16 ಆಗಸ್ಟ್ 2020

ನಾ ಕಂಡ ಅಪರೂಪದ ವ್ಯಕ್ತಿ: ಆರ್ ಕೆ ಮೇಷ್ಟ್ರು ಎಂಬ ಬತ್ತದ ಚಿಲುಮೆ!!!



ಬತ್ತದ ಚಿಲುಮೆ ಎಂದಾಗಲೇ ಅರಿಯಬೇಕು. ಆರ್. ಕೆ. ಮೇಷ್ಟ್ರು ಅಥವಾ ಆರ್.ಕೆ. ಎಂಥಲೇ ಹೆಸರುವಾಸಿಯಾದವರ ಕುರಿತು ಈ ಲೇಖನ. ನಾನು ಈ ಹಿಂದೆಯೇ ಹೇಳಿದ ಹಾಗೆ, ಹಿರಿಯರ ಬಗ್ಗೆ ಬರೆಯುವಾಗ ಬಹಳ ಎಚ್ಚರವಹಿಸಬೇಕು. ಅವರ ಸಾಧನೆ ಮತ್ತು ಅವರು ಜೀವಿಸಿದ ಮಾದರಿಯ ಹತ್ತಿರಕ್ಕೂ ಹೋಗದಷ್ಟಿರುತ್ತೇವೆ. ಅಂತಹ ಒಬ್ಬರನ್ನು ನಾನು ಇಂದು ತಮ್ಮ ಮುಂದಿಡುತ್ತಿದ್ದೇನೆ. ಮತ್ತೊಮ್ಮೆ ಹೇಳುತ್ತೇನೆ, ಪರಿಚಯಿಸುತ್ತಿದ್ದೇನೆಂದರೆ ನನ್ನಂತಹ ಮತ್ತೊಬ್ಬ ಮೂಢ ಇರುವುದಿಲ್ಲ ಈ ಜಗದಲ್ಲಿ. ನಾನು ಇಲ್ಲಿ ಹಂಚಿಕೊಳ್ಳುತ್ತಿರುವುದೆಲ್ಲವೂ ನನ್ನ ಅನುಭವ ಮತ್ತು ಅನಿಸಿಕೆಯಷ್ಟೆ. 


ಮೊದಲಿಗೆ ನಾನು ಆರ್.ಕೆ.ಮೇಷ್ಟ್ರ ಬಗ್ಗೆ ಕೇಳಿದ್ದು ನನ್ನ ಎಂಎಸ್ಸಿ ಸಮಯದಲ್ಲಿ ಸ್ನೇಹಿತರಾದ ದ್ವಾರಕೇಶ್ ಮತ್ತು ಲಿಂಗರಾಜುರವರ ಬಗ್ಗೆ. ಪರಿಸರ ನ್ಯಾಯದ ತಕ್ಕಡಿಯಲ್ಲಿ ಎಂಬ ಮಾಧವ ಗಾಡ್ಗೀಲ್ ರವರ ಪುಸ್ತಕವನ್ನು ಓದುವ ಸಮಯದಲ್ಲಿ. ನಾನು ಗಾಡ್ಗೀಲ್ ರವರ ಕುರಿತು ಮಾತನಾಡುವಾಗ ಆರ್.ಕೆ. ಮಾಸ್ಟರ್ ಅಂತಾ ಇದ್ದಾರೆ, ಅವರು ಗಾಡ್ಗೀಲ್ ಜೊತೆಗೆಲ್ಲಾ ಕೆಲಸ ಮಾಡಿದ್ದಾರೆ ಎಂದರು. ಏನು ಕೆಲಸವೆಂದೆ. ಅವರ ಬೋಧನಾ ವಿಧಾನವೇ ಬೇರೆ. ಅದನ್ನು ನೀನು ಹೋಗಿ ನೋಡಬೇಕು ಎಂದರು. ವಿವರಿಸಿ ಎಂದೆ. 

ಅವರು ಮಕ್ಕಳನ್ನು ಹೊರಗಡೆಗೆ ಅಂದರೇ, ಸುತ್ತಮುತ್ತಲಿನ ಗುಡ್ಡಕ್ಕೋ, ಬೆಟ್ಟಕ್ಕೋ ಕರೆದೊಯ್ಯುತ್ತಾರೆ. ಕೈಯ್ಯಿಗೆ ಸಿಕ್ಕಿದ ವಸ್ತುವನ್ನು ವಿವರಿಸುತ್ತಾರೆ, ಯಾವುದೇ ಗಿಡವಿರಬಹುದು, ಮರವಿರಬಹದು ಎಲ್ಲವನ್ನು ಹಾಗೆಯೇ, ಎಂದರು. ಅದರ ಜೊತೆಗೆ ತುಮಕೂರಿನಲ್ಲಿ ಪ್ರತಿ ತಿಂಗಳು ನಕ್ಷತ್ರ ವಿಕ್ಷಣೆ, ಚರ್ಚೆ, ಕಾರ್ಯಾಗರಗಳನ್ನು ಹಮ್ಮಿಕೊಳ್ಳುತ್ತಾರೆ. ಸದಾ ಬಿಡುವಿಲ್ಲದೆ ಓಡಾಡುತ್ತಾರೆ ಎಂದರು. ನನಗೆ ಸೂಕ್ತ ಮಾರ್ಗದರ್ಶಕರು ಎಂದುಕೊಂಡೆ ಅಥವಾ ನನ್ನಂಥಯೇ ಇವರು ಎಂದೂಕೊಂಡಿರಬಹುದು. ಅವರೊನ್ನೊಮ್ಮೆ ಭೇಟಿ ಮಾಡಬೇಕೆಂದು ನಿರ್ಧರಿಸಿದೆ. ಹೋಗುವುದಕ್ಕೊಂದು ಕಾರಣ ಬೇಕಲ್ಲವೇ? ಅದರ, ನಡುವೆ ಒಮ್ಮೆ ಕರೆ ಮಾಡಿ ಪರಿಚಯ ಮಾಡಿಕೊಂಡೆ. ಒಮ್ಮೆ ಬನ್ನಿ ಎಂದರು. ಅವರ ವಿಶೇಷತೆಯಿರುವುದಿಲ್ಲಿ. ನಿಮಗೆ ಈ ಕಡೆಗೆ ಕೆಲಸವಿದ್ದಾಗ ಮಾತ್ರ ಬನ್ನಿ ನನ್ನನ್ನು ಮಾತ್ರ ಭೇಟಿ ಮಾಡಲು ಬರಬೇಡಿ ಎಂದರು. ಇಷ್ಟೊಂದು ನೇರವಾಗಿ ಹೇಳುವುದು, ಯಾವುದೋ ಒಂದು ಬಗೆಯ ಕುತೂಹಲ ಶುರುವಾಯಿತು. ಅವರೇ, ಹೇಳಿದಂತೆ, ಆ ಕಡೆಗೆ ಕೆಲಸವಿರುವಾಗ ಹೋಗುವುದೇ ಒಳಿತು ಎನಿಸಿತು. ಸಕಾರಣವೆಂಬಂತೆ, ಸ್ನೇಹಿತ ಲಿಂಗರಾಜುವಿನ ಅಣ್ಣನ ಮದುವೆ ಸಿಕ್ಕಿತು. 


ಅಲ್ಲಿಂದಲೇ ಕರೆ ಮಾಡಿದೆ. ಬರಬಹುದೇ, ಭೇಟಿ ಮಾಡಬಹುದೇ ಸರ್, ಎಂದೆ. ಏನಾದರೂ ಚರ್ಚಿಸುವ ವಿಷಯವಿದ್ದರೆ ಬನ್ನಿ ಎಂದರು. ಕುಶಲೋಪರಿ ಭೇಟಿಯಾದರೇ ಬೇಡವೆಂದರು. ನನಗೆ ಸಾಕಷ್ಟು ವಿಚಾರಗಳಿಗೆ ಅವರ ಸಲಹೆಗಳು ಬೇಕಿತ್ತು. ನಾನು ಆಗ ತಾನೇ, ನನ್ನ ಸಂಸ್ಥೆ ಕಟ್ಟಿಕೊಂಡು ಅಂಬೆಗಾಲಿಡುತ್ತಿದ್ದೆ. ಸರ್, ಚರ್ಚಿಸುವ ಸಾಕಷ್ಟು ವಿಚಾರಗಳಿವೆ ಎಂದೆ. ನಾನು ಹತ್ತು ಗಂಟೆಗೆ ಚಿಕ್ಕನಾಯಕನಹಳ್ಳಿಗೆ ಹೋಗಬೇಕು, ಬೇಗ ಬಂದರೆ ಅಲ್ಪ ಸಮಯ ಕೊಡಬಲ್ಲೆ ಎಂದರು. ನಾನು ದಿಡೀರನೇ ಹೊರಟೆ. ಪಕ್ಕದ ಹಳ್ಳಿಯೇ, ಸುಮಾರು ನಾಲ್ಕು ಕಿಲೋಮೀಟರ್ ಆದೀತು. ಹೋದಂತೆಯೇ, ಅವರ ಸರಳತೆಗೆ ಮಾರುಹೋದೆ ಎಂದರೆ ಉತ್ಪ್ರೇಕ್ಷೆಯಾಗದು. ನಾನು ಹೋದಾಗ ಮುಂಜಾನೆ ಏಳೆಂಟಿರಬಹುದು. ಅವರು ಹಾಲು ಕರೆಯುತ್ತಿದ್ದರು. ಎಲ್ಲಾ ಹಸುಗಳೊಂದಿಗೂ ಹೆಸರಿಡಿದು ಸ್ನೇಹಿತರಂತೆ ಮಾತನಾಡಿಸುತ್ತಿದ್ದರು. ಮನೆಯ ನಾಯಿಗಳನ್ನು ಅಷ್ಟೆ. ಪ್ರತಿಯೊಬ್ಬರಿಗೂ ಹೆಸರು, ಯಾರನ್ನು ಹೇ ಚೀ ಎನ್ನುವುದಿಲ್ಲ. ಸಂಪೂರ್ಣ ಮರ್ಯಾದೆ. ಒಟ್ಟಿಗೆ ತಿಂಡಿ ತಿಂದೆವು. ತಿನ್ನುವ ಸಮಯದಲ್ಲಿ ಅವರಿಗೆ ನನ್ನ ಬಗ್ಗೆ ನಮ್ಮ ಕೆಲಸದ ಬಗ್ಗೆ ತಿಳಿಯುವ ಕುತೂಹಲ. 


ಹುಣಸೆಕಾಯಿ ಚಿತ್ರಾನ್ನ ತಿನ್ನಿ ಎಂದು ಜೊತೆಯಲ್ಲಿ ಮಾತುಕತೆ ನಡೆಸಿದೆವು. ಬಹಳ ಸಂತೋಷಪಟ್ಟರು. ನಮ್ಮ ಪರಿಸರ ಸ್ನೇಹಿ ಶಾಲೆ ನಿರ್ಮಾಣದ ವಿಚಾರದಲ್ಲಿ. ನಾನು  ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿ ಅಲ್ಲಿಂದ ನಡೆದೆವು. ಅದಾದ ನಂತರ ನನ್ನದೇ ಕೆಲಸದಲ್ಲಿ ಮುಳುಗಿಹೋಗಿ, ಕೆಲಸ ಎನ್ನುವುದಕ್ಕಿಂತ ದುಡಿಮೆ ಎಂದರೇ ಸರಿ. ಅವರೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. ಆದರೂ, ಯಾವುದೋ ಮೂಲೆಯಲ್ಲಿ ಮಾತನಾಡುವ ಬಯಕೆಯಿಂದ ಕರೆ ಮಾಡಿದೆ, ಸರ್, ಸ್ಸಾರಿ, ಕ್ಷಮಿಸಿ, ಕೆಲಸದ ನಿಮಿತ್ತ ತಮಗೆ ಕರೆ ಮಾಡುವುದಕ್ಕೆ ಆಗಲಿಲ್ಲ, ತಮ್ಮನ್ನು ಭೇಟಿ ಮಾಡಿ ಚರ್ಚಿಸಬೇಕೆಂದೆ. ಖಂಡಿತ ಬನ್ನಿ ಎಂದರು. 


ಇತ್ತೀಚೆಗೆ ನಾವು ಗಾಂಧೀಯನ್ ಕಲೆಕ್ಟಿವ್ ಎಂಬ ಒಂದು ಗುಂಪನ್ನು ಸಂಘಟಿಸುವ ಸಮಯದಲ್ಲಿ, ಮೊದಲಿಗೆ ನೆನಪಾದವರು ಆರ್.ಕೆ. ಸರ್. ನಾನು ಅವರನ್ನು ಫೋನ್ ಮೂಲಕ ಸಂಪರ್ಕಿಸಿ ಮಾತನಾಡಿದೆ. ಹಲವಾರು ಗೊಂದಲಗೊಳೊಂದಿಗೆ ನಾನಿದ್ದೆ. ಅವರೊಂದಿಗೆ ಹಂಚಿಕೊಂಡೆ. ಅವರು ದಿಡೀರನೇ ಸ್ಪಂದಿಸಿ ಒಂದು ಚಿಕ್ಕದಾದ ಚೊಕ್ಕದಾದ ಸಮಾನ ಮನಸ್ಕರ ಸಭೆ ಕರೆದು ನನಗೆ ಆತ್ಮ ಸ್ಥೈರ್ಯ ತುಂಬಿದರು. ಅವರು ಮತ್ತು ಅವರ ತಂಡ ನಮ್ಮ ಸರಣಿ ಉಪವಾಸದ ಸಮಯದಲ್ಲಿ ಭಾಗವಹಿಸಿದ್ದು ನೋಡಿ ಅಚ್ಚರಿಯಾಯಿತು. ನನಗೆ ಯಾವುದೇ ಮುಜುಗರವಿಲ್ಲದೇ ಹೇಳುತ್ತೇನೆ, ಈ ಹಂತದ ಹುಮ್ಮಸ್ಸು ಬರಲು ಹೇಗೆ ಸಾಧ್ಯ. ನಾನು ಹುಟ್ಟು ಸೋಮಾರಿ ಎನಿಸುತ್ತದೆ ಅವರನ್ನು ಕಂಡಾಗ. ನಾನು ಅನೇಕ ಬಾರಿ ನನ್ನ ಸ್ನೇಹಿತರ ಜೊತೆಗೆ ಹೇಳಿದ್ದು ಇದೆ. 

ಗಾಢ್ಗಿಲ್ ಅವರ ಜೊತೆಗೆ ಜೀವ ವೈವಿದ್ಯಮಯ ದಾಖಲಾತಿಯಲ್ಲಿ ಇವರ ಪಾತ್ರ ಅವೀಸ್ಮರಣೀಯ. ಅದೆಷ್ಟೋ ಸಮ್ಮೇಳನಗಳನ್ನ ಆಯೋಜಿಸಿದ್ದಾರೆ, ತರಬೇತಿಗಳನ್ನು ನೀಡಿದ್ದಾರೆ. ಸದ್ಯದಲ್ಲಿ ಸಹಜ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಯ ಅಬಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲವೆನ್ನುವಂತೆ, ಆರ್. ಕೆ. ಅರಿಯದ/ಮಾಡದ ಕ್ಷೇತ್ರವಿಲ್ಲವೆಂಬಂತ್ತಿದ್ದಾರೆ. ಅವರೊಂದಿಗೆ ಕಾರ್ಯನಿರ್ವಹಿಸುವುದೆ ಭಾಗ್ಯ. ಮುಖ್ಯ ವಿಷಯ, ವಿಚಾರ ಬಿಟ್ಟು ಮತ್ತೊಂದನ್ನು ಆಡುವುದಿಲ್ಲ. ನಿನ್ನೆಯೂ ಕೂಡ, ಕರೆ ಮಾಡಿದಾಗ, ಸರ್ ತಮ್ಮ ವಿಚಾರ ಕುರಿತು ಬರೆಯುತ್ತೇನೆಂದೆ. ಸರ್, ಬೇರೆ ಏನಾದರೂ ಉಪಯುಕ್ತ ಕೆಲಸ ಮಾಡಿ ಎಂದರು. ಆ ಮಾತು ಬರೆಯಲೇ ಬೇಕೆಂದು ನಿರ್ಧರಿಸಿದ್ದ ನನಗೆ ಮತ್ತಷ್ಟೂ ಉತ್ತೇಜನಕೊಟ್ಟಿತ್ತು. ಈ ದಿನಕ್ಕೂ ಸಾಕಷ್ಟು ವಿಚಾರಗಳಲ್ಲಿ ಸಂಪೂರ್ಣ ತೊಡಗಿಸಿಗೊಂಡಿದ್ದಾರೆ. ನನಗೆ ಅವರ ಜೊತೆಗೆ ಕೈಗೂಡಿಸುವ ಭಾಗ್ಯ ಸಿಕ್ಕಿರುವುದು ಪೂರ್ವ ಜನ್ಮದ್ದು ಎನಿಸುತ್ತದೆ. ಪರಿಸರ ಸಂರಕ್ಷಣೆಯ ಕೆಲಸಗಳು, ಗಾಂಧಿ ತತ್ವ ಸಿದ್ದಾಂತಗಳ ಕಾರ್ಯಕ್ರಮಗಳು, ರೈತರ ಬದುಕು, ಕನ್ನಡ, ಸರ್ಕಾರಿ ಶಾಲೆಗಳು, ಕೂಲಿ ಕಾರ್ಮಿಕರು, ಎಲ್ಲಾ ವರ್ಗದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಸಮುದಾಯದತ್ತ ವಿಜ್ಞಾನವನ್ನು ಕರೆದೊಯ್ಯುವ ಮತ್ತು ಮೌಢ್ಯತೆಯನ್ನು ಹೊಡೆದೋಡಿಸುವ ಹಾದಿಯಲ್ಲಿ ಸಕ್ರೀಯರಾಗಿದ್ದಾರೆ. 


ಕೊನೆಯ ಹನಿ: ಸರಳತೆ ಮನುಷ್ಯನನ್ನು ಉತ್ತುಂಗದ ಖುಷಿಗೆ ಕರೆದೊಯ್ಯುತ್ತದೆ. ಕೆಲವು ಅತ್ಯುತ್ತಮ ವ್ಯಕ್ತಿಗಳ ಒಡನಾಟ ನಮ್ಮನ್ನು ಸ್ವರ್ಗಕ್ಕೆ ಕರೆದೊಯ್ಯುತ್ತದೆ. ಸ್ವರ್ಗವೆಂಬುದು ಕಲ್ಪನೆಯೂ ಸಹಜ. ಅಂತಹ ಅನುಭವ ನೀಡಿದವರು, ಆರ್. ಕೆ. ಮೇಷ್ಟ್ರು. ಅವರ ಅಪಾರ ಸಮಯ ಕಾಳಜಿ, ನಿಷ್ಠೆ, ಹೀಗೆ ಮುಂದುವರೆಯಲಿ. ನಿಜವಾಗಿಯೂ ಹೇಳುತ್ತೇನೆ, ಕಳೆದ ಆರೆಂಟು ತಿಂಗಳಿನಿಂದ ನನ್ನನ್ನು ಬಡಿದೆಬ್ಬಿಸುತ್ತಿರುವ ಸ್ಪೂರ್ತಿಯ ಚಿಲುಮೆ ಆರ್.ಕೆ.ಸರ್ ಮತ್ತು ಸಿಬಿ ಕೆ ಜೋಸೆಫ್ ಸರ್. ಅವರಿಬ್ಬರಿಗೂ ನಾನು ಎಂದೆಂದಿಗೂ ಚಿರಋಣಿ. 


ಲೇಖನ ಅಪೂರ್ಣವೆನಿಸತ್ತಿದೆ. ಬರೆಯಬಹುದು ಸಾಕಷ್ಟು, ಆದರೆಲ್ಲೋ ಭಯ, ಆರ್.ಕೆ.ಸರ್ ಬೇಸರಗೊಂಡಾರೆಂದು. ಅವರ ಅನುಮತಿಯೊಂದಿಗೆ ವಿಸ್ತರಿಸುವೆ. 


14 ಆಗಸ್ಟ್ 2020

ನಾ ಕಂಡ ಅಪರೂಪದ ವ್ಯಕ್ತಿ: ದ್ವಾರಕೇಶ್ ಎಂಬ ನೇರ ನುಡಿಯ ನಿಷ್ಠುರವಾದಿ ಸ್ನೇಹಿತ!!!



ಮೇಲಿನ ಶೀರ್ಷಿಕೆಯನ್ನು ನೋಡಿದಾಗ ಸ್ವಲ್ಪ ಗೊಂದಲಗಳಿವೆ ಎನಿಸುವುದು ಸಹಜ. ಆ ರೀತಿಯ ಗೊಂದಲಗೊಳಿಸುವ ಜೊತೆಗೆ ಅಚ್ಚರಿ ಹುಟ್ಟಿಸುವ ಒಬ್ಬ ವ್ಯಕ್ತಿಯ ಕುರಿತು ಬರೆಯುತ್ತಿದ್ದೇನೆ. ಇವರ ಬಗ್ಗೆ ಬರೆಯುತ್ತಾ ಹೋದರೇ ಕಾದಂಬರಿಯಷ್ಟು ಬರೆಯಬಹುದು. ಅದು ಅವರ ವ್ಯಕ್ತಿತ್ವ ಜೊತೆಗೆ ನನ್ನ ಅವರ ಒಡನಾಟ, ಹೊಡೆದಾಟ, ಜಗಳ, ಜಂಜಾಟ ಇತ್ಯಾದಿಗಳೊಂದಿಗೆ ಸೇರಿರುವುದರಿಂದ. ಆದರೂ, ಸರಳವಾಗಿ ನೇರವಾಗಿ ಪರಿಚಯಿಸಲು ಪ್ರಯತ್ನಿಸುತ್ತೇನೆ. ನನ್ನ ಮತ್ತು ದ್ವಾರಕೇಶ್ ಅವರ ಒಡನಾಟ ಸುಮಾರು ಹದಿನಾರು ವರ್ಷದ್ದು. ಅವರ ಅನುಮತಿಯೊಂದಿಗೆ ಮುಕ್ತವಾಗಿ ಬರೆಯುತ್ತಿದ್ದೇನೆ. ಅದರಲ್ಲಿ ಕೆಲವು ಸೆನ್ಸಾರ್ ಆಗಬೇಕಿರುವ ಸುದ್ದಿಗಳು ಬರಬಹುದು. ಆದರೂ, ಓದುಗರು ಅವುಗಳನ್ನು ಒಪ್ಪಿಕೊಂಡು ಮುಂದಕ್ಕೆ ಹೋಗಬೇಕು.


ಈ ಬರವಣಿಗೆಯನ್ನು ನಾಲ್ಕು ವಿಧವಾಗಿ ವಿಂಗಡಿಸುತ್ತೇನೆ. ಮೊದಲನೆಯ ಭೇಟಿ, ನಾವು ಕಳೆದ ಕಾಲೇಜು ದಿನಗಳು ಮತ್ತು ನಂತರದ ದಿನಗಳು ಹಾಗೂ ಅವರ ವ್ಯಕ್ತಿತ್ವ. ನಾನು ಮೈಸೂರು ವಿವಿಯಿಂದ ಬೆಂಗಳೂರು ವಿವಿಗೆ ಬಂದದ್ದು ಎಂಎಸ್ಸಿ ಮಾಡುವುಕದಕ್ಕೆ. ಮೊದಲು ಜಿಯಾಲಜಿಗೆ ಸೇರಿದ್ದು ನಂತರ ನಾನು ಪರಿಸರ ವಿಜ್ಞಾನಕ್ಕೆ ಬಂದೆ. ಹಾಸ್ಟೆಲ್ ಬೇಕಿತ್ತು. ಅಲ್ಲೊಂದು ಕಂಡಿಷನ್ ಇತ್ತು. ಪ್ರತಿಯೊಂದು ರೂಮಿನಲ್ಲಿ ಇಬ್ಬರು ಸೀನಿಯರ್ ಇರುತ್ತಿದ್ದರು, ಅಂದರೇ ಎರಡನೆಯ ಸ್ನಾತಕೊತ್ತರ ವಿದ್ಯಾರ್ಥಿಗಳು. ಅವರ ಅನುಮತಿಯನ್ನು ಪಡೆದರೆ ಮಾತ್ರವೇ ಹಾಸ್ಟೆಲ್ ಗೆ ಅಡ್ಮಿಷನ್. ಹಾಸ್ಟೆಲ್‍ನಲ್ಲಿ ಸಾಮಾನ್ಯವಾಗಿ ಒಂದೋ ತುಮಕೂರು ಕಡೆಯವರು ಮತ್ತೊಂದು ಕೋಲಾರ ಕಡೆಯವರು. ಅವರೆಲ್ಲರೂ ಮೊದಲೇ ಅವರ ಸ್ನೇಹಿತರನ್ನೋ, ಬಂಧುಗಳನ್ನು ಸೇರಿಸಿಕೊಳ್ಳಲು ತಯಾರಿರುತ್ತಿದ್ದರು. ನಾನೋ, ಹೊರಗಡೆ ವಿವಿಯವನು ಮತ್ತು ಅಪರಿಚಿತನು ಕೂಡ. ನಾನು ಹೆಚ್ಚೂ ಕಡಿಮೆ ಎಲ್ಲಾ ರೂಮಿಗೂ ಹೋದೆ, ಕೋರಿಕೊಂಡೆ, ಎಲ್ಲರದ್ದೂ ಒಂದೇ ಪ್ರತಿಕ್ರಿಯೆ. ನಮ್ಮಲ್ಲಿ ಖಾಲಿಯಿಲ್ಲ, ಅದರಲ್ಲಿ ಹಲವರು ಸುಳ್ಳು ಹೇಳಿದ್ದರೂ ಕೂಡ. 


ಕೊನೆಯದಾಗಿ ಕಾರಿಡಾರಿನಲ್ಲಿ ಒಬ್ಬರು ಬರುತ್ತಿದ್ದರು, ಅವರನ್ನು ಕೇಳಿದೆ. ಅವರು ತಮ್ಮ ರೂಮಿಗೆ, ರೂಮ್ ನಂಬರ್ 81ಕ್ಕೆ ಕರೆದೊಯ್ದರು. ನನ್ನ ಬಗ್ಗೆ ವಿಚಾರಿಸಿದರು. ಯಾವ ಊರು? ಯಾವ ವಿಷಯ ಇತ್ಯಾದಿ. ನಾನು ಸಂಕೋಚದಿಂದ ಮತ್ತು ಆತಂಕದಿಂದ ಉತ್ತರಿಸಿದೆ. ಅವರ ಮುಂದಿನ ಪ್ರಶ್ನೆ ನಿನಗೆ ಕೊಡಗು ಗೊತ್ತಾ? ಶನಿವಾರಸಂತೆ ಗೊತ್ತಾ? ನಾನು ಹುಟ್ಟಿದ್ದು, ಪಿಯುಸಿ ಮಾಡಿದ್ದು ಕೂಡ ಕೊಡಗಿನಲ್ಲಿ ಎಂದೆ. ಸರಿ ಬಾ ಎಂದರು. ಅಲ್ಲಿಂದ ನೇರವಾಗಿ ಫಿಸಿಕ್ಸ್ ಕ್ಯಾಂಟೀನ್ ಕಡೆಗೆ ಕರೆದೊಯ್ದರು. ಅಲ್ಲಿ ತುಂತುರು ಮಳೆ ಬರುತ್ತಿತ್ತು. ಅವರು ಸಿಗರೇಟ್ ಹಚ್ಚಿದರು. ನಾನು ಅವರ ಮುಖ ನೋಡಿದೆ. ನಾನು ಸೇದುತ್ತಿದೆ, ನನಗೆ ಕೇಳಲಿಲ್ಲವಲ್ಲವೆಂಬುದು ನನ್ನ ನೋಟದ ಪ್ರತಿಕ್ರಿಯೆ. ಅವರ ಪ್ರಶ್ನೆ, ನೀನು ದೇವರನ್ನು ನಂಬುತ್ತೀಯ? ನಾನು ರೂಮಿಗೆ ಸೇರಿಸಿಕೊಳ್ಳುವುದಕ್ಕೂ ಇದಕ್ಕೂ ಏನು ಸಂಬಂಧ? ನಂಬುತ್ತೇನೆ ಅಂಧಾಭಿಮಾನವಿಲ್ಲ, ಭಕ್ತಿಯಿದೆ ಅಷ್ಟೆ ಎಂದೆ. ನೀನು ನಮ್ಮ ರೂಮಿಗೆ ಸೇರಿಕೊಳ್ಳಬಹುದು, ನಮಗೆ ದೇವರ ಮೇಲೆ ಅಷ್ಟೆನೂ ನಂಬಿಕೆಯಿಲ್ಲ, ನಮ್ಮ ರೂಮಿಗೆ ನಾವು ಬೀಗ ಹಾಕುವುದಿಲ್ಲ. ನಮ್ಮೆಲ್ಲಾ ಸ್ನೇಹಿತರು ಬರುವುದು ಹೋಗುವುದು ಹರಟೆ ಹೊಡೆಯುವುದು ಸಾಮಾನ್ಯ, ಅದರಿಂದ ನಿನಗೆ ತೊಂದರೆಯಿಲ್ಲವೆಂದರೇ ಬಾ ಎಂದರು. ಆ ದಿನದಿಂದ ನಾನು ಎರಡು ವರ್ಷವಿರುವ ತನಕವೂ ನಮ್ಮ ರೂಮಿಗೆ ನಾವು ಬೀಗವನ್ನೇ ಹಾಕಲಿಲ್ಲ, ಅದು ನಮ್ಮ ನಂಬಿಕೆ. ಯಾವ ರೂಮಿವರು ಬೇಕಿದ್ದರೂ ಬರಬಹುದಿತ್ತು, ಪುಸ್ತಕ ಹೊತ್ತು ಹೋಗಬಹುದಿತ್ತು, ಕೆಲವೊಮ್ಮೆ ನಮ್ಮ ಬಟ್ಟೆಗಳನ್ನು ಕೂಡ. ಯಾವುದಕ್ಕು ಚಿಂತಿಸುತ್ತಿರಲಿಲ್ಲ. ನಡು ರಾತ್ರಿಯವರೆಗೆ ಚರ್ಚೆಗಳು, ಪಠ್ಯಗಳಿಗಿಂತ, ಕಥೆ ಕಾದಂಬರಿಗಳೇ ಹೆಚ್ಚಿರುತ್ತಿದ್ದವು. ಅವುಗಳ ಮೇಲೆಯೇ ಚರ್ಚೆ. 


ಸಾಮ್ಯತೆಯೆಂದರೇ, ಮಳೆಯಲ್ಲಿ ನೆನೆಯುವುದು. ರಾತ್ರಿ ಮಳೆ ಬಂದರೇ ಅಲ್ಲಿಂದ ಮುಖ್ಯ ರಸ್ತೆಯ ತನಕ ನಡೆಯುವುದು, ನೆನೆಯುವುದು. ಅವರು ಪೋಲಿಸ್ ಇಲಾಖೆಗೆ ಸೇರಿದ ನಂತರವೂ ಕೆಲವು ದಿನಗಳು ನಮ್ಮೊಂದಿಗೆ ಇದ್ದರು. ಅಲ್ಲಿನ ಲಂಚಕೋರತನಕ್ಕೆ ಬೇಸತ್ತು ರಾಜಿನಾಮೆ ಕೂಡ ನೀಡಿದರು. ಅಲ್ಲಿನ ಒಂದು ಘಟನೆಯನ್ನು ಮುಂದಿಡುತ್ತೇನೆ. ರಾತ್ರಿ ಪಾಳಿಗೆ ಹೋಗುತ್ತಿದ್ದಾಗ ಇವರು ಹೊಸಬರಾಗಿದ್ದರಿಂದ ಇವರ ಹಿರಿಯ ಪೋಲಿಸರು ಅಂಗಡಿಗಳಲ್ಲಿ ಐದು, ಹತ್ತು ರೂಪಾಯಿಗಳನ್ನು ಕೇಳಿ ತರುವಂತೆ ಹೇಳುತ್ತಿದ್ದರು. ಅದೆಷ್ಟೋ ಬಾರಿ ಇವರ ಜೇಬಿನಿಂದಲೇ ತೆಗೆದು ಅವರಿಗೆ ನೀಡುತ್ತಿದ್ದರು. ಅದಾದ ನಂತರ ಪ್ರಥಮ ದರ್ಜೆ ಸಹಾಯಕರಾಗಿ ಮೀನುಗಾರಿಕೆ ಇಲಾಖೆಗೆ ಸೇರಿದರು, ನಡುವೆ ಕೆಎಎಸ್ ಕಾರಣಾಂತರಗಳಿಂದ ಕೈತಪ್ಪಿತು. ಹೆಂಡ ಕುಡಿದರೆ ನಾನೊಂದು ರೀತಿಯಲ್ಲಿ ಕೋತಿಗೆ ಹೆಂಡ ಕುಡಿಸಿದಂತೆ. ಅದೆನೋ ಒಂದು ರೀತಿ ವಿಕೃತ ಮನಸ್ಸು ನನ್ನದು, ಕುಡಿದ ನಂತರ ಜೊತೆಯಲ್ಲಿರುವವರಿಗೆ ಹಿಂಸೆ ಕೊಡುವುದು. ಅದು ಯಾವ ರೀತಿಯೆಂದರೆ, ಬೇಕೆಂದೆ ತಡಮಾಡುವುದು. ಅಥವಾ ಅವರು ಬೇಗ ಕುಡಿದು ಮುಗಿಸುತ್ತಿದ್ದರೋ ನಾನರಿಯೇ? ಅದೇ ರೀತಿ ಒಮ್ಮೆ ಸಿರಾದಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋದಾಗ ಎಷ್ಟತ್ತು ಆದರೂ ನಾನು ಏಳುತ್ತಿಲ್ಲ. ದೊಡ್ಡದಾಗಿ ಜಗಳವಾಡಿಕೊಂಡು ಬೀದಿರಂಪ ಮಾಡಿಬಿಟ್ಟೆ. 


ನನ್ನದೇ ತಪ್ಪಿದ್ದರೂ ದ್ವಾರಕೇಶ್ ನನ್ನ ಸಹಾಯಕ್ಕೆ ನಿಲ್ಲಬೇಕಿತ್ತು ಎನ್ನುವುದು ನನ್ನ ವಾದವಾಗಿತ್ತು. ಅವರಿಂದ ಅಂತರ ಕಾಯ್ದುಕೊಂಡೆ. ನಾನು ಕುಡಿದಾಗ ಅದೆಷ್ಟೋ ಸಂಭಂಧಗಳನ್ನು ಕಡಿದುಕೊಂಡದ್ದಿದೆ. ಆದರೇ, ದ್ವಾರಕೇಶ್ ವಿಚಾರದಲ್ಲಿ ಮಾತ್ರವೇ ನನಗೆ ಬೇಸರವಾಗಿದ್ದು, ಮಿಕ್ಕಿದವರು ಹೋದರೇ ಹೋಗಲಿ ಎಂದು ಬಿಟ್ಟೆ. ಈಗಲೂ ಬಿಟ್ಟಿದ್ದೇನೆ. ಕೆಲವು ವರ್ಷಗಳ ವಿರಹದಿಂದ ಹೊರಬಂದೆವು. ಈಗಲೂ ಒಮ್ಮೊಮ್ಮೆ ನಡೆಯುತ್ತವೆ, ನಾನು ಸ್ವಲ್ಪ ಸುಧಾರಿಸಿರುವುದರಿಂದ ಅವರು ಒಪ್ಪಿಕೊಂಡಿದ್ದಾರೆ. ಆದರೇ, ಅವರ ಕೆಲವು ಸ್ನೇಹಿತರು ನನ್ನಿಂದ ಅಂತರ ಕಾಯ್ದುಕೊಂಡಿದ್ದಾರೆ, ಅದರಿಂದ ನನಗೆ ಯಾವ ನಷ್ಟವೂ ಇಲ್ಲ. ಪ್ರಪಂಚ ವಿಶಾಲವಾಗಿದೆ, ನಮ್ಮನ್ನು ನಮ್ಮಂತೆಯೇ ಒಪ್ಪಿಕೊಳ್ಳುವರೊಂದಿಗೆ ಬದುಕಬೇಕು. ಅದು ನನ್ನ ಸಿದ್ಧಾಂತ. ಅದರಂತೆಯೇ ಬದುಕುತ್ತಿದ್ದೇನೆ. 


ಅವರ ಮಾನವೀಯತೆಯ ಗುಣಕ್ಕೆ ಒಂದು ಉದಾಹರಣೆ ನೀಡುತ್ತೇನೆ. ಒಮ್ಮೆ ಮೈಸೂರಿನಲ್ಲಿ ಅವರು ಮತ್ತು ಅವರ ಸ್ನೇಹಿತ ಬೈಕಿನಲ್ಲಿ ಹೋಗುತ್ತಿದ್ದಾಗ ತಿರುವಿನಲ್ಲಿ ಒಂದು ಕಾರು ಬಂದು ಡಿಕ್ಕಿ ಹೊಡೆಯುತ್ತದೆ. ಇವರು ಕೆಳಗೆ ಬಿದ್ದಿದ್ದವರು ಎದ್ದು ಹೋಗಿ ಕಾರಿನಲ್ಲಿದ್ದವರಿಗೆ ಏನಾದರೂ ಪೆಟ್ಟಾಯಿತಾ ಎಂದು ಕೇಳುತ್ತಾರೆ. ಅವರದ್ದೇ ತಪ್ಪಿದ್ದರೂ ಸಮಾಧಾನ ಮಾಡಿ ಕಳುಹಿಸುತ್ತಾರೆ. ಫೋನ್ ಸಂಭಾಷಣೆಯಲ್ಲಿ ಹರಟೆಗೆ ಸ್ಥಳವಿರುವುದಿಲ್ಲ. ನೇರ ವಿಷಯಕ್ಕೆ ಬರಬೇಕು, ಅದು ಸ್ನೇಹಿತರಾದರೂ ಅಷ್ಟೆ, ಯಾರಾದರೂ ಅಷ್ಟೆ. ಸಾಮಾನ್ಯವಾಗಿ ನಾವುಗಳು ಯಾರಾದರೂ ಸಹಾಯ ಅಥವಾ ಮಾಹಿತಿ ಕೇಳಿದರೆ, ನೋಡೋಣ ವಿಚಾರಿಸಿ ಹೇಳ್ತೀನಿ ಎನ್ನುತ್ತೇವೆ. ದ್ವಾರಕೇಶ್ ಆ ಹಂತಕ್ಕೆ ಹೋಗುವುದಿಲ್ಲ. ಆಗುವುದಿದ್ದರೆ, ಆಗುತ್ತೆ ಎನ್ನುತ್ತಾರೆ, ಆಗುವುದಿಲ್ಲವೆಂದಾದರೇ ಆಗುವುದಿಲ್ಲವೆನ್ನುತ್ತಾರೆ. ಬೇರೆಯವರನ್ನು ಕಾಯಿಸುವುದಿಲ್ಲ. ಅಥವಾ ಅವರಿಗೆ ಆಗದೇ ಇದ್ದರೂ ಬರುತ್ತೇನೆ ಎನ್ನುವುದಿಲ್ಲ. 


ಈಗಲೂ ಕೋವಿಡ್ ಸಮಯದಲ್ಲಿ ಮನೆಯಲ್ಲಿ ಕುಳಿತು ಸಾಕಷ್ಟು ವಿಚಾರಗಳನ್ನು ಓದಿದ್ದಾರೆ. ಇದನ್ನು ಓದು ಎಂದು ಕಳುಹಿಸಿಕೊಡುತ್ತಾರೆ. ಮನೆಯ ಅಂಗಳವನ್ನಲ್ಲದೇ ಇಡೀ ಬೀದಿಯಲ್ಲಿ ಸಸಿಗಳನ್ನು ನೆಟ್ಟು, ಅವುಗಳಿಗೆ ನಿರೂಣಿಸುತ್ತಾರೆ. ಯಾವುದೇ ವಿಷಯಗಳಿರಬಹುದು, ವಿಜ್ಞಾನ, ತಂತ್ರಜ್ಞಾನ, ಔಷಧ, ಇತಿಹಾಸ, ರಾಜಕೀಯ ಸಮಗ್ರ ವಿಷಯಗಳನ್ನು ಅರ್ಥೈಸಿಕೊಂಡಿದ್ದಾರೆ. ಯಾವುದೇ ಸಿದ್ಧಾಂತಕ್ಕೆ ಅಂಟಿಕೊಳ್ಳದೆ, ಬದುಕನ್ನು ಕಟ್ಟಿಕೊಂಡಿದ್ದಾರೆ. ಯಾವುದಕ್ಕೂ ವಿಷಾಧಪಟ್ಟಿಕೊಳ್ಳುವುದಿಲ್ಲ. ಸ್ನೇಹಿತರ ಆರೈಕೆಗೆ ಮುಂದಿರುತ್ತಾರೆ. ಅವರ ಕಡೆಯಿಂದ ಎಷ್ಟೆಲ್ಲಾ ಸಹಾಯ ಮಾಡಬೇಕು ಅದನ್ನು ಕೈಮೀರಿ ಮಾಡುತ್ತಾರೆ. ಅಪಾರ ಸ್ನೇಹಿತರಲ್ಲದೇ, ಅವರ್ಯಾರನ್ನು ಕಳೆದುಕೊಳ್ಳದೇ ಪೋಷಿಸುತ್ತಾ ಬಂದಿದ್ದಾರೆ. 


ನಾವಿಬ್ಬರೇ ಜೊತೆಗೆ ಅಲೆದಾಡಿದ್ದೇವೆ. ರಾತ್ರೋ ರಾತ್ರಿ ಬೈಕಿನಲ್ಲಿ ಬೆಂಗಳೂರಿನಿಂದ ಬಾನುಗೊಂದಿಗೆ ಹೋದದ್ದಿದೆ. ಮಧುಗಿರಿಗೆ ಹೋಗಿದ್ದೇವೆ. ಕೊಡಗಿನ ಅದ್ಯಾವುದೆಲ್ಲಾ ಕಾಡುಗಳನ್ನು ಸುತ್ತಾಡಿದ್ದೇವೆ. ಹಿರಿಯರೊಂದಿಗೆ ಹಿರಿಯರಾಗಿ, ಕಿರಿಯರೊಂದಿಗೆ ಕಿರಿಯರಾಗಿರುತ್ತಾರೆ. ಯಾವುದೇ ಕೆಲಸಕ್ಕೂ ಹಿಂಜರಿಯುವುದಿಲ್ಲ, ಬೇರೆಯವರ ತಟ್ಟೆ ತೊಳೆಯುವ ತನಕ. 


ಕೊನೆಯ ಹನಿ: ಸ್ನೇಹಿತರನ್ನು ಸಂಪಾದಿಸುವುದು ಮತ್ತು ಅವರನ್ನು ಜೀವನ ಪರ್ಯಂತ ಉಳಿಸಿಕೊಳ್ಳುವುದು ಸಾಮಾನ್ಯ ವಿಚಾರವಲ್ಲ. ನಮ್ಮೊಂದಿಗೆ ಉಂಡವರು, ತಿಂದವರು, ಕುಡಿದವರು ಜೀರ್ಣವಾದಂತೆ ನಮ್ಮನ್ನು ಮರೆಯುತ್ತಾರೆ. ಸಹಾಯ ಬೇಕಿದ್ದಾಗ ಮಾತ್ರವೇ ಬರುವ ಅನೇಕರಿದ್ದಾರೆ. ಅವುಗಳನ್ನು ಕಳೆಗಳಂತೆ ನಾವು ಕಿತ್ತು ಹಾಕುತ್ತೇವೆ. ಆದರೇ, ದ್ವಾರಕೇಶ್ ಅದೆಷ್ಟೆ ಬಾರಿ ಮೋಸ ಹೋದರೂ ಮುನ್ನುಗ್ಗುತ್ತಿದ್ದಾರೆ. ಯಾವುದೇ ಕಹಿ ಘಟನೆಗಳನ್ನು ಸಾಧಿಸುವುದಿಲ್ಲ. ಪ್ರತಿಯೊಬ್ಬ ಸ್ನೇಹಿತರ ಸಮಯಕ್ಕೆ ನಿಲ್ಲುತ್ತಾರೆ, ತಲೆಹರಟೆ ಮಾಡಿದರೆ ಅಲ್ಲಿಯೇ ಬೈಯ್ಯುತ್ತಾರೆ. ನನ್ನಂತಹವನನ್ನೇ ಸಹಿಸಿಕೊಂಡಿರುವುದು ಸಾಮಾನ್ಯದ ಕಾರ್ಯವೇ! 


ನಾ ಕಂಡ ಅಪರೂಪದ ವ್ಯಕ್ತಿ: ಪ್ರೋ. ಎಂ.ಆರ್.ಎನ್, ಬಹುಕ್ಷೇತ್ರದ ದಿಗ್ಗಜ!!!



ಕೆಲವು ವ್ಯಕ್ತಿಗಳ ಬಗ್ಗೆ ಬರೆಯುವಾಗ ನಮ್ಮ ಸಾಮಥ್ರ್ಯ ಮತ್ತು ಯೋಗ್ಯತೆಯನ್ನು ನೋಡಿಕೊಳ್ಳಬೇಕಾಗುತ್ತದೆ. ಸಂದರ್ಶನ ಮಾಡಿ ಅವರ ಬಗ್ಗೆ ಬರೆಯುವುದು ಬೇರೆ. ಆದರೇ, ಅವರ ನಮ್ಮ ಒಡನಾಟವನ್ನು ಬರೆಯುವುದು? ದುಸ್ಸಾಹಸವೂ ಸರಿ. ನಾವು ಬರೆಯುವುದು ನಮ್ಮ ಅನಿಸಿಕೆಯಷ್ಟೆ. ಅದು ಸತ್ಯವಾ? ವಾಸ್ತವವಾ? ತಿಳಿದಿರುವುದಿಲ್ಲ. ಆ ಒಂದು ದುಸ್ಸಾಹಸಕ್ಕೆ ಇಂದು ಕೈ ಹಾಕಿದ್ದೇನೆ. ಇಂದು ನಾನು ಪರಿಚಯಿಸಿತ್ತಿರುವ ವ್ಯಕ್ತಿಯ ಹೆಸರು, ಪ್ರೋ. ಎಂ.ಆರ್.ಎನ್. ಪರಿಚಯ ಮಾಡುತ್ತಿದ್ದೇನೆ, ಎಂಬುದರಲ್ಲಿಯೇ ನನ್ನ ಅಹಂಕಾರ ಅಡಗಿದೆ. ಎಂ.ಆರ್.ಎನ್. ಸರ್ ಅವರನ್ನು ಪರಿಚಯ ಮಾಡಿಕೊಡುವ ಯೊಗ್ಯತೆಯಾಗಲೀ, ಅರ್ಹತೆಯಾಗಲೀ ನನಗಿಲ್ಲ. ಅವರು ಇಡೀ ರಾಜ್ಯಕ್ಕೆ ಚಿರಪರಿಚಿತರು. ಶಿಕ್ಷಣ ಕ್ಷೇತ್ರದಲ್ಲಿ ಹೆಸರಾಂತರು.


ಮೂರ್ನಾಲ್ಕು ವರ್ಷದ ಕೆಳಗೆ, ಸ್ನೇಹಿತರಾದ ಚನ್ನಪ್ಪರವರು, ಹತ್ತನೆಯ ತರಗತಿ ವಿದ್ಯಾರ್ಥಿಗಳಿಗಾಗಿ ಕಾರ್ಯಗಾರಗಳನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ನಾನು ಅವರನ್ನು ನಮ್ಮ ಸೀಕೋ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿ ಕಾರ್ಯಕ್ರಮ ನಡೆಸಿಕೊಡಲು ಮನವಿ ಮಾಡಿದ್ದೆ. ಅವರು, ಸಕರಾತ್ಮಕವಾಗಿ ಸ್ಪಂದಿಸಿ, ನಮ್ಮೊಡನೆ ನಮ್ಮ ಗುರುಗಳು ಮತ್ತು ಮಾರ್ಗದರ್ಶಿಗಳಾದ ಪ್ರೋ. ಎಂ.ಆರ್.ಎನ್Àವರು ಬರುತ್ತಾರೆ ಎಂದರು. ನಾನು ಎಮ್.ಆರ್.ಎನ್. ಸರ್ ಕೇಳಿದ್ದೆ. ಭೇಟಿಯಾಗಿರಲಿಲ್ಲ. ನಮ್ಮದು ಸಣ್ಣ ಕಾರ್ಯಕ್ರಮ, ಅಂಥಹವರನ್ನು ಕರೆಸುವುದೇ? ನಾನು ಚೆನ್ನಪ್ಪರವರಿಗೆ ಹೇಳಿದೆ, “ಸರ್, ಇದು ಸಣ್ಣ ಕಾರ್ಯಕ್ರಮ, ನೀವು ಸ್ನೇಹಿತರು, ನಮ್ಮ ಮನೆಯಲ್ಲಿ ತಂಗಬಹುದು, ಆದರೇ, ಅವರಿಗೆ ಅಲ್ಲಿ ಒಳ್ಳೆಯ ಲಾಡ್ಜ್ ಇರುವುದಿಲ್ಲ”. 


ಸರ್ ಅವರ ಬಗ್ಗೆ ನಿಮಗೆ ತಿಳಿದಿಲ್ಲ. ಅಷ್ಟೊಂದು ಸರಳ ವ್ಯಕ್ತಿತ್ವ ಮತ್ತು ಮಗುವಿನಂತಹ ಮನಸ್ಸು ಎಂದರು. ಎಲ್ಲಾ ವಯಸ್ಸಿನವರ ಜೊತೆಗೆ ನಿಸ್ಸಂಕೋಚದಿಂದ ಬೆರೆಯುತ್ತಾರೆ ಎಂದರು. ಆದರೂ ನನಗೆ ಮನಸ್ಸಿನಲ್ಲಿ ಅಳುಕಿತ್ತು. ಹಿರಿಯವರು, ದೊಡ್ಡ ಹೆಸರು ಮಾಡಿರುವವರು, ಹೇಗೋ ಏನೋ ಎಂದು. ಜೊತೆಯಲ್ಲಿ ಪ್ರಯಾಣಿಸಲು ಶುರು ಮಾಡಿದ ಕೆಲವೇ ನಿಮಿಷಗಳಲ್ಲಿ ಆತ್ಮೀಯತೆ ಬೆಳೆಯಿತು. ಈಗ ಅದೆಷ್ಟರ ಮಟ್ಟಿಗೆ ಹೋಗಿದೆಯೆಂದರೆ ತಿಂಗಳಿಗೊಮ್ಮೆಯಾದರೂ ಹೋಗಿ ಮಾತನಾಡಿಸಬರಬೇಕು. ಅವರೊಡನೆ ವಿವಿಧ ವಿಚಾರಗಳ ಕುರಿತು ಚರ್ಚಿಸಬೇಕು. ಅವರೊಂದು ಮಹಾಗ್ರಂಥ ಅಗೆದಷ್ಟು ವಿಚಾರಗಳು ಬರುತ್ತವೆ. ನೂರು ಪುಸ್ತಕವನ್ನು ಒಮ್ಮೆಲೆ ಓದಿದಷ್ಟು. 


ನನ್ನ ಮಗಳು ಬಹುಶಃ ಹತ್ತು ತಿಂಗಳವಿದ್ದಾಗ ಒಮ್ಮೆ ಅವರ ಮನೆಗೆ ಹೋಗಿದ್ದೆ. ಮಗಳು ಅದೆಷ್ಟು ಆಸಕ್ತಿಯಿಂದ ಅವರ ಮಾತನ್ನು ಕೇಳಿದಳೆಂದರೆ, ಅವರ ಮಾತಿನ ಶಕ್ತಿಯೇ ಹಾಗಿತ್ತು. ಅವರು ಈ ವಯಸ್ಸಿನಲ್ಲಿಯೂ ಶಾಲೆಗಳಿಗೆ ಭೇಟಿ ನೀಡಬೇಕು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಬೇಕೆಂದು ಶ್ರಮಿಸುತ್ತಿದ್ದಾರೆ. ಮುಕ್ತವಾಗಿ ಯಾವ ವಿಚಾರವೇ ಆಗಲೀ ಒಪ್ಪಿಕೊಳ್ಳುತ್ತಾರೆ. ನಾನು ಒಮ್ಮೆ ಕೇಳಿದೆ, ಸರ್, ನಾನು ಏನನ್ನು ಸಾಧಿಸಿಲ್ಲ, ಆದರೂ ಅಹಂಮ್ಮಿನೊಳಗೆ ಮುಳುಗಿದ್ದೇನೆ, ಎನಿಸುತ್ತದೆ. ಬೇಸರ, ಕೋಪ ಬರುತ್ತದೆ. ತಮಗೆ ಕೋಪ ಬರುವುದಿಲ್ಲ ಇದು ಹೇಗೆ ಸಾಧ್ಯ? 


ಅವರ ಬದುಕಿನ ಪರಿಕಲ್ಪನೆಯೆ ಅದ್ಬುತ. ನಾನು ಸಮಾಜವನ್ನು ಬದಲಾಯಿಸಲಾಗುವುದಿಲ್ಲ. ಅದು ಹೇಗಿದೆಯೋ ಹಾಗೆಯೇ ಒಪ್ಪಿಕೊಳ್ಳಬೇಕು. ನನ್ನ ನ್ಯೂನ್ಯತೆಗಳನ್ನು ಅದಾಗಿಯೇ ಒಪ್ಪಿಕೊಳ್ಳಬೇಕು. ನಾನು ಅವುಗಳನ್ನು ಅದುಮಿಟ್ಟುಕೊಳ್ಳಲು ಪ್ರಯತ್ನಿಸಿದಷ್ಟು ಅದು ಪುಟಿದೇಳುತ್ತದೆ. ಜೀವನದ ಹಾದಿಯಲ್ಲಿ ಕಲ್ಪನೆ ಮತ್ತು ಕುತೂಹಲ ಬಹಳ ಮುಖ್ಯ. ಒಬ್ಬ ವ್ಯಕ್ತಿಯ ಬಗ್ಗೆ ಆದರತೆ ಬರುವುದು ಇವೆರಡರಿಂದ. ಅವರ ಬಗ್ಗೆ ಕುತೂಹಲ ಬಂದಾಗ ಅವರ ಹತ್ತಿರಕ್ಕೆ ಹೋಗುತ್ತೆವೆ. ಅದರಂತೆಯೇ ಅವರ ಬಗ್ಗೆ ನಮ್ಮದೇ ಕಲ್ಪನೆಗಳು ಇರುತ್ತವೆ. ಅದು ಇರಬೇಕು ಮತ್ತು ಅದು ಕಲ್ಪನೆಯೆಂಬುದು ತಿಳಿದಿರಬೇಕು. 


ಬೆಂಗಳೂರಿನಿಂದ ಬೀದರ್, ಬೆಳಗಾವಿಯ ತನಕ ಬಸ್ಸಿನಲ್ಲಿ ಕುಳಿತು ಪ್ರಯಾಣ ಮಾಡುತ್ತಾರೆ. ಹವಾನಿಯಂತ್ರಿತ ಬಸ ಬೇಕೆನ್ನುವುದಿಲ್ಲ. ಕಾರ್ ಬೇಕು ಎನ್ನುವುದಿಲ್ಲ. ಯಾವುದೇ ವಿದ್ಯಾರ್ಥಿ ಅವರಿಗೆ ಕರೆ ಮಾಡಿದರೂ ಸ್ಪಂದಿಸುತ್ತಾರೆ. ನಾವು ಕಾರ್ಯಕ್ರಮ ನಡೆಸಿದ ನಂತರ ಕೆಲವ ಹತ್ತನೆಯ ತರಗತಿ ವಿದ್ಯಾರ್ಥಿಗಳು ಕರೆ ಮಾಡಿ ವಿಚಾರಿಸಿದ್ದಾರೆ. ಆಧ್ಯಾತ್ಮದಿಂದ ವಿಜ್ಞಾನದವರೆಗೆ, ಅದರ ನಡುವೆ ಡಿವಿಜಿ, ಸಂಸ್ಕøತ ಶ್ಲೋಕಗಳು ಎಲ್ಲವನ್ನು ಹಿತವಾಗಿ ಮಿಶ್ರಣ ಮಾಡಿ ಮಾತಿನಿಂದ ನಮ್ಮನ್ನು ಮನದುಂಬಿಸುತ್ತಾರೆ. ಕೈಗೆ ಸಿಕ್ಕ ಪ್ರತಿ ವಸ್ತುವಿನ ವಿವರಣೆಯನ್ನು ಮತ್ತೊಂದು ಪುರಾಣಕ್ಕೋ ಇತಿಹಾಸಕ್ಕೋ ಕೊಂಡಿಯನ್ನು ಬೆಸೆಯುತ್ತಾರೆ. 


ಹೆಮ್ಮೆಯ ವಿಚಾರವೆಂದರೆ ಡಾ. ಅಬ್ದುಲ್ ಕಲಾಂ ರವರೊಂದಿಗೆ ಎರಡು ದಿನಗಳನ್ನು ಕಳೆದಿದ್ದಾರೆ. ಡಾ. ಹೆಚ್. ನರಸಿಂಹಯ್ಯರವರ ಜೊತೆಗೆ ಸೇರಿಕೊಂಡು ಸಮುದಾಯದತ್ತ ವಿಜ್ಞಾನವನ್ನು ಕರೆದೊಯ್ದಿದ್ದಾರೆ. ರಾಜ್ಯ ವಿಜ್ಞಾನ ಪರಿಷತ್ತಿಗೆ ಅವರ ಕೊಡುಗೆ ಅಪಾರ. ಈ ದಿನಗಳಲ್ಲಿ ಅಲ್ಲಿಂದ ಅಂತರ ಕಾಯ್ದುಕೊಂಡಿರುವುದು ಅಲ್ಲಿನ ರಾಜಕೀಯಕ್ಕೆ ಕೈಗನ್ನಡಿಯೆಂದರೆ ತಪ್ಪಾಗದು. ಸರಸ ಸಂವಹನವೆಂಬ ಗುಂಪಿನನೊಂದಿಗೆ ಶಾಲಾ ಹಂತದಲ್ಲಿ ಹಲವಾರು ಚಟುವಟಿಕೆಗಳನ್ನು ಅಪಾರ ವಿದ್ಯಾರ್ಥಿ ಅಭಿಮಾನಿಗಳನ್ನು ಹೊಂದಿರುವುದು ಸಾರ್ಥಕತೆಕೆ ನಿದರ್ಶನ. 


ಕೊನೆಯ ಹನಿ: ತುಂಬಿದ ಕೊಡ ತುಳುಕುವುದಿಲ್ಲವೆನ್ನುವುದರ ಜೊತೆಗೆ ಯಾವುದೇ ನಿರೀಕ್ಷೆಯಿಲ್ಲದೆ ಬದುಕನ್ನು ಕಟ್ಟಿಕೊಂಡರೆ ಸ್ವರ್ಗದ ಬಾಗಿಲೇ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಶ್ರೀಯುತರು ಕಾರಣ. ಅವರನ್ನು ಪರಿಚಯಿದ್ದಕ್ಕೆ ಚನ್ನಪ್ಪರವರಿಗೆ ಧನ್ಯವಾದಗಳು. ಚನ್ನಪ್ಪರವರು ಅದೇ ಹಾದಿಯಲ್ಲಿ ನಡೆಯುತ್ತಿರುವುದು ಸಂತಸದ ವಿಷಯ. 


ಇದು ಪೀಠಿಕೆಯಷ್ಟೆ. ಹೇಳುವುದು ಸಾಗರದಷ್ಟಿದೆ. 


11 ಆಗಸ್ಟ್ 2020

ನಾ ಕಂಡ ಅಪರೂಪದ ವ್ಯಕ್ತಿ: ಗಿರೀಶ್ ತರಿಕೆರೆಯೆಂಬ ಮಾಂತ್ರಿಕ!!!



ಈ ಲೇಖನವನ್ನು ಬರೆಯುವುದಕ್ಕೆ ನಾನೆಷ್ಟು ಯೋಗ್ಯ ತಿಳಿದಿಲ್ಲ. ಆದರೂ, ಅವರ ಬಗ್ಗೆ ಈಗಲೇ ಬರೆಯುವುದು ಸೂಕ್ತ. ನಾಳೆ ಬೆಳಕಿಗೆ ಬಂದಾಗ, ನನಗೆ ತಿಳಿದಿತ್ತು ಎನ್ನುವುದು ಅಸಹ್ಯವೆನಿಸುತ್ತೆ. ಗಿರೀಶ್ ತರಿಕೆರೆಯೆಂಬ ಹೆಸರನ್ನು ಕೆಲವರು ಕೇಳಿರಬಹುದು, ಶಿಕ್ಷಕ ವರ್ಗದವರಂತೂ ಕೇಳಿರುತ್ತಾರೆ. ಅದರಲ್ಲಿಯೂ ಸರ್ಕಾರಿ ಶಾಲಾ ಶಿಕ್ಷಕರುಗಳು. ಅವರ ಬಗ್ಗೆ ಒಂದು ವಿಡಿಯೋ ಸಂದರ್ಶನ ಮಾಡುವ ಬಗ್ಗೆ ಆಲೋಚನೆಯಿದೆ. ಆದರೇ ಈ ಸಮಯದಲ್ಲಿ ಬೇಡ. ವ್ಯಕ್ತಿಯ ಪರಿಚಯ ಮಾಡಿಕೊಳ್ಳುವುದಾ?


ಅವರನ್ನು ನಾನು ಕಂಡಂತೆ ಎರಡು ಪುಟದಲ್ಲಿ ವಿವರಿಸೋದಾ? ಅವರಿಗೆ ತಿಳಿಸದೆ ಇದನ್ನು ಬರೆಯಬಹುದಾ? ಬರೆದರೆ! ಮುನಿಸುಕೊಂಡಾರೆ? ಜಗಳವಾಡಬಹುದೇ? ಹೇಳಿಯೇ ಬರೆಯುತ್ತಿದ್ದೇನೆ. ಅದರಲ್ಲೇನು? ಸ್ನೇಹಿತರೆನ್ನುವ ಸಲುಗೆಯು ಸೇರಿರಬಹುದು. ಬರೆಯುತ್ತಿರುವಾಗಲೇ ಫೋನ್ ಮಾಡಿ ಅನುಮತಿಯನ್ನು ಪಡೆದಿದ್ದೇನೆ. ಇರಲಿ ವಿಷಯಕ್ಕೆ ಬರೋಣ.


ಈ ಲೇಖನವನ್ನು ಎರಡು ಭಾಗಗಳಾಗಿ ನಿಮ್ಮ ಮುಂದಿಡುತ್ತಿದ್ದೇನೆ. ಮೊದಲನೆಯ ಭಾಗ, ಗಿರೀಶ್ ನನಗೆ ಪರಿಚಯವಾಗಿದ್ದು ಹೇಗೆ ಮತ್ತು ಅವರಲ್ಲಿ ನಾನು ಕಾಣುತ್ತ ಹೋದ ಬದಲಾವಣೆಗಳು. ಕೆಲವೊಂದು ವಿಚಾರಗಳು ಅವರಿಂದ ಕೇಳಿದ್ದು ಆಗಿದೆ, ಕೆಲವೊಂದು ನಾನು ಗಮನಿಸಿದ್ದು ಆಗಿದೆ. ನನಗೆ ಅವರು ಪರಿಚಯವಾಗಿದ್ದು 2016 ರ ಸಮಯದಲ್ಲಿ ಎಂಬ ನೆನಪು. ಸರಿಯಾಗಿ ನೆನಪಿಲ್ಲ. ಗಿರೀಶ್ ಮೂಡಿಗೆರೆಯವರು ಡೆವೆಲಪ್‍ಮೆಂಟ್ ಸ್ಕೂಲ್ಸ್ ಎಂದು, ತಂಡ ಕಟ್ಟಿಕೊಂಡು ಸರ್ಕಾರಿ ಶಾಲೆಗಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಆ ತಂಡದಲ್ಲಿ ಸಕ್ರೀಯವಾಗಿ ಇವರ ಸಂದೇಶಗಳು ಬರುತ್ತಿತ್ತು. ಅದಾದ ನಂತರ, ಸ್ನೇಹಿತ ಮಂಜೇಶ್‍ಗೆ ಈ ವಿಷಯವನ್ನು ತಿಳಿಸಿದಾಗ, ಅವರಿಬ್ಬರೂ ಒಂದೇ ಬ್ಯಾಚಿನಲ್ಲಿ ಮುಖ್ಯ ಶಿಕ್ಷಕರಾಗಿದ್ದು ತಿಳಿಯುತು.


ತದನಂತರದಲ್ಲಿ ಫೇಸ್‍ಬುಕ್ಕಿನಲ್ಲಿ ನನ್ನ ಬರವಣಿಗೆಗಳು ಅದರಲ್ಲಿಯೂ ಒಮ್ಮೆ ನಾನು ಸ್ಮಾರ್ಟ್ ಕ್ಲಾಸ್ ಕುರಿತು ಬರೆದ ಲೇಖನವನ್ನು ಅವರು ಮೆಚ್ಚಿದ್ದು ಮತ್ತು ಅದರ ಕುರಿತು ಎಲ್ಲರೊಂದಿಗೆ ಮಾತನಾಡಿದ್ದು ಕಂಡು ಬಂತು. ಒಮ್ಮೆ, ಅವರ ಶಾಲೆಗೆ ಹೋಗಬೇಕೆಂಬ ಮನಸ್ಸು ಬಂದು, ಅವರ ಶಾಲೆಗೆ ಭೇಟಿ ನೀಡಿದೆ. ಮೊದಲ ಭೇಟಿ, ಅದೆಷ್ಟು ಸಂತೋಷ ನೀಡಿತ್ತೆಂದರೆ, ಅದರ ಕುರಿತು ಬರೆದಿದ್ದೆ ಕೂಡ. ಒಬ್ಬ ವ್ಯಕ್ತಿ, ಹೇಗೆ ವಿಕಸನಗೊಳ್ಳುತ್ತಾ, ತನ್ನನ್ನು ತಾನು ಮಾರ್ಪಾಡುಮಾಡಿಕೊಳ್ಳುವುದರ ಜೊತೆಗೆ ಸುತ್ತಮುತ್ತಲಿನ ವಾತಾವರಣವನ್ನು ಬದಲಾಯಿಸುತ್ತಾನೆಂಬುದಕ್ಕೆ ಗಿರೀಶ್ ಒಂದು ನಿದರ್ಶನ. 


ಮೊದಲ ಭೇಟಿಯಲ್ಲಿ ಅವರಿಗೆ ಹಲವಾರು ಗೊಂದಲಗಳಿದ್ದವು. ಹೇಗೆ ಬದುಕಬೇಕು? ಏನು ಮಾಡಬೇಕು? ಚಿಕ್ಕಂದಿನಲ್ಲಿ ನೋಡಿದ ಅಂಬೇಡ್ಕರ್ ಸಿನೆಮಾ ಅವರನ್ನು ಬಹಳ ಆವರಿಸಿತ್ತು. ಅವರೇ, ಅನೇಕ ಬಾರಿ ಬರೆದುಕೊಂಡಿದ್ದಾರೆ. ಕೀಳರಿಮೆಯೊಂದಿಗೆ ಬದುಕನ್ನು ಕಟ್ಟಿಕೊಳ್ಳಲು ಪರದಾಡಿದ ದಿನಗಳಿವೆ. ಸರಳತೆಯನ್ನು ಮೈಗೂಡಿಸಿಕೊಳ್ಳುವುದು ಸರಳದ ಮಾತಲ್ಲ. ಮಾತನಾಡುವುದು ಬೇರೆ, ಬದುಕುವುದು ಬೇರೆ. ಬದಕು ನಮ್ಮೊಬ್ಬರದ್ದಲ್ಲ. ಅದರೊಂದಿಗೆ ಸಮಾಜವಿದೆ, ಮನೆ, ಸಂಸಾರ, ಮಕ್ಕಳು, ಸಹೋದ್ಯೋಗಿಗಳು, ನೆಂಟರು, ಇಷ್ಟರು, ಇಲ್ಲದವರು, ಎಲ್ಲರೂ ಇದ್ದೂ ಯಾರು ಇಲ್ಲದ ಬದುಕು. ಯಾರೂ ಇಲ್ಲದೇ ಎಲ್ಲರೂ ಇರುವಂತೆನಿಸುವ ಬದುಕು ಕೂಡ.


ಗಿರೀಶ್ ಅದೆಷ್ಟು ಮಾಂತ್ರಕತೆಯನ್ನು ಮಾಡಿದ್ದಾರೆಂದರೇ. ಅವರ ಶಾಲೆಯಲ್ಲಿ ಶಿಕ್ಷಕರು ಸಮವಸ್ತ್ರ ಧರಿಸುತ್ತಾರೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಸಮವಸ್ತ್ರ ಧರಿಸುವುದು ಸಾಮಾನ್ಯ ಕಾರ್ಯವಲ್ಲ. ಅವರು ಅದನ್ನು ಸಾಧಿಸಿದ್ದು ಬಲವಂತದ ಹೇರಿಕೆಯಿಂದಲ್ಲ. ತಾಳ್ಮೆ ಮತ್ತು ಪ್ರೀತಿಯಿಂದ. ಆ ಶಾಲೆಗೆ ಭೇಟಿ ನೀಡಿದಾಗ ನನಗನಿಸಿದ್ದು, ಸಂಪೂರ್ಣ ಮನೆಯ ವಾತಾವರಣ. ಆತ್ಮೀಯತೆ, ಸೋದರತೆ. ಯಾರಲ್ಲಿಯೂ ಒಂದು ಚೂರು ಅಸೂಯೆಯಿಲ್ಲದೆ, ನಾಟಕೀಯತೆಯಿಲ್ಲದೆ ಇರುವುದು. ಒಮ್ಮೆ, ಒಂದು ಮಗು ಶೌಚಾಲಯದ ಹೊರಗೆ  ಮಲ ವಿಸರ್ಜನೆ ಮಾಡಿರುತ್ತದೆ. ಆಗ ಸ್ವತಃ ಗಿರೀಶ್ ಅದನ್ನು ಅಲ್ಲೇ ಇದ್ದ ಎಲೆಗಳಿಂದ ತೆಗೆಯುತ್ತಾರೆ. ಅದು ಸಾಮಾನ್ಯದ ಕೆಲಸವೆ? ನಾವೇ ನಮ್ಮಯ ಮಲವನ್ನು ಮುಟ್ಟಲು ಹಿಂಜರಿಯುವಾಗ, ಮುಖ್ಯ ಶಿಕ್ಷಕನಾಗಿ ಈ ಕೆಲಸ ಮಾಡಿದ್ದು! ಮೆಚ್ಚುಗೆಯಾಗಲೂ ಇದಕ್ಕಿಂತ ಬೇರೆ ಉದಾಹರಣೆ ಬೇಕೇ?


ಸರ್ಕಾರಿ ಶಿಕ್ಷಕರ ಬಗ್ಗೆ ಜನರಿಗೆ ವಿಭಿನ್ನ ಅಭಿಪ್ರಾಯಗಳಿವೆ. ಅದೇನೇ ಇರಲಿ, ಉತ್ತಮ ಅಭಿಪ್ರಾಯಗಳು ಕ್ಷೀಣಿಸಿರುವುದು ವಾಸ್ತವ. ಅವರು ಮಕ್ಕಳಿಗೆ ಟೂರ್ (ಪ್ರವಾಸಕ್ಕೆ) ಕರೆದೊಯ್ಯಲು ಮಾಡುವ ತಯಾರಿಯೇ ಅದ್ಬುತ. ಪ್ರವಾಸಕ್ಕೆ ಹೋಗುವ ಮುನ್ನಾ ಸ್ಥಳಗಳ ಮಾಹಿತಿಯನ್ನು ಸಂಗ್ರಹಿಸಿ, ಅವುಗಳನ್ನು ಮಕ್ಕಳಿಗೆ ವಿವರಿಸುತ್ತಾರೆ. ಪ್ರತಿಯೊಂದು ಮಗುವಿಗು ಒಂದು ಪ್ರತಿಯನ್ನು ನೀಡಲಾಗುತ್ತದೆ. ಪ್ರವಾಸಕ್ಕೆ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಹಣದ ಜೊತೆಗೆ ಎಲ್ಲಾ ಶಿಕ್ಷಕರು ಕೂಡ ತಮ್ಮ ವೆಚ್ಚವನ್ನು ತಾವೇ ಭರಿಸುತ್ತಾರೆ. ಪ್ರವಾಸ ಮುಗಿದ ಮೇಲೆ, ಸಂಪೂರ್ಣ ಖರ್ಚು ವೆಚ್ಚಗಳನ್ನು ನೋಟಿಸ್ ಬೋರ್ಡ್‍ಗೆ ಹಾಕಲಾಗುತ್ತದೆ. ಯಾವುದೇ ಕೆಲಸಕ್ಕೂ ಲಂಚ ಕೊಡದೇ ಬದುಕುವ ಹಾದಿಯಲ್ಲಿದ್ದಾರೆ.


ಚಾಮರಾಜನಗರ ಜಿಲ್ಲೆಯ ದೀನಬಂಧು ಶಾಲೆಗೆ ಭೇಟಿ ನೀಡಿ, ಅದರಿಂದ ಸ್ಪೂರ್ತಿಗೊಂಡವರು ತಮ್ಮ ಇಬ್ಬರೂ ಮಕ್ಕಳನ್ನು ಅಲ್ಲಿಯೇ ಓದಲು ನಿರ್ಧರಿಸುತ್ತಾರೆ. ಅವರ ಮಡದಿ ಮತ್ತು ಮಕ್ಕಳು ಚಾಮರಾಜನಗರದಲ್ಲಿದ್ದರೇ, ಇವರು ತರಿಕೆರೆಯಲ್ಲಿಯೇ ಉಳಿಯಬೇಕಾಗುತ್ತದೆ. ಇದರ ನಡುವೆ, ಪ್ರಯಾಣದ ಸಮಯದಲ್ಲಿ (ವಾರಾಂತ್ಯಲ್ಲಿ) ರೈಲಿನಲ್ಲಿ ಕುಳಿತು ಬರೆಯುವುದು ಓದುವುದನ್ನು ಮುಂದುವರೆಸುತ್ತಾರೆ. ಅವರ ಸ್ನೇಹಿತರಿಂದಾಗಿ ಒಮ್ಮೆ ರಮಣಮಹರ್ಷಿ ಆಶ್ರಮದಲ್ಲಿ ಐದಾರು ದಿನಗಳನ್ನು ಕಳೆದದ್ದು, ಅವರ ಬದುಕಿನಲ್ಲಾದ ಬದಲಾವಣೆ. ಸೈದ್ದಾಂತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಅವರಲ್ಲಾಗಿರುವ ಬೆಳವಣಿಗೆ ಮೆಚ್ಚುವಂತದ್ದು. 


ನಾನು ಅವರೊಂದಿಗೆ ನಿನ್ನೆ ರಾತ್ರಿ ಮಾತನಾಡಿದೆ. ಹೊಸದಾಗಿ ಬಂದಿರುವ ಶಿಕ್ಷಣ ಕಾಯ್ದೆಯನ್ನು ಅದೆಷ್ಟರ ಮಟ್ಟಿಗೆ ಓದಿಕೊಂಡಿದ್ದಾರೆಂದರೇ ಆಶ್ಚರ್ಯವೇ ಆಯಿತು. ನಮಗೆಲ್ಲರಿಗೂ ಶಿಕ್ಷಕರೆಂದರೆ ಒಂದು ಚಿತ್ರವಿದೆÉ. ಇತಿಮಿತಿಗಳಿಂದಲೇ ನೋಡುತ್ತೇವೆ. ಇವರಿಷ್ಟೆ! ಎನ್ನುವ ತನಕವೂ ಹೋಗುತ್ತದೆ ಮನಸ್ಸು. ಈ ಮಾತುಗಳನ್ನು ಯಾರೂ ತಪ್ಪು ತಿಳಿಯಬಾರದೆಂಬುದು ನನ್ನ ಮನವಿ. ಆ ವಿಮರ್ಶೆಗಳು ನಿಜಕ್ಕೂ ಒಬ್ಬ ತಜ್ಞನಂತೆ ಕಾಣುತ್ತಾರೆ. ಇಂತಹವರು ಯಾಕೆ ಮುಖ್ಯ ಭೂಮಿಕೆಗೆ ಬರುತ್ತಿಲ್ಲವೆಂದು ನೋಡಿದರೆ, ಅವರಿಗೆ ಆಸಕ್ತಿಯೇ ಇಲ್ಲ. ಯಾರಿಗೋ ಕೈಚಾಚಬೇಕೆಂಬ ಹಂಬಲವಿಲ್ಲ. ಸರ್ಕಾರದಲ್ಲಿ ಅವಕಾಶ ಗಿಟ್ಟಿಸಲೇ ಪರದಾಡುವ ಜನರ ನಡುವೆ, ಇವರು ನಾನು ಸರಳವಾಗಿಯೇ ಇರುತ್ತೇನೆ ಎನ್ನುತ್ತಾರೆ. 


ಸಂಬಳ ಕಡಿಮೆ ಎಂದು ಮುಷ್ಕರ ಹೂಡುವ ಜನರ ನಡುವೆ, ನನಗೆ ಬರುತ್ತಿರುವ ಸಂಬಳ ಜಾಸ್ತಿಯಾಗಿದೆ ಎನ್ನುತ್ತಾರೆ. ಒಮ್ಮೊಮ್ಮೆ ಲಾಲ್ ಬಹುದ್ದೂರ್ ನೆನಪಾಗುತ್ತಾರೆ ಕೂಡ. ಈ ಸರಳತೆ ಹೇಗೆ ಸಾಧ್ಯ? ಇವರ ಈ ಆದರ್ಶಗಳೊಂದಿಗೆ ಒಂದು ಶಾಲೆಯನ್ನು ತೆರೆದರೆ, ದೇಶದ ಭವಿಷ್ಯ ಬದಲಾಗುವುದು ನಿಶ್ಚಯ. ಕನಿಷ್ಠ ವಸ್ತ್ರಗಳೇ ಸಾಕೆನ್ನುವ ಹಂತಕ್ಕೆ ತಲುಪುವುದು ಸಾಧ್ಯವೇ? ವೈರಾಗಿಯಾಗಿದ್ದರೇ ಒಪ್ಪಬಹುದಿತ್ತು. ವೈರಾಗಿಯಲ್ಲ. ಬಹಳ ಮೆಚ್ಚುಗೆಯ ವಿಚಾರವೆಂದರೆ, ನಾನು ಕರೆ ಮಾಡಿದಾಗ ನೇರವಾಗಿ, ಹೇಳಿದ್ದು. ಸರ್, ನಾನು ಈಗ ತಾನೇ ಮನೆಗೆ ಬಂದೆ, ಮಕ್ಕಳ ಜೊತೆ ಸಮಯ ಕಳೆಯಬೇಕು, ಹೆಚ್ಚು ಸಮಯ ಕೊಡುವುದಕ್ಕೆ ಆಗುವುದಿಲ್ಲವೆಂದು. ಇದು ಮೆಚ್ಚುವ ಕಾರ್ಯ. ನೇರ ವಿಷಯಕ್ಕೆ ಬರುವಂತೆ ನನಗೂ ಮಾಡಿತು. ಕಾಲಹರಣಕ್ಕೆ ಜಾಗವಿಲ್ಲವೆಂಬುದಿತ್ತು.  


ಕೊನೆಯ ಹನಿ: ಸರಳತೆಯ ಬಗ್ಗೆ ಮಾತನಾಡುವುದಕ್ಕೂ, ಅದನ್ನು ರೂಢಿಸಿಕೊಳ್ಳುವುದಕ್ಕು ಸಾಕಷ್ಟು ವ್ಯತ್ಯಾಸವಿದೆ. ಸರಳತೆ, ಸಿದ್ದಾಂತಗಳನ್ನೇ ಮೈಗೂಡಿಸಿಕೊಂಡು ಬದುಕುತ್ತಿರುವ ಗಿರೀಶ್, ಇಂದಿಗೆ ಎಲೆ ಮರೆಯ ಕಾಯಿಯಾಗಿದ್ದಾರೆ. ಮುಂದೊಂದು ದಿನ, ಹೆಮ್ಮರವಾಗಿ ಸಾಕಷ್ಟು ಮನಸ್ಸುಗಳನ್ನು ಪರಿವರ್ತಿಸುವ ಕಾಲವನ್ನು ನಾನು ನೋಡುತ್ತೇನೆ. 


ಅವರ ಬರವಣಿಗೆಗಳು, ಪುಸ್ತಕ ರೂಪದಲ್ಲಿ ಬರಲೆಂಬುದು ನನ್ನಯ ಆಶಯ. ಬರೆಯಲು ಸಾಕಷ್ಟಿದೆ, ಇದೊಂದು ಅಲ್ಪವಿರಾಮವಷ್ಟೆ. 


ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...