28 ಅಕ್ಟೋಬರ್ 2019

ದೀಪಾವಳಿಯೆಂದರೇ ಬರೀ ಪಟಾಕಿಯೇ?


ಇತ್ತೀಚೆಗೆ ಎಂದರೇ ಕಳೆದ ಹತ್ತು ವರ್ಷಗಳಿಂದ ನಾನು ಗಮನಿಸಿರುವುದನ್ನು ತಮ್ಮ ಮುಂದಿಡುತ್ತಿದ್ದೇನೆ, ಈ ಅಂಶಗಳು ತಮ್ಮ ಗಮನಕ್ಕೂ ಬಂದಿರುತ್ತದೆ. ಆದರೇ, ಅಷ್ಟು ಸೂಕ್ಷ್ಮವಾಗಿ ಗಮನಿಸಿರುವುದಿಲ್ಲವೆಂಬುದು ನನ್ನ ವಿಶ್ವಾಸ. ಹಾಗಾಗಿಯೇ, ತಮ್ಮ ಹತ್ತು ನಿಮಿಷಗಳನ್ನು ನನ್ನ ಮಾತಿಗೆ ಮೀಸಲಿಡಿ. ದೀಪಾವಳಿಯ ಆಚರನೆಯನ್ನೇ ತೆಗೆದುಕೊಂಡು ಪರಿಶೀಲಿಸೋಣ. ನೀವು ನಿಮ್ಮ ಬಾಲ್ಯದ ದೀಪವಾಳಿಯನ್ನೊಮ್ಮೆ ನೆನಪಿಸಿಕೊಳ್ಳಿ, ಅದನ್ನು ಈಗ ಆಚರಿಸುತ್ತಿರುವುದಕ್ಕೆ ಹೋಲಿಕೆ ಮಾಡಿನೋಡಿ.

ನನ್ನ ಬಾಲ್ಯದ ದೀಪಾವಳಿಯನ್ನೊಮ್ಮೆ ಹಂಚಿಕೊಳ್ಳುತ್ತೇನೆ. ನಮ್ಮಲ್ಲಿ ಆಯುಧ ಪೂಜೆ ದೊಡ್ಡ ಹಬ್ಬ ಹಾಗಾಗಿ, ದೀಪಾವಳಿಯೆಂದರೆ ಬೇರೆಯವರ ಅಂದರೆ ನೆಂಟರಿಷ್ಟರ ಮನೆಗೆ ಹೋಗುವುದು ವಾಡಿಕೆ. ಆಯುಧಪೂಜೆಗೆ ನಮ್ಮಲ್ಲಿಗೆ ಅವರೆಲ್ಲರೂ ಬಂದಿರುವ ಕಾರಣ ಕೂಡ ಒಂದು. ನಮ್ಮಲ್ಲಿ ದೀಪಾವಳಿಯ ಅಮವಾಸ್ಯೆಯ ದಿನದಂದು, ಸಂಜೆಯ ವೇಳೆಗೆ ಮದ್ದುಮೆಳೆ ಎಂಬುದನ್ನು ತರುತ್ತೇವೆ. ಅದರ ಕಾರಣವನ್ನು ಈ ಹಿಂದೆ ಒಮ್ಮೆ ಬರೆದಿದ್ದೆ, ದೀಪಾವಳಿ ಅಥವಾ ಕಾರ್ತಿಕ ಮಾಸ ಶುರುವಾದರೆ, ಕಾಲಗಳು ಬದಲಾಗುತ್ತವೆ. ಮುಂಗಾರು ಮುಗಿದು, ಹಿಂಗಾರಿನ ಜೊತೆಗೆ ಚಳಿಗಾಲವೂ ಆರಂಭವಾಗುತ್ತದೆ. ಎಲೆ ಉದುರುವ ಸಮಯವೂ ಬರುತ್ತದೆ. ಈ ಸಮಯದಲ್ಲಿ, ಸೂಕ್ಷ್ಮಜೀವಿಗಳು ಹೆಚ್ಚಾಗುತ್ತವೆ. ಆದ್ದರಿಂದ, ಹಿಂದಿನವರು, ವಿವಿಧ ಔಷಧಿಗುಣಗಳಿರುವ ಎಲೆಗಳನ್ನು ಅಮವಾಸ್ಯೆಯ ದಿನ ಕತ್ತರಿಸಿ, ಮನೆಯ ಸೂರಿಗೆ, ತಿಪ್ಪೆಗೆ, ಕೊಟ್ಟಿಗೆಗಳಿಗೆ ಕಟ್ಟುತ್ತಿದ್ದರು, ಆ ಗಿಡಗಳೆಂದರೇ, ನೇರಳೆ, ಮತ್ತಿ, ಈಚಲು, ಬಿದಿರು, ಸೀಬೆ, ಉತ್ತರಾಣಿ, ಗೌರಿ ಹೂವು, ಭೀಮನ ಹುಲ್ಲು, ಇತ್ಯಾದಿ.,

ಹಬ್ಬದ ದಿನ ದನಕರುಗಳನ್ನು ತೊಳೆದು, ಉಂಬ್ಲಿ ಹಂಬನ್ನು ದನಗಳಿಗೆ ಕಟ್ಟುತ್ತಾರೆ. ತದನಂತರ ಎಣ್ಣೆ ಹಚ್ಚಿ ಸ್ನಾನ ಮಾಡಿ ಕಜ್ಚಾಯ ಸಿಹಿ ಊಟಮಾಡುವುದು ವಾಡಿಕೆಯಾಗಿತ್ತು. ಪಟಾಕಿಯೆಂದರೆ, ಕಲ್ಲಿನಿಂದ ಕೆಚ್ಚುವ ಪಟಾಕಿ, ಸುರ್ ಸುರ್ ಬತ್ತಿ, ಹೆಚ್ಚೆಂದರೆ ಒಂದು ಲಕ್ಷ್ಮಿ ಪಟಾಕಿ, ಒಂದೆರಡು ಆನೆ ಪಟಾಕಿ, ಈ ಅಟಮ್ ಬಾಂಬ್, ರಾಕೆಟ್‍ಗಳ ಸುದ್ದಿಯೇ ಇರಲಿಲ್ಲ. ನಮ್ಮೂರು ಕೊಣನೂರಿನಿಂದ ಸುಮಾರು ನಾಲ್ಕು ಕಿಮಿ ಇತ್ತು. ಕೊಣನೂರು ಹೋಬಳಿಯ ಕೇಂದ್ರವಾದರೂ ಅಲ್ಲಿ ಬಸ್ ಸ್ಟಾಂಡ್ ಎದುರಿನ ಶೆಟ್ಟರ ಅಂಗಡಿಯಲ್ಲಿ ಬಿಟ್ಟರೇ ಬೇರೆಲ್ಲೂ ಪಟಾಕಿಗಳು ಸಿಗುತ್ತಿರಲಿಲ್ಲ. ನಮ್ಮೂರಿನ ಅಂಗಡಿಯವರು ಅಲ್ಲಿಂದ ಸ್ವಲ್ಪ ತಂದು ಮಾರುತ್ತಿದ್ದರು. ಪಟಾಕಿ ಹೊಡೆಯುವ ಕೋವಿಗೆ ಮೂರು ರೂಪಾಯಿ ಇರುತ್ತಿತ್ತು, ಅದಕ್ಕೆ ಮೂರು ರೂಪಾಯಿ ಕೊಡುವುದಕ್ಕಿಂತ ಕೆಚ್ಚುವ ಪಟಾಕಿಯನ್ನು ತೆಗೆದುಕೊಂಡು ಕಲ್ಲಲ್ಲಿ ಕೆಚ್ಚಿದರೆ ಆಯಿತೆಂದು ಕೆಚ್ಚುತ್ತಿದ್ದೆವು, ಕೆಲವೊಮ್ಮೆ ನಟ್ ಮತ್ತು ಬೋಲ್ಟ್ ನಡುವೆ ಪಟಾಕಿಯನ್ನು ಸೇರಿಸಿ ಕಲ್ಲಿನ ಅಥವಾ ಗಟ್ಟಿ ನೆಲಕ್ಕೆ ಕೆಚ್ಚುತ್ತಿದ್ದೆವು. ದೊಡ್ದವರು (ವಯಸ್ಸಿನಲ್ಲಿ) ಪಟಾಕಿ ಹೊಡೆದ್ದದ್ದನನ್ನು ನಾನು ಕಂಡೇ ಇಲ್ಲ. ಪಟಾಕಿ ಮಕ್ಕಳಿಗೆ ಮೀಸಲೆಂದರೂ ತಪ್ಪಿಲ್ಲ.
ಆದರೇ ಈಗ ಆಗುತ್ತಿರುವ ವಿದ್ಯಾಮಾನಗಳೇ ಬೇರೆ. ನಾನು ಅದರಲ್ಲಿಯೂ ಬೆಂಗಳೂರಿನಲ್ಲಿ ನೋಡುವಾಗ ಮಕ್ಕಳಿಗಿಂತ ದಾಂಡಿಗರೇ ಮುಕ್ಕಾಲು ಚಡ್ಡಿ ಹಾಕಿಕೊಂಡು ಉದ್ದುದ್ದ ರಾಕೇಟ್, ದೊಡ್ಡದಾಗಿ ಶಬ್ಧ ಬರುವ ಪಟಾಕಿ ಹೊಡೆಯುತ್ತಿದ್ದಾರೆ. ಪಟಾಕಿಯನ್ನು ನಾನು ಮಾಲಿನ್ಯದ ಕುರಿತಾಗಿ ಹೇಳಿದರೇ ಕೆಲವರಿಗೆ ಕೋಪ ಬರುತ್ತದೆ ಮತ್ತು ವಾದಕ್ಕಿಳಿಯುತ್ತಾರೆ. ಬೆಂಗಳೂರಿನಂತಹ ಹೊಗೆ ನಗರದಲ್ಲಿ ದೀಪಾವಳಿಯ ಸಮಯದಲ್ಲಿ ನಾಲ್ಕೈದು ದಿನ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗುತ್ತದೆ. ಮತ್ತೊಂದು ವಾದವೆಂದರೇ, ಧರ್ಮ ವಿರೋಧಿಗಳು ಎಂಬಂತೆ ಬಿಂಬಿಸುವುದು, ಅಥವಾ ಬೇರೆ ಧರ್ಮದವರು ಮಾಡುವ ಮಾಲಿನ್ಯಕ್ಕೆ ನಿಮ್ಮ ಉತ್ತರವೇನು? ಎನ್ನುವುದು. ಪರಿಸರ ಮಾಲಿನ್ಯ ಒಂದೆಡೆಗೆ ಆದರೇ, ಸುರಕ್ಷತೆ ಮತ್ತೊಂದು. ನಾನು ಕಳೆದ ಮೂರು ವರ್ಷದಿಂದ ಗಮನಿಸುತ್ತಾ ಬಂದಿದ್ದೇನೆ. ನನ್ನ ಮಗಳಿಗೆ 2 ವರ್ಷ ತುಂಬಿದೆ, ಮೊದಲನೆ ದೀಪಾವಳಿಯಲ್ಲಿ ಅವಳಿಗೆ ಕೇವಲ 3 ತಿಂಗಳಾಗಿತ್ತು. ಈ ಮೂರು ವರ್ಷದಲ್ಲಿಯೂ ಈ ಹಬ್ಬದ ಸಮಯದಲ್ಲಿ ಕಣ್ಮುಚ್ಚಿ ಮಲಗುತ್ತಿಲ್ಲ. ಶಬ್ದಕ್ಕೆ ಬೆಚ್ಚಿ ಬೀಳುತ್ತಾಳೆ. ಇದೇ ರೀತಿ ವಯಸ್ಸಾದವರ ಕಥೆಯೂ ಹೌದು. ಪಕ್ಕದ ಮನೆಯವ ನಾಯಿಯ ಗೋಳಂತೂ ಹೇಳುವಂತಿಲ್ಲ. ಪಟಾಕಿ ಸದ್ದಿಲ್ಲದೇ ಕೂಡ ಹೊಡೆಯಬಹುದು, ಮನೆ ಮೇಲಕ್ಕೆ ಯುದ್ದ ವಿಮಾನ ಬಂದು ಅಪ್ಪಳಿಸಿದಂತೆ ಸದ್ದು ಮಾಡುವುದು ಯಾವ ಧರ್ಮಾಚಾರಣೆ? ಮುಂಜಾನೆ ಐದು ಗಂಟೆಗೆ ಎದ್ದು ಪಟಾಕಿ ಹೊಡೆಯಬೇಕೇ? ರಾತ್ರಿ ಹನ್ನೆರಡಾದರೂ ಹೊಡೆಯುತ್ತಿರಬೇಕೆ? ರಸ್ತೆಯಲ್ಲಿ ನಡೆಯುವಾಗ ಯಾವ ಕಡೆಯಿಂದ ಬಂದು ಅಪ್ಪಳಿಸುತ್ತದೆ ಎಂಬ ಭಯದಿಂದ ನಡೆಯಬೇಕು. ಪಟಾಕಿ ಹೊಡೆದು ರಸ್ತೆಯಲ್ಲ ಗಲೀಜು ಮಾಡಿದವರು, ಕನಿಷ್ಟ ಸೌಜನ್ಯವೂ ಇಲ್ಲದೇ ಇರುವುದು ವಿಪರ್ಯಾಸ. ಮುಂಜಾನೆ ಪೌರಕಾರ್ಮಿಕರು ರಸ್ತೆ ಗುಡಿಸುವಾಗ ಯೋಚನೆ ಬಂತು. ಅವರ ಮನೆಯಲ್ಲಿ ಪಟಾಕಿ ಹೊಡೆದಿದ್ದರೋ ಇಲ್ಲವೋ ಉಳ್ಳವರು ಹೊಡೆದ ಪಟಾಕಿಯ ಕಸವನ್ನು ಗುಡಿಸಬೇಕು.

ದೀಪಗಳು ಕೂಡ ಮರೆಯಾಗಿ ಸಿರಿಯಲ್ ಸೆಟ್ ಹಾಕಿ ಅದೇ ಬೆಳಕು ಎಂದು ಭ್ರಮಿಸುತ್ತಿದ್ದೇವೆ. ದೀಪಗಳು ಕೂಡ ಚೈನಾದಿಂದ ಬಂದಿರುವುದು ದುರಂತವಾಗಿದೆ. ಮಣ್ಣಿನ ದೀಪಗಳನ್ನು ಅಮ್ಮ ಕಾರ್ತಿಕ ಮುಗಿದ ತಕ್ಷಣ ತೆಗೆದಿಟ್ಟು, ಮುಂದಿನ ವರ್ಷದ ತನಕ ಜೋಪಾನವಾಗಿರಿಸುತ್ತಿದ್ದರು. ಪ್ರತಿ ಧರ್ಮವೂ ಪರಿಸರಕ್ಕೆ ಹೆಚ್ಚಿನ ಒತ್ತನ್ನು ನೀಡಿದೆ. ಅದನ್ನು ಮರೆತು ಅದನ್ನೇ ನಾಶ ಮಾಡುವ ಹಬ್ಬಗಳು ಕಡಿಮೆಯಾಗಲಿ. ವಿವಿಧತೆಯಲ್ಲಿ ಏಕತೆ ಎಂಬಂತೆ ನಮ್ಮೂರಿನಲ್ಲಿ ಈ ಹಬ್ಬದಂದು, ಆಚಾರರು, ಮಡಿವಾಳರು, ದಾಸಯ್ಯನ ಮನೆಯಿಂದ ಬೂದಿ ತಂದು ಮಿಶ್ರಣ ಮಾಡಿ ರಂಗೋಲಿ ಬಿಡುತ್ತೇವೆ. ನಮ್ಮಲ್ಲಿದ್ದ ಸಂಪ್ರದಾಯಗಳನ್ನು ಮೂಲೆಗುಂಪಾಗಿಸಿ ನಮಗೆ ಬೇಕಿರುವ ಮೋಜುಮಸ್ತಿಗೆ ಧರ್ಮದ ಬಣ್ಣ ಹಚ್ಚುತ್ತಿರುವುದಕ್ಕೆ ಏನು ಹೇಳಬೇಕು!

12 ಅಕ್ಟೋಬರ್ 2019

ನಮ್ಮ ಬದುಕಿಗೆ ನಾವೇ ಗುರುಗಳು: ಕಲಿಯುವ ಮುನ್ನ ಎಚ್ಚರ


                                                           Image result for self assessment
ನಮ್ಮ ಆಲೋಚನೆಗಳು ನಮ್ಮನ್ನು ಕಾಡಿದಷ್ಟು, ತಿದ್ದಿದಷ್ಟು, ತೀಡಿದಷ್ಟು ಮತ್ತಾವುದೂ ನಮ್ಮನ್ನು ಕಾಡುವುದಿಲ್ಲ. ಜೀವನದ ಪಯಣದಲ್ಲಿ ಯಾವುದು ಸರಿ, ಯಾವುದು ತಪ್ಪು, ಎಡವಿದ್ದೆಲ್ಲಿ? ಬಿದ್ದಿದ್ದೆಲ್ಲಿ? ಬಿದ್ದೇನಾ? ಎದ್ದೇನಾ? ಬಿದ್ದರೇ ಎಲ್ಲಿ ಬಿದ್ದೆ? ಯಾರು ಬೀಳಿಸಿದರು? ಎದ್ದರೇ ಯಾರು ಎತ್ತಿದರು? ಹೀಗೆ ನೂರೆಂಟು ಆಲೋಚನೆಗಳು ನಮ್ಮೊಳಗೆ ಹರಿದಾಡುತ್ತಿರುತ್ತವೆ. ಎಲ್ಲರಿಗೂ ಈ ರೀತಿಯಾಗಿ ಕಾಡುತ್ತದೆಯೇ? ನನ್ನನಿಸಿಕೆ ಪ್ರಕಾರ ಹೌದು. ಆದರೇ, ಎಲ್ಲರೂ ತಮ್ಮನ್ನು ಮುಕ್ತವಾಗಿ ವಿಮರ್ಶೆಗೆ ಒಳಪಡಿಸಿಕೊಳ್ಳುತ್ತಾರೆಯೇ? ಎಂದರೆ ಅದಕ್ಕೆ ನನ್ನ ಉತ್ತರ, ಇಲ್ಲಾ ಸಾಧ್ಯವೇ ಇಲ್ಲ. ನಾನು ಆಗ್ಗಾಗ್ಗೆ, ಪ್ರತಿಪಾದಿಸುವ ಒಂದು ವಿಚಾರವೆಂದರೇ, ಮೊದಲು ನಮಗೆ ನಾವು ಬೆತ್ತಲಾಗಬೇಕು. ಮಡಿವಂತಿಕೆಯ ಸೋಗಿನಿಂದ, ಒಳ್ಳೆತನವೆಂಬ ಅಫೀಮಿನಿಂದ ಹೊರಬರಬೇಕು. ನಾವು ಏನು ಎನ್ನುವುದನ್ನು ನಾವು ಮೊದಲು ಅರಿಯಬೇಕು. ಒಳ್ಳೆಯದು ಕೆಟ್ಟದ್ದು ಎಂಬುದರ ಬಗ್ಗೆ ನನಗೆ ಅಷ್ಟು ಆಸಕ್ತಿಯಿಲ್ಲ. ಇದನ್ನು ನಾನು ಬಹಳಷ್ಟು ಬಾರಿ ಪ್ರಯೋಗಿಸಿದ್ದೇನೆ. ಒಬ್ಬನಿಗೆ ಸರಿಯೆನಿಸಿದ್ದು, ಮತ್ತೊಬ್ಬನಿಗೆ ತಪ್ಪೆನಿಸಬಹುದು. ಇದು ಎಲ್ಲಾ ಹಂತದಲ್ಲಿಯೂ ಹೌದು. ಮಾಂಸಹಾರಿಗೆ ಇಷ್ಟವಾಗುವ ಖಾದ್ಯ, ಸಸ್ಯಹಾರಿಗೆ ಹಿಂಸೆಯೆನಿಸಬಹುದು, ಕೆಲವರಿಗೆ ದೈಹಿಕ ಹಿಂಸೆ ಮಾತ್ರ ಹಿಂಸೆಯೆನಿಸುತ್ತದೆ, ಮಾನಸಿಕ ಹಿಂಸೆ ಏನೂ ಅನಿಸದೆ ಇರಬಹುದು. ಅದು ಅವರವರ ವಿವೇಚನೆಗೆ ಬಿಟ್ಟದ್ದು. 
ನಮ್ಮೊಳಗೆ ನಡೆಯುವ ವಿದ್ಯಮಾನಗಳನ್ನು ನಾವು ಗ್ರಹಿಸಬೇಕು. ಏನು ನಡೆಯಿತ್ತಿದೆಯೆಂಬುದನ್ನು ಅರಿಯಬೇಕು. ಇತ್ತೀಚಿನ ದಿನಗಳಲ್ಲಿ ಗಮನಿಸಿದರೆ, ಅಯ್ಯೋ ಟೈಮ್ ಎಲ್ಲಿದೆ ಸಾರ್, ಎನ್ನವವರೇ ಹೆಚ್ಚು. ಬಿಟ್ಟರೇ, ನಮ್ಮ ಹಣೆಬರಹ, ಟೈಮ್ ಎಂದು ಕೈ ಚೆಲ್ಲವವರಿಗೇನೂ ಕಡಿಮೆಯಿಲ್ಲ. ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲಾಗದೇ ಕಂಗೆಟ್ಟವರು ಮಾತ್ರ ಇದೆಲ್ಲವನ್ನೂ ಹೇಳಬಹುದು. ಕುಡಿತಕ್ಕೆ ದಾಸ್ಯನಾದವನು, ಕುಡಿತವನ್ನು ಕೆಟ್ಟದ್ದು ಎನ್ನಲಾರ, ಅಥವಾ ನಾನು ಕಲಿತು ನನ್ನ ಆರೋಗ್ಯ, ಜೀವನ ಹಾಳಾಗುತ್ತಿದೆ ಎನ್ನುವುದನ್ನು ಒಪ್ಪಲಾರ. ನಾನು ದುಡಿಯುತ್ತೇನೆ, ನಾನು ಕುಡಿಯುತ್ತೇನೆ? ಹೋದರೇ ನನ್ನ ಕಿಡ್ನಿ, ನನ್ನ ಲಿವರ್, ನಾನು ಬೇರೋಬ್ಬರ ದುಡ್ಡಲ್ಲಿ ಕುಡಿದಿಲ್ಲ ಎಂದು ವಾದಿಸುತ್ತಾನೆ. ನಾವು ನಮ್ಮ ತಪ್ಪನ್ನು ಮುಚ್ಚಿಡಲು, ನಾವು ಸರಿಯೆನಿಸಿಕೊಳ್ಳಲು ಬೇರೆಯವರನ್ನು ತಪ್ಪಿತಸ್ಥರನ್ನಾಗಿಸಲು ಪ್ರಯತ್ನಿಸುತ್ತೇವೆ.

ಕಾರಣವಿಲ್ಲದ ಬದುಕೆಲ್ಲಿದೆ? ಕಾರಣವಿಲ್ಲದೆ ಇರಲು ಸಾಧ್ಯವೇ? ಮುಂಜಾನೆ ಬೇಗ ಏಳದೆ ಇರುವುದಕ್ಕೆ ಕಾರಣವಿದೆ, ಕಚೇರಿಗೆ ಲೇಟಾಗಿ ಬರುವುದಕ್ಕೆ ಕಾರಣವಿದೆ. ಕುಡಿಯುವುದಕ್ಕೆ ಸೇದುವುದಕ್ಕೆ ಕಾರಣವಿದೆ. ಸ್ನಾನ ಮಾಡದೇ ಗಲೀಜಾಗಿರುವುದಕ್ಕೂ ಇದೆ. ಮಾಡುವ ಕೆಲಸ ನನ್ನದು, ನಾನು ಮಾಡಲೇಬೇಕೆಂಬ ದೃಢಕಲ್ಪನೆಯೊಂದಿದ್ದರೆ ಈ ಕಾರಣಗಳ ಸರಮಾಲೆ ಹತ್ತಿರವೂ ಸುಳಿಯುವುದಿಲ್ಲ. ನಾನು ನನ್ನನ್ನು ಅತಿಯಾಗಿ ವಿಮರ್ಶೆಗೆ ಒಳಪಡಿಸಿಕೊಳ್ಳುತ್ತೇನೆ. ಕಾರಣ ಸರಳ. ನಾನು ನನ್ನಲ್ಲಾಗುತ್ತಿರುವ ಬದಲಾವಣೆಯನ್ನು ಗಮನಿಸಿದರೆ, ನನ್ನ ಚಿತ್ತ ನನ್ನ ಪ್ರಗತಿಯತ್ತ ಸಾಗುತ್ತದೆ. ಎಷ್ಟೋ ದೂರ ಪಯಣಿಸಿದ ಮೇಲೆ, ನಾನು ದಾರಿ ತಪ್ಪಿದೆಯೆಂದರೇ! ಅಥವಾ ನೀ ಹೋಗುತ್ತಿರುವ ಹಾದಿ ತಪ್ಪೆಂದು ಬೇರೆಯವರು ಹೇಳಿದರೇ ಒಪ್ಪುತ್ತೇವಾ? ಸಾಧ್ಯವೇ ಇಲ್ಲ. 

ದಿನ ಕಳೆದಂತೆ ನಮ್ಮ ಆಸಕ್ತಿಗಳು, ಹವ್ಯಾಸಗಳು ನಮ್ಮಿಂದ ದೂರಾಗುತ್ತವೆ. ಕೆಲಸದ ಒತ್ತಡ, ದುಡಿಮೆ, ಮನೆ, ಸಂಸಾರ ಹೀಗೆ ಏನೇನೋ ಸಮಜಾಯಿಸಿ ಕೊಡುತ್ತೇವೆ. ನನ್ನದೇ ಉದಾಹರಣೆ ಕೊಡುವುದಾದರೇ, ಕಳೆದ ಒಂದೆರೆಡು ವರ್ಷದಲ್ಲಿ, ನಾನು ಓದಿದ್ದು ಕಡಿಮೆ, ಬರೆದಿದ್ದಂತೂ ಶೂನ್ಯ, ನನ್ನ ಹವ್ಯಾಸವೆಂದು ತಿಳಿದಿದ್ದು, ಫೋಟೋಗ್ರಫಿ, ನಾಟಕ ನೋಡುವುದು, ಸುತ್ತಾಡುವುದು, ಚಾರಣ, ಸಂಗೀತ, ಪ್ರವಾಸ, ಇವೆಲ್ಲವೂ ಮಾಯವಾಗಿವೆ. ಮುಂಜಾನೆ ಏಳುವುದು, ಆಫೀಸಿಗೆ ಹೋಗುವುದು ಬರುವುದು, ಅದೇ ಚರ್ಚೆ, ಅದೇ ಮಾತುಕತೆ, ಸಂಪೂರ್ಣವಾಗಿ ದಿನಪತ್ರಿಕೆ ಓದಿಯೇ ಎಷ್ಟೋ ದಿನಗಳಾಗಿವೆ, ಸ್ನೇಹಿತರೊಡನೆ ಕುಳಿತು ಹರಟೆ ಹೊಡೆದು ಮನಸ್ಸಾರೆ ನಕ್ಕಿ ಎಷ್ಟೋ ದಿನಗಳಾಗಿವೆ. ಇವೆಲ್ಲವೂ ರಾತ್ರೋರಾತ್ರಿ ಆದ ಬೆಳವಣಿಗೆಗಳಲ್ಲ, ಬೆಳೆಯುತ್ತ ಬೆಳೆಯುತ್ತ ಬಂದವುಗಳು. ಯಾಂತ್ರಕತೆಯ ಬದುಕು ನಮ್ಮದಾದಾಗ ಜೀವನದ ಮೇಲೆ ತಾತ್ಸಾರ ಮೂಡುತ್ತದೆ. ಇನ್ನೇನು ಬದುಕು ಮುಗಿಯಿತು ಎನಿಸುತ್ತದೆ. ನಕರಾತ್ಮಕತೆ ನಮ್ಮನ್ನು ಆಳುತ್ತದೆ. ಕ್ರಿಯಾತ್ಮಕತೆಗೆ ಹಾದಿಯೇ ಇರುವುದಿಲ್ಲ. ಇದ್ದರೂ ಯೋಚಿಸುವುದಿಲ್ಲ. 

ಇದೆಲ್ಲವುದಕ್ಕೂ ಪರಿಹಾರವೇನು? ವಯಸ್ಸಾದಂತೆ ನಮಗೆ ಕಾಡುವ ಮತ್ತೊಂದು ಯೋಚನೆಗಳು ಹೀಗಿರುತ್ತವೆ. ಮೊದಲನೆದಾಗಿ, ನಾವು ಕಳೆದ ದಿನಗಳು ಮತ್ತು ಸಂಪನ್ಮೂಲಗಳು. ಎರಡನೆಯದು, ನಾವು ಪಡೆದ ಲಾಭ ನಷ್ಟ. ನನ್ನ ಸ್ವಂತ ಅನುಭವವನ್ನು ಇಲ್ಲಿಡುತ್ತೇನೆ. ನಾನು ಕನಿಷ್ಟ ಮೂರು ತಿಂಗಳಿಗೊಮ್ಮೆ ನನ್ನ ಮೊಬೈಲಿನಲ್ಲಿರುವ ಎಲ್ಲರಿಗೂ ಫೋನ್ ಮಾಡಿ ಅಥವಾ ಸಂದೇಶ ಕಳುಹಿಸಿ, ಹೇಗಿದ್ದೀರಿ, ಸುಮ್ಮನೆ ಕರೆ ಮಾಡಿದೆ ಅಂತಾ ಮಾಡುತ್ತಿದ್ದೆ. ಸ್ನೇಹಿತರ ಯೋಗ ಕ್ಷೇಮ ವಿಚಾರಿಸುವ ಕ್ರಮವಾಗಿತ್ತು. ನಾನು ಯಾವುದೇ ಹೊರ ಊರಿಗೆ ಹೋದರೇ, ಅಲ್ಲಿ ಯಾವ ಸ್ನೇಹಿತರಿದ್ದಾರೆ, ಅವರನ್ನು ಮಾತನಾಡಿಸುವುದು, ಜೊತೆಗೆ ಕೂತು ಊಟ ಮಾಡುವುದು ಸಾಮಾನ್ಯವಾಗಿತ್ತು. ಇತ್ತೀಚೆಗೆ, ನನ್ನೊಳಗೆ ಆದ ಬದಲಾವಣೆ, ನಾನು ಕರೆ ಮಾಡ್ತೀನಿ, ಕೇಳ್ತೀನಿ, ಅವರುಗಳು ಯಾರೊಬ್ಬರೂ ಮಾಡುವುದಿಲ್ಲವಲ್ಲ. ನೋಡೋಣ, ನಾನು ಮಾಡುವುದೇ ಬೇಡವೆಂದು ತೀರ್ಮಾನಿಸಿದೆ. ಸುಮಾರು 95% ಸ್ನೇಹಿತರು ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚನಿಂದ ನನಗೆ ಕರೆಯೇ ಮಾಡಿಲ್ಲ, ಬಿಡುವಿಲ್ಲದೇಯೂ ಇರಬಹುದು. ನಾನು ಈವರೆಗೂ ಭಾವನಾತ್ಮಕವಾಗಿ ಸ್ನೇಹಿತರಿಗಾಗಿ ಪರದಾಡಿದ್ದು ತಪ್ಪಾ? ನನ್ನ ಅನುಪಸ್ಥಿತಿ ಅವರಿಗೆ ಕಾಡುವುದಿಲ್ಲವೇ ಹೀಗೆ ಆಲೋಚನೆಗಳು ಹರಿದಾಡಿದವು. 

ಪ್ರತಿಯೊಬ್ಬರಿಗೂ ತಮ್ಮದೇ ಆದ ಆದ್ಯತೆಗಳಿರುತ್ತವೆ. ನಾವು ಯಾವುದನ್ನು ಯಾರ ಮೇಲೂ ಹೇರಬಾರದು ಮತ್ತು ನಿರೀಕ್ಷಿಸಲೂ ಬಾರದು. ನಮ್ಮ ಆತ್ಮಕ್ಕೆ ಮನಸ್ಸಿಗೆ ತೃಪ್ತಿಕೊಡಬೇಕು. ಮನಸ್ಸು ಮತ್ತು ಮೆದುಳಿಗೆ ಆಗ್ಗಾಗ್ಗೆ ಆಹಾರ ಕೊಡುತ್ತಿರಬೇಕು. ಮೆದುಳಿಗೆ ಆಹಾರವೆಂದರೆ, ಹೊಸ ಪುಸ್ತಕ, ಹೊಸ ಜನರ ಭೇಟಿ, ಮಾಹಿತಿಗಳು. ಮನಸ್ಸಿಗೆಯೆಂದರೆ, ಪ್ರೀತಿ ಪಾತ್ರರೊಂದಿಗೆ ಸಮಯ, ಹವ್ಯಾಸಗಳು. ಯಾವುದನ್ನು ಹೆಚ್ಚು ಅಂತರವಿರುವಂತೆ ಮಾಡಬಾರದು. ನಮ್ಮ ಹಾದಿಯನ್ನು ನಾವು ಆಗ್ಗಾಗ್ಗೆ ಪರೀಕ್ಷಿಸಿಕೊಳ್ಳುತ್ತಿರಬೇಕು. ಆ ಹಾದಿಯಲ್ಲಿ ಮತ್ತೊಮ್ಮೆ ಹೆಜ್ಚೆ ಇಟ್ಟಿದ್ದೇನೆ. 

ಗುರುಪಾದ ಬೇಲೂರುರವರ ದೇವರಕಾಡಿನ ಸುತ್ತಾಮುತ್ತಾ ಮತ್ತು ಒಳಗೆ ಹೊರಗೆ!!!!

                                                      
ಸುಮಾರು ವರ್ಷವೇ ಆಗಿತ್ತು, ಕಥೆ ಕಾದಂಬರಿ ಓದಿ. ಬಹುಶಃ ಕೆ. ನಲ್ಲತಂಬಿಯವರು ಅನುವಾದಿಸಿದ್ದ ತಮಿಳಿನ ಕಥೆಗಳನ್ನು ಓದಿದ ನಂತರ ಬೇರಾವ ಪುಸ್ತಕಗಳನ್ನು ಓದಿರಲಿಲ್ಲ. ಅಷ್ಟರಮಟ್ಟಿಗೆ ಸೋಮಾರಿತನ ಸವಾರಿ ಮಾಡಿ ಗೆದ್ದಿದೆ. ಆಫೀಸಿನಲ್ಲಿ, ಹೀಗೆ ಸಹದ್ಯೋಗಿಗಳೊಂದಿಗೆ ಮಾತನಾಡುವಾಗ ನಮ್ಮ ಸಂಸ್ಥೆಯ ಮುಖ್ಯಸ್ಥರಾದ ಶ್ರೀಯುತ ಗುರುಪಾದಸ್ವಾಮಿಯವರ ಸಾಹಿತ್ಯಾಸಕ್ತಿ ಮತ್ತು ಸಾಹಿತ್ಯ ಕೃಷಿಯ ಬಗ್ಗೆ ಮಾತು ಬಂತು. ಶ್ರೀಯುತರು, ಸಂಸ್ಥೆಯ ಎಲ್ಲರಿಗೂ ಪುಸ್ತಕ ನೀಡಿ, ಇದನ್ನು ಓದಿ ಪ್ರತಿಕ್ರಿಯಿಸಿ ಎಂದು ಕೇಳಿದ್ದರೆಂದು. ಅವರು ಪುಸ್ತಕ ನೀಡುವ ಸಮಯದಲ್ಲಿ ನಾನಿಲ್ಲದೇ ಇದ್ದುದ್ದರಿಂದ ಪುಸ್ತಕ ಸಿಗಲಿಲ್ಲ. ಪುಸ್ತಕವನ್ನು ಯಾರಾದರೂ ಓದಿದ್ದಾರಾ? ಹೇಗಿದೆ? ಎಂದು ತಿಳಿದುಕೊಳ್ಳುವ ಕುತೂಹಲವೂ ಹೆಚ್ಚಾಯಿತು. ಹೀಗೆ ಪ್ರಯಾಣ ಮಾಡುವಾಗ ಮೊಬೈಲಿನಲ್ಲಿ ಲೇಖಕರ ವೆಬ್‍ಸೈಟ್ ನೋಡಿದೆ. ಕೆಲವು ಕವನಗಳು ಇಷ್ಟವಾದವು. ಅವರು ಬರೆದಿರುವ ಕಥೆಗಳನ್ನು ಯಾಕೆ ಓದಬಾರದೆಂದು ನಿರ್ಧರಿಸಿ, ಫೀಲ್ಡ್ ಇಂದ ಬಂದೊಡನೆ, ಭೇಟಿ ಮಾಡಿ, ಸರ್, ತಾವು ಬರೆದಿರುವ ಪುಸ್ತಕ ಬೇಕಿತ್ತು ಎಂದೆ. ಹೌದಾ? ಯಾವುದು? ಎಂದರು. ನನಗೆ ಪುಸ್ತಕದ ಹೆಸರೇ ಗೊತ್ತಿಲ್ಲ. ಸರಿ, ಇಲ್ಲಿ ಇಲ್ಲ, ನಾಳೆ ತಂದು ಕೊಡುತ್ತೇನೆಂದರು. ನಾನು ಹೊರಗೆ ಬಂದೆ. 

ಅವರ ರೂಮಿನಿಂದ ಹೊರಗಡೆ ಬಂದಮೇಲೆ, ನನ್ನ ದಡ್ಡತನವನ್ನು ಎಲ್ಲಾ ಕಡೆಯೂ ಪ್ರದರ್ಶಿಸುತ್ತಿರುವುದರ ಬಗ್ಗೆ ಕೋಪ ಬಂತು. ನಾನೊಬ್ಬ ಸಾಹಿತ್ಯಾಸಕ್ತನಾಗಿ ಪುಸ್ತಕ ಕೇಳಿದ್ದರೂ, ಪುಸ್ತಕದ ಹೆಸರೇ ತಿಳಿಯದೇ ಒಬ್ಬ ಲೇಖಕರನ್ನು ಕೇಳಿದ್ದು ಎಷ್ಟರ ಮಟ್ಟಿಗೆ ಸರಿ? ಇದು, ಸಾಹಿತ್ಯ ಪ್ರೇಮಿಯಾಗಿ ಲೇಖಕರಿಗೆ ಮಾಡಿದ ಅವಮಾನವೆಂಬ ಗೊರಗು ಕೂಡ ಬಂತು. ನನ್ನ ಬಗ್ಗೆ ಏನು ತಿಳಿದುಕೊಂಡರೋ ಏನೋ ಎಂದು ಕೊರಗಿದೆ. ಅದೇನೇ ಇರಲಿ, ನನಗೆ ಪುಸ್ತಕ ಬೇಕು, ಅವರು ಏನು ಬರೆದಿದ್ದಾರೆ? ಹೇಗೆ ಬರೆದಿದ್ದಾರೆಂಬುದನ್ನು ತಿಳಿದುಕೊಳ್ಳಬೇಕು, ಮುಖ್ಯವಾಗಿ ಒಬ್ಬ ವಿಜ್ಞಾನ ಹಿನ್ನಲೆಯವರು ಅದರಲ್ಲಿಯೂ ಇಂಜಿನಿಯರ್ ಆದವರು, ಸರ್ಕಾರಿ ಹುದ್ದೆಯಲ್ಲಿ ಎತ್ತರದ ಸ್ಥಾನದಲ್ಲಿರುವವರು, ಬರೆಯುವುದಕ್ಕೆ ಬಿಡುವು ಹೇಗೆ? ಯಾವ ವಿಚಾರದ ¨ಗ್ಗೆ ಹೀಗೆ ಕೆಲಸವಿಲ್ಲದ ತಲೆಯೊಳಗೆ ನೂರೆಂಟು ತರ್ಲೆಗಳು ಶುರುವಾದವು. ಇದಾದ, ಕೆಲವು ದಿನಗಳ ನಂತರ, ನೀವು ಪುಸ್ತಕ ಕೇಳಿದ್ದೀರಿ ಅಲ್ವಾ? ಮರೆತುಬಿಟ್ಟೆ ಎಂದರು. ಕೆಲಸದ ಒತ್ತಡದಲ್ಲಿ ನೆನಪಿನಲ್ಲಿಡಲು ಸಾಧ್ಯವೇ, ನಾನು ಸುಮ್ಮನಾದೆ. 
ಮೊನ್ನೆ, ನಮ್ಮ ಆಫೀಸಿನ ಅಕೌಂಟ್ಸ್ ವಿಭಾಗದ ಸತೀಶನ ಜೊತೆ ಮಾತನಾಡುತ್ತ ಯಾವುದೋ ಫೈಲ್ ನೋಡುವಾಗ, ದೇವರ ಕಾಡು ಅವರ ಡ್ರಾಯರ್ ಅಲ್ಲಿದ್ದದ್ದು ಕಣ್ಣಿಗೆ ಬಿತ್ತು. “ರೀ, ಸತೀಶ್ ಆ ಪುಸ್ತಕ ತೆಗಿರಿ” ಎಂದೆ. “ಇದಾ ಸಾರ್?”, “ಹೌದು, ಅದೇ.” ಓದುತ್ತಿರಾ ಸಾರ್? “ನೋಡೋಣ ಕೊಡಿ,” ಎಂದೆ. ಇಲ್ಲಿ ಮತ್ತೊಂದು ಪ್ರಮುಖ ವಿಷಯವನ್ನು ಹೇಳಬೇಕು. ನಾನು ಬಹಳ ಗಮನಿಸಿರುವುದು, ಅನೇಕಾ ಸಂಸ್ಥೆಗಳಲ್ಲಿ, ನಮ್ಮ ವೈಯಕ್ತಿಕ, ಆಸೆಗಳೇನು? ಹವ್ಯಾಸಗಳೇನು? ಎಂಬುದರ ಮಾಹಿತಿಯನ್ನು ನಾವು ಹಂಚಿಕೊಂಡಿರುವುದಿಲ್ಲ, ಅವರು ಕೇಳಿರುವುದಿಲ್ಲ. ನನ್ನದೇ ವಿಚಾರವನ್ನು ಹೇಳಬೇಕೆಂದರೂ, ನನ್ನ ಸಾಹಿತ್ಯಾಸಕ್ತಿ, ನಾಟಕ, ಸಿನೆಮಾ, ಪ್ರವಾಸ, ಚಾರಣ, ಫೋಟೋಗ್ರಫಿ, ಸಂಗೀತ, ಜಾನಪದ, ಇತ್ಯಾದಿ ಇತ್ಯಾದಿ ಇದಾವುದೂ ತಿಳಿದಿಲ್ಲ ಅಥವಾ ತಿಳಿಸುವ ಅವಕಾಶವೂ ಸಿಕ್ಕಿರುವುದಿಲ್ಲ. ಇರಲಿ ವಿಷಯಕ್ಕೆ ಬರೋಣ. ಪುಸ್ತಕವನ್ನು ತಂದು ಮನೆಯಲ್ಲಿ ಓದಲು ಕುಳಿತೆ, ಹಿಂದಿನ ದಿನ ಹಬ್ಬದ ಪ್ರಯಾಣ, ಆಯಾಸದಿಂದಾಗಿ ಓದಲಾಗಲಿಲ್ಲ. ನಿದ್ದೆ ಹತ್ತಿತು. 

ಮಾರನೆಯ ದಿನ ಪುಸ್ತಕ ತೆಗೆದೆ. ನನ್ನದೊಂದು ಕೆಟ್ಟ ಅಭ್ಯಾಸವೆಂದರೇ, ಪುಸ್ತಕ ಓದಿಸಿಕೊಳ್ಳುವಂತಿದ್ದರೇ ಮಾತ್ರ ಓದುವುದು. ಇಲ್ಲದಿದ್ದರೇ ಬದಿಗಿಡುವುದು. ಇದು ಎಲ್ಲರಿಗೂ ಹೌದು ಎನಿಸುತ್ತದೆ. ಮೊದಲೇ ಹೇಳಿದಂತೆ, ನಾನು ಓದುವುದನ್ನೇ ಮರೆತು ಬಿಟ್ಟೆ ಎನ್ನುವ ಹಂತಕ್ಕೆ ತಲುಪಿದ್ದೇನೆ. ಈ ಪುಸ್ತಕ ಸುಮಾರು 190 ಪುಟಗಳಿವೆ, ಎಷ್ಟು ದಿನವಾಗಬಹುದು? ನೆಚ್ಚೆನ ಲೇಖಕರ ಪುಸ್ತಕಳನ್ನು ಕೂತಲ್ಲಿಂದ ಏಳದೇ ಓದಿದ ದಿನಗಳಿವೆ, ಸತತವಾಗಿ 10-12 ಗಂಟೆಗಳ ಕಾಲ ಅಲ್ಲಾಡದೇ ಓದಿದ ದಿನಗಳಿವೆ. ತೇಜಸ್ವಿಯವರ ಬಹುತೇಕ ಪುಸ್ತಕಗಳು ಅದರಲ್ಲಿಯೂ ಜುಗಾರಿ ಕ್ರಾಸ್, ಕಾರಂತರ ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು, ಅಳಿದ ಮೇಲೆ, ಹುಚ್ಚು ಮನಸ್ಸಿನ ಹತ್ತು ಮುಖಗಳು, ಕುವೆಂಪುರವರ ಮಲೆನಾಡಿನ ಚಿತ್ರಗಳು, ಹೆಗ್ಗಡತಿ, ಮದುಮಗಳು, ಭೈರಪ್ಪರವರ ದೂರ ಸರಿದರು, ದಾಟು, ರವಿ ಬೆಳಗೆರೆಯವರ ಹೇಳಿ ಹೋಗು ಕಾರಣ, ಯಂಡಮೂರಿಯವರ ಮುಂಗಾರಿನ ಮುಸ್ಸಂಜೆ, ಖುಷ್ವಂತ್ ಸಿಂಗ್‍ರ ದಿ ಕಂಪೆನಿ ವಿತ್ ವುಮೆನ್, ಟ್ರೈನ್ ಟು ಪಾಕಿಸ್ತಾನ್, ತರಾಸುರವರ ದುರ್ಗಾಮಸ್ತಾನ, ಹೀಗೆ ಹತ್ತು ಹಲವು ಇವೆ. ಹೊಸಬರ ಪುಸ್ತಕಗಳನ್ನು ಓದುವಾಗ ಅದೇನೋ ಒಂದು ರೀತಿಯ ಅಳುಕು ಬರುತ್ತದೆ. ನಾವೇನೂ ಬರೆದಿರುವುದಿಲ್ಲ, ಆದರೂ ಅವರೇನೂ ಬರೆದಿರುತ್ತಾರೆ ಮಹಾ ಎಂಬಂತೆ. ಆದರೂ, ಈ ಪುಸ್ತಕ ಬಹಳ ಚೆನ್ನಾಗಿಯೇ ಓದಿಸಿಕೊಂಡು ಹೋಯಿತು, ಸುಮಾರು 190 ಪುಟಗಳನ್ನು, ಕೇವಲ 5-6 ಗಂಟೆಗಳಲ್ಲಿ ಎರಡು ಹಂತಗಳಲ್ಲಿ ಓದಿ ಮುಗಿಸಿದೆ. 

ಪುಸ್ತಕದ ಮುನ್ನುಡಿಯನ್ನು ನೋಡಿದೆ. ಕೆಲವರು ಮಾತ್ರ ಪುಸ್ತಕವನ್ನು ಸಂಪೂರ್ಣವಾಗಿ ಗ್ರಹಿಸಿ ಅದಕ್ಕೆ ತಕ್ಕನಾಗಿ ಬರೆದಿರುತ್ತಾರೆ. ನಾನು ಬಹಳ ಪ್ರಮುಖವಾದ ವಿಷಯವನ್ನು ತಮ್ಮ ಮುಂದಿಡುತ್ತಿದ್ದೇನೆ. ನಾನು ಈ ತನಕ ಹತ್ತಾರು ಪುಸ್ತಕಗಳನ್ನು ಓದಿದ್ದರೂ, ಯಾವುದಕ್ಕೂ ವಿಮರ್ಶೆ ಬರದಿಲ್ಲ. ನನಗೆ ತಿಳಿದ ಅಥವಾ ಅನಿಸಿದ್ದನ್ನು ನನ್ನ ಸ್ನೇಹಿತರ ಜೊತೆಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದೇನೆ. ಬಹುತೇಕ, ನುಡಿಗಳು ಹೀಗಿರುತ್ತವೆ “ಓದಲೇ ಬೇಕಾದ ಕೃತಿ”, ಮಿಸ್ ಮಾಡಿಕೊಳ್ಳಬೇಡಿ ಎಂದು. ಆದರೇ, ಈ ಪುಸ್ತಕದ ಕುರಿತು ಸ್ವಲ್ಪ ಹೆಚ್ಚಿಗೆ ಮಾತನಾಡೋಣ ಎನಿಸಿತು. ಅದಕ್ಕೆ, ಮೂಲ ಕಾರಣ, ಲೇಖಕರು ನಮ್ಮ ಮುಖ್ಯಸ್ಥರೆಂಬುದು ಒಂದಾದರೇ, ಬರವಣಿಗೆಯ ಹಿಂದಿರುವ ಉದ್ದೇಶ ಮತ್ತೊಂದು. ಪುಸ್ತಕದಲ್ಲಿ, ಐದು ಕಥೆಗಳಿವೆ. ದೇವರ ಕಾಡು, ಡಾಲರ್ ಸಿಕ್ಕಿದ ಕಥೆ, ಅನಂತ, ಹೊನ್ನಂಗಿಡಿ, ಮಿಂಚಿನಬಳ್ಳಿ. ನಾನು ಗಮನಿಸಿದ ಒಂದಿಷ್ಟು ಅಂಶಗಳನ್ನು ತಮ್ಮ ಮುಂದಿಡುತ್ತಿದ್ದೇನೆ. ಇದನ್ನು ಎರಡು ರೀತಿಯಲ್ಲಿ ಹೇಳಬಹುದು, ಒಂದು ಒಟ್ಟಾರೆಯಾಗಿ ಲೇಖಕರು ಯಾವ ಹಿನ್ನಲೆಯಲ್ಲಿ, ಏನನ್ನು ಹೇಳಲು ಬಯಸಿದ್ದಾರೆ? ಮತ್ತೊಂದು, ಒಂದೊಂದು ಕಥೆಯಲ್ಲಿಯೂ ಯಾವುದೆಲ್ಲ ಅಂಶಗಳನ್ನು ನಮಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. 

ನಾನು ಎರಡೂ ರೀತಿಯಲ್ಲಿಯೂ, ವಿವರಿಸಲು ಪ್ರಯತ್ನಿಸುತ್ತೇನೆ, ಒಟ್ಟಾರೆಯಾಗಿ ಹೇಳಬೇಕೆಂದರೇ, ಲೇಖಕರು ಪರಿಸರದ ಜೊತೆಗೆ ಸಹಭಾಳ್ವೆಯಿರಬೇಕೆಂಬುದನ್ನು ಮತ್ತು ಪ್ರಕೃತಿಯಲ್ಲಿ ಸಮತೋಲನ ಕಾಪಾಡುವ ಕಾರ್ಯ ನಿರಂತರವಾಗಿದೆ, ನಾವು ಹಿರಿಯರಿಂದ ಬಂದಿರುವುದನ್ನು ಮುಂದುವರೆಸುತ್ತಾ ಹೋಗಬೇಕೇ ಹೊರತು, ಪ್ರಕೃತಿಯನ್ನೇ ಬದಲಾಯಿಸುತ್ತೇನೆಂದಲ್ಲ ಎಂಬ ತರ್ಕವನ್ನು ಅಚ್ಚುಕಟ್ಟಾಗಿ ಬಿಂಬಿಸಿದ್ದಾರೆ. ಅದರ ಜೊತೆಗೆ, ಪ್ರೀತಿಯನ್ನು ಹಂಚಬೇಕೆಂಬುದು, ಪ್ರೀತಿ ಹಂಚಿದಷ್ಟೂ ಹೆಚ್ಚೆಚ್ಚೂ ಸಿಗುತ್ತದೆಯೆಂಬುದನ್ನು ತಿಳಿಸಿದ್ದಾರೆ. ಅಚ್ಚರಿಯ ವಿಷಯವೆಂದರೇ, ಮೊದಲನೇ ಕಥಾಸಂಕಲನದಲ್ಲಿ ಐದು ಕಥೆಗಳು ವಿಭಿನ್ನಾ ಮಾದರಿಯಲ್ಲಿರುವುದು. 

ದೇವರ ಕಾಡಿನಲ್ಲಿ, ಸಾಹಸಮಯ, ಸಮಾಜಮುಖಿಯ ಆಶಯಗಳಿದ್ದರೆ. ಡಾಲರ್ ಸಿಕ್ಕ ಕಥೆಯಲ್ಲಿ, ಹಾಸ್ಯಪ್ರಜ್ಞೆ ಎದ್ದು ಕಾಣುತ್ತದೆ, ಹಾಸ್ಯದಿಂದಲೇ ನೀತಿಯನ್ನು ರವಾನಿಸಿರುವುದು ಮೆಚ್ಚುಗೆಯಾಗುತ್ತದೆ. ಅನಂತದಲ್ಲಿ ವೈಜ್ಞಾನಿಕತೆಯ ಜೊತೆಗೆ ಸಾಂಪ್ರಾದಾಯಿಕತೆಯನ್ನು ಜೋಡಿಸಿರುವ ರೀತಿ ಅಚ್ಚರಿಯ ಜೊತೆಗೆ ಯಾವುದೋ ಬೇರೆ ಜಗತ್ತಿನಿಂದ ಭೂಮಿಯನ್ನು ನೋಡುವ ಕಾಲ್ಪನಿಕ ಜಗತ್ತನ್ನು ಕೊಡುತ್ತದೆ. ಹೊನ್ನಂಗಿಡಿ, ನಮ್ಮ ಬಾಲ್ಯವನ್ನು, ನಮ್ಮ ಸಂಸ್ಕøತಿ, ಸಂಪ್ರದಾಯವನ್ನು ಸೂಚಿಸಿ, ಭಾವನಾತ್ಮಕತೆಗೆ ದೂಡುತ್ತದೆ. ಕೊನೆಯದಾಗಿ, ಮಿಂಚಿನಬಳ್ಳಿ ಸಸ್ಪೆನ್ಸ್ ಕಥೆಯೆಂದರೂ ತಪ್ಪಿಲ್ಲ, ಜಿಎಂ, ಬಿಟಿ ವಿಚಾರಗಳನ್ನು ಇಟ್ಟುಕೊಂಡು ಅಲ್ಲೊಂದು ನಿಗೂಢತೆಯನ್ನು ಕಾಪಾಡುತ್ತಾ ಹೋಗುವುದು ಓದುಗನನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದೆಲ್ಲದರ ಹಿಂದಿರುವ ಪರಿಸರ ಕಾಳಜಿಗೆ ಧನ್ಯವಾದಗಳು. ಓದಲೇಬೇಕಾದ ಪುಸ್ತಕವೆನ್ನುವುದಕ್ಕಿಂತ ಬೇರೆ ಆಯಾಮದಲ್ಲಿ ಮಂಡನೆಯಾಗಿರುವುದು ಸಂತಸ. ತಮ್ಮ ಮುಂದಿನ ಎಲ್ಲಾ ಸಾಹಿತ್ಯ ಕೃಷಿಗಳಿಗೂ ಶುಭವಾಗಲಿ ಸರ್. 

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...