28 ಏಪ್ರಿಲ್ 2020

ಇಂಟರ್ನೆಟ್ ಜ್ಞಾನದ ಮೂಲವಾಗಿ, ಟಿಕ್ ಟಾಕ್ ಲೈಕ್ಸ್ ಗೆ ಹಾತೋರೆಯುತ್ತಿರುವ ಯುವಜನತೆ!!!



ಆತ್ಮೀಯರೇ,

ಎರಡು ವಿಚಾರಗಳ ಕುರಿತು ಬಹಳ ದಿನಗಳಿಂದ ಬರೆಯಬೇಕೆಂದಿದ್ದೆ. ಅದಕ್ಕೆ ಸಕಾರಣವೆಂಬಂತೆ ಸ್ನೇಹಿತ ಚೇತನ್, ನೆನಪಿಸಿದ್ದು ಒಳ್ಳೆಯದಾಯಿತು. ಇದನ್ನು, ಸ್ವಲ್ಪ ಮನೋವಿಜ್ಞಾನ ಅಡಿಯಲ್ಲಿ ನೋಡುತ್ತಾ, ಒಂದು ವಿಚಾರವನ್ನು ಮಾತ್ರ ಈಗ ಪ್ರಸ್ತಾಪಿಸುತ್ತಿದ್ದೇನೆ. ಮತ್ತೊಂದು ವಿಚಾರವÀನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ. ಮಾಹಿತಿ ಕೇಂದ್ರಬಿಂದುವಾದ ಗೂಗಲ್ ಅಥವಾ ಅಂತರ್ಜಾಲದ ಕುರಿತು ನೋಡೋನ. ನನ್ನ ಅನೇಕ ಲೇಖನಗಳು ಈ ಕುರಿತು ಮಾತನಾಡಿದ್ದರೂ, ಇದರಲ್ಲಿ ಸ್ವಲ್ಪ ಆಳವಾಗಿ ನೋಡುತ್ತಿದ್ದೇನೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆ ಬೇಕೇ ಬೇಕು ಅಲ್ಲವೇ?

ಎಲ್ಲಿಂದ ಎಲ್ಲಿಗೆ ಹೋಗಿದ್ದೇವೆಂಬುದನ್ನು ಅವಲೋಕಿಸುತ್ತಾ ಸಾಗೋಣ. ನಿಮ್ಮ ಜೀವನವನ್ನೇ ನೋಡಿ. ಹತ್ತು ವರ್ಷಗಳ ಹಿಂದೆ ಮನೆಯಲ್ಲಿ ಒಂದು ಸಾಂಬಾರ ಪುಡಿ ಮಾಡಬೇಕು, ಒಂದು ಚಟ್ನಿ ಪುಡಿ ಮಾಡಬೇಕು, ಇನ್ಯಾವುದೋ ಹೊಸ ಅಡುಗೆ ಕಲಿಯಬೇಕು, ಸಾಧನ ಯಾವುದಿತ್ತು? ಅಮ್ಮ, ಅಜ್ಜಿ, ಸಂಬಂದಿಕರು, ಅಕ್ಕಪಕ್ಕದ ಮನೆಯವರು ಜೊತೆಗೆ ಯಾವುದೋ ಪತ್ರಿಕೆಯಲ್ಲಿ ಬಂದದ್ದು ಇರಬಹುದು. ಅದೇ ರೀತಿ ಪ್ರವಾಸ ಹೋಗುವ ಮುನ್ನ, ಸ್ನೇಹಿತರನ್ನು ಕೇಳುವುದು, ಅಲ್ಲಿ ಏನಿದೆ? ಹೇಗಿದೆ? ಹೇಗೆ ಹೋಗಬೇಕು ಇತ್ಯಾದಿ. ಪ್ರಯಾಣದ ಸಮಯದಲ್ಲಿ ಹಾದಿಯಲ್ಲಿ ಹೋಗುವವರನ್ನೆಲ್ಲಾ ಕೇಳುವುದು ಇದು ಕೊಣನೂರಿಗೆ ಹೋಗುತ್ತಾ? ಇದು ಮೈಸೂರಿನ ರಸ್ತೆಯ? ಆರೋಗ್ಯದಲ್ಲಿ ಏರುಪೇರಾದರೇ, ಅಕ್ಕ ಪಕ್ಕದ ಮನೆಯುವರು, ಊರಿನವರು ಬಂದು ಕೆಮ್ಮು? ಈ ಕಷಾಯ ಮಾಡು, ಜ್ವರವೇ? ಅದನ್ನು ಕೊಡು. ಆ ಡಾಕ್ಟರ್ ಬಳಿ ಹೋಗು, ಅದನ್ನು ಮಾಡು, ಇದನ್ನು ಮಾಡು. ಶಾಲೆಗೆ ಸೇರಿಸುವಾಗ, ಕಾಲೇಜಿಗೆ ಸೇರಿಸುವಾಗ ಓದಿದ ಬಂಧುಗಳನ್ನು ಕೇಳುವುದು.

ಈಗ ಎಲ್ಲಿಗೆ ಬಂದಿದ್ದೇವೆ. ಕೈಯಲ್ಲಿ ಫೋನ್. ಲಾಕ್‍ಡೌನ್ ಆದ ನಂತರ ಯೂಟ್ಯೂಬ್‍ನಲ್ಲಿ ಅತಿ ಹೆಚ್ಚು ಹುಡುಕಿರುವುದು ಮನೆಯಲ್ಲಿಯೇ ವೈನ್ ತಯಾರಿಕೆ. ಎಷ್ಟರ ಮಟ್ಟಿಗೆ ಈ ಹುಡುಕಾಟಗಳು ನಡೆಯುತ್ತವೆಯೆಂದರೇ, ತಲೆ ನೋವು. ಎಡ ತಲೆನೋವಿಗೆ ಕಾರಣ ಮತ್ತು ಪರಿಹಾರ. ಬಲ ತಲೆನೋವಿಗೆ, ಮಧ್ಯ ತಲೆನೋವಿಗೆ. ವೈದ್ಯರ ಆಯ್ಕೆಗಾಗಿ ಹುಡುಕಾಟ ನಡೆದರೆ, ಆ ವೈದ್ಯ ನೀಡಿದ ಔಷಧಿಯನ್ನು ಇದೇ ಅಂತರ್ಜಾಲದ ಮೂಲಕ ಸರಿ ಇದ್ಯೋ ತಪ್ಪಿದ್ಯೋ ಎಂದು ತಿಳಿಯುವ ತನಕ ಹೋಗಿದೆ.

ನನ್ನ ಸ್ವಂತ ಅನುಭವವನ್ನು ಹೇಳುತ್ತೇನೆ. ಅದನ್ನು ನೋಡಿ ನಾನೆ ಹುಚ್ಚನಾಗಿಬಿಟ್ಟಿದ್ದೆ. ನನಗೆ ಕಳೆದ ವರ್ಷ ಬೀದಿ ನಾಯಿಯೊಂದು ಕಚ್ಚಿತ್ತು. ಇಂಜೆಕ್ಷನ್ ತೆಗೆದುಕೊಂಡರೂ, ಸ್ನೇಹಿತನೊಬ್ಬ ನನ್ನ ತಲೆಗೆ ಹುಳು ಬಿಟ್ಟಿದ್ದ. ನಾಯಿ, ಕಚ್ಚಿದರೇ, ರಾಹು ದೆಸೆ ಹೋಗುತ್ತದೆ. ಅದಕ್ಕೊಂದು ಪೂಜೆ ಮಾಡುತ್ತಾರೆ, ದಯವಿಟ್ಟು ಮಾಡಿಸು. ನಾನು ಕುತೂಹಲಕ್ಕಾಗಿ ಗೂಗಲ್‍ನಲ್ಲಿ ಹುಡುಕಿದರೇ, ಅಯ್ಯೋ ಭಗವಂತ, ಸಾವಿರ ಸಾವಿರ ಪ್ರತಿಕ್ರಿಯೆಗಳು. ಅದಕ್ಕೆಲ್ಲಾ ಪೂಜೆಯಿದೆ. ಶಾಂತಿ ಮಾಡಿಸುವುದು ಇದೆ.

ಎಷ್ಟರ ಮಟ್ಟಿಗೆ ಹುಡುಕುತ್ತಾರೆಂದರೇ, ಅಲ್ಲಿ ಉತ್ತರವನ್ನು ಕೊಡುವ ಮಂದಿಯೂ ಇರುತ್ತಾರೆ. ಎಷ್ಟರಮಟ್ಟಿಗೆ ಎಂದರೇ, ಗಂಡು ಮಗುವಾಗಲು ಯಾವ ಸಮಯದಲ್ಲಿ ಕೂಡಬೇಕು ಅಲ್ಲಿಂದ ಹಿಡಿದು, ಕುಡಿದು ಬೈಕ್‍ನಲ್ಲಿ ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ಹೋಗಲು ಸೂಕ್ತ ಮಾರ್ಗ ಯಾವುದು? ಎನ್ನುವ ತನಕ. ಮಾಸ್ಟರು ಪಾಠ ಮಾಡುವ ಮುನ್ನವೇ ಇವರುಗಳು, ಇವರಿಗೆ ತಿಳಿದ ಉತ್ತರವನ್ನು ಮೊಬೈಲ್‍ನಿಂದ ತೆಗೆದಿರುತ್ತಾರೆ. ಅನೇಕರ ಪ್ರಶ್ನೆ ಅಥವಾ ತರ್ಕ, ಇದರಲ್ಲಿ ತಪ್ಪೇನು. ಸುಲಭದಲ್ಲಿ ಮಾಹಿತಿ ಸಿಗುತ್ತದೆಯೆಲ್ಲಾ. ನಿಮಗೆ ಇಂಟರ್ನೆಟ್ಟಿನಲ್ಲಿ ಸಿಗುವ ಮಾಹಿತಿಯನ್ನು ಕೊಡುವವರು ಯಾರು? ನುರಿತ ವೈದ್ಯರೇ? ತಜ್ಞರೇ? ಇಲ್ಲಾ, ಅವರು ನಮ್ಮಂತೆಯೇ ಯಾವುದೋ ಮೂಲೆಯಲ್ಲಿ ಕುಳಿತು ಅವನಿಗೆ ತೋಚಿದ್ದನ್ನು ಬರೆಯುವವನು.
ಆದರೇ, ಕೆಲವೊಂದು ಸ್ಥಳಗಳ ಕುರಿತು, ಹೋಟೆಲ್ ಅಥವಾ ಅಂಗಡಿಗಳ ಕುರಿತು ಮಾಹಿತಿಯನ್ನು ಅವರ ಸ್ವಂತ ಅನುಭವದಿಂದ ಹಂಚಿಕೊಂಡಿರುತ್ತಾರೆ. ಅದನ್ನು ನಾವು ಪರಿಗಣಿಸಬಹುದು, ಅದರಲ್ಲಿ ತಪ್ಪಿಲ್ಲ. ಆದರೇ, ಪ್ರತಿಯೊಂದಕ್ಕೂ ನೀವು ಇಂಟರ್ನೆಟ್ ನಂಬಿ, ಅಲ್ಲಿರುವುದು ಸತ್ಯವೆಂದು ಆಸ್ಪತ್ರೆಗೆ ಹೋಗಿ ಡಾಕ್ಟರ್ ಜೊತೆಗೆ ವಾದಕ್ಕಿಳಿಯುವುದು ಮೂರ್ಖತನ. ಅದರ, ಜೊತೆಗೆ ಮನಸ್ಸಿನಲ್ಲಿ ಗೊಂದಲಗಳು ಶುರುವಾಗುತ್ತವೆ. ಇದು, ಸರಿಯೇ? ತಪ್ಪೇ ಎಂದು. ಯಾವುದನ್ನು ನಂಬದೇ, ಕೊನೆಗೆ ತ್ರಿಶಂಕು ಮನಸ್ಥಿತಿಗೆ ಬಂದು ತಲುಪುತ್ತೇವೆ. ಆದ್ದರಿಂದ, ದಯವಿಟ್ಟು ಎಚ್ಚರದಿಂದಿರಿ.

ನನಗೆ ಬಹಳ ಕಾಡುತ್ತಿರುವ ಎರಡನೆಯ ಪ್ರಮುಖ ವಿಚಾರವೆಂದರೇ, ಈ ಟಿಕ್ ಟಾಕ್ ಗಿರಾಕಿಗಳು. ನಾನು ಆಗ್ಗಾಗ್ಗೆ, ಯೂಟ್ಯೂಬ್‍ನಲ್ಲೊ ಅಥವಾ ಫೇಸ್ಬುಕ್ಕಿನಲ್ಲಿಯೋ ಟಿಕ್ ಟಾಕ್‍ಗಳನ್ನು ಮತ್ತು ಅದರ ಮೆಮೆಸ್ ಗಳನ್ನು ನೋಡುತ್ತಿರುತ್ತೇನೆ. ನನಗೆ ಈ ಟೆಕ್ನಾಲಜಿ ಮೇಲೆ ಇಷ್ಟೊಂದು ಅವಲಂಬಿತರಾಗಿದ್ದಾರೆ ಮತ್ತು ಅದೆಷ್ಟು ಸಮಯವನ್ನು ಇದಕ್ಕಾಗಿ ಕಳೆಯುತ್ತಿದ್ದಾರೆ ಎಂದು. ಅದನ್ನು ಸ್ವಲ್ಪ ಆಳವಾಗಿ ಕೆಲವು ಸ್ನೇಹಿತರ ಜೊತೆಗೂ ಚರ್ಚಿಸಿದೆ. ಅದೊಂದು ಸಾಮಾಜಿಕ ಪಿಡುಗಾಗಿದೆ ಎಂದರೆ ತಪ್ಪಿಲ್ಲ. ಇದೆಂತಹ ಮಾತೆಂದು ಆಶ್ಚರ್ಯಪಡಬೇಡಿ. ನಿಮಗೂ ಇದರ ಅರಿವಿದೆ. ನಾನು ಅದನ್ನೇ ಹೇಳುವ ಅಗತ್ಯವಿಲ್ಲ. ನನ್ನ ಕಾಳಜಿಯಿರುವುದು ಅದು ಅವರುಗಳ ಮೇಲೆ ಬೀರುತ್ತಿರು ದುಷ್ಪರಿಣಾಮಗಳ ಕುರಿತು.

ಈ ಲೈಕ್ಸ್ ಸಿಂಡ್ರೋಮ್ ಅನ್ನೋ ಮಾತನ್ನು ತಾವುಗಳು ಕೇಳಿರಬಹುದು. ಅದರ ಆಳ ಅಗಲವನ್ನೊಮ್ಮೆ ನೋಡೋಣ. ಪ್ರತಿಯೊಬ್ಬ ಮನುಷ್ಯನಿಗೂ ಸಾಮಾನ್ಯವಾಗಿ ಜನರ ನಡುವೆ ಗುರುತಿಸಿಕೊಳ್ಳಬೇಕೆಂಬ ಹಂಬಲವಿರುತ್ತದೆ. ನಾನು ಪ್ರಸಿದ್ದಿಯಾಗಬೇಕೆಂದರೂ ತಪ್ಪಿಲ್ಲ. ಆದರೇ, ಹೇಗೆ ಆಗುವುದು? ಯಾವೆಲ್ಲ ಮಾರ್ಗಗಳಿವೆ? ಕೆಲವೊಂದು ಉತ್ತಮ ಮಾರ್ಗಗಳಿವೆ, ಆದರೇ ಪ್ರಯಾಣ ಕಷ್ಟಕರವಾಗಿರುತ್ತದೆ. ಸುಲಭದ ಮಾರ್ಗಗಳು ಬೇಗ ಸಿಗುತ್ತವೆ. ಆದರೇ, ಬಹಳ ದಿನ ಉಳಿಯುವುದಿಲ್ಲ. ಬರವಣಿಗೆಯ ಮಧ್ಯದಲ್ಲಿ ಇದೆಂತಹ ಪೀಠಿಕೆ ಎನ್ನಬೇಡಿ. ಶಾಲೆ ಅಥವಾ ಕಾಲೇಜಿಗೆ ಹೋಗುವ ವಿದಾರ್ಥಿಗಳು ಪ್ರಸಿದ್ದಿಯಾಗಲು ಇರುವ ಹಾದಿಗಳೇನು? ಚೆನ್ನಾಗಿ ಓದಬೇಕು, ಹೆಚ್ಚು ಅಂಕಗಳಿಸಬೇಕು. ಕ್ರೀಡೆಯಲ್ಲಿರಬೇಕು, ಪಠ್ಯೇತರ ಚಟುವಟಿಕೆಗಳಲ್ಲಿರಬೇಕು. ಇವೆಲ್ಲವೂ ಸ್ವಲ್ಪ ಶ್ರದ್ದೆ ಮತ್ತು ಶ್ರಮವನ್ನು ಕೇಳುತ್ತವೆ.

ಹಾಗಾದರೆ, ಸುಲಭ ಮಾರ್ಗ ಯಾವುದು? ಆಕರ್ಷಿತವಾಗಿ ಬಟ್ಟೆ ಧರಿಸುವುದು, ವಿಭಿನ್ನವಾಗಿ ಹೇರ್ ಕಟ್ ಮಾಡಿಸುವುದು. ಅಥವಾ, ಸ್ವಲ್ಪ ಹೀರೋಯಿಸಂ ತೋರಿಸುವುದು. ಯಾರನ್ನಾದರೂ ರೇಗಿಸುವುದು, ಹೊಡೆದಾಡುವುದು, ರೇಗಿಸುವುದು, ನಾನು ಯಾರಿಗೂ ಡೋಂಟ್ ಕೇರ್ ಎಂಬುದನ್ನು ಬಿಂಬಿಸುವುದು. ಕೆಲವೊಮ್ಮೆ ಮಾಸ್ಟರ್ ಅಥವಾ ಟೀಚರ್ ಗಳಿಗೆ ರೇಗಿಸುವುದು. ಒಟ್ಟಾರೆಯಾಗಿ, ಎಲ್ಲರ ಗಮನವನ್ನು ಸೆಳೆಯಬೇಕೆಂಬುದು ಬಯಕೆ. ಅದೇ ರೀತಿ, ಸಾಮಾಜಿಕ ಬದುಕಲ್ಲಿ ಸುಲಭ ಮಾರ್ಗಗಳಾವು? ಆ ಸಮಯಕ್ಕೆ ಸಿಕ್ಕಿರುವುದೇ, ಈ ಟಿಕ್ ಟಾಕ್ ಮಾದರಿಯ ಚಟುವಟಿಕೆಗಳು. ಎಷ್ಟು ಸಾಧ್ಯವೋ ಅಷ್ಟು ವಿಭಿನ್ನವಾಗಿ ಚಿತ್ರಿಸುವುದು. ಸೃಜನಶೀಲತೆಯೆಂಬ ಹೆಸರಲ್ಲಿ ಕೀಳು ಮಟ್ಟಕ್ಕೆ ಇಳಿದು ಜನರ ಗಮನವನ್ನು ಸೆಳೆಯಲು ಯತ್ನಿಸುವುದು. ಇವರುಗಳ ಈ ಮಂಗಾಟಕ್ಕೆ ತಕ್ಕನಾಗಿ ಕೆಲವು ಟಿವಿ ಚಾನೆಲ್ ನವರು ಇವರ ವಿಡೀಯೋಗಳನ್ನು ವೈರಲ್ ಮಾಡುತ್ತಾರೆ. ಅದು, ಇನ್ನು ಹೆಚ್ಚಿನ ಜನರನ್ನು ತನ್ನೆಡೆಗೆ ಸೆಳೆಯುತ್ತದೆ.

ಈಗ ಇದೆಷ್ಟರ ಮಟ್ಟಿಗೆ ಹೋಗಿದೆ ಎಂದರೇ, ಗಂಡ ಹೆಂಡತಿ ಮಲಗುವ ಕೋಣೆಯಿಂದ ಕೂಡ ಟಿಕ್ ಟಾಕ್ ಮಾಡುವುದು. ಶಾಲೆ, ಕಾಲೇಜು, ಬಸ್ ಸ್ಟಾಂಡ್ ಎಲ್ಲೆಂದರಲ್ಲಿ, ಹೇಗೆಂದರಲ್ಲಿ ವಿಡೀಯೋ ಮಾಡುವುದು.

ಇದು, ಮೊದಲನೆಯ ಹಂತವಾದರೆ, ಎರಡನೆಯದ್ದು, ನನ್ನ ವಿಡೀಯೋಗೆ ಲೈಕ್ಸ್ ಬರ್ತಾಯಿಲ್ಲ ಎಂದು, ಕೊರಗುವುದು. ಅನೇಕರು, ನನ್ನ ವಿಡೀಯೋಗಳಿಗೆ ಲೈಕ್ಸ್ ಯಾಕೆ ಕೊಡುತ್ತಿಲ್ಲವೆಂದು ಬಾಯಿಗೆ ಬಂದ ಹಾಗೆ ಬೈದು ವಿಡೀಯೋಗಳನ್ನು ಮಾಡುತ್ತಿದ್ದಾರೆ. ಕೆಲವರು, ಬೇಡುತ್ತಿದ್ದಾರೆ. ಆ ರೀತಿಯ ಮಾನಸಿಕ ಖಿನ್ನತೆಗೆ ಹೋಗಿದ್ದಾರೆ. ಅವೆಲ್ಲದರ ನಡುವಿನ ದುರಂತವೆಂದರೇ, ಆ ವಿಡೀಯೋಗಳನ್ನು ಟ್ರೋಲ್ ಎಂಬ ಹೆಸರಲ್ಲಿ ಅಶ್ಲೀಲವಾಗಿ ಎಡಿಟ್ ಮಾಡುವುದು. ಯುವ ಜನತೆಗೆ ಮಾತಿನ ಮೇಲೆ ಹಿಡಿತವೇ ಇಲ್ಲದೇ ಇಷ್ಟೊಂದು ಕೀಳು ಮಟ್ಟದಲ್ಲಿ ಅಶ್ಲೀಲ ಪದಗಳನ್ನು ಬಳಸುತ್ತಿರುವುದು ನಿಜಕ್ಕೂ ಸಮಾಜವೇ ತಲೆ ತಗ್ಗಿಸುವ ವಿಷಯ. ಇದು, ಹೀಗೆಯೇ ಮುಂದವರೆದರೆ, ಇದೊಂದು ಚಟಕ್ಕೆ ದಾಸರಾಗಿ ಜೀವ ಕಳೆದುಕೊಳ್ಳುವ ದಿನಗಳು ದೂರವಿಲ್ಲ. ಟಿವಿ ಮಾಧ್ಯಮದವರು ತಮ್ಮ ಟಿ.ಆರ್.ಪಿ ಹುಚ್ಚಾಟಕ್ಕೆ ಇಂತಹ ಯುವ ಶಕ್ತಿಯ ದಾರಿ ತಪ್ಪಿಸಿದ್ದು ದುರಂತ.ತಂತ್ರಜ್ಞಾನ ನಮ್ಮ ಜ್ಞಾನಾರ್ಜನೆಗೆ, ಬದುಕನ್ನು ಹಸನಾಗುವುದಕ್ಕೆ ಸಹಕಾರಿಯಾಗಬೇಕಿತ್ತು. ಅದನ್ನು, ಈ ರೀತಿ ಕಾಲಹರಣಕ್ಕೆ ಬಳಸುತ್ತಿರುವುದು.

ಭೂತದ ಕೈಯಲ್ಲಿ ವರ್ತಮಾನ ಕೊಟ್ಟು ಭವಿಷ್ಯವನ್ನು ಕತ್ತಲಾಗಿಸುತ್ತಿರುವ ದೃಶ್ಯ ಮಾಧ್ಯಮಗಳು!




ಆತ್ಮೀಯರೇ,

ಈ ಲೇಖನವನ್ನು ಎರಡು ಪ್ರಮುಖ ವಿಚಾರಗಳನ್ನು ತಮ್ಮ ಮುಂದಿಡಲು ಬಳಸುತ್ತಿದ್ದೇನೆ. ಮೊದಲನೆಯದ್ದು, ಒಬ್ಬ ವ್ಯಕ್ತಿಯ ಹಿಂದಿನ ದಿನಗಳನ್ನು ಕೆದಕಿ, ಇಂದಿನ ಅಸ್ತಿತ್ವವನ್ನು ಹಾಳು ಮಾಡುವುದು ಅಥವಾ ಹೊಗಳಿ ಮೇಲಕ್ಕೇರಿಸುವುದು, ಎರಡನೆಯದ್ದು, ನಮ್ಮವರು ಹೊರಗಿನವರು ಎಂಬ ಬೇಧದಲ್ಲಿ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತಿರುವುದು. ಅಂದರೇ, ನಮ್ಮವರು ಮಾಡುವುದೆಲ್ಲವೂ ಸರಿ, ಬೇರೆಯವರು ಮಾಡಿದರೆ ತಪ್ಪು ಎಂದು ಬೋಧಿಸುತ್ತಿರುವುದು.

ಇತ್ತೀಚೆಗೆ ಸೋನಿಯಾ ಗಾಂಧಿಯವರ ಹಿಂದಿನ ದಿನಗಳ ಕುರಿತು ಚರ್ಚೆಗಳಾದವು. ಕೆಲವರಿಗೆ ಇದು ಹೊಸವಿಚಾರವಿರಬಹುದು. ಆದರೇ, ನಾನು ಸೇರಿದಂತೆ ಅನೇಕರಿಗೆ ಅದೊಂದು ವಿಚಾರವೇ ಅಲ್ಲಾ. ಇಪ್ಪತ್ತು ವರ್ಷಗಳ ಹಿಂದೆ, ಸುಬ್ರಹ್ಮಣ್ಯನ್ ಸ್ವಾಮಿಯವರ ಈ ಕುರಿತು ಮಾತನಾಡುವಾಗ ನಿಜಕ್ಕೂ ಆಸಕ್ತಿ ಬರುತ್ತಿತ್ತು. ಆದರೇ, ದಿನ ಕಳೆದಂತೆ, ಅದ್ಯಾವುದು ಮುಖ್ಯವಲ್ಲವೆನಿಸತೊಡಗಿದೆ. ಇವರ ವಿಚಾರವನ್ನೇ ಹಿಡಿದು ಮಾತನಾಡೋಣ. ಅದಕ್ಕೂ ಮುಂಚಿತವಾಗಿ, ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು. ನಾನು, ಕಾಂಗ್ರೇಸಿಗನೂ ಅಲ್ಲ ಬಿಜೆಪಿ ವಿರೋಧಿಯೂ ಅಲ್ಲ. ಓದಿದ ತಕ್ಷಣವೇ ತಾವು ಈ ಎರಡರಲ್ಲಿ ಒಂದು ಪಕ್ಷಕ್ಕೆ ಸೇರಿಸಿಬಿಡುತ್ತೀರಿ. ನನ್ನ ಪ್ರತಿಯೊಂದು ಬರವಣಿಗೆ ಬಂದಾಗಲೂ ಯಾವುದಾದರೂ ಒಂದು ಪಕ್ಷಕ್ಕೆ ನನ್ನನ್ನು ನೇತುಹಾಕಲು ಸಾಕಷ್ಟು ಪ್ರಯತ್ನಗಳು ನಡೆದಿವೆ. ಇರಲಿ, ವಿಷಯಕ್ಕೆ ಬರೋನ. 

ಸೋನಿಯಾ ಗಾಂಧಿಗೆ ವಯಸ್ಸು ಈಗ 73 ವರ್ಷ, ಅವರು ಮದುವೆಯಾಗಿ ಸುಮಾರು 50 ವರ್ಷಗಳಾಗಿವೆ. ಅವರು ಇಟಲಿ ಮೂಲದವರು, ಅದನ್ನು ಅವರು ಎಂದಿಗೂ ಇಲ್ಲ ಎಂದಿಲ್ಲ. ಸರ್ವೇಸಾಮಾನ್ಯವಾಗಿ ಇಟಲಿಯ ಹೆಸರೇ ಇರಬೇಕಿತ್ತು ಹಾಗಾಗಿ ಅಲ್ಲಿನ ಹೆಸರು ಇದೆ. ಅದರಲ್ಲಿ ತಪ್ಪೇನು? ಮದುವೆಯಾದ ನಂತರ ಗಂಡನ ಹೆಸರನ್ನು ಸೇರಿಸಿಕೊಳ್ಳುವುದು ವಾಡಿಕೆ, ಅದರಂತೆ ಗಾಂಧಿ ಸೇರಿದೆ. ಮದುವೆಗೆ ಮುಂಚಿತವಾಗಿ ಅವರು ಬಾರ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದರು ಎಂಬ ಮತ್ತೊಂದು ಆರೋಪ. ಅದರಲ್ಲಿ, ತಪ್ಪೇನು? ಬಾರ್ ಗರ್ಲ್ ಎಂದರೇನು? ಅವರ, ದುಡಿಮೆ ಅವರು ಆ ಉದ್ಯೋಗ ಮಾಡಿರುವುದು ತಪ್ಪೆ? ಅದು, ಕಳ್ಳತನವೇ? ದರೋಡೆಯೇ? ವಂಚನೆಯೇ? ಅದೊಂದು ಉದ್ಯೋಗವಲ್ಲವೇ? ಅದರಲ್ಲಿ ತಪ್ಪು ಹುಡುಕುವುದು ಎಂಥಹ ಮನಸ್ಥಿತಿ? ಮದುವೆಯಾದ ನಂತರ, ಗಂಡನ ಮನೆಗೆ ಹೋಗುವುದು, ಭಾರತೀಯ ಸಂಪ್ರದಾಯ. ಅದರಂತೆ, ಅವರು ಇಲ್ಲಿಗೆ ಬಂದರು ನೆಲೆಸಿದರು. 

ಇಲ್ಲಿ, ಗಮನಿಸಬೇಕಾದ ಪ್ರಮುಖ ವಿಚಾರವೆಂದರೇ, ಅವರು ಪ್ರೀತಿಸಿದ್ದು ಒಬ್ಬ ಪೈಲಟ್‍ನನ್ನು. ರಾಜೀವ್ ಗಾಂಧಿ, ಆ ಸಮಯಕ್ಕೆ ಒಬ್ಬ ಪೈಲಟ್ ಅಷ್ಟೆ. ಸೋನಿಯಾ ಗಾಂಧಿಗೆ ಕನಸು ಬಿದ್ದಿತ್ತ? ರಾಜೀವ್ ಗಾಂಧಿ ಪ್ರಧಾನಿಯಾಗುತ್ತಾರೆ? ಹತ್ಯೆಯಾಗುತ್ತೆ, ನಂತರ ಪಕ್ಷದ ಚುಕ್ಕಾಣಿ ಕೈಯಲ್ಲಿ ಸಿಗುತ್ತೆ ಅಂತಾ? ಕಟ್ಟುಕಥೆಗಳಿಗೆ ಸ್ವಲ್ಪವಾದರೂ ಮಿತಿಯಿರಬೇಕಿತ್ತು. ಅನೇಕರು ಭಾಷಣ ಬಿಗಿಯುತ್ತಾರೆ, ನನಗೆ ಚಿಕ್ಕಂದಿನಿಂದಲೇ ತಿಳಿದಿತ್ತು, ನಾನು ಇದೇ ಆಗುತ್ತೇನೆಂದು, ಹಾಗೆಯೇ ಆದೆ, ಅದೇ ಗುರಿಯ ಹಾದಿಯಲ್ಲಿ ಸಾಗಿದೆ. ಎಂತಹ ಮಣ್ಣು ಇರುವುದಿಲ್ಲ. ಅದನ್ನು ಇನ್ನು ಆಳಕ್ಕಿಳಿದು ವಿವರಿಸುತ್ತೇನೆ.

ಮಹಾತ್ಮ ಗಾಂಧೀಜೀಯವರ ಜೀವನಕ್ಕೆ ಬರೋನ. ಅವರು ಕನಸು ಕಂಡಿದ್ದರಾ? ನಾನು ಮುಂದೊಂದು ದಿನ ಮಹಾತ್ಮ ಎನಿಸಿಕೊಳ್ಳುತ್ತೇನೆಂದು? ಅಥವಾ ರಾಷ್ಟ್ರಪಿತನಾಗಬೇಕೆಂದು ದುಡಿದರಾ? ನಾವುಗಳು ಅಷ್ಟೆ, ಪ್ರತಿಯೊಬ್ಬರೂ ಅಷ್ಟೆ, ಏನಾದರೂ ಸಾಧಿಸಬೇಕೆಂದು ಹೊರಡುತ್ತೇವೆ, ನಾವು ಹೀಗೆಯೇ ರೂಪಿಸಿಕೊಳ್ಳುತ್ತೇವೆಂದು ಬ್ಲೂ ಪ್ರಿಂಟ್ ಹಾಕಿ ಹೋಗುವುದಿಲ್ಲ. ಮನಸಾಕ್ಷಿಯಿಂದ ಕೇಳಿನೋಡಿ. ಇದೇ, ವಿಚಾರವನ್ನು ನರೇಂದ್ರ ಮೋದಿಯವರ ವಿಚಾರಕ್ಕೆ ತರೋನ. ಟೀ ಮಾರುತ್ತಿದ್ದವರು ಎಂದು ಹೇಳುತ್ತಾರೆ, ಅವರಿಗೆ ಕನಸು ಬಿದ್ದಿತ್ತ? ರವಿ ಬೆಳಗೆರೆಯವರು ಅತಿಯಾಗಿ ಕುಡಿದು ಬೀಳುತ್ತಿದ್ದರು ಎಂಬ ಮಾತುಗಳನ್ನು ಕೇಳಿದ್ದೇನೆ, ಹಾಗಂತ, ಅವರೊಬ್ಬ ಪ್ರಖ್ಯಾತ ಲೇಖಕರಾದ ಮೇಲೆ, ನೀನೊಬ್ಬ ಕುಡುಕ ಎಂದು ಅವರ ಪುಸ್ತಕಗಳನ್ನು ದೂರವಿಟ್ಟಿದ್ದೀವ? 

ಡಕಾಯಿತಿಯಾಗಿದ್ದ, ಪೂಲನ್ ದೇವಿ ಜನನಾಯಕಿಯಾಗಿದ್ದು? ಜೇಡರಹಳ್ಳಿ ಕೃಷ್ಣರವರು ರೌಡಿಯಿಸಂ ಬಿಟ್ಟು ರಾಜಕಾರಣಿಯಾಗಲಿಲ್ಲವೇ? ಮುತ್ತಪ್ಪ ರೈರವರು? ಅಷ್ಟೆಲ್ಲಾ ಏಕೆ ಸ್ವಾಮಿ, ತಮ್ಮ ಜೀವನವನ್ನೇ ತಾವುಗಳು ಒಮ್ಮೆ ಅವಲೋಕಿಸುತ್ತಾ ಬನ್ನಿ. ನಾನು ಇದನ್ನು ಅನೇಕ ಬಾರಿ ಹೇಳಿದ್ದೇನೆ, ಮತ್ತೊಮ್ಮೆ ಹೇಳುತ್ತೇನೆ. ನಮ್ಮ ಹಾಸ್ಟೆಲ್ ನಲ್ಲಿ ಅನೇಕರು, ಹಗಲು ರಾತ್ರಿ ಎನ್ನದೇ ಇಸ್ಪೀಟ್ ಆಡ್ತಾಯಿದ್ರು, ಬ್ಲೂಫಿಲ್ಮ್ ನೋಡ್ತಾ ಇದ್ರು, ಕೆಲವರಿಗೆ ಹುಡುಗಿಯ ಚಟಗಳು ಇತ್ತು, ಇನ್ನೇನೋ ಮಾಡ್ತಾ ಇದ್ರು. ಅವರಲ್ಲಿ ಅನೇಕರು, ಪೋಲಿಸ್ ಇಲಾಖೆಯಲ್ಲಿದ್ದಾರೆ, ರಾಜಕೀಯದಲ್ಲಿದ್ದಾರೆ, ಉಪನ್ಯಾಸಕರಾಗಿದ್ದಾರೆ. ಮುಂದೊಂದು ದಿನ ಇನ್ನು ಎತ್ತರಕ್ಕೆ ಬೆಳೆದು ಕಮಿಷನರ್ ಆಗಬಹುದು, ಮಂತ್ರಿಗಳಾಗಬಹುದು, ಪ್ರಾಂಶುಪಾಲರು, ನಿರ್ದೇಶಕರಾಗಬಹುದು. ಯಾರಿಗೆ ಗೊತ್ತು? ಆ ವಯಸ್ಸಿನಲ್ಲಿ, ಆ ಕಾಲಮಾನದಲ್ಲಿ ಏನಾಗಬೇಕಿತ್ತು ಅದು ಆಗಿದೆ. ಅದನ್ನೇ ಹಿಡಿದುಕೊಂಡು ಅವರ ತೇಜೋವಧೆಗೆ ಇಳಿದರೆ?

ನಾನೇ ವೈಯಕ್ತಿಕವಾಗಿ ಹೇಳುತ್ತೇನೆ, ಬರೆದುಕೊಂಡಿದ್ದೇನೆ. ನಾವು ರಾತ್ರಿಯಿಡೀ ಕುಡಿಯುತ್ತಿದ್ದ ದಿನಗಳಿವೆ. ಬೈಕ್ ನಲ್ಲಿ ನೂರಾರು ಕಿಮೀ ಸುತ್ತಾಡುತ್ತಿದ್ದ ದಿನಗಳಿವೆ, ಕಾರಿನಲ್ಲಿ ಸಾವಿರಾರು ಕಿಮೀ ರಾತ್ರಿಯಿಡಿ ಓಡಾಡಿದ ದಿನಗಳಿವೆ. ಕಾಡು ಮೇಡನ್ನು ಸುಖಾ ಸುಮ್ಮನೆ ಅಲೆದಾಡಿದ ದಿನಗಳಿವೆ. ಸಿನೆಮಾ ನೋಡಲು ಮೂರು ಗಂಟೆ ಮುಂಚಿತವಾಗಿ ಥಿಯೇಟರ್ ಮುಂದೆ ನಿಂತ ದಿನಗಳಿವೆ. ಅವೆಲ್ಲವೂ ಆ ದಿನಗಳು. ಅದನ್ನು ಹಿಡಿದು ಬಂದು, ಈ ದಿನದ ನನ್ನ ದಿನಚರಿಗೆ ಹೋಲಿಸಿದರೇ? ನನ್ನ ಇಂದಿನ ಬದುಕು ಬದಲಾಗಿದೆ. ಮನುಷ್ಯ ವಿಕಸನಗೊಳ್ಳಬೇಕು. ಅದೊಂದು ನಿರಂತರ ಕ್ರಿಯೆ. ನೀವುಗಳು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ. ನೀವು ನಿಮಗಾಗಿ, ನಿಮ್ಮ ಬದಲಾವಣೆಗಾಗಿ ಒಮ್ಮೆ ಬೆತ್ತಲಾಗಿ. ನಮ್ಮ ತಪ್ಪುಗಳನ್ನು, ನ್ಯೂನ್ಯತೆಗಳನ್ನು ಒಪ್ಪುವುದಕ್ಕೆ ಗುಂಡಿಗೆ ಎರಡಿರಬೇಕು. ಅದು, ಸಾಮಾನ್ಯದ ಕೆಲಸವಲ್ಲ. ಸೋಗಾಡಿತನವನ್ನು ನಿಲ್ಲಿಸಿ.

ಈ ಲೇಖನದ ಎರಡನೆಯ ಭಾಗಕ್ಕೆ ಬರುತ್ತೇನೆ. ಮೊದಲ ಪ್ಯಾರದಲ್ಲಿ ಹೇಳಿದ್ದು, ತಮಗೆ ಅರ್ಥವಾಗಿರಲಿಲ್ಲವೆಂಬುದು ನನಗೆ ತಿಳಿದಿದೆ. ನಮ್ಮವರು ಮತ್ತು ಪರಕೀಯರು ಎಂಬ ಬೇಧಭಾವ ಮತ್ತು ಹೊಗಳಿಕೆಯ ಕುರಿತು ಮಾತನಾಡೋನ. ಇದನ್ನು, ಹೆಚ್ಚಿನ ಮಂದಿ ವಿರೋಧಿಸುವುದು ಖಂಡಿತ. ಇಲ್ಲಿನ ಬಹುತೇಕ, ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಬಂದಿರುವ ಸುದ್ದಿಗಳ ಆಧಾರದಲ್ಲಿ ಮಾತ್ರ. ಇತ್ತೀಚೆಗೆ ಒಂದು ಪೋಸ್ಟ್ ತುಂಬಾ ಸುದ್ದಿ ಮಾಡಿತ್ತು, ಅದನ್ನು ಟಿವಿಯಲ್ಲಿ ಕೂಡ ನೋಡಿದ್ದೆ. ಇಂಗ್ಲೆಂಡ್‍ನಲ್ಲಿ ಅಲ್ಲಿನ ಪ್ರಧಾನಿಯವರು ಕೊರೋನ ಸೋಂಕಿನಿಂದ ಸಾರ್ವಜನಿಕ ಅಂತರ ಕಾಪಾಡಿಕೊಂಡು, ಮನೆಯಲ್ಲಯೇ ಉಳಿದರು. ಆ ಸಮಯದಲ್ಲಿ, ಭಾರತೀಯ ಮೂಲದವರಾದ ರಿಷಿರವರು ಅಲ್ಲಿನ ಜವಬ್ದಾರಿಯನ್ನು ನೋಡಿಕೊಂಡರು. ಈ ವಿಚಾರವನ್ನು, ನಮ್ಮ ಮಾಧ್ಯಮಗಳು ಭಾರತೀಯರ ಆಳ್ವಿಕೆಯಲ್ಲಿ ಇಂಗ್ಲೇಂಡ್ ಎಂಬ ಶೀರ್ಷಿಕೆಯ ಜೊತೆಗೆ ಸುದ್ದಿಮಾಡಿ ಸಂಭ್ರಮಿಸಿದರು. ಕೆಲವರಂತೂ, 300 ವರ್ಷದ ಸೇಡನ್ನು ತೀರಿಸಿಕೊಂಡಂತೆ ಆಚರಿಸಿದರು. 

ಇದೊಂದೆ ಸುದ್ದಿಯಲ್ಲ, ಅನೇಕ ವಿಚಾರಗಳನ್ನು ನೋಡಿ. ಭಾರತೀಯ ಮೂಲದವರು, ಯಾರೇ ಆಗಲಿ, ಹೊರದೇಶದಲ್ಲಿ ಚುನಾಯಿತರಾದರೇ, ಯಶಸ್ವಿಯಾದರೇ ಹಬ್ಬವನ್ನೇ ಮಾಡುತ್ತೇವೆ. ನಮ್ಮ ಭಾಷೆಯಲ್ಲಿ ಮಾತನಾಡಿದರೇ, ನಮ್ಮ ಭಾವುಟ ಅಲ್ಲಿ ಹಾರಿಸಿದರೇ ಮುಗಿದೇ ಹೋಯ್ತು. ಪರಕೀಯರು ನಮ್ಮ ಭಾಷೆಯಲ್ಲಿ ಮಾತನಾಡಿದರೇ ಎಷ್ಟೊಂದು ಸಂಬ್ರಮಿಸುತ್ತೇವೆ ಅಲ್ಲವೇ? ಬೇರೆ ದೇಶದ ಮಹಿಳೆಯರು ಸೀರೆ ಉಟ್ಟರೇ ಎಂಥಹ ಆನಂದ ಅಲ್ಲವೇ? ಪರಕೀಯರು ನಾಮ ಹಾಕಿ, ಕೃಷ್ಣನ ಜಪಿಸಿದರೆ ಅದೆಂತಹ ಉತ್ಸಾಹವಲ್ಲವೇ? ಅಲ್ಲಿನವರು ಯೋಗ ಮಾಡಿದರೇ ಎಲ್ಲಿಲ್ಲದ ಹೆಮ್ಮೆಯಲ್ಲವೇ? ಪಾಕಿಸ್ಥಾನದ ಹುಡುಗ ವಿರಾಟ್ ಕೋಹ್ಲಿಯ ಅಭಿಮಾನಿಯಾದರೇ ಎಂತಹ ಸಂತೋಷವಲ್ಲವೇ? ಬೇರೆ ಭಾಷೆಯ ನಟರು ಕನ್ನಡದಲ್ಲಿ ಮಾತನಾಡಿದ ಅದೆಂತಹ ಸಂಬ್ರಮವಲ್ಲವೇ? 

ಅದನ್ನೇ ಒಮ್ಮೆ ಉಲ್ಟಾ ಮಾಡಿನೋಡಿ. ಸಹಿಸಲು ಆಗುತ್ತದೆಯೇ? ಒಪ್ಪಲು ಸಾಧ್ಯವೇ? ನಮ್ಮ ಹೆಣ್ಣು ಮಕ್ಕಳು ತುಂಡುಡುಗೆ ಉಟ್ಟಾಗ, ಅದು ಒಂದು ದೇಶದ ವಿನ್ಯಾಸ, ಸಂಸ್ಕøತಿ ಎನಿಸುವುದಿಲ್ಲವೇಕೆ? ನಮ್ಮ ನಟರು ಬೇರೆ ಭಾಷೆಯಲ್ಲಿ ಮಾತಾಡಿದರೆ ಎಂತಹ ಕೋಪ? ನಮ್ಮವರು ಪಾಕಿಸ್ಥಾನದ ಆಟಗಾರರನ್ನು ಮೆಚ್ಚಿದರೇ ದೇಶದ್ರೋಹವಲ್ಲವೇ? ನಮ್ಮವರು ಚರ್ಚ್‍ಗೆ ಹೋದರೇ ಹಿಂದೂ ವಿರೋಧಿಯಲ್ಲವೇ? ನಮ್ಮವರು ಬೇರೆ ದೇಶದ ಚುಕ್ಕಾಣಿ ಹಿಡಿದರೆ ಸಂಬ್ರಮಿಸುವ ನಾವು, ನಮ್ಮ ದೇಶದ ಸೊಸೆ ಐವತ್ತು ವರ್ಷದಿಂದ ಇಲ್ಲಿಯೇ ಇದ್ದರೂ ಅವರನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಲ್ವಾ? ಇದೆಂತಹ ತಾರತಮ್ಯ. ಈ ರೀತಿಯ ಸಾವಿರಾರು ಉದಾಹರಣೆಗಳನ್ನು ನೀಡಬಲ್ಲೇ, ಆದರೇ ಅದರಿಂದ ಅಂತಹ ಉಪಯೋಗವಾಗುವುದಿಲ್ಲ. ತಾವುಗಳೇ ಒಮ್ಮೆ ಯೋಚಿಸಿನೋಡಿ. 

ಕೊನೆಹನಿ: ಜಗತ್ತು ಬದಲಾಗಿದೆ. ನಮ್ಮವರು, ಬೇರೆಯವರಿಂದ ಕಲಿಯಬೇಕು, ನಮ್ಮಿಂದ ಬೇರೆಯವರು ಕಲಿಯಬೇಕು. ಯಾವುದೂ ಪರಿಪೂರ್ಣವಲ್ಲ. ಮುಂದಕ್ಕೆ ಸಾಗಬೇಕಿದ್ದ ನಾವು, ಅದ್ಯಾಕೋ ಹಿಂದಕ್ಕೆ ಹೋಗುತ್ತಿರುವುದು ವಿಪರ್ಯಾಸ. ಇಲ್ಲಿ ಯಾವುದೂ ಶಾಸ್ವತವಲ್ಲ, ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವಲ್ಲ, ಜೀವನ, ಜಗತ್ತು ನಿರಂತರ. 

ಓದು, ಬರವಣಿಗೆಯಿಂದ ದೂರಾಗಿ, ದೃಶ್ಯ ಮಾಧ್ಯಮದ ಆಯ್ದ ತುಣುಕುಗಳು ಮತ್ತು ಪೋಸ್ಟ್‍ಗಳ ಹಾವಳಿಯಿಂದ ನರಳುತ್ತಿರುವ ಭಾರತ!


ಆತ್ಮೀಯರೇ,

ನೀವು ನನ್ನ ಹಳೆಯ ಬರಹಗಳನ್ನು ಓದದೇ ಇದ್ದರೂ ಪರವಾಗಿಲ್ಲ, ಆದರೇ, ಈ ಲೇಖನವನ್ನು ಕಡ್ಡಾಯವಾಗಿಯೂ ಓದಬೇಕೆಂದು ವಿನಂತಿಸುತ್ತೇನೆ. ಒಮ್ಮೆ ಓದಿ, ನಂತರ ಪ್ರತಿಕ್ರಿಯಿಸಿ ಅಥವಾ ಮರೆತು ಬಿಡಿ, ಹೋದರೇ, ನಿಮ್ಮ ಹತ್ತು ನಿಮಿಷ ಹೋಗುತ್ತೇ ಅಷ್ಟೆ. ಸರಿ ಎನಿಸಿದರೇ, ಬದಲಾವಣೆಯ ಪರ್ವ ಶುರುವಾಗುತ್ತದೆ. ಓದುವಾಗ, ಸ್ವಲ್ಪ ಕಸಿವಿಸಿಯಾಗಲೂಬಹುದು. ಅದಕ್ಕಾಗಿ ಪೀಠಿಕೆಯನ್ನು ನೀಡುತ್ತೇನೆ. ಈ ಲೇಖನದ ಉದ್ದೇಶ, ಓದಿನ ಮಹತ್ವ, ಓದುಗರ ಮಿತಿ ಮತ್ತು ಆಯ್ಕೆಯಾಗಿದೆ.

ಓದುವುದು ಎಂದರೇ, ಅನೇಕರಿಗೆ ಅಲರ್ಜಿ, ಅದು ಮೆಚ್ಚುವ ಮಾತು. ಅದರಲ್ಲಿ ಅತಿಶಯೋಕ್ತಿಯೂ ಇಲ್ಲ, ಅಚ್ಚರಿಯೂ ಇಲ್ಲ. ಓದಿನ ಬಗ್ಗೆ ತಾತ್ಸಾರವೇಕೆ? ಅಸಡ್ಡೆ ಏಕೆ? ಎಲ್ಲರಿಗೂ ಯಾವುದಾದರೂ ಒಂದರ ಬಗ್ಗೆ ಆಸಕ್ತಿ ಇದ್ದೇ ಇರುತ್ತದೆ, ಮತ್ತೊಂದರ ಬಗ್ಗೆ ಅಸಡ್ಡೆ ಇದ್ದೇ ಇರುತ್ತದೆ. ಅದನ್ನು ಪಟ್ಟಿ ಮಾಡುತ್ತಾ ಹೋದರೇ, ನೀವು ಈ ಲೇಖನವನ್ನು ಹತ್ತು ನಿಮಿಷಕ್ಕೆ ಓದಿ ಮುಗಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಮನೆಗಳಲ್ಲಿ ಕೇಳಿಬರುವ ಒಂದು ಮಾತು, ಟಿವಿ ಮತ್ತು ಮೊಬೈಲ್ ಇದ್ದರೇ ಸಾಕು, ಬೇರೆ ಜಗತ್ತೇ ಬೇಡ. ಇಪ್ಪತ್ತನಾಲ್ಕು ಗಂಟೆಯೂ ಮೊಬೈಲ್ ಮತ್ತು ಟಿವಿ ಮುಂದೆ ಕುಳಿತಿರುತ್ತಾರೆ. ಈ ವಿಷಯವನ್ನೇ ಚರ್ಚಿಸೋಣ. ಟಿವಿಯ ಬಗ್ಗೆ ವ್ಯಾಮೋಹವಿದೆ, ಆದರೇ, ಟಿವಿಯಲ್ಲಿ ಬರುವ ಎಲ್ಲವನ್ನೂ ನೋಡುತ್ತೇವೆಯೇ? ಇಲ್ಲ, ನಮಗೆ ಹಿಡಿಸುವುದನ್ನು ಮಾತ್ರ. ಅದರಂತೆಯೇ, ಸಿನೆಮಾ, ಎಲ್ಲಾ ಸಿನೆಮಾವನ್ನೂ ನೋಡುತ್ತೇವೆಯೇ? ನಾವೇ ಮೆಚ್ಚಿ, ಆರಾಧಿಸುವ ನಮ್ಮ ನಾಯಕ/ನಾಯಕಿಯ ಅದೆಷ್ಟೋ ಸಿನೆಮಾಗಳನ್ನು ನಾವು ದೂಷಿಸಿ ಥಿಯೆಟರಿನಿಂದ ಹೊರಬಂದಿಲ್ಲವೇ?

ಅಂದರೇ, ಆಸಕ್ತಿ ವಿಷಯದ್ದೇ ಆದರೂ ಅಲ್ಲಿಯೂ ಆಯ್ಕೆಯೆಂಬುದಿದೆ. ಆರಿಸುತ್ತೇವೆ. ಒಂದು ಪಕ್ಷವನ್ನು ಬೆಂಬಿಲಿಸಿದರೂ, ಎಲ್ಲರನ್ನೂ ಇಷ್ಟಪಡುತ್ತೇವೆಯೇ? ಒಂದು ಕ್ರಿಕೇಟ್ ಟೀಮ್ ಅನ್ನು ಪ್ರೀತಿಸಿದರೂ ಎಲ್ಲರನ್ನೂ ಪ್ರೀತಿಸಿಸುತ್ತೇವೆಯೇ? ಇಲ್ಲವೇ ಇಲ್ಲ.

ಈಗ ಓದಿಗೆ, ಮರಳಿ ಬರೋಣ. ಈ ಓದುವಿನ ಬಗ್ಗೆ ತಾತ್ಸಾರ ಹುಟ್ಟುವುದು, ಶಾಲೆ ಮತ್ತು ಕಾಲೇಜುಗಳಲ್ಲಿ. ಅದು, ಪಠ್ಯ ಪುಸ್ತಕಗಳು ಆಸಕ್ತರಹಿತವಾಗಿರುವುದಕ್ಕೋ ಅಥವಾ ಮಾಸ್ಟರುಗಳು ಆ ರೀತಿ ಪಾಠ ಮಾಡಿರುವುದಕ್ಕೋ ಗೊತ್ತಿಲ್ಲ. ಅಂತೂ, ಈ ಓದು ಇಲ್ಲಿಗೆ ಮುಗಿದರೇ ಸಾಕು ಎನಿಸುತ್ತದೆ. ಪ್ರಾಮಾಣಿಕವಾಗಿ ಹೇಳುತ್ತೇನೆ, ನನ್ನದು ಪರಿಸರ ವಿಜ್ಞಾನ ವಿಷಯ, ನನಗೆ ಕಾಲೇಜಿನಲ್ಲಿ ಓದಿದ್ದಕ್ಕಿಂತ ಹೆಚ್ಚು ಅರ್ಥವಾಗಿದ್ದು, ತೇಜಸ್ವಿಯವರ, ಕುವೆಂಪುರವರ, ಕಾರಂತಜ್ಜರ ಪುಸ್ತಕಗಳಿಂದ. ಅದ್ಯಾಕೆ, ಆ ಮಟ್ಟಿಗಿನ ಬೇಸರ ತರಿಸುವ ಪುಸ್ತಕಗಳನ್ನು ಬರೆಯುತ್ತಾರೆ? ಮತ್ತು ಅದನ್ನು ವಿದ್ಯಾರ್ಥಿಗಳ ಹಣೆಗೆ ಕಟ್ಟುತ್ತಾರೆ?
ಇರಲಿ, ಅದು ವಿದ್ಯಾರ್ಥಿದೆಸೆ. ಅದಕ್ಕಾಗಿಯೇ, ನೋಡಿ ಕೋಟ್ಯಾಂತರ ವಿದ್ಯಾರ್ಥಿಗಳು, ಕಾಲೇಜು ಮುಗಿದ ತಕ್ಷಣ ಓದುವುದನ್ನೇ ಬಿಟ್ಟುಬಿಡುತ್ತಾರೆ. ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅಲ್ಲಿಂದ ಒಂದು ಹೆಜ್ಜೆ ಮುಂದಕ್ಕೆ ಹೋಗೋಣ. ಈ ಓದುವುದು ಏತಕ್ಕೆ? ಕೆಲಸ/ಉದ್ಯೋಗ ಪಡೆಯುವುದಕ್ಕೆ! ಇದು, ಚಿಕ್ಕನಿಂದಲೂ ಮಕ್ಕಳ ಮೆದುಳಲ್ಲಿ ನಾವು ತುಂಬುತ್ತಾ ಬಂದಿದ್ದೇವೆ. ಆದ್ದರಿಂದ, ಮಕ್ಕಳ ಗುರಿ ಕೆಲಸ ಕೊಡಿಸುವ ಪುಸ್ತಕವನ್ನು ಮಾತ್ರವೇ ಓದುವುದು.  ನಾನು ಅನೇಕರನ್ನು ಕೇಳಿದ್ದೇನೆ, ನೀವು ಪುಸ್ತಕ ಓದುತ್ತೀರಾ? ಎಂದು. ಅದಕ್ಕೇ ಅವರ ಒಂದೇ ಉತ್ತರ, ಅಷ್ಟೆಲ್ಲಾ ಟೈಮ್ ಎಲ್ಲಿದೆ? ಅಥವಾ ಓದಿನಿಂದ ಏನು ಬರಬೇಕೆಂಬ ತಾತ್ಸಾರದ ಉತ್ತರ. ಇದನ್ನು ಇನ್ನೂ ಸ್ವಲ್ಪ ಆಳಕ್ಕಿಳಿದು ನೋಡಬೇಕಿದೆ.
ಎಲ್ಲರೂ ಓದಲೇಬೇಕೆಂಬ ನಿಯಮವಿಲ್ಲ. ಆದರೇ, ಓದುವುದರಿಂದ ಏನೆಲ್ಲಾ ಲಾಭವಿದೆ ಎಂಬುದನ್ನಾದರು ತಿಳಿದಕೊಳ್ಳಬೇಕಿತ್ತು. ಆ ಜಾಗೃತಿ ಮೂಡಿಸಲು ಸಾಧ್ಯವೇ? ಅಸಾಧ್ಯವಾದದ್ದೂ. ಕೆಲವೊಂದು ವಿಚಾರಗಳು ಸ್ವಂತ ಅನುಭವಕ್ಕೆ ಬಂದರೇ ಮಾತ್ರವೇ ಗ್ರಹಿಸಲು ಸಾಧ್ಯ. ಈ ಓದುವುದು ಅಷ್ಟೆ. ಹಲವರು ಕೇಳುವ ಪ್ರಶ್ನೆಗಳು ಹೀಗಿರುತ್ತವೆ. ಏಕೆ ಓದಬೇಕು? ಅದರಿಂದ ಏನು ಉಪಯೋಗ? ಕೆಲಸ ಸಿಗುವಂತಿದ್ದರೇ ಓದೋನ. ನಮ್ಮ ವಿಷಯಕ್ಕೆ ಸಂಬಂಧಿಸಿದ್ದು ಇದ್ದರೇ ಓದೋನ. ಕೆಲಸದಲ್ಲಿ ಪ್ರಮೋಷನ್ ಸಿಗುವಂತಿದ್ದರೇ ಓದೋನ. ಅದನ್ನು ಬಿಟ್ಟು, ಸಾಹಿತ್ಯ, ವೈಚಾರಿಕತೆ ಇವೆಲ್ಲವೂ ಬೇಕಾ? ಇದು ಕಾಲಹರಣ. ಎಲ್ಲವನ್ನೂ ಲಾಭಾಂಶ, ಅದರಲ್ಲಿಯೂ ಲೌಕಿಕತೆ ಆಧಾರದಲ್ಲಿ ನೋಡಿರುವುದರ ಪರಿಣಾಮವಿದು. ಓದುವುದರ ಅಲೌಕಿಕ ಲಾಭಾಂಶಗಳ ಕಡೆಗೊಮ್ಮೆ ಗಮನ ಹರಿಸೋನ.

ಮುಂದಿನ ಭಾಗವನ್ನು ನಾನು ಮೂರು ಭಾಗಗಳಾಗಿ ವಿಂಗಡಿಸುತ್ತೇನೆ. ಮೊದಲನೆಯದ್ದು, ಓದದೇ ಇದ್ದರೇ ಆಗುವ ಅಥವಾ ಆಗುತ್ತಿರುವ ನಷ್ಟಗಳು, ಓದುವಾಗ ಆಯ್ಕೆ ಮಾಡಿಕೊಳ್ಳುವುದರ ನಷ್ಠಗಳು ಮತ್ತು ಅದರಿಂದಾಗಿ ಬದಲಾದ ಮನಸ್ಥಿತಿಗಳು.
ಹಾಗೆಯೇ, ಒಮ್ಮೆ ಇಪ್ಪತ್ತು ವರ್ಷಗಳ ಹಿಂದಕ್ಕೆ ಹೋಗಿ ಬರೋಣ. ಜ್ಞಾನದ ಅಥವಾ ಮಾಹಿತಿಯ ಮೂಲ ಯಾವುದಿತ್ತು? ಓದು, ದಿನ ಪತ್ರಿಕೆಗಳು, ವಾರ ಪತ್ರಿಕೆಗಳು, ಮಾಸಿಕ ಪತ್ರಿಕೆಗಳು, ಪುಸ್ತಕಗಳು, ಇತ್ಯಾದಿ. ಒಟ್ಟಾರೆಯಾಗಿ ಓದುವುದೇ ಮೂಲವಾಗಿತ್ತು. ಅನೇಕ ವಿಚಾರಗಳನ್ನು ಓದಿದವರು, ತಿಳಿದವರು ಇತರರಿಗಿಂತ ಸ್ವಲ್ಪವಾದರೂ ಭಿನ್ನವಾಗಿ ಆಲೋಚಿಸುತ್ತಿದ್ದರು ಮತ್ತು ಆಲೋಚಿಸಲೇಬೇಕಿತ್ತು. ಈಗಲೂ, ಅಷ್ಟೆ ಸಾಮಾನ್ಯವಾಗಿ ತಪ್ಪಾಗಿ ಮಾತನಾಡಿದರೆ, ನಮ್ಮವರೇ ಹೇಳುವ ಮಾತುಗಳು, ನೀನೇನು ಅವಿದ್ಯಾವಂತನ ರೀತಿ ಮಾತಾಡುತ್ತೀಯ? ಗೊತ್ತಾಗಲ್ವ ಎಂದು. ಅಂದರೇ, ಓದಿಗೆ ಒಂದು ಬೆಲೆಯಿದೆ ಎಂಬುದರ ಅರ್ಥ.

ನಮ್ಮ ಹಿರಿಯ ಸಾಹಿತಿಗಳನ್ನೊಮ್ಮೆ ಸುತ್ತಿ ಬನ್ನಿ. ಅವರ ವಿದ್ಯಾರ್ಹತೆಗಳನ್ನು ನೋಡಿ. ಎಲ್ಲರೂ, ಕಾಲೇಜಿಗೆ, ಹೋಗಿ ಎಂಎ, ಪಿಎಚ್‍ಡಿ ಮಾಡಿದವರಲ್ಲ. ಅದರಲ್ಲಿ ನನ್ನ ನೆಚ್ಚಿನ ಲೇಖಕರಾದ ಕಾರಂತಜ್ಜ, ಯಾವ ವಿಜ್ಞಾನಿಗೂ, ಕಡಿಯಿಲ್ಲದ ಜ್ಞಾನವನ್ನು ಹೊಂದಿದವರು. ಆ ಕಾಲದಲ್ಲಿ, ಯಾವ ಮಾಹಿತಿ ತಂತ್ರಜ್ಞಾನವೂ ಇಲ್ಲದೇ, ಆ ಮಟ್ಟಕ್ಕೆ ಅವರು ಜ್ಞಾನಾರ್ಜನೆ ಮಾಡಿಕೊಂಡು, ಅಷ್ಟೊಂದು ವಿಚಾರಗಳ ಕುರಿತು ಬರೆಯುವುದಕ್ಕೆ ಹೇಗೆ ಸಾಧ್ಯವಾಯಿತು? ಕಥೆ, ಕಾದಂಬರಿ ಬರೆಯುವುದು ಒಂದು ವಿಧ. ಅನೇಕ ಬಾರಿ, ತಮ್ಮ ಅನುಭವದಿಂದ, ಕಲ್ಪನೆಯಿಂದ ಬರೆಯಬಹುದು. ಆದರೇ, ವಿಜ್ಞಾನ ಕುರಿತು ರಚಿಸಬೇಕೆಂದರೇ? ಅದೇ ರೀತಿ, ತೇಜಸ್ವಿಯವರು ಮಿಲ್ಲೇನಿಯಂ ಸರಣಿ ತಂದಾಗಲೂ ಅಷ್ಟೇ, ಸುಮಾರು ಐವತ್ತು ವರ್ಷಗಳ ಕಾಲ ನಿರಂತರವಾಗಿ ಮಲೆನಾಡಿನ ಯಾವುದೋ ಮೂಲೆಯಲ್ಲಿ ಕುಳಿತು, ವಿಜ್ಞಾನದ ಮಾಸಿಕ ಪತ್ರಿಕೆಗಳನ್ನು ತರಿಸಿಕೊಂಡು ಓದುವುದು, ಅದನ್ನು ಓದುಗರಿಗೆ ಕನ್ನಡದಲ್ಲಿ ತಲುಪಿಸಿದ್ದು! ಅಚ್ಚರಿಯಲ್ಲವೇ?

ಹಿಂದಿನ ಪೀಳಿಗೆಯನ್ನು ನೋಡಿ, ಓದಿದವರೆಲ್ಲಾ ಸರ್ಕಾರಿ ಕೆಲಸಕ್ಕೆ ಸೇರಿಲ್ಲ. ಆದರೂ, ಅಕ್ಷರ ಜ್ಞಾನಕ್ಕಾಗಿ ಓದಿದವರು. ಈಗ, ಪ್ರೈಮರಿ ಶಾಲೆಗೆ ಸೇರಿಸುವ ಮುನ್ನವೇ ಯೋಚಿಸುತ್ತಾರೆ. ಯಾವ ಶಾಲೆಗೆ ಸೇರಿದರೇ, ಯಾವ ಕೋರ್ಸ್ ಸಿಗುತ್ತದೆ. ಯಾವ ಕೋರ್ಸ್ ಮಾಡಿದರೇ, ಎಷ್ಟು ಉದ್ಯೋಗವಕಾಶವಿದೆ ಎಂದು. ಅದರಲ್ಲಿ ತಪ್ಪೇನು? ತಪ್ಪೇನು ಇಲ್ಲ. ಉದ್ಯೋಕ್ಕಾಗಿಯೇ ಓದುವವನು, ಪ್ರಪಂಚ ತಿಳಿಯಲಾರ. ತಿಳಿದು ಏನು ಮಾಡಬೇಕು? ಅದನ್ನು ಮುಂದಕ್ಕೆ ವಿವರಿಸುತ್ತೇನೆ.

ಅದಕ್ಕೂ ಮುಂಚಿತವಾಗಿ, ಹೇಗಿದ್ದ ಸನ್ನಿವೇಶಗಳು ಹೇಗೆ ಬದಲಾದವು ಎಂಬುದನ್ನೊಮ್ಮೆ ಅವಲೋಕಿಸೋನ. ಮೊದಲೆಲ್ಲ ಸುದ್ದಿ ಓದಿ ವಿಷಯ ಸಂಗ್ರಹಣೆಯಾಗುತ್ತಿತ್ತು. ನಂತರದ ದಿನಗಳಲ್ಲಿ, ವಾರ್ತೆಗಳು ಬಂದವು. ಅದರ ಜೊತೆಗೆ ತಿಳಿದವರ ಭಾಷಣ ಕೇಳುವುದು ರೂಢಿಯಾಗಿತ್ತು. ಒಂದು ಕಾಲದಲ್ಲಿ ಭಾಷಣಕಾರರಿಗೆ ಎಲ್ಲಿಲ್ಲದ ಬೇಡಿಕೆಯಿತ್ತು. ಅದಾದ, ನಂತರ 24 ಗಂಟೆಯು ಸುದ್ದಿ ವಾಹಿನಿಗಳು ಬಂದವು. ಗೂಗಲ್ ಬಂತು. ಎಲ್ಲದಕ್ಕೂ ಗೂಗಲ್ ಹುಡುಕುವ ಚಾಳಿ ಬಂತು. ನಂತರದ ದಿನಗಳಲ್ಲಿ ಯೂಟ್ಯೂಬ್ ನೋಡುವುದು ಪ್ರಾರಂಭವಾಯಿತು. ನಂತರ, ಆಯ್ದ ಭಾಗವನ್ನು ಮಾತ್ರ ಕತ್ತರಿಸಿ, ಸುದ್ದಿಯನ್ನು ತಿರುಚುವ ಪದ್ಧತಿ ಶುರುವಾಯಿತು. ಅಂದರೇ, ಒಂದು ಗಂಟೆಯ ಭಾಷಣದಲ್ಲಿ ಹಿಡಿಸುವ ಅಥವಾ ಹಿಡಿಸದ ಕೇವಲ ಐದತ್ತು ನಿಮಿಷಗಳನ್ನು ಕತ್ತರಿಸಿ ಪ್ರಸಾರ ಮಾಡುವುದನ್ನು ಸೋಷಿಯಲ್ ಮೀಡಿಯಾ ಬಂದ ಮೇಲೆ ಆರಂಭಿಸಿದವು. ಈಗ, ಅದೆಲ್ಲವನ್ನು ಮರೆತು, ಮನಸ್ಸಿಗೆ ಬಂದದ್ದನ್ನು ಕೇವಲ ನಾಲ್ಕು ಸಾಲುಗಳಲ್ಲಿ ಯಾವುದೋ ಫೋಟೋ ಹಾಕಿ ಅದನ್ನೇ ಸತ್ಯವೆಂಬಂತೆ ನಂಬಿಸುವ ಸಂಸ್ಕøತಿ ಬಂದಿದೆ. ಯಾವುದನ್ನೂ ಆಲೋಚಿಸದೇ, ಅದೇ ಸತ್ಯವೆಂದು ನಂಬಿ ಅವೆಲ್ಲವನ್ನೂ ಹಂಚಿಕೊಳ್ಳುವುದು ಅದರಿಂದ ಸಮಾಜದ ಆರೋಗ್ಯವನ್ನು ಹಾಳು ಮಾಡುವುದು ಅತಿಯಾಗಿದೆ.

ಓದುವುದರಿಂದಾಗುವು ಅನುಕೂಲಗಳಾವು? ಯಾವುದನ್ನೇ ಓದಿ, ಓದು ಎಂಬುದು ನಮಗೆ ಅರಿವಿಲ್ಲದೇ ನಮ್ಮಲ್ಲಿ ವೈಚಾರಿಕತೆಯನ್ನು ಬೆಳೆಸುತ್ತದೆ. ಅತಿಯಾದ ತಾಳ್ಮೆ ನಮಗೆ ಬರುತ್ತದೆ. ಏಕಾಗ್ರತೆ ನಮ್ಮನ್ನು ಆವರಿಸುತ್ತದೆ. ನಾವೆಷ್ಟು ಅಲ್ಪ ಜ್ಞಾನಿಗಳು, ನಾವೇನು ಎಂಬುದರ ವಾಸ್ತವಿಕ ಅರಿವು ನಮಗೆ ಬರುತ್ತದೆ. ನಾವು, ನಮ್ಮದೇ ರೀತಿಯಲ್ಲಿ ಆಲೋಚಿಸು ಸಾಮಥ್ಯವನ್ನು ಕೊಡುತ್ತದೆ. ನಮ್ಮದೇ ರೀತಿ ಎಂದರೇನು? ಹೌದು, ಓದದೇ ಇದ್ದರೆ, ನಾವು ಕಂಡಿದ್ದೆಲ್ಲವೂ ಸತ್ಯ, ನಾವು ಕೇಳಿದ್ದೆಲ್ಲವೂ ಸತ್ಯವೆಂಬ ಭ್ರಮೆಯಲ್ಲಿ ಜೀವನ ಸವೆಸುತ್ತೆವೆ. ಓದಿದಾಗ, ಬೇರೊಂದು ಆಯಾಮದಲ್ಲಿಯೂ ಅದನ್ನು ಕಾಣುವುದಕ್ಕೆ ಬರುತ್ತದೆ. ಓದು, ಪುಸ್ತಕವೆಂಬದು ಮನುಷ್ಯನ ಆಪ್ತ ಮಿತ್ರವೆಂಬುದರಲ್ಲಿ ಸಂಶಯವಿಲ್ಲ. ಯಾವುದೇ, ಸಮಯದಲ್ಲಿ ಎಂತಹ ಕೆಟ್ಟ ಸನ್ನಿವೇಶದಲ್ಲಿಯೂ ಒಂದು ಪುಸ್ತಕ ನಿಮ್ಮ ಖಿನ್ನತೆಯನ್ನು ದೂರವಿಡುವುದಕ್ಕೆ ಸಹಕರಿಸುತ್ತದೆ. 

ಈಗ ಕೊನೆಯ ಹಂತಕ್ಕೆ ಬರೋಣ ಯಾರು ಯಾವ ರೀತಿಯ ಪುಸ್ತಕಗಳು ಬಯಸುತ್ತಾರೆ ಮತ್ತು ಓದುತ್ತಾರೆ. ಅವರ ಮಿತಿಗಳೇನು? ಸಾಹಿತ್ಯ ಓದುವುದರಲ್ಲಿ, ನಾನು ಕನ್ನಡದ ಕುರಿತು ಮಾತನಾಡುತ್ತಿರುವುದರಿಂದ ಕನ್ನಡ ಓದುಗ ಮತ್ತು ಕನ್ನಡ ಲೇಖಕರ ಕುರಿತಾಗಿಯೇ ಮಾತನಾಡುವುದು ಉತ್ತಮ. ಈ ಮಾತುಗಳನ್ನು ಓದನ್ನು ಆಳವಾಗಿ ಇರಿಸಿಕೊಂಡಿರುವವರ ಕುರುತು ಎಂಬುದು ನೆನಪಿನಲ್ಲಿರಲಿ. ತೀರಾ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಪುಸ್ತಕ ಓದುವವರ ಬಗ್ಗೆ ಅಲ್ಲವೇ ಅಲ್ಲ. ಪುಸ್ತಕ ಆರಿಸಿಕೊಳ್ಳುವುದರಲ್ಲಿ ನಂಬಿರುವ ವೈಚಾರಿಕತೆ ಬಹಳ ಕೆಲಸ ಮಾಡುತ್ತದೆ ಎಂಬುದು ನನ್ನ ನಂಬಿಕೆ ಮತ್ತು ಅನುಭವ. ಸಾಧಾರಣವಾಗಿ ಕನ್ನಡ ಸಾಹಿತ್ಯ ಎಂದಾಕ್ಷಣ ಮೊದಲ ಹೆಸರೇ, ಕುವೆಂಪುರವರದ್ದು ಅದಾದ ನಂತರದ ಸ್ಥಾನಗಳು ಎಲ್ಲಾ ಜ್ಞಾನಪೀಠ ಪುರಸ್ಕøತರಿಗೆ ಮತ್ತು ಅವರ ಸಮಕಾಲೀನರಿಗೆ ಮೀಸಲಾಗಿರುತ್ತದೆ.

ಓದುಗರ ದೃಷ್ಠಿಯಿಂದ ನೋಡುವುದಾದರೇ, ಹೆಚ್ಚು ಓದುಗರ ಬಳಗವನ್ನು ಸಂಪಾದಿಸಿರುವವರ ಪಟ್ಟಿಯಲ್ಲಿ ಎಸ್.ಎಲ್.ಭೈರಪ್ಪರವರು, ತೇಜಸ್ವಿ, ಕಾರಂತರು ಸೇರುತ್ತಾರೆ. ಗಮನಿಸಿ ನೋಡಿ ಭೈರಪ್ಪರವರ ಸಮಗ್ರ ಕೃತಿಗಳನ್ನು ಓದಿದವರು ತೇಜಸ್ವಿಯನ್ನೋ ಅಥವಾ ಕುವೆಂಪುವನ್ನೋ ಓದಿರುವುದಿಲ್ಲ. ತೇಜಸ್ವಿಯವರನ್ನ ಓದಿದವರು ಖಂಡಿತವಾಗಿಯೂ ಕಾರಂತರನ್ನು, ಕುವೆಂಪುರವರನ್ನು ಓದಿರುತ್ತಾರೆ. ದೇವನೂರರವರನ್ನು ಓದಿದವರು ಖಂಡಿತವಾಗಿಯೂ ಲಂಕೇಶ್ ಮತ್ತು ತೇಜಸ್ವಿಯವರನ್ನು ಓದಿರುತ್ತಾರೆ. ತೇಜಸ್ವಿಯವರನ್ನು ಓದಿಕೊಂಡವರು ಹೆಚ್ಚಿನವರು ಗ್ರಾಮೀಣ ಪ್ರದೇಶದವರು ಎಂಬುದು ನಿರ್ವಿವಾದ. ಇಲ್ಲೊಂದು ತಮಾಷೆಯ ವಿಷಯವೆಂದರೇ ಹಲವರು ಕೇವಲ ಒಂದೋ ಎರಡೋ ಪುಸ್ತಕಗಳನ್ನು ಓದಿ ನಾನು ಅವರ ಕಟ್ಟಾಭಿಮಾನಿ ಎನ್ನುತ್ತಾರೆ. ನನಗೆ ಆ ಸಮಯದಲ್ಲಿ ಒಳಗೊಳಗೆ ನಗು.

ನಾನು ಹೇಳುವುದಾದರೇ, ಎಲ್ಲರನ್ನೂ ಓದುವ ಪ್ರಯತ್ನ ಮಾಡಿ. ದೇವನೂರರವರನ್ನು ಓದಿದವರಿಗೆ ಖಂಡಿತವಾಗಿಯೂ ಭೈರಪ್ಪರವರ ಕಾದಂಬರಿಗಳು ಹಿಡಿಸುವುದಿಲ್ಲ. ಆದರೂ, ಯಾವ ಅಂಶಗಳು ಹಿಡಿಸುವುದಿಲ್ಲವೆಂಬುದನ್ನು ತಿಳಿಯುವುದಕ್ಕಾದರೂ ಓದಿ ನೋಡಿ. ನಾನು ಅನೇಕ ಬಾರಿ ಗಾಂಧೀಜಿಯ ವಿಚಾರದಲ್ಲಿ ಇದನ್ನೇ ಹೇಳುತ್ತೇನೆ. ಒಮ್ಮೆ ಓದಿ ನೋಡಿ, ತಪ್ಪಿಲ್ಲವಲ್ಲ, ಒಂದೆರಡು ಪುಸ್ತಕಗಳು, ಹೆಚ್ಚೆಂದರೇ ಒಂದು ವಾರ ಹೋದೀತು. ಹೋಗಲಿ ಬಿಡಿ. ಎಲ್ಲರನ್ನೂ ಓದಲು ಪ್ರಯತ್ನಿಸಿ, ಮನಸ್ಸಿಗೆ ಓದಿಕ್ಕಿಂತ ಮಿತ್ರ ಮತ್ತೊಬ್ಬನಿಲ್ಲ.

ಕೊನೆಯದಾಗಿ ಹೇಳುವುದಾದರೇ, ಬರೆಯುವುದು. ದಯವಿಟ್ಟು ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಭಾರತೀಯರ ಸಮಸ್ಯೆಯೇ ಇದು. ಭಾಷಣ ಮಾಡಿ ಎಂದರೇ ಗಂಟೆಗಟ್ಟಲೇ ಹರಟುತ್ತೇವೆ. ಬರೆಯಿರಿ ಎಂದರೇ, ಮೈಲಿ ದೂರು ಓಡುತ್ತೇವೆ. ನಮ್ಮ ದೇಶ ಹಾಗಿತ್ತು ಹೀಗಿತ್ತು ಎಂದೆಲ್ಲಾ ಬೀಗುತ್ತೇವೆ. ಆದರೇ, ಅದ್ಯಾವುದನ್ನು ನಮ್ಮವರ ದಾಖಲಿಸಲೇ ಇಲ್ಲ. ಈಗ ನಮ್ಮ ಇತಿಹಾಸವನ್ನು ತಿರುಚಿದ್ದಾರೆಂಬ ಬೊಂಬಡ. ನಮ್ಮವರೇ ಬರೆದಿದ್ದರೇ ಈ ದೂರುಗಳು ಇರುತ್ತಿರಲಿಲ್ಲ ಅಲ್ಲವೇ? ನಮ್ಮ ಅನುಭವಗಳೇ ಬೆಟ್ಟದಷ್ಟಿರುತ್ತವೆ, ಆದರೇ, ನಾವುಗಳೇ ನಮ್ಮನ್ನು ಕುಬ್ಜವಾಗಿ ಕಾಣುತ್ತೇವೆ. ಬರವಣಿಗೆ ಮನದಾಳದ ಭಾವನೆಗಳನ್ನು ಹೊರದಬ್ಬಲು ಇರುವ ಸಿಹಿ ಸಾಧನ.

26 ಏಪ್ರಿಲ್ 2020

ಅನ್ಯರನ್ನಲ್ಲ, ನಮ್ಮವರನ್ನೇ ದೂರುವ ಚಟ!



ಈ ಲೇಖನ ಸಂಪೂರ್ಣವಾಗಿ ನನ್ನ ಅನುಭವದ್ದು, ನನ್ನವರೇ ಎನಿಸಿದ ಸ್ನೇಹಿತರ, ನಡುವಳಿಕೆಗಳನ್ನು ಕಂಡು ಬೇಸರವಾಗಿ, ಬಹಳ ವರ್ಷಗಳಿಂದಲೂ ತಡೆಹಿಡಿದಿದ್ದನ್ನು ಇಂದು ಬರೆಯುತ್ತಿದ್ದೇನೆ. ಅವರೆಲ್ಲರೂ ಇದನ್ನು ಓದುತ್ತಾರೆಂಬ ನಂಬಿಕೆಯಿಲ್ಲ, ಏಕೆಂದರೇ ಅವರಲ್ಲಿ ಅನೇಕರನ್ನು ಅವರ ಸ್ಥಾನವನ್ನು ತೋರಿಸಿ ಅಲ್ಲಿಯೇ ಇರಿಸಿದ್ದೇನೆ. ಆದರೂ, ನಿಮ್ಮ ಬದುಕಿನಲ್ಲಿಯೂ ಇಂತಹವರು ಇರುತ್ತಾರೆಂಬ ನಂಬಿಕೆ ಅವರಿಂದ ಎಚ್ಚರಿಕೆಯಿಂದಿರಿ ಎನ್ನುವ ಒಂದು ಸೂಚನೆಗಷ್ಟೆ.

ಶೀರ್ಷಿಕೆ ನೋಡಿ, ಅನಿಸುತ್ತಿರಬಹುದು, ಇದೆಂತಹ ಚಟವಪ್ಪಾ? ಹೀಗೂ ಒಂದು ಇದ್ಯಾ? ಇರಬಹುದು. ಕಾಲ ಕೆಟ್ಟಿದೆ, ಅಂತಾ ಸಮಾಧಾನ ಮಾಡಿಕೊಂಡು ಮುಂದಕ್ಕೆ ಓದಬೇಕು. ಕೆಲವರಿಗೆ ಒಂದು ಚಾಳಿಯಿರುತ್ತದೆ. ನೀವು ಗಮನಿಸಿ ನೋಡಿ. ಅವರಿಗೆ ಯಾರನ್ನಾದರೂ ದೂರುತ್ತಿರಬೇಕು, ಚಾಡಿ ಹೇಳುತ್ತಿರಬೇಕು, ದೂಷಿಸಬೇಕು. ಇದು ಯಾವ ರೀತಿ ಎಂದರೇ, ನಮ್ಮಲ್ಲಿ ಮದ್ದು ಹಾಕುವುದು ಅಂತಾ ಒಂದು ನಂಬಿಕೆಯಿದೆ. ಅದರ ಬಗ್ಗೆ ತಿಳಿಯದೇ ಇರುವವರಿಗೆ ಒಂದಿಷ್ಟು ವಿವರಣೆಯ ಅವಶ್ಯಕತೆಯಿದೆ. ಜೀವಂತವಾಗಿರುವ ಗೋಸುಂಬೆಯನ್ನು ಹಿಡಿದು, ತಂದು, ಅಡುಗೆಮನೆಯಲ್ಲಿ, ಒಲೆಯ ಮೇಲೆ ದೋಸೆ ಹರಲೆಯನ್ನು (ತವಾ/ಪಾನ್) ಇಟ್ಟು ಅದರ ನೇರಕ್ಕೆ ಮೇಲೆ ತಲೆಕೆಳಕ್ಕೆ ಮಾಡಿ ನೇತಾಕುತ್ತಾರೆ. ಅದರ ಬಾಯಿಂದ ರಕ್ತಸ್ರಾವವಾಗಿ, ಹನಿಗಳು ಹರಲೆಯ ಮೇಲೆ ಬೀಳುತ್ತವೆ. ಬಿದ್ದ ಹನಿಗಳು, ಸಣ್ಣ ಗುಳಿಗೆಯಾಗುತ್ತವೆ. ಆ ಗುಳಿಗೆಗಳನ್ನು ಗೌಪ್ಯವಾಗಿ, ಊಟದೊಂದಿಗೆ ಅಥವಾ ಕುಡಿಯುವ ಕಾಫಿ, ಟೀ, ಮಜ್ಜಿಗೆ ಇತ್ಯಾದಿ ಜೊತೆಗೆ ಸೇರಿಸಿಕೊಡುತ್ತಾರೆ. ಅದರಿಂದ ಸೇವಿಸಿದವರಿಗೆ ಆಹಾರ ಸೇರದೇ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

ಹೌದಾ! ಅದರಿಂದ ಅವರಿಗೆ ಏನು ಲಾಭ? ಎಂತಹದ್ದು, ಇಲ್ಲ ಇದೊಂದು ಮೂಢನಂಬಿಕೆ. ಇದು ಕೆಲವು ಜನರಿಗೆ ವಂಶ ಪಾರಂಪಾರಿಕವಾಗಿ ಬಂದಿರುತ್ತದೆ. ಅದನ್ನು ಅವರು ಮುಂದುವರೆಸಲೇಬೇಕು. ಇಲ್ಲವಾದಲ್ಲಿ, ಅವರ ಕುಟುಂಬಕ್ಕೆ ಹಾನಿಯಾಗುತ್ತದೆ ಎಂಬ ನಂಬಿಕೆ. ಇದು ನಿಜನಾ? ಸುಳ್ಳಾ? ಸರೀನಾ? ತಪ್ಪಾ? ಆ ಗೊಂದಲವೆಲ್ಲ ಬೇಡ. ಆ ಚರ್ಚೆಯೂ ಈಗ ಬೇಡ. ಅದರ ಕುರಿತು ಮತ್ತೊಮ್ಮೆ ಬರೆಯುತ್ತೇನೆ. ಅವರಿಗೆ ಅದೊಂದು ನಂಬಿಕೆ, ಅದೊಂದು ಚಟ, ಚಾಳಿ ಎಂದು ನಂಬಬೇಕು.

ಅದರಂತೆಯೇ, ಕೆಲವರಿಗೆ ಬೇರೆಯವರ ಮೇಲೆ ದೂರುವುದು ಒಂದು ಚಟ. ಈ ರೀತಿಯ ಜನರು ಎಲ್ಲೆಡೆಯೂ ಸಿಗುತ್ತಾರೆ, ಅವರಿಗೇನೂ ಬರವಿಲ್ಲ. ಆಫೀಸಿನಲ್ಲಿಯೂ ಸಿಗುತ್ತಾರೆ, ಬಂಧುಗಳಲ್ಲಿಯೂ ಸಿಗುತ್ತಾರೆ, ಸ್ನೇಹಿತರಲ್ಲಿಯೂ ಇದ್ದಾರೆ. ಈ ಚಾಡಿಕೋರರಲ್ಲಿ ಮೂರು ಜಾತಿಯವರಿದ್ದಾರೆ. ಮೊದಲನೆಯವರು, ಚಾಡಿ ಹೇಳಿ ಲಾಭ ಪಡೆಯುವುದು, ಎರಡನೆಯವರು ನಾವು ಒಳ್ಳೆಯವರು ಎಂದು ಬಿಂಬಿಸಿಕೊಳ್ಳುವುದುಕ್ಕಾಗಿ ಆದರೇ ಈ ಮೂರನೆಯ ಜಾತಿಯವರು ಕೇವಲ ವಿಕೃತಿಗಾಗಿ ಮಾಡುವವರು.

ನಾನು ಇಲ್ಲಿ ಹೇಳುವ ಪ್ರತಿಯೊಂದು ವರ್ಗದವರು ನಿಮ್ಮ ಜೀವನದಲ್ಲಿ ಇದ್ದೇ ಇರುತ್ತಾರೆ. ದಯವಿಟ್ಟು, ಸೂಕ್ಷ್ಮವಾಗಿ ಅವಲೋಕಿಸುತ್ತಾ ಹೋಗಿ. ಈ ಮೊದಲನೆಯ ವರ್ಗದವರನ್ನು ನೋಡಿ, ಅವರು ನಮ್ಮ ಸಹದ್ಯೋಗಿಗಳಾಗಿಯೋ, ಅಥವಾ ನೆಂಟರಿಷ್ಟರೋ ಆಗಿರುತ್ತಾರೆ. ಅವರು, ನಮ್ಮ ಕುರಿತು ಇತರರಿಗೆ ಇಲ್ಲಸಲ್ಲದ ದೂರುಗಳನ್ನು ಹೇಳುತ್ತಾರೆ. ಅಥವಾ ನಮಗೆ ಬೇರೆಯವರ ಕುರಿತು ಹೇಳುತ್ತಿರುತ್ತಾರೆ. ಅವರಿಗೆ ಇದರಿಂದ ಏನು ಲಾಭ? ತಮ್ಮ ಮೇಲಧಿಕಾರಿಯನ್ನು ಓಲೈಸಿಕೊಳ್ಳಬೇಕು. ನಿಮ್ಮಿಂದ ಐದು ಸಾವಿರವೋ, ಹತ್ತು ಸಾವಿರವೋ ಮತ್ತ್ಯಾವುದೋ ಸಹಾಯ ಸದಾ ಆಗುತ್ತಿರಬೇಕು, ಈ ರೀತಿಯ ಅನುಕೂಲಕ್ಕೆ, ಸಹಾಯ, ಸಹಕಾರಕ್ಕೆ ಸುಲಭವಾಗಿ ಕಂಡುಹಿಡಿಯುವ ಮಾರ್ಗವಿದು. ಅಲ್ಲಿ, ಪ್ರಾಮಾಣಿಕತೆಯ ಕೊರತೆಯಿರುತ್ತದೆ. ಅದರಿಂದ ಹೊರಬರಲಾಗದೇ ಈ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ.

ಎರಡನೆಯ ವರ್ಗದವರನ್ನು ಗಮನಿಸಿ ನೋಡಿ. ಅವರಿಗೊಂದು ಬಗೆಯ ಕೀಳರಿಮೆಯಿರುತ್ತದೆ. ಅಂದರೇ, ಅವರಿಗೆ ಅವರ ಸಾಮಥ್ರ್ಯದ ಅರಿವಿರುತ್ತದೆ. ಅವರು ಸಾಧಿಸಲಾಗದ ವಿಷಯಕ್ಕೆ ಅನ್ಯ ಮಾರ್ಗ ಹಿಡಿಯುತ್ತಾರೆ. ಅವರು, ನಾನು ನಿನ್ನಷ್ಟೆ ಉತ್ತಮ, ಸಮರ್ಥನು ಎಂದು ತೋರಿಸುವ ಹಟಕ್ಕೆ ಬಿದ್ದು, ನಿಮ್ಮನ್ನು ಅವರಿಗಿಂತ ಕೆಳಕ್ಕೆ ಇಳಿಸಲು ಪಣತೊಡುತ್ತಾರೆ. ಇದರೆಲ್ಲೇನು ಸುಖ? ಅದ್ಯಾವ ಪರಿಯ ಖುಷಿ? ಹೌದು, ನೀವು ಗಮನಿಸಿ, ರಾತ್ರಿಯೆಲ್ಲಾ ನಿಮ್ಮ ಜೊತೆಗೆ ಕುಡಿದಿರುತ್ತಾರೆ, ಹ್ಯಾಂಗ್ ಓವರ್‍ನಲ್ಲಿರುತ್ತಾರೆ. ಆದರೇ, ಹೊರಜಗತ್ತಿಗೆ ನಾನು ಹೋಗಿದ್ದೆ, ಆದರೇ ಅವರಷ್ಟು ಕುಡಿದಿಲ್ಲ. ಅವರ ಸಹವಾಸವೇ ಬೇಡ ಎನಿಸಿತ್ತು ಎನ್ನುತ್ತಾರೆ. ಆದರೇ, ಅದೇ ಬಿಟ್ಟಿ ಎಣ್ಣೆಗೆ ನಾಳೆ ಬೆಳ್ಳಿಗ್ಗೆ ಕಾಯುತ್ತಿರುತ್ತಾರೆ. ಇದು, ನನ್ನ ಕಾಲೇಜಿನ ದಿನಗಳಲ್ಲಿ ನೋಡುತ್ತಿದ್ದೆ. ಹಲವರು, ರಾತ್ರಿಯೆಲ್ಲಾ ನೀಲಿ ಸಿನೆಮಾ ನೋಡಿ, ನಾವು ಸಭ್ಯರೂ ಎಂಬಂತೆ ನಾಟಕದ ಬದುಕನ್ನು ಕಟ್ಟಿಕೊಂಡವರು. ಜೊಳ್ಳು ಸುರಿಸುತ್ತಾ, ಅಲೆದಾಡಿದವರು, ಆದರೇ ಹೊರಜಗತ್ತಿಗೆ ನಾನವನಲ್ಲವೆಂದು ಬದುಕ ಹೊರಟವರು. ಅವರ ಮನೆಗೆ ಹೋದರೇ ಸರಿಯಾಗಿ ಮಾತೇ ಆಡಿಸುವುದಿಲ್ಲ, ಊಟಕ್ಕೆ ಕರೆಯುವುದಿಲ್ಲ, ಕೊಡುವುದಿಲ್ಲವೆಂದೆಲ್ಲಾ ಹಂಗಿಸುತ್ತಾರೆ. ವಾತ್ಸವದಲ್ಲಿ ಅವರು ನಾಲ್ಕು ಜನರಿಗೆ ನೀರು ಕೊಟ್ಟಿರುವುದಿಲ್ಲ. ನಾನು ಸೋತರೂ ಪರವಾಗಿಲ್ಲ, ಅವನು ಗೆಲ್ಲಬಾರದೆಂಬ ಮನೋಭಾವದವರು. ವಿಶೇಷವೆಂದರೇ, ಇವರ್ಯಾರು ನಮ್ಮ ಶತ್ರುಗಳಲ್ಲ, ನಮ್ಮವರೆಂದು ನಂಬಿಸುತ್ತಾ ಬಂದವರು. ಇದನ್ನು ಎಲ್ಲಾ ಕಡೆಯಲ್ಲಿಯೂ ಎಲ್ಲರ ಬಗ್ಗೆಯೂ ಹೇಳುತ್ತಾ ಸಾಗಿದವರು.

ನಾನು ಇಲ್ಲಿ ಸ್ವಲ್ಪ ಹೆಚ್ಚಿನದನ್ನೇ ಹೇಳಬೇಕೆಂದು ಬಯಸುತ್ತೇನೆ. ಅದು ಹಲವರಿಗೆ ಹಿಡಿಸದೇ ಇರಬಹುದು, ಆದರೂ ಸ್ಥೂಲವಾಗಿ ಹೇಳಿರುತ್ತೇನೆ. ಇದರ ಹೆಚ್ಚಿನ ಮಾಹಿತಿ ತಮಗೆ ಬೇಕೆನಿಸಿದರೇ, ನಾನು ಅದನ್ನು ಮತ್ತೊಂದು ಲೇಖನದಲ್ಲಿ ವಿವರಿಸುತ್ತೇನೆ. ಇದು ಬಹಳ ಮುಖ್ಯವಾದ ವಿಚಾರವೆಂಬುದನ್ನು ಮಾತ್ರ ಖಡಖಂಡಿತವಾಗಿ ಹೇಳಬಲ್ಲೆ. ನಮ್ಮಲ್ಲಿ ಅನೇಕರಿಗೆ ತಾವು ಒಳ್ಳೆಯವರು ಎನಿಸಿಕೊಳ್ಳಬೇಕು ಅಥವಾ ಒಳ್ಳೆಯವರು ಎಂದು ಬಿಂಬಿಸಿಕೊಳ್ಳಬೇಕೆಂಬ ಚಪಲವಿರುತ್ತದೆ. ಇದನ್ನು ಚಪಲ ಎಂದೇ ನಾನು ಕರೆಯುವುದು. ಅದಕ್ಕೆ ಮಡಿವಂತಿಕೆಯ ಸೋಗು ಎಂದರೂ ತಪ್ಪಾಗದು. ಮನುಷ್ಯ ತಪ್ಪುಗಳನ್ನು ಮಾಡುತ್ತಿರಬೇಕು. ಎಡವುತ್ತಿರಬೇಕು. ಎಡವದೇ ಇರುವವನು ನಡೆಯಲಾರ. ನಿಮ್ಮ ಬದುಕನ್ನೇ ನೀವು ಅವಲೋಕಿಸುತ್ತಾ ಬನ್ನಿ. ಬಾಲ್ಯದಲ್ಲಿ ತುಂಟಾಟ, ಯೌವ್ವನದಲ್ಲಿನ ಪೋಲಿತನ, ಹರಯದಲ್ಲಿನ ಬೇಜವಬ್ದಾರಿಗಳು ಇವೆಲ್ಲವೂ ಇರಲೇಬೇಕು. ಬಾಲ್ಯದಲ್ಲಿನ ಮಗು ಪ್ರಬುದ್ಧತೆ ತೋರಿಸುವುದು ನನಗೆ ಅಸಹ್ಯ ಮತ್ತು ಅಸ್ವಾಭಾವಿಕವೆನಿಸುತ್ತದೆ.

ನನ್ನದೇ ಅನುಭವ ಹೇಳಬೇಕೆಂದರೇ, ನಾನು ತಪ್ಪು ಮಾಡುತ್ತಾ ಬೆಳೆಯುತ್ತಾ ಬಂದವನು. ಬದುಕು ಬದಲಾದಂತೆ ಬದಲಾಗಿಸಿಕೊಂಡವನು. ನನ್ನ ಆಲೋಚನೆಗಳು ನನ್ನ ಅನುಭವದಂತೆ ಬದಲಾದವುಗಳು, ಯಾವುದೋ ಒಂದು ಸಿದ್ದಾಂತಕ್ಕೋ ಮತ್ತೊಂದಕ್ಕೋ ಗಂಟಿಬಿದ್ದವನಲ್ಲ. ಅಷ್ಟೆಲ್ಲಾ ಏಕೆ, ಯಾವುದೋ ಒಂದೇ ಕೆಲಸಕ್ಕೇ ನೇತುಹಾಕೊಂಡವನಲ್ಲ. ಒಂದೇ ಕಂಪನಿಗೆ ಗೂಟ ಹೊಡೆದು ಕೂತವನಲ್ಲ. ನನಗೆ ಇಂದಿಗೂ ಅಷ್ಟೆ, ಲಾಕ್‍ಡೌನ್ ಪರಿಣಾಮ ಗರಿಷ್ಠ ಒಂದು ತಿಂಗಳು ಒಂದೇ ಊರಿನಲ್ಲಿ ಕುಳಿತಿರುವುದು. ಕಾಲೇಜು ದಿನಗಳಿಂದಲೂ ನಾನು ಗರಿಷ್ಠ ಕಾಲ ಒಂದೆಡೆ ಕುಳಿತವನಲ್ಲ. ಸುತ್ತಾಟವೇ ನನ್ನ ಬದುಕು, ಜನರನ್ನು ನೋಡಿ ಕಲಿಯುತ್ತಾ ಬಂದವನು ನಾನು. ಇರಲಿ, ವಿಷಯಕ್ಕೆ ಬರೋಣ. ನಮ್ಮಲ್ಲಿ ಆಗುವ ಬದಲಾವಣೆಗಳನ್ನು ಒಪ್ಪುವ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬೇಕು. ನಮ್ಮಲ್ಲಿರುವ ನ್ಯೂನ್ಯತೆಗಳನ್ನು ಒಪ್ಪಿಕೊಳ್ಳಬೇಕು. ಮನುಷ್ಯ ಎಂದಿಗೂ ಪರಿಪೂರ್ಣನಾಗಲಾರ ಮತ್ತು ಆಗಲೂಬಾರದು, ಏಕೆಂದರೇ ಅವನು ವಿಕಸನಗೊಳ್ಳುತ್ತಿರಬೇಕು. ಅವಿಷ್ಕಾರ ನಡೆಯುತ್ತಲೇ ಇರಬೇಕು. ಆದರೇ, ಹಲವರಿಗೆ ಇದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಅವರೆಲ್ಲರೂ ತಾನು ಒಳ್ಳೆಯವನು ಎಂಬ ಭ್ರಮೆಯನ್ನು ಸಾಕಲು ಹೋಗಿ ಮತ್ತೊಬ್ಬರನ್ನು ಕೆಟ್ಟವರನ್ನಾಗಿ ಬಿಂಬಿಸುತ್ತಾರೆ.

ನನ್ನ ಸ್ವಂತ ಅನುಭವದಲ್ಲಿ, ನನ್ನ ಬಗ್ಗೆ ನನ್ನ ಒಂದೆರಡು ಸ್ನೇಹಿತರು, ಅಪಪ್ರಚಾರವೆಂದು ಹೇಳುವುದಕ್ಕೆ ಆಗುವುದಿಲ್ಲ. ಆದರೂ, ನಾನು ಮಾಡುವುದನ್ನೆಲ್ಲಾ ಅನೇಕರಿಗೆ ಹೇಳುತ್ತಾ ಬರುತ್ತಿದ್ದರು, ಅದು ಮಸಾಲೆ ಸಮೇತ. ನಾನು ಇದ್ಯಾಕೆ? ಮೊದಲಿಗೆ, ಉತ್ತಮ ಸಂಬಳವಿದ್ದ ಕೆಲಸ ಬಿಟ್ಟು ಸೀಕೋ ಸಂಸ್ಥೆ ಕಟ್ಟುವಾಗ. ಹರೀಶ ಕೆಲಸ ಬಿಟ್ಟಿದ್ದಾನೆ. ಅವನಿಗೆ ಜೀವನದ ಗಂಬೀರತೆ ಗೊತ್ತಿಲ್ಲ, ಇನ್ನೂ ಕಾಲೇಜು ಹುಡುಗನ ತರಹ ಆಡ್ತಾನೆ. ಸ್ವಲ್ಪ ಬ್ಯಾಂಕ್ ಬ್ಯಾಲೆನ್ಸ್ ಇರಬೇಕು ಅಲ್ಲಿ ತನಕ ಅಷ್ಟೇ. ಈ ಸೋಷಿಯಲ್ ವರ್ಕ್ ಎಲ್ಲಾ ನಡೆಯುತ್ತಾ ಇವನಿಗೆ ಹುಚ್ಚು, ಇತ್ಯಾದಿ. ಊರೂರು ಸುತ್ತುತ್ತಾನೆ, ಯಾಕೆ ಬೇಕು? ದುಡಿಮೆಯಿಲ್ಲ ಹುಷಾರು, ಸಾಲ ಏನಾದರೂ ಕೇಳಿದ್ರೆ ಕೊಟ್ಟು ಸಿಕ್ಕಿ ಹಾಕೋಬೇಡ. ಹೀಗೆ.. ನನಗನಿಸಿದ್ದು, ನೀನು ನನ್ನ ಬಳಿಯೇ ಹೇಳಬಹುದಿತ್ತಲ್ಲವೇ? ಎಲ್ಲಿಯೋ ಕೆಲಸ ಮಾಡುವುದಕ್ಕೂ ಇಷ್ಟಪಡುವ ಬದುಕನ್ನು ಕಟ್ಟಿಕೊಳ್ಳುವುದಕ್ಕೂ ವ್ಯತ್ಯಾಸವಿದೆಯೆಂಬುದು ಅರಿವಾಗುವುದಿಲ್ಲ. ಬೆಟ್ಟ ಹತ್ತಿ ವಿಹಂಗಮ ನೋಟವನ್ನು ಸವಿಯಬೇಕೆಂದರೇ, ಬೆಟ್ಟ ಹತ್ತಲೇಬೇಕು, ಕಾಲು ಸವೆಸಲೇಬೇಕು. ಕೂತಲ್ಲಿಗೆ ಬರುವುದಿಲ್ಲ. ಕಾರಿನಲ್ಲಿ ಹೋಗೋದು ಎಂಬ ತಲೆಹರಟೆ ಉತ್ತರಬೇಡ. ಒಮ್ಮೆ ಬೆಟ್ಟವನ್ನು ಹತ್ತಿ ದಣಿದು, ಮೇಲೇರಿ ಕೂತು ನೋಡಿ ಅಲ್ಲಿನ ಖುಷಿಯೇ ಬೇರೆ. ನೀವು ಇಷ್ಟಪಟ್ಟ ಬದುಕಲ್ಲಿ ಎರಡೇ ಎರಡು ಹೆಜ್ಜೆ ಹಾಕಿ ಬದುಕಿನ ಸತ್ವವನ್ನು ನೋಡುವಿರಿ. ಹೋಗಲಿ ಇಂಥಹವರು ಇರುವುದು ಒಳ್ಳೆಯದೇ. ಮುಂದಕ್ಕೆ ಹೋಗೋಣ.

ಮೂರನೆಯ ವರ್ಗವಿದೆ, ಇದೊಂದು ಬಗೆಯೆ ಅತೃಪ್ತ ಮತ್ತು ವಿಕೃತ ಮನಸ್ಸಿನವರು. ಇವರು ಏಕೆ ಹೀಗೆ ಮಾಡುತ್ತಾರೆಂಬುದು ವಾತ್ಸವದಲ್ಲಿ ಅವರಿಗೆ ಅರಿವಿರುವುದಿಲ್ಲ. ಇವರು, ಅವರ ಸ್ವಂತದವರನ್ನು ಹಂಗಿಸುತ್ತ ಬದುಕುತ್ತಿರುತ್ತಾರೆ. ಅದೊಂದು ಬಗೆಯ ಸಂತೋಷವಿರಬಹುದು. ಅಲ್ಲಿ, ಅವರದ್ದೇ ಸಂಬಂಧಗಳನ್ನು ಹಳಸುತ್ತಿರುತ್ತಾರೆ. ಇದಕ್ಕೆ, ಉದಾಹರಣೆಗಳು, ಅನೇಕ ಮಧ್ಯಮ ವರ್ಗದವರು. ಅನೇಕ, ಪೋಷಕರನ್ನು ನೋಡಿ, ಅವರ ಮಕ್ಕಳನ್ನು ಕಂಡವರ ಎದುರು ದೂರುತ್ತಿರುತ್ತಾರೆ. ಅಯ್ಯೋ, ನನ್ನ ಮಗ ಹೀಗೆ, ನನ್ನ ಮಗಳು ಹೀಗೆ, ಅದೇ ಅವರ ಮಕ್ಕಳು ನೋಡಿ ಹೇಗಿದ್ದಾರೆ. ಎಷ್ಟೊಂದು ಬುದ್ದಿವಂತರು. ಇದೇ, ರೀತಿ ಅನೇಕ ದಂಪತಿಗಳನ್ನು ಗಮನಿಸಿ, ಹೆಂಡತಿಯನ್ನು ಗಂಡ, ಗಂಡನನ್ನು ಹೆಂಡತಿಯನ್ನು ದೂರುತ್ತಾ, ಬರುತ್ತಾರೆ. ಅವರಿಗೆ, ಅವರ ಮನೆಯವರ ಮಾನವನ್ನೇ ಹರಾಜು ಹಾಕುತ್ತಿದ್ದೇನೆಂಬ ಕನಿಷ್ಠ ಕಾಳಜಿಯೂ ಇರುವುದಿಲ್ಲ. ಅಣ್ಣ, ತಮ್ಮಂದಿರು, ಅಕ್ಕತಂಗಿಯರ ನಡುವೆಯೂ ಇದು ನಡೆಯುತ್ತಿರುತ್ತದೆ. ಆಪ್ತ ಸ್ನೇಹಿತರನ್ನು ಬಿಡುವುದಿಲ್ಲ. ಸಹಭಾಳ್ವೆಯನ್ನು ಅವರು ಬಯಸುವುದಿಲ್ಲ. ಅದರ ಅರ್ಥವೂ ಅವರಿಗಿರುವುದಿಲ್ಲ. ಇದಕ್ಕೇ ಪರಿಹಾರ ಕೇಳಿ. ಅವರ ಬಳಿಯಲ್ಲಿರುವುದಿಲ್ಲ. ಮಗ ಕೆಟ್ಟವನು, ಮನೆಯಿಂದ ಹೊರ ಹಾಕಿ ಎಂದು ಹೇಳಿ. ಅದು ಹೇಗೆ ಸಾಧ್ಯ ಎನ್ನುತ್ತಾರೆ. ಗಂಡ ಕೆಟ್ಟವನು, ಬಿಟ್ಟು ಹೋಗು ಎನ್ನಿ, ನಾನ್ಯಾಕೆ ಹೋಗಲಿ, ಎನ್ನುತ್ತಾರೆ. ಅಲ್ಲಮ್ಮ, ನೀನೇ ತಾನೇ ಹೇಳೊದು ನನ್ನ ಗಂಡ ಸರಿಯಿಲ್ಲ ಅಂತಾ, ಅವನ ಜೊತೆ ಯಾಕೆ ನರಕ, ಹೋಗು ಎನ್ನಿ. ಮಾತೇ ಇರುವುದಿಲ್ಲ.

ಇಲ್ಲಿ ಅಕ್ಷರಸ್ಥರಿಗೂ ಅನಕ್ಷರಸ್ಥರಿಗೂ ಒಂದು ವ್ಯತ್ಯಾಸವಿದೆ. ಅನಕ್ಷರಸ್ಥರಿಗೆ ಈ ತಾರತಮ್ಯವೆಂಬ ಅಥವಾ ಅಹಂಮಿನ ಸಮಸ್ಯೆಯಿರುವುದಿಲ್ಲ. ನಮ್ಮ ಮನೆಕೆಲಸದಾಕೆ, ಐದಾರು ಮನೆಗಳಲ್ಲಿ ಕೆಲಸ ಮಾಡುತ್ತಾರೆ. ಮೂರು ಜನರು ಗಂಡುಮಕ್ಕಳು. ಅವರ ಗಂಡ ವಿಪರೀತ ಕುಡಿತಾನೆ. ಕೆಲವೊಂದು ದಿನ ಬೀದಿಯಲ್ಲಿ ನಿಂತು ಅವಳಿಗೆ ಬೈಯ್ಯುವುದು, ಹೊಡೆಯುವುದು ಇದೆ. ನಾನು ಹೇ, ಯಾಕಪ್ಪ? ಅಂದ್ರೇ, ಅವನು ಏನಿಲ್ಲ ಸಾ, ಅಂತಾ ಹೊಗ್ತಾನೆ. ಅ ಹೆಂಗಸು ಕೂಡ, ಏನಿಲ್ಲಾ ಅಣ್ಣ. ಅಂತಾ ಹೋಗ್ತಾರೆ. ಅವರ ಮನೆಯ ಗುಟ್ಟನ್ನು ಅಲ್ಲಿಗೆ ಬಿಟ್ಟಿರುತ್ತಾರೆ. ಅದೇ, ಅಕ್ಷರಸ್ಥರ ಮೆನಯ ಬಿನ್ನಾಭಿಪ್ರಾಯಗಳು ಅಲ್ಲಿಗೆ ನಿಲ್ಲುವುದಿಲ್ಲ. ನಿಲ್ಲಲು ಅಹಂ ಬಿಡುವುದಿಲ್ಲ. ಅದೊಂದು ರೀತಿಯ ನಶೆ. ಅನೇಕರಿಗೆ ತಮ್ಮ ಅಹಂ ಅನ್ನು ತೋರಿಸುವುದು ಒಂದು ರೀತಿಯ ನಶೆ. ಆ ನಶೆಯಲ್ಲಿಯೇ ಅನೇಕ ಸಂಬಂಧಗಳನ್ನು ಕಳೆದುಕೊಂಡಿರುತ್ತಾರೆ ಅಥವಾ ಮುರಿಯುತ್ತಾರೆ. ನಾನು ತೋರಿಸ್ತಿನಿ ನೋಡು, ಏನು ಅಂತಾ ಅಂದುಕೊಂಡವರೇ!

ಇದನ್ನೇ, ನಮ್ಮ ಸಮಾಜದ ವಿಚಾರಕ್ಕೇ ದೇಶದ ವಿಚಾರಕ್ಕೆ ಹೋಲಿಸಿ ಒಮ್ಮೆ ಕಲ್ಪಿಸಿಕೊಳ್ಳಿ. ಇಲ್ಲಿಯೂ ಮೂರು ವರ್ಗವಿದೆ. ಮೊದಲನೆಯ ಮತ್ತು ಎರಡನೆಯ ವರ್ಗ ಅನ್ಯರನ್ನು ದೂಷಿಸುವ ವರ್ಗ, ರಾಜಕಾರಣಿಗಳು, ಲಂಚ ಕೊಟ್ಟು ಅಧಿಕಾರ ಪಡೆದವರು, ಜಾತಿ, ಧರ್ಮದ ಹೆಸರಲ್ಲಿ ಒಡಕು ಮೂಡಿಸಿ ಲಾಭ ಪಡೆದವರು. ಎಲ್ಲಾ ಜಾತೀಯ, ಎಲ್ಲಾ ಧರ್ಮದ ಮಠಾಧೀಶರು, ಮೌಲ್ವಿಗಳು, ಪಾದ್ರಿಗಳು ಮತ್ತು ಅನುಯಾಯಿಗಳು. ಬೇರೆ ಪಕ್ಷದವರನ್ನು ಕೆಟ್ಟದ್ದಾಗಿ ಬಿಂಬಿಸಿಯೇ ಗೆಲುವು ಸಾಧಿಸುತ್ತಾ ಬಂದವರು, ಗದ್ದುಗೆ ಏರಿದವರು. ಅನ್ಯ ಜಾತಿಯನ್ನು ನಿಂದಿಸಿ, ಅನ್ಯ ಧರ್ಮವನ್ನು ಹಿಯಾಳಿಸುತ್ತಲೇ ಆನಂದಿಸಿದವರು.

ಇಲ್ಲಿ ಹೆಚ್ಚಿನ ವಿವರಣೆಯ ಅವಶ್ಯಕತೆಯಿದೆ. ನೀವು ಹಾಗೆಯೇ ಗಮನಿಸಿ ನೋಡಿ, ನಮ್ಮಲ್ಲಿ ಒಂದು ಅಲಿಖಿತ ನಿಯಮವಿದೆ, ಅದು “ಒಬ್ಬನನ್ನು ಮೇಲೇರಿಸಲು ಮತ್ತೊಬ್ಬನನ್ನು ಕೆಳಕ್ಕಿಳಿಸಬೇಕು, ಅಥವಾ ಒಬ್ಬನನ್ನು ಕೆಳಗಿಳಿಸಲು ಮತ್ತೊಬ್ಬನನ್ನು ಮೇಲೇರಿಸಬೇಕು”.  ಉದಹಾರಣೆಗಳೊಂದಿಗೆ ನೋಡೋಣ. ಡಾ. ರಾಜ್ ಕುಮಾರ್ ಅವರನ್ನು ಕೆಳಗಿಳಿಸಲು ನಡೆದ ಪ್ರಯತ್ನವೇ ಡಾ. ವಿಷ್ಣುವರ್ಧನ್‍ರವರನ್ನು ತಂದದ್ದು ಅಥವಾ ತರಲು ಪ್ರಯತ್ನಿಸಿದ್ದು. ಅವರಿಬ್ಬರ ನಡುವೆ ಇಲ್ಲದ ಹೋಲಿಕೆ, ಬೇಧವನ್ನು ಅವರ ಅಭಿಮಾನಿಗಳು ಹುಟ್ಟುಹಾಕಲು ಪ್ರಯತ್ನಿಸಿದರು, ಅದನ್ನು ಹಲವರು ನಂಬುತ್ತಾ ಹೋದರು. ಅದೇ, ರೀತಿ ನೋಡಿ, ಗಾಂಧೀಜಿಯವರ ವಿಚಾರ ಬಂದಾಗ ಅವರನ್ನು ದೂಷಿಸಲು ಪರ್ಯಾಯವಾಗಿ ಅನೇಕರ ಹೆಸರುಗಳನ್ನು ತಂದರು. ನೇತಾಜಿ ಇರಬಹುದು, ಅಂಬೇಡ್ಕರ್ ಇರಬಹುದು. ಇವರ್ಯಾರು ಗಾಂಧೀಜಿಯನ್ನು ದ್ವೇಷಿಸಿರಲಿಲ್ಲ, ಅವರ ಕೆಲವು ವಿಚಾರಗಳಿಗೆ ಅಸಮಧಾನವಿತ್ತು, ಅದನ್ನೇ ಇಂದಿಗೂ ಎಳೆದುಕೊಂಡು ಹೋಗುತ್ತಿಲ್ಲವೇ?

ರಾಜಕೀಯವನ್ನೇ ನೋಡುತ್ತಾ ಬನ್ನಿ, ಅವರ ಒಳ್ಳೆಯತನವನ್ನೋ ಸಾಧನೆಯನ್ನೋ ಹೇಳಿ ಗದ್ದುಗೆ ಏರುವುದಕ್ಕಿಂತ ವಿರೋಧ ಪಕ್ಷದವರ ದುರ್ನಡತೆಯನ್ನು ಪ್ರಚಾರ ಮಾಡಿ ಗದ್ದುಗೆ ಏರಿದವರೇ ಹೆಚ್ಚು. ಮೋದಿಯವರು ಗದ್ದುಗೆ ಏರಿದ್ದು ಹೇಗೆ, ಹಿಂದಿನ ಡಾ. ಸಿಂಗ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದು ತಾನೆ? ಮನಮೋಹನ್ ಸಿಂಗ್ ಅಧಿಕಾರಕ್ಕೆ ಬಂದದ್ದು ವಾಜಪೇಯಿ ಸರ್ಕಾರವನ್ನು ದೂಷಿಸುತ್ತಾ ಅಲ್ವೇ? ಇದು ಎಲ್ಲಾ ರಾಜ್ಯ ಮತ್ತು ರಾಷ್ಟ್ರರಾಜಕಾರಣದಲ್ಲಿ ಸಾಮಾನ್ಯವಾಗಿದೆ.

ಕೊನೆಯ ವರ್ಗವಿದೆಯಲ್ಲಾ, ಇದು ಜಾತಿ/ಧರ್ಮವನ್ನು ಅತಿಯಾಗಿ ವಿಜೃಂಭಿಸಿ ದೇಶವನ್ನೇ ಛಿದ್ರಗೊಳಿಸಲು ಪಣ ತೊಟ್ಟವರು. ನಮ್ಮ ದೇಶದ ಆರೋಗ್ಯ ಹಾಳಾಗುತ್ತದೆಯೆಂಬ ಸ್ವಲ್ಪ ಜ್ಞಾನವೂ ಇಲ್ಲದೇ, ಅದನ್ನೇ ಮಾಡುತ್ತಿರುವವರು. ಅನೇಕರು, ವಾದ ಮಾಡುವುದನ್ನು ವಿವರಿಸುತ್ತೇನೆ. ನಮ್ಮದು ಹಿಂದೂ ದೇಶ, ನಮ್ಮಲ್ಲಿ ಹಿಂದುಗಳು ಮಾತ್ರವಿರಬೇಕು. ಇನ್ನುಳಿದವರನ್ನು ಎಲ್ಲಿಗೆ ಕಳುಹಿಸಬೇಕು? ಕೇಳಿ ನೋಡಿ. ಉತ್ತರವಿಲ್ಲ. ಅವರಿಗೆ ಮೀಸಲಾತಿ ಕೊಟ್ಟು ಅವರನ್ನು ಹಿಡಿಯುವುದಕ್ಕೆ ಆಗುತ್ತಿಲ್ಲವೆನ್ನುತ್ತಾರೆ. ಈಗ ಏನು ಮಾಡೋದು? ಮೀಸಲಾತಿ ತೆಗೆದರೆ ಸರಿ ಹೋಗುತ್ತಾ? ಎಂದು ಕೇಳಿ. ಉತ್ತರವಿಲ್ಲ. ಅದರಂತೆಯೇ, ಮೇಲ್ಜಾತಿಯವರನ್ನು ದೂಷಿಸುವ ಮತ್ತೊಂದು ವರ್ಗವನ್ನು ಕೇಳಿ, ಇವರು ಜನರನ್ನು ಮೌಢ್ಯಕ್ಕೆ ತಳ್ಳಿದ್ದಾರೆ, ಎನ್ನುತ್ತಾರೆ. ಸರಿ, ಏನು ಮಾಡೋದು ಎಂದು ಕೇಳಿ. ಬಹಿಷ್ಕರಿಸಬೇಕು ಎನ್ನುತ್ತಾರೆ. ಆದರೇ, ಅವರುಗಳೇ ದೇವಸ್ಥಾನದಲ್ಲಿ ಸಾಲಾಗಿ ನಿಂತು ಕಾದು ದೇವರಿಗೆ ಅರ್ಚನೆ ಮಾಡಿಸುತ್ತಾರೆ. ಇವೆಲ್ಲವೂ ನಮ್ಮ ಮನೆಯೊಳಗಿನ ಆಂತರಿಕ ಬಿನ್ನಾಭಿಪ್ರಾಯಗಳಷ್ಟೆ. ಮನೆಯಲ್ಲಿ ಚಿಕ್ಕವರಿದ್ದಾಗ, ರೊಟ್ಟಿ ಸ್ವಲ್ಪ ದೊಡ್ಡದ್ದು ಚಿಕ್ಕದ್ದು ಆದರೇ, ಅಣ್ಣನಿಗೆ ದೊಡ್ಡ ರೊಟ್ಟಿ ನನಗೆ ಚಿಕ್ಕದ್ದು ಅಂತಾ ದೂರುತಿರಲಿಲ್ಲವೇ? ಅಥವಾ ಒಮ್ಮೊಮ್ಮೆ ಅಣ್ಣನೇ ನಮಗೆ ತೋರಿಸಿ ನೋಡು ನನಗೆ ದೊಡ್ಡ ರೊಟ್ಟಿ ನಿನಗೆ ಚಿಕ್ಕದ್ದು ಅಂತಾ ಹಂಗಿಸುತ್ತಿರಲಿಲ್ಲವೇ? ಅವೆಲ್ಲವೂ ಒಂದು ತುಂಟಾಟಿಕೆಗಾಗಿ ಅಷ್ಟೆ.

ಇಲ್ಲಿ ಗಂಬೀರ ವಿಚಾರಗಳನ್ನು ನಿಮ್ಮ ಮುಂದಿಡುತ್ತೇನೆ. ಸದ್ಯದಲ್ಲಿ ಎಲ್ಲಾ ದೇಶದ, ಎಲ್ಲಾ ಧರ್ಮದ, ಎಲ್ಲಾ ಜಾತಿಯ ಜನರು ಎಲ್ಲಾ ದೇಶಗಳಲ್ಲಿಯೂ ಹಂಚಿ ಹರಡಿದ್ದಾರೆ. ಕೇರಳ ಒಂದು ರಾಜ್ಯದಿಂದ ಕನಿಷ್ಠ 25 ಲಕ್ಷದಷ್ಟು ಜನರು ಹೊರದೇಶದಲ್ಲಿದ್ದಾರೆ. ಎಲ್ಲಾ ದೇಶಗಳು, ಅವರ ಧರ್ಮದವರನ್ನು ಮಾತ್ರ ಇರಿಸಿಕೊಂಡು ಹೊರಹಾಕಿದರೇ ಗತಿ ಏನು? ಅಥವಾ ಕರ್ನಾಟಕವನ್ನೇ ತೆಗೆದುಕೊಳ್ಳಿ, ಕೇವಲ ಕನ್ನಡಿಗರು ಮಾತ್ರವೇ ಇಲ್ಲಿ ಇರಬೇಕೆಂದು ನಾವೆಲ್ಲರೂ ಹೊರಟರೇ, ಬೇರೆ ಭಾಷಿಕರು, ರಾಜ್ಯ ಬಿಟ್ಟು ಹೋಗುತ್ತಾರಾ? ಎಲ್ಲಿಗೆ ಹೋಗುತ್ತಾರೆ? ಕುಶಾಲನಗರದ ಪಕ್ಕದಲ್ಲಿ ಗುಮ್ಮನಕೊಲ್ಲಿ ಎಂಬ ಊರಿದೆ ಅದು ನನ್ನ ಅಜ್ಜಿಯ ಮನೆ. ಇಡೀ, ಊರು ನಮ್ಮ ಅಜ್ಜಿಯ ಮಾವನಿಗೆ ಸೇರಿದ್ದು. ಈಗ ಅಲ್ಲಿ ಕನಿಷ್ಠ ಎಂದರೂ ನಾಲ್ಕು ಸಾವಿರ ಜನಸಂಖ್ಯೆ ಇದೆ. ನೀವು ಹೊರಗಿನಿಂದ ಬಂದವರು ಹೋಗಿ ಎಂದು ದಬ್ಬುವುದೇ? ಹಳ್ಳಿಗಳಿಂದ ಬಂದು ಬೆಂಗಳೂರಲ್ಲಿ ಬದುಕನ್ನು ಕಟ್ಟಿಕೊಂಡ ನಮ್ಮನ್ನು ಬೆಂಗಳೂರಿಗರು ಹೊರಕ್ಕೆ ಹಾಕಿದರೇ?

ಇನ್ನೊಂದು ವಿಚಾರವೆಂದರೇ, ವೈವಿದ್ಯತೆ. ನೀವುಗಳು ಕಾಡನ್ನು ನೋಡಿರಬಹುದಲ್ಲವೇ? ಒಳಗೆ ಹೋಗದಿದ್ದರೂ ರಸ್ತೆ ಬದಿಯಲ್ಲಿ? ನೆಡುತೋಪಿಗೂ ಕಾಡಿಗೂ ವ್ಯತ್ಯಾಸವಿದೆ. ಒಂದೇ ಜಾತಿಯ ಮರಗಳಿದ್ದರೇ, ಅತವಾ ನಾವೇ ನೆಟ್ಟು ಬೆಳೆಸಿದರೇ ಅದನ್ನು ನೆಡುತೋಪು ಎನ್ನುತ್ತೇವೆ. ಕಾಡು ಎನ್ನುವುದಿಲ್ಲ. ಅಲ್ಲಿ, ವನ್ಯ ಜೀವಿಗಳು ಬದುಕಲಾರೆವು, ವೈವಿದ್ಯತೆ ಇರಲಾರದು. ಅದೇ, ನೈಸರ್ಗಿಕ ಕಾಡಿನಲ್ಲಿ ವಿವಿಧ ಸಸ್ಯಗಳು, ಮರಗಳು ಇರುವಲ್ಲಿ, ಎಲ್ಲಾ ಜೀವ ಸಂಕುಲಗಳು ಬದುಕನ್ನು ಕಟ್ಟಿಕೊಳ್ಳುತ್ತವೆ. ಒಂದೇ, ಧರ್ಮ, ಒಂದೇ ಜಾತಿಯವರಿಂದ ವೈವಿದ್ಯತೆ ಇರುವುದಿಲ್ಲ, ಬದುಕು ಬರುಡಾಗುತ್ತದೆ. ಎಲ್ಲರೂ ಇದ್ದರೇ ಜೀವನ. ಬಿನ್ನಾಭಿಪ್ರಾಯಗಳು ನಮ್ಮೊಳಗೆ ಇರಲಿ, ದೇಶ ಒಡೆಯುವ, ಸಮಾಜ ಒಡೆಯುವ ಕೆಲಸಗಳು ನಿಲ್ಲಲಿ.

ಕೊನೆಯದಾಗಿ: ಗಾಂಧೀಜಿಯವರ ಒಂದು ಕನಸ್ಸಿತ್ತು, ಅದನ್ನು ಬಹಳ ಒತ್ತಾಯಪೂರ್ವಕವಾಗಿ ಅವರು ಪ್ರತಿಪಾದಿಸುತ್ತಿದ್ದರು. ಅವರ, ಪ್ರಕಾರ ಯಾವ ದೇಶವೂ ಸೈನ್ಯೆಯನ್ನು ಹೊಂದಬಾರದು. ಎಂದರೇ, ಯಾವುದೇ ದೇಶಕ್ಕೆ ಆರ್ಮಿ/ಮಿಲಿಟರಿ ಇರಬಾರದು. ಸೈನ್ಯೆ ಇದ್ದರೇ ತಾನೇ ಯುದ್ದವಾಗುವುದು? ಇಡೀ ವಿಶ್ವವೇ ಒಂದು ಸಮುದಾಯದಂತಿರಬೇಕು. ಎಲ್ಲಾ ದೇಶಗಳು ಸೇರಿ ಒಂದು ಸಂಸ್ಥೆಯನ್ನು ಸ್ಥಾಪಿಸಿ, ಅದು ಶಾಂತಿ ಸೌಹಾರ್ಧತೆಯನ್ನು ಕಾಪಾಡಬೇಕು. ನಿಯಮಗಳನ್ನು ರೂಪಿಸಿ, ಜಾರಿಗೆ ತರಬೇಕು ಎಂದು ಬಯಸಿದ್ದರು. ಅದರಂತೆಯೇ, ನೀವು ಗಮನಿಸಿ ಪ್ರತಿಯೊಂದು ದೇಶವೂ ಅದೆಷ್ಟು ಹಣವನ್ನು ಸೈನ್ಯಕ್ಕಾಗಿ, ಯುದ್ದಕ್ಕಾಗಿ ಕಳೆಯುತ್ತಿದ್ದಾವೆ. ನಮ್ಮ ದೇಶವನ್ನೇ ನೋಡಿ, ಪಾಕಿಸ್ಥಾನವೆಂಬ ಸಣ್ಣ ದೇಶದೊಂದಿಗೆ ಸೆಣೆಸಲು ಅದೆಷ್ಟೂ ಜೀವಗಳನ್ನು ಬಲಿಕೊಡುತ್ತಿದ್ದೇವೆ. ಇಡೀ ಪ್ರಪಂಚವೇ ಒಂದು ಕುಟುಂಬವೆಂಬಂತೆ ಬದುಕುವ ಕಾಲ ಬರುವುದೇ!

25 ಏಪ್ರಿಲ್ 2020

ಕೋಮು ಬೇಧ, ಜಾತಿ ಬೇಧ ಯಾರಿಗೆ ತಾತ್ಸಾರ? ಯಾರಿಗೆ ಆಹಾರ?



Photo Courtesy: PsychMatters

ಕೋಮು ದ್ವೇಷವೆಂಬ ಪದವನ್ನೇ ಬಳಸಬಹುದಿತ್ತಾದರೂ, ಆ ಪದದ ಬದಲಾಗಿ ಬೇಧವೆಂಬ ಪದವನ್ನು ಬಳಸಿದ್ದೇನೆ. ಅದಕ್ಕೆ ವಿವರಣೆಯನ್ನು ನೀಡುತ್ತೇನೆ. ಇತ್ತೀಚಿನ ದಿನಗಳಲ್ಲಿ ಕೋಮು ದ್ವೇಷದ ಸುದ್ದಿ ಅತಿಯಾಗುತ್ತಿವೆ. ಅದರಲ್ಲಿಯೂ, ಫೇಸ್‍ಬುಕ್, ವಾಟ್ಸಾಪ್ಪನಿಂದಾಗಿ ಎಂದರೇ ತಪ್ಪಿಲ್ಲ. ಇದನ್ನು ಸ್ವಲ್ಪ ಆಳಕ್ಕಿಳಿದು ಯೋಚಿಸೋಣ. ಈ ದ್ವೇಷಕ್ಕೆ, ಬೇಧಕ್ಕೆ ಕಾರಣಗಳೇನು? ಅದು ಯಾರಲ್ಲಿ ಹೆಚ್ಚಿದೆ? ಅದರಿಂದಾಗುತ್ತಿರುವ ಪರಿಣಾಮಗಳೇನು?

ಒಂದು ಕೋಮು, ಅಥವಾ ಜಾತಿ ಬೇಧ ಇಂದು ನಿನ್ನೆಯದಲ್ಲ. ಆದರೇ, ಅದು ನಮಗೆ ಹೆಚ್ಚಾಗಿ ಕಾಣುತ್ತಿರುವುದು ಇತ್ತೀಚೆಗೆ ಅನಿಸುತ್ತಿದೆ. ಆದರೇ, ವಾಸ್ತವಿಕತೆ ಬೇರೆ ಎಂಬುದು ನನ್ನ ನಿರ್ಣಯ. ಅದನ್ನು ನನ್ನ ಅನುಭವದ ಬುತ್ತಿಯಿಂದ ತೆಗೆದು ನಿಮಗೆ ಹೇಳುತ್ತೇನೆ. ಮೊದಲನೆಯದಾಗಿ, ಇದು ಯಾರಲ್ಲಿ ಹೆಚ್ಚು ಮತ್ತು ಏಕೆ? ನಾನು ಇಲ್ಲಿ ರಾಜಕೀಯ ಪಕ್ಷಗಳನ್ನಾಗಲೀ, ರಾಜಕಾರಣಿಗಳನ್ನಾಗಲೀ ತರುವುದಿಲ್ಲ. ಅದರ ಅನಿವಾರ್ಯತೆ ಕೂಡ ಇಲ್ಲ. ಪ್ರತಿಯೊಂದು ಪಕ್ಷವೂ ಧರ್ಮದ, ಜಾತಿಯ ಲೆಕ್ಕಚಾರದಲ್ಲಿ ಟಿಕೇಟ್ ನೀಡಿ, ಗೆದು ಅಧಿಕಾರಕ್ಕೆ ಬರುವುದು ಹಿಂದಿನಿಂದಲೂ ನಡೆದಿರುವುದು, ನಡೆಯುತ್ತಿರುವುದು ಮತ್ತು ನಡೆಯುವುದು ಕೂಡ. ಈ ಓಲೈಕೆ ರಾಜಕಾರಣಕ್ಕೆ ಯಾವ ಪಕ್ಷವೂ ವಿನಾಯಿತಿ ನೀಡಿಲ್ಲ.

ಆದರೇ, ಸಾಮಾನ್ಯ ಜನರಲ್ಲಿ ಅನ್ಯ ಜಾತಿಯವರನ್ನು ಕಂಡರೇ ಅಥವಾ ಧರ್ಮದವರನ್ನು ಕಂಡರೇ ಸಹಿಸಲಾಗದೇ ಇರುವುದು ಏಕೆ? ಮತ್ತು ಯಾರಿಗೆ? ನಾನು ಗಮನಿಸಿದಂತೆ, ಇದು ಹೆಚ್ಚಾಗಿ ಕಾಣುತ್ತಿರುವುದು ವಿದ್ಯಾವಂತರಲ್ಲಿ ಮತ್ತು ನಗರವಾಸಿಗಳಲ್ಲಿ ಎಂದರೇ ತಪ್ಪಾಗುವುದಿಲ್ಲ. ಇದು ನನ್ನ ಅನುಭವದ ಮಾತು. ಹಳ್ಳಿಯವರಲ್ಲಿ ಬಹಳ ಕಡಿಮೆ. ಉದಾಹರಣೆಗೆ, ನನ್ನೂರು ಬಾನುಗೊಂದಿ, ಸರಗೂರು, ಕೊಣನೂರು, ಸಿದ್ದಾಪುರ ಇಲ್ಲಿ ನಾನು ಅತಿಯಾಗಿ ಜಾತೀಯತೆಯನ್ನು ಕಂಡಿಲ್ಲ. ಏಕೆ? ಎಂಬುದನ್ನು ನೋಡುತ್ತಾ ಹೋದರೆ, ಅಲ್ಲಿನ ವಸ್ತಸ್ಥಿತಿ ಬೇರೆಯದ್ದಾಗಿರುತ್ತದೆ. ನಮ್ಮಲ್ಲಿ ಎಲ್ಲಾ ಜಾತಿಯವರು ಇದ್ದಾರೆ, ಅವರನ್ನು ಅವರದ್ದೇ ಜಾತಿಯ ಹೆಸರಲ್ಲಿ ಕರೆಯುತ್ತೇವೆ, ಆಚಾರ್ರು, ಐನೋರು, ಸಾಬ್ರು, ಗೌಡ್ರು, ಶಟ್ಟ್ರೂ, ಮಡಿವಾಳ್ರೂ, ದಲಿತ ಅನ್ನೋ ಪದ ಇದ್ರೂ (ಅಸಂವಿಧಾನಿಕ ಪದಬಳಕೆ ಇವತ್ತಿಗೂ ಇದೆ), ಕೊಡಗಿಗೆ ಹೋದರೆ ಮಾಪಿಲ್ಲೆ, ಅವರವರ ಇದು ಕರೆಯುವವರಿಗೂ ಸಮಸ್ಯೆಯಿಲ್ಲ, ಕರೆಸಿಕೊಳ್ಳುವವನಿಗೂ ಇಲ್ಲ. ನೇರವಾಗಿಯೇ ಹೇಳುತ್ತಾರೆ ನೀವು ಗೌಡ್ರುಗಳು ಬಿಡ್ರಪ್ಪ, ನೀವು ಬ್ರಾಮೂನ್ರೂ ಬಿಡ್ರಪ್ಪ ಅಂತಾ.

ಆದರೂ, ಯಾವ ತಾರತಮ್ಯ, ಜಗಳ ಗೊಂದಲಗಳು ಇಲ್ಲವೇ ಇಲ್ಲ. ನಮ್ಮಲ್ಲಿ ಬಸೀರು ಅಂತಾ ಪ್ರತಿ ವರ್ಷ ಬರ್ತಾನೆ, ಹೊಂಗೆ ಬೀಜ, ಹುಣಸೆ ಬೀಗ, ಭತ್ತ, ರಾಗಿ ವ್ಯಾಪಾರಕ್ಕೆ ಅವನ ಕುರಿತು ಸಮಸ್ಯೇನೇ ಇಲ್ಲಾ. ಇದು ನಾನು ಹುಟ್ಟಿದಾಗಿನಿಂದ ನೋಡಿದ್ದೇನೆ. ಹಾಗಂತ ಅಲ್ಲಿ ಜಗಳಗಳೇ ಆಗಿಲ್ವಾ? ಊರಿಂದ ಊರಿಗೆ ಜಗಳಗಳು ಆಗ್ತಾ ಇದ್ವು, ಬಾನುಗೊಂದಿ ಸರಗೂರಿಗೆ ಜಗಳ ಆಗಿದ್ದಾವೆ, ಬಾನುಗೊಂದಿ ಸಿದ್ದಾಪುರಕ್ಕೆ ಜಗಳ ಆಗಿದ್ದಾವೆ, ಕೊಣನೂರು ಹಂಡ್ರಂಗಿಗೆ ಜಗಳ ಆಗಿದೆ. ಅಲ್ಲೆಲ್ಲಿಯೂ ಜಾತಿ ಕಾರಣಕ್ಕೆ ಅಂತಾ ಅಲ್ಲ. ಎಲ್ಲರೂ ಒಂದೇ ಊರಲ್ಲಿ ಒಟ್ಟಿಗೆ ಬದುಕುತ್ತಿರುವಾಗ ಜಗಳ, ದ್ವೇಷ ಅನ್ನೋದು ಬರ್ತಾ ಇರಲಿಲ್ಲ.
ನಗರವಾಸಿಗಳ ಸಮಸ್ಯೆ ಏನು? ಬಹುತೇಕ ಒಂದೇ ಜಾತಿಯವರು ಒಂದೇ ಕಡೆಯಲ್ಲಿಯೇ ಇರುತಿದ್ದರು. ಉದಾಹರಣೆಗೆ, ಮೈಸೂರು, ಒಕ್ಕಲಿಗರೆಲ್ಲಾ ಕೆ.ಜಿ.ಕೊಪ್ಪಲು, ಪಡುವಾರಹಳ್ಳಿ, ಬ್ರಾಹ್ಮಣರು ಕೆ.ಆರ್. ಪುರಂ, ಅಗ್ರಹಾರ, ಅಶೋಕಪುರಂ ಅಲ್ಲಿ ದಲಿತರು, ಮಂಡಿಮೊಹಲ್ಲ ಮುಸಲ್ಮಾನರು, ಹೀಗೆ ಒಂದೇ ಕೋಮು ಅಥವಾ ಜಾತಿಯವರೆಲ್ಲಾ ಒಂದೆಡೆಗೆ ಇದ್ದರೇ ಅವರಿಗೆ ಅನ್ಯ ಜಾತಿಯ/ಧರ್ಮದವರೊಂದಿಗೆ ವ್ಯವಹಾರಗಳು ಇರುವುದಿಲ್ಲ. ಅವರು ಅನ್ಯರಂತೆ ಕಾಣುತ್ತಾರೆ. ಮುಂಜಾನೆ ಐದಕ್ಕೆ ಮೈಕ್ ಶಬ್ಧ ಕರ್ಕಶವೆನಿಸುತ್ತದೆ. ಗಣೇಶನ ಉತ್ಸವ ಗಜಿಬಿಜಿ ಅನಿಸುತ್ತೆ. ಕೊಣನೂರಿನಲ್ಲಿ ಮುಸಲ್ಮಾನರು ಬಂದು ಗಣೇಶ ಉತ್ಸವದಲ್ಲಿ ಭಾಗವಹಿಸುತ್ತಾರೆ, ದೇಣಿಗೆ ಕೋಡುತ್ತಾರೆ. ಯಾವುದೇ ತಾರತಮ್ಯವಿಲ್ಲ.

ಇನ್ನೊಂದು ಪ್ರಮುಖವೆಂದರೇ, ವಿದ್ಯಾವಂತರು. ಓದೋಕೆ ಅಂತಾ ಬಂದವರೆಲ್ಲರೂ ಅವರದ್ದೇ ಸಮುದಾಯದ ಹಾಸ್ಟೆಲ್ ಸೇರುವುದ, ಒಕ್ಕಲಿಗರ ಹಾಸ್ಟೆಲ್, ನಾಮಧಾರಿ, ಲಿಂಗಾಯತ, ಬ್ರಾಹ್ಮಣ, ಅಲ್ಲೆಲ್ಲಾ ಅವರದ್ದೇ ಜಾತಿಯವರೊಂದಿಗೆ ಸ್ನೇಹ ಮಾಡಿಕೊಂಡು, ಬೇರೆಯವರ ಕುರಿತು ಮಾತನಾಡಿ ಕೊನೆಯವರೆಗೂ ಅನ್ಯ ಜಾತಿ/ಧರ್ಮದವರಿಂದ ದೂರ ಉಳಿಯುತ್ತಾ ತಮಗೆ ತಿಳಿಯದೇ ದ್ವೇಷವನ್ನು ಬೆಳೆಸಿಕೊಳ್ಳುತ್ತಾರೆ.

ಅದರ ಜೊತೆಗೆ, ಇನ್ನೊಂದು ವಿಚಾರವೆಂದರೇ, ಮೀಸಲಾತಿ ಮತ್ತು ಉಚಿತ ಸವಲತ್ತುಗಳು. ಇದರಿಂದಾಗಿಯೇ ಅನೇಕ ಹಿಂದುಳಿದ ಜಾತಿಯವರನ್ನು ದ್ವೇಷಿಸುತ್ತಾರೆ. ನಾವು ಇಷ್ಟೆಲ್ಲಾ ಖರ್ಚುಮಾಡಿ ಓದಿದೆವು, ಅವರಿಗೆ ಎಲ್ಲವೂ ಉಚಿತ, ಮುಂಗಡವಾಗಿ ಅವರಿಗೆ ಕೆಲಸ ಸಿಗುತ್ತೆ, ಪ್ರಮೋಷನ್ ಸಿಗುತ್ತೆ ಅನ್ನುವ ಪುಕಾರುಗಳು. ಮುಸಲ್ಮಾನರ ಬಗ್ಗೆ ಕೂಡ ಇದೇ ಅಸಮಾಧಾನವಿದೆ, ಮೂರು ಜನರು ಹೆಂಡತಿಯರು, ಇಪ್ಪತ್ತು ಮಕ್ಕಳು. ನನಗೆ ಒಮ್ಮೊಮ್ಮೆ ತಮಾಷೆ ಎನಿಸೋದು, ಏನಂದ್ರೇ, ಅವರಿಗೆ ಮೂರು ಜನ ಹೆಂಡಿರು, ನನಗಿಲ್ಲ ಅನ್ನೋ ಬೇಸರನಾ? ಅಥವಾ ಕಾಳಜಿನಾ? ನಮ್ಮಲ್ಲಿಯೂ ನಮ್ಮಜ್ಜಿಗೆ ಆರು ಜನರು ಮಕ್ಕಳು, ಅವರ ಅಮ್ಮನಿಗೆ ಒಂಬತ್ತು ಮಕ್ಕಳು. ಕಾಲ ಬದಲಾದಂತೆ ಜನರು ಬದಲಾದರು. ಮುಸಲ್ಮಾನರಲ್ಲಿಯೂ ಅಷ್ಟೆ, ಪ್ರತಿಯೊಬ್ಬರು ಮೂರು ಹೆಂಡತಿಯರನ್ನು ಹೊಂದಿದ್ದಾರೆಯೇ? ಪ್ರತಿಯೊಬ್ಬರಿಗೂ ಐದಾರು ಮಕ್ಕಳಿದ್ದಾವೆಯೇ? ನನ್ನ ಬಹುತೇಕ ಎಲ್ಲಾ ಮುಸ್ಲೀಮ್ ಸ್ನೇಹಿತರಿಗೂ ಎರಡು/ಮೂರು ಮಕ್ಕಳು.

ದಲಿತರ ಮತ್ತು ಹಿಂದುಳಿದ ಜಾತಿಯವರನ್ನು ಮತ್ತು ಮೀಸಲಾತಿಯನ್ನು ವಿರೋಧಿಸುವ ಭರದಲ್ಲಿ ವಾಸ್ತವಾಂಶವನ್ನು ಮುಚ್ಚಿಡುತ್ತಿರುವುದು. ಎಪ್ಪತ್ತು ವರ್ಷಗಳ ಹಿಂದೆ, ದಲಿತರ ಜೀವನ ಹೇಗಿತ್ತೆಂಬುದನ್ನು ದಯವಿಟ್ಟು ಆತ್ಮ ಸಾಕ್ಷಿ ಸಮೇತ ವಿವೇಚಿಸಿ. ಅಷ್ಟೆಲ್ಲಾ ಏಕೆ? ನಾವು ಓದುವ ಸಮಯದಲ್ಲೆಯೇ ಹೇಗಿತ್ತು? ಆ ದಿನಗಳಿಗೆ ನಿಜವಾಗಿಯೂ ಅನಿವಾರ್ಯತೆ ಇತ್ತು. ಈಗಲೂ ಎಲ್ಲಾ ದಲಿತರ, ಹಿಂದುಳಿದ ವರ್ಗಗಳ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಿದೆ ಎಂದು ಹೇಳಲಾಗುವುದಿಲ್ಲ. ಅದರ ಜೊತೆಗೆ ಈ ದಿನಗಳಲ್ಲಿ ಆರ್ಥಿಕತೆಯ ಆಧಾರದಲ್ಲಿ ಮೀಸಲಾತಿ ಇಡುವುದು ಅವಶ್ಯಕತೆಯಿದೆ, ಏಕೆಂದರೇ ಹಳ್ಳಿಗಾಡಿನ ಆರ್ಥಿಕತೆ ಅಧೋಗತಿ ತಲುಪಿರುವುದು ಸತ್ಯ. ಅದರಂತೆಯೇ, ಜಾತಿ ಆಧಾರದಲ್ಲಿ, ಉಳ್ಳವರು ಉಚಿತ ಸವಲತ್ತುಗಳನ್ನು ಪಡೆದುಕೊಳ್ಳುವುದು ನಿಲ್ಲಬೇಕಾಗಿದೆ. ಆದರೇ, ನಮ್ಮಲ್ಲಿ ಉಚಿತವೆಂದರೇ ವಿಷವನ್ನು ಕೊಳ್ಳುವವರು ಕಡಿಮೆಯಿಲ್ಲ. ಹತ್ತು ರೂಪಾಯಿ ಉಚಿತ ಹಾಲಿಗೆ ಪರದಾಡಿದ್ದು ಕಂಡಿಲ್ಲವೇ? ಬೈಕ್‍ನಲ್ಲಿ ಬಂದು ಹಾಲು ಕೊಂಡವರೆಷ್ಟು? ತಾರಸಿ ಮನೆಯವರೆಷ್ಟು? ಇವೆಲ್ಲವೂ ಸರ್ಕಾರಗಳ ಕೈಯಲ್ಲಿರುವ ವಿಚಾರಗಳು, ಅವುಗಳನ್ನು ನಮ್ಮ ಮನದೊಳಕ್ಕೆ ತಂದು, ಅಣ್ಣ ತಮ್ಮಂದಿರಂತಿರಬೇಕಾದ ನಾವುಗಳು ಒಳಗೊಳಗೆ ಕತ್ತಿ ಮಸೆಯುವುದು ದುರಂತ.

ಸರ್ಕಾರಿ ಉದ್ಯೋಗಗಳನ್ನು ಬಿಡಿ, ಖಾಸಗಿ ಸಂಸ್ಥೆಗಳಲ್ಲಿ ಕೂಡ ಪ್ರತಿಯೊಂದು ಜಾತಿಯವರ ಒಂದು ಸಮಿತಿ, ಸಂಘಗಳಿವೆ. ಪ್ರತಿಯೊಂದು ಜಾತಿಯವರು ವಾಟ್ಸಪ್, ಫೇಸ್‍ಬುಕ್ ಗುಂಪು ರಚಿಸಿಕೊಂಡಿಲ್ಲವೇ? ವಿದ್ಯಾವಂತರೆನಿಸಿಕೊಂಡವರು, ನಮ್ಮ ಜಾತಿವನಿಗೆ ಮಂತ್ರಿಗಿರಿ ಸಿಕ್ಕಿತೆಂದು ಸಂಭ್ರಮಿಸಿಲ್ಲವೇ? ನಮ್ಮವರೇ ಮಂತ್ರಿಗಳು, ನಮ್ಮವರೇ ಶಾಸಕರೆಂದು ಬೀಗಿಲ್ಲವೇ? ಮೊದಲು ನಾವು ಶುದ್ಧೀಯಾಗಬೇಕು. ಜಾತಿಯೆಂಬುದು ಧರ್ಮವೆಂಬುದು ಒಂದು ಆಚರೆಣೆಯಷ್ಟೆ, ಯಾವುದೂ ಮೇಲಿಲ್ಲ, ಯಾವುದೂ ಕೀಳಿಲ್ಲ. ಧರ್ಮದ ವಿಚಾರ ಬಂದಾಗ ನಮ್ಮದು ಶ್ರೇಷ್ಠ ಧರ್ಮವೆಂಬುವವರು, ಜಾತಿಯ ವಿಚಾರ ಬಂದಾಗ ಪ್ರಾಣಿ ಬಲಿ ಕೊಡುವುದು, ಮಾರಮ್ಮನ ಹಬ್ಬ, ಊರ ಹಬ್ಬಗಳನ್ನು ತುಚ್ಛವಾಗಿ ಕಾಣುವುದಿಲ್ಲವೇ? ಮಾಂಸ ತಿನ್ನುವ ಜಾತಿಯವರು ಕೀಳೆಂಬುದು ಬಂದಾಗ ಧರ್ಮದ ವಿಶಾಲತೆ ಅಡ್ಡ ಬರುವುದಿಲ್ಲವೇ? ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು ಅಷ್ಟೆ, ಅದಕ್ಕೆ ಈ ಧರ್ಮ, ಜಾತಿ, ಭಾಷೆಯ, ದೇಶದ ಅಡೆತಡೆಗಳಿರಬಾರದು.

ಹೆಮ್ಮೆಯಿಂದ ಹೇಳುತ್ತೇನೆ, ಭಾಷೆ ಬಾರದ ರಾಜ್ಯಗಳಲ್ಲಿ, (ತಮಿಳುನಾಡು, ಆಂದ್ರ, ಮಹರಾಷ್ಟ್ರ, ಓಡಿಸ್ಸಾ, ರಾಜಸ್ಥಾನ, ಉತ್ತರಖಾಂಡದ) ಹಳ್ಳಿಗಾಡುಗಳಲ್ಲಿ ನಾನು ಫೀಲ್ಡ್ ವಿಸಿಟ್ ಮಾಡಿದ್ದೇನೆ, ಅವರ್ಯಾರು ನನ್ನ ಜಾತಿ ಕೇಳಿಲ್ಲ, ಭಾಷೆಯ ಬಗ್ಗೆ, ರಾಜ್ಯದ ಬಗ್ಗೆ ತಕರಾರು ಎತ್ತಲಿಲ್ಲ. ಆ ನನ್ನ ಅನುಭವಗಳೇ ನನಗೆ ಜಾತಿಯಾಗಲೀ, ಭಾಷೆಯಾಗಲೀ, ಧರ್ಮವಾಗಲೀ ಮುಖ್ಯವೆನಿಸುವುದಿಲ್ಲ.

ನಾನು ಪಿ.ಎಚ್‍ಡಿ ಮಾಡಿದ್ದೇನೆ, ಇಂದಿಗೂ ಸರಗೂರಿನ ಬ್ರಾಹ್ಮಣರ ಮನೆಯ ಒಳಕ್ಕೆ ಹೋಗಿಲ್ಲ. ನನ್ನ ಸ್ನೇಹಿತರಿದ್ದಾರೆ. ಅವರ ಮಡಿವಂತಿಕೆಯನ್ನು ಗೌರವಿಸುತ್ತೇನೆ. ಮನೆ ಹೊರಾಂಗಣದಲ್ಲಿ ನಿಂತು ಮಾತಾಡಿಸುತ್ತೇನೆ. ಅದು ವೈವಿದ್ಯತೆ. ಹಾಗಂತ ನನಗೆ ಬ್ರಾಹ್ಮಣ ಸ್ನೇಹಿತರೇ ಇಲ್ಲವೇ? ಅನೇಕರಿದ್ದಾರೆ, ಸೇರಿಸುವವರ ಮನೆಗೆ ಹೋಗುತ್ತೇನೆ, ಊಟ ಮಾಡುತ್ತೇನೆ.

ಎಲ್ಲಾ ಜಾತಿಯ ಜನರೊಂದಿಗೆ ಬೆರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ, ಎಲ್ಲಾ ಧರ್ಮದವರ ಮನೆಯಲ್ಲಿ ಊಟ ಮಾಡುವುದನ್ನು ಪ್ರಾರಂಭಿಸಿ, ನಿಮಗೆ ಅರಿಯದಂತೆ ಅವರ ಆಚಾರಗಳು, ವಿಚಾರಗಳು ಹಿಡಿಸುತ್ತಾ ಹೋಗುತ್ತವೆ. ದ್ವೇಷ ಮರೆಯಾಗುತ್ತ ಹೋಗುತ್ತದೆ. ಸೇರಿಸುವುದಿಲ್ಲವೇ ಬಿಟ್ಟು ಬಿಡಿ.

ಆದರೇ, ಒಂದು ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲಿ ರಾಜಕಾರಣಿಗಳನ್ನು ಹೊರತುಪಡಿಸಿ ಮೂರು ವರ್ಗವಿದೆ. ಮೊದಲನೆಯ ವರ್ಗ ಬೆಂಕಿ ಹಚ್ಚಿ ಎನ್ನುವುದು ಮತ್ತೊಂದು ಬೆಂಕಿ ಹಚ್ಚುವುದು. ಮೊದಲನೆಯವರ ಸಂಖ್ಯೆ ಬಹಳ ಕಡಿಮೆ. ಅವರುಗಳು, ಹೆಚಿನ ಸಂಖ್ಯೆಯ ಸೈನಿಕರನ್ನು ಬಳಸಿ, ಈ ಕೃತ್ಯವನ್ನು ಮಾಡಿಸುತ್ತದೆ. ಮಾಡಿಸಿದ್ದಕ್ಕೆ ತಕ್ಕ ಪ್ರತಿಫಲಗಳೂ ಸಿಗುತ್ತವೆ. ಸ್ಥಾನಮಾನಗಳು, ಆರ್ಥಿಕತೆ ಇತ್ಯಾದಿ. ಎರಡನೆಯ ಗುಂಪು, ಭಾವನಾತ್ಮಕವಾಗಿ ಸ್ಪಂದಿಸುದು. ಇವುಗಳಿಗೆ, ಯಾವ ಲಾಭಾಂಶವೂ ಇಲ್ಲ, ಮತ್ತು ಅದನ್ನು ನಿರೀಕ್ಷೆ ಕೂಡ ಮಾಡದೇ, ನಿಷ್ಠಾವಂತರಾಗಿ ಬದುಕುತ್ತಾರೆ. ಮೂರನೆಯ ವರ್ಗ ಚಾಚು ತಪ್ಪದೇ ಪಾಲಿಸುತ್ತದೆ, ಅದಕ್ಕೆ ಸಾಧಕ ಬಾಧಕಗಳ ಲೆಕ್ಕಚಾರವೇನೂ ಬೇಡ. ಈ ಗುಂಪು ಜಾತಿಯ ವಿಚಾರದಲ್ಲಿ, ಧರ್ಮದ ವಿಚಾರದಲ್ಲಿ ಅತ್ಯಾಚಾರಿಯನ್ನು ಸಮರ್ಥಿಸಿಕೊಳ್ಳುತ್ತದೆ, ಕೊಲೆಗಡುಕನನ್ನು ಕಾಪಾಡುತ್ತದೆ, ಅಮಾಯಕನನ್ನು ಕೊಲ್ಲುತ್ತದೆ, ಸ್ವಂತದವರನ್ನು ಕಳೆದುಕೊಳ್ಳುತ್ತವೆ. ಇವೆಲ್ಲವೂ ಭಾವನೆಗಳ ಗೊಂದಲದಲ್ಲಿ ಜೀವಿಸಲು ಹೊರಟಿರುವವರು. ಸರಿ ತಪ್ಪನ್ನು ಗುರುತಿಸಲೂ ಆಗದವು.

ಕೊನೆಯದಾಗಿ ಒಂದು ಮಾತು ಹೇಳುತ್ತೇನೆ. ಹಿಂದೆ, ಸೋಷಿಯಲ್ ಮೀಡಿಯಾ ಇರಲಿಲ್ಲ, ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ನಿಜಕ್ಕೂ ಕೋಮು ಸೌಹಾರ್ಧತೆಗೆ ಶ್ರಮ ಪಡುತ್ತಿದ್ದರು. ಉದಹಾಹರಣೆಗೆ, ತೊಂಬತ್ತರ ದಶಕದಲ್ಲಿ ರಾಮ ಜನ್ಮಭೂಮಿ ವಿವಾದ. ಅದರಂತೆಯೇ, ನೋಡಿ ಅದರಲ್ಲಿಯೂ ಚಾಮರಾಜನಗರ ಜಿಲ್ಲೆಯಲ್ಲಿ ಜಾತಿ ಜಗಳಗಳು ಅತಿರೇಕವಾಗಿದ್ದವು. ದಲಿತ ಚಳುವಳಿಗಳೂ ಅಷ್ಟೆ. ದೇವಸ್ಥಾನಕ್ಕೆ ನುಗ್ಗುವುದಕ್ಕೆ, ತಡೆಯುವುದಕ್ಕೆ ಅದೆಷ್ಟೋ ರಕ್ತಪಾತಗಳು. ಆದರೇ, ಈಗ ಜನ ಬುದ್ದವಂತರಾಗಿದ್ದಾರೆ, ದೇವಸ್ಥಾನವನ್ನೇ ತಿರಸ್ಕರಿಸಿದ್ದಾರೆ, ರಾಮಮಂದಿರ ತಗೊಂಡು ಏನ್ ಮಾಡಬೇಕು ಅಂತಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಮಾಧ್ಯಮಗಳು ಮುಸ್ಲೀಮರ ವಿರುದ್ಧ ಅದೆಷ್ಟು ಸಾಧ್ಯವೋ ಅಷ್ಟೂ ಬೆಂಕಿ ಹಚ್ಚಲು ಪ್ರಯತ್ನಿಸಿವೆ, ನಮಗೆ ಅರಿವಿದೆ ಯಾವುದು ಸತ್ಯ, ಯಾವುದು ಬೇಕು ಅಂತಾ. ಆದರೇ, ಕೆಲವು ಅಂಧರು, ಆ ಅಫೀಮಿನ ಗುಂಗಿನಲ್ಲಿ ನರಳುತ್ತಿದ್ದಾರೆ. ಅವರು, ಅಲ್ಲಿಂದ ಬರುವುದಕ್ಕೆ ಅಸಾಧ್ಯ, ಏಕೆಂದರೇ, ಧರ್ಮ/ಜಾತಿ ಯಾವತ್ತಿಗೂ ಅಫೀಮು. ದ್ವೇಷದಿಂದ ಸುಲಭಕ್ಕೆ ಮುಕ್ತಿ ದೊರೆಯುವುದಿಲ್ಲ.

ಸತ್ತು ಹೋದ ಸಿದ್ದಾಂತಗಳ ಮೆರವಣಿಗೆಯಲ್ಲಿ....




ಸ್ನೇಹಿತರೇ,
ಲೇಖನ ಉದ್ದವಿದೆ ಮತ್ತು ಗೊಂದಲವೂ ಎನಿಸಬಹುದು, ಸಾವಧಾನದಿಂದ ಓದಿ.

ಅನೇಕ ದಿನಗಳಿಂದ ಬರೆಯಬೇಕೆಂದಿದ್ದ ವಿಷಯಗಳನ್ನು ಈ ದಿನ ಪ್ರಸ್ತಾಪಿಸುತ್ತಿದ್ದೇನೆ. ಇವೆಲ್ಲವೂ ನನ್ನ ವೈಯಕ್ತಿಕ ಅಬಿಫ್ರಾಯಗಳೆಂಬು ಸತ್ಯ. ಇದನ್ನು ಅನೇಕರು ಒಪ್ಪುವುದಿಲ್ಲವೆಂಬುದು ಅಷ್ಟೇ ಸತ್ಯ ಮತ್ತು ಅವರನ್ನು ಒಪ್ಪಿಸಬೇಕೆಂಬ ಅನಿವಾರ್ಯತೆ ನನಗಿಲ್ಲವೆಂಬುದೂ ಸತ್ಯ. ಇಂದು, ಮಹೇಂದ್ರ ಕುಮಾರ್ ಕೊಪ್ಪರವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ಕಸಿವಿಸಿಯಾಯಿತು. ನಾನು ನನ್ನ ಬಿ.ಎಸ್ಸಿ. ದಿನಗಳಿಂದಲೂ ಅವರನ್ನು ನೋಡುತ್ತಾ/ಕೇಳುತ್ತಾ ಬಂದಿದ್ದೇನೆ. ಒಬ್ಬ ತೀವ್ರವಾದ ಬಲಪಂಥೀಯ ಸಿದ್ದಾಂತದ ಅನುಯಾಯಿಯಾಗಿ ದಶಕಗಳು ದುಡಿದು, ಸಂಘಟಿಸಿ, ದಿಢೀರನೇ ಅಲ್ಲಿಂದ ಹೊರಬಂದು ಅದರ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದು ನಿಜಕ್ಕೂ ಅಚ್ಚರಿ ಮತ್ತು ಅಸಾಮಾನ್ಯ.


ಈ ಸಿದ್ದಾಂತಗಳು, ಇಸಂ ಗಳು ಎಂದಿಗೂ ಅಫೀಮು ಇದ್ದಂತೆ ಅಥವಾ ಚಟವೆಂದರೂ ತಪ್ಪಿಲ್ಲ. ಒಬ್ಬ ವ್ಯಕ್ತಿ ಒಂದು ಸಿದ್ದಾಂತಕ್ಕೆ, ಇಸಂ ಗೆ ಗಂಟು ಬಿದ್ದರೆ ಮುಗಿಯುತು, ಅಲ್ಲಿಂದ ಹೊರಬರುವುದು ಅಸಾಧ್ಯದ ಮಾತು. ಇಷ್ಟವಿದ್ದರೂ ಇಲ್ಲದಿದ್ದರೂ ಅಲ್ಲಿಯೇ ಇರಬೇಕು. ನಮ್ಮ ಕನ್ನಡ ಸಿನೆಮಾಗಳಲ್ಲಿ ಆಗ್ಗಾಗ್ಗೆ ಕೇಳುವ ಒಂದು ಡೈಲಾಗ್ ಇದೆ “ನಾವು ರೌಡಿಸಂ ಬಿಟ್ಟರೂ, ರೌಡಿಸಂ ನಮ್ಮನ್ನು ಬಿಡುವುದಿಲ್ಲವೆಂದು’. ಫೇಸ್‍ಬುಕ್ಕಿನಲ್ಲಿ, ವಾಟ್ಸಪ್ಪಿನಲ್ಲಿ ಬರುವ ಪೋಸ್ಟ್‍ಗಳನ್ನು ಪಾರ್ವರ್ಡ್ ಮಾಡಿ ಭಕ್ತಿ ತೋರಿಸುವುದು, ನಿಷ್ಠಾವಂತ ಎಂದು ಬಿಂಬಿಸಿಕೊಳ್ಳುವುದು ಬೇರೆ. ಆದರೇ, ಅದರ ಒಳಗೆ ಆ ಸಿದ್ದಾಂತವನ್ನು ಸಾಧಿಸಲು ಪಣತೊಟ್ಟು ದುಡಿಯುವುದು ಬೇರೆ. ಈ ಅರ್ಥದಲ್ಲಿ ಮಹೇಂದ್ರರವರು ದುಡಿದಿದ್ದಾರೆ. ಅಲ್ಲಿಯೇ ಇದ್ದಿದ್ದರೇ ಈ ದಿನಕ್ಕೆ ನಿಜವಾಗಿಯೂ ಅತ್ಯುನ್ನತ ಪದವಿ ಸಿಕ್ಕೇ ಸಿಕ್ಕಿರುತ್ತಿತ್ತು. ಆದರೇ, ಆ ಕೊಂಡಿಯನ್ನು ಕಳಚಿ ಹೊರಕ್ಕೆ ಬಂದರು. ಅಲ್ಲಿಂದ ಬಂದ ನಂತರ ಅವರೇನು, ಎಡಪಂಥೀಯ ಸಿದ್ದಾಂತದ ಕಡೆಗೆ ಒಲಿಯಲಿಲ್ಲ. ಅಲ್ಲಿಂದಲೂ ದೂರ ಕಾಯ್ದಿರಿಸಿಕೊಂಡರು.

ವಿಚಿತ್ರವೆಂದರೇ, ನಮ್ಮಲ್ಲಿ ಒಂದು ಹೊಗಳಬೇಕು ಇಲ್ಲವೇ ದೂಷಿಸಬೇಕೆಂಬ ಅಲಿಖಿತ ನಿಯಮವೊಂದಿದೆ. ನೀನು ಬಲಪಂಥೀಯನಾಗಬೇಕು ಇಲ್ಲವೇ ಬಲಕ್ಕೆ ಬರಬೇಕು. ಮಧ್ಯದಲ್ಲಿರುತ್ತೇನೆಂದರೇ ಒಪ್ಪುವುದಿಲ್ಲ. ಒಂದರ್ಥದಲ್ಲಿ, ಮಹೇಂದ್ರರವರದ್ದೂ ಅದೇ ಆಯಿತೆನಿಸುತ್ತದೆ. ಮಾನವೀಯತೆಯ ಅಡಿಯಲ್ಲಿ ಸಮಾಜ ಕಟ್ಟೋಣ, ಜಾಗೃತೆ ಮೂಡಿಸೋಣವೆಂದು ಹೊರಟದ್ದು ಎರಡು ಪಂಥದವರಿಗೂ ಹಿಡಿಸಲಿಲ್ಲ. ಆದರೂ, ಅವರ ಇತ್ತೀಚಿನ ಹೋರಾಟಗಳನ್ನು ಮೆಚ್ಚಲೇಬೇಕು. ಯಾವುದೇ ಪಂಥವನ್ನು ಪಾಲಿಸದೇ ಕೇವಲ ಮಾನವೀಯತೆಯ ದೃಷ್ಠಯಿಂದ ಸಮಾಜವನ್ನು, ದೇಶವನ್ನು ನೋಡಲು ಬಯಸುತ್ತಿರುವ ಅನೇಕ ಮನಸ್ಸುಗಳಿಗೆ ಅವರು ಆಲೋಚನೆಗಳು ದಾರಿದೀಪವಾಗುವುದರಲ್ಲಿ ಸಂದೇಹವಿಲ್ಲ.

ಎರಡನೆಯದಾಗಿ, ಈ ಮೇಲಿನ ವಿಚಾರಗಳನ್ನೇ ಸ್ವಲ್ಪ ವಿವರಿಸಲು ಬಯಸುತ್ತೇನೆ. ಲೇಖನ ಉದ್ದವಾದರೂ ಸಹನೆಯಿಂದ ಓದಬೇಕೆಂಬುದು ನನ್ನ ಕೋರಿಕೆ. ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಒಮ್ಮೊಮ್ಮೆ ಬಹಳ ಆತಂಕವಾಗುತ್ತದೆ. ಅವೆಲ್ಲವನ್ನೂ ಉದಾಹರಣೆಗಳೊಂದಿಗೆ ವಿವರಿಸುತ್ತೇನೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಹಲಗನಹಳ್ಳಿಯೆಂಬ ಒಂದು ದೊಡ್ಡ ಊರಿದೆ. ಅಲ್ಲಿರುವವರೆಲ್ಲರೂ ಮುಸಲ್ಮಾನರು. ನನ್ನ ಹೈಸ್ಕೂಲ್ ಕ್ಲಾಸ್‍ಮೇಟ್ ಕೂಡ ಇದ್ದಾರೆ. ಅವರಿಗೆ, ಹೀಗೆಯೇ ಫೋನ್ ಮಾಡಿ ಮಾತನಾಡುತ್ತಿದ್ದೆ. ಏನ್ರಪ್ಪಾ, ಹೇಗಿದೆ ಜೀವನ ಅಂತಾ ಎಲ್ಲಾ. ಆಗ ತಿಳಿದು ಬಂದ ಸುದ್ದಿ ಏನೆಂದರೇ, ಅವರ ಹೊಲ ಗದ್ದೆ ಕೆಲಸಗಳಿಗೆ ಅಕ್ಕ ಪಕ್ಕದ ಊರುಗಳಿಂದ ಕೂಲಿ ಕೆಲಸಕ್ಕೆ ಜನರು ಬರುತ್ತಿದ್ದರು. ಅವರುಗಳನ್ನೆಲ್ಲಾ ಆ ಊರಿನ ಜನರು ತಡೆದಿದ್ದಾರೆ, ಸಾಬ್ರುಗಳ ಮನೆಗೆ ಕೆಲಸಕ್ಕೆ ಹೋಗಬಾರದೆಂದು, ಹೋದರೇ ದಂಡ ವಿಧಿಸಲಾಗುವುದೆಂದು. ಇದು ನಮ್ಮ ಮಾಧ್ಯಮಗಳ ಕೊಡುಗೆ. ಇದನ್ನು ನನ್ನ ಸ್ವಂತ ಅನುಭವದಲ್ಲಿಯೇ ಹೇಳಿದರೆ ನಿಮಗೆ ತಿಳಿಯುವುದು. ಅದಕ್ಕೊಂದು ಹಿನ್ನಲೆಯನ್ನು ತಿಳಿಸುತ್ತೇನೆ. ಇತ್ತೀಚೆಗೆ ನನ್ನ ಒಂದಿಬ್ಬರು ಸ್ನೇಹಿತರು, ನಾನು ಮುಸಲ್ಮಾನರ ಪರವಾಗಿ ಪೋಸ್ಟ್ ಹಾಕುತ್ತೇನೆ, ನಾನು ಹಿಂದೂ ವಿರೋಧಿ ಮತ್ತು ಸುಳ್ಳು ಜ್ಯಾತ್ಯಾತೀತವಾದಿ ಎಂದು ಹಿಯಾಳಿಸಿದರು. ಆ ವಾಟ್ಸಾಪ್ ಚಾಟ್ ಅನ್ನು ಸಮಯ ಬಂದಾಗ ಪೋಸ್ಟ್ ಮಾಡುತ್ತೇನೆ. ಅವರು ಅಂಧಕಾರ ಅಳಿಯಲಿ ಎಂದು ಕೋರುತ್ತೇನೆ.

ಇರಲಿ, ನಾನು ಹುಟ್ಟಿದ್ದು ಬಾನುಗೊಂದಿ, ಬೆಳೆದಿದ್ದು, ಬಾನುಗೊಂದಿ, ಕೊಣನೂರು, ಕುಶಾಲನಗರ, ಮೈಸೂರು, ಬೆಂಗಳೂರು ಹೀಗೆ. ಹಳ್ಳಿಯಲ್ಲಿ ಜಾತಿಗೆ ಬಳಸುವ ಪದಗಳನ್ನೇ ಬಳಸುತ್ತೇನೆ, ಅದು ತಪ್ಪೆನಿಸಿದರೆ ಕ್ಷಮೆಯಿರಲಿ. ನಾನು ಯಾವುದೇ ಸಿದ್ದಾಂತಗಳನ್ನು ಪಾಲಿಸುವುದಿಲ್ಲ. ನನಗೆ ಮಾನವೀಯತೆ ಮಾತ್ರವೇ ಮುಖ್ಯ ಅದು ಬಿಟ್ಟರೇ ಇಕಾಲಜಿಯೊಂದೆ ನನ್ನ ಸಿದ್ದಾಂತ. ನಾನು ಪರಿಸರದ ಕುರಿತು, ನಿಸರ್ಗದ ಕುರಿತು ಆಲೋಚಿಸುತ್ತೇನೆ. ಅದರ ಸಿದ್ದಾಂತದ ಮುಂದೆ, ಮಿಕ್ಕ ಸಿದ್ದಾಂತಗಳೆಲ್ಲಾ ತೃಣ.

ನಮ್ಮಲ್ಲಿ ಜಾತಿ ಅನ್ನೋದು ಇರುವುದು ಹೌದಾದರೂ ಅದ್ಯಾವತ್ತೂ ನಮಗೆ ಸಮಸ್ಯೆಯನ್ನು ತಂದೊಡ್ಡಿಲ್ಲ. ಉದಾಹರಣೆಗೆ: ಹಿಂದೂ ಮುಸ್ಲಿಮ್, ಅವರನ್ನು ನಾನು ಕರೆಯುವುದು ಸಾಬ್ರುಗಳು ಅಂತಾ, ಅವರಿಗೆ ಯಾವುದೇ ಸಮಸ್ಯೆಯಿಲ್ಲ. ನನ್ನನ್ನು ಅವರುಗಳು ಕರೆಯುವುದು ನೀವು ಗೌಡ್ರುಗಳು. ನಮ್ಮಲ್ಲಿ ಸಾಬ್ರು ಅನ್ನೋದು ಒಂದು ಜಾತಿ, ಅದು ಧರ್ಮ ಅಂತಾ ತಿಳಿದೇ ಇಲ್ಲ. ನಮ್ಮಜ್ಜಿ ಕೇಳಿದ್ರೂ ಅದನ್ನೇ ಹೇಳೋದು ಸಾಬ್ರು ಜಾತಿಯವರು ಅಂತಾ. ಅಂದರೇ, ಅವರು ನಮ್ಮವರೇ ಅವರದ್ದು ಬೇರೋಂದು ಜಾತಿ ಅನ್ನೋ ರೀತಿಯಲ್ಲಿಯೇ ಬದುಕಿರೋದು. ಹೆಚ್ಚೂ ಕಡಿಮೆ ಪ್ರತಿಯೊಂದು ರಂಜಾನ್‍ನಲ್ಲಿ ನಾನು ಯಾರಾದರೂ ಒಬ್ಬ ಮುಸಲ್ಮಾನ್ ಸ್ನೇಹಿತನ ಮನೆಯಲ್ಲಿ ಊಟ ಮಾಡಿರುತ್ತೇನೆ. ಹಲಗನಹಳ್ಳಿ ಕಡೆಗೆ ಹೋಗುವಾಗೆಲ್ಲ, ನದೀಮ್ ಅಥವಾ ಮುಜಾಹಿದ್‍ಗೆ ಕಾಲ್ ಮಾಡಿ, ನಾನು ಬರ್ತಾಯಿದ್ದೀನಿ, ಬಿರಿಯಾನಿ ಮಾಡಿಸು ಅಂತಾ ಹೇಳಿ, ಬಿರಿಯಾನಿ ತಿಂದು ಬರ್ತೀನಿ. ಈ ಹಿನ್ನಲೆಯಲ್ಲಿ, ಯಾವುದೋ ಮೂಲೆಯಲ್ಲಿ ಯಾವನೋ ಸಾಬ್ರ ಜಾತಿಗೆ ಸೇರಿದವನು ತಪ್ಪು ಮಾಡಿದ್ದಕ್ಕೆ ಎಲ್ಲರನ್ನೂ ಸೇರಿಸಿ ದೂಷಿಸಿದರೇ ಸರ್ವೇಸಾಮಾನ್ಯವಾಗಿ ಕೋಪ ಬರುತ್ತದೆ. ಅದನ್ನು ನಾನು ಸಹಿಸುವುದಿಲ್ಲ. ನಾನೊಬ್ಬ ಗೌಡ್ರ ಜಾತಿಯವನಾಗಿ, ಯಾರೋ ನಾಲ್ಕು ಜನ ಗೌಡ್ರು ಜಾತಿಯವರು ಮಾಡಿದ್ದಕ್ಕೆ ಇಡೀ ಗೌಡ್ರ ಜಾತಿಯನ್ನೇ ಬೈದರೇ ಹೇಗೆ?

ಈ ಸಿದ್ದಾಂತಗಳ ವಿಚಾರಕ್ಕೆ ಬರೋಣ, ಯಾವುದೇ ಸಿದ್ದಾಂತಗಳು ಪರಿಪೂರ್ಣವಲ್ಲವೆಂಬುದನ್ನು ಮೊದಲು ಅರಿಯಬೇಕು ಮತ್ತು ಒಪ್ಪಿಕೊಳ್ಳಬೇಕು. ಸಿದ್ದಾಂತಗಳು ಆ ಸಮಯಕ್ಕೆ ಮತ್ತು ಸನ್ನಿವೇಶಕ್ಕೆ ರೂಪುಗೊಂಡಿರುತ್ತವೆ. ಎಲ್ಲಾ ಸಿದ್ದಾಂತಗಳು ಮಾನವ ನಿರ್ಮಿತವೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸಿದ್ದಾಂತವನ್ನು ಬರೆದವನೇ ಶಾಸ್ವತವಲ್ಲವೆಂದ ಮೇಲೆ, ಇನ್ನೂ ಸಿದ್ದಾಂತಗಳು ಶಾಸ್ವತವಾಗಲು ಸಾಧ್ಯವೇ? ಅದನ್ನು ಅರಿಯದೇ ಹೋದರೇ ಆ ಸುಳಿಯಲ್ಲಿ ಸಿಲುಕಿಕೊಂಡು ಸಾಯುವುದು ಸತ್ಯ. ನಾವು ಸಿದ್ದಾಂತಗಳನ್ನು ನಂಬಬೇಕು, ಆದರೆ ಅದೊಂದೆ ಸತ್ಯ ಆ ಸಿದ್ದಾಂತಗಳನ್ನು ಬಿಟ್ಟು ಮಿಕ್ಕಿದೆಲ್ಲವೂ ಮಿತ್ಯವೆನ್ನುವ ಭ್ರಮೆಯಿಂದ ಹೊರಬರಬೇಕು. ಪ್ರತಿಯೊಂದು ಸಿದ್ದಾಂತವೂ ಅವರವರ ನಂಬಿಕೆ. ಯಾವುದರಲ್ಲಿ ಶ್ರದ್ದೆ ಇದೆಯೋ ಅದನ್ನು ಪಾಲಿಸಲಿ ಎಂಬುದನ್ನು ಮನಗಾನಬೇಕು.

ಈ ವಿಚಾರವನ್ನು ಮತ್ತೊಷ್ಟು ಆಳಕ್ಕೆ ಇಳಿದು ಚರ್ಚಿಸೋಣ. ಇದನ್ನು ಸ್ವಲ್ಪ ರಾಜಕೀಯಕ್ಕೂ, ರಾóಷ್ಟ್ರೀಯಕ್ಕೂ, ಧರ್ಮಕ್ಕೂ ವಿಸ್ತರಿಸೋಣ. ಮೊದಲನೆಯದಾಗಿ ರಾಜಕೀಯವನ್ನು ನೋಡೋಣ. ಅದರಲ್ಲಿಯೂ ಭಾರತೀಯ ರಾಜಕೀಯ ಪಕ್ಷಗಳನ್ನು ನೋಡೋಣ ಮತ್ತು ಅವುಗಳ ಸಿದ್ದಾಂತಗಳನ್ನೂ ನೋಡೋಣ. ಕಾಂಗ್ರೇಸ್ ಪಕ್ಷ ಅತಿ ಹೆಚ್ಚು ಕಾಲ ಆಡಳಿತ ನಡೆಸಿದೆ. ಆಡಳಿತದ ವಿಚಾರಗಳು ಬೇಡ, ರಾಜಕಾರಣವನ್ನು ಮಾತ್ರ ನೋಡೋಣ. ನೆಹರೂ ಕಾಲದ ಪಕ್ಷಕ್ಕೂ, ಇಂದಿರಾ ಗಾಂಧೀ ಕಾಲಕ್ಕೂ, ರಾಜೀವ್ ಗಾಂಧೀ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧೀ ಕಾಲಕ್ಕೂ ಅಜಗಜಾಂತರವಿದೆ. ಪಕ್ಷದ ಸಿದ್ದಾಂತಗಳು ಹಾಗೇಯೇ ಇದೆ ಮತ್ತು ಇರುತ್ತದೆ. ಅವುಗಳಲ್ಲಿ ಅಂತಹ ಬೃಹತ್ತ ಬದಲಾವಣೆಗಳು ಆಗಿರುವುದಿಲ್ಲ, ಪ್ರತಿಯೊಂದು ಕಂಪನಿಗಳಿಗೂ ಇರುವ ಬೈಲಾ ರೀತಿ, ಆ ಉಪನಿಯಮಗಳು ಇರುತ್ತವೆ, ಆದರೇ ನಡುವಳಿಕೆ ಬದಲಾಗುತ್ತಿರುತ್ತದೆ. ಇದೊಂದು ರೀತಿಯಲ್ಲಿ, ಕಾಲೇಜಿನ ಪ್ರಗತಿ ಪ್ರತಿಯೊಬ್ಬ ಪ್ರಾಂಶುಪಾಲರು ಬಂದಾಗ ಬದಲಾಗುವ ರೀತಿ.

ಅದೇ ರೀತಿಯಲ್ಲಿ, ಬಿಜೆಪಿ ಪಕ್ಷವನ್ನು ಗಮನಿಸುತ್ತಾ ಬನ್ನಿ. ಪಕ್ಷಾತೀತವಾಗಿ ವಾಜಪೇಯಿಯವರನ್ನು ಆರಾಧಿಸಿ, ಗೌರವಿಸಿದ್ದಾರೆ. ಅವರ ನೇತೃತ್ವದ ಬಿಜೆಪಿಗೂ, ಅಡ್ವಾನಿಯವರ ನೇತೃತ್ವದ ಬಿಜೆಪಿಗೂ, ಗಡ್ಕರಿಯವರ ಬಿಜೆಪಿಗೂ, ಅಮಿತ್ ಶಾ ಅವರ ನೇತೃತ್ವದ ಬಿಜೆಪಿಗೂ ಎಂತಹ ವ್ಯತ್ಯಾಸವೆಂಬುದು ಕಣ್ಣಿಗೆ ಕಂಡಿದೆ. ತೊಂಬತ್ತರ ದಶಕದಲ್ಲಿ ಪ್ರತಿಯೊಬ್ಬರು ರಾಮ ಮಂದಿರ ನಿರ್ಮಿಸಲೇಬೇಕೆಂದು ಆಸೆ ಪಟ್ಟಿದ್ದು ಹೌದು, ಆದರೇ, ಈಗ ಬಹುತೇಕರಲ್ಲಿ ಅದರ ಬಗ್ಗೆ ಆಸಕ್ತಿಯೇ ಇಲ್ಲ. ಅದು ಪ್ರಮುಖವೆನಿಸುತ್ತಿಲ್ಲ. ಕಾಲ ಬದಲಾಗುತ್ತಿದೆ. ಇದು, ಪ್ರಾದೇಶಿಕ ಪಕ್ಷಗಳಿಗೂ ಅನ್ವಯವಾಗುತ್ತದೆ. ದೇವೇಗೌಡರ ಜನತಾದಳಕ್ಕೂ ಕುಮಾರಸ್ವಾಮಿಯವರ ಪಕ್ಷಕ್ಕೂ ಅಂತರವಿದೆ. ಕಮ್ಯೂನಿಸ್ಟ್ ಪಕ್ಷವೂ ಅಷ್ಟೆ, ಜ್ಯೋತಿ ಬಸುವಿಗೂ ಕಾರಟ್‍ರಿಗೂ ವ್ಯತ್ಯಾಸವವಿದೆ. ಬದಲಾಗುತ್ತಿವೆ. ಸಿದ್ದಾಂತಗಳು ಪುಸ್ತಕಕ್ಕೆ ಮಾತ್ರ ಸೀಮಿತವಾಗಿವೆ, ಆಡಳಿತದ ಚುಕ್ಕಾಣಿ ಹಿಡಿಯುವುದೊಂದೆ ಮುಖ್ಯವೆಂಬುದರಲ್ಲಿ ತೊಡಗಿವೆ. ಸೂಕ್ಷ್ಮತೆ ಮಣ್ಣಾಗಿರುವು ಅಕ್ಷರಶಃ ಸತ್ಯ. ಯಡ್ಯೂರಪ್ಪರವರು ಮೊನ್ನೆ ಯಾವುದೇ ಕೋಮಿನ ವಿರುದ್ದ ದ್ವೇಷ ಕಾರಬಾರದೆಂಬ ಒಂದೇ ಒಂದು ಮಾತಿಗೆ ಸ್ವತಃ ಅವರ ಪಕ್ಷದವರೇ ತಿರುಗಿಬಿದ್ದದ್ದು ಕಂಡಿಲ್ಲವೇ?

ಧರ್ಮದ ವಿಚಾರಕ್ಕೆ ಬರೋಣ, ಪರಕೀಯರ ಧಾಳಿಗಳನ್ನು ಬದಿಗಿಟ್ಟು ನೋಡಿದರೂ ಅಷ್ಟೇ ಸಿಗುವುದು. ಬೌದ್ಧ, ಜೈನ, ಶೈವ, ವೈಷ್ಣವ, ಅದರೊಳಗೆ ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಹೀಗೆ ಪ್ರತಿಯೊಬ್ಬ ರಾಜ ಅಧಿಕಾರಕ್ಕೆ ಬಂದಾಗ ಅವನು ನಂಬುವ ಸಿದ್ದಾಂತ, ದೇವರನ್ನು ಮುಂದಕ್ಕೆ ತರುವುದು ಇತರೆಯರನ್ನು ಕೀಳಾಗಿ ಕಾಣುವುದು ಸಾಮಾನ್ಯವಾಗಿದೆ. ಮೊಘಲರ ಕಾಲದಲ್ಲಿಯಾದರೂ ಅಷ್ಟೇ, ಮತ್ತೊಬ್ಬರಾದರೂ ಅಷ್ಟೆ. ಯುಡ್ಯೂರಪ್ಪರವರು ಅವರ ಜಾತಿಗೆ, ಕುಮಾರಸ್ವಾಮಿ ತಮ್ಮ ಜಾತಿಗೆ, ಸಿದ್ದರಾಮಯ್ಯ ಅವರ ಜಾತಿಗೆ, ಹೀಗೆ ಇಷ್ಟೆಲ್ಲಾ ವಿದ್ಯಾವಂತ ಸಮಾಜವಿದ್ದೇ ಈ ತಾರತಮ್ಯವಿರುವಾಗ ಇನ್ನೂ ನೂರಾರು ವರ್ಷಗಳ ಕೆಳಗೆ ಆಗಿರುವುದು ತಪ್ಪಾ? ಎಂದೋ ಇತಿಹಾಸದಲ್ಲಿ ಸೇರಿರುವುದನ್ನು ಕೆದಕಿ ಇಂದಿನ ಮತ್ತು ಮುಂದಿನ ನೆಮ್ಮದಿಯನ್ನು ಹಾಳು ಮಾಡುವುದು ಏಕೆ? ಅದರಲ್ಲಿಯೂ ಧರ್ಮದ ಹೆಸರಲ್ಲಿ. ಯಾರಿಗೆ ಗೊತ್ತು ಮುಂದೊಂದು ದಿನ ಬೇರೆ ಧರ್ಮದವರು ಅಧಿಕಾರಕ್ಕೆ ಬರಬಹುದು! ಆಗ ಮತ್ತದೇ ಪುನಾರಾವರ್ತನೆ?

ಅದೇ ರೀತಿ, ಕಮ್ಯೂನಿಸಂ, ಕ್ಯಾಪಿಟಲಿಸಂ, ಇವೆಲ್ಲವೂ ಅಷ್ಟೇ. ಎಲ್ಲವೂ ರಸಹೀನವಾಗಿವೆ. ಅಲ್ಲಿ ಯಾವ ರಸವೂ ಇಲ್ಲ, ಸತ್ವವೂ ಇಲ್ಲ. ತಂತ್ರಜ್ಞಾನ ಜನರನ್ನು ಸೋಮಾರಿಗಳಾಗಿಸಿದ್ದು ಸತ್ಯ. ವಿಚಾರಧಾರೆಯನ್ನು ತಿಳಿಯಲು, ಇನ್ನೂರು ಮುನ್ನೂರು ಪುಟಗಳ ಪುಸ್ತಕಗಳನ್ನು ಓದಬೇಕಿತ್ತು.  ನಂತರ ಭಾಷಣ, ಭಜನೆಗಳನ್ನು ಕೇಳಿ ಜ್ಞಾನಪಡೆಯುತ್ತಿದ್ದರು. ಈಗ ಅದ್ಯಾವುದು ಇಲ್ಲ, ಕೇವಲ ಒಂದೇ ಒಂದು ಪೋಸ್ಟ್ ಅದು ಸರಿ ತಪ್ಪೆಂಬ ಗೋಜಿಗೆ ಹೋಗುವುದಿಲ್ಲ. ನನ್ನ ಅನೇಕ ಸ್ನೇಹಿತರು ಅದರಲ್ಲಿಯೂ ಫೇಸ್‍ಬುಕ್ ಯುನಿವರ್ಸಿಟಿಯವರು, ಬಳಸುವ ಪದಗಳ ಅರ್ಥ ಕೇಳಬೇಕು, ಬುದ್ದಿಜೀವಿಗಳು, ಜ್ಯಾತ್ಯಾತೀತರು, ಪ್ರಗತಿಪರರು – ಇವರೆಲ್ಲರೂ ಯಾರು?

ಯಾರೋ ಎಲ್ಲಿಯೂ ಗುಂಪಿನಲ್ಲಿ ಹೇಳಿದ್ದನ್ನು ಪ್ರಚಾರ ಮಾಡುತಿರುವುದು ಸೋಜುಗ. ಅವೆಲ್ಲರ ಸಂತತಿ ನಶಿಸಿ ದಶಕಗಳಾಗಿವೆ. ಈಗ ಏನಿದ್ದರೂ ಸ್ವಾಮಿ ಪೂಜೆ ಅಷ್ಟೆ. ಅದು, ಮೋದಿಯಾಗಿರಬಹುದು, ರಾಹುಲ್ ಗಾಂಧಿಯಾಗಿರಬಹುದು.

ಅದನ್ನು ಬಿಟ್ಟರೇ, ಸದ್ಯದಲ್ಲಿರುವುದು. ಕಾರ್ಪೋರೇಟ್ ದುನಿಯಾ. ಶೇಕಡ ಒಂದಕ್ಕಿಂತಲೂ ಕಡಿಮೆ ಜನಸಂಖ್ಯೆಯ ಉದ್ಯಮಿಗಳು ಎಲ್ಲದರಲ್ಲಿಯೂ ಬಂಡವಾಳ ಹಾಕಿ, ಜಗತ್ತನ್ನು ತಮ್ಮ ಕೈ ವಶ ಮಾಡಿಕೊಂಡಿದ್ದಾರೆ. ಯಾವ ಪಕ್ಷ ಬರಬೇಕು, ಏನು ಸುದ್ದಿಯಾಗಬೇಕು, ಯಾವುದು ಪ್ರಚಾರ ಪಡೆಯಬೇಕು ಇವೆಲ್ಲವೂ ಇರುವುದು ಅವರ ಕೈಯಲ್ಲಿ. ಒಂದು ಪಕ್ಷವನ್ನು ಅಧಿಕಾರಕ್ಕೆ ತರಲು ಮತ್ತು ಇಷ್ಟವಾಗದೇ ಇದ್ದರೇ ಬೀಳಿಸಲು ಅವರಿಗೆ ಮಾತ್ರವೇ ಸಾಧ್ಯ. ನಾವು ನಮ್ಮ ಮಾನಸಿಕ ನೆಮ್ಮದಿಗಾಗಿ, ಮಾಧ್ಯಮಗಳನ್ನು, ರಾಜಕಾರಣಿಗಳನ್ನು ಬೈದು ಸಮಧಾನ ಪಟ್ಟಿಕೊಳ್ಳಬೇಕಿದೆ.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...