ್ತೇನೆ ಮತ್ತು ನನ್ನ ಜೀವನದಲ್ಲಿ ಅದರ ಅಳವಡಿಕೆಯೆಷ್ಟಿದೆ? ಅದಕ್ಕಿರುವ ಉದಾಹರಣೆಗಳು ಮತ್ತು ನಿದರ್ಶನಗಳೇನು? ಅದಕ್ಕಾಗಿಯೇ ನಾನು ನನ್ನ ದೃಷ್ಟಿಕೋನವನ್ನು ಮೊದಲು ಹೇಳುತ್ತಾ ಹೋಗಿ ನಂತರ ಆ ಹಾದಿಯಲ್ಲಿ ನಾನು ನಡೆದಿರುವ, ನಡೆಯುತ್ತಿರುವ ಅಥವಾ ಮುಂದೆ ನಡೆಯುವ ಹೆಜ್ಜೆಗಳನ್ನು ತೋರಿಸುತ್ತಿದ್ದೇನೆ. ಇದೆಲ್ಲವೂ ರಾತ್ರೋ ರಾತ್ರಿ ಆಗಿರುವುದಲ್ಲವೆನ್ನುವುದನ್ನು ಗಮನದಲ್ಲಿಟ್ಟು ಓದಬೇಕು.

ಸಾಕಷ್ಟು ಜನರು ವ್ಯಕ್ತಿತ್ವ ವಿಕಸನದ ಕುರಿತು ಭಾಷಣಗಳ ಮೇಲೆ ಭಾಷಣವನ್ನು ಮಾಡುತ್ತಾರೆ, ಕೆಲವು ಸಂಸ್ಥೆಗಳು ಕೋಟ್ಯಾಂತರ ದುಡಿದಿದ್ದಾರೆ, ಯಾರ ವ್ಯಕ್ತಿತ್ವ ವಿಕಸನವೂ ಆಗಿಲ್ಲ, ಅಬಿವೃದ್ಧಿಯೂ ಆಗಿಲ್ಲ. ಯಶಸ್ಸಿನ ಗುಟ್ಟುಗಳು, ಸಾಧನೆಗೆ ಹತ್ತು ಹಂತಗಳು, ಹೀಗೆ ಉತ್ತಮ ಸಂಸಾರಕ್ಕೆ ಹನ್ನೆರಡು ಸೂತ್ರಗಳು, ಯಾವುದಿಲ್ಲ, ಎಲಾ ಶೀರ್ಷಿಕೆಗಳು ಇವೆ. ಆದರೆ, ಅವುಗಳಿಂದಾಗಿರುವ ಬದಲಾವಣೆಗಳು ಅಷ್ಟಕ್ಕಷ್ಟೆ. ಅವುಗಳೆಲ್ಲವೂ ಸಿನೆಮಾ ನೋಡಿದ ಎರಡು ದಿನಗಳು ಅಥವಾ ಹೊಸ ವರ್ಷದ ಅವಿಷ್ಕಾರಗಳೆಂದರೂ ತಪ್ಪಿಲ್ಲ. ತಾತ್ಕಾಲಿಕ ಬದಲಾವಣೆಗಳು, ಬೆಳವಣಿಗೆಗಳು ಎಲ್ಲಿಗೂ ಕೊಂಡೊಯ್ಯಲಾರವು. ಇನ್ಯಾವ ವಿಷಯಗಳು ನಮ್ಮನ್ನು ದೂರಕ್ಕೆ ಕರೆದೊಯ್ಯಬಹುದು? ಅಂದರೆ, ವ್ಯಕ್ತಿತ್ವ ವಿಕಸನದ ಹೆಜ್ಜೆಗಳಾವು? ಎಲ್ಲಿಂದ ಶುರು ಮಾಡಬೇಕಾಗಬಹುದು? ಹೇಗೆ ಗುರುತಿಸಿಕೊಳ್ಳುವುದು? ಇವೆಲ್ಲ ಪ್ರಶ್ನೆಗಳಿಗೆ ಜೊತೆಯಾಗಿಯೇ ಉತ್ತರ ಹುಡುಕುತ್ತಾ ಹೋಗೋಣ. ನನ್ನ ಮಾತೇ ಸತ್ಯವೆನ್ನುವ ಉಮೇದು ನನಗಿಲ್ಲ. ನಿಮ್ಮ ಅನಿಸಿಕೆ ಅಬಿಪ್ರಾಯಗಳು ಸೇರಲಿ. 

ಮೊದಲನೆಯದಾಗಿ, ಜೀವನವನ್ನು ನೋಡುವ ರೀತಿ ಅಥವಾ ಅನುಭವಿಸುವ ರೀತಿಯ ಕುರಿತು ಮಾತನಾಡೋಣ. ಪ್ರತಿಯೊಬ್ಬ ಮನುಷ್ಯನು ವಿಶ್ವ ಮಾನವನಾಗಿ ಹುಟ್ಟುತ್ತಾನೆ. ವಿಶ್ವಮಾನವ ಎಂದರೇನು? ಅವನಿಗೆ ಯಾವ ಗಡಿಯಿಲ್ಲ, ಅಂಕೆ ಶಂಕೆಯಿಲ್ಲ, ವಿಶ್ವವೇ ಅವನ ಮನೆ, ವಿಶ್ವವೇ ಅವನ ಕುಟುಂಬ, ಯಾರ ಹಂಗಿಲ್ಲ, ಯಾವುದರ ಅಂಟು ಇಲ್ಲ. ಹುಟ್ಟುವಾಗ ಅವನಿಗೆ ಏನೂ ಇರುವುದಿಲ್ಲ, ಹೆಸರಿಲ್ಲ, ಧರ್ಮವಿಲ್ಲ, ಜಾತಿಯಿಲ್ಲ, ಕುಲವಿಲ್ಲ, ದೇಶವಿಲ್ಲ, ಭಾಷೆಯಿಲ್ಲ, ಅಷ್ಟೆಲ್ಲ ಏಕೆ ಲಿಂಗವೆಂಬುದಿರುವುದಿಲ್ಲ. ಲಿಂಗವಿರುವುದಿಲ್ಲವಾ? ಮಗುವಿಗಿರುವ ಮರ್ಮಾಂಗ? ಅದು ಒಂದು ದೇಹಕ್ಕಿರಬೇಕಾದ ಒಂದು ಅಂಗ ಅಷ್ಟೆ, ಅದನ್ನ ನಾವು ಗುಪ್ತಾಂಗ ಅಂತಾ ಮಾಡಿದ್ದೀವಿ. ಮಾಡಿದ್ದೀವಿ? ಇಲ್ಲಾ ಹಾಗೆಂದು ತೀರ್ಮಾನಿಸಿದ್ದೇವೆ. ಏನೂ ಇಲ್ಲದೇ ಹುಟ್ಟಿದ ಮಗುವಿಗೆ, ನಾವು ಎಲ್ಲವನ್ನೂ ಸೇರಿಸುತ್ತೇವೆ. ಅದಕ್ಕೊಂದು ಲಿಂಗ-ಹೆಣ್ಣು ಗಂಡು, ಹೆಸರು, ಜಾತಿ, ಕುಲ, ಗೋತ್ರಾ, ಊರು, ತಂದೆಯ ಹೆಸರು, ತಾಯಿಯ ಹೆಸರು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಾವು ಅಲ್ಲಿಗೆ ನಿಲ್ಲುವುದಿಲ್ಲ. 
ಅವನ ಗುಣಗಳನ್ನು ಕಟ್ಟಿಕೊಡುವುದಕ್ಕೆ ಶುರು ಮಾಡುತ್ತೇವೆ ಮತ್ತು ಅದೇ ಅವನ ವ್ಯಕ್ತಿತ್ವವೆಂದು ನಂಬಿಸುತ್ತೇವೆ. ಇವನು/ಳು ಅವರ ಅಪ್ಪನ ಹಾಗೆ, ಅಮ್ಮನ, ಹಾಗೆ, ಅಜ್ಜಿ, ತಾತ ಎಲ್ಲರಿಗೂ ಹೋಲಿಕೆ ಮಾಡುತ್ತೇವೆ. ಇವನು ಮಲಗುವುದು ಥೇಟ್ ಅವರ ಅಜ್ಜನ ತರಾನೇ.. ದೈಹಿಕವಾಗಿ ಮಾತ್ರವಲ್ಲ ಗುಣ ನಡತೆಗಳನ್ನು ಕೂಡ ನಾವೇ ಆ ಮಗುವಿಗೆ ಕಟ್ಟಿಕೊಡುತ್ತೇವೆ. ಅದು ಎಷ್ಟರ ಮಟ್ಟಿಗೆ ಎಂದರೆ, ಅವರಪ್ಪನೂ ಹೀಗೆ ಕುಡುಕ, ಅವರಪ್ಪನೂ ಹೀಗೆ ದುಷ್ಠ, ಅವರಮ್ಮನೂ ಹೀಗೆ ಬಹಳ ಹೃದಯವಂತೆ. ಒಳ್ಳೆಯದೋ ಕೆಟ್ಟದ್ದೋ ಅಂತೂ ಅವನಿಗೊಂದು ಠಸ್ಸೆ ಹಾಕುತ್ತೇವೆ. ಈ ವ್ಯಕ್ತಿತ್ವದ ಕುರಿತು ಇರುವ ಇನ್ನಷ್ಟು ವಿಷಯಗಳನ್ನು ಚರ್ಚಿಸೋಣ. ಕೆಲವು ಗಾದೆ ಮಾತುಗಳನ್ನು ಇಟ್ಟುಕೊಂಡು ಕೆಲವರ ವ್ಯಕ್ತಿತ್ವವನ್ನು ಕಟ್ಟುವುದು. ಬೆಳೆಯುವ ಸಿರಿ ಮೊಳಕೆಯಲ್ಲಿ. ನನಗೆ ಗೊತ್ತಿತ್ತು ಇವನು ಹೀಗೆ ಆಗುತ್ತಾನೆಂದು. 

ಮಗು ಮೂರನೇಯ ವಯಸ್ಸಿಗೆ ಬಂದಂತೆಯೇ ಅದಕ್ಕೊಂದು ಲೇಬಲ್ ಹಾಕುವುದು. ಇವನಿಗೆ ಸಂಗೀತ ಅಂದ್ರೇ ಇಷ್ಟ, ಇವನು ಸ್ವಲ್ಪ ದಡ್ಡ, ಇವನು ಬಹಳ ಬುದ್ದಿವಂತ, ಚುರುಕಿಲ್ಲ, ಬಹಳ ಚುರುಕು, ಖದೀಮ, ನಿಷ್ಠಾವಂತ, ಪ್ರಾಮಾಣಿಕ ಅಂತಾ. ಕೇವಲ ಹತ್ತು ವರ್ಷದ ಮಗುವಿಗೆ ನಾವು ಹೇಳುವುದು ಇವನನ್ನ ನಂಬೋಕೆ ಆಗಲ್ಲ ಅಂತಾ. ಆ ಮಗು ನನ್ನನ್ನು ಹೇಗೂ ನಂಬುವುದಿಲ್ಲ ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕೆಂದು ತೀರ್ಮಾನಿಸುತ್ತದೆ. ಅದರಂತೆಯೇ ಬೆಳೆಯುತ್ತದೆ ಮತ್ತು ನಿಮ್ಮ ಮಾತು ಸತ್ಯವೆಂದು ನೀವು ಭ್ರಮಿಸುತ್ತೀರಿ ಆ ಮಗುವೂ ನಂಬುತ್ತದೆ. ಒಂದು ವ್ಯಕ್ತಿತ್ವ ಒಂದು ದಿನದ ಬೆಳವಣಿಗೆಯಲ್ಲಾ ಸ್ನೇಹಿತರೇ. ಅದೊಂದು ನಿರಂತರ ಹಾದಿ. ಕೆಲವರು ಅದನ್ನು ಹೇಗಿರಬೇಕೆಂದು ತೀರ್ಮಾನಿಸಿ ಹೋಗುತ್ತಾರೆ ಕೆಲವರು ಗೊತ್ತು ಗುರಿಯಿಲ್ಲದೆ ಸಾಗುತ್ತಾರೆ. ಕೆಲವರು ನಾನು ಮುಂಗೋಪಿಯೆಂದು ಬದುಕುತ್ತಿರುತ್ತಾರೆ, ಅದನ್ನು ಅವರ ಅಸುಪಾಸಿನವರು ಬಹಳ ಸತ್ಯವೆನ್ನುವಂತೆ ಹೌದೌದು ಇವರಿಗೆ ಕೋಪ ಬಂದರೆ ಅಷ್ಟೆ ಅಥವಾ ಇವರು ಸಣ್ಣಪುಟ್ಟದ್ದಕ್ಕೂ ಕೋಪ ಮಾಡ್ಕೋತಾರೆ ಎನ್ನುತ್ತಾರೆ. ಒಬ್ಬ ವ್ಯಕ್ತಿ ಹುಟ್ಟಿದಾಗಿನಿಂದ ಸಾಯುವ ತನಕ ಒಂದೇ ರೀತಿಯಿರುವುದಾದರೆ ಅವನು ಹುಟ್ಟಿದ ದಿನವೇ ಸಾಯಬಹುದಿತ್ತು ಅಥವಾ ನಾನು ಇಂತಹ ವ್ಯಕ್ತಿಯೆಂದು ತೀರ್ಮಾನಿಸಿದ ದಿನವೇ ಸಾಯಬಹುದಿತ್ತು, ಐವತ್ತು ಅರವತ್ತು ವರ್ಷ ಬದುಕುವ ಸಾಹಸವೇಕೆ ಬೇಕಿತ್ತು. ಶಾಲೆಯ ಆವರಣದಲ್ಲಿ ಹೇಳುವುದಾದರೇ ಹತ್ತನೆಯ ತರಗತಿಯ ಫಲಿತಾಂಶವನ್ನು ಒಂಬತ್ತನೆಯ ತರಗತಿಯಲ್ಲಿರುವಾಗಲೇ ತೀರ್ಮಾನಿಸಿರುತ್ತಾರೆ. ಈ ವರ್ಷ ಬ್ಯಾಚ್ ಪರವಾಗಿಲ್ಲ ಆದರೆ ಮುಂದಿನ ವರ್ಷದ್ದೂ ಡೌಟ್. ಆ ತೀರ್ಮಾನ ಸತ್ಯವಾಗುವಂತೆ ನೋಡಿಕೊಳ್ಳುತ್ತಾರೆ. ಆ ಮಕ್ಕಳು ಅದನ್ನು ನಂಬಿ ಅದರಂತೆಯೇ ಆಗುತ್ತವೆ. ಇದು ಹೇಗೆ ಆಗುತ್ತದೆ ಎನ್ನುವುದನ್ನು ನನ್ನ ಬಳಿ ನೇರವಾಗಿ ಚರ್ಚಿಸಿ. ಮತ್ತೊಂದು ತಮಾಷೆಯ ವಿಚಾರವನ್ನು ನೋಡೊಣ.

          ಮತ್ತೊಂದು ತಮಾಷೆಯ ವಿಷಯ ಪೋಷಕರದ್ದು. ಅದರಲ್ಲಿಯೂ ಇಂದಿನ ಪೋಷಕರದ್ದು. ಪೋಷಕರು ಅವರ ಮಕ್ಕಳ ಮೇಲೆ ಒತ್ತಡ ಹಾಕುವುದಕ್ಕೆ ಶುರು ಮಾಡುತ್ತೇವೆ. ಆ ಒತ್ತಡ ಬಹಳ ಸೊಗಸಾಗಿರುತ್ತದೆ. ನನಗೆ ಓದಬೇಕೆಂಬ ಬಹಳ ಆಸೆಯಿತ್ತು ನಮ್ಮಪ್ಪ ಓದಿಸಲಿಲ್ಲ ಅದಕ್ಕೆ ಎಷ್ಟು ಕಷ್ಟ ಆದರೂ ಪರವಾಗಿಲ್ಲ ನನ್ನ ಮಕ್ಕಳನ್ನ ನಾನು ಚೆನ್ನಾಗಿ ಓದಿಸ್ತೀನಿ. ಇದ್ಯಾವ ಕರ್ಮ ಆ ಮಗುವಿಗೆ? ಪ್ರತಿಯೊಬ್ಬ ಮನುಷ್ಯನು ಹುಟ್ಟುವುದು ಅವನ ಜೀವನವನ್ನ ನಡೆಸುವುದಕ್ಕೆ, ಅವನ ಜೀವನ ಅಂದರೆ ಅವನ ಕನಸುಗಳು ಇರುತ್ತವೆ. ನಾನು ನನ್ನ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕೆ ಹೊರತು ನನ್ನ ತಂದೆಯ ಕನಸು, ನನ್ನ ತಾತನ ಕನಸು, ಹೀಗೆ ಎಲ್ಲರ ಕನಸ್ಸನ್ನು ನನಸು ಮಾಡಲು ನನಗೆ ದಶರಥನ ಆಯಸ್ಸಿದ್ಯಾ? ಮಕ್ಕಳು ಕೂಡ ನನ್ನ ತಂದೆಯ ಆಸೆ ಅದಕ್ಕೆ ಯಾಕೆ ತಣ್ಣೀರು ಎರಚಬೇಕೆಂದು ಒದ್ದಾಡಿ ಸಾಯುವ ಕಾಲದಲ್ಲಿ ಮಕ್ಕಳಿಗೆ ತನ್ನ ಆಸೆಗಳನ್ನು ಹೇಳಿ ಕಣ್ಣು ಮುಚ್ಚುತ್ತಾನೆ. ಹೀಗೆ ಪ್ರಿಮಿಯಂ ಮುಂದೂಡುತ್ತಾ ಹೋಗುತ್ತದೆ.

ನನ್ನದೇ ಅನಿಸಿಕೆಗಳನ್ನು ನಿಮ್ಮ ಮುಂದಿಡಬೇಕೆಂದರೆ, ಪ್ರತಿಯೊಬ್ಬ ಮನುಷ್ಯನು ತನ್ನ ಜೀವನವನ್ನ ಜೀವಿಸಬೇಕು. ಅನುಭವಿಸಬೇಕು. ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬಾರದು. ಎಲ್ಲರೂ ಒಂದೇ ಸಮನಾಗಿರಬೇಕೆನ್ನುವುದು ಸರಿಯಿಲ್ಲ. ಎಲ್ಲರೂ ಒಂದೇ ಸಮನಾಗಿರಬೇಕೆನ್ನುವುದು ನಿಯಮವಾಗಿದ್ದರೆ 730 ಕೋಟಿ ಜನರ ಅವಶ್ಯಕತೆಯಿರಲಿಲ್ಲ. ನಮಗೆ ಯಾವುದು ಇಷ್ಟವೋ ಅದನ್ನು ಮಾಡಬೇಕು ಆದರೆ ಅದು ಮಾನವೀಯತೆಯ ನೆಲೆಕಟ್ಟಿನಲ್ಲಿರಬೇಕು. ಮಾನವೀಯತೆಯೆಂದರೇನು? ನೆಲೆಕಟ್ಟು ಯಾವುದು? 

ಇಡೀ ವಿಶ್ವವೇ ನನ್ನ ಮನೆಯನ್ನುವ ಮನಸ್ಥಿತಿಗೆ ತಲುಪಬೇಕು. ಇದು ಸಾಧ್ಯವಾಗುವುದಾ? ಗೊತ್ತಿಲ್ಲ. ಆದರೆ ಚಿಂತನೆಯಲ್ಲಿ ತಪ್ಪೇನು? ಆ ಹಾದಿಯಲ್ಲಿ ನಡೆಯುವುದರಲ್ಲಿ ತಪ್ಪೇನು? ಗುರಿಯೆಂದರೆ ಅದಾಗಿರಬೇಕು, ಇಡೀ ಜಾಯಮಾನವನ್ನು ಸವೆಸಿದರೂ ತಲುಪಲಾರದ ಗುರಿಯಾಗಿರಬೇಕು. ಸವೆಸುವ ಹಾದಿಯನ್ನ ಆನಂದಿಸುವ ಮನಸ್ಸಿರಬೇಕು. ಕೆಲವು ಬಾರಿ ಹೋಗುವ ಊರಿಗಿಂತಲೂ ಆ ಊರಿನ ಹಾದಿ ಪುಲಕಗೊಳಿಸುತ್ತದೆ. ನಾನು ಈ ಕುರಿತು ಹಲವರಿಗೆ ಬೈದಿರುವುದು ಇದೆ. ಉದಾಹರಣೆಗೆ, ಧರ್ಮಸ್ಥಳ ಹೋಗುವವರು ರಾತ್ರಿ ವೇಳೆಯಲ್ಲಿ ಪ್ರಯಾಣ ಮಾಡುವುದು ನಿಮಗೆ ಆ ಶಿರಾಢಿ ಘಾಟಿನಲ್ಲಿ ಹೋಗುವುದೆ ಅದ್ಬುತ ಅನುಭವ, ಅದನ್ನು ಬಿಟ್ಟು ರಾತ್ರಿಯಲ್ಲಿ ಹೋಗಿ ಅಲ್ಲಿ ಉದ್ದ ಸಾಲಿನಲ್ಲಿ ನಿಂತು ಸರಿಯಾಗಿ ದೇವರ ದರ್ಶನವನ್ನು ಮಾಡದೇ, ಬೈದಾಡಿಕೊಂಡು ಬರುವುದು. ದೇವರನ್ನು ಗುಡಿಯಲ್ಲಿ ನೋಡುವಾಗ ಕಣ್ಮುಚ್ಚಿ ಬೇಡುವುದು. ನಾನೆಂದು ದೇವಸ್ಥಾನಗಳಲ್ಲಿ ಕಣ್ಮುಚ್ಚುವುದಿಲ್ಲ. ನಾವು ಹೋಗುವುದೇ ದೇವರ ವಿಗ್ರಹವನ್ನು ನೋಡಿ ಆನಂದಿಸಲು. ಒಮ್ಮೆ ನೀವು ದೇವರನ್ನು ನೋಡಿ ಆನಂದಿಸುವುದನ್ನು ಕಲಿಯಿರಿ, ಅದರಲ್ಲಿರುವ ಆನಂದವೇ ಬೇರೆ. ಬೇಡುವುದಲ್ಲ, ಭಕ್ತಿಯೂ ಅಲ್ಲ, ಅದೊಂದು ತೆರನಾದ ಬೇರೆಯದೇ ಅನುಭವ ನನಗೆ. ಹತ್ತು ವರ್ಷಗಳ ಹಿಂದೆ ಪೂಜೆಯೂ ಮಾಡದೇ ಇದ್ದವನು ನಾನು. ಇಂದೂ ಅಷ್ಟೆ, ನಾನು ನಿರಂತರ ಪೂಜೆ ಮಾಡುತ್ತೇನೆಂದಲ್ಲ, ನನಗೆ ಬೇಕಿನಿಸಿದರೆ ಮಾಡುತ್ತೇನಷ್ಟೆ. ಅದೆಲ್ಲವನ್ನು ಆನಂದಿಸಬೇಕು. ಮುಂದೊಂದು ದಿನ ನೀವು ಪೂಜೆಯೇ ಮಾಡದಿದ್ದರೆ ಪೂಜೆ ಮಾಡುವವರ ಮನಸ್ಥಿತಿ ಹೇಗಿರುತ್ತದೆಯೆಂದು ಹೇಗೆ ತಿಳಿಯುವುದು? ಅದರಂತೆ ನಾವು ಏಕೆ ಪೂಜೆ ಮಾಡಬೇಕು ಎನ್ನುವ ಪ್ರಶ್ನೆ ಹಾಕಿಕೊಳ್ಳದಿದ್ದರೆ, ಅವರ ಮನಸ್ಥಿತಿ ಹೇಗಿದೆಯೆಂದು ತಿಳಿಯುವುದು ಹೇಗೆ? ಜೀವನದಲ್ಲಿಯೂ ಅಷ್ಟೆ ದೂರದ ಗುರಿಯನ್ನು ತಲುಪುವ ನಡುವೆ ನಾವು ಆನಂದಿಸುವುದನ್ನು ಕಲಿಯಬೇಕು. ಆನಂದದ, ಸಂತೋಷದ ಮೂಲ ನಾವಾಗಿರಬೇಕು. ನಾವಿದ್ದಲ್ಲಿಯೇ ಸುಖ, ನಗು ಸಂತೋಷವನ್ನು ಸೃಷ್ಟಿಸುವಂತಾಗಬೇಕು, ಲವಲವಿಕೆಯ ಬದುಕಾಗಬೇಕು. ಬೇರೆಯವರ ಜಾಗದಲ್ಲಿ ನಿಂತು ಅವರ ಜೀವನವನ್ನು ಅನುಭವಿಸಬೇಕು.

ಎಲ್ಲಿಯೂ ನಿಲ್ಲದೇ ಯಾವುದಕ್ಕೂ ನಿಲುಕದ ಎಲ್ಲಿಗೂ ಅಂಟಿಕೊಳ್ಳದ ಬದುಕು ನಮ್ಮದಾಗಬೇಕು. ಎಲ್ಲವನ್ನೂ ಮೀರಿದ ಬದುಕಾಗಬೇಕು. ಇದು ಎಲ್ಲರಿಗೂ ಒಪ್ಪಿಗೆಯಾಗುವುದಿಲ್ಲ ಆದರೂ ನನಗೆ ಅದರ ಸಮಸ್ಯೆಯಿಲ್ಲ. ಇದು ನನ್ನ ಬದುಕು ನನ್ನ ಆಯ್ಕೆ. ನನ್ನ ಬಗ್ಗೆಯೇ ಹೇಳಬೇಕೆಂದರೆ, ಪಿಎಚ್‍ಡಿ ಮಾಡಿ ಯಾವುದೋ ವಿಶ್ವವಿದ್ಯಾಲಯದಲ್ಲಿ ಕುಳಿತು ಸಂಶೋಧನೆಯನ್ನು ಮಾಡಬಹುದಿತ್ತು, ಪಾಠ ಮಾಡಿ ಅಥವಾ ಮಾಡದೆ ಸಂಬಳ ಎಣಿಸಬಹುದಿತ್ತು. ಹಿಂದಿದ್ದ ಉತ್ತಮ ಕಂಪನಿಗಳಲ್ಲಿಯೂ ನೆಮ್ಮದಿಯ ಬದುಕನ್ನು ಸಾಗಬಹುದಿತ್ತು. ನಿಂತ ನೀರಾಗುವ ಮನಸ್ಸು ನನ್ನದಲ್ಲ. ನಾನು ಮಾನಸಿಕವಾಗಿ ಸಾಯುವುದಕ್ಕೆ ಸಿದ್ದನಿಲ್ಲ. ಸಂಸ್ಥೆಯನ್ನು ಕಟ್ಟಬೇಕು, ಒಂದು ಸಂಸ್ಥೆಯನ್ನು ಕಟ್ಟುವುದೇ ಆನಂದ, ಅಲ್ಲಿ ನೂರಾರು ಸಮಸ್ಯೆಗಳಿವೆ, ನೋವುಗಳಿವೆ, ದುಃಖವಿದೆ, ಅಸಹ್ಯವೆನಿಸುತ್ತದೆ, ಬೇಸರವಾಗುತ್ತದೆ, ಜೊತೆ ಜೊತೆಗೆ ಹೆಮ್ಮೆ, ಸಂತೋóಷವೂ ಸಿಗುತ್ತದೆ. ಜೀವನ ಬಯಸಿದಂತೆಯೇ ಬರುವುದಿಲ್ಲ, ನಾವು ಎಲ್ಲದ್ದಕ್ಕೂ ಸಿದ್ದರಾಗಿರಬೇಕು, ಹೊಂದಾಣಿಕೆಗಲ್ಲ, ಹೋರಾಟಕ್ಕೆ. ಯಾವುದಕ್ಕೂ ಅಂಟಿಕೊಳ್ಳದೆ ಎನ್ನುವುದಕ್ಕೆ ಮತ್ತಷ್ಟು ವಿವರಣೆಯ ಅಗತ್ಯವಿದೆಯೆಂದು ಕಾಣುತ್ತದೆ. ನಿಜ ಹೇಳಬೇಕೆಂದರೆ, ನನಗೆ ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವ ವಿದ್ಯಾಲಯಕ್ಕೆ ಹೋಗಬೇಕು ಅನ್ನುವ ಆಸೆಯಿತ್ತು. ಅದಕ್ಕೆ ಸಿದ್ದತೆಯೂ ನಡೆದಿತ್ತು, ನಂತರ ಅಲ್ಲಿ ಮಾಡುವುದನ್ನು ಇಲ್ಲಿಯೇ ಮಾಡಬಾರದೇಕೆ ಎನ್ನುವ ನಿಲುವಿಗೆ ಬಂದು ನಿಂತೆ. ವಿದೇಶಿ ವಿಶ್ವ ವಿದ್ಯಾಲಯಗಳು ಎನ್ನುವ ಭ್ರಮೆ ನನ್ನಿಂದ ದೂರಾಯಿತು, ಅದು ಆಗಿದ್ದು ಒಳ್ಳೆಯದೆ ಆಯಿತು ಎನಿಸುತ್ತದೆ. ನನ್ನ ಹಿಂದಿನ ಲೇಖನ ಮೊದಲಯಾನವನ್ನು ನೋಡಿದರೆ ಸಾಕಷ್ಟು ವಿಷಯಗಳು ನಿಮಗೆ ತಿಳಿಯುತ್ತದೆ. 

ನಾನು ಸೆಮಿನಾರ್‍ ಗಳು, ಸಮ್ಮೇಳನಗಳ ವಿರೋಧಿ. ಅದನ್ನು ಒಪ್ಪುವುದಿಲ್ಲ. ಹತ್ತು ವರ್ಷದ ಹಿಂದೆ 2008ರಲ್ಲಿ ಶ್ರೀಲಂಕಾ ಹೋಗಿದ್ದೆ, ಒಂದು ಸಮ್ಮೇಳನಕ್ಕೆ ಪಂಚತಾರಾ ಹೋಟೆಲಿನಲ್ಲಿ ಸಮ್ಮೇಳನ, ಅದನ್ನು ನೋಡಿದ ನಂತರ ಮುಂದಿನ ಸಮ್ಮೇಳನಗಳಿಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟೆ. ಅಲ್ಲಿ ಮಾಡುವುದಾದರೂ ಏನು? ಕೆಲವರಿಗೆ ಸಮ್ಮೇಳನಗಳಿಗೆ ಹೋಗುವುದೇ ಹೆಮ್ಮೆಯ ವಿಷಯ. ಬೇರೆ ದೇಶಗಳಿಗೆ ಹೋಗುವುದೇ ಗೌರವದ ವಿಷಯ. ನನಗೆ ಯಾವುದೋ ಹಳ್ಳಿಯ ಸರ್ಕಾರಿ ಶಾಲೆಗೆ ಹೋಗುವಾಗ ಕೊಡುವಷ್ಟು ಸಂತೋಷ, ಆ ಮಕ್ಕಳೊಂದಿಗೆ ಬೆರೆತಾಗ ಸಿಗುವ ಆನಂದ ಮತ್ತೊಂದರಲ್ಲಿ ಸಿಗುವುದಿಲ್ಲ. ನನ್ನೂರು ನದಿ ದಂಡೆಯ ಮೇಲೆ ಒಂದು ಗಂಟೆ ಕುಳಿತು ಇಡೀ ಜಗತ್ತನ್ನು ನೆನೆದು ಕಲ್ಪಿಸಿಕೊಂಡು ನನ್ನಷ್ಟಕ್ಕೆ ನಾನು ನಗುತ್ತೇನೆ, ಅದರ ಜೊತೆಗೆ ಕಣ್ಣಾಲಿಗಳು ತುಂಬಿರುತ್ತವೆ ಅದು ನನಗೆ ಸ್ವರ್ಗ. ಇರಲಿ ಎಲ್ಲರೂ ನನ್ನಂತೆಯೇ ಇರಬೇಕೆಂದೇನಿಲ್ಲ. ನನ್ನ ಜೊತೆಗಾರರು 20-30 ದೇಶಗಳನ್ನು ಸುತ್ತಿ ಬಂದಿದ್ದಾರೆ, ಅವರು ನನ್ನನ್ನು ಗೇಲಿ ಮಾಡುವುದುಂಟು, ನಿನ್ಯಾಕೆ ಸನ್ಯಾಸಿಯಾದೆ ಎಂದು. ಇದರ ಅರ್ಥವಿಷ್ಟೆ ನಾನು ಇರುವಲ್ಲಿಯೇ ಸ್ವರ್ಗ ಕಟ್ಟಿಕೊಳ್ಳಬಯಸುವವನು. ಸ್ವಲ್ಪ ವಿಷಯಾಂತರವಾಯಿತು ಮತ್ತೆ ವಿಷಯಕ್ಕೆ ಬರೋಣ.

ಇತ್ತೀಚಿನ ದಿನಗಳ ಬೆಳವಣಿಗೆಯನ್ನು ಗಮನಿಸಿ. ಕೆಲವು ಸಿದ್ದಾಂತಗಳಿಗೆ ಜೋತುಬಿದ್ದು ಅದರಿಂದ ಹೊರಕ್ಕೆ ಬರಲಾಗದೆ, ಅಲ್ಲಿ ನೆಮ್ಮದಿಯಾಗಿಯೂ ಇರಲಾಗದೆ ಬೌದ್ಧಿಕವಾಗಿ ಸತ್ತಿರುವ ಅನೇಕರನ್ನು ನೋಡಿದ್ದೇನೆ. ಬೌದ್ಧಿಕವಾಗಿ ಸಾಯುವುದು ಎಂದರೇನು? ನಾನು ಇದನ್ನು ಇಂಟಲೆಕ್ಚುವಲ್ಲಿ ಡೆಡ್ ಅಂತಾ ಕರೀತಿನಿ. ಮೆಂಟಲಿ ಡೆಡ್ ನಿಮ್ಮೆಲ್ಲರಿಗೂ ಗೊತ್ತು ಆದರೆ ಈ ಇಂಟಲೆಕ್ಚುವಲ್ಲಿ ಡೆಡ್ ಯಾವುದು? ವಿವರಿಸುತ್ತೇನೆ. ಎಡಪಂಥೀಯ ಮತ್ತು ಬಲಪಂಥೀಯ ಎನ್ನುವ ಎರಡು ಗುಂಪಿದೆ ಇದು ಎಲ್ಲಿ ಜನಿಸಿತು, ಇದರ ಸ್ವರೂಪವೇನು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ ಅದನ್ನು ಇಲ್ಲಿ ನಾನು ವಿವರಿಸುವುದು ಇಲ್ಲ. ಆ ಉತ್ತರವನ್ನು ನೀವೇ ಹುಡುಕಿಕೊಳ್ಳಿ. ಯಾವ ದೇಶದಿಂದ ಬಂತು ಎನ್ನುವುದನ್ನು. ಅದರಂತೆಯೇ ಮೂಲಭೂತವಾದ, ಕೋಮುವಾದವೆನ್ನುವ ಪದಬಳಕೆಯೂ ಅಷ್ಟೆ, ನಮ್ಮಲ್ಲಿ ಅನೇಕ ಪದಗಳ ಬಳಕೆ ಹೇಗೆ ಬಂತು ಎನ್ನವುದರ ಅರಿವಿಲ್ಲ. ಮೂಢನಂಬಿಕ ಎನ್ನುವುದು ಮತ್ತೊಂದು ವಾದ ಮಾಡಬಲ್ಲ ಪದವೇ ಸರಿ. ಇರಲಿ ಎಲ್ಲವನ್ನು ಇಲ್ಲಿ ಹೇಳಬೇಕೆಂಬ ನಿಯಮವಿಲ್ಲ ಅಥವಾ ಅದರ ಅನಿವಾರ್ಯತೆ ಸದ್ಯಕ್ಕಿಲ್ಲ. ಈ ವಿಷಯವನ್ನು ಮುಂದೊಮ್ಮೆ ನಿಮ್ಮ ಮುಂದಿಡುತ್ತೇನೆ. ಅತಿಯಾದರೇ ಅಜೀರ್ಣವಾದೀತು!

ಸಿದ್ದಾಂತಗಳ ವಿಷಯವನ್ನು ತಿಳಿಸುತ್ತೇನೆ. ಯಾವುದಾದರೂ ಒಂದು ಸಿದ್ದಾಂತಕ್ಕೆ ಅಂಟಿಕೊಂಡರೆ ಏನಾಗಬಹುದೆಂಬುದನ್ನು ಸ್ವಲ್ಪ ಅವಲೋಕಿಸೋಣ. ಮೊದಲಿಗೆ ಪಕ್ಷಗಳ ವಿಷಯಕ್ಕೆ ಬರೋಣ, ನೀವೊಂದು ಪಕ್ಷವನ್ನು ಬೆಂಬಲಿಸಿದಿರಿ ಎಂದು ತಿಳಿಯೋಣ ಅದೆಷ್ಟು ಜನರು ಅವರ ಪಕ್ಷದವರು ತಪ್ಪು ಮಾಡಿದ್ದನ್ನು ತಪ್ಪು ಎನ್ನುವ ಧೈರ್ಯ ತೋರಿಸುತ್ತಾರೆ? ಎಲ್ಲದರ ಪರ ವಹಿಸತೊಡಗುತ್ತಾರೆ. ಅವರ ನಾಯಕರುಗಳು ಏನೇ ತಪ್ಪು ಮಾಡಿದರೂ ಅದನ್ನು ಸಮಜಾಯಿಸಿಕೊಳ್ಳುವುದಕ್ಕೆ ಮುನ್ನುಗ್ಗುತ್ತಾರೆ. ನಮ್ಮ ರಾಜ್ಯದ ಮೂರು ಪಕ್ಷದ ಕಾರ್ಯಕರ್ತರಿದ್ದಾರೆ, ಅವರ ಪಕ್ಷದ ಸರಿತಪ್ಪುಗಳೆರಡನ್ನು ಸಮಜಾಯಿಸಿಕೊಳ್ಳುತ್ತಾರೆ. ಆತ್ಮ ಸಾಕ್ಷಿಯೆಂಬುದು ಕಳಚಿದೆ ಎನಿಸುವುದಿಲ್ಲವೇ? ಅದರಂತೆ, ಯಾವುದೇ ಸಿದ್ದಾಂತ ಸಿದ್ಧ ಸೂತ್ರಗಳು ಇಡೀ ವಿಶ್ವಕ್ಕೆ ಒಪ್ಪಲು ಸಾಧ್ಯವಿಲ್ಲ. ಇದು ಎಲ್ಲಾ ಕ್ಷೇತ್ರಗಳಲ್ಲಿಯೂ ಅನ್ವಯ. ಪ್ರಾದೇಶಿಕತೆ ಮುಖ್ಯವಾಗುತ್ತದೆ. ಪ್ರಾದೇಶಿಕತೆಯ ವಿಷಯವೆಂದರೆ, ಆ ಭಾಗಕ್ಕೆ ಆಗುವುದು ಅಥವಾ ಒಪ್ಪುವುದು. ಕಮ್ಯುನಿಷ್ಠ್ ಸಿದ್ದಾಂತವೇ ಆಗಲಿ ಮತ್ತೊಂದೆ ಆಗಲಿ. ಕೆಲವೊಂದು ಸಂಘಗಳು, ಸಂಸ್ಥೆಗಳು ಅಷ್ಟೆ. ಇದಕ್ಕೆ ನಿಮಗೆ ಅರ್ಥವಾಗುವಂತೆ ಆಹಾರ ಪದ್ದತಿಯನ್ನು ಎರಡು ಅಥವಾ ಮೂರು ಸಾಲುಗಳಲ್ಲಿ ಹೇಳುತ್ತೇನೆ. ಪ್ರತಿಯೊಂದು ಸ್ಥಳಕ್ಕೂ ಅದರದ್ದೇ ಆಹಾರ ಪದ್ದತಿಯಿರುತ್ತದೆ. ಉದಾಹರಣೆಗೆ: ರಾಗಿ ಮುದ್ದೆ ಆರೋಗ್ಯಕ್ಕೆ ಒಳ್ಳೆಯದು ಯಾವ್ಯಾವ ಜಿಲ್ಲೆಗೆ? ಜೋಳದ ರೊಟ್ಟಿ? ಗೋಧಿ? ಅಕ್ಕಿ?. ಆಲೂಗೆಡ್ಡ ಉತ್ತಮ ಉದಾಹರಣೆಯೂ ಆಗುತ್ತದೆ, ಅಂಡಮಾನ್ ನಿಕೋಬಾರ್‍ಗೆ ಹೋದರೆ ಆಲೂಗೆಡ್ಡೆಯಿಲ್ಲದ ಊಟವೇ ಇಲ್ಲ. ನಮ್ಮಲ್ಲಿ ವಾಯೂ ಎನ್ನುತ್ತಾರೆ!? ಗೋಧಿಯ ಕುರಿತು ನನ್ನದು ಇದೇ ನಿಲುವು. ಮುಂದೊಂದು ದಿನ ಚರ್ಚಿಸೋಣ, ನಾನು ಗೋಧಿ ವಿರೋಧಿ!

ಈ ವಿಚಾರವನ್ನು ಮತ್ತಷ್ಟು ವಿವರಿಸೋಣ. ನಾನು ಗಮನಿಸಿರುವಂತೆ ಕೆಲವು ನೌಕರರ ಸಂಘಗಳು, ಕನ್ನಡ ಪರ ಸಂಘಟನೆಗಳು, ಕೆಲವು ಜಾತಿಯ ಸಂಘಗಳನ್ನು ದುರುಪಯೋಗ ಪಡಿಸಿಕೊಂಡಿದ್ದು ಇದೇ ರೀತಿಯೇ ಎಂದರೂ ಸರಿ. ಸಂಘದವನೇ ತಪ್ಪು ಮಾಡಿದ್ದರೂ ಅದನ್ನು ಸಮಜಾಯಿಸಿಕೊಂಡು ನಂತರ ದಬ್ಬಾಳಿಕೆ ನಡೆಸುತ್ತಿರುವುದು ನಮ್ಮ ಕಣ್ಮುಂದೆಯೇ ಇದ್ದರೂ ನಾವು ಮೌನವಾಗಿರುವುದು ದುರಂತ. ಪಕ್ಷದ ವಿಷಯದಲ್ಲಿಯೂ ಅಷ್ಟೇ ಯಾವೊಂದು ಪಕ್ಷವೂ ಪರಿಪೂರ್ಣವಾಗಿ ಸರಿಯೆಂದು ಹೇಳಲಾಗುವುದಿಲ್ಲ. ಎಲ್ಲಾ ಪಕ್ಷಗಳಲ್ಲಿಯೂ ನ್ಯೂನತೆಗಳಿರುತ್ತವೆ, ಅದನ್ನು ಒಪ್ಪಲು ಸಿದ್ದರಿರಬೇಕು. ಯಾವುದೇ ಐಡಿಯಾಲಜಿಗಳು ಅಷ್ಟೇ, ಅದು ಆ ದಿನಕ್ಕೆ, ಆ ಸಮಯಕ್ಕೆ, ಮಾಡಿರುವುದು ಎನ್ನುವುದನ್ನು ನಾವು ಮನನ ಮಾಡಿಕೊಳ್ಳಬೇಕು. ಯಾವುದೇ ಚಳುವಳಿಗಳು ಅಷ್ಟೇ. ಎಂಬತ್ತರ, ತೊಂಬತ್ತರ ಪರಿಸರ ಚಳುವಳಿಗಳು, ಭಾಷಾ ಚಳುವಳಿಗಳು ಯಶಸ್ವಿಯಾದವು. ಈಗ ಅದೇ ಮಾದರಿಯ ಯಾವೊಂದು ಚಳುವಳಿಗಳು ಯಶಸ್ವಿಯಾಗುವುದಿಲ್ಲ. ಉದಾಹರಣೆಗೆ, ಇತ್ತೀಚಿನ ಮಹದಾಯಿ ಹೋರಾಟ, ವರ್ಷ ತುಂಬಿದರೂ ಏಕೆ ಯಶಸ್ವಿಯಾಗುತ್ತಿಲ್ಲ? ಇದನ್ನು ನಾವು ಅವರ ಮೇಲೆ, ಇವರ ಮೇಲೆ, ಆರೋಪ ಮಾಡುವುದನ್ನು ನಿಲ್ಲಿಸಿ ಆವಲೋಕಿಸಬೇಕಿದೆ. ಕೊರತೆಗಳೇನು? ಎಲ್ಲಿ ನಾವು ಎಡವುತ್ತಿದ್ದೇವೆ? ಭಾಷೆಯ ವಿಷಯವೇ ಇರಲಿ ಎಲ್ಲವನ್ನೂ ಮುಕ್ತವಾಗಿ ಚರ್ಚಿಸಬೇಕಿದೆ. ವಿಷಯಾಂತರವಾಗುತ್ತಿದೆ. ಕ್ಷಮೆಯಿರಲಿ, ಮುಖ್ಯವಾದ ವಿಷಯವಾಗಿರುವುದರಿಂದ ಇದನ್ನು ಇನ್ನಷ್ಟೂ ಮುಂದುವರೆಸುತ್ತೇನೆ. 

ಇಲ್ಲಿರುವ ಕೊರತೆಗಳೇನು? ಸಮಗ್ರವಾಗಿಯೇ ಚರ್ಚಿಸೋಣ. ನನಗೆ ಇತ್ತಿಚಿನ ದಿನಗಳಲ್ಲಿ ಬಹಳ ಕಾಡುತ್ತಿರುವ ಪ್ರಶ್ನೆ. ನಮ್ಮ ಬೌದ್ದಿಕ ಗುಣಮಟ್ಟದ ಕುಸಿತ. ಇಂಟಲೆಕ್ಚುವಲ್ ಡಿಪ್ಲಿಷನ್ ಎನ್ನುತ್ತೇನೆ. ನಮ್ಮ ಅನೇಕರಲ್ಲಿ ಇಡೀ ಜಗತ್ತು ಅಥವಾ ಇಡೀ ಸಮಾಜವೇ ಒಂದು ಕುಟುಂಬವೆನ್ನುವ ಕಲ್ಪನೆಯೇ ಅಸಾಧ್ಯವೆನಿಸಿದೆ. ಪ್ರತಿಯೊಂದಕ್ಕೂ ರಾಜಕೀಯಕ್ಕೆ, ಜಾತಿಗೆ, ಭಾಷೆಗೆ ಅಂಟಿಸುತ್ತೇವೆ. ಅದೆಷ್ಟರ ಮಟ್ಟಿಗೆ ತಲುಪಿದೆಯೆಂದರೆ, ದೇವೇಗೌಡರನ್ನು ಯಾರಾದರೂ ಬೈದರೇ ಇಡೀ ಒಕ್ಕಲಿಗ ಸಮುದಾಯಕ್ಕಾದ ಅವಮಾನವೆಂದು ಬಿಂಬಿಸುತ್ತೇವೆ ಅದೇ ರೀತಿ ಯಡ್ಯೂರಪ್ಪರವರನ್ನು, ಸಿದ್ದರಾಮಯ್ಯನವರನ್ನೂ ಎಲ್ಲರನ್ನೂ ಒಂದು ಜಾತಿಗೆ ಸೇರಿಸುತ್ತೇವೆ ಒಂದು ಜಾತಿಗೇ ಸೀಮಿತಗೊಳಿಸುತ್ತೇವೆ. ಇದರ ದುರಂತಗಳನ್ನು ನೋಡೋಣ, ವಿಶ್ವ ಮಾನವರಾಗಿ ಎಂದ ಕುವೆಂಪುರವರನ್ನು ಒಕ್ಕಲಿಗರ ಕವಿಯೆನ್ನುವ ಮಟ್ಟಕ್ಕೆ ತಂದಿಟ್ಟಿದ್ದೇವೆ, ಜಾತಿಯನ್ನು ಬಿಟ್ಟು ಬನ್ನಿ ಎಂದ ಬಸವಣ್ಣರವರನ್ನು ಲಿಂಗಾಯತರಿಗೆ ಮೀಸಲಿಟ್ಟಿದ್ದೀವಿ, ಅಂಬೇಡ್ಕರ್‍ ರವರನ್ನು ಒಂದು ವರ್ಗಕ್ಕೆ ಸೀಮೀತರಾಗಿಸಿದ್ದೇವೆ. ಈ ವಿಷಯವಾಗಿಯೂ ಅಷ್ಟೇ, ಮತ್ತೊಮ್ಮೆ ಚರ್ಚಿಸೋಣ ಅಥವಾ ನಾನೇ ಬರೆಯುತ್ತೇನೆ.

ಇವರೆಲ್ಲರೂ ಇಡೀ ಮನುಕುಲದ ಒಲಿತಿಗೆ ಶ್ರಮಿಸಿದವರು ಎನ್ನುವುದನ್ನು ಮೆರೆತಿದ್ದೇವೆ. ಜನರ ಭಾವನೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲವರು, ರಾಜಕೀಯ ಲಾಭಕ್ಕೆ ಬಳಸಿದ್ದಾರೆಂಬುದು ತಿಳಿದಿರುವ ವಿಷಯ. ಆದರೆ ನಾವುಗಳು ನಮ್ಮ ಭೌದ್ದಿಕತೆಯ ಮಟ್ಟವನ್ನು ಮಣ್ಣು ಪಾಲು ಮಾಡಿದ್ದು ಹೇಗೆ? ಈ ಅಧಿಪತನ ಶುರುವಾಗಿದ್ದು ಹೇಗೆ ಎನ್ನುವುದನ್ನು ನೋಡೇ ಬಿಡೋಣ. ಇಪ್ಪತ್ತು ವರ್ಷ ಹಿಂದಕ್ಕೆ ಹೋಗೋಣ. ನಿಮ್ಮ ತಂದೆಯರಿಗೆ ಇದ್ದ ಬೌದ್ಧಿಕ ಗುಣಮಟ್ಟವನ್ನೊಮ್ಮೆ ಅವಲೋಕಿಸಿ, ಅವರಿಗಿದ್ದ ನ್ಯಾಯದ ಕಲ್ಪನೆ, ಅನ್ಯಾಯದ ಕಲ್ಪನೆ, ಮಾನವೀಯತೆಯ ದೃಷ್ಟಿಕೋನ, ಅವರಿಗಿದ್ದ ಸಾಮರ್ಥ್ಯ, ಅವರ ಆಲೋಚನಾ ಲಹರಿ. ಅವರು ವಿದ್ಯಾಬ್ಯಾಸದಲ್ಲಿ ಕಡಿಮೆಯಿದ್ದರಬಹುದು. ಐಪಿಸಿ ಸೆಕ್ಸನ್‍ಗಳು ಗೊತ್ತಿಲ್ಲದೇಯಿರಬಹುದು. ಆದರೇ ಎಲ್ಲರನ್ನೂ ಪ್ರೀತಿಸುವುದು ಗೊತ್ತಿತ್ತು, ಎಲ್ಲರನ್ನೂ ಗೌರವಿಸುವುದು ಗೊತ್ತಿತ್ತು. ಸ್ವಾಭಿಮಾನದ ಪ್ರತೀಕವೆಂಬಂತೆ ಬದುಕನ್ನು ನಡೆಸಿದರು. ಒಂದು ರೂಪಾಯಿಗೂ ಕೈಚಾಚದೆ ಅಥವಾ ತೆಗೆದುಕೊಂಡ ಹಣವನ್ನು ಮೋಸ ಮಾಡದೇ ಹಿಂದಿರುಗಿಸುತ್ತಿದ್ದರು. ಆದರೇ ಈಗಿನ ಅನೇಕರು ಮೋಸ ಮಾಡಿದರೂ ಅದೆಲ್ಲವೂ ಏನೂ ಅಲ್ಲವೆನ್ನುವಂತೆ ಬದುಕುತ್ತಿದ್ದಾರೆ. ಕದಿಯುವುದು ತಪ್ಪಲ್ಲ ಆದರೆ ಗೊತ್ತಾಗದಂತೆ ಕದಿಯಬೇಕೆನ್ನುವುದನ್ನು ಕಲಿಸುತ್ತಿದ್ದೇವೆ. ಉಪಸಂಹಾರವೆಂದರೆ, ನಾವು ಸಂಕುಚಿತರಾಗುತ್ತಿದ್ದೇವೆ. ಆ ಗಡಿಯನ್ನು/ಬೇಲಿಯನ್ನು ದಾಟಿ ಬೆಳೆಯಬೇಕು, ಪ್ರೀತಿಯನ್ನು ಪಸರಿಸಬೇಕು.

ಎರಡನೆಯದಾಗಿ, ಜೀವನವನ್ನು ಕಟ್ಟಿಕೊಳ್ಳುವುದು ಹೇಗೆ? ನನ್ನನ್ನು ಅನೇಕರು ಕಾಲಿಗೆ ಚಕ್ರ ಹಾಕಿಕೊಂಡಿರುವವನು ಎನ್ನುತ್ತಾರೆ. ಇದನ್ನು ನಾನು ಒಪ್ಪುತ್ತೇನೆ, ಅದಕ್ಕೆ ಕಾರಣಗಳೆರಡು. ನಮ್ಮ ಸುತ್ತ ಮುತ್ತ ಏನಿದೆ? ಏನು ನಡಿತಾ ಇದೆ ಎನ್ನುವುದರ ಅರಿವು ನಮಗಿರಬೇಕು. ಸುತ್ತುವಾಗ ನಾವು ಹೊಸ ವ್ಯಕ್ತಿಗಳಾಗಿ ರೂಪುಗೊಳ್ಳುತ್ತೇವೆ. ನಾನು ಎಲ್ಲಾ ಮಾದರಿಯಲ್ಲಿಯೂ ಪ್ರಯಾಣಿಸಿದ್ದೇನೆ. ಒಂದೇ ಆಟೋದಲ್ಲಿ ಹತ್ತು ಜನರು ಪ್ರಯಾಣಿಸುವುದರಿಂದ ಹಿಡಿದು ಲಕ್ಷುರಿಯೆನಿಸುವ ಕಾರಿನಲ್ಲಿ, ಮೊದಲ ದರ್ಜೆಯ ರೈಲಿನಿಂದ ಹಿಡಿದು ತುಂಬಿತುಳುಕುತ್ತಿರುವ ರೈಲಿನ ಶೌಚಾಲಯದ ಬಳಿಯಲ್ಲಿ ರಾತ್ರಿಯೆಲ್ಲಾ ತೂಕಡಿಸುತ್ತಾ. ಕಪ್ಪು ಬೋರ್ಡಿನ ಬಸ್ಸಿನಿಂದ ಮಲ್ಟಿ ಆಕ್ಸೆಲ್ ತನಕ. ಇದರಿಂದ ನನಗಾದ ಮನಪರಿವರ್ತನೆ ಇಷ್ಟೆ, ನಾವು ಯಾವುದೇ ವಾಹನ ಬಂದರೂ ಸರಿ ಹೊರಡಲು ಸಿದ್ದರಿರಬೇಕು ಏಕೆಂದರೆ ಗುರಿ ಮಾತ್ರ ಮುಖ್ಯ, ಹೋಗುವ ವಾಹನವಲ್ಲ. ಆದರೆ ಪಾಲಿಸುವ ಮಾರ್ಗ ಅದೆಲ್ಲದಕ್ಕಿಂತ ಮುಖ್ಯ. ಉಪಸಂಹಾರವೆನ್ನಬೇಕಾದರೆ ಸರಳವಾಗಿ ಹೇಳುತ್ತೇನೆ, ನಮ್ಮ ಗುರಿಗಳು ಏನೇ ಇರಲಿ ಅವುಗಳನ್ನು ಸಾಧಿಸುವ ಮಾರ್ಗವೂ ಮುಖ್ಯ, ಅದನ್ನು ಸಂತೋಷದಿಂದ ಸಾಧಿಸಬೇಕು ಮತ್ತು ನಾವು ತೆರಳುವ ಮಾರ್ಗ ಅರ್ಥಪೂರ್ಣವಾಗಿರಬೇಕು, ಗೆಲ್ಲುವುದೇ ಮುಖ್ಯವೆಂದು ಅಡ್ಡದಾರಿಯಿಂದ ಸಾಧಿಸಬಾರದು. ನಮ್ಮತನವನ್ನು ಬಿಟ್ಟು ಬದುಕಬಾರದು.

ಮೇಲಿನ ಸಾಲುಗಳಲ್ಲಿ ನಮ್ಮತನವೆಂದು ಬಳಸಿದ್ದೇನೆ. ಈ ನಮ್ಮತನವೆಂದರೆ ಏನು? ಅದು ಹೇಗೆ ರೂಪಿತವಾಗಿದೆ ಅಥವಾ ಅದನ್ನು ಹೇಗೆ ಗುರಿತಿಸಿಕೊಳ್ಳಬೇಕು? ನಾನು ನನ್ನದು ಅನ್ನುವುದು ಅಹಂಕಾರವಲ್ಲವೇ? ಸ್ವಾರ್ಥವಲ್ಲವೇ. ನಮ್ಮತನವೆನ್ನುವುದು ನನ್ನ ಪಾಲಿಗೆ ಒಂದಿಷ್ಟು ಗುರುತುಗಳು ಅಷ್ಟೆ. ಗುರುತು ಎಂದರೆ ಐಡೆಂಟಿಟಿಯಲ್ಲ ಅದೊಂದು ನಿಯಮ ಅಂದರೆ ಬದಲಾಗದ ನಿಯಮಗಳಲ್ಲ, ಒಂದಿಷ್ಟು ಷರತ್ತುಗಳು ಆಗಿರಬಹುದು. ಉದಾಹರಣೆಗೆ: ಇಡೀ ವಿಶ್ವವೇ ನನ್ನ ಮನೆಯೆಂಬ ನಂಬಿಕೆ ನನ್ನದು ಹಾಗೆಂದ ಮಾತ್ರಕ್ಕೆ ನಾನು ನನ್ನ ದೇಶವನ್ನ ಪ್ರೀತಿಸುತ್ತಿಲ್ಲಾ, ಅಥವಾ ನನ್ನ ರಾಜ್ಯವನ್ನ, ನನ್ನೂರನ್ನ ಪ್ರೀತಿಸುವುದಿಲ್ಲವೆಂದಲ್ಲ. ಮೊದಲಿಗೆ ನಾನು ಬಾನುಗೊಂದಿಯವನು ನಂತರ ಹಾಸನದವನು ನಂತರ ಕರ್ನಾಟಕದವನು ನಂತರ ಭಾರತೀಯ ನಂತರ ವಿಶ್ವಮಾನವನೆನ್ನುವ ಹಂತಕ್ಕೆ ತಲುಪಬೇಕು. ನಾವೆಲ್ಲರೂ ಒಂದೇ ಎನ್ನುವುದು ಸುಲಭ, ಆದರೆ ಅದನ್ನು ಅನುಸರಿಸುವುದು? ಆದ್ದರಿಂದ ನನ್ನದು ಮೊದಲು ಮಾನವಿಯ ಧರ್ಮವಾಗಬೇಕೆನ್ನುವವನು. ಮೊದಲು ಮಾನವೀಯತೆಯಿಂದ ಬದುಕಬೇಕು ಎಂದು ನಂಬಿರುವವನು.

ಪ್ರಪಂಚದ ಯಾವುದೇ ಮೂಲೆಯ ಯಾವುದೇ ವ್ಯಕ್ತಿಗೆ ನೋವಾದರೂ ನಾನು ಧಾವಿಸುವಂತಾಗಬೇಕು. ನನ್ನ ಶತ್ರುವಿಗೂ ನಾನು ನನ್ನ ಸಹಾಯ ಹಸ್ತವನ್ನ ನೀಡಬೇಕು. ಭಾಷೆ, ಜಾತಿ, ಧರ್ಮ, ದೇಶ ಮೀರಿ ಆಲೋಚಿಸುವಂತಾಗಬೇಕು. ಇದು ಸಾಧ್ಯವೇ? ಮಹಾತ್ಮ ಗಾಂಧಿಯವರು ದೇಶಗಳಿಗೆ ಯಾವುದೇ ಗಡಿಯಿರಬಾರದು ಎಂದು ಪ್ರತಿಪಾದಿಸಿದರು. ಮೊದಲ ದಿನಗಳಲ್ಲಿ ಅವರು ಬ್ರಿಟಿಷರನ್ನು ತೊಳಗಿಸಲು ಹೋರಾಡಿದ್ದು ಎಷ್ಡು ಸತ್ಯವೋ ಅದೇ ರೀತಿ ಅವರ ರಾಜಕೀಯ ನೀತಿಗಳು ಸತ್ಯ. ಅದು ನನ್ನನ್ನು ಬಹಳವಾಗಿ ಕಾಡುತ್ತದೆ. ಇಡೀ ಜಗತ್ತೇ ಒಂದು ಮನೆಯಂತೆ ಜೀವಿಸುವುದಾದರೇ ಹೇಗಿರಬಹುದು? ಕಲ್ಪನೆಗೆ ನಿಲುಕದ್ದು. ಎಂತಹ ರೋಮಾಂಚಕ ಅನುಭವ ಎನಿಸುವುದಿಲ್ಲವೇ? ಕೆಲವರ ಮನಸ್ಸು ತನ್ನ ಮನೆ, ತನ್ನ ಸಂಸಾರವೆನ್ನವ ಗಡಿಯನ್ನೇ ದಾಟಲು ಸಿದ್ಧವಿರುವುದಿಲ್ಲ, ಇನ್ನೂ ವಿಶ್ವವನ್ನೇ? ಕೆಲವೊಂದು ಭಾವಾನಾತ್ಮಕ ವಿಷಯಗಳನ್ನ ಕೆಲವೇ ಕೆಲವು ಜನರು ಅವರ ಲಾಭಕ್ಕೆ ಬಳಸುತ್ತಿದ್ದಾರೆ. ಅದನ್ನೊಮ್ಮೆ ಅವಲೋಕಿಸೋಣ. 

ಅದಕ್ಕಿಂತ ಮುಂಚೆ ಬಹಳ ಮುಖ್ಯವಾದ ವಿಷಯವೊಂದನ್ನು ನಿಮಗೆ ತಿಳಿಸುತ್ತೇನೆ. ಯಾವುದೇ ಚರ್ಚೆಯನ್ನು ಅರ್ಧವಾಗಿ ಅಥವಾ ಬೇರೆ ಬೇರೆ ಭಾಗವಾಗಿ ಕೇಳಬಾರದು ಮತ್ತು ಭಾಗವಹಿಸಬಾರದು. ಯಾವುದೇ ಮಾತುಕತೆ ಯಾವ ಹಿನ್ನಲೆಯಲ್ಲಿ ನಡೆದಿದೆ ಎನ್ನುವುದನ್ನ ಮೊದಲು ಗ್ರಹಿಸಬೇಕು. ಸಾಮಾಜಿಕ ಜಾಲತಾಣಗಳು ಮತ್ತು ಕೆಲವು ನೈತಿಕತೆ ಇಲ್ಲದ ಮಾಧ್ಯಮಗಳಿಂದಾಗಿ ಅನೇಕ ಗೊಂದಲಗಳು ಮತ್ತು ಸಮಾಜದ ಹೊಂದಾಣಿಕೆ ಹಾಳಾಗಿದೆ. ಅದೇನೆ ಇರಲಿ. ಇಲ್ಲಿ ನಾನು ಹೇಳುತ್ತಿರುವುದು ಈ ಚಿಂತನೆಗಳು ನಡೆಯುತ್ತಿರುವುದು ಒಬ್ಬ ವಿಶ್ವಮಾನವನನ್ನು ರೂಪಿಸುವ ಹಾದಿಯಲ್ಲಿ. ಈ ಚರ್ಚೆಯನ್ನು ಅಥವಾ ನನ್ನ ಮಾತನ್ನು/ವಾದವನ್ನು ನೀವು ಸಂಪೂರ್ಣವಾಗಿ ಗ್ರಹಿಸಬೇಕೆ ಹೊರತು, ಯಾವುದೋ ಒಂದು ಪ್ಯಾರಾವನ್ನು ಅಥವಾ ಒಂದೆರಡು ಸಾಲನ್ನು ಹಿಡಿದು ಅಪವಾದ ಮಾಡಿದರೆ ಅದಕ್ಕೆ ನೀವುಗಳೇ ಹೊಣೆಯೆಂದು ತಿಳಿಸಿರುತ್ತೇನೆ. 

ನನ್ನ ಪ್ರಕಾರ ಜೀವನವೆಂಬುದು ನಿರಂತರ ಯಾನ. ಆ ಯಾನದಲ್ಲಿ ಪ್ರತಿ ಕ್ಷಣವೂ ರೋಮಾಂಚಕಾರಿಯಾಗಿರುತ್ತದೆ. ಅದನ್ನು ಆನಂದಿಸಬೇಕು. ರೋಲರ್ ಕೋಸ್ಟರ್‍ನಲ್ಲಿ ಕುಳಿತಿರುವವರು ಏರಿಳಿತವನ್ನು ಆನಂದಿಸಬೇಕು. ಅಲ್ಲಿಯೂ ಕೋಮಾದಲ್ಲಿದ್ದರೇ? ಮಿ. ಬೀನ್ ಕಾಮೆಡಿಯೊಂದರಲ್ಲಿ ಮಿ.ಬೀನ್ ರೋ¯ರ್ ಕೋಸ್ಟರ್‍ನಲ್ಲಿ ಅಲ್ಲಾಡದೇ ಕುಳಿತಿರುತ್ತಾರೆ. ಹಾಗೆಯೇ ಕೆಲವರು ಜೀವನದಲ್ಲಿ ಏನೇ ನಡೆದರೂ ಒಂದೇ ಸಮನಾಗಿರುತ್ತಾರೆ. ಒಂದೇ ಸಮನೇ ಎಂದರೆ ನಿರ್ಭಾವುಕರಾಗಿರುತ್ತಾರೆಂದರ್ಥ. ಅಯ್ಯೋ ಬಿಡಿ ನಮ್ಮದೇನಿದೆ ಎನ್ನುತ್ತಾರೆ. ನೀವು ಹತ್ತು ಜನರನ್ನು ಮಾತನಾಡಿಸಿದರೆ ಒಂಬತ್ತು ಜನರು ಇದೇ ಉತ್ತರ ನೀಡುತ್ತಾರೆ. ವಿದ್ಯಾರ್ಥಿ ದೆಸೆಯನ್ನು ಕಳೆದ ನಂತರ ಕೆಲಸ ಹುಡುಕುವುದು, ಕೆಲಸ ಸಿಕ್ಕಿದ ನಂತರ ಒದ್ದಾಡುವುದು ಅದಾದ ನಂತರ ಸಂಸಾರದಲ್ಲಿ ಗೊಂದಲ ಮೂಡಿಸಿಕೊಂಡು ಕೊರಗುವುದು. ಇಲ್ಲ, ಯಾವುದೋ ಚಟಕ್ಕೆ ದಾಸರಾಗಿ ಮುಕ್ತರಾಗಲು ಪರದಾಡುವುದು. 

ಹೊಸ ಚಟಗಳ್ಯಾವುವು? ಇತ್ತೀಚಿನ ದಿನಗಳಲ್ಲಿ ಹಣ ಮಾಡುವುದೇ ಒಂದು ಚಪಲ. ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಂಡು ಕೊರಗುವುದು. ಅವನು ಸೈಟ್ ತೆಗೆದ, ಇವನು ಮನೆ ಕಟ್ಟಿದ, ಅವನು ಹೊಸ ಕಾರು ಹೀಗೆ. ಇನ್ನೂ ಕೆಲವರಿಗೆ ಇತ್ತೀಚೆಗೆ ಸುತ್ತಾಡುವ ಚಪಲ ಅದು ಪ್ರವಾಸದ ಚಪಲವಾದರೆ ಸಂತೋಷ. ಆದರೆ ಕೆಲವರದ್ದು ಮೋಜು ಮಸ್ತಿಯ ಚಟಗಳು. ನೀವು ಸುತ್ತಾಡುತ್ತೀರಿ, ಬೇರೆಯವರು ಸುತ್ತಾಡಿದರೆ ಮಾತ್ರ ಚಪಲವೇ? ನಾನು ಒಂದೇ ಸಮನೇ ಸುತ್ತಾಡುತ್ತಿರುತ್ತೇನೆ, ಆದರೆ ಅಲ್ಲಿ ವಿಭಿನ್ನತೆಗಳಿರುವಂತೆ ನೋಡಿಕೊಳ್ಳುತ್ತೇನೆ. ಸ್ಥಳೀಯತೆಯನ್ನು ತಿಳಿಯಲು, ಬೆರೆಯಲು ಯತ್ನಿಸುತ್ತೇನೆ. ನಾನು ಗಮನಿಸಿದ್ದೇನೆ ದೆಹಲಿಗೆ ಹೋಗಿ ಇಡ್ಲಿ ವಡೆ, ದೋಸೆ ಹುಡುಕುವವರನ್ನು. ಅಲ್ಲಿನ ಆಲೂ ಪರೋಟ ತಿನ್ನಬೇಕು, ಅಲ್ಲಿನ ಲಸ್ಸಿ ಕುಡಿಯಬೇಕೆ ಹೊರತು ದೆಹಲಿಯಲ್ಲಿ ಎಳನೀರು ಹುಡುಕಿದರೆ ನೀವು ದೆಹಲಿಗ್ಯಾಕೆ ಹೋಗಬೇಕು. ಕುಡಿದು ಮಲಗಲೆಂದೆ ಗೋವಾಗೆ ಹೋಗಬೇಕೆ? ಕುಡಿಯಿರಿ ಬೇಡವೆನ್ನುವುದಿಲ್ಲ ಆದರೆ ಅದೇ ಮುಖ್ಯ ಉದ್ದೇಶವಾಗಬಾರದಲ್ಲವೆ?

ನಾನು ಹೋದ ಕಡೆಯೆಲ್ಲಾ ಬೇರೆ ಬೇರೆ ಜನರೊಂದಿಗೆ ಬೇರೆ ವಿಷಯಗಳ ಕುರಿತು ಚರ್ಚಿಸುತ್ತೇನೆ ಅದೊಂದು ಬಗೆಯ ಸಮಾಜದ ಕುರಿತಾದ ಕುತೂಹಲ ಮತ್ತು ಅವರ ಬದುಕನ್ನು ಅರಿಯುವ ಪ್ರಯತ್ನ. ನಾನು ಒಂದು ಆಟೋದಲ್ಲಿಯೋ, ಒಲಾ ಉಬರ್‍ನಲ್ಲಿಯೋ ಹತ್ತಿದರೂ ಅವರೊಂದಿಗೆ ಸಂವಹನಕ್ಕಿಳಿಯುತ್ತೇನೆ ಹಾಗೆಂದು ಸದಾ ಅದನ್ನೇ ಮಾಡುತ್ತೆನೆಂದು ನಂಬಬೇಡಿ. ಬಸ್ಸಿನಲ್ಲಿ ಗಂಟೆಗಟ್ಟಲೆ ಪ್ರಯಾಣಿಸಿದರೂ ಯಾರೊಂದಿಗೂ ಮಾತನಾಡಿರುವುದಿಲ್ಲ ನನ್ನದೇ ಆಲೋಚನೆಯಲ್ಲಿಯೋ ಅಥವಾ ರಸ್ತೆಬದಿಯ ಜನರನ್ನು ನೋಡುತ್ತಲೋ ಕಲ್ಪನಾ ಲೋಕಕ್ಕೆ ಇಳಿಯುತ್ತೇನೆ. ಇದು ನನ್ನ ಬದುಕು ನನ್ನಿಷ್ಠ. ನನ್ನ ಬದುಕಿನ ಶೈಲಿಯಲ್ಲಿ ಬೇರೆಯವರಿಗೆ ನೋವಾಗಬಾರದಷ್ಟೆ. ನೋವೆಂದರೆ ಯಾವ ರೀತಿಯಲ್ಲಿ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. 

ಬರವಣಿಗೆ ಅದೆಷ್ಟು ಕಷ್ಟವೆನಿಸುತ್ತಿದೆಯೆಂದರೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತವೆ. ಎಲ್ಲದ್ದಕ್ಕೂ ಒಂದು ಕ್ಲಾರಿಟಿ ಬೇಕೆನಿಸುತ್ತದೆ. ಸ್ಪಷ್ಟತೆ ಬೇಕೆನಿಸುತ್ತದೆ. ಸ್ಪಷ್ಟತೆ ಹೇಗಿರಬೇಕು? ಅಲ್ಲೆಲ್ಲಿಯೂ ಗೊಂದಲಗಳಿರಬಾರದು. ಪ್ರಶ್ನಾತೀತವಾಗಿರಬೇಕು. ಇಲ್ಲಿನ ಬರವಣಿಗೆಯಲ್ಲಿ ಸಾಧ್ಯವಾದಷ್ಟು ಸ್ಪಷ್ಟತೆಯನ್ನು ತರುವುದಕ್ಕೆ ಪ್ರಯತ್ನಿಸುತ್ತೇನೆ. ನೋವು ಬೇಸರದ ಸಂಗತಿ ಬಂದಾಗ ಉದ್ಭವವಾಗಿರುವ ಕೆಲವು ಗೊಂದಲಗಳನ್ನು ನಿಮ್ಮ ಮುಂದಿಡುತ್ತೇನೆ. ನಿಮ್ಮ ಅಕ್ಕಪಕ್ಕದವರು ತಪ್ಪು ಅಥವಾ ಭ್ರಷ್ಟಾಚಾರದಲ್ಲಿ ತೊಡಗಿದ್ದರೂ ನೀವು ಅದರ ವಿರುದ್ದ ದನಿಯೆತ್ತುವುದಿಲ್ಲ, ಏಕೆಂದರೆ ಸುಮ್ಮನೆ ನಮಗ್ಯಾಕೆ ನಿಷ್ಠುರ, ಅವರು ಏನೋ ಮಾಡಿಕೊಳ್ಳಲಿ ಬಿಡಿ ಎನ್ನುತ್ತೀರಿ. ಇದರಿಂದ ಎರಡು ರೀತಿಯ ನಷ್ಟಗಳಿವೆ. ಒಂದು ಸಮಾಜಕ್ಕಾಗುವ ನಷ್ಠ ಅದರ ವಿಷಯ ಬೇಡ, ಸಮಾಜಮುಖಿಯಾಗಬೇಕೆನ್ನುವ ನಿಯಮವಿಲ್ಲ. ಆದರೆ ನಿಮ್ಮ ಸ್ನೇಹಿತ, ನಿಮ್ಮ ನೆಂಟರು, ನಿಮ್ಮ ಸಂಭಂಧಿ ಭ್ರಷ್ಟನಾಗುವಾಗ ನೀವು ತಡೆಯದೇ ಇರುವುದು ಉಢಾಫೆತನದ ಪರಮಾವಧಿ. ನನ್ನ ಅನೇಕ ಸ್ನೇಹಿತರನ್ನು ನಾನು ಪ್ರೇರೇಪಿಸುತ್ತಿರುತ್ತೀನಿ, ಒಳ್ಳೆಯದರ ಕಡೆಗೆ ಪ್ರೋತ್ಸಾಹಿಸುತ್ತಿರುತ್ತೇನೆ. ಕೆಲವರು ನನ್ನಿಂದ ದೂರಾಗಿದ್ದಾರೆ, ಅವರು ಹೋದರೆ ಹೋಗಲಿ ಎನ್ನುವುದಿಲ್ಲ, ಮುಂದೊಂದು ದಿನ ವಾಪಸ್ಸು ಬರುತ್ತಾರೆ. ಈ ದಿನಕ್ಕೆ ಅವರಿಗೆ ನನ್ನ ಸಿದ್ದಾಂತಗಳ ಮೇಲೆ ನಂಬಿಕೆಯಿಲ್ಲ ಅಷ್ಟೆ. ಅವರು ನನ್ನ ವಿರೋಧಿಗಳಲ್ಲ, ನನ್ನ ಸಿದ್ದಾಂತದ ವಿರೋಧಿಗಳು.

ಯಾವುದೇ ಸಿದ್ದಾಂತ ಸಾಧಿಸುವ ತನಕ ಯಾರೂ ಒಪ್ಪುವುದಿಲ್ಲ. ಯಾರೇಕೆ ನಾವೆ ಒಪ್ಪಿರುವುದಿಲ್ಲ. ವ್ಯಕ್ತಿತ್ವ ವಿಕಸನದ ಹಾದಿಯಲ್ಲಿ ಮತ್ತೊಂದು ಬಹಳ ಮುಖ್ಯವಾದ ವಿಷಯ, ಓದುವುದು. ಓದುವುದು ಎಂದರೇನು? ಯಾವುದನ್ನ ಓದಬೇಕು? ಹೇಗೆ ಓದಬೇಕು? ಒಬ್ಬರನ್ನೇ ಓದಿಕೊಂಡು ನಾನು ಬಹಳ ಓದಿಕೊಂಡಿದ್ದೇನೆಂದು ಬೀಗುವುದಲ್ಲ. ನಾನು ಕಂಡಂತೆ ಅನೇಕರು ಮಹಾತ್ಮ ಗಾಂಧಿಜೀಯನ್ನು ದೂರುತ್ತಾರೆ. ಅವರನ್ನು ಓದಿಕೊಂಡವರು ಇಡೀ ಭಾರತದಲ್ಲೇ ಬೆರಳೆಣಿಕೆಯಷ್ಟು, ಸಂತೋಷದ ವಿಷಯವೆಂದರೆ ಅದರಲ್ಲಿ ಕೆಲವರು ನನಗೆ ಬಹಳ ಆತ್ಮೀಯ ಗುರುಗಳು. ಆದರೇ, ಅವರ ಬಗ್ಗೆ ಏನನ್ನೂ ಓದಿಕೊಳ್ಳದ ಬಹಳ ಮೇಧಾವಿಗಳು ಉದ್ದುದ್ದ ಭಾಷಣವನ್ನು, ಪರವಾಗಿಯೂ ಮತ್ತು ವಿರುದ್ದವಾಗಿಯೂ ಮಾತನಾಡುತ್ತಾರೆ. ಗಾಂಧೀಜಿ ಅನೇಕರಿಗೆ ಕೇವಲ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ ಕಾಣಿಸುತ್ತಾರೆ, ನನಗೆ ಅದೆಲ್ಲದಕ್ಕೂ ಮೀರಿದ ಮಹಾನ್ ಚೇತನ, ಸಂತನಂತೆ, ತಪಸ್ವಿಯಂತೆ ಕಾಣುತ್ತಾರೆ. ಅಪ್ರತಿಮ ಪರಿಸರವಾದಿ, ಸಾಮಾಜಿಕ ನ್ಯಾಯದ, ಸತ್ಯತೆಯ ಸ್ವರೂಪದಂತೆ ಕಾಣುತ್ತಾರೆ. ಹಾಗಾಗಿಯೇ ನಾನು ನನ್ನ ಪಿಎಚ್‍ಡಿ ಆದಮೇಲೆ ಗಾಂಧಿ ಅಧ್ಯಯನದಲ್ಲಿ ಡಿಪ್ಲೋಮಾ ಮಾಡಿದ್ದು. ಸ್ವತಃ ಪ್ರೋ. ಜೀವನ್ ಕುಮಾರ್‍ರವರು ಕೇಳಿದ್ದರು, ಹರೀಶ್ ನಿಮಗೆ ಏಕೆ ಡಿಪ್ಲೋಮಾ ಬೇಕು. ನಮ್ಮ ಲೈಬ್ರರಿಯಲ್ಲಿ ಬಂದು ಓದಿ ಸಾಕೆಂದು. ಇಲ್ಲ ಒಬ್ಬ ವಿದ್ಯಾರ್ಥಿಯಾಗಿಯೇ ಕಲಿಯಬೇಕೆಂದು ಕಲಿತೆ, ಓದಿದೆ. ಉಪಸಂಹಾರವೆನ್ನಬೇಕಾದರೆ ಸರಳವಾಗಿ ಹೇಳುತ್ತೇನೆ, ಪ್ರತಿಯೊಬ್ಬ ವ್ಯಕ್ತಿಯ ಬದುಕು ತನ್ನ ಸ್ವಂತದ್ದು ಅದನ್ನು ಅವನೇ ಜೀವಿಸಬೇಕು ಮತ್ತು ಅದನ್ನು ಅವನಂತೆಯೇ ಜೀವಿಸಬೇಕು.

ಮೂರನೆಯದಾಗಿ, ನಮ್ಮ ದಾರಿಯನ್ನು ಆಯ್ಕೆಮಾಡಿಕೊಳ್ಳುವುದು ಹೇಗೆ? ಯಾವುದು ಸರಿ? ಯಾವುದು ತಪ್ಪು? ಇದು ಪ್ರತಿಯೊಬ್ಬರಲ್ಲಿಯೂ ಕಾಡುವ ಪ್ರಶ್ನೆ. ಇದಕ್ಕೆ ಪ್ರಮುಖವಾಗಿ ಬೇಕಿರುವುದು ನಿಮ್ಮ ಗುರಿ ಮತ್ತು ನಿಮ್ಮ ದಾರಿ. ಇತ್ತೀಚಿನ ದಿನಗಳಲ್ಲಿ ತಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಇದು ಯಾವುದರ ಕುರಿತು ಹೋಲಿಕೆ ಮಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಇತ್ತೀಚಿನ ಬಹುತೇಕ ಹೋಲಿಕೆಗಳು ಆರ್ಥಿಕತೆಗೆ ಸೇರಿರುತ್ತವೆ. ಅವನು ಅಷ್ಟು ಮಾಡಿದ ಇವನು ಇಷ್ಟು ಮಾಡಿದ ಎನ್ನುವುದರ ಕುರಿತು. ವಸ್ತು ಪ್ರಾಧನ್ಯತೆಯನ್ನು ಹತ್ತಿಕ್ಕಬೇಕಿದೆ. ನನ್ನ ಅನೇಕಾ ಸ್ನೇಹಿತರು ನನಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು ದುಡಿಯುತ್ತಿದ್ದಾರೆ ನನಗೆ ಎಂದಿಗೂ ಅದು ಬೇಕು ಎನಿಸಿಲ್ಲ. ನಾನು ನನ್ನೆಲ್ಲಾ ಸ್ನೇಹಿತರಿಗಿಂತ ಹೆಚ್ಚು ದುಡಿಯುತ್ತಿದ್ದವನು, ಅದನ್ನು ಬಿಟ್ಟು ನನಗೆ ಏನು ಬೇಕು ಆ ಕಡೆಗೆ ಬಂದವನು. ಉದಾಹರಣೆಗೆ. 2008-10ರಲ್ಲಿ ಹೈದರಾಬಾದಿನ ಐರಾಪ್ ಸಂಸ್ಥೆಯಲ್ಲಿದ್ದಾಗ ನಾನು ತಿಂಗಳಿಗೆ 30 ಸಾವಿರ ರೂಗಳನ್ನು ದುಡಿಯುತ್ತಿದ್ದೆ, ಅದಕ್ಕೆ ಮುಂಚೆ 6 ಸಾವಿರಕ್ಕೆ ಐಸೆಕ್‍ನಲ್ಲಿ ಕೆಲಸ ಮಾಡುತ್ತಿದ್ದೆ. ನನಗೆ ಹಣಕಾಸು ಅಂತಹ ವ್ಯತ್ಯಾಸವನ್ನುಂಟು ಮಾಡಿಲ್ಲ, ಮಾಡುವುದೂ ಇಲ್ಲ. ನನಗೆ ನನ್ನ ಕನಸಿನ ಸಂಸ್ಥೆ ಕಟ್ಟಬೇಕೆಂಬ ಆಸೆ ಕನಸು ಬಂತು ಅದನ್ನು ಮಾಡುತ್ತಿದ್ದೇನೆ. ಈ ಅನುಭವಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಪಿಎಚ್‍ಡಿ ಮಾಡಿರುವ ಎಷ್ಟೋ ಜನರು ತಲೆಯಲ್ಲಿ ಮೆದಳು ಬಿಟ್ಟು ಬೇರೆನೂ ಇಲ್ಲದಿದ್ದರು ಅಹಂ ನಿಂದಾಗಿ ಶಾಲೆ ಮಕ್ಕಳೊಟ್ಟಿಗೆ ಸಂವಾದವೇ? ಎನ್ನುತ್ತಾರೆ. ನನಗೆ ಆ ಇರಿಸು ಮುರಿಸು ಎಂದಿಗೂ ಬಂದಿಲ್ಲ. ನನಗೆ ಎಲ್ಲರೂ ವಿಶ್ವಮಾನವರು. ಎಲ್ಲರೂ ಅದ್ಬುತ ವ್ಯಕ್ತಿಗಳು. 

ನಾನು ಮುಕ್ತವಾಗಿ ಯಾವುದೇ ಪಕ್ಷದವರನ್ನು ಯಾವುದೇ ಇಲಾಖೆಯವರನ್ನು ಬೈಯ್ಯಬಹುದು, ಏಕೆಂದರೆ ನಾನು ನಿಯತ್ತಾಗಿದ್ದೇನೆ. ನಾನು ಯಾರ ಋಣದಲ್ಲಿಯೂ ಬದುಕುತ್ತಿಲ್ಲ. ಸ್ವಾಭಿಮಾನವನ್ನು ನಾನು ಒಪ್ಪುವುದಿಲ್ಲ. ನಾನು ಒಪ್ಪುವುದು ಸ್ವಾವಲಂಬನೆ ಬದುಕನ್ನು. ಹಾಗಾಗಿಯೇ ನಾವು ಅನ್ನ ಸಂಪಾದನೆಯನ್ನ ಹೇಳಿಕೊಡಿ ಎನ್ನುತ್ತೇವೆ ಹೊರತು ಅನ್ನ ಬೇಡುವುದನ್ನು ಅಲ್ಲ. ಕೆಲವರು ನಮ್ಮ ಹಕ್ಕು ಎನ್ನುತ್ತಾರೆ, ನಾನು ಎಲ್ಲಾ ಕಡೆಯಲ್ಲಿಯೂ ಪ್ರತಿಪಾದಿಸುವುದು ಮೊದಲು ನಿನ್ನ ಕರ್ತವ್ಯ ಮಾಡು ನಂತರ ಹಕ್ಕಿನ ಬಗ್ಗೆ ಮಾತನಾಡು. ಆ ನಿಟ್ಟಿನಲ್ಲಿ ಕೆಲವೊಂದು ನೀವು ಒಪ್ಪದ ವಿಷಯಗಳನ್ನು ನಾನಿಲ್ಲಿಡುತ್ತೇನೆ. ಉದಾಹರಣೆಗೆ ನಾವುಗಳು ರಾಜಕೀಯದವರನ್ನು ಅಥವಾ ಬೇರೆ ಭ್ರಷ್ಟ ಅಧಿಕಾರಿಗಳನ್ನು ದೂರುವ ಸಮಯದಲ್ಲಿ ನಾವೆಷ್ಟು ಸರಿ ಇದ್ದೀವಿ ಎನ್ನುವುದನ್ನು ಅವಲೋಕಿಸಬೇಕು. ಒಂದು ಸಂಸಾರ ಅಥವಾ ಕುಟುಂಬವನ್ನು ನಡೆಸುವುದಕ್ಕೆ ಆದಾಯ ಬರಬೇಕು. ಆ ಆದಾಯ ಎಲ್ಲಿಂದ ಬರುತ್ತದೆ? ನಾವು ದುಡಿಯಬೇಕು? ದುಡಿಮೆಗೆ ಕೆಲಸ ಹುಡುಕಬೇಕು ಅಥವಾ ಬೇರೆ ಇನ್ನೇನಾದರೂ ಮಾಡಲೇಬೇಕು. ಅದೇ ರೀತಿ ಒಂದು ಸರ್ಕಾರ ನಡೆಸಲು ಆದಾಯ ಇರಬೇಕು. ಅದು ಎಲ್ಲಿಂದ ಬರಬೇಕು? ರಾಜ್ಯವೇ ಆಗಲೀ ದೇಶವೇ ಆಗಲಿ ಹಣ ಸಂಪಾದನೆ ಹೇಗೆ ಮಾಡಬೇಕು? ನಮ್ಮ ತೆರಿಗೆ ಹಣ. ನಾವುಗಳು ತೆರಿಗೆ ವಂಚಿತರಂತೆ ನಡೆದುಕೊಂಡು ತೆರಿಗೆ ಉಳಿತಾಯ ಮಾಡಲು ಏನೆಲ್ಲಾ ಮಾರ್ಗಗಳಿವೆಯೋ ಅದನ್ನೆಲ್ಲಾ ಹುಡುಕುತ್ತೇವೆ.

ಈ ನಿಟ್ಟಿನಲ್ಲಿ ನಾನು ಮಾಡುತ್ತಿರುವುದನ್ನು ಹೇಳುತ್ತೇನೆ. ನಮ್ಮ ಸಂಸ್ಥೆಗೆ ಸಾಕಷ್ಟು ಜನರು 80ಜಿ ಸರ್ಟಿಫಿಕೇಟ್ ಇದ್ಯಾ, ನಾವು ನಿಮಗೆ ದೇಣಿಗೆ ಕೊಟ್ಟರೆ ತೆರಿಗೆ ಉಳಿತಾಯವಾಗುತ್ತದೆಯೇ? ಆ ಸಮಯದಲ್ಲಿ ನಾನು ಅವರಿಗೆ ಹೇಳುವುದು. ಹೌದು ಇದೆ. ಆದರೆ, ತೆರಿಗೆ ವಿನಾಯಿತಿಗೆಂದು ನೀವು ದೇಣಿಗೆ ನೀಡುವುದಾದರೆ ನಾವು ತೆಗೆದುಕೊಳ್ಳುವುದಿಲ್ಲ. ನೀವುಗಳು ಬಂದು ನಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಬದಲಾವಣೆಗೆಗಾಗಿ ದೇಣಿಗೆ ನೀಡುತ್ತಿದ್ದರೆ ಮಾತ್ರ ನಾವು ಪಡೆಯುವುದು ಎಂದು. ನಿಮಗೆ ಅಚ್ಚರಿಯಾಗಬಹುದು ಸಾಕಷ್ಟು ಜನರು ಅದಕ್ಕೆ ಒಪ್ಪುವುದಿಲ್ಲ. ಇದನ್ನು ಏಕೆ ಇಲ್ಲಿ ಹೇಳುತ್ತಿದ್ದೇನೆಂದರೆ ನಮ್ಮ ಮನಸ್ಥಿತಿ ಎಲ್ಲಿಗೆ ಬಂದಿದೆಯೆಂದು ತೋರಿಸುವುದಕ್ಕೆ. ಒಂದು ದೇಶದ ಪ್ರಜೆಯಾಗಿ ಆ ದೇಶದ ಕಾನೂನು ಅವನಿಗೆ ಬೈಬಲ್ ಇದ್ದಂತೆ. ಅದನ್ನು ಅವನು ಪಾಲಿಸಲೇಬೇಕು. ನಾವುಗಳು ಪ್ರಜೆಗಳಾಗಿ ಎಷ್ಟರಮಟ್ಟಿಗೆ ಅವುಗಳನ್ನು ಪಾಲಿಸುತ್ತಿದ್ದೇವೆ? ಕಾನೂನಿನ ಅರಿವು ನಮ್ಮಲ್ಲಿ ಎಷ್ಟಿದೆ? ಸಂವಿಧಾನದ ವಿಷಯ ಬಂದಾಗ ಮೀಸಲಾತಿಯ ಹೊರಕ್ಕೆ ಮಾತನಾಡುವುದೇ ಇಲ್ಲ. ಮೀಸಲಾತಿಯ ಪರ ಅಥವಾ ವಿರೋಧ. ಸಂವಿಧಾನದ ಆಶಯವನ್ನು ಮತ್ತು ಸಂಪೂರ್ಣ ಮಾಹಿತಿಯನ್ನು ಎಲ್ಲರಿಗೂ ತಿಳಿಸಬೇಕು. 

ಕೊನೆಯದಾಗಿ ಕೆಲವು ಅಂಶಗಳನ್ನು ಹೇಳಿ ಮುಗಿಸುತ್ತೇನೆ. ನೀವು ಯಾವುದಾದರೂ ಅತ್ತ್ಯತ್ತಮ ಕಾರ್ಯಗಳನ್ನು ಮಾಡಲು ಹೊರಟಾಗ ಯಾರೂ ನಿಮ್ಮೊಂದಿಗೆ ಬರುವುದಿಲ್ಲ. ಏಕೆಂದರೆ ಅವರಿಗೆ ಆ ಮಟ್ಟಿಗೆ ಯೋಚನೆ ಮಾಡುವ ಶಕ್ತಿ ಅಥವಾ ಧೈರ್ಯವಿರುವುದಿಲ್ಲ. ಅವರು ನೋಡಿರುವ ಅಥವಾ ಅವರು ಇರುವ ಪರಿಸರ ಹಾಗಿರುತ್ತದೆ. ನೀವು ಮುನ್ನುಗ್ಗಿ ನಿಮ್ಮ ಕಾರ್ಯವೈಖರಿ ನೋಡಿ ಅವರೆಲ್ಲರೂ ಬರುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. ಪ್ರಾಮಾಣಿಕತೆ ಅದರಲ್ಲಿಯೂ ಹಣಕಾಸಿನ ವಿಷಯದಲ್ಲಿ ಪ್ರಾಮಾಣಿಕತೆಯಿಂದ ಇದ್ದರೆ ನಿಮ್ಮನ್ನು ಯಾರೂ ಎಂದಿಗೂ ಬಗ್ಗಿಸಲಾಗುವುದಿಲ್ಲ. ನನ್ನನ್ನು ಬೇರೆ ವಿಷಯದಲ್ಲಿ ಬಗ್ಗಿಸಹುದು ಆದರೇ ಹಣಕಾಸಿನ ವಿಷಯದಲ್ಲಿ ನಾನೆಂದೂ ಭ್ರಷ್ಟನಲ್ಲ ಮತ್ತು ಮುಂದಿಗೂ ಆಗಲಾರೆ. ಬೇರೆ ವಿಷಯದಲ್ಲಿ ಎಂದಾಗ ನನ್ನ ಹಳೆಯ ಲೇಖನಗಳಲ್ಲಿ ಬರೆದಿದ್ದೇನೆ ನನ್ನ ಕುಡಿತ ಮತ್ತು ಸಿಗರೇಟಿನ ಕುರಿತು. ಕೆಲಸದ ವಿಷಯದಲ್ಲಿ ಮಾತನಾಡುವ ಹಾಗೆಯೇ ಇಲ್ಲ, ಕ್ಷೇತ್ರದಲ್ಲಿ ಬಹಿರಂಗವಾಗಿ ಸವಾಲು ಹಾಕುತ್ತೇನೆ ನನ್ನಷ್ಟು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ತೋರಿಸಿಯೆಂದು. ಇದೆಲ್ಲದಕ್ಕೂ ಕಾರಣ ನಾನು ನನಗೆ ಪೈಪೋಟಿ ನೀಡುತ್ತಾ ನನ್ನನ್ನೇ ಅವಲೋಕಿಸಿಕೊಂಡು ಬೆಳೆಯುತ್ತಿರುವುದು. 

ಈ ಲೇಖನದಲ್ಲಿ ಸಾಧ್ಯವಾದಷ್ಟು ನನ್ನ ಬಗ್ಗೆಯೇ ಹೇಳಿದ್ದೇನೆ, ಹೊಗಳಿಕೊಂಡಿದ್ದೇನೆ. ಏಕೆಂದರೆ ನನ್ನ ಬಗ್ಗೆಯೇ ಹೇಳಿದರೆ ನಿಮಗೆ ಅರ್ಥವಾಗುತ್ತದೆ ಇಲ್ಲವಾದರೆ ಇದು ಮತ್ತೊಂದು ಜನರಲ್ ವಿಷಯ ಎನ್ನುವಂತಾಗುತ್ತದೆ. ನಿಮ್ಮ ಅನಿಸಿಕೆಗಳು ಮುಕ್ತವಾಗಿರಲಿ, ಚರ್ಚಿಸೋಣ, ನಮ್ಮ ಮತ್ತು ನಿಮ್ಮ ಉದ್ದೇಶ ಉತ್ತಮ ಸಮಾಜ ನಿರ್ಮಾಣವೆಂಬುದು ನನಗೆ ತಿಳಿದಿದೆ. ಎಲ್ಲರೂ ಒಟ್ಟಾಗಿ ಸೇರಿ ಕಟ್ಟೋಣ. 

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...