29 ಮೇ 2018

ಪರಿಸರ ಸಂರಕ್ಷಣೆ: ಅವೈಜ್ಞಾನಿಕ ಪರಿಸರವಾದಿ ಮತ್ತು ತೋರಿಕೆಯ ಪರಿಸರ ಪ್ರೇಮಿಗಳಿಂದ ನರಳುತ್ತಿರುವ ಪರಿಸರ ವ್ಯವಸ್ಥೆ!!!



ನಮಸ್ಕಾರ ಸ್ನೇಹಿತರೇ,
ಶೀರ್ಷಿಕೆಯನ್ನು ಗಮನಿಸಿದಾಗಲೇ ತಮಗೆ ನನ್ನ ಲೇಖನದ ತಿರುಳು ತಿಳಿದಿರುತ್ತದೆ. ನಾನು ಇದನ್ನು ಬಹಳ ಆಕ್ರೋಶ ಮತ್ತು ಕೋಪದಿಂದಲೇ ಬರೆಯುತ್ತಿದ್ದೇನೆ. ಇತ್ತಿಚಿನ ದಿನಗಳಲ್ಲಿ ಎಲ್ಲವೂ ಟ್ರೆಂಡ್ ಆಗುತ್ತದೆ. ರಾತ್ರಾರಾತ್ರಿ ಹೀರೋಗಳಾಗುತ್ತಾರೆ, ಜನಪ್ರಿಯರಾಗುತ್ತಾರೆ, ಜನಪ್ರಸಿದ್ದೀಯ ಉತ್ತುಂಗಕ್ಕೂ ಹೋಗುತ್ತಾರೆ. ಇದು ಎಲ್ಲಾ ಕ್ಷೇತ್ರದಲ್ಲಿಯೂ ಅದರಲ್ಲಿ ಭಾರತದಲ್ಲಿ ಆಗುತ್ತಿರುವ ಮಾರಕ ಪ್ರಕ್ರಿಯೆ. ಮಾರಕ ಎನ್ನುವ ಪದಬಳಕೆಯ ಉದ್ದೇಶವಿದೆ. ಯಾವುದು ದಿಡೀರ್ ಪ್ರಸಿದ್ದಿಯಾಗಬಾರದು ಅದು ಹೆಚ್ಚು ಕಾಲ ಉಳಿಯುವುದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಗಮನಿಸಿನೋಡಿ, ಕೆಲವರು ಇದ್ದಕ್ಕಿದ್ದಂತೆ ಪ್ರಸಿದ್ದಿಯಾದರು, ಸಿನೆಮಾ, ಕಿರುತೆರೆ, ರಿಯಾಲಿಟಿ ಶೋ, ಸಾರ್ವಜನಿಕ ಕ್ಷೇತ್ರ, ಕ್ರಿಕೇಟ್, ರಾಜಕೀಯ, ಪರಿಸರ ಸಂರಕ್ಷಣೆ, ರೈತ ಹೋರಾಟ, ಧರ್ಮ, ಜಾತಿ, ಭಾಷೆ, ರಾಜ್ಯ, ದೇಶ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಅಷ್ಟೆ. ಅವರೆಲ್ಲರ ಮುಖ ನಿಧಾನವಾಗಿ ಬದಲಾಗುತ್ತಾ ಹೋಯಿತು, ಕೆಲವರು ತೆರೆಮರೆಗೆ ತೆರಳಿದರು, ಆದರೇ ಅವರು ಮಾಡಿದ ಹಾನಿ? ಅದನ್ನು ತುಂಬಲು ಸಾಕಷ್ಟು ವರ್ಷ ಬೇಕಾಗುತ್ತದೆ ಮತ್ತು ಇವರಿಂದ ಪ್ರೇರೇಪಿತರಾಗಿರುವ ಎರಡನೆಯ ದರ್ಜೆಯ ನಾಯಕರು ಇನ್ನುಷ್ಟು ಹಾಳು ಮಾಡುತ್ತಾರೆ. 


ಸದ್ಯಕ್ಕೆ ಜೂನ್ ಐದು ಹತ್ತಿರವಿರುವುದರಿಂದ ಪರಿಸರ ಸಂರಕ್ಷಣೆಯಲ್ಲಿ ಈ ಮಹಾನುಭಾವರು ಮಾಡಿರುವ ಯಡವಟ್ಟುಗಳನ್ನೊಮ್ಮೆ ನೋಡೋಣ. ಅದಕ್ಕೂ ಮುಂಚೆ ಪರಿಸರ ಮತ್ತು ಪರಿಸರ ವ್ಯವಸ್ಥೆ ಕುರಿತು ಕೆಲವೊಂದು ಸರಳ ವಿಚಾರಗಳನ್ನು ತಿಳಿದುಕೊಳ್ಳೋಣ. ಪರಿಸರವೆಂದರೇನು? ಪರಿಸರ ವ್ಯವಸ್ಥೆಯೆಂದರೇನು? ನಮ್ಮ ಸುತ್ತು ಮುತ್ತಲಿರುವ ಜೀವವಿರುವ ಮತ್ತು ಇಲ್ಲದೇಯಿರುವ ಎಲ್ಲವನ್ನೂ ಸೇರಿಸಿ ಪರಿಸಅರವೆನ್ನುತ್ತೇವೆ. ಅಂದರೇ, ಮುಗಿಯಿತು ಇಲ್ಲಿಗೆ ನಿಮಗೆ ಇಷ್ಟವಿರಲಿ ಇಲ್ಲದೇಯಿರಲಿ, ಸುತ್ತ ಮುತ್ತವಿರುವ ಎಲ್ಲವೂ ಪರಿಸರದ ಅಂಗ. ಅದರಂತೆಯೇ ಪರಿಸರ ವ್ಯವಸ್ಥೆಯೆಂದರೇನು? ಅಲ್ಲಿ ಏನು ನಡೆಯುತ್ತದೆ? ಪರಿಸರದಲ್ಲಿ ಒಂದು ವ್ಯವಸ್ಥೆಯಿದೆ, ಅದರಲ್ಲಿ ಜೀವವಿರುವ ಜೀವಿಗಳ ನಡುವೆ, ಮತ್ತು ಜೀವವಿಲ್ಲದೇಯಿರುವ ವಸ್ತುಗಳ ನಡೆಯುವ ಚಟುವಟಿಕೆಗಳೆಲ್ಲವನ್ನೂ ಸೇರಿಸಿಕೊಂಡು ಪರಿಸರ ವ್ಯವಸ್ಥೆಯೆನ್ನಲಾಗಿದೆ. ಇದರಲ್ಲಿಯೂ ಅಷ್ಟೇ ಎಲ್ಲವೂ ಸೇರುತ್ತವೇ, ಸೇರಲೇಬೇಕು. ಇನ್ನೂ ನೇರವಾಗಿ ನಿಮಗೆ ಹೇಳಬೇಕೆಂದರೆ ಈ ಸೃಷ್ಟಿಯಲ್ಲಿರುವ ಪ್ರತಿಯೊಂದು ಬೇಕೆ ಬೇಕು ಮತ್ತು ಯಾವುದನ್ನೂ ನಿರ್ಲಕ್ಷಿಸುವಂತಿಲ್ಲ, ಜೀವವಿರಲಿ ಇಲ್ಲದೇಯಿರಲಿ ಎಲ್ಲದರ ಪಾತ್ರವೂ ಇದೆ. ಇದನ್ನು ನಾವು ಪಾಲಿಸುತ್ತಿದ್ದೇವಾ? ನಾವೇನು ಮಾಡುತ್ತಿದ್ದೇವೆನ್ನುವುದನ್ನು ಅವಲೋಕಿಸೋಣ.


ಇತ್ತಿಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಅಂತರಾಷ್ಟ್ರೀಯ ದಿನಗಳಿವೆ. ಅವುಗಳು ದಿನ ದಿನಕ್ಕೂ ಹೆಚ್ಚೆಚ್ಚು ಪ್ರಸಿದ್ದಿಯಾಗುತ್ತಿವೆ. ಅದರಲ್ಲಿ ಒಂದು ವಿಶ್ವ ಪರಿಸರ ದಿನ. ವಿಶ್ವ ಪರಿಸರ ದಿನದ ಉದ್ದೇಶವೊಂದೆ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಜನರಿಗೆ ತಲುಪಿಸುವುದು, ಅದಕ್ಕಾಗಿ ವರ್ಷಕ್ಕೊಂದು ವಿಷಯವನ್ನಿಟ್ಟುಕೊಂಡು ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಆದರೇ ಭಾರತದಲ್ಲಿ ಆಗುತ್ತಿರುವ ಬೆಳವಣಿಗೆಗಳು ಅಚ್ಚರಿ ಮತ್ತು ಆತಂಕವನ್ನುಂಟು ಮಾಡುತ್ತಿವೆ. ನೀವು ಹಾಗೆಯೇ ಗಮನಿಸಿ ಪರಿಸರವೆಂದರೆ ಬಹುತೇಕರ ಬಾಯಲ್ಲಿ ಬರುವುದು ಗಿಡ ನೆಡುವುದು, ಮರ ಬೆಳೆಸುವುದು. ಇದರಿಂದ ಆಚೆಗೆ ಮಾತನಾಡುವವರು ಬಹಳ ಕಡಿಮೆ. ಅರಣ್ಯ ಇಲಾಖೆ ಸೇರಿದಂತೆ ಅನೇಕರು ಕೋಟಿ ಕೋಟಿ ಗಿಡಗಳನ್ನು ನೆಡುತ್ತಿದ್ದೇವೆ ಎನ್ನುತ್ತಿದ್ದಾರೆ, ಇವುಗಳನ್ನು ಅನೇಕ ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ ಮತ್ತು ಅವರು ನೆಟ್ಟಿದ್ದಾರೆ. ಪ್ರತಿ ವರ್ಷಕ್ಕೂ ಕೋಟಿ ಗಿಡಗಳನ್ನು ನೆಟ್ಟಿದ್ದಾದರೇ ನಮ್ಮ ರಾಜ್ಯ ಸಂಪೂರ್ಣ ಕಾಡಾಗಬೇಕಿತ್ತು ಅಲ್ವಾ? ನೆಟ್ಟ ಗಿಡಗಳೆಲ್ಲಿ? ಪರಿಸರ ದಿನದಂದು ಗಿಡಗಳನ್ನು ನೆಟ್ಟು ಆ ಕಡೆಗೆ ತಿರುಗಿಯೂ ನೋಡದ ಅದೆಷ್ಟೋ ಪರಿಸರವಾದಿಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಒಂದೊಂದು ಗಿಡವನ್ನು ಅರಣ್ಯ ಇಲಾಖೆಯ ನರ್ಸರಿಯಲ್ಲಿ ಬೆಳೆಸಲು ಕನಿಷ್ಠ ಒಂದು ವರ್ಷ ಕಷ್ಟಪಟ್ಟಿರುತ್ತಾರೆ, ಆ ಸಸಿಗಳನ್ನು ಸಬ್ಸಿಡಿ ರೂಪದಲ್ಲಿ ಮಾರಲಾಗುತ್ತದೆ. ಖಾಸಗಿ ನರ್ಸರಿಯಲ್ಲಿ 50-60 ರೂಪಾಯಿಗೆ ಮಾರುವ ಗಿಡಗಳನ್ನು ಇಲಾಖೆಯು ಕೇವಲ 5-10 ರೂಪಾಯಿಗಳಿಗೆ, ಕೆಲವೊಮ್ಮೆ ಉಚಿತವಾಗಿಯೇ ನೀಡುತ್ತಿದೆ. ಸಸಿ ಬೆಳೆಸಲು ಹಾಕಿದ ವೆಚ್ಚ ಯಾರ ಹಣ?


ಮೇಲಿನ ಸಾಲುಗಳ ಅರ್ಥವಿಷ್ಟೆ, ಗಿಡ ನೆಡುವುದು ಮುಖ್ಯವಲ್ಲ ಅದರ ಬಗ್ಗೆ ಎಚ್ಚರಿಕೆ ವಹಿಸಿ ಬೆಳೆಸುವುದು ಮುಖ್ಯ. ಪ್ರತಿವರ್ಷ ತೋರಿಕೆಯ ಪರಿಸರಪ್ರೇಮವನ್ನು ನಿಲ್ಲಿಸಬೇಕು. ಅದಲ್ಲದೆ ಪರಿಸರವೆಂದರೇ ಕೇವಲ ಮರಗಳು ಮಾತ್ರವಲ್ಲ ಎನ್ನವುದನ್ನು ಅರಿಯಬೇಕು. ಇದರಲ್ಲಿಯೇ ಇನ್ನೊಂದನ್ನು ಗಮನಿಸೋಣ, ವೈಜ್ಞಾನಿಕವಾಗಿ. ಒಂದು ಕೋಟಿ ಗಿಡಗಳನ್ನು ನೆಡುತ್ತೀರೆಂದೇ ಪರಿಗಣಿಸೋಣ, ನೀವು ಎಲ್ಲಿ ನೆಡುತ್ತಿದ್ದೀರಿ? ಅಷ್ಟು ಜಾಗವೆಲ್ಲಿದೆ? ಜಾಗ ಸಿಕ್ಕಿತ್ತೆನ್ನೋಣ, ಅದಕ್ಕೆ ನೀರೆಲ್ಲಿಂದ? ಕುಡಿಯುವುದಕ್ಕೆ ನೀರಿಲ್ಲವೆಂದು ಪರದಾಡುತ್ತಿರುವಾಗ ಮರ ಬೆಳೆಸಲು ನೀರನ್ನು ಎಲ್ಲಿಂದ ತರುತ್ತೀರಿ? ನೀವು ನೆಡುತ್ತಿರುವ ಸಸಿಗಳಾವು? ಯಾವ ಜಾತಿಯವು? ಯಾವುದು ನರ್ಸರಿಯಲ್ಲಿ ಸಿಗುತ್ತದೆಯೋ ಅದನ್ನು ನೀವು ತಂದು ನೆಡುತ್ತಿರಿ, ಅದು ಆ ವಾತಾವರಣಕ್ಕೆ ಹೊಂದುತ್ತದೆಯೇ? ಗೊತ್ತಿಲ್ಲ. 


ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹುಚ್ಚಾಟದ ಅತಿರೇಕದಲ್ಲಿರುವ ಎರಡು ವಿಷಯಗಳು. ಮೊದಲನೆಯದಾಗಿ ಕೆಲವರು ಸಂದೇಶಗಳನ್ನು ಕಳುಹಿಸುತ್ತಾರೆ, ನೀವು ತಿನ್ನುವ ಹಣ್ಣಿನ ಬೀಜಗಳನ್ನು ಎಸೆಯಬೇಡಿ, ಮಳೆಗಾಲದಲ್ಲಿ ನೀವು ಹೊರಗೆ ಹೋದಾಗ ಎಸೆಯಿರಿ, ಅವುಗಳು ಮರಗಳಾಗುತ್ತವೆ, ಎಂಥಹ ಮೂರ್ಖತನದ ಪರಮಾವಧಿ? ಯಾವ ಬೀಜ ಎಲ್ಲಿ ಮೊಳಕೆಯಾಗುತ್ತದೆ? ಯಾವ ಜಾಗದಲ್ಲಿ ಬೆಳೆಯಬೇಕು? ಎನ್ನುವ ಕನಿಷ್ಠ ಜ್ಞಾನವೂ ಇಲ್ಲವೆ? ಎರಡನೆಯ ವಿಷಯ, ಸೀಡ್‍ಬಾಲ್. ಈ ಪದವನ್ನು ಕೇಳಿದರೆ ನನಗೆ ಮೈಯೆಲ್ಲಾ ಕುದಿಯುತ್ತದೆ. ಏನಿದು ಸೀಡ್‍ಬಾಲ್? ಎಂದು ತಿಳಿಯೋಣ. ಯಾವುದೋ ಜಾತಿಯ ಮರಗಳ ಬೀಜಗಳನ್ನು ಸಂಗ್ರಹಿಸಿ, ಅದಕ್ಕೆ ಮಣ್ಣು/ಗೊಬ್ಬರದ ಸಹಾಯದಿಂದ ಉಂಡೆಮಾಡಿಕೊಳ್ಳುವುದು, ಮುಂಗಾರು ಶುರುವಾದಾಗ ಖಾಲಿ ಜಾಗಕ್ಕೆ ತೆರಳಿ ಎಸೆಯುವುದು. ಎಸೆದಾಗ ಅವುಗಳೆಲ್ಲವು ಬೆಳೆದು ಮರವಾಗುವುದೆಂಬುದು ಇವರ ನಂಬಿಕೆ. ಇದನ್ನು ವೈಜ್ಞಾನಿಕವಾಗಿ ನೋಡೋಣ. ಮೊದಲನೆಯದಾಗಿ ಯಾವ ಜಾತಿಯ ಬೀಜಗಳಿವು? ಯಾವುದೋ ಜಾತಿಯವು. ಇವುಗಳನ್ನು ಖಾಲಿ ಜಾಗದಲ್ಲಿ ಎಸೆಯುತ್ತಾರೆ. ಈ ಖಾಲಿ ಜಾಗ ಇದಕ್ಕೂ ಮುಂಚೆ ಏನಾಗಿತ್ತು? ಪ್ರಕೃತಿಯಲ್ಲಿ ಕೆಲವು ಜಾಗಗಳು ಬರಡಾಗಿಯೇ ಇರಬೇಕು. ಬರಡು ಪ್ರದೇಶವನ್ನು ಹಸಿರು ಪ್ರದೇಶವಾಗಿಸುತ್ತೇವೆಂದರೆ ಏನರ್ಥ? ಮಲೆನಾಡನ್ನು ಬಯಲು ಸೀಮೆ ಮಾಡಿದರೆ ಎಷ್ಟು ಅಪಾಯವೋ ಅಷ್ಟೆ ಅಪಾಯ, ಬರಡು ಪ್ರದೇಶವನ್ನು ಹಸಿರು ಪ್ರದೇಶವನ್ನಾಗಿಸುವುದು. ಮರ ಬೆಳೆಸುತ್ತೇನೆಂಬ ಹುಂಬತನದಿಂದ ಎಲ್ಲೆಂದರಲ್ಲಿ ಸಿಕ್ಕಿ ಸಿಕ್ಕಿದ ಜಾತಿಯ ಮರಗಳನ್ನು ಹಾಕಿದರೆ ಅಲ್ಲಿನ ಪರಿಸರದ ಮೇಲೆ ಎಂಥಹ ವ್ಯತಿರಿಕ್ತ ಪರಿಣಾಮ ಬೀರುವುದು ಆಲೋಚಿಸಿ. 


ನೀವು ಯಾವುದಾದರೂ ನಿಸರ್ಗದತ್ತ ಕಾಡನ್ನು ನೋಡಿ, ಅದನ್ನು ಗಮನಿಸಿ. ನೀವುಗಳು ಚಾರಣಿಗರಾದರೇ ಅದರ ಅನುಭವವಿರುತ್ತದೆ. ಇಲ್ಲದೇ ಇದ್ದರೂ ನಾನು ಅದನ್ನು ವಿವರಿಸುತ್ತೇನೆ. ಕಾಡಿನಲ್ಲಿ ಒಂದೇ ರೀತಿಯ ಮರಗಳಿರುವುದಿಲ್ಲ, ಅದಿದ್ದರೆ ಅದನ್ನು ಕಾಡು ಎನ್ನುವುದಿಲ್ಲ, ನೆಡುತೋಪು ಎನ್ನಬೇಕು. ಪ್ರತಿ ಕಾಡಿನಲ್ಲಿಯೂ ಸಣ್ಣ ಪುಟ್ಟ ಗಿಡಗಳು, ಪೊದೆಗಳು ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುತ್ತವೆ. ಮರಗಳು ಹೆಚ್ಚಾದರೆ ನೆರಳು ಹೆಚ್ಚಾದರೆ ಅದೆಷ್ಟೋ ಜಾತಿಯ ಗಿಡಗಳು ಬರುವುದಿಲ್ಲ.  ಅದರಂತೆಯೇ ಪ್ರತಿಯೊಂದು ಕಾಡಿನ ತುತ್ತ ತುದಿಯನ್ನು ನೋಡಿ, ಅಲ್ಲೆಲ್ಲಾ ಹುಲ್ಲುಗಾವಲಿರುತ್ತದೆ. ಕೆಲವು ಪ್ರಾಣಿಗಳಿಗೆ ಹುಲ್ಲು ಬೇಕು, ಕೆಲವಕ್ಕೆ ಹಣ್ಣು ಬೇಕು, ಕೆಲವಕ್ಕೆ ಆ ಪ್ರಾಣಿಗಳೇ ಬೇಕು. ಇದು ಪ್ರಕೃತಿಯ ನಿಯಮ. ವೈವಿಧ್ಯತೆಯಿಂದರಬೇಕು. ಅಂತಹ ಪರಿಸರವನ್ನು ನೀವುಗಳು ಒಂದೇ ಜಾತಿಯ ಬೀಜಗಳನ್ನು ಎಸೆದು ಹಾಳು ಮಾಡುತ್ತಿರುವುದು ನಿಮಗೆ ತಿಳಿಯುತ್ತಿಲ್ಲವೇ? ಆದರೇ, ನಾನು ಗಮನಿಸಿದಂತೆ, ಕೆಲವು ಭಾಗದಲ್ಲಿ ಅದರಲ್ಲಿಯೂ ಸಿರಸಿಯ ನಮ್ಮ ಸ್ನೇಹಿತರಾದ ಉಮಾಪತಿ ಭಟ್ಟರು, ಅಲ್ಲಿನ ಕಾಡಿನಲ್ಲಿ ನಶಿಸುತ್ತಿರುವ ಪ್ರಭೇಧಗಳ ಬೀಜಗಳನ್ನು ಆಯ್ದು ತಂದು ಸೀಡ್‍ಬಾಲ್ ಮಾಡಿ ನಿಯಮಿತವಾಗಿ ಅದೇ ಕಾಡಿಗೆ ಎಸೆಯುತ್ತಿದ್ದಾರೆ. ಇದನ್ನು ನಾನು ಸಂಪೂರ್ಣವಾಗಿ ಬೆಂಬಲಿಸದೇ ಇದ್ದರೂ ಅವರಲ್ಲಿ ಸ್ವಲ್ಪವಾದರೂ ವೈಜ್ಞಾನಿಕ ಪ್ರಜ್ಞೆಯಿರುವುದು ನೆಮ್ಮದಿಯ ವಿಷಯ. ಆದರೇ ಬಹುತೇಕರು ಮಾಡುತ್ತಿರುವುದು ಮಾತ್ರ ಮಾರಕ.


ಇದೇ ರೀತಿಯ ಇನ್ನೊಂದಿಷ್ಟು ಉದಾಹರಣೆಗಳನ್ನು ಮಾತ್ರ ನೀಡುತ್ತೇನೆ. ಅದರ ಕುರಿತು ವಿವರವಾಗಿ ಮತ್ತೊಮ್ಮೆ ಚರ್ಚಿಸೋಣ. ನೀವು ಗಮನಿಸಿರುವ ಹಾಗೆ ಎಲ್ಲೆಂದರಲ್ಲಿ ಮಳೆ ನೀರು ಕೊಯ್ಲು ಮಾಡಿಸುವುದು. ಎಲ್ಲಿ ಮಾಡಿಸುವುದು ಸೂಕ್ತ ಎನ್ನುವ ಪರಿಜ್ಞಾನವೇ ಇಲ್ಲದೆ ಮಾಡಿಸುವುದು, ಅದರಂತೆಯೇ ಚೆಕ್‍ಡ್ಯಾಮ್‍ಗಳು, ಕೃಷಿ ಹೊಂಡ ಇವುಗಳು ಯಾವ ವಾತಾವರಣಕ್ಕೆ ಬೇಕು, ಎಲ್ಲಿಗೆ ಬೇಡ ಎನ್ನುವುದನ್ನೆ ಆಲೋಚಿಸದೆ ನಿರ್ಮಿಸುವುದು. 

ಕೊನೆಹನಿ: ಇದಕ್ಕೆಲ್ಲಾ ಮೂಲ ಕಾರಣ ಸೋಗಿನ ಪರಿಸರ ಪ್ರೇಮ ಮತ್ತು ಪ್ರಚಾರಕ್ಕಾಗಿ ಮಾಡುವ ಪರಿಸರ ಸಂರಕ್ಷಣೆ. ವೈಜ್ಞಾನಿಕವಾಗಿ ಪರಿಸರವನ್ನು ಕಾಣಲಾಗದೆ ಇರುವುದು. ಭಾರತದ ಮಟ್ಟಿಗೆ ಪರಿಸರ ಸಂರಕ್ಷಣೆ ನಮ್ಮ ಜೀವನದ ಅಂಗವಾಗಿದ್ದ ಸಂಪ್ರದಾಯ ನಮ್ಮದು. ಇದನ್ನು ಮೂರ್ನಾಲ್ಕು ಸಾಲುಗಳಲ್ಲಿ ಹೇಳುತ್ತೇನೆ. ಮೂವತ್ತು ವರ್ಷ ಹಿಂದಕ್ಕೆ ಹೋಗಿ, ಮನೆಯಲ್ಲಿ ದನ ಕರುಗಳಿದ್ದವು, ಯಾವುದೇ ಆಹಾರ ಉಳಿದರು ದನಕರುಗಳಿಗೆ ಕಲಗಚ್ಚಾಗುತ್ತಿತ್ತು, ಸೀಮೆ ಗೊಬ್ಬರದ ಮಾತಿಲ್ಲ, ಸಗಣಿ ಗೊಬ್ಬರ, ಔಷಧಿ ಎನ್ನುವಂತೆಯೆ ಇರಲಿಲ್ಲ, ಮನೆಯ ಹಿಂದೆ ನುಗ್ಗೆ ಮರ, ಮುಂದಕ್ಕೆ ತೊಂಡೆ ಚಪ್ಪರ, ಪಾತ್ರೆ ತೊಳೆದ ನೀರು ಬಾಳೆ ಮರ, ನಮ್ಮ ತರಕಾರಿ ನಮ್ಮಲ್ಲಿಯೇ ಬೆಳೆಯುತ್ತಿದ್ದವು. ಸ್ನಾನ ಮಾಡಿದ ನೀರು ಕೂಡ ಯಾವುದೋ ಒಂದು ಗಿಡಕ್ಕೆ ಹೋಗುತ್ತಿತ್ತು, ಸೋಪು ಕಡಿಮೆಯಿತ್ತು ಸೀಗೆಕಾಯಿ ಹೆಚ್ಚಿತ್ತು, ಬಟ್ಟೆ ತೊಳೆಯುವುದಕ್ಕೆ ನದಿ ದಂಡೆ, ಎಲ್ಲರೊಂದಿಗೂ ಮಾತುಕತೆ, ಒಣಗಿಸುವುದಕ್ಕೆ ಸೂರ್ಯನ ಬೆಳಕು ಹೀಗಿತ್ತು ಬದುಕು. ಈಗೇನಾಯ್ತು? ಎನ್ನುವುದು ನಿಮಗೆ ಗೊತ್ತಿದೆ. 

ಪರಿಸರ ದಿನ, ಪರಿಸರ ಸಂರಕ್ಷಣೆಯೆಂದರೆ ಕೇವಲ ಗಿಡ ನೆಡುವುದು ಮಾತ್ರವಲ್ಲ ಅವೈಜ್ಞಾನಿಕವಾಗಿ ಮಾಡುವುದೂ ಅಲ್ಲ ಎನ್ನುವುದಕ್ಕೆ ಈ ನನ್ನ ಮಾತುಗಳು. ನಿಮಗೆ ಯಾವುದೇ ಬಿನ್ನಾಭಿಪ್ರಾಯಗಳಿದ್ದರೂ ನೀವು ನನ್ನೊಂದಿಗೆ ಚರ್ಚಿಸಬಹುದು. ಸುಳ್ಳು ಪರಿಸರವಾದಿಗಳ ಬಗ್ಗೆ ಎಚ್ಚರವಿರಲಿ, ಇವರು ರಾಜಕಾರಣಿಗಳಂತೆಯೇ ಮಾರಕ. 

28 ಮೇ 2018

ಕೇವಲ ಅನುದಾನಕ್ಕಾಗಿ ಸಂಶೋಧನ ಸಂಸ್ಥೆಗಳು ಮತ್ತು ಹೆಸರಿಗಾಗಿ ಗುಂಪುಗಾರಿಕೆ !!!


ನಮಸ್ಕಾರ ಸ್ನೇಹಿತರೆ,
ಇದೊಂದು ಲೇಖನವನ್ನು ಸಾಕಷ್ಟು ವರ್ಷಗಳಿಂದ ಬರೆಯಲೇಬೇಕೆಂದಿದ್ದವನು ನಾನು. ಅದಕ್ಕೆ ಈಗ ಸಮಯ ಕೂಡಿಬಂದಿದೆ. ಅನೇಕರಿಗೆ ಸಂಶೋಧನೆ ಹೇಗೆ ನಡೆಯುತ್ತದೆ ಅದರ ಮಾನದಂಡಗಳೇನು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಇರುವುದಿಲ್ಲ. ಆದ್ದರಿಂದ ಈ ಲೇಖನ ದೀರ್ಘವಾದರೂ ಅನುಸರಿಸಿಕೊಂಡು ಓದಬೇಕಾಗಿ ವಿನಂತಿ. ನಾನು ಈ ಲೇಖನವನ್ನು ಕೆಲವು ಸಂಸ್ಥೆಗಳ ಮತ್ತು ಕೆಲವು ಸಂಶೋಧಕರನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯುತ್ತಿದ್ದರೂ ಅವರುಗಳ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ನಿಮಗೆ ಈ ರೀತಿಯ ಸಂಶೋಧಕರು ಹಾದಿ ಬೀದಿಯಲ್ಲಿಯೂ ಸಿಗುವ ಕಾಲ ಒದಗಿಬಂದಿದೆ. ಇರಲಿ ಅದೆಲ್ಲವನ್ನೂ ವಿವರವಾಗಿ ತಿಳಿಸುತ್ತೇನೆ. ಈ ಲೇಖನವನ್ನೂ ಯಾವ ಹಿನ್ನಲೆಯಲ್ಲಿ ಓದಬೇಕೆನ್ನುವುದನ್ನು ತಿಳಿಸುತ್ತೇನೆ. ಅದೇ ರೀತಿ ಇದನ್ನು ಬೇರೆ ಬೇರೆ ಭಾಗಗಳಾಗಿ ವಿಂಗಡಿಸಿ ವಿವರಿಸುತ್ತೇನೆ. ಮೊದಲನೆಯದಾಗಿ, ಭಾರತದಲ್ಲಿ ಸಂಶೋಧನೆ ಹೇಗೆ ನಡೆಯುತ್ತಿದೆ? ವಿವಿಧ ಆಯಾಮಗಳೇನು? ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಸಂಶೋಧನೆ ಹೇಗೆ? ಮಾನದಂಡಗಳೇನು? ಉಪಯೋಗಗಳೇನು? ಇದರೊಳಗಿರುವ ರಾಜಕೀಯ, ಗುಂಪುಗಾರಿಕೆ, ಮೋಸಗಳೇನು? ಎನ್ನುವುದನ್ನೂ ಸೂಕ್ಷ್ಮವಾಗಿ ತಿಳಿಯೋಣ. ಇತ್ತೀಚೆಗೆ ನಮಗಾದ ಕೆಟ್ಟ ಅನುಭವವನ್ನು ನಿಮ್ಮ ಮುಂದಿಡುತ್ತೇನೆ.

ಸಂಶೋಧನೆಯೆಂಬುದು ಎಲ್ಲಾ ಕ್ಷೇತ್ರಗಳಲ್ಲಿಯೂ ನಡೆದರೂ ನಾನು ಇಲ್ಲಿ ವಿವರಿಸುವುದು ಕೇವಲ ಡೆವಲಪ್‍ಮೆಂಟ್ ಸೆಕ್ಟರ್ ಎಂದು ಕರೆಯಲ್ಪಡುವ ಕೆಲವು ಕ್ಷೇತ್ರಗಳ ಕುರಿತು ಮಾತ್ರ. ಅವುಗಳೆಂದರೇ, ನೀರು, ಪರಿಸರ, ನೈರ್ಮಲ್ಯಕ್ಕೆ ಸಂಬಂಧಿಸಿದವು ಎನ್ನಬಹುದು. ಈ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯ, ಸರ್ಕಾರಿ ಸಂಶೋಧನ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ನಡೆಸುತ್ತವೆ. ವಿದ್ಯಾರ್ಥಿಗಳು ತಮ್ಮ ಪಿಎಚ್‍ಡಿಗೆಂದು ಸಂಶೋಧನೆ ಮಾಡುತ್ತಾರೆ. ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಂಡು ಅದರ ಕುರಿತು ಸಮಗ್ರ ಅಧ್ಯಯನ ನಡೆಸುತ್ತಾರೆ ಇದು ಮೂರರಿಂದ ಐದು ವರ್ಷ ಸಮಯ ತೆಗೆದುಕೊಳ್ಳುತ್ತದೆ. ಇದರ ಜೊತೆಗೆ ಅಲ್ಲಿನ ಉಪನ್ಯಾಸಕರು, ಪ್ರೋಫೆಸರುಗಳು ಕೂಡ ಕೆಲವೊಂದು ಸಂಶೋಧನ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಇದಕ್ಕಾಗಿ ಅನೇಕ ಸರ್ಕಾರಿ ಇಲಾಖೆಗಳು ಧನಸಹಾಯ ನೀಡುತ್ತವೆ. ಈ ಸಂಶೋಧನೆಯಲ್ಲಿ ಕಂಡುಹಿಡಿದ ಹೊಸ ಅಂಶಗಳನ್ನು ಪ್ರಬಂಧವಾಗಿ ಸಲ್ಲಿಸಬೇಕು. ಅದರ ಜೊತೆಗೆ ಕೆಲವೊಂದು ಲೇಖನಗಳನ್ನು ನಿಯತಕಾಲಿಕ (ಜರ್ನಲ್‍ಗಳಲ್ಲಿ) ಪ್ರಕಟಿಸಬೇಕಾಗುತ್ತದೆ. 

ಈ ನಿಯತಕಾಲಿಕಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನೊಮ್ಮೆ ತಿಳಿಯೋಣ. ನಿಯತಕಾಲಿಕಗಳು ನಮ್ಮ ವಾರ ಪತ್ರಿಕೆ, ಮಾಸ ಪತ್ರಿಕೆಗಳಂತೆ ಎಂದು ಕಲ್ಪಿಸಿಕೊಳ್ಳಿ. ಇದರಲ್ಲಿ ಹೇಗೆ ನಮ್ಮ ಬರಹಗಳನ್ನು ವಿಮರ್ಶಕರು ವಿಮರ್ಶಿಸಿ ಪ್ರಕಟಿಸುತ್ತಾರೋ ಅದೇ ರೀತಿ ಅಲ್ಲಿಯೂ ಪ್ರಕಟಿಸಲಾಗುತ್ತದೆ. ಆದರೇ, ಅಲ್ಲಿ ಕೆಲವೊಂದು ವ್ಯತ್ಯಾಸಗಳಿರುತ್ತವೆ. ಅನೇಕ ಜರ್ನಲ್‍ಗಳು ಬೇರೆ ಬೇರೆ ರೀತಿಯಲ್ಲಿ ಹಣ ಪಡೆದು ಪ್ರಕಟಿಸುತ್ತಾರೆ, ಇವುಗಳನ್ನು ಪೇಯ್ಡ್ ಜರ್ನಲ್‍ಗಳು ಎನ್ನುತ್ತೇವೆ. ಈ ರೀತಿ ಹಣ ಪಡೆಯುವ ಜರ್ನಲ್‍ಗಳಲ್ಲಿ ಯಾವೆಲ್ಲಾ ರೀತಿಯಲ್ಲಿ ಪಡೆಯುತ್ತಾರೆನ್ನುವುದು ಗಮನಾರ್ಹ. ಕೆಲವು ಜರ್ನಲ್‍ಗಳು ಪುಟಕ್ಕಿಷ್ಟು ಎಂದು ದೇಣಿಗೆ ಸಂಗ್ರಹ ಮಾಡುತ್ತವೆ, ಕೆಲವು ಜರ್ನಲ್‍ಗಳು ಚಂದಾದಾರರಾಗಿ ಎಂದು ದೇಣಿಗೆ ಸಂಗ್ರಹಿಸುತ್ತಾರೆ, ಮತ್ತು ಕೆಲವು ಜರ್ನಲ್‍ಗಳು ನಮ್ಮ ಸಂಪಾದಕರ ತಂಡಕ್ಕೆ ಸೇರಿದರೆ ನಿಮ್ಮ ಲೇಖನಗಳನ್ನು ಪ್ರಕಟಿಸಿಕೊಳ್ಳಬಹುದೆಂದು ದೇಣಿಗೆ ಸಂಗ್ರಹಿಸುತ್ತಾರೆ. ಇವುಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಜರ್ನಲ್‍ಗಳಿರುತ್ತವೆ. ಇದೇ ರೀತಿ ಇನ್ನೊಂದು ರೀತಿಯ ಜರ್ನಲ್‍ಗಳಿವೆ ಅವುಗಳಿಗೆ ಯಾವುದೇ ದೇಣಿಗೆ ನೀಡುವ ಅವಶ್ಯಕತೆಯಿಲ್ಲ. ಅಲ್ಲಿ ಗುಣಮಟ್ಟ ಮಾತ್ರವೇ ಮುಖ್ಯ ಪಾತ್ರವಹಿಸುತ್ತದೆ. ಇದು ಬಹಳ ಕಠಿಣವಾದ ಹಾದಿ. ಆದರೆ, ಈ ರೀತಿಯ ಜರ್ನಲ್‍ಗಳಲ್ಲಿ ಲೇಖನಗಳನ್ನು ಪ್ರಕಟಿಸಿದರೆ ಗೌರವ ಹೆಚ್ಚು. 

ಈ ಗೌರವವೆನ್ನುವುದನ್ನು ಹೇಗೆ ಪರಿಗಣಿಸಲಾಗುತ್ತದೆ ಎನ್ನುವುದನ್ನೊಮ್ಮೆ ನೋಡೋಣ. ಪ್ರತಿಯೊಂದು  ಲೇಖನಗಳಿಗೂ ಇಂತಿಷ್ಟು ಅಂಕಗಳಿರುತ್ತವೆ, ಕೆಲವೊಂದು ಜರ್ನಲ್‍ಗಳಿಗೆ ಅದರದ್ದೇ ಆದ ಅಂಕಗಳು (ಇಂಪಾಕ್ಟ್ ಫ್ಯಾಕ್ಟರ್) ಇರುತ್ತವೆ. ಸಂಶೋಧನವಲಯದಲ್ಲಿ ಮುಂಬಡ್ತಿಪಡೆಯಲು ಇದು ಅವಶ್ಯಕ. ತಾವುಗಳು ಎಷ್ಟು ಪುಸ್ತಕಗಳನ್ನು ಬರೆದಿದ್ದೀರಿ, ಎಷ್ಟು ಅಂಕಣಗಳು, ಎಷ್ಟು ಕಮ್ಮಟಗಳಲ್ಲಿ ಭಾಗವಹಿಸಿದ್ದೀರೆನ್ನುವುದೆಲ್ಲವೂ ಮುಖ್ಯವಾಗುತ್ತದೆ. ಕೆಲವರು ತಮ್ಮದೇ ಐಡಿಯಾಗಳನ್ನು ಸಾಧಿಸಲು ಗುಂಪುಗಾರಿಕೆ ಮಾಡುತ್ತಾರೆ. ಅದು ಹೇಗೆ ನಡೆಯುತ್ತದೆಂದು ಹೇಳುತ್ತೇನೆ. ಉದಾಹರಣೆಗೆ ನಾನು ಕಮ್ಮಟವನ್ನು ಆಯೋಜಿಸಿದಾಗ ನಿಮ್ಮನ್ನು ನಿಮ್ಮ ಸ್ನೇಹಿತರನ್ನು ಕರೆಯುವುದು, ನೀವು ನಿಮ್ಮ ಸ್ನೇಹಿತರು ಆಯೋಜಿಸುವಾಗ ನನ್ನನ್ನು ನನ್ನ ಸ್ನೇಹಿತರನ್ನು ಕರೆಯುವುದು, ಹೊರಗಿನವರನ್ನು ದೂರವಿಡುವುದು. ನನ್ನ ಬೆನ್ನು ನೀವು ಕೆರೆಯಿರಿ ನಿಮ್ಮದನ್ನು ನಾನು. ಅದೇ ರೀತಿ ಲೇಖನಗಳನ್ನು ಪ್ರಕಟಿಸುವಾಗ ಲೇಖಕರು ಕೆಲವು ವಿಮರ್ಶಕರ ಹೆಸರನ್ನೂ ಸೂಚಿಸಬೇಕು, ಅದು ಅವರಿಗೆ ಬೇಕರುವವರನ್ನೇ ಸೂಚಿಸುತ್ತಾರೆ. ಈಗಾಗಲೇ ಹೇಳಿರುವಂತೆ, ಅಲ್ಲಿನ ಸಂಪಾದಕರಲ್ಲಿ ಇವರೋ ಇವರ ಸ್ನೇಹಿತರೋ ಇದ್ದೇ ಇರುತ್ತಾರೆ. ಇತ್ತೀಚಿನ ನನ್ನ ಅನುಭವವನ್ನು ಹೇಳುತ್ತೇನೆ. 

ಇತ್ತೀಚೆಗೆ ಪ್ರಸಿದ್ದ ಸಂಸ್ಥೆಯೊಂದರ ಕೆಲವು ಸಂಶೋಧಕರು ಒಂದು ಲೇಖನವನ್ನು ಪ್ರಕಟಿಸಿದ್ದರು. ಅದು ಹೇಗಿತ್ತೆಂದರೆ. ಅವರು ಒಂದು ನದಿಕೊಳ್ಳದ ಕೇವಲ ಒಂದಿಷ್ಟು ಭಾಗವನ್ನು ಮಾತ್ರ ತೆಗೆದುಕೊಂಡು ಅಧ್ಯಯನ ಮಾಡಿದ್ದರು. ಇದು ಅನೇಕರು ಮಾಡುತ್ತಿರುವ ರೀತಿ. ಶೀರ್ಷಿಕೆಗೂ ಅವರ ಅಧ್ಯಯನ ಕ್ಷೇತ್ರಕ್ಕೂ ಸಂಭಂಧವೇ ಇರುವುದಿಲ್ಲ. ಉದಾಹರಣೆಗೆ, ಹಾಸನ ಜಿಲ್ಲೆಯಲ್ಲಿ ಬಾನುಗೊಂದಿ ಎನ್ನುವ ಸಣ್ಣ ಹಳ್ಳಿಯ ಕುರಿತು ಅಧ್ಯಯನ ಮಾಡಿ, ಇಡೀ ಹಾಸನವನ್ನು ಅಧ್ಯಯನ ಮಾಡಿದ್ದೀನಿ, ಎಂದರೆ? ನೀವುಗಳು ಉಗಿಯುವುದಿಲ್ಲವೆ? ಅಲ್ಲಯ್ಯ ನೀನು ಕೇವಲ ಒಂದು ಹಳ್ಳಿಯ ಕುರಿತು ಅಧ್ಯಯನ ಮಾಡಿ ಇಡೀ ಜಿಲ್ಲೆಯಲ್ಲಿಯೇ ನಡೆಸಿದೆ ಎನ್ನುತ್ತಿಯಾ? ಎಂದು. ಇಂಥವರ ಮತ್ತೊಂದು ಮುಖವೆಂದರೆ, ಇಲ್ಲಿಯವರೆಗೂ ಯಾರೂ ಇತಂಹ ಅಧ್ಯಯನವನ್ನೇ ಮಾಡಿಲ್ಲವೆನ್ನುವಂತೆ ಬಿಂಬಿಸುವುದು. ಇದು ಸಂಶೋಧನೆಗಾಗಿ ಅನುದಾನ ಪಡೆಯುವುದು ಸುಲಭ, ಅನುದಾನ ನೀಡುವ ಸಂಸ್ಥೆಯವರು ಹೇಳಿಕೊಳ್ಳಬಹುದು ಇದು ನಾವೇ ಮಾಡಿಸಿದ್ದೆಂದು. ನಾವೇ ಈ ಅಧ್ಯಯನ ನಡೆಸಿದವರಲ್ಲಿ ಮೊದಲಿಗರೆಂದು ತೋರಿಸುವುದು. ಉತ್ತಮ ಸಂಶೋಧಕನಾದವನು ಇಲ್ಲಿಯ ತನಕ ಈ ವಿಷಯಕ್ಕೆ ಸಂಬಂಧಹಿಸಿದಂತೆ ಏನೆಲ್ಲಾ ಸಂಶೋಧನೆ ನಡೆದಿದೆ, ಏನೆಲ್ಲಾ ಕೊರತೆಗಳಿವೆ ಎನ್ನುವುದನ್ನು ಅರಿಯಬೇಕು. ಕೊರತೆಯಿರುವ ವಿಷಯದ ಕುರಿತು ಸಂಶೋಧನೆ ನಡೆಸಬೇಕು ಅಥವಾ ಸಂಶೋಧನೆ ಬೇರೆ ಆಯಾಮಗಳನ್ನು ತೋರಿಸಿಕೊಡಬೇಕು. ಆದರೆ, ಕೆಲವರು ಈ ಹಿಂದೆ ಅನೇಕರು ನಡೆಸಿರುವ ಸಂಶೋಧನೆಗಳ ಯಾವೊಂದನ್ನು ಇವರು ಉಲ್ಲೇಖಿಸುವುದೇ ಇಲ್ಲ. ವಾಸ್ತವವಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ, ಅಂದಅರೆ ಹವಮಾನ ವೈಪರಿತ್ಯ ಮತ್ತು ನೀರಿನ ಒಳಹರಿವು ಹಾಗೂ ಅಂತರ್ಜಲದ ಏರುಪೇರಿಕೆ ಕುರಿತಂತೆ ಅನೇಕ ಅಧ್ಯಯನಗಳು ನಿಮಗೆ ಸಿಗುತ್ತವೆ. ಆದರೇ, ಇವರುಗಳು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದ್ದರು. 

ಇಂಥಹ ಸಂಸ್ಥೆಗಳ ಮತ್ತು ಈ ವರ್ಗದ ಸಂಶೋಧಕರಲ್ಲಿ ಮತ್ತೊಂದು ಅಂಶವಿದೆ. ದತ್ತಾಂಶಗಳ ಕೊರೆತಯಿದೆ,  ಮಾಹಿತಿಯೇ ಸಿಗುವುದಿಲ್ಲ, ಅಂದರೆ ಇಲಾಖೆಗಳಲ್ಲಿ ಒಳಹರಿವು, ಹೊರಹರಿವು, ಅಂತರ್ಜಲದ ಮಟ್ಟ ಕುರಿತಂತೆ ದತ್ತಾಂಶಗಳೇ ಇಲ್ಲ ಇದ್ದರೂ ಅವುಗಳ ಮೇಲೆ ಭರವಸೆ ಇಡುವಂತಿಲ್ಲ ಎನ್ನವುದು. ಇದಕ್ಕೆ ಮೂಲಕಾರಣ ಈ ಸಂಸ್ಥೆಗಳು ಮಾಹಿತಿ ಸಂಗ್ರಹಣೆಗಾಗಿ ಲಕ್ಷಾಂತರೆ ಅನುದಾನವನ್ನು ಪಡೆಯುವು ಇವರ ಮೂಲ ಉದ್ಧೇಶ. ನನ್ನ ಪ್ರಶ್ನೆ ಸರ್ಕಾರಿ ಇಲಾಖೆಗಳಲ್ಲಿಯೇ ಎಲ್ಲಾ ರೀತಿಯ ಮಾಹಿತಿಗಳು ದೊರೆಯುವಾಗ, ಅಥವಾ ನಿಮಗೆ ಬೇಕಿರುವ ಮಾಹಿತಿಗಳು ದೊರೆಯುವಾಗ ನೀವು ಲಕ್ಷಾಂತರ ರೂಗಳನ್ನು ಅದಕ್ಕಾಗಿ ವ್ಯಯಿಸುವುದೇಕೆ? ಈ ಯೋಜನೆಗಳ ರೂಪುರೇಷೆಗಳನ್ನೊಮ್ಮೆ ಗಮನಿಸೋಣ, ಹೆಚ್ಚೆಂದರೆ ಮೂರರಿಂದ ಐದು ವರ್ಷದ ಯೋಜನೆಗಳಾಗಿರುತ್ತವೆ. ಐದು ವರ್ಷದ ಮಾಹಿತಿ ಅದರಲ್ಲಿಯೂ ಹವಮಾನ ವೈಪರೀತ್ಯಕ್ಕೆ ಸಂಭಂದಿಸಿದಂತೆ ಯಾವ ತಿರ್ಮಾನಕ್ಕೆ ಬರಲಾಗುತ್ತದೆ ಹೇಳಿ. ವೈಜ್ಞಾನಿಕವಾಗಿ ನೋಡಿದರೆ ಇದೊಂದು ಮೋಸ. 

ಇವರು ನಡೆಸಿದ ಸಂಶೋಧನೆಯ ಲೇಖನಗಳನ್ನು ಲಕ್ಷಾಂತರ ರೂಪಾಯಿಗಳನ್ನು ನೀಡಿ ಪ್ರಕಟಿಸುವುದು. ಇದರ ಅವಶ್ಯಕತೆಯಾದರೂ ಏನಿದೆ? ಏಕೆಂದರೆ ಅಷ್ಟೆಲ್ಲ ದೇಣಿಗೆ ನೀಡಿದ ಮೇಲೆ ಅವರುಗಳು ಬೇರೆಯವರು ಪ್ರಶ್ನಿಸಲು ಬಿಡುವುದಿಲ್ಲ. ನೀವು ಪ್ರಶ್ನಿಸಬೇಕೆಂದರೆ ಕನಿಷ್ಠ ಇಷ್ಟು ಹಣವೆಂದು ಕೊಡಬೇಕು. ದುಡ್ಡು ಕೊಟ್ಟು ಏನು ಪ್ರಶ್ನಿಸುವುದು ಬೇಡ ಬಿಡಿ ಎನ್ನುತ್ತಾರೆ. ಇದನ್ನೇ ದಂಧೆ ಮಾಡಿಕೊಂಡು ದೊಡ್ಡ ಮಾಫಿಯಾವಾಗಿದೆ, ಸಂಶೋಧನೆ ಮತ್ತು ಪ್ರಕಟನೆಗಳು. 


ಉತ್ತಮ ಸಂಶೋಧಕನ ನಡುವಳಿಕೆಗಳು ಹೇಗಿರಬೇಕು?: ಮೊದಲಿಗೆ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನಾ ಆ ವಿಷಯಕ್ಕೆ ಸಂಬಂಧಿಸಿದಂತೆ ಈವರೆಗೂ ನಡೆದಿರುವ ಎಲ್ಲಾ ಸಂಶೋಧನೆಯನ್ನು, ಲೇಖನಗಳನ್ನು, ಈಗಾಗಲೇ ಲಭ್ಯವಿರುವ ದತ್ತಾಂಶಗಳನ್ನು ಕೂಡಿಹಾಕಬೇಕು. ಅದರಲ್ಲಿರುವ ನ್ಯೂನ್ಯತೆ/ಕೊರತೆಗಳನ್ನು ಪಟ್ಟಿಮಾಡಬೇಕು. ನಂತರ ಯೋಜನೆಯ ಉದ್ದೇಶಗಳನ್ನು ಸಿದ್ದಪಡಿಸಬೇಕು. ಈ ಕ್ಷೇತ್ರದಲ್ಲಿ, ಆ ವಿಷಯದಲ್ಲಿ ಯಾರೆಲ್ಲಾ ಕೆಲಸ ಮಾಡಿರುತ್ತಾರೆ ಅವರೆಲ್ಲರನ್ನೂ ಗಣನೆಗೆ ತೆಗೆದುಕೊಂಡು ಚರ್ಚಿಸಬೇಕು. ಪ್ರಮುಖವಾಗಿ ಸರ್ಕಾರಿ ಇಲಾಖೆಗಳಲ್ಲಿರುವ ದತ್ತಾಂಶವನ್ನು ಪಡೆಯಬೇಕು. ಏಕೆಂದರೆ, ಸರ್ಕಾರದಲ್ಲಿ ಅನೇಕ  ವರ್ಷಗಳಿಂದ ಕೂಡಿಟ್ಟಿರುವ ಮಾಹಿತಿಗಳು ಸಿಗುತ್ತವೆ ಮತ್ತು ಅದಕ್ಕಾಗಿಯೇ ಹಣವಿಯೋಗವಾಗಿರುತ್ತದೆ. ಮತ್ತೊಮ್ಮೆ ಹಣ ವ್ಯಯಿಸುವ ಅಗತ್ಯತೆಯಿರುವುದಿಲ್ಲ. ಅದರ ಜೊತೆಗೆ ಬೇರೆ ಬೇರೆ ಕ್ಷೆತ್ರಗಳಲ್ಲಿ ಆಗಿರುವ ಸಂಬಂಧಪಟ್ಟ ಸಂಶೋಧನೆಯ ಮುಖ್ಯ ಅಂಶಗಳನ್ನು ಗುರುತು ಹಾಕಿಕೊಳ್ಳಬೇಕು. ಎರಡನೆಯದಾಗಿ, ಲೇಖನಗಳನ್ನು ಪ್ರಕಟಿಸಿಕೊಳ್ಳುವಾಗ ಹಣ/ದೇಣಿಗೆ ನೀಡಿ ಪ್ರಕಟಿಸುವುದನ್ನು ನಿಲ್ಲಿಸಬೇಕು ಮತ್ತು ಉತ್ತಮ ಗುಣಮಟ್ಟದ ಜರ್ನಲ್‍ಗಳಲ್ಲಿ ಪ್ರಕಟಿಸಿಕೊಳ್ಳಬೇಕು. ಏಕೆಂದರೆ, ಅಂತಹ ಜರ್ನಲ್‍ಗಳಲ್ಲಿ ವಿಮರ್ಶೆಯಾಗಿರುತ್ತದೆ ಅದು ಸಂಶೋಧಕನ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ನಿಂದಿಸುವವರು, ವಿಮರ್ಶಕರಿಲ್ಲದೇ ಇದ್ದರೇ ನಾವು ಮಾಡಿದ್ದೇ ಸರಿಯೆಂದು ಅಹಂಮ್ಮಿನಲ್ಲಿ ಸಾಗುತ್ತದೆ. ಮೂರನೆಯದಾಗಿ, ಒಬ್ಬ ಸಂಶೋಧಕ ಮುಕ್ತವಾದ ವಿಮರ್ಶೆಗೆ ಚರ್ಚೆಗೆ ಸಿದ್ದನಿರಬೇಕು. ವಿಮರ್ಶಿಸುವವರನ್ನೆಲ್ಲ ದೂರವಿಟ್ಟು ಹೊಗಳುವವರ ಜೊತೆಗೆ ಸಾಗಿದರೆ ಅವನ ಬೌದ್ಧಿಕ ಗುಣಮಟ್ಟ ಹಳ್ಳಹಿಡಿಯುತ್ತದೆ. ನಾಲ್ಕನೆಯದಾಗಿ ನಮ್ಮೆಲ್ಲ ಸಂಶೋಧನೆಯ ಫಲಿತಾಂಶಗಳನ್ನು ಜನರೊಂದಿಗೆ ಹಂಚಿಕೊಳ್ಳಬೇಕು. ಸಾಧ್ಯವಾದಷ್ಟೂ ಸ್ಥಳೀಯ ಭಾಷೆಯಲ್ಲಿ ಮುಕ್ತವಾಗಿ ಬರೆಯಬೇಕು.


ಕೊನೆಹನಿ: ಸಂಶೋಧನೆ ಯಾವುದೇ ಕ್ಷೇತ್ರದಲ್ಲಿಯೇ ಇರಲಿ ಅದು ಜನ ಸಾಮಾನ್ಯರಿಗೆ ಅನುಕೂಲವಾಗುವಂತಿರಬೇಕು. ಸಂಶೋಧಕನಿಗೆ ಜವಬ್ದಾರಿ ಮತ್ತು ನೈತಿಕತೆಯಿರಬೇಕು. ಕೇವಲ ಅನುದಾನ ಪಡೆಯುವುದಕ್ಕಾಗಿ, ಹಣಕ್ಕಾಗಿ, ಹೆಸರುಗಳಿಕೆಗಾಗಿ, ಮುಂಬಡ್ತಿಗಾಗಿ ಹಾದಿತಪ್ಪಿಸುವ ಸಂಶೋಧನೆಯನ್ನು ಎಂದಿಗೂ ಮಾಡಬಾರದು. ಅದೊಂದು ಬೌದ್ದಿಕ ಸೂಲೆಗಾರಿಕೆಯಾಗುತ್ತದೆ. ಇವೆಲ್ಲವೂ ಜನಸಾಮಾನ್ಯರಿಗೆ ಮುಕ್ತವಾಗಿ ಸಿಗುವಂತೆ ಮತ್ತು ತಿಳಿಯುವಂತೆ  ಮಾಧ್ಯಮ ಮಿತ್ರರು ಸಹಕರಿಸಬೇಕಾಗಿ ವಿನಂತಿ. 



05 ಮೇ 2018

ನನ್ನನಿಸಿಕೆ: ಪ್ರಕಾಶ್ ರೈ - ಬಿಜೆಪಿ ವಾಕ್ಸಮರ


ನಾನು ಈ ವಿಷಯದ ಕುರಿತು ಬರೆಯಬೇಕೇ? ಬೇಡವೇ? ಎಂದು ಬಹಳ ದಿನಗಳಿಂದಲೂ ಆಲೋಚಿಸುತ್ತಿದ್ದೆ. ಅದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೇ, ಅದ್ಯಾಕೋ ಇದರ ಕುರಿತು ನನ್ನ ನಿಲುವನ್ನು ಪ್ರಕಟಿಸಬೇಕೆಂದು ಮನಸ್ಸಾಗಿ ಬರೆಯುತ್ತಿದ್ದೇನೆ. ನಾನು ಪ್ರತಿ ಬಾರಿ ಹೇಳುವಂತೆ, ದಯವಿಟ್ಟು ಸಂಪೂರ್ಣ ಲೇಖನವನ್ನು ಓದಲು ಸಾಧ್ಯವಾದರೆ ಓದಿ, ಸಂಪೂರ್ಣ ಓದಿದ ನಂತರ ನಿಮ್ಮ ಪ್ರತಿಕ್ರಿಯೆ ಬರಲಿ. ಯಾವುದೋ ನಾಲ್ಕ ಸಾಲುಗಳನ್ನು ಓದಿ ಅಥವಾ ಶೀರ್ಷಿಕೆಯನ್ನು ನೋಡಿ ಪ್ರತಿಕ್ರಿಯಿಸಬೇಡಿ. ನೀವು ಓದುವುದು ಬಿಡುವುದು ನಿಮಗೆ ಸೇರಿದ್ದು, ನೀವು ಓದಲೇಬೇಕೆಂಬ ನಿಯಮವಿಲ್ಲ. 

ನಾನು ಹೇಳುತ್ತಿರುವ ವಿಷಯ, ಪ್ರಕಾಶ್ ರೈ ಮತ್ತು ಬಿಜೆಪಿಯ ನಡುವಿನ ವಾಕ್ಸಮರದ ಕುರಿತು. ನನ್ನ ಅನೇಕ ಮಾತುಗಳು ಕೆಲವರಿಗೆ ಅರ್ಥವಾಗುವುದಿಲ್ಲ ಮತ್ತು ಹಲವರಿಗೆ ಹಿಡಿಸುವುದಿಲ್ಲ. ಅದಕ್ಕೂ ವಿವರಣೆ ನೀಡುತ್ತೇನೆ. ನಾವು ಯಾವುದೇ ವಿಷಯವನ್ನು ಕೇಳುವಾಗ ನಮ್ಮ ಪೂರ್ವ ಅನುಭವದೊಂದಿಗೆ ಹೋಲಿಕೆ ಮಾಡಿ ಅಥವಾ ನಮ್ಮ ಅನುಭವದ ಪೆಟ್ಟಿಗೆಯೊಳಗೆಯೇ ನೋಡುತ್ತೇವೆ. ಅಂದರೆ, ನಾನು ನನ್ನೂರು ಬಾನುಗೊಂದಿಯ ಬಗ್ಗೆ ಹೇಳುವಾಗ ನೀವು ನಿಮ್ಮೂರನ್ನು ಕಲ್ಪಸಿಕೊಳ್ಳುತ್ತೀರಿ, ನಾನು ಕಾವೇರಿ ನದಿ ದಂಡೆ ಅಂದರೆ ನೀವು, ಎಂದೋ ಕಂಡಿರುವ ನದಿ ದಂಡೆಯನ್ನು ಕಲ್ಪಿಸಿಕೊಳ್ಳುತ್ತೀರಿ. ನಾನು ಅಮೇರಿಕಾದ ಹಳ್ಳಿಯಂದರೂ ಅದೇ ಕಲ್ಪನೆ ನಿಮಗೆ ತಿಳಿಯದೇ ಬಂದಿರುತ್ತದೆ. ನಾನು ಕೇರಳಕ್ಕೆ ಹೋಗುವ ಮುನ್ನಾ ನನ್ನ ಸ್ನೇಹಿತ ಬಿನು ಕುಮಾರ್ ಅವರ ಊರಿನ ಬಗ್ಗೆ ಹೇಳಿದರೆ ನನಗೆ ನನ್ನೂರು ತಲೆಯೊಳಗೆ ಬರತಿತ್ತು. ಅಲ್ಲಿಗೆ ಹೋಗಿ ಬಂದ ಮೇಲೆ ನನ್ನ ಅನುಭವ ಬೇರೆಯಾಗಿದ್ದು. ಕೇರಳದಲ್ಲಿ ಹಳ್ಳಿ, ಪಟ್ಟಣವೆಂಬ ಬೇಧಭಾವವೇ ಇಲ್ಲ, ಎಲ್ಲಿಂದ ಎಲ್ಲಿಗೆ ಹೋದರೂ ಮನೆಗಳು, ಉತ್ತಮ ರಸ್ತೆಗಳು, ಆದರೆ ನಾನು ಹೋಗುವ ಮುನ್ನಾ? ನನ್ನ ತಲೆಯೊಳಗಿನ ಕೇರಳವೇ ಬೇರೆ. ಅದೇ ರೀತಿ ನನ್ನ ಮಾತುಗಳನ್ನು ಮುಕ್ತವಾಗಿ ಕೇಳಿ, ಓದಿ, ನಿಮ್ಮ ಭೂತದೊಂದಿಗೆ ಹೋಲಿಕೆ ಮಾಡಬೇಡಿ. 

ಪ್ರಕಾಶ್ ರೈ ಮತ್ತು ಬಿಜೆಪಿಯ ಅದರಲ್ಲಿಯೂ ಕರ್ನಾಟಕ ಬಿಜೆಪಿಯ ವಾಕ್ಸಮರವನ್ನೊಮ್ಮೆ ಅವಲೋಕಿಸೋಣ. ಸಾಧ್ಯವಾದಷ್ಟು ಮುಕ್ತವಾಗಿ ಮತ್ತು ಪಕ್ಷಾತೀತವಾಗಿ ನೋಡೋಣ. ಪ್ರಕಾಶ್ ರೈ ವಾದಗಳೇನು? ಬಿಜೆಪಿಯವರ ವಾದವೇನು?  ಅಥವಾ ಅವರ ಪ್ರತಿಕ್ರಿಯೆಗಳೇನು? ಇಷ್ಟೊಂದು ದೊಡ್ಡ ಮಟ್ಟದ ಚರ್ಚೆಗಳು ಆಗೋಕೆ ಕಾರಣವೇನು? ಇವೆಲ್ಲವನ್ನೂ ಗಮನಿಸೋಣ. ವ್ಯಕ್ತಿ ಸ್ವಾತಂತ್ರ್ಯ ಅದರಲ್ಲಿಯೂ ವಾಕ್ ಸ್ವಾತಂತ್ರ್ಯ ಬಹಳ ಮುಖ್ಯ. ಯಾವುದೇ ಸಮಾಜ, ದೇಶ ಬದಲಾಗಬೇಕು, ಬೆಳವಣಿಗೆಯಾಗಬೇಕಾದರೆ ಚರ್ಚೆಗಳಾಗಬೇಕು, ಚರ್ಚೆಗಳು ಮುಕ್ತವಾಗಿರಬೇಕು. ಪ್ರಶ್ನಿಸಬೇಕು, ಪ್ರಶ್ನಿಸುವವರನ್ನು ಹತ್ತಿಕ್ಕಬಾರದು. ಭಾರತ ಬುದ್ದಿವಂತರ ನಾಡು ಎಂದು ಹೆಸರು ಗಳಿಸಿದ್ದು, ಬೆಳೆದಿದ್ದು ಆ ಸ್ವಾತಂತ್ರ್ಯದಿಂದ. ಉದಾಹರಣೆಗೆ, ಹೊಯ್ಸಳರ ಕಾಲದ ದೇವಸ್ಥಾನಗಳನ್ನು ನೋಡಿ, ಅದೆಷ್ಟು ಸುಂದರ ಎನಿಸುತ್ತವೆ. ಅದಕ್ಕೆ ಮೂಲ ಕಾರಣ ಸ್ವಾತಂತ್ರ್ಯ. ಆದರೇ ಇತ್ತೀಚಿನ ಬೆಳವಣಿಗೆಯಲ್ಲಿ, ಅದರಲ್ಲಿಯೂ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಎಲ್ಲರ ಕೈಯಲ್ಲಿರುವುದು ಮತ್ತು ಸಾಕಷ್ಟು ಎಡವಟ್ಟುಗಳನ್ನು ಮಾಡುತ್ತಿವೆ. ಇದನ್ನು ವಿಶ್ಲೇಷಿಸಲು ಸಾಕಷ್ಟು ಆಯಾಮಗಳಲ್ಲಿ ನೋಡಬೇಕು. 

ಎಲ್ಲರ ಕೈಯಲ್ಲಿ ಮೊಬೈಲ್ ಇಂಟರ್‍ನೆಟ್ ಇರುವುದು, ಮನಸ್ಸಿಗೆ ಬಂದದ್ದನ್ನು ಹಾಕುವುದು, ಬರೆಯುವುದು ಮತ್ತು ಮಾತಿನ ಮೇಲೆ ಹಿಡಿತವಿಲ್ಲದೆ, ಕೆಟ್ಟ ಭಾಷೆಯನ್ನು ಬಳಸುವುದು ಆತಂಕಕಾರಿ ಬೆಳವಣಿಗೆ. ಎರಡನೆಯದಾಗಿ, ಸಮಗ್ರವಾಗಿ ಮಾತನ್ನು ಅಥವಾ ವಾದವನ್ನು ಆಲಿಸದೇ, ಕೇವಲ ಆಯ್ದ ತುಣುಕುಗಳನ್ನು ಎಡಿಟ್ ಮಾಡಿ ಜನರನ್ನು ಹಾದಿ ತಪ್ಪಿಸುತ್ತಿರುವುದು. ಮೂರನೆಯದಾಗಿ, ಪ್ರತಿಯೊಂದು ವಿಷಯಕ್ಕೂ ಭಾವಾತ್ಮಕವಾಗಿ, ಪ್ರತಿಕ್ರಿಯಿಸುವುದು. ನಾಲ್ಕನೆಯದಾಗಿ, ಎಲ್ಲದ್ದಕ್ಕೂ ಭಾಷೆ, ರಾಜಕೀಯ ಪಕ್ಷ, ಜಾತಿ, ಧರ್ಮದ ನಂಟು ಹಾಕುತ್ತಿರುವುದು. ಐದನೇಯದಾಗಿ, ವ್ಯಕ್ತಿ ಆರಾಧನೆ ಅಥವಾ ವ್ಯಕ್ತಿ ನಿಂಧನೆ ಹೆಚ್ಚಾಗುತ್ತಿರುವುದು. ಇವೆಲ್ಲವನ್ನು ಒಂದೊಂದಾಗಿ, ನೋಡುತ್ತಾ ಹೋಗೋಣ. ಅವುಗಳು ಪ್ರಕಾಶ್ ರೈ ರವರ ವಿಚಾರಕ್ಕೆ ಸೇರಿಸಕೊಂಡು ಅವಲೋಕಿಸೋಣ. 

ಈ ಬೆಳವಣಿಗೆಗಳು ಶುರುವಾಗಿದ್ದು, ಗೌರಿ ಲಂಕೇಶ್‍ರವರ ಹತ್ಯೆಯ ಸಮಯದಿಂದ. ಪ್ರಕಾಶ್ ರೈ ರವರು ಗೌರಿ ಹತ್ಯೆಗೆ ಸಂಘ ಪರಿವಾರದವರ ಕೈವಾಡವಿದೆ ಎಂದು ಆರೋಪಿಸಿದರು ಮತ್ತು ಬುದ್ದಿಜೀವಿಗಳ ರಕ್ಷಣೆಗೆ ಪ್ರಧಾನ ಮಂತ್ರಿಗಳು ನಿಲ್ಲಬೇಕು, ಇದರ ಕುರಿತು ಪ್ರತಿಕ್ರಿಯೆ ನೀಡಬೇಕೆಂದರು. ಒಬ್ಬ ಸ್ನೇಹಿತ ತನ್ನ ಸ್ನೇಹಿತೆಯ ಕೊಲೆಯಾಗಿದ್ದಾಗ ಭಾವಾನಾತ್ಮಕವಾಗಿ ವ್ಯವಸ್ಥೆಯನ್ನು ದೂರುವುದು ಸರ್ವೇಸಾಮಾನ್ಯ. ಅವರ ಸ್ಥಾನದಲ್ಲಿ ನಾನಿದ್ದರೂ ಅದನ್ನೇ ಮಾಡುತ್ತಿದ್ದೆ. ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು, ಕೇಳಿದರು, ಇದರಲ್ಲಿ ತಪ್ಪೇನು? ಅವರು ರಾಜ್ಯ ಸರ್ಕಾರವನ್ನೂ ಆಗ್ರಹಿಸಿದರು ಎನ್ನುವುದನ್ನು ಮರೆಯಬಾರದು. ಬಿಜೆಪಿಗರ ವಾದ ಅಥವಾ ಪ್ರತಿವಾದ ಏನಿರಬೇಕಿತ್ತು? ಮತ್ತು ಏನಾಯ್ತು? ಪ್ರತಾಪ್ ಸಿಂಹ, ಅನಂತ ಕುಮಾರ್ ಹೆಗ್ಡೆ ಸೇರಿದಂತೆ ಬಾಯಿಗೆ ಬಂದಂತೆ ಬೈದರು? ಅವರ ಮಗನ ಸಾವು ಮತ್ತು ಎರಡನೆಯ ಮದುವೆಯ ವಿಷಯವನ್ನು ತುಚ್ಛವಾಗಿ ನಿಂದಿಸಿದರು. ಇದರ ಅವಶ್ಯಕತೆಯಿತ್ತಾ? ಜನ ಪ್ರತಿನಿಧಿಯಾದವರು, ಸಂಸದರು ಬಳಸುವ ಪದಗಳಲ್ಲ ಅವುಗಳು. 

ಸರ್ವೇಸಾಮಾನ್ಯವಾಗಿ ಎಡಪಂಥಿಯರು ಪ್ರಕಾಶ್ ರೈರವರನ್ನು ಅವರೆಲ್ಲಾ ಕಾರ್ಯಕ್ರಮಗಳಿಗೆ ಆಹ್ವಾನಿಸೊತೊಡಗಿದರು. ಮೂಲತಃ ಪ್ರಕಾಶ್ ರೈ ಎಡಪಂಥೀಯ ಸಿದ್ದಾಂತವನ್ನು ಓದಿ ಬೆಳೆದವರು. ಹಾಗೆಂದ ಮಾತ್ರಕ್ಕೆ ಅವರು ಹಿಂದೂ ವಿರೋಧಿ ಅಥವಾ ಸಂಪ್ರದಾಯದ ವಿರೋಧಿ ಎನ್ನುವಂತಿಲ್ಲ. ಅವರು ಬೆಳೆದದ್ದು ವಿಜಯಮ್ಮ ಮತ್ತು ಬಿ.ಸುರೇಶರವರ ಮನೆಯಲ್ಲಿ. ಸಾಮಾಜಿಕ ಕಳಕಳಿ ಅವರಿಗೆ ಗೌರಿ ಸತ್ತ ಮೇಲೆ ಬಂದದ್ದಲ್ಲ. ಅದಕ್ಕೂ ಮುಂಚೆಯೇ ಅವರು ಆ ಕಾರ್ಯದಲ್ಲಿ ತೊಡಗಿದ್ದರು, ಹಳ್ಳಿಗಳನ್ನು ದತ್ತು ಪಡೆದಿದ್ದರು. ರೈತರಿಗೆ, ಶಾಲೆಗಳಿಗೆ, ಮಕ್ಕಳಿಗೆ ಸಹಾಯ ಮಾಡುತ್ತಾ ಬಂದಿದ್ದರು ಕೂಡ. ಬಿಡುವಿನ ವೇಳೆಯಲ್ಲಿ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕೆಲವರ ಆರೋಪಗಳು, ಪ್ರಕಾಶ್ ರೈ ಪಬ್ಲಿಸಿಟಿಗೆ, ದುಡ್ಡಿಗೆ ಹೀಗೆಲ್ಲಾ ಮಾಡುತ್ತಿದ್ದಾರೆಂದು. ನನ್ನ ಪ್ರಕಾರ ಅವರಿಗೆ ಅದೆರಡರ ಅವಶ್ಯಕತೆಯಾಗಲಿ, ಅನಿವಾರ್ಯತೆಯಾಗಲಿ ಇಲ್ಲವೇ ಇಲ್ಲ. ತನ್ನ ಪ್ರತಿಭೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಹೆಮ್ಮೆಯ ನಟ ಅವರು. ಅವರ ಜೀವನಕ್ಕೆ ಏನು ಬೇಕು ಅದೆಲ್ಲವನ್ನು ದುಡಿದು ಸಂಪಾದಿಸಿದ್ದಾರೆ, ಅದೆಲ್ಲವೂ ಅವರ ಶ್ರಮದ ಫಲ. ದಿಡೀರನೇ ಕರ್ನಾಟಕದ ಮೇಲೆ ಪ್ರೀತಿ ಬಂತು ಎಂದು ಕೆಲವರು ಹಂಗಿಸಿದ್ದಾರೆ. ದುಡಿಯುವ ಸಮಯದಲ್ಲಿ ಎಲ್ಲಿ ಸಾಧ್ಯವಾಗುತ್ತದೆ ಅಲ್ಲಿಗೇ ಹೋಗಲೇ ಬೇಕು ದುಡಿಯಲೇ ಬೇಕು. ನಾನು ದುಡಿಮೆಗೆ ಬೆಂಗಳೂರಿಗೆ ಬಂದಿದ್ದೇನೆ, ದುಡಿದ ನಂತರ ಊರಿಗೆ ಹೋಗಿ ಅಲ್ಲಿನವರಿಗೆ ಏನಾದರೂ ಮಾಡಬೇಕೆಂಬ ಹಂಬಲವಿದೆ. ಆದರೇ ಸಂಪಾದನೆಗಿಂತ ಮುಂಚೆ ಮಾಡಲಾಗುವುದಿಲ್ಲ. ರೈ ಕೂಡ ಹಾಗೇಯೆ ಮಾಡುತ್ತಿದ್ದಾರೆಂಬುದು ನನ್ನ ಅನಿಸಿಕೆ. 

ಕೆಲವು ಕಾಂಗ್ರೇಸ್ಸಿಗರು ಮತ್ತು ಎಡಪಂಥೀಯರು, ಅವರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದಂತೂ ನಿಜ. ಆ ಹಾದಿಯಲ್ಲಿ ಅವರು ಮೇವಾನಿಯ ಜೊತೆ ಸೇರಿದ್ದು ನನಗೆ ಸರಿ ಎನಿಸಲಿಲ್ಲ. ಮೇವಾನಿ ಜಾತಿಯ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಯುವ ರಾಜಕಾರಣಿ. ಜಾತಿ ಧರ್ಮಗಳ ಮೀರಿ ಬೆಳೆಯಬೇಕಿರುವ ಕಾಲಘಟ್ಟದಲ್ಲಿ ಇದು ಬೇಕಿರಲಿಲ್ಲ. ರೈ ರವರು ಮೋದಿಯನ್ನು ದೂರುವ ಸಲುವಾಗಿ ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಂಡಿದ್ದು ಸರಿಯಿಲ್ಲ. ಆದರೇ, ಅವರ ಸಮರ್ಥನೆ ಸರಿಯಿದೆ, ಮೋದಿ ಮತ್ತು ರಾಹುಲ್ ವಯಸ್ಸಿನ ವ್ಯತ್ಯಾಸವಿದೆ, ಆದರೆ ನೆನಪಿರಲಿ ರಾಹುಲ್ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷ. ಮೋದಿಯನ್ನು ಸೋಲಿಸುವ ಉದ್ದೇಶದಿಂದ, ಯೋಗ್ಯತೆಯಿಲ್ಲದೆ ಆ ಹುದ್ದೆಯಲ್ಲಿರುವ ಕಾಂಗ್ರೇಸ್ ಅನ್ನು ಬೆಂಬಲಿಸುವುದು ಆತಂಕಕಾರಿ ವಿಷಯ. ಮೋದಿಯನ್ನು ವಿರೋಧಿಸಿ ಆದರೆ ಅವರ ಸ್ಥಾನಕ್ಕೆ ನಿಮ್ಮ ಆಯ್ಕೆ ಯಾವುದು? ರಾಹುಲ್ ಗಾಂಧಿಯೇ? ಮಮತಾ ಬ್ಯಾನರ್ಜಿಯೇ? ಲಾಲೂ ಪ್ರಸಾದ್ ಯಾದವ್? ಯಾರು ನಿಮ್ಮ ನಾಯಕ? ಇದು ದೇಶದ ವಿಷಯ. ಸದ್ಯಕ್ಕಂತೂ ಮೋದಿಯನ್ನು ಬಿಟ್ಟರೇ ಬಿಜೆಪಿಯಲ್ಲಿಯೇ ಮತ್ತೊಬ್ಬ ಒಳ್ಳೆಯ ನಾಯಕನಿದ್ದಾರೆಂಬ ನಂಬಿಕೆ ನನಗಿಲ್ಲ. ಅದರಂತೆಯೇ, ಆದಿತ್ಯನಾಥ್ ಯೋಗಿಯ ವಿಷಯದಲ್ಲಿಯೂ ಅಷ್ಟೆ, ಉತ್ತರ ಪ್ರದೇಶ, ಕರ್ನಾಟಕದಂತೆ ಅಲ್ಲಾ, ಅದು ಬಹಳ ದೊಡ್ಡ ರಾಜ್ಯ, ಶಿಕ್ಷಣದಲ್ಲಿ ಹಿಂದುಳಿದು, ಹೆಚ್ಚೂ ಕಡಿಮೆ ಗೂಂಡಾ ರಾಜ್ಯ ಎನಿಸಿಕೊಂಡಿತ್ತು. ಅದನ್ನು ಸುಧಾರಿಸುವುದು ಸುಲಭದ ಮಾತಲ್ಲ. 

ನಾನು ಗಮನಿಸಿದ ಹಾಗೆ, ಪ್ರಕಾಶ್ ರೈ ಬೇರೆ ನಟರಂತೆ ಅಲ್ಲಾ. ಅವರು ಸಿದ್ದಾಂತಗಳೊಂದಿಗೆ ಬೆಳೆದವರು. ಚೆನ್ನಾಗಿ ಓದಿಕೊಂಡವರು, ಅವರ ಸ್ನೇಹ ವರ್ಗ ಕೂಡ ಪ್ರಜ್ಞಾವಂತರಿಂದ ಕೂಡಿದೆ. ವಿಚಾರವಂತರ ಬಳಗ ಹೊಂದಿದ್ದಾರೆ. ತಳ ಮಟ್ಟದಲ್ಲಿನ ವಾಸ್ತವಿಕತೆ ಗೊತ್ತಿದೆ, ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಬಂದವರು, ರಾತ್ರೋರಾತ್ರಿ ಸ್ಟಾರ್ ಆದವರಲ್ಲ. ಸುಮ್ಮನೆ ಕಾಟಾಚಾರಕ್ಕೆ ಮಾತನಾಡುವುದಿಲ್ಲ ಕೂಡ. ಅವರಿಗೆ ಉತ್ತರ ನೀಡುವ ಸಾಮಥ್ರ್ಯ ಬಹುತೇಕ ಕರ್ನಾಟಕದ ಬಿಜೆಪಿಯವರಲ್ಲಿ ಇದ್ದಂತೆ ನನಗೆ ಕಾಣಲಿಲ್ಲ, ಹಾಗಾಗಿಯೇ ಪ್ರಕಾಶ್ ರೈರವರನ್ನು ಕೆಟ್ಟ ಭಾಷೆಯಿಂದ ನಿಂದಿಸಿದರು, ಕೊನೆಗೆ ಯಾವ ಮಟ್ಟಕ್ಕೆ ಇಳಿಯಿತೆಂದರೆ ವಿವೇಕತನವೇ ಇಲ್ಲದ ಪ್ರಥಮ್, ಹುಚ್ಚ ವೆಂಕಟ್‍ರವರ ಮಾತುಗಳಿಗೆ ಮನ್ನಣೆ ನೀಡಿ, ಪ್ರಚಾರ ನೀಡಿದರು. 

ಇನ್ನೂ ಕರ್ನಾಟಕದ ಬಿಜೆಪಿಯ ವಿಷಯಕ್ಕೆ ಬರೋಣ. ನಾನು ಸೇರಿದಂತೆ ಕೋಟ್ಯಾಂತರ ಜನರು ಬಿಜೆಪಿಯನ್ನು ಬೆಂಬಲಿಸಿದ್ದೆವು. ಅದಕ್ಕೊಂದಿಷ್ಟು ಕಾರಣಗಳಿದ್ದವು, ನಿರೀಕ್ಷೆಗಳಿದ್ದವು. ಅದರ ಜೊತೆಗೆ ಕಾಂಗ್ರೇಸ್ ಬಗ್ಗೆ ತಿರಸ್ಕಾರ ಮತ್ತು ಬೇಸರವಿತ್ತು. ಬಿಜೆಪಿ ಬೆಳೆದಿದ್ದು, ವಿದ್ಯಾವಂತರ ಮತ್ತು ಪ್ರಜ್ಞಾವಂತರ ಪಕ್ಷವಾಗಿ. ಹಾಗಾಗಿಯೇ, ಇತ್ತೀಚಿನ ದಿನಗಳ ತನಕ ಗ್ರಾಮೀಣ ಪ್ರದೇಶ ಮತ್ತು ಸ್ಲಂ ಗಳಲ್ಲಿ ಬಿಜೆಪಿಗೆ ಓಟ್ ಕಡಿಮೆಯಿರುತ್ತಿತ್ತು. ನೀವು ಕರ್ನಾಟಕದಲ್ಲಿ ಬಿಜೆಪಿ ಬೆಳೆದು ಬಂದ ಹಾದಿಯನ್ನು ಗಮನಿಸಿದರೆ, ಮೊದಲೆಲ್ಲಾ ದಕ್ಷಿಣ ಕನ್ನಡದಲ್ಲಿಯೇ ಹೆಚ್ಚಿರುತ್ತಿತ್ತು. ಇದಕ್ಕೆ ಕಾರಣ, ಅದು ವಿದ್ಯಾವಂತರ ಜಿಲ್ಲೆ ಎನ್ನುವ ಮಾತಿತ್ತು. ಎಲ್‍ಕೆ ಅಡ್ವಾಣಿಯವರು ಯಡ್ಯೂರಪ್ಪರವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆಂದು ತಿಳಿದ ತಕ್ಷಣ ಅವರಿಂದ ದೂರ ಉಳಿದರು. ಪ್ರತಿ ವರ್ಷ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬರುತ್ತಿದ್ದರು, ಆದರೇ ನಂತರ ದೂರ ಇಟ್ಟರು. ಕಾರಣ ಆ ಪಕ್ಷದಲ್ಲಿನ ನೈತಿಕತೆ. ವಾಜಪೇಯಿ, ಮುರಳಿ ಮನೋಹರ್ ಜೋಷಿ, ಅಡ್ವಾಣಿಯವರನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ. ಆದರೇ, ಕರ್ನಾಟಕದಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿಯ ನಾಯಕರುಗಳ ನಡುವೆ ಅಂತಹ ದೊಡ್ಡ ವ್ಯತ್ಯಾಸವೇನೂ ಕಾಣುವುದಿಲ್ಲ. ಅದರಲ್ಲಿಯೂ ಇಂದಿನ ಕಾರ್ಯಕರ್ತರ ದೃಷ್ಟಿಯಲ್ಲಿ ಬಿಜೆಪಿ ಇರುವುದು ಹಿಂದುಗಳಿಗೆ ಮಾತ್ರ, ಅದಿಲ್ಲದೇ ಇದ್ದರೇ ಹಿಂದೂಗಳೇ ಇರುವುದಿಲ್ಲವೆಂದು ನಂಬಿದ್ದಾರೆ ಮತ್ತು ನಂಬಿಸುತ್ತಿದ್ದಾರೆ. 

ಹಾಗಾಗಿಯೇ ಪ್ರಕಾಶ್ ರೈ ವಿಷಯವನ್ನೂ ಪದೇ ಪದೇ ಧರ್ಮಕ್ಕೆ ಅಂಟಿ ಹಾಕುವುದು. ಮೊನ್ನೆ ಒಬ್ಬ ಪತ್ರಕರ್ತ ಮಂಡ್ಯದಲ್ಲಿ ಪ್ರಕಾಶ್ ರೈರವರನ್ನು ಬೇಕೆಂದೇ ಪ್ರಚೋದಿಸಿದ. ಆ ವಿಡಿಯೋವನ್ನು ಸಂಪೂರ್ಣವಾಗಿ ಹಾಕಲಿಲ್ಲ. ಕೇವಲ ಒಂದು ತುಣುಕನ್ನು ಹಾಕಿ, ಅದರಲ್ಲಿ ನಾನು ಹಿಂದೂ ಅಲ್ಲ ಎನ್ನುವುದನ್ನು ಹೈಲೈಟ್ ಮಾಡಲಾಗಿತ್ತು. ಈ ವಿಷಯಕ್ಕೆ ಸಂಭಂಧಿಸಿದಂತೆ ಸ್ವಲ್ಪ ಚರ್ಚಿಸೋಣ. ಹಿಂದೂ ದೇಶ ಎಂದರೇ ಏನು? ಭಾರತ ಯಾವಾತ್ತಾದರೂ ಹಿಂದೂ ದೇಶವಾಗಿತ್ತು? ಹಿಂದೂ ಎನ್ನವುದೇನು? ಹಾಗೆಂದು ಧರ್ಮವಿದೆಯಾ? ಇದೆಲ್ಲವೂ ಹೇಗೆ ಹುಟ್ಟಿತು? ಇದರ ಕುರಿತು ಪ್ರೋ. ಎಸ್.ಎನ್. ಬಾಲಗಂಗಾಧರರವರು ಕಳೆದ ನಲ್ವತ್ತು ವರ್ಷದಿಂದ ಸಂಶೋಧನೆ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಅವರ ಪುಸ್ತಕಗಳ ಮೂಲಕ ಅಥವಾ ಭಾಷಣಗಳ ಮೂಲಕ ತಿಳಿದುಕೊಳ್ಳಿ. ಸಂಕ್ಷಿಪ್ತವಾಗಿ ಹೇಳುವುದಾದರೇ ಹಿಂದೂ ಧರ್ಮವೆಂಬುದೇ ಇಲ್ಲ. ಮುಸಲ್ಮಾನರಿಗೆ, ಕ್ರೈಸ್ತರಿಗೆ ನಿದಿಷ್ಟವಾದ ಒಂದು ಪುಸ್ತಕವಿದೆ, ಅದರಂತೆಯೇ ಅವರು ಜೀವನ ಸಾಗಿಸಬೇಕು, ದೇವರನ್ನು ಕಾಣಬೇಕು. ನಮಗೆ ಹಾಗಿಲ್ಲ. ಭಾರತ ಸಂಸ್ಕøತಿ, ಸಂಪ್ರದಾಯಗಳ, ಆಚರಣೆಗಳ ದೇಶ. ನಮ್ಮಲ್ಲಿ ಧರ್ಮ ಎಂಬ ಪದ ಬಳಕೆಯೇ ಬೇರೆ, ಅದು ರಿಲಿಜಿನ್ ಅಲ್ಲಾ. ದಯೇಯೇ ಧರ್ಮದ ಮೂಲವಯ್ಯ – ಇಲ್ಲಿ ಧರ್ಮ ಎಂದರೆ ರಿಲಿಜಿನ್ ಅಲ್ಲ. ಹಾಗಾಗಿ ಈ ಹಿಂದೂ ಸ್ಥಾನ್ ಮಾಡುವುದು, ಹಿಂದೂ ರಾಷ್ಟ್ರ ಮಾಡುವುದು ಹೇಗೆ? ಮತ್ತೊಂದು ಉತ್ತಮ ಉದಾಹರಣೆ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು. ಅಲ್ಲಿ ಜೈನರು, ಬುದ್ದರು, ವೈಷ್ಣವರು, ಶೈವರು ಹೀಗೆ ಬಂದು ಹೋಗುತ್ತಿರುತ್ತಾರೆ ಯಾವುದೂ ಉಳಿದಿದ್ದು?

ನಮ್ಮೂರಿನ ಹತ್ತಿರ ಹಂಡ್ರಂಗಿ ಇದೆ. ಅಲ್ಲಿ ಘೋರಿಗಳಿವೆ. ಮಾಸ್ಮಾಲಮ್ಮ ಅಂತಾ ಜಾತ್ರೆ ಮಾಡ್ತಾರೆ, ಎಲ್ಲಾ ಜಾತಿಯವರು ಹೋಗ್ತಾರೆ, ಹರಕೆ ಕಟ್ತಾರೆ. ಈ ಧರ್ಮವೇ ಬರೋದಿಲ್ಲ. ಅದೇ ರೀತಿ ಸಾಕಷ್ಟು ಊರುಗಳು ನಿಮಗೆ ಸಿಗುತ್ತವೆ. ಇದು ಕರ್ನಾಟಕ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲಿಯೂ ಕೂಡ. ಮೊಘಲರು ನಮ್ಮ ಮೇಲೆ ಆಕ್ರಮಣ ಮಾಡಿದರು, ನಾಶ ಮಾಡಿದರು, ಆದರೇ ನಮ್ಮ ಅನೇಕರು, ಅಕ್ಬರ್, ಔರಂಗಜೇಬ್, ಷಹಾಜಹಾನ್ ರವರ ಘೋರಿಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದರರ್ಥವೇನು? ನಾವು ಚಿಕ್ಕವರಿದ್ದಾಗ ಇಂಥವುಗಳು ನಮ್ಮ ತಲೆಯೊಳಕ್ಕೆ ಬರಲೇ ಇಲ್ಲ. ಬಹುಶಃ ಮಾಧ್ಯಮಗಳು ಕಡಿಮೆಯಿತ್ತು? ರಾಜಕಾರಣಿಗಳು ಈ ಮಟ್ಟಕ್ಕೆ ಇಳಿದಿರಲಿಲ್ಲ. ಇರಲಿ, ಇಲ್ಲಿ ರೈ ರವರು ಹೇಳುತ್ತಿರುವುದು ಅದನ್ನೇ. ಇದು ಎಲ್ಲರ ದೇಶವೆಂದು. ಅದನ್ನ ಅವರು ಜ್ಯಾತ್ಯಾತೀತ ಅನ್ನೊ ಪದವನ್ನು ಬಳಸುತ್ತಿದ್ದಾರೆ ಅಷ್ಟೆ. ವೈವಿಧ್ಯತೆಯೇ ಬದುಕು. ಬಿನ್ನಾಭಿಪ್ರಾಯಗಳಿರಬೇಕು. ಚರ್ಚೆಗಳಾಗಬೇಕು. ಪ್ರಶ್ನೆಗೆ ಉತ್ತರ ಕೊಡಬೇಕು ಮತ್ತು ಹುಡುಕಬೇಕು. ಅದನ್ನು ಬಿಟ್ಟು ಪ್ರಶ್ನೆಗೆ ಪ್ರಶ್ನೆ ಹಾಕುವುದಲ್ಲ. ಪಲಾಯನವಾದ ಮಾಡುವುದಲ್ಲ. 

ಈ ಲೇಖನಕ್ಕೆ ನೇರ ಸಂಭಂಧವಿಲ್ಲದೇಯಿದ್ದರೂ ಒಂದು ಮಾತನ್ನು ಹೇಳುತ್ತೇನೆ. ಇತ್ತೀಚಿನ ದಿನಗಳಲ್ಲಿ ಪಲಾಯನವಾದದ ಇನ್ನೊಂದು ಮುಖವಿದು. ಇದು ಭ್ರಷ್ಟಾಚಾರವನ್ನು ಬಿಗಿದಪ್ಪಿರುವುದರ ಪರಿಣಾಮ. ಇದಕ್ಕೆ ಯಾರೊಬ್ಬರೂ ಹೊರತಲ್ಲ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂದರೆ, ಬಿಜೆಪಿ ಮಾಡಿಲ್ವಾ? ಬಿಜೆಪಿ ಮಾಡಿದೆ ಎಂದರೇ ಕಾಂಗ್ರೇಸ್ ಮಾಡಿಲ್ವ? ವಂಶ ರಾಜಕೀಯ, ಅವರೂ ಮಾಡಿಲ್ವ? ಹೀಗೆ ಎಲ್ಲವನ್ನೂ ಸಮರ್ಥಿಸಿಕೊಳ್ಳವುದು. ಅವರು ಕಚಡ ತಿಂದರೇ ನೀವು ತಿನ್ನೋದಾ? ಪ್ರಕಾಶ್ ರೈ ಮೋದಿಯನ್ನು ಪ್ರಶ್ನಿಸಿದರೆ, ಸಿದ್ದರಾಮಯ್ಯರವರನ್ನು ಪ್ರಶ್ನಿಸಲಿ ಎನ್ನವುದು. ದಿನೇಶ್ ಗುಂಡೂರಾವ್ ಯೋಗಿಯನ್ನು ಬೈದರೆ ಮುಲ್ಲಾನನ್ನು ಬೈಯ್ಯಲಿ ಎನ್ನುವುದು. ಇದೆಲ್ಲಿಗೆ ತಲುಪಿತೆಂದರೆ ಆಸಿಫಾ ರೇಪ್ ವಿಷಯಕ್ಕೂ, ಹಿಂದೂ ಹುಡುಗಿಗೆ ಯಾಕೆ ಪ್ರತಿಭಟಿಸಿಲ್ಲ ಎಂದು ಕೇಳುವುದು. ಏನಾಗಿದೆ ರೀ ನಮ್ಮ ಜನಕ್ಕೆ. ನಾಚಿಕೆ ಮಾನ ಮರ್ಯಾದೆ ಅನ್ನೊದೆಲ್ಲಾ ಮಾರಿ ಕೊಂಡ್ರಾ? 

ಮತ್ತೊಂದು ಮುಖ್ಯವಾದ ವಿಷಯ. ಕಾವೇರಿ ವಿಷಯದಲ್ಲಿ ನಿಮ್ಮ ನಿಲುವೇನು? ಆಗ ಎಲ್ಲಿ ಹೋಗಿದ್ದರು? ಅಲ್ಲಾ ಸ್ವಾಮೀ. ಪ್ರಕಾಶ್ ರೈ ನಿಲುವಿಂದ ಏನಾಗುತ್ತೆ? ಅವರು ಯಾರು? ಇಂಜಿನಿಯರ್? ಜಲತಜ್ಞ? ಪರಿಣಿತ? ನಾನು ಗಮನಿಸಿದ್ದೇನೆ, ಟಿವಿಗಳಲ್ಲಿ ನಟರನ್ನ, ಸೆಲೆಬ್ರಿಟಿಗಳನ್ನ, ರಾಜಕಾರಣಿಗಳನ್ನ ತಂದು ಕೂರಿಸಿ ಕಾರ್ಯಕ್ರಮ ಮಾಡ್ತಿರಲ್ಲ. ನಿಮಗೆ ಒಂದು ನದಿಯ ಬಗ್ಗೆ ಏನಾದರೂ ಗೊತ್ತಾ? ಮೊನ್ನೆ ಅವರ ವಿಡಿಯೋ ಬಹಳ ಖುಷಿಯಾಯ್ತು. ನಾನು ಸತತ ಹತ್ತು ವರ್ಷಗಳ ಕಾಲ ನೀರಿನ ಬಗ್ಗೆ ಸಂಶೋಧನೆ ಮಾಡಿದ್ದೀನಿ, ಅದರಲ್ಲಿ ಆರು ವರ್ಷ ನದಿಯ ಕುರಿತು, ನನಗೆ ಇವರೆಲ್ಲರೂ ಮಾತನಾಡುವಾಗ ಅಸಹ್ಯ ಎನಿಸುತ್ತೆ. ವ್ಯವಸ್ತೆಯ ಕುರಿತು ಬೇಸರ ಜಿಗುಪ್ಸೆ ಕೂಡ ಬರುತ್ತೆ. ಹಾಗಾಗಿಯೇ ನಾನು ಹೆಚ್ಚಿನ ಬಾರಿ ಮಾಧ್ಯಮಗಳನ್ನು ಉಗಿದು ಉಪ್ಪಿನಕಾಯಿ ಹಾಕುವುದು. ಇವರು ತೋರಿಸುವ ಎಲ್ಲವನ್ನೂ ಜನರು ನಂಬುತ್ತಾರೆ. 

ಉಪಸಂಹಾರ: ಬಿಜೆಪಿಗರೇ ನಿಮ್ಮ ಪಕ್ಷವನ್ನು ಕಟ್ಟಿ ಬೆಳೆಸಲು ಸಾಕಷ್ಟು ಜನರು ಶ್ರಮಿಸಿದ್ದಾರೆ. ಬಿಜೆಪಿ ಉತ್ತಮ ಉದ್ದೇಶವನ್ನಿಟ್ಟುಕೊಂಡು ಆದರ್ಶಗಳನ್ನು, ಸಂಸ್ಕøತಿ, ಸಂಸ್ಕಾರವನ್ನು ಜೊತೆಗಿಟ್ಟುಕೊಂಡು ಬೆಳೆದ ಪಕ್ಷ. ದೇಶದ ಗೌರವ, ಘನತೆಯನ್ನು ಎತ್ತಿ ಹಿಡಿಯಬೇಕು. ಅದನ್ನು ಕೀಳುಮಟ್ಟದ ರಾಜಕೀಯಕ್ಕೆ ಬಳಸಿ, ಕೆಟ್ಟ ಭಾಷೆಯಿಂದ ಹಾಳು ಮಾಡಬೇಡಿ. ಮೊದಲು ಓದಿಕೊಂಡು, ವಿಚಾರಗಳನ್ನು ತಿಳಿದು ಮಾತನಾಡಿ. ಪ್ರಕಾಶ್ ರೈ ಹೆಂಡತಿಯನ್ನು ಬೈದದ್ದು ಒಂದು ಹೆಣ್ಣಿಗೆ ಮಾಡಿದ ಅವಮಾನವೆಂಬುದನ್ನು ಮರೆಯಬೇಡಿ. ಪ್ರಕಾಶ್ ರೈ ರವರೆ ನೀವು ಮೋದಿಯನ್ನು ಬಿಜೆಪಿಯನ್ನು ದೂರುವ ಉತ್ಸಾಹದಲ್ಲಿ ರಾಹುಲ್ ಗಾಂಧಿಯಂತವರನ್ನು ಅಪ್ಪುವುದು ಸರಿಯಿಲ್ಲ. ಯೋಗ್ಯತೆಯಿರುವ ನಾಯಕರೊಂದಿಗಿರಿ, ಯಾವುದೇ ಪಕ್ಷದಲ್ಲಿರಲೇಬೇಕೆಂಬ ನಿಯಮವಿಲ್ಲ. ಎಲ್ಲರನ್ನೂ ಪ್ರಶ್ನಿಸೋಣ ಪಕ್ಷಾತಿತವಾಗಿ. 

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...