06 ನವೆಂಬರ್ 2019

ಅಗರ್ತದೊಳಗೊಂದು ಒಳನೋಟ!!!


ಒಬ್ಬ ಓದುಗನಾಗಿ ನಾನು ಕೆಲವೊಮ್ಮೆ ಯೋಚಿಸುವಾಗ, ನನ್ನನ್ನು ಕಾಡುವ ಕೆಲವು ಪ್ರಶ್ನೆಗಳಿವು. ನಾನು ಏಕೆ ಓದುತ್ತೇನೆ? ಯಾವ ರೀತಿಯ ಪುಸ್ತಕ ನನಗೆ ಹಿಡಿಸುತ್ತದೆ? ಯಾವು ಹಿಡಿಸುವುದಿಲ್ಲ? ಯಾವ ಸಾಹಿತಿಯನ್ನು ಮೆಚ್ಚುತ್ತೇನೆ? ನಾನೆಷ್ಟೆ ತಲೆ ಕೆಡಿಸಿಕೊಂಡು ಓದಿದರೂ ನನಗೆ ಕಾವ್ಯ, ಕವನ, ಕವಿತೆಗಳು ನೆನಪಲ್ಲಿ ಉಳಿಯುವುದಿಲ್ಲ. ಕೆಲವೊಂದು ತಲೆಗೆ ಹತ್ತುವುದಿಲ್ಲ. ಆದರೇ, ಗದ್ಯ, ಕಥೆ, ಕಾದಂಬರಿ ಆ ರೀತಿಯಲ್ಲ. ಅದರಲ್ಲಿಯೂ ಪರಿಸರ, ಪ್ರಕೃತಿ, ನಿಗೂಢತೆಯಿರುವ ಬರವಣಿಗೆಗಳು ಸೆಳೆಯುತ್ತವೆ. ಬಿಡುವಿಲ್ಲದ ಸಮಯದಲ್ಲಿಯೂ, ಸುಸ್ತಾದ ಹೊತ್ತಿನಲ್ಲಿಯೂ ಓದಿಸಿಕೊಂಡು ಹೋಗುವ ಸಾಮರ್ಥ್ಯ ಕೆಲವರಿಗೆ ಇರುತ್ತದೆ.

ನನ್ನ ಹಿಂದಿನ ಬರಹದಲ್ಲಿ, ಶ್ರೀಯುತ ಗುರುಪಾದ ಬೇಲೂರುರವರ ಬರವಣಿಗೆಯ ಕುರಿತು ಬರೆದಿದ್ದು, ಅದರ ವಿಸ್ತೃತ ರೂಪವಾಗಿ ಈ ಲೇಖನವನ್ನು ಅಥವ ನನ್ನ ಅಭಿಪ್ರಾಯವನ್ನು ತಮ್ಮ ಮುಂದಿಡುತ್ತಿದ್ದೇನೆ. ಅವರ ದೇವರ ಕಾಡು ಕಥಾಸಂಕಲನವನ್ನು ಓದಿದ ಮೇಲೆ, ಅವರ ಇನ್ನಷ್ಟು ಕಥೆಗಳನ್ನು ಓದಬೇಕೆಂಬ ಹಂಬಲ ಬಂದದ್ದು ಸತ್ಯ. ಅದಕ್ಕೆ ಮೂಲ ಕಾರಣ, ಅವರು ಆಯ್ಕೆ ಮಾಡಿಕೊಳ್ಳುವ ವಿಷಯ ಒಂದಾದರೆ ಅದನ್ನು ಪ್ರಸ್ತುತ ಪಡಿಸುವ ರೀತಿ ಮತ್ತೊಂದು. ಎರಡನೆಯ ಕಥಾಸಂಕಲನವನ್ನು ಓದಲು ಶುರು ಮಾಡಿದ್ದೇನೆ. ಅದರಲ್ಲಿನ ಅಗರ್ತ ಎಂಬ ನೀಲ್ಗತೆಯನ್ನು ಈಗಾಗಲೇ ಓದಿದ್ದೇನೆ. ಅಲ್ಲಿನ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತೇನೆ.

ನಾನು ಪುಸ್ತಕ ಪಡೆದಾಗ ಮೊದಲಿಗೆ ಮುನ್ನುಡಿಯನ್ನು ಓದಿದೆ. ಸುಂದರವಾಗಿ ಮತ್ತು ಸೂಕ್ಷö್ಮವಾಗಿ ಗ್ರಹಿಸಿ ಮುನ್ನುಡಿ ಬರೆದಿರುವುದು ಪುಸ್ತಕದಲ್ಲಿ ಪ್ರಮುಖ ಅಂಶ. ಮುನ್ನುಡಿಗಳು ಅದೆಷ್ಟೋ ಬಾರಿ ಆಸಕ್ತಿಯನ್ನು ಕೆರಳಿಸುತ್ತವೆ. ಅದರಂತೆಯೇ, ಕಂನಾಡಿಗ ನಾರಯಣ (ವೈಯಕ್ತಿಕವಾಗಿ ತಿಳಿದಿಲ್ಲ), ಅವರು ಬರೆದಿರುವ ಮುನ್ನುಡಿ ನನ್ನಲ್ಲಿ ಆಸಕ್ತಿ ಮೂಡಿಸಿದಂತೂ ಸತ್ಯ. ಅದರಂತೆಯೇ, ನಾನು ಓದಲು ಶುರು ಮಾಡಿಕೊಂಡಾಗ, ರೈಲಿನಲ್ಲಿ ಮನೆ ತಲುಪುವ ತನಕ ಒಂದು ಗಂಟೆಗಳು ಸುಮಾರು ಅರ್ಧದಷ್ಟು ಕಥೆಯನ್ನು ಓದಿಸಿಕೊಂಡಿತು. ಮನೆಗೆ ಹೋದ ತಕ್ಷಣ, ಎಲ್ಲವನ್ನು ಬದಿಗಿಟ್ಟು ಮತ್ತೆ ಓದಲು ಶುರುಮಾಡಿದೆ. ಕಥೆಯಲ್ಲಿ ರೋಚಕತೆ, ಪ್ರಕೃತಿಯ ವಿಸ್ಮಯಗಳನ್ನು ಕಣ್ಣಿಗೆ ಕಟ್ಟಿದಂತೆ, ನಮ್ಮ ಕಣ್ಣೆದುರೇ ನಡೆಯುತ್ತಿದೆ ಎನ್ನುವಂತೆ ತೆರೆದಿಟ್ಟಿರುವುದು ಲೇಖಕರಿಗೆ ಸಾಹಿತ್ಯ, ವಿಜ್ಞಾನ, ಸಂಶೋಧನೆ ಮತ್ತು ಸಾಹಸಮಯದ ಕಡೆಗಿರುವ ಹಿಡಿತವನ್ನು ತೋರಿಸುತ್ತದೆ.

ಭೂಗರ್ಭದಲ್ಲೊಂದು ಲೋಕವಿದೆ ಎನ್ನುವುದನ್ನು ಕಲ್ಪಿಸಿಕೊಳ್ಳುವುದು, ಅಲ್ಲೊಂದು ದೇವಲೋಕಕ್ಕೆ ಸಮನಾಗಿರುವುದು, ಸ್ವಾರ್ಥವಿಲ್ಲದ ಮನಸ್ಸಿನವರು ಅಲ್ಲಿಗೆ ತಲುಪಬಹುದು. ನಿಸರ್ಗಮಾತೆ ನೀಗೂಢತೆಯ ಜೊತೆಗೆ ಪ್ರೀತಿಯನ್ನು ಹಂಚುವ ದೈವತ್ವವನ್ನು ತೋರಿಸಿರುವುದು, ನಮಗೆ ಅರಿಯದಂತೆ ಯಾವುದೋ ಸಿನೆಮಾ ನೋಡಿದಂತೆ ಭಾಸವಾಗುತ್ತದೆ. ನನಗೆ ಇಲ್ಲಿ ನೆನಪಾದದ್ದು, ಬಬ್ರುವಾಹನ ಸಿನೆಮಾ ನೋಡುವಾಗ ಡಾ. ರಾಜ್ ಕುಮಾರ್ (ಅರ್ಜುನ) ನಾಗಾಲೋಕಕ್ಕೆ ಹೋಗುವುದು. ಅಲ್ಲೊಂದು ಲೋಕವಿದ್ದು, ಅಲ್ಲೊಂದು ಸಾಮ್ರಾಜ್ಯವೇ ಇರುತ್ತದೆ. ಅದು, ಕಲ್ಪನೆಯೋ, ಸತ್ಯವೋ ಅದರ ಅವಶ್ಯಕತೆಯಿರುವುದಿಲ್ಲ. ಕಥೆಯಲ್ಲಿ ರೋಚಕತೆ ಮುಖ್ಯವಾಗುತ್ತದೆ.

ಅಗರ್ತದಲ್ಲಿಯೂ ಕೂಡ ಒಮ್ಮೊಮ್ಮೆ ಆಧ್ಯಾತ್ಮದ ಕಡೆಗೆ ಎಳೆದರೆ, ಮತ್ತೊಮ್ಮೆ ವಿಜ್ಞಾನದ ಕಡೆಗೆ, ತಾಂತ್ರಿಕತೆಯ ಕಡೆಗೆ, ಗುಹೆಗಳ ಸಂಶೋಧನೆಯ ಕಡೆಗೆ, ಮತ್ತೊಮ್ಮೆ ಇತಿಹಾಸ, ಪುರಾಣ ಹೀಗೆ ಎಲ್ಲಾ ಆಯಾಮಗಳಿಂದ ಎಲ್ಲಿಯೂ ಅತಿರೇಕವೆನಿಸದೆ ರೂಪಿಸಿರುವುದು ಖುಷಿಕೊಡುತ್ತದೆ. ಅದರಂತೆಯೇ, ಮುಂದಿನ ಕಥೆ ಒಡಲಾನಲ ಕಥೆಯು ರೋಚಕತೆಯ ಹಾದಿಯಲ್ಲಿದೆ. ಸದ್ಯದಲ್ಲಿ ಅರ್ಧ ಓದಿರುತ್ತೇನೆ, ಓದುತ್ತಿರುತ್ತೇನೆ. ಭೂಗರ್ಭದಲ್ಲಿರುವ ಶಾಖಾವನ್ನು ಬಳಸಿ ಪ್ರಪಂಚಕ್ಕೆ ಇಂಧನವನ್ನು (ಶಕ್ತಿಯನ್ನು) ಒದಗಿಸಬಹುದೆಂಬ ಕೌತುಕತೆಯನ್ನು ಲೇಖಕರು ಮುಂದಿಡುತ್ತಿದ್ದಾರೆ. ಅದರಲ್ಲಿಯೂ, ಪುರಾಣದ ಕಥೆ, ಆರ್ಯರು ಮತ್ತು ದ್ರಾವಿಡರು, ಘಟ್ಟಗಳು, ಮಿಲಿಯನ್ ವರ್ಷಗಳ ಹಿಂದೆ ಆಗಿರುವ ಬದಲಾವಣೆಗಳು, ಭೂವಿಜ್ಞಾನದ ಅನೇಕ ಮಾಹಿತಿಗಳು ಕಥಯೊಳಗೆ ಬೆಸೆದಿರುವುದು, ಇದು ಕಥೆಯೋ, ವಿಜ್ಞಾನದ ಸಿನೆಮಾವೋ, ಸಂಶೋಧನಾ ಕಥೆಯೋ ಹೀಗೆ ಅನಿಸುವುದು ಹೌದು.

ನಾನು ಅನೇಕ ಬಾರಿ, ಹಲವರೊಂದಿಗೆ ಚರ್ಚಿಸಿದ್ದು ಹೌದು. ತೇಜಸ್ಚಿ ಮತ್ತು ಕಾರಂತರನ್ನು ಬಿಟ್ಟರೇ ಕನ್ನಡದಲ್ಲಿ ವಿಜ್ಞಾನವನ್ನು ಕಥೆಯೊಳಗೆ ಹೆಣೆದು ಆಸಕ್ತಿಮೂಡಿಸುವ ಬರಹಗಾರರು ಸಿಕ್ಕಿಲ್ಲ. ಅನೇಕರು, ಇಂಟರ್‌ನೆಟ್‌ನಲ್ಲಿ ಸಿಗುವ ಮಾಹಿತಿಯನ್ನೇ ಬರೆದು ಬೋರಾಗಿಸುತ್ತಾರೆ, ಆಗಿಸುತ್ತಾ ಬಂದಿದ್ದಾರೆ ಕೂಡ. ಆ ಹಿನ್ನಲೆಯಲ್ಲಿ ಶ್ರೀಯುತರ ಬರವಣಿಗೆ ಮತ್ತಷ್ಟು ಹೆಚ್ಚಲಿ. ಪುಸ್ತಕ ಶುರುವಿನಲ್ಲಿ ಹೇಳುವಂತೆ, ಕಥೆಗಾರ ಕಥೆಯನ್ನು ಸೃಷ್ಟಿಸುವುದಿಲ್ಲ, ಕಥ ತಾನಾಗಿಯೇ ಬರೆಸಿಕೊಳ್ಳುತ್ತದೆ. ಅದರಂತೆಯೇ, ಪರಿಸರ, ಪ್ರಕೃತಿಯ ಒಡಲಿನ ಕಥೆಗಳೆಲ್ಲಾ ಹೊರಬರಲಿ, ಓದುಗ ಮನಸ್ಸುಗಳು ಮುದವಾಗಲಿ.

28 ಅಕ್ಟೋಬರ್ 2019

ದೀಪಾವಳಿಯೆಂದರೇ ಬರೀ ಪಟಾಕಿಯೇ?


ಇತ್ತೀಚೆಗೆ ಎಂದರೇ ಕಳೆದ ಹತ್ತು ವರ್ಷಗಳಿಂದ ನಾನು ಗಮನಿಸಿರುವುದನ್ನು ತಮ್ಮ ಮುಂದಿಡುತ್ತಿದ್ದೇನೆ, ಈ ಅಂಶಗಳು ತಮ್ಮ ಗಮನಕ್ಕೂ ಬಂದಿರುತ್ತದೆ. ಆದರೇ, ಅಷ್ಟು ಸೂಕ್ಷ್ಮವಾಗಿ ಗಮನಿಸಿರುವುದಿಲ್ಲವೆಂಬುದು ನನ್ನ ವಿಶ್ವಾಸ. ಹಾಗಾಗಿಯೇ, ತಮ್ಮ ಹತ್ತು ನಿಮಿಷಗಳನ್ನು ನನ್ನ ಮಾತಿಗೆ ಮೀಸಲಿಡಿ. ದೀಪಾವಳಿಯ ಆಚರನೆಯನ್ನೇ ತೆಗೆದುಕೊಂಡು ಪರಿಶೀಲಿಸೋಣ. ನೀವು ನಿಮ್ಮ ಬಾಲ್ಯದ ದೀಪವಾಳಿಯನ್ನೊಮ್ಮೆ ನೆನಪಿಸಿಕೊಳ್ಳಿ, ಅದನ್ನು ಈಗ ಆಚರಿಸುತ್ತಿರುವುದಕ್ಕೆ ಹೋಲಿಕೆ ಮಾಡಿನೋಡಿ.

ನನ್ನ ಬಾಲ್ಯದ ದೀಪಾವಳಿಯನ್ನೊಮ್ಮೆ ಹಂಚಿಕೊಳ್ಳುತ್ತೇನೆ. ನಮ್ಮಲ್ಲಿ ಆಯುಧ ಪೂಜೆ ದೊಡ್ಡ ಹಬ್ಬ ಹಾಗಾಗಿ, ದೀಪಾವಳಿಯೆಂದರೆ ಬೇರೆಯವರ ಅಂದರೆ ನೆಂಟರಿಷ್ಟರ ಮನೆಗೆ ಹೋಗುವುದು ವಾಡಿಕೆ. ಆಯುಧಪೂಜೆಗೆ ನಮ್ಮಲ್ಲಿಗೆ ಅವರೆಲ್ಲರೂ ಬಂದಿರುವ ಕಾರಣ ಕೂಡ ಒಂದು. ನಮ್ಮಲ್ಲಿ ದೀಪಾವಳಿಯ ಅಮವಾಸ್ಯೆಯ ದಿನದಂದು, ಸಂಜೆಯ ವೇಳೆಗೆ ಮದ್ದುಮೆಳೆ ಎಂಬುದನ್ನು ತರುತ್ತೇವೆ. ಅದರ ಕಾರಣವನ್ನು ಈ ಹಿಂದೆ ಒಮ್ಮೆ ಬರೆದಿದ್ದೆ, ದೀಪಾವಳಿ ಅಥವಾ ಕಾರ್ತಿಕ ಮಾಸ ಶುರುವಾದರೆ, ಕಾಲಗಳು ಬದಲಾಗುತ್ತವೆ. ಮುಂಗಾರು ಮುಗಿದು, ಹಿಂಗಾರಿನ ಜೊತೆಗೆ ಚಳಿಗಾಲವೂ ಆರಂಭವಾಗುತ್ತದೆ. ಎಲೆ ಉದುರುವ ಸಮಯವೂ ಬರುತ್ತದೆ. ಈ ಸಮಯದಲ್ಲಿ, ಸೂಕ್ಷ್ಮಜೀವಿಗಳು ಹೆಚ್ಚಾಗುತ್ತವೆ. ಆದ್ದರಿಂದ, ಹಿಂದಿನವರು, ವಿವಿಧ ಔಷಧಿಗುಣಗಳಿರುವ ಎಲೆಗಳನ್ನು ಅಮವಾಸ್ಯೆಯ ದಿನ ಕತ್ತರಿಸಿ, ಮನೆಯ ಸೂರಿಗೆ, ತಿಪ್ಪೆಗೆ, ಕೊಟ್ಟಿಗೆಗಳಿಗೆ ಕಟ್ಟುತ್ತಿದ್ದರು, ಆ ಗಿಡಗಳೆಂದರೇ, ನೇರಳೆ, ಮತ್ತಿ, ಈಚಲು, ಬಿದಿರು, ಸೀಬೆ, ಉತ್ತರಾಣಿ, ಗೌರಿ ಹೂವು, ಭೀಮನ ಹುಲ್ಲು, ಇತ್ಯಾದಿ.,

ಹಬ್ಬದ ದಿನ ದನಕರುಗಳನ್ನು ತೊಳೆದು, ಉಂಬ್ಲಿ ಹಂಬನ್ನು ದನಗಳಿಗೆ ಕಟ್ಟುತ್ತಾರೆ. ತದನಂತರ ಎಣ್ಣೆ ಹಚ್ಚಿ ಸ್ನಾನ ಮಾಡಿ ಕಜ್ಚಾಯ ಸಿಹಿ ಊಟಮಾಡುವುದು ವಾಡಿಕೆಯಾಗಿತ್ತು. ಪಟಾಕಿಯೆಂದರೆ, ಕಲ್ಲಿನಿಂದ ಕೆಚ್ಚುವ ಪಟಾಕಿ, ಸುರ್ ಸುರ್ ಬತ್ತಿ, ಹೆಚ್ಚೆಂದರೆ ಒಂದು ಲಕ್ಷ್ಮಿ ಪಟಾಕಿ, ಒಂದೆರಡು ಆನೆ ಪಟಾಕಿ, ಈ ಅಟಮ್ ಬಾಂಬ್, ರಾಕೆಟ್‍ಗಳ ಸುದ್ದಿಯೇ ಇರಲಿಲ್ಲ. ನಮ್ಮೂರು ಕೊಣನೂರಿನಿಂದ ಸುಮಾರು ನಾಲ್ಕು ಕಿಮಿ ಇತ್ತು. ಕೊಣನೂರು ಹೋಬಳಿಯ ಕೇಂದ್ರವಾದರೂ ಅಲ್ಲಿ ಬಸ್ ಸ್ಟಾಂಡ್ ಎದುರಿನ ಶೆಟ್ಟರ ಅಂಗಡಿಯಲ್ಲಿ ಬಿಟ್ಟರೇ ಬೇರೆಲ್ಲೂ ಪಟಾಕಿಗಳು ಸಿಗುತ್ತಿರಲಿಲ್ಲ. ನಮ್ಮೂರಿನ ಅಂಗಡಿಯವರು ಅಲ್ಲಿಂದ ಸ್ವಲ್ಪ ತಂದು ಮಾರುತ್ತಿದ್ದರು. ಪಟಾಕಿ ಹೊಡೆಯುವ ಕೋವಿಗೆ ಮೂರು ರೂಪಾಯಿ ಇರುತ್ತಿತ್ತು, ಅದಕ್ಕೆ ಮೂರು ರೂಪಾಯಿ ಕೊಡುವುದಕ್ಕಿಂತ ಕೆಚ್ಚುವ ಪಟಾಕಿಯನ್ನು ತೆಗೆದುಕೊಂಡು ಕಲ್ಲಲ್ಲಿ ಕೆಚ್ಚಿದರೆ ಆಯಿತೆಂದು ಕೆಚ್ಚುತ್ತಿದ್ದೆವು, ಕೆಲವೊಮ್ಮೆ ನಟ್ ಮತ್ತು ಬೋಲ್ಟ್ ನಡುವೆ ಪಟಾಕಿಯನ್ನು ಸೇರಿಸಿ ಕಲ್ಲಿನ ಅಥವಾ ಗಟ್ಟಿ ನೆಲಕ್ಕೆ ಕೆಚ್ಚುತ್ತಿದ್ದೆವು. ದೊಡ್ದವರು (ವಯಸ್ಸಿನಲ್ಲಿ) ಪಟಾಕಿ ಹೊಡೆದ್ದದ್ದನನ್ನು ನಾನು ಕಂಡೇ ಇಲ್ಲ. ಪಟಾಕಿ ಮಕ್ಕಳಿಗೆ ಮೀಸಲೆಂದರೂ ತಪ್ಪಿಲ್ಲ.
ಆದರೇ ಈಗ ಆಗುತ್ತಿರುವ ವಿದ್ಯಾಮಾನಗಳೇ ಬೇರೆ. ನಾನು ಅದರಲ್ಲಿಯೂ ಬೆಂಗಳೂರಿನಲ್ಲಿ ನೋಡುವಾಗ ಮಕ್ಕಳಿಗಿಂತ ದಾಂಡಿಗರೇ ಮುಕ್ಕಾಲು ಚಡ್ಡಿ ಹಾಕಿಕೊಂಡು ಉದ್ದುದ್ದ ರಾಕೇಟ್, ದೊಡ್ಡದಾಗಿ ಶಬ್ಧ ಬರುವ ಪಟಾಕಿ ಹೊಡೆಯುತ್ತಿದ್ದಾರೆ. ಪಟಾಕಿಯನ್ನು ನಾನು ಮಾಲಿನ್ಯದ ಕುರಿತಾಗಿ ಹೇಳಿದರೇ ಕೆಲವರಿಗೆ ಕೋಪ ಬರುತ್ತದೆ ಮತ್ತು ವಾದಕ್ಕಿಳಿಯುತ್ತಾರೆ. ಬೆಂಗಳೂರಿನಂತಹ ಹೊಗೆ ನಗರದಲ್ಲಿ ದೀಪಾವಳಿಯ ಸಮಯದಲ್ಲಿ ನಾಲ್ಕೈದು ದಿನ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗುತ್ತದೆ. ಮತ್ತೊಂದು ವಾದವೆಂದರೇ, ಧರ್ಮ ವಿರೋಧಿಗಳು ಎಂಬಂತೆ ಬಿಂಬಿಸುವುದು, ಅಥವಾ ಬೇರೆ ಧರ್ಮದವರು ಮಾಡುವ ಮಾಲಿನ್ಯಕ್ಕೆ ನಿಮ್ಮ ಉತ್ತರವೇನು? ಎನ್ನುವುದು. ಪರಿಸರ ಮಾಲಿನ್ಯ ಒಂದೆಡೆಗೆ ಆದರೇ, ಸುರಕ್ಷತೆ ಮತ್ತೊಂದು. ನಾನು ಕಳೆದ ಮೂರು ವರ್ಷದಿಂದ ಗಮನಿಸುತ್ತಾ ಬಂದಿದ್ದೇನೆ. ನನ್ನ ಮಗಳಿಗೆ 2 ವರ್ಷ ತುಂಬಿದೆ, ಮೊದಲನೆ ದೀಪಾವಳಿಯಲ್ಲಿ ಅವಳಿಗೆ ಕೇವಲ 3 ತಿಂಗಳಾಗಿತ್ತು. ಈ ಮೂರು ವರ್ಷದಲ್ಲಿಯೂ ಈ ಹಬ್ಬದ ಸಮಯದಲ್ಲಿ ಕಣ್ಮುಚ್ಚಿ ಮಲಗುತ್ತಿಲ್ಲ. ಶಬ್ದಕ್ಕೆ ಬೆಚ್ಚಿ ಬೀಳುತ್ತಾಳೆ. ಇದೇ ರೀತಿ ವಯಸ್ಸಾದವರ ಕಥೆಯೂ ಹೌದು. ಪಕ್ಕದ ಮನೆಯವ ನಾಯಿಯ ಗೋಳಂತೂ ಹೇಳುವಂತಿಲ್ಲ. ಪಟಾಕಿ ಸದ್ದಿಲ್ಲದೇ ಕೂಡ ಹೊಡೆಯಬಹುದು, ಮನೆ ಮೇಲಕ್ಕೆ ಯುದ್ದ ವಿಮಾನ ಬಂದು ಅಪ್ಪಳಿಸಿದಂತೆ ಸದ್ದು ಮಾಡುವುದು ಯಾವ ಧರ್ಮಾಚಾರಣೆ? ಮುಂಜಾನೆ ಐದು ಗಂಟೆಗೆ ಎದ್ದು ಪಟಾಕಿ ಹೊಡೆಯಬೇಕೇ? ರಾತ್ರಿ ಹನ್ನೆರಡಾದರೂ ಹೊಡೆಯುತ್ತಿರಬೇಕೆ? ರಸ್ತೆಯಲ್ಲಿ ನಡೆಯುವಾಗ ಯಾವ ಕಡೆಯಿಂದ ಬಂದು ಅಪ್ಪಳಿಸುತ್ತದೆ ಎಂಬ ಭಯದಿಂದ ನಡೆಯಬೇಕು. ಪಟಾಕಿ ಹೊಡೆದು ರಸ್ತೆಯಲ್ಲ ಗಲೀಜು ಮಾಡಿದವರು, ಕನಿಷ್ಟ ಸೌಜನ್ಯವೂ ಇಲ್ಲದೇ ಇರುವುದು ವಿಪರ್ಯಾಸ. ಮುಂಜಾನೆ ಪೌರಕಾರ್ಮಿಕರು ರಸ್ತೆ ಗುಡಿಸುವಾಗ ಯೋಚನೆ ಬಂತು. ಅವರ ಮನೆಯಲ್ಲಿ ಪಟಾಕಿ ಹೊಡೆದಿದ್ದರೋ ಇಲ್ಲವೋ ಉಳ್ಳವರು ಹೊಡೆದ ಪಟಾಕಿಯ ಕಸವನ್ನು ಗುಡಿಸಬೇಕು.

ದೀಪಗಳು ಕೂಡ ಮರೆಯಾಗಿ ಸಿರಿಯಲ್ ಸೆಟ್ ಹಾಕಿ ಅದೇ ಬೆಳಕು ಎಂದು ಭ್ರಮಿಸುತ್ತಿದ್ದೇವೆ. ದೀಪಗಳು ಕೂಡ ಚೈನಾದಿಂದ ಬಂದಿರುವುದು ದುರಂತವಾಗಿದೆ. ಮಣ್ಣಿನ ದೀಪಗಳನ್ನು ಅಮ್ಮ ಕಾರ್ತಿಕ ಮುಗಿದ ತಕ್ಷಣ ತೆಗೆದಿಟ್ಟು, ಮುಂದಿನ ವರ್ಷದ ತನಕ ಜೋಪಾನವಾಗಿರಿಸುತ್ತಿದ್ದರು. ಪ್ರತಿ ಧರ್ಮವೂ ಪರಿಸರಕ್ಕೆ ಹೆಚ್ಚಿನ ಒತ್ತನ್ನು ನೀಡಿದೆ. ಅದನ್ನು ಮರೆತು ಅದನ್ನೇ ನಾಶ ಮಾಡುವ ಹಬ್ಬಗಳು ಕಡಿಮೆಯಾಗಲಿ. ವಿವಿಧತೆಯಲ್ಲಿ ಏಕತೆ ಎಂಬಂತೆ ನಮ್ಮೂರಿನಲ್ಲಿ ಈ ಹಬ್ಬದಂದು, ಆಚಾರರು, ಮಡಿವಾಳರು, ದಾಸಯ್ಯನ ಮನೆಯಿಂದ ಬೂದಿ ತಂದು ಮಿಶ್ರಣ ಮಾಡಿ ರಂಗೋಲಿ ಬಿಡುತ್ತೇವೆ. ನಮ್ಮಲ್ಲಿದ್ದ ಸಂಪ್ರದಾಯಗಳನ್ನು ಮೂಲೆಗುಂಪಾಗಿಸಿ ನಮಗೆ ಬೇಕಿರುವ ಮೋಜುಮಸ್ತಿಗೆ ಧರ್ಮದ ಬಣ್ಣ ಹಚ್ಚುತ್ತಿರುವುದಕ್ಕೆ ಏನು ಹೇಳಬೇಕು!

12 ಅಕ್ಟೋಬರ್ 2019

ನಮ್ಮ ಬದುಕಿಗೆ ನಾವೇ ಗುರುಗಳು: ಕಲಿಯುವ ಮುನ್ನ ಎಚ್ಚರ


                                                           Image result for self assessment
ನಮ್ಮ ಆಲೋಚನೆಗಳು ನಮ್ಮನ್ನು ಕಾಡಿದಷ್ಟು, ತಿದ್ದಿದಷ್ಟು, ತೀಡಿದಷ್ಟು ಮತ್ತಾವುದೂ ನಮ್ಮನ್ನು ಕಾಡುವುದಿಲ್ಲ. ಜೀವನದ ಪಯಣದಲ್ಲಿ ಯಾವುದು ಸರಿ, ಯಾವುದು ತಪ್ಪು, ಎಡವಿದ್ದೆಲ್ಲಿ? ಬಿದ್ದಿದ್ದೆಲ್ಲಿ? ಬಿದ್ದೇನಾ? ಎದ್ದೇನಾ? ಬಿದ್ದರೇ ಎಲ್ಲಿ ಬಿದ್ದೆ? ಯಾರು ಬೀಳಿಸಿದರು? ಎದ್ದರೇ ಯಾರು ಎತ್ತಿದರು? ಹೀಗೆ ನೂರೆಂಟು ಆಲೋಚನೆಗಳು ನಮ್ಮೊಳಗೆ ಹರಿದಾಡುತ್ತಿರುತ್ತವೆ. ಎಲ್ಲರಿಗೂ ಈ ರೀತಿಯಾಗಿ ಕಾಡುತ್ತದೆಯೇ? ನನ್ನನಿಸಿಕೆ ಪ್ರಕಾರ ಹೌದು. ಆದರೇ, ಎಲ್ಲರೂ ತಮ್ಮನ್ನು ಮುಕ್ತವಾಗಿ ವಿಮರ್ಶೆಗೆ ಒಳಪಡಿಸಿಕೊಳ್ಳುತ್ತಾರೆಯೇ? ಎಂದರೆ ಅದಕ್ಕೆ ನನ್ನ ಉತ್ತರ, ಇಲ್ಲಾ ಸಾಧ್ಯವೇ ಇಲ್ಲ. ನಾನು ಆಗ್ಗಾಗ್ಗೆ, ಪ್ರತಿಪಾದಿಸುವ ಒಂದು ವಿಚಾರವೆಂದರೇ, ಮೊದಲು ನಮಗೆ ನಾವು ಬೆತ್ತಲಾಗಬೇಕು. ಮಡಿವಂತಿಕೆಯ ಸೋಗಿನಿಂದ, ಒಳ್ಳೆತನವೆಂಬ ಅಫೀಮಿನಿಂದ ಹೊರಬರಬೇಕು. ನಾವು ಏನು ಎನ್ನುವುದನ್ನು ನಾವು ಮೊದಲು ಅರಿಯಬೇಕು. ಒಳ್ಳೆಯದು ಕೆಟ್ಟದ್ದು ಎಂಬುದರ ಬಗ್ಗೆ ನನಗೆ ಅಷ್ಟು ಆಸಕ್ತಿಯಿಲ್ಲ. ಇದನ್ನು ನಾನು ಬಹಳಷ್ಟು ಬಾರಿ ಪ್ರಯೋಗಿಸಿದ್ದೇನೆ. ಒಬ್ಬನಿಗೆ ಸರಿಯೆನಿಸಿದ್ದು, ಮತ್ತೊಬ್ಬನಿಗೆ ತಪ್ಪೆನಿಸಬಹುದು. ಇದು ಎಲ್ಲಾ ಹಂತದಲ್ಲಿಯೂ ಹೌದು. ಮಾಂಸಹಾರಿಗೆ ಇಷ್ಟವಾಗುವ ಖಾದ್ಯ, ಸಸ್ಯಹಾರಿಗೆ ಹಿಂಸೆಯೆನಿಸಬಹುದು, ಕೆಲವರಿಗೆ ದೈಹಿಕ ಹಿಂಸೆ ಮಾತ್ರ ಹಿಂಸೆಯೆನಿಸುತ್ತದೆ, ಮಾನಸಿಕ ಹಿಂಸೆ ಏನೂ ಅನಿಸದೆ ಇರಬಹುದು. ಅದು ಅವರವರ ವಿವೇಚನೆಗೆ ಬಿಟ್ಟದ್ದು. 
ನಮ್ಮೊಳಗೆ ನಡೆಯುವ ವಿದ್ಯಮಾನಗಳನ್ನು ನಾವು ಗ್ರಹಿಸಬೇಕು. ಏನು ನಡೆಯಿತ್ತಿದೆಯೆಂಬುದನ್ನು ಅರಿಯಬೇಕು. ಇತ್ತೀಚಿನ ದಿನಗಳಲ್ಲಿ ಗಮನಿಸಿದರೆ, ಅಯ್ಯೋ ಟೈಮ್ ಎಲ್ಲಿದೆ ಸಾರ್, ಎನ್ನವವರೇ ಹೆಚ್ಚು. ಬಿಟ್ಟರೇ, ನಮ್ಮ ಹಣೆಬರಹ, ಟೈಮ್ ಎಂದು ಕೈ ಚೆಲ್ಲವವರಿಗೇನೂ ಕಡಿಮೆಯಿಲ್ಲ. ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲಾಗದೇ ಕಂಗೆಟ್ಟವರು ಮಾತ್ರ ಇದೆಲ್ಲವನ್ನೂ ಹೇಳಬಹುದು. ಕುಡಿತಕ್ಕೆ ದಾಸ್ಯನಾದವನು, ಕುಡಿತವನ್ನು ಕೆಟ್ಟದ್ದು ಎನ್ನಲಾರ, ಅಥವಾ ನಾನು ಕಲಿತು ನನ್ನ ಆರೋಗ್ಯ, ಜೀವನ ಹಾಳಾಗುತ್ತಿದೆ ಎನ್ನುವುದನ್ನು ಒಪ್ಪಲಾರ. ನಾನು ದುಡಿಯುತ್ತೇನೆ, ನಾನು ಕುಡಿಯುತ್ತೇನೆ? ಹೋದರೇ ನನ್ನ ಕಿಡ್ನಿ, ನನ್ನ ಲಿವರ್, ನಾನು ಬೇರೋಬ್ಬರ ದುಡ್ಡಲ್ಲಿ ಕುಡಿದಿಲ್ಲ ಎಂದು ವಾದಿಸುತ್ತಾನೆ. ನಾವು ನಮ್ಮ ತಪ್ಪನ್ನು ಮುಚ್ಚಿಡಲು, ನಾವು ಸರಿಯೆನಿಸಿಕೊಳ್ಳಲು ಬೇರೆಯವರನ್ನು ತಪ್ಪಿತಸ್ಥರನ್ನಾಗಿಸಲು ಪ್ರಯತ್ನಿಸುತ್ತೇವೆ.

ಕಾರಣವಿಲ್ಲದ ಬದುಕೆಲ್ಲಿದೆ? ಕಾರಣವಿಲ್ಲದೆ ಇರಲು ಸಾಧ್ಯವೇ? ಮುಂಜಾನೆ ಬೇಗ ಏಳದೆ ಇರುವುದಕ್ಕೆ ಕಾರಣವಿದೆ, ಕಚೇರಿಗೆ ಲೇಟಾಗಿ ಬರುವುದಕ್ಕೆ ಕಾರಣವಿದೆ. ಕುಡಿಯುವುದಕ್ಕೆ ಸೇದುವುದಕ್ಕೆ ಕಾರಣವಿದೆ. ಸ್ನಾನ ಮಾಡದೇ ಗಲೀಜಾಗಿರುವುದಕ್ಕೂ ಇದೆ. ಮಾಡುವ ಕೆಲಸ ನನ್ನದು, ನಾನು ಮಾಡಲೇಬೇಕೆಂಬ ದೃಢಕಲ್ಪನೆಯೊಂದಿದ್ದರೆ ಈ ಕಾರಣಗಳ ಸರಮಾಲೆ ಹತ್ತಿರವೂ ಸುಳಿಯುವುದಿಲ್ಲ. ನಾನು ನನ್ನನ್ನು ಅತಿಯಾಗಿ ವಿಮರ್ಶೆಗೆ ಒಳಪಡಿಸಿಕೊಳ್ಳುತ್ತೇನೆ. ಕಾರಣ ಸರಳ. ನಾನು ನನ್ನಲ್ಲಾಗುತ್ತಿರುವ ಬದಲಾವಣೆಯನ್ನು ಗಮನಿಸಿದರೆ, ನನ್ನ ಚಿತ್ತ ನನ್ನ ಪ್ರಗತಿಯತ್ತ ಸಾಗುತ್ತದೆ. ಎಷ್ಟೋ ದೂರ ಪಯಣಿಸಿದ ಮೇಲೆ, ನಾನು ದಾರಿ ತಪ್ಪಿದೆಯೆಂದರೇ! ಅಥವಾ ನೀ ಹೋಗುತ್ತಿರುವ ಹಾದಿ ತಪ್ಪೆಂದು ಬೇರೆಯವರು ಹೇಳಿದರೇ ಒಪ್ಪುತ್ತೇವಾ? ಸಾಧ್ಯವೇ ಇಲ್ಲ. 

ದಿನ ಕಳೆದಂತೆ ನಮ್ಮ ಆಸಕ್ತಿಗಳು, ಹವ್ಯಾಸಗಳು ನಮ್ಮಿಂದ ದೂರಾಗುತ್ತವೆ. ಕೆಲಸದ ಒತ್ತಡ, ದುಡಿಮೆ, ಮನೆ, ಸಂಸಾರ ಹೀಗೆ ಏನೇನೋ ಸಮಜಾಯಿಸಿ ಕೊಡುತ್ತೇವೆ. ನನ್ನದೇ ಉದಾಹರಣೆ ಕೊಡುವುದಾದರೇ, ಕಳೆದ ಒಂದೆರೆಡು ವರ್ಷದಲ್ಲಿ, ನಾನು ಓದಿದ್ದು ಕಡಿಮೆ, ಬರೆದಿದ್ದಂತೂ ಶೂನ್ಯ, ನನ್ನ ಹವ್ಯಾಸವೆಂದು ತಿಳಿದಿದ್ದು, ಫೋಟೋಗ್ರಫಿ, ನಾಟಕ ನೋಡುವುದು, ಸುತ್ತಾಡುವುದು, ಚಾರಣ, ಸಂಗೀತ, ಪ್ರವಾಸ, ಇವೆಲ್ಲವೂ ಮಾಯವಾಗಿವೆ. ಮುಂಜಾನೆ ಏಳುವುದು, ಆಫೀಸಿಗೆ ಹೋಗುವುದು ಬರುವುದು, ಅದೇ ಚರ್ಚೆ, ಅದೇ ಮಾತುಕತೆ, ಸಂಪೂರ್ಣವಾಗಿ ದಿನಪತ್ರಿಕೆ ಓದಿಯೇ ಎಷ್ಟೋ ದಿನಗಳಾಗಿವೆ, ಸ್ನೇಹಿತರೊಡನೆ ಕುಳಿತು ಹರಟೆ ಹೊಡೆದು ಮನಸ್ಸಾರೆ ನಕ್ಕಿ ಎಷ್ಟೋ ದಿನಗಳಾಗಿವೆ. ಇವೆಲ್ಲವೂ ರಾತ್ರೋರಾತ್ರಿ ಆದ ಬೆಳವಣಿಗೆಗಳಲ್ಲ, ಬೆಳೆಯುತ್ತ ಬೆಳೆಯುತ್ತ ಬಂದವುಗಳು. ಯಾಂತ್ರಕತೆಯ ಬದುಕು ನಮ್ಮದಾದಾಗ ಜೀವನದ ಮೇಲೆ ತಾತ್ಸಾರ ಮೂಡುತ್ತದೆ. ಇನ್ನೇನು ಬದುಕು ಮುಗಿಯಿತು ಎನಿಸುತ್ತದೆ. ನಕರಾತ್ಮಕತೆ ನಮ್ಮನ್ನು ಆಳುತ್ತದೆ. ಕ್ರಿಯಾತ್ಮಕತೆಗೆ ಹಾದಿಯೇ ಇರುವುದಿಲ್ಲ. ಇದ್ದರೂ ಯೋಚಿಸುವುದಿಲ್ಲ. 

ಇದೆಲ್ಲವುದಕ್ಕೂ ಪರಿಹಾರವೇನು? ವಯಸ್ಸಾದಂತೆ ನಮಗೆ ಕಾಡುವ ಮತ್ತೊಂದು ಯೋಚನೆಗಳು ಹೀಗಿರುತ್ತವೆ. ಮೊದಲನೆದಾಗಿ, ನಾವು ಕಳೆದ ದಿನಗಳು ಮತ್ತು ಸಂಪನ್ಮೂಲಗಳು. ಎರಡನೆಯದು, ನಾವು ಪಡೆದ ಲಾಭ ನಷ್ಟ. ನನ್ನ ಸ್ವಂತ ಅನುಭವವನ್ನು ಇಲ್ಲಿಡುತ್ತೇನೆ. ನಾನು ಕನಿಷ್ಟ ಮೂರು ತಿಂಗಳಿಗೊಮ್ಮೆ ನನ್ನ ಮೊಬೈಲಿನಲ್ಲಿರುವ ಎಲ್ಲರಿಗೂ ಫೋನ್ ಮಾಡಿ ಅಥವಾ ಸಂದೇಶ ಕಳುಹಿಸಿ, ಹೇಗಿದ್ದೀರಿ, ಸುಮ್ಮನೆ ಕರೆ ಮಾಡಿದೆ ಅಂತಾ ಮಾಡುತ್ತಿದ್ದೆ. ಸ್ನೇಹಿತರ ಯೋಗ ಕ್ಷೇಮ ವಿಚಾರಿಸುವ ಕ್ರಮವಾಗಿತ್ತು. ನಾನು ಯಾವುದೇ ಹೊರ ಊರಿಗೆ ಹೋದರೇ, ಅಲ್ಲಿ ಯಾವ ಸ್ನೇಹಿತರಿದ್ದಾರೆ, ಅವರನ್ನು ಮಾತನಾಡಿಸುವುದು, ಜೊತೆಗೆ ಕೂತು ಊಟ ಮಾಡುವುದು ಸಾಮಾನ್ಯವಾಗಿತ್ತು. ಇತ್ತೀಚೆಗೆ, ನನ್ನೊಳಗೆ ಆದ ಬದಲಾವಣೆ, ನಾನು ಕರೆ ಮಾಡ್ತೀನಿ, ಕೇಳ್ತೀನಿ, ಅವರುಗಳು ಯಾರೊಬ್ಬರೂ ಮಾಡುವುದಿಲ್ಲವಲ್ಲ. ನೋಡೋಣ, ನಾನು ಮಾಡುವುದೇ ಬೇಡವೆಂದು ತೀರ್ಮಾನಿಸಿದೆ. ಸುಮಾರು 95% ಸ್ನೇಹಿತರು ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚನಿಂದ ನನಗೆ ಕರೆಯೇ ಮಾಡಿಲ್ಲ, ಬಿಡುವಿಲ್ಲದೇಯೂ ಇರಬಹುದು. ನಾನು ಈವರೆಗೂ ಭಾವನಾತ್ಮಕವಾಗಿ ಸ್ನೇಹಿತರಿಗಾಗಿ ಪರದಾಡಿದ್ದು ತಪ್ಪಾ? ನನ್ನ ಅನುಪಸ್ಥಿತಿ ಅವರಿಗೆ ಕಾಡುವುದಿಲ್ಲವೇ ಹೀಗೆ ಆಲೋಚನೆಗಳು ಹರಿದಾಡಿದವು. 

ಪ್ರತಿಯೊಬ್ಬರಿಗೂ ತಮ್ಮದೇ ಆದ ಆದ್ಯತೆಗಳಿರುತ್ತವೆ. ನಾವು ಯಾವುದನ್ನು ಯಾರ ಮೇಲೂ ಹೇರಬಾರದು ಮತ್ತು ನಿರೀಕ್ಷಿಸಲೂ ಬಾರದು. ನಮ್ಮ ಆತ್ಮಕ್ಕೆ ಮನಸ್ಸಿಗೆ ತೃಪ್ತಿಕೊಡಬೇಕು. ಮನಸ್ಸು ಮತ್ತು ಮೆದುಳಿಗೆ ಆಗ್ಗಾಗ್ಗೆ ಆಹಾರ ಕೊಡುತ್ತಿರಬೇಕು. ಮೆದುಳಿಗೆ ಆಹಾರವೆಂದರೆ, ಹೊಸ ಪುಸ್ತಕ, ಹೊಸ ಜನರ ಭೇಟಿ, ಮಾಹಿತಿಗಳು. ಮನಸ್ಸಿಗೆಯೆಂದರೆ, ಪ್ರೀತಿ ಪಾತ್ರರೊಂದಿಗೆ ಸಮಯ, ಹವ್ಯಾಸಗಳು. ಯಾವುದನ್ನು ಹೆಚ್ಚು ಅಂತರವಿರುವಂತೆ ಮಾಡಬಾರದು. ನಮ್ಮ ಹಾದಿಯನ್ನು ನಾವು ಆಗ್ಗಾಗ್ಗೆ ಪರೀಕ್ಷಿಸಿಕೊಳ್ಳುತ್ತಿರಬೇಕು. ಆ ಹಾದಿಯಲ್ಲಿ ಮತ್ತೊಮ್ಮೆ ಹೆಜ್ಚೆ ಇಟ್ಟಿದ್ದೇನೆ. 

ಗುರುಪಾದ ಬೇಲೂರುರವರ ದೇವರಕಾಡಿನ ಸುತ್ತಾಮುತ್ತಾ ಮತ್ತು ಒಳಗೆ ಹೊರಗೆ!!!!

                                                      
ಸುಮಾರು ವರ್ಷವೇ ಆಗಿತ್ತು, ಕಥೆ ಕಾದಂಬರಿ ಓದಿ. ಬಹುಶಃ ಕೆ. ನಲ್ಲತಂಬಿಯವರು ಅನುವಾದಿಸಿದ್ದ ತಮಿಳಿನ ಕಥೆಗಳನ್ನು ಓದಿದ ನಂತರ ಬೇರಾವ ಪುಸ್ತಕಗಳನ್ನು ಓದಿರಲಿಲ್ಲ. ಅಷ್ಟರಮಟ್ಟಿಗೆ ಸೋಮಾರಿತನ ಸವಾರಿ ಮಾಡಿ ಗೆದ್ದಿದೆ. ಆಫೀಸಿನಲ್ಲಿ, ಹೀಗೆ ಸಹದ್ಯೋಗಿಗಳೊಂದಿಗೆ ಮಾತನಾಡುವಾಗ ನಮ್ಮ ಸಂಸ್ಥೆಯ ಮುಖ್ಯಸ್ಥರಾದ ಶ್ರೀಯುತ ಗುರುಪಾದಸ್ವಾಮಿಯವರ ಸಾಹಿತ್ಯಾಸಕ್ತಿ ಮತ್ತು ಸಾಹಿತ್ಯ ಕೃಷಿಯ ಬಗ್ಗೆ ಮಾತು ಬಂತು. ಶ್ರೀಯುತರು, ಸಂಸ್ಥೆಯ ಎಲ್ಲರಿಗೂ ಪುಸ್ತಕ ನೀಡಿ, ಇದನ್ನು ಓದಿ ಪ್ರತಿಕ್ರಿಯಿಸಿ ಎಂದು ಕೇಳಿದ್ದರೆಂದು. ಅವರು ಪುಸ್ತಕ ನೀಡುವ ಸಮಯದಲ್ಲಿ ನಾನಿಲ್ಲದೇ ಇದ್ದುದ್ದರಿಂದ ಪುಸ್ತಕ ಸಿಗಲಿಲ್ಲ. ಪುಸ್ತಕವನ್ನು ಯಾರಾದರೂ ಓದಿದ್ದಾರಾ? ಹೇಗಿದೆ? ಎಂದು ತಿಳಿದುಕೊಳ್ಳುವ ಕುತೂಹಲವೂ ಹೆಚ್ಚಾಯಿತು. ಹೀಗೆ ಪ್ರಯಾಣ ಮಾಡುವಾಗ ಮೊಬೈಲಿನಲ್ಲಿ ಲೇಖಕರ ವೆಬ್‍ಸೈಟ್ ನೋಡಿದೆ. ಕೆಲವು ಕವನಗಳು ಇಷ್ಟವಾದವು. ಅವರು ಬರೆದಿರುವ ಕಥೆಗಳನ್ನು ಯಾಕೆ ಓದಬಾರದೆಂದು ನಿರ್ಧರಿಸಿ, ಫೀಲ್ಡ್ ಇಂದ ಬಂದೊಡನೆ, ಭೇಟಿ ಮಾಡಿ, ಸರ್, ತಾವು ಬರೆದಿರುವ ಪುಸ್ತಕ ಬೇಕಿತ್ತು ಎಂದೆ. ಹೌದಾ? ಯಾವುದು? ಎಂದರು. ನನಗೆ ಪುಸ್ತಕದ ಹೆಸರೇ ಗೊತ್ತಿಲ್ಲ. ಸರಿ, ಇಲ್ಲಿ ಇಲ್ಲ, ನಾಳೆ ತಂದು ಕೊಡುತ್ತೇನೆಂದರು. ನಾನು ಹೊರಗೆ ಬಂದೆ. 

ಅವರ ರೂಮಿನಿಂದ ಹೊರಗಡೆ ಬಂದಮೇಲೆ, ನನ್ನ ದಡ್ಡತನವನ್ನು ಎಲ್ಲಾ ಕಡೆಯೂ ಪ್ರದರ್ಶಿಸುತ್ತಿರುವುದರ ಬಗ್ಗೆ ಕೋಪ ಬಂತು. ನಾನೊಬ್ಬ ಸಾಹಿತ್ಯಾಸಕ್ತನಾಗಿ ಪುಸ್ತಕ ಕೇಳಿದ್ದರೂ, ಪುಸ್ತಕದ ಹೆಸರೇ ತಿಳಿಯದೇ ಒಬ್ಬ ಲೇಖಕರನ್ನು ಕೇಳಿದ್ದು ಎಷ್ಟರ ಮಟ್ಟಿಗೆ ಸರಿ? ಇದು, ಸಾಹಿತ್ಯ ಪ್ರೇಮಿಯಾಗಿ ಲೇಖಕರಿಗೆ ಮಾಡಿದ ಅವಮಾನವೆಂಬ ಗೊರಗು ಕೂಡ ಬಂತು. ನನ್ನ ಬಗ್ಗೆ ಏನು ತಿಳಿದುಕೊಂಡರೋ ಏನೋ ಎಂದು ಕೊರಗಿದೆ. ಅದೇನೇ ಇರಲಿ, ನನಗೆ ಪುಸ್ತಕ ಬೇಕು, ಅವರು ಏನು ಬರೆದಿದ್ದಾರೆ? ಹೇಗೆ ಬರೆದಿದ್ದಾರೆಂಬುದನ್ನು ತಿಳಿದುಕೊಳ್ಳಬೇಕು, ಮುಖ್ಯವಾಗಿ ಒಬ್ಬ ವಿಜ್ಞಾನ ಹಿನ್ನಲೆಯವರು ಅದರಲ್ಲಿಯೂ ಇಂಜಿನಿಯರ್ ಆದವರು, ಸರ್ಕಾರಿ ಹುದ್ದೆಯಲ್ಲಿ ಎತ್ತರದ ಸ್ಥಾನದಲ್ಲಿರುವವರು, ಬರೆಯುವುದಕ್ಕೆ ಬಿಡುವು ಹೇಗೆ? ಯಾವ ವಿಚಾರದ ¨ಗ್ಗೆ ಹೀಗೆ ಕೆಲಸವಿಲ್ಲದ ತಲೆಯೊಳಗೆ ನೂರೆಂಟು ತರ್ಲೆಗಳು ಶುರುವಾದವು. ಇದಾದ, ಕೆಲವು ದಿನಗಳ ನಂತರ, ನೀವು ಪುಸ್ತಕ ಕೇಳಿದ್ದೀರಿ ಅಲ್ವಾ? ಮರೆತುಬಿಟ್ಟೆ ಎಂದರು. ಕೆಲಸದ ಒತ್ತಡದಲ್ಲಿ ನೆನಪಿನಲ್ಲಿಡಲು ಸಾಧ್ಯವೇ, ನಾನು ಸುಮ್ಮನಾದೆ. 
ಮೊನ್ನೆ, ನಮ್ಮ ಆಫೀಸಿನ ಅಕೌಂಟ್ಸ್ ವಿಭಾಗದ ಸತೀಶನ ಜೊತೆ ಮಾತನಾಡುತ್ತ ಯಾವುದೋ ಫೈಲ್ ನೋಡುವಾಗ, ದೇವರ ಕಾಡು ಅವರ ಡ್ರಾಯರ್ ಅಲ್ಲಿದ್ದದ್ದು ಕಣ್ಣಿಗೆ ಬಿತ್ತು. “ರೀ, ಸತೀಶ್ ಆ ಪುಸ್ತಕ ತೆಗಿರಿ” ಎಂದೆ. “ಇದಾ ಸಾರ್?”, “ಹೌದು, ಅದೇ.” ಓದುತ್ತಿರಾ ಸಾರ್? “ನೋಡೋಣ ಕೊಡಿ,” ಎಂದೆ. ಇಲ್ಲಿ ಮತ್ತೊಂದು ಪ್ರಮುಖ ವಿಷಯವನ್ನು ಹೇಳಬೇಕು. ನಾನು ಬಹಳ ಗಮನಿಸಿರುವುದು, ಅನೇಕಾ ಸಂಸ್ಥೆಗಳಲ್ಲಿ, ನಮ್ಮ ವೈಯಕ್ತಿಕ, ಆಸೆಗಳೇನು? ಹವ್ಯಾಸಗಳೇನು? ಎಂಬುದರ ಮಾಹಿತಿಯನ್ನು ನಾವು ಹಂಚಿಕೊಂಡಿರುವುದಿಲ್ಲ, ಅವರು ಕೇಳಿರುವುದಿಲ್ಲ. ನನ್ನದೇ ವಿಚಾರವನ್ನು ಹೇಳಬೇಕೆಂದರೂ, ನನ್ನ ಸಾಹಿತ್ಯಾಸಕ್ತಿ, ನಾಟಕ, ಸಿನೆಮಾ, ಪ್ರವಾಸ, ಚಾರಣ, ಫೋಟೋಗ್ರಫಿ, ಸಂಗೀತ, ಜಾನಪದ, ಇತ್ಯಾದಿ ಇತ್ಯಾದಿ ಇದಾವುದೂ ತಿಳಿದಿಲ್ಲ ಅಥವಾ ತಿಳಿಸುವ ಅವಕಾಶವೂ ಸಿಕ್ಕಿರುವುದಿಲ್ಲ. ಇರಲಿ ವಿಷಯಕ್ಕೆ ಬರೋಣ. ಪುಸ್ತಕವನ್ನು ತಂದು ಮನೆಯಲ್ಲಿ ಓದಲು ಕುಳಿತೆ, ಹಿಂದಿನ ದಿನ ಹಬ್ಬದ ಪ್ರಯಾಣ, ಆಯಾಸದಿಂದಾಗಿ ಓದಲಾಗಲಿಲ್ಲ. ನಿದ್ದೆ ಹತ್ತಿತು. 

ಮಾರನೆಯ ದಿನ ಪುಸ್ತಕ ತೆಗೆದೆ. ನನ್ನದೊಂದು ಕೆಟ್ಟ ಅಭ್ಯಾಸವೆಂದರೇ, ಪುಸ್ತಕ ಓದಿಸಿಕೊಳ್ಳುವಂತಿದ್ದರೇ ಮಾತ್ರ ಓದುವುದು. ಇಲ್ಲದಿದ್ದರೇ ಬದಿಗಿಡುವುದು. ಇದು ಎಲ್ಲರಿಗೂ ಹೌದು ಎನಿಸುತ್ತದೆ. ಮೊದಲೇ ಹೇಳಿದಂತೆ, ನಾನು ಓದುವುದನ್ನೇ ಮರೆತು ಬಿಟ್ಟೆ ಎನ್ನುವ ಹಂತಕ್ಕೆ ತಲುಪಿದ್ದೇನೆ. ಈ ಪುಸ್ತಕ ಸುಮಾರು 190 ಪುಟಗಳಿವೆ, ಎಷ್ಟು ದಿನವಾಗಬಹುದು? ನೆಚ್ಚೆನ ಲೇಖಕರ ಪುಸ್ತಕಳನ್ನು ಕೂತಲ್ಲಿಂದ ಏಳದೇ ಓದಿದ ದಿನಗಳಿವೆ, ಸತತವಾಗಿ 10-12 ಗಂಟೆಗಳ ಕಾಲ ಅಲ್ಲಾಡದೇ ಓದಿದ ದಿನಗಳಿವೆ. ತೇಜಸ್ವಿಯವರ ಬಹುತೇಕ ಪುಸ್ತಕಗಳು ಅದರಲ್ಲಿಯೂ ಜುಗಾರಿ ಕ್ರಾಸ್, ಕಾರಂತರ ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು, ಅಳಿದ ಮೇಲೆ, ಹುಚ್ಚು ಮನಸ್ಸಿನ ಹತ್ತು ಮುಖಗಳು, ಕುವೆಂಪುರವರ ಮಲೆನಾಡಿನ ಚಿತ್ರಗಳು, ಹೆಗ್ಗಡತಿ, ಮದುಮಗಳು, ಭೈರಪ್ಪರವರ ದೂರ ಸರಿದರು, ದಾಟು, ರವಿ ಬೆಳಗೆರೆಯವರ ಹೇಳಿ ಹೋಗು ಕಾರಣ, ಯಂಡಮೂರಿಯವರ ಮುಂಗಾರಿನ ಮುಸ್ಸಂಜೆ, ಖುಷ್ವಂತ್ ಸಿಂಗ್‍ರ ದಿ ಕಂಪೆನಿ ವಿತ್ ವುಮೆನ್, ಟ್ರೈನ್ ಟು ಪಾಕಿಸ್ತಾನ್, ತರಾಸುರವರ ದುರ್ಗಾಮಸ್ತಾನ, ಹೀಗೆ ಹತ್ತು ಹಲವು ಇವೆ. ಹೊಸಬರ ಪುಸ್ತಕಗಳನ್ನು ಓದುವಾಗ ಅದೇನೋ ಒಂದು ರೀತಿಯ ಅಳುಕು ಬರುತ್ತದೆ. ನಾವೇನೂ ಬರೆದಿರುವುದಿಲ್ಲ, ಆದರೂ ಅವರೇನೂ ಬರೆದಿರುತ್ತಾರೆ ಮಹಾ ಎಂಬಂತೆ. ಆದರೂ, ಈ ಪುಸ್ತಕ ಬಹಳ ಚೆನ್ನಾಗಿಯೇ ಓದಿಸಿಕೊಂಡು ಹೋಯಿತು, ಸುಮಾರು 190 ಪುಟಗಳನ್ನು, ಕೇವಲ 5-6 ಗಂಟೆಗಳಲ್ಲಿ ಎರಡು ಹಂತಗಳಲ್ಲಿ ಓದಿ ಮುಗಿಸಿದೆ. 

ಪುಸ್ತಕದ ಮುನ್ನುಡಿಯನ್ನು ನೋಡಿದೆ. ಕೆಲವರು ಮಾತ್ರ ಪುಸ್ತಕವನ್ನು ಸಂಪೂರ್ಣವಾಗಿ ಗ್ರಹಿಸಿ ಅದಕ್ಕೆ ತಕ್ಕನಾಗಿ ಬರೆದಿರುತ್ತಾರೆ. ನಾನು ಬಹಳ ಪ್ರಮುಖವಾದ ವಿಷಯವನ್ನು ತಮ್ಮ ಮುಂದಿಡುತ್ತಿದ್ದೇನೆ. ನಾನು ಈ ತನಕ ಹತ್ತಾರು ಪುಸ್ತಕಗಳನ್ನು ಓದಿದ್ದರೂ, ಯಾವುದಕ್ಕೂ ವಿಮರ್ಶೆ ಬರದಿಲ್ಲ. ನನಗೆ ತಿಳಿದ ಅಥವಾ ಅನಿಸಿದ್ದನ್ನು ನನ್ನ ಸ್ನೇಹಿತರ ಜೊತೆಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದೇನೆ. ಬಹುತೇಕ, ನುಡಿಗಳು ಹೀಗಿರುತ್ತವೆ “ಓದಲೇ ಬೇಕಾದ ಕೃತಿ”, ಮಿಸ್ ಮಾಡಿಕೊಳ್ಳಬೇಡಿ ಎಂದು. ಆದರೇ, ಈ ಪುಸ್ತಕದ ಕುರಿತು ಸ್ವಲ್ಪ ಹೆಚ್ಚಿಗೆ ಮಾತನಾಡೋಣ ಎನಿಸಿತು. ಅದಕ್ಕೆ, ಮೂಲ ಕಾರಣ, ಲೇಖಕರು ನಮ್ಮ ಮುಖ್ಯಸ್ಥರೆಂಬುದು ಒಂದಾದರೇ, ಬರವಣಿಗೆಯ ಹಿಂದಿರುವ ಉದ್ದೇಶ ಮತ್ತೊಂದು. ಪುಸ್ತಕದಲ್ಲಿ, ಐದು ಕಥೆಗಳಿವೆ. ದೇವರ ಕಾಡು, ಡಾಲರ್ ಸಿಕ್ಕಿದ ಕಥೆ, ಅನಂತ, ಹೊನ್ನಂಗಿಡಿ, ಮಿಂಚಿನಬಳ್ಳಿ. ನಾನು ಗಮನಿಸಿದ ಒಂದಿಷ್ಟು ಅಂಶಗಳನ್ನು ತಮ್ಮ ಮುಂದಿಡುತ್ತಿದ್ದೇನೆ. ಇದನ್ನು ಎರಡು ರೀತಿಯಲ್ಲಿ ಹೇಳಬಹುದು, ಒಂದು ಒಟ್ಟಾರೆಯಾಗಿ ಲೇಖಕರು ಯಾವ ಹಿನ್ನಲೆಯಲ್ಲಿ, ಏನನ್ನು ಹೇಳಲು ಬಯಸಿದ್ದಾರೆ? ಮತ್ತೊಂದು, ಒಂದೊಂದು ಕಥೆಯಲ್ಲಿಯೂ ಯಾವುದೆಲ್ಲ ಅಂಶಗಳನ್ನು ನಮಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. 

ನಾನು ಎರಡೂ ರೀತಿಯಲ್ಲಿಯೂ, ವಿವರಿಸಲು ಪ್ರಯತ್ನಿಸುತ್ತೇನೆ, ಒಟ್ಟಾರೆಯಾಗಿ ಹೇಳಬೇಕೆಂದರೇ, ಲೇಖಕರು ಪರಿಸರದ ಜೊತೆಗೆ ಸಹಭಾಳ್ವೆಯಿರಬೇಕೆಂಬುದನ್ನು ಮತ್ತು ಪ್ರಕೃತಿಯಲ್ಲಿ ಸಮತೋಲನ ಕಾಪಾಡುವ ಕಾರ್ಯ ನಿರಂತರವಾಗಿದೆ, ನಾವು ಹಿರಿಯರಿಂದ ಬಂದಿರುವುದನ್ನು ಮುಂದುವರೆಸುತ್ತಾ ಹೋಗಬೇಕೇ ಹೊರತು, ಪ್ರಕೃತಿಯನ್ನೇ ಬದಲಾಯಿಸುತ್ತೇನೆಂದಲ್ಲ ಎಂಬ ತರ್ಕವನ್ನು ಅಚ್ಚುಕಟ್ಟಾಗಿ ಬಿಂಬಿಸಿದ್ದಾರೆ. ಅದರ ಜೊತೆಗೆ, ಪ್ರೀತಿಯನ್ನು ಹಂಚಬೇಕೆಂಬುದು, ಪ್ರೀತಿ ಹಂಚಿದಷ್ಟೂ ಹೆಚ್ಚೆಚ್ಚೂ ಸಿಗುತ್ತದೆಯೆಂಬುದನ್ನು ತಿಳಿಸಿದ್ದಾರೆ. ಅಚ್ಚರಿಯ ವಿಷಯವೆಂದರೇ, ಮೊದಲನೇ ಕಥಾಸಂಕಲನದಲ್ಲಿ ಐದು ಕಥೆಗಳು ವಿಭಿನ್ನಾ ಮಾದರಿಯಲ್ಲಿರುವುದು. 

ದೇವರ ಕಾಡಿನಲ್ಲಿ, ಸಾಹಸಮಯ, ಸಮಾಜಮುಖಿಯ ಆಶಯಗಳಿದ್ದರೆ. ಡಾಲರ್ ಸಿಕ್ಕ ಕಥೆಯಲ್ಲಿ, ಹಾಸ್ಯಪ್ರಜ್ಞೆ ಎದ್ದು ಕಾಣುತ್ತದೆ, ಹಾಸ್ಯದಿಂದಲೇ ನೀತಿಯನ್ನು ರವಾನಿಸಿರುವುದು ಮೆಚ್ಚುಗೆಯಾಗುತ್ತದೆ. ಅನಂತದಲ್ಲಿ ವೈಜ್ಞಾನಿಕತೆಯ ಜೊತೆಗೆ ಸಾಂಪ್ರಾದಾಯಿಕತೆಯನ್ನು ಜೋಡಿಸಿರುವ ರೀತಿ ಅಚ್ಚರಿಯ ಜೊತೆಗೆ ಯಾವುದೋ ಬೇರೆ ಜಗತ್ತಿನಿಂದ ಭೂಮಿಯನ್ನು ನೋಡುವ ಕಾಲ್ಪನಿಕ ಜಗತ್ತನ್ನು ಕೊಡುತ್ತದೆ. ಹೊನ್ನಂಗಿಡಿ, ನಮ್ಮ ಬಾಲ್ಯವನ್ನು, ನಮ್ಮ ಸಂಸ್ಕøತಿ, ಸಂಪ್ರದಾಯವನ್ನು ಸೂಚಿಸಿ, ಭಾವನಾತ್ಮಕತೆಗೆ ದೂಡುತ್ತದೆ. ಕೊನೆಯದಾಗಿ, ಮಿಂಚಿನಬಳ್ಳಿ ಸಸ್ಪೆನ್ಸ್ ಕಥೆಯೆಂದರೂ ತಪ್ಪಿಲ್ಲ, ಜಿಎಂ, ಬಿಟಿ ವಿಚಾರಗಳನ್ನು ಇಟ್ಟುಕೊಂಡು ಅಲ್ಲೊಂದು ನಿಗೂಢತೆಯನ್ನು ಕಾಪಾಡುತ್ತಾ ಹೋಗುವುದು ಓದುಗನನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದೆಲ್ಲದರ ಹಿಂದಿರುವ ಪರಿಸರ ಕಾಳಜಿಗೆ ಧನ್ಯವಾದಗಳು. ಓದಲೇಬೇಕಾದ ಪುಸ್ತಕವೆನ್ನುವುದಕ್ಕಿಂತ ಬೇರೆ ಆಯಾಮದಲ್ಲಿ ಮಂಡನೆಯಾಗಿರುವುದು ಸಂತಸ. ತಮ್ಮ ಮುಂದಿನ ಎಲ್ಲಾ ಸಾಹಿತ್ಯ ಕೃಷಿಗಳಿಗೂ ಶುಭವಾಗಲಿ ಸರ್. 

29 ಮೇ 2018

ಪರಿಸರ ಸಂರಕ್ಷಣೆ: ಅವೈಜ್ಞಾನಿಕ ಪರಿಸರವಾದಿ ಮತ್ತು ತೋರಿಕೆಯ ಪರಿಸರ ಪ್ರೇಮಿಗಳಿಂದ ನರಳುತ್ತಿರುವ ಪರಿಸರ ವ್ಯವಸ್ಥೆ!!!



ನಮಸ್ಕಾರ ಸ್ನೇಹಿತರೇ,
ಶೀರ್ಷಿಕೆಯನ್ನು ಗಮನಿಸಿದಾಗಲೇ ತಮಗೆ ನನ್ನ ಲೇಖನದ ತಿರುಳು ತಿಳಿದಿರುತ್ತದೆ. ನಾನು ಇದನ್ನು ಬಹಳ ಆಕ್ರೋಶ ಮತ್ತು ಕೋಪದಿಂದಲೇ ಬರೆಯುತ್ತಿದ್ದೇನೆ. ಇತ್ತಿಚಿನ ದಿನಗಳಲ್ಲಿ ಎಲ್ಲವೂ ಟ್ರೆಂಡ್ ಆಗುತ್ತದೆ. ರಾತ್ರಾರಾತ್ರಿ ಹೀರೋಗಳಾಗುತ್ತಾರೆ, ಜನಪ್ರಿಯರಾಗುತ್ತಾರೆ, ಜನಪ್ರಸಿದ್ದೀಯ ಉತ್ತುಂಗಕ್ಕೂ ಹೋಗುತ್ತಾರೆ. ಇದು ಎಲ್ಲಾ ಕ್ಷೇತ್ರದಲ್ಲಿಯೂ ಅದರಲ್ಲಿ ಭಾರತದಲ್ಲಿ ಆಗುತ್ತಿರುವ ಮಾರಕ ಪ್ರಕ್ರಿಯೆ. ಮಾರಕ ಎನ್ನುವ ಪದಬಳಕೆಯ ಉದ್ದೇಶವಿದೆ. ಯಾವುದು ದಿಡೀರ್ ಪ್ರಸಿದ್ದಿಯಾಗಬಾರದು ಅದು ಹೆಚ್ಚು ಕಾಲ ಉಳಿಯುವುದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಗಮನಿಸಿನೋಡಿ, ಕೆಲವರು ಇದ್ದಕ್ಕಿದ್ದಂತೆ ಪ್ರಸಿದ್ದಿಯಾದರು, ಸಿನೆಮಾ, ಕಿರುತೆರೆ, ರಿಯಾಲಿಟಿ ಶೋ, ಸಾರ್ವಜನಿಕ ಕ್ಷೇತ್ರ, ಕ್ರಿಕೇಟ್, ರಾಜಕೀಯ, ಪರಿಸರ ಸಂರಕ್ಷಣೆ, ರೈತ ಹೋರಾಟ, ಧರ್ಮ, ಜಾತಿ, ಭಾಷೆ, ರಾಜ್ಯ, ದೇಶ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಅಷ್ಟೆ. ಅವರೆಲ್ಲರ ಮುಖ ನಿಧಾನವಾಗಿ ಬದಲಾಗುತ್ತಾ ಹೋಯಿತು, ಕೆಲವರು ತೆರೆಮರೆಗೆ ತೆರಳಿದರು, ಆದರೇ ಅವರು ಮಾಡಿದ ಹಾನಿ? ಅದನ್ನು ತುಂಬಲು ಸಾಕಷ್ಟು ವರ್ಷ ಬೇಕಾಗುತ್ತದೆ ಮತ್ತು ಇವರಿಂದ ಪ್ರೇರೇಪಿತರಾಗಿರುವ ಎರಡನೆಯ ದರ್ಜೆಯ ನಾಯಕರು ಇನ್ನುಷ್ಟು ಹಾಳು ಮಾಡುತ್ತಾರೆ. 


ಸದ್ಯಕ್ಕೆ ಜೂನ್ ಐದು ಹತ್ತಿರವಿರುವುದರಿಂದ ಪರಿಸರ ಸಂರಕ್ಷಣೆಯಲ್ಲಿ ಈ ಮಹಾನುಭಾವರು ಮಾಡಿರುವ ಯಡವಟ್ಟುಗಳನ್ನೊಮ್ಮೆ ನೋಡೋಣ. ಅದಕ್ಕೂ ಮುಂಚೆ ಪರಿಸರ ಮತ್ತು ಪರಿಸರ ವ್ಯವಸ್ಥೆ ಕುರಿತು ಕೆಲವೊಂದು ಸರಳ ವಿಚಾರಗಳನ್ನು ತಿಳಿದುಕೊಳ್ಳೋಣ. ಪರಿಸರವೆಂದರೇನು? ಪರಿಸರ ವ್ಯವಸ್ಥೆಯೆಂದರೇನು? ನಮ್ಮ ಸುತ್ತು ಮುತ್ತಲಿರುವ ಜೀವವಿರುವ ಮತ್ತು ಇಲ್ಲದೇಯಿರುವ ಎಲ್ಲವನ್ನೂ ಸೇರಿಸಿ ಪರಿಸಅರವೆನ್ನುತ್ತೇವೆ. ಅಂದರೇ, ಮುಗಿಯಿತು ಇಲ್ಲಿಗೆ ನಿಮಗೆ ಇಷ್ಟವಿರಲಿ ಇಲ್ಲದೇಯಿರಲಿ, ಸುತ್ತ ಮುತ್ತವಿರುವ ಎಲ್ಲವೂ ಪರಿಸರದ ಅಂಗ. ಅದರಂತೆಯೇ ಪರಿಸರ ವ್ಯವಸ್ಥೆಯೆಂದರೇನು? ಅಲ್ಲಿ ಏನು ನಡೆಯುತ್ತದೆ? ಪರಿಸರದಲ್ಲಿ ಒಂದು ವ್ಯವಸ್ಥೆಯಿದೆ, ಅದರಲ್ಲಿ ಜೀವವಿರುವ ಜೀವಿಗಳ ನಡುವೆ, ಮತ್ತು ಜೀವವಿಲ್ಲದೇಯಿರುವ ವಸ್ತುಗಳ ನಡೆಯುವ ಚಟುವಟಿಕೆಗಳೆಲ್ಲವನ್ನೂ ಸೇರಿಸಿಕೊಂಡು ಪರಿಸರ ವ್ಯವಸ್ಥೆಯೆನ್ನಲಾಗಿದೆ. ಇದರಲ್ಲಿಯೂ ಅಷ್ಟೇ ಎಲ್ಲವೂ ಸೇರುತ್ತವೇ, ಸೇರಲೇಬೇಕು. ಇನ್ನೂ ನೇರವಾಗಿ ನಿಮಗೆ ಹೇಳಬೇಕೆಂದರೆ ಈ ಸೃಷ್ಟಿಯಲ್ಲಿರುವ ಪ್ರತಿಯೊಂದು ಬೇಕೆ ಬೇಕು ಮತ್ತು ಯಾವುದನ್ನೂ ನಿರ್ಲಕ್ಷಿಸುವಂತಿಲ್ಲ, ಜೀವವಿರಲಿ ಇಲ್ಲದೇಯಿರಲಿ ಎಲ್ಲದರ ಪಾತ್ರವೂ ಇದೆ. ಇದನ್ನು ನಾವು ಪಾಲಿಸುತ್ತಿದ್ದೇವಾ? ನಾವೇನು ಮಾಡುತ್ತಿದ್ದೇವೆನ್ನುವುದನ್ನು ಅವಲೋಕಿಸೋಣ.


ಇತ್ತಿಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಅಂತರಾಷ್ಟ್ರೀಯ ದಿನಗಳಿವೆ. ಅವುಗಳು ದಿನ ದಿನಕ್ಕೂ ಹೆಚ್ಚೆಚ್ಚು ಪ್ರಸಿದ್ದಿಯಾಗುತ್ತಿವೆ. ಅದರಲ್ಲಿ ಒಂದು ವಿಶ್ವ ಪರಿಸರ ದಿನ. ವಿಶ್ವ ಪರಿಸರ ದಿನದ ಉದ್ದೇಶವೊಂದೆ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಜನರಿಗೆ ತಲುಪಿಸುವುದು, ಅದಕ್ಕಾಗಿ ವರ್ಷಕ್ಕೊಂದು ವಿಷಯವನ್ನಿಟ್ಟುಕೊಂಡು ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಆದರೇ ಭಾರತದಲ್ಲಿ ಆಗುತ್ತಿರುವ ಬೆಳವಣಿಗೆಗಳು ಅಚ್ಚರಿ ಮತ್ತು ಆತಂಕವನ್ನುಂಟು ಮಾಡುತ್ತಿವೆ. ನೀವು ಹಾಗೆಯೇ ಗಮನಿಸಿ ಪರಿಸರವೆಂದರೆ ಬಹುತೇಕರ ಬಾಯಲ್ಲಿ ಬರುವುದು ಗಿಡ ನೆಡುವುದು, ಮರ ಬೆಳೆಸುವುದು. ಇದರಿಂದ ಆಚೆಗೆ ಮಾತನಾಡುವವರು ಬಹಳ ಕಡಿಮೆ. ಅರಣ್ಯ ಇಲಾಖೆ ಸೇರಿದಂತೆ ಅನೇಕರು ಕೋಟಿ ಕೋಟಿ ಗಿಡಗಳನ್ನು ನೆಡುತ್ತಿದ್ದೇವೆ ಎನ್ನುತ್ತಿದ್ದಾರೆ, ಇವುಗಳನ್ನು ಅನೇಕ ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ ಮತ್ತು ಅವರು ನೆಟ್ಟಿದ್ದಾರೆ. ಪ್ರತಿ ವರ್ಷಕ್ಕೂ ಕೋಟಿ ಗಿಡಗಳನ್ನು ನೆಟ್ಟಿದ್ದಾದರೇ ನಮ್ಮ ರಾಜ್ಯ ಸಂಪೂರ್ಣ ಕಾಡಾಗಬೇಕಿತ್ತು ಅಲ್ವಾ? ನೆಟ್ಟ ಗಿಡಗಳೆಲ್ಲಿ? ಪರಿಸರ ದಿನದಂದು ಗಿಡಗಳನ್ನು ನೆಟ್ಟು ಆ ಕಡೆಗೆ ತಿರುಗಿಯೂ ನೋಡದ ಅದೆಷ್ಟೋ ಪರಿಸರವಾದಿಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಒಂದೊಂದು ಗಿಡವನ್ನು ಅರಣ್ಯ ಇಲಾಖೆಯ ನರ್ಸರಿಯಲ್ಲಿ ಬೆಳೆಸಲು ಕನಿಷ್ಠ ಒಂದು ವರ್ಷ ಕಷ್ಟಪಟ್ಟಿರುತ್ತಾರೆ, ಆ ಸಸಿಗಳನ್ನು ಸಬ್ಸಿಡಿ ರೂಪದಲ್ಲಿ ಮಾರಲಾಗುತ್ತದೆ. ಖಾಸಗಿ ನರ್ಸರಿಯಲ್ಲಿ 50-60 ರೂಪಾಯಿಗೆ ಮಾರುವ ಗಿಡಗಳನ್ನು ಇಲಾಖೆಯು ಕೇವಲ 5-10 ರೂಪಾಯಿಗಳಿಗೆ, ಕೆಲವೊಮ್ಮೆ ಉಚಿತವಾಗಿಯೇ ನೀಡುತ್ತಿದೆ. ಸಸಿ ಬೆಳೆಸಲು ಹಾಕಿದ ವೆಚ್ಚ ಯಾರ ಹಣ?


ಮೇಲಿನ ಸಾಲುಗಳ ಅರ್ಥವಿಷ್ಟೆ, ಗಿಡ ನೆಡುವುದು ಮುಖ್ಯವಲ್ಲ ಅದರ ಬಗ್ಗೆ ಎಚ್ಚರಿಕೆ ವಹಿಸಿ ಬೆಳೆಸುವುದು ಮುಖ್ಯ. ಪ್ರತಿವರ್ಷ ತೋರಿಕೆಯ ಪರಿಸರಪ್ರೇಮವನ್ನು ನಿಲ್ಲಿಸಬೇಕು. ಅದಲ್ಲದೆ ಪರಿಸರವೆಂದರೇ ಕೇವಲ ಮರಗಳು ಮಾತ್ರವಲ್ಲ ಎನ್ನವುದನ್ನು ಅರಿಯಬೇಕು. ಇದರಲ್ಲಿಯೇ ಇನ್ನೊಂದನ್ನು ಗಮನಿಸೋಣ, ವೈಜ್ಞಾನಿಕವಾಗಿ. ಒಂದು ಕೋಟಿ ಗಿಡಗಳನ್ನು ನೆಡುತ್ತೀರೆಂದೇ ಪರಿಗಣಿಸೋಣ, ನೀವು ಎಲ್ಲಿ ನೆಡುತ್ತಿದ್ದೀರಿ? ಅಷ್ಟು ಜಾಗವೆಲ್ಲಿದೆ? ಜಾಗ ಸಿಕ್ಕಿತ್ತೆನ್ನೋಣ, ಅದಕ್ಕೆ ನೀರೆಲ್ಲಿಂದ? ಕುಡಿಯುವುದಕ್ಕೆ ನೀರಿಲ್ಲವೆಂದು ಪರದಾಡುತ್ತಿರುವಾಗ ಮರ ಬೆಳೆಸಲು ನೀರನ್ನು ಎಲ್ಲಿಂದ ತರುತ್ತೀರಿ? ನೀವು ನೆಡುತ್ತಿರುವ ಸಸಿಗಳಾವು? ಯಾವ ಜಾತಿಯವು? ಯಾವುದು ನರ್ಸರಿಯಲ್ಲಿ ಸಿಗುತ್ತದೆಯೋ ಅದನ್ನು ನೀವು ತಂದು ನೆಡುತ್ತಿರಿ, ಅದು ಆ ವಾತಾವರಣಕ್ಕೆ ಹೊಂದುತ್ತದೆಯೇ? ಗೊತ್ತಿಲ್ಲ. 


ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹುಚ್ಚಾಟದ ಅತಿರೇಕದಲ್ಲಿರುವ ಎರಡು ವಿಷಯಗಳು. ಮೊದಲನೆಯದಾಗಿ ಕೆಲವರು ಸಂದೇಶಗಳನ್ನು ಕಳುಹಿಸುತ್ತಾರೆ, ನೀವು ತಿನ್ನುವ ಹಣ್ಣಿನ ಬೀಜಗಳನ್ನು ಎಸೆಯಬೇಡಿ, ಮಳೆಗಾಲದಲ್ಲಿ ನೀವು ಹೊರಗೆ ಹೋದಾಗ ಎಸೆಯಿರಿ, ಅವುಗಳು ಮರಗಳಾಗುತ್ತವೆ, ಎಂಥಹ ಮೂರ್ಖತನದ ಪರಮಾವಧಿ? ಯಾವ ಬೀಜ ಎಲ್ಲಿ ಮೊಳಕೆಯಾಗುತ್ತದೆ? ಯಾವ ಜಾಗದಲ್ಲಿ ಬೆಳೆಯಬೇಕು? ಎನ್ನುವ ಕನಿಷ್ಠ ಜ್ಞಾನವೂ ಇಲ್ಲವೆ? ಎರಡನೆಯ ವಿಷಯ, ಸೀಡ್‍ಬಾಲ್. ಈ ಪದವನ್ನು ಕೇಳಿದರೆ ನನಗೆ ಮೈಯೆಲ್ಲಾ ಕುದಿಯುತ್ತದೆ. ಏನಿದು ಸೀಡ್‍ಬಾಲ್? ಎಂದು ತಿಳಿಯೋಣ. ಯಾವುದೋ ಜಾತಿಯ ಮರಗಳ ಬೀಜಗಳನ್ನು ಸಂಗ್ರಹಿಸಿ, ಅದಕ್ಕೆ ಮಣ್ಣು/ಗೊಬ್ಬರದ ಸಹಾಯದಿಂದ ಉಂಡೆಮಾಡಿಕೊಳ್ಳುವುದು, ಮುಂಗಾರು ಶುರುವಾದಾಗ ಖಾಲಿ ಜಾಗಕ್ಕೆ ತೆರಳಿ ಎಸೆಯುವುದು. ಎಸೆದಾಗ ಅವುಗಳೆಲ್ಲವು ಬೆಳೆದು ಮರವಾಗುವುದೆಂಬುದು ಇವರ ನಂಬಿಕೆ. ಇದನ್ನು ವೈಜ್ಞಾನಿಕವಾಗಿ ನೋಡೋಣ. ಮೊದಲನೆಯದಾಗಿ ಯಾವ ಜಾತಿಯ ಬೀಜಗಳಿವು? ಯಾವುದೋ ಜಾತಿಯವು. ಇವುಗಳನ್ನು ಖಾಲಿ ಜಾಗದಲ್ಲಿ ಎಸೆಯುತ್ತಾರೆ. ಈ ಖಾಲಿ ಜಾಗ ಇದಕ್ಕೂ ಮುಂಚೆ ಏನಾಗಿತ್ತು? ಪ್ರಕೃತಿಯಲ್ಲಿ ಕೆಲವು ಜಾಗಗಳು ಬರಡಾಗಿಯೇ ಇರಬೇಕು. ಬರಡು ಪ್ರದೇಶವನ್ನು ಹಸಿರು ಪ್ರದೇಶವಾಗಿಸುತ್ತೇವೆಂದರೆ ಏನರ್ಥ? ಮಲೆನಾಡನ್ನು ಬಯಲು ಸೀಮೆ ಮಾಡಿದರೆ ಎಷ್ಟು ಅಪಾಯವೋ ಅಷ್ಟೆ ಅಪಾಯ, ಬರಡು ಪ್ರದೇಶವನ್ನು ಹಸಿರು ಪ್ರದೇಶವನ್ನಾಗಿಸುವುದು. ಮರ ಬೆಳೆಸುತ್ತೇನೆಂಬ ಹುಂಬತನದಿಂದ ಎಲ್ಲೆಂದರಲ್ಲಿ ಸಿಕ್ಕಿ ಸಿಕ್ಕಿದ ಜಾತಿಯ ಮರಗಳನ್ನು ಹಾಕಿದರೆ ಅಲ್ಲಿನ ಪರಿಸರದ ಮೇಲೆ ಎಂಥಹ ವ್ಯತಿರಿಕ್ತ ಪರಿಣಾಮ ಬೀರುವುದು ಆಲೋಚಿಸಿ. 


ನೀವು ಯಾವುದಾದರೂ ನಿಸರ್ಗದತ್ತ ಕಾಡನ್ನು ನೋಡಿ, ಅದನ್ನು ಗಮನಿಸಿ. ನೀವುಗಳು ಚಾರಣಿಗರಾದರೇ ಅದರ ಅನುಭವವಿರುತ್ತದೆ. ಇಲ್ಲದೇ ಇದ್ದರೂ ನಾನು ಅದನ್ನು ವಿವರಿಸುತ್ತೇನೆ. ಕಾಡಿನಲ್ಲಿ ಒಂದೇ ರೀತಿಯ ಮರಗಳಿರುವುದಿಲ್ಲ, ಅದಿದ್ದರೆ ಅದನ್ನು ಕಾಡು ಎನ್ನುವುದಿಲ್ಲ, ನೆಡುತೋಪು ಎನ್ನಬೇಕು. ಪ್ರತಿ ಕಾಡಿನಲ್ಲಿಯೂ ಸಣ್ಣ ಪುಟ್ಟ ಗಿಡಗಳು, ಪೊದೆಗಳು ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುತ್ತವೆ. ಮರಗಳು ಹೆಚ್ಚಾದರೆ ನೆರಳು ಹೆಚ್ಚಾದರೆ ಅದೆಷ್ಟೋ ಜಾತಿಯ ಗಿಡಗಳು ಬರುವುದಿಲ್ಲ.  ಅದರಂತೆಯೇ ಪ್ರತಿಯೊಂದು ಕಾಡಿನ ತುತ್ತ ತುದಿಯನ್ನು ನೋಡಿ, ಅಲ್ಲೆಲ್ಲಾ ಹುಲ್ಲುಗಾವಲಿರುತ್ತದೆ. ಕೆಲವು ಪ್ರಾಣಿಗಳಿಗೆ ಹುಲ್ಲು ಬೇಕು, ಕೆಲವಕ್ಕೆ ಹಣ್ಣು ಬೇಕು, ಕೆಲವಕ್ಕೆ ಆ ಪ್ರಾಣಿಗಳೇ ಬೇಕು. ಇದು ಪ್ರಕೃತಿಯ ನಿಯಮ. ವೈವಿಧ್ಯತೆಯಿಂದರಬೇಕು. ಅಂತಹ ಪರಿಸರವನ್ನು ನೀವುಗಳು ಒಂದೇ ಜಾತಿಯ ಬೀಜಗಳನ್ನು ಎಸೆದು ಹಾಳು ಮಾಡುತ್ತಿರುವುದು ನಿಮಗೆ ತಿಳಿಯುತ್ತಿಲ್ಲವೇ? ಆದರೇ, ನಾನು ಗಮನಿಸಿದಂತೆ, ಕೆಲವು ಭಾಗದಲ್ಲಿ ಅದರಲ್ಲಿಯೂ ಸಿರಸಿಯ ನಮ್ಮ ಸ್ನೇಹಿತರಾದ ಉಮಾಪತಿ ಭಟ್ಟರು, ಅಲ್ಲಿನ ಕಾಡಿನಲ್ಲಿ ನಶಿಸುತ್ತಿರುವ ಪ್ರಭೇಧಗಳ ಬೀಜಗಳನ್ನು ಆಯ್ದು ತಂದು ಸೀಡ್‍ಬಾಲ್ ಮಾಡಿ ನಿಯಮಿತವಾಗಿ ಅದೇ ಕಾಡಿಗೆ ಎಸೆಯುತ್ತಿದ್ದಾರೆ. ಇದನ್ನು ನಾನು ಸಂಪೂರ್ಣವಾಗಿ ಬೆಂಬಲಿಸದೇ ಇದ್ದರೂ ಅವರಲ್ಲಿ ಸ್ವಲ್ಪವಾದರೂ ವೈಜ್ಞಾನಿಕ ಪ್ರಜ್ಞೆಯಿರುವುದು ನೆಮ್ಮದಿಯ ವಿಷಯ. ಆದರೇ ಬಹುತೇಕರು ಮಾಡುತ್ತಿರುವುದು ಮಾತ್ರ ಮಾರಕ.


ಇದೇ ರೀತಿಯ ಇನ್ನೊಂದಿಷ್ಟು ಉದಾಹರಣೆಗಳನ್ನು ಮಾತ್ರ ನೀಡುತ್ತೇನೆ. ಅದರ ಕುರಿತು ವಿವರವಾಗಿ ಮತ್ತೊಮ್ಮೆ ಚರ್ಚಿಸೋಣ. ನೀವು ಗಮನಿಸಿರುವ ಹಾಗೆ ಎಲ್ಲೆಂದರಲ್ಲಿ ಮಳೆ ನೀರು ಕೊಯ್ಲು ಮಾಡಿಸುವುದು. ಎಲ್ಲಿ ಮಾಡಿಸುವುದು ಸೂಕ್ತ ಎನ್ನುವ ಪರಿಜ್ಞಾನವೇ ಇಲ್ಲದೆ ಮಾಡಿಸುವುದು, ಅದರಂತೆಯೇ ಚೆಕ್‍ಡ್ಯಾಮ್‍ಗಳು, ಕೃಷಿ ಹೊಂಡ ಇವುಗಳು ಯಾವ ವಾತಾವರಣಕ್ಕೆ ಬೇಕು, ಎಲ್ಲಿಗೆ ಬೇಡ ಎನ್ನುವುದನ್ನೆ ಆಲೋಚಿಸದೆ ನಿರ್ಮಿಸುವುದು. 

ಕೊನೆಹನಿ: ಇದಕ್ಕೆಲ್ಲಾ ಮೂಲ ಕಾರಣ ಸೋಗಿನ ಪರಿಸರ ಪ್ರೇಮ ಮತ್ತು ಪ್ರಚಾರಕ್ಕಾಗಿ ಮಾಡುವ ಪರಿಸರ ಸಂರಕ್ಷಣೆ. ವೈಜ್ಞಾನಿಕವಾಗಿ ಪರಿಸರವನ್ನು ಕಾಣಲಾಗದೆ ಇರುವುದು. ಭಾರತದ ಮಟ್ಟಿಗೆ ಪರಿಸರ ಸಂರಕ್ಷಣೆ ನಮ್ಮ ಜೀವನದ ಅಂಗವಾಗಿದ್ದ ಸಂಪ್ರದಾಯ ನಮ್ಮದು. ಇದನ್ನು ಮೂರ್ನಾಲ್ಕು ಸಾಲುಗಳಲ್ಲಿ ಹೇಳುತ್ತೇನೆ. ಮೂವತ್ತು ವರ್ಷ ಹಿಂದಕ್ಕೆ ಹೋಗಿ, ಮನೆಯಲ್ಲಿ ದನ ಕರುಗಳಿದ್ದವು, ಯಾವುದೇ ಆಹಾರ ಉಳಿದರು ದನಕರುಗಳಿಗೆ ಕಲಗಚ್ಚಾಗುತ್ತಿತ್ತು, ಸೀಮೆ ಗೊಬ್ಬರದ ಮಾತಿಲ್ಲ, ಸಗಣಿ ಗೊಬ್ಬರ, ಔಷಧಿ ಎನ್ನುವಂತೆಯೆ ಇರಲಿಲ್ಲ, ಮನೆಯ ಹಿಂದೆ ನುಗ್ಗೆ ಮರ, ಮುಂದಕ್ಕೆ ತೊಂಡೆ ಚಪ್ಪರ, ಪಾತ್ರೆ ತೊಳೆದ ನೀರು ಬಾಳೆ ಮರ, ನಮ್ಮ ತರಕಾರಿ ನಮ್ಮಲ್ಲಿಯೇ ಬೆಳೆಯುತ್ತಿದ್ದವು. ಸ್ನಾನ ಮಾಡಿದ ನೀರು ಕೂಡ ಯಾವುದೋ ಒಂದು ಗಿಡಕ್ಕೆ ಹೋಗುತ್ತಿತ್ತು, ಸೋಪು ಕಡಿಮೆಯಿತ್ತು ಸೀಗೆಕಾಯಿ ಹೆಚ್ಚಿತ್ತು, ಬಟ್ಟೆ ತೊಳೆಯುವುದಕ್ಕೆ ನದಿ ದಂಡೆ, ಎಲ್ಲರೊಂದಿಗೂ ಮಾತುಕತೆ, ಒಣಗಿಸುವುದಕ್ಕೆ ಸೂರ್ಯನ ಬೆಳಕು ಹೀಗಿತ್ತು ಬದುಕು. ಈಗೇನಾಯ್ತು? ಎನ್ನುವುದು ನಿಮಗೆ ಗೊತ್ತಿದೆ. 

ಪರಿಸರ ದಿನ, ಪರಿಸರ ಸಂರಕ್ಷಣೆಯೆಂದರೆ ಕೇವಲ ಗಿಡ ನೆಡುವುದು ಮಾತ್ರವಲ್ಲ ಅವೈಜ್ಞಾನಿಕವಾಗಿ ಮಾಡುವುದೂ ಅಲ್ಲ ಎನ್ನುವುದಕ್ಕೆ ಈ ನನ್ನ ಮಾತುಗಳು. ನಿಮಗೆ ಯಾವುದೇ ಬಿನ್ನಾಭಿಪ್ರಾಯಗಳಿದ್ದರೂ ನೀವು ನನ್ನೊಂದಿಗೆ ಚರ್ಚಿಸಬಹುದು. ಸುಳ್ಳು ಪರಿಸರವಾದಿಗಳ ಬಗ್ಗೆ ಎಚ್ಚರವಿರಲಿ, ಇವರು ರಾಜಕಾರಣಿಗಳಂತೆಯೇ ಮಾರಕ. 

28 ಮೇ 2018

ಕೇವಲ ಅನುದಾನಕ್ಕಾಗಿ ಸಂಶೋಧನ ಸಂಸ್ಥೆಗಳು ಮತ್ತು ಹೆಸರಿಗಾಗಿ ಗುಂಪುಗಾರಿಕೆ !!!


ನಮಸ್ಕಾರ ಸ್ನೇಹಿತರೆ,
ಇದೊಂದು ಲೇಖನವನ್ನು ಸಾಕಷ್ಟು ವರ್ಷಗಳಿಂದ ಬರೆಯಲೇಬೇಕೆಂದಿದ್ದವನು ನಾನು. ಅದಕ್ಕೆ ಈಗ ಸಮಯ ಕೂಡಿಬಂದಿದೆ. ಅನೇಕರಿಗೆ ಸಂಶೋಧನೆ ಹೇಗೆ ನಡೆಯುತ್ತದೆ ಅದರ ಮಾನದಂಡಗಳೇನು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಇರುವುದಿಲ್ಲ. ಆದ್ದರಿಂದ ಈ ಲೇಖನ ದೀರ್ಘವಾದರೂ ಅನುಸರಿಸಿಕೊಂಡು ಓದಬೇಕಾಗಿ ವಿನಂತಿ. ನಾನು ಈ ಲೇಖನವನ್ನು ಕೆಲವು ಸಂಸ್ಥೆಗಳ ಮತ್ತು ಕೆಲವು ಸಂಶೋಧಕರನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯುತ್ತಿದ್ದರೂ ಅವರುಗಳ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ನಿಮಗೆ ಈ ರೀತಿಯ ಸಂಶೋಧಕರು ಹಾದಿ ಬೀದಿಯಲ್ಲಿಯೂ ಸಿಗುವ ಕಾಲ ಒದಗಿಬಂದಿದೆ. ಇರಲಿ ಅದೆಲ್ಲವನ್ನೂ ವಿವರವಾಗಿ ತಿಳಿಸುತ್ತೇನೆ. ಈ ಲೇಖನವನ್ನೂ ಯಾವ ಹಿನ್ನಲೆಯಲ್ಲಿ ಓದಬೇಕೆನ್ನುವುದನ್ನು ತಿಳಿಸುತ್ತೇನೆ. ಅದೇ ರೀತಿ ಇದನ್ನು ಬೇರೆ ಬೇರೆ ಭಾಗಗಳಾಗಿ ವಿಂಗಡಿಸಿ ವಿವರಿಸುತ್ತೇನೆ. ಮೊದಲನೆಯದಾಗಿ, ಭಾರತದಲ್ಲಿ ಸಂಶೋಧನೆ ಹೇಗೆ ನಡೆಯುತ್ತಿದೆ? ವಿವಿಧ ಆಯಾಮಗಳೇನು? ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಸಂಶೋಧನೆ ಹೇಗೆ? ಮಾನದಂಡಗಳೇನು? ಉಪಯೋಗಗಳೇನು? ಇದರೊಳಗಿರುವ ರಾಜಕೀಯ, ಗುಂಪುಗಾರಿಕೆ, ಮೋಸಗಳೇನು? ಎನ್ನುವುದನ್ನೂ ಸೂಕ್ಷ್ಮವಾಗಿ ತಿಳಿಯೋಣ. ಇತ್ತೀಚೆಗೆ ನಮಗಾದ ಕೆಟ್ಟ ಅನುಭವವನ್ನು ನಿಮ್ಮ ಮುಂದಿಡುತ್ತೇನೆ.

ಸಂಶೋಧನೆಯೆಂಬುದು ಎಲ್ಲಾ ಕ್ಷೇತ್ರಗಳಲ್ಲಿಯೂ ನಡೆದರೂ ನಾನು ಇಲ್ಲಿ ವಿವರಿಸುವುದು ಕೇವಲ ಡೆವಲಪ್‍ಮೆಂಟ್ ಸೆಕ್ಟರ್ ಎಂದು ಕರೆಯಲ್ಪಡುವ ಕೆಲವು ಕ್ಷೇತ್ರಗಳ ಕುರಿತು ಮಾತ್ರ. ಅವುಗಳೆಂದರೇ, ನೀರು, ಪರಿಸರ, ನೈರ್ಮಲ್ಯಕ್ಕೆ ಸಂಬಂಧಿಸಿದವು ಎನ್ನಬಹುದು. ಈ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯ, ಸರ್ಕಾರಿ ಸಂಶೋಧನ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ನಡೆಸುತ್ತವೆ. ವಿದ್ಯಾರ್ಥಿಗಳು ತಮ್ಮ ಪಿಎಚ್‍ಡಿಗೆಂದು ಸಂಶೋಧನೆ ಮಾಡುತ್ತಾರೆ. ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಂಡು ಅದರ ಕುರಿತು ಸಮಗ್ರ ಅಧ್ಯಯನ ನಡೆಸುತ್ತಾರೆ ಇದು ಮೂರರಿಂದ ಐದು ವರ್ಷ ಸಮಯ ತೆಗೆದುಕೊಳ್ಳುತ್ತದೆ. ಇದರ ಜೊತೆಗೆ ಅಲ್ಲಿನ ಉಪನ್ಯಾಸಕರು, ಪ್ರೋಫೆಸರುಗಳು ಕೂಡ ಕೆಲವೊಂದು ಸಂಶೋಧನ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಇದಕ್ಕಾಗಿ ಅನೇಕ ಸರ್ಕಾರಿ ಇಲಾಖೆಗಳು ಧನಸಹಾಯ ನೀಡುತ್ತವೆ. ಈ ಸಂಶೋಧನೆಯಲ್ಲಿ ಕಂಡುಹಿಡಿದ ಹೊಸ ಅಂಶಗಳನ್ನು ಪ್ರಬಂಧವಾಗಿ ಸಲ್ಲಿಸಬೇಕು. ಅದರ ಜೊತೆಗೆ ಕೆಲವೊಂದು ಲೇಖನಗಳನ್ನು ನಿಯತಕಾಲಿಕ (ಜರ್ನಲ್‍ಗಳಲ್ಲಿ) ಪ್ರಕಟಿಸಬೇಕಾಗುತ್ತದೆ. 

ಈ ನಿಯತಕಾಲಿಕಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನೊಮ್ಮೆ ತಿಳಿಯೋಣ. ನಿಯತಕಾಲಿಕಗಳು ನಮ್ಮ ವಾರ ಪತ್ರಿಕೆ, ಮಾಸ ಪತ್ರಿಕೆಗಳಂತೆ ಎಂದು ಕಲ್ಪಿಸಿಕೊಳ್ಳಿ. ಇದರಲ್ಲಿ ಹೇಗೆ ನಮ್ಮ ಬರಹಗಳನ್ನು ವಿಮರ್ಶಕರು ವಿಮರ್ಶಿಸಿ ಪ್ರಕಟಿಸುತ್ತಾರೋ ಅದೇ ರೀತಿ ಅಲ್ಲಿಯೂ ಪ್ರಕಟಿಸಲಾಗುತ್ತದೆ. ಆದರೇ, ಅಲ್ಲಿ ಕೆಲವೊಂದು ವ್ಯತ್ಯಾಸಗಳಿರುತ್ತವೆ. ಅನೇಕ ಜರ್ನಲ್‍ಗಳು ಬೇರೆ ಬೇರೆ ರೀತಿಯಲ್ಲಿ ಹಣ ಪಡೆದು ಪ್ರಕಟಿಸುತ್ತಾರೆ, ಇವುಗಳನ್ನು ಪೇಯ್ಡ್ ಜರ್ನಲ್‍ಗಳು ಎನ್ನುತ್ತೇವೆ. ಈ ರೀತಿ ಹಣ ಪಡೆಯುವ ಜರ್ನಲ್‍ಗಳಲ್ಲಿ ಯಾವೆಲ್ಲಾ ರೀತಿಯಲ್ಲಿ ಪಡೆಯುತ್ತಾರೆನ್ನುವುದು ಗಮನಾರ್ಹ. ಕೆಲವು ಜರ್ನಲ್‍ಗಳು ಪುಟಕ್ಕಿಷ್ಟು ಎಂದು ದೇಣಿಗೆ ಸಂಗ್ರಹ ಮಾಡುತ್ತವೆ, ಕೆಲವು ಜರ್ನಲ್‍ಗಳು ಚಂದಾದಾರರಾಗಿ ಎಂದು ದೇಣಿಗೆ ಸಂಗ್ರಹಿಸುತ್ತಾರೆ, ಮತ್ತು ಕೆಲವು ಜರ್ನಲ್‍ಗಳು ನಮ್ಮ ಸಂಪಾದಕರ ತಂಡಕ್ಕೆ ಸೇರಿದರೆ ನಿಮ್ಮ ಲೇಖನಗಳನ್ನು ಪ್ರಕಟಿಸಿಕೊಳ್ಳಬಹುದೆಂದು ದೇಣಿಗೆ ಸಂಗ್ರಹಿಸುತ್ತಾರೆ. ಇವುಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಜರ್ನಲ್‍ಗಳಿರುತ್ತವೆ. ಇದೇ ರೀತಿ ಇನ್ನೊಂದು ರೀತಿಯ ಜರ್ನಲ್‍ಗಳಿವೆ ಅವುಗಳಿಗೆ ಯಾವುದೇ ದೇಣಿಗೆ ನೀಡುವ ಅವಶ್ಯಕತೆಯಿಲ್ಲ. ಅಲ್ಲಿ ಗುಣಮಟ್ಟ ಮಾತ್ರವೇ ಮುಖ್ಯ ಪಾತ್ರವಹಿಸುತ್ತದೆ. ಇದು ಬಹಳ ಕಠಿಣವಾದ ಹಾದಿ. ಆದರೆ, ಈ ರೀತಿಯ ಜರ್ನಲ್‍ಗಳಲ್ಲಿ ಲೇಖನಗಳನ್ನು ಪ್ರಕಟಿಸಿದರೆ ಗೌರವ ಹೆಚ್ಚು. 

ಈ ಗೌರವವೆನ್ನುವುದನ್ನು ಹೇಗೆ ಪರಿಗಣಿಸಲಾಗುತ್ತದೆ ಎನ್ನುವುದನ್ನೊಮ್ಮೆ ನೋಡೋಣ. ಪ್ರತಿಯೊಂದು  ಲೇಖನಗಳಿಗೂ ಇಂತಿಷ್ಟು ಅಂಕಗಳಿರುತ್ತವೆ, ಕೆಲವೊಂದು ಜರ್ನಲ್‍ಗಳಿಗೆ ಅದರದ್ದೇ ಆದ ಅಂಕಗಳು (ಇಂಪಾಕ್ಟ್ ಫ್ಯಾಕ್ಟರ್) ಇರುತ್ತವೆ. ಸಂಶೋಧನವಲಯದಲ್ಲಿ ಮುಂಬಡ್ತಿಪಡೆಯಲು ಇದು ಅವಶ್ಯಕ. ತಾವುಗಳು ಎಷ್ಟು ಪುಸ್ತಕಗಳನ್ನು ಬರೆದಿದ್ದೀರಿ, ಎಷ್ಟು ಅಂಕಣಗಳು, ಎಷ್ಟು ಕಮ್ಮಟಗಳಲ್ಲಿ ಭಾಗವಹಿಸಿದ್ದೀರೆನ್ನುವುದೆಲ್ಲವೂ ಮುಖ್ಯವಾಗುತ್ತದೆ. ಕೆಲವರು ತಮ್ಮದೇ ಐಡಿಯಾಗಳನ್ನು ಸಾಧಿಸಲು ಗುಂಪುಗಾರಿಕೆ ಮಾಡುತ್ತಾರೆ. ಅದು ಹೇಗೆ ನಡೆಯುತ್ತದೆಂದು ಹೇಳುತ್ತೇನೆ. ಉದಾಹರಣೆಗೆ ನಾನು ಕಮ್ಮಟವನ್ನು ಆಯೋಜಿಸಿದಾಗ ನಿಮ್ಮನ್ನು ನಿಮ್ಮ ಸ್ನೇಹಿತರನ್ನು ಕರೆಯುವುದು, ನೀವು ನಿಮ್ಮ ಸ್ನೇಹಿತರು ಆಯೋಜಿಸುವಾಗ ನನ್ನನ್ನು ನನ್ನ ಸ್ನೇಹಿತರನ್ನು ಕರೆಯುವುದು, ಹೊರಗಿನವರನ್ನು ದೂರವಿಡುವುದು. ನನ್ನ ಬೆನ್ನು ನೀವು ಕೆರೆಯಿರಿ ನಿಮ್ಮದನ್ನು ನಾನು. ಅದೇ ರೀತಿ ಲೇಖನಗಳನ್ನು ಪ್ರಕಟಿಸುವಾಗ ಲೇಖಕರು ಕೆಲವು ವಿಮರ್ಶಕರ ಹೆಸರನ್ನೂ ಸೂಚಿಸಬೇಕು, ಅದು ಅವರಿಗೆ ಬೇಕರುವವರನ್ನೇ ಸೂಚಿಸುತ್ತಾರೆ. ಈಗಾಗಲೇ ಹೇಳಿರುವಂತೆ, ಅಲ್ಲಿನ ಸಂಪಾದಕರಲ್ಲಿ ಇವರೋ ಇವರ ಸ್ನೇಹಿತರೋ ಇದ್ದೇ ಇರುತ್ತಾರೆ. ಇತ್ತೀಚಿನ ನನ್ನ ಅನುಭವವನ್ನು ಹೇಳುತ್ತೇನೆ. 

ಇತ್ತೀಚೆಗೆ ಪ್ರಸಿದ್ದ ಸಂಸ್ಥೆಯೊಂದರ ಕೆಲವು ಸಂಶೋಧಕರು ಒಂದು ಲೇಖನವನ್ನು ಪ್ರಕಟಿಸಿದ್ದರು. ಅದು ಹೇಗಿತ್ತೆಂದರೆ. ಅವರು ಒಂದು ನದಿಕೊಳ್ಳದ ಕೇವಲ ಒಂದಿಷ್ಟು ಭಾಗವನ್ನು ಮಾತ್ರ ತೆಗೆದುಕೊಂಡು ಅಧ್ಯಯನ ಮಾಡಿದ್ದರು. ಇದು ಅನೇಕರು ಮಾಡುತ್ತಿರುವ ರೀತಿ. ಶೀರ್ಷಿಕೆಗೂ ಅವರ ಅಧ್ಯಯನ ಕ್ಷೇತ್ರಕ್ಕೂ ಸಂಭಂಧವೇ ಇರುವುದಿಲ್ಲ. ಉದಾಹರಣೆಗೆ, ಹಾಸನ ಜಿಲ್ಲೆಯಲ್ಲಿ ಬಾನುಗೊಂದಿ ಎನ್ನುವ ಸಣ್ಣ ಹಳ್ಳಿಯ ಕುರಿತು ಅಧ್ಯಯನ ಮಾಡಿ, ಇಡೀ ಹಾಸನವನ್ನು ಅಧ್ಯಯನ ಮಾಡಿದ್ದೀನಿ, ಎಂದರೆ? ನೀವುಗಳು ಉಗಿಯುವುದಿಲ್ಲವೆ? ಅಲ್ಲಯ್ಯ ನೀನು ಕೇವಲ ಒಂದು ಹಳ್ಳಿಯ ಕುರಿತು ಅಧ್ಯಯನ ಮಾಡಿ ಇಡೀ ಜಿಲ್ಲೆಯಲ್ಲಿಯೇ ನಡೆಸಿದೆ ಎನ್ನುತ್ತಿಯಾ? ಎಂದು. ಇಂಥವರ ಮತ್ತೊಂದು ಮುಖವೆಂದರೆ, ಇಲ್ಲಿಯವರೆಗೂ ಯಾರೂ ಇತಂಹ ಅಧ್ಯಯನವನ್ನೇ ಮಾಡಿಲ್ಲವೆನ್ನುವಂತೆ ಬಿಂಬಿಸುವುದು. ಇದು ಸಂಶೋಧನೆಗಾಗಿ ಅನುದಾನ ಪಡೆಯುವುದು ಸುಲಭ, ಅನುದಾನ ನೀಡುವ ಸಂಸ್ಥೆಯವರು ಹೇಳಿಕೊಳ್ಳಬಹುದು ಇದು ನಾವೇ ಮಾಡಿಸಿದ್ದೆಂದು. ನಾವೇ ಈ ಅಧ್ಯಯನ ನಡೆಸಿದವರಲ್ಲಿ ಮೊದಲಿಗರೆಂದು ತೋರಿಸುವುದು. ಉತ್ತಮ ಸಂಶೋಧಕನಾದವನು ಇಲ್ಲಿಯ ತನಕ ಈ ವಿಷಯಕ್ಕೆ ಸಂಬಂಧಹಿಸಿದಂತೆ ಏನೆಲ್ಲಾ ಸಂಶೋಧನೆ ನಡೆದಿದೆ, ಏನೆಲ್ಲಾ ಕೊರತೆಗಳಿವೆ ಎನ್ನುವುದನ್ನು ಅರಿಯಬೇಕು. ಕೊರತೆಯಿರುವ ವಿಷಯದ ಕುರಿತು ಸಂಶೋಧನೆ ನಡೆಸಬೇಕು ಅಥವಾ ಸಂಶೋಧನೆ ಬೇರೆ ಆಯಾಮಗಳನ್ನು ತೋರಿಸಿಕೊಡಬೇಕು. ಆದರೆ, ಕೆಲವರು ಈ ಹಿಂದೆ ಅನೇಕರು ನಡೆಸಿರುವ ಸಂಶೋಧನೆಗಳ ಯಾವೊಂದನ್ನು ಇವರು ಉಲ್ಲೇಖಿಸುವುದೇ ಇಲ್ಲ. ವಾಸ್ತವವಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ, ಅಂದಅರೆ ಹವಮಾನ ವೈಪರಿತ್ಯ ಮತ್ತು ನೀರಿನ ಒಳಹರಿವು ಹಾಗೂ ಅಂತರ್ಜಲದ ಏರುಪೇರಿಕೆ ಕುರಿತಂತೆ ಅನೇಕ ಅಧ್ಯಯನಗಳು ನಿಮಗೆ ಸಿಗುತ್ತವೆ. ಆದರೇ, ಇವರುಗಳು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದ್ದರು. 

ಇಂಥಹ ಸಂಸ್ಥೆಗಳ ಮತ್ತು ಈ ವರ್ಗದ ಸಂಶೋಧಕರಲ್ಲಿ ಮತ್ತೊಂದು ಅಂಶವಿದೆ. ದತ್ತಾಂಶಗಳ ಕೊರೆತಯಿದೆ,  ಮಾಹಿತಿಯೇ ಸಿಗುವುದಿಲ್ಲ, ಅಂದರೆ ಇಲಾಖೆಗಳಲ್ಲಿ ಒಳಹರಿವು, ಹೊರಹರಿವು, ಅಂತರ್ಜಲದ ಮಟ್ಟ ಕುರಿತಂತೆ ದತ್ತಾಂಶಗಳೇ ಇಲ್ಲ ಇದ್ದರೂ ಅವುಗಳ ಮೇಲೆ ಭರವಸೆ ಇಡುವಂತಿಲ್ಲ ಎನ್ನವುದು. ಇದಕ್ಕೆ ಮೂಲಕಾರಣ ಈ ಸಂಸ್ಥೆಗಳು ಮಾಹಿತಿ ಸಂಗ್ರಹಣೆಗಾಗಿ ಲಕ್ಷಾಂತರೆ ಅನುದಾನವನ್ನು ಪಡೆಯುವು ಇವರ ಮೂಲ ಉದ್ಧೇಶ. ನನ್ನ ಪ್ರಶ್ನೆ ಸರ್ಕಾರಿ ಇಲಾಖೆಗಳಲ್ಲಿಯೇ ಎಲ್ಲಾ ರೀತಿಯ ಮಾಹಿತಿಗಳು ದೊರೆಯುವಾಗ, ಅಥವಾ ನಿಮಗೆ ಬೇಕಿರುವ ಮಾಹಿತಿಗಳು ದೊರೆಯುವಾಗ ನೀವು ಲಕ್ಷಾಂತರ ರೂಗಳನ್ನು ಅದಕ್ಕಾಗಿ ವ್ಯಯಿಸುವುದೇಕೆ? ಈ ಯೋಜನೆಗಳ ರೂಪುರೇಷೆಗಳನ್ನೊಮ್ಮೆ ಗಮನಿಸೋಣ, ಹೆಚ್ಚೆಂದರೆ ಮೂರರಿಂದ ಐದು ವರ್ಷದ ಯೋಜನೆಗಳಾಗಿರುತ್ತವೆ. ಐದು ವರ್ಷದ ಮಾಹಿತಿ ಅದರಲ್ಲಿಯೂ ಹವಮಾನ ವೈಪರೀತ್ಯಕ್ಕೆ ಸಂಭಂದಿಸಿದಂತೆ ಯಾವ ತಿರ್ಮಾನಕ್ಕೆ ಬರಲಾಗುತ್ತದೆ ಹೇಳಿ. ವೈಜ್ಞಾನಿಕವಾಗಿ ನೋಡಿದರೆ ಇದೊಂದು ಮೋಸ. 

ಇವರು ನಡೆಸಿದ ಸಂಶೋಧನೆಯ ಲೇಖನಗಳನ್ನು ಲಕ್ಷಾಂತರ ರೂಪಾಯಿಗಳನ್ನು ನೀಡಿ ಪ್ರಕಟಿಸುವುದು. ಇದರ ಅವಶ್ಯಕತೆಯಾದರೂ ಏನಿದೆ? ಏಕೆಂದರೆ ಅಷ್ಟೆಲ್ಲ ದೇಣಿಗೆ ನೀಡಿದ ಮೇಲೆ ಅವರುಗಳು ಬೇರೆಯವರು ಪ್ರಶ್ನಿಸಲು ಬಿಡುವುದಿಲ್ಲ. ನೀವು ಪ್ರಶ್ನಿಸಬೇಕೆಂದರೆ ಕನಿಷ್ಠ ಇಷ್ಟು ಹಣವೆಂದು ಕೊಡಬೇಕು. ದುಡ್ಡು ಕೊಟ್ಟು ಏನು ಪ್ರಶ್ನಿಸುವುದು ಬೇಡ ಬಿಡಿ ಎನ್ನುತ್ತಾರೆ. ಇದನ್ನೇ ದಂಧೆ ಮಾಡಿಕೊಂಡು ದೊಡ್ಡ ಮಾಫಿಯಾವಾಗಿದೆ, ಸಂಶೋಧನೆ ಮತ್ತು ಪ್ರಕಟನೆಗಳು. 


ಉತ್ತಮ ಸಂಶೋಧಕನ ನಡುವಳಿಕೆಗಳು ಹೇಗಿರಬೇಕು?: ಮೊದಲಿಗೆ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನಾ ಆ ವಿಷಯಕ್ಕೆ ಸಂಬಂಧಿಸಿದಂತೆ ಈವರೆಗೂ ನಡೆದಿರುವ ಎಲ್ಲಾ ಸಂಶೋಧನೆಯನ್ನು, ಲೇಖನಗಳನ್ನು, ಈಗಾಗಲೇ ಲಭ್ಯವಿರುವ ದತ್ತಾಂಶಗಳನ್ನು ಕೂಡಿಹಾಕಬೇಕು. ಅದರಲ್ಲಿರುವ ನ್ಯೂನ್ಯತೆ/ಕೊರತೆಗಳನ್ನು ಪಟ್ಟಿಮಾಡಬೇಕು. ನಂತರ ಯೋಜನೆಯ ಉದ್ದೇಶಗಳನ್ನು ಸಿದ್ದಪಡಿಸಬೇಕು. ಈ ಕ್ಷೇತ್ರದಲ್ಲಿ, ಆ ವಿಷಯದಲ್ಲಿ ಯಾರೆಲ್ಲಾ ಕೆಲಸ ಮಾಡಿರುತ್ತಾರೆ ಅವರೆಲ್ಲರನ್ನೂ ಗಣನೆಗೆ ತೆಗೆದುಕೊಂಡು ಚರ್ಚಿಸಬೇಕು. ಪ್ರಮುಖವಾಗಿ ಸರ್ಕಾರಿ ಇಲಾಖೆಗಳಲ್ಲಿರುವ ದತ್ತಾಂಶವನ್ನು ಪಡೆಯಬೇಕು. ಏಕೆಂದರೆ, ಸರ್ಕಾರದಲ್ಲಿ ಅನೇಕ  ವರ್ಷಗಳಿಂದ ಕೂಡಿಟ್ಟಿರುವ ಮಾಹಿತಿಗಳು ಸಿಗುತ್ತವೆ ಮತ್ತು ಅದಕ್ಕಾಗಿಯೇ ಹಣವಿಯೋಗವಾಗಿರುತ್ತದೆ. ಮತ್ತೊಮ್ಮೆ ಹಣ ವ್ಯಯಿಸುವ ಅಗತ್ಯತೆಯಿರುವುದಿಲ್ಲ. ಅದರ ಜೊತೆಗೆ ಬೇರೆ ಬೇರೆ ಕ್ಷೆತ್ರಗಳಲ್ಲಿ ಆಗಿರುವ ಸಂಬಂಧಪಟ್ಟ ಸಂಶೋಧನೆಯ ಮುಖ್ಯ ಅಂಶಗಳನ್ನು ಗುರುತು ಹಾಕಿಕೊಳ್ಳಬೇಕು. ಎರಡನೆಯದಾಗಿ, ಲೇಖನಗಳನ್ನು ಪ್ರಕಟಿಸಿಕೊಳ್ಳುವಾಗ ಹಣ/ದೇಣಿಗೆ ನೀಡಿ ಪ್ರಕಟಿಸುವುದನ್ನು ನಿಲ್ಲಿಸಬೇಕು ಮತ್ತು ಉತ್ತಮ ಗುಣಮಟ್ಟದ ಜರ್ನಲ್‍ಗಳಲ್ಲಿ ಪ್ರಕಟಿಸಿಕೊಳ್ಳಬೇಕು. ಏಕೆಂದರೆ, ಅಂತಹ ಜರ್ನಲ್‍ಗಳಲ್ಲಿ ವಿಮರ್ಶೆಯಾಗಿರುತ್ತದೆ ಅದು ಸಂಶೋಧಕನ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ನಿಂದಿಸುವವರು, ವಿಮರ್ಶಕರಿಲ್ಲದೇ ಇದ್ದರೇ ನಾವು ಮಾಡಿದ್ದೇ ಸರಿಯೆಂದು ಅಹಂಮ್ಮಿನಲ್ಲಿ ಸಾಗುತ್ತದೆ. ಮೂರನೆಯದಾಗಿ, ಒಬ್ಬ ಸಂಶೋಧಕ ಮುಕ್ತವಾದ ವಿಮರ್ಶೆಗೆ ಚರ್ಚೆಗೆ ಸಿದ್ದನಿರಬೇಕು. ವಿಮರ್ಶಿಸುವವರನ್ನೆಲ್ಲ ದೂರವಿಟ್ಟು ಹೊಗಳುವವರ ಜೊತೆಗೆ ಸಾಗಿದರೆ ಅವನ ಬೌದ್ಧಿಕ ಗುಣಮಟ್ಟ ಹಳ್ಳಹಿಡಿಯುತ್ತದೆ. ನಾಲ್ಕನೆಯದಾಗಿ ನಮ್ಮೆಲ್ಲ ಸಂಶೋಧನೆಯ ಫಲಿತಾಂಶಗಳನ್ನು ಜನರೊಂದಿಗೆ ಹಂಚಿಕೊಳ್ಳಬೇಕು. ಸಾಧ್ಯವಾದಷ್ಟೂ ಸ್ಥಳೀಯ ಭಾಷೆಯಲ್ಲಿ ಮುಕ್ತವಾಗಿ ಬರೆಯಬೇಕು.


ಕೊನೆಹನಿ: ಸಂಶೋಧನೆ ಯಾವುದೇ ಕ್ಷೇತ್ರದಲ್ಲಿಯೇ ಇರಲಿ ಅದು ಜನ ಸಾಮಾನ್ಯರಿಗೆ ಅನುಕೂಲವಾಗುವಂತಿರಬೇಕು. ಸಂಶೋಧಕನಿಗೆ ಜವಬ್ದಾರಿ ಮತ್ತು ನೈತಿಕತೆಯಿರಬೇಕು. ಕೇವಲ ಅನುದಾನ ಪಡೆಯುವುದಕ್ಕಾಗಿ, ಹಣಕ್ಕಾಗಿ, ಹೆಸರುಗಳಿಕೆಗಾಗಿ, ಮುಂಬಡ್ತಿಗಾಗಿ ಹಾದಿತಪ್ಪಿಸುವ ಸಂಶೋಧನೆಯನ್ನು ಎಂದಿಗೂ ಮಾಡಬಾರದು. ಅದೊಂದು ಬೌದ್ದಿಕ ಸೂಲೆಗಾರಿಕೆಯಾಗುತ್ತದೆ. ಇವೆಲ್ಲವೂ ಜನಸಾಮಾನ್ಯರಿಗೆ ಮುಕ್ತವಾಗಿ ಸಿಗುವಂತೆ ಮತ್ತು ತಿಳಿಯುವಂತೆ  ಮಾಧ್ಯಮ ಮಿತ್ರರು ಸಹಕರಿಸಬೇಕಾಗಿ ವಿನಂತಿ. 



05 ಮೇ 2018

ನನ್ನನಿಸಿಕೆ: ಪ್ರಕಾಶ್ ರೈ - ಬಿಜೆಪಿ ವಾಕ್ಸಮರ


ನಾನು ಈ ವಿಷಯದ ಕುರಿತು ಬರೆಯಬೇಕೇ? ಬೇಡವೇ? ಎಂದು ಬಹಳ ದಿನಗಳಿಂದಲೂ ಆಲೋಚಿಸುತ್ತಿದ್ದೆ. ಅದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೇ, ಅದ್ಯಾಕೋ ಇದರ ಕುರಿತು ನನ್ನ ನಿಲುವನ್ನು ಪ್ರಕಟಿಸಬೇಕೆಂದು ಮನಸ್ಸಾಗಿ ಬರೆಯುತ್ತಿದ್ದೇನೆ. ನಾನು ಪ್ರತಿ ಬಾರಿ ಹೇಳುವಂತೆ, ದಯವಿಟ್ಟು ಸಂಪೂರ್ಣ ಲೇಖನವನ್ನು ಓದಲು ಸಾಧ್ಯವಾದರೆ ಓದಿ, ಸಂಪೂರ್ಣ ಓದಿದ ನಂತರ ನಿಮ್ಮ ಪ್ರತಿಕ್ರಿಯೆ ಬರಲಿ. ಯಾವುದೋ ನಾಲ್ಕ ಸಾಲುಗಳನ್ನು ಓದಿ ಅಥವಾ ಶೀರ್ಷಿಕೆಯನ್ನು ನೋಡಿ ಪ್ರತಿಕ್ರಿಯಿಸಬೇಡಿ. ನೀವು ಓದುವುದು ಬಿಡುವುದು ನಿಮಗೆ ಸೇರಿದ್ದು, ನೀವು ಓದಲೇಬೇಕೆಂಬ ನಿಯಮವಿಲ್ಲ. 

ನಾನು ಹೇಳುತ್ತಿರುವ ವಿಷಯ, ಪ್ರಕಾಶ್ ರೈ ಮತ್ತು ಬಿಜೆಪಿಯ ನಡುವಿನ ವಾಕ್ಸಮರದ ಕುರಿತು. ನನ್ನ ಅನೇಕ ಮಾತುಗಳು ಕೆಲವರಿಗೆ ಅರ್ಥವಾಗುವುದಿಲ್ಲ ಮತ್ತು ಹಲವರಿಗೆ ಹಿಡಿಸುವುದಿಲ್ಲ. ಅದಕ್ಕೂ ವಿವರಣೆ ನೀಡುತ್ತೇನೆ. ನಾವು ಯಾವುದೇ ವಿಷಯವನ್ನು ಕೇಳುವಾಗ ನಮ್ಮ ಪೂರ್ವ ಅನುಭವದೊಂದಿಗೆ ಹೋಲಿಕೆ ಮಾಡಿ ಅಥವಾ ನಮ್ಮ ಅನುಭವದ ಪೆಟ್ಟಿಗೆಯೊಳಗೆಯೇ ನೋಡುತ್ತೇವೆ. ಅಂದರೆ, ನಾನು ನನ್ನೂರು ಬಾನುಗೊಂದಿಯ ಬಗ್ಗೆ ಹೇಳುವಾಗ ನೀವು ನಿಮ್ಮೂರನ್ನು ಕಲ್ಪಸಿಕೊಳ್ಳುತ್ತೀರಿ, ನಾನು ಕಾವೇರಿ ನದಿ ದಂಡೆ ಅಂದರೆ ನೀವು, ಎಂದೋ ಕಂಡಿರುವ ನದಿ ದಂಡೆಯನ್ನು ಕಲ್ಪಿಸಿಕೊಳ್ಳುತ್ತೀರಿ. ನಾನು ಅಮೇರಿಕಾದ ಹಳ್ಳಿಯಂದರೂ ಅದೇ ಕಲ್ಪನೆ ನಿಮಗೆ ತಿಳಿಯದೇ ಬಂದಿರುತ್ತದೆ. ನಾನು ಕೇರಳಕ್ಕೆ ಹೋಗುವ ಮುನ್ನಾ ನನ್ನ ಸ್ನೇಹಿತ ಬಿನು ಕುಮಾರ್ ಅವರ ಊರಿನ ಬಗ್ಗೆ ಹೇಳಿದರೆ ನನಗೆ ನನ್ನೂರು ತಲೆಯೊಳಗೆ ಬರತಿತ್ತು. ಅಲ್ಲಿಗೆ ಹೋಗಿ ಬಂದ ಮೇಲೆ ನನ್ನ ಅನುಭವ ಬೇರೆಯಾಗಿದ್ದು. ಕೇರಳದಲ್ಲಿ ಹಳ್ಳಿ, ಪಟ್ಟಣವೆಂಬ ಬೇಧಭಾವವೇ ಇಲ್ಲ, ಎಲ್ಲಿಂದ ಎಲ್ಲಿಗೆ ಹೋದರೂ ಮನೆಗಳು, ಉತ್ತಮ ರಸ್ತೆಗಳು, ಆದರೆ ನಾನು ಹೋಗುವ ಮುನ್ನಾ? ನನ್ನ ತಲೆಯೊಳಗಿನ ಕೇರಳವೇ ಬೇರೆ. ಅದೇ ರೀತಿ ನನ್ನ ಮಾತುಗಳನ್ನು ಮುಕ್ತವಾಗಿ ಕೇಳಿ, ಓದಿ, ನಿಮ್ಮ ಭೂತದೊಂದಿಗೆ ಹೋಲಿಕೆ ಮಾಡಬೇಡಿ. 

ಪ್ರಕಾಶ್ ರೈ ಮತ್ತು ಬಿಜೆಪಿಯ ಅದರಲ್ಲಿಯೂ ಕರ್ನಾಟಕ ಬಿಜೆಪಿಯ ವಾಕ್ಸಮರವನ್ನೊಮ್ಮೆ ಅವಲೋಕಿಸೋಣ. ಸಾಧ್ಯವಾದಷ್ಟು ಮುಕ್ತವಾಗಿ ಮತ್ತು ಪಕ್ಷಾತೀತವಾಗಿ ನೋಡೋಣ. ಪ್ರಕಾಶ್ ರೈ ವಾದಗಳೇನು? ಬಿಜೆಪಿಯವರ ವಾದವೇನು?  ಅಥವಾ ಅವರ ಪ್ರತಿಕ್ರಿಯೆಗಳೇನು? ಇಷ್ಟೊಂದು ದೊಡ್ಡ ಮಟ್ಟದ ಚರ್ಚೆಗಳು ಆಗೋಕೆ ಕಾರಣವೇನು? ಇವೆಲ್ಲವನ್ನೂ ಗಮನಿಸೋಣ. ವ್ಯಕ್ತಿ ಸ್ವಾತಂತ್ರ್ಯ ಅದರಲ್ಲಿಯೂ ವಾಕ್ ಸ್ವಾತಂತ್ರ್ಯ ಬಹಳ ಮುಖ್ಯ. ಯಾವುದೇ ಸಮಾಜ, ದೇಶ ಬದಲಾಗಬೇಕು, ಬೆಳವಣಿಗೆಯಾಗಬೇಕಾದರೆ ಚರ್ಚೆಗಳಾಗಬೇಕು, ಚರ್ಚೆಗಳು ಮುಕ್ತವಾಗಿರಬೇಕು. ಪ್ರಶ್ನಿಸಬೇಕು, ಪ್ರಶ್ನಿಸುವವರನ್ನು ಹತ್ತಿಕ್ಕಬಾರದು. ಭಾರತ ಬುದ್ದಿವಂತರ ನಾಡು ಎಂದು ಹೆಸರು ಗಳಿಸಿದ್ದು, ಬೆಳೆದಿದ್ದು ಆ ಸ್ವಾತಂತ್ರ್ಯದಿಂದ. ಉದಾಹರಣೆಗೆ, ಹೊಯ್ಸಳರ ಕಾಲದ ದೇವಸ್ಥಾನಗಳನ್ನು ನೋಡಿ, ಅದೆಷ್ಟು ಸುಂದರ ಎನಿಸುತ್ತವೆ. ಅದಕ್ಕೆ ಮೂಲ ಕಾರಣ ಸ್ವಾತಂತ್ರ್ಯ. ಆದರೇ ಇತ್ತೀಚಿನ ಬೆಳವಣಿಗೆಯಲ್ಲಿ, ಅದರಲ್ಲಿಯೂ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಎಲ್ಲರ ಕೈಯಲ್ಲಿರುವುದು ಮತ್ತು ಸಾಕಷ್ಟು ಎಡವಟ್ಟುಗಳನ್ನು ಮಾಡುತ್ತಿವೆ. ಇದನ್ನು ವಿಶ್ಲೇಷಿಸಲು ಸಾಕಷ್ಟು ಆಯಾಮಗಳಲ್ಲಿ ನೋಡಬೇಕು. 

ಎಲ್ಲರ ಕೈಯಲ್ಲಿ ಮೊಬೈಲ್ ಇಂಟರ್‍ನೆಟ್ ಇರುವುದು, ಮನಸ್ಸಿಗೆ ಬಂದದ್ದನ್ನು ಹಾಕುವುದು, ಬರೆಯುವುದು ಮತ್ತು ಮಾತಿನ ಮೇಲೆ ಹಿಡಿತವಿಲ್ಲದೆ, ಕೆಟ್ಟ ಭಾಷೆಯನ್ನು ಬಳಸುವುದು ಆತಂಕಕಾರಿ ಬೆಳವಣಿಗೆ. ಎರಡನೆಯದಾಗಿ, ಸಮಗ್ರವಾಗಿ ಮಾತನ್ನು ಅಥವಾ ವಾದವನ್ನು ಆಲಿಸದೇ, ಕೇವಲ ಆಯ್ದ ತುಣುಕುಗಳನ್ನು ಎಡಿಟ್ ಮಾಡಿ ಜನರನ್ನು ಹಾದಿ ತಪ್ಪಿಸುತ್ತಿರುವುದು. ಮೂರನೆಯದಾಗಿ, ಪ್ರತಿಯೊಂದು ವಿಷಯಕ್ಕೂ ಭಾವಾತ್ಮಕವಾಗಿ, ಪ್ರತಿಕ್ರಿಯಿಸುವುದು. ನಾಲ್ಕನೆಯದಾಗಿ, ಎಲ್ಲದ್ದಕ್ಕೂ ಭಾಷೆ, ರಾಜಕೀಯ ಪಕ್ಷ, ಜಾತಿ, ಧರ್ಮದ ನಂಟು ಹಾಕುತ್ತಿರುವುದು. ಐದನೇಯದಾಗಿ, ವ್ಯಕ್ತಿ ಆರಾಧನೆ ಅಥವಾ ವ್ಯಕ್ತಿ ನಿಂಧನೆ ಹೆಚ್ಚಾಗುತ್ತಿರುವುದು. ಇವೆಲ್ಲವನ್ನು ಒಂದೊಂದಾಗಿ, ನೋಡುತ್ತಾ ಹೋಗೋಣ. ಅವುಗಳು ಪ್ರಕಾಶ್ ರೈ ರವರ ವಿಚಾರಕ್ಕೆ ಸೇರಿಸಕೊಂಡು ಅವಲೋಕಿಸೋಣ. 

ಈ ಬೆಳವಣಿಗೆಗಳು ಶುರುವಾಗಿದ್ದು, ಗೌರಿ ಲಂಕೇಶ್‍ರವರ ಹತ್ಯೆಯ ಸಮಯದಿಂದ. ಪ್ರಕಾಶ್ ರೈ ರವರು ಗೌರಿ ಹತ್ಯೆಗೆ ಸಂಘ ಪರಿವಾರದವರ ಕೈವಾಡವಿದೆ ಎಂದು ಆರೋಪಿಸಿದರು ಮತ್ತು ಬುದ್ದಿಜೀವಿಗಳ ರಕ್ಷಣೆಗೆ ಪ್ರಧಾನ ಮಂತ್ರಿಗಳು ನಿಲ್ಲಬೇಕು, ಇದರ ಕುರಿತು ಪ್ರತಿಕ್ರಿಯೆ ನೀಡಬೇಕೆಂದರು. ಒಬ್ಬ ಸ್ನೇಹಿತ ತನ್ನ ಸ್ನೇಹಿತೆಯ ಕೊಲೆಯಾಗಿದ್ದಾಗ ಭಾವಾನಾತ್ಮಕವಾಗಿ ವ್ಯವಸ್ಥೆಯನ್ನು ದೂರುವುದು ಸರ್ವೇಸಾಮಾನ್ಯ. ಅವರ ಸ್ಥಾನದಲ್ಲಿ ನಾನಿದ್ದರೂ ಅದನ್ನೇ ಮಾಡುತ್ತಿದ್ದೆ. ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು, ಕೇಳಿದರು, ಇದರಲ್ಲಿ ತಪ್ಪೇನು? ಅವರು ರಾಜ್ಯ ಸರ್ಕಾರವನ್ನೂ ಆಗ್ರಹಿಸಿದರು ಎನ್ನುವುದನ್ನು ಮರೆಯಬಾರದು. ಬಿಜೆಪಿಗರ ವಾದ ಅಥವಾ ಪ್ರತಿವಾದ ಏನಿರಬೇಕಿತ್ತು? ಮತ್ತು ಏನಾಯ್ತು? ಪ್ರತಾಪ್ ಸಿಂಹ, ಅನಂತ ಕುಮಾರ್ ಹೆಗ್ಡೆ ಸೇರಿದಂತೆ ಬಾಯಿಗೆ ಬಂದಂತೆ ಬೈದರು? ಅವರ ಮಗನ ಸಾವು ಮತ್ತು ಎರಡನೆಯ ಮದುವೆಯ ವಿಷಯವನ್ನು ತುಚ್ಛವಾಗಿ ನಿಂದಿಸಿದರು. ಇದರ ಅವಶ್ಯಕತೆಯಿತ್ತಾ? ಜನ ಪ್ರತಿನಿಧಿಯಾದವರು, ಸಂಸದರು ಬಳಸುವ ಪದಗಳಲ್ಲ ಅವುಗಳು. 

ಸರ್ವೇಸಾಮಾನ್ಯವಾಗಿ ಎಡಪಂಥಿಯರು ಪ್ರಕಾಶ್ ರೈರವರನ್ನು ಅವರೆಲ್ಲಾ ಕಾರ್ಯಕ್ರಮಗಳಿಗೆ ಆಹ್ವಾನಿಸೊತೊಡಗಿದರು. ಮೂಲತಃ ಪ್ರಕಾಶ್ ರೈ ಎಡಪಂಥೀಯ ಸಿದ್ದಾಂತವನ್ನು ಓದಿ ಬೆಳೆದವರು. ಹಾಗೆಂದ ಮಾತ್ರಕ್ಕೆ ಅವರು ಹಿಂದೂ ವಿರೋಧಿ ಅಥವಾ ಸಂಪ್ರದಾಯದ ವಿರೋಧಿ ಎನ್ನುವಂತಿಲ್ಲ. ಅವರು ಬೆಳೆದದ್ದು ವಿಜಯಮ್ಮ ಮತ್ತು ಬಿ.ಸುರೇಶರವರ ಮನೆಯಲ್ಲಿ. ಸಾಮಾಜಿಕ ಕಳಕಳಿ ಅವರಿಗೆ ಗೌರಿ ಸತ್ತ ಮೇಲೆ ಬಂದದ್ದಲ್ಲ. ಅದಕ್ಕೂ ಮುಂಚೆಯೇ ಅವರು ಆ ಕಾರ್ಯದಲ್ಲಿ ತೊಡಗಿದ್ದರು, ಹಳ್ಳಿಗಳನ್ನು ದತ್ತು ಪಡೆದಿದ್ದರು. ರೈತರಿಗೆ, ಶಾಲೆಗಳಿಗೆ, ಮಕ್ಕಳಿಗೆ ಸಹಾಯ ಮಾಡುತ್ತಾ ಬಂದಿದ್ದರು ಕೂಡ. ಬಿಡುವಿನ ವೇಳೆಯಲ್ಲಿ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕೆಲವರ ಆರೋಪಗಳು, ಪ್ರಕಾಶ್ ರೈ ಪಬ್ಲಿಸಿಟಿಗೆ, ದುಡ್ಡಿಗೆ ಹೀಗೆಲ್ಲಾ ಮಾಡುತ್ತಿದ್ದಾರೆಂದು. ನನ್ನ ಪ್ರಕಾರ ಅವರಿಗೆ ಅದೆರಡರ ಅವಶ್ಯಕತೆಯಾಗಲಿ, ಅನಿವಾರ್ಯತೆಯಾಗಲಿ ಇಲ್ಲವೇ ಇಲ್ಲ. ತನ್ನ ಪ್ರತಿಭೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಹೆಮ್ಮೆಯ ನಟ ಅವರು. ಅವರ ಜೀವನಕ್ಕೆ ಏನು ಬೇಕು ಅದೆಲ್ಲವನ್ನು ದುಡಿದು ಸಂಪಾದಿಸಿದ್ದಾರೆ, ಅದೆಲ್ಲವೂ ಅವರ ಶ್ರಮದ ಫಲ. ದಿಡೀರನೇ ಕರ್ನಾಟಕದ ಮೇಲೆ ಪ್ರೀತಿ ಬಂತು ಎಂದು ಕೆಲವರು ಹಂಗಿಸಿದ್ದಾರೆ. ದುಡಿಯುವ ಸಮಯದಲ್ಲಿ ಎಲ್ಲಿ ಸಾಧ್ಯವಾಗುತ್ತದೆ ಅಲ್ಲಿಗೇ ಹೋಗಲೇ ಬೇಕು ದುಡಿಯಲೇ ಬೇಕು. ನಾನು ದುಡಿಮೆಗೆ ಬೆಂಗಳೂರಿಗೆ ಬಂದಿದ್ದೇನೆ, ದುಡಿದ ನಂತರ ಊರಿಗೆ ಹೋಗಿ ಅಲ್ಲಿನವರಿಗೆ ಏನಾದರೂ ಮಾಡಬೇಕೆಂಬ ಹಂಬಲವಿದೆ. ಆದರೇ ಸಂಪಾದನೆಗಿಂತ ಮುಂಚೆ ಮಾಡಲಾಗುವುದಿಲ್ಲ. ರೈ ಕೂಡ ಹಾಗೇಯೆ ಮಾಡುತ್ತಿದ್ದಾರೆಂಬುದು ನನ್ನ ಅನಿಸಿಕೆ. 

ಕೆಲವು ಕಾಂಗ್ರೇಸ್ಸಿಗರು ಮತ್ತು ಎಡಪಂಥೀಯರು, ಅವರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದಂತೂ ನಿಜ. ಆ ಹಾದಿಯಲ್ಲಿ ಅವರು ಮೇವಾನಿಯ ಜೊತೆ ಸೇರಿದ್ದು ನನಗೆ ಸರಿ ಎನಿಸಲಿಲ್ಲ. ಮೇವಾನಿ ಜಾತಿಯ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಯುವ ರಾಜಕಾರಣಿ. ಜಾತಿ ಧರ್ಮಗಳ ಮೀರಿ ಬೆಳೆಯಬೇಕಿರುವ ಕಾಲಘಟ್ಟದಲ್ಲಿ ಇದು ಬೇಕಿರಲಿಲ್ಲ. ರೈ ರವರು ಮೋದಿಯನ್ನು ದೂರುವ ಸಲುವಾಗಿ ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಂಡಿದ್ದು ಸರಿಯಿಲ್ಲ. ಆದರೇ, ಅವರ ಸಮರ್ಥನೆ ಸರಿಯಿದೆ, ಮೋದಿ ಮತ್ತು ರಾಹುಲ್ ವಯಸ್ಸಿನ ವ್ಯತ್ಯಾಸವಿದೆ, ಆದರೆ ನೆನಪಿರಲಿ ರಾಹುಲ್ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷ. ಮೋದಿಯನ್ನು ಸೋಲಿಸುವ ಉದ್ದೇಶದಿಂದ, ಯೋಗ್ಯತೆಯಿಲ್ಲದೆ ಆ ಹುದ್ದೆಯಲ್ಲಿರುವ ಕಾಂಗ್ರೇಸ್ ಅನ್ನು ಬೆಂಬಲಿಸುವುದು ಆತಂಕಕಾರಿ ವಿಷಯ. ಮೋದಿಯನ್ನು ವಿರೋಧಿಸಿ ಆದರೆ ಅವರ ಸ್ಥಾನಕ್ಕೆ ನಿಮ್ಮ ಆಯ್ಕೆ ಯಾವುದು? ರಾಹುಲ್ ಗಾಂಧಿಯೇ? ಮಮತಾ ಬ್ಯಾನರ್ಜಿಯೇ? ಲಾಲೂ ಪ್ರಸಾದ್ ಯಾದವ್? ಯಾರು ನಿಮ್ಮ ನಾಯಕ? ಇದು ದೇಶದ ವಿಷಯ. ಸದ್ಯಕ್ಕಂತೂ ಮೋದಿಯನ್ನು ಬಿಟ್ಟರೇ ಬಿಜೆಪಿಯಲ್ಲಿಯೇ ಮತ್ತೊಬ್ಬ ಒಳ್ಳೆಯ ನಾಯಕನಿದ್ದಾರೆಂಬ ನಂಬಿಕೆ ನನಗಿಲ್ಲ. ಅದರಂತೆಯೇ, ಆದಿತ್ಯನಾಥ್ ಯೋಗಿಯ ವಿಷಯದಲ್ಲಿಯೂ ಅಷ್ಟೆ, ಉತ್ತರ ಪ್ರದೇಶ, ಕರ್ನಾಟಕದಂತೆ ಅಲ್ಲಾ, ಅದು ಬಹಳ ದೊಡ್ಡ ರಾಜ್ಯ, ಶಿಕ್ಷಣದಲ್ಲಿ ಹಿಂದುಳಿದು, ಹೆಚ್ಚೂ ಕಡಿಮೆ ಗೂಂಡಾ ರಾಜ್ಯ ಎನಿಸಿಕೊಂಡಿತ್ತು. ಅದನ್ನು ಸುಧಾರಿಸುವುದು ಸುಲಭದ ಮಾತಲ್ಲ. 

ನಾನು ಗಮನಿಸಿದ ಹಾಗೆ, ಪ್ರಕಾಶ್ ರೈ ಬೇರೆ ನಟರಂತೆ ಅಲ್ಲಾ. ಅವರು ಸಿದ್ದಾಂತಗಳೊಂದಿಗೆ ಬೆಳೆದವರು. ಚೆನ್ನಾಗಿ ಓದಿಕೊಂಡವರು, ಅವರ ಸ್ನೇಹ ವರ್ಗ ಕೂಡ ಪ್ರಜ್ಞಾವಂತರಿಂದ ಕೂಡಿದೆ. ವಿಚಾರವಂತರ ಬಳಗ ಹೊಂದಿದ್ದಾರೆ. ತಳ ಮಟ್ಟದಲ್ಲಿನ ವಾಸ್ತವಿಕತೆ ಗೊತ್ತಿದೆ, ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಬಂದವರು, ರಾತ್ರೋರಾತ್ರಿ ಸ್ಟಾರ್ ಆದವರಲ್ಲ. ಸುಮ್ಮನೆ ಕಾಟಾಚಾರಕ್ಕೆ ಮಾತನಾಡುವುದಿಲ್ಲ ಕೂಡ. ಅವರಿಗೆ ಉತ್ತರ ನೀಡುವ ಸಾಮಥ್ರ್ಯ ಬಹುತೇಕ ಕರ್ನಾಟಕದ ಬಿಜೆಪಿಯವರಲ್ಲಿ ಇದ್ದಂತೆ ನನಗೆ ಕಾಣಲಿಲ್ಲ, ಹಾಗಾಗಿಯೇ ಪ್ರಕಾಶ್ ರೈರವರನ್ನು ಕೆಟ್ಟ ಭಾಷೆಯಿಂದ ನಿಂದಿಸಿದರು, ಕೊನೆಗೆ ಯಾವ ಮಟ್ಟಕ್ಕೆ ಇಳಿಯಿತೆಂದರೆ ವಿವೇಕತನವೇ ಇಲ್ಲದ ಪ್ರಥಮ್, ಹುಚ್ಚ ವೆಂಕಟ್‍ರವರ ಮಾತುಗಳಿಗೆ ಮನ್ನಣೆ ನೀಡಿ, ಪ್ರಚಾರ ನೀಡಿದರು. 

ಇನ್ನೂ ಕರ್ನಾಟಕದ ಬಿಜೆಪಿಯ ವಿಷಯಕ್ಕೆ ಬರೋಣ. ನಾನು ಸೇರಿದಂತೆ ಕೋಟ್ಯಾಂತರ ಜನರು ಬಿಜೆಪಿಯನ್ನು ಬೆಂಬಲಿಸಿದ್ದೆವು. ಅದಕ್ಕೊಂದಿಷ್ಟು ಕಾರಣಗಳಿದ್ದವು, ನಿರೀಕ್ಷೆಗಳಿದ್ದವು. ಅದರ ಜೊತೆಗೆ ಕಾಂಗ್ರೇಸ್ ಬಗ್ಗೆ ತಿರಸ್ಕಾರ ಮತ್ತು ಬೇಸರವಿತ್ತು. ಬಿಜೆಪಿ ಬೆಳೆದಿದ್ದು, ವಿದ್ಯಾವಂತರ ಮತ್ತು ಪ್ರಜ್ಞಾವಂತರ ಪಕ್ಷವಾಗಿ. ಹಾಗಾಗಿಯೇ, ಇತ್ತೀಚಿನ ದಿನಗಳ ತನಕ ಗ್ರಾಮೀಣ ಪ್ರದೇಶ ಮತ್ತು ಸ್ಲಂ ಗಳಲ್ಲಿ ಬಿಜೆಪಿಗೆ ಓಟ್ ಕಡಿಮೆಯಿರುತ್ತಿತ್ತು. ನೀವು ಕರ್ನಾಟಕದಲ್ಲಿ ಬಿಜೆಪಿ ಬೆಳೆದು ಬಂದ ಹಾದಿಯನ್ನು ಗಮನಿಸಿದರೆ, ಮೊದಲೆಲ್ಲಾ ದಕ್ಷಿಣ ಕನ್ನಡದಲ್ಲಿಯೇ ಹೆಚ್ಚಿರುತ್ತಿತ್ತು. ಇದಕ್ಕೆ ಕಾರಣ, ಅದು ವಿದ್ಯಾವಂತರ ಜಿಲ್ಲೆ ಎನ್ನುವ ಮಾತಿತ್ತು. ಎಲ್‍ಕೆ ಅಡ್ವಾಣಿಯವರು ಯಡ್ಯೂರಪ್ಪರವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆಂದು ತಿಳಿದ ತಕ್ಷಣ ಅವರಿಂದ ದೂರ ಉಳಿದರು. ಪ್ರತಿ ವರ್ಷ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬರುತ್ತಿದ್ದರು, ಆದರೇ ನಂತರ ದೂರ ಇಟ್ಟರು. ಕಾರಣ ಆ ಪಕ್ಷದಲ್ಲಿನ ನೈತಿಕತೆ. ವಾಜಪೇಯಿ, ಮುರಳಿ ಮನೋಹರ್ ಜೋಷಿ, ಅಡ್ವಾಣಿಯವರನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ. ಆದರೇ, ಕರ್ನಾಟಕದಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿಯ ನಾಯಕರುಗಳ ನಡುವೆ ಅಂತಹ ದೊಡ್ಡ ವ್ಯತ್ಯಾಸವೇನೂ ಕಾಣುವುದಿಲ್ಲ. ಅದರಲ್ಲಿಯೂ ಇಂದಿನ ಕಾರ್ಯಕರ್ತರ ದೃಷ್ಟಿಯಲ್ಲಿ ಬಿಜೆಪಿ ಇರುವುದು ಹಿಂದುಗಳಿಗೆ ಮಾತ್ರ, ಅದಿಲ್ಲದೇ ಇದ್ದರೇ ಹಿಂದೂಗಳೇ ಇರುವುದಿಲ್ಲವೆಂದು ನಂಬಿದ್ದಾರೆ ಮತ್ತು ನಂಬಿಸುತ್ತಿದ್ದಾರೆ. 

ಹಾಗಾಗಿಯೇ ಪ್ರಕಾಶ್ ರೈ ವಿಷಯವನ್ನೂ ಪದೇ ಪದೇ ಧರ್ಮಕ್ಕೆ ಅಂಟಿ ಹಾಕುವುದು. ಮೊನ್ನೆ ಒಬ್ಬ ಪತ್ರಕರ್ತ ಮಂಡ್ಯದಲ್ಲಿ ಪ್ರಕಾಶ್ ರೈರವರನ್ನು ಬೇಕೆಂದೇ ಪ್ರಚೋದಿಸಿದ. ಆ ವಿಡಿಯೋವನ್ನು ಸಂಪೂರ್ಣವಾಗಿ ಹಾಕಲಿಲ್ಲ. ಕೇವಲ ಒಂದು ತುಣುಕನ್ನು ಹಾಕಿ, ಅದರಲ್ಲಿ ನಾನು ಹಿಂದೂ ಅಲ್ಲ ಎನ್ನುವುದನ್ನು ಹೈಲೈಟ್ ಮಾಡಲಾಗಿತ್ತು. ಈ ವಿಷಯಕ್ಕೆ ಸಂಭಂಧಿಸಿದಂತೆ ಸ್ವಲ್ಪ ಚರ್ಚಿಸೋಣ. ಹಿಂದೂ ದೇಶ ಎಂದರೇ ಏನು? ಭಾರತ ಯಾವಾತ್ತಾದರೂ ಹಿಂದೂ ದೇಶವಾಗಿತ್ತು? ಹಿಂದೂ ಎನ್ನವುದೇನು? ಹಾಗೆಂದು ಧರ್ಮವಿದೆಯಾ? ಇದೆಲ್ಲವೂ ಹೇಗೆ ಹುಟ್ಟಿತು? ಇದರ ಕುರಿತು ಪ್ರೋ. ಎಸ್.ಎನ್. ಬಾಲಗಂಗಾಧರರವರು ಕಳೆದ ನಲ್ವತ್ತು ವರ್ಷದಿಂದ ಸಂಶೋಧನೆ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಅವರ ಪುಸ್ತಕಗಳ ಮೂಲಕ ಅಥವಾ ಭಾಷಣಗಳ ಮೂಲಕ ತಿಳಿದುಕೊಳ್ಳಿ. ಸಂಕ್ಷಿಪ್ತವಾಗಿ ಹೇಳುವುದಾದರೇ ಹಿಂದೂ ಧರ್ಮವೆಂಬುದೇ ಇಲ್ಲ. ಮುಸಲ್ಮಾನರಿಗೆ, ಕ್ರೈಸ್ತರಿಗೆ ನಿದಿಷ್ಟವಾದ ಒಂದು ಪುಸ್ತಕವಿದೆ, ಅದರಂತೆಯೇ ಅವರು ಜೀವನ ಸಾಗಿಸಬೇಕು, ದೇವರನ್ನು ಕಾಣಬೇಕು. ನಮಗೆ ಹಾಗಿಲ್ಲ. ಭಾರತ ಸಂಸ್ಕøತಿ, ಸಂಪ್ರದಾಯಗಳ, ಆಚರಣೆಗಳ ದೇಶ. ನಮ್ಮಲ್ಲಿ ಧರ್ಮ ಎಂಬ ಪದ ಬಳಕೆಯೇ ಬೇರೆ, ಅದು ರಿಲಿಜಿನ್ ಅಲ್ಲಾ. ದಯೇಯೇ ಧರ್ಮದ ಮೂಲವಯ್ಯ – ಇಲ್ಲಿ ಧರ್ಮ ಎಂದರೆ ರಿಲಿಜಿನ್ ಅಲ್ಲ. ಹಾಗಾಗಿ ಈ ಹಿಂದೂ ಸ್ಥಾನ್ ಮಾಡುವುದು, ಹಿಂದೂ ರಾಷ್ಟ್ರ ಮಾಡುವುದು ಹೇಗೆ? ಮತ್ತೊಂದು ಉತ್ತಮ ಉದಾಹರಣೆ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು. ಅಲ್ಲಿ ಜೈನರು, ಬುದ್ದರು, ವೈಷ್ಣವರು, ಶೈವರು ಹೀಗೆ ಬಂದು ಹೋಗುತ್ತಿರುತ್ತಾರೆ ಯಾವುದೂ ಉಳಿದಿದ್ದು?

ನಮ್ಮೂರಿನ ಹತ್ತಿರ ಹಂಡ್ರಂಗಿ ಇದೆ. ಅಲ್ಲಿ ಘೋರಿಗಳಿವೆ. ಮಾಸ್ಮಾಲಮ್ಮ ಅಂತಾ ಜಾತ್ರೆ ಮಾಡ್ತಾರೆ, ಎಲ್ಲಾ ಜಾತಿಯವರು ಹೋಗ್ತಾರೆ, ಹರಕೆ ಕಟ್ತಾರೆ. ಈ ಧರ್ಮವೇ ಬರೋದಿಲ್ಲ. ಅದೇ ರೀತಿ ಸಾಕಷ್ಟು ಊರುಗಳು ನಿಮಗೆ ಸಿಗುತ್ತವೆ. ಇದು ಕರ್ನಾಟಕ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲಿಯೂ ಕೂಡ. ಮೊಘಲರು ನಮ್ಮ ಮೇಲೆ ಆಕ್ರಮಣ ಮಾಡಿದರು, ನಾಶ ಮಾಡಿದರು, ಆದರೇ ನಮ್ಮ ಅನೇಕರು, ಅಕ್ಬರ್, ಔರಂಗಜೇಬ್, ಷಹಾಜಹಾನ್ ರವರ ಘೋರಿಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದರರ್ಥವೇನು? ನಾವು ಚಿಕ್ಕವರಿದ್ದಾಗ ಇಂಥವುಗಳು ನಮ್ಮ ತಲೆಯೊಳಕ್ಕೆ ಬರಲೇ ಇಲ್ಲ. ಬಹುಶಃ ಮಾಧ್ಯಮಗಳು ಕಡಿಮೆಯಿತ್ತು? ರಾಜಕಾರಣಿಗಳು ಈ ಮಟ್ಟಕ್ಕೆ ಇಳಿದಿರಲಿಲ್ಲ. ಇರಲಿ, ಇಲ್ಲಿ ರೈ ರವರು ಹೇಳುತ್ತಿರುವುದು ಅದನ್ನೇ. ಇದು ಎಲ್ಲರ ದೇಶವೆಂದು. ಅದನ್ನ ಅವರು ಜ್ಯಾತ್ಯಾತೀತ ಅನ್ನೊ ಪದವನ್ನು ಬಳಸುತ್ತಿದ್ದಾರೆ ಅಷ್ಟೆ. ವೈವಿಧ್ಯತೆಯೇ ಬದುಕು. ಬಿನ್ನಾಭಿಪ್ರಾಯಗಳಿರಬೇಕು. ಚರ್ಚೆಗಳಾಗಬೇಕು. ಪ್ರಶ್ನೆಗೆ ಉತ್ತರ ಕೊಡಬೇಕು ಮತ್ತು ಹುಡುಕಬೇಕು. ಅದನ್ನು ಬಿಟ್ಟು ಪ್ರಶ್ನೆಗೆ ಪ್ರಶ್ನೆ ಹಾಕುವುದಲ್ಲ. ಪಲಾಯನವಾದ ಮಾಡುವುದಲ್ಲ. 

ಈ ಲೇಖನಕ್ಕೆ ನೇರ ಸಂಭಂಧವಿಲ್ಲದೇಯಿದ್ದರೂ ಒಂದು ಮಾತನ್ನು ಹೇಳುತ್ತೇನೆ. ಇತ್ತೀಚಿನ ದಿನಗಳಲ್ಲಿ ಪಲಾಯನವಾದದ ಇನ್ನೊಂದು ಮುಖವಿದು. ಇದು ಭ್ರಷ್ಟಾಚಾರವನ್ನು ಬಿಗಿದಪ್ಪಿರುವುದರ ಪರಿಣಾಮ. ಇದಕ್ಕೆ ಯಾರೊಬ್ಬರೂ ಹೊರತಲ್ಲ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂದರೆ, ಬಿಜೆಪಿ ಮಾಡಿಲ್ವಾ? ಬಿಜೆಪಿ ಮಾಡಿದೆ ಎಂದರೇ ಕಾಂಗ್ರೇಸ್ ಮಾಡಿಲ್ವ? ವಂಶ ರಾಜಕೀಯ, ಅವರೂ ಮಾಡಿಲ್ವ? ಹೀಗೆ ಎಲ್ಲವನ್ನೂ ಸಮರ್ಥಿಸಿಕೊಳ್ಳವುದು. ಅವರು ಕಚಡ ತಿಂದರೇ ನೀವು ತಿನ್ನೋದಾ? ಪ್ರಕಾಶ್ ರೈ ಮೋದಿಯನ್ನು ಪ್ರಶ್ನಿಸಿದರೆ, ಸಿದ್ದರಾಮಯ್ಯರವರನ್ನು ಪ್ರಶ್ನಿಸಲಿ ಎನ್ನವುದು. ದಿನೇಶ್ ಗುಂಡೂರಾವ್ ಯೋಗಿಯನ್ನು ಬೈದರೆ ಮುಲ್ಲಾನನ್ನು ಬೈಯ್ಯಲಿ ಎನ್ನುವುದು. ಇದೆಲ್ಲಿಗೆ ತಲುಪಿತೆಂದರೆ ಆಸಿಫಾ ರೇಪ್ ವಿಷಯಕ್ಕೂ, ಹಿಂದೂ ಹುಡುಗಿಗೆ ಯಾಕೆ ಪ್ರತಿಭಟಿಸಿಲ್ಲ ಎಂದು ಕೇಳುವುದು. ಏನಾಗಿದೆ ರೀ ನಮ್ಮ ಜನಕ್ಕೆ. ನಾಚಿಕೆ ಮಾನ ಮರ್ಯಾದೆ ಅನ್ನೊದೆಲ್ಲಾ ಮಾರಿ ಕೊಂಡ್ರಾ? 

ಮತ್ತೊಂದು ಮುಖ್ಯವಾದ ವಿಷಯ. ಕಾವೇರಿ ವಿಷಯದಲ್ಲಿ ನಿಮ್ಮ ನಿಲುವೇನು? ಆಗ ಎಲ್ಲಿ ಹೋಗಿದ್ದರು? ಅಲ್ಲಾ ಸ್ವಾಮೀ. ಪ್ರಕಾಶ್ ರೈ ನಿಲುವಿಂದ ಏನಾಗುತ್ತೆ? ಅವರು ಯಾರು? ಇಂಜಿನಿಯರ್? ಜಲತಜ್ಞ? ಪರಿಣಿತ? ನಾನು ಗಮನಿಸಿದ್ದೇನೆ, ಟಿವಿಗಳಲ್ಲಿ ನಟರನ್ನ, ಸೆಲೆಬ್ರಿಟಿಗಳನ್ನ, ರಾಜಕಾರಣಿಗಳನ್ನ ತಂದು ಕೂರಿಸಿ ಕಾರ್ಯಕ್ರಮ ಮಾಡ್ತಿರಲ್ಲ. ನಿಮಗೆ ಒಂದು ನದಿಯ ಬಗ್ಗೆ ಏನಾದರೂ ಗೊತ್ತಾ? ಮೊನ್ನೆ ಅವರ ವಿಡಿಯೋ ಬಹಳ ಖುಷಿಯಾಯ್ತು. ನಾನು ಸತತ ಹತ್ತು ವರ್ಷಗಳ ಕಾಲ ನೀರಿನ ಬಗ್ಗೆ ಸಂಶೋಧನೆ ಮಾಡಿದ್ದೀನಿ, ಅದರಲ್ಲಿ ಆರು ವರ್ಷ ನದಿಯ ಕುರಿತು, ನನಗೆ ಇವರೆಲ್ಲರೂ ಮಾತನಾಡುವಾಗ ಅಸಹ್ಯ ಎನಿಸುತ್ತೆ. ವ್ಯವಸ್ತೆಯ ಕುರಿತು ಬೇಸರ ಜಿಗುಪ್ಸೆ ಕೂಡ ಬರುತ್ತೆ. ಹಾಗಾಗಿಯೇ ನಾನು ಹೆಚ್ಚಿನ ಬಾರಿ ಮಾಧ್ಯಮಗಳನ್ನು ಉಗಿದು ಉಪ್ಪಿನಕಾಯಿ ಹಾಕುವುದು. ಇವರು ತೋರಿಸುವ ಎಲ್ಲವನ್ನೂ ಜನರು ನಂಬುತ್ತಾರೆ. 

ಉಪಸಂಹಾರ: ಬಿಜೆಪಿಗರೇ ನಿಮ್ಮ ಪಕ್ಷವನ್ನು ಕಟ್ಟಿ ಬೆಳೆಸಲು ಸಾಕಷ್ಟು ಜನರು ಶ್ರಮಿಸಿದ್ದಾರೆ. ಬಿಜೆಪಿ ಉತ್ತಮ ಉದ್ದೇಶವನ್ನಿಟ್ಟುಕೊಂಡು ಆದರ್ಶಗಳನ್ನು, ಸಂಸ್ಕøತಿ, ಸಂಸ್ಕಾರವನ್ನು ಜೊತೆಗಿಟ್ಟುಕೊಂಡು ಬೆಳೆದ ಪಕ್ಷ. ದೇಶದ ಗೌರವ, ಘನತೆಯನ್ನು ಎತ್ತಿ ಹಿಡಿಯಬೇಕು. ಅದನ್ನು ಕೀಳುಮಟ್ಟದ ರಾಜಕೀಯಕ್ಕೆ ಬಳಸಿ, ಕೆಟ್ಟ ಭಾಷೆಯಿಂದ ಹಾಳು ಮಾಡಬೇಡಿ. ಮೊದಲು ಓದಿಕೊಂಡು, ವಿಚಾರಗಳನ್ನು ತಿಳಿದು ಮಾತನಾಡಿ. ಪ್ರಕಾಶ್ ರೈ ಹೆಂಡತಿಯನ್ನು ಬೈದದ್ದು ಒಂದು ಹೆಣ್ಣಿಗೆ ಮಾಡಿದ ಅವಮಾನವೆಂಬುದನ್ನು ಮರೆಯಬೇಡಿ. ಪ್ರಕಾಶ್ ರೈ ರವರೆ ನೀವು ಮೋದಿಯನ್ನು ಬಿಜೆಪಿಯನ್ನು ದೂರುವ ಉತ್ಸಾಹದಲ್ಲಿ ರಾಹುಲ್ ಗಾಂಧಿಯಂತವರನ್ನು ಅಪ್ಪುವುದು ಸರಿಯಿಲ್ಲ. ಯೋಗ್ಯತೆಯಿರುವ ನಾಯಕರೊಂದಿಗಿರಿ, ಯಾವುದೇ ಪಕ್ಷದಲ್ಲಿರಲೇಬೇಕೆಂಬ ನಿಯಮವಿಲ್ಲ. ಎಲ್ಲರನ್ನೂ ಪ್ರಶ್ನಿಸೋಣ ಪಕ್ಷಾತಿತವಾಗಿ. 

ಅನ್ಯವಾರ್ತೆ: ಬಿಡುವ ಹಾದಿಯಲಿ!!

ಅನ್ಯವಾರ್ತೆ: ಬಿಡುವ ಹಾದಿಯಲಿ ಹರೀಶ್‌ ಬಾನುಗೊಂದಿ ಈ ಲೇಖನವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಯತ್ನಿಸುತ್ತಿದ್ದೆ. ಬರೆಯುವ ಪ್ರಯತ್ನ ಮಾಡಿರಲಿಲ್ಲ. ಇದಕ್ಕೆ ಎರಡು ...