28 ಏಪ್ರಿಲ್ 2020

ಓದು, ಬರವಣಿಗೆಯಿಂದ ದೂರಾಗಿ, ದೃಶ್ಯ ಮಾಧ್ಯಮದ ಆಯ್ದ ತುಣುಕುಗಳು ಮತ್ತು ಪೋಸ್ಟ್‍ಗಳ ಹಾವಳಿಯಿಂದ ನರಳುತ್ತಿರುವ ಭಾರತ!


ಆತ್ಮೀಯರೇ,

ನೀವು ನನ್ನ ಹಳೆಯ ಬರಹಗಳನ್ನು ಓದದೇ ಇದ್ದರೂ ಪರವಾಗಿಲ್ಲ, ಆದರೇ, ಈ ಲೇಖನವನ್ನು ಕಡ್ಡಾಯವಾಗಿಯೂ ಓದಬೇಕೆಂದು ವಿನಂತಿಸುತ್ತೇನೆ. ಒಮ್ಮೆ ಓದಿ, ನಂತರ ಪ್ರತಿಕ್ರಿಯಿಸಿ ಅಥವಾ ಮರೆತು ಬಿಡಿ, ಹೋದರೇ, ನಿಮ್ಮ ಹತ್ತು ನಿಮಿಷ ಹೋಗುತ್ತೇ ಅಷ್ಟೆ. ಸರಿ ಎನಿಸಿದರೇ, ಬದಲಾವಣೆಯ ಪರ್ವ ಶುರುವಾಗುತ್ತದೆ. ಓದುವಾಗ, ಸ್ವಲ್ಪ ಕಸಿವಿಸಿಯಾಗಲೂಬಹುದು. ಅದಕ್ಕಾಗಿ ಪೀಠಿಕೆಯನ್ನು ನೀಡುತ್ತೇನೆ. ಈ ಲೇಖನದ ಉದ್ದೇಶ, ಓದಿನ ಮಹತ್ವ, ಓದುಗರ ಮಿತಿ ಮತ್ತು ಆಯ್ಕೆಯಾಗಿದೆ.

ಓದುವುದು ಎಂದರೇ, ಅನೇಕರಿಗೆ ಅಲರ್ಜಿ, ಅದು ಮೆಚ್ಚುವ ಮಾತು. ಅದರಲ್ಲಿ ಅತಿಶಯೋಕ್ತಿಯೂ ಇಲ್ಲ, ಅಚ್ಚರಿಯೂ ಇಲ್ಲ. ಓದಿನ ಬಗ್ಗೆ ತಾತ್ಸಾರವೇಕೆ? ಅಸಡ್ಡೆ ಏಕೆ? ಎಲ್ಲರಿಗೂ ಯಾವುದಾದರೂ ಒಂದರ ಬಗ್ಗೆ ಆಸಕ್ತಿ ಇದ್ದೇ ಇರುತ್ತದೆ, ಮತ್ತೊಂದರ ಬಗ್ಗೆ ಅಸಡ್ಡೆ ಇದ್ದೇ ಇರುತ್ತದೆ. ಅದನ್ನು ಪಟ್ಟಿ ಮಾಡುತ್ತಾ ಹೋದರೇ, ನೀವು ಈ ಲೇಖನವನ್ನು ಹತ್ತು ನಿಮಿಷಕ್ಕೆ ಓದಿ ಮುಗಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಮನೆಗಳಲ್ಲಿ ಕೇಳಿಬರುವ ಒಂದು ಮಾತು, ಟಿವಿ ಮತ್ತು ಮೊಬೈಲ್ ಇದ್ದರೇ ಸಾಕು, ಬೇರೆ ಜಗತ್ತೇ ಬೇಡ. ಇಪ್ಪತ್ತನಾಲ್ಕು ಗಂಟೆಯೂ ಮೊಬೈಲ್ ಮತ್ತು ಟಿವಿ ಮುಂದೆ ಕುಳಿತಿರುತ್ತಾರೆ. ಈ ವಿಷಯವನ್ನೇ ಚರ್ಚಿಸೋಣ. ಟಿವಿಯ ಬಗ್ಗೆ ವ್ಯಾಮೋಹವಿದೆ, ಆದರೇ, ಟಿವಿಯಲ್ಲಿ ಬರುವ ಎಲ್ಲವನ್ನೂ ನೋಡುತ್ತೇವೆಯೇ? ಇಲ್ಲ, ನಮಗೆ ಹಿಡಿಸುವುದನ್ನು ಮಾತ್ರ. ಅದರಂತೆಯೇ, ಸಿನೆಮಾ, ಎಲ್ಲಾ ಸಿನೆಮಾವನ್ನೂ ನೋಡುತ್ತೇವೆಯೇ? ನಾವೇ ಮೆಚ್ಚಿ, ಆರಾಧಿಸುವ ನಮ್ಮ ನಾಯಕ/ನಾಯಕಿಯ ಅದೆಷ್ಟೋ ಸಿನೆಮಾಗಳನ್ನು ನಾವು ದೂಷಿಸಿ ಥಿಯೆಟರಿನಿಂದ ಹೊರಬಂದಿಲ್ಲವೇ?

ಅಂದರೇ, ಆಸಕ್ತಿ ವಿಷಯದ್ದೇ ಆದರೂ ಅಲ್ಲಿಯೂ ಆಯ್ಕೆಯೆಂಬುದಿದೆ. ಆರಿಸುತ್ತೇವೆ. ಒಂದು ಪಕ್ಷವನ್ನು ಬೆಂಬಿಲಿಸಿದರೂ, ಎಲ್ಲರನ್ನೂ ಇಷ್ಟಪಡುತ್ತೇವೆಯೇ? ಒಂದು ಕ್ರಿಕೇಟ್ ಟೀಮ್ ಅನ್ನು ಪ್ರೀತಿಸಿದರೂ ಎಲ್ಲರನ್ನೂ ಪ್ರೀತಿಸಿಸುತ್ತೇವೆಯೇ? ಇಲ್ಲವೇ ಇಲ್ಲ.

ಈಗ ಓದಿಗೆ, ಮರಳಿ ಬರೋಣ. ಈ ಓದುವಿನ ಬಗ್ಗೆ ತಾತ್ಸಾರ ಹುಟ್ಟುವುದು, ಶಾಲೆ ಮತ್ತು ಕಾಲೇಜುಗಳಲ್ಲಿ. ಅದು, ಪಠ್ಯ ಪುಸ್ತಕಗಳು ಆಸಕ್ತರಹಿತವಾಗಿರುವುದಕ್ಕೋ ಅಥವಾ ಮಾಸ್ಟರುಗಳು ಆ ರೀತಿ ಪಾಠ ಮಾಡಿರುವುದಕ್ಕೋ ಗೊತ್ತಿಲ್ಲ. ಅಂತೂ, ಈ ಓದು ಇಲ್ಲಿಗೆ ಮುಗಿದರೇ ಸಾಕು ಎನಿಸುತ್ತದೆ. ಪ್ರಾಮಾಣಿಕವಾಗಿ ಹೇಳುತ್ತೇನೆ, ನನ್ನದು ಪರಿಸರ ವಿಜ್ಞಾನ ವಿಷಯ, ನನಗೆ ಕಾಲೇಜಿನಲ್ಲಿ ಓದಿದ್ದಕ್ಕಿಂತ ಹೆಚ್ಚು ಅರ್ಥವಾಗಿದ್ದು, ತೇಜಸ್ವಿಯವರ, ಕುವೆಂಪುರವರ, ಕಾರಂತಜ್ಜರ ಪುಸ್ತಕಗಳಿಂದ. ಅದ್ಯಾಕೆ, ಆ ಮಟ್ಟಿಗಿನ ಬೇಸರ ತರಿಸುವ ಪುಸ್ತಕಗಳನ್ನು ಬರೆಯುತ್ತಾರೆ? ಮತ್ತು ಅದನ್ನು ವಿದ್ಯಾರ್ಥಿಗಳ ಹಣೆಗೆ ಕಟ್ಟುತ್ತಾರೆ?
ಇರಲಿ, ಅದು ವಿದ್ಯಾರ್ಥಿದೆಸೆ. ಅದಕ್ಕಾಗಿಯೇ, ನೋಡಿ ಕೋಟ್ಯಾಂತರ ವಿದ್ಯಾರ್ಥಿಗಳು, ಕಾಲೇಜು ಮುಗಿದ ತಕ್ಷಣ ಓದುವುದನ್ನೇ ಬಿಟ್ಟುಬಿಡುತ್ತಾರೆ. ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅಲ್ಲಿಂದ ಒಂದು ಹೆಜ್ಜೆ ಮುಂದಕ್ಕೆ ಹೋಗೋಣ. ಈ ಓದುವುದು ಏತಕ್ಕೆ? ಕೆಲಸ/ಉದ್ಯೋಗ ಪಡೆಯುವುದಕ್ಕೆ! ಇದು, ಚಿಕ್ಕನಿಂದಲೂ ಮಕ್ಕಳ ಮೆದುಳಲ್ಲಿ ನಾವು ತುಂಬುತ್ತಾ ಬಂದಿದ್ದೇವೆ. ಆದ್ದರಿಂದ, ಮಕ್ಕಳ ಗುರಿ ಕೆಲಸ ಕೊಡಿಸುವ ಪುಸ್ತಕವನ್ನು ಮಾತ್ರವೇ ಓದುವುದು.  ನಾನು ಅನೇಕರನ್ನು ಕೇಳಿದ್ದೇನೆ, ನೀವು ಪುಸ್ತಕ ಓದುತ್ತೀರಾ? ಎಂದು. ಅದಕ್ಕೇ ಅವರ ಒಂದೇ ಉತ್ತರ, ಅಷ್ಟೆಲ್ಲಾ ಟೈಮ್ ಎಲ್ಲಿದೆ? ಅಥವಾ ಓದಿನಿಂದ ಏನು ಬರಬೇಕೆಂಬ ತಾತ್ಸಾರದ ಉತ್ತರ. ಇದನ್ನು ಇನ್ನೂ ಸ್ವಲ್ಪ ಆಳಕ್ಕಿಳಿದು ನೋಡಬೇಕಿದೆ.
ಎಲ್ಲರೂ ಓದಲೇಬೇಕೆಂಬ ನಿಯಮವಿಲ್ಲ. ಆದರೇ, ಓದುವುದರಿಂದ ಏನೆಲ್ಲಾ ಲಾಭವಿದೆ ಎಂಬುದನ್ನಾದರು ತಿಳಿದಕೊಳ್ಳಬೇಕಿತ್ತು. ಆ ಜಾಗೃತಿ ಮೂಡಿಸಲು ಸಾಧ್ಯವೇ? ಅಸಾಧ್ಯವಾದದ್ದೂ. ಕೆಲವೊಂದು ವಿಚಾರಗಳು ಸ್ವಂತ ಅನುಭವಕ್ಕೆ ಬಂದರೇ ಮಾತ್ರವೇ ಗ್ರಹಿಸಲು ಸಾಧ್ಯ. ಈ ಓದುವುದು ಅಷ್ಟೆ. ಹಲವರು ಕೇಳುವ ಪ್ರಶ್ನೆಗಳು ಹೀಗಿರುತ್ತವೆ. ಏಕೆ ಓದಬೇಕು? ಅದರಿಂದ ಏನು ಉಪಯೋಗ? ಕೆಲಸ ಸಿಗುವಂತಿದ್ದರೇ ಓದೋನ. ನಮ್ಮ ವಿಷಯಕ್ಕೆ ಸಂಬಂಧಿಸಿದ್ದು ಇದ್ದರೇ ಓದೋನ. ಕೆಲಸದಲ್ಲಿ ಪ್ರಮೋಷನ್ ಸಿಗುವಂತಿದ್ದರೇ ಓದೋನ. ಅದನ್ನು ಬಿಟ್ಟು, ಸಾಹಿತ್ಯ, ವೈಚಾರಿಕತೆ ಇವೆಲ್ಲವೂ ಬೇಕಾ? ಇದು ಕಾಲಹರಣ. ಎಲ್ಲವನ್ನೂ ಲಾಭಾಂಶ, ಅದರಲ್ಲಿಯೂ ಲೌಕಿಕತೆ ಆಧಾರದಲ್ಲಿ ನೋಡಿರುವುದರ ಪರಿಣಾಮವಿದು. ಓದುವುದರ ಅಲೌಕಿಕ ಲಾಭಾಂಶಗಳ ಕಡೆಗೊಮ್ಮೆ ಗಮನ ಹರಿಸೋನ.

ಮುಂದಿನ ಭಾಗವನ್ನು ನಾನು ಮೂರು ಭಾಗಗಳಾಗಿ ವಿಂಗಡಿಸುತ್ತೇನೆ. ಮೊದಲನೆಯದ್ದು, ಓದದೇ ಇದ್ದರೇ ಆಗುವ ಅಥವಾ ಆಗುತ್ತಿರುವ ನಷ್ಟಗಳು, ಓದುವಾಗ ಆಯ್ಕೆ ಮಾಡಿಕೊಳ್ಳುವುದರ ನಷ್ಠಗಳು ಮತ್ತು ಅದರಿಂದಾಗಿ ಬದಲಾದ ಮನಸ್ಥಿತಿಗಳು.
ಹಾಗೆಯೇ, ಒಮ್ಮೆ ಇಪ್ಪತ್ತು ವರ್ಷಗಳ ಹಿಂದಕ್ಕೆ ಹೋಗಿ ಬರೋಣ. ಜ್ಞಾನದ ಅಥವಾ ಮಾಹಿತಿಯ ಮೂಲ ಯಾವುದಿತ್ತು? ಓದು, ದಿನ ಪತ್ರಿಕೆಗಳು, ವಾರ ಪತ್ರಿಕೆಗಳು, ಮಾಸಿಕ ಪತ್ರಿಕೆಗಳು, ಪುಸ್ತಕಗಳು, ಇತ್ಯಾದಿ. ಒಟ್ಟಾರೆಯಾಗಿ ಓದುವುದೇ ಮೂಲವಾಗಿತ್ತು. ಅನೇಕ ವಿಚಾರಗಳನ್ನು ಓದಿದವರು, ತಿಳಿದವರು ಇತರರಿಗಿಂತ ಸ್ವಲ್ಪವಾದರೂ ಭಿನ್ನವಾಗಿ ಆಲೋಚಿಸುತ್ತಿದ್ದರು ಮತ್ತು ಆಲೋಚಿಸಲೇಬೇಕಿತ್ತು. ಈಗಲೂ, ಅಷ್ಟೆ ಸಾಮಾನ್ಯವಾಗಿ ತಪ್ಪಾಗಿ ಮಾತನಾಡಿದರೆ, ನಮ್ಮವರೇ ಹೇಳುವ ಮಾತುಗಳು, ನೀನೇನು ಅವಿದ್ಯಾವಂತನ ರೀತಿ ಮಾತಾಡುತ್ತೀಯ? ಗೊತ್ತಾಗಲ್ವ ಎಂದು. ಅಂದರೇ, ಓದಿಗೆ ಒಂದು ಬೆಲೆಯಿದೆ ಎಂಬುದರ ಅರ್ಥ.

ನಮ್ಮ ಹಿರಿಯ ಸಾಹಿತಿಗಳನ್ನೊಮ್ಮೆ ಸುತ್ತಿ ಬನ್ನಿ. ಅವರ ವಿದ್ಯಾರ್ಹತೆಗಳನ್ನು ನೋಡಿ. ಎಲ್ಲರೂ, ಕಾಲೇಜಿಗೆ, ಹೋಗಿ ಎಂಎ, ಪಿಎಚ್‍ಡಿ ಮಾಡಿದವರಲ್ಲ. ಅದರಲ್ಲಿ ನನ್ನ ನೆಚ್ಚಿನ ಲೇಖಕರಾದ ಕಾರಂತಜ್ಜ, ಯಾವ ವಿಜ್ಞಾನಿಗೂ, ಕಡಿಯಿಲ್ಲದ ಜ್ಞಾನವನ್ನು ಹೊಂದಿದವರು. ಆ ಕಾಲದಲ್ಲಿ, ಯಾವ ಮಾಹಿತಿ ತಂತ್ರಜ್ಞಾನವೂ ಇಲ್ಲದೇ, ಆ ಮಟ್ಟಕ್ಕೆ ಅವರು ಜ್ಞಾನಾರ್ಜನೆ ಮಾಡಿಕೊಂಡು, ಅಷ್ಟೊಂದು ವಿಚಾರಗಳ ಕುರಿತು ಬರೆಯುವುದಕ್ಕೆ ಹೇಗೆ ಸಾಧ್ಯವಾಯಿತು? ಕಥೆ, ಕಾದಂಬರಿ ಬರೆಯುವುದು ಒಂದು ವಿಧ. ಅನೇಕ ಬಾರಿ, ತಮ್ಮ ಅನುಭವದಿಂದ, ಕಲ್ಪನೆಯಿಂದ ಬರೆಯಬಹುದು. ಆದರೇ, ವಿಜ್ಞಾನ ಕುರಿತು ರಚಿಸಬೇಕೆಂದರೇ? ಅದೇ ರೀತಿ, ತೇಜಸ್ವಿಯವರು ಮಿಲ್ಲೇನಿಯಂ ಸರಣಿ ತಂದಾಗಲೂ ಅಷ್ಟೇ, ಸುಮಾರು ಐವತ್ತು ವರ್ಷಗಳ ಕಾಲ ನಿರಂತರವಾಗಿ ಮಲೆನಾಡಿನ ಯಾವುದೋ ಮೂಲೆಯಲ್ಲಿ ಕುಳಿತು, ವಿಜ್ಞಾನದ ಮಾಸಿಕ ಪತ್ರಿಕೆಗಳನ್ನು ತರಿಸಿಕೊಂಡು ಓದುವುದು, ಅದನ್ನು ಓದುಗರಿಗೆ ಕನ್ನಡದಲ್ಲಿ ತಲುಪಿಸಿದ್ದು! ಅಚ್ಚರಿಯಲ್ಲವೇ?

ಹಿಂದಿನ ಪೀಳಿಗೆಯನ್ನು ನೋಡಿ, ಓದಿದವರೆಲ್ಲಾ ಸರ್ಕಾರಿ ಕೆಲಸಕ್ಕೆ ಸೇರಿಲ್ಲ. ಆದರೂ, ಅಕ್ಷರ ಜ್ಞಾನಕ್ಕಾಗಿ ಓದಿದವರು. ಈಗ, ಪ್ರೈಮರಿ ಶಾಲೆಗೆ ಸೇರಿಸುವ ಮುನ್ನವೇ ಯೋಚಿಸುತ್ತಾರೆ. ಯಾವ ಶಾಲೆಗೆ ಸೇರಿದರೇ, ಯಾವ ಕೋರ್ಸ್ ಸಿಗುತ್ತದೆ. ಯಾವ ಕೋರ್ಸ್ ಮಾಡಿದರೇ, ಎಷ್ಟು ಉದ್ಯೋಗವಕಾಶವಿದೆ ಎಂದು. ಅದರಲ್ಲಿ ತಪ್ಪೇನು? ತಪ್ಪೇನು ಇಲ್ಲ. ಉದ್ಯೋಕ್ಕಾಗಿಯೇ ಓದುವವನು, ಪ್ರಪಂಚ ತಿಳಿಯಲಾರ. ತಿಳಿದು ಏನು ಮಾಡಬೇಕು? ಅದನ್ನು ಮುಂದಕ್ಕೆ ವಿವರಿಸುತ್ತೇನೆ.

ಅದಕ್ಕೂ ಮುಂಚಿತವಾಗಿ, ಹೇಗಿದ್ದ ಸನ್ನಿವೇಶಗಳು ಹೇಗೆ ಬದಲಾದವು ಎಂಬುದನ್ನೊಮ್ಮೆ ಅವಲೋಕಿಸೋನ. ಮೊದಲೆಲ್ಲ ಸುದ್ದಿ ಓದಿ ವಿಷಯ ಸಂಗ್ರಹಣೆಯಾಗುತ್ತಿತ್ತು. ನಂತರದ ದಿನಗಳಲ್ಲಿ, ವಾರ್ತೆಗಳು ಬಂದವು. ಅದರ ಜೊತೆಗೆ ತಿಳಿದವರ ಭಾಷಣ ಕೇಳುವುದು ರೂಢಿಯಾಗಿತ್ತು. ಒಂದು ಕಾಲದಲ್ಲಿ ಭಾಷಣಕಾರರಿಗೆ ಎಲ್ಲಿಲ್ಲದ ಬೇಡಿಕೆಯಿತ್ತು. ಅದಾದ, ನಂತರ 24 ಗಂಟೆಯು ಸುದ್ದಿ ವಾಹಿನಿಗಳು ಬಂದವು. ಗೂಗಲ್ ಬಂತು. ಎಲ್ಲದಕ್ಕೂ ಗೂಗಲ್ ಹುಡುಕುವ ಚಾಳಿ ಬಂತು. ನಂತರದ ದಿನಗಳಲ್ಲಿ ಯೂಟ್ಯೂಬ್ ನೋಡುವುದು ಪ್ರಾರಂಭವಾಯಿತು. ನಂತರ, ಆಯ್ದ ಭಾಗವನ್ನು ಮಾತ್ರ ಕತ್ತರಿಸಿ, ಸುದ್ದಿಯನ್ನು ತಿರುಚುವ ಪದ್ಧತಿ ಶುರುವಾಯಿತು. ಅಂದರೇ, ಒಂದು ಗಂಟೆಯ ಭಾಷಣದಲ್ಲಿ ಹಿಡಿಸುವ ಅಥವಾ ಹಿಡಿಸದ ಕೇವಲ ಐದತ್ತು ನಿಮಿಷಗಳನ್ನು ಕತ್ತರಿಸಿ ಪ್ರಸಾರ ಮಾಡುವುದನ್ನು ಸೋಷಿಯಲ್ ಮೀಡಿಯಾ ಬಂದ ಮೇಲೆ ಆರಂಭಿಸಿದವು. ಈಗ, ಅದೆಲ್ಲವನ್ನು ಮರೆತು, ಮನಸ್ಸಿಗೆ ಬಂದದ್ದನ್ನು ಕೇವಲ ನಾಲ್ಕು ಸಾಲುಗಳಲ್ಲಿ ಯಾವುದೋ ಫೋಟೋ ಹಾಕಿ ಅದನ್ನೇ ಸತ್ಯವೆಂಬಂತೆ ನಂಬಿಸುವ ಸಂಸ್ಕøತಿ ಬಂದಿದೆ. ಯಾವುದನ್ನೂ ಆಲೋಚಿಸದೇ, ಅದೇ ಸತ್ಯವೆಂದು ನಂಬಿ ಅವೆಲ್ಲವನ್ನೂ ಹಂಚಿಕೊಳ್ಳುವುದು ಅದರಿಂದ ಸಮಾಜದ ಆರೋಗ್ಯವನ್ನು ಹಾಳು ಮಾಡುವುದು ಅತಿಯಾಗಿದೆ.

ಓದುವುದರಿಂದಾಗುವು ಅನುಕೂಲಗಳಾವು? ಯಾವುದನ್ನೇ ಓದಿ, ಓದು ಎಂಬುದು ನಮಗೆ ಅರಿವಿಲ್ಲದೇ ನಮ್ಮಲ್ಲಿ ವೈಚಾರಿಕತೆಯನ್ನು ಬೆಳೆಸುತ್ತದೆ. ಅತಿಯಾದ ತಾಳ್ಮೆ ನಮಗೆ ಬರುತ್ತದೆ. ಏಕಾಗ್ರತೆ ನಮ್ಮನ್ನು ಆವರಿಸುತ್ತದೆ. ನಾವೆಷ್ಟು ಅಲ್ಪ ಜ್ಞಾನಿಗಳು, ನಾವೇನು ಎಂಬುದರ ವಾಸ್ತವಿಕ ಅರಿವು ನಮಗೆ ಬರುತ್ತದೆ. ನಾವು, ನಮ್ಮದೇ ರೀತಿಯಲ್ಲಿ ಆಲೋಚಿಸು ಸಾಮಥ್ಯವನ್ನು ಕೊಡುತ್ತದೆ. ನಮ್ಮದೇ ರೀತಿ ಎಂದರೇನು? ಹೌದು, ಓದದೇ ಇದ್ದರೆ, ನಾವು ಕಂಡಿದ್ದೆಲ್ಲವೂ ಸತ್ಯ, ನಾವು ಕೇಳಿದ್ದೆಲ್ಲವೂ ಸತ್ಯವೆಂಬ ಭ್ರಮೆಯಲ್ಲಿ ಜೀವನ ಸವೆಸುತ್ತೆವೆ. ಓದಿದಾಗ, ಬೇರೊಂದು ಆಯಾಮದಲ್ಲಿಯೂ ಅದನ್ನು ಕಾಣುವುದಕ್ಕೆ ಬರುತ್ತದೆ. ಓದು, ಪುಸ್ತಕವೆಂಬದು ಮನುಷ್ಯನ ಆಪ್ತ ಮಿತ್ರವೆಂಬುದರಲ್ಲಿ ಸಂಶಯವಿಲ್ಲ. ಯಾವುದೇ, ಸಮಯದಲ್ಲಿ ಎಂತಹ ಕೆಟ್ಟ ಸನ್ನಿವೇಶದಲ್ಲಿಯೂ ಒಂದು ಪುಸ್ತಕ ನಿಮ್ಮ ಖಿನ್ನತೆಯನ್ನು ದೂರವಿಡುವುದಕ್ಕೆ ಸಹಕರಿಸುತ್ತದೆ. 

ಈಗ ಕೊನೆಯ ಹಂತಕ್ಕೆ ಬರೋಣ ಯಾರು ಯಾವ ರೀತಿಯ ಪುಸ್ತಕಗಳು ಬಯಸುತ್ತಾರೆ ಮತ್ತು ಓದುತ್ತಾರೆ. ಅವರ ಮಿತಿಗಳೇನು? ಸಾಹಿತ್ಯ ಓದುವುದರಲ್ಲಿ, ನಾನು ಕನ್ನಡದ ಕುರಿತು ಮಾತನಾಡುತ್ತಿರುವುದರಿಂದ ಕನ್ನಡ ಓದುಗ ಮತ್ತು ಕನ್ನಡ ಲೇಖಕರ ಕುರಿತಾಗಿಯೇ ಮಾತನಾಡುವುದು ಉತ್ತಮ. ಈ ಮಾತುಗಳನ್ನು ಓದನ್ನು ಆಳವಾಗಿ ಇರಿಸಿಕೊಂಡಿರುವವರ ಕುರುತು ಎಂಬುದು ನೆನಪಿನಲ್ಲಿರಲಿ. ತೀರಾ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಪುಸ್ತಕ ಓದುವವರ ಬಗ್ಗೆ ಅಲ್ಲವೇ ಅಲ್ಲ. ಪುಸ್ತಕ ಆರಿಸಿಕೊಳ್ಳುವುದರಲ್ಲಿ ನಂಬಿರುವ ವೈಚಾರಿಕತೆ ಬಹಳ ಕೆಲಸ ಮಾಡುತ್ತದೆ ಎಂಬುದು ನನ್ನ ನಂಬಿಕೆ ಮತ್ತು ಅನುಭವ. ಸಾಧಾರಣವಾಗಿ ಕನ್ನಡ ಸಾಹಿತ್ಯ ಎಂದಾಕ್ಷಣ ಮೊದಲ ಹೆಸರೇ, ಕುವೆಂಪುರವರದ್ದು ಅದಾದ ನಂತರದ ಸ್ಥಾನಗಳು ಎಲ್ಲಾ ಜ್ಞಾನಪೀಠ ಪುರಸ್ಕøತರಿಗೆ ಮತ್ತು ಅವರ ಸಮಕಾಲೀನರಿಗೆ ಮೀಸಲಾಗಿರುತ್ತದೆ.

ಓದುಗರ ದೃಷ್ಠಿಯಿಂದ ನೋಡುವುದಾದರೇ, ಹೆಚ್ಚು ಓದುಗರ ಬಳಗವನ್ನು ಸಂಪಾದಿಸಿರುವವರ ಪಟ್ಟಿಯಲ್ಲಿ ಎಸ್.ಎಲ್.ಭೈರಪ್ಪರವರು, ತೇಜಸ್ವಿ, ಕಾರಂತರು ಸೇರುತ್ತಾರೆ. ಗಮನಿಸಿ ನೋಡಿ ಭೈರಪ್ಪರವರ ಸಮಗ್ರ ಕೃತಿಗಳನ್ನು ಓದಿದವರು ತೇಜಸ್ವಿಯನ್ನೋ ಅಥವಾ ಕುವೆಂಪುವನ್ನೋ ಓದಿರುವುದಿಲ್ಲ. ತೇಜಸ್ವಿಯವರನ್ನ ಓದಿದವರು ಖಂಡಿತವಾಗಿಯೂ ಕಾರಂತರನ್ನು, ಕುವೆಂಪುರವರನ್ನು ಓದಿರುತ್ತಾರೆ. ದೇವನೂರರವರನ್ನು ಓದಿದವರು ಖಂಡಿತವಾಗಿಯೂ ಲಂಕೇಶ್ ಮತ್ತು ತೇಜಸ್ವಿಯವರನ್ನು ಓದಿರುತ್ತಾರೆ. ತೇಜಸ್ವಿಯವರನ್ನು ಓದಿಕೊಂಡವರು ಹೆಚ್ಚಿನವರು ಗ್ರಾಮೀಣ ಪ್ರದೇಶದವರು ಎಂಬುದು ನಿರ್ವಿವಾದ. ಇಲ್ಲೊಂದು ತಮಾಷೆಯ ವಿಷಯವೆಂದರೇ ಹಲವರು ಕೇವಲ ಒಂದೋ ಎರಡೋ ಪುಸ್ತಕಗಳನ್ನು ಓದಿ ನಾನು ಅವರ ಕಟ್ಟಾಭಿಮಾನಿ ಎನ್ನುತ್ತಾರೆ. ನನಗೆ ಆ ಸಮಯದಲ್ಲಿ ಒಳಗೊಳಗೆ ನಗು.

ನಾನು ಹೇಳುವುದಾದರೇ, ಎಲ್ಲರನ್ನೂ ಓದುವ ಪ್ರಯತ್ನ ಮಾಡಿ. ದೇವನೂರರವರನ್ನು ಓದಿದವರಿಗೆ ಖಂಡಿತವಾಗಿಯೂ ಭೈರಪ್ಪರವರ ಕಾದಂಬರಿಗಳು ಹಿಡಿಸುವುದಿಲ್ಲ. ಆದರೂ, ಯಾವ ಅಂಶಗಳು ಹಿಡಿಸುವುದಿಲ್ಲವೆಂಬುದನ್ನು ತಿಳಿಯುವುದಕ್ಕಾದರೂ ಓದಿ ನೋಡಿ. ನಾನು ಅನೇಕ ಬಾರಿ ಗಾಂಧೀಜಿಯ ವಿಚಾರದಲ್ಲಿ ಇದನ್ನೇ ಹೇಳುತ್ತೇನೆ. ಒಮ್ಮೆ ಓದಿ ನೋಡಿ, ತಪ್ಪಿಲ್ಲವಲ್ಲ, ಒಂದೆರಡು ಪುಸ್ತಕಗಳು, ಹೆಚ್ಚೆಂದರೇ ಒಂದು ವಾರ ಹೋದೀತು. ಹೋಗಲಿ ಬಿಡಿ. ಎಲ್ಲರನ್ನೂ ಓದಲು ಪ್ರಯತ್ನಿಸಿ, ಮನಸ್ಸಿಗೆ ಓದಿಕ್ಕಿಂತ ಮಿತ್ರ ಮತ್ತೊಬ್ಬನಿಲ್ಲ.

ಕೊನೆಯದಾಗಿ ಹೇಳುವುದಾದರೇ, ಬರೆಯುವುದು. ದಯವಿಟ್ಟು ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಭಾರತೀಯರ ಸಮಸ್ಯೆಯೇ ಇದು. ಭಾಷಣ ಮಾಡಿ ಎಂದರೇ ಗಂಟೆಗಟ್ಟಲೇ ಹರಟುತ್ತೇವೆ. ಬರೆಯಿರಿ ಎಂದರೇ, ಮೈಲಿ ದೂರು ಓಡುತ್ತೇವೆ. ನಮ್ಮ ದೇಶ ಹಾಗಿತ್ತು ಹೀಗಿತ್ತು ಎಂದೆಲ್ಲಾ ಬೀಗುತ್ತೇವೆ. ಆದರೇ, ಅದ್ಯಾವುದನ್ನು ನಮ್ಮವರ ದಾಖಲಿಸಲೇ ಇಲ್ಲ. ಈಗ ನಮ್ಮ ಇತಿಹಾಸವನ್ನು ತಿರುಚಿದ್ದಾರೆಂಬ ಬೊಂಬಡ. ನಮ್ಮವರೇ ಬರೆದಿದ್ದರೇ ಈ ದೂರುಗಳು ಇರುತ್ತಿರಲಿಲ್ಲ ಅಲ್ಲವೇ? ನಮ್ಮ ಅನುಭವಗಳೇ ಬೆಟ್ಟದಷ್ಟಿರುತ್ತವೆ, ಆದರೇ, ನಾವುಗಳೇ ನಮ್ಮನ್ನು ಕುಬ್ಜವಾಗಿ ಕಾಣುತ್ತೇವೆ. ಬರವಣಿಗೆ ಮನದಾಳದ ಭಾವನೆಗಳನ್ನು ಹೊರದಬ್ಬಲು ಇರುವ ಸಿಹಿ ಸಾಧನ.

26 ಏಪ್ರಿಲ್ 2020

ಅನ್ಯರನ್ನಲ್ಲ, ನಮ್ಮವರನ್ನೇ ದೂರುವ ಚಟ!



ಈ ಲೇಖನ ಸಂಪೂರ್ಣವಾಗಿ ನನ್ನ ಅನುಭವದ್ದು, ನನ್ನವರೇ ಎನಿಸಿದ ಸ್ನೇಹಿತರ, ನಡುವಳಿಕೆಗಳನ್ನು ಕಂಡು ಬೇಸರವಾಗಿ, ಬಹಳ ವರ್ಷಗಳಿಂದಲೂ ತಡೆಹಿಡಿದಿದ್ದನ್ನು ಇಂದು ಬರೆಯುತ್ತಿದ್ದೇನೆ. ಅವರೆಲ್ಲರೂ ಇದನ್ನು ಓದುತ್ತಾರೆಂಬ ನಂಬಿಕೆಯಿಲ್ಲ, ಏಕೆಂದರೇ ಅವರಲ್ಲಿ ಅನೇಕರನ್ನು ಅವರ ಸ್ಥಾನವನ್ನು ತೋರಿಸಿ ಅಲ್ಲಿಯೇ ಇರಿಸಿದ್ದೇನೆ. ಆದರೂ, ನಿಮ್ಮ ಬದುಕಿನಲ್ಲಿಯೂ ಇಂತಹವರು ಇರುತ್ತಾರೆಂಬ ನಂಬಿಕೆ ಅವರಿಂದ ಎಚ್ಚರಿಕೆಯಿಂದಿರಿ ಎನ್ನುವ ಒಂದು ಸೂಚನೆಗಷ್ಟೆ.

ಶೀರ್ಷಿಕೆ ನೋಡಿ, ಅನಿಸುತ್ತಿರಬಹುದು, ಇದೆಂತಹ ಚಟವಪ್ಪಾ? ಹೀಗೂ ಒಂದು ಇದ್ಯಾ? ಇರಬಹುದು. ಕಾಲ ಕೆಟ್ಟಿದೆ, ಅಂತಾ ಸಮಾಧಾನ ಮಾಡಿಕೊಂಡು ಮುಂದಕ್ಕೆ ಓದಬೇಕು. ಕೆಲವರಿಗೆ ಒಂದು ಚಾಳಿಯಿರುತ್ತದೆ. ನೀವು ಗಮನಿಸಿ ನೋಡಿ. ಅವರಿಗೆ ಯಾರನ್ನಾದರೂ ದೂರುತ್ತಿರಬೇಕು, ಚಾಡಿ ಹೇಳುತ್ತಿರಬೇಕು, ದೂಷಿಸಬೇಕು. ಇದು ಯಾವ ರೀತಿ ಎಂದರೇ, ನಮ್ಮಲ್ಲಿ ಮದ್ದು ಹಾಕುವುದು ಅಂತಾ ಒಂದು ನಂಬಿಕೆಯಿದೆ. ಅದರ ಬಗ್ಗೆ ತಿಳಿಯದೇ ಇರುವವರಿಗೆ ಒಂದಿಷ್ಟು ವಿವರಣೆಯ ಅವಶ್ಯಕತೆಯಿದೆ. ಜೀವಂತವಾಗಿರುವ ಗೋಸುಂಬೆಯನ್ನು ಹಿಡಿದು, ತಂದು, ಅಡುಗೆಮನೆಯಲ್ಲಿ, ಒಲೆಯ ಮೇಲೆ ದೋಸೆ ಹರಲೆಯನ್ನು (ತವಾ/ಪಾನ್) ಇಟ್ಟು ಅದರ ನೇರಕ್ಕೆ ಮೇಲೆ ತಲೆಕೆಳಕ್ಕೆ ಮಾಡಿ ನೇತಾಕುತ್ತಾರೆ. ಅದರ ಬಾಯಿಂದ ರಕ್ತಸ್ರಾವವಾಗಿ, ಹನಿಗಳು ಹರಲೆಯ ಮೇಲೆ ಬೀಳುತ್ತವೆ. ಬಿದ್ದ ಹನಿಗಳು, ಸಣ್ಣ ಗುಳಿಗೆಯಾಗುತ್ತವೆ. ಆ ಗುಳಿಗೆಗಳನ್ನು ಗೌಪ್ಯವಾಗಿ, ಊಟದೊಂದಿಗೆ ಅಥವಾ ಕುಡಿಯುವ ಕಾಫಿ, ಟೀ, ಮಜ್ಜಿಗೆ ಇತ್ಯಾದಿ ಜೊತೆಗೆ ಸೇರಿಸಿಕೊಡುತ್ತಾರೆ. ಅದರಿಂದ ಸೇವಿಸಿದವರಿಗೆ ಆಹಾರ ಸೇರದೇ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

ಹೌದಾ! ಅದರಿಂದ ಅವರಿಗೆ ಏನು ಲಾಭ? ಎಂತಹದ್ದು, ಇಲ್ಲ ಇದೊಂದು ಮೂಢನಂಬಿಕೆ. ಇದು ಕೆಲವು ಜನರಿಗೆ ವಂಶ ಪಾರಂಪಾರಿಕವಾಗಿ ಬಂದಿರುತ್ತದೆ. ಅದನ್ನು ಅವರು ಮುಂದುವರೆಸಲೇಬೇಕು. ಇಲ್ಲವಾದಲ್ಲಿ, ಅವರ ಕುಟುಂಬಕ್ಕೆ ಹಾನಿಯಾಗುತ್ತದೆ ಎಂಬ ನಂಬಿಕೆ. ಇದು ನಿಜನಾ? ಸುಳ್ಳಾ? ಸರೀನಾ? ತಪ್ಪಾ? ಆ ಗೊಂದಲವೆಲ್ಲ ಬೇಡ. ಆ ಚರ್ಚೆಯೂ ಈಗ ಬೇಡ. ಅದರ ಕುರಿತು ಮತ್ತೊಮ್ಮೆ ಬರೆಯುತ್ತೇನೆ. ಅವರಿಗೆ ಅದೊಂದು ನಂಬಿಕೆ, ಅದೊಂದು ಚಟ, ಚಾಳಿ ಎಂದು ನಂಬಬೇಕು.

ಅದರಂತೆಯೇ, ಕೆಲವರಿಗೆ ಬೇರೆಯವರ ಮೇಲೆ ದೂರುವುದು ಒಂದು ಚಟ. ಈ ರೀತಿಯ ಜನರು ಎಲ್ಲೆಡೆಯೂ ಸಿಗುತ್ತಾರೆ, ಅವರಿಗೇನೂ ಬರವಿಲ್ಲ. ಆಫೀಸಿನಲ್ಲಿಯೂ ಸಿಗುತ್ತಾರೆ, ಬಂಧುಗಳಲ್ಲಿಯೂ ಸಿಗುತ್ತಾರೆ, ಸ್ನೇಹಿತರಲ್ಲಿಯೂ ಇದ್ದಾರೆ. ಈ ಚಾಡಿಕೋರರಲ್ಲಿ ಮೂರು ಜಾತಿಯವರಿದ್ದಾರೆ. ಮೊದಲನೆಯವರು, ಚಾಡಿ ಹೇಳಿ ಲಾಭ ಪಡೆಯುವುದು, ಎರಡನೆಯವರು ನಾವು ಒಳ್ಳೆಯವರು ಎಂದು ಬಿಂಬಿಸಿಕೊಳ್ಳುವುದುಕ್ಕಾಗಿ ಆದರೇ ಈ ಮೂರನೆಯ ಜಾತಿಯವರು ಕೇವಲ ವಿಕೃತಿಗಾಗಿ ಮಾಡುವವರು.

ನಾನು ಇಲ್ಲಿ ಹೇಳುವ ಪ್ರತಿಯೊಂದು ವರ್ಗದವರು ನಿಮ್ಮ ಜೀವನದಲ್ಲಿ ಇದ್ದೇ ಇರುತ್ತಾರೆ. ದಯವಿಟ್ಟು, ಸೂಕ್ಷ್ಮವಾಗಿ ಅವಲೋಕಿಸುತ್ತಾ ಹೋಗಿ. ಈ ಮೊದಲನೆಯ ವರ್ಗದವರನ್ನು ನೋಡಿ, ಅವರು ನಮ್ಮ ಸಹದ್ಯೋಗಿಗಳಾಗಿಯೋ, ಅಥವಾ ನೆಂಟರಿಷ್ಟರೋ ಆಗಿರುತ್ತಾರೆ. ಅವರು, ನಮ್ಮ ಕುರಿತು ಇತರರಿಗೆ ಇಲ್ಲಸಲ್ಲದ ದೂರುಗಳನ್ನು ಹೇಳುತ್ತಾರೆ. ಅಥವಾ ನಮಗೆ ಬೇರೆಯವರ ಕುರಿತು ಹೇಳುತ್ತಿರುತ್ತಾರೆ. ಅವರಿಗೆ ಇದರಿಂದ ಏನು ಲಾಭ? ತಮ್ಮ ಮೇಲಧಿಕಾರಿಯನ್ನು ಓಲೈಸಿಕೊಳ್ಳಬೇಕು. ನಿಮ್ಮಿಂದ ಐದು ಸಾವಿರವೋ, ಹತ್ತು ಸಾವಿರವೋ ಮತ್ತ್ಯಾವುದೋ ಸಹಾಯ ಸದಾ ಆಗುತ್ತಿರಬೇಕು, ಈ ರೀತಿಯ ಅನುಕೂಲಕ್ಕೆ, ಸಹಾಯ, ಸಹಕಾರಕ್ಕೆ ಸುಲಭವಾಗಿ ಕಂಡುಹಿಡಿಯುವ ಮಾರ್ಗವಿದು. ಅಲ್ಲಿ, ಪ್ರಾಮಾಣಿಕತೆಯ ಕೊರತೆಯಿರುತ್ತದೆ. ಅದರಿಂದ ಹೊರಬರಲಾಗದೇ ಈ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ.

ಎರಡನೆಯ ವರ್ಗದವರನ್ನು ಗಮನಿಸಿ ನೋಡಿ. ಅವರಿಗೊಂದು ಬಗೆಯ ಕೀಳರಿಮೆಯಿರುತ್ತದೆ. ಅಂದರೇ, ಅವರಿಗೆ ಅವರ ಸಾಮಥ್ರ್ಯದ ಅರಿವಿರುತ್ತದೆ. ಅವರು ಸಾಧಿಸಲಾಗದ ವಿಷಯಕ್ಕೆ ಅನ್ಯ ಮಾರ್ಗ ಹಿಡಿಯುತ್ತಾರೆ. ಅವರು, ನಾನು ನಿನ್ನಷ್ಟೆ ಉತ್ತಮ, ಸಮರ್ಥನು ಎಂದು ತೋರಿಸುವ ಹಟಕ್ಕೆ ಬಿದ್ದು, ನಿಮ್ಮನ್ನು ಅವರಿಗಿಂತ ಕೆಳಕ್ಕೆ ಇಳಿಸಲು ಪಣತೊಡುತ್ತಾರೆ. ಇದರೆಲ್ಲೇನು ಸುಖ? ಅದ್ಯಾವ ಪರಿಯ ಖುಷಿ? ಹೌದು, ನೀವು ಗಮನಿಸಿ, ರಾತ್ರಿಯೆಲ್ಲಾ ನಿಮ್ಮ ಜೊತೆಗೆ ಕುಡಿದಿರುತ್ತಾರೆ, ಹ್ಯಾಂಗ್ ಓವರ್‍ನಲ್ಲಿರುತ್ತಾರೆ. ಆದರೇ, ಹೊರಜಗತ್ತಿಗೆ ನಾನು ಹೋಗಿದ್ದೆ, ಆದರೇ ಅವರಷ್ಟು ಕುಡಿದಿಲ್ಲ. ಅವರ ಸಹವಾಸವೇ ಬೇಡ ಎನಿಸಿತ್ತು ಎನ್ನುತ್ತಾರೆ. ಆದರೇ, ಅದೇ ಬಿಟ್ಟಿ ಎಣ್ಣೆಗೆ ನಾಳೆ ಬೆಳ್ಳಿಗ್ಗೆ ಕಾಯುತ್ತಿರುತ್ತಾರೆ. ಇದು, ನನ್ನ ಕಾಲೇಜಿನ ದಿನಗಳಲ್ಲಿ ನೋಡುತ್ತಿದ್ದೆ. ಹಲವರು, ರಾತ್ರಿಯೆಲ್ಲಾ ನೀಲಿ ಸಿನೆಮಾ ನೋಡಿ, ನಾವು ಸಭ್ಯರೂ ಎಂಬಂತೆ ನಾಟಕದ ಬದುಕನ್ನು ಕಟ್ಟಿಕೊಂಡವರು. ಜೊಳ್ಳು ಸುರಿಸುತ್ತಾ, ಅಲೆದಾಡಿದವರು, ಆದರೇ ಹೊರಜಗತ್ತಿಗೆ ನಾನವನಲ್ಲವೆಂದು ಬದುಕ ಹೊರಟವರು. ಅವರ ಮನೆಗೆ ಹೋದರೇ ಸರಿಯಾಗಿ ಮಾತೇ ಆಡಿಸುವುದಿಲ್ಲ, ಊಟಕ್ಕೆ ಕರೆಯುವುದಿಲ್ಲ, ಕೊಡುವುದಿಲ್ಲವೆಂದೆಲ್ಲಾ ಹಂಗಿಸುತ್ತಾರೆ. ವಾತ್ಸವದಲ್ಲಿ ಅವರು ನಾಲ್ಕು ಜನರಿಗೆ ನೀರು ಕೊಟ್ಟಿರುವುದಿಲ್ಲ. ನಾನು ಸೋತರೂ ಪರವಾಗಿಲ್ಲ, ಅವನು ಗೆಲ್ಲಬಾರದೆಂಬ ಮನೋಭಾವದವರು. ವಿಶೇಷವೆಂದರೇ, ಇವರ್ಯಾರು ನಮ್ಮ ಶತ್ರುಗಳಲ್ಲ, ನಮ್ಮವರೆಂದು ನಂಬಿಸುತ್ತಾ ಬಂದವರು. ಇದನ್ನು ಎಲ್ಲಾ ಕಡೆಯಲ್ಲಿಯೂ ಎಲ್ಲರ ಬಗ್ಗೆಯೂ ಹೇಳುತ್ತಾ ಸಾಗಿದವರು.

ನಾನು ಇಲ್ಲಿ ಸ್ವಲ್ಪ ಹೆಚ್ಚಿನದನ್ನೇ ಹೇಳಬೇಕೆಂದು ಬಯಸುತ್ತೇನೆ. ಅದು ಹಲವರಿಗೆ ಹಿಡಿಸದೇ ಇರಬಹುದು, ಆದರೂ ಸ್ಥೂಲವಾಗಿ ಹೇಳಿರುತ್ತೇನೆ. ಇದರ ಹೆಚ್ಚಿನ ಮಾಹಿತಿ ತಮಗೆ ಬೇಕೆನಿಸಿದರೇ, ನಾನು ಅದನ್ನು ಮತ್ತೊಂದು ಲೇಖನದಲ್ಲಿ ವಿವರಿಸುತ್ತೇನೆ. ಇದು ಬಹಳ ಮುಖ್ಯವಾದ ವಿಚಾರವೆಂಬುದನ್ನು ಮಾತ್ರ ಖಡಖಂಡಿತವಾಗಿ ಹೇಳಬಲ್ಲೆ. ನಮ್ಮಲ್ಲಿ ಅನೇಕರಿಗೆ ತಾವು ಒಳ್ಳೆಯವರು ಎನಿಸಿಕೊಳ್ಳಬೇಕು ಅಥವಾ ಒಳ್ಳೆಯವರು ಎಂದು ಬಿಂಬಿಸಿಕೊಳ್ಳಬೇಕೆಂಬ ಚಪಲವಿರುತ್ತದೆ. ಇದನ್ನು ಚಪಲ ಎಂದೇ ನಾನು ಕರೆಯುವುದು. ಅದಕ್ಕೆ ಮಡಿವಂತಿಕೆಯ ಸೋಗು ಎಂದರೂ ತಪ್ಪಾಗದು. ಮನುಷ್ಯ ತಪ್ಪುಗಳನ್ನು ಮಾಡುತ್ತಿರಬೇಕು. ಎಡವುತ್ತಿರಬೇಕು. ಎಡವದೇ ಇರುವವನು ನಡೆಯಲಾರ. ನಿಮ್ಮ ಬದುಕನ್ನೇ ನೀವು ಅವಲೋಕಿಸುತ್ತಾ ಬನ್ನಿ. ಬಾಲ್ಯದಲ್ಲಿ ತುಂಟಾಟ, ಯೌವ್ವನದಲ್ಲಿನ ಪೋಲಿತನ, ಹರಯದಲ್ಲಿನ ಬೇಜವಬ್ದಾರಿಗಳು ಇವೆಲ್ಲವೂ ಇರಲೇಬೇಕು. ಬಾಲ್ಯದಲ್ಲಿನ ಮಗು ಪ್ರಬುದ್ಧತೆ ತೋರಿಸುವುದು ನನಗೆ ಅಸಹ್ಯ ಮತ್ತು ಅಸ್ವಾಭಾವಿಕವೆನಿಸುತ್ತದೆ.

ನನ್ನದೇ ಅನುಭವ ಹೇಳಬೇಕೆಂದರೇ, ನಾನು ತಪ್ಪು ಮಾಡುತ್ತಾ ಬೆಳೆಯುತ್ತಾ ಬಂದವನು. ಬದುಕು ಬದಲಾದಂತೆ ಬದಲಾಗಿಸಿಕೊಂಡವನು. ನನ್ನ ಆಲೋಚನೆಗಳು ನನ್ನ ಅನುಭವದಂತೆ ಬದಲಾದವುಗಳು, ಯಾವುದೋ ಒಂದು ಸಿದ್ದಾಂತಕ್ಕೋ ಮತ್ತೊಂದಕ್ಕೋ ಗಂಟಿಬಿದ್ದವನಲ್ಲ. ಅಷ್ಟೆಲ್ಲಾ ಏಕೆ, ಯಾವುದೋ ಒಂದೇ ಕೆಲಸಕ್ಕೇ ನೇತುಹಾಕೊಂಡವನಲ್ಲ. ಒಂದೇ ಕಂಪನಿಗೆ ಗೂಟ ಹೊಡೆದು ಕೂತವನಲ್ಲ. ನನಗೆ ಇಂದಿಗೂ ಅಷ್ಟೆ, ಲಾಕ್‍ಡೌನ್ ಪರಿಣಾಮ ಗರಿಷ್ಠ ಒಂದು ತಿಂಗಳು ಒಂದೇ ಊರಿನಲ್ಲಿ ಕುಳಿತಿರುವುದು. ಕಾಲೇಜು ದಿನಗಳಿಂದಲೂ ನಾನು ಗರಿಷ್ಠ ಕಾಲ ಒಂದೆಡೆ ಕುಳಿತವನಲ್ಲ. ಸುತ್ತಾಟವೇ ನನ್ನ ಬದುಕು, ಜನರನ್ನು ನೋಡಿ ಕಲಿಯುತ್ತಾ ಬಂದವನು ನಾನು. ಇರಲಿ, ವಿಷಯಕ್ಕೆ ಬರೋಣ. ನಮ್ಮಲ್ಲಿ ಆಗುವ ಬದಲಾವಣೆಗಳನ್ನು ಒಪ್ಪುವ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬೇಕು. ನಮ್ಮಲ್ಲಿರುವ ನ್ಯೂನ್ಯತೆಗಳನ್ನು ಒಪ್ಪಿಕೊಳ್ಳಬೇಕು. ಮನುಷ್ಯ ಎಂದಿಗೂ ಪರಿಪೂರ್ಣನಾಗಲಾರ ಮತ್ತು ಆಗಲೂಬಾರದು, ಏಕೆಂದರೇ ಅವನು ವಿಕಸನಗೊಳ್ಳುತ್ತಿರಬೇಕು. ಅವಿಷ್ಕಾರ ನಡೆಯುತ್ತಲೇ ಇರಬೇಕು. ಆದರೇ, ಹಲವರಿಗೆ ಇದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಅವರೆಲ್ಲರೂ ತಾನು ಒಳ್ಳೆಯವನು ಎಂಬ ಭ್ರಮೆಯನ್ನು ಸಾಕಲು ಹೋಗಿ ಮತ್ತೊಬ್ಬರನ್ನು ಕೆಟ್ಟವರನ್ನಾಗಿ ಬಿಂಬಿಸುತ್ತಾರೆ.

ನನ್ನ ಸ್ವಂತ ಅನುಭವದಲ್ಲಿ, ನನ್ನ ಬಗ್ಗೆ ನನ್ನ ಒಂದೆರಡು ಸ್ನೇಹಿತರು, ಅಪಪ್ರಚಾರವೆಂದು ಹೇಳುವುದಕ್ಕೆ ಆಗುವುದಿಲ್ಲ. ಆದರೂ, ನಾನು ಮಾಡುವುದನ್ನೆಲ್ಲಾ ಅನೇಕರಿಗೆ ಹೇಳುತ್ತಾ ಬರುತ್ತಿದ್ದರು, ಅದು ಮಸಾಲೆ ಸಮೇತ. ನಾನು ಇದ್ಯಾಕೆ? ಮೊದಲಿಗೆ, ಉತ್ತಮ ಸಂಬಳವಿದ್ದ ಕೆಲಸ ಬಿಟ್ಟು ಸೀಕೋ ಸಂಸ್ಥೆ ಕಟ್ಟುವಾಗ. ಹರೀಶ ಕೆಲಸ ಬಿಟ್ಟಿದ್ದಾನೆ. ಅವನಿಗೆ ಜೀವನದ ಗಂಬೀರತೆ ಗೊತ್ತಿಲ್ಲ, ಇನ್ನೂ ಕಾಲೇಜು ಹುಡುಗನ ತರಹ ಆಡ್ತಾನೆ. ಸ್ವಲ್ಪ ಬ್ಯಾಂಕ್ ಬ್ಯಾಲೆನ್ಸ್ ಇರಬೇಕು ಅಲ್ಲಿ ತನಕ ಅಷ್ಟೇ. ಈ ಸೋಷಿಯಲ್ ವರ್ಕ್ ಎಲ್ಲಾ ನಡೆಯುತ್ತಾ ಇವನಿಗೆ ಹುಚ್ಚು, ಇತ್ಯಾದಿ. ಊರೂರು ಸುತ್ತುತ್ತಾನೆ, ಯಾಕೆ ಬೇಕು? ದುಡಿಮೆಯಿಲ್ಲ ಹುಷಾರು, ಸಾಲ ಏನಾದರೂ ಕೇಳಿದ್ರೆ ಕೊಟ್ಟು ಸಿಕ್ಕಿ ಹಾಕೋಬೇಡ. ಹೀಗೆ.. ನನಗನಿಸಿದ್ದು, ನೀನು ನನ್ನ ಬಳಿಯೇ ಹೇಳಬಹುದಿತ್ತಲ್ಲವೇ? ಎಲ್ಲಿಯೋ ಕೆಲಸ ಮಾಡುವುದಕ್ಕೂ ಇಷ್ಟಪಡುವ ಬದುಕನ್ನು ಕಟ್ಟಿಕೊಳ್ಳುವುದಕ್ಕೂ ವ್ಯತ್ಯಾಸವಿದೆಯೆಂಬುದು ಅರಿವಾಗುವುದಿಲ್ಲ. ಬೆಟ್ಟ ಹತ್ತಿ ವಿಹಂಗಮ ನೋಟವನ್ನು ಸವಿಯಬೇಕೆಂದರೇ, ಬೆಟ್ಟ ಹತ್ತಲೇಬೇಕು, ಕಾಲು ಸವೆಸಲೇಬೇಕು. ಕೂತಲ್ಲಿಗೆ ಬರುವುದಿಲ್ಲ. ಕಾರಿನಲ್ಲಿ ಹೋಗೋದು ಎಂಬ ತಲೆಹರಟೆ ಉತ್ತರಬೇಡ. ಒಮ್ಮೆ ಬೆಟ್ಟವನ್ನು ಹತ್ತಿ ದಣಿದು, ಮೇಲೇರಿ ಕೂತು ನೋಡಿ ಅಲ್ಲಿನ ಖುಷಿಯೇ ಬೇರೆ. ನೀವು ಇಷ್ಟಪಟ್ಟ ಬದುಕಲ್ಲಿ ಎರಡೇ ಎರಡು ಹೆಜ್ಜೆ ಹಾಕಿ ಬದುಕಿನ ಸತ್ವವನ್ನು ನೋಡುವಿರಿ. ಹೋಗಲಿ ಇಂಥಹವರು ಇರುವುದು ಒಳ್ಳೆಯದೇ. ಮುಂದಕ್ಕೆ ಹೋಗೋಣ.

ಮೂರನೆಯ ವರ್ಗವಿದೆ, ಇದೊಂದು ಬಗೆಯೆ ಅತೃಪ್ತ ಮತ್ತು ವಿಕೃತ ಮನಸ್ಸಿನವರು. ಇವರು ಏಕೆ ಹೀಗೆ ಮಾಡುತ್ತಾರೆಂಬುದು ವಾತ್ಸವದಲ್ಲಿ ಅವರಿಗೆ ಅರಿವಿರುವುದಿಲ್ಲ. ಇವರು, ಅವರ ಸ್ವಂತದವರನ್ನು ಹಂಗಿಸುತ್ತ ಬದುಕುತ್ತಿರುತ್ತಾರೆ. ಅದೊಂದು ಬಗೆಯ ಸಂತೋಷವಿರಬಹುದು. ಅಲ್ಲಿ, ಅವರದ್ದೇ ಸಂಬಂಧಗಳನ್ನು ಹಳಸುತ್ತಿರುತ್ತಾರೆ. ಇದಕ್ಕೆ, ಉದಾಹರಣೆಗಳು, ಅನೇಕ ಮಧ್ಯಮ ವರ್ಗದವರು. ಅನೇಕ, ಪೋಷಕರನ್ನು ನೋಡಿ, ಅವರ ಮಕ್ಕಳನ್ನು ಕಂಡವರ ಎದುರು ದೂರುತ್ತಿರುತ್ತಾರೆ. ಅಯ್ಯೋ, ನನ್ನ ಮಗ ಹೀಗೆ, ನನ್ನ ಮಗಳು ಹೀಗೆ, ಅದೇ ಅವರ ಮಕ್ಕಳು ನೋಡಿ ಹೇಗಿದ್ದಾರೆ. ಎಷ್ಟೊಂದು ಬುದ್ದಿವಂತರು. ಇದೇ, ರೀತಿ ಅನೇಕ ದಂಪತಿಗಳನ್ನು ಗಮನಿಸಿ, ಹೆಂಡತಿಯನ್ನು ಗಂಡ, ಗಂಡನನ್ನು ಹೆಂಡತಿಯನ್ನು ದೂರುತ್ತಾ, ಬರುತ್ತಾರೆ. ಅವರಿಗೆ, ಅವರ ಮನೆಯವರ ಮಾನವನ್ನೇ ಹರಾಜು ಹಾಕುತ್ತಿದ್ದೇನೆಂಬ ಕನಿಷ್ಠ ಕಾಳಜಿಯೂ ಇರುವುದಿಲ್ಲ. ಅಣ್ಣ, ತಮ್ಮಂದಿರು, ಅಕ್ಕತಂಗಿಯರ ನಡುವೆಯೂ ಇದು ನಡೆಯುತ್ತಿರುತ್ತದೆ. ಆಪ್ತ ಸ್ನೇಹಿತರನ್ನು ಬಿಡುವುದಿಲ್ಲ. ಸಹಭಾಳ್ವೆಯನ್ನು ಅವರು ಬಯಸುವುದಿಲ್ಲ. ಅದರ ಅರ್ಥವೂ ಅವರಿಗಿರುವುದಿಲ್ಲ. ಇದಕ್ಕೇ ಪರಿಹಾರ ಕೇಳಿ. ಅವರ ಬಳಿಯಲ್ಲಿರುವುದಿಲ್ಲ. ಮಗ ಕೆಟ್ಟವನು, ಮನೆಯಿಂದ ಹೊರ ಹಾಕಿ ಎಂದು ಹೇಳಿ. ಅದು ಹೇಗೆ ಸಾಧ್ಯ ಎನ್ನುತ್ತಾರೆ. ಗಂಡ ಕೆಟ್ಟವನು, ಬಿಟ್ಟು ಹೋಗು ಎನ್ನಿ, ನಾನ್ಯಾಕೆ ಹೋಗಲಿ, ಎನ್ನುತ್ತಾರೆ. ಅಲ್ಲಮ್ಮ, ನೀನೇ ತಾನೇ ಹೇಳೊದು ನನ್ನ ಗಂಡ ಸರಿಯಿಲ್ಲ ಅಂತಾ, ಅವನ ಜೊತೆ ಯಾಕೆ ನರಕ, ಹೋಗು ಎನ್ನಿ. ಮಾತೇ ಇರುವುದಿಲ್ಲ.

ಇಲ್ಲಿ ಅಕ್ಷರಸ್ಥರಿಗೂ ಅನಕ್ಷರಸ್ಥರಿಗೂ ಒಂದು ವ್ಯತ್ಯಾಸವಿದೆ. ಅನಕ್ಷರಸ್ಥರಿಗೆ ಈ ತಾರತಮ್ಯವೆಂಬ ಅಥವಾ ಅಹಂಮಿನ ಸಮಸ್ಯೆಯಿರುವುದಿಲ್ಲ. ನಮ್ಮ ಮನೆಕೆಲಸದಾಕೆ, ಐದಾರು ಮನೆಗಳಲ್ಲಿ ಕೆಲಸ ಮಾಡುತ್ತಾರೆ. ಮೂರು ಜನರು ಗಂಡುಮಕ್ಕಳು. ಅವರ ಗಂಡ ವಿಪರೀತ ಕುಡಿತಾನೆ. ಕೆಲವೊಂದು ದಿನ ಬೀದಿಯಲ್ಲಿ ನಿಂತು ಅವಳಿಗೆ ಬೈಯ್ಯುವುದು, ಹೊಡೆಯುವುದು ಇದೆ. ನಾನು ಹೇ, ಯಾಕಪ್ಪ? ಅಂದ್ರೇ, ಅವನು ಏನಿಲ್ಲ ಸಾ, ಅಂತಾ ಹೊಗ್ತಾನೆ. ಅ ಹೆಂಗಸು ಕೂಡ, ಏನಿಲ್ಲಾ ಅಣ್ಣ. ಅಂತಾ ಹೋಗ್ತಾರೆ. ಅವರ ಮನೆಯ ಗುಟ್ಟನ್ನು ಅಲ್ಲಿಗೆ ಬಿಟ್ಟಿರುತ್ತಾರೆ. ಅದೇ, ಅಕ್ಷರಸ್ಥರ ಮೆನಯ ಬಿನ್ನಾಭಿಪ್ರಾಯಗಳು ಅಲ್ಲಿಗೆ ನಿಲ್ಲುವುದಿಲ್ಲ. ನಿಲ್ಲಲು ಅಹಂ ಬಿಡುವುದಿಲ್ಲ. ಅದೊಂದು ರೀತಿಯ ನಶೆ. ಅನೇಕರಿಗೆ ತಮ್ಮ ಅಹಂ ಅನ್ನು ತೋರಿಸುವುದು ಒಂದು ರೀತಿಯ ನಶೆ. ಆ ನಶೆಯಲ್ಲಿಯೇ ಅನೇಕ ಸಂಬಂಧಗಳನ್ನು ಕಳೆದುಕೊಂಡಿರುತ್ತಾರೆ ಅಥವಾ ಮುರಿಯುತ್ತಾರೆ. ನಾನು ತೋರಿಸ್ತಿನಿ ನೋಡು, ಏನು ಅಂತಾ ಅಂದುಕೊಂಡವರೇ!

ಇದನ್ನೇ, ನಮ್ಮ ಸಮಾಜದ ವಿಚಾರಕ್ಕೇ ದೇಶದ ವಿಚಾರಕ್ಕೆ ಹೋಲಿಸಿ ಒಮ್ಮೆ ಕಲ್ಪಿಸಿಕೊಳ್ಳಿ. ಇಲ್ಲಿಯೂ ಮೂರು ವರ್ಗವಿದೆ. ಮೊದಲನೆಯ ಮತ್ತು ಎರಡನೆಯ ವರ್ಗ ಅನ್ಯರನ್ನು ದೂಷಿಸುವ ವರ್ಗ, ರಾಜಕಾರಣಿಗಳು, ಲಂಚ ಕೊಟ್ಟು ಅಧಿಕಾರ ಪಡೆದವರು, ಜಾತಿ, ಧರ್ಮದ ಹೆಸರಲ್ಲಿ ಒಡಕು ಮೂಡಿಸಿ ಲಾಭ ಪಡೆದವರು. ಎಲ್ಲಾ ಜಾತೀಯ, ಎಲ್ಲಾ ಧರ್ಮದ ಮಠಾಧೀಶರು, ಮೌಲ್ವಿಗಳು, ಪಾದ್ರಿಗಳು ಮತ್ತು ಅನುಯಾಯಿಗಳು. ಬೇರೆ ಪಕ್ಷದವರನ್ನು ಕೆಟ್ಟದ್ದಾಗಿ ಬಿಂಬಿಸಿಯೇ ಗೆಲುವು ಸಾಧಿಸುತ್ತಾ ಬಂದವರು, ಗದ್ದುಗೆ ಏರಿದವರು. ಅನ್ಯ ಜಾತಿಯನ್ನು ನಿಂದಿಸಿ, ಅನ್ಯ ಧರ್ಮವನ್ನು ಹಿಯಾಳಿಸುತ್ತಲೇ ಆನಂದಿಸಿದವರು.

ಇಲ್ಲಿ ಹೆಚ್ಚಿನ ವಿವರಣೆಯ ಅವಶ್ಯಕತೆಯಿದೆ. ನೀವು ಹಾಗೆಯೇ ಗಮನಿಸಿ ನೋಡಿ, ನಮ್ಮಲ್ಲಿ ಒಂದು ಅಲಿಖಿತ ನಿಯಮವಿದೆ, ಅದು “ಒಬ್ಬನನ್ನು ಮೇಲೇರಿಸಲು ಮತ್ತೊಬ್ಬನನ್ನು ಕೆಳಕ್ಕಿಳಿಸಬೇಕು, ಅಥವಾ ಒಬ್ಬನನ್ನು ಕೆಳಗಿಳಿಸಲು ಮತ್ತೊಬ್ಬನನ್ನು ಮೇಲೇರಿಸಬೇಕು”.  ಉದಹಾರಣೆಗಳೊಂದಿಗೆ ನೋಡೋಣ. ಡಾ. ರಾಜ್ ಕುಮಾರ್ ಅವರನ್ನು ಕೆಳಗಿಳಿಸಲು ನಡೆದ ಪ್ರಯತ್ನವೇ ಡಾ. ವಿಷ್ಣುವರ್ಧನ್‍ರವರನ್ನು ತಂದದ್ದು ಅಥವಾ ತರಲು ಪ್ರಯತ್ನಿಸಿದ್ದು. ಅವರಿಬ್ಬರ ನಡುವೆ ಇಲ್ಲದ ಹೋಲಿಕೆ, ಬೇಧವನ್ನು ಅವರ ಅಭಿಮಾನಿಗಳು ಹುಟ್ಟುಹಾಕಲು ಪ್ರಯತ್ನಿಸಿದರು, ಅದನ್ನು ಹಲವರು ನಂಬುತ್ತಾ ಹೋದರು. ಅದೇ, ರೀತಿ ನೋಡಿ, ಗಾಂಧೀಜಿಯವರ ವಿಚಾರ ಬಂದಾಗ ಅವರನ್ನು ದೂಷಿಸಲು ಪರ್ಯಾಯವಾಗಿ ಅನೇಕರ ಹೆಸರುಗಳನ್ನು ತಂದರು. ನೇತಾಜಿ ಇರಬಹುದು, ಅಂಬೇಡ್ಕರ್ ಇರಬಹುದು. ಇವರ್ಯಾರು ಗಾಂಧೀಜಿಯನ್ನು ದ್ವೇಷಿಸಿರಲಿಲ್ಲ, ಅವರ ಕೆಲವು ವಿಚಾರಗಳಿಗೆ ಅಸಮಧಾನವಿತ್ತು, ಅದನ್ನೇ ಇಂದಿಗೂ ಎಳೆದುಕೊಂಡು ಹೋಗುತ್ತಿಲ್ಲವೇ?

ರಾಜಕೀಯವನ್ನೇ ನೋಡುತ್ತಾ ಬನ್ನಿ, ಅವರ ಒಳ್ಳೆಯತನವನ್ನೋ ಸಾಧನೆಯನ್ನೋ ಹೇಳಿ ಗದ್ದುಗೆ ಏರುವುದಕ್ಕಿಂತ ವಿರೋಧ ಪಕ್ಷದವರ ದುರ್ನಡತೆಯನ್ನು ಪ್ರಚಾರ ಮಾಡಿ ಗದ್ದುಗೆ ಏರಿದವರೇ ಹೆಚ್ಚು. ಮೋದಿಯವರು ಗದ್ದುಗೆ ಏರಿದ್ದು ಹೇಗೆ, ಹಿಂದಿನ ಡಾ. ಸಿಂಗ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದು ತಾನೆ? ಮನಮೋಹನ್ ಸಿಂಗ್ ಅಧಿಕಾರಕ್ಕೆ ಬಂದದ್ದು ವಾಜಪೇಯಿ ಸರ್ಕಾರವನ್ನು ದೂಷಿಸುತ್ತಾ ಅಲ್ವೇ? ಇದು ಎಲ್ಲಾ ರಾಜ್ಯ ಮತ್ತು ರಾಷ್ಟ್ರರಾಜಕಾರಣದಲ್ಲಿ ಸಾಮಾನ್ಯವಾಗಿದೆ.

ಕೊನೆಯ ವರ್ಗವಿದೆಯಲ್ಲಾ, ಇದು ಜಾತಿ/ಧರ್ಮವನ್ನು ಅತಿಯಾಗಿ ವಿಜೃಂಭಿಸಿ ದೇಶವನ್ನೇ ಛಿದ್ರಗೊಳಿಸಲು ಪಣ ತೊಟ್ಟವರು. ನಮ್ಮ ದೇಶದ ಆರೋಗ್ಯ ಹಾಳಾಗುತ್ತದೆಯೆಂಬ ಸ್ವಲ್ಪ ಜ್ಞಾನವೂ ಇಲ್ಲದೇ, ಅದನ್ನೇ ಮಾಡುತ್ತಿರುವವರು. ಅನೇಕರು, ವಾದ ಮಾಡುವುದನ್ನು ವಿವರಿಸುತ್ತೇನೆ. ನಮ್ಮದು ಹಿಂದೂ ದೇಶ, ನಮ್ಮಲ್ಲಿ ಹಿಂದುಗಳು ಮಾತ್ರವಿರಬೇಕು. ಇನ್ನುಳಿದವರನ್ನು ಎಲ್ಲಿಗೆ ಕಳುಹಿಸಬೇಕು? ಕೇಳಿ ನೋಡಿ. ಉತ್ತರವಿಲ್ಲ. ಅವರಿಗೆ ಮೀಸಲಾತಿ ಕೊಟ್ಟು ಅವರನ್ನು ಹಿಡಿಯುವುದಕ್ಕೆ ಆಗುತ್ತಿಲ್ಲವೆನ್ನುತ್ತಾರೆ. ಈಗ ಏನು ಮಾಡೋದು? ಮೀಸಲಾತಿ ತೆಗೆದರೆ ಸರಿ ಹೋಗುತ್ತಾ? ಎಂದು ಕೇಳಿ. ಉತ್ತರವಿಲ್ಲ. ಅದರಂತೆಯೇ, ಮೇಲ್ಜಾತಿಯವರನ್ನು ದೂಷಿಸುವ ಮತ್ತೊಂದು ವರ್ಗವನ್ನು ಕೇಳಿ, ಇವರು ಜನರನ್ನು ಮೌಢ್ಯಕ್ಕೆ ತಳ್ಳಿದ್ದಾರೆ, ಎನ್ನುತ್ತಾರೆ. ಸರಿ, ಏನು ಮಾಡೋದು ಎಂದು ಕೇಳಿ. ಬಹಿಷ್ಕರಿಸಬೇಕು ಎನ್ನುತ್ತಾರೆ. ಆದರೇ, ಅವರುಗಳೇ ದೇವಸ್ಥಾನದಲ್ಲಿ ಸಾಲಾಗಿ ನಿಂತು ಕಾದು ದೇವರಿಗೆ ಅರ್ಚನೆ ಮಾಡಿಸುತ್ತಾರೆ. ಇವೆಲ್ಲವೂ ನಮ್ಮ ಮನೆಯೊಳಗಿನ ಆಂತರಿಕ ಬಿನ್ನಾಭಿಪ್ರಾಯಗಳಷ್ಟೆ. ಮನೆಯಲ್ಲಿ ಚಿಕ್ಕವರಿದ್ದಾಗ, ರೊಟ್ಟಿ ಸ್ವಲ್ಪ ದೊಡ್ಡದ್ದು ಚಿಕ್ಕದ್ದು ಆದರೇ, ಅಣ್ಣನಿಗೆ ದೊಡ್ಡ ರೊಟ್ಟಿ ನನಗೆ ಚಿಕ್ಕದ್ದು ಅಂತಾ ದೂರುತಿರಲಿಲ್ಲವೇ? ಅಥವಾ ಒಮ್ಮೊಮ್ಮೆ ಅಣ್ಣನೇ ನಮಗೆ ತೋರಿಸಿ ನೋಡು ನನಗೆ ದೊಡ್ಡ ರೊಟ್ಟಿ ನಿನಗೆ ಚಿಕ್ಕದ್ದು ಅಂತಾ ಹಂಗಿಸುತ್ತಿರಲಿಲ್ಲವೇ? ಅವೆಲ್ಲವೂ ಒಂದು ತುಂಟಾಟಿಕೆಗಾಗಿ ಅಷ್ಟೆ.

ಇಲ್ಲಿ ಗಂಬೀರ ವಿಚಾರಗಳನ್ನು ನಿಮ್ಮ ಮುಂದಿಡುತ್ತೇನೆ. ಸದ್ಯದಲ್ಲಿ ಎಲ್ಲಾ ದೇಶದ, ಎಲ್ಲಾ ಧರ್ಮದ, ಎಲ್ಲಾ ಜಾತಿಯ ಜನರು ಎಲ್ಲಾ ದೇಶಗಳಲ್ಲಿಯೂ ಹಂಚಿ ಹರಡಿದ್ದಾರೆ. ಕೇರಳ ಒಂದು ರಾಜ್ಯದಿಂದ ಕನಿಷ್ಠ 25 ಲಕ್ಷದಷ್ಟು ಜನರು ಹೊರದೇಶದಲ್ಲಿದ್ದಾರೆ. ಎಲ್ಲಾ ದೇಶಗಳು, ಅವರ ಧರ್ಮದವರನ್ನು ಮಾತ್ರ ಇರಿಸಿಕೊಂಡು ಹೊರಹಾಕಿದರೇ ಗತಿ ಏನು? ಅಥವಾ ಕರ್ನಾಟಕವನ್ನೇ ತೆಗೆದುಕೊಳ್ಳಿ, ಕೇವಲ ಕನ್ನಡಿಗರು ಮಾತ್ರವೇ ಇಲ್ಲಿ ಇರಬೇಕೆಂದು ನಾವೆಲ್ಲರೂ ಹೊರಟರೇ, ಬೇರೆ ಭಾಷಿಕರು, ರಾಜ್ಯ ಬಿಟ್ಟು ಹೋಗುತ್ತಾರಾ? ಎಲ್ಲಿಗೆ ಹೋಗುತ್ತಾರೆ? ಕುಶಾಲನಗರದ ಪಕ್ಕದಲ್ಲಿ ಗುಮ್ಮನಕೊಲ್ಲಿ ಎಂಬ ಊರಿದೆ ಅದು ನನ್ನ ಅಜ್ಜಿಯ ಮನೆ. ಇಡೀ, ಊರು ನಮ್ಮ ಅಜ್ಜಿಯ ಮಾವನಿಗೆ ಸೇರಿದ್ದು. ಈಗ ಅಲ್ಲಿ ಕನಿಷ್ಠ ಎಂದರೂ ನಾಲ್ಕು ಸಾವಿರ ಜನಸಂಖ್ಯೆ ಇದೆ. ನೀವು ಹೊರಗಿನಿಂದ ಬಂದವರು ಹೋಗಿ ಎಂದು ದಬ್ಬುವುದೇ? ಹಳ್ಳಿಗಳಿಂದ ಬಂದು ಬೆಂಗಳೂರಲ್ಲಿ ಬದುಕನ್ನು ಕಟ್ಟಿಕೊಂಡ ನಮ್ಮನ್ನು ಬೆಂಗಳೂರಿಗರು ಹೊರಕ್ಕೆ ಹಾಕಿದರೇ?

ಇನ್ನೊಂದು ವಿಚಾರವೆಂದರೇ, ವೈವಿದ್ಯತೆ. ನೀವುಗಳು ಕಾಡನ್ನು ನೋಡಿರಬಹುದಲ್ಲವೇ? ಒಳಗೆ ಹೋಗದಿದ್ದರೂ ರಸ್ತೆ ಬದಿಯಲ್ಲಿ? ನೆಡುತೋಪಿಗೂ ಕಾಡಿಗೂ ವ್ಯತ್ಯಾಸವಿದೆ. ಒಂದೇ ಜಾತಿಯ ಮರಗಳಿದ್ದರೇ, ಅತವಾ ನಾವೇ ನೆಟ್ಟು ಬೆಳೆಸಿದರೇ ಅದನ್ನು ನೆಡುತೋಪು ಎನ್ನುತ್ತೇವೆ. ಕಾಡು ಎನ್ನುವುದಿಲ್ಲ. ಅಲ್ಲಿ, ವನ್ಯ ಜೀವಿಗಳು ಬದುಕಲಾರೆವು, ವೈವಿದ್ಯತೆ ಇರಲಾರದು. ಅದೇ, ನೈಸರ್ಗಿಕ ಕಾಡಿನಲ್ಲಿ ವಿವಿಧ ಸಸ್ಯಗಳು, ಮರಗಳು ಇರುವಲ್ಲಿ, ಎಲ್ಲಾ ಜೀವ ಸಂಕುಲಗಳು ಬದುಕನ್ನು ಕಟ್ಟಿಕೊಳ್ಳುತ್ತವೆ. ಒಂದೇ, ಧರ್ಮ, ಒಂದೇ ಜಾತಿಯವರಿಂದ ವೈವಿದ್ಯತೆ ಇರುವುದಿಲ್ಲ, ಬದುಕು ಬರುಡಾಗುತ್ತದೆ. ಎಲ್ಲರೂ ಇದ್ದರೇ ಜೀವನ. ಬಿನ್ನಾಭಿಪ್ರಾಯಗಳು ನಮ್ಮೊಳಗೆ ಇರಲಿ, ದೇಶ ಒಡೆಯುವ, ಸಮಾಜ ಒಡೆಯುವ ಕೆಲಸಗಳು ನಿಲ್ಲಲಿ.

ಕೊನೆಯದಾಗಿ: ಗಾಂಧೀಜಿಯವರ ಒಂದು ಕನಸ್ಸಿತ್ತು, ಅದನ್ನು ಬಹಳ ಒತ್ತಾಯಪೂರ್ವಕವಾಗಿ ಅವರು ಪ್ರತಿಪಾದಿಸುತ್ತಿದ್ದರು. ಅವರ, ಪ್ರಕಾರ ಯಾವ ದೇಶವೂ ಸೈನ್ಯೆಯನ್ನು ಹೊಂದಬಾರದು. ಎಂದರೇ, ಯಾವುದೇ ದೇಶಕ್ಕೆ ಆರ್ಮಿ/ಮಿಲಿಟರಿ ಇರಬಾರದು. ಸೈನ್ಯೆ ಇದ್ದರೇ ತಾನೇ ಯುದ್ದವಾಗುವುದು? ಇಡೀ ವಿಶ್ವವೇ ಒಂದು ಸಮುದಾಯದಂತಿರಬೇಕು. ಎಲ್ಲಾ ದೇಶಗಳು ಸೇರಿ ಒಂದು ಸಂಸ್ಥೆಯನ್ನು ಸ್ಥಾಪಿಸಿ, ಅದು ಶಾಂತಿ ಸೌಹಾರ್ಧತೆಯನ್ನು ಕಾಪಾಡಬೇಕು. ನಿಯಮಗಳನ್ನು ರೂಪಿಸಿ, ಜಾರಿಗೆ ತರಬೇಕು ಎಂದು ಬಯಸಿದ್ದರು. ಅದರಂತೆಯೇ, ನೀವು ಗಮನಿಸಿ ಪ್ರತಿಯೊಂದು ದೇಶವೂ ಅದೆಷ್ಟು ಹಣವನ್ನು ಸೈನ್ಯಕ್ಕಾಗಿ, ಯುದ್ದಕ್ಕಾಗಿ ಕಳೆಯುತ್ತಿದ್ದಾವೆ. ನಮ್ಮ ದೇಶವನ್ನೇ ನೋಡಿ, ಪಾಕಿಸ್ಥಾನವೆಂಬ ಸಣ್ಣ ದೇಶದೊಂದಿಗೆ ಸೆಣೆಸಲು ಅದೆಷ್ಟೂ ಜೀವಗಳನ್ನು ಬಲಿಕೊಡುತ್ತಿದ್ದೇವೆ. ಇಡೀ ಪ್ರಪಂಚವೇ ಒಂದು ಕುಟುಂಬವೆಂಬಂತೆ ಬದುಕುವ ಕಾಲ ಬರುವುದೇ!

25 ಏಪ್ರಿಲ್ 2020

ಕೋಮು ಬೇಧ, ಜಾತಿ ಬೇಧ ಯಾರಿಗೆ ತಾತ್ಸಾರ? ಯಾರಿಗೆ ಆಹಾರ?



Photo Courtesy: PsychMatters

ಕೋಮು ದ್ವೇಷವೆಂಬ ಪದವನ್ನೇ ಬಳಸಬಹುದಿತ್ತಾದರೂ, ಆ ಪದದ ಬದಲಾಗಿ ಬೇಧವೆಂಬ ಪದವನ್ನು ಬಳಸಿದ್ದೇನೆ. ಅದಕ್ಕೆ ವಿವರಣೆಯನ್ನು ನೀಡುತ್ತೇನೆ. ಇತ್ತೀಚಿನ ದಿನಗಳಲ್ಲಿ ಕೋಮು ದ್ವೇಷದ ಸುದ್ದಿ ಅತಿಯಾಗುತ್ತಿವೆ. ಅದರಲ್ಲಿಯೂ, ಫೇಸ್‍ಬುಕ್, ವಾಟ್ಸಾಪ್ಪನಿಂದಾಗಿ ಎಂದರೇ ತಪ್ಪಿಲ್ಲ. ಇದನ್ನು ಸ್ವಲ್ಪ ಆಳಕ್ಕಿಳಿದು ಯೋಚಿಸೋಣ. ಈ ದ್ವೇಷಕ್ಕೆ, ಬೇಧಕ್ಕೆ ಕಾರಣಗಳೇನು? ಅದು ಯಾರಲ್ಲಿ ಹೆಚ್ಚಿದೆ? ಅದರಿಂದಾಗುತ್ತಿರುವ ಪರಿಣಾಮಗಳೇನು?

ಒಂದು ಕೋಮು, ಅಥವಾ ಜಾತಿ ಬೇಧ ಇಂದು ನಿನ್ನೆಯದಲ್ಲ. ಆದರೇ, ಅದು ನಮಗೆ ಹೆಚ್ಚಾಗಿ ಕಾಣುತ್ತಿರುವುದು ಇತ್ತೀಚೆಗೆ ಅನಿಸುತ್ತಿದೆ. ಆದರೇ, ವಾಸ್ತವಿಕತೆ ಬೇರೆ ಎಂಬುದು ನನ್ನ ನಿರ್ಣಯ. ಅದನ್ನು ನನ್ನ ಅನುಭವದ ಬುತ್ತಿಯಿಂದ ತೆಗೆದು ನಿಮಗೆ ಹೇಳುತ್ತೇನೆ. ಮೊದಲನೆಯದಾಗಿ, ಇದು ಯಾರಲ್ಲಿ ಹೆಚ್ಚು ಮತ್ತು ಏಕೆ? ನಾನು ಇಲ್ಲಿ ರಾಜಕೀಯ ಪಕ್ಷಗಳನ್ನಾಗಲೀ, ರಾಜಕಾರಣಿಗಳನ್ನಾಗಲೀ ತರುವುದಿಲ್ಲ. ಅದರ ಅನಿವಾರ್ಯತೆ ಕೂಡ ಇಲ್ಲ. ಪ್ರತಿಯೊಂದು ಪಕ್ಷವೂ ಧರ್ಮದ, ಜಾತಿಯ ಲೆಕ್ಕಚಾರದಲ್ಲಿ ಟಿಕೇಟ್ ನೀಡಿ, ಗೆದು ಅಧಿಕಾರಕ್ಕೆ ಬರುವುದು ಹಿಂದಿನಿಂದಲೂ ನಡೆದಿರುವುದು, ನಡೆಯುತ್ತಿರುವುದು ಮತ್ತು ನಡೆಯುವುದು ಕೂಡ. ಈ ಓಲೈಕೆ ರಾಜಕಾರಣಕ್ಕೆ ಯಾವ ಪಕ್ಷವೂ ವಿನಾಯಿತಿ ನೀಡಿಲ್ಲ.

ಆದರೇ, ಸಾಮಾನ್ಯ ಜನರಲ್ಲಿ ಅನ್ಯ ಜಾತಿಯವರನ್ನು ಕಂಡರೇ ಅಥವಾ ಧರ್ಮದವರನ್ನು ಕಂಡರೇ ಸಹಿಸಲಾಗದೇ ಇರುವುದು ಏಕೆ? ಮತ್ತು ಯಾರಿಗೆ? ನಾನು ಗಮನಿಸಿದಂತೆ, ಇದು ಹೆಚ್ಚಾಗಿ ಕಾಣುತ್ತಿರುವುದು ವಿದ್ಯಾವಂತರಲ್ಲಿ ಮತ್ತು ನಗರವಾಸಿಗಳಲ್ಲಿ ಎಂದರೇ ತಪ್ಪಾಗುವುದಿಲ್ಲ. ಇದು ನನ್ನ ಅನುಭವದ ಮಾತು. ಹಳ್ಳಿಯವರಲ್ಲಿ ಬಹಳ ಕಡಿಮೆ. ಉದಾಹರಣೆಗೆ, ನನ್ನೂರು ಬಾನುಗೊಂದಿ, ಸರಗೂರು, ಕೊಣನೂರು, ಸಿದ್ದಾಪುರ ಇಲ್ಲಿ ನಾನು ಅತಿಯಾಗಿ ಜಾತೀಯತೆಯನ್ನು ಕಂಡಿಲ್ಲ. ಏಕೆ? ಎಂಬುದನ್ನು ನೋಡುತ್ತಾ ಹೋದರೆ, ಅಲ್ಲಿನ ವಸ್ತಸ್ಥಿತಿ ಬೇರೆಯದ್ದಾಗಿರುತ್ತದೆ. ನಮ್ಮಲ್ಲಿ ಎಲ್ಲಾ ಜಾತಿಯವರು ಇದ್ದಾರೆ, ಅವರನ್ನು ಅವರದ್ದೇ ಜಾತಿಯ ಹೆಸರಲ್ಲಿ ಕರೆಯುತ್ತೇವೆ, ಆಚಾರ್ರು, ಐನೋರು, ಸಾಬ್ರು, ಗೌಡ್ರು, ಶಟ್ಟ್ರೂ, ಮಡಿವಾಳ್ರೂ, ದಲಿತ ಅನ್ನೋ ಪದ ಇದ್ರೂ (ಅಸಂವಿಧಾನಿಕ ಪದಬಳಕೆ ಇವತ್ತಿಗೂ ಇದೆ), ಕೊಡಗಿಗೆ ಹೋದರೆ ಮಾಪಿಲ್ಲೆ, ಅವರವರ ಇದು ಕರೆಯುವವರಿಗೂ ಸಮಸ್ಯೆಯಿಲ್ಲ, ಕರೆಸಿಕೊಳ್ಳುವವನಿಗೂ ಇಲ್ಲ. ನೇರವಾಗಿಯೇ ಹೇಳುತ್ತಾರೆ ನೀವು ಗೌಡ್ರುಗಳು ಬಿಡ್ರಪ್ಪ, ನೀವು ಬ್ರಾಮೂನ್ರೂ ಬಿಡ್ರಪ್ಪ ಅಂತಾ.

ಆದರೂ, ಯಾವ ತಾರತಮ್ಯ, ಜಗಳ ಗೊಂದಲಗಳು ಇಲ್ಲವೇ ಇಲ್ಲ. ನಮ್ಮಲ್ಲಿ ಬಸೀರು ಅಂತಾ ಪ್ರತಿ ವರ್ಷ ಬರ್ತಾನೆ, ಹೊಂಗೆ ಬೀಜ, ಹುಣಸೆ ಬೀಗ, ಭತ್ತ, ರಾಗಿ ವ್ಯಾಪಾರಕ್ಕೆ ಅವನ ಕುರಿತು ಸಮಸ್ಯೇನೇ ಇಲ್ಲಾ. ಇದು ನಾನು ಹುಟ್ಟಿದಾಗಿನಿಂದ ನೋಡಿದ್ದೇನೆ. ಹಾಗಂತ ಅಲ್ಲಿ ಜಗಳಗಳೇ ಆಗಿಲ್ವಾ? ಊರಿಂದ ಊರಿಗೆ ಜಗಳಗಳು ಆಗ್ತಾ ಇದ್ವು, ಬಾನುಗೊಂದಿ ಸರಗೂರಿಗೆ ಜಗಳ ಆಗಿದ್ದಾವೆ, ಬಾನುಗೊಂದಿ ಸಿದ್ದಾಪುರಕ್ಕೆ ಜಗಳ ಆಗಿದ್ದಾವೆ, ಕೊಣನೂರು ಹಂಡ್ರಂಗಿಗೆ ಜಗಳ ಆಗಿದೆ. ಅಲ್ಲೆಲ್ಲಿಯೂ ಜಾತಿ ಕಾರಣಕ್ಕೆ ಅಂತಾ ಅಲ್ಲ. ಎಲ್ಲರೂ ಒಂದೇ ಊರಲ್ಲಿ ಒಟ್ಟಿಗೆ ಬದುಕುತ್ತಿರುವಾಗ ಜಗಳ, ದ್ವೇಷ ಅನ್ನೋದು ಬರ್ತಾ ಇರಲಿಲ್ಲ.
ನಗರವಾಸಿಗಳ ಸಮಸ್ಯೆ ಏನು? ಬಹುತೇಕ ಒಂದೇ ಜಾತಿಯವರು ಒಂದೇ ಕಡೆಯಲ್ಲಿಯೇ ಇರುತಿದ್ದರು. ಉದಾಹರಣೆಗೆ, ಮೈಸೂರು, ಒಕ್ಕಲಿಗರೆಲ್ಲಾ ಕೆ.ಜಿ.ಕೊಪ್ಪಲು, ಪಡುವಾರಹಳ್ಳಿ, ಬ್ರಾಹ್ಮಣರು ಕೆ.ಆರ್. ಪುರಂ, ಅಗ್ರಹಾರ, ಅಶೋಕಪುರಂ ಅಲ್ಲಿ ದಲಿತರು, ಮಂಡಿಮೊಹಲ್ಲ ಮುಸಲ್ಮಾನರು, ಹೀಗೆ ಒಂದೇ ಕೋಮು ಅಥವಾ ಜಾತಿಯವರೆಲ್ಲಾ ಒಂದೆಡೆಗೆ ಇದ್ದರೇ ಅವರಿಗೆ ಅನ್ಯ ಜಾತಿಯ/ಧರ್ಮದವರೊಂದಿಗೆ ವ್ಯವಹಾರಗಳು ಇರುವುದಿಲ್ಲ. ಅವರು ಅನ್ಯರಂತೆ ಕಾಣುತ್ತಾರೆ. ಮುಂಜಾನೆ ಐದಕ್ಕೆ ಮೈಕ್ ಶಬ್ಧ ಕರ್ಕಶವೆನಿಸುತ್ತದೆ. ಗಣೇಶನ ಉತ್ಸವ ಗಜಿಬಿಜಿ ಅನಿಸುತ್ತೆ. ಕೊಣನೂರಿನಲ್ಲಿ ಮುಸಲ್ಮಾನರು ಬಂದು ಗಣೇಶ ಉತ್ಸವದಲ್ಲಿ ಭಾಗವಹಿಸುತ್ತಾರೆ, ದೇಣಿಗೆ ಕೋಡುತ್ತಾರೆ. ಯಾವುದೇ ತಾರತಮ್ಯವಿಲ್ಲ.

ಇನ್ನೊಂದು ಪ್ರಮುಖವೆಂದರೇ, ವಿದ್ಯಾವಂತರು. ಓದೋಕೆ ಅಂತಾ ಬಂದವರೆಲ್ಲರೂ ಅವರದ್ದೇ ಸಮುದಾಯದ ಹಾಸ್ಟೆಲ್ ಸೇರುವುದ, ಒಕ್ಕಲಿಗರ ಹಾಸ್ಟೆಲ್, ನಾಮಧಾರಿ, ಲಿಂಗಾಯತ, ಬ್ರಾಹ್ಮಣ, ಅಲ್ಲೆಲ್ಲಾ ಅವರದ್ದೇ ಜಾತಿಯವರೊಂದಿಗೆ ಸ್ನೇಹ ಮಾಡಿಕೊಂಡು, ಬೇರೆಯವರ ಕುರಿತು ಮಾತನಾಡಿ ಕೊನೆಯವರೆಗೂ ಅನ್ಯ ಜಾತಿ/ಧರ್ಮದವರಿಂದ ದೂರ ಉಳಿಯುತ್ತಾ ತಮಗೆ ತಿಳಿಯದೇ ದ್ವೇಷವನ್ನು ಬೆಳೆಸಿಕೊಳ್ಳುತ್ತಾರೆ.

ಅದರ ಜೊತೆಗೆ, ಇನ್ನೊಂದು ವಿಚಾರವೆಂದರೇ, ಮೀಸಲಾತಿ ಮತ್ತು ಉಚಿತ ಸವಲತ್ತುಗಳು. ಇದರಿಂದಾಗಿಯೇ ಅನೇಕ ಹಿಂದುಳಿದ ಜಾತಿಯವರನ್ನು ದ್ವೇಷಿಸುತ್ತಾರೆ. ನಾವು ಇಷ್ಟೆಲ್ಲಾ ಖರ್ಚುಮಾಡಿ ಓದಿದೆವು, ಅವರಿಗೆ ಎಲ್ಲವೂ ಉಚಿತ, ಮುಂಗಡವಾಗಿ ಅವರಿಗೆ ಕೆಲಸ ಸಿಗುತ್ತೆ, ಪ್ರಮೋಷನ್ ಸಿಗುತ್ತೆ ಅನ್ನುವ ಪುಕಾರುಗಳು. ಮುಸಲ್ಮಾನರ ಬಗ್ಗೆ ಕೂಡ ಇದೇ ಅಸಮಾಧಾನವಿದೆ, ಮೂರು ಜನರು ಹೆಂಡತಿಯರು, ಇಪ್ಪತ್ತು ಮಕ್ಕಳು. ನನಗೆ ಒಮ್ಮೊಮ್ಮೆ ತಮಾಷೆ ಎನಿಸೋದು, ಏನಂದ್ರೇ, ಅವರಿಗೆ ಮೂರು ಜನ ಹೆಂಡಿರು, ನನಗಿಲ್ಲ ಅನ್ನೋ ಬೇಸರನಾ? ಅಥವಾ ಕಾಳಜಿನಾ? ನಮ್ಮಲ್ಲಿಯೂ ನಮ್ಮಜ್ಜಿಗೆ ಆರು ಜನರು ಮಕ್ಕಳು, ಅವರ ಅಮ್ಮನಿಗೆ ಒಂಬತ್ತು ಮಕ್ಕಳು. ಕಾಲ ಬದಲಾದಂತೆ ಜನರು ಬದಲಾದರು. ಮುಸಲ್ಮಾನರಲ್ಲಿಯೂ ಅಷ್ಟೆ, ಪ್ರತಿಯೊಬ್ಬರು ಮೂರು ಹೆಂಡತಿಯರನ್ನು ಹೊಂದಿದ್ದಾರೆಯೇ? ಪ್ರತಿಯೊಬ್ಬರಿಗೂ ಐದಾರು ಮಕ್ಕಳಿದ್ದಾವೆಯೇ? ನನ್ನ ಬಹುತೇಕ ಎಲ್ಲಾ ಮುಸ್ಲೀಮ್ ಸ್ನೇಹಿತರಿಗೂ ಎರಡು/ಮೂರು ಮಕ್ಕಳು.

ದಲಿತರ ಮತ್ತು ಹಿಂದುಳಿದ ಜಾತಿಯವರನ್ನು ಮತ್ತು ಮೀಸಲಾತಿಯನ್ನು ವಿರೋಧಿಸುವ ಭರದಲ್ಲಿ ವಾಸ್ತವಾಂಶವನ್ನು ಮುಚ್ಚಿಡುತ್ತಿರುವುದು. ಎಪ್ಪತ್ತು ವರ್ಷಗಳ ಹಿಂದೆ, ದಲಿತರ ಜೀವನ ಹೇಗಿತ್ತೆಂಬುದನ್ನು ದಯವಿಟ್ಟು ಆತ್ಮ ಸಾಕ್ಷಿ ಸಮೇತ ವಿವೇಚಿಸಿ. ಅಷ್ಟೆಲ್ಲಾ ಏಕೆ? ನಾವು ಓದುವ ಸಮಯದಲ್ಲೆಯೇ ಹೇಗಿತ್ತು? ಆ ದಿನಗಳಿಗೆ ನಿಜವಾಗಿಯೂ ಅನಿವಾರ್ಯತೆ ಇತ್ತು. ಈಗಲೂ ಎಲ್ಲಾ ದಲಿತರ, ಹಿಂದುಳಿದ ವರ್ಗಗಳ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಿದೆ ಎಂದು ಹೇಳಲಾಗುವುದಿಲ್ಲ. ಅದರ ಜೊತೆಗೆ ಈ ದಿನಗಳಲ್ಲಿ ಆರ್ಥಿಕತೆಯ ಆಧಾರದಲ್ಲಿ ಮೀಸಲಾತಿ ಇಡುವುದು ಅವಶ್ಯಕತೆಯಿದೆ, ಏಕೆಂದರೇ ಹಳ್ಳಿಗಾಡಿನ ಆರ್ಥಿಕತೆ ಅಧೋಗತಿ ತಲುಪಿರುವುದು ಸತ್ಯ. ಅದರಂತೆಯೇ, ಜಾತಿ ಆಧಾರದಲ್ಲಿ, ಉಳ್ಳವರು ಉಚಿತ ಸವಲತ್ತುಗಳನ್ನು ಪಡೆದುಕೊಳ್ಳುವುದು ನಿಲ್ಲಬೇಕಾಗಿದೆ. ಆದರೇ, ನಮ್ಮಲ್ಲಿ ಉಚಿತವೆಂದರೇ ವಿಷವನ್ನು ಕೊಳ್ಳುವವರು ಕಡಿಮೆಯಿಲ್ಲ. ಹತ್ತು ರೂಪಾಯಿ ಉಚಿತ ಹಾಲಿಗೆ ಪರದಾಡಿದ್ದು ಕಂಡಿಲ್ಲವೇ? ಬೈಕ್‍ನಲ್ಲಿ ಬಂದು ಹಾಲು ಕೊಂಡವರೆಷ್ಟು? ತಾರಸಿ ಮನೆಯವರೆಷ್ಟು? ಇವೆಲ್ಲವೂ ಸರ್ಕಾರಗಳ ಕೈಯಲ್ಲಿರುವ ವಿಚಾರಗಳು, ಅವುಗಳನ್ನು ನಮ್ಮ ಮನದೊಳಕ್ಕೆ ತಂದು, ಅಣ್ಣ ತಮ್ಮಂದಿರಂತಿರಬೇಕಾದ ನಾವುಗಳು ಒಳಗೊಳಗೆ ಕತ್ತಿ ಮಸೆಯುವುದು ದುರಂತ.

ಸರ್ಕಾರಿ ಉದ್ಯೋಗಗಳನ್ನು ಬಿಡಿ, ಖಾಸಗಿ ಸಂಸ್ಥೆಗಳಲ್ಲಿ ಕೂಡ ಪ್ರತಿಯೊಂದು ಜಾತಿಯವರ ಒಂದು ಸಮಿತಿ, ಸಂಘಗಳಿವೆ. ಪ್ರತಿಯೊಂದು ಜಾತಿಯವರು ವಾಟ್ಸಪ್, ಫೇಸ್‍ಬುಕ್ ಗುಂಪು ರಚಿಸಿಕೊಂಡಿಲ್ಲವೇ? ವಿದ್ಯಾವಂತರೆನಿಸಿಕೊಂಡವರು, ನಮ್ಮ ಜಾತಿವನಿಗೆ ಮಂತ್ರಿಗಿರಿ ಸಿಕ್ಕಿತೆಂದು ಸಂಭ್ರಮಿಸಿಲ್ಲವೇ? ನಮ್ಮವರೇ ಮಂತ್ರಿಗಳು, ನಮ್ಮವರೇ ಶಾಸಕರೆಂದು ಬೀಗಿಲ್ಲವೇ? ಮೊದಲು ನಾವು ಶುದ್ಧೀಯಾಗಬೇಕು. ಜಾತಿಯೆಂಬುದು ಧರ್ಮವೆಂಬುದು ಒಂದು ಆಚರೆಣೆಯಷ್ಟೆ, ಯಾವುದೂ ಮೇಲಿಲ್ಲ, ಯಾವುದೂ ಕೀಳಿಲ್ಲ. ಧರ್ಮದ ವಿಚಾರ ಬಂದಾಗ ನಮ್ಮದು ಶ್ರೇಷ್ಠ ಧರ್ಮವೆಂಬುವವರು, ಜಾತಿಯ ವಿಚಾರ ಬಂದಾಗ ಪ್ರಾಣಿ ಬಲಿ ಕೊಡುವುದು, ಮಾರಮ್ಮನ ಹಬ್ಬ, ಊರ ಹಬ್ಬಗಳನ್ನು ತುಚ್ಛವಾಗಿ ಕಾಣುವುದಿಲ್ಲವೇ? ಮಾಂಸ ತಿನ್ನುವ ಜಾತಿಯವರು ಕೀಳೆಂಬುದು ಬಂದಾಗ ಧರ್ಮದ ವಿಶಾಲತೆ ಅಡ್ಡ ಬರುವುದಿಲ್ಲವೇ? ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು ಅಷ್ಟೆ, ಅದಕ್ಕೆ ಈ ಧರ್ಮ, ಜಾತಿ, ಭಾಷೆಯ, ದೇಶದ ಅಡೆತಡೆಗಳಿರಬಾರದು.

ಹೆಮ್ಮೆಯಿಂದ ಹೇಳುತ್ತೇನೆ, ಭಾಷೆ ಬಾರದ ರಾಜ್ಯಗಳಲ್ಲಿ, (ತಮಿಳುನಾಡು, ಆಂದ್ರ, ಮಹರಾಷ್ಟ್ರ, ಓಡಿಸ್ಸಾ, ರಾಜಸ್ಥಾನ, ಉತ್ತರಖಾಂಡದ) ಹಳ್ಳಿಗಾಡುಗಳಲ್ಲಿ ನಾನು ಫೀಲ್ಡ್ ವಿಸಿಟ್ ಮಾಡಿದ್ದೇನೆ, ಅವರ್ಯಾರು ನನ್ನ ಜಾತಿ ಕೇಳಿಲ್ಲ, ಭಾಷೆಯ ಬಗ್ಗೆ, ರಾಜ್ಯದ ಬಗ್ಗೆ ತಕರಾರು ಎತ್ತಲಿಲ್ಲ. ಆ ನನ್ನ ಅನುಭವಗಳೇ ನನಗೆ ಜಾತಿಯಾಗಲೀ, ಭಾಷೆಯಾಗಲೀ, ಧರ್ಮವಾಗಲೀ ಮುಖ್ಯವೆನಿಸುವುದಿಲ್ಲ.

ನಾನು ಪಿ.ಎಚ್‍ಡಿ ಮಾಡಿದ್ದೇನೆ, ಇಂದಿಗೂ ಸರಗೂರಿನ ಬ್ರಾಹ್ಮಣರ ಮನೆಯ ಒಳಕ್ಕೆ ಹೋಗಿಲ್ಲ. ನನ್ನ ಸ್ನೇಹಿತರಿದ್ದಾರೆ. ಅವರ ಮಡಿವಂತಿಕೆಯನ್ನು ಗೌರವಿಸುತ್ತೇನೆ. ಮನೆ ಹೊರಾಂಗಣದಲ್ಲಿ ನಿಂತು ಮಾತಾಡಿಸುತ್ತೇನೆ. ಅದು ವೈವಿದ್ಯತೆ. ಹಾಗಂತ ನನಗೆ ಬ್ರಾಹ್ಮಣ ಸ್ನೇಹಿತರೇ ಇಲ್ಲವೇ? ಅನೇಕರಿದ್ದಾರೆ, ಸೇರಿಸುವವರ ಮನೆಗೆ ಹೋಗುತ್ತೇನೆ, ಊಟ ಮಾಡುತ್ತೇನೆ.

ಎಲ್ಲಾ ಜಾತಿಯ ಜನರೊಂದಿಗೆ ಬೆರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ, ಎಲ್ಲಾ ಧರ್ಮದವರ ಮನೆಯಲ್ಲಿ ಊಟ ಮಾಡುವುದನ್ನು ಪ್ರಾರಂಭಿಸಿ, ನಿಮಗೆ ಅರಿಯದಂತೆ ಅವರ ಆಚಾರಗಳು, ವಿಚಾರಗಳು ಹಿಡಿಸುತ್ತಾ ಹೋಗುತ್ತವೆ. ದ್ವೇಷ ಮರೆಯಾಗುತ್ತ ಹೋಗುತ್ತದೆ. ಸೇರಿಸುವುದಿಲ್ಲವೇ ಬಿಟ್ಟು ಬಿಡಿ.

ಆದರೇ, ಒಂದು ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲಿ ರಾಜಕಾರಣಿಗಳನ್ನು ಹೊರತುಪಡಿಸಿ ಮೂರು ವರ್ಗವಿದೆ. ಮೊದಲನೆಯ ವರ್ಗ ಬೆಂಕಿ ಹಚ್ಚಿ ಎನ್ನುವುದು ಮತ್ತೊಂದು ಬೆಂಕಿ ಹಚ್ಚುವುದು. ಮೊದಲನೆಯವರ ಸಂಖ್ಯೆ ಬಹಳ ಕಡಿಮೆ. ಅವರುಗಳು, ಹೆಚಿನ ಸಂಖ್ಯೆಯ ಸೈನಿಕರನ್ನು ಬಳಸಿ, ಈ ಕೃತ್ಯವನ್ನು ಮಾಡಿಸುತ್ತದೆ. ಮಾಡಿಸಿದ್ದಕ್ಕೆ ತಕ್ಕ ಪ್ರತಿಫಲಗಳೂ ಸಿಗುತ್ತವೆ. ಸ್ಥಾನಮಾನಗಳು, ಆರ್ಥಿಕತೆ ಇತ್ಯಾದಿ. ಎರಡನೆಯ ಗುಂಪು, ಭಾವನಾತ್ಮಕವಾಗಿ ಸ್ಪಂದಿಸುದು. ಇವುಗಳಿಗೆ, ಯಾವ ಲಾಭಾಂಶವೂ ಇಲ್ಲ, ಮತ್ತು ಅದನ್ನು ನಿರೀಕ್ಷೆ ಕೂಡ ಮಾಡದೇ, ನಿಷ್ಠಾವಂತರಾಗಿ ಬದುಕುತ್ತಾರೆ. ಮೂರನೆಯ ವರ್ಗ ಚಾಚು ತಪ್ಪದೇ ಪಾಲಿಸುತ್ತದೆ, ಅದಕ್ಕೆ ಸಾಧಕ ಬಾಧಕಗಳ ಲೆಕ್ಕಚಾರವೇನೂ ಬೇಡ. ಈ ಗುಂಪು ಜಾತಿಯ ವಿಚಾರದಲ್ಲಿ, ಧರ್ಮದ ವಿಚಾರದಲ್ಲಿ ಅತ್ಯಾಚಾರಿಯನ್ನು ಸಮರ್ಥಿಸಿಕೊಳ್ಳುತ್ತದೆ, ಕೊಲೆಗಡುಕನನ್ನು ಕಾಪಾಡುತ್ತದೆ, ಅಮಾಯಕನನ್ನು ಕೊಲ್ಲುತ್ತದೆ, ಸ್ವಂತದವರನ್ನು ಕಳೆದುಕೊಳ್ಳುತ್ತವೆ. ಇವೆಲ್ಲವೂ ಭಾವನೆಗಳ ಗೊಂದಲದಲ್ಲಿ ಜೀವಿಸಲು ಹೊರಟಿರುವವರು. ಸರಿ ತಪ್ಪನ್ನು ಗುರುತಿಸಲೂ ಆಗದವು.

ಕೊನೆಯದಾಗಿ ಒಂದು ಮಾತು ಹೇಳುತ್ತೇನೆ. ಹಿಂದೆ, ಸೋಷಿಯಲ್ ಮೀಡಿಯಾ ಇರಲಿಲ್ಲ, ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ನಿಜಕ್ಕೂ ಕೋಮು ಸೌಹಾರ್ಧತೆಗೆ ಶ್ರಮ ಪಡುತ್ತಿದ್ದರು. ಉದಹಾಹರಣೆಗೆ, ತೊಂಬತ್ತರ ದಶಕದಲ್ಲಿ ರಾಮ ಜನ್ಮಭೂಮಿ ವಿವಾದ. ಅದರಂತೆಯೇ, ನೋಡಿ ಅದರಲ್ಲಿಯೂ ಚಾಮರಾಜನಗರ ಜಿಲ್ಲೆಯಲ್ಲಿ ಜಾತಿ ಜಗಳಗಳು ಅತಿರೇಕವಾಗಿದ್ದವು. ದಲಿತ ಚಳುವಳಿಗಳೂ ಅಷ್ಟೆ. ದೇವಸ್ಥಾನಕ್ಕೆ ನುಗ್ಗುವುದಕ್ಕೆ, ತಡೆಯುವುದಕ್ಕೆ ಅದೆಷ್ಟೋ ರಕ್ತಪಾತಗಳು. ಆದರೇ, ಈಗ ಜನ ಬುದ್ದವಂತರಾಗಿದ್ದಾರೆ, ದೇವಸ್ಥಾನವನ್ನೇ ತಿರಸ್ಕರಿಸಿದ್ದಾರೆ, ರಾಮಮಂದಿರ ತಗೊಂಡು ಏನ್ ಮಾಡಬೇಕು ಅಂತಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಮಾಧ್ಯಮಗಳು ಮುಸ್ಲೀಮರ ವಿರುದ್ಧ ಅದೆಷ್ಟು ಸಾಧ್ಯವೋ ಅಷ್ಟೂ ಬೆಂಕಿ ಹಚ್ಚಲು ಪ್ರಯತ್ನಿಸಿವೆ, ನಮಗೆ ಅರಿವಿದೆ ಯಾವುದು ಸತ್ಯ, ಯಾವುದು ಬೇಕು ಅಂತಾ. ಆದರೇ, ಕೆಲವು ಅಂಧರು, ಆ ಅಫೀಮಿನ ಗುಂಗಿನಲ್ಲಿ ನರಳುತ್ತಿದ್ದಾರೆ. ಅವರು, ಅಲ್ಲಿಂದ ಬರುವುದಕ್ಕೆ ಅಸಾಧ್ಯ, ಏಕೆಂದರೇ, ಧರ್ಮ/ಜಾತಿ ಯಾವತ್ತಿಗೂ ಅಫೀಮು. ದ್ವೇಷದಿಂದ ಸುಲಭಕ್ಕೆ ಮುಕ್ತಿ ದೊರೆಯುವುದಿಲ್ಲ.

ಸತ್ತು ಹೋದ ಸಿದ್ದಾಂತಗಳ ಮೆರವಣಿಗೆಯಲ್ಲಿ....




ಸ್ನೇಹಿತರೇ,
ಲೇಖನ ಉದ್ದವಿದೆ ಮತ್ತು ಗೊಂದಲವೂ ಎನಿಸಬಹುದು, ಸಾವಧಾನದಿಂದ ಓದಿ.

ಅನೇಕ ದಿನಗಳಿಂದ ಬರೆಯಬೇಕೆಂದಿದ್ದ ವಿಷಯಗಳನ್ನು ಈ ದಿನ ಪ್ರಸ್ತಾಪಿಸುತ್ತಿದ್ದೇನೆ. ಇವೆಲ್ಲವೂ ನನ್ನ ವೈಯಕ್ತಿಕ ಅಬಿಫ್ರಾಯಗಳೆಂಬು ಸತ್ಯ. ಇದನ್ನು ಅನೇಕರು ಒಪ್ಪುವುದಿಲ್ಲವೆಂಬುದು ಅಷ್ಟೇ ಸತ್ಯ ಮತ್ತು ಅವರನ್ನು ಒಪ್ಪಿಸಬೇಕೆಂಬ ಅನಿವಾರ್ಯತೆ ನನಗಿಲ್ಲವೆಂಬುದೂ ಸತ್ಯ. ಇಂದು, ಮಹೇಂದ್ರ ಕುಮಾರ್ ಕೊಪ್ಪರವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ಕಸಿವಿಸಿಯಾಯಿತು. ನಾನು ನನ್ನ ಬಿ.ಎಸ್ಸಿ. ದಿನಗಳಿಂದಲೂ ಅವರನ್ನು ನೋಡುತ್ತಾ/ಕೇಳುತ್ತಾ ಬಂದಿದ್ದೇನೆ. ಒಬ್ಬ ತೀವ್ರವಾದ ಬಲಪಂಥೀಯ ಸಿದ್ದಾಂತದ ಅನುಯಾಯಿಯಾಗಿ ದಶಕಗಳು ದುಡಿದು, ಸಂಘಟಿಸಿ, ದಿಢೀರನೇ ಅಲ್ಲಿಂದ ಹೊರಬಂದು ಅದರ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದು ನಿಜಕ್ಕೂ ಅಚ್ಚರಿ ಮತ್ತು ಅಸಾಮಾನ್ಯ.


ಈ ಸಿದ್ದಾಂತಗಳು, ಇಸಂ ಗಳು ಎಂದಿಗೂ ಅಫೀಮು ಇದ್ದಂತೆ ಅಥವಾ ಚಟವೆಂದರೂ ತಪ್ಪಿಲ್ಲ. ಒಬ್ಬ ವ್ಯಕ್ತಿ ಒಂದು ಸಿದ್ದಾಂತಕ್ಕೆ, ಇಸಂ ಗೆ ಗಂಟು ಬಿದ್ದರೆ ಮುಗಿಯುತು, ಅಲ್ಲಿಂದ ಹೊರಬರುವುದು ಅಸಾಧ್ಯದ ಮಾತು. ಇಷ್ಟವಿದ್ದರೂ ಇಲ್ಲದಿದ್ದರೂ ಅಲ್ಲಿಯೇ ಇರಬೇಕು. ನಮ್ಮ ಕನ್ನಡ ಸಿನೆಮಾಗಳಲ್ಲಿ ಆಗ್ಗಾಗ್ಗೆ ಕೇಳುವ ಒಂದು ಡೈಲಾಗ್ ಇದೆ “ನಾವು ರೌಡಿಸಂ ಬಿಟ್ಟರೂ, ರೌಡಿಸಂ ನಮ್ಮನ್ನು ಬಿಡುವುದಿಲ್ಲವೆಂದು’. ಫೇಸ್‍ಬುಕ್ಕಿನಲ್ಲಿ, ವಾಟ್ಸಪ್ಪಿನಲ್ಲಿ ಬರುವ ಪೋಸ್ಟ್‍ಗಳನ್ನು ಪಾರ್ವರ್ಡ್ ಮಾಡಿ ಭಕ್ತಿ ತೋರಿಸುವುದು, ನಿಷ್ಠಾವಂತ ಎಂದು ಬಿಂಬಿಸಿಕೊಳ್ಳುವುದು ಬೇರೆ. ಆದರೇ, ಅದರ ಒಳಗೆ ಆ ಸಿದ್ದಾಂತವನ್ನು ಸಾಧಿಸಲು ಪಣತೊಟ್ಟು ದುಡಿಯುವುದು ಬೇರೆ. ಈ ಅರ್ಥದಲ್ಲಿ ಮಹೇಂದ್ರರವರು ದುಡಿದಿದ್ದಾರೆ. ಅಲ್ಲಿಯೇ ಇದ್ದಿದ್ದರೇ ಈ ದಿನಕ್ಕೆ ನಿಜವಾಗಿಯೂ ಅತ್ಯುನ್ನತ ಪದವಿ ಸಿಕ್ಕೇ ಸಿಕ್ಕಿರುತ್ತಿತ್ತು. ಆದರೇ, ಆ ಕೊಂಡಿಯನ್ನು ಕಳಚಿ ಹೊರಕ್ಕೆ ಬಂದರು. ಅಲ್ಲಿಂದ ಬಂದ ನಂತರ ಅವರೇನು, ಎಡಪಂಥೀಯ ಸಿದ್ದಾಂತದ ಕಡೆಗೆ ಒಲಿಯಲಿಲ್ಲ. ಅಲ್ಲಿಂದಲೂ ದೂರ ಕಾಯ್ದಿರಿಸಿಕೊಂಡರು.

ವಿಚಿತ್ರವೆಂದರೇ, ನಮ್ಮಲ್ಲಿ ಒಂದು ಹೊಗಳಬೇಕು ಇಲ್ಲವೇ ದೂಷಿಸಬೇಕೆಂಬ ಅಲಿಖಿತ ನಿಯಮವೊಂದಿದೆ. ನೀನು ಬಲಪಂಥೀಯನಾಗಬೇಕು ಇಲ್ಲವೇ ಬಲಕ್ಕೆ ಬರಬೇಕು. ಮಧ್ಯದಲ್ಲಿರುತ್ತೇನೆಂದರೇ ಒಪ್ಪುವುದಿಲ್ಲ. ಒಂದರ್ಥದಲ್ಲಿ, ಮಹೇಂದ್ರರವರದ್ದೂ ಅದೇ ಆಯಿತೆನಿಸುತ್ತದೆ. ಮಾನವೀಯತೆಯ ಅಡಿಯಲ್ಲಿ ಸಮಾಜ ಕಟ್ಟೋಣ, ಜಾಗೃತೆ ಮೂಡಿಸೋಣವೆಂದು ಹೊರಟದ್ದು ಎರಡು ಪಂಥದವರಿಗೂ ಹಿಡಿಸಲಿಲ್ಲ. ಆದರೂ, ಅವರ ಇತ್ತೀಚಿನ ಹೋರಾಟಗಳನ್ನು ಮೆಚ್ಚಲೇಬೇಕು. ಯಾವುದೇ ಪಂಥವನ್ನು ಪಾಲಿಸದೇ ಕೇವಲ ಮಾನವೀಯತೆಯ ದೃಷ್ಠಯಿಂದ ಸಮಾಜವನ್ನು, ದೇಶವನ್ನು ನೋಡಲು ಬಯಸುತ್ತಿರುವ ಅನೇಕ ಮನಸ್ಸುಗಳಿಗೆ ಅವರು ಆಲೋಚನೆಗಳು ದಾರಿದೀಪವಾಗುವುದರಲ್ಲಿ ಸಂದೇಹವಿಲ್ಲ.

ಎರಡನೆಯದಾಗಿ, ಈ ಮೇಲಿನ ವಿಚಾರಗಳನ್ನೇ ಸ್ವಲ್ಪ ವಿವರಿಸಲು ಬಯಸುತ್ತೇನೆ. ಲೇಖನ ಉದ್ದವಾದರೂ ಸಹನೆಯಿಂದ ಓದಬೇಕೆಂಬುದು ನನ್ನ ಕೋರಿಕೆ. ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಒಮ್ಮೊಮ್ಮೆ ಬಹಳ ಆತಂಕವಾಗುತ್ತದೆ. ಅವೆಲ್ಲವನ್ನೂ ಉದಾಹರಣೆಗಳೊಂದಿಗೆ ವಿವರಿಸುತ್ತೇನೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಹಲಗನಹಳ್ಳಿಯೆಂಬ ಒಂದು ದೊಡ್ಡ ಊರಿದೆ. ಅಲ್ಲಿರುವವರೆಲ್ಲರೂ ಮುಸಲ್ಮಾನರು. ನನ್ನ ಹೈಸ್ಕೂಲ್ ಕ್ಲಾಸ್‍ಮೇಟ್ ಕೂಡ ಇದ್ದಾರೆ. ಅವರಿಗೆ, ಹೀಗೆಯೇ ಫೋನ್ ಮಾಡಿ ಮಾತನಾಡುತ್ತಿದ್ದೆ. ಏನ್ರಪ್ಪಾ, ಹೇಗಿದೆ ಜೀವನ ಅಂತಾ ಎಲ್ಲಾ. ಆಗ ತಿಳಿದು ಬಂದ ಸುದ್ದಿ ಏನೆಂದರೇ, ಅವರ ಹೊಲ ಗದ್ದೆ ಕೆಲಸಗಳಿಗೆ ಅಕ್ಕ ಪಕ್ಕದ ಊರುಗಳಿಂದ ಕೂಲಿ ಕೆಲಸಕ್ಕೆ ಜನರು ಬರುತ್ತಿದ್ದರು. ಅವರುಗಳನ್ನೆಲ್ಲಾ ಆ ಊರಿನ ಜನರು ತಡೆದಿದ್ದಾರೆ, ಸಾಬ್ರುಗಳ ಮನೆಗೆ ಕೆಲಸಕ್ಕೆ ಹೋಗಬಾರದೆಂದು, ಹೋದರೇ ದಂಡ ವಿಧಿಸಲಾಗುವುದೆಂದು. ಇದು ನಮ್ಮ ಮಾಧ್ಯಮಗಳ ಕೊಡುಗೆ. ಇದನ್ನು ನನ್ನ ಸ್ವಂತ ಅನುಭವದಲ್ಲಿಯೇ ಹೇಳಿದರೆ ನಿಮಗೆ ತಿಳಿಯುವುದು. ಅದಕ್ಕೊಂದು ಹಿನ್ನಲೆಯನ್ನು ತಿಳಿಸುತ್ತೇನೆ. ಇತ್ತೀಚೆಗೆ ನನ್ನ ಒಂದಿಬ್ಬರು ಸ್ನೇಹಿತರು, ನಾನು ಮುಸಲ್ಮಾನರ ಪರವಾಗಿ ಪೋಸ್ಟ್ ಹಾಕುತ್ತೇನೆ, ನಾನು ಹಿಂದೂ ವಿರೋಧಿ ಮತ್ತು ಸುಳ್ಳು ಜ್ಯಾತ್ಯಾತೀತವಾದಿ ಎಂದು ಹಿಯಾಳಿಸಿದರು. ಆ ವಾಟ್ಸಾಪ್ ಚಾಟ್ ಅನ್ನು ಸಮಯ ಬಂದಾಗ ಪೋಸ್ಟ್ ಮಾಡುತ್ತೇನೆ. ಅವರು ಅಂಧಕಾರ ಅಳಿಯಲಿ ಎಂದು ಕೋರುತ್ತೇನೆ.

ಇರಲಿ, ನಾನು ಹುಟ್ಟಿದ್ದು ಬಾನುಗೊಂದಿ, ಬೆಳೆದಿದ್ದು, ಬಾನುಗೊಂದಿ, ಕೊಣನೂರು, ಕುಶಾಲನಗರ, ಮೈಸೂರು, ಬೆಂಗಳೂರು ಹೀಗೆ. ಹಳ್ಳಿಯಲ್ಲಿ ಜಾತಿಗೆ ಬಳಸುವ ಪದಗಳನ್ನೇ ಬಳಸುತ್ತೇನೆ, ಅದು ತಪ್ಪೆನಿಸಿದರೆ ಕ್ಷಮೆಯಿರಲಿ. ನಾನು ಯಾವುದೇ ಸಿದ್ದಾಂತಗಳನ್ನು ಪಾಲಿಸುವುದಿಲ್ಲ. ನನಗೆ ಮಾನವೀಯತೆ ಮಾತ್ರವೇ ಮುಖ್ಯ ಅದು ಬಿಟ್ಟರೇ ಇಕಾಲಜಿಯೊಂದೆ ನನ್ನ ಸಿದ್ದಾಂತ. ನಾನು ಪರಿಸರದ ಕುರಿತು, ನಿಸರ್ಗದ ಕುರಿತು ಆಲೋಚಿಸುತ್ತೇನೆ. ಅದರ ಸಿದ್ದಾಂತದ ಮುಂದೆ, ಮಿಕ್ಕ ಸಿದ್ದಾಂತಗಳೆಲ್ಲಾ ತೃಣ.

ನಮ್ಮಲ್ಲಿ ಜಾತಿ ಅನ್ನೋದು ಇರುವುದು ಹೌದಾದರೂ ಅದ್ಯಾವತ್ತೂ ನಮಗೆ ಸಮಸ್ಯೆಯನ್ನು ತಂದೊಡ್ಡಿಲ್ಲ. ಉದಾಹರಣೆಗೆ: ಹಿಂದೂ ಮುಸ್ಲಿಮ್, ಅವರನ್ನು ನಾನು ಕರೆಯುವುದು ಸಾಬ್ರುಗಳು ಅಂತಾ, ಅವರಿಗೆ ಯಾವುದೇ ಸಮಸ್ಯೆಯಿಲ್ಲ. ನನ್ನನ್ನು ಅವರುಗಳು ಕರೆಯುವುದು ನೀವು ಗೌಡ್ರುಗಳು. ನಮ್ಮಲ್ಲಿ ಸಾಬ್ರು ಅನ್ನೋದು ಒಂದು ಜಾತಿ, ಅದು ಧರ್ಮ ಅಂತಾ ತಿಳಿದೇ ಇಲ್ಲ. ನಮ್ಮಜ್ಜಿ ಕೇಳಿದ್ರೂ ಅದನ್ನೇ ಹೇಳೋದು ಸಾಬ್ರು ಜಾತಿಯವರು ಅಂತಾ. ಅಂದರೇ, ಅವರು ನಮ್ಮವರೇ ಅವರದ್ದು ಬೇರೋಂದು ಜಾತಿ ಅನ್ನೋ ರೀತಿಯಲ್ಲಿಯೇ ಬದುಕಿರೋದು. ಹೆಚ್ಚೂ ಕಡಿಮೆ ಪ್ರತಿಯೊಂದು ರಂಜಾನ್‍ನಲ್ಲಿ ನಾನು ಯಾರಾದರೂ ಒಬ್ಬ ಮುಸಲ್ಮಾನ್ ಸ್ನೇಹಿತನ ಮನೆಯಲ್ಲಿ ಊಟ ಮಾಡಿರುತ್ತೇನೆ. ಹಲಗನಹಳ್ಳಿ ಕಡೆಗೆ ಹೋಗುವಾಗೆಲ್ಲ, ನದೀಮ್ ಅಥವಾ ಮುಜಾಹಿದ್‍ಗೆ ಕಾಲ್ ಮಾಡಿ, ನಾನು ಬರ್ತಾಯಿದ್ದೀನಿ, ಬಿರಿಯಾನಿ ಮಾಡಿಸು ಅಂತಾ ಹೇಳಿ, ಬಿರಿಯಾನಿ ತಿಂದು ಬರ್ತೀನಿ. ಈ ಹಿನ್ನಲೆಯಲ್ಲಿ, ಯಾವುದೋ ಮೂಲೆಯಲ್ಲಿ ಯಾವನೋ ಸಾಬ್ರ ಜಾತಿಗೆ ಸೇರಿದವನು ತಪ್ಪು ಮಾಡಿದ್ದಕ್ಕೆ ಎಲ್ಲರನ್ನೂ ಸೇರಿಸಿ ದೂಷಿಸಿದರೇ ಸರ್ವೇಸಾಮಾನ್ಯವಾಗಿ ಕೋಪ ಬರುತ್ತದೆ. ಅದನ್ನು ನಾನು ಸಹಿಸುವುದಿಲ್ಲ. ನಾನೊಬ್ಬ ಗೌಡ್ರ ಜಾತಿಯವನಾಗಿ, ಯಾರೋ ನಾಲ್ಕು ಜನ ಗೌಡ್ರು ಜಾತಿಯವರು ಮಾಡಿದ್ದಕ್ಕೆ ಇಡೀ ಗೌಡ್ರ ಜಾತಿಯನ್ನೇ ಬೈದರೇ ಹೇಗೆ?

ಈ ಸಿದ್ದಾಂತಗಳ ವಿಚಾರಕ್ಕೆ ಬರೋಣ, ಯಾವುದೇ ಸಿದ್ದಾಂತಗಳು ಪರಿಪೂರ್ಣವಲ್ಲವೆಂಬುದನ್ನು ಮೊದಲು ಅರಿಯಬೇಕು ಮತ್ತು ಒಪ್ಪಿಕೊಳ್ಳಬೇಕು. ಸಿದ್ದಾಂತಗಳು ಆ ಸಮಯಕ್ಕೆ ಮತ್ತು ಸನ್ನಿವೇಶಕ್ಕೆ ರೂಪುಗೊಂಡಿರುತ್ತವೆ. ಎಲ್ಲಾ ಸಿದ್ದಾಂತಗಳು ಮಾನವ ನಿರ್ಮಿತವೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸಿದ್ದಾಂತವನ್ನು ಬರೆದವನೇ ಶಾಸ್ವತವಲ್ಲವೆಂದ ಮೇಲೆ, ಇನ್ನೂ ಸಿದ್ದಾಂತಗಳು ಶಾಸ್ವತವಾಗಲು ಸಾಧ್ಯವೇ? ಅದನ್ನು ಅರಿಯದೇ ಹೋದರೇ ಆ ಸುಳಿಯಲ್ಲಿ ಸಿಲುಕಿಕೊಂಡು ಸಾಯುವುದು ಸತ್ಯ. ನಾವು ಸಿದ್ದಾಂತಗಳನ್ನು ನಂಬಬೇಕು, ಆದರೆ ಅದೊಂದೆ ಸತ್ಯ ಆ ಸಿದ್ದಾಂತಗಳನ್ನು ಬಿಟ್ಟು ಮಿಕ್ಕಿದೆಲ್ಲವೂ ಮಿತ್ಯವೆನ್ನುವ ಭ್ರಮೆಯಿಂದ ಹೊರಬರಬೇಕು. ಪ್ರತಿಯೊಂದು ಸಿದ್ದಾಂತವೂ ಅವರವರ ನಂಬಿಕೆ. ಯಾವುದರಲ್ಲಿ ಶ್ರದ್ದೆ ಇದೆಯೋ ಅದನ್ನು ಪಾಲಿಸಲಿ ಎಂಬುದನ್ನು ಮನಗಾನಬೇಕು.

ಈ ವಿಚಾರವನ್ನು ಮತ್ತೊಷ್ಟು ಆಳಕ್ಕೆ ಇಳಿದು ಚರ್ಚಿಸೋಣ. ಇದನ್ನು ಸ್ವಲ್ಪ ರಾಜಕೀಯಕ್ಕೂ, ರಾóಷ್ಟ್ರೀಯಕ್ಕೂ, ಧರ್ಮಕ್ಕೂ ವಿಸ್ತರಿಸೋಣ. ಮೊದಲನೆಯದಾಗಿ ರಾಜಕೀಯವನ್ನು ನೋಡೋಣ. ಅದರಲ್ಲಿಯೂ ಭಾರತೀಯ ರಾಜಕೀಯ ಪಕ್ಷಗಳನ್ನು ನೋಡೋಣ ಮತ್ತು ಅವುಗಳ ಸಿದ್ದಾಂತಗಳನ್ನೂ ನೋಡೋಣ. ಕಾಂಗ್ರೇಸ್ ಪಕ್ಷ ಅತಿ ಹೆಚ್ಚು ಕಾಲ ಆಡಳಿತ ನಡೆಸಿದೆ. ಆಡಳಿತದ ವಿಚಾರಗಳು ಬೇಡ, ರಾಜಕಾರಣವನ್ನು ಮಾತ್ರ ನೋಡೋಣ. ನೆಹರೂ ಕಾಲದ ಪಕ್ಷಕ್ಕೂ, ಇಂದಿರಾ ಗಾಂಧೀ ಕಾಲಕ್ಕೂ, ರಾಜೀವ್ ಗಾಂಧೀ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧೀ ಕಾಲಕ್ಕೂ ಅಜಗಜಾಂತರವಿದೆ. ಪಕ್ಷದ ಸಿದ್ದಾಂತಗಳು ಹಾಗೇಯೇ ಇದೆ ಮತ್ತು ಇರುತ್ತದೆ. ಅವುಗಳಲ್ಲಿ ಅಂತಹ ಬೃಹತ್ತ ಬದಲಾವಣೆಗಳು ಆಗಿರುವುದಿಲ್ಲ, ಪ್ರತಿಯೊಂದು ಕಂಪನಿಗಳಿಗೂ ಇರುವ ಬೈಲಾ ರೀತಿ, ಆ ಉಪನಿಯಮಗಳು ಇರುತ್ತವೆ, ಆದರೇ ನಡುವಳಿಕೆ ಬದಲಾಗುತ್ತಿರುತ್ತದೆ. ಇದೊಂದು ರೀತಿಯಲ್ಲಿ, ಕಾಲೇಜಿನ ಪ್ರಗತಿ ಪ್ರತಿಯೊಬ್ಬ ಪ್ರಾಂಶುಪಾಲರು ಬಂದಾಗ ಬದಲಾಗುವ ರೀತಿ.

ಅದೇ ರೀತಿಯಲ್ಲಿ, ಬಿಜೆಪಿ ಪಕ್ಷವನ್ನು ಗಮನಿಸುತ್ತಾ ಬನ್ನಿ. ಪಕ್ಷಾತೀತವಾಗಿ ವಾಜಪೇಯಿಯವರನ್ನು ಆರಾಧಿಸಿ, ಗೌರವಿಸಿದ್ದಾರೆ. ಅವರ ನೇತೃತ್ವದ ಬಿಜೆಪಿಗೂ, ಅಡ್ವಾನಿಯವರ ನೇತೃತ್ವದ ಬಿಜೆಪಿಗೂ, ಗಡ್ಕರಿಯವರ ಬಿಜೆಪಿಗೂ, ಅಮಿತ್ ಶಾ ಅವರ ನೇತೃತ್ವದ ಬಿಜೆಪಿಗೂ ಎಂತಹ ವ್ಯತ್ಯಾಸವೆಂಬುದು ಕಣ್ಣಿಗೆ ಕಂಡಿದೆ. ತೊಂಬತ್ತರ ದಶಕದಲ್ಲಿ ಪ್ರತಿಯೊಬ್ಬರು ರಾಮ ಮಂದಿರ ನಿರ್ಮಿಸಲೇಬೇಕೆಂದು ಆಸೆ ಪಟ್ಟಿದ್ದು ಹೌದು, ಆದರೇ, ಈಗ ಬಹುತೇಕರಲ್ಲಿ ಅದರ ಬಗ್ಗೆ ಆಸಕ್ತಿಯೇ ಇಲ್ಲ. ಅದು ಪ್ರಮುಖವೆನಿಸುತ್ತಿಲ್ಲ. ಕಾಲ ಬದಲಾಗುತ್ತಿದೆ. ಇದು, ಪ್ರಾದೇಶಿಕ ಪಕ್ಷಗಳಿಗೂ ಅನ್ವಯವಾಗುತ್ತದೆ. ದೇವೇಗೌಡರ ಜನತಾದಳಕ್ಕೂ ಕುಮಾರಸ್ವಾಮಿಯವರ ಪಕ್ಷಕ್ಕೂ ಅಂತರವಿದೆ. ಕಮ್ಯೂನಿಸ್ಟ್ ಪಕ್ಷವೂ ಅಷ್ಟೆ, ಜ್ಯೋತಿ ಬಸುವಿಗೂ ಕಾರಟ್‍ರಿಗೂ ವ್ಯತ್ಯಾಸವವಿದೆ. ಬದಲಾಗುತ್ತಿವೆ. ಸಿದ್ದಾಂತಗಳು ಪುಸ್ತಕಕ್ಕೆ ಮಾತ್ರ ಸೀಮಿತವಾಗಿವೆ, ಆಡಳಿತದ ಚುಕ್ಕಾಣಿ ಹಿಡಿಯುವುದೊಂದೆ ಮುಖ್ಯವೆಂಬುದರಲ್ಲಿ ತೊಡಗಿವೆ. ಸೂಕ್ಷ್ಮತೆ ಮಣ್ಣಾಗಿರುವು ಅಕ್ಷರಶಃ ಸತ್ಯ. ಯಡ್ಯೂರಪ್ಪರವರು ಮೊನ್ನೆ ಯಾವುದೇ ಕೋಮಿನ ವಿರುದ್ದ ದ್ವೇಷ ಕಾರಬಾರದೆಂಬ ಒಂದೇ ಒಂದು ಮಾತಿಗೆ ಸ್ವತಃ ಅವರ ಪಕ್ಷದವರೇ ತಿರುಗಿಬಿದ್ದದ್ದು ಕಂಡಿಲ್ಲವೇ?

ಧರ್ಮದ ವಿಚಾರಕ್ಕೆ ಬರೋಣ, ಪರಕೀಯರ ಧಾಳಿಗಳನ್ನು ಬದಿಗಿಟ್ಟು ನೋಡಿದರೂ ಅಷ್ಟೇ ಸಿಗುವುದು. ಬೌದ್ಧ, ಜೈನ, ಶೈವ, ವೈಷ್ಣವ, ಅದರೊಳಗೆ ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಹೀಗೆ ಪ್ರತಿಯೊಬ್ಬ ರಾಜ ಅಧಿಕಾರಕ್ಕೆ ಬಂದಾಗ ಅವನು ನಂಬುವ ಸಿದ್ದಾಂತ, ದೇವರನ್ನು ಮುಂದಕ್ಕೆ ತರುವುದು ಇತರೆಯರನ್ನು ಕೀಳಾಗಿ ಕಾಣುವುದು ಸಾಮಾನ್ಯವಾಗಿದೆ. ಮೊಘಲರ ಕಾಲದಲ್ಲಿಯಾದರೂ ಅಷ್ಟೇ, ಮತ್ತೊಬ್ಬರಾದರೂ ಅಷ್ಟೆ. ಯುಡ್ಯೂರಪ್ಪರವರು ಅವರ ಜಾತಿಗೆ, ಕುಮಾರಸ್ವಾಮಿ ತಮ್ಮ ಜಾತಿಗೆ, ಸಿದ್ದರಾಮಯ್ಯ ಅವರ ಜಾತಿಗೆ, ಹೀಗೆ ಇಷ್ಟೆಲ್ಲಾ ವಿದ್ಯಾವಂತ ಸಮಾಜವಿದ್ದೇ ಈ ತಾರತಮ್ಯವಿರುವಾಗ ಇನ್ನೂ ನೂರಾರು ವರ್ಷಗಳ ಕೆಳಗೆ ಆಗಿರುವುದು ತಪ್ಪಾ? ಎಂದೋ ಇತಿಹಾಸದಲ್ಲಿ ಸೇರಿರುವುದನ್ನು ಕೆದಕಿ ಇಂದಿನ ಮತ್ತು ಮುಂದಿನ ನೆಮ್ಮದಿಯನ್ನು ಹಾಳು ಮಾಡುವುದು ಏಕೆ? ಅದರಲ್ಲಿಯೂ ಧರ್ಮದ ಹೆಸರಲ್ಲಿ. ಯಾರಿಗೆ ಗೊತ್ತು ಮುಂದೊಂದು ದಿನ ಬೇರೆ ಧರ್ಮದವರು ಅಧಿಕಾರಕ್ಕೆ ಬರಬಹುದು! ಆಗ ಮತ್ತದೇ ಪುನಾರಾವರ್ತನೆ?

ಅದೇ ರೀತಿ, ಕಮ್ಯೂನಿಸಂ, ಕ್ಯಾಪಿಟಲಿಸಂ, ಇವೆಲ್ಲವೂ ಅಷ್ಟೇ. ಎಲ್ಲವೂ ರಸಹೀನವಾಗಿವೆ. ಅಲ್ಲಿ ಯಾವ ರಸವೂ ಇಲ್ಲ, ಸತ್ವವೂ ಇಲ್ಲ. ತಂತ್ರಜ್ಞಾನ ಜನರನ್ನು ಸೋಮಾರಿಗಳಾಗಿಸಿದ್ದು ಸತ್ಯ. ವಿಚಾರಧಾರೆಯನ್ನು ತಿಳಿಯಲು, ಇನ್ನೂರು ಮುನ್ನೂರು ಪುಟಗಳ ಪುಸ್ತಕಗಳನ್ನು ಓದಬೇಕಿತ್ತು.  ನಂತರ ಭಾಷಣ, ಭಜನೆಗಳನ್ನು ಕೇಳಿ ಜ್ಞಾನಪಡೆಯುತ್ತಿದ್ದರು. ಈಗ ಅದ್ಯಾವುದು ಇಲ್ಲ, ಕೇವಲ ಒಂದೇ ಒಂದು ಪೋಸ್ಟ್ ಅದು ಸರಿ ತಪ್ಪೆಂಬ ಗೋಜಿಗೆ ಹೋಗುವುದಿಲ್ಲ. ನನ್ನ ಅನೇಕ ಸ್ನೇಹಿತರು ಅದರಲ್ಲಿಯೂ ಫೇಸ್‍ಬುಕ್ ಯುನಿವರ್ಸಿಟಿಯವರು, ಬಳಸುವ ಪದಗಳ ಅರ್ಥ ಕೇಳಬೇಕು, ಬುದ್ದಿಜೀವಿಗಳು, ಜ್ಯಾತ್ಯಾತೀತರು, ಪ್ರಗತಿಪರರು – ಇವರೆಲ್ಲರೂ ಯಾರು?

ಯಾರೋ ಎಲ್ಲಿಯೂ ಗುಂಪಿನಲ್ಲಿ ಹೇಳಿದ್ದನ್ನು ಪ್ರಚಾರ ಮಾಡುತಿರುವುದು ಸೋಜುಗ. ಅವೆಲ್ಲರ ಸಂತತಿ ನಶಿಸಿ ದಶಕಗಳಾಗಿವೆ. ಈಗ ಏನಿದ್ದರೂ ಸ್ವಾಮಿ ಪೂಜೆ ಅಷ್ಟೆ. ಅದು, ಮೋದಿಯಾಗಿರಬಹುದು, ರಾಹುಲ್ ಗಾಂಧಿಯಾಗಿರಬಹುದು.

ಅದನ್ನು ಬಿಟ್ಟರೇ, ಸದ್ಯದಲ್ಲಿರುವುದು. ಕಾರ್ಪೋರೇಟ್ ದುನಿಯಾ. ಶೇಕಡ ಒಂದಕ್ಕಿಂತಲೂ ಕಡಿಮೆ ಜನಸಂಖ್ಯೆಯ ಉದ್ಯಮಿಗಳು ಎಲ್ಲದರಲ್ಲಿಯೂ ಬಂಡವಾಳ ಹಾಕಿ, ಜಗತ್ತನ್ನು ತಮ್ಮ ಕೈ ವಶ ಮಾಡಿಕೊಂಡಿದ್ದಾರೆ. ಯಾವ ಪಕ್ಷ ಬರಬೇಕು, ಏನು ಸುದ್ದಿಯಾಗಬೇಕು, ಯಾವುದು ಪ್ರಚಾರ ಪಡೆಯಬೇಕು ಇವೆಲ್ಲವೂ ಇರುವುದು ಅವರ ಕೈಯಲ್ಲಿ. ಒಂದು ಪಕ್ಷವನ್ನು ಅಧಿಕಾರಕ್ಕೆ ತರಲು ಮತ್ತು ಇಷ್ಟವಾಗದೇ ಇದ್ದರೇ ಬೀಳಿಸಲು ಅವರಿಗೆ ಮಾತ್ರವೇ ಸಾಧ್ಯ. ನಾವು ನಮ್ಮ ಮಾನಸಿಕ ನೆಮ್ಮದಿಗಾಗಿ, ಮಾಧ್ಯಮಗಳನ್ನು, ರಾಜಕಾರಣಿಗಳನ್ನು ಬೈದು ಸಮಧಾನ ಪಟ್ಟಿಕೊಳ್ಳಬೇಕಿದೆ.

20 ಜನವರಿ 2020

ಗಾಂಧಿಯನ್ನು ನಾನೇಕೇ ಓದುತ್ತೇನೆ? ನಾನೇಕೆ ಮೆಚ್ಚುತ್ತೇನೆ,


ಗಾಂಧಿಯನ್ನು ನಾನೇಕೇ ಓದುತ್ತೇನೆ? ನಾನೇಕೆ ಮೆಚ್ಚುತ್ತೇನೆ, ಎನ್ನುವುದರ ಕುರಿತು ಬಹಳ ಹಿಂದೆಯೇ ಬರೆಯುತ್ತೇನೆಂದು ನಿಮಗೆ ತಿಳಿಸಿದ್ದೆ. ಆದರೇ, ನನ್ನ ಸೋಮಾರಿತನ ಅದಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿದೆ. ಆದರೂ, ಹಟಕ್ಕೆ ಬಿದ್ದವನಂತೆ ನನ್ನ ಮನಸ್ಸಿನೊಳಗಿರುವ ದುಗುಡವನ್ನು ಹೊರಹಾಕಲು ಬಯಸಿದ್ದೇನೆ. ಗಾಂಧೀಜಿ ಬಗ್ಗೆ ಮಾತನಾಡುವಾಗ ದುಗುಡವೇಕೆ? ಇದು ನಿಮಗೆ ಕಾಡುವ ಪ್ರಶ್ನೆಯೇ ಸರಿ.
ಇತ್ತೀಚಿನ ಎಂದು ಹೇಳಿದರೂ, ಗಾಂಧಿ ಬದುಕಿದ್ದಾಗಿನಿಂದ, ಅವರು ಸತ್ತು ಎಪ್ಪತ್ತು ವರ್ಷವಾದರೂ ಅವರನ್ನು ದ್ವೇಷಿಸುವ, ಹಂಗಿಸುವ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಅವರ ಹೆಸರಲ್ಲಿ ಬೇಳೆ ಬೇಯಿಸಿಕೊಂಡವರೂ ಕಡಿಮೆಯಿಲ್ಲ. ಆದರೇ, ಈ ದೂಷಿಸುವ ಗುಂಪಿಗೆ, ಗಾಂಧಿಯ ಬಗ್ಗೆ ಏನೇನೂ ತಿಳಿಯದೇ ಇರುವುದು, ಅಂಧಕಾರದಲ್ಲಿ ದೂಷಿಸುವುದು ನನ್ನನ್ನು ಕಾಡುತ್ತಿರುವ ವಿಷಯ. ನಮ್ಮಲ್ಲಿ ಅಂಧಕಾರ ಎಷ್ಟರ ಮಟ್ಟಿಗೆ ಹೋಗುತ್ತದೆಯೆಂದರೇ, ಒಬ್ಬನನ್ನು ನಂಬಿದರೇ, ವಿಶ್ವಾಸವಿಟ್ಟರೇ ಅವನನ್ನು ದೇವಮಾನವವೇನು? ದೇವರನ್ನೇ ಮಾಡಿ ಸ್ವರ್ಗ ಕಟ್ಟಿಕೊಡುತ್ತೇವೆ. ದ್ವೇಷವೆಂದರೇ ಇಲ್ಲಸಲ್ಲದ್ದು ಸೃಷ್ಠಿಸಿ ಅವನನ್ನು ಕಳನಾಯಕನನ್ನಾಗಿಸುತ್ತೇವೆ. ಇವೆರಡರಲ್ಲೂ ನಾವು ನಿಸ್ಸೀಮರು. ಅದನ್ನು ಗಾಂಧಿಜಿಯ ವಿಷಯದಲ್ಲಿ ಚಾಚು ತಪ್ಪದೇ ಮಾಡುತ್ತ ಬಂದಿದೆ, ಒಂದು ಗುಂಪು.
ಇರಲಿ, ಈಗ ಮುಖ್ಯ ವಿಷಯಕ್ಕೆ ಬರೋಣ, ನಾನು ನಿಮ್ಮನ್ನು ನನ್ನೊಂದಿಗೆ ಗಾಂಧಿಯನ್ನು ನೋಡಲು ಕರೆದೊಯ್ಯುತ್ತಿದ್ದೇನೆ. ನೀವೊಬ್ಬ ಸಾಮಾನ್ಯ ಮನುಷ್ಯನಾಗಿ, ಗಾಂಧೀಜಿಯೂ ನಮ್ಮಂತೆಯೇ ನಡೆದಾಡುವ ವ್ಯಕ್ತಿಯಾಗಿ ನೋಡುತ್ತಾ ಸಾಗೋಣ. ಗಾಂಧಿಯನ್ನು ನೀವು ಏನಾಗಿ ನೋಡಿದ್ದೀರಿ, ಅದನ್ನೆಲ್ಲ ಬದಿಗಿಟ್ಟು, ನನ್ನೊಂದಿಗಿರಿ.
ಗಾಂಧೀಜಿಯನ್ನು ವಿವಿಧ ಹಂತದಲ್ಲಿ ವಿವಿಧ ರೀತಿಯಲ್ಲಿ ನೋಡಬಹುದು. ನಮ್ಮಂತೆ ನಿಮ್ಮಂತೆಯೇ ಎಂದರೂ ಸರಿ. ಆದರೇ, ಅವರು ಸಾಗಿದ ಹಾದಿಯಲ್ಲಿ, ಸ್ಥಿರತೆಯಿತ್ತು ಎನ್ನುವುದನ್ನು ಬಿಟ್ಟು. ಮೊದಲನೆಯದಾಗಿ, ಬಾಲ್ಯದಲ್ಲಿ, ನಾವೆಲ್ಲರೂ ಅದೆಷ್ಟು ಸುಳ್ಳು ಹೇಳಿರಬಹುದು, ಅದೆಷ್ಟು ಕದ್ದಿರಬಹುದು, ತಿನ್ನುವ ವಸ್ತುವಿನಿಂದ ಹಿಡಿದು ದುಡ್ಡಿನ ತನಕ (ಅದು ನಮ್ಮ ಮನೆಯಲ್ಲಿದ್ದಿದ್ದರೇ!?). ಸತ್ಯ ಹರಿಶ್ಚಂದ್ರ ನಾಟಕ, ಸಿನೆಮಾ ಅದೆಷ್ಟು ಬಾರಿ ನೋಡಿಲ್ಲ. ನನಗೆ ನೆನಪಿರುವಂತೆ, ಕೊಣನೂರಿನ ನಟರಾಜ ಥಿಯೆಟರಿನಲ್ಲಿ ಆ ಸಿನೆಮಾ ನೋಡಲು ಸುತ್ತ ಮುತ್ತಲಿನ ಸಾವಿರಾರು ಜನರು ಎತ್ತಿನ ಗಾಡಿಯಲ್ಲಿ ಬಂದದ್ದು ಸಿನೆಮಾ ನೋಡುವಾಗ ಅತ್ತಿದ್ದು ನೆನಪಿದೆ. ಅವರ್ಯಾರು, ನಾನು ಇನ್ನು ಮುಂದೆ ಸತ್ಯವಂತನಾಗಿಯೇ ಇರುತ್ತೇನೆಂದು ನಿರ್ಧರಿಸಿದರೆಂಬ ಮಾಹಿತಿಯಿಲ್ಲ.
ಎರಡನೆಯದಾಗಿ, ತಮ್ಮ ಯೌವ್ವನದಲ್ಲಿ. ಪ್ರತಿಯೊಬ್ಬರಿಗೂ (ಮನುಷ್ಯರಾಗಿದ್ದರೇ) ಯೌವ್ವದನದಲ್ಲಿ ಪ್ರಕೃತಿದತ್ತವಾದ ಸಹಜ ಆಸೆ, ಕಾಮಾನೆಗಳು ಬಂದೇ ಬರುತ್ತವೆ. ಸೊಗಲಾಡಿತನಕ್ಕೆ ವಾದ ಮಾಡಬಹುದು. ಅವರ ಮನಸ್ಸಿನೊಳಗೇನಿದೆ, ಎಂಬುದು ಆತನಿಗೆ ಮಾತ್ರ ತಿಳಿದಿರುತ್ತದೆ. ಅದನ್ನು ಅಷ್ಟು ಮುಕ್ತವಾಗಿ ಚರ್ಚಿಸಿ ಬರೆದುಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಅದನ್ನು, ಝರಿಯುವವರು ಜರಿಯಬಹುದು, ಅದು ಅವರ ವಿವೇಚನಾ ಮಟ್ಟಕ್ಕೆ ಸಲ್ಲಿದ್ದು.
ಮೂರನೆಯದಾಗಿ, ವೃತಿಪರತೆ ಬಂದಾಗ, ಅವರಿಗಿದ್ದ ಭಯ, ಆತಂಕವನ್ನು ಮುಕ್ತವಾಗಿ ಹೇಳುತ್ತಾ ಬರುವುದು. ನಾವು ಮೊದಲಲ್ಲಿ ಕೆಲಸಕ್ಕೆ ಸೇರಿದಾಗ ಆದ ನೋವುಗಳು, ಬೇಸರಗಳು, ಭಯ, ಆತಂಕ ಇದನ್ನು ಪ್ರತಿಯೊಬ್ಬನು (ಸಾಮಾನ್ಯ ಅಂಕ ತೆಗೆದು ಪಾಸಾಗುವವರು, ನನ್ನಂತವರು) ಅನುಭವಿಸಿರುತ್ತಾನೆ, ರ್ಯಾಂಕ್ ತೆಗೆದವನಿಗೆ ಆ ಸಮಸ್ಯೆ ಕಾಡಿರುವುದಿಲ್ಲವೆನಿಸುತ್ತದೆ.
ನಾಲ್ಕನೆಯದಾಗಿ, ವಿದೇಶದಲ್ಲಿ ನಡೆಸಿದ ಅನೇಕಾನೇಕ ಪ್ರಯೋಗಗಳು. ಗಾಂಧೀಜಿ ಯಾವತ್ತಿಗೂ ಬೇರೆಯವರ ಮೇಲೆ ಅಧ್ಯಯನ ಕೈಗೊಳ್ಳಲಿಲ್ಲ. ತನ್ನನ್ನೇ ತಾನು ಪ್ರಯೋಗಕ್ಕೆ ತಲ್ಲಿದರು. ವಿದೇಶಿ ನೆಲದಲ್ಲಿ ತಾನೊಬ್ಬ ಸಸ್ಯಹಾರಿಯಾಗಿಯೇ ಉಳಿದದ್ದು ಅದಕ್ಕೊಂದು ನಿದರ್ಶನ.
ಐದನೆಯದಾಗಿ, ಆಫ್ರಿಕಾದಲ್ಲಿ ನಡೆದ ಘಟನೆಗಳು. ಆ ಕೊರೆಯುವ ಚಳಿಯಲ್ಲಿ, ತನಗಾದ ಅವಮಾನವನ್ನು ಅಲ್ಲಿಯೇ ಮರೆತು ತಾನು ತನ್ನ ಕೆಲಸ ಮುಗಿಸಿ ಮರಳಬಹುದಿತ್ತು. ಇದು ತನಗಾದ ಅನ್ಯಾಯವಲ್ಲವೆಂದು ಹೋರಾಟಕ್ಕೆ ಶಾಂತಿ ಅಹಿಂಸೆಯ ಅಸ್ತ್ರಹಿಡಿದು ಸಾಧಿಸಿದ್ದು! ಯಾವನೋ ಹಾದಿಯಲ್ಲಿ ಹೋಗುತ್ತಿದ್ದವನು ಗಾಡಿಗೆ ಅಡ್ಡ ಬಂದರೇ ಜಗಳಕ್ಕಿಳಿಯುವ ನಾವು, ಈಡೀ ಜೀವನವೆಲ್ಲಾ ಶಾಂತಿ, ಅಹಿಂಸೆಗೆ ಒತ್ತು ಕೊಟ್ಟು ಬದುಕಿದ ಗಾಂಧೀಜಿಯ ಬಗ್ಗೆ ಮಾತನಾಡುವುದೇ? ಅರ್ಧ ಗಂಟೆ ಮನೆಯಲ್ಲಿ ತಿಂಡಿ ನೀಡಲು ತಡವಾದರೇ ಸಹಿಸದ ನಾವು, ತಿಂಗಳುಘಟ್ಟಲೇ ಉಪವಾಸ ಮಾಡಿದ ಮಹಾತ್ಮನನ್ನು ಜರಿಯುವುದೇ?
ಆರನೆಯದಾಗಿ, ಸ್ವಲ್ಪ ಚಳಿಯಾದರೇ ಮೂರು ಕಂಬಳಿ ಬೇಕು, ಸೆಕೆಯಾದರೇ ಫ್ಯಾನ್ ಎಸಿ ಬೇಕೆಂದು ಪರದಾಡುವ ನಾವುಗಳು ವರ್ಷಾನುಗಟ್ಟಲೇ ಪೂರ್ತಿಬಟ್ಟೆಯೇ ಇಲ್ಲದೇ, ಆ ಬಟ್ಟೆಯನ್ನು ಸಮಾಜಕ್ಕಾಜಿ ತ್ಯಜಿಸಿದ ವ್ಯಕ್ತಿತ್ವದ ಕುರಿತು ಭಾಷಣ ಬಿಗಿಯುವುದು ಮೆಚ್ಚಲೇಬೇಕಾದ ಸಂಗತಿ.
ಏಳನೆಯದಾಗಿ, ಗಾಂಧೀಜಿಯವರ ಕನಸಿನ ಪ್ರಪಂಚ/ಜಗತ್ತು ಹೇಗಿತ್ತು? ಅದನ್ನೊಮ್ಮೆ ತಾವುಗಳೇ ಓದಬೇಕೆಂದು ಮನವಿ. ಇಡೀ ವಿಶ್ವದಲ್ಲಿ ಯಾವುದೇ ದೇಶಕ್ಕೆ ಸೈನ್ಯೆ ಬೇಡ, ಅದಕ್ಕಾಕುವ ಹಣವನ್ನು ಬಡವರ ಏಳಿಗೆಗೆ ಹಾಕೋಣ. ಇಡೀ, ವಿಶ್ವವೇ ಒಂದು ಕುಟುಂಬ ಎನ್ನುವುದನ್ನ ಸಾಧಿಸಿ ತೋರಿಸೋಣವೆಂಬುದಿತ್ತು. ದ್ವೇಷವೇ ಜೀವನವೆಂದು ನಂಬಿರುವ ಹಲವರಿಗೆ ಯುದ್ಧದ ಮದವಿರಬೇಕಲ್ಲವೇ? ಪ್ರತಿಯೊಂದು ಹಳ್ಳಿ ಹೇಗಿರಬೇಕೆಂಬ ಕಲ್ಪನೆಯೇ ಅದ್ಬುತಾ. ಅವರ ಪ್ರಕಾರದಲ್ಲಿ, ಸಮುದ್ರದಲ್ಲಿ ಬೀಳುವ ಮಳೆ ಹನಿಯಂತಿರಬೇಕು, ಎಲ್ಲಾ ಹನಿಗಳು ಬಿದ್ದರೂ ಒಂದಕ್ಕೊಂದು ತೊಂದರೆ ಕೊಡದಂತೆ, ಅದರ ಶಕ್ತಿಯನ್ನು ಉಳಿಸಿಕೊಳ್ಳಬೇಕು.
ಎಂಟನೆಯದಾಗಿ, ಗಾಂಧೀಜಿ ಮುಟ್ಟದ ವಸ್ತುವಿಲ್ಲ. ಅವರನ ನಡುವಳಿಕಗೆ ಅವರು ವಾರ್ಧಾದಲ್ಲಿ ಕಳೆದ ದಿನಗಳು. ಸ್ವಾತಂತ್ರ್ಯ ಸಂಗ್ರಾಮದ ನಡುವೆ ಅವರು ನಡೆಸಿದ ಶಿಕ್ಷಣದ ಕುರಿತು ಅಂತರಾಷ್ಟ್ರೀಯ ಸಮ್ಮೇಳನ ಉದಾಹರಣೆ. ಸ್ವರಾಜ್ ಎಂದರೇನು? ಗ್ರಾಮ್ ಸ್ವರಾಜ್ ಬರೆದ ವರ್ಷಕ್ಕೂ ಕೊನೆಯ ತನಕವೂ ಬದಲಾಗುತ್ತಾ, ಮಾರ್ಪಾಡಾಗುತ್ತಾ ಬರುತ್ತದೆ. ಕೇವಲ ನಲ್ವತ್ತೈವತ್ತು ಪುಟಗಳಲ್ಲಿ ಎಲ್ಲವನ್ನೂ ಹೇಳುವ ತಾಕತ್ತಿದೆ.
ಒಂಬತ್ತನೆಯದಾಗಿ, ದೇಶ ವಿಭಜನೆ ಕುರಿತು. ತನ್ನೆದುರು ನೋವು, ಅಹಿಂಸೆಯಾಗಬಾರದೆಂಬ ಒಂದೇ ಕಾರಣಕ್ಕೆ ಜೊತೆಗೆ ನಾನು ಹೇಳುವುದಾದರೇ, ಯಾರೂ ಅಶಕ್ತನಿರುತ್ತಾನೋ ಅವನನ್ನು ನಾವು ಉಳಿಸಲು ಪ್ರಯತ್ನಿಸುತ್ತೇವೆ. ಬಲಿಷ್ಠನಾದವನು ಅವನನ್ನು ಕೊಲ್ಲಬಹುದು, ನೋಯಿಸಬಹುದೆಂಬ ಆತಂಕದಿಂದ. ಅದನ್ನೇ ಗಾಂಧೀಜೀ ಮಾಡಿದರೆಂಬುದು ನನ್ನ ವಾದ.
ಹತ್ತನೆಯದಾಗಿ, ನೆಹರು ಪರ ನಿಂತದ್ದು, ಇದಕ್ಕೆ ಕಾರಂತಜ್ಜ ಬರೆದಿರುವ ಮೂಜನ್ಮ ಓದಿ. ಅವರು ಒಬ್ಬ ಮನುಷ್ಯರಾಗಿರುವುದರಿಂದ, ಒಂದು ರೀತಿಯ ಪ್ರೇಮ, ಮೋಹ ನೆಹರು ಕಡೆಗೆ ಎಳೆದಿರುವುದು ಸುಳ್ಳಲ್ಲ, ಅಥವಾ ನೆಹರು ಅವರನ್ನು ಸೆಳೆದಿರುವುದು ಸುಳ್ಳುಲ್ಲ ಎಂಬುದು ನನ್ನ ನಂಬಿಕೆ.

ಇನ್ನೂ ಬರೆಯುವುದಿದೆ, ಸದ್ಯಕ್ಕಿಷ್ಟು ಸಾಕಲ್ಲವೇ!
ಕೊನೆಯ ಹನಿ: ದಯವಿಟ್ಟು ಓದಿ, ಯಾವುದೋ ಭಾಷಣ ಕೇಳಿ, ಸುಳ್ಳು ಸುದ್ಧಿ ಹಬ್ಬಿಸಬೇಡಿ.

12 ಜನವರಿ 2020

ಪಕ್ಕೆಲುಬು: ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ!!!


ಈ ಕುರಿತು ಪ್ರತಿಕ್ರಿಯೆ ನೀಡಬೇಕೆ ಬೇಡವೇ ಎಂದು ಬಹಳ ದಿನಗಳಿಂದ ಯೋಚಿಸಿದ ನಂತರ ನನ್ನ ಅಭಿಪ್ರಾಯವನ್ನು ತಿಳಿಸುತ್ತಿದ್ದೇನೆ. ಇದನ್ನು ಬೇರೆ ಬೇರೆ ಆಯಾಮಗಳಿಂದ ನೋಡಲು ಇಚ್ಛಿಸುತ್ತೇನೆ. ಮೊದಲನೆಯದಾಗಿ, ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದಿದ್ದ, ಅವನ ಅರಿವಿನ ಮಟ್ಟವನ್ನು ವಿಡಿಯೋ ಮೂಲಕ ತಿಳಿಸಿರುವುದು, ಚಿತ್ರಿಸಿ ಪ್ರಸಾರ ಮಾಡಿರುವುದು. ಎರಡನೆಯದಾಗಿ, ಅದೇ ವಿಷಯಕ್ಕೆ ಶಿಕ್ಷಣ ಇಲಾಖೆಯ ಮಂತ್ರಿಗಳು ಸೇರಿದಂತೆ ಅಪರಾಧವಾಗಿ ಪರಿಗಣಿಸಿ ಅಮಾನತ್ತಿನ ಶಿಕ್ಷೆಯನ್ನು ನೀಡಿರುವುದು. ಮೂರನೆಯದು ನೈತಿಕತೆ, ನ್ಯಾಯ ನೀತಿಯ ಕುರಿತು.

ಮೊದ¯ನೆಯದಾಗಿ, ಶಾಲಾ ಸಮಯದಲ್ಲಿ ಮೊಬೈಲ್ ಬಳಸಿರುವುದು ಅಪರಾಧವೆಂಬಂತಹ ಸುದ್ದಿ ಹರಿದಾಡುತ್ತಿರುವುದು. ಸನ್ಮಾನ್ಯ ಮಂತ್ರಿಗಳಲ್ಲಿ ನನ್ನ ಮನವಿ, ತಾವು ಯಾವ ಶತಮಾನದಲ್ಲಿದ್ದೀರಿ? ಮೊಬೈಲ್ ಐದು ನಿಮಿಷ ಕೂಡ ಬಿಟ್ಟಿರದ ಪರಿಸ್ಥಿತಿಯಲ್ಲಿ ನಾವಿರುವುದು ಸತ್ಯ ಮತ್ತು ವಾಸ್ತವ. ನಿಮಗೆ ಒಂದು ಸವಾಲು. ತಾವುಗಳು ಒಂದು ದಿನ ತಮ್ಮ ಮೊಬೈಲ್ ಆಫ್ ಮಾಡಿ ಇರಲು ಸಾಧ್ಯವೇ? ಅದು ಅಸಾಧ್ಯದ ಮಾತು. ಇದರಲ್ಲಿಯೇ, ಮತ್ತೊಂದು ಅಂಶವಿದೆ, ಶಾಲಾಭಿವೃದ್ಧಿ ಬಗ್ಗೆ, ಉತ್ತಮ ಸಂದೇಶಗಳು, ವಿಡೀಯೋಗಳು ಬಂದಾಗ ನೀವು ನಾವೆಲ್ಲರೂ ಆನಂದಿಸಿರುವುದು ಸತ್ಯ. ಒಳ್ಳೆಯ ಅಂಶಗಳು ಬಂದಾಗ ಶಾಲಾ ಆವರಣದಲ್ಲಿ ಮೊಬೈಲ್ ಬಳಸುವುದು ತಪ್ಪೆನಿಸದ ನಾವು, ತಪ್ಪನ್ನು ತೋರಿಸಿದಾಗ ಶಿಕ್ಷೆ ಕೊಡುವುದೇ?
ತಮ್ಮ ಭೇಟಿಯ ಸಮಯದಲ್ಲಿ, ಅದೆಷ್ಟು ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿಲ್ಲ ಸಚಿವರೇ? ಅದು ಕರ್ತವ್ಯ ಲೋಪವೆನಿಸಲಿಲ್ಲವೇ? ನಿಮ್ಮ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ಬಂದಾಗಲೂ ಅವರ ಫೋಟೋ, ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಬರುವುದಿಲ್ಲವೇ? ಅದು ಕರ್ತವ್ಯದ ಸಮಯದಲ್ಲಿ ತೆಗೆದಿದ್ದು ಎನಿಸುವುದಿಲ್ಲವೇ?

ತಾವುಗಳು ಮಗುವಿನ ಕುರಿತು, ಬಹಳ ಕಾಳಜಿ ತೋರಿಸಿರುವುದು ಹೆಮ್ಮೆಯ ವಿಷಯ. ನಾನು, ಒಬ್ಬ ಪೋಷಕನಾಗಿ ನನ್ನ ಮಗುವಿನ ಕಲಿಕೆಗೆ ಬೇಕಿರುವ ಶಿಕ್ಷೆಯನ್ನು, ಅವಮಾನವೆಂದು ತಿಳಿಯುವುದಿಲ್ಲ. ನಾವು ವಿದ್ಯಾರ್ಥಿಗಳಾಗಿದ್ದಾಗ ಹೊಡೆತ, ಬಡಿತ, ಬೈಗುಳಗಳು ಅವಮಾನವೆನಿಸುತ್ತಿರಲಿಲ್ಲ. ಈಗೇಕೇ ಸಚಿವರೇ ಅದು ಅವಮಾನವಾಗುತ್ತಿದೆ? ನಾವು, ಕಿವಿ ಹಿಡಿದು ಬೈಸಿಗೆ ಹೊಡೆಯುತ್ತಿದ್ದೆವು, ಮಂಡಿಯೂರಿ ಕಿವಿ ಹಿಡಿಯುತ್ತಿದ್ದೇವು, ಅದ್ಯಾವುದು ನಮಗೆ ಅವಮಾನವೆನಿಸಲಿಲ್ಲ, ಓದಿದೆವು, ಕಲಿತೆವು ಬೆಳೆದೆವು. ತಮ್ಮಂತಹ ರಾಜಕಾರಣಿಗಳು ಇಂತಹ ಕ್ಷುಲಕ ಕಾರಣದಲ್ಲಿಯೂ ರಾಜಕೀಯ ಮಾಡುವುದನ್ನು ಬಿಡಬೇಕು. ಅಲ್ಲಿಯೂ ಮೈಲೇಜ್ ತೆಗೆದುಕೊಳ್ಳುವುದನ್ನು ಬಿಡಬೇಕು.

ಇಷ್ಟೆಲ್ಲಾ ಮಾತನಾಡುವ ತಾವು, ಒಂದು ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಹೋಗುವ ಶಿಕ್ಷಕರಿಗೆ ಒಒಡಿ ತಡೆಹಿಡಿದಿದ್ದು ತಮ್ಮ ಮನಸ್ಥಿತಿಯನ್ನು ತೋರಿಸುತ್ತಿದೆ. ಬಿಟ್ಟಿ ಪ್ರಚಾರಕ್ಕಾಗಿ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಮಾಡವುದನ್ನು ನಿಲ್ಲಿಸಿ.
ಮೂರನೆಯದಾಗಿ, ಸಮಾಜವೇ ಮೊಬೈಲ್ ದಾಸ್ಯದಲ್ಲಿ ಮುಳುಗಿದೆ. ಒಂದು ಅಪಘಾತ ನಡೆಯುತ್ತಿದ್ದರೂ, ಅತ್ಯಚಾರ ನಡೆಯುತ್ತಿದ್ದರೂ, ಕೊಲೆಯಾಗುತ್ತಿದ್ದರೂ ವಿಡಿಯೋ ಮಾಡುವ ಭರದಲ್ಲಿ ನಮ್ಮ ಸಮಾಜವಿದೆ. ಇದು ಅನೈತಿಕತೆಯ ಪರಮಾವಾಧಿಯಲ್ಲಿ ಮುಳುಗುತ್ತಿರುವುದಕ್ಕೆ ಸಾಕ್ಷ್ಯ.

ಮಿಕ್ಕಿದ್ದು ಓದುಗರ ವಿಮರ್ಶೆಗೆ ಬಿಟ್ಟಿದ್ದು.

18 ನವೆಂಬರ್ 2019

ಫೋರ್ಡಿ ನಾಲ್ಕನೇ ಆಯಾಮದ ಸುತ್ತಾ!!!


ಕೆಲವೊಂದು ಹವ್ಯಾಸಗಳು ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುವುದು ನೂರಕ್ಕೆ ನೂರು ಸತ್ಯ. ನಾನು ನಂಬಿರುವ ಹವ್ಯಾಸಗಳಲ್ಲಿ ಓದಿಗೆ ಮತ್ತು ಬರವಣಿಗೆಗೆ ಆ ಶಕ್ತಿಯಿದೆ. ಈ ಹವ್ಯಾಸಗಳ ಕುರಿತು ಎರಡು ಸಾಲು ಹೆಚ್ಚಿಗೆ ಹೇಳುತ್ತೇನೆ. ಒಳ್ಳೆಯದು ಕೆಟ್ಟದ್ದು ಎಂಬುದನ್ನು ಮಾನವ ನಿರ್ಮಿತವಷ್ಟೆ. ಅದನ್ನು ಕೆಲವರು ಹಣಕಾಸಿನ ಲಾಭಕ್ಕೆ ನೋಡಿ ಉತ್ತಮ ಹವ್ಯಾಸವೆಂದರೇ ಕೆಲವರು ಆರೋಗ್ಯದ ದೃಷ್ಠಿಯಿಂದ ಕೆಟ್ಟದ್ದು ಎನ್ನುತ್ತಾರೆ. ಉದಾಹರಣೆಗೆ: ಸಿನೇಮಾ ನೋಡುವುದು, ನಾಟಕ ನೋಡುವುದು, ಓದುವುದು, ಬರೆಯುವುದು, ಸುತ್ತಾಟ, ಇತ್ಯಾದಿಗಳ ಜೊತೆಗೆ ಕುಡಿಯುವುದು, ಸೇದುವುದು, ಜೂಜಾಡುವುದು ಹೀಗೆ ಸಾಲು ಬೆಳೆಯುತ್ತಾ ಹೋಗುತ್ತದೆ. ಕೆಲವರು ಕಥೆ ಕಾದಂಬರಿಗಳನ್ನು ಓದುವುದನ್ನು ಸಮಯ ವ್ಯರ್ಥವೆನ್ನುತ್ತಾರೆ, ಅವರಿಗೆ ಓದುವುದರಿಂದ ಕಣ್ಣಿಗೆ ಕಾಣುವಂತಹ ಭೌತಿಕ ಲಾಭ ಬರಬೇಕು. ಅಂದರೆ, ಪರೀಕ್ಷಾ ದೃಷ್ಟಿಯಿಂದ, ಪ್ರಮೋಶನ್ ಸಿಗಬೇಕು, ಆಗ ಆ ಓದಿಗೆ ಒಂದು ಅರ್ಥವೆಂದು ನಂಬುತ್ತಾರೆ.

ಸಿನೇಮಾ ಹುಚ್ಚು, ನಾಟಕದ ಅಭಿಮಾನವೆಲ್ಲಾ ಸಮಯ ವ್ಯರ್ಥವೆನ್ನುತ್ತಾರೆ. ಆದರೇ, ಅದೇ ರಂಗದಲ್ಲಿರುವವರು ನೋಡಲೇಬೇಕು ಅದರಿಂದ ಅವರಿಗೆ ಲಾಭವೆನ್ನುತ್ತಾರೆ. ಹಾಗೆಯೇ ಟಿವಿ ನೋಡುವುದು ಅಷ್ಠೇ, ಅಲ್ಲಿಯೂ ರಸಪ್ರಶ್ನೆಯಂತಹ ಜ್ಞಾನಾರ್ಜನೆಯಾಗಬೇಕಿರುವ ಕಾರ್ಯಕ್ರಮಗಳು ಮಾತ್ರವೇ ಇರಬೇಕು. ಅಷ್ಟೆಲ್ಲಾ ಏಕೆ? ಪ್ರೀತಿಯಲ್ಲಿ ಕೂಡ, ಪ್ರೇಮದಲ್ಲಿ ಕೂಡ ಲಾಭಾಂಶ ಹುಡುಕುತ್ತಾರೆ. ಈ ಪ್ರೀತಿ ಎಲ್ಲಾ ಸಮಯ ಹಾಳು, ಅದನ್ನು ಬಿಟ್ಟು ಉಪಯೋಗಕ್ಕೆ ಬರುವಂತಹ ಕೆಲಸವನ್ನಾದರೂ ಮಾಡಿ ಎಂದು ಉಪನ್ಯಾಸವನ್ನು ಕೊಡುತ್ತಾರೆ.

ನಾನು ಇವೆಲ್ಲವನ್ನು ಸಂವೇದನಾ, ಭಾವನಾತ್ಮಕವಾಗಿ ಹೇಳುವುದಕ್ಕೆ ಬಯಸುತ್ತೇನೆ. ಮನುಷ್ಯ ತನ್ನ ಜೀವನವನ್ನು ಎರಡು ವಿಧವಾಗಿ ನೋಡಬಹುದು, ಮೊದಲನೆಯದಾಗಿ ತನ್ನ ಭೌತಿಕವಾಗಿ ಅಂದರೇ ಕೈಗೆಟುಕುವ ಲಾಭಾಂಶದ ಆಧಾರದಲ್ಲಿ. ಒಂದು ಕ್ರಿಯೆಯಿಂದ ಲಾಭ ಬರಬೇಕು ಅಥವಾ ನಷ್ಟವಾಗಬಾರದು ಎಂದು. ಮತ್ತೊಂದು ಭಾವನಾತ್ಮಕವಾಗಿ ತನ್ನೊಳಗಿನ ಆನಂದಕ್ಕಾಗಿ. ಈ ಆನಂದ, ಆತ್ಮ, ಸಂತೋಷ ಇವೆಲ್ಲವೂ ತನ್ನೊಳಗಿನ ವಿಚಾರ. ಇದು ಒಬ್ಬರಿಂದ ಒಬ್ಬರಿಗೆ ಬದಲಾಗುತ್ತದೆ. ಒಂದೇ ನದಿ ದಂಡೆಯಲ್ಲಿ ಸಾವಿರಾರು ಜನರಿದ್ದರೂ ಒಬ್ಬೊಬ್ಬರಿಗೂ ಒಂದೊಂದು ಬಗೆಯಾಗಿ ಆ ಪರಿಸರ ಕಾಣುತ್ತದೆ ಮತ್ತು ತಾನು ಕಾಣುತ್ತಿರುವುದೇ ಅಂತಿಮವೆಂದು ಮನಸ್ಸು ಹೇಳುತ್ತದೆ ಅದನ್ನು ವ್ಯಕ್ತಿ ಸಾಬೀತುಪಡಿಸಲು ತೊಡಗುತ್ತಾನೆ.

ಮರಳಿ ವಿಷಯಕ್ಕೆ ಬರುತ್ತೇನೆ. ನನಗೆ ಅತಿ ಅಚ್ಚು ಮೆಚ್ಚಿನ ಹವ್ಯಾಸವೆಂದರೇ ಓದುವುದು. ಈ ಹಿಂದೆಯೇ ಹೇಳಿದ್ದೇನೆ, ಅದೆಷ್ಟು ಓದುತ್ತಾ ಸಮಯ ಕಳೆದಿದ್ದೇನೆಂದರೇ, ಈ ಕಥೆ ಕಾದಂಬರಿ ಓದುವುದನ್ನು ಬಿಟ್ಟು ಯುಜಿಸಿ ಎನ್‍ಇಟಿ ಆದರೂ ಮಾಡೋದಲ್ವ ಅಂತಾ ನಮ್ಮಪ್ಪ ಬೈದಿರುವುದು ಇದೆ. ಆದರೇ, ಇತ್ತೀಚೆಗೆ ಅದರಲ್ಲಿಯೂ ಕಳೆದ ಒಂದೆರಡು ವರ್ಷದಲ್ಲಿ ನನ್ನ ದಿನಚರಿಯಲ್ಲಿ ಅನೇಕ ಬದಲಾವಣೆಗಳಾದವು. ನೆಪ ಮಾತ್ರಕ್ಕೆ ಹೇಳುವುದಾದರೇ ಕೆಲಸದ ಒತ್ತಡ, ಆರ್ಥಿಕ ಸಂಕಷ್ಟಗಳು, ಹೊಣೆಗಾರಿಕೆ, ಸಂಸಾರ ಮಣ್ಣು ಮಸಿ. ಆದರೇ, ಅವೆಲ್ಲವೂ ನೆಪಗಳು ಮಾತ್ರ. ನಿಜವೇನೆಂದರೇ, ನಾನು ಬಹಳ ಸೋಮಾರಿಯಾದೆ. ನಾನು ಯಾವಾಗ ಶ್ರಮಜೀವಿಯಾಗಿದ್ದೇ? ಈ ಪ್ರಶ್ನೆಯೂ ನಿಜವೇ. ನಾನು ಈ ಹಿಂದಿನಿಂದಲೂ ಬಹಳ ಸೋಮಾರಿತನದ, ಬೇಜವಾಬ್ದಾರಿಯ ವ್ಯಕ್ತಿ, ಅದರಲ್ಲಿ ಎರಡು ಮಾತಿಲ್ಲ. ಅದನ್ನು ಸಮಜಾಯಿಸುವಷ್ಟು ಶ್ರಮವನ್ನು ವಹಿಸಿದ್ದೇನೆ. ಆನೆ ನಡೆದದ್ದೇ ಹಾದಿ, ನಾನು ಬಯಸಿದ್ದೇ ಬದುಕು ಎಂದು ಬದುಕ ಹೊರಟವನು ನಾನು. ಅದರಿಂದ ಅನೇಕರು ನನ್ನನ್ನು ಗೇಲಿ ಮಾಡಿದ್ದು ಇದ್ದೆ, ಕೆಲವರು ನೇರವಾಗಿ, ಅನೇಕರು ಪರೋಕ್ಷವಾಗಿ. ಅದು ಅವರಿಗಿರುವ ವ್ಯಕ್ತಿ ಸ್ವಾತಂತ್ರ್ಯ, ಅದಕ್ಕೆ ನಾನೇಕೆ ಅಡ್ಡಬರಲಿ.

ನಾನು ಕೆಲಸ ಬಿಟ್ಟು ಸೀಕೋ ಕಟ್ಟಲು ಬಂದಾಗ ನಕ್ಕವರು ಅನೇಕರು. ಸಹಕರಿಸಿದವರು ಕೆಲವರು. ಮತ್ತೆ ಕೆಲಸ ಅಂತಾ ದೇಶ ಸುತ್ತಾಡುವಾಗ ಪೈಪೋಟಿಗೆ ಬಿದ್ದವರಂತೆ ಅಸೂಯೆಪಟ್ಟವರ ಸಂಖ್ಯೆ ಏನು ಕಡಿಮೆಯಿಲ್ಲ. ಈಗಲೂ ನನ್ನ ವಿರುದ್ಧ ಕತ್ತಿ ಮಸೆಯುತ್ತಿರುವವರು, ಅಸೂಯೆಪಡುವವರ ಸಂಖ್ಯೆ ಅತಿಯಾಗಿಯೇ ಇದೆ. ನಾನು ಏನು ಇಲ್ಲದ, ಏನನ್ನು ಸಾಧಿಸದ, ಕೇವಲ ನನ್ನ ಸಂತೋಷಕ್ಕಾಗಿ ಕೆಲವೊಂದು ಕೆಲಸ ಮಾಡುತ್ತಾ ಇರುವಾಗಲೇ ಇಷ್ಟೊಂದು ವೈರತ್ವ ಸಾಧಿಸುವವರು ಇನ್ನೂ ಏನಾದರೂ ಸಾಧಿಸಿದರೇ? ಪಾಪ ಅವರುಗಳು ಆತ್ಮ ಹತ್ಯೆ ಮಾಡಿಕೊಳ್ಳುವುದು ಖಚಿತ. ವಿಷಯಾಂತರವಾಗಿದೆ, ಇರಲಿ ಹೇಳಬೇಕೆಂದಿರುವುದೆಲ್ಲಾ ಬರಲಿ, ಬರೆಯುವ ಮನಸ್ಸಿರುವಾಗ, ಹೇಳುವ ಸನ್ನಿವೇಶದಲ್ಲಿ ಹೇಳಬೇಕು. ಕಾಲ ಕಳೆದಂತೆ ವಿಷಯಗಳು ಸಾಯುತ್ತವೆ.

ಮರಳಿ ವಿಷಯಕ್ಕೆ ಬರುತ್ತೇನೆ. ಕಳೆದ ಒಂದೆರಡು ತಿಂಗಳಿಂದ ನಾನು ಸ್ವಲ್ಪ ಬೇಸರವಾಗಿದ್ದೆ. ಕಾರಣವನ್ನು ಮತ್ತೊಮ್ಮೆ ತಿಳಿಸುತ್ತೇನೆ. ನನ್ನ ಸುತ್ತ ಮುತ್ತಲಿನ ವಿಚಾರಗಳು ನನ್ನನ್ನು ಹೆಚ್ಚಿನ ಮಟ್ಟಕ್ಕೆ ನೋವುಂಟು ಮಾಡಿದ್ದು ಸತ್ಯ. ಇದರ ಕುರಿತು ಮುಂದಿನ ಲೇಖನದಲ್ಲಿ ಹಂಚಿಕೊಳ್ಳುತ್ತೇನೆ. ಅದೇ ಸಮಯದಲ್ಲಿ ನನಗೆ ಸಿಕ್ಕಿದ್ದು, ಶ್ರೀ ಗುರುಪಾದ ಬೇಲೂರುರವರ ಮೂರು ಪುಸ್ತಕಗಳು. ಎರಡು ಪುಸ್ತಕಗಳ ಕುರಿತು ಈಗಾಗಲೇ ಹಂಚಿಕೊಂಡಿದ್ದೇನೆ. ಆದರೇ, ಮಾನಸಿಕವಾಗಿ ವಿಚಲಿತನಾಗಿದ್ದ ನನಗೆ ಅದರಿಂದ ಹೊರಕ್ಕೆ ಬರುವುದಕ್ಕೆ, ಈ ಫೋರ್ಡಿ ಎಂಬ ಪುಸ್ತಕ ಸಹಾಯ ಮಾಡಿತು ಎನ್ನುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ನಾವು ಬೇಸರದಲ್ಲಿದ್ದಾಗ ನಾವು ಮೆಚ್ಚುವ ತಾಣಗಳೇ ಬೇಸರವೆನಿಸುತ್ತವೆ, ನಮ್ಮ ನೆಚ್ಚಿನ ಅಭ್ಯಾಸಗಳೇ ಛೇ ಎನಿಸುತ್ತವೆ. ನಮ್ಮ ಮೆಚ್ಚಿನ ಸಂಗೀತ ಕೂಡ ಸಾಕು ಎನಿಸುತ್ತದೆ. ಕುಳಿತಲ್ಲಿ ಕೂರಲಾಗದೇ, ಮಲಗಿದರೆ ನಿದ್ದೆ ಬಾರದೇ ಯಾಕೀ ಬದುಕು ಎನಿಸುವ ಹಂತಕ್ಕೂ ಹೋಗುತ್ತದೆ.

ಸಿಕ್ಕ ಸಿಕ್ಕವರ ಮೇಲೆ ರೇಗುವುದು, ಅಥವಾ ಬೇರೆ ಯಾವುದೋ ಅಂಶಗಳಿಗೆ ದಾಸ್ಯನಾಗುವುದು ಸರ್ವೇ ಸಾಮಾನ್ಯ. ಫೋರ್ಡಿ ಏಕೆ ನನಗೆ ಹಿಡಿಸಿತು ಅಥವಾ ಅಷ್ಟೊಂದು ಮೆಚ್ಚುಗೆಯಾಗುವ ಅಂಶಗಳೇನಿತ್ತು? ಈಗಾಗಲೇ ಹೇಳಿರುವ ಹಾಗೆ, ಪ್ರತಿಯೊಂದು ಪುಸ್ತಕಗಳಿಗೂ ತನ್ನದೇ ಆದ ಶಕ್ತಿ ಇರುತ್ತದೆ. ಅದಕ್ಕೆ ಮುಖ್ಯ ಕಾರಣ, ಪ್ರತಿಯೊಬ್ಬ ಲೇಖಕನು ತನ್ನೊಳಗೆ ಹರಿದಾಡುವ ಆಲೋಚನೆಗಳನ್ನು ಪದಜೋಡನೆಯಿಂದ ಓದುಗನ ಮಡಿಲಿಗೆ ಹಾಕಿರುತ್ತಾನೆ. ಎಲ್ಲವೂ ನಮಗೆ ಮುದ ನೀಡುವುದಿಲ್ಲ, ಕೆಲವೊಂದು ಬೇಸರವನ್ನು ತರಿಸಬಹುದು, ಇನ್ನು ಹಲವು ಬಾರಿ ಇದೆಂತಹ ಬರವಣಿಗೆ ಅಥವಾ ಇದೆಂತಹ ಯೋಚನೆ ಅನಿಸಲೂಬಹುದು.

ಫೋರ್ಡಿಯನ್ನು ಓದಲು ಶುರು ಮಾಡಿದಾಗ ಇದೊಂದು ದೆವ್ವ ಭೂತದ ಕಥೆಯಿರಬೇಕು ಎನಿಸುತ್ತದೆ. ಆ ಹಿನ್ನಲೆಯಲ್ಲಿ ಕೆಲವೊಂದು ಪುಟಗಳನ್ನು ಮತ್ತೊಮ್ಮೆ ಓದಿದೆ. ಲೇಖಕರು ವಿಜ್ಞಾನವನ್ನು ವಿವರಿಸಲು ಬಳಸಿರುವ ತಂತ್ರಗಾರಿಗೆ ಈ ಕಾದಂಬರಿಯಲ್ಲಿ ಗೆದ್ದಿದೆ. ಸತ್ಯಕಾಮರವರ ಅನೇಕ ಕಥೆಗಳು ನೆನಪಿಗೆ ಬಂದು ಹೋದವು. ಅಂದಹಾಗೆ ಸತ್ಯಕಾಮರನ್ನು ಇತ್ತೀಚೆಗೆ ಓದಿರುವವರು ಬಹಳ ಕಡಿಮೆಯಾಗಿದ್ದಾರೆ. ದಯವಿಟ್ಟು ಒಂದೆರಡು ಪುಸ್ತಕಗಳನ್ನು ಓದಿ ನೀವು ಅವರ ಅಭಿಮಾನಿಯಾಗದೇ ಇದ್ದರೆ ಹೇಳಿ. ಒಂದೊಂದು ಆಯಾಮವನ್ನು ವಿವರಿಸುತ್ತಾ ಹೋಗುವ ಜೊತೆ ಜೊತೆಗೆ ಪ್ರಪಂಚದಲ್ಲಿ ಆಗುತ್ತಿರುವ ಆವಿಷ್ಕಾರಗಳು, ಬದಲಾಗುತ್ತಿರುವ ವಿದ್ಯಮಾನಗಳನ್ನು ಬಹಳ ಅಚ್ಚುಕಟ್ಟಾಗಿ ಮುಂದಿಟ್ಟಿದ್ದಾರೆ.

ವಿಶೇಷವಾಗಿ ಗಮನಿಸಿದ್ದು, ಲೇಖಕರ ಬರವಣಿಗೆಯ ಶೈಲಿ ಮತ್ತು ವಿವರಣೆಗಳು. ಮೊದಲ ಪುಸ್ತಕದಲ್ಲಿ ಅವರು ಸ್ವಲ್ಪ ಮಡಿವಂತಿಕೆಯಿಂದ ಹೊರಬಂದಿರಲಿಲ್ಲ. ಆದರೇ, ಇಲ್ಲಿ ಪ್ರೇಮಿಗಳ ನಡುವೆ ನಡೆಯುವ ಸಂಭಾಷಣೆ ಸನ್ನಿವೇಶಗಳನ್ನು ಹದಿಹರಯಕ್ಕೆ (ವಯಸ್ಸಿನ ಮಿತಿಯಾಕೆ?) ಕರೆದೊಯ್ದು ಅಲ್ಲಿ ಓದುಗನೇ ಪ್ರೇಮಿಯಾಗಿ ಜೋಗದ ಸುತ್ತಣ ಪರಿಸರವನ್ನು ಅನುಭವಿಸಲು ಬಿಡುತ್ತಾರೆ. ಪ್ರೇಯಸಿಯನ್ನು ಕಳೆದುಕೊಂಡವ£ (ವಿರಹಿಯ) ಭಾವನೆಯನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸಿರುವುದು ಲೇಖಕರ ಸೂಕ್ಷ್ಮಸಂವೇದನೆಯನ್ನು ಎತ್ತಿ ತೋರಿಸುತ್ತದೆ. ಒಟ್ಟಾರೆಯಾಗಿ ಬೇರೆ ಬೇರೆ ಆಯಾಮಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಜೀವಿಗಳು ಇರಬಹುದು, ಅವುಗಳು ನಮಗಿಂತಲೂ ಮುಂದುವರೆದಿರಬಹುದು ಎಂಬ ಕಲ್ಪನೆಯೇ ಅದ್ಬುತ. ಏಕೆಂದರೇ, ಮನುಷ್ಯ ತಾನೇ ಬುದ್ದಿವಂತ ತನಗಿಂತ ಬೇರಾರು ಇಲ್ಲವೇ ಇಲ್ಲ ಎನ್ನುವ ಅಹಂಮಿನೊಳಗೆ ಮುಳುಗಿರುವ ಸಮಯದಲ್ಲಿ ಇಂತಹದೊಂದು ವಿಭಿನ್ನ ಆಲೋಚನೆ, ಮುಂದೊಂದು ದಿನ ನಿಜವೂ ಆಗಬಹುದು!

ಅನ್ಯವಾರ್ತೆ: ಬಿಡುವ ಹಾದಿಯಲಿ!!

ಅನ್ಯವಾರ್ತೆ: ಬಿಡುವ ಹಾದಿಯಲಿ ಹರೀಶ್‌ ಬಾನುಗೊಂದಿ ಈ ಲೇಖನವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಯತ್ನಿಸುತ್ತಿದ್ದೆ. ಬರೆಯುವ ಪ್ರಯತ್ನ ಮಾಡಿರಲಿಲ್ಲ. ಇದಕ್ಕೆ ಎರಡು ...