28 ಜುಲೈ 2021

ಪ್ರೋ. ಜಿ.ಎಸ್. ಜಯದೇವರವರ "ಸೋಲಿಗ ಚಿತ್ರಗಳು" ಪುಸ್ತಕ ಕುರಿತು ಬುಕ್ ಟಾಕ್ ಕಾರ್ಯಕ್ರಮ!!!

 





ಸೀಕೋ ಸಂಸ್ಥೆ, ಹಾಸನ ಜಿಲ್ಲೆ ವತಿಯಿಂದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪರವ ಪುತ್ರ ಹಾಗೂ  ದೀನಬಂಧು ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಜಿ. ಎಸ್. ಜಯದೇವರವರಸೋಲಿಗ ಚಿತ್ರಗಳುಹೊಸ ಪುಸ್ತಕದ ಕುರಿತು ಆನ್ಲೈನ್ ಬುಕ್ ಟಾಕ್ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮವು ಜುಲೈ 31ನೇ ಶನಿವಾರ ಸಂಜೆ 6.30ಕ್ಕೆ ಝೂಮ್ ವೇದಿಕೆಯಲ್ಲಿ ನಡೆಯುತ್ತದೆ.

ಕಾರ್ಯಕ್ರಮದಲ್ಲಿ ಲೇಖಕರಾದ ಪ್ರೊ. ಜಿ. ಎಸ್. ಜಯದೇವ ರವರ ಘನಉಪಸ್ಥಿತಿಯಿದ್ದು, ಹಿರಿಯ ಸಾಹಿತಿಗಳಾದ ಡಾ. ನಟರಾಜ ಬೂದಾಳು ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಹರಿಪ್ರಸಾದ್ ಜಿ.ವಿ., ಹಿರಿಯ ಉಪನ್ಯಾಸಕರು, ಡಯಟ್ ಶಿವಮೊಗ್ಗ, ಡಾ. ಚಂದ್ರಶೇಖರ್ ಹೆಚ್.ಬಿ., ಹಿರಿಯ ಸಹಾಯಕ ನಿರ್ದೇಶಕರು, ಡಿಎಸ್ಇಆರ್ಟಿ, ಬೆಂಗಳೂರು ಮತ್ತು ಶ್ರೀ. ಭಾನು ಕುಮಾರ್ ಆರ್., ಉಪನ್ಯಾಸಕರು, ಡಯಟ್ ಮಂಡ್ಯ ರವರು ಮಾತನಾಡಲಿದ್ದಾರೆ.

 

ಲೇಖಕರು ನಲವತ್ತು ವರ್ಷಗಳ ಸೋಲಿಗರೊಂದಿಗಿನ ಒಡನಾಟ, ನಂಬಿಕೆ, ಪರಿಸರ ಜ್ಞಾನ, ಕಾಳಜಿ, ಸಂರಕ್ಷಣೆ, ಪಾರಂಪಾರಿಕ ಜ್ಞಾನ, ಸಂಸ್ಕøತಿ, ಸೋಲಿಗರ ಬದುಕಿನಲ್ಲಾದ ಬದಲಾವಣೆಗಳು, ಸಮಸ್ಯೆಗಳು ಎಲ್ಲವನ್ನೂ ಇಂಚಿಂಚಾಗಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಪುಸ್ತಕವನ್ನು ಅನೇಕ ಆಯಮಾಗಳಿಂದ ಓದಬೇಕಾಗಿದೆ. ಹಿನ್ನಲೆಯಲ್ಲಿ  ಬುಕ್ ಟಾಕ್ ಆಯೋಜಿಸಲಾಗಿದ್ದು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರುತ್ತೇನೆ.

ಭಾಗವಹಿಸಲು: ಜೂಮ್ ವೇದಿಕೆಯಲ್ಲಿ ಮೀಟಿಂಗ್ ಐಡಿ: 473 190 7076 ಪಾಸ್ ಕೋಡ್:ceeco

23 ಜುಲೈ 2021

ಸೀಕೋ ಸಂಸ್ಥೆಯ ಆನ್ ಲೈನ್ ಕಾರ್ಯಕ್ರಮ ಯಶಸ್ವಿ: ಲಾಕ್‍ಡೌನ್ ಸಮಯ ಸದುಪಯೋಗ!!!

 ಸೀಕೋ ಸಂಸ್ಥೆ, ಹಾಸನ ಜಿಲ್ಲೆ, ಕೋವಿಡ್-19 ಸಾಂಕ್ರಾಮಿಕದ ಹಿನ್ನಲೆಯಲ್ಲಿ ಲಾಕ್‍ಡೌನ್ ಸಮಯದಲ್ಲಿ  ಹತ್ತನೆಯ ತರಗತಿ ಕನ್ನಡ ಮತ್ತು ಇಂಗ್ಲೀಷ್ ವಿದ್ಯಾರ್ಥಿಗಳಿಗೆ 2ನೇ ಮೇ 2021 ರಿಂದ 20ನೇ ಜುಲೈ 2021 ರವರೆಗೆ ಸತತ ಎರಡೂವರೆ ತಿಂಗಳು ಕಾಲ ಆನ್‍ಲೈನ್ ರಸಪ್ರಶ್ನಾವಳಿಯನ್ನು ಏರ್ಪಡಿಸಿತ್ತು. 

ರಾಜ್ಯದ ಬಹುತೇಕ ಜಿಲ್ಲೆಗಳಿಂದ ಸುಮಾರು 23 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಈ ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಯ ಶಿಕ್ಷಕರುಗಳು, ವಿದ್ಯಾರ್ಥಿಗಳು, ಪೋಷಕರು, ಮಾಧ್ಯಮ ಮಿತ್ರರು, ಸೀಕೋ ಸಂಸ್ಥೆಯ ಸ್ವಯಂಸೇವಕರುಗಳು, ಸಂಘ ಸಂಸ್ಥೆಗಳಿಗೆ ಹೃದಯಪೂರ್ವಕ ಧನ್ಯವಾದಗಳು.  

1. ಶ್ರೀ. ರವಿಕುಮಾರ್ ಕೆ.ಎನ್., ಸಮಾಜವಿಜ್ಞಾನ ಶಿಕ್ಷಕರು, ಬಿ.ಎಸ್.ಎಸ್.ಸ.ಪ.ಪೂ.ಕಾಲೇಜು ಕೊಣನೂರು, ಹಾಸನ ಜಿಲ್ಲೆ, 

2. ಶ್ರೀಮತಿ. ಲತಾ ವೆಂಕಟೇಶ್ ಪೈ, ಗಣಿತ ಶಿಕ್ಷಕಿ, ಸ.ಪ್ರೌ.ಶಾಲೆ ಕಾನ್‍ಬೈಲ್, ಕೊಡಗು ಜಿಲ್ಲೆ

3. ಶ್ರೀಮತಿ. ಮಾಲಾದೇವಿ ಎನ್.ಕೆ., ವಿಜ್ಞಾನ ಶಿಕ್ಷಕಿ, ಸ.ಪ್ರೌ.ಶಾಲೆ ಕಾನ್‍ಬೈಲ್, ಕೊಡಗು ಜಿಲ್ಲೆ

4. ಶ್ರೀ. ದಿನೇಶ್ ಕೆ.ಎನ್., ಕನ್ನಡ ಭಾಷಾ ಶಿಕ್ಷಕರು, ಸ.ಪ್ರೌ.ಶಾಲೆ ಕಾನ್‍ಬೈಲ್, ಕೊಡಗು ಜಿಲ್ಲೆ

5. ಶ್ರೀಮತಿ. ಜ್ಯೋತಿ ಬಿ.ಎಸ್., ಇಂಗ್ಲೀಷ್ ಭಾಷಾ ಶಿಕ್ಷಕಿ, ಸ.ಪ್ರೌ.ಶಾಲೆ, ಹಾಸನ ಜಿಲ್ಲೆ, 

6. ಶ್ರೀಮತಿ. ಮೇಘರಾಣಿ ಎಂ.ಜಿ., ವಿಜ್ಞಾನ ಶಿಕ್ಷಕಿ, ಸ.ಪ.ಪೂ. ಕಾಲೇಜು (ಬಾಲಕಿಯರ) ಅರಕಲಗೂಡು

7. ಶ್ರೀ. ತಿಪ್ಪೇಸ್ವಾಮಿ ಕೆ.ಸಿ., ಸಮಾಜವಿಜ್ಞಾನ ಶಿಕ್ಷಕರು, ಶ್ರೀ.ದೊರೆ ವೀರರಾಜೇಂದ್ರ ಪ್ರೌಢ ಶಾಲೆ, ಬೇಳೂರು, ಕೊಡಗು ಜಿಲ್ಲೆ

8. ಶ್ರೀ. ಬಾಲಸುಬ್ರಹ್ಮಣ್ಯ ಎಸ್., ಸಮಾಜವಿಜ್ಞಾನ ಶಿಕ್ಷಕರು, ಸ.ಪ.ಪೂ.ಕಾಲೇಜು ಕುಶಾಲನಗರ, ಕೊಡಗು ಜಿಲ್ಲೆ

9. ಶ್ರೀಮತಿ. ಸವಿತ ಹೆಚ್.ಎಲ್. ಇಂಗ್ಲೀಷ್ ಭಾಷಾ ಶಿಕ್ಷಕಿ, ಸ.ಪ್ರೌ.ಶಾಲೆ ಕಾನ್‍ಬೈಲ್, ಕೊಡಗು ಜಿಲ್ಲೆ 


ಧನ್ಯವಾದಗಳೊಂದಿಗೆ,

 

ಡಾ. ಹರೀಶ್ ಕುಮಾರ ಬಿ.ಕೆ.

(ಕಾರ್ಯಕಾರಿ ನಿರ್ದೇಶಕರು)


ಕೊಣನೂರು ಜುಲೈ 23. ಕೋವಿಡ್-19ರ ಎರಡನೆಯ ಅಲೆಯ ಲಾಕ್ ಡೌನ್ ಸಮಯದಲ್ಲಿ ಸೀಕೋ ಸಂಸ್ಥೆ, ಹಾಸನ ಜಿಲ್ಲೆ ವತಿಯಿಂದ ಹತ್ತನೆಯ ತರಗತಿ ವಿದ್ಯಾರ್ಥಿಗಳಿ ಮೇ 2 ರಿಂದ ಜುಲೈ 20 ರವರೆಗೆ ಸತತ ಆನ್ ಲೈನ್ ರಸಪ್ರಶ್ನಾವಳಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕನ್ನಡ ಮತ್ತು ಇಂಗ್ಲೀಷ್ ಎರಡು ಮಾಧ್ಯಮದಲ್ಲಿ ಪ್ರಶ್ನಾವಳಿ ಕಾರ್ಯಕ್ರಮಗಳು ನಡೆದಿದ್ದವು. ಪರೀಕ್ಷೆಗೆ ಅನುಕೂಲವಾಗುವಂತೆ ಎಲ್ಲಾ ವಿಷಯಗಳಲ್ಲಿ ಎಲ್ಲಾ ಘಟಕಗಳನ್ನು ಒಳಗೊಂಡಂತೆ ಪ್ರಶ್ನಾವಳಿಯನ್ನು ಸಿದ್ಧಪಡಿಸಲಾಗಿತ್ತು. ಶೇ. 100 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸೀಕೋ ಸಂಸ್ಥೆಯು ವಾಟ್ಸಪ್ ಮೂಲಕ ಇ-ಪ್ರಮಾಣ ಪತ್ರವನ್ನು ವಿತರಿಸಿತ್ತು. ರಸಪ್ರಶ್ನಾವಳಿಯಲ್ಲಿ 23 ಸಾವಿರಕ್ಕೂ ಹೆಚ್ಚೂ (23766) ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯು ಆಯೋಜಿಸಿದ್ದ ಪ್ರಶ್ನೆಗಳು ವಾರ್ಷಿಕ ಪರೀಕ್ಷೆಯಲ್ಲಿಯೂ ಬಂದಿದ್ದರಿಂದ, ಪರೀಕ್ಷಾ ತಯಾರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ತಲುಪಿ ಯಶಸ್ವಿಯಾಗಲು ಸಹಕರಿಸಿದ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಯ ಶಿಕ್ಷಕರುಗಳು, ಪೋಷಕರು, ಮಾಧ್ಯಮ ಮಿತ್ರರು, ಸೀಕೋ ಸಂಸ್ಥೆಯ ಸ್ವಯಂಸೇವಕರುಗಳು, ಸಂಘಸಂಸ್ಥೆಗಳಿಗೆ ಸೀಕೋ ಸಂಸ್ಥೆಯ ಮುಖ್ಯಸ್ಥ ಡಾ. ಹರೀಶ್ ಕುಮಾರ ಬಿ.ಕೆ. ರವರು ಧನ್ಯವಾದಗಳನ್ನು ಅರ್ಪಿಸಿದರು. ಇದೇ ರೀತಿಯ ಸಹಕಾರ ಮುಂದಿನ ಕಾರ್ಯಕ್ರಮಗಳಲ್ಲಿಯೂ ಮುಂದುವರೆಯಲಿ ಎಂದು ವಿನಂತಿಸಿದರು.


22 ಜುಲೈ 2021

ಜಿ.ಎಸ್. ಜಯದೇವರವರ ಸೋಲಿಗ ಚಿತ್ರಗಳ ಒಳನೋಟ!!!




ಈ ಲೇಖನವನ್ನು ಬರೆದ ನಂತರ ಮೂಡಿಬಂದ ನಾಲ್ಕು ಸಾಲುಗಳನ್ನು ಹೇಳುತ್ತೇನೆ. ಇದನ್ನು ಪೀಠಿಕೆಗೆ ಪೀಠಿಕೆಯೆಂದು ಓದಿಕೊಳ್ಳಿ. ಪುಸ್ತಕ ಪರಿಚಯ ಮಾಡಹೊರಟವನ್ನು, ಇಡೀ ಪುಸ್ತಕದಲ್ಲಿರುವ ಪ್ರಮುಖ ನಾಲ್ಕೈದು ವಿಷಯಗಳನ್ನು ತಿಳಿಸೋಣವೆಂದು ಬರೆದೆ. ಅಂದರೇ, ಯಾವುದೆಲ್ಲಾ ಆಯಾಮಗಳಿಂದ ನೋಡಬಹುದೆಂದು. ಮೊದಲಿಗೆ, ಸೋಲಿಗರಲ್ಲಿರುವ ಪರಿಸರ ಜ್ಞಾನ ಮತ್ತು ಸಂರಕ್ಷಣೆಯ ಪ್ರಜ್ಞೆ, ಎರಡನೆಯದಾಗಿ ನಾವುಗಳು ಅವರ ಬಗ್ಗೆ ಇರುವ ತಪ್ಪು ಕಲ್ಪನೆ ಅಥವಾ ಕೀಳರಿಮೆಯ ದೃಷ್ಟಿಕೋನ (ದಡ್ಡರು, ನಾಗರೀಕತೆಯಿಲ್ಲದವರು), ಮೂರನೆಯದು ಅವರಿಂದ ಕಾಡಿಗೆ ನಷ್ಟ/ವಂಚನೆ/ಕಳ್ಳತನ, ನಾಲ್ಕನೆಯದು ಸರ್ಕಾರ ಸಕಲ ಸವಲತ್ತುಗಳನ್ನು ನೀಡಿದೆ ಅವರಿಗೆ ಕಾಡಿನ ಮೋಹವೇಕೆ? ಸಂಶೋಧಕರಿಂದ ಉದ್ದಾರದ ಮಾತುಕತೆಗಳು, ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕøತಿಕ ಪ್ರತಿನಿಧಿಗಳಾನ್ನಾಗಿ ಈ ಪುಸ್ತಕದಲ್ಲಿ ಏನೆಲ್ಲಾ ಇದೆ ಎನ್ನುವುದನ್ನು ತಿಳಿಸಬೇಕೆಂಬುದು ನನ್ನ ಉದ್ದೇಶವಿತ್ತು. ಆದರೇ, ಹಾಗೆ ಹತ್ತು ಸಾಲುಗಳಲ್ಲಿ ಹೇಳಿ ಮುಗಿಸುವುದಕ್ಕಿಂತ, ಒಂದು ಲೇಖನವಾಗಿಯೇ ಇರಲಿ, ಮುಂದೊಮ್ಮೆ ನನಗೂ ಪುಸ್ತಕವನ್ನು ತಿರುವು ಹಾಕುವ ಸಮಯ ಬಂದಾಗ ಅನುಕೂಲವಾಗಬಹುದೆಂದು ಬರೆದಿದ್ದೇನೆ. ಕೊನೆಯ ಐದಾರು (ಪುಟ್ಟರಂಗ, ಡಾ.ಮಾದೇಗೌಡ, ಡಾ.ಜಡೇಗೌಡ, ಡಾ.ರತ್ನಮ್ಮ, ನಿರ್ಮಲಾನಂದ ಸ್ವಾಮಿಜಿ) ಅಧ್ಯಾಯಗಳನ್ನು ನೇರವಾಗಿಯೇ ಓದಬೇಕಾಗಿರುವುದರಿಂದ ಅವುಗಳ ಪರಿಚಯವನ್ನು ಮೊಟಕುಗೊಳಿಸಿದ್ದೇನೆ. ಉಳಿದಂತೆ ನನ್ನ ಅನಿಸಿಕೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ನನ್ನ ಅನಿಸಿಕೆ ಏನೇ ಇದ್ದರೂ ತಾವುಗಳು ಈ ಪುಸ್ತಕವನ್ನು ಕಡ್ಡಾಯವಾಗಿ ಓದಲೇಬೇಕಿದೆ. ಹತ್ತಾರು ಆಯಾಮಗಳಿಂದ ಓದಲೇಬೇಕಾದ ಪುಸ್ತಕ. ನಲವತ್ತು ವರ್ಷಗಳ ಸತತ ಒಡನಾಟ, ಹೋರಾಟ, ಇದೊಂದು ಸಂಶೋಧನಾ ಮತ್ತು ಆತ್ಮಕಥೆಯ ಮಿಶ್ರಣದಂತಿದೆ. 


ಈ ಬರವಣಿಗೆಯನ್ನು ತಾವುಗಳ ವಿಮರ್ಶೆಯೆಂದು ಭಾವಿಸಬಾರದಾಗಿ ಮೊದಲ ಕೋರಿಕೆ. ಎರಡು ತಿಂಗಳ ಹಿಂದೆ ಸ್ನೇಹಿತರಾದ ಗಿರೀಶ್ ತರಿಕೆರೆಯವರು ಮಾತನಾಡುತ್ತಾ, ಜಯದೇವಣ್ಣರವರ ಹೊಸಪುಸ್ತಕ ಬಂದಿದೆ ನಿಮಗೆ ಇಷ್ಟ ಆಗುತ್ತೆ, ಕಳುಹಿಸಿಸುತ್ತೇನೆ, ಎಂದರು. ಅದು, ಹೇಳಿ ತಿಂಗಳು ಕಳೆದರು ಅದರ ಬಗ್ಗೆ ಸುದ್ದಿ ಇರಲಿಲ್ಲ, ಕಳೆದ ತಿಂಗಳು, ನಿಮ್ಮ ವಿಳಾಸ ಕಳುಹಿಸಿಕೊಡಿ, ಪುಸ್ತಕ ಕಳ್ಸೋದನ್ನ ಮರೆತುಬಿಟ್ಟೆ ಎಂದರು. ಅದಾದ, ಮೂರೇ ದಿನಕ್ಕೆ ಪುಸ್ತಕ ಬಂತು, ಆದರೇ, ಸಂಚಾರಿ ವಿಜಯ್ ಸಾವಿನ ಸುದ್ದಿ ಕೇಳಿ, ಪುಸ್ತಕ ತೆರೆಯುವ ಮನಸ್ಸು ಮಾಡಿರಲಿಲ್ಲ. ಮೂರ್ನಾಲ್ಕು ದಿನಗಳ ನಂತರ ಕಣ್ನಾಡಿಸಿದೆ ಮತ್ತು ಇದು ಓದಿಸಿಕೊಳ್ಳುವ ಪುಸ್ತಕವೆಂಬ ತೀರ್ಮಾನಕ್ಕೆ ಬಂದೆ. ಹಾಗೆಯೇ ಓದಿಸಿಕೊಂಡು ಹೋದ ಪುಸ್ತಕ ಕೂಡ ಹೌದು. ಪುಸ್ತಕ ಓದುವುದು ನಾಲ್ಕು ಸಾಲು ಬರೆದು ನೀವು ಇದನ್ನು ಓದಿ ಎನ್ನುವುದು ರೂಢಿ. ಆದರೇ, ಈ ಪುಸ್ತಕದ ವಿಚಾರದಲ್ಲಿ ಅದನ್ನು ಮಾಡಲು ಮನಸ್ಸು ಒಪ್ಪುತ್ತಿಲ್ಲ. ಅದನ್ನು ಸವಿವರವಾಗಿ ಹೇಳಬಯಸುತ್ತೇನೆ. ಇದು, ನನ್ನ ಅನಿಸಿಕೆ, ಅಭಿಪ್ರಾಯಗಳು ಮಾತ್ರ. ನನ್ನಯ ಮಸೂರದಲ್ಲಿ ಸೆರೆಸಿಕ್ಕ ಆಲೋಚನೆಗಳು, ಇದು ತಮ್ಮ ಅನುಭವಕ್ಕೂ ಬರಬೇಕೆಂಬ ನಿಯಮವಿಲ್ಲ. 


ನಾನು ಈ ಪುಸ್ತಕವನ್ನು ಪರಿಚಯ ಮಾಡಿಸುತ್ತಿದ್ದೇನೆ. ಒಬ್ಬ ಓದುಗನಾಗಿ. ನಾನು ಪ್ರೋ. ಜಯದೇವರವರ ಬಗ್ಗೆ ಸಾಕಷ್ಟೂ ಕೇಳಿದ್ದೆ, ಆದರೇ ಭೇಟಿಯಾಗಿಲ್ಲ. ಪ್ರತಿಯೊಂದು ಪುಸ್ತಕವೂ ಅನೇಕ ಆಯಾಮಗಳಿಂದ ಕೂಡಿರುತ್ತದೆ. ಸೋಲಿಗ ಚಿತ್ರಗಳು, ಲೇಖಕರ ನಲ್ವತ್ತು ವರ್ಷಗಳ ಅನುಭವ, ಒಡನಾಟ, ಗುದ್ದಾಟ, ತೊಳಲಾಟ, ಸಾಧನೆ, ಸಂಯಮ, ಶಕ್ತಿ, ಯುಕ್ತಿ ಎಲ್ಲವನ್ನೂ ಪಡೆದು ರೂಪಿತವಾಗಿರುವ ಪ್ರಬಂಧವೇ ಸರಿ. ಏನಿದೇ, ಏನಿಲ್ಲವೆನ್ನುವುದು ಒಂದು ಬಗೆಯಾದರೇ, ಇದನ್ನು ಹೇಗೆಲ್ಲಾ ಸ್ವೀಕರಿಸಬಹುದೆಂಬುದು ಮತ್ತೊಂದು ಆಯಾಮ. ನಾನು ಈ ಪುಸ್ತಕದಲ್ಲಿ ಬಂದು ಹೋಗಿರುವ ಘಟನೆಗಳನ್ನು, ಮೊದಲನೆಯದಾಗಿ, ಪರಿಸರಶಾಸ್ತ್ರದ (ಇಕಾಲಜಿ) ಆಯಾಮದಿಂದ ನೋಡಬಯುಸುತ್ತೇನೆ, ಅದರಂತೆಯೇ ಸಾಮಾಜಿಕ ಆಯಾಮದಿಂದ ಮೇಲ್ನೋಟ ಅಥವಾ ಪಕ್ಷಿನೋಟವನ್ನು ನೀಡಲು ಪ್ರಯತ್ನಿಸುತ್ತೇನೆ. 


ಇಡೀ ಪುಸ್ತಕವನ್ನು ಒಟ್ಟಾರೆಯಾಗಿ ಪರಿಚಯಿಸುವುದಕ್ಕಿಂತ, ಪ್ರತಿ ಅಧ್ಯಾಯದಲ್ಲಿಯೂ ನನಗೆ ತೋಚಿದ್ದನ್ನು ಹಂಚಿಕೊಳ್ಳುವುದು ಸೂಕ್ತವೆಂಬುದು ನನ್ನ ಅನಿಸಿಕೆ. ಪುಸ್ತಕವು ಒಟ್ಟು 19 ಅಧ್ಯಾಯಗಳನ್ನು ಒಳಗೊಂಡಿದೆ. 


ಮೊದಲನೆಯ ಅಧ್ಯಾಯವು ಮಸಣಮ್ಮ ಬಿಚ್ಚಿಟ್ಟ ಮಹಾರಾಜರ ನೆನಪುಗಳೊಂದಿಗೆ ಪ್ರಾರಂಭವಾಗುತ್ತದೆ. ಮಸಣಮ್ಮನ ಮತ್ತು ಅವರ ಮಗಳಿಂದ ಕೇಳಿದ ಅನುಭವದ ಕಥೆಗಳು ನಮ್ಮ ಮೈಸೂರು ಮಹಾರಾಜರ ಬಗ್ಗೆ ನಮ(ನ)ಗೆ ಇದ್ದ ಅನೇಕ ದೋಷಾರೋಪಗಳನ್ನು ದೂರಪಡಿಸಿತು. ನಾವುಗಳು, ಸಿನೆಮಾ, ಕಥೆ, ಕಾದಂಬರಿ, ಪುಸ್ತಕಗಳಲ್ಲಿ ಓದಿರುವುದು ರಾಜರುಗಳು ಕಾಡಿಗೆ ಬೇಟೆಯಾಡಲು ಹೋಗುತ್ತಿದ್ದರು ಎಂದು. ಆದರೇ, ಮಸಣಮ್ಮನ ನೆನಪುಗಳ ಪ್ರಕಾರ, ಮಹಾರಾಜರು ಕಾಡಿನ ಸೌಂದರ್ಯವನ್ನು ಆನಂದಿಸಲು ಹೋಗುತ್ತಿದ್ದರು, ಕಾಡಿನ ಕೌತುಕಗಳನ್ನು ಕಲಿಯಲು ಬಯಸುತ್ತಿದ್ದರು. “ಏನು ಮಸಣಮ್ಮ, ಗುಡಿಹಟ್ಟಿ ಕಾಡಿನಲ್ಲಿ ಬೇಕಾದಷ್ಟು ಹುಲಿಗಳಿವೆ ಅಂತಾರೆ; ಮಹಾರಾಜರು ಎಷ್ಟು ಹುಲಿ ಹೊಡೆದರು?”. “ಚೀಚೀ..... ನಮ್ಮ ಮಾರಾಜ ಕೊಲೆಗಾರ ಅಲ್ಲಪ್ಪ, ಅವರು ಒಂದು ಹುಲೀನೂ ಕೊಂದಿಲ್ಲ”, ಮುಂದುವರೆದು ಹೇಳ್ತಾರೆ, “ತುಪಾಕಿ ಇದೆ ಅಂತ ಹುಲಿನ್ಯಾಕಪ್ಪ ಹೊಡೀಬೇಕು? ಇಲ್ಲಪ್ಪ, ಅವರು ಕೊಲೆಗಾರ ಅಲ್ಲ, ಅವರು ಹುಲೀನ ಕೊಲೆ ಮಾಡಲಿಲ್ಲ”. ಈ ಮೇಲಿನ ಸಂಭಾಷಣೆ, ಎರಡು ವಿಚಾರಗಳನ್ನು ತಿಳಿಸಿಕೊಡುತ್ತಿದೆ, ಒಂದು ಮಹಾರಾಜರ ವ್ಯಕ್ತಿತ್ವ, ಮತ್ತೊಂದು ಹುಲಿ ಕೊಲ್ಲುವುದನ್ನು ವೀರತನ, ಶೂರತನ ಎಂದು ಕಲಿತಿರುವ ನಾವು ಮತ್ತು ಮಸಣಮ್ಮ. ಮಸಣಮ್ಮ, ಹುಲಿ ಕೊಲ್ಲುವುದನ್ನು ಕೊಲೆ ಎನ್ನುತ್ತಿದ್ದಾಳೆ. ಬೇಟೆ, ಎನ್ನುವ ಪದವನ್ನು ಬಳಸಿಲ್ಲ. 


ಅದರಂತೆಯೇ, ಸೋಲಿಗರ ಜೀವನವನ್ನು ಬದಲಾಯಿಸಲು (ಅಭಿವೃದ್ಧಿ ಪಡಿಸಲು), ಮಹರಾಜರು ಅನೇಕ ಯೋಜನೆಗಳನ್ನು ಕೈಗೊಂಡು ಸೋತ್ತಿದ್ದನ್ನು ನೆನಪಿಸಿಕೊಳ್ಳಬಹುದು. ಅರಮನೆಗೆ ಅವರಲ್ಲಿ ಕೆಲವರನ್ನು ಕರೆತಂದು, ಶಿಕ್ಷಣ ಕೊಡಿಸುವ ಯೋಜನೆಯನ್ನು ರೂಪಿಸುತ್ತಾರೆ. ಆದರೇ, ಸೋಲಿಗರಿಗೆ ತಮ್ಮ ಕಾಡೇ ಪ್ರಪಂಚ, ಸ್ವರ್ಗ, ಅವರಿಗೆ ಈ ನಗರ ಜೀವನ ಹಿಡಿಸುವುದಿಲ್ಲ. ಹಾಗಾಗಿಯೇ, ಅವರನ್ನು ಅವರ ಪಾಡಿಗೆ ಬಿಡಬೇಕು, ಸ್ವಚ್ಛಂದವಾಗಿರಲಿ ಎಂದು “ನೀರ ಮೀನು ನೀರಲ್ಲೇ ಇರಬೇಕು” ಎಂಬ ತೀರ್ಮಾನಕ್ಕೆ ಬರುತ್ತಾರೆ. ಈ ಅಧ್ಯಾಯದಲ್ಲಿ ಮಹಾರಾಜರು ಸೋಲಿಗರನ್ನು ಪ್ರೀತಿಸುತ್ತಿದ್ದ ರೀತಿ ಮತ್ತು ಸೋಲಿಗರು ಮಹಾರಾಜರ ಮೇಲಿನ ಗೌರವಗಳು ನಮ್ಮ ಅರಿವಿಗೂ ಮೀರಿ ಕಾಣಸಿಗುತ್ತವೆ. ಬಹಳ ಮುಖ್ಯವಾಗಿ, ಕಾಡಿನ ಬಗ್ಗೆಯ ಒಲವು, ನಾಳೆಗೆ ಕೂಡಿಡಬೇಕೆಂಬ ಆತಂಕವಿಲ್ಲದ ಸಾಮಾನ್ಯ ಬದುಕು ನಮ್ಮನ್ನು ಆಕರ್ಷಿಸುತ್ತದೆ. 


ಎರಡನೆಯ ಅಧ್ಯಾಯ, ಪೊಟರೆಯಲ್ಲಿ ಭೂಲೋಕ ಶೆಟ್ಟಿ, ಈ ಅಧ್ಯಾಯವು ವಿದ್ಯಾರ್ಥಿಗಳ ಪಠ್ಯ ಪುಸ್ತಕಕ್ಕೆ ಸೇರ್ಪಡೆಯಾಗಬೇಕೆಂಬುದು ನನ್ನ ಬಯಕೆ. ತಿಳಿ ಹಾಸ್ಯ, ಒಬ್ಬರೇ ಕುಳಿತು ಓದುತ್ತಿದ್ದರೂ ಅಥವಾ ನೆನಪಿಸಿಕೊಂಡರೂ ನಗುವಂತೆ ಮಾಡುತ್ತದೆ. ನಾವು ಚಿಕ್ಕವರಿದ್ದಾಗ ಈ ರೀತಿಯ ಅನೇಕ ಕಥೆಗಳನ್ನು ಕೇಳಿದ ನೆನಪು ಬರುತ್ತದೆ. ಈ ಅಧ್ಯಾಯದಲ್ಲಿ, ಭೂಲೋಕ ಶೆಟ್ಟಿಯ ಕಥೆಯೊಂದಿಗೆ, ಸೋಲಿಗರ ಪೂಜೆ, ನಂಬಿಕೆ, ಶ್ರಧ್ಧೆಗಳು ಅನಾವರಣಗೊಳ್ಳುತ್ತವೆ. ದೇವರ ಮೇಲಿನ ನಂಬಿಕೆ ಎಷ್ಟು ನಿಸ್ವಾರ್ಥದಿಂದ ಇರುತ್ತದೆ, ಮತ್ತು ಅಲ್ಲಿನ ಮುಗ್ದತೆ ಕೆಲವೊಮ್ಮೆ ನಾವು ಮಾಡುವ ಆಡಂಬರದ, ಅಬ್ಬರದ ಪೂಜೆಗಳು ಏಕೆ ಎನ್ನುವ ಹಂತಕ್ಕೆ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. 


ಚಿಕ್ಕಣ್ಣೆನ ಡ್ರೈವಿಂಗ್ ಮಹಾತ್ಮೆ ಮೂರನೆಯ ಅಧ್ಯಾಯವಾಗಿದೆ. ಚಿಕ್ಕಣ್ಣನನ್ನು ನೆನೆಯುವಾಗ ನನಗೆ ತೇಜಸ್ವಿಯವರ ಅಣ್ಣನ ನೆನಪುಗಳು ಬಂದವು. ಚಿಕ್ಕಣ್ಣ ಸೋಲಿಗ ಹುಡುಗನಾಗಿ, ಅವನಿಗೆ, ಜೀಪಿಗೆ ಜೀವವಿದೆ ಎನ್ನುವ ಮಟ್ಟಕ್ಕೆ ಭಾವುಕನಾಗುತ್ತಾನೆ. ಅಥವಾ ಅದೊಂದು ನಂಬಿಕೆಯಿಂದ, ವ್ಯವಹರಿಸಲು ಯತ್ನಿಸುತ್ತಾನೆ. ನಮಗೆಲ್ಲರಿಗೂ ವಾಹನಗಳು ವಸ್ತುಗಳು, ಆದರೇ, ಮುಗ್ಧ ಜನರಿಗೆ ಅದು ನಮ್ಮಂತೆಯೇ ಜೀವವಿರುವ/ವಿಲ್ಲದೆಯಿರುವ ಮತ್ತೊಂದು ಜೀವಿ. ಇದನ್ನು, ನಾನು ನನ್ನೂರಿನಲ್ಲಿಯೂ ಹಿಂದೆ ಕೇಳಿಸಿಕೊಳ್ಳುತ್ತಿದ್ದೆ. ಅಯ್ಯೋ ಆ ಸೈಕಲ್ ಗೆ ಯಾಕೆ ಹಂಗೆ ಜೀವ ತಿನ್ನುತ್ತೀಯೋ ಮಾರಾಯಾ? ಅಂತಾ. ಕೇವಲ ಕೆಲವು ದಿನಗಳು ಚಿಕ್ಕಣ್ಣ ಬೆಟ್ಟದಿಂದ ಮೈಸೂರಿಗೆ ಬಂದಾಗ ಅವನ್ನಾಲ್ಲಾದ ಬದಲಾವಣೆಗಳು, ನಾಗರೀಕತೆಯ ವೇಗವನ್ನು ನಮಗೆ ತಿಳಿಸುತ್ತದೆ. 


ಸಾರಿ ಮಾದಮ್ಮನ ಕಥೆ, ಅದೊಂದು ನಡೆದಾಡುವ ಲೈಬ್ರರಿಯಂತಲೇ ಕರೆಯಬಹುದು. ಈ ಮಾತು ಪ್ರಬಂಧದಲ್ಲಿ ಹೆಸರಿಸಿರುವ ಎಲ್ಲಾ ಸೋಲಿಗ ಹಿರಿಯರಿಗೂ ಅನ್ವಯವಾಗುತ್ತದೆ. ಅಷ್ಟು ನೇರವಾಗಿ ನಮಗೆ ಮಾತನಾಡಲು ಅಸಾಧ್ಯವೇ ಸರಿ. ಲೇಖಕರ ಮಾತಲ್ಲೇ ಕೇಳುವುದಾದರೇ, “ತಲೆಯಲ್ಲಿ ಯಾವುದೇ ಗೊಂದಲಮಯವಾದ ಚಿಂತನೆಗಳು ಇಲ್ಲದ್ದರಿಂದ ತನಗೆ ಅನಿಸಿದ್ದನ್ನು ತಪ್ಪು-ಸರಿಗಳ ಬೇಧವಿಲ್ಲದೆ ತನ್ನ ಮಾತಿನಲ್ಲೇ ಪಟಪಟನೆ ಹೇಳಿಬಿಡುತ್ತಿದ್ದಳು”. “ಅನಿಸಿದ್ದನ್ನು ನೇರವಾಗಿ ಹೇಳುವ ಅವಳಿಗೆ ತರ್ಕ-ರುಜುವಾತುಗಳು ಅಸಹಜವಾಗಿ ಕಂಡಿರಬೇಕು. ಕಂಡದ್ದನ್ನು ಕಂಡಂತೆ ಹೇಳುವುದೇ ಸಹಜ ಪ್ರವೃತ್ತಿಯಾಗಿರುವಾಗ ಪರ್ಯಾಯಗಳ ಪ್ರಶ್ನೆ ಎಲ್ಲಿದೆ? ಇಂತಹ ಸಹಜ ಬದುಕಿಗೆ ಬೇಕಾಗುವಷ್ಟು ಮುಗ್ಧತೆಯನ್ನು ಹೇಗೆ ತಾನೆ ಕಾಪಾಡಿಕೊಂಡಿದ್ದಾಳೋ ದೇವರೇ ಬಲ್ಲ”. 


ಅಚ್ಚುಗೆಗೌಡನ ಕಾಡುಶುಂಠಿಪಾಠ, ಪರಿಸರ ಸಂರಕ್ಷಣೆ, ಭೂ ಗುಣಮಟ್ಟದ ಬದಲಾವಣೆ, ರೈತರ ದೃಷ್ಠಿಕೋನ ಇತ್ಯಾದಿಗಳಿಗೆ ಪ್ರಶ್ನೆ ಹುಡುಕಲು ಮುನ್ನುಡಿಯಾಗಿ ಬಳಸಬಹುದು. ಅದರ ಜೊತೆಗೆ, ಸೋಲಿಗರ ಜೀವನ ಶೈಲಿ ಬದಲಾಗಿರುವುದನ್ನು ಸೂಕ್ಷ್ಮವಾಗಿ ತೆರೆದಿಡುತ್ತದೆ. ಚಪ್ಪಲಿಗಳನ್ನು ಹಾಕಿಕೊಂಡು ಮನೆಯಂಗಳದ ತನಕ ಬರುವ ಸಡಿಲಿಕೆ, ಪ್ಲಾಸ್ಟಿಕ್ ಚಾಪೆಗಳು, ಬೈಕ್, ಕಾರು, ಟಿವಿ, ಇತ್ಯಾದಿಗಳು. ಇಪ್ಪತ್ತು ವರ್ಷದ ಹಿಂದೆ ಫಾರೆಸ್ಟ್ ಆಫೀಸರ್ ಒಬ್ಬರು ಶೂ ಹಾಕಿ ಮನೆಯೊಂದಕ್ಕೆ ನುಗ್ಗಿದರು, ಎನ್ನುವ ಕಾರಣಕ್ಕೆ ಐ.ಎಫ್.ಎಸ್ ಅಧಿಕಾರಿಯ ಮೇಲೆ ಕೈಯೆತ್ತಿದ್ದ ಸೋಲಿಗರು, ಈಗ ಚಪ್ಪಲಿ ಶೂ ಮಾಮೂಲಿಯಂತೆ ಬದಲಾಗಿರುವುದು ಮತ್ತು ಅದರ ವೇಗ! ಅಚ್ಚರಿಯನ್ನು ಮತ್ತು ಆತಂಕವನ್ನು ಹುಟಿಸುತ್ತದೆ. ಅಚ್ಚುಗೆಗೌಡರು ಶುಂಠಿ ಮತ್ತು ಅರಿಶಿನವನ್ನು ಯಾವುದೇ ಖರ್ಚಿಲ್ಲದೇ ಬೆಳೆಯುತ್ತಿರುವುದನ್ನು ದಾಖಲಾಗಿಸಲಾಗಿದೆ. 


ಲೇಖಕರು ಮತ್ತು ಅಚ್ಚುಗೌಡನ ನಡುವೆ ನಡೆಯುವ ಕೆಲವು ಸಂಭಾಷಣೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. “ಇವೆಲ್ಲಾ ಯಾವ ಕಾಡಿನಲ್ಲಿ ಸಿಗುತ್ತಯ್ಯ?” “ಅಯ್ಯೋ ಈ ಕಾಡು ಶುಂಟಿ ಕಾಡು ಅರಿಶಿನ ಮೊದಲು ನಮ್ಮ ಸುತ್ತಮುತ್ತಲ ಕಾಡ್ನಲ್ಲೇ ಸಿಕ್ತಾ ಇತ್ತು. ಆದರೆ ಈಗ ಕಾಡಿನ ಒಳಾಕ್ಕೆ ಹೋಗಬೇಕು”. “ಈ ಯಾವ ಖರ್ಚು ಇಲ್ಲದೆ ಇವು ಕಾಡಿನಲ್ಲಿ ಸಲೀಸಾಗೇ ಬೆಳೀತಾ ಇದೆಯಲ್ಲ ಇದು ಹೇಗೆ?” “ಇವು ಕಾಡು ಜಾತಿಸ್ವಾಮಿ, ಇವುನ್ನ ನೀವು ತಗೊಂಡ್ಹೋಗಿ ಊರುಜಾತಿ ಮಾಡ್ಕೊಂಡ್ರೆ ರೋಗ ಬರ್ದೆ ಇರುತ್ತ? ಇಲ್ಲಿ ರೈತರ ಸಮಸ್ಯೆಗಳು ಎನ್ನುವುದಕ್ಕಿಂತ, ಅವರ ಆಲೋಚನೆಗಳಲ್ಲಿರುವ ಸಮಸ್ಯೆಗಳ ಕಡೆಗೆ ಬೆಳಕು ಚೆಲ್ಲಲಾಗಿದೆ. ಗೌಡನು ತನ್ನ ತೋಟದಲ್ಲಿ ಬೆಳೆಯುವ ಬೆಳೆಗೆ ಬಳಸುವ ಗೊಬ್ಬರಗಳ ವಿಚಾರ ಬಂದಾಗ, “ಅಯ್ಯೋ ನಾನ್ಯಾವ ಗೊಬ್ಬರ ತರ್ಲಿ ಸ್ವಾಮಿ, ಮರದ ಎಲೆಗಳೇ ಬಿದ್ದೂ ಬಿದ್ದೂ ಗೊಬ್ಬರ ಆಗಿದೆ; ನಂದೂ ಒಂದೋ ಎರಡೋ ಮೂರೋ ಹಸುಗಳಿವೆ, ಮೇಕೆ ಇದೆ. ಗೊಬ್ಬರನೆ ಹಾಕ್ತೀನಿ”. “ಭೂಮಿತಾಯಿ ಪಾಲನ್ನು ಭೂಮಿತಾಯಿಗ್ ಕೊಡ್ತೀನಿ, ಅವಳು ಕೊಟ್ಟಷ್ಟು ಇಸ್ಕೊತಿನಿ; ಚಿಕ್ಕಪುಟ್ಟ ಖರ್ಚುಗಳೆಲ್ಲ ಇದರಲ್ಲೆ ಕಳೆಯುತ್ತೆ ಅನ್ನಿ”.


ಇಡೀ ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ಲಾಂಟಾನದ ಕುರಿತು ಇಲ್ಲಿಯೇ ಹೇಳಬಯಸುತ್ತೇನೆ. ಇದು ಬಹಳ ಸೂಕ್ಷ್ಮ ಮತ್ತು ಪ್ರಮುಖವಾದ ವಿಚಾರ. ತಮ್ಮ ಕಾಡು ನಾಶವಾಗುತ್ತಿರುವುದರ ಕುರಿತು ಸೋಲಿಗ ಹಿರಿಯರಲ್ಲಿರುವ ಆತಂಕವನ್ನು ಲೇಖಕರು ಬಹಳ ಚೆನ್ನಾಗಿ ಗ್ರಹಿಸಿದ್ದಾರೆ. ಗ್ರಹಿಸಿದ್ದಾರೆನ್ನುವುದಕ್ಕಿಂತ ಅವರು ಅದಕ್ಕೆ ಸಾಕ್ಷಿಯಾಗಿದ್ದಾರೆ. ಕಳೆದ ನಲವತ್ತು ವರ್ಷಗಳಲ್ಲಿ ಬದಲಾಗಿರುವ ಕಾಡಿನ ಸೂಕ್ಷ್ಮತೆಯನ್ನು ಸೋಲಿಗರ ಕನ್ನಡಿಯಿಂದಲೇ ಲೇಖಕರ ಅನುಭವಕ್ಕೆ ಬಂದಿದೆ ಎನ್ನಬಹುದು. ಸೋಲಿಗರಿಗೆ ಸಣ್ಣಪುಟ್ಟ ಬದಲಾವಣೆಗಳನ್ನು ಗಮನಿಸುವ ಶಕ್ತಿಯಿದೆ. ಅದು ಅವರು ಕಾಡಿನೊಂದಿಗೆ ಒಂದಾಗಿ ಬೆರೆತಿರುವುದಕ್ಕೆ ಕೈಗನ್ನಡಿ. ಲಾಂಟಾನದಿಂದ ಕೇವಲ ಪ್ರಾಣಿಗಳಲ್ಲ, ಚಿಟ್ಟೆಗಳ ಸಂತತಿ ಕಡಿಮೆಯಾಗುತ್ತಿರುವುದನ್ನು ಅಚ್ಚುಗೌಡ ಗಮನಿಸಿರುವುದು ಮತ್ತು ದಿಗ್ಬ್ರಮೆಗೊಂಡಿರುವುದು ಕಾಣುತ್ತದೆ. ನಾವು ವಿವಿಗಳಲ್ಲಿ ಕಲಿಸಲು ಒದ್ದಾಡುತ್ತಿರುವ ಇಕಾಲಾಜಿಕಲ್ ಬ್ಯಾಲೆನ್ಸ್ ಎಂಬ ಸಂಕೀರ್ಣತೆಯನ್ನು ಅಚ್ಚುಗೌಡ ಅಚ್ಚುಕಟ್ಟಾಗಿ ಹೇಳಿದ್ದಾನೆ. ಆನೆಗಳ ಆಹಾರ ಪದ್ದತಿಯನ್ನು, ಮೀನುಗಾರಿಕೆ, ಮರಗಿಡಗಳ, ಕೊನೆಗೆ ಭೂಮಿಗೆ/ಪರಿಸರಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಶಕ್ತಿಯಿದೆ, ಅದನ್ನು ಇಲಾಖೆವತಿಯಿಂದ ಮಾಡುವ ಅವಶ್ಯಕತೆಯಿಲ್ಲವೆನ್ನುವುದು ಸತ್ಯವೂ ಆಗಿದೆ. 


ಇಕಾಲಾಜಿಕಲ್ ಬ್ಯಾಲೆನ್ಸ್ ಕುರಿತು “ಏನಯ್ಯ ಉದುರುಂಬೆ ಬಳ್ಳಿ ಹೂ ಕಚ್ಚಿದಾಗ ಕಣಜ ಸಾಯ್ತವಂತೆ ನಿಜಾನಾ?” “ದಿಟ ಸ್ವಾಮಿ, ಉದುರುಂಬೆ ಹೂಬಿಟ್ಟರೆ ಕಣಜಗಳು ಸಾಯ್ತಾವೆ, ಉಳಿಕೊಂಡಿರೋವ್ರು ಮರದ ಗೋಗಿನಲ್ಲಿ (ಪೊಟರೆ) ಜಾಸ್ತಿ ತ್ಯಾವ ಇರೊ ಕಡೆಗೆ ಅಡಕ್ಕೊತಾವೆ. ಉದುರುಂಬೆ ಹೂಗಳು ಬಿದ್ದೊದ್ ಮ್ಯೇಲೆ ಅವು ಹೊರಾ ಬರ್ತಾವೆ”. ಅದೇ ರೀತಿ ತರಗು ಬೆಂಕಿ ಮತ್ತು ಕಾಡಿನ ನಿರ್ವಹಣೆ ಬಗ್ಗೆ ಅನೇಕ ವಿಚಾರಗಳು, ವಿವಿಯಲ್ಲಿ ಕುಳಿತು ಲಕ್ಷಾಂತರ ಸಂಬಳ ಪಡೆದು ಊದಿದ್ದೇ ಪುಂಗಿ ಊದುತ್ತಿರುವರು ಕಲಿಯಬೇಕಿದೆ, ಅದು ಆಗದ ಮಾತು. 


ಕುನ್ನೇಗೌಡನ ಹುಲಿಗಣತಿಯ ಕಥೆಗಳು ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯ ದುರಂತಕ್ಕೆ ಸಾಕ್ಷಿಯಾಗಿದೆ. ಹುಲಿಯನ್ನು ಕುರಿತು, ಅದರ ಅಧ್ಯಯನದಿಂದ ಕೋಟ್ಯಾಂತರ ಕೊಳ್ಳೆಹೊಡೆದು, ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡ ಮೇಧಾವಿಗಳನ್ನು ನೇರವಾಗಿ ಹೆಸರಿಸದೇ ಇದ್ದರೂ, ನನ್ನ ಅನುಭವಕ್ಕೆ ಬಂದ ಹಾಗೆ ಕೆಲವೊಂದು ವಿಷಯಗಳನ್ನು ಮುಂದೊಮ್ಮೆ ಹಂಚಿಕೊಳ್ಳಬಯಸುತ್ತೇನೆ. ಕುನ್ನೇಗೌಡನ ಮಾತಲ್ಲಿ ಅವರ ಬಗ್ಗೆ ಕೇಳಿ, “ಅಯ್ ಕನ್ನಡಕ ಹಾಕಿ ಬೂಟು ಮೆಟ್ಟಿ ಬರ್ತಾವೆ, ಅವ್ರಿಗೆ ನಾನ್ ತಾನೆ ತೋರಿಸ್ಬೇಕು ಹುಲಿಹೆಜ್ಜೆನ, ಅವರಿಗೇನ್ ಹುಲಿ ಕಂಡಾವ; ಮೈಸೂರು ಜೂನಲ್ಲಿ ನೋಡ್ಬೇಕಷ್ಟೆ”. ಸೋಲಿಗರು ತಮ್ಮ ಪೋಡುಗಳ ಆಯ್ಕೆಯ ವಿಧಾನ ನಿಜಕ್ಕೂ ಅಚ್ಚರಿ ಮತ್ತು ಅದೆಷ್ಟು ವೈಜ್ಞಾನಿಕ ಲೆಕ್ಕಾಚಾರಗಳಿವೆ ಎನಿಸುತ್ತದೆ. ಆನೆಗಳಿಗೆ ಇಷ್ಟವಾಗುವ ಬಾಣೆಹುಲ್ಲು ಸಿಗದೆಯಿರುವುದರಿಂದ ಈಗ ಆನೆಗಳು, ಯಾವ್ಯಾವುದೋ ಮರಗಳ ತೊಗಟೆಗಳನ್ನು ತಿನ್ನುತ್ತಿರುವುದು ದುರಂತ. ಕುನ್ನೇಗೌಡರು ವಿವರಿಸಿದ ಹಂಬುಗಳ ಪಟ್ಟಿಯನ್ನು ನೆನೆದರೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಈ ಹಿಂದೆಯೇ ಹೇಳಿದಂತೆ ಕಾಡುಪ್ರಾಣಿಗಳ ಹತ್ಯೆಯ ಕುರಿತು ಈ ಮಾತುಗಳನ್ನು ಕೇಳಿ. ಹುಲಿಯನ್ನು ಹೊಡೆದುರುಳಿಸುವುದು ನಾಡಜನಕ್ಕೆ ಒಂದು ಸಾಹಸ ಕಥೆ, ಸಾಧನೆಯ ಹೆಗ್ಗುರುತು. ಆದರೆ, ಸೋಲಿಗರಿಗೆ ಕಾಡಿನ ಯಾವುದೇ ಪ್ರಾಣಿಯನ್ನು ಕಾರಣವೇ ಇಲ್ಲದೆ ಸಾಯಿಸುವುದು ಕೊಲೆಗೆ ಸಮಾನ. ಇದೊಂದು ಸಾಲು ಸಾಕಾಗುತ್ತದೆ, ಸೋಲಿಗರು ಕಾಡನ್ನು ಹೇಗೆ ಆರಾಧಿಸಿ, ಪ್ರೀತಿಸಿ, ಗೌರವಿಸುತ್ತಾರೆನ್ನುವುದಕ್ಕೆ. ಸರ್ಕಾರ ಎಲ್ಲಾ ಸಪ್ಲೈ ಆಗ್ತಾ ಅದೆ ಆದ್ರೆ ಹಿಂದೆ ಇದ್ದ ಸಂತೋಷ ಈಗ ಇಲ್ಲ ಎನ್ನುತ್ತಾನೆ ಕುನ್ನೇಗೌಡ. 


ರೊಟಿಹಬ್ಬದ ಸಂಭ್ರಮವೇ ಸಂಭ್ರಮ. ಸಂಭ್ರಮಿಸುವುದಕ್ಕೆ ಕಾರಣ ಬೇಕೆ? ಸೋಲಿಗರಲ್ಲಿ ಅಂತಹ ಅನೇಕ ಹಬ್ಬಗಳಲ್ಲಿ ಮುಖ್ಯವಾಗಿರುವುದು ರೊಟ್ಟಿ ಹಬ್ಬ. ಇಲ್ಲಿ ಪರಿಸರ ದೃಷ್ಠಿಯಿಂದ ನೋಡುವಾಗ, ನೇರಳೆ ಸೊಪ್ಪಿನ ಚಪ್ಪರ ನನಗೆ ಆಕರ್ಷಕವೆನಿಸಿತು. ಒಂದು ರೀತಿಯಲ್ಲಿ ಅದು ಬೇಗ ಬಾಡುವುದಿಲ್ಲವೆನ್ನುದು ಸರಿಯೆನಿಸಿದರೂ, ನೇರಳೆ ಹಣ್ಣಿಗೆ/ಮರಕ್ಕೆ ವಿಶೇಷ ಔಷಧಿ ಗುಣಗಳಿವೆ. ಅದು ಒಂದು ಕಾರಣವಿರಬಹುದೆ? ಚಪ್ಪರ ಕಟ್ಟಲು ಬಳಸುವ ಹಂಬುಗಳು ಅಷ್ಟೆ, ನಗರವಾಸಿಗಳಿಗೆ ಹಂಬು ಎಂಬುದರ ಕಲ್ಪನೆಯಿರುವುದು (ಕ್ಲೈಂಬರ್) ಕೆಲವು ಗಿಡಗಳಿಗೆ ಮೀಸಲು. ಇದೇ ಸಂಧರ್ಭದಲ್ಲಿ ಪುಟ್ಟರಂಗ ಹೇಳುವ ಒಂದು ಮಾತು ಚೆನ್ನಾಗಿದೆ, “ಅನ್ನದಲ್ಲೇನಿದೆ ಸಾರ್, ರೊಟ್ಟಿ ಮುದ್ದೆ ತಿಂದ್ರೆ ಹೊಟ್ಟೆ ತುಂಬೊ ಹಂಗೆ ಅನ್ನ ತಿಂದ್ರೆ ಹೊಟ್ಟೆ ತುಂಬುತ್ತ?”. ಮತ್ತೊಂದು ವಿಚಾರವನ್ನು ತಮ್ಮ ವಿವೇಚನೆಗೆ ಬಿಡುತ್ತಿದ್ದೇನೆ, 80ರ ದಶಕದಲ್ಲಿ ಹಾಲು ಮೊಸರನ್ನು ಕುಡಿಯಲು ಇಷ್ಟಪಡದ ಸೋಲಿಗರು, ಇಂದು ದನ ಎಮ್ಮೆ ಕಟ್ಟುತ್ತಿದ್ದಾರೆ ಮತ್ತು ಹಾಲು ಮೊಸರಿಗೆ ಒಗ್ಗಿಹೋಗಿದ್ದಾರೆ. ಇಲ್ಲಿ ಆಗಿರುವ ಬದಲಾವಣೆಯನ್ನು ನಾಲ್ಕಾರು ಆಯಾಮಗಳಿಂದ ನೋಡಬಹುದು. ಮತ್ತೊಂದು ಪ್ರಮುಖ ಆಕರ್ಷಣೆ ‘ಜಾಲದ ಹೂ’. ಕೆಲವು ಸಸ್ಯಸಂಕುಲಗಳು ಸ್ಥಳೀಯ ವಾಯುಗುಣವನ್ನು ಪ್ರತಿನಿಧಿಸುತ್ತವೆ, ಅಂತಹ ಗುಂಪಿಗೆ ಸೇರುವುದು ಈ ಜಾಲದ ಹೂ. ಸೋಲಿಗರ ಪ್ರಧಾನ ಬೆಳೆ ರಾಗಿ, ಎಡ್ಡ (ದಂಟು). ಈ ದಂಟನ್ನು/ದಂಟಿನ ಬೀಜವನ್ನು 5-6 ಸಾವಿರ ವರ್ಷಗಳಿಂದ ಬಳಸುತ್ತಿದ್ದಾರೆಂದರೆ ಆದಿವಾಸಿಗಳ ಕೊಡುಗೆ ಎಷ್ಟಿರಬೇಕು? 


ಮಾನವ ಮತ್ತು ವನ್ಯಜೀವಿ ಸಂಘರ್ಷದ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ, ಅಧ್ಯಯನಗಳ ಹೆಸರಲ್ಲಿ, ಯೋಜನೆಗಳ ಹೆಸರಲ್ಲಿ ಸರ್ಕಾರ ಕೋಟ್ಯಾಂತರ ರೂಗಳನ್ನು ಚೆಲ್ಲಿದ್ದು ಆಯ್ತು, ಅನೇಕ ಬೃಹಸ್ಪತಿಗಳು, ಪ್ರಮೋಷನ್ ತೆಗೆದುಕೊಂಡು, ವಿಚಾರಸಂಕಿರಣ, ಸಮ್ಮೇಳನ ಅಂತಾ ವಿದೇಶಗಳನ್ನು ಸುತ್ತಿದ್ದು ಆಯ್ತು. ಗಮನಿಸಬೇಕಾಗಿದ್ದು, ಈ ಹಿಂದೆಲ್ಲಾ ರಾಗಿ, ಎಡ್ಡ, ಕುಂಬಳ, ಬಾಳೆ ಬೆಳೆಯುತ್ತಿದ್ದ ಸೋಲಿಗರು, ಯಾವುದೇ ಬೇಲಿ, ವಿದ್ಯುತ್, ಕಂದಕಗಳು ಇಲ್ಲದೇ ಅವರ ಬೆಳೆಗಳನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದರು. ಹಿಂದೆಲ್ಲಾ ಆನೆಗಳಿಗೆ ಪ್ರಮುಖ ಆಹಾರ ಬಾಣೆಹುಲ್ಲು ಮತ್ತು ಎಲ್ಲಾ ಕೆರೆಗಳು ತುಂಬಿರುತ್ತಿದ್ದದ್ದು. ಈಗ ಈ ಎರಡೂ ಮರೆಯಾಗಿವೆ. ಲಾಂಟಾನ ಅತಿಯಾಗಿ ಆವರಿಸಿಕೊಂಡಿದೆ. ಅದರೆ ಜೊತೆಯಲ್ಲಿ ಗಮನಿಸಬೇಕಾದದ್ದು ವಿವಿಧ ರೀತಿಯ ಬಾಳೆಹಣ್ಣುಗಳ ತಳಿಯನ್ನು ಕಳೆದುಕೊಂಡಿರುವುದು, ದುರ್ಗಾಬಾಳೆ, ಉದರಬಾಳೆ, ಪುಟ್ಟಬಾಳೆ, ಕೆಂದುಬಾಳೆ, ಬೆಟ್ಟದಬಾಳೆ, ಅದೆಲ್ಲದ್ದಕ್ಕೂ ಮಿಗಿಲಾಗಿ ನಮ್ಮ ನಂಜನಗೂಡು ಬಾಳೆಯೆ ಕಣ್ಮರೆಯಾದ್ದದ್ದು. ಅತಿಯಾದ ರಾಸಾಯನಿಕ ಬಳಸಿ ಬಾಳೆ ಬೆಳೆದು, ಅದರ ರುಚಿ ಮತ್ತು ನಮ್ಮ ಆರೋಗ್ಯ ಎರಡನ್ನು ಹಾಳು ಮಾಡಿಕೊಂಡಿದ್ದೇವೆ. ರೊಟ್ಟಿ ಹಬ್ಬದಂತೆಯೆ ಹೊಸರಾಗಿ ಹಬ್ಬವೂ ಪ್ರಾಮುಖ್ಯತೆ ಗಳಿಸಿದೆ, ಹಬ್ಬದ ಹೆಸರೆ ಹೇಳುವಂತೆ, ಹೊಸರಾಗಿ ಬೆಳೆದು ಅದನ್ನು ಆಚರಿಸುವುದು. ಆದರೆ, ಇಂದು ಅಂಗಡಿಯಿಂದ ರಾಗಿ ತಂದು ಹಬ್ಬ ಮಾಡುವ ಮಟ್ಟಕ್ಕೆ ಸೋಲಿಗರನ್ನು ಬದಲಾಯಿಸಿದೆ. 


ರೊಟ್ಟಿ ಸುಡಲು ಬಳಸುವ ಕೂಗೆಲೆ, ಎರಕನ ಎಲೆ, ಮುರುಕಿ ಎಲೆಯ ಚರ್ಚೆಗಳಾಗಿವೆ. ಸೋಲಿಗರು ಬಳಸುವ ಪ್ರತಿಯೊಂದು ಎಲೆಗಳು, ಗಿಡಗಳು ಹೆಚ್ಚಿನ ಔಷಧಿ ಗುಣಗಳನ್ನು ಹೊಂದಿರುತ್ತವೆ. ತೆಂಗಿನಕಾಯಿ ಮತ್ತು ಅಡುಗೆ ಎಣ್ಣೆ ಬಳಸದೇ ಅಡುಗೆ ಮಾಡುವುದು. ವಿಭೂತಿ ಮರದ ಪ್ರಸ್ತಾಪವೂ ಇದೆ, ಅಂಗಡಿಯಲ್ಲಿ ಸಿಗುವ ವಿಭೂತಿಯನ್ನು ಬಳಸುವುದಿಲ್ಲ. ಅದು ಅಷ್ಟು ಶ್ರೇಷ್ಠವಲ್ಲ, ದೇವರೇ ಕೊಟ್ಟ ವಿಭೂತಿ ‘ವಿಭೂತಿ ಬೆಟ್ಟ’ದಲ್ಲಿ ಸಿಗುತ್ತದೆ. ಅದನ್ನು ಕಷ್ಟಪಟ್ಟು ತರಬೇಕು, ಹಾಗಾಗಿ ಅದು ಶ್ರೇಷ್ಠವೂ ಆಗಿದೆ. ಸೋಲಿಗರನ್ನು ಸಾಂಸ್ಕøತಿಕವಾಗಿ ನೋಡುವಾಗ ಅವರ ಹಾಡು ಕುಣಿತ ಮುಖ್ಯ. ಎಲ್ಲವನ್ನೂ ಹಾಡಿನ ಮೂಲಕ ಹೇಳುವುದು, ಅಲ್ಲಿ ಹಾಡಿನ ಮೂಲಕ ಪರಿಸರದ ಹೆಬ್ಬಾಗಿಲನ್ನೇ ತೆರದಿಟ್ಟಿದ್ದಾರೆ. ಹೂವುಗಳ ಬಗ್ಗೆ, ಎಲೆಗಳ ಬಗ್ಗೆ, ಪ್ರಾಣಿ ಪಕ್ಷಿಗಳ ಬಗ್ಗೆ., ಅದೆಲ್ಲವೂ ಮರೆಯಾಗಿ, ಸಿನೆಮಾ ಹಾಡು, ಡಿಜೆ ಗೆ ವಾಲಿರುವುದನ್ನು ಲೇಖಕರು ಮೂಕಪ್ರೇಕ್ಷಕರಾಗಿ ನೋಡಿದ್ದಾರೆ. 


ಮಂಜಿಗುಂಡಿ ಕೇತಮ್ಮನ ಬಗ್ಗೆ ಮಾತನಾಡುವಾಗ, ಲೇಖಕರು ಬಳಸಿರುವ ‘ಸರ್ವಾಂಗ ಸೋಲಿಗ ಸಂಜಾತೆ’ ನನಗೆ ಇಡೀ ಸೋಲಿಗರ ಚರಿತ್ರೆಯನ್ನು ಕೇತಮ್ಮನ ಮೂಲಕ ಹಿಡಿದಿಡಲು ಮಾಡಿರುವ ಪ್ರಯತ್ನ ಎನಿಸಿತು.   ಈ ಅಧ್ಯಾಯದಲ್ಲಿ ಗಮನಿಸಬೇಕಾದ ಅಂಶಗಳಲ್ಲಿ, ಮೊದಲನೆಯದು, ಲಿಂಗ ಸಮಾನತೆ, ‘ನಗರ ನಾಗರಿಕತೆಯ ಸೋಂಕಿಲ್ಲದೆ ಪ್ರಕೃತಿಯಲ್ಲಿ ಒಂದಾಗಿ ಬದುಕುವ ಇವರ ಜೀವನಶೈಲಿಗೆ ಲಿಂಗಸಮಾನತೆ ಅನಿವಾರ್ಯವಾಗಿ ಕೂಡಿಕೊಂಡಿರುವ ಮೌಲ್ಯ ಎನ್ನಿಸಿತು ನನಗೆ’ ಇದು ಲೇಖಕರ ಅಭಿಪ್ರಾಯ. ಎರಡನೆಯದಾಗಿ, ಪ್ರಾಣಿ ಸಂಕುಲಗಳ ಮೇಲೆ ಅವರಿಗಿರುವ ಅಪಾರ ಪ್ರೀತಿ ಮತ್ತು ಕಾಳಜಿ. ಇದನ್ನು ಎರಡು ಪ್ರಸಂಗಳ ಮೂಲಕ ವಿವರಿಸಲಾಗಿದೆ. ಕೇತಮ್ಮನ ಮನೆ ಮುಂದಕ್ಕೆ ಪ್ರತಿ ಶುಕ್ರವಾರ ಬಿಳಿಗಿರಿ ದೆವಸ್ಥಾನಕ್ಕೆ ಬಿಟ್ಟಿರುವ ಗೂಳಿಯೊಂದು ಬರುತ್ತಿತ್ತು ನಂತರ ಮಾರಿದ್ದು ಆಕೆಗೆ ಬೇಸರವಾದದ್ದು, ಅದನ್ನು ವ್ಯಕ್ತಿಪಡಿಸಿರುವ ರೀತಿ, ಯಾವ ಧರ್ಮ ಅಥವಾ ಸಿದ್ಧಾಂತದಿಂದ ಬಂದಿರುವುದಲ್ಲ. ಅದೇ ರೀತಿ ಮತ್ತೊಂದ ಘಟನೆ ಆಕೆ, ಸಾಕಿದ್ದ ಒಂದು ಕೆಂಪು ಅಳಿಲು. ಕೇತಮ್ಮನ ಮಾತಿನಲ್ಲಿಯೇ ಕೇಳೋಣ “ನನ್ ಕೂಗು ಕೇಳ್ಸಿದ್ರೆ ಸಾಕು ಸಾರ್, ಎಲ್ಲಿದ್ರು ಓಡ್‍ಬಂದು ಮನೆ ಸೇರ್ಕೊತಿದ್ದ, ಅವನ್ನ ನನ್ ಮಗನ್ ತರಾನೇ ಸಾಕಿದ್ದೆ, ಬಿಸಿನೀರ್ ಕಾಯಿಸಿ ಸ್ನಾನಮಾಡುಸ್ತಾ ಇದ್ದೆ. ಆದ್ರೆ ಏನ್ ಮಾಡೋದು ಸಾರ್, ಇದ್ದಕ್ಕಿದ್ದಂಗೆ ಸತ್ತೋದ’. ಮೂರನೆಯದು, ಪ್ರಾಣಿಗಳ ಆಹಾರ ಆಯ್ಕೆ, ಆಕರ್ಷಣೆಯ ಕುರಿತು ಮತ್ತು ನಾಲ್ಕನೆಯದು ಸೌದೆಯ ಆಯ್ಕೆ. ನಮಗೆ ಎಲ್ಲಾ ಸೌದೆಯೂ ಸೌದೆ. ಸೋಲಿಗರಿಗೆ ಸೌದೆಯ ಆಯ್ಕೆ, ಅದೊಂದು ಜ್ಞಾನ. ಯಾವುದೋ ಸೌದೆಯನ್ನು ತಂದು ಬೆಂಕಿಗೆ ಹಾಕುವಂತಿಲ್ಲ. ಲೇಖಕರು ಉಲ್ಲೇಖಿಸಿರುವಂತೆ, ತೊಂಡೆ ಸೌದೆ ಕೆಟ್ಟ ವಾಸನೆ ಬೀರುವುದರಿಂದ ಅದನ್ನು ಬಳಸಬಾರದು, ಆದರೆ ಅದರ ಹಂಬು ಬಳಕೆಗೆ ಅನಿವಾರ್ಯವಾಗಿದೆ. ಕೇತಮ್ಮನ ಮಾತು ನೋಡಿ ‘ಹೋಗಿ ಸಾರ್, ಅಂಗೇನಾದ್ರು ಮಾಡಿದ್ರೆ, ಸುತ್ ಮುತ್ತಲ ಸೋಲಿಗರು ಬಂದು ಉಗಿತಾರೆ, ಸೋಲಿಗರವಳಾಗಿ ಇಂತಾ ಸೌದೇನ ನೀನ್ ಬೆಂಕಿಗಾಕಾದು ಅಂತಾರೆ’. 


ಸೋಲಿಗರು ಮೀನು ಹಿಡಿಯುತ್ತಿದ್ದದ್ದು ಮಗ್ಗಾರೆ ಕಾಯಿಗಳನ್ನು ಅರೆದು ಅದರ ಜೊತೆಗೆ ಸೀಗೆ ಪಟ್ಟಿಯನ್ನು ಜಜ್ಜಿ ಎರಡನ್ನು ಬೆರೆಸಿ ಹಾಕುತ್ತಿದ್ದರು. ಸೋಲಿಗರಲ್ಲಿ ಮೀನಿನ ಬಗ್ಗೆ ಅಂತಹ ಮಹತ್ವ ಅಥವಾ ಆಕರ್ಷಣೆಯಿಲ್ಲ. ಕೇತಮ್ಮನ ಮೈಮೇಲೆ ದೇವರು ಬರೋದು ಅಂತಾ ಇದೆ. ನಾವು ಎಲ್ಲವನ್ನೂ ವೈಜ್ಞಾನಿಕ (ಪುಸ್ತಕದಲ್ಲಿ ಓದಿರೋದು) ಅಥವಾ ತರ್ಕವಾಗಿಯೇ ನೋಡಬೇಕೆಂದೇನಿಲ್ಲ. ಅದೊಂದು ನಂಬಿಕಯಷ್ಟೆ. ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ ಎಸಿ ರೂಮಿನಲ್ಲಿ ಕುಳಿತು ದೇವಮಾನವರಾಗಿರುವರನ್ನು ಪ್ರಶ್ನಿಸದ ನಾವುಗಳು ಅಮಾಯಕ ಮುಗ್ಧ ಜನರ ನಂಬಿಕೆಯನ್ನು ಮೂಢನಂಬಿಕೆಯಾಗಿ ನಿಯಂತ್ರಿಸಲು  ಪ್ರಯತ್ನಿಸುತ್ತೇವೆ (ಇದು ನನ್ನ ಅನಿಸಿಕೆ, ಲೇಖಕರದ್ದಲ್ಲ). 


ವಿಜಿಕೆಕೆ ಮತ್ತು ಡಾ. ಸುದರ್ಶನ್ ರವರ ಕುರಿತಾಗಿ ಆ ದಿನಗಳಿಂದ ಈ ದಿನಗಳವರೆಗಿನ ಪ್ರಯಾಣ, ಪ್ರಯಾಸ, ಸಾಹಸಗಳನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ. ನಾಲ್ಕೈದು ಬಾರಿ ನಾನು ಡಾ. ಸುದರ್ಶನ್ ರವರನ್ನು ಭೇಟಿ ಮಾಡಿದ್ದೆ. ಅದರ ಕುರಿತು ಒಂದೆರಡು ಸಾಲುಗಳಲ್ಲಿ ಹೇಳಬಯಸುತ್ತೇನೆ. ಮಿಕ್ಕಿದ್ದನ್ನು ಪುಸ್ತಕ ಓದಿಯೇ ತಿಳಿಯಬೇಕು, ನಲ್ವತ್ತು ವರ್ಷಗಳ ಒಡನಾಡಿ ಹೇಳುವುದಕ್ಕಿಂತ ನಾನು ಹೇಳುವುದು ಹೆಚ್ಚೇನೂ ಇರುವುದಿಲ್ಲ. ಈ ಘಟನೆ ನಡೆದದ್ದು 2006-07ರಲ್ಲಿ, ನಾನು ಆಗ ಐಸೆಕ್‍ನಲ್ಲಿ ಕೆಲಸ ಮಾಡುತ್ತಿದ್ದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ (ಡಿಎಸ್‍ಟಿ) ಒಂದು ಸಂಶೋಧನ ಯೋಜನೆಗೆ ಅನುದಾನ ಸಿಕ್ಕಿತ್ತು, ಅದೇ ಸಮಯದಲ್ಲಿ ಡಾ. ಯಲ್ಲಪ್ಪರೆಡ್ಡಿಯವರು ಹಾಗೂ ಡಾ. ಸುದರ್ಶನ್ ರವರು, ಪ್ರೋ. ಕೆ.ವಿ.ರಾಜುರವರೊಂದಿಗೆ ಚರ್ಚಿಸಿ, ಬೆಟ್ಟದಲ್ಲಿ ಒಂದು ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಿದ್ಧರಾದರು. 


ಇದರ ಮುಂದುವರೆದ ಭಾಗವಾಗಿ, ನಾವುಗಳು ಬೆಂಗಳೂರು ವಿಶ್ವವಿದ್ಯಾಲಯದ ಪಂಡಿತರೆಲ್ಲರನ್ನೂ ಸಭೆಗೆ ಕರೆದೆವು. ಪರಿಸರ ವಿಜ್ಞಾನ, ಭೂವಿಜ್ಞಾನ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಭೂಗೋಳಶಾಸ್ತ್ರ, ಎಲ್ಲಾ ಶಾಸ್ತ್ರಿಗಳನ್ನು ಕರೆದು, ವಿಷಯ ಮಂಡನೆ ಮಾಡಿದೆವು. ಪತ್ರವ್ಯವಹರಿಸಲು (ಇಮೇಲ್/ಫೋನ್) ನನ್ನನ್ನು ನೇಮಿಸಲಾಗಿತ್ತು. ನಾನು ಮೊದಲ ದಿನವೇ ಪ್ರೋ. ರಾಜುರವರಿಗೆ ಹೇಳಿದ್ದೆ, ಸರ್ ಅವರೆಲ್ಲಾ ಬಿಳಿ ಆನೆಗಳು, ಪಾಠ ಮಾಡೋಕೆ ತಯಾರಿಲ್ಲ, ಅವರ ಸಂಶೋಧನ ವಿದ್ಯಾರ್ಥಿಗಳ ಹತ್ತಿರ ಮಾಡಿಸ್ತಾರೆ. ಇನ್ನೂ ಫೀಲ್ಡ್ ಅಲ್ಲಿ!? ಅಂತೂ ಒಂದು ದಿನ ಎಲ್ಲ ಪ್ರೊಫೆಸರ್ ಗಳು ಬಂದರು, ಡಾ. ಸುದರ್ಶನ್ ಅವರು ಕೂಡ ಬಂದ್ರು. ನಾನು ಮತ್ತು ಡಾ. ಜಡೇಗೌಡ (ಆಗ ಇನ್ನೂ ಪಿಎಚ್‍ಡಿ ಮುಗಿದಿರಲಿಲ್ಲ) ತಯಾರಿ ಮಾಡಿಕೊಂಡು, ಬೆಟ್ಟದ ಕುರಿತು ವಿಜಿಕೆಕೆ ಏನು ಮಾಡಿದೆ, ಏನೆಲ್ಲಾ ಸಮಸ್ಯೆಗಳು ಅಥವಾ ಅದನ್ನು ಅಬಿವೃದ್ಧಿಯ ಹಂತ ಹೇಗೆ ಎಂತೆಲ್ಲಾ ಮಾಡಿದ್ದೆವು. ಡಾ. ಸುದರ್ಶನ್, ಪ್ರೊ. ರಾಜು ಮತ್ತು ಡಾ. ಯಲ್ಲಪ್ಪ ರೆಡ್ಡಿಯವರು ಸಭೆಗೆ “ವಿಜಿಕೆಕೆ, ಒಂದಿಷ್ಟು ಕೆಲಸ ಮಾಡಿದೆ ಇಲ್ಲಿ ತನಕ, ಸೋಲಿಗರ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಒಂದು ಕಾರ್ಯಸೂಚಿಯನ್ನು ಸಿದ್ಧಪಡಿಸಬೇಕು ಅಂತಾ ಇದ್ದೀವಿ, ತಾವುಗಳು ಪರಿಣಿತರು, ತಜ್ಞರು, ನಿಮ್ಮ ಹತ್ತಿರ ಸಾಕಷ್ಟು ಜ್ಞಾನ, ಅನುಭವ, ವಿದ್ಯಾರ್ಥಿಗಳು ಇದ್ದಾರೆ, ಒಂದು ಪ್ರೊಪೋಸಲ್ ರೀತಿಯಲ್ಲಿ ತಮ್ಮ ತಮ್ಮ ಅನಿಸಿಕೆಗಳನ್ನು ತಿಳಿಸಿ”. ನಾವುಗಳು ಸ್ವಲ್ಪ ಸಮಯ ನೀಡಿದ್ದೆವು. ಇದರ ನಡುವೆ ನಾನು ಬೆಟ್ಟಕ್ಕೆ ಹೋಗಿ ನೋಡಿಕೊಂಡು ಬಂದಿದ್ದೆ. ಎರಡನೆಯ ಸಭೆ ಸಿದ್ಧವಾಯಿತು. 


ಹೆಸರುಗಳ ಪ್ರಸ್ತಾಪಬೇಡ, ಜೇನು ಸಾಕಾಣಿಕೆ ಮಾಡೋಣ, ಜೇನಿನ ಬಗ್ಗೆ ಸೋಲಿಗರಿಗೆ ಅರಿವು ಮೂಡಿಸೋಣ. ಮರ ಗಣತಿ ಮಾಡೋಣ, ಜಲಾನಯನ ಅಧ್ಯಯನ ಮಾಡೋಣ, ಅಂತರ್ಜಲ ನೀರಿನ ಆಳ ಮತ್ತು ಗುಣಮಟ್ಟವನ್ನು ಪರೀಕ್ಷೀಸೋಣ, ಚೆಕ್ ಡ್ಯಾಮ್ ಕಟ್ಟಿಸೋಣ, ಅದೆಲ್ಲ ಹಾಳಾಗಿ ಹೋಗಲಿ, ಅಲ್ಲಿ ಒಂದು ತ್ಯಾಜ್ಯ ನಿರ್ವಹಣ ಘಟಕ ಮಾಡೋಣ, ಎರೆಹುಳು ಗೊಬ್ಬರ ತಯಾರಿಸೋಣ. ಒಬ್ಬೊಬ್ಬರು ಇಟ್ಟ ಅನುದಾನದ ಬೇಡಿಕೆ ನನಗೆ ತಲೆತಿರುಗುವಂತೆ ಮಾಡಿತ್ತು.  ಡಾ. ಸುದರ್ಶನ್‍ರವರಿಗೆ ಕೋಪ ಬಂತು. ಸಾವಿರಾರು ವರ್ಷಗಳಿಂದ ಅದೆಲ್ಲವನ್ನೂ ಸೋಲಿಗರು ಮಾಡ್ತಾ ಬಂದಿದ್ದಾರೆ, ಅವರಿಗೆ ಕಾಡಿನ ಬಗ್ಗೆ ಕಾಡಿನ ಸಂರಕ್ಷಣೆಯ ಬಗ್ಗೆ ನಾವು ಹೇಳಿಕೊಡೋದು ಏನು ಬಾಕಿಯಿಲ್ಲ, ಅವರಿಂದ ನಾವು ಕಲಿಯಬೇಕು, ಒಳ್ಳೆ ಪ್ಲಾನ್ ಮಾಡ್ಕೊಂಡು ಬನ್ನಿ ಅಂದರು. ಇದೇ ರೀತಿ ಎರಡು ಮೂರು ಸಭೆಗಳು ನಡೆದು ಕೊನೆಗೆ ಇವ್ರೆಲ್ಲರನ್ನ ಕಟ್ಕೊಂಡು ಆಗಲ್ಲ ಬಿಡಿ ಅಂದ್ರು. ಇದು ನಮ್ಮ ವಿವಿಗಳ ಕಥೆ. 


ಇದೇ ವಿಷಯದ ಬಗ್ಗೆ ಲೇಖಕರು ಪ್ರಸ್ತಾಪ ಮಾಡಿದ್ದಾರೆ. ಅದೆಲ್ಲವನ್ನೂ ಇಲ್ಲಿಯೇ ಹೇಳಿ ಮುಗಿಸುತ್ತೇನೆ. ಸಂಶೋಧನೆ, ಅಧ್ಯಯನ ಎಂಬ ಹೆಸರಲ್ಲಿ ಅನೇಕ ಸಂಘ ಸಂಸ್ಥೆಗಳು ಕೋಟ್ಯಾಂತರ ಹಣವನ್ನು ಸಂಪಾದನೆ ಮಾಡಿದರು. ಈ ಹಿಂದೆಯೇ ಹೇಳಿರುವ ಹಾಗೆ, ದೇಶ ವಿದೇಶಗಳನ್ನು ಸುತ್ತಾಡಿ ಬಂದ್ರು. ನೀವು ಒಮ್ಮೆ ಗೂಗಲ್ ನಲ್ಲಿ ಬಿ.ಆರ್. ಹಿಲ್ಸ್ ಅಂತಾ ಟೈಪ್ ಮಾಡಿ ನೋಡಿ, ಆ ಸಾಧನೆ ಮಾಡಿದವರ ಪಟ್ಟಿ ಹಾಗೆಯೇ ಉದುರುತ್ತದೆ. ಪುಟ್ಟರಂಗನಿಗೆ 500-1000 ಕೊಟ್ಟು ಅವರಿಂದ ಮಾಹಿತಿ ಪಡೆದು ಹತ್ತಾರು ಪ್ರಬಂಧಗಳನ್ನು ಮಂಡಿಸಿ ದುಡ್ಡು ಮಾಡಿರುವ ಮಹಾಶಯರನ್ನು ನಾನು ನೇರವಾಗಿ ಪ್ರಶ್ನಿಸಿದ್ದೇನೆ. ಏಟ್ರೀ ಸಂಸೈಯವರು ಹತ್ತಾರು ವರ್ಷ ಇದೇ ಬೆಟ್ಟದ ಹೆಸರಲ್ಲಿ ಅನುದಾನಗಳನ್ನು ಪಡೆದು, ಅಲ್ಲಿನ ಸೋಲಿಗರಿಗೆ ನಯಾ ಪೈಸೆ ಉಪಕಾರವನ್ನೂ ಮಾಡಲಿಲ್ಲ. ಐಸೆಕ್ ನಲ್ಲಿರುವ ಮೇಧಾವಿಯೊಬ್ಬರು ಆದಿವಾಸಿಗಳು/ಸೋಲಿಗರ ಹೆಸರಲ್ಲಿ ಒಂದರ ಹಿಂದೊಂದರಂತೆ ಪ್ರಾಜೆಕ್ಟ್ ಮಾಡಿ ತನ್ನ ಬಯೋಡೇಟಾ ದೊಡ್ಡದು ಮಾಡಿಕೊಂಡದ್ದಾಯಿತು. ಇದು ನಮ್ಮ ಇಂದಿನ ನಾಗರೀಕ ವಿದ್ಯಾವಂತರ ಬಂಡವಾಳ. “ಮನೆಗೆ ಬೆಂಕಿ ಬಿದ್ದಾಗ ಗಳ ಇರಿಯೋದು ಅನ್ನೊ ಮಾತಿದೆ.” ಹುಲಿ ಸಂರಕ್ಷಣೆಯ ಹೆಸರಲ್ಲಿ, ಆನೆ ಯೋಜನೆಯಲ್ಲಿ, ಸೋಲಿಗರ ಅಭಿವೃದ್ಧಿಯ ಹೆಸರಲ್ಲಿ, ಹಣ ಮಾಡುವುದು, ಸಂಶೋಧನ ಗ್ರಂಥಗಳನ್ನು ರಚಿಸುವುದು ಅಂತರಾಷ್ಟ್ರೀಯ ಕಮ್ಮಟಗಳಿಗೆ ಹೋಗಿ ಕುಡಿದು ತಿಂದು ಸುತ್ತಾಡಿ ಬರುವುದು, ಅಸಹ್ಯಕರವೆನಿಸಿದರೂ ವಾಸ್ತವ. ಲೇಖಕರು ಹತ್ತಿರದಿಂದ ಗಮನಿಸಿದ್ದಾರೆ, ಅದನ್ನು ನೇರವಾಗಿ ತೋಡಿಕೊಳ್ಳಲು ಸಾಧ್ಯವಾಗದೆ, ಪರೋಕ್ಷವಾಗಿ ತಿಳಿಸಲು ಯತ್ನಿಸಿದ್ದಾರೆ. ಆದರೇ, ಎಮ್ಮೆ ಚರ್ಮದ ಅವರುಗಳಿಗೆ ಇವೆಲ್ಲವೂ ತಟ್ಟುವುದಿಲ್ಲ. 


ಸೆಂಟೆಣ್ಣೆ ಮಾದೇಗೌಡರನ್ನು ಪರಿಚಯ ಮಾಡುವಾಗ ಗಮನಿಸಬೇಕಾದ ಒಂದಿಷ್ಟನ್ನು ನೋಡೋಣ. ಸೆಂಟೆಣ್ಣೆ ಮಾದೇಗೌಡರ ಕಥೆ, ಅಮಾಯಕ ಸೋಲಿಗರನ್ನು ನಾಗರೀಕ ಸಮಾಜದ ದುರುಳರು ಹೇಗೆ ದುರುಪಯೋಗಪಡಿಸಿಕೊಂಡಿದ್ದರು ಎನ್ನುವುದಕ್ಕೆ ನಿದರ್ಶನ.  ಅದೇ ಅಧ್ಯಾಯದಲ್ಲಿ, ಒಬ್ಬ ಶಾಲಾ ಮಾಸ್ಟರಿನ ಕಥೆಯೂ ಬರುತ್ತದೆ, ಅಂದಿನ ಕಾಲದಲ್ಲಿ ಆ ರೀತಿ ಸಂಬಳ ಪಡೆದು ಶಾಲೆಗೆ ಬಾರದೇ ಇದ್ದ ಶಿಕ್ಷಕರ ಸಂಖ್ಯೆ ಕಮ್ಮಿಯಿತ್ತು, ಹಾಗಾಗಿ ಅದು ಲೇಖಕರಿಗೆ ದೊಡ್ಡ ವಿಷಯವೇ ಸರಿ. ಆದರೇ, ಸರ್ಕಾರಿ ಶಾಲೆಗಳನ್ನು ಹತ್ತಿರದಿಂದ ಬಲ್ಲ ನನಗೆ, ಇಂದಿನ ಕೆಲವು ಶಿಕ್ಷಕರ ರಾಜಕೀಯದ ಗೀಳು, ಅನೈತಿಕತೆಯ ಪರಮಾವಧಿಯ ಮುಂದೆ ಏನೇನೂ ಅಲ್ಲ ಬಿಡಿ. ಬಂಗಿ ಸೇದುವುದ ಪ್ರಸ್ತಾಪವೂ ಬಂದಿದೆ. ಆದರೇ, ಯಾವುದನ್ನು ಅತಿ ಮಾಡಿಕೊಳ್ಳದೆ ಬದುಕಿದ್ದನ್ನು ನಾವು ಸ್ಮರಿಸಬೇಕು. ಅದರ ಜೊತೆಗೆ ವಾತಾವರಣಕ್ಕೆ ಅಥವಾ ಕಾಲಮಾನಕ್ಕೆ ತಕ್ಕನಾಗಿ ದೊರೆಯುತ್ತಿದ್ದ ಆಹಾರಗಳ ಮೇಲೆ ಅವಲಂಬಿತವಾಗಿದ್ದದ್ದು ಸೋಲಿಗರ ಆರೋಗ್ಯದ ಗುಟ್ಟು ಎನ್ನಲೂಬಹುದು. ಮಾಂಸ ಬೇಯಿಸುವುದು, ತಿನ್ನುವುದು, ಇದ್ದರೆ ತಿನ್ನುವುದು ಇಲ್ಲದೆ ಇದ್ದರೆ ಇರುವುದು. ಊಟದ ವಿಚಾರದಲ್ಲಿ ಒಂದೊತ್ತು ಊಟ ಮಾಡುವವರು, ಎರಡು ಹೊತ್ತು ಊಟಕ್ಕೆ ಒಗ್ಗಿಕೊಂಡಿರುವವರು ಸಿಗುತ್ತಾರೆ. ಎಣ್ಣೆಯ ವಿಷಯಕ್ಕೆ ಬರೋದಾದರೆ ಅಳ್ಳೆಣ್ಣೆ (ಹರಳೆಣ್ಣೆ), ಅದನ್ನು ಮನೆಯಲ್ಲಿ ಕಾಯಿಸುತ್ತಿದ್ದ ದಿನಗಳಿದ್ದವು. ಅಣಬೆಯ ವಿಷಯದಲ್ಲಿಯೂ ಕೂಡ, ಅನೇಕ ವಿಧದ ಅಣಬೆಗಳು ಮತ್ತು ಅದರ ಸಮಯ ಅವರಿಗೆ ತಿಳಿದಿರುತ್ತಿತ್ತು. ಸೆಂಟೆಣ್ಣೆಯನ್ನು ಒಮ್ಮೆ ಪೋಲಿಸರು ಅರೆಸ್ಟ್ ಮಾಡಿದಾಗ ‘ಮೈಲಿಗೆಯಾಗಿದೆ’ ಅಂತ ತೊಪ್ಪೆ ಗಂಜಲದ ಶಾಸ್ತ್ರ ಮಾಡಿದ್ದು, ಸೋಲಿಗರ ನಂಬುಗೆಯ ಜೀವನಕ್ಕೆ ಸಾಕ್ಷಿ. 


ಕಾರನ ಕೇತೇಗೌಡ ಧೂಪದ ಮರಗಳ ಬಗ್ಗೆ ವಿವರಿಸುವಾಗ, ಅಂದರೇ ಧೂಪದ ಮರಗಳ ಸಂಖ್ಯೆ ಕಡಿಮೆ ಏಕೆ? ಎನ್ನುವುದಕ್ಕೆ ಅವನ ವ್ಯಾಖ್ಯಾನ ಆಸಕ್ತಿ ಮೂಡಿಸುವಂತದ್ದು ‘ದೇವರ ಸೃಷ್ಠಿನೆ ಹಂಗೆ ಸ್ವಾಮಿ; ಸಿಕ್ಕಸಿಕ್ಕಲ್ಲೆಲ್ಲ ಧೂಪದ ಮರ ಬೆಳೆದ್ರೆ ದೇವರ್ಗೇ ಬೆಲೆ ಇಲ್ದಂಗ್ ಮಾಡ್‍ಬಿಡ್ತಾನೆ ಈ ಮನುಷ, ಜನ ಕಷ್ಟಪಟ್ಟು ಹುಡುಕಿ ಮಾಡಿ ತಂದು ಕೆಂಡದ ಮೇಲೆ ಹಾಕಿದ್ರೆನೇ ಘಮಲು ಜಾಸ್ತಿ, ಅಪ್ಪ, ನಮ್ಮಪ್ಪಾ ನಿನಗಾಗಿ ಕಾಡೆಲ್ಲ ಹುಡುಕಿ ತಂದಿವ್ನಿ, ಒಪ್ಪುಸ್‍ಕಳಪ್ಪಾ ಅಂತಾನೆ ಮನುಷ, ಆಗ ದೇವರಿಗೆ ಸಂತೋಷ ಆಗ್ತದೆ’. ಹಾಗೆ ಮುಂದುವರೆದು ‘ದೇವರು ಎಲ್ಲಕ್ಕೂ ಕಡಿವಾಣ ಆಕ್ತಾನೆ ಸ್ವಾಮಿ; ಕಾಡ್ನಾಗೆಲ್ಲೆಲ್ ನೋಡಿದ್ರು ಜಿಂಕೆ-ಕಡವೆಗಳು ನೆಗೆದಾಡ್ತಾವೆ, ಆನೆಗಳು ಅಂಗೆ ಇರ್ತಾವಾ? ಹತ್ತು ಮೈಲಿ ನಡೆಯೋದ್ರಲ್ಲಿ ನಾಲ್ಕ್ ಸಾರಿ ನಾಯಿಗಳು ಕಾಣ್ತಾವೆ, ಹುಲಿ ಕಂಡೀದ ಹೇಳಿ’? ಇದನ್ನು ಪಿಎಚ್‍ಡಿ ಮಾಡಿರೋ ಪುಣ್ಯಾತ್ಮರನ್ನ ಕೇಳಿ ನೋಡಿ. ಇದು ಪರಿಸರದ ಮೂಲ ಮಂತ್ರ, ಅದೇ ಬ್ಯಾಲೆನ್ಸ್ ಅಂತಾ ಅನ್ನೋದು. ಇಕಾಲಾಜಿಕಲ್ ಬ್ಯಾಲೆನ್ಸ್, ಅಥವಾ ಪರಿಸರ ಸಮತೋಲನ. ಇಷ್ಟು ಸರಳವಾಗಿ ವಿವರಿಸೋಕೆ ಸಾಧ್ಯವಿದೆಯಾ? ಅದು ಅವರ ಅರಿವಿನಿಂದ ಬಂದಿರುವುದು. ಕಾಡು ಎಂದರೇ ಕೇವಲ ಮರಗಿಡಗಳಲ್ಲ ಎನ್ನುವುದನ್ನು ಅವರು ಗ್ರಹಿಸಿದ್ದಾರೆ. ನಿಲಗಿರಿ ತೋಪನ್ನು ಕಾಡು ಎಂದು ಭ್ರಮಿಸುವ ಸಾಕ್ಷರ ಬಂಧುಗಳಿಗೆ ಏನು ಹೇಳಬೇಕು? ಈ ಮಾತಿನ ಆಳವನ್ನು ಗಮನಿಸಬೇಕು ‘ನಾಡಿನ ಜನ ನಮ್ಮ ಕಾಡಿಗೆ ಬಹಳ ಗಾಯ ಮಾಡ್ ಬುಟ್ರು ಸ್ವಾಮಿ; ನಾನು ಚಿಕ್ಕವನಾಗಿದ್ದಾಗ ಕಾಡು ಬಾಳ ಚೆನ್ನಾಗಿತ್ತು’. ಗಾಯ ಎಂದರೇನು? ಅದರ ಆಯಾಮಗಳನ್ನು ಅರ್ಥೈಸಿಕೊಳ್ಳುವ ಚರ್ಚಿಸುವ ಅನಿವಾರ್ಯತೆಯಿದೆ. ಕಾಡು ಎಂಬುದು ಕೇವಲ ಮರಗಿಡಗಳಿಗೆ ಮೀಸಲಲ್ಲವೆನ್ನುವುದು ಕೇತಗೌಡನ ನಂಬಿಕೆ. ‘ದೇವರು ಕಡಿವಾಣ ಹಾಕುತ್ತಾನೆ, ದೇವರ ಸೃಷ್ಠಿಯೆ ಹೀಗೆ’ ಎನ್ನುವುದರಲ್ಲಿ ಕೇವಲ ನಂಬಿಕೆಗಳಷ್ಟೆ ಕೆಲಸಮಾಡುತ್ತಿಲ್ಲ. ಒಂದು ಆಳವಾದ ಸಂವೇದನಾಶೀಲ ಜ್ಞಾನದ ಅಂತಃಸ್ರೋತ ಪ್ರವಹಿಸುತ್ತಿದೆ. ಈ ಜ್ಞಾನ ಗಿರಿಜನರ ವಿವೇಕದ ಮೂಲ. ಕಾಡುಗಳ ವರ್ಗೀಕರಣದ ಕುರಿತ ಸಂಭಾಷಣೆಯನ್ನು ಗಮನಿಸಿ, ‘ಎಲ್ಲಯ್ಯ ಈಗ ಇಪ್ಪತ್ತೈದು ವರ್ಷದಿಂದಲೂ ಕಾಡು ಸುತ್ತುತ್ತ ಇದೀನಿ, ನನಗೆ ಇಡೀ ಕಾಡೆಲ್ಲ ಒಂದೇ ಥರ ಕಾಣುತ್ತಲ್ಲ’. “ಅದೇಕ ಸಾಮಿ, ನೀವು ಸರಿಯಾಗಿ ಕಣ್‍ಬಿಟ್ಟು ಕಾಡನ್ನ ನೋಡಿಲ್ಲ, ಕಾಡು ಗೊತ್ತಾಗ್‍ಬೇಕು ಎಂದರೆ ಬೇರೆ ಬೇರೆ ಕಾಡಲ್ಲಿ ರಾತ್ರಿ ಬೆಂಕಿ ಹಾಕ್ಕಂಡು ತಂಗಬೇಕು”. ಕಾಡಿನ ಬಗ್ಗೆ ಸಂಶೋಧನೆ ಮಾಡುವವರ ಮತ್ತು ಇಲಾಖೆಯವರ ಕುರಿತು ಅನೇಕ ಮಾತುಕಥೆಗಳಿದ್ದರೂ ಇದೆರಡು ಸಾಲುಗಳಲ್ಲಿ ಹೇಳಿ ಮುಗಿಸುತ್ತೇನೆ, ‘ಏನ್ ನೋಡ್‍ಬ್ಯಾಕೋ ಅದನ್ ನೋಡಾದಿಲ್ಲ ಸ್ವಾಮಿ ಇವರು; ಜೀಪ್ ಹತ್ಕಂಡ್, ಗೇಮ್‍ರೋಡ್‍ನಲ್ಲಿ ಬುರ್ ಅಂತ ಹೋಗಿ ಬಂದ್ ಬಿಡ್ತಾರೆ, ತಿಂಗಳ್‍ಗೋ ವರ್ಸಕ್ಕೊ ಒಂದ್ ಸಲ ಕಾಡ್ ಸುತ್‍ಕಂಡ್ ಬಂದ್ರೆ ಏನ್ ಗೊತ್ತಾಗುತ್ತೆ ಇವರಿಗೆ’. 


ಪುಟ್ಟರಂಗನ ಸಸ್ಯರಂಗ ಅಧ್ಯಾಯದ ಬಗ್ಗೆ ನಾನು ಎಷ್ಟು ಬರೆದರು, ಎಷ್ಟು ಹೇಳಿದರು ಅದು ಕಡಿಮೆಯಾಗುತ್ತದೆ. ಒಬ್ಬ ಸೋಲಿಗನಾಗಿ ಅವನಿಗಿರುವ ಜ್ಞಾನಭಂಡಾರಕ್ಕೆ ಪ್ರತಿಯೊಬ್ಬರೂ ತಲೆದೂಗಲೇಬೇಕು. ಪುಟ್ಟರಂಗನ ಸಹಾಯದಿಂದ ಅದೆಷ್ಟೋ ಸಂಶೋಧನ ಯೋಜನೆಗಳು ಮುಗಿದಿವೆ, ಕೇವಲ ಒಂದೆರಡು ಸಂಸ್ಥೆಯಲ್ಲ, ಬಿಳಿಗಿರಿರಂಗನ ಬೆಟ್ಟ ಮತ್ತು ಮಹದೇಶ್ವರ ಬೆಟ್ಟದಲ್ಲಿ ಕಾರ್ಯನಿರ್ವಹಿಸಬಯಸುವ ಪ್ರತಿಯೊಬ್ಬ ಸಂಶೋಧನಾರ್ಥಿಯೂ ಅವರ ಸಹಾಯಪಡೆದುಕೊಂಡಿದ್ದಾರೆ. ಅದರಂತೆಯೇ, ಡಾ. ಮಾದೇಗೌಡ, ಡಾ. ಜಡೇಗೌಡ ಮತ್ತು ಡಾ.ರತ್ನಮ್ಮರವರ ಕುರಿತು ಈ ಮಾತುಗಳ ಜೊತೆಗೆ ಅವರ ಸಮುದಾಯಕ್ಕೆ ಅವರುಗಳು ಹಾತೊರೆಯುವುದನ್ನು ನೀವುಗಳೇ ಓದಿ ತಿಳಿದುಕೊಳ್ಳಬೇಕು. ಸೋಲಿಗ ಸಮುದಾಯದಿಂದ ಮೊದಲ ವಿದ್ಯಾವಂತರಾಗಿ ಜೊತೆಗೆ ಪಿಎಚ್‍ಡಿ ಮಾಡಿ ಕೂಡ, ಉದ್ಯೋಗ ಸಿಗದೆ ಪರದಾಡುತ್ತಿರುವುದು. ನಿಜವಾದ ಬುಡಕಟ್ಟು ಸಮುದಾಯಕ್ಕೆ ನಿಜವಾದ ಪ್ರಾತಿನಿಧ್ಯ ಸಿಗದೆ ಅವಕಾಶವಂಚಿತರಾಗಿರುವುದು. ಈ ಅಧ್ಯಾಯಗಳಲ್ಲಿ ಬರುವ ಆಧುನಿಕ ಆಶ್ರಮ ಶಾಲೆಗಳ ಘಟನೆಗಳು, ನಮ್ಮನ್ನು ಬೇರೊಂದು ರೀತಿಯಲ್ಲಿ ಚಿಂತನೆ ನಡೆಸಲು ಪ್ರೇರೇಪಿಸುತ್ತದೆ. ರಾಜಕೀಯ ಪ್ರೇರಿತವಾಗಿ ನಿಜವಾದ ಆದಿವಾಸಿಗಳು/ಬುಡಕಟ್ಟು ಜನರನ್ನು ಬದಿಗಿಟ್ಟು ಮೀಸಲಾತಿಗಾಗಿ ನಾಗರೀಕ ಸಮುದಾಯದವರನ್ನು ಒಲೈಸಿರುವುದು ದುರಂತವೇ ಸರಿ. ಒಮ್ಮೆ ಸಮ್ಮೇಳನದಲ್ಲಿ ಸೋಲಿಗರ ಅಡುಗೆ ವಿಶೇಷತೆಗಳನ್ನು ತಿಳಿಯಲು ತಾಜ್ ಹೋಟೆಲ್‍ನವರು ಬಂದು ಸೋಲಿಗರ ಭೋಜನವನ್ನು ಪಂಚಾತಾರ ಹೋಟೆಲ್‍ನಲ್ಲಿ ಪರಿಚಯಿಸಲು ಹೋದದ್ದು ಅಥವಾ ಪರಿಚಯಿಸುರುವುದನ್ನು ಏನು ಹೇಳಬೇಕೋ ಅರಿವಿಲ್ಲ. ಅದಕ್ಕೆ ಮತ್ತೊಂದು ಉದಾಹರಣೆ, ಅನೇಕ ಕಡೆಗಳಲ್ಲಿ ಬ್ಯಾಂಬೂ ಬಿರಿಯಾನಿ ಸಿಗುತ್ತದೆ. ಇದು ಪಾತ್ರೆಪಗಡೆಗಳು ಇಲ್ಲದ ಕಾಲದಲ್ಲಿ ಸೋಲಿಗರು ಬಳಸುತ್ತಿದ್ದದ್ದು. ಆದರೇ ಈಗ ನಗರಿಗರಿಗೆ ಸೋಲಿಗರಾಗಬೇಕೆನ್ನುವ ಬಯಕೆ. ಸೋಲಿಗರು ನಾಡಿನ ಸೆಳೆತಕ್ಕೆ ಬಲಿಯಾಗುವ ಬಯಕೆ. 


ರಕ್ತಚಂದನ ತಪಸ್ವಿ ಓದುವುದಕ್ಕೆ ಹಾಸ್ಯಭರಿತ, ತಮಾಷೆಯೆನಿಸಿದರು, ಮಾನವನ ಹುಚ್ಚಾಟಕ್ಕೆ ಕೊನೆ ಮೊದಲಿಲ್ಲ. ಅದರಲ್ಲಿಯೂ ಕಾಡಿನ ಜ್ಞಾನವೇ ಇಲ್ಲದೆ ತಪಸ್ಸು ಮಾಡಲು ಇಂಥಹದ್ದೆ ಮರಬೇಕು, ಅಲ್ಲಿಯೇ ಮಾಡಬೇಕು ಎಂದು ದೇಶ ಸುತ್ತುವ ದೇವಮಾನವರು ಇಂದಿಗೂ ಇದ್ದಾರೆ, ಅವರ ಸಂಖ್ಯೆ ಅತಿಯಾಗಿಯೇ ಇದೆ. ಮದುವೆ, ಬ್ರಹ್ಮಚರ್ಯದ ಕುರಿತು ಸೋಲಿಗರು ಪ್ರೊ. ಜಯದೇವರವರನ್ನು ಕಾಡಿರಬಹುದಾದ ಘಟನೆಗಳನ್ನು ನಾನು ಊಹಿಸಬಲ್ಲೆ. ಮದುವೆಯೇ ಅಂತಿಮಗುರಿಯೆಂದು ಅಥವಾ ಮದುವೆಯಿಲ್ಲದೆ ಇದ್ದರೆ ಬದುಕಿಲ್ಲವೆನ್ನುವ ಕಲ್ಪನೆಯಲ್ಲಿರುವ ಜನರ ಮಾತುಗಳನ್ನು ಸಹಿಸಿಕೊಂಡು ಮುಂದುವರೆದು, ಅದನ್ನು ನಮ್ಮೊಂದಿಗೆ ಹಂಚಿಕೊಂಡಿರುವುದು ಲೇಖಕರ ಬಗ್ಗೆ ಗೌರವವನ್ನು ಹೆಚ್ಚಿಸಿದೆ. 


ಬಿಳಿಗಿರಿಯ ಬನದಲ್ಲಿ ಸ್ವಾಮಿ ನಿರ್ಮಲಾನಂದರವರ ಬದುಕಿನ ಬಗ್ಗೆ ಹೆಚ್ಚಿನ ಕುತೂಹಲ ಹುಟ್ಟಿಸುತ್ತದೆ. ಮತ್ತೊಂದು ಆಯಾಮದಿಂದ ನೋಡಿದಾಗ ಅವರು ಜಿಂಕೆಯ ಮೇಲೆ ಬೆಳೆಸಿಕೊಳ್ಳುವ ಪ್ರೀತಿ, ಎಂಥಹ ಸಿದ್ದಿಯನ್ನು ಪಡೆದರೂ ಯಾವುದೋ ಸೆಳೆತಕ್ಕೆ ಒಳಗಾಗುತ್ತೇವೆ ಎನ್ನುವದನ್ನು ತಿಳಿಸುತ್ತದೆ. ಅದರಂತೆಯೇ, ಹೂವುಗಳನ್ನು ಭಕ್ತರು ಕೀಳುವಾಗ ಗದರಿಸುವ ರೀತಿ, ಅವರಿಗೆ ಪರಿಸರ, ಪರಿಸರಕ್ಕೆ ಅಂತಹ ಯೋಗಿಗಳು ಬೇಕೆನಿಸುತ್ತದೆ. ಚೆದುರಿದ ಚಿತ್ರಗಳು ಕೊನೆಯ ಅಧ್ಯಾಯವಾಗಿರುವುದು ಉತ್ತಮವೇ ಎನಿಸಿತು ನನಗೆ. ಮೊದಲ ದಿನಗಳ ಶ್ರಮ, ನಿರಾಸೆಯನ್ನು ಲೇಖಕರು ಮೊದಲಿಗೆ ಹೇಳದೆ, ಕೊನೆಯಲ್ಲಿ ಹೇಳಿರುವುದು, ಅವರ ಸಾಧನೆಯ ದಿನಗಳು. ಅದರಲ್ಲಿಯೂ ಆನೆ ಕಂದಕವನ್ನು ನಿರ್ಮಿಸುವಾಗ ಸೋಲಿಗರು ಅವರನ್ನು ಕಂಡ ರೀತಿ, ನಮ್ಮ ಜನರು ಜವಬ್ದಾರಿಯಿಂದ ದೂರ ಉಳಿಯುವುದಕ್ಕೆ ಪ್ರಯತ್ನಿಸುತ್ತಾರೆ. ಅದೆಲ್ಲವನ್ನೂ ಮೀರಿ, ಸೇವೆ ನೀಡುತ್ತಿರುವ ಪ್ರೊ. ಜಯದೇವರವರಿಗೆ ಶುಭವಾಗಲಿ. 


19 ಜುಲೈ 2021

ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ “ದ್ವಿತೀಯ ಭಾಷೆ ಇಂಗ್ಲೀಷ್” (SECOND LANGUAGE ENGLISH) ವಿಷಯದಲ್ಲಿ ಆನ್ ಲೈನ್ ಪ್ರಶ್ನಾವಳಿ!!!

 

ಸೀಕೋ ಸಂಸ್ಥೆ, ಹಾಸನ ಜಿಲ್ಲೆ ವತಿಯಿಂದ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆದ್ವಿತೀಯ ಭಾಷೆ ಇಂಗ್ಲೀಷ್” (SECOND LANGUAGE ENGLISH) ವಿಷಯದಲ್ಲಿ ಆಯೋಜಿಸಿದ್ದ ಸರಣಿ ಆನ್ ಲೈನ್ ಪ್ರಶ್ನಾವಳಿಯ ಲಿಂಕನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬೇಕಾಗಿ ವಿನಂತಿ. ದ್ವಿತೀಯ ಭಾಷೆ ಇಂಗ್ಲೀಷ್ ವಿಷಯದ ಎಲ್ಲಾ ಘಟಕಗಳ ಪ್ರಶ್ನೆಗಳು ಒಳಗೊಂಡಿವೆ.

 

ಹದಿನಾರನೇ ಪ್ರಶ್ನೆಯಿಂದ ಮೂವತ್ತನೆ ಪ್ರಶ್ನೆ

 

ಸರಣಿ-01

https://quizzory.in/id/609389e2186d811ce626d019

 

 

ಸರಣಿ-02

https://quizzory.in/id/609cb11707beed1d14c9b8f6

 

 

ಸರಣಿ-03

https://quizzory.in/id/60a46be1351e656b62aa16ac

 

 

ಸರಣಿ-04

https://quizzory.in/id/60af0ceb4538db6d3244593a

 

 

ಸರಣಿ-05

https://quizzory.in/id/60b8579958b9b768e2dcdae4

 

 

ಸರಣಿ-06

https://quizzory.in/id/60c1d4f9f3b97f68a1f15ac9

 

 

ಸರಣಿ-06

https://quizzory.in/id/60ca0ef8c25513689b325ca7

 

 

 

 

 

ಸಂಪನ್ಮೂಲ ವ್ಯಕ್ತಿಗಳು:

ಶ್ರೀಮತಿ. ಜ್ಯೋತಿ ಬಿ.ಎಸ್., ಇಂಗ್ಲೀಷ್ ಭಾಷಾ ಶಿಕ್ಷಕಿ, .ಪ್ರೌ.ಶಾಲೆ. ಕಟ್ಟೇಪುರ, ಹಾಸನ ಜಿಲ್ಲೆ

 

 

ಧನ್ಯವಾದಗಳೊಂದಿಗೆ,

ಡಾ. ಹರೀಶ್ ಬಾನುಗೊಂದಿ

ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ “ಪ್ರಥಮ ಭಾಷೆ ಕನ್ನಡ” ವಿಷಯದಲ್ಲಿ ಆನ್ ಲೈನ್ ಪ್ರಶ್ನಾವಳಿ!!!


 

ಸೀಕೋ ಸಂಸ್ಥೆ, ಹಾಸನ ಜಿಲ್ಲೆ ವತಿಯಿಂದ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆಪ್ರಥಮ ಭಾಷೆ ಕನ್ನಡ” ವಿಷಯದಲ್ಲಿ ಆಯೋಜಿಸಿದ್ದ ಸರಣಿ ಆನ್ ಲೈನ್ ಪ್ರಶ್ನಾವಳಿಯ ಲಿಂಕನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬೇಕಾಗಿ ವಿನಂತಿ. ಪ್ರಥಮ ಭಾಷೆ ಕನ್ನಡ ವಿಷಯದ ಎಲ್ಲಾ ಘಟಕಗಳ ಪ್ರಶ್ನೆಗಳು ಒಳಗೊಂಡಿವೆ.

 

 

ಸರಣಿ-01

https://quizzory.in/id/60c6bd97aa3f1568f63674fe

 

ಸರಣಿ-02

https://quizzory.in/id/60c8a514f3b97f68a1fe0837

 

ಸರಣಿ-03

https://quizzory.in/id/60c97f4daa3f1568f63bc537

 

ಸರಣಿ-04

https://quizzory.in/id/60c9921dc25513689b3121ae

 

ಸರಣಿ-05

https://quizzory.in/id/60cea539d764832dbf368d9a

 

ಸರಣಿ-06

https://quizzory.in/id/60d4fe3ed764832dbf424ed0

 

ಸರಣಿ-07

https://quizzory.in/id/60d50f6b62be732d6ec27d95

 

ಸರಣಿ-08

https://quizzory.in/id/60d51c46d764832dbf425b45

 

 

 

 

 

ಸಂಪನ್ಮೂಲ ವ್ಯಕ್ತಿಗಳು:

ಶ್ರೀಯುತ. ದಿನೇಶ್ ಕೆ. ಎನ್, ಕನ್ನಡ ಶಿಕ್ಷಕರು, .ಪ್ರೌ.ಶಾಲೆ, ಕಾನ್ ಬೈಲ್, ಕೊಡಗು ಜಿಲ್ಲೆ,

 

 

ಧನ್ಯವಾದಗಳೊಂದಿಗೆ,

ಡಾ. ಹರೀಶ್ ಬಾನುಗೊಂದಿ

 

 

 

 

18 ಜುಲೈ 2021

ಕೂಡಿಗೆ ಡಯಟ್ ನಲ್ಲಿ ವನ ಸಂವರ್ಧನಾ ಅಭಿಯಾನಕ್ಕೆ ಚಾಲನೆ: ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಲು ಮಾದೇಗೌಡ ಸಲಹೆ!!

ಚಿತ್ರ : ಕೂಡಿಗೆ ಡಯಟ್ ನಲ್ಲಿ ನಡೆದ ವನ ಸಂವರ್ಧನಾ ಅಭಿಯಾನದಲ್ಲಿ ರಾಜ್ಯ ಪಠ್ಯಪುಸ್ತಕ ಸಂಘದ ನಿರ್ದೇಶಕ ಮಾದೇಗೌಡ ಗಿಡನೆಟ್ಟರು. ಡಿಡಿಪಿಐ ಎ.ಶ್ರೀಧರನ್, ಬಿಇಓಗಳಾದ ಎಚ್.ಕೆ.ಪಾಂಡು, ಶ್ರೀಶೈಲ ಬೀಳಗಿ, ಗುರುರಾಜ್, ಮುಖ್ಯಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಇತರರು ಇದ್ದರು.



ಕೂಡಿಗೆ(ಕುಶಾಲನಗರ), ಜು.18 : ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ರಾಷ್ಟ್ರೀಯ ಹಸಿರು ಪಡೆ, ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್) ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ಸಂಯುಕ್ತಾಶ್ರಯದಲ್ಲಿ ಕೂಡಿಗೆ ಡಯಟ್ ಸಂಸ್ಥೆಯಲ್ಲಿ ವನ ಸಂವರ್ಧನಾ ಅಭಿಯಾನದಡಿ ನಮ್ಮ ನಡೆ ಹಸಿರೆಡೆಗೆ ಎಂಬ ಧ್ಯೇಯ ವಾಕ್ಯದಡಿ ವನ ಮಹೋತ್ಸವದ ಅಂಗವಾಗಿ ಸಸಿ ನೆಡಲಾಯಿತು.

ಡಯಟ್ ಸಂಸ್ಥೆ ಆವರಣದಲ್ಲಿ ಸಸಿ ನೆಡುವ ಮೂಲಕ ವನ ಸಂವರ್ಧನಾ ಅಭಿಯಾನಕ್ಕೆ ಚಾಲನೆ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕ ಮಾದೇಗೌಡ ಮಾತನಾಡಿ, ಶಾಲೆಗಳಲ್ಲಿ ಇಕೋ ಕ್ಲಬ್ ಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಮೂಲಕ ಅವರನ್ನು ಭವಿಷ್ಯದ ಪರಿಸರ ರಾಯಭಾರಿಗಳಾಗಿ ರೂಪಿಸಲು ಶಿಕ್ಷಕರು ಕಾರ್ಯೋನ್ಮುಖರಾಗಬೇಕು ಎಂದರು.



ಸುಂದರ ಹಾಗೂ ಹಸಿರು ಪರಿಸರಕ್ಕೆ ಹೆಸರಾದ ಕೊಡಗಿನ ಜನತೆ  ಸ್ವಾಭಾವಿಕವಾಗಿ ಪ್ರಕೃತಿ ಪ್ರೇಮ ಮತ್ತು ಪರಿಸರ ಕಾಳಜಿ ಹೊಂದಿರುವುದು ಇತರರಿಗೆ ಮಾದರಿಯಾದುದು ಎಂದರು.

ಶಾಲೆಗಳಲ್ಲಿ ಎಸ್.ಡಿ.ಎಂ.ಸಿ ಸಮಿತಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ   ಶಾಲಾ ಪರಿಸರವನ್ನು ಉತ್ತಮಪಡಿಸಲು ಶಿಕ್ಷಕರು ಶ್ರಮಿಸಬೇಕು ಎಂದು ಮಾದೇಗೌಡ ಕರೆ ನೀಡಿದರು.

 ಡಯಟ್ ಸಂಸ್ಥೆಯ ಪ್ರಾಂಶುಪಾಲರೂ ಆದ ಡಿಡಿಪಿಐ ಎ.ಶ್ರೀಧರನ್ ಮಾತನಾಡಿ, ಜಿಲ್ಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆ ಮತ್ತು ಇಕೋ ಕ್ಲಬ್ ಗಳ ಮೂಲಕ ಶಾಲೆಗಳಲ್ಲಿ ಹಸಿರು ಪರಿಸರ ನಿರ್ಮಿಸಲು ಕೈಗೊಂಡಿರುವ ವನ ಸಂವರ್ಧನೆ ಅಭಿಯಾನದ ಮೂಲಕ ಶಾಲಾವರಣದಲ್ಲಿ ಅರಣ್ಯ ಸಸಿನೆಟ್ಟು ಬೆಳೆಸಬೇಕು ಎಂದರು.

ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಕೂಡುಮಂಗಳೂರು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಪ್ರತಿಯೊಬ್ಬರೂ    ಪರಿಸರ ಸಂರಕ್ಷಣೆಗಾಗಿ ಕಂಕಣಬದ್ಧರಾಗಿ ಶ್ರಮಿಸುವ ಮೂಲಕ ಶಾಲಾ ಪರಿಸರವನ್ನು ಉತ್ತಮಪಡಿಸಲು ಸಾಧ್ಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್.ಕೆ.ಪಾಂಡು, ಶ್ರೀಶೈಲ ಬೀಳಗಿ, ಗುರುರಾಜ್, ಡಿಡಿಪಿಐ ಕಛೇರಿಯ ಶಿಕ್ಷಣಾಧಿಕಾರಿ ಕೆ.ಕಾಂತರಾಜು, ಡಿವೈಪಿಸಿ ಎಂ.ಕೃಷ್ಣಪ್ಪ,  ಡಯಟ್ ಉಪನ್ಯಾಸಕರಾದ ಕೃಷ್ಣಪ್ಪ, ವಿ.ವಿಜಯ್, ಯು.ಸಿದ್ದೇಶಿ, ಕೆ.ಜಿ.ನೀಲಕಂಠಪ್ಪ , ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಎಸ್.ಪಲ್ಲೇದ್,  ಶಿಕ್ಷಣ ಸಂಯೋಜಕರಾದ ಎಂ.ಎಚ್.ಹರೀಶ್, ಪಿ.ಎಂ.ಅಯ್ಯಪ್ಪ, ಎಸ್.ಆರ್.ಶಿವಲಿಂಗ ,ಇತರರು ಇದ್ದರು


 

11 ಜುಲೈ 2021

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಸರಣಿ ಆನ್ ಲೈನ್ ಪ್ರಶ್ನಾವಳಿ

 ಮಾನ್ಯರೇ, 

ಸೀಕೋ ಸಂಸ್ಥೆ, ಹಾಸನ ಜಿಲ್ಲೆ ವತಿಯಿಂದ ಹತ್ತನೆಯ ತರಗತಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಆಯೋಜಿಸಿದ್ದ  ಸರಣಿ ಆನ್ ಲೈನ್ ಪ್ರಶ್ನಾವಳಿಯ ಲಿಂಕನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬೇಕಾಗಿ ವಿನಂತಿ. ಗಣಿತ ವಿಷಯದ ಎಲ್ಲಾ ಘಟಕಗಳ ಪ್ರಶ್ನೆಗಳು ಒಳಗೊಂಡಿವೆ.


ಹದಿನಾರನೇ ಪ್ರಶ್ನೆಯಿಂದ ಮೂವತ್ತರ ಪ್ರಶ್ನೆಗಳು





ಸಂಪನ್ಮೂಲ ಶಿಕ್ಷಕರು:
ಶ್ರೀಮತಿ ಲತಾ ಪೈ,
ಗಣಿತ ಶಿಕ್ಷಕಿ,
ಸರ್ಕಾರಿ ಪ್ರೌಢ ಶಾಲೆ, 
ಕಾನ್ ಬೈಲ್, ಕೊಡಗು ಜಿಲ್ಲೆ,

ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ವನ ಮಹೋತ್ಸವ : ಗಿಡನೆಟ್ಟು ಬೆಳೆಸಲು ಗ್ರಾ.ಪಂ.ಅಧ್ಯಕ್ಷರ ಸಲಹೆ




ಚಿತ್ರ : ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ಏರ್ಪಡಿಸಿದ್ದ ವನ ಮಹೋತ್ಸವದಲ್ಲಿ ಗ್ರಾ.ಪಂ.ಅಧ್ಯಕ್ಷೆ  ಇಂದಿರಾ ರಮೇಶ್  ಗಿಡ ನೆಟ್ಟರು. ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಪಿಡಿಓ ಎಂ.ಆರ್.ಸಂತೋಷ್, ಗ್ರಾ.ಪಂ.ಸದಸ್ಯರು ಇದ್ದಾರೆ.


ಕೂಡುಮಂಗಳೂರು, ಜುಲೈ 11 : ಕೂಡುಮಂಗಳೂರು ಗ್ರಾಮ ಪಂಚಾಯ್ತಿ    ಸಹಯೋಗದಲ್ಲಿ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆಯ ಜೆ.ಸಿ.ಬೋಸ್ ಇಕೋ ಕ್ಲಬ್, ತಾಲ್ಲೂಕು ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಎಸ್.ಡಿ.ಎಂ.ಸಿ. ವತಿಯಿಂದ ಹಸರೀಕರಣ ಹಾಗೂ ಶಾಲಾವರಣದಲ್ಲಿ  ವನ ಮಹೋತ್ಸವ ಸಂವರ್ಧನಾ ಅಭಿಯಾನದಡಿ ಗಿಡಗಳನ್ನು ನೆಡುವ ಮೂಲಕ ವನ ಮಹೋತ್ಸವ ಸಪ್ತಾಹ ಆಚರಿಸಲಾಯಿತು.

 " ಪರಿಸರ ಸಂರಕ್ಷಣೆ" ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ  "ಹಸರೀಕರಣ ಮತ್ತು ವನ ಮಹೋತ್ಸವದ ಮಹತ್ವ ಕುರಿತು ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಪ್ರತಿಯೊಬ್ಬರೂ ಒಂದೊಂದು ಗಿಡ ನೆಡುವ ಮೂಲಕ ಎಲ್ಲರೂ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.

    ಶಾಲೆಯಲ್ಲಿ ಇಕೋ ಕ್ಲಬ್ ಮೂಲಕ 'ನಮ್ಮ ನಡೆ ಹಸಿರೆಡೆಗೆ' ಎಂಬ ಘೋಷಣೆಯಡಿ ವನ ಸಂವರ್ಧನಾ ಅಭಿಯಾನದ ಮೂಲಕ ಸುತ್ತಲಿನ ಪರಿಸರದಲ್ಲಿ ಗಿಡ ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.

 ರಾಷ್ಟ್ರೀಯ ಹಸಿರು ಪಡೆ ವತಿಯಿಂದ ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವುದು  ಇಕೋ ಕ್ಲಬ್ ನ ಉದ್ದೇಶವಾಗಿದೆ ಎಂದು ಪ್ರೇಮಕುಮಾರ್ ತಿಳಿಸಿದರು.

ನೇರಳೆ ಗಿಡ ನೆಡುವ ಮೂಲಕ ವನ ಮಹೋತ್ಸವ ಅಭಿಯಾನಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ರಮೇಶ್ ಮಾತನಾಡಿ, ಶುದ್ಧ ಗಾಳಿ ಹಾಗೂ ಸ್ವಚ್ಛ ಪರಿಸರಕ್ಕಾಗಿ ಶಾಲಾವರಣ ಸೇರಿದಂತೆ ನಮ್ಮ ಸುತ್ತಲಿನ ಪರಿಸರದಲ್ಲಿ ಹೆಚ್ಚು ಗಿಡ ಮರಗಳನ್ನು ಬೆಳೆಸುವ ಮೂಲಕ ಉತ್ತಮ ಪರಿಸರ ನಿರ್ಮಿಸಲು ಪ್ರತಿಯೊಬ್ಬರೂ ಪಣತೊಡಬೇಕು ಎಂದರು. 

   ಪ್ರತಿಯೊಬ್ಬರೂ ಪರಿಸರ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

   ಗ್ರಾ.ಪಂ.ಪಿಡಿಓ ಎಂ.ಆರ್.ಸಂತೋಷ್ ಮಾತನಾಡಿ, ಗ್ರಾಮ ಪಂಚಾಯ್ತಿ ವತಿಯಿಂದ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಗ್ರಾಮ ಪಂಚಾಯ್ತಿ ಸದಸ್ಯರಾದ ಶಶಿಕಲಾ ಕೃಷ್ಣಚಾರಿ, ಕುಮಾರ್, ಶಿವಮ್ಮ, ಗ್ರಾಮ ದೇವಾಲಯ ಸಮಿತಿ ಅಧ್ಯಕ್ಷ ಜವರೇಗೌಡ, ವಿಜ್ಞಾನ ಪರಿಷತ್ತಿನ ಸದಸ್ಯ ಎಂ.ರಂಗಸ್ವಾಮಿ, ಎಸ್.ಡಿ.ಎಂ.ಸಿ.ಮಾಜಿ ಸದಸ್ಯ ರಾಜಾಚಾರಿ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್,  ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ. ರಮ್ಯ, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ‌ಡಿ.ರಮೇಶ್, ಅನ್ಸಿಲಾ ರೇಖಾ, ಎಸ್.ಎಂ.ಗೀತಾ, ಪಿ.ಅನಿತಾಕುಮಾರಿ, ಸಿಬ್ಬಂದಿ ಎಂ.ಉಷಾ, ಶಾಲೆಯ ಹಿರಿಯ ವಿದ್ಯಾರ್ಥಿ ಕೆ.ಕೆ.ಚೇತನ್, ಇತರರು ಇದ್ದರು.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...