ಕೂಡುಮಂಗಳೂರು, ಜುಲೈ 11 : ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆಯ ಜೆ.ಸಿ.ಬೋಸ್ ಇಕೋ ಕ್ಲಬ್, ತಾಲ್ಲೂಕು ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಎಸ್.ಡಿ.ಎಂ.ಸಿ. ವತಿಯಿಂದ ಹಸರೀಕರಣ ಹಾಗೂ ಶಾಲಾವರಣದಲ್ಲಿ ವನ ಮಹೋತ್ಸವ ಸಂವರ್ಧನಾ ಅಭಿಯಾನದಡಿ ಗಿಡಗಳನ್ನು ನೆಡುವ ಮೂಲಕ ವನ ಮಹೋತ್ಸವ ಸಪ್ತಾಹ ಆಚರಿಸಲಾಯಿತು.
" ಪರಿಸರ ಸಂರಕ್ಷಣೆ" ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ "ಹಸರೀಕರಣ ಮತ್ತು ವನ ಮಹೋತ್ಸವದ ಮಹತ್ವ ಕುರಿತು ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಪ್ರತಿಯೊಬ್ಬರೂ ಒಂದೊಂದು ಗಿಡ ನೆಡುವ ಮೂಲಕ ಎಲ್ಲರೂ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.
ಶಾಲೆಯಲ್ಲಿ ಇಕೋ ಕ್ಲಬ್ ಮೂಲಕ 'ನಮ್ಮ ನಡೆ ಹಸಿರೆಡೆಗೆ' ಎಂಬ ಘೋಷಣೆಯಡಿ ವನ ಸಂವರ್ಧನಾ ಅಭಿಯಾನದ ಮೂಲಕ ಸುತ್ತಲಿನ ಪರಿಸರದಲ್ಲಿ ಗಿಡ ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ರಾಷ್ಟ್ರೀಯ ಹಸಿರು ಪಡೆ ವತಿಯಿಂದ ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವುದು ಇಕೋ ಕ್ಲಬ್ ನ ಉದ್ದೇಶವಾಗಿದೆ ಎಂದು ಪ್ರೇಮಕುಮಾರ್ ತಿಳಿಸಿದರು.
ನೇರಳೆ ಗಿಡ ನೆಡುವ ಮೂಲಕ ವನ ಮಹೋತ್ಸವ ಅಭಿಯಾನಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ರಮೇಶ್ ಮಾತನಾಡಿ, ಶುದ್ಧ ಗಾಳಿ ಹಾಗೂ ಸ್ವಚ್ಛ ಪರಿಸರಕ್ಕಾಗಿ ಶಾಲಾವರಣ ಸೇರಿದಂತೆ ನಮ್ಮ ಸುತ್ತಲಿನ ಪರಿಸರದಲ್ಲಿ ಹೆಚ್ಚು ಗಿಡ ಮರಗಳನ್ನು ಬೆಳೆಸುವ ಮೂಲಕ ಉತ್ತಮ ಪರಿಸರ ನಿರ್ಮಿಸಲು ಪ್ರತಿಯೊಬ್ಬರೂ ಪಣತೊಡಬೇಕು ಎಂದರು.
ಪ್ರತಿಯೊಬ್ಬರೂ ಪರಿಸರ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಗ್ರಾ.ಪಂ.ಪಿಡಿಓ ಎಂ.ಆರ್.ಸಂತೋಷ್ ಮಾತನಾಡಿ, ಗ್ರಾಮ ಪಂಚಾಯ್ತಿ ವತಿಯಿಂದ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಗ್ರಾಮ ಪಂಚಾಯ್ತಿ ಸದಸ್ಯರಾದ ಶಶಿಕಲಾ ಕೃಷ್ಣಚಾರಿ, ಕುಮಾರ್, ಶಿವಮ್ಮ, ಗ್ರಾಮ ದೇವಾಲಯ ಸಮಿತಿ ಅಧ್ಯಕ್ಷ ಜವರೇಗೌಡ, ವಿಜ್ಞಾನ ಪರಿಷತ್ತಿನ ಸದಸ್ಯ ಎಂ.ರಂಗಸ್ವಾಮಿ, ಎಸ್.ಡಿ.ಎಂ.ಸಿ.ಮಾಜಿ ಸದಸ್ಯ ರಾಜಾಚಾರಿ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್, ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ. ರಮ್ಯ, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಡಿ.ರಮೇಶ್, ಅನ್ಸಿಲಾ ರೇಖಾ, ಎಸ್.ಎಂ.ಗೀತಾ, ಪಿ.ಅನಿತಾಕುಮಾರಿ, ಸಿಬ್ಬಂದಿ ಎಂ.ಉಷಾ, ಶಾಲೆಯ ಹಿರಿಯ ವಿದ್ಯಾರ್ಥಿ ಕೆ.ಕೆ.ಚೇತನ್, ಇತರರು ಇದ್ದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ