06 ಜೂನ್ 2012

ನಾಲ್ಕು ಕೋಟಿ ಸಂಪಾದನೆಗಿಂತ ನಾಲ್ಕು ಜನರ ಸ್ನೇಹ ಸಂಪಾದನೆ ದೊಡ್ಡದು!!!!

ನಾನು ಬರೆಯುತ್ತಲೇ ಇದ್ದೀನಿ, ನನ್ನ ಬರವಣಿಗೆಯನ್ನು ಯಾರು ಓದುವುದೂ ಇಲ್ಲ, ಯಾರು ಕಣ್ಮುಚ್ಚಿದರೂ ನಾನು ಎದೆ ತುಂಬಿ ಬರೆಯುವೆನು. ಅದೇನೇ ಇರಲಿ, ನಾನು ನನ್ನ ಬ್ಲಾಗ್ ಬರೆಯುವುದು ನನ್ನ ದಿನಚರಿ ಬರೆದ ಹಾಗೆಯೇ ಎಂದರೂ ತಪ್ಪಿಲ್ಲ. ನಾನು ಮೊನ್ನೆ ಊರಿಗೆ ಹಬ್ಬಕ್ಕೆಂದು ಹೋದಾಗ ನಡೆದ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಾನು ಇತ್ತೀಚೆಗೆ ಹಿಂದಿನಷ್ಟು ನೆಮ್ಮದಿಯಾಗಿಲ್ಲ. ಏನೋ ಒಂದು ಬಗೆಯ ತಳಮಳ ಬೇಸರ ಅದೇನೆಂಬುದು ನನಗೂ ತಿಳಿದಿಲ್ಲ. ನನಗೆ ಪಿಎಚ್ ಡಿ ಬಂದ ಮೇಲೆ ನನ್ನ ಮನಸ್ಥಿತಿ ಹದ ತಪ್ಪಿದೆಯೆಂಬುದು ನನ್ನ ಅನಿಸಿಕೆ. ಇದನ್ನು ಕೆಲವರು ಗುರುತಿಸಿದ್ದಾರೆ ಮತ್ತು ಹಲವರು ಗುರುತಿಸಿಲ್ಲ. ನಾನು ಮೊದಲಿನಿಂದಲೂ ದುರಹಂಕಾರದ ಪ್ರಾಣಿ. ಸದಾ ಮಲಗಿ ನಿದ್ರಿಸುತ್ತಿದ್ದರೂ ನಾನೇ ಎಲ್ಲವನ್ನೂ ಮಾಡಿದ್ದು, ಎಲ್ಲವನ್ನೂ ಸಾಧಿಸಿಬಿಟ್ಟೆ ಎಂಬುದು ನನ್ನ ತಲೆಯಲ್ಲಿದೆ. ನಾನು ಎಂಬ ಆ ಅಹಂ ಹೋಗುವ ತನಕ ನಾನು ಉದ್ದಾರವಾಗುವುದಿಲ್ಲ. ನಮ್ಮ ಪಿಯುಸಿ ಗೆಳೆಯರೆಲ್ಲ ಒಟ್ಟಿಗೆ ಸೇರೋಣವೆಂದಾಗ ನನಗೆ ಬಹಳ ಖುಷಿಯಾಯಿತು. ಸತ್ಯ ಹೇಳಬೇಕೆಂದರೇ ನನಗೆ ಅತ್ಯುತ್ತಮ ಗೆಳೆಯರಿದ್ದಾರೆ. ಇತ್ತೀಚೆಗೆ ದ್ವಾರಕೀಶ್ ಟೀಮ್ ಜೊತೆಗೆ ನಾನು ಸ್ವಲ್ಪ ಜಗಳವಾಡಿರುವುದನ್ನು ಬಿಟ್ಟರೇ ನನ್ನ ಇಡೀ ಜಾಯಮಾನದಲ್ಲಿಯೇ ನನ್ನ ಸ್ನೇಹಿತರನ್ನು ಬಿಟ್ಟು ಕೊಟ್ಟಿಲ್ಲ. ನನಗೆ ಇದು ಮರುಳಾ ಎನಿಸುತ್ತದೆ.

ನನ್ನ ಹೈಸ್ಕೂಲಿನಲ್ಲಿಯೂ ಅಷ್ಟೇ ಸೈಕಲ್ ಹಾಕಿಕೊಂಡು, ಕಿರಣ, ಶಾಂತ, ಸಂತೋಷ ಹೀಗೆ ಎಲ್ಲರ ಮನೆಗಳಿಗೂ ಹೋಗಿಬರುತ್ತಿದ್ದೆ. ಅವರು ಕೆಲವು ದಿನಗಳು ಕಂಡಿಲ್ಲವೆಂದರೇ ನನ್ನ ಮನಸ್ಸು ಕಸಿವಿಸಿಗೊಳ್ಳುತ್ತಿತ್ತು. ಇದಾದ ನಂತರ ನನ್ನ ಪಿಯುಸಿ ಜೀವನದಲ್ಲಿ ಶಂಕರನನ್ನು, ಲೋಕೇಶನನ್ನು, ವಿಜಿಯನ್ನು ಹಲವಾರು ಬಾರಿ ಅವರ ಮನೆಗಳಿಗೆ ಹೋಗಿ ಹುಡುಕಿದ್ದೇನೆ. ಅವರೆಲ್ಲರಿಗೂ ನಾನೆಷ್ಟು ಮುಖ್ಯವಾಗಿದ್ದೆ ಎಂಬುದನ್ನು ನಾನು ತಿಳಿದಿಲ್ಲ. ಆದರೇ, ನನಗೆ ಸ್ನೇಹವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಸ್ನೇಹ ಮಾತ್ರವಲ್ಲ ಏನನ್ನೂ ಅದರಲ್ಲಿಯೂ ಯಾವ ವ್ಯಕ್ತಿಯನ್ನು ಕಳೆದುಕೊಳ್ಳಲು ತಯಾರಿಲ್ಲ. ನನ್ನತನವನ್ನು ಬಿಟ್ಟು ನಿಲ್ಲುತ್ತೇನೆ. ಸ್ನೇಹದಲ್ಲಿ ನನಗೆ ಅಹಂ ಎನ್ನುವುದು ಇಲ್ಲ, ಆದರೇ ಪ್ರೀತಿಯಲ್ಲಿದೆ. ಹುಡುಗಿಯರ ಮುಂದೆ ನಾನು ತಲೆಬಾಗುವುದಿಲ್ಲ. ನನ್ನ ಮನಸ್ಸಿನಲ್ಲಿ ಹುಡುಗಿಯರ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಆದರೂ ಏಕೋ ತಿಳಿದಿಲ್ಲ ಹುಡುಗಿಯರ ವಿಷಯದಲ್ಲಿ ಬಹಳ ನಿಷ್ಠುರನಾಗುತ್ತೇನೆ. ನನ್ನ ಎಂಎಸ್ಸಿ ಜೀವನದಲ್ಲಿಯಂತೂ ನನ್ನ ಹೆಸರು ಕೇಳಿದರೇ ಸಾಕು ಉರಿದು ಬೀಳುತ್ತಿದ್ದರು. ಆದರೂ ಅವರೆಲ್ಲಾ ಇಂದಿಗೂ ನನ್ನ ಫೇಸ್ ಬುಕ್ಕಿನಲ್ಲಿದ್ದಾರೆ. ನಾನು ಏನನ್ನೋ ಹೇಳಲು ಹೋಗಿ ಮತ್ತೆನನ್ನೋ ಹೇಳುತ್ತಿದ್ದೇನೆ.

ನಾನು ಹೇಳ ಹೊರಟದ್ದು ಮೊನ್ನೆ ಮನೆಯಲ್ಲಿ ಹೋದಾಗ ನನ್ನ ನೆಂಟರು ಇಷ್ಟರೆಲ್ಲರೂ ಬಂದಿದ್ದರು. ಅವರೆಲ್ಲರಿಗೂ ಒಂದೇ ಚಿಂತೆ ನನ್ನ ಮದುವೆಯದ್ದು. ಹರಿ ಮದುವೆಯಾಗು, ಮದುವೆಯಾಗು ಎಂದು. ನಾನು ಸೂಕ್ಷತೆಯಿಂದ ಗಮನಿಸಿದಾಗ ನನಗೆ ತಿಳಿದ ವಿಷಯ, ನನ್ನ ಬಗ್ಗೆ ನನಗೆ ಅರಿವಾಗದಂತೆ ಅವರುಗಳು ಅದ್ಬುತವಾದ ಗೌರವವನ್ನು ಇಟ್ಟುಕೊಂಡಿದ್ದಾರೆ. ನಾನು ಇದನ್ನು ವಿಜಿಯ ಜೊತೆಗೆ ಚರ್ಚಿಸಿದೆ, ಮಗಾ ನನ್ನ ಬಗ್ಗೆ ಇಷ್ಟೊಂದು ದೊಡ್ಡ ಇಮೇಜ್ ಬೆಳೆಯುವುದಕ್ಕೆ ಕಾರಣ ಏನು? ಅವರು ನನ್ನ ವಿದ್ಯಬ್ಯಾಸದ ಬಗ್ಗೆ ಮಾತನಾಡಿದ್ದರೇ ನನಗೆ ಅಂಥಹದ್ದು ಎನಿಸುತ್ತಿರಲಿಲ್ಲ. ಅವರು ಮಾತನಾಡುತ್ತಿರುವುದು ನನ್ನ ನಡತೆಯ ಬಗ್ಗೆ. ಸತ್ಯವಾಗಿಯೂ ಹೇಳುತ್ತೇನೆ ನನಗೆ ಬಹಳ ಕಸಿವಿಸಿಯಾಯಿತು, ಬೇಸರವೂ ಆಯಿತು. ನಾನು ಅವರ ಆ ಮಟ್ಟಗಿನ ಪ್ರೀತಿ ವಿಶ್ವಾಸಕ್ಕೆ ಅರ್ಹನಲ್ಲ. ನಾನು ಅದನ್ನು ಪಡೆಯಲು ಯೋಗ್ಯನಲ್ಲ. ನಾನು ಮುಂಗೋಪಿ, ಕೋಪಿಷ್ಠ, ದುರಹಂಕಾರದ ಪರಮಾವಧಿ, ಅಹಂಕಾರಿ, ಸರಳತೆಯಿಂದ ದೂರವಿರುವ ಮನುಷ್ಯ. ಆದರೇ ಅವರ ದೃಷ್ಠಿಯಲ್ಲಿ ನಾನು ಬಹಳ ಸರಳತೆಯ ಮನುಷ್ಯ, ಆಡಂಬರವಿಲ್ಲದವನು, ಕೋಪ ಮಾಡಿಕೊಳ್ಳದವನು, ಅತಿಯಾಗಿ ಜನವನ್ನು ಪ್ರೀತಿಸುವವನು. ಇದೆಲ್ಲದ್ದಕ್ಕೂ ಕಾರಣ ಈ ನನ್ನ ಸ್ನೇಹಿತರು. ನನ್ನ ಜೊತೆಯಲ್ಲಿ ನಮ್ಮ ಮನೆಗೆ ಬರುವ ಸ್ನೇಹಿತರನ್ನು ಗಮನಿಸಿದ್ದಾರೆ, ಬರುವವರೆಲ್ಲ ಒಳ್ಳೆಯವರು, ಒಳ್ಳೆಯ ಮನಸ್ಸಿನವರು, ಸ್ವಲ್ಪವೂ ಅಹಂಕಾರವಿಲ್ಲದೆ ನಮ್ಮ ಮನೆಯಲ್ಲಿ ಬಂದು ನಮ್ಮೊಂದಿಗೆ ಹೊಂದಿಕೊಳ್ಳುತ್ತಾರೆ.

ನನಗೆ ನಿಜಕ್ಕೂ ಎನಿಸುವುದು ಒಬ್ಬ ಮನುಷ್ಯನನ್ನು ಅಳೆಯುವುದು ಕೇವಲ ಅವನ ಹಣಬಲದಿಂದ ಅಲ್ಲ, ಅವನಿಗಿರುವ ಒಳ್ಳೆಯ ಸ್ನೇಹಿತರಿಂದ. ಅಂಥಹ ಒಳ್ಳೆಯ ಸ್ನೇಹಿತರು ನನಗಿದ್ದಾರೆಂಬುದು ಹೆಮ್ಮೆಯ ವಿಷಯ. ಅಲ್ಲಿ ಇಲ್ಲಿ ಅಲ್ಪ ಸ್ವಲ್ಪ ಜೊಲ್ಲುಗಳಿದ್ದವು ಅವೆಲ್ಲಾ ದೂರಾಗಿದ್ದಾವೆ. ಕೇವಲ ಗಟ್ಟಿಯಾದ ಸ್ನೇಹಿತರು ಉಳಿದಿದ್ದಾರೆ. ನಾಲ್ಕು ಜನ ಒಳ್ಳೆಯವರಿದ್ದರೇ ಸಾಕು, ನಾಲ್ಕು ನೂರು ಜನರನ್ನು ಇಟ್ಟುಕೊಂಡು ರಾಜ್ಯ ಕಟ್ಟಬೇಕಿಲ್ಲ. ಮನಸ್ಸಿಗೆ ಬೇಸರವಾದಗ ಭುಜಕೊಡಲು, ಜೊತೆಯಲ್ಲಿ ಒಂದೇ ಸಿಗರೇಟ್ ಹಚ್ಚಲು, ಕೂತು ಅರ್ಧ ಲೋಟ ಬಿಯರ್ ಕುಡಿಯಲು ಸಿಕ್ಕರೇ ಸಾಕು.

04 ಜೂನ್ 2012

ವಿಶ್ವ ಪರಿಸರದಿನದ ಸವಾಲುಗಳು....!!!!

ಸುಮ್ಮನೆ ಕುಳಿತು ಏನೇನೋ ಗೀಚುತ್ತಿದ್ದ ನನಗೆ ದಿಡೀರನೇ ನೆನಪಾದದ್ದು, ನಾಳಿನ ವಿಶ್ವ ಪರಿಸರ ದಿನ. ನಾನು ಬಹಳಷ್ಟು ಬಾರಿ ಇದೇ ತಪ್ಪನ್ನು ಮಾಡಿದ್ದೇನೆ. ಗಡ್ಡಕ್ಕೆ ಬೆಂಕಿ ಬಿದ್ದಾಗ ಭಾವಿ ತೋಡುವುದು. ನನ್ನ ಜೀವನದ ಪದ್ದತಿಯೇ ಹಾಗೆ ಎನಿಸುತ್ತದೆ, ನಾನು ಅದನ್ನು ಸಮರ್ಥಿಸಿಕೊಳ್ಳುತ್ತೇನೆ ಕೂಡ. ಜೀವನ ಎಂದಿಗೂ ಒಂದು ಯೋಜಿತ ಕಾರ್ಯಕ್ರಮವಾಗಬಾರದು. ಅದು ಅನಿರೀಕ್ಷಿತದ ತಾಣವಾಗಿರಬೇಕು. ಎಲ್ಲವೂ ನಾವು ಎಂದುಕೊಂಡಂತೆ ಆದರೇ ಅದರಲ್ಲಿ ತಿರುಳಿರುವುದಿಲ್ಲ. ಎಲ್ಲವೂ ಸಮರ್ಪಕವಾಗಿದ್ದರೇ ಅದರಲ್ಲೇನೂ ಖುಷಿ ಹೇಳಿ? ಎಸಿ ಕಾರಿನಲ್ಲಿ ಕುಳಿತು ದೇಶ ಸುತ್ತಿದರೇನೂ ಬಂತು ಮಜಾ? ಸಾರಿಗೆಯಲ್ಲಿ ಹೋಗಿ, ಜನ ಸಾಮಾನ್ಯರ ಮಧ್ಯೆ ಕುಳಿತು ಅನುಭವಿಸಬೇಕು? ನಾನು ಈ ವರೆಗೆ ಮಾಡಿರುವದೆಲ್ಲವೂ ಹಾಗೆಯೇ! ಬಹಳಷ್ಟೂ ಜನ ನನ್ನನ್ನು ಮೆಂಟಲ್ ಎಂದಿದ್ದಾರೆ. ಸುಮ್ಮನೆ ಇದ್ದವನು ನಾಳೆ ಬೆಳ್ಳಿಗ್ಗೆ ಮತ್ತಾವುದೋ ಊರಿಗೆ ಹೋಗಿರುತ್ತೇನೆ. ಸುಮ್ಮನೆ ಇದ್ದವನು ಇನ್ನಾರನ್ನೋ ಮನೆಗೆ ಕರೆದಿರುತ್ತೇನೆ. ನಾನು ಪರಿಸರ ವಿಜ್ನಾನಕ್ಕೆ ಬಂದದ್ದು ಅನೀರೀಕ್ಷಿತವೋ ನನಗೆ ತಿಳಿದಿಲ್ಲ. ಆದರೇ ನಾನು ಪರಿಸರದ ಬಗ್ಗೆ ಒಲವು ಬಂದದ್ದು ಮಾತ್ರ ಹುಟ್ಟಿನಿಂದಲೇ.

ನಾನು ಪಿಯುಸಿ ಫೇಲಾದ ಮೇಲೆ, ಕೆಮಿಸ್ಟ್ರ‍ೀ ಓದಬೇಕೆಂಬ ಹಂಬಲವಿತ್ತು. ಯುವರಾಜ ಕಾಲೇಜಿಗೆ ಸೇರುವಾಗ ನಾನು ಸುಲಭವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಪ್ರಯತ್ನಿಸಿದೆ. ಅದರಂತೆ ನನ್ನ ಕಣ್ಣಿಗೆ ಬಿದ್ದದ್ದು, ಪರಿಸರ ವಿಜ್ನಾನ, ಅರ್ಜಿ ತುಂಬುವ ಸಮಯದಲ್ಲಿ ನನಗೆ ಒಂದಿಬ್ಬರೂ ಸಲಹೆ ನೀಡಿದರು, ಪರಿಸರ ವಿಜ್ನಾನ ಮುಂದಿನ ದಿನಗಳಲ್ಲಿ ಬಹಳ ಬೇಡಿಕೆಯ ವಿಷಯವಾಗುತ್ತದೆ ತೆಗೆದುಕೊಂಡು ಓದು ಎಂದು. ಅವರಿಗೆ ನಾನು ನನ್ನ ಮನಸಾರೆ ನಮಸ್ಕರಿಸುತ್ತೇನೆ. ಅದಾದ ಮೇಲೆ ಯುವರಾಜ ಕಾಲೇಜಿಗೆ ಸೇರಿದರೂ ಅದು ಅಂಥಹ ಆಸಕ್ತದಾಯಕವಾಗಿ ಕಾಣುತ್ತಿರಲಿಲ್ಲ. ಪಾಠ ಮಾಡುತ್ತಿದ್ದವರು ಆಸಕ್ತಿ ಮೂಡಿಸುವಲ್ಲಿ ವಿಫಲರಾದರು. ಅಂತೂ ಇಂತೂ ಬಿಎಸ್ಸಿಯನ್ನು ಪಾಸು ಮಾಡಿದ್ದು ಆಯಿತು. ಮೆಡಿಕಲ್ ರೆಪ್ ಆಗುತ್ತೇನೆ, ಓದಿದ್ದು ಸಾಕೆಂದು ಬೆಂಗಳೂರಿಗೆ ಬಂದೆ. ಆ ಸಮಯದಲ್ಲಿ ಸುನಿಲ್ ಮತ್ತು ಅವನ ಸ್ನೇಹಿತ ಶ್ರಿಕಾಂತ್ ಬಹಳ ಸಹಾಯ ಮಾಡಿದ. ಅದೇಕೆ ನಾನು ಆ ಕೆಲಸದಿಂದ ಹಿಂಜರಿದೆ ಎಂಬುದು ನನಗೆ ಇಂದಿಗೂ ಅರ್ಥವಾಗಿಲ್ಲ. ಮೈಸೂರಿನಲ್ಲಿ ಆ ಸಮಯಕ್ಕೆ ನನ್ನ ಬಿಎಸ್ಸಿ ರಿಸಲ್ಟ್ ಬಂದಿತ್ತು. ಮೈಸೂರು ವಿವಿಗೆ ಸೇರುವ ಮನಸ್ಸು ಮಾಡಿದೆ ಆದರೇ ಮನಸ್ಸು ಒಪ್ಪುತ್ತಿರಲಿಲ್ಲ. ಅದು ಹೇಗೋ ಅಲ್ಲಿಂದ ತಪ್ಪಿಸಿಕೊಂಡೆ. ಬೆಂಗಳೂರಿನಲ್ಲಿ ಕೆಲಸ ಮಾಡುವುದು ಖಾಯಂ ಎಂದು ನಿರ್ಧರಿಸಿದೆ. ಆ ಸಮಯದಲ್ಲಿ ನನ್ನ ಭಾವ ನನಗೆ ಬಹಳ ಪ್ರೋತ್ಸಾಹ ನೀಡಿದರು. ಬೆಂಗಳೂರು ವಿವಿಗೆ ಬಂದು ಪರಿಸರ ವಿಜ್ನಾನ ವಿಭಾಗಕ್ಕೆ ಸೇರಿಕೊಂಡೆ. ನನಗೆ ಪರಿಸರವೆಂಬುದರ ಬಗ್ಗೆ ಹಿಂದೆ ಇದ್ದ ಆಸಕ್ತಿ ಹೆಮ್ಮರವಾಗಿ ಬೆಳೆಯತೊಡಗಿತ್ತು. ಮೈಸೂರು ವಿವಿಯಲ್ಲಿ ಓದಿ ಬಂದ ನಾನು ಬೆಂಗಳೂರಿಗೆ ಬಂದು ಅಲ್ಪ ಸ್ವಲ್ಪ ಕಲಿತೆಯೆಂದರೇ ತಪ್ಪಾಗುವುದಿಲ್ಲ.

ಅದೇ ಸಮಯಕ್ಕೆ, ನಾನು ಸೇರಿದ ದಿನದಿಂದ ನನ್ನ ವೈಯಕ್ತಿಕ ಬೆಳವಣಿಗೆಗೆ ಕಾರಣರಾದವರು ನನ್ನ ರೂಮ್ ಮೇಟ್ ದ್ವಾರಕೀಶ್, ನನ್ನ ನೀತಿ ನಿಯಮಗಳು, ಪದ್ದತಿಗಳು, ಆಲೋಚನ ರೀತಿ, ಎಲ್ಲವನ್ನು ತಿದ್ದಿಕೊಳ್ಳಲು ಸಹಾಯ ಮಾಡಿದ ವ್ಯಕ್ತಿ. ನಾನು ಅತಿ ಹೆಚ್ಚು ಇಷ್ಟ ಪಡುವ ಮತ್ತು ಹೆಮ್ಮೆ ಪಡುವು ವ್ಯಕ್ತಿಗಳಲ್ಲಿ ಅಗ್ರ ಸ್ಥಾನ ಆತನಿಗೆ ಎಂದರೂ ತಪ್ಪಾಗುವುದಿಲ್ಲ. ನನ್ನ ಮೊದಲನೆಯ ಎಂಎಸ್ಸಿಯ ಮೊದಲ ದಿನಗಳನ್ನು ಮೆಲುಕು ಹಾಕಿದರೇ, ಹಾಸ್ಟೇಲ್ ನಲ್ಲಿ ಕೊಠಡಿ ಸಿಗುವುದು ಕಷ್ಟವಿದ್ದ ದಿನಗಳಲ್ಲಿ ನನಗೆ ಮಂಚವನ್ನು ಕೊಟ್ಟು ಕೆಳಗೆ ಮಲಗುತ್ತಿದ್ದ ಏಕೈಕ್ ಸೀನಿಯರ್ ಎಂದರೂ ತಪ್ಪಿಲ್ಲ. ಮುಂಚಿನಿಂದಲೂ ಕಥೆ ಕಾದಂಬರಿ ಓದುತ್ತಿದ್ದ ನನಗೆ ಅವನ ಸಹವಾಸ ಮಾಡಿದ ಮೇಲೆ ಕಾದಂಬರಿಗಳನ್ನು ಓದುವುದರ ಜೊತೆಗೆ ಚರ್ಚೆ ಮಾಡುವುದು, ಸೈದ್ದಾಂತಿಕವಾಗಿ ವಿಮರ್ಶೆ ಮಾಡುವುದನ್ನು ಕಲಿತೆ. ಅಂತಿಮ ಘಟ್ಟದಲ್ಲಿ ನನ್ನ ವ್ಯಕ್ತಿಗತ ಬೆಳವಣಿಗೆಗೆ ಸಹಾಯ ಮಾಡಿದ್ದು ಕೆವಿ ರಾಜುರವರ ಆಲೋಚನ ಲಹರಿ. ಅವರು ಚಿಂತನೆ ಮಾಡುವ ರೀತಿ ನನ್ನ ಆಲೋಚನಾ ದಿಕ್ಕನ್ನೇ ಬದಲಾಯಿಸಿತು.

ನಾನು ಇಂದು ಆಲೋಚಿಸುವ ರೀತಿ ಅನೇಕರಿಗೆ ಇಷ್ಟವಾಗುವುದಿಲ್ಲ, ನಾಳೆ ಪರಿಸರ ದಿನವಿದೆ, ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಆಚರಿಸಲು ಯತ್ನಿಸುತ್ತಾರೆ. ತಾವು ಮಾಡಿದ ಸೇವೆಗೆ ಯಾರಾದರೂ ಗುರುತಿಸಿ ಪ್ರಶಸ್ತಿ ನೀಡಬೇಕೆಂದು ಬಯಸುತ್ತಾರೆ. ಹಣ ಕೊಟ್ಟು ಪ್ರಶಸ್ತಿಯನ್ನು ಪಡೆಯುತ್ತಾರೆ. ನನಗೆ ಅವರ ಬಗ್ಗೆ ಮಾತನಾಡುವ ಬಯಕೆಯಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಆದ ಬದಲಾವಣೆಗಳನ್ನು ಗಮನಿಸಿ, ಕಳೆದ ಐದು ವರ್ಷಗಳಲ್ಲಿ ಬದಲಾದ ರೀತಿಯನ್ನು ಗಮನಿಸಿ, ಮನಸ್ಸಿಗೆ ಬಹಳ ಬೇಸರವಾಗುತ್ತದೆ. ಜನರು, ಸರ್ಕಾರ ಎರಡೂ ಕಡೆಯಿಂದ ಪರಿಸರವನ್ನು ತಿಂದು ಹಾಕಿದ್ದಾರೆ. ಪರಿಸರದ ಬಗ್ಗೆ ಸ್ವಲ್ಪವೂ ಭಾವನಾತ್ಮಕವಾದ ಸಂಬಂಧವಿಲ್ಲ. ಇರುವುದೆಲ್ಲವನ್ನೂ ದೋಚಬೇಕು, ಅನುಭವಿಸಬೇಕು, ಆಡಂಬರದ ಜೀವನವನ್ನು ಸವಿಯಬೇಕೆಂಬುದನ್ನು ಬಿಟ್ಟರೇ ಮುಂದಿನ ಪೀಳಿಗೆಗೆಂದು ನಾವು ಪರಿಸರವನ್ನು ಕಾಪಾಡಬೇಕೆಂಬ ಮನಸ್ಸು ಇಲ್ಲ. ಜನರು ನಿಜಕ್ಕೂ ಎಲ್ಲಿ ದಾರಿ ತಪ್ಪಿದ್ದಾರೆಂಬುದನ್ನು ಅರ್ಥೈಸಿಕೊಳ್ಳಬೇಕಿರುವುದು ಈ ದಿನದ ಅನಿವಾರ‍್ಯತೆ. ಮಾತಿನಲ್ಲಿ ಭಾಷಣ ಮಾಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ಇದು ಹೀಗೆಯೇ ಮುಂದುವರೆದರೇ ಇನ್ನೂ ಕೇವಲ ಕೆಲವು ವರ್ಷಗಳಲ್ಲಿ ನಾವು ಸರ್ವನಾಶವಾಗುತ್ತೇವೆ. ಇಂದಿನ ದರಿದ್ರ ಜೋತಿಷಿಗಳು ಎಂಜಲು ಕಾಸು ಮಾಡಲು ಜನರಿಗೆ ಭಯ ಹುಟ್ಟಿಸುತ್ತಿದ್ದಾರೆ. ಇರುವುದು ಇನ್ನು ಕೆಲವೇ ವರ್ಷಗಳು, ಆದಷ್ಟೂ ಮಜಾ ಮಾಡಿ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಆಗುತ್ತಿರುವ ತಪ್ಪನ್ನು ತಿದ್ದುವ ಬದಲು ಮತ್ತೂ ಹೆಚ್ಚು ತಪ್ಪು ಮಾಡಲು ಪ್ರಚೋದಿಸುತ್ತಿದ್ದಾರೆ.

ನನ್ನ ಮನಸ್ಸಿನಲ್ಲಿರುವ ನಾಲ್ಕಾರು ಪ್ರಶ್ನೆಗಳಿಗೆ ಈ ಒಂದು ವರ್ಷದಲ್ಲಿ ಉತ್ತರ ಹುಡುಕುವ ಪ್ರಯತ್ನವನ್ನು ಮಾಡುತ್ತೇನೆ. ಮೊದಲನೆಯದಾಗಿ, ಜನರು ಪರಿಸರದ ಬಗ್ಗೆ ಯಾವ ರೀತಿಯ ಭಾವನೆಯನ್ನು ಇಟ್ಟುಕೊಂಡಿದ್ದಾರೆ? ಅಧಿಕಾರಿಗಳು ಸರ್ಕಾರ ಯಾವ ಅನಿಸಿಕೆಯನ್ನು ಇಟ್ಟುಕೊಂಡಿದೆ? ಬದಲಾಗುತ್ತಿರುವ ವಿದ್ಯಮಾನಗಳ ಬಗ್ಗೆ ಜನರ ಅಭಿಪ್ರಾಯವೇನು? ಇದು ಹಿಂದಿನಿಂದಲೂ ಇತ್ತಾ? ಅಥವಾ ಈಗ ಆಗಿದ್ದಾ? ಈ ಬದಲಾವಣೆಗೆ ಉತ್ತರ ಏನು? ಪರಿಹಾರವೇನು? ಒಬ್ಬ ಪರಿಸರ ವಿಜ್ನಾನಿ ಆಗಿ ನಾನು ಏನನ್ನು ಮಾಡಬಹುದು?

ಹನ್ನೆರಡು ವರ್ಷದ ಹಿಂದಿನ ನೆನಪಿನ ಬುತ್ತಿಯಿಂದ ತೆಗೆದ ನಾಲ್ಕು ತುತ್ತುಗಳು!!!


ಇಲ್ಲಿ ಬರೆಯುವ ಬರವಣಿಗೆ ಎಲ್ಲರೂ ಓದಬೇಕಿಲ್ಲ, ಆದರೇ ನನ್ನ ಜೊತೆಯಲ್ಲಿ ಮೂರು ವರ್ಷ ಕಳೆದ ಪಿಯುಸಿ ಸ್ನೇಹಿತರು ಓದಲೇ ಬೇಕಿದೆ. ಪಿಯುಸಿ ಎಂಬ ಬದುಕಿಗೆ ಕಾಲಿಟ್ಟ ಗಳಿಗೆಯಲ್ಲಿ, ಯೌವ್ವನದ ಕಟ್ಟೆ ಒಡೆದು ಲೋಕವೆಲ್ಲ ಹಸಿರಾಗಿ ಕಾಣುತಿದ್ದ ಆ ದಿನಗಳಲ್ಲಿ ನಮ್ಮ ಮೀಸೆ ಗಡ್ಡಗಳು ಚಿಗುರಾಗಿದ್ದ ಕ್ಷಣಗಳಲ್ಲಿ, ಮನಸ್ಸಿನ ಮಿಡಿತಗಳು ಹುಚ್ಚೆದ್ದು ಕುಣಿಯುತ್ತಿದ್ದ ದಿನಗಳಲ್ಲಿ ಜೊತೆಗಿದ್ದ ನೀವೆಲ್ಲರೂ ಓದಲೇ ಬೇಕು. ಇದು ನನ್ನೊಬ್ಬನ ಭಾವನೆಯಲ್ಲ, ಎಲ್ಲರಿಗೂ ಇದು ಆಗಿಯೇ ಆಗಿದೆ. ಅಂಥಹ ಕ್ಷಣಗಳವು. ಆ ಕ್ಷಣಗಳಲ್ಲಿ ಅದನ್ನೆಲ್ಲಾ ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ, ಅರ್ಥಮಾಡಿಕೊಳ್ಳುವ ಪ್ರಯತ್ನವೂ ಇರಲಿಲ್ಲ. ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದರೇ ಅರ್ಥ ಸಿಗುತ್ತಿರಲಿಲ್ಲ. ಈಗ ಹನ್ನೆರಡು ವರ್ಷವಾದ ಮೇಲೆ, ಒಬ್ಬನೇ ಕುಳಿತು ಯೋಚಿಸಿದರೇ ತಲೆ ತಿರುಗುತ್ತದೆ, ಒಬ್ಬನೇ ನಗುತ್ತೇನೆ, ಹಚ್ಚಿದ ಸಿಗರೇಟು ಮುಗಿಯುವುದು ತಿಳಿಯುವುದಿಲ್ಲ. ಆ ದಿನಗಳಲ್ಲಿ ಮೂರು ಎರಡು ಕಾಲು ರೂಪಾಯಿ ಸಿಗರೇಟು ಅದಕ್ಕೂ ಪರದಾಡುವ ದಿನಗಳು. ಒಂದೇ ಸಿಗರೇಟನ್ನು ಮೂರ‍್ನಾಲ್ಕು ಜನ ಸೇದುವ ಕ್ಷಣಗಳವು. ಸ್ವಲ್ಪ ಜಾಸ್ತಿ ಸೇದಿದರೂ ಜಗಳ, ಜಗಳವೆಂದರೇ ಹೊಡೆದಾಟವಿಲ್ಲ ಮಾತಿನಲ್ಲಿ ಉರಿಸುವ ಮಧುರ ನಿಮಿಷಗಳು. ಆದರೂ ಬೇಸರವಿಲ್ಲ.

ಆಗ ಎದೆ ಸೀಳಿದರೆ ಎಬಿಸಿಡಿ ಇಲ್ಲದವರು ಇಂದು ಏನೇನೋ ಆಗಿದ್ದಾರೆ. ಹುಡುಗಿಯರನ್ನು ನೋಡುವ ಆಸೆ ಇತ್ತು. ನೋಡುವ ಧೈರ್ಯವಿಲ್ಲ. ಇಷ್ಟ ಪಟ್ಟರೂ ಅವಳಿಗೆ ತಿಳಿಸುವ ಧೈರ್ಯವಿರಲಿಲ್ಲ. ಹುಡುಗಿಯರ ಕಂಡರೆ ಅಸಡ್ಡೆ ಅದೇಕೆ? ಹುಡುಗಿಯ ಜೊತೆ ಮಾತನಾಡುವ ಹುಡುಗರ ಕಂಡರೆ ರೇಗಿಸುವುದು. ನನಗಿಂದಿಗೂ ನೆನಪಿದೆ, ಎಲ್ಲರ ಹೆಸರುಗಳು ಎಲ್ಲರೊಂದಿಗೂ ಒಂದಲ್ಲ ಒಂದು ಬಗೆಯ ಸಲುಗೆ ನನಗಿತ್ತು ಎನಿಸುತ್ತದೆ. ಹುಡುಗಿಯರಿಂದ ಮಾತ್ರ ಬಲು ದೂರವಿದ್ದೆ. ಮೊದಲನೆಯ ಬೆಂಚಿನಲ್ಲಿ ಮೊದಲ ಸ್ವಲ್ಪ ದಿನಗಳಿದ್ದೆ, ಆದ್ದರಿಂದ ಮೊದಲ ಎರಡು ಸಾಲಿನ ಹುಡುಗರು ಪರಿಚಯವಾದರು. ಕಿರಣ ಕುಮಾರ್ ಗುಮ್ಮನಕೊಲ್ಲಿಯಿಂದ ಬರುತ್ತಿದ್ದ, ಬಹಳ ಒಳ್ಳೆಯ ಹುಡುಗ, ಚಿಕ್ಕಪ್ಪನ ಮನೆಯಲ್ಲಿದ್ದರಿಂದ ಅವನ ಸಂಕಟ ಹೇಳತೀರದು, ಅಭಿನಂದನ ಕಿರಣ ಮೂಕಾಂಬಿಕ ಶಾಲೆಯಲ್ಲಿ ಜೊತೆಯಲ್ಲಿಯೇ ಓದಿದವರು ಆದ್ದರಿಂದ ಅವರಿಬ್ಬರ ಸ್ನೇಹವೂ ಗಾಢವಾಗಿತ್ತು, ನಮ್ಮ ಏರಿಯಾದಲ್ಲಿ ಕ್ರಿಕೇಟ್ ಆಡುವುದಕ್ಕೆ ಸ್ನೇಹಿತರಾದೆವು. ಮಂಜೇಶ ಓದುವುದರಲ್ಲಿ ಬಹಳ ಮುಂದಿದ್ದ, ಅವನ ಬರವಣಿಗೆ ಅದ್ಬುತವಾಗಿತ್ತು, ನಮ್ಮ ಕ್ಲಾಸಿಗೆ ಮೊದಲ ವಿದ್ಯಾರ್ಥಿ ಮತ್ತೂ ಅಷ್ಟೇ ಹಾಸ್ಯ ಪ್ರವೃತ್ತಿ ಅವನಲ್ಲಿತ್ತು. ಆ ದಿನಗಳಲ್ಲಿದ್ದ ಪ್ರಬುದ್ದತೆ ಇಂದಿಗೂ ಉಳಿಸಿಕೊಂಡು ಬಂದಿದ್ದಾನೆ, ಆ ದಿನಗಳಲ್ಲಿ ನಮ್ಮ ಕ್ಲಾಸಿನ ಎಲ್ಲಾ ಹುಡುಗಿಯರ ಜೊತೆ ಮಾತನಾಡುತ್ತಿದ್ದ ಏಕೈಕ ಹುಡುಗ ಅವನೊಬ್ಬನೇ! ಎರಡನೆಯ ಸಾಲಿನಲ್ಲಿ ಲತೇಂದ್ರ ಕುಳಿತುಕೊಳ್ಳುತ್ತಿದ್ದ, ಅವನು ಬೆಟದಪುರದ ಆಚೆಗಿನ ಹೊಸೂರಿನ ಬಳಿಯ ಹೊಸಕೊಪ್ಪಲಿನವನು, ಕನ್ನಡ ಮಾಧ್ಯಮದಿಂದ ಬಂದಿದ್ದರಿಂದ ಸ್ವಲ್ಪ ಹಿಂದುಳಿದಿದ್ದ ಎನ್ನುವುದನ್ನು ಬಿಟ್ಟರೇ ಬುದ್ದಿವಂತ ಪ್ರಜೆ. ಅವನು ಬೆಳೆದು ಬಂದ ವಾತವಾರಣವೋ ಏನೋ ಅವನು ನಮಗೆ ಹೊಂದಿಕೊಳ್ಳುವುದರಲ್ಲಿ ಸಮಯ ತೆಗೆದುಕೊಂಡ.ಜಗ ಕೂಡಿಗೆಯಿಂದ ಬರುತ್ತಿದ್ದ. ವಿನೇಶ್ ಪಕ್ಕಾ ಪಟ್ಟಣದ ಹುಡುಗ, ಅವನು ಟಕ್ ಇನ್ ಮಾಡದೇ ಬಂದ ದಿನವನ್ನೇ ನೋಡಿಲ್ಲ. ರವಿ ಕೂಡಿಗೆಯಿಂದ ಬರುತ್ತಿದ್ದ ಆ ದಿನಗಳಲ್ಲಿ ಬಹಳ ಒಳ್ಳೆಯ ಮತ್ತು ಬಹಳ ಶಾಂತ ಸ್ವಭಾವದ ಹುಡುಗ, ಅವನು ಪ್ರೇಮ ಪಾಶನದಲ್ಲಿ ಬಿದ್ದು ನಾನು ಸ್ವಲ್ಪ ದಿನ ಅವನ ಜೊತೆ ವ್ಯಾನ್ ಸ್ಟಾಂಡ್ ಸುತ್ತಿದ್ದೇನೆ. ಪ್ರದೀಪ ದೊಡ್ಡ ಕಮ್ಮರಹಳ್ಳಿಯಿಂದ ಬರುತ್ತಿದ್ದ, ನಮ್ಮ ಕ್ಲಾಸಿಗೆ ಹತ್ತನೆಯ ತರಗತಿಯಲ್ಲಿ ಅತಿ ಹೆಚ್ಚು ಮಾರ್ಕ್ಸ್ ತೆಗೆದಿದ್ದ. ದುರಾದೃಷ್ಟವೆಂದರೇ ಅವನು ಎರಡನೇ ವರ್ಷಕ್ಕೆ ಬರಲೇ ಇಲ್ಲ. ವಿಜಿ ಮೊದಲ ದಿನಗಳಲ್ಲಿ ಎರಡನೆಯ ಬೆಂಚಿನಲ್ಲಿ ಕೂರುತ್ತಿದ್ದ, ನಂತರ ಹಿಂದಿನ ಸಾಲಿಗೆ ಬಂದ. ಅವನು ಮೊದಲ ವರ್ಷ ಬೆನಗಾಲ್ ಇಂದ ಬರುತ್ತಿದ್ದ, ನಂತರದ ವರ್ಷ ಅವರ ಚಿಕ್ಕಪ್ಪನ ಮನಯಲ್ಲಿ ಉಳಿದ.ಅಂದಿನ ದಿನದಲ್ಲಿದ್ದ ಒಳ್ಳೆಯತನ ಇನ್ನೂ ಜೀವಂತವಾಗಿದೆ. ಮೂರನೇಯ ಬೆಂಚಿನಲ್ಲಿ ರೊಹಿತ್ ಎಬಿ ವಿಕ್ರಮ್ ಚರಣ್ ಸಂಜಯ್ ಕೂರುತಿದ್ದರು. ನಾಲ್ಕನೇಯ ಬೆಂಚಿನಲ್ಲಿ ಮೋಹನ್ ಮಂದಣ್ಣ, ರೋಹಿತ್ ಎಡಿ ಬಾಲಸುಬ್ರಹ್ಮಣ್ಯ, ಗುರುಪ್ರಸಾದ್, ಶ್ರೀನಿವಾಸ ಕೂರುತಿದ್ದರು. ನಾಲ್ಕನೆಯ ಬೆಂಚಿನಲ್ಲಿ ನಾನು ಶಂಕರ, ಲೋಕೇಶ ಕೂರುತಿದ್ದವು. ಸತೀಶ ಮತ್ತು ಹರ್ಷವರ್ಧನ ಮೊದಲ ಮೂರು ತಿಂಗಳಿದ್ದು ನಂತರ ಡಿಪ್ಲೋಮಾಗೆ ಹೋದರು.ಮಂಜುನಾಥ, ತುಳಸಿ ಸರ್ಕಾರಿ ಕಾಲೇಜಿಗೆ ಹೋದರು. ಅಕ್ಬರ್ ಆಲಿ, ಗುರುಪ್ರಸಾದ್ ಎರಡನೆಯ ವರ್ಷಕ್ಕೆ ಬಿಟ್ಟು ಹೋದರು.

ರೋಹಿತ್ ಎಬಿ ಮೊದಲನೇಯ ವರ್ಷದಲ್ಲಿ ಪ್ರಾಯೋಗಿಕ ಪರಿಕ್ಷೆಯನ್ನು ಬರೆಯಲೇ ಇಲ್ಲ ಆದರೂ ಪಾಸಾಗಿದ್ದ. ಸಂಜಯ ಆ ದಿನಗಳಲ್ಲಿ ಉಪೇಂದ್ರನ ಫ್ಯಾನ್ ಆಗಿದ್ದ. ಅವನ ಡೈಲಾಗ್ ಅನ್ನು ಉರು ಹೊಡೆದು ಹೇಳುತ್ತಿದ್ದ. ಚರಣ ನಮ್ಮ ಇಡೀ ಕಾಲೇಜಿನಲ್ಲಿಯೇ ಅತಿ ಸುಂದರವಾದ ಹುಡುಗ. ಅವನಿಗೂ ಒಂದು ಲವ್ ಇತ್ತು. ಶ್ರೀನಿವಾಸ ನಮ್ಮ ಕ್ಲಾಸಿನಲ್ಲಿದ್ದ ಎಲ್ಲಾ ಹುಡುಗರಿಗಿಂತಲೂ ಅತೀ ಶ್ರ‍ೀಮಂತ ಹುಡುಗ. ಆ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಆರ್ಥಿಕ ಸಮಸ್ಯೆ ಇದ್ದೇ ಇತ್ತು ಎನ್ನುವುದು ನನ್ನ ಅಭಿಪ್ರಾಯ. ಕೆಲವರು ಸ್ವಲ್ಪ ಉತ್ತಮ ಮಟ್ಟದಲ್ಲಿದ್ದಿರಬಹುದು. ನನ್ನ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಗುರು ಬಹಳ ಶ್ರಮಜೀವಿ ಮತ್ತೂ ಬಹಳ ಒಳ್ಳೆಯ ಹುಡುಗ. ಬಾಲ ಸುಬ್ರಹ್ಮಣ್ಯ ಸೋಮವಾರ ಪೇಟೆಯಿಂದ ಬರುತ್ತಿದ್ದ, ಅವನು ಬಹಳ ದೈವ ಭಕ್ತ ಮತ್ತು ಮುಗ್ದಜೀವಿ. ಕ್ಲಾಸಿನ ಒಳ್ಳಕ್ಕೆ ಬರುವ ಮುನ್ನ ಬಾಗಿಲಿಗೆ ಕೈಮುಗಿದು ಬರುತ್ತಿದ್ದ. ಅಕ್ಬರ್ ಆಲಿ ಬಹಳ ಶ್ರಮ ಜೀವಿಯಾಗಿದ್ದ.

ನನ್ನ ಅನಿಸಿಕೆ ಪ್ರಕಾರ ಪಿಯುಸಿಯಲ್ಲಿದ್ದವರು ಯಾರೂ ದಡ್ಡರಲ್ಲ. ಆದರೇ ಕನ್ನಡಭಾರತಿ ಕಾಲೇಜು ಅವರನ್ನು ಬಹಳ ದಡ್ಡರೆನ್ನುವಂತೆ ಮಾಡಿತು. ಸುಲಭದ ವಿಷಯವನ್ನೂ ಕೂಡ ಕಷ್ಟವೆಂದು ಬಿಂಬಿಸಿತು. ಎಲ್ಲರನ್ನೂ ನಾನು ಬಹಳ ಸೂಕ್ಷತೆಯಿಂದ ಗಮನಿಸಿದ್ದೇನೆ, ಎಲ್ಲರ ಜೊತೆಯಲ್ಲಿಯೂ ವೈಯಕ್ತಿಕವಾಗಿ ಸಾಕಷ್ಟೂ ಸಮಯ ಕಳೆದಿದ್ದೇನೆ. ಎಲ್ಲರಲ್ಲಿಯೂ ಏನಾದರೊಂದು ಸಾಧಿಸಬೇಕೆಂಬ ಹಂಬಲವಿತ್ತು, ಕಲಿಯಬೇಕೆಂಬ ಹಸಿವಿತ್ತು. ನಾನು ಬಹಳ ಸತ್ಯ ಹೇಳುತ್ತೇನೆ, ನನ್ನನ್ನು ಬಿಟ್ಟರೇ ನಮ್ಮ ತರಗತಿಯಲ್ಲಿ ನಾನು ತಿಳಿದಂತೆ ಎಲ್ಲರೂ ವಿದ್ಯಭ್ಯಾಸದ ವಿಷಯದಲ್ಲಿ ಬಹಳ ಗಂಬೀರವಾಗಿದ್ದರು. ನನಗೇಕೋ ಗೊತ್ತಿಲ್ಲ ಆ ದಿನಗಳಲ್ಲಿ ವಿದ್ಯೆಯ ಬಗ್ಗೆ ತೀವ್ರ ಅಸಡ್ಡೆ ಮೂಡಿತ್ತು. ನನ್ನನ್ನು ಬಿಟ್ಟರೇ ಎಬಿ ರೋಹಿತನಿಗೂ ಆಸಕ್ತಿ ಕಡಿಮೆ ಇದ್ದಂತೆ ಕಾಣುತ್ತದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಶಂಕರ ಪಡುತಿದ್ದ ಕಷ್ಟವನ್ನು ನೆನೆಪುಮಾಡಿಕೊಂಡರೆ ಅವನ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ನಾನು ಬಹಳಷ್ಟೂ ಬಾರಿ ಕುಳಿತು ಯೋಚಿಸಿದ್ದೇನೆ.ಪಿಯುಸಿಯಲ್ಲಿರುವ ವಿಷಯಗಳನ್ನು ಸುಮ್ಮನೇ ಓದಿದ್ದೇನೆ, ಅದೆಲ್ಲವೂ ಇಂದು ಬಹಳ ಸುಲಭದ ವಿಷಯಗಳು ಎನಿಸುತ್ತವೆ, ನಾನು ಮತ್ತು ನನ್ನ ಎಂಎಸ್ಸಿ ಸ್ನೇಹಿತ ನವೀನನ ಜೊತೆ ಚರ್ಚಿಸುತ್ತಿದ್ದೆ, ವಿಜ್ನಾನವನ್ನು ಸುಲಭದಲ್ಲಿ ಅರ್ಥೈಸುವುದು ಹೇಗೆ ಎಂದು? ನಾನು ಅವನು ಸೇರಿ ಕೆಲವು ದಿನಗಳು ಪ್ರೇರಣಾ ಸಂಸ್ಥೆಯವರು ಬಡ ಮಕ್ಕಳಿಗೆ ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ಪ್ರಯತ್ನಿಸಿದೆವು, ವಿದ್ಯಾರ್ಥಿಗಳು ನಿಜಕ್ಕೂ ಬಹಳ ಸಂತೋಷಪಟ್ಟರು.

ಆದರೇ, ನಮಗೆ ಪಾಠ ಮಾಡುತ್ತಿದ್ದವರಲ್ಲಿ ಸ್ವಲ್ಪ ಸಮಸ್ಯೆ ಇತ್ತು ಅದರ ವಿಷಯವನ್ನು ಮತ್ತೊಮ್ಮೆ ಹೇಳುತ್ತೇನೆ. ಈ ಬರವಣಿಗೆ ನನ್ನ ಸ್ನೇಹಿತರ ಬಗ್ಗೆ ಬರೆಯುವುದಕ್ಕೆಂದು ಪ್ರಾರಂಬಿಸಿದ್ದೇನೆ, ಅದರಂತೆಯೇ ಮುಂದುವರೆಯುವುದು ಉತ್ತಮ. ಇದಿಷ್ಟೂ ಹುಡುಗರ ವಿಷಯವಾದರೇ, ಇನ್ನೂ ಹುಡುಗಿಯರ ಬಗ್ಗೆ ಬರೆಯುವುದಕ್ಕೆ ನಾನು ಹುಡುಗಿಯರ ಜೊತೆಗೆ ಹೆಚ್ಚೇನೂ ಮಾತನಾಡಿಲ್ಲ. ಮಾತನಾಡಿಲ್ಲ ಎನ್ನುವುದಕ್ಕಿಂತ ಅವರೇ ಮಾತನಾಡಿಸಿಲ್ಲವೆಂದರೂ ತಪ್ಪಿಲ್ಲ. ಲಿನ್ಸಿ ಜಾರ್ಜ್ ಎಂಬ ಹುಡುಗಿ ಅದೆಷ್ಟು ಶಿಸ್ತಿನ ಹುಡುಗಿಯೆಂದರೇ ಅವಳು ಬರುವುದು ಹೋಗುವುದು ಗೊತ್ತಾಗುತ್ತಲೇ ಇರಲಿಲ್ಲ. ಅವಳ ಬರವಣಿಗೆಯಂತು ಪುಸ್ತಕದಲ್ಲಿ ಅಚ್ಚು ಇಳಿಸಿದಂತೆ ಇರುತಿತ್ತು. ಅವಳ ಜೊತೆಗೆ ಗೀತಾ ಪೂವಮ್ಮ ಕೊಪ್ಪದಿಂದ ಬರುತ್ತಿದ್ದರು, ಅವರ ಜೊತೆಯಲ್ಲಿಯೇ ಅಶ್ವಿನಿ ಕೂರುತ್ತಿದ್ದಳು. ಅಶ್ವಿನಿ ಹೆಚ್ಚು ಅಂಕಗಳನ್ನು ತೆಗೆದಿದ್ದವರಲ್ಲಿ ಒಬ್ಬಳಾಗಿದ್ದಳು. ಮೊದಲನೆಯ ಬೆಂಚಿನಲ್ಲಿ ಕುಳಿತಿದ್ದ ಹುಡುಗಿಯರ ಧ್ವನಿ ಕೇಳಿದ ನೆನಪಿಲ್ಲ. ಒಂದು ದಿನ ಕನ್ನಡ ಮಾಸ್ಟರು ಪಾಠ ಮಾಡುತ್ತಾ, ಇವತ್ತೇನೂ ಪೂವಮ್ಮ ಅವರ ಮುಖ ಊದಿದೆ? ಏನು ವಿಷಯವೆಂದರು. ನಾನು ಸುಮ್ಮನೆ ಕೂರುವುದಕ್ಕೆ ಆಗದೇ, ಮುಖ ಊದುವುದಕ್ಕೇ ಅವಳ ಮುಖ ಏನು ಪಿಲ್ಸ್ ಬರಿ ಗೋಧಿ ಹಿಟ್ಟೇ? ಎಂದೆ. ಆ ಹುಡುಗಿ ಗೋಳೋ ಎಂದು ಅಳುವುದಕ್ಕೆ ಶುರು ಮಾಡಿದಳು. ನಾನು ಅಂದೇ ಕೊನೆ, ಹುಡುಗಿಯರ ಬಗ್ಗೆ ಕಾಮೆಂಟ್ ಮಾಡುವುದನ್ನು ಬಿಟ್ಟೆ.

ಎರಡನೆಯ ಬೆಂಚಿನಲ್ಲಿ, ಸ್ಮಿತಾ ಮತ್ತು ಸೋನಿ ಅಕ್ಕ ತಂಗಿಯರಂತೆ ಬರುತ್ತಿದ್ದರು ಒಳ್ಳೆಯ ಸ್ನೇಹಿತರೂ ಎನಿಸುತ್ತದೆ. ನನಗೆ ನೆನಪು ಇರುವ ಪ್ರಕಾರ ಸ್ಮಿತಾಳ ಜುಟ್ಟನ್ನು ನಮ್ಮ ಲೋಕಿ ಆಗ್ಗಾಗೆ ನೋಡಿ ರೇಗಿಸುತ್ತಿದ್ದ. ಸೋನಿ ನಾನು ಕಂಡ ಆ ದಿನಗಳ ಅದ್ಬುತಾ ಚೆಲುವಾದ ಹುಡುಗಿ, ಅವಳ ಮುಖದಲ್ಲಿ ಒಂದು ದಿವ್ಯ ಭಾವವಿರುತಿತ್ತು, ಕಣ್ಣುಗಳಲ್ಲಿ ಒಳ್ಳೆಯ ತೆಜಸ್ಸು ಇತ್ತು. ಅವರ ಜೊತೆಯಲ್ಲಿದ್ದವಳು ಚೊಂದಮ್ಮ, ಚೊಂದಮ್ಮ ಬಾಯ್ ಕಟ್ ಮಾಡಿಸಿಕೊಂಡು ಬರುತ್ತಿದ್ದರಿಂದ ಅವಳ ಮುಖದ ಸೌಂದರ್ಯ ನಮಗೆ ತಿಳಿದಿರಲಿಲ್ಲ, ಅದೇ ಚೋಂದಮ್ಮ ಯುವರಾಜ ಕಾಲೇಜಿನ ಕನಸಿನ ರಾಣಿಯಾಗಿದ್ದಳು ಎಂಬುದು ನಿಜಕ್ಕೂ ಹೆಮ್ಮೆಯ ವಿಷಯ. ರಾಘವಿ ಮತ್ತು ಸೀಮಾ ಅಖ್ತರ್ ಅಕ್ಕ ತಂಗಿಯರಂತೆ ಇರುತ್ತಿದ್ದರು. ನಾನು ನನ್ನ ಎರಡೂ ವರ್ಷದಲ್ಲಿ ಇವರಿಬ್ಬರನ್ನು ಮಾತನಾಡಿಸಿದ ನೆನಪಿಲ್ಲ. ನಂತರದ್ದು ಬಿಂಧ್ಯಾ ಮತ್ತು ಸೌಮ್ಯ ಇವರಿಬ್ಬರದ್ದು ಅದ್ಬುತಾ ಸ್ನೇಹ ಇಂದಿಗೂ ಹಾಗೇಯೇ ಇದ್ದಾರೆ. ನನಗೆ ನಗು ಬರುವ ಒಂದು ವಿಷಯವನ್ನು ಇಲ್ಲಿ ಹೇಳಬೇಕು, ನಾವು ಕೊನೆಯ ಬೆಂಚಿನವರು ಇವರಿಬ್ಬರನ್ನು ಸಾಕಷ್ಟು ರೇಗಿಸುತ್ತಿದ್ದೆವು, ಅವರು ಏನು ಹೇಳಿದರೂ ಅದಕ್ಕೊಂದು ಕೊಂಕು ಹೇಳುತ್ತಿದ್ದೆವು. ಪಾಪ ಅವರಿಗೆ ಆ ಮಟ್ಟಕ್ಕೆ ನೋವಾಗಿದೆ ಎಂಬುದು ನನಗೆ ತಿಳಿದಿರಲಿಲ್ಲ. ಅವರು, ಅವರ ಸ್ನೇಹಿತನಾದ ಸಮಿಉಲ್ಲಾ ಎಂಬುವನಿಗೆ ಹೇಳಿದ್ದಾರೆ, ಹರೀಶ್ ಎನ್ನುವ ವ್ಯಕ್ತಿ ಬಹಳ ರೇಗಿಸುತ್ತಾನೆ ಸ್ವಲ್ಪ ವಿಚಾರಿಸು ಎಂದು. ಸತ್ಯ ಹೇಳಬೇಕೆಂದರೇ ಆ ದಿನಗಳಲ್ಲಿ, ಮುಸ್ಲಿಂ ರನ್ನು ಕಂಡರೇ ಬಹಳ ಕೋಪವಿತ್ತು. ನಾನು ಶಂಕರ, ಲೋಕೇಶ ಶಂಕರನ ಅಡ್ಡವಾಗಿದ್ದ ಶೆಟ್ಟಿ ಅಂಗಡಿಯ ಬಳಿಯಲ್ಲಿ ಸಿಗರೇಟು ಸೇದುತ್ತಾ ನಿಂತಿದ್ದೆವು. ಅವನು ಶಂಕರನ್ನು ಕೇಳಿದ, ಹರೀಶ ಅಂತಾ ಬರುತ್ತಾನಂತೆ ಯಾರು ಏನು ಎಂದು. ಅಷ್ಟೊತ್ತಿಗೆ ನನ್ನ ವಿಷಯ ಸಮಿಉಲ್ಲಾಗೆ ತಿಳಿದಿತ್ತು, ಆದರೇ ನನ್ನ ಹೆಸರು ತಿಳಿದಿರಲಿಲ್ಲ. ಶಂಕರ ನನ್ನನ್ನು ತೋರಿಸಿ ಹೇಳಿದ ನೋಡು ಅವನೇ ಹರೀಶ, ಗುಮ್ಮನಕೊಲ್ಲಿಯಿಂದ ಬರುವವನು. ಅದೇನು ಮಾಡುತ್ತೀಯೋ ಮಾಡು ಎಂದು. ನನಗಂತೂ ನಗು ಬಂತು. ನಾನು ಸಮಿ ಉಲ್ಲಾನನ್ನು ಕೇಳಿದೆ ಏನು ವಿಷಯವೆಂದು ಅವನು ಎಲ್ಲವನ್ನು ಹೇಳಿದ.

ಚೈತ್ರ ಎನ್ನುವ ಹುಡುಗಿಯೊಬ್ಬಳು ಬರುತ್ತಿದ್ದಳು, ಅವಳು ನನಗೆ ತಿಳಿದಿರುವ ಪ್ರಕಾರ ಬಹಳ ಒಳ್ಳೆಯ ಹುಡುಗಿ, ಆದರೇ ನಮ ಮಟ್ಟಗಿನ ಕನ್ನಡ ಮಾಸ್ಟರು ಪಾಠ ಅವಳಿಗೆ ಬೇಸರವಾಗಿತ್ತು. ಅವಳು ಅವರ ಅಮ್ಮನಿಗೆ ದೂರು ಹೇಳಿದ್ದಳು, ಕನ್ನಡ ಮಾಸ್ಟರು ಡಬ್ಬಲ್ ಮೀನಿಂಗ್ ನಲ್ಲಿ ಹೇಳುತ್ತಾರೆಂದು. ನಂತರ ಇದ್ದ ಮೂರ‍್ನಾಲ್ಕು ಜನ ನನ್ನ ಪ್ರಕಾರ ಬಹಳ ಶ್ರಮ ಜೀವಿಗಳು, ಒಂದೇ ಒಂದು ಮಾತನ್ನು ಆಡುತ್ತಿರಲಿಲ್ಲ. ತೆಜಸ್ವಿನಿ, ರಶ್ಮಿ ಮತ್ತು ನಸೀಮಾ ಬಹಳ ಒಳ್ಳೆಯ ಹುಡುಗಿಯರು. ಜಬೀನಾಳಿಗೆ ಓದುವ ಆಸಕ್ತಿ ಇದ್ದಂತೆ ಕಾಣುತ್ತಿರಲಿಲ್ಲ. ರೇಖಾ ಮತ್ತು ವಿನುತಾ ಚೆನ್ನಾಗಿ ಓದುತ್ತಿದ್ದರು ನನ್ನ ತಿಳುವಳಿಕೆ ಪ್ರಕಾರ ಸ್ವಲ್ಪವೂ ಅಹಂಕಾರವಿಲ್ಲದವರೆನ್ನಬಹುದು. ಮಮತಾ ಎಂಕೆಯನ್ನು ನಾನು ಎಂದಿಗೂ ಮಾತನಾಡಿಸಿಲ್ಲ, ಅವಳು ಚೆನ್ನಾಗಿ ಓದುತ್ತಾಳೆಂದು ಕೇಳಿದ್ದೆ. ಇನ್ನೂ ಕೊನೆಯ ಸಾಲಿನವರು ಹೆಚ್ಚು ಕಡಿಮೆ ನಮ್ಮ ರಕ್ತದವರೇ ಎನ್ನಬಹುದು, ಮಮತಾ ಟಿಎನ್ ಮತ್ತು ಪಂಕಜ ಒಂದು ಗುಂಪಾದರೇ, ಸಜನಿ ಮತ್ತು ಕಾವ್ಯ ಮತ್ತೊಂದು ಗುಂಪು. ರಂಜನಾ ಎಂಬ ಹುಡುಗಿ ಯಾವುದಕ್ಕೂ ಸೇರದೇ ತನ್ನದೇ ಪ್ರಪಂಚದಲ್ಲಿರುತ್ತಿದ್ದಳು. ಅಲ್ಲಿ ಇಲ್ಲಿ ಒಬ್ಬ ಇಬ್ಬರ ಹೆಸರು ತಪ್ಪಿರಬಹುದು. ಇಲ್ಲಿ ಬರೆದಿರುವುದ್ದೆಲ್ಲವೂ ನನ್ನ ವೈಯಕ್ತಿಕ ಅಭಿಪ್ರಾಯ ಯಾರ ಮೇಲಿನ ದ್ವೇಷವೂ ಇಲ್ಲ ಯಾರ ಮೇಲೂ ಅತಿಯಾದ ಪ್ರೀತಿಯಿಲ್ಲ.

21 ಮೇ 2012

ಹನ್ನೆರಡು ವರುಷಗಳ ನಂತರ ಜೊತೆಯಲ್ಲಿ ಕೂರುವಾಸೆ!!!




ಪ್ರಿಯ ಗೆಳೆಯರೇ/ಗೆಳತಿಯರೇ,


ರಾಕೇಟ್ ಸ್ಪೀಡಿನಲ್ಲಿ ಓಡುತ್ತಿರುವ ನಮ್ಮೆಲ್ಲರ ಜೀವನವನ್ನು ಒಂದೆರಡು ಕ್ಷಣಕ್ಕೆ ನಿಲ್ಲಿಸಿ, ಹನ್ನೆರಡು ವರುಷಗಳ ಹಿಂದಿನ ಎರಡು ವರ್ಷದ ಇಪ್ಪತ್ತು ತಿಂಗಳ ಪುಟವನ್ನು ಬಲವಂತವಾಗಿ ತಿರುಗಿಸಿ ನೋಡೋಣ. 1998 ರ ಜೂನ್ ತಿಂಗಳಿನ ಎರಡನೇ ವಾರದಲ್ಲಿ ಹತ್ತನೇಯ ತರಗತಿ ಪಾಸಾದ ಖುಷಿ ಒಂದುಕಡೆಯಿದ್ದರೇ, ಮತ್ತೆ ಪಿಯುಸಿ ಓದುವುದು ಮತ್ತೆ ಪರೀಕ್ಷೇ ಅಯ್ಯೋ ದೇವರೇ ಎಂಬ ಬೇಸರವೂ ಇತ್ತು. ಆದರೂ, ಶಾಲಾ ಯೂನಿಫಾರಂ ಇರುವುದಿಲ್ಲ, ನಿಗದಿತ ಹೋಂ ವರ್ಕ್ ಇರುವುದಿಲ್ಲ, ಸ್ವಲ್ಪ ಸ್ವಾತಂತ್ರ್ಯ ಸಿಗುತ್ತದೆಂಬು ಆಶಾಕುದುರೆಯು ನಮ್ಮ ಮುಂದೆ ಓಡುತ್ತಿತ್ತು. ಇಂಥಹ ಸಂಧರ್ಭದಲ್ಲಿ ಬಯಸಿ ಬಯಸಿ ಹಳ್ಳಕ್ಕೆ ಬಿದ್ದದ್ದು ಕನ್ನಡ ಭಾರತಿ ಎಂಬ ಕಾಲೇಜಿಗೆ. 1998 ರಿಂದ 2000 ಜೂನ್ 5 ರ ತನಕ ನಡೆದ ಹಲವಾರು ಘಟನಾವಳಿಗಳು ಕೆಲವರಿಗೆ ಖುಷಿ ತಂದಿರಬಹುದು, ಕೆಲವರಿಗೆ ದುಃಖ ಮತ್ತು ಹಲವರಿಗೆ ಅದೊಂದು ಸರ್ವೇ ಸಾಮಾನ್ಯವಾದ ಸಂಗತಿ ಮತ್ತು ಹಲವರಿಗೆ ಅದೇನೂ ಅಂಥಹ ಮಹತ್ತರ ವಿಷಯವಲ್ಲದಿರಬಹುದು. ಕೆಲವರಿಗೆ ಪಿಯುಸಿಯಲ್ಲಿ ಓದಿದವರು ಆತ್ಮೀಯ ಗೆಳೆಯರೆನಿಸಿರಬಹುದು, ಕೆಲವರಿಗೆ ಸ್ನೇಹಿತರೆಂಬವರೇ ಇಲ್ಲದಿದ್ದಿರಬಹುದು, ಕೆಲವರಿಗೆ ಎಲ್ಲರೂ ಶತ್ರುಗಳಂತೆ ಎನಿಸಿರಬಹುದು, ಮತ್ತೂ ಕೆಲವರಿಗೆ ಅಂದಿದ್ದ ಎಲ್ಲರೂ ಮೂರ್ಖರೆನಿಸಿರಬಹುದು. ಕೆಲವರು ಜೀವನದ ಹೋರಾಟದಲ್ಲಿ ಒದ್ದಾಡಿ ಅಂದಿದ್ದ ಕೀಳರಿಮೆಯಿಂದ ಉನ್ನತ ಮಟ್ಟಕ್ಕೆ ಬೆಳೆದಿರಬಹುದು, ಕೆಲವರ ಜೀವನ ದುಸ್ತರವೆನಿಸುವ ಮಟ್ಟಕ್ಕೆ ಹೋಗಿರಲೂಬಹುದು. ಆದರೇ, ಯಾರ ವೈಯಕ್ತಿಕ ಜೀವನದ ಬಗ್ಗೆ ನಾವು ಮಾತನಾಡಬಯಸುವುದಿಲ್ಲ. ಆನೆಯ ತೂಕ ಆನೆಗೆ ಇರುವೆಯ ತೂಕ ಇರುವೆಗೆ. ನಾವಿಲ್ಲಿ ಮಾತನಾಡುವುದು ಕೇವಲ ಸ್ನೇಹಿತರಾಗಿ!!! ಇಲ್ಲಿ ಮೇಳರಿಮೆ ಕೀಳರಿಮೆಗೆ ಜಾಗವಿಲ್ಲ. ಎಲ್ಲರೂ ಸಮಾನ ಮನಸ್ಕರು ಮತ್ತು ಸಹೃದಯರೆಂಬುದು ನಮ್ಮ ನಂಬಿಕೆ.

ಎರಡು ವರ್ಷಗಳು ನನ್ನ ಬದುಕಿನಲ್ಲಿ ಏನೇನೂ ಅಲ್ಲಾ, ಎಂಬುವರ ಜೊತೆಗೆ ನಾನು ಚರ್ಚೆ ಮಾಡಲು ಬಯಸುವುದಿಲ್ಲ. ಎರಡು ವರ್ಷಗಳನ್ನು ತಮ್ಮ ತಮ್ಮ ರೀತಿಯಲ್ಲಿ ಆನಂದಿಸಿದ, ನೆನಪುಗಳು ಕಾಡುತ್ತಿರುವ ನನ್ನಂಥಹ ಹಲವಾರು ಸ್ನೇಹಿತರ ಪರವಾಗಿ ವಾದಿಸುತ್ತೇನೆ. ಆ ಎರಡು ವರ್ಷಗಳನ್ನೊಮ್ಮೆ ಮೆಲುಕು ಹಾಕಿ ನೋಡಿ, ಅದೆಂಥಹ ದಿನಗಳವು, ಇಂದು ನೆನಪಿಸಿಕೊಂಡರೇ, ನಗು ಬರುತ್ತದೆ, ಅಳು ಬರುತ್ತದೆ, ಹೆಮ್ಮೆ ಎನಿಸುತ್ತದೆ, ಥೂ ಅಸಹ್ಯವೆನಿಸುತ್ತದೆ. ನಾವಾರು ಕೆಟ್ಟವರಲ್ಲ ಆ ದಿನಗಳಲ್ಲಿ, ನಾವಾರು ಸಭ್ಯರೂ ಅಲ್ಲಾ! ಅಂದರೇ ನಾವು ಏನಾಗಿದ್ದೇವು? ಇಂಥಹ ಪ್ರಶ್ನೆಗಳು ಹಲವಾರು ಬಾರಿ ಬಂದು ಹೋಗುತ್ತವೆ. ಆ ದಿನಗಳಲ್ಲಿ ಎಲ್ಲರನ್ನೂ ರೇಗಿಸಿದ್ದೇವೆ, ಚುಡಾಯಿಸಿದ್ದೇವೆ, ಅಳಿಸಿದ್ದೇವೆ, ಗೋಳಾಡಿಸಿದ್ದೇವೆ, ಎಲ್ಲಿಯೂ ದ್ವೇಷ ಸಾಧಿಸಿಲ್ಲ, ಎಲ್ಲಿಯೂ ಕೈ ಕೈ ಮಿಲಾಯಿಸಿ ಜಗಳವಾಡಿಲ್ಲ. ನಮ್ಮೆಲ್ಲರ ಜಗಳ ಲ್ಯಾಬ್ ಮುಗಿಯುವ ತನಕ, ಮುಗಿದ ನಂತರ ಎಲ್ಲರೂ ಒಂದೇ!!!!

ಹನ್ನೆರಡು ವರ್ಷಗಳ ಬಳಿಕ ನಾವೆಲ್ಲರೂ ಯಾಕೆ ಒಂದೆಡೆ ಸೇರಿ ನಾಲ್ಕು ಗಂಟೆಗಳ ಕಾಲ ಸ್ವಲ್ಪ ಹರಟಬಾರದೆಂಬುದು ನನ್ನ ಬಯಕೆ. ಆದ್ದರಿಂದ ಜೂನ್ ಒಂದು 2012 ರಂದು ಕೊಣನೂರಿನ ಬಳಿಯಿರುವ ಬಾನುಗೊಂದಿಯೆಂಬ ಒಂದು ಸುಂದರ ಹಳ್ಳಿಯ, ಕಾವೇರಿ ನದಿ ದಂಡೆಯಲ್ಲಿ, ತಂಪಗಿನ ವಾತಾವರಣದಲ್ಲಿ, ಬೆಚ್ಚನೆಯ ಬೆಂಕಿ ಉರಿಸುತ್ತಾ, ಒಬ್ಬರಿಗೊಬ್ಬರು ಉರಿಸಿದ ಆ ದಿನಗಳ ಮೆಲಕು ಹಾಕೋಣ ಬನ್ನಿ.

ತಮ್ಮ ಸಮಯ ಅಮೂಲ್ಯವೆಂಬುದು ನಮ್ಮೆಲ್ಲರಿಗೂ ತಿಳಿದಿದೆ, ಪಿಯುಸಿಯೆಂಬ ಎರಡು ವರ್ಷ ನಿಮ್ಮ ಜೀವನದಲ್ಲಿ ಅತ್ಯಮೂಲ್ಯವಲ್ಲದಿದ್ದರೂ ಇರಬಹುದು, ಆದರೇ ಆ ಎರಡು ವರುಷಗಳು ಅಮೂಲ್ಯವೆಂದು ತೀರ್ಮಾನಿಸಿರುವ ನಮ್ಮೆಲ್ಲರಿಗೂ, ನಮ್ಮೆಲ್ಲಾ ಸ್ನೇಹಿತರನ್ನು ನೋಡುವುದು, ಮಾತನಾಡಿಸುವುದು ಬಹಳ ಸಂತಸದ ವಿಷಯ.

ಆದ್ದರಿಂದ 2012ರ ಜೂನ್ ತಿಂಗಳ 1, 2 ಅಥವಾ 3 ರಂದು ನಮ್ಮ ಜೊತೆ ಸೇರಿ ನಮ್ಮ ಎರಡು ಕ್ಷಣದ ನಗುವಿಗೆ ಪಾತ್ರರಾಗಿ.


ನಿಮ್ಮವರು,

07 ಮಾರ್ಚ್ 2012

ನಾನು ಬರವಣಿಗೆಯನ್ನು ಹವ್ಯಾಸಕ್ಕಾಗಲೀ ಮನರಂಜನೆಗಾಗಲೀ ಶುರು ಮಾಡಲಿಲ್ಲ. ಬರವಣಿಗೆಯಿಂದ ಅನ್ನ ಸಂಪಾದನೆಯ ಕನಸನ್ನೂ ಕಂಡಿಲ್ಲ. ಬರೆಯಲು ಶುರು ಮಾಡಿದ್ದು, ಸುಮ್ಮನೆ ಬರೆಯುವುದೇ ಒಂದು ಬಗೆಯ ಕಲೆಯಾಯಿತು. ಮನಕ್ಕೊಪ್ಪುವ ಬರವಣಿಗೆಯಾಯಿತು. ಅದೆಷ್ಟರ ಮಟ್ಟಿಗೆ ನಾನು ಅದಕ್ಕೆ ದಾಸನಾದನೆಂದರೇ ರಾತ್ರೋ ರಾತ್ರಿ ಎದ್ದು ಬರೆಯತೊಡಗಿದೆ, ನಾನು ಬರೆದಿದ್ದನ್ನು ಮತ್ತೊಮ್ಮೆ ನಾನೇ ಓದಲು ಆಗುವುದಿಲ್ಲ, ಅಷ್ಟೂ ಕೆಟ್ಟದ್ದಾಗಿರುತ್ತದೆ ನನ್ನ ಬರವಣಿಗೆಗಳು, ನಾನು ಸದಾ ಹೇಳುವಂತೆ ನನ್ನ ಮನಸ್ಸಿನೊಳಗಿರುವುದನ್ನು ನಿಮ್ಮ ಮುಂದಿಡುತ್ತೇನೆ, ಮುಚ್ಚು ಮರೆಯಿಲ್ಲದೇ. ನನ್ನ ಮನಸ್ಸು ಅಷ್ಟೇ ವಿಕಾರವಾಗಿರಬಹುದೇ? ನೀವೇ ಹೇಳುವಂತೆ ನಾನು ಹೇಳಿದ್ದನ್ನು ಮಾಡುವುದೇ ಇಲ್ಲಾ, ನಾನೊಬ್ಬ ಸುಳ್ಳನಾ ಎಂದರೇ ನಾನು ನಿರುತ್ತರ. ಮೋಸಗಾರನಾ? ಮಾತಿಗೆ ತಪ್ಪುವವನಾ? ಎಲ್ಲದ್ದಕ್ಕೂ ನಿರುತ್ತರ. ಮತ್ತೇ ದೇಶದ ಅಂಕು ಡೊಂಕುಗಳನ್ನು ತಿದ್ದಲೂ ಹೋಗುವ ನೀನು ನಿಮ್ಮ ಮನೆಯ ಅಡುಗೆಮನೆಯಲ್ಲಿನ ಹುಳುಕನ್ನು ಮುಚ್ಚಬೇಕೆನಿಸುವುದಿಲ್ಲವೇ? ನಿನ್ನ ತೆವಳಿಗೆ ದೇಶದವರನ್ನೆಲ್ಲಾ ಬೈಯ್ಯುತ್ತೀಯಲ್ಲ, ನೀನು ಕಡೆದು ಹಾಕಿರುವುದಾದರೂ ಏನು? ಒಂದು ಚಿಲ್ಲರೆ ಡಿಗ್ರೀ ಅನ್ನೋದನ್ನ ಬಿಟ್ಟರೇ ಬೇರೇನೂ ಇಲ್ಲ. ನಿನ್ನ ಥೀಸಿಸಿ ನೀನೆ ಬರೆದೆಯೋ ಅಥವಾ ಮತ್ತಾರ ಕೈಯಿಂದ ಬರೆಸಿದ್ದಿಯೋ ಯಾವನಿಗೆ ಗೊತ್ತು? ಕಾಸು ಕೊಟ್ಟರೇ ಬಕೇಟ್ ಹಿಡಿದರೇ ಏನು ಸಿಗುವುದಿಲ್ಲ ಈ ಲೋಕದಲ್ಲಿ? ನಿನ್ನದೇನು ಹೊರತಲ್ಲ ಬಿಡು.
ಎದೆ ಮುಟ್ಟಿಕೊಂಡು ಹೇಳು ನಿನ್ನದು ಒಂದು ಸಾರ್ಥಕತೆಯ ಬದುಕೆಂದು? ಇಂಥಹ ಪ್ರಶ್ನೆ ದಿಡೀರನೇ ಕನಸಿನಲ್ಲಿ ಕಾಡಿದರೇ ಏನಾಗಬೇಕು? ಕನಸಿನಲ್ಲಿ ಬಂದದ್ದು ನಾಳೆ ನೇರವಾಗಿ ಬಂದರೇ? ಉತ್ತರಿಸುವ ಧೈರ್ಯ ನನಗಿಲ್ಲ. ಉತ್ತರವಿದ್ದರೇ ತಾನೇ ಧೈರ್ಯ ಬರುವುದು? ತಾನು ಬದುಕಬೇಕು, ತಾನು ತನ್ನ ನೆಚ್ಚಿನ ಜೀವನವನ್ನು ಕಟ್ಟಿಕೊಳ್ಳಬೇಕು, ಬರೀ ಬೊಬ್ಬೆ ಇಕ್ಕಿದರೇ ಏನೂ ಸಿಗುವುದಿಲ್ಲ. ನಾನು ಇದುವರೆಗೂ ಮಾಡಿರುವುದು ಅದನ್ನೇ ನನ್ನ ಕೈಯ್ಯಾರೆ ನಾನು ಕಿಸಿದಿರುವುದು ಏನೇನೂ ಇಲ್ಲ. ದಂಡ ಪಿಂಡದ ಹಾಗೆ ಕುಳಿತು ಅನ್ನ ತಿಂದಿರುವುದನ್ನು ಬಿಟ್ಟರೇ ಹೇಳಿಕೊಳ್ಳುವ ಒಂದೇ ಒಂದು ಸಾಲು ಉಪಯುಕ್ತ ಜೀವನವಿಲ್ಲ. ಇಲ್ಲಿ ಸುಮ್ಮ ಸುಮ್ಮನೆ ಗೀಚುವುದು, ಅವರಿವರನ್ನು ಹಂಗಿಸುವುದು, ಚೇಡಿಸುವುದು ಇವೆಲ್ಲವೂ ಅರ್ಥಹೀನಾ ಆದ್ದರಿಂದ ನಾನು ನನ್ನ ಬರವಣಿಗೆಯನ್ನು ನಿಲ್ಲಿಸುತ್ತಿದ್ದೇನೆ. ಇಲ್ಲಿಯ ತನಕ ಓದಿ ಸಹಕರಿಸಿದ ನಿಮ್ಮೆಲ್ಲರಿಗೂ ನನ್ನ ನಮನಗಳು. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ.

06 ಮಾರ್ಚ್ 2012

ಇಷ್ಟೊಂದು ಕ್ರೂರವಾಗಿ ಬರೆಯವ ಅವಶ್ಯಕತೆಯಿತ್ತಾ ಎಂಬುದು ಇದನ್ನು ಓದಿದ ಮೇಲೆ ನೀವು ಹೇಳುವ ಅಥವಾ ವ್ಯಕ್ತಪಡಿಸುವ ಪ್ರತಿಕ್ರಿಯೆ. ಆದರೇ ನನಗೆ ಬೇರೆ ಮಾರ್ಗ ಕಾಣದಿದ್ದರಿಂದ ಅಥವಾ ತೀರಾ ಬೇಸತ್ತಿರುವುದರಿಂದ ಈ ಬಗೆಯಾಗಿ ಸ್ಪಂದಿಸಿದ್ದೇನೆ. ಸ್ವಲ್ಪ ಭಾವನಾತ್ಮಕವಾಗಿ ಸ್ಪಂದಿಸಿರುವುದರಿಂದ ಬಹಳ ನಿಷ್ಟೂರವಾಗಿಯೇ ಬರೆಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಗಮನಿಸಿ ನೋಡಿ. ನಮ್ಮ ಸುತ್ತ ಮುತ್ತಲಿರುವ ಜನರನ್ನು, ನಮ್ಮ ಸಹಪಾಠಿಗಳನ್ನೂ, ಸಹದ್ಯೋಗಿಗಳನ್ನು, ಎಲ್ಲರ ಬಾಯಿಯಲ್ಲಿಯೂ ನಮ್ಮ ಸಮಾಜದ ಏಳಿಗೆ, ಸಮಾಜ ಸೇವೆ, ದೇಶೋದ್ದಾರದ ಬಗೆಗೆ ಉದ್ದುದ್ದುದ ಭಾಷಣಗಳು ಬರುತ್ತಿವೆ. ಅದರಲ್ಲಿಯೂ ಸಾರ್ವಜನಿಕ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ಮತ್ತೂ ಬಿಟ್ಟೀ ಬಿ. ಮಕ್ಕಳ ಖಾಸಗಿ ಚಾನೆಲ್ ಗಳು ಹೆಚ್ಚಾದ ಮೇಲೆ ಕೇಳುವಂತಿಲ್ಲ. ಹಲವಾರು ಜನರು ಗಂಡಸರಾಗಿದ್ದು/ಆಗಿರುವುದು ಕೇವಲ ಫೇಸ್ ಬುಕ್ಕಿನಲ್ಲಿ ಮಾತ್ರವೆನಿಸಿದೆ. ಪೇಸ್ ಬುಕ್ಕಿನಲ್ಲಿ ತೋರಿಸುವ ದರ್ಪ, ಪೌರುಷ, ಗಂಡಸುತನ ಅದರಿಂದ ಹೊರಕ್ಕೆ ತೋರಿಸುವುದಿಲ್ಲ. ಸಮಾಜದ ಏಳಿಗೆಯ ಬಗ್ಗೆ ಉದ್ದುದ್ದ ಬರೆಯುವ ಇವರು ನಿಜ ಜೀವನದಲ್ಲಿ ನನ್ನಾನೆ ಹೇಳಬೇಕೆಂದರೇ ಕಿತ್ತಾಕಿರುವುದು ಅಷ್ಟಕ್ಕಷ್ಟೆ. ಕೆಲವು ಅಯೋಗ್ಯ ಅಧಿಕಾರಿಗಳು ಈ ರೀತಿಯಾಗಿ ಮಾಡುತ್ತಾರೆ, ಅವರ ಇಡೀ ಜೀವನದಲ್ಲಿ ಕೆಲಸ ಮಾಡಿರುವುದಿಲ್ಲ. ಅವರು ನಿವೃತ್ತಿಯಾದ ಬಳಿಕ ಖಾಸಗಿ ಸಂಸ್ಥೆಗಳೊಂದಿಗೆ ಸೇರಿ ದೇಶ ಬದಲಾಯಿಸುವಂತೆ ವರ್ತಿಸುತ್ತಾರೆ ಕೆಲವೊಮ್ಮೆ ನಟಿಸುತ್ತಾರೆ. ಅವರು ಮಾಡಬೇಕಿರುವ ಕೆಲಸಗಳಿಗೆ ಅವರು ಮರ್ಯಾದೆ ಕೊಟ್ಟು ಅವರ ಕರ್ತವ್ಯಗಳನ್ನು ಮಾಡಿದರೇ ಸಾಕಾಗುತ್ತದೆ. ಅದನ್ನು ಅವರೆಂದು ಮಾಡುವ ಪ್ರಯತ್ನದಲ್ಲಿಲ್ಲ.

ಮೊನ್ನೆ ನಡೆದ ವಕೀಲರ ಮತ್ತೂ ಪೋಲಿಸರ ನಡುವಿನ ಗಲಾಟೆಯಲ್ಲಿ ನಮ್ಮ ಸಮಾಜ ಸೇವಕರು, ಅಥವಾ ಸಮಾಜದ ಏಳಿಗೆಗೆ ಸ್ಪಂದಿಸುವ ಮಹಾನ್ ಚೇತನಗಳ ಕಾಮೆಂಟುಗಳನ್ನು ಒಮ್ಮೆ ಓದಿ ಬನ್ನಿ. ಅಬ್ಬಾಬ್ಬಾ ನಮ್ಮ ದೇಶದ ಇತಿಹಾಸವನ್ನೂ ಸ್ವಾತಂತ್ರ್ಯ ಪೂರ್ವದ ಕಥೆಯಲ್ಲಾ ಹರಿದಾಡಿದೆ ಪೇಸ್ ಬುಕ್ಕಿನಲ್ಲಿ. ಘಟನೆ ನಡೆದಿದ್ದು ಹೇಗೆ ಅದರಿಂದ ಯಾರಿಗೆಲ್ಲ ಎಷ್ಟು ನೋವಾಗಿದೆ, ಅನ್ಯಾಯವಾಗಿದೆ ಎಂಬುದರ ಬಗ್ಗೆ ಯಾವೊಬ್ಬ ಮಾಹಾನುಭಾವನೂ ಮಾತನಾಡಿಲ್ಲ. ಯಾರಾದರೂ ಒಬ್ಬ ಫೇಸ್ ಬುಕ್ಕಿನಲ್ಲಿ ಬರೆದರೇ ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲಿನಂತೆ, ಇವರು ಸದಾನಂದ ಗೌಡರನ್ನು ಬಿಡುವುದಿಲ್ಲ್., ಅಶೋಕರನ್ನೂ ಬಿಡುವುದಿಲ್ಲ, ವಕೀಲರನ್ನೂ ಬಿಡುವುದಿಲ್ಲ. ಅಷ್ಟೊಂದು ಆಸಕ್ತಿ ಇದ್ದರೇ ಕಾನೂನಿನ ಪ್ರಕಾರ ಹೊಡೆದಾಡಲಿ. ವಿಷಯ ಬದಲಾಯಿಸುವುದು ಬೇಡ, ಮೊದಲು ವಕೀಲರ ಗಲಾಟೆಯ ಬಗ್ಗೆ ಮಾತನಾಡೋಣ. ಗಲಾಟೆ ಶುರುವಾಗಿದ್ದನ್ನೂ ಹೇಳುತ್ತೇನೆ, ನನ್ನ ಮೂಗಿನ ನೇರದಲ್ಲಿ ಅದಕ್ಕೆ ಪರಿಹಾರವನ್ನು ಹೇಳುತ್ತೇನೆ ಒಪ್ಪುವುದು ಬಿಡುವುದು ನಿಮಗೆ ಬಿಟ್ಟದ್ದು. ಸಮಯ ಹತ್ತೂವರೆ ವೇಳೆಗೆ ವಕೀಲರು ಕೋರ್ಟ್ ಆವರಣಕ್ಕೆ ತೆರಳುವಾಗ ಅವರನ್ನು ಪೋಲಿಸರು ತಡೆದಿದ್ದಾರೆ, ಕಾರಣ ಕೇಳುವಾಗ ಜನಾರ್ದನ ರೆಡ್ಡಿ ಬರುತ್ತಿರುವುದರಿಂದ ಅದನ್ನು ಬ್ರೇಕಿಂಗ್ ನ್ಯೂಸ್ ಮಾಡಲು ಮಾಧ್ಯಮ ಲೋಕವೇ ಅಲ್ಲಿ ತುಂಬಿತ್ತು, ವಕೀಲರ ಗಾಡಿಗಳನ್ನು ನಿಲ್ಲಿಸಲು ಜಾಗವಿಲ್ಲ ಆದ್ದರಿಂದ ನಿಮ್ಮ ಗಾಡಿಗಳನ್ನು ಒಳಕ್ಕೆ ತರುವಂತಿಲ್ಲವೆಂಬುದು ಪೋಲಿಸರ ವಾದ. ಸರ್ವೇ ಸಾಮಾನ್ಯವಾಗಿ ವಕೀಲರು ಅವರ ಹಕ್ಕನ್ನು ಪ್ರತಿಪಾದಿಸಿದ್ದಾರೆ ಮತ್ತೂ ನಾವು ನಿಲ್ಲಿಸುವ ಜಾಗದಲ್ಲಿ ಮಾಧ್ಯಮದವರನ್ನು ಬಿಟ್ಟಿರುವುದು ತಪ್ಪು ಆದ್ದರಿಂದ ಅದನ್ನು ತೆರವು ಮಾಡಿಸಿಕೊಡಿ ಎಂದು ಪೋಲಿಸರನ್ನು ಕೇಳುವಾಗ ಮಾಧ್ಯಮದವರು ನವರಂಧ್ರಗಳು ಭದ್ರಪಡಿಸಿಕೊಂಡು ಇರಬೇಕಾಗಿತ್ತು. ಮಾತಿಗಿಳಿದಿದ್ದಾರೆ, ಮಾಧ್ಯಮದವರೆಂದರೇ ಜನ ಪ್ರತಿನಿಧಿಗಳು ಸಮಾಜವನ್ನು ಕತ್ತಲಿಂದ ಬೆಳಕಿಗೆ ಕರೆದೊಯ್ಯಲು ಬಂದಿರುವ ದೇವಧೂತರೂ ನೋಡಿ.

ಮಾತಿಗೆ ಮಾತು ಬೆಳೆಯುವಾಗ ಕೈ ಕೈ ಮಿಲಾಯಿಸಿದ್ದಾರೆ, ನಾವು ರಸ್ತೆಯಲ್ಲಿ ಹೋಗುವಾಗ ಅಪ್ಪಿ ತಪ್ಪಿ ನಮ್ಮ ಗಾಡಿಗೆ ಗಾಡಿ ಟಚ್ ಆದರೂ, ಆಗುವಂತಿದ್ದರೂ ಪಕ್ಕದವನಿಗೆ ಕೈ ಮಿಲಾಯಿಸುತ್ತೇವೆ, ನಾನು ಗಂಡಸಾಗಿರುವುದರಿಂದ ನನ್ನ ಕೈ ಮೊದಲು ಮಾತನಾಡುತ್ತದೆ. ವಕೀಲರು ಅದನ್ನೇ ಮಾಡಿದ್ದಾರೆ. ಆದರೇ ಆ ಮಟ್ಟಕ್ಕೆ ಇಳಿದಿದ್ದು ತಪ್ಪು ಅದನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಅವರನ್ನು ಪೋಲಿಸರು ತಡೆಯಬಹುದಿತ್ತು. ಸಾಮಾನ್ಯ ಮನುಷ್ಯರಾಗಿ ಹಾದಿಯಲ್ಲಿ ಯಾರಾದರೂ ಅಪರಿಚಿತರು ಜಗಳವಾಡುತ್ತಿದ್ದರೇ ನಾವು ಬಿಡಿಸುವುದಿಲ್ಲವೇ? ಅಂಥಹದರಲ್ಲಿ ಮಾಧ್ಯಮದವರಿಗೆ ಅದು ಕೇವಲ ಒಬ್ಬನಿಗೆ ನಾಲ್ಕಾರು ಜನ ವಕೀಲರು ಹೊಡೆಯುವಾಗ ಮಾಧ್ಯಮದವರು ಸೇರಿ ವಿಡಿಯೋ ಚಿತ್ರಿಕರಣ ಮಾಡುತ್ತಾರೆಂದರೇ ಅವರಿಗೆ ಅವರ ಸಹದ್ಯೋಗಿ ಸತ್ತರೂ ಚಿಂತೆಯಿಲ್ಲ ವಿಷಯ ಬೇಕು, ನ್ಯೂಸ್ ಆಗಬೇಕು. ಮಾಧ್ಯಮದವರೆಂದರೂ ಸುಮಾರು ಇನ್ನೂರು ಮುನ್ನೂರು ಜನರಿರಲೇ ಬೇಕಲ್ಲವೇ ಅವರೆಲ್ಲರೂ ಏಕೆ ಜಗಳ ಬಿಡಿಸಲು ಮುಂದಾಗಲಿಲ್ಲ? ಅವರಿಗೆ ಜಗಳ ಬಿಡಿಸುವುದಕ್ಕಿಂತ ಅದೊಂದು ದೊಡ್ಡ ಸುದ್ದಿ ಮಾಡಬೇಕಿತ್ತು. ಸಮಾಜದಲ್ಲಿ ಸೌಮ್ಯತೆ, ಸಾಮರಸ್ಯ ಕಾಣಬೇಕೆಂಬುದು ನಿಜವಾದ ಉದ್ದೇಶವಾದ್ದಲ್ಲಿ ನಾವೆಲ್ಲರೂ ಜಗಳವನ್ನು ತಡೆಯಲ್ಲು ನೋಡುತ್ತೇವೆ ಹೊರತು ಅದನ್ನು ಚಿತ್ರಿಕರಿಸಲು ಅಲ್ಲವೆಂಬುದು ನನ್ನ ಅಭಿಪ್ರಾಯ. ನೀವು ಆ ವಿಡೀಯೋಗಳನ್ನು ನೋಡಿದರೂ ಪೋಲಿಸರು ಎಲ್ಲಿಯೂ ಜಗಳ ಬಿಡಿಸುವ ಪ್ರಯತ್ನ ಮಾಡಿಲ್ಲ. ಅವರಿಗೆ ಹೊಡೆಯುವುದು ಬಡಿಯುವುದು ಬಿಟ್ಟರೇ ಶಾಂತಿಯುತ ಜಗಳ ನಿವಾರಣೆ ತಿಳಿದಿಲ್ಲ.

ಅದಾದ ನಂತರದ ಬೆಳವಣಿಗೆಯನ್ನು ಗಮನಿಸಿ, ಪೋಲಿಸರಿಗೆ ಲಾಠಿ ಚಾರ್ಚ್ ಮಾಡುವುದಕ್ಕೆ ಅನುಮತಿ ಸಿಕ್ಕಿದೆ. ಸಿಕ್ಕಿ ಸಿಕ್ಕಿದವರನ್ನು ಮನ ಬಂದಂತೆ ಥಳಿಸಿದ್ದಾರೆ. ಕೋರ್ಟ್ ಆವರಣದೊಳಕ್ಕೆ ನುಂಗಿ ವಕೀಲರ ಸಂಘದ ಟಿವಿ ಗಳನ್ನು ಪುಡಿ ಪುಡೀ ಮಾಡಿದ್ದಾರೆ, ಐವತ್ತಕ್ಕೂ ಹೆಚ್ಚು ಕಾರುಗಳನ್ನು ಪುಡಿ ಪುಡೀ ಮಾಡಿದ್ದಾರೆ, ಬೈಕ್ ಗಳನ್ನು ನುಚ್ಚು ನೂರು ಮಾಡಿದ್ದಾರೆ, ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲಾ ಸ್ವಾಮಿ ಪೋಲಿಸರ ಕರ್ತವ್ಯವೇನೆಂಬುದ ಸಾಮಾನ್ಯ ಪ್ರಜ್ನೆ ಮರೆತು ಹೋಯಿತಾ? ಸಾಮಾನ್ಯ ಮನುಷ್ಯರಂತೇಯೂ ವರ್ತಿಸಲಾಗಲಿಲ್ಲವೇ ನಿಮಗೆ? ಮೂವತ್ತು ನಲ್ವತ್ತು ವಕೀಲರಿಗೆ ಏಟು ಬಿದ್ದಿದೆ, ದುರ್ವಿಧಿ ಎಂದರೇ ಜಗಳ ಶುರು ಮಾಡಿದ ಅಥವಾ ಜಗಳದಲ್ಲಿ ಭಾಗಿಯಾಗಿದ್ದ ಯಾವೊಬ್ಬ ವಕೀಲನಿಗೂ ಏಟು ಬಿದ್ದಿಲ್ಲ. ಪೋಲಿಸರು ಲಾಠಿ ಚಾರ್ಚ್ ಮಾಡಿರುವುದು ಮತ್ತೊಮ್ಮೆ ಏನೂ ತಿಳಿಯದ ಅಮಾಯಕ ವಕೀಲರ ಮೇಲೆ. ಕೋರ್ಟ್ ಗೆ ಆಗ ತಾನೆ ಬರುತ್ತಿದ್ದವರಿಗೆ ಹೊಡೆದಿದ್ದಾರೆ. ಯಾರೋ ನಾಲ್ಕು ಜನ ಅಯೋಗ್ಯ ವಕೀಲರು ಮಾಡಿದ ಪುಂಡಾಟಿಕೆಗೆ ಇಡೀ ವಕೀಲರ ಮೇಲೆ ಹಲ್ಲೆ ನಡೆಸುವ ಅಗತ್ಯವಿತ್ತಾ? ಮಾಧ್ಯಮದವರಿಗೆ ಸಹಕರಿಸಿದ್ದಾರೆಂಬ ಉದ್ದೇಶಕ್ಕೆ ಮಾಧ್ಯಮದವರು ವಕೀಲರ ಮೇಲೆ ಲಾಠಿ ಚಾರ್ಚ್ ಮಾಡಿ ಎಂದು ಒತ್ತಾಯಿಸುತ್ತೀರಲ್ಲ. ಆ ಸಮಯದಲ್ಲಿ ಮಾನವೀಯತೆ, ಮಾನವ ಹಕ್ಕುಗಳ ಉಲ್ಲಂಘನೆ ನಿಮ್ಮ ಕಣ್ಮುಂದೆ ಬರುವುದಿಲ್ಲವೇ? ವೀರಪ್ಪನ್ ಅಂತಾ ಕಳ್ಳನನ್ನು ಸಾಯಿಸಿದಾಗ ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವ ನೀವು ಅಮಾಯಕರ ಮೇಲೆ, ಲಾಠಿ ಚಾರ್ಚ್ ಮಾಡೀ ಎಂದು ಬೊಬ್ಬೆ ಹಾಕುತ್ತೀರಲ್ಲ. ನಿಮ್ಮ ಮನೆಗೆ ಬೆಂಕಿ ಬಿದ್ದಾಗ ಮಾತ್ರ ಬೆಂಕಿ ಕೆಟ್ಟದ್ದು ಬೇರೆಯವರ ಮನೆಗೆ ಬಿದ್ದಾಗ ನಿಮಗೆ ಅದು ಜ್ಯೋತಿಯಂತೆ ಕಾಣುತ್ತದೆ ಅಲ್ಲವೇ? ತಪ್ಪು ಮಾಡಿರುವ ವಕೀಲರನ್ನು ವಶಕ್ಕೆ ತೆಗೆದುಕೊಂಡು ನಾಲ್ಕು ಬಿಗಿದ್ದಿದ್ದರೇ ಖುಷಿಪಡಬಹುದಿತ್ತು, ಆದರೇ ಪೋಲಿಸರು ಅಮಾಯಕ ವಕೀಲರಿಗೆ ಲಾಠಿ ಬೀಸಿದ್ದಾರೆ. ಕೊರ್ಟ್ ನಿಂದ ಹೊರಕ್ಕೆ ಬರುವುದನ್ನೇ ಕಾಯ್ದು ಲಾಠಿ ಬೀಸಿದ್ದಾರೆ. ಮೈಸೂರು ಸರ್ಕಲ್ಲಿನ ಸಿಗ್ನಲ್ ನಲ್ಲಿ ಲಾಠಿ ಬೀಸಿದ್ದಾರೆ. ಕೋರ್ಟ್ ಆವರಣದಲ್ಲಿ ನಡೆದ ಗಲಭೆಯನ್ನು ಮೈಸೂರು ಸರ್ಕಲ್ಲಿನಲ್ಲಿ ಮುಂದುವರೆಸುವ ಅವಶ್ಯಕತೆ ಏನಿತ್ತು? ಒಬ್ಬ ಮನುಷ್ಯನಾಗಿ ಮತ್ತೊಬ್ಬನಿಗೆ ಯಾರೇ ಹೊಡೆದರೂ ಅದನ್ನು ಆನಂದಿಸುತ್ತೀರಲ್ಲಾ ನೀವು ಮನುಷ್ಯರೇನಾ? ವಕೀಲರು ತಪ್ಪು ಮಾಡಿರುವುದು ತಿಳಿದಿದೆ ಆದರೇ ಬಡ್ಡಿ ಮಕ್ಕಳ್ಳು ಲಾಯರ್ ಗಳನ್ನು ಹಾಕಿ ಚೆಚ್ಚಬೇಕು ಎನ್ನುತ್ತೀರಲ್ಲಾ? ಇದು ನಾಗರೀಕರು ವರ್ತಿಸುವ ರೀತಿ ನಾ? ತಪ್ಪು ಮಾಡಿದವರನ್ನೆಲ್ಲಾ ಸಾಯಿಸಬೇಕು, ಕೊಲ್ಲಬೇಕು, ಹೊಡೆಯಬೇಕು ಎನ್ನುತ್ತೀರಲ್ಲಾ, ಸಮಾಜವೆಂದರೇ ಸೇಡಿಗೆ ಸೇಡು ಎಂದ? ಹಾಗೆ ಆಗಿದ್ದ ಪಕ್ಷದಲ್ಲಿ ನೀವೇ ಹೋಗಿ ಹೊಡೆಯಿರಿ, ಹೊಡೆಯಬೇಕು ಎನ್ನುವ ಬದಲು, ಮಾಧ್ಯಮದಲ್ಲಿ ಅವರೆಲ್ಲರ ಹೆಸರನ್ನು ತೋರಿಸುತ್ತಿದ್ದಾರೆ, ನೀವು ಅವರ ಮನೆಗೆ ಹೋಗಿ ವಕೀಲರಿಗೆ ನಾಲ್ಕು ಬಿಗಿಯಿರಿ, ನೀವು ಗಂಡಸರು ತಾನೆ? ನಿಮಗೂ ಗಂಡಸ್ತನವಿದೆಯಲ್ಲಾ? ಸಮಾಜದ ಏಳಿಗೆಗೆ ನೀವು ಕಣ್ಣೀರಿಡುತ್ತೀರಲ್ಲಾ? ನಿಮ್ಮಂತೆಯೇ ಅನೇಕರೂ ರೋಷದಿಂದ ಶಪಥಗೈಯ್ಯುತ್ತಿದ್ದಾರಲ್ಲ ಹೋಗಿ ಅದನ್ನು ಸಾಧಿಸಿ. ಗುಂಪು ಘರ್ಷಣೆಯೊಂದನ್ನು ಬಿಟ್ಟರೇ ಮತ್ತೇನನ್ನೂ ಯಾರು ಮಾಡುವುದಿಲ್ಲ. ವಕೀಲರೂ ಅಷ್ಟೇ ಮೊನ್ನೆ ಗುಂಪಿದ್ದರಿಂದ ಮುನ್ನುಗ್ಗಿ ಹೊಡೆದರು. ವಕೀಲರು ಕಡಿಮೆ ಸಂಖ್ಯೆಯಲ್ಲಿದ್ದರೇ ಮಾಧ್ಯಮದವರೂ ಹೊಡೆದಿರುತ್ತಿದ್ದರು. ಇದು ನಮ್ಮೆಲ್ಲರ ಬೇಳೆಕಾಳು. ಸಂಘದಿಂದ ಅಥವಾ ಪಕ್ಷದಿಂದ ಹೊರಬಂದರೇ ಯಾವೊಬ್ಬನೂ ಹೊಡೆದಾಡುವುದಿಲ್ಲ ಇದನ್ನು ನಾವು ಅರ್ಥಮಾಡಿಕೊಳ್ಳಬೇಕು.

ಇದಾದ ನಂತರದಲ್ಲಿ ನಮ್ಮು ಸಹೃದಯವಂತರು ಫೇಸ್ ಬುಕ್ಕಿನಲ್ಲಿ ಬರೆಯುವುದನ್ನು ಗಮನಿಸಬೇಕು. ವಕೀಲರು ಗುಂಪಿನಲ್ಲಿದ್ದಾಗ ಮಾತ್ರ ಗಂಡಸರೆಂದು ಒಬ್ಬ ಪ್ರಜೆ ಬರೆದಿದ್ದ, ನೀನೇನು ಮಹಾ ಯೋಧನೋ? ಫೇಸ್ ಬುಕ್ ಬಿಟ್ಟು ಹೊರಕ್ಕೆ ಬಂದರೇ ನೀನೇ ಅನುಮಾನ ಪಡುತ್ತೀಯಾ ನೀನು ಯಾವ ಲಿಂಗಕ್ಕೆ ಸೇರಿದವನೆಂದು. ಮಹಾನ್ ವ್ಯಕ್ತಿಗಳು ಬರೆಯುತ್ತಾರೆ. ನಮ್ಮ ರಾಜ್ಯದಲ್ಲಿ ಅಭದ್ರತೆಯಿದೆ, ಜನರು ನೆಮ್ಮದಿಯಿಂದ ಬದುಕಲು ಸಾಧ್ಯವೇ ಇಲ್ಲ. ಬಿಜೆಪಿ ಸರ್ಕಾರಕ್ಕೆ ಧೈರ್ಯವಿಲ್ಲವೆಂದು. ಅಲ್ಲಾ ಸ್ವಾಮಿ ಯಾರೋ ನಾಲ್ಕು ಜನ ಅಯೋಗ್ಯ ಅನಾಗರೀಕ ವಕೀಲರು ಕೋರ್ಟ್ ಆವರಣದಲ್ಲಿ ಗಲಭೆ ಮಾಡಿದರೇ, ಪೋಲಿಸರು ಜಗಳ ಆಗುವಾಗ ಕೈ ಕಟ್ಟಿ ಕುಳಿತರೇ ಗೃಹ ಸಚಿವ ಏನು ಮಾಡಬೇಕು ಸ್ವಾಮಿ. ಅಲ್ಲಿಂದ ಅನ್ನ ತಿನ್ನುವ ಪ್ರಜೆಗಳೇಕೆ ಮುಂದುವರೆದು ಬಿಡಿಸಬಾರದಿತ್ತು? ಪೋಲಿಸರೇಕೆ ಜಗಳವನ್ನು ಬಿಡಿಸಬಾರದಿತ್ತು. ಹೂಸಿದರೇ ಕೆಮ್ಮಿದರೇ ಸರ್ಕಾರವನ್ನು ದೂರುವುದನ್ನೇ ಜೀವನ ಮಾಡಿಕೊಂಡಿರಲ್ಲ ಏಕೆ? ನೀವು ವಿರೋಧ ಪಕ್ಷದವರಂತೆ ಮಾತನಾಡುತ್ತೀರಲ್ಲ ಏಕೆ? ಇದೆಲ್ಲವೂ ಮಾಧ್ಯಮದ ಪ್ರಭಾವ. ಕುರಿಯ ಮಂದೆಯಲ್ಲಿ ಸಿಂಹದ ಮರಿ ಇದ್ದರೂ ಅದು ಕುರಿಯಾಗುತ್ತದೆಂಬುದು ಒಂದು ಕಥೆ. ಅದರಂತೆಯೇ ಬೆಳೆಗಿನಿಂದ ರಾತ್ರಿಯವರೆಗೆ ಬರೀ ಕೆಟ್ಟದ್ದನ್ನೇ ಪ್ರಸಾರ ಮಾಡಿ ಮಾಡಿ ಅದನ್ನೇ ನೀವು ನೋಡೀ ನೋಡಿ ಈ ಸಮಾಜದಲ್ಲಿ ಒಳ್ಳೆಯದೇನೂ ಇಲ್ಲ, ಇಲ್ಲಿರುವುದೆಲ್ಲ ಕೆಟ್ಟದ್ದು, ಇದು ಬದುಕಲು ಯೋಗ್ಯವಲ್ಲದ ರಾಜ್ಯವೆಂಬ ಪಟ್ಟಿ ಕಟ್ಟಿದ್ದೀರ. ಬೆಂಗಳೂರಿನಲ್ಲಿ ಎಂಬತ್ತು ಲಕ್ಷ ಜನರಿದ್ದಾರೆ ಅದರಲ್ಲಿ ಸುಮಾರು ೭೫ ಲಕ್ಷ ಜನರಿಗೆ ಬೆಂಗಳೂರು ಸ್ವರ್ಗ. ಇಲ್ಲಿಯಂತಹ ವಾತವಾರಣ ಬೇರೆಲ್ಲೂ ಸಿಗುವುದಿಲ್ಲ. ಪಕ್ಕದ ರಾಜ್ಯಗಳಿಗೆ ಹಾಗೇಯೇ ಹೋಗಿ ಬನ್ನಿ, ಅಲ್ಲಿದ್ದು ಬನ್ನಿ, ಅಲ್ಲಿನ ಸರ್ಕಾರಗಳ ಕಾರ್ಯಕ್ರಮಗಳ ಜೊತಗೆ ನಮ್ಮನ್ನು ಹೋಲಿಸಿನೋಡಿ. ನಮ್ಮಲ್ಲಿರುವ ಯೋಜನೆಗಳನ್ನು ನೋಡಿ. ಬರೀ ಟಿವಿಯವರು ತೋರಿಸುವುದೇ ಪ್ರಪಂಚ ಅಲ್ಲಾ, ಅದು ಮಾತ್ರವೇ ಸರ್ಕಾರ ಅಲ್ಲಾ.

ಕಳೆದ ಐದು ವರ್ಷಗಳಿಂದ ಟಿವಿಗಳಲ್ಲಿ ಪ್ರಸಾರವಾಗಿರುವ ಕಾರ್ಯಕ್ರಮಗಳೆಲ್ಲವನ್ನೂ ಗಮನಿಸಿ, ಒಂದೇ ಒಂದು ಚಾನೆಲ್ ನಲ್ಲಿ, ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಪ್ರಸಾರವಾಗಿದ್ದನ್ನೂ ತೋರಿಸಿ. ಟಿವಿ ಗಳಲ್ಲಿ ರಾಜಕೀಯ ಬಿಟ್ಟರೇ ಆಡಳಿತದ ಬಗೆಗೆ ಏನನ್ನೂ ತೋರಿಸುವುದಿಲ್ಲ. ಸರ್ಕಾರದ ಯೋಜನೆಯ ಬಗೆಗೆ ವಿರೋಧ ಪಕ್ಷದವರು ಮಾಡುವ ಟೀಕೆಗಳನ್ನು ತೋರಿಸುವ ನೀವು, ಸರ್ಕಾರವನ್ನೇ ಏಕೆ ಕೇಳುವುದಿಲ್ಲ. ಕೃಷಿ ಬಜೆಟ್ ನಡೆದರೇ ನೀವು ವಿರೋಧ ಪಕ್ಷದವರನ್ನು ಕೇಳುತ್ತೀರಾ? ಅದನ್ನೇ ತೆಗೆದುಕೊಂಡೂ ಹೋಗಿ ರೈತರ ಮಧ್ಯೆ ಕುಳಿತು ಚರ್ಚಿಸಿ. ರೈತ ಮುಖಂಡರನ್ನಲ್ಲ, ಹೆಗಲ ಮೇಲೆ ಹಸಿರು ಶಾಲು ಹೊದ್ದಿರುವವರೆಲ್ಲಾ ರೈತರಲ್ಲ ಗಮನವಿರಲಿ.

ಇಂಥಹ ಚಾನೆಲ್ ಗಳನ್ನು ನೋಡೀ ನೋಡಿ ಜನರೆಲ್ಲಾ ವಿರೋಧ ಪಕ್ಷದವರಂತಾಗಿದ್ದಾರೆ. ಅವರ ಜವಬ್ದಾರಿಗಳ ಬಗ್ಗೆ ಮಾತ್ರ ಅವರ‍್ಯಾರು ಮಾತನಾಡುವುದಿಲ್ಲ, ಗಮನ ಹರಿಸುವುದಿಲ್ಲ. ಫೇಸ್ ಬುಕ್ಕಿನಲ್ಲಿ ಸರ್ಕಾರದ ವಿರುದ್ದ ಹರಿಹಾಯ್ದಿರುವ ಎಲ್ಲರನ್ನೂ ಮಾತನಾಡಿಸೋಣ. ಅದರಲ್ಲಿ ಶೇ.೯೦ ಜನರು ಓಟು ಹಾಕಿರುವುದಿಲ್ಲ, ಕೇಳಿದರೇ ಯೋಗ್ಯ ಜನರಿಲ್ಲ ಎಂಬ ಉತ್ತರ. ಎದೆ ಮುಟ್ಟಿ ಅವರು ಹೇಳಲಿ ಅವರ ಜೀವನದಲ್ಲಿ ಲಂಚ ಕೊಟ್ಟಿಲ್ಲವೆಂದು ನಾನು ಅವರ ಮನೆಯಲ್ಲಿ ಗುಲಾಮನಾಗಿರುತ್ತೇನೆ. ರೇಷನ್ ಕಾರ್ಡಿಗೆ, ಗ್ಯಾಸಿಗೆ, ಅಷ್ಟೆಲ್ಲಾ ಏಕೆ ಮನೆಗೆ ಒಂದು ಛಾಪ ಕಾಗದ ತೆಗೆದುಕೊಳ್ಳಲು ಲಂಚ ಕೊಟ್ಟಿರುತ್ತಾರೆ. ಸಂಭಳ ಎರಡು ದಿನ ತಡವಾದರೇ ಅವರ ಕಂಪನಿಯ ಮುಖ್ಯಸ್ಥನ ಬಳಿಗೆ ಹೋಗಿರುತ್ತಾರೆ. ಮೂರ‍್ನಾಲ್ಕು ತಿಂಗಳು ಸಂಭಳ ಬಾರದಿದ್ದರೂ ಕೆಲಸ ಮಾಡುವ ಶಾಲ ಶಿಕ್ಷಕರ ಕಷ್ಟ ಇವರಿಗೆ ತಿಳಿದಿರುವುದಿಲ್ಲ. ಒಬ್ಬ ರಾಜಕಾರಣಿ ಆ ಮಟ್ಟಕ್ಕೆ ಬೆಳೆದು ಬರಲು ಅವನು ಪಟ್ಟಿರುವ ಕಷ್ಟ ಇವರಿಗೆ ತಿಳಿಯುವುದಿಲ್ಲ. ನಮ್ಮ ನೇರಕ್ಕೆ ನಮ್ಮನ್ನು ಆಳುವುದಕ್ಕೆ ಗಾಂಧಿಯೇ ಬೇಕು, ಆದರೇ ನಾವು ನಮ್ಮ ತಪ್ಪನ್ನು ತಿಳಿಯಲು ತಯಾರಿಲ್ಲ. ನಿಜವಾಗಿಯೂ ಓಟು ಹಾಕಿರುವ ಜನರು ತೆಪ್ಪಗಿದ್ದಾರೆ. ಏಕೆಂದರೇ ಅವರಿಗೆ ಗೊತ್ತು ಅವರ ಜವಬ್ದಾರಿ ಏನೆಂದು. ಫೇಸ್ ಬುಕ್ಕಿನಲ್ಲಿ ಬೊಬ್ಬೆ ಇಕ್ಕುವ ನೀವು, ಕಾನೂನು ರೀತಿ ಹೋರಾಟ ನಡೆಸಿ.

ನೀವುಗಳೇಕೆ, ಸಾರ್ವಜನಿಕ ಹಿತಾಸಕ್ತಿ ಹಾಕಬಾರದು. ನೀವೇಕೆ ಒಂದು ಕ್ರಾಂತಿಯನ್ನು ನಡೆಸಬಾರದು. ಆಫೀಸಿನಲ್ಲಿ ನೆಟ್ಟಗೆ ಆಫೀಸು ಕೆಲಸವನ್ನು ಮಾಡುವುದಿಲ್ಲ. ನಮ್ಮ ಜನರಿಗೆ ಒಂದು ತೆವಳು ಬಂದಿದೆ. ಎಲ್ಲವೂ ಮೆಷಿನ್ ರೀತಿ ನಡೆಯಬೇಕು. ಕೈ ಮುಂದಕ್ಕೆ ಬರಬೇಕು. ಮುಂಜಾನೆ ಎದ್ದೊಡನೆ ಮನೆ ಬಾಗಿಲಿಗೆ ಹಾಲು, ಕೈಗೆ ಕಾಫ್ಹಿ, ಟವೆಲ್, ಐರನ್ ಆಗಿರುವ ಬಟ್ಟೆ, ನೇರ ಆಫೀಸಿಗೆ, ಸಾಮಾನ್ಯ ಜನರ ಸಂಪರ್ಕವೇ ಇಲ್ಲ ಇವರಿಗೆ. ಇವರಿಗೆ ರೋಲ್ ಮಾಡೆಲ್ ಗಳಾಗಿ, ಮಾಧ್ಯಮದವರು. ಅವರು ಎಂಥೆಂಥ ರಾಜಕಾರಣಿಗಳಿಗೆ ಚೇಲಾಗಳಾಗಿ ಬಕೆಟ್ ಹಾಕಿ ಆ ಹುದ್ದೆಗೆ ಬಂದಿದ್ದಾರೆ, ಪ್ರಶಸ್ತಿಗಿಟ್ಟಿಸುತ್ತಿದ್ದಾರೆಂಬುದು ನಿಮಗೇಕೆ ಅರಿವಾಗುವುದಿಲ್ಲ. ನಾನು ಇಲ್ಲಿ ವಿದ್ಯೆಯನ್ನು ಮಾನದಂಡವಾಗಿಸುತ್ತಿಲ್ಲ, ಆದರೇ ಅದರ ಇತಿಮಿತಿಗಳನ್ನು ತಿಳಿಸುತ್ತಿದ್ದೇನೆ. ಐವತ್ತು ವರ್ಷದ ಹಿಂದೆ ಒಬ್ಬ ಎಸ್.ಎಸ್.ಎಲ್.ಸಿ ಮಾಡಿದರೇ ಅದಕ್ಕೆ ಅಷ್ಟೇ ಮಟ್ಟದ ಬೆಲೆ ಇರುತ್ತಿತ್ತು. ಆದರೀಗ ಹತ್ತನೇ ತರಗತಿ ಓದು ಯಾವುದಕ್ಕೂ ಪ್ರಯೋಜನವಿಲ್ಲ. ಹತ್ತು ವರ್ಷದಲ್ಲಿ ಆ ಹುಡುಗ ಏನನ್ನೂ ಕಲಿತಿರುವುದಿಲ್ಲ. ಕೇವಲ ಒಂದು ಪಧವಿ ಹಿಡಿದು ಬಂದು, ಇಡೀ ಜಗತ್ತನ್ನೇ ಜರಿಯುತ್ತಿರುವುದು ಮಾಧ್ಯಮ ಪ್ರತಿನಿಧಿಗಳು. ಕ್ರಿಕೇಟ್ ಆಟದ ಗಮ್ಮತ್ತೇ ಗೊತ್ತಿಲ್ಲದವನು ಕುಳಿತು ಹೇಳುತ್ತಾನೆ, ಮೂವತ್ತೊಂಬತ್ತನೇ ಓವರಿನಲ್ಲಿ ಒಂದು ಬಾಲ್ ಕಡಿಮೆಯಾದರೇ ಐವತ್ತನೇ ಓವರಿನಲ್ಲಿ ಹಾಕಿಸಬಹುದಿತ್ತು ಅಲ್ವಾ? ಎಂದು ಇಂಥ ಅವಿವೇಕಿಗಳು ಒಂದು ಸಂಸ್ಥೆಯ ಮುಖ್ಯಸ್ಥರಾಗಿರುತ್ತಾರೆ. ಇವರುಗಳನ್ನು ನೀವು ನಮ್ಮ ಪ್ರತಿನಿಧಿಗಳು ಎನ್ನುತ್ತಿರಿ. ಸುದ್ದಿಗಾಗಿ ಮಂತ್ರಿಗಳ ಮುಖಕ್ಕೆ ಮಸಿ ಬಳಿಸುವ ಪತ್ರಕರ್ತ ನಿಮ್ಮ ಪ್ರತಿನಿಧಿ. ಸುದ್ದಿಗಾಗಿ ಬೆಂಕಿ ಹಾಕಿಸುವವನು ಸಮಾಜ ಉದ್ದಾರ ಮಾಡುವವನು ಅಲ್ವೇ?

ಮಾನ ಮರ್ಯಾದೆ ಇಲ್ಲದಿರುವವರು ಸ್ವಾಮಿ ಮಾಧ್ಯಮದವರು. ನ್ಯೂಸ್ ಓದುವಾಗ ಒಬ್ಬ ರಾಜ್ಯದ ಮುಖ್ಯಮಂತ್ರಿಯನ್ನಾ ಸದಾ ಎನ್ನುತ್ತಾರೆ ಅವರಿಗೆ ಮರ್ಯಾದೆ ಕೊಡಬೇಕೆನ್ನುವ ಸೌಜನ್ಯ ಬೇಡವೇ? ಯಡ್ಡೀ, ಕುಮಾರ, ಸಿದ್ದು, ಹೀಗೆ ಎಲ್ಲರನ್ನೂ ಏಕವಚನದಲ್ಲಿ ಪ್ರಸಾರ ಮಾಡುತ್ತೀರಾ ನೀವು. ಜನರಲ್ಲಿ ಆರೋಗ್ಯಕರ ಪರಿಸರವನ್ನು ಸೃಷ್ಟಿಸಲು ಎಂದಾದರೂ ಪ್ರಯತ್ನಿಸಿದ್ದೀರಾ? ಸಮಾಜದ ಏಳಿಗೆ ಅಥವಾ ಒಳಿತಿಗೆ ಪ್ರತಿಯೊಬ್ಬನ ಪಾತ್ರವಿದೆ. ಕೇವಲ ರಾಜಕಾರಣಿಗಳಲ್ಲ, ಅಧಿಕಾರಿಗಳಲ್ಲ, ಪೋಲಿಸರಲ್ಲ, ಮಾಧ್ಯಮದವರಲ್ಲ, ನಾವೂ ನೀವೂಗಳೂ ಹೌದು. ರಾಜ್ಯದ ೬ ಕೋಟಿ ಜನರು ಅವರ ಬದುಕನ್ನು ಅವರು ಕಟ್ಟಿಕೊಂಡು ರಾಜ್ಯದ ಒಳಿತಿಗೆ ತಮ್ಮದೇ ಸೇವೆಯನ್ನು ನೀಡುತ್ತಿದ್ದಾರೆ. ಉಳಿದ ಇಪ್ಪತ್ತು ಲಕ್ಷ ಜನರು, ರಾಜಕಾರಣದ ಹೆಸರಿನಲ್ಲಿ, ಮಾಧ್ಯಮದ ಹೆಸರಿನಲ್ಲಿ, ಸಮಾಜ ಸೇವೆಯ, ಸಮಾಜದ ಬಗ್ಗೆ ಕಾಳಜಿಯ ಹೆಸರಿನಲ್ಲಿ ಅವರ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ ಅಥವಾ ಒಳ್ಳೆಯವರೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನೀವು ರಾತ್ರಿ ಉಂಡು ಮಲಗುವಾಗ ನಿಮಗೆ ನೆಮ್ಮದಿ ಸಿಕ್ಕರೇ ಸಾಕು, ನೆಮ್ಮದಿಯ ನಿದ್ದೆ ನಿಮಗೆ ಬಂದರೇ ಸಾಕು, ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ. ದೂರುವುದನ್ನು ನಿಲ್ಲಿಸಿ ಇಡೀ ಸಮಾಜವೇ ಒಂದು ಎಂಬುದನ್ನು ಒಪ್ಪಿಕೊಳ್ಳಿ.

ಅನ್ಯವಾರ್ತೆ: ಬಿಡುವ ಹಾದಿಯಲಿ!!

ಅನ್ಯವಾರ್ತೆ: ಬಿಡುವ ಹಾದಿಯಲಿ ಹರೀಶ್‌ ಬಾನುಗೊಂದಿ ಈ ಲೇಖನವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಯತ್ನಿಸುತ್ತಿದ್ದೆ. ಬರೆಯುವ ಪ್ರಯತ್ನ ಮಾಡಿರಲಿಲ್ಲ. ಇದಕ್ಕೆ ಎರಡು ...