20 ಜನವರಿ 2020

ಗಾಂಧಿಯನ್ನು ನಾನೇಕೇ ಓದುತ್ತೇನೆ? ನಾನೇಕೆ ಮೆಚ್ಚುತ್ತೇನೆ,


ಗಾಂಧಿಯನ್ನು ನಾನೇಕೇ ಓದುತ್ತೇನೆ? ನಾನೇಕೆ ಮೆಚ್ಚುತ್ತೇನೆ, ಎನ್ನುವುದರ ಕುರಿತು ಬಹಳ ಹಿಂದೆಯೇ ಬರೆಯುತ್ತೇನೆಂದು ನಿಮಗೆ ತಿಳಿಸಿದ್ದೆ. ಆದರೇ, ನನ್ನ ಸೋಮಾರಿತನ ಅದಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿದೆ. ಆದರೂ, ಹಟಕ್ಕೆ ಬಿದ್ದವನಂತೆ ನನ್ನ ಮನಸ್ಸಿನೊಳಗಿರುವ ದುಗುಡವನ್ನು ಹೊರಹಾಕಲು ಬಯಸಿದ್ದೇನೆ. ಗಾಂಧೀಜಿ ಬಗ್ಗೆ ಮಾತನಾಡುವಾಗ ದುಗುಡವೇಕೆ? ಇದು ನಿಮಗೆ ಕಾಡುವ ಪ್ರಶ್ನೆಯೇ ಸರಿ.
ಇತ್ತೀಚಿನ ಎಂದು ಹೇಳಿದರೂ, ಗಾಂಧಿ ಬದುಕಿದ್ದಾಗಿನಿಂದ, ಅವರು ಸತ್ತು ಎಪ್ಪತ್ತು ವರ್ಷವಾದರೂ ಅವರನ್ನು ದ್ವೇಷಿಸುವ, ಹಂಗಿಸುವ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಅವರ ಹೆಸರಲ್ಲಿ ಬೇಳೆ ಬೇಯಿಸಿಕೊಂಡವರೂ ಕಡಿಮೆಯಿಲ್ಲ. ಆದರೇ, ಈ ದೂಷಿಸುವ ಗುಂಪಿಗೆ, ಗಾಂಧಿಯ ಬಗ್ಗೆ ಏನೇನೂ ತಿಳಿಯದೇ ಇರುವುದು, ಅಂಧಕಾರದಲ್ಲಿ ದೂಷಿಸುವುದು ನನ್ನನ್ನು ಕಾಡುತ್ತಿರುವ ವಿಷಯ. ನಮ್ಮಲ್ಲಿ ಅಂಧಕಾರ ಎಷ್ಟರ ಮಟ್ಟಿಗೆ ಹೋಗುತ್ತದೆಯೆಂದರೇ, ಒಬ್ಬನನ್ನು ನಂಬಿದರೇ, ವಿಶ್ವಾಸವಿಟ್ಟರೇ ಅವನನ್ನು ದೇವಮಾನವವೇನು? ದೇವರನ್ನೇ ಮಾಡಿ ಸ್ವರ್ಗ ಕಟ್ಟಿಕೊಡುತ್ತೇವೆ. ದ್ವೇಷವೆಂದರೇ ಇಲ್ಲಸಲ್ಲದ್ದು ಸೃಷ್ಠಿಸಿ ಅವನನ್ನು ಕಳನಾಯಕನನ್ನಾಗಿಸುತ್ತೇವೆ. ಇವೆರಡರಲ್ಲೂ ನಾವು ನಿಸ್ಸೀಮರು. ಅದನ್ನು ಗಾಂಧಿಜಿಯ ವಿಷಯದಲ್ಲಿ ಚಾಚು ತಪ್ಪದೇ ಮಾಡುತ್ತ ಬಂದಿದೆ, ಒಂದು ಗುಂಪು.
ಇರಲಿ, ಈಗ ಮುಖ್ಯ ವಿಷಯಕ್ಕೆ ಬರೋಣ, ನಾನು ನಿಮ್ಮನ್ನು ನನ್ನೊಂದಿಗೆ ಗಾಂಧಿಯನ್ನು ನೋಡಲು ಕರೆದೊಯ್ಯುತ್ತಿದ್ದೇನೆ. ನೀವೊಬ್ಬ ಸಾಮಾನ್ಯ ಮನುಷ್ಯನಾಗಿ, ಗಾಂಧೀಜಿಯೂ ನಮ್ಮಂತೆಯೇ ನಡೆದಾಡುವ ವ್ಯಕ್ತಿಯಾಗಿ ನೋಡುತ್ತಾ ಸಾಗೋಣ. ಗಾಂಧಿಯನ್ನು ನೀವು ಏನಾಗಿ ನೋಡಿದ್ದೀರಿ, ಅದನ್ನೆಲ್ಲ ಬದಿಗಿಟ್ಟು, ನನ್ನೊಂದಿಗಿರಿ.
ಗಾಂಧೀಜಿಯನ್ನು ವಿವಿಧ ಹಂತದಲ್ಲಿ ವಿವಿಧ ರೀತಿಯಲ್ಲಿ ನೋಡಬಹುದು. ನಮ್ಮಂತೆ ನಿಮ್ಮಂತೆಯೇ ಎಂದರೂ ಸರಿ. ಆದರೇ, ಅವರು ಸಾಗಿದ ಹಾದಿಯಲ್ಲಿ, ಸ್ಥಿರತೆಯಿತ್ತು ಎನ್ನುವುದನ್ನು ಬಿಟ್ಟು. ಮೊದಲನೆಯದಾಗಿ, ಬಾಲ್ಯದಲ್ಲಿ, ನಾವೆಲ್ಲರೂ ಅದೆಷ್ಟು ಸುಳ್ಳು ಹೇಳಿರಬಹುದು, ಅದೆಷ್ಟು ಕದ್ದಿರಬಹುದು, ತಿನ್ನುವ ವಸ್ತುವಿನಿಂದ ಹಿಡಿದು ದುಡ್ಡಿನ ತನಕ (ಅದು ನಮ್ಮ ಮನೆಯಲ್ಲಿದ್ದಿದ್ದರೇ!?). ಸತ್ಯ ಹರಿಶ್ಚಂದ್ರ ನಾಟಕ, ಸಿನೆಮಾ ಅದೆಷ್ಟು ಬಾರಿ ನೋಡಿಲ್ಲ. ನನಗೆ ನೆನಪಿರುವಂತೆ, ಕೊಣನೂರಿನ ನಟರಾಜ ಥಿಯೆಟರಿನಲ್ಲಿ ಆ ಸಿನೆಮಾ ನೋಡಲು ಸುತ್ತ ಮುತ್ತಲಿನ ಸಾವಿರಾರು ಜನರು ಎತ್ತಿನ ಗಾಡಿಯಲ್ಲಿ ಬಂದದ್ದು ಸಿನೆಮಾ ನೋಡುವಾಗ ಅತ್ತಿದ್ದು ನೆನಪಿದೆ. ಅವರ್ಯಾರು, ನಾನು ಇನ್ನು ಮುಂದೆ ಸತ್ಯವಂತನಾಗಿಯೇ ಇರುತ್ತೇನೆಂದು ನಿರ್ಧರಿಸಿದರೆಂಬ ಮಾಹಿತಿಯಿಲ್ಲ.
ಎರಡನೆಯದಾಗಿ, ತಮ್ಮ ಯೌವ್ವನದಲ್ಲಿ. ಪ್ರತಿಯೊಬ್ಬರಿಗೂ (ಮನುಷ್ಯರಾಗಿದ್ದರೇ) ಯೌವ್ವದನದಲ್ಲಿ ಪ್ರಕೃತಿದತ್ತವಾದ ಸಹಜ ಆಸೆ, ಕಾಮಾನೆಗಳು ಬಂದೇ ಬರುತ್ತವೆ. ಸೊಗಲಾಡಿತನಕ್ಕೆ ವಾದ ಮಾಡಬಹುದು. ಅವರ ಮನಸ್ಸಿನೊಳಗೇನಿದೆ, ಎಂಬುದು ಆತನಿಗೆ ಮಾತ್ರ ತಿಳಿದಿರುತ್ತದೆ. ಅದನ್ನು ಅಷ್ಟು ಮುಕ್ತವಾಗಿ ಚರ್ಚಿಸಿ ಬರೆದುಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಅದನ್ನು, ಝರಿಯುವವರು ಜರಿಯಬಹುದು, ಅದು ಅವರ ವಿವೇಚನಾ ಮಟ್ಟಕ್ಕೆ ಸಲ್ಲಿದ್ದು.
ಮೂರನೆಯದಾಗಿ, ವೃತಿಪರತೆ ಬಂದಾಗ, ಅವರಿಗಿದ್ದ ಭಯ, ಆತಂಕವನ್ನು ಮುಕ್ತವಾಗಿ ಹೇಳುತ್ತಾ ಬರುವುದು. ನಾವು ಮೊದಲಲ್ಲಿ ಕೆಲಸಕ್ಕೆ ಸೇರಿದಾಗ ಆದ ನೋವುಗಳು, ಬೇಸರಗಳು, ಭಯ, ಆತಂಕ ಇದನ್ನು ಪ್ರತಿಯೊಬ್ಬನು (ಸಾಮಾನ್ಯ ಅಂಕ ತೆಗೆದು ಪಾಸಾಗುವವರು, ನನ್ನಂತವರು) ಅನುಭವಿಸಿರುತ್ತಾನೆ, ರ್ಯಾಂಕ್ ತೆಗೆದವನಿಗೆ ಆ ಸಮಸ್ಯೆ ಕಾಡಿರುವುದಿಲ್ಲವೆನಿಸುತ್ತದೆ.
ನಾಲ್ಕನೆಯದಾಗಿ, ವಿದೇಶದಲ್ಲಿ ನಡೆಸಿದ ಅನೇಕಾನೇಕ ಪ್ರಯೋಗಗಳು. ಗಾಂಧೀಜಿ ಯಾವತ್ತಿಗೂ ಬೇರೆಯವರ ಮೇಲೆ ಅಧ್ಯಯನ ಕೈಗೊಳ್ಳಲಿಲ್ಲ. ತನ್ನನ್ನೇ ತಾನು ಪ್ರಯೋಗಕ್ಕೆ ತಲ್ಲಿದರು. ವಿದೇಶಿ ನೆಲದಲ್ಲಿ ತಾನೊಬ್ಬ ಸಸ್ಯಹಾರಿಯಾಗಿಯೇ ಉಳಿದದ್ದು ಅದಕ್ಕೊಂದು ನಿದರ್ಶನ.
ಐದನೆಯದಾಗಿ, ಆಫ್ರಿಕಾದಲ್ಲಿ ನಡೆದ ಘಟನೆಗಳು. ಆ ಕೊರೆಯುವ ಚಳಿಯಲ್ಲಿ, ತನಗಾದ ಅವಮಾನವನ್ನು ಅಲ್ಲಿಯೇ ಮರೆತು ತಾನು ತನ್ನ ಕೆಲಸ ಮುಗಿಸಿ ಮರಳಬಹುದಿತ್ತು. ಇದು ತನಗಾದ ಅನ್ಯಾಯವಲ್ಲವೆಂದು ಹೋರಾಟಕ್ಕೆ ಶಾಂತಿ ಅಹಿಂಸೆಯ ಅಸ್ತ್ರಹಿಡಿದು ಸಾಧಿಸಿದ್ದು! ಯಾವನೋ ಹಾದಿಯಲ್ಲಿ ಹೋಗುತ್ತಿದ್ದವನು ಗಾಡಿಗೆ ಅಡ್ಡ ಬಂದರೇ ಜಗಳಕ್ಕಿಳಿಯುವ ನಾವು, ಈಡೀ ಜೀವನವೆಲ್ಲಾ ಶಾಂತಿ, ಅಹಿಂಸೆಗೆ ಒತ್ತು ಕೊಟ್ಟು ಬದುಕಿದ ಗಾಂಧೀಜಿಯ ಬಗ್ಗೆ ಮಾತನಾಡುವುದೇ? ಅರ್ಧ ಗಂಟೆ ಮನೆಯಲ್ಲಿ ತಿಂಡಿ ನೀಡಲು ತಡವಾದರೇ ಸಹಿಸದ ನಾವು, ತಿಂಗಳುಘಟ್ಟಲೇ ಉಪವಾಸ ಮಾಡಿದ ಮಹಾತ್ಮನನ್ನು ಜರಿಯುವುದೇ?
ಆರನೆಯದಾಗಿ, ಸ್ವಲ್ಪ ಚಳಿಯಾದರೇ ಮೂರು ಕಂಬಳಿ ಬೇಕು, ಸೆಕೆಯಾದರೇ ಫ್ಯಾನ್ ಎಸಿ ಬೇಕೆಂದು ಪರದಾಡುವ ನಾವುಗಳು ವರ್ಷಾನುಗಟ್ಟಲೇ ಪೂರ್ತಿಬಟ್ಟೆಯೇ ಇಲ್ಲದೇ, ಆ ಬಟ್ಟೆಯನ್ನು ಸಮಾಜಕ್ಕಾಜಿ ತ್ಯಜಿಸಿದ ವ್ಯಕ್ತಿತ್ವದ ಕುರಿತು ಭಾಷಣ ಬಿಗಿಯುವುದು ಮೆಚ್ಚಲೇಬೇಕಾದ ಸಂಗತಿ.
ಏಳನೆಯದಾಗಿ, ಗಾಂಧೀಜಿಯವರ ಕನಸಿನ ಪ್ರಪಂಚ/ಜಗತ್ತು ಹೇಗಿತ್ತು? ಅದನ್ನೊಮ್ಮೆ ತಾವುಗಳೇ ಓದಬೇಕೆಂದು ಮನವಿ. ಇಡೀ ವಿಶ್ವದಲ್ಲಿ ಯಾವುದೇ ದೇಶಕ್ಕೆ ಸೈನ್ಯೆ ಬೇಡ, ಅದಕ್ಕಾಕುವ ಹಣವನ್ನು ಬಡವರ ಏಳಿಗೆಗೆ ಹಾಕೋಣ. ಇಡೀ, ವಿಶ್ವವೇ ಒಂದು ಕುಟುಂಬ ಎನ್ನುವುದನ್ನ ಸಾಧಿಸಿ ತೋರಿಸೋಣವೆಂಬುದಿತ್ತು. ದ್ವೇಷವೇ ಜೀವನವೆಂದು ನಂಬಿರುವ ಹಲವರಿಗೆ ಯುದ್ಧದ ಮದವಿರಬೇಕಲ್ಲವೇ? ಪ್ರತಿಯೊಂದು ಹಳ್ಳಿ ಹೇಗಿರಬೇಕೆಂಬ ಕಲ್ಪನೆಯೇ ಅದ್ಬುತಾ. ಅವರ ಪ್ರಕಾರದಲ್ಲಿ, ಸಮುದ್ರದಲ್ಲಿ ಬೀಳುವ ಮಳೆ ಹನಿಯಂತಿರಬೇಕು, ಎಲ್ಲಾ ಹನಿಗಳು ಬಿದ್ದರೂ ಒಂದಕ್ಕೊಂದು ತೊಂದರೆ ಕೊಡದಂತೆ, ಅದರ ಶಕ್ತಿಯನ್ನು ಉಳಿಸಿಕೊಳ್ಳಬೇಕು.
ಎಂಟನೆಯದಾಗಿ, ಗಾಂಧೀಜಿ ಮುಟ್ಟದ ವಸ್ತುವಿಲ್ಲ. ಅವರನ ನಡುವಳಿಕಗೆ ಅವರು ವಾರ್ಧಾದಲ್ಲಿ ಕಳೆದ ದಿನಗಳು. ಸ್ವಾತಂತ್ರ್ಯ ಸಂಗ್ರಾಮದ ನಡುವೆ ಅವರು ನಡೆಸಿದ ಶಿಕ್ಷಣದ ಕುರಿತು ಅಂತರಾಷ್ಟ್ರೀಯ ಸಮ್ಮೇಳನ ಉದಾಹರಣೆ. ಸ್ವರಾಜ್ ಎಂದರೇನು? ಗ್ರಾಮ್ ಸ್ವರಾಜ್ ಬರೆದ ವರ್ಷಕ್ಕೂ ಕೊನೆಯ ತನಕವೂ ಬದಲಾಗುತ್ತಾ, ಮಾರ್ಪಾಡಾಗುತ್ತಾ ಬರುತ್ತದೆ. ಕೇವಲ ನಲ್ವತ್ತೈವತ್ತು ಪುಟಗಳಲ್ಲಿ ಎಲ್ಲವನ್ನೂ ಹೇಳುವ ತಾಕತ್ತಿದೆ.
ಒಂಬತ್ತನೆಯದಾಗಿ, ದೇಶ ವಿಭಜನೆ ಕುರಿತು. ತನ್ನೆದುರು ನೋವು, ಅಹಿಂಸೆಯಾಗಬಾರದೆಂಬ ಒಂದೇ ಕಾರಣಕ್ಕೆ ಜೊತೆಗೆ ನಾನು ಹೇಳುವುದಾದರೇ, ಯಾರೂ ಅಶಕ್ತನಿರುತ್ತಾನೋ ಅವನನ್ನು ನಾವು ಉಳಿಸಲು ಪ್ರಯತ್ನಿಸುತ್ತೇವೆ. ಬಲಿಷ್ಠನಾದವನು ಅವನನ್ನು ಕೊಲ್ಲಬಹುದು, ನೋಯಿಸಬಹುದೆಂಬ ಆತಂಕದಿಂದ. ಅದನ್ನೇ ಗಾಂಧೀಜೀ ಮಾಡಿದರೆಂಬುದು ನನ್ನ ವಾದ.
ಹತ್ತನೆಯದಾಗಿ, ನೆಹರು ಪರ ನಿಂತದ್ದು, ಇದಕ್ಕೆ ಕಾರಂತಜ್ಜ ಬರೆದಿರುವ ಮೂಜನ್ಮ ಓದಿ. ಅವರು ಒಬ್ಬ ಮನುಷ್ಯರಾಗಿರುವುದರಿಂದ, ಒಂದು ರೀತಿಯ ಪ್ರೇಮ, ಮೋಹ ನೆಹರು ಕಡೆಗೆ ಎಳೆದಿರುವುದು ಸುಳ್ಳಲ್ಲ, ಅಥವಾ ನೆಹರು ಅವರನ್ನು ಸೆಳೆದಿರುವುದು ಸುಳ್ಳುಲ್ಲ ಎಂಬುದು ನನ್ನ ನಂಬಿಕೆ.

ಇನ್ನೂ ಬರೆಯುವುದಿದೆ, ಸದ್ಯಕ್ಕಿಷ್ಟು ಸಾಕಲ್ಲವೇ!
ಕೊನೆಯ ಹನಿ: ದಯವಿಟ್ಟು ಓದಿ, ಯಾವುದೋ ಭಾಷಣ ಕೇಳಿ, ಸುಳ್ಳು ಸುದ್ಧಿ ಹಬ್ಬಿಸಬೇಡಿ.

12 ಜನವರಿ 2020

ಪಕ್ಕೆಲುಬು: ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ!!!


ಈ ಕುರಿತು ಪ್ರತಿಕ್ರಿಯೆ ನೀಡಬೇಕೆ ಬೇಡವೇ ಎಂದು ಬಹಳ ದಿನಗಳಿಂದ ಯೋಚಿಸಿದ ನಂತರ ನನ್ನ ಅಭಿಪ್ರಾಯವನ್ನು ತಿಳಿಸುತ್ತಿದ್ದೇನೆ. ಇದನ್ನು ಬೇರೆ ಬೇರೆ ಆಯಾಮಗಳಿಂದ ನೋಡಲು ಇಚ್ಛಿಸುತ್ತೇನೆ. ಮೊದಲನೆಯದಾಗಿ, ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದಿದ್ದ, ಅವನ ಅರಿವಿನ ಮಟ್ಟವನ್ನು ವಿಡಿಯೋ ಮೂಲಕ ತಿಳಿಸಿರುವುದು, ಚಿತ್ರಿಸಿ ಪ್ರಸಾರ ಮಾಡಿರುವುದು. ಎರಡನೆಯದಾಗಿ, ಅದೇ ವಿಷಯಕ್ಕೆ ಶಿಕ್ಷಣ ಇಲಾಖೆಯ ಮಂತ್ರಿಗಳು ಸೇರಿದಂತೆ ಅಪರಾಧವಾಗಿ ಪರಿಗಣಿಸಿ ಅಮಾನತ್ತಿನ ಶಿಕ್ಷೆಯನ್ನು ನೀಡಿರುವುದು. ಮೂರನೆಯದು ನೈತಿಕತೆ, ನ್ಯಾಯ ನೀತಿಯ ಕುರಿತು.

ಮೊದ¯ನೆಯದಾಗಿ, ಶಾಲಾ ಸಮಯದಲ್ಲಿ ಮೊಬೈಲ್ ಬಳಸಿರುವುದು ಅಪರಾಧವೆಂಬಂತಹ ಸುದ್ದಿ ಹರಿದಾಡುತ್ತಿರುವುದು. ಸನ್ಮಾನ್ಯ ಮಂತ್ರಿಗಳಲ್ಲಿ ನನ್ನ ಮನವಿ, ತಾವು ಯಾವ ಶತಮಾನದಲ್ಲಿದ್ದೀರಿ? ಮೊಬೈಲ್ ಐದು ನಿಮಿಷ ಕೂಡ ಬಿಟ್ಟಿರದ ಪರಿಸ್ಥಿತಿಯಲ್ಲಿ ನಾವಿರುವುದು ಸತ್ಯ ಮತ್ತು ವಾಸ್ತವ. ನಿಮಗೆ ಒಂದು ಸವಾಲು. ತಾವುಗಳು ಒಂದು ದಿನ ತಮ್ಮ ಮೊಬೈಲ್ ಆಫ್ ಮಾಡಿ ಇರಲು ಸಾಧ್ಯವೇ? ಅದು ಅಸಾಧ್ಯದ ಮಾತು. ಇದರಲ್ಲಿಯೇ, ಮತ್ತೊಂದು ಅಂಶವಿದೆ, ಶಾಲಾಭಿವೃದ್ಧಿ ಬಗ್ಗೆ, ಉತ್ತಮ ಸಂದೇಶಗಳು, ವಿಡೀಯೋಗಳು ಬಂದಾಗ ನೀವು ನಾವೆಲ್ಲರೂ ಆನಂದಿಸಿರುವುದು ಸತ್ಯ. ಒಳ್ಳೆಯ ಅಂಶಗಳು ಬಂದಾಗ ಶಾಲಾ ಆವರಣದಲ್ಲಿ ಮೊಬೈಲ್ ಬಳಸುವುದು ತಪ್ಪೆನಿಸದ ನಾವು, ತಪ್ಪನ್ನು ತೋರಿಸಿದಾಗ ಶಿಕ್ಷೆ ಕೊಡುವುದೇ?
ತಮ್ಮ ಭೇಟಿಯ ಸಮಯದಲ್ಲಿ, ಅದೆಷ್ಟು ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿಲ್ಲ ಸಚಿವರೇ? ಅದು ಕರ್ತವ್ಯ ಲೋಪವೆನಿಸಲಿಲ್ಲವೇ? ನಿಮ್ಮ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ಬಂದಾಗಲೂ ಅವರ ಫೋಟೋ, ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಬರುವುದಿಲ್ಲವೇ? ಅದು ಕರ್ತವ್ಯದ ಸಮಯದಲ್ಲಿ ತೆಗೆದಿದ್ದು ಎನಿಸುವುದಿಲ್ಲವೇ?

ತಾವುಗಳು ಮಗುವಿನ ಕುರಿತು, ಬಹಳ ಕಾಳಜಿ ತೋರಿಸಿರುವುದು ಹೆಮ್ಮೆಯ ವಿಷಯ. ನಾನು, ಒಬ್ಬ ಪೋಷಕನಾಗಿ ನನ್ನ ಮಗುವಿನ ಕಲಿಕೆಗೆ ಬೇಕಿರುವ ಶಿಕ್ಷೆಯನ್ನು, ಅವಮಾನವೆಂದು ತಿಳಿಯುವುದಿಲ್ಲ. ನಾವು ವಿದ್ಯಾರ್ಥಿಗಳಾಗಿದ್ದಾಗ ಹೊಡೆತ, ಬಡಿತ, ಬೈಗುಳಗಳು ಅವಮಾನವೆನಿಸುತ್ತಿರಲಿಲ್ಲ. ಈಗೇಕೇ ಸಚಿವರೇ ಅದು ಅವಮಾನವಾಗುತ್ತಿದೆ? ನಾವು, ಕಿವಿ ಹಿಡಿದು ಬೈಸಿಗೆ ಹೊಡೆಯುತ್ತಿದ್ದೆವು, ಮಂಡಿಯೂರಿ ಕಿವಿ ಹಿಡಿಯುತ್ತಿದ್ದೇವು, ಅದ್ಯಾವುದು ನಮಗೆ ಅವಮಾನವೆನಿಸಲಿಲ್ಲ, ಓದಿದೆವು, ಕಲಿತೆವು ಬೆಳೆದೆವು. ತಮ್ಮಂತಹ ರಾಜಕಾರಣಿಗಳು ಇಂತಹ ಕ್ಷುಲಕ ಕಾರಣದಲ್ಲಿಯೂ ರಾಜಕೀಯ ಮಾಡುವುದನ್ನು ಬಿಡಬೇಕು. ಅಲ್ಲಿಯೂ ಮೈಲೇಜ್ ತೆಗೆದುಕೊಳ್ಳುವುದನ್ನು ಬಿಡಬೇಕು.

ಇಷ್ಟೆಲ್ಲಾ ಮಾತನಾಡುವ ತಾವು, ಒಂದು ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಹೋಗುವ ಶಿಕ್ಷಕರಿಗೆ ಒಒಡಿ ತಡೆಹಿಡಿದಿದ್ದು ತಮ್ಮ ಮನಸ್ಥಿತಿಯನ್ನು ತೋರಿಸುತ್ತಿದೆ. ಬಿಟ್ಟಿ ಪ್ರಚಾರಕ್ಕಾಗಿ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಮಾಡವುದನ್ನು ನಿಲ್ಲಿಸಿ.
ಮೂರನೆಯದಾಗಿ, ಸಮಾಜವೇ ಮೊಬೈಲ್ ದಾಸ್ಯದಲ್ಲಿ ಮುಳುಗಿದೆ. ಒಂದು ಅಪಘಾತ ನಡೆಯುತ್ತಿದ್ದರೂ, ಅತ್ಯಚಾರ ನಡೆಯುತ್ತಿದ್ದರೂ, ಕೊಲೆಯಾಗುತ್ತಿದ್ದರೂ ವಿಡಿಯೋ ಮಾಡುವ ಭರದಲ್ಲಿ ನಮ್ಮ ಸಮಾಜವಿದೆ. ಇದು ಅನೈತಿಕತೆಯ ಪರಮಾವಾಧಿಯಲ್ಲಿ ಮುಳುಗುತ್ತಿರುವುದಕ್ಕೆ ಸಾಕ್ಷ್ಯ.

ಮಿಕ್ಕಿದ್ದು ಓದುಗರ ವಿಮರ್ಶೆಗೆ ಬಿಟ್ಟಿದ್ದು.

18 ನವೆಂಬರ್ 2019

ಫೋರ್ಡಿ ನಾಲ್ಕನೇ ಆಯಾಮದ ಸುತ್ತಾ!!!


ಕೆಲವೊಂದು ಹವ್ಯಾಸಗಳು ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುವುದು ನೂರಕ್ಕೆ ನೂರು ಸತ್ಯ. ನಾನು ನಂಬಿರುವ ಹವ್ಯಾಸಗಳಲ್ಲಿ ಓದಿಗೆ ಮತ್ತು ಬರವಣಿಗೆಗೆ ಆ ಶಕ್ತಿಯಿದೆ. ಈ ಹವ್ಯಾಸಗಳ ಕುರಿತು ಎರಡು ಸಾಲು ಹೆಚ್ಚಿಗೆ ಹೇಳುತ್ತೇನೆ. ಒಳ್ಳೆಯದು ಕೆಟ್ಟದ್ದು ಎಂಬುದನ್ನು ಮಾನವ ನಿರ್ಮಿತವಷ್ಟೆ. ಅದನ್ನು ಕೆಲವರು ಹಣಕಾಸಿನ ಲಾಭಕ್ಕೆ ನೋಡಿ ಉತ್ತಮ ಹವ್ಯಾಸವೆಂದರೇ ಕೆಲವರು ಆರೋಗ್ಯದ ದೃಷ್ಠಿಯಿಂದ ಕೆಟ್ಟದ್ದು ಎನ್ನುತ್ತಾರೆ. ಉದಾಹರಣೆಗೆ: ಸಿನೇಮಾ ನೋಡುವುದು, ನಾಟಕ ನೋಡುವುದು, ಓದುವುದು, ಬರೆಯುವುದು, ಸುತ್ತಾಟ, ಇತ್ಯಾದಿಗಳ ಜೊತೆಗೆ ಕುಡಿಯುವುದು, ಸೇದುವುದು, ಜೂಜಾಡುವುದು ಹೀಗೆ ಸಾಲು ಬೆಳೆಯುತ್ತಾ ಹೋಗುತ್ತದೆ. ಕೆಲವರು ಕಥೆ ಕಾದಂಬರಿಗಳನ್ನು ಓದುವುದನ್ನು ಸಮಯ ವ್ಯರ್ಥವೆನ್ನುತ್ತಾರೆ, ಅವರಿಗೆ ಓದುವುದರಿಂದ ಕಣ್ಣಿಗೆ ಕಾಣುವಂತಹ ಭೌತಿಕ ಲಾಭ ಬರಬೇಕು. ಅಂದರೆ, ಪರೀಕ್ಷಾ ದೃಷ್ಟಿಯಿಂದ, ಪ್ರಮೋಶನ್ ಸಿಗಬೇಕು, ಆಗ ಆ ಓದಿಗೆ ಒಂದು ಅರ್ಥವೆಂದು ನಂಬುತ್ತಾರೆ.

ಸಿನೇಮಾ ಹುಚ್ಚು, ನಾಟಕದ ಅಭಿಮಾನವೆಲ್ಲಾ ಸಮಯ ವ್ಯರ್ಥವೆನ್ನುತ್ತಾರೆ. ಆದರೇ, ಅದೇ ರಂಗದಲ್ಲಿರುವವರು ನೋಡಲೇಬೇಕು ಅದರಿಂದ ಅವರಿಗೆ ಲಾಭವೆನ್ನುತ್ತಾರೆ. ಹಾಗೆಯೇ ಟಿವಿ ನೋಡುವುದು ಅಷ್ಠೇ, ಅಲ್ಲಿಯೂ ರಸಪ್ರಶ್ನೆಯಂತಹ ಜ್ಞಾನಾರ್ಜನೆಯಾಗಬೇಕಿರುವ ಕಾರ್ಯಕ್ರಮಗಳು ಮಾತ್ರವೇ ಇರಬೇಕು. ಅಷ್ಟೆಲ್ಲಾ ಏಕೆ? ಪ್ರೀತಿಯಲ್ಲಿ ಕೂಡ, ಪ್ರೇಮದಲ್ಲಿ ಕೂಡ ಲಾಭಾಂಶ ಹುಡುಕುತ್ತಾರೆ. ಈ ಪ್ರೀತಿ ಎಲ್ಲಾ ಸಮಯ ಹಾಳು, ಅದನ್ನು ಬಿಟ್ಟು ಉಪಯೋಗಕ್ಕೆ ಬರುವಂತಹ ಕೆಲಸವನ್ನಾದರೂ ಮಾಡಿ ಎಂದು ಉಪನ್ಯಾಸವನ್ನು ಕೊಡುತ್ತಾರೆ.

ನಾನು ಇವೆಲ್ಲವನ್ನು ಸಂವೇದನಾ, ಭಾವನಾತ್ಮಕವಾಗಿ ಹೇಳುವುದಕ್ಕೆ ಬಯಸುತ್ತೇನೆ. ಮನುಷ್ಯ ತನ್ನ ಜೀವನವನ್ನು ಎರಡು ವಿಧವಾಗಿ ನೋಡಬಹುದು, ಮೊದಲನೆಯದಾಗಿ ತನ್ನ ಭೌತಿಕವಾಗಿ ಅಂದರೇ ಕೈಗೆಟುಕುವ ಲಾಭಾಂಶದ ಆಧಾರದಲ್ಲಿ. ಒಂದು ಕ್ರಿಯೆಯಿಂದ ಲಾಭ ಬರಬೇಕು ಅಥವಾ ನಷ್ಟವಾಗಬಾರದು ಎಂದು. ಮತ್ತೊಂದು ಭಾವನಾತ್ಮಕವಾಗಿ ತನ್ನೊಳಗಿನ ಆನಂದಕ್ಕಾಗಿ. ಈ ಆನಂದ, ಆತ್ಮ, ಸಂತೋಷ ಇವೆಲ್ಲವೂ ತನ್ನೊಳಗಿನ ವಿಚಾರ. ಇದು ಒಬ್ಬರಿಂದ ಒಬ್ಬರಿಗೆ ಬದಲಾಗುತ್ತದೆ. ಒಂದೇ ನದಿ ದಂಡೆಯಲ್ಲಿ ಸಾವಿರಾರು ಜನರಿದ್ದರೂ ಒಬ್ಬೊಬ್ಬರಿಗೂ ಒಂದೊಂದು ಬಗೆಯಾಗಿ ಆ ಪರಿಸರ ಕಾಣುತ್ತದೆ ಮತ್ತು ತಾನು ಕಾಣುತ್ತಿರುವುದೇ ಅಂತಿಮವೆಂದು ಮನಸ್ಸು ಹೇಳುತ್ತದೆ ಅದನ್ನು ವ್ಯಕ್ತಿ ಸಾಬೀತುಪಡಿಸಲು ತೊಡಗುತ್ತಾನೆ.

ಮರಳಿ ವಿಷಯಕ್ಕೆ ಬರುತ್ತೇನೆ. ನನಗೆ ಅತಿ ಅಚ್ಚು ಮೆಚ್ಚಿನ ಹವ್ಯಾಸವೆಂದರೇ ಓದುವುದು. ಈ ಹಿಂದೆಯೇ ಹೇಳಿದ್ದೇನೆ, ಅದೆಷ್ಟು ಓದುತ್ತಾ ಸಮಯ ಕಳೆದಿದ್ದೇನೆಂದರೇ, ಈ ಕಥೆ ಕಾದಂಬರಿ ಓದುವುದನ್ನು ಬಿಟ್ಟು ಯುಜಿಸಿ ಎನ್‍ಇಟಿ ಆದರೂ ಮಾಡೋದಲ್ವ ಅಂತಾ ನಮ್ಮಪ್ಪ ಬೈದಿರುವುದು ಇದೆ. ಆದರೇ, ಇತ್ತೀಚೆಗೆ ಅದರಲ್ಲಿಯೂ ಕಳೆದ ಒಂದೆರಡು ವರ್ಷದಲ್ಲಿ ನನ್ನ ದಿನಚರಿಯಲ್ಲಿ ಅನೇಕ ಬದಲಾವಣೆಗಳಾದವು. ನೆಪ ಮಾತ್ರಕ್ಕೆ ಹೇಳುವುದಾದರೇ ಕೆಲಸದ ಒತ್ತಡ, ಆರ್ಥಿಕ ಸಂಕಷ್ಟಗಳು, ಹೊಣೆಗಾರಿಕೆ, ಸಂಸಾರ ಮಣ್ಣು ಮಸಿ. ಆದರೇ, ಅವೆಲ್ಲವೂ ನೆಪಗಳು ಮಾತ್ರ. ನಿಜವೇನೆಂದರೇ, ನಾನು ಬಹಳ ಸೋಮಾರಿಯಾದೆ. ನಾನು ಯಾವಾಗ ಶ್ರಮಜೀವಿಯಾಗಿದ್ದೇ? ಈ ಪ್ರಶ್ನೆಯೂ ನಿಜವೇ. ನಾನು ಈ ಹಿಂದಿನಿಂದಲೂ ಬಹಳ ಸೋಮಾರಿತನದ, ಬೇಜವಾಬ್ದಾರಿಯ ವ್ಯಕ್ತಿ, ಅದರಲ್ಲಿ ಎರಡು ಮಾತಿಲ್ಲ. ಅದನ್ನು ಸಮಜಾಯಿಸುವಷ್ಟು ಶ್ರಮವನ್ನು ವಹಿಸಿದ್ದೇನೆ. ಆನೆ ನಡೆದದ್ದೇ ಹಾದಿ, ನಾನು ಬಯಸಿದ್ದೇ ಬದುಕು ಎಂದು ಬದುಕ ಹೊರಟವನು ನಾನು. ಅದರಿಂದ ಅನೇಕರು ನನ್ನನ್ನು ಗೇಲಿ ಮಾಡಿದ್ದು ಇದ್ದೆ, ಕೆಲವರು ನೇರವಾಗಿ, ಅನೇಕರು ಪರೋಕ್ಷವಾಗಿ. ಅದು ಅವರಿಗಿರುವ ವ್ಯಕ್ತಿ ಸ್ವಾತಂತ್ರ್ಯ, ಅದಕ್ಕೆ ನಾನೇಕೆ ಅಡ್ಡಬರಲಿ.

ನಾನು ಕೆಲಸ ಬಿಟ್ಟು ಸೀಕೋ ಕಟ್ಟಲು ಬಂದಾಗ ನಕ್ಕವರು ಅನೇಕರು. ಸಹಕರಿಸಿದವರು ಕೆಲವರು. ಮತ್ತೆ ಕೆಲಸ ಅಂತಾ ದೇಶ ಸುತ್ತಾಡುವಾಗ ಪೈಪೋಟಿಗೆ ಬಿದ್ದವರಂತೆ ಅಸೂಯೆಪಟ್ಟವರ ಸಂಖ್ಯೆ ಏನು ಕಡಿಮೆಯಿಲ್ಲ. ಈಗಲೂ ನನ್ನ ವಿರುದ್ಧ ಕತ್ತಿ ಮಸೆಯುತ್ತಿರುವವರು, ಅಸೂಯೆಪಡುವವರ ಸಂಖ್ಯೆ ಅತಿಯಾಗಿಯೇ ಇದೆ. ನಾನು ಏನು ಇಲ್ಲದ, ಏನನ್ನು ಸಾಧಿಸದ, ಕೇವಲ ನನ್ನ ಸಂತೋಷಕ್ಕಾಗಿ ಕೆಲವೊಂದು ಕೆಲಸ ಮಾಡುತ್ತಾ ಇರುವಾಗಲೇ ಇಷ್ಟೊಂದು ವೈರತ್ವ ಸಾಧಿಸುವವರು ಇನ್ನೂ ಏನಾದರೂ ಸಾಧಿಸಿದರೇ? ಪಾಪ ಅವರುಗಳು ಆತ್ಮ ಹತ್ಯೆ ಮಾಡಿಕೊಳ್ಳುವುದು ಖಚಿತ. ವಿಷಯಾಂತರವಾಗಿದೆ, ಇರಲಿ ಹೇಳಬೇಕೆಂದಿರುವುದೆಲ್ಲಾ ಬರಲಿ, ಬರೆಯುವ ಮನಸ್ಸಿರುವಾಗ, ಹೇಳುವ ಸನ್ನಿವೇಶದಲ್ಲಿ ಹೇಳಬೇಕು. ಕಾಲ ಕಳೆದಂತೆ ವಿಷಯಗಳು ಸಾಯುತ್ತವೆ.

ಮರಳಿ ವಿಷಯಕ್ಕೆ ಬರುತ್ತೇನೆ. ಕಳೆದ ಒಂದೆರಡು ತಿಂಗಳಿಂದ ನಾನು ಸ್ವಲ್ಪ ಬೇಸರವಾಗಿದ್ದೆ. ಕಾರಣವನ್ನು ಮತ್ತೊಮ್ಮೆ ತಿಳಿಸುತ್ತೇನೆ. ನನ್ನ ಸುತ್ತ ಮುತ್ತಲಿನ ವಿಚಾರಗಳು ನನ್ನನ್ನು ಹೆಚ್ಚಿನ ಮಟ್ಟಕ್ಕೆ ನೋವುಂಟು ಮಾಡಿದ್ದು ಸತ್ಯ. ಇದರ ಕುರಿತು ಮುಂದಿನ ಲೇಖನದಲ್ಲಿ ಹಂಚಿಕೊಳ್ಳುತ್ತೇನೆ. ಅದೇ ಸಮಯದಲ್ಲಿ ನನಗೆ ಸಿಕ್ಕಿದ್ದು, ಶ್ರೀ ಗುರುಪಾದ ಬೇಲೂರುರವರ ಮೂರು ಪುಸ್ತಕಗಳು. ಎರಡು ಪುಸ್ತಕಗಳ ಕುರಿತು ಈಗಾಗಲೇ ಹಂಚಿಕೊಂಡಿದ್ದೇನೆ. ಆದರೇ, ಮಾನಸಿಕವಾಗಿ ವಿಚಲಿತನಾಗಿದ್ದ ನನಗೆ ಅದರಿಂದ ಹೊರಕ್ಕೆ ಬರುವುದಕ್ಕೆ, ಈ ಫೋರ್ಡಿ ಎಂಬ ಪುಸ್ತಕ ಸಹಾಯ ಮಾಡಿತು ಎನ್ನುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ನಾವು ಬೇಸರದಲ್ಲಿದ್ದಾಗ ನಾವು ಮೆಚ್ಚುವ ತಾಣಗಳೇ ಬೇಸರವೆನಿಸುತ್ತವೆ, ನಮ್ಮ ನೆಚ್ಚಿನ ಅಭ್ಯಾಸಗಳೇ ಛೇ ಎನಿಸುತ್ತವೆ. ನಮ್ಮ ಮೆಚ್ಚಿನ ಸಂಗೀತ ಕೂಡ ಸಾಕು ಎನಿಸುತ್ತದೆ. ಕುಳಿತಲ್ಲಿ ಕೂರಲಾಗದೇ, ಮಲಗಿದರೆ ನಿದ್ದೆ ಬಾರದೇ ಯಾಕೀ ಬದುಕು ಎನಿಸುವ ಹಂತಕ್ಕೂ ಹೋಗುತ್ತದೆ.

ಸಿಕ್ಕ ಸಿಕ್ಕವರ ಮೇಲೆ ರೇಗುವುದು, ಅಥವಾ ಬೇರೆ ಯಾವುದೋ ಅಂಶಗಳಿಗೆ ದಾಸ್ಯನಾಗುವುದು ಸರ್ವೇ ಸಾಮಾನ್ಯ. ಫೋರ್ಡಿ ಏಕೆ ನನಗೆ ಹಿಡಿಸಿತು ಅಥವಾ ಅಷ್ಟೊಂದು ಮೆಚ್ಚುಗೆಯಾಗುವ ಅಂಶಗಳೇನಿತ್ತು? ಈಗಾಗಲೇ ಹೇಳಿರುವ ಹಾಗೆ, ಪ್ರತಿಯೊಂದು ಪುಸ್ತಕಗಳಿಗೂ ತನ್ನದೇ ಆದ ಶಕ್ತಿ ಇರುತ್ತದೆ. ಅದಕ್ಕೆ ಮುಖ್ಯ ಕಾರಣ, ಪ್ರತಿಯೊಬ್ಬ ಲೇಖಕನು ತನ್ನೊಳಗೆ ಹರಿದಾಡುವ ಆಲೋಚನೆಗಳನ್ನು ಪದಜೋಡನೆಯಿಂದ ಓದುಗನ ಮಡಿಲಿಗೆ ಹಾಕಿರುತ್ತಾನೆ. ಎಲ್ಲವೂ ನಮಗೆ ಮುದ ನೀಡುವುದಿಲ್ಲ, ಕೆಲವೊಂದು ಬೇಸರವನ್ನು ತರಿಸಬಹುದು, ಇನ್ನು ಹಲವು ಬಾರಿ ಇದೆಂತಹ ಬರವಣಿಗೆ ಅಥವಾ ಇದೆಂತಹ ಯೋಚನೆ ಅನಿಸಲೂಬಹುದು.

ಫೋರ್ಡಿಯನ್ನು ಓದಲು ಶುರು ಮಾಡಿದಾಗ ಇದೊಂದು ದೆವ್ವ ಭೂತದ ಕಥೆಯಿರಬೇಕು ಎನಿಸುತ್ತದೆ. ಆ ಹಿನ್ನಲೆಯಲ್ಲಿ ಕೆಲವೊಂದು ಪುಟಗಳನ್ನು ಮತ್ತೊಮ್ಮೆ ಓದಿದೆ. ಲೇಖಕರು ವಿಜ್ಞಾನವನ್ನು ವಿವರಿಸಲು ಬಳಸಿರುವ ತಂತ್ರಗಾರಿಗೆ ಈ ಕಾದಂಬರಿಯಲ್ಲಿ ಗೆದ್ದಿದೆ. ಸತ್ಯಕಾಮರವರ ಅನೇಕ ಕಥೆಗಳು ನೆನಪಿಗೆ ಬಂದು ಹೋದವು. ಅಂದಹಾಗೆ ಸತ್ಯಕಾಮರನ್ನು ಇತ್ತೀಚೆಗೆ ಓದಿರುವವರು ಬಹಳ ಕಡಿಮೆಯಾಗಿದ್ದಾರೆ. ದಯವಿಟ್ಟು ಒಂದೆರಡು ಪುಸ್ತಕಗಳನ್ನು ಓದಿ ನೀವು ಅವರ ಅಭಿಮಾನಿಯಾಗದೇ ಇದ್ದರೆ ಹೇಳಿ. ಒಂದೊಂದು ಆಯಾಮವನ್ನು ವಿವರಿಸುತ್ತಾ ಹೋಗುವ ಜೊತೆ ಜೊತೆಗೆ ಪ್ರಪಂಚದಲ್ಲಿ ಆಗುತ್ತಿರುವ ಆವಿಷ್ಕಾರಗಳು, ಬದಲಾಗುತ್ತಿರುವ ವಿದ್ಯಮಾನಗಳನ್ನು ಬಹಳ ಅಚ್ಚುಕಟ್ಟಾಗಿ ಮುಂದಿಟ್ಟಿದ್ದಾರೆ.

ವಿಶೇಷವಾಗಿ ಗಮನಿಸಿದ್ದು, ಲೇಖಕರ ಬರವಣಿಗೆಯ ಶೈಲಿ ಮತ್ತು ವಿವರಣೆಗಳು. ಮೊದಲ ಪುಸ್ತಕದಲ್ಲಿ ಅವರು ಸ್ವಲ್ಪ ಮಡಿವಂತಿಕೆಯಿಂದ ಹೊರಬಂದಿರಲಿಲ್ಲ. ಆದರೇ, ಇಲ್ಲಿ ಪ್ರೇಮಿಗಳ ನಡುವೆ ನಡೆಯುವ ಸಂಭಾಷಣೆ ಸನ್ನಿವೇಶಗಳನ್ನು ಹದಿಹರಯಕ್ಕೆ (ವಯಸ್ಸಿನ ಮಿತಿಯಾಕೆ?) ಕರೆದೊಯ್ದು ಅಲ್ಲಿ ಓದುಗನೇ ಪ್ರೇಮಿಯಾಗಿ ಜೋಗದ ಸುತ್ತಣ ಪರಿಸರವನ್ನು ಅನುಭವಿಸಲು ಬಿಡುತ್ತಾರೆ. ಪ್ರೇಯಸಿಯನ್ನು ಕಳೆದುಕೊಂಡವ£ (ವಿರಹಿಯ) ಭಾವನೆಯನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸಿರುವುದು ಲೇಖಕರ ಸೂಕ್ಷ್ಮಸಂವೇದನೆಯನ್ನು ಎತ್ತಿ ತೋರಿಸುತ್ತದೆ. ಒಟ್ಟಾರೆಯಾಗಿ ಬೇರೆ ಬೇರೆ ಆಯಾಮಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಜೀವಿಗಳು ಇರಬಹುದು, ಅವುಗಳು ನಮಗಿಂತಲೂ ಮುಂದುವರೆದಿರಬಹುದು ಎಂಬ ಕಲ್ಪನೆಯೇ ಅದ್ಬುತ. ಏಕೆಂದರೇ, ಮನುಷ್ಯ ತಾನೇ ಬುದ್ದಿವಂತ ತನಗಿಂತ ಬೇರಾರು ಇಲ್ಲವೇ ಇಲ್ಲ ಎನ್ನುವ ಅಹಂಮಿನೊಳಗೆ ಮುಳುಗಿರುವ ಸಮಯದಲ್ಲಿ ಇಂತಹದೊಂದು ವಿಭಿನ್ನ ಆಲೋಚನೆ, ಮುಂದೊಂದು ದಿನ ನಿಜವೂ ಆಗಬಹುದು!

06 ನವೆಂಬರ್ 2019

ಅಗರ್ತದೊಳಗೊಂದು ಒಳನೋಟ!!!


ಒಬ್ಬ ಓದುಗನಾಗಿ ನಾನು ಕೆಲವೊಮ್ಮೆ ಯೋಚಿಸುವಾಗ, ನನ್ನನ್ನು ಕಾಡುವ ಕೆಲವು ಪ್ರಶ್ನೆಗಳಿವು. ನಾನು ಏಕೆ ಓದುತ್ತೇನೆ? ಯಾವ ರೀತಿಯ ಪುಸ್ತಕ ನನಗೆ ಹಿಡಿಸುತ್ತದೆ? ಯಾವು ಹಿಡಿಸುವುದಿಲ್ಲ? ಯಾವ ಸಾಹಿತಿಯನ್ನು ಮೆಚ್ಚುತ್ತೇನೆ? ನಾನೆಷ್ಟೆ ತಲೆ ಕೆಡಿಸಿಕೊಂಡು ಓದಿದರೂ ನನಗೆ ಕಾವ್ಯ, ಕವನ, ಕವಿತೆಗಳು ನೆನಪಲ್ಲಿ ಉಳಿಯುವುದಿಲ್ಲ. ಕೆಲವೊಂದು ತಲೆಗೆ ಹತ್ತುವುದಿಲ್ಲ. ಆದರೇ, ಗದ್ಯ, ಕಥೆ, ಕಾದಂಬರಿ ಆ ರೀತಿಯಲ್ಲ. ಅದರಲ್ಲಿಯೂ ಪರಿಸರ, ಪ್ರಕೃತಿ, ನಿಗೂಢತೆಯಿರುವ ಬರವಣಿಗೆಗಳು ಸೆಳೆಯುತ್ತವೆ. ಬಿಡುವಿಲ್ಲದ ಸಮಯದಲ್ಲಿಯೂ, ಸುಸ್ತಾದ ಹೊತ್ತಿನಲ್ಲಿಯೂ ಓದಿಸಿಕೊಂಡು ಹೋಗುವ ಸಾಮರ್ಥ್ಯ ಕೆಲವರಿಗೆ ಇರುತ್ತದೆ.

ನನ್ನ ಹಿಂದಿನ ಬರಹದಲ್ಲಿ, ಶ್ರೀಯುತ ಗುರುಪಾದ ಬೇಲೂರುರವರ ಬರವಣಿಗೆಯ ಕುರಿತು ಬರೆದಿದ್ದು, ಅದರ ವಿಸ್ತೃತ ರೂಪವಾಗಿ ಈ ಲೇಖನವನ್ನು ಅಥವ ನನ್ನ ಅಭಿಪ್ರಾಯವನ್ನು ತಮ್ಮ ಮುಂದಿಡುತ್ತಿದ್ದೇನೆ. ಅವರ ದೇವರ ಕಾಡು ಕಥಾಸಂಕಲನವನ್ನು ಓದಿದ ಮೇಲೆ, ಅವರ ಇನ್ನಷ್ಟು ಕಥೆಗಳನ್ನು ಓದಬೇಕೆಂಬ ಹಂಬಲ ಬಂದದ್ದು ಸತ್ಯ. ಅದಕ್ಕೆ ಮೂಲ ಕಾರಣ, ಅವರು ಆಯ್ಕೆ ಮಾಡಿಕೊಳ್ಳುವ ವಿಷಯ ಒಂದಾದರೆ ಅದನ್ನು ಪ್ರಸ್ತುತ ಪಡಿಸುವ ರೀತಿ ಮತ್ತೊಂದು. ಎರಡನೆಯ ಕಥಾಸಂಕಲನವನ್ನು ಓದಲು ಶುರು ಮಾಡಿದ್ದೇನೆ. ಅದರಲ್ಲಿನ ಅಗರ್ತ ಎಂಬ ನೀಲ್ಗತೆಯನ್ನು ಈಗಾಗಲೇ ಓದಿದ್ದೇನೆ. ಅಲ್ಲಿನ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತೇನೆ.

ನಾನು ಪುಸ್ತಕ ಪಡೆದಾಗ ಮೊದಲಿಗೆ ಮುನ್ನುಡಿಯನ್ನು ಓದಿದೆ. ಸುಂದರವಾಗಿ ಮತ್ತು ಸೂಕ್ಷö್ಮವಾಗಿ ಗ್ರಹಿಸಿ ಮುನ್ನುಡಿ ಬರೆದಿರುವುದು ಪುಸ್ತಕದಲ್ಲಿ ಪ್ರಮುಖ ಅಂಶ. ಮುನ್ನುಡಿಗಳು ಅದೆಷ್ಟೋ ಬಾರಿ ಆಸಕ್ತಿಯನ್ನು ಕೆರಳಿಸುತ್ತವೆ. ಅದರಂತೆಯೇ, ಕಂನಾಡಿಗ ನಾರಯಣ (ವೈಯಕ್ತಿಕವಾಗಿ ತಿಳಿದಿಲ್ಲ), ಅವರು ಬರೆದಿರುವ ಮುನ್ನುಡಿ ನನ್ನಲ್ಲಿ ಆಸಕ್ತಿ ಮೂಡಿಸಿದಂತೂ ಸತ್ಯ. ಅದರಂತೆಯೇ, ನಾನು ಓದಲು ಶುರು ಮಾಡಿಕೊಂಡಾಗ, ರೈಲಿನಲ್ಲಿ ಮನೆ ತಲುಪುವ ತನಕ ಒಂದು ಗಂಟೆಗಳು ಸುಮಾರು ಅರ್ಧದಷ್ಟು ಕಥೆಯನ್ನು ಓದಿಸಿಕೊಂಡಿತು. ಮನೆಗೆ ಹೋದ ತಕ್ಷಣ, ಎಲ್ಲವನ್ನು ಬದಿಗಿಟ್ಟು ಮತ್ತೆ ಓದಲು ಶುರುಮಾಡಿದೆ. ಕಥೆಯಲ್ಲಿ ರೋಚಕತೆ, ಪ್ರಕೃತಿಯ ವಿಸ್ಮಯಗಳನ್ನು ಕಣ್ಣಿಗೆ ಕಟ್ಟಿದಂತೆ, ನಮ್ಮ ಕಣ್ಣೆದುರೇ ನಡೆಯುತ್ತಿದೆ ಎನ್ನುವಂತೆ ತೆರೆದಿಟ್ಟಿರುವುದು ಲೇಖಕರಿಗೆ ಸಾಹಿತ್ಯ, ವಿಜ್ಞಾನ, ಸಂಶೋಧನೆ ಮತ್ತು ಸಾಹಸಮಯದ ಕಡೆಗಿರುವ ಹಿಡಿತವನ್ನು ತೋರಿಸುತ್ತದೆ.

ಭೂಗರ್ಭದಲ್ಲೊಂದು ಲೋಕವಿದೆ ಎನ್ನುವುದನ್ನು ಕಲ್ಪಿಸಿಕೊಳ್ಳುವುದು, ಅಲ್ಲೊಂದು ದೇವಲೋಕಕ್ಕೆ ಸಮನಾಗಿರುವುದು, ಸ್ವಾರ್ಥವಿಲ್ಲದ ಮನಸ್ಸಿನವರು ಅಲ್ಲಿಗೆ ತಲುಪಬಹುದು. ನಿಸರ್ಗಮಾತೆ ನೀಗೂಢತೆಯ ಜೊತೆಗೆ ಪ್ರೀತಿಯನ್ನು ಹಂಚುವ ದೈವತ್ವವನ್ನು ತೋರಿಸಿರುವುದು, ನಮಗೆ ಅರಿಯದಂತೆ ಯಾವುದೋ ಸಿನೆಮಾ ನೋಡಿದಂತೆ ಭಾಸವಾಗುತ್ತದೆ. ನನಗೆ ಇಲ್ಲಿ ನೆನಪಾದದ್ದು, ಬಬ್ರುವಾಹನ ಸಿನೆಮಾ ನೋಡುವಾಗ ಡಾ. ರಾಜ್ ಕುಮಾರ್ (ಅರ್ಜುನ) ನಾಗಾಲೋಕಕ್ಕೆ ಹೋಗುವುದು. ಅಲ್ಲೊಂದು ಲೋಕವಿದ್ದು, ಅಲ್ಲೊಂದು ಸಾಮ್ರಾಜ್ಯವೇ ಇರುತ್ತದೆ. ಅದು, ಕಲ್ಪನೆಯೋ, ಸತ್ಯವೋ ಅದರ ಅವಶ್ಯಕತೆಯಿರುವುದಿಲ್ಲ. ಕಥೆಯಲ್ಲಿ ರೋಚಕತೆ ಮುಖ್ಯವಾಗುತ್ತದೆ.

ಅಗರ್ತದಲ್ಲಿಯೂ ಕೂಡ ಒಮ್ಮೊಮ್ಮೆ ಆಧ್ಯಾತ್ಮದ ಕಡೆಗೆ ಎಳೆದರೆ, ಮತ್ತೊಮ್ಮೆ ವಿಜ್ಞಾನದ ಕಡೆಗೆ, ತಾಂತ್ರಿಕತೆಯ ಕಡೆಗೆ, ಗುಹೆಗಳ ಸಂಶೋಧನೆಯ ಕಡೆಗೆ, ಮತ್ತೊಮ್ಮೆ ಇತಿಹಾಸ, ಪುರಾಣ ಹೀಗೆ ಎಲ್ಲಾ ಆಯಾಮಗಳಿಂದ ಎಲ್ಲಿಯೂ ಅತಿರೇಕವೆನಿಸದೆ ರೂಪಿಸಿರುವುದು ಖುಷಿಕೊಡುತ್ತದೆ. ಅದರಂತೆಯೇ, ಮುಂದಿನ ಕಥೆ ಒಡಲಾನಲ ಕಥೆಯು ರೋಚಕತೆಯ ಹಾದಿಯಲ್ಲಿದೆ. ಸದ್ಯದಲ್ಲಿ ಅರ್ಧ ಓದಿರುತ್ತೇನೆ, ಓದುತ್ತಿರುತ್ತೇನೆ. ಭೂಗರ್ಭದಲ್ಲಿರುವ ಶಾಖಾವನ್ನು ಬಳಸಿ ಪ್ರಪಂಚಕ್ಕೆ ಇಂಧನವನ್ನು (ಶಕ್ತಿಯನ್ನು) ಒದಗಿಸಬಹುದೆಂಬ ಕೌತುಕತೆಯನ್ನು ಲೇಖಕರು ಮುಂದಿಡುತ್ತಿದ್ದಾರೆ. ಅದರಲ್ಲಿಯೂ, ಪುರಾಣದ ಕಥೆ, ಆರ್ಯರು ಮತ್ತು ದ್ರಾವಿಡರು, ಘಟ್ಟಗಳು, ಮಿಲಿಯನ್ ವರ್ಷಗಳ ಹಿಂದೆ ಆಗಿರುವ ಬದಲಾವಣೆಗಳು, ಭೂವಿಜ್ಞಾನದ ಅನೇಕ ಮಾಹಿತಿಗಳು ಕಥಯೊಳಗೆ ಬೆಸೆದಿರುವುದು, ಇದು ಕಥೆಯೋ, ವಿಜ್ಞಾನದ ಸಿನೆಮಾವೋ, ಸಂಶೋಧನಾ ಕಥೆಯೋ ಹೀಗೆ ಅನಿಸುವುದು ಹೌದು.

ನಾನು ಅನೇಕ ಬಾರಿ, ಹಲವರೊಂದಿಗೆ ಚರ್ಚಿಸಿದ್ದು ಹೌದು. ತೇಜಸ್ಚಿ ಮತ್ತು ಕಾರಂತರನ್ನು ಬಿಟ್ಟರೇ ಕನ್ನಡದಲ್ಲಿ ವಿಜ್ಞಾನವನ್ನು ಕಥೆಯೊಳಗೆ ಹೆಣೆದು ಆಸಕ್ತಿಮೂಡಿಸುವ ಬರಹಗಾರರು ಸಿಕ್ಕಿಲ್ಲ. ಅನೇಕರು, ಇಂಟರ್‌ನೆಟ್‌ನಲ್ಲಿ ಸಿಗುವ ಮಾಹಿತಿಯನ್ನೇ ಬರೆದು ಬೋರಾಗಿಸುತ್ತಾರೆ, ಆಗಿಸುತ್ತಾ ಬಂದಿದ್ದಾರೆ ಕೂಡ. ಆ ಹಿನ್ನಲೆಯಲ್ಲಿ ಶ್ರೀಯುತರ ಬರವಣಿಗೆ ಮತ್ತಷ್ಟು ಹೆಚ್ಚಲಿ. ಪುಸ್ತಕ ಶುರುವಿನಲ್ಲಿ ಹೇಳುವಂತೆ, ಕಥೆಗಾರ ಕಥೆಯನ್ನು ಸೃಷ್ಟಿಸುವುದಿಲ್ಲ, ಕಥ ತಾನಾಗಿಯೇ ಬರೆಸಿಕೊಳ್ಳುತ್ತದೆ. ಅದರಂತೆಯೇ, ಪರಿಸರ, ಪ್ರಕೃತಿಯ ಒಡಲಿನ ಕಥೆಗಳೆಲ್ಲಾ ಹೊರಬರಲಿ, ಓದುಗ ಮನಸ್ಸುಗಳು ಮುದವಾಗಲಿ.

28 ಅಕ್ಟೋಬರ್ 2019

ದೀಪಾವಳಿಯೆಂದರೇ ಬರೀ ಪಟಾಕಿಯೇ?


ಇತ್ತೀಚೆಗೆ ಎಂದರೇ ಕಳೆದ ಹತ್ತು ವರ್ಷಗಳಿಂದ ನಾನು ಗಮನಿಸಿರುವುದನ್ನು ತಮ್ಮ ಮುಂದಿಡುತ್ತಿದ್ದೇನೆ, ಈ ಅಂಶಗಳು ತಮ್ಮ ಗಮನಕ್ಕೂ ಬಂದಿರುತ್ತದೆ. ಆದರೇ, ಅಷ್ಟು ಸೂಕ್ಷ್ಮವಾಗಿ ಗಮನಿಸಿರುವುದಿಲ್ಲವೆಂಬುದು ನನ್ನ ವಿಶ್ವಾಸ. ಹಾಗಾಗಿಯೇ, ತಮ್ಮ ಹತ್ತು ನಿಮಿಷಗಳನ್ನು ನನ್ನ ಮಾತಿಗೆ ಮೀಸಲಿಡಿ. ದೀಪಾವಳಿಯ ಆಚರನೆಯನ್ನೇ ತೆಗೆದುಕೊಂಡು ಪರಿಶೀಲಿಸೋಣ. ನೀವು ನಿಮ್ಮ ಬಾಲ್ಯದ ದೀಪವಾಳಿಯನ್ನೊಮ್ಮೆ ನೆನಪಿಸಿಕೊಳ್ಳಿ, ಅದನ್ನು ಈಗ ಆಚರಿಸುತ್ತಿರುವುದಕ್ಕೆ ಹೋಲಿಕೆ ಮಾಡಿನೋಡಿ.

ನನ್ನ ಬಾಲ್ಯದ ದೀಪಾವಳಿಯನ್ನೊಮ್ಮೆ ಹಂಚಿಕೊಳ್ಳುತ್ತೇನೆ. ನಮ್ಮಲ್ಲಿ ಆಯುಧ ಪೂಜೆ ದೊಡ್ಡ ಹಬ್ಬ ಹಾಗಾಗಿ, ದೀಪಾವಳಿಯೆಂದರೆ ಬೇರೆಯವರ ಅಂದರೆ ನೆಂಟರಿಷ್ಟರ ಮನೆಗೆ ಹೋಗುವುದು ವಾಡಿಕೆ. ಆಯುಧಪೂಜೆಗೆ ನಮ್ಮಲ್ಲಿಗೆ ಅವರೆಲ್ಲರೂ ಬಂದಿರುವ ಕಾರಣ ಕೂಡ ಒಂದು. ನಮ್ಮಲ್ಲಿ ದೀಪಾವಳಿಯ ಅಮವಾಸ್ಯೆಯ ದಿನದಂದು, ಸಂಜೆಯ ವೇಳೆಗೆ ಮದ್ದುಮೆಳೆ ಎಂಬುದನ್ನು ತರುತ್ತೇವೆ. ಅದರ ಕಾರಣವನ್ನು ಈ ಹಿಂದೆ ಒಮ್ಮೆ ಬರೆದಿದ್ದೆ, ದೀಪಾವಳಿ ಅಥವಾ ಕಾರ್ತಿಕ ಮಾಸ ಶುರುವಾದರೆ, ಕಾಲಗಳು ಬದಲಾಗುತ್ತವೆ. ಮುಂಗಾರು ಮುಗಿದು, ಹಿಂಗಾರಿನ ಜೊತೆಗೆ ಚಳಿಗಾಲವೂ ಆರಂಭವಾಗುತ್ತದೆ. ಎಲೆ ಉದುರುವ ಸಮಯವೂ ಬರುತ್ತದೆ. ಈ ಸಮಯದಲ್ಲಿ, ಸೂಕ್ಷ್ಮಜೀವಿಗಳು ಹೆಚ್ಚಾಗುತ್ತವೆ. ಆದ್ದರಿಂದ, ಹಿಂದಿನವರು, ವಿವಿಧ ಔಷಧಿಗುಣಗಳಿರುವ ಎಲೆಗಳನ್ನು ಅಮವಾಸ್ಯೆಯ ದಿನ ಕತ್ತರಿಸಿ, ಮನೆಯ ಸೂರಿಗೆ, ತಿಪ್ಪೆಗೆ, ಕೊಟ್ಟಿಗೆಗಳಿಗೆ ಕಟ್ಟುತ್ತಿದ್ದರು, ಆ ಗಿಡಗಳೆಂದರೇ, ನೇರಳೆ, ಮತ್ತಿ, ಈಚಲು, ಬಿದಿರು, ಸೀಬೆ, ಉತ್ತರಾಣಿ, ಗೌರಿ ಹೂವು, ಭೀಮನ ಹುಲ್ಲು, ಇತ್ಯಾದಿ.,

ಹಬ್ಬದ ದಿನ ದನಕರುಗಳನ್ನು ತೊಳೆದು, ಉಂಬ್ಲಿ ಹಂಬನ್ನು ದನಗಳಿಗೆ ಕಟ್ಟುತ್ತಾರೆ. ತದನಂತರ ಎಣ್ಣೆ ಹಚ್ಚಿ ಸ್ನಾನ ಮಾಡಿ ಕಜ್ಚಾಯ ಸಿಹಿ ಊಟಮಾಡುವುದು ವಾಡಿಕೆಯಾಗಿತ್ತು. ಪಟಾಕಿಯೆಂದರೆ, ಕಲ್ಲಿನಿಂದ ಕೆಚ್ಚುವ ಪಟಾಕಿ, ಸುರ್ ಸುರ್ ಬತ್ತಿ, ಹೆಚ್ಚೆಂದರೆ ಒಂದು ಲಕ್ಷ್ಮಿ ಪಟಾಕಿ, ಒಂದೆರಡು ಆನೆ ಪಟಾಕಿ, ಈ ಅಟಮ್ ಬಾಂಬ್, ರಾಕೆಟ್‍ಗಳ ಸುದ್ದಿಯೇ ಇರಲಿಲ್ಲ. ನಮ್ಮೂರು ಕೊಣನೂರಿನಿಂದ ಸುಮಾರು ನಾಲ್ಕು ಕಿಮಿ ಇತ್ತು. ಕೊಣನೂರು ಹೋಬಳಿಯ ಕೇಂದ್ರವಾದರೂ ಅಲ್ಲಿ ಬಸ್ ಸ್ಟಾಂಡ್ ಎದುರಿನ ಶೆಟ್ಟರ ಅಂಗಡಿಯಲ್ಲಿ ಬಿಟ್ಟರೇ ಬೇರೆಲ್ಲೂ ಪಟಾಕಿಗಳು ಸಿಗುತ್ತಿರಲಿಲ್ಲ. ನಮ್ಮೂರಿನ ಅಂಗಡಿಯವರು ಅಲ್ಲಿಂದ ಸ್ವಲ್ಪ ತಂದು ಮಾರುತ್ತಿದ್ದರು. ಪಟಾಕಿ ಹೊಡೆಯುವ ಕೋವಿಗೆ ಮೂರು ರೂಪಾಯಿ ಇರುತ್ತಿತ್ತು, ಅದಕ್ಕೆ ಮೂರು ರೂಪಾಯಿ ಕೊಡುವುದಕ್ಕಿಂತ ಕೆಚ್ಚುವ ಪಟಾಕಿಯನ್ನು ತೆಗೆದುಕೊಂಡು ಕಲ್ಲಲ್ಲಿ ಕೆಚ್ಚಿದರೆ ಆಯಿತೆಂದು ಕೆಚ್ಚುತ್ತಿದ್ದೆವು, ಕೆಲವೊಮ್ಮೆ ನಟ್ ಮತ್ತು ಬೋಲ್ಟ್ ನಡುವೆ ಪಟಾಕಿಯನ್ನು ಸೇರಿಸಿ ಕಲ್ಲಿನ ಅಥವಾ ಗಟ್ಟಿ ನೆಲಕ್ಕೆ ಕೆಚ್ಚುತ್ತಿದ್ದೆವು. ದೊಡ್ದವರು (ವಯಸ್ಸಿನಲ್ಲಿ) ಪಟಾಕಿ ಹೊಡೆದ್ದದ್ದನನ್ನು ನಾನು ಕಂಡೇ ಇಲ್ಲ. ಪಟಾಕಿ ಮಕ್ಕಳಿಗೆ ಮೀಸಲೆಂದರೂ ತಪ್ಪಿಲ್ಲ.
ಆದರೇ ಈಗ ಆಗುತ್ತಿರುವ ವಿದ್ಯಾಮಾನಗಳೇ ಬೇರೆ. ನಾನು ಅದರಲ್ಲಿಯೂ ಬೆಂಗಳೂರಿನಲ್ಲಿ ನೋಡುವಾಗ ಮಕ್ಕಳಿಗಿಂತ ದಾಂಡಿಗರೇ ಮುಕ್ಕಾಲು ಚಡ್ಡಿ ಹಾಕಿಕೊಂಡು ಉದ್ದುದ್ದ ರಾಕೇಟ್, ದೊಡ್ಡದಾಗಿ ಶಬ್ಧ ಬರುವ ಪಟಾಕಿ ಹೊಡೆಯುತ್ತಿದ್ದಾರೆ. ಪಟಾಕಿಯನ್ನು ನಾನು ಮಾಲಿನ್ಯದ ಕುರಿತಾಗಿ ಹೇಳಿದರೇ ಕೆಲವರಿಗೆ ಕೋಪ ಬರುತ್ತದೆ ಮತ್ತು ವಾದಕ್ಕಿಳಿಯುತ್ತಾರೆ. ಬೆಂಗಳೂರಿನಂತಹ ಹೊಗೆ ನಗರದಲ್ಲಿ ದೀಪಾವಳಿಯ ಸಮಯದಲ್ಲಿ ನಾಲ್ಕೈದು ದಿನ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗುತ್ತದೆ. ಮತ್ತೊಂದು ವಾದವೆಂದರೇ, ಧರ್ಮ ವಿರೋಧಿಗಳು ಎಂಬಂತೆ ಬಿಂಬಿಸುವುದು, ಅಥವಾ ಬೇರೆ ಧರ್ಮದವರು ಮಾಡುವ ಮಾಲಿನ್ಯಕ್ಕೆ ನಿಮ್ಮ ಉತ್ತರವೇನು? ಎನ್ನುವುದು. ಪರಿಸರ ಮಾಲಿನ್ಯ ಒಂದೆಡೆಗೆ ಆದರೇ, ಸುರಕ್ಷತೆ ಮತ್ತೊಂದು. ನಾನು ಕಳೆದ ಮೂರು ವರ್ಷದಿಂದ ಗಮನಿಸುತ್ತಾ ಬಂದಿದ್ದೇನೆ. ನನ್ನ ಮಗಳಿಗೆ 2 ವರ್ಷ ತುಂಬಿದೆ, ಮೊದಲನೆ ದೀಪಾವಳಿಯಲ್ಲಿ ಅವಳಿಗೆ ಕೇವಲ 3 ತಿಂಗಳಾಗಿತ್ತು. ಈ ಮೂರು ವರ್ಷದಲ್ಲಿಯೂ ಈ ಹಬ್ಬದ ಸಮಯದಲ್ಲಿ ಕಣ್ಮುಚ್ಚಿ ಮಲಗುತ್ತಿಲ್ಲ. ಶಬ್ದಕ್ಕೆ ಬೆಚ್ಚಿ ಬೀಳುತ್ತಾಳೆ. ಇದೇ ರೀತಿ ವಯಸ್ಸಾದವರ ಕಥೆಯೂ ಹೌದು. ಪಕ್ಕದ ಮನೆಯವ ನಾಯಿಯ ಗೋಳಂತೂ ಹೇಳುವಂತಿಲ್ಲ. ಪಟಾಕಿ ಸದ್ದಿಲ್ಲದೇ ಕೂಡ ಹೊಡೆಯಬಹುದು, ಮನೆ ಮೇಲಕ್ಕೆ ಯುದ್ದ ವಿಮಾನ ಬಂದು ಅಪ್ಪಳಿಸಿದಂತೆ ಸದ್ದು ಮಾಡುವುದು ಯಾವ ಧರ್ಮಾಚಾರಣೆ? ಮುಂಜಾನೆ ಐದು ಗಂಟೆಗೆ ಎದ್ದು ಪಟಾಕಿ ಹೊಡೆಯಬೇಕೇ? ರಾತ್ರಿ ಹನ್ನೆರಡಾದರೂ ಹೊಡೆಯುತ್ತಿರಬೇಕೆ? ರಸ್ತೆಯಲ್ಲಿ ನಡೆಯುವಾಗ ಯಾವ ಕಡೆಯಿಂದ ಬಂದು ಅಪ್ಪಳಿಸುತ್ತದೆ ಎಂಬ ಭಯದಿಂದ ನಡೆಯಬೇಕು. ಪಟಾಕಿ ಹೊಡೆದು ರಸ್ತೆಯಲ್ಲ ಗಲೀಜು ಮಾಡಿದವರು, ಕನಿಷ್ಟ ಸೌಜನ್ಯವೂ ಇಲ್ಲದೇ ಇರುವುದು ವಿಪರ್ಯಾಸ. ಮುಂಜಾನೆ ಪೌರಕಾರ್ಮಿಕರು ರಸ್ತೆ ಗುಡಿಸುವಾಗ ಯೋಚನೆ ಬಂತು. ಅವರ ಮನೆಯಲ್ಲಿ ಪಟಾಕಿ ಹೊಡೆದಿದ್ದರೋ ಇಲ್ಲವೋ ಉಳ್ಳವರು ಹೊಡೆದ ಪಟಾಕಿಯ ಕಸವನ್ನು ಗುಡಿಸಬೇಕು.

ದೀಪಗಳು ಕೂಡ ಮರೆಯಾಗಿ ಸಿರಿಯಲ್ ಸೆಟ್ ಹಾಕಿ ಅದೇ ಬೆಳಕು ಎಂದು ಭ್ರಮಿಸುತ್ತಿದ್ದೇವೆ. ದೀಪಗಳು ಕೂಡ ಚೈನಾದಿಂದ ಬಂದಿರುವುದು ದುರಂತವಾಗಿದೆ. ಮಣ್ಣಿನ ದೀಪಗಳನ್ನು ಅಮ್ಮ ಕಾರ್ತಿಕ ಮುಗಿದ ತಕ್ಷಣ ತೆಗೆದಿಟ್ಟು, ಮುಂದಿನ ವರ್ಷದ ತನಕ ಜೋಪಾನವಾಗಿರಿಸುತ್ತಿದ್ದರು. ಪ್ರತಿ ಧರ್ಮವೂ ಪರಿಸರಕ್ಕೆ ಹೆಚ್ಚಿನ ಒತ್ತನ್ನು ನೀಡಿದೆ. ಅದನ್ನು ಮರೆತು ಅದನ್ನೇ ನಾಶ ಮಾಡುವ ಹಬ್ಬಗಳು ಕಡಿಮೆಯಾಗಲಿ. ವಿವಿಧತೆಯಲ್ಲಿ ಏಕತೆ ಎಂಬಂತೆ ನಮ್ಮೂರಿನಲ್ಲಿ ಈ ಹಬ್ಬದಂದು, ಆಚಾರರು, ಮಡಿವಾಳರು, ದಾಸಯ್ಯನ ಮನೆಯಿಂದ ಬೂದಿ ತಂದು ಮಿಶ್ರಣ ಮಾಡಿ ರಂಗೋಲಿ ಬಿಡುತ್ತೇವೆ. ನಮ್ಮಲ್ಲಿದ್ದ ಸಂಪ್ರದಾಯಗಳನ್ನು ಮೂಲೆಗುಂಪಾಗಿಸಿ ನಮಗೆ ಬೇಕಿರುವ ಮೋಜುಮಸ್ತಿಗೆ ಧರ್ಮದ ಬಣ್ಣ ಹಚ್ಚುತ್ತಿರುವುದಕ್ಕೆ ಏನು ಹೇಳಬೇಕು!

12 ಅಕ್ಟೋಬರ್ 2019

ನಮ್ಮ ಬದುಕಿಗೆ ನಾವೇ ಗುರುಗಳು: ಕಲಿಯುವ ಮುನ್ನ ಎಚ್ಚರ


                                                           Image result for self assessment
ನಮ್ಮ ಆಲೋಚನೆಗಳು ನಮ್ಮನ್ನು ಕಾಡಿದಷ್ಟು, ತಿದ್ದಿದಷ್ಟು, ತೀಡಿದಷ್ಟು ಮತ್ತಾವುದೂ ನಮ್ಮನ್ನು ಕಾಡುವುದಿಲ್ಲ. ಜೀವನದ ಪಯಣದಲ್ಲಿ ಯಾವುದು ಸರಿ, ಯಾವುದು ತಪ್ಪು, ಎಡವಿದ್ದೆಲ್ಲಿ? ಬಿದ್ದಿದ್ದೆಲ್ಲಿ? ಬಿದ್ದೇನಾ? ಎದ್ದೇನಾ? ಬಿದ್ದರೇ ಎಲ್ಲಿ ಬಿದ್ದೆ? ಯಾರು ಬೀಳಿಸಿದರು? ಎದ್ದರೇ ಯಾರು ಎತ್ತಿದರು? ಹೀಗೆ ನೂರೆಂಟು ಆಲೋಚನೆಗಳು ನಮ್ಮೊಳಗೆ ಹರಿದಾಡುತ್ತಿರುತ್ತವೆ. ಎಲ್ಲರಿಗೂ ಈ ರೀತಿಯಾಗಿ ಕಾಡುತ್ತದೆಯೇ? ನನ್ನನಿಸಿಕೆ ಪ್ರಕಾರ ಹೌದು. ಆದರೇ, ಎಲ್ಲರೂ ತಮ್ಮನ್ನು ಮುಕ್ತವಾಗಿ ವಿಮರ್ಶೆಗೆ ಒಳಪಡಿಸಿಕೊಳ್ಳುತ್ತಾರೆಯೇ? ಎಂದರೆ ಅದಕ್ಕೆ ನನ್ನ ಉತ್ತರ, ಇಲ್ಲಾ ಸಾಧ್ಯವೇ ಇಲ್ಲ. ನಾನು ಆಗ್ಗಾಗ್ಗೆ, ಪ್ರತಿಪಾದಿಸುವ ಒಂದು ವಿಚಾರವೆಂದರೇ, ಮೊದಲು ನಮಗೆ ನಾವು ಬೆತ್ತಲಾಗಬೇಕು. ಮಡಿವಂತಿಕೆಯ ಸೋಗಿನಿಂದ, ಒಳ್ಳೆತನವೆಂಬ ಅಫೀಮಿನಿಂದ ಹೊರಬರಬೇಕು. ನಾವು ಏನು ಎನ್ನುವುದನ್ನು ನಾವು ಮೊದಲು ಅರಿಯಬೇಕು. ಒಳ್ಳೆಯದು ಕೆಟ್ಟದ್ದು ಎಂಬುದರ ಬಗ್ಗೆ ನನಗೆ ಅಷ್ಟು ಆಸಕ್ತಿಯಿಲ್ಲ. ಇದನ್ನು ನಾನು ಬಹಳಷ್ಟು ಬಾರಿ ಪ್ರಯೋಗಿಸಿದ್ದೇನೆ. ಒಬ್ಬನಿಗೆ ಸರಿಯೆನಿಸಿದ್ದು, ಮತ್ತೊಬ್ಬನಿಗೆ ತಪ್ಪೆನಿಸಬಹುದು. ಇದು ಎಲ್ಲಾ ಹಂತದಲ್ಲಿಯೂ ಹೌದು. ಮಾಂಸಹಾರಿಗೆ ಇಷ್ಟವಾಗುವ ಖಾದ್ಯ, ಸಸ್ಯಹಾರಿಗೆ ಹಿಂಸೆಯೆನಿಸಬಹುದು, ಕೆಲವರಿಗೆ ದೈಹಿಕ ಹಿಂಸೆ ಮಾತ್ರ ಹಿಂಸೆಯೆನಿಸುತ್ತದೆ, ಮಾನಸಿಕ ಹಿಂಸೆ ಏನೂ ಅನಿಸದೆ ಇರಬಹುದು. ಅದು ಅವರವರ ವಿವೇಚನೆಗೆ ಬಿಟ್ಟದ್ದು. 
ನಮ್ಮೊಳಗೆ ನಡೆಯುವ ವಿದ್ಯಮಾನಗಳನ್ನು ನಾವು ಗ್ರಹಿಸಬೇಕು. ಏನು ನಡೆಯಿತ್ತಿದೆಯೆಂಬುದನ್ನು ಅರಿಯಬೇಕು. ಇತ್ತೀಚಿನ ದಿನಗಳಲ್ಲಿ ಗಮನಿಸಿದರೆ, ಅಯ್ಯೋ ಟೈಮ್ ಎಲ್ಲಿದೆ ಸಾರ್, ಎನ್ನವವರೇ ಹೆಚ್ಚು. ಬಿಟ್ಟರೇ, ನಮ್ಮ ಹಣೆಬರಹ, ಟೈಮ್ ಎಂದು ಕೈ ಚೆಲ್ಲವವರಿಗೇನೂ ಕಡಿಮೆಯಿಲ್ಲ. ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲಾಗದೇ ಕಂಗೆಟ್ಟವರು ಮಾತ್ರ ಇದೆಲ್ಲವನ್ನೂ ಹೇಳಬಹುದು. ಕುಡಿತಕ್ಕೆ ದಾಸ್ಯನಾದವನು, ಕುಡಿತವನ್ನು ಕೆಟ್ಟದ್ದು ಎನ್ನಲಾರ, ಅಥವಾ ನಾನು ಕಲಿತು ನನ್ನ ಆರೋಗ್ಯ, ಜೀವನ ಹಾಳಾಗುತ್ತಿದೆ ಎನ್ನುವುದನ್ನು ಒಪ್ಪಲಾರ. ನಾನು ದುಡಿಯುತ್ತೇನೆ, ನಾನು ಕುಡಿಯುತ್ತೇನೆ? ಹೋದರೇ ನನ್ನ ಕಿಡ್ನಿ, ನನ್ನ ಲಿವರ್, ನಾನು ಬೇರೋಬ್ಬರ ದುಡ್ಡಲ್ಲಿ ಕುಡಿದಿಲ್ಲ ಎಂದು ವಾದಿಸುತ್ತಾನೆ. ನಾವು ನಮ್ಮ ತಪ್ಪನ್ನು ಮುಚ್ಚಿಡಲು, ನಾವು ಸರಿಯೆನಿಸಿಕೊಳ್ಳಲು ಬೇರೆಯವರನ್ನು ತಪ್ಪಿತಸ್ಥರನ್ನಾಗಿಸಲು ಪ್ರಯತ್ನಿಸುತ್ತೇವೆ.

ಕಾರಣವಿಲ್ಲದ ಬದುಕೆಲ್ಲಿದೆ? ಕಾರಣವಿಲ್ಲದೆ ಇರಲು ಸಾಧ್ಯವೇ? ಮುಂಜಾನೆ ಬೇಗ ಏಳದೆ ಇರುವುದಕ್ಕೆ ಕಾರಣವಿದೆ, ಕಚೇರಿಗೆ ಲೇಟಾಗಿ ಬರುವುದಕ್ಕೆ ಕಾರಣವಿದೆ. ಕುಡಿಯುವುದಕ್ಕೆ ಸೇದುವುದಕ್ಕೆ ಕಾರಣವಿದೆ. ಸ್ನಾನ ಮಾಡದೇ ಗಲೀಜಾಗಿರುವುದಕ್ಕೂ ಇದೆ. ಮಾಡುವ ಕೆಲಸ ನನ್ನದು, ನಾನು ಮಾಡಲೇಬೇಕೆಂಬ ದೃಢಕಲ್ಪನೆಯೊಂದಿದ್ದರೆ ಈ ಕಾರಣಗಳ ಸರಮಾಲೆ ಹತ್ತಿರವೂ ಸುಳಿಯುವುದಿಲ್ಲ. ನಾನು ನನ್ನನ್ನು ಅತಿಯಾಗಿ ವಿಮರ್ಶೆಗೆ ಒಳಪಡಿಸಿಕೊಳ್ಳುತ್ತೇನೆ. ಕಾರಣ ಸರಳ. ನಾನು ನನ್ನಲ್ಲಾಗುತ್ತಿರುವ ಬದಲಾವಣೆಯನ್ನು ಗಮನಿಸಿದರೆ, ನನ್ನ ಚಿತ್ತ ನನ್ನ ಪ್ರಗತಿಯತ್ತ ಸಾಗುತ್ತದೆ. ಎಷ್ಟೋ ದೂರ ಪಯಣಿಸಿದ ಮೇಲೆ, ನಾನು ದಾರಿ ತಪ್ಪಿದೆಯೆಂದರೇ! ಅಥವಾ ನೀ ಹೋಗುತ್ತಿರುವ ಹಾದಿ ತಪ್ಪೆಂದು ಬೇರೆಯವರು ಹೇಳಿದರೇ ಒಪ್ಪುತ್ತೇವಾ? ಸಾಧ್ಯವೇ ಇಲ್ಲ. 

ದಿನ ಕಳೆದಂತೆ ನಮ್ಮ ಆಸಕ್ತಿಗಳು, ಹವ್ಯಾಸಗಳು ನಮ್ಮಿಂದ ದೂರಾಗುತ್ತವೆ. ಕೆಲಸದ ಒತ್ತಡ, ದುಡಿಮೆ, ಮನೆ, ಸಂಸಾರ ಹೀಗೆ ಏನೇನೋ ಸಮಜಾಯಿಸಿ ಕೊಡುತ್ತೇವೆ. ನನ್ನದೇ ಉದಾಹರಣೆ ಕೊಡುವುದಾದರೇ, ಕಳೆದ ಒಂದೆರೆಡು ವರ್ಷದಲ್ಲಿ, ನಾನು ಓದಿದ್ದು ಕಡಿಮೆ, ಬರೆದಿದ್ದಂತೂ ಶೂನ್ಯ, ನನ್ನ ಹವ್ಯಾಸವೆಂದು ತಿಳಿದಿದ್ದು, ಫೋಟೋಗ್ರಫಿ, ನಾಟಕ ನೋಡುವುದು, ಸುತ್ತಾಡುವುದು, ಚಾರಣ, ಸಂಗೀತ, ಪ್ರವಾಸ, ಇವೆಲ್ಲವೂ ಮಾಯವಾಗಿವೆ. ಮುಂಜಾನೆ ಏಳುವುದು, ಆಫೀಸಿಗೆ ಹೋಗುವುದು ಬರುವುದು, ಅದೇ ಚರ್ಚೆ, ಅದೇ ಮಾತುಕತೆ, ಸಂಪೂರ್ಣವಾಗಿ ದಿನಪತ್ರಿಕೆ ಓದಿಯೇ ಎಷ್ಟೋ ದಿನಗಳಾಗಿವೆ, ಸ್ನೇಹಿತರೊಡನೆ ಕುಳಿತು ಹರಟೆ ಹೊಡೆದು ಮನಸ್ಸಾರೆ ನಕ್ಕಿ ಎಷ್ಟೋ ದಿನಗಳಾಗಿವೆ. ಇವೆಲ್ಲವೂ ರಾತ್ರೋರಾತ್ರಿ ಆದ ಬೆಳವಣಿಗೆಗಳಲ್ಲ, ಬೆಳೆಯುತ್ತ ಬೆಳೆಯುತ್ತ ಬಂದವುಗಳು. ಯಾಂತ್ರಕತೆಯ ಬದುಕು ನಮ್ಮದಾದಾಗ ಜೀವನದ ಮೇಲೆ ತಾತ್ಸಾರ ಮೂಡುತ್ತದೆ. ಇನ್ನೇನು ಬದುಕು ಮುಗಿಯಿತು ಎನಿಸುತ್ತದೆ. ನಕರಾತ್ಮಕತೆ ನಮ್ಮನ್ನು ಆಳುತ್ತದೆ. ಕ್ರಿಯಾತ್ಮಕತೆಗೆ ಹಾದಿಯೇ ಇರುವುದಿಲ್ಲ. ಇದ್ದರೂ ಯೋಚಿಸುವುದಿಲ್ಲ. 

ಇದೆಲ್ಲವುದಕ್ಕೂ ಪರಿಹಾರವೇನು? ವಯಸ್ಸಾದಂತೆ ನಮಗೆ ಕಾಡುವ ಮತ್ತೊಂದು ಯೋಚನೆಗಳು ಹೀಗಿರುತ್ತವೆ. ಮೊದಲನೆದಾಗಿ, ನಾವು ಕಳೆದ ದಿನಗಳು ಮತ್ತು ಸಂಪನ್ಮೂಲಗಳು. ಎರಡನೆಯದು, ನಾವು ಪಡೆದ ಲಾಭ ನಷ್ಟ. ನನ್ನ ಸ್ವಂತ ಅನುಭವವನ್ನು ಇಲ್ಲಿಡುತ್ತೇನೆ. ನಾನು ಕನಿಷ್ಟ ಮೂರು ತಿಂಗಳಿಗೊಮ್ಮೆ ನನ್ನ ಮೊಬೈಲಿನಲ್ಲಿರುವ ಎಲ್ಲರಿಗೂ ಫೋನ್ ಮಾಡಿ ಅಥವಾ ಸಂದೇಶ ಕಳುಹಿಸಿ, ಹೇಗಿದ್ದೀರಿ, ಸುಮ್ಮನೆ ಕರೆ ಮಾಡಿದೆ ಅಂತಾ ಮಾಡುತ್ತಿದ್ದೆ. ಸ್ನೇಹಿತರ ಯೋಗ ಕ್ಷೇಮ ವಿಚಾರಿಸುವ ಕ್ರಮವಾಗಿತ್ತು. ನಾನು ಯಾವುದೇ ಹೊರ ಊರಿಗೆ ಹೋದರೇ, ಅಲ್ಲಿ ಯಾವ ಸ್ನೇಹಿತರಿದ್ದಾರೆ, ಅವರನ್ನು ಮಾತನಾಡಿಸುವುದು, ಜೊತೆಗೆ ಕೂತು ಊಟ ಮಾಡುವುದು ಸಾಮಾನ್ಯವಾಗಿತ್ತು. ಇತ್ತೀಚೆಗೆ, ನನ್ನೊಳಗೆ ಆದ ಬದಲಾವಣೆ, ನಾನು ಕರೆ ಮಾಡ್ತೀನಿ, ಕೇಳ್ತೀನಿ, ಅವರುಗಳು ಯಾರೊಬ್ಬರೂ ಮಾಡುವುದಿಲ್ಲವಲ್ಲ. ನೋಡೋಣ, ನಾನು ಮಾಡುವುದೇ ಬೇಡವೆಂದು ತೀರ್ಮಾನಿಸಿದೆ. ಸುಮಾರು 95% ಸ್ನೇಹಿತರು ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚನಿಂದ ನನಗೆ ಕರೆಯೇ ಮಾಡಿಲ್ಲ, ಬಿಡುವಿಲ್ಲದೇಯೂ ಇರಬಹುದು. ನಾನು ಈವರೆಗೂ ಭಾವನಾತ್ಮಕವಾಗಿ ಸ್ನೇಹಿತರಿಗಾಗಿ ಪರದಾಡಿದ್ದು ತಪ್ಪಾ? ನನ್ನ ಅನುಪಸ್ಥಿತಿ ಅವರಿಗೆ ಕಾಡುವುದಿಲ್ಲವೇ ಹೀಗೆ ಆಲೋಚನೆಗಳು ಹರಿದಾಡಿದವು. 

ಪ್ರತಿಯೊಬ್ಬರಿಗೂ ತಮ್ಮದೇ ಆದ ಆದ್ಯತೆಗಳಿರುತ್ತವೆ. ನಾವು ಯಾವುದನ್ನು ಯಾರ ಮೇಲೂ ಹೇರಬಾರದು ಮತ್ತು ನಿರೀಕ್ಷಿಸಲೂ ಬಾರದು. ನಮ್ಮ ಆತ್ಮಕ್ಕೆ ಮನಸ್ಸಿಗೆ ತೃಪ್ತಿಕೊಡಬೇಕು. ಮನಸ್ಸು ಮತ್ತು ಮೆದುಳಿಗೆ ಆಗ್ಗಾಗ್ಗೆ ಆಹಾರ ಕೊಡುತ್ತಿರಬೇಕು. ಮೆದುಳಿಗೆ ಆಹಾರವೆಂದರೆ, ಹೊಸ ಪುಸ್ತಕ, ಹೊಸ ಜನರ ಭೇಟಿ, ಮಾಹಿತಿಗಳು. ಮನಸ್ಸಿಗೆಯೆಂದರೆ, ಪ್ರೀತಿ ಪಾತ್ರರೊಂದಿಗೆ ಸಮಯ, ಹವ್ಯಾಸಗಳು. ಯಾವುದನ್ನು ಹೆಚ್ಚು ಅಂತರವಿರುವಂತೆ ಮಾಡಬಾರದು. ನಮ್ಮ ಹಾದಿಯನ್ನು ನಾವು ಆಗ್ಗಾಗ್ಗೆ ಪರೀಕ್ಷಿಸಿಕೊಳ್ಳುತ್ತಿರಬೇಕು. ಆ ಹಾದಿಯಲ್ಲಿ ಮತ್ತೊಮ್ಮೆ ಹೆಜ್ಚೆ ಇಟ್ಟಿದ್ದೇನೆ. 

ಗುರುಪಾದ ಬೇಲೂರುರವರ ದೇವರಕಾಡಿನ ಸುತ್ತಾಮುತ್ತಾ ಮತ್ತು ಒಳಗೆ ಹೊರಗೆ!!!!

                                                      
ಸುಮಾರು ವರ್ಷವೇ ಆಗಿತ್ತು, ಕಥೆ ಕಾದಂಬರಿ ಓದಿ. ಬಹುಶಃ ಕೆ. ನಲ್ಲತಂಬಿಯವರು ಅನುವಾದಿಸಿದ್ದ ತಮಿಳಿನ ಕಥೆಗಳನ್ನು ಓದಿದ ನಂತರ ಬೇರಾವ ಪುಸ್ತಕಗಳನ್ನು ಓದಿರಲಿಲ್ಲ. ಅಷ್ಟರಮಟ್ಟಿಗೆ ಸೋಮಾರಿತನ ಸವಾರಿ ಮಾಡಿ ಗೆದ್ದಿದೆ. ಆಫೀಸಿನಲ್ಲಿ, ಹೀಗೆ ಸಹದ್ಯೋಗಿಗಳೊಂದಿಗೆ ಮಾತನಾಡುವಾಗ ನಮ್ಮ ಸಂಸ್ಥೆಯ ಮುಖ್ಯಸ್ಥರಾದ ಶ್ರೀಯುತ ಗುರುಪಾದಸ್ವಾಮಿಯವರ ಸಾಹಿತ್ಯಾಸಕ್ತಿ ಮತ್ತು ಸಾಹಿತ್ಯ ಕೃಷಿಯ ಬಗ್ಗೆ ಮಾತು ಬಂತು. ಶ್ರೀಯುತರು, ಸಂಸ್ಥೆಯ ಎಲ್ಲರಿಗೂ ಪುಸ್ತಕ ನೀಡಿ, ಇದನ್ನು ಓದಿ ಪ್ರತಿಕ್ರಿಯಿಸಿ ಎಂದು ಕೇಳಿದ್ದರೆಂದು. ಅವರು ಪುಸ್ತಕ ನೀಡುವ ಸಮಯದಲ್ಲಿ ನಾನಿಲ್ಲದೇ ಇದ್ದುದ್ದರಿಂದ ಪುಸ್ತಕ ಸಿಗಲಿಲ್ಲ. ಪುಸ್ತಕವನ್ನು ಯಾರಾದರೂ ಓದಿದ್ದಾರಾ? ಹೇಗಿದೆ? ಎಂದು ತಿಳಿದುಕೊಳ್ಳುವ ಕುತೂಹಲವೂ ಹೆಚ್ಚಾಯಿತು. ಹೀಗೆ ಪ್ರಯಾಣ ಮಾಡುವಾಗ ಮೊಬೈಲಿನಲ್ಲಿ ಲೇಖಕರ ವೆಬ್‍ಸೈಟ್ ನೋಡಿದೆ. ಕೆಲವು ಕವನಗಳು ಇಷ್ಟವಾದವು. ಅವರು ಬರೆದಿರುವ ಕಥೆಗಳನ್ನು ಯಾಕೆ ಓದಬಾರದೆಂದು ನಿರ್ಧರಿಸಿ, ಫೀಲ್ಡ್ ಇಂದ ಬಂದೊಡನೆ, ಭೇಟಿ ಮಾಡಿ, ಸರ್, ತಾವು ಬರೆದಿರುವ ಪುಸ್ತಕ ಬೇಕಿತ್ತು ಎಂದೆ. ಹೌದಾ? ಯಾವುದು? ಎಂದರು. ನನಗೆ ಪುಸ್ತಕದ ಹೆಸರೇ ಗೊತ್ತಿಲ್ಲ. ಸರಿ, ಇಲ್ಲಿ ಇಲ್ಲ, ನಾಳೆ ತಂದು ಕೊಡುತ್ತೇನೆಂದರು. ನಾನು ಹೊರಗೆ ಬಂದೆ. 

ಅವರ ರೂಮಿನಿಂದ ಹೊರಗಡೆ ಬಂದಮೇಲೆ, ನನ್ನ ದಡ್ಡತನವನ್ನು ಎಲ್ಲಾ ಕಡೆಯೂ ಪ್ರದರ್ಶಿಸುತ್ತಿರುವುದರ ಬಗ್ಗೆ ಕೋಪ ಬಂತು. ನಾನೊಬ್ಬ ಸಾಹಿತ್ಯಾಸಕ್ತನಾಗಿ ಪುಸ್ತಕ ಕೇಳಿದ್ದರೂ, ಪುಸ್ತಕದ ಹೆಸರೇ ತಿಳಿಯದೇ ಒಬ್ಬ ಲೇಖಕರನ್ನು ಕೇಳಿದ್ದು ಎಷ್ಟರ ಮಟ್ಟಿಗೆ ಸರಿ? ಇದು, ಸಾಹಿತ್ಯ ಪ್ರೇಮಿಯಾಗಿ ಲೇಖಕರಿಗೆ ಮಾಡಿದ ಅವಮಾನವೆಂಬ ಗೊರಗು ಕೂಡ ಬಂತು. ನನ್ನ ಬಗ್ಗೆ ಏನು ತಿಳಿದುಕೊಂಡರೋ ಏನೋ ಎಂದು ಕೊರಗಿದೆ. ಅದೇನೇ ಇರಲಿ, ನನಗೆ ಪುಸ್ತಕ ಬೇಕು, ಅವರು ಏನು ಬರೆದಿದ್ದಾರೆ? ಹೇಗೆ ಬರೆದಿದ್ದಾರೆಂಬುದನ್ನು ತಿಳಿದುಕೊಳ್ಳಬೇಕು, ಮುಖ್ಯವಾಗಿ ಒಬ್ಬ ವಿಜ್ಞಾನ ಹಿನ್ನಲೆಯವರು ಅದರಲ್ಲಿಯೂ ಇಂಜಿನಿಯರ್ ಆದವರು, ಸರ್ಕಾರಿ ಹುದ್ದೆಯಲ್ಲಿ ಎತ್ತರದ ಸ್ಥಾನದಲ್ಲಿರುವವರು, ಬರೆಯುವುದಕ್ಕೆ ಬಿಡುವು ಹೇಗೆ? ಯಾವ ವಿಚಾರದ ¨ಗ್ಗೆ ಹೀಗೆ ಕೆಲಸವಿಲ್ಲದ ತಲೆಯೊಳಗೆ ನೂರೆಂಟು ತರ್ಲೆಗಳು ಶುರುವಾದವು. ಇದಾದ, ಕೆಲವು ದಿನಗಳ ನಂತರ, ನೀವು ಪುಸ್ತಕ ಕೇಳಿದ್ದೀರಿ ಅಲ್ವಾ? ಮರೆತುಬಿಟ್ಟೆ ಎಂದರು. ಕೆಲಸದ ಒತ್ತಡದಲ್ಲಿ ನೆನಪಿನಲ್ಲಿಡಲು ಸಾಧ್ಯವೇ, ನಾನು ಸುಮ್ಮನಾದೆ. 
ಮೊನ್ನೆ, ನಮ್ಮ ಆಫೀಸಿನ ಅಕೌಂಟ್ಸ್ ವಿಭಾಗದ ಸತೀಶನ ಜೊತೆ ಮಾತನಾಡುತ್ತ ಯಾವುದೋ ಫೈಲ್ ನೋಡುವಾಗ, ದೇವರ ಕಾಡು ಅವರ ಡ್ರಾಯರ್ ಅಲ್ಲಿದ್ದದ್ದು ಕಣ್ಣಿಗೆ ಬಿತ್ತು. “ರೀ, ಸತೀಶ್ ಆ ಪುಸ್ತಕ ತೆಗಿರಿ” ಎಂದೆ. “ಇದಾ ಸಾರ್?”, “ಹೌದು, ಅದೇ.” ಓದುತ್ತಿರಾ ಸಾರ್? “ನೋಡೋಣ ಕೊಡಿ,” ಎಂದೆ. ಇಲ್ಲಿ ಮತ್ತೊಂದು ಪ್ರಮುಖ ವಿಷಯವನ್ನು ಹೇಳಬೇಕು. ನಾನು ಬಹಳ ಗಮನಿಸಿರುವುದು, ಅನೇಕಾ ಸಂಸ್ಥೆಗಳಲ್ಲಿ, ನಮ್ಮ ವೈಯಕ್ತಿಕ, ಆಸೆಗಳೇನು? ಹವ್ಯಾಸಗಳೇನು? ಎಂಬುದರ ಮಾಹಿತಿಯನ್ನು ನಾವು ಹಂಚಿಕೊಂಡಿರುವುದಿಲ್ಲ, ಅವರು ಕೇಳಿರುವುದಿಲ್ಲ. ನನ್ನದೇ ವಿಚಾರವನ್ನು ಹೇಳಬೇಕೆಂದರೂ, ನನ್ನ ಸಾಹಿತ್ಯಾಸಕ್ತಿ, ನಾಟಕ, ಸಿನೆಮಾ, ಪ್ರವಾಸ, ಚಾರಣ, ಫೋಟೋಗ್ರಫಿ, ಸಂಗೀತ, ಜಾನಪದ, ಇತ್ಯಾದಿ ಇತ್ಯಾದಿ ಇದಾವುದೂ ತಿಳಿದಿಲ್ಲ ಅಥವಾ ತಿಳಿಸುವ ಅವಕಾಶವೂ ಸಿಕ್ಕಿರುವುದಿಲ್ಲ. ಇರಲಿ ವಿಷಯಕ್ಕೆ ಬರೋಣ. ಪುಸ್ತಕವನ್ನು ತಂದು ಮನೆಯಲ್ಲಿ ಓದಲು ಕುಳಿತೆ, ಹಿಂದಿನ ದಿನ ಹಬ್ಬದ ಪ್ರಯಾಣ, ಆಯಾಸದಿಂದಾಗಿ ಓದಲಾಗಲಿಲ್ಲ. ನಿದ್ದೆ ಹತ್ತಿತು. 

ಮಾರನೆಯ ದಿನ ಪುಸ್ತಕ ತೆಗೆದೆ. ನನ್ನದೊಂದು ಕೆಟ್ಟ ಅಭ್ಯಾಸವೆಂದರೇ, ಪುಸ್ತಕ ಓದಿಸಿಕೊಳ್ಳುವಂತಿದ್ದರೇ ಮಾತ್ರ ಓದುವುದು. ಇಲ್ಲದಿದ್ದರೇ ಬದಿಗಿಡುವುದು. ಇದು ಎಲ್ಲರಿಗೂ ಹೌದು ಎನಿಸುತ್ತದೆ. ಮೊದಲೇ ಹೇಳಿದಂತೆ, ನಾನು ಓದುವುದನ್ನೇ ಮರೆತು ಬಿಟ್ಟೆ ಎನ್ನುವ ಹಂತಕ್ಕೆ ತಲುಪಿದ್ದೇನೆ. ಈ ಪುಸ್ತಕ ಸುಮಾರು 190 ಪುಟಗಳಿವೆ, ಎಷ್ಟು ದಿನವಾಗಬಹುದು? ನೆಚ್ಚೆನ ಲೇಖಕರ ಪುಸ್ತಕಳನ್ನು ಕೂತಲ್ಲಿಂದ ಏಳದೇ ಓದಿದ ದಿನಗಳಿವೆ, ಸತತವಾಗಿ 10-12 ಗಂಟೆಗಳ ಕಾಲ ಅಲ್ಲಾಡದೇ ಓದಿದ ದಿನಗಳಿವೆ. ತೇಜಸ್ವಿಯವರ ಬಹುತೇಕ ಪುಸ್ತಕಗಳು ಅದರಲ್ಲಿಯೂ ಜುಗಾರಿ ಕ್ರಾಸ್, ಕಾರಂತರ ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸುಗಳು, ಅಳಿದ ಮೇಲೆ, ಹುಚ್ಚು ಮನಸ್ಸಿನ ಹತ್ತು ಮುಖಗಳು, ಕುವೆಂಪುರವರ ಮಲೆನಾಡಿನ ಚಿತ್ರಗಳು, ಹೆಗ್ಗಡತಿ, ಮದುಮಗಳು, ಭೈರಪ್ಪರವರ ದೂರ ಸರಿದರು, ದಾಟು, ರವಿ ಬೆಳಗೆರೆಯವರ ಹೇಳಿ ಹೋಗು ಕಾರಣ, ಯಂಡಮೂರಿಯವರ ಮುಂಗಾರಿನ ಮುಸ್ಸಂಜೆ, ಖುಷ್ವಂತ್ ಸಿಂಗ್‍ರ ದಿ ಕಂಪೆನಿ ವಿತ್ ವುಮೆನ್, ಟ್ರೈನ್ ಟು ಪಾಕಿಸ್ತಾನ್, ತರಾಸುರವರ ದುರ್ಗಾಮಸ್ತಾನ, ಹೀಗೆ ಹತ್ತು ಹಲವು ಇವೆ. ಹೊಸಬರ ಪುಸ್ತಕಗಳನ್ನು ಓದುವಾಗ ಅದೇನೋ ಒಂದು ರೀತಿಯ ಅಳುಕು ಬರುತ್ತದೆ. ನಾವೇನೂ ಬರೆದಿರುವುದಿಲ್ಲ, ಆದರೂ ಅವರೇನೂ ಬರೆದಿರುತ್ತಾರೆ ಮಹಾ ಎಂಬಂತೆ. ಆದರೂ, ಈ ಪುಸ್ತಕ ಬಹಳ ಚೆನ್ನಾಗಿಯೇ ಓದಿಸಿಕೊಂಡು ಹೋಯಿತು, ಸುಮಾರು 190 ಪುಟಗಳನ್ನು, ಕೇವಲ 5-6 ಗಂಟೆಗಳಲ್ಲಿ ಎರಡು ಹಂತಗಳಲ್ಲಿ ಓದಿ ಮುಗಿಸಿದೆ. 

ಪುಸ್ತಕದ ಮುನ್ನುಡಿಯನ್ನು ನೋಡಿದೆ. ಕೆಲವರು ಮಾತ್ರ ಪುಸ್ತಕವನ್ನು ಸಂಪೂರ್ಣವಾಗಿ ಗ್ರಹಿಸಿ ಅದಕ್ಕೆ ತಕ್ಕನಾಗಿ ಬರೆದಿರುತ್ತಾರೆ. ನಾನು ಬಹಳ ಪ್ರಮುಖವಾದ ವಿಷಯವನ್ನು ತಮ್ಮ ಮುಂದಿಡುತ್ತಿದ್ದೇನೆ. ನಾನು ಈ ತನಕ ಹತ್ತಾರು ಪುಸ್ತಕಗಳನ್ನು ಓದಿದ್ದರೂ, ಯಾವುದಕ್ಕೂ ವಿಮರ್ಶೆ ಬರದಿಲ್ಲ. ನನಗೆ ತಿಳಿದ ಅಥವಾ ಅನಿಸಿದ್ದನ್ನು ನನ್ನ ಸ್ನೇಹಿತರ ಜೊತೆಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದೇನೆ. ಬಹುತೇಕ, ನುಡಿಗಳು ಹೀಗಿರುತ್ತವೆ “ಓದಲೇ ಬೇಕಾದ ಕೃತಿ”, ಮಿಸ್ ಮಾಡಿಕೊಳ್ಳಬೇಡಿ ಎಂದು. ಆದರೇ, ಈ ಪುಸ್ತಕದ ಕುರಿತು ಸ್ವಲ್ಪ ಹೆಚ್ಚಿಗೆ ಮಾತನಾಡೋಣ ಎನಿಸಿತು. ಅದಕ್ಕೆ, ಮೂಲ ಕಾರಣ, ಲೇಖಕರು ನಮ್ಮ ಮುಖ್ಯಸ್ಥರೆಂಬುದು ಒಂದಾದರೇ, ಬರವಣಿಗೆಯ ಹಿಂದಿರುವ ಉದ್ದೇಶ ಮತ್ತೊಂದು. ಪುಸ್ತಕದಲ್ಲಿ, ಐದು ಕಥೆಗಳಿವೆ. ದೇವರ ಕಾಡು, ಡಾಲರ್ ಸಿಕ್ಕಿದ ಕಥೆ, ಅನಂತ, ಹೊನ್ನಂಗಿಡಿ, ಮಿಂಚಿನಬಳ್ಳಿ. ನಾನು ಗಮನಿಸಿದ ಒಂದಿಷ್ಟು ಅಂಶಗಳನ್ನು ತಮ್ಮ ಮುಂದಿಡುತ್ತಿದ್ದೇನೆ. ಇದನ್ನು ಎರಡು ರೀತಿಯಲ್ಲಿ ಹೇಳಬಹುದು, ಒಂದು ಒಟ್ಟಾರೆಯಾಗಿ ಲೇಖಕರು ಯಾವ ಹಿನ್ನಲೆಯಲ್ಲಿ, ಏನನ್ನು ಹೇಳಲು ಬಯಸಿದ್ದಾರೆ? ಮತ್ತೊಂದು, ಒಂದೊಂದು ಕಥೆಯಲ್ಲಿಯೂ ಯಾವುದೆಲ್ಲ ಅಂಶಗಳನ್ನು ನಮಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. 

ನಾನು ಎರಡೂ ರೀತಿಯಲ್ಲಿಯೂ, ವಿವರಿಸಲು ಪ್ರಯತ್ನಿಸುತ್ತೇನೆ, ಒಟ್ಟಾರೆಯಾಗಿ ಹೇಳಬೇಕೆಂದರೇ, ಲೇಖಕರು ಪರಿಸರದ ಜೊತೆಗೆ ಸಹಭಾಳ್ವೆಯಿರಬೇಕೆಂಬುದನ್ನು ಮತ್ತು ಪ್ರಕೃತಿಯಲ್ಲಿ ಸಮತೋಲನ ಕಾಪಾಡುವ ಕಾರ್ಯ ನಿರಂತರವಾಗಿದೆ, ನಾವು ಹಿರಿಯರಿಂದ ಬಂದಿರುವುದನ್ನು ಮುಂದುವರೆಸುತ್ತಾ ಹೋಗಬೇಕೇ ಹೊರತು, ಪ್ರಕೃತಿಯನ್ನೇ ಬದಲಾಯಿಸುತ್ತೇನೆಂದಲ್ಲ ಎಂಬ ತರ್ಕವನ್ನು ಅಚ್ಚುಕಟ್ಟಾಗಿ ಬಿಂಬಿಸಿದ್ದಾರೆ. ಅದರ ಜೊತೆಗೆ, ಪ್ರೀತಿಯನ್ನು ಹಂಚಬೇಕೆಂಬುದು, ಪ್ರೀತಿ ಹಂಚಿದಷ್ಟೂ ಹೆಚ್ಚೆಚ್ಚೂ ಸಿಗುತ್ತದೆಯೆಂಬುದನ್ನು ತಿಳಿಸಿದ್ದಾರೆ. ಅಚ್ಚರಿಯ ವಿಷಯವೆಂದರೇ, ಮೊದಲನೇ ಕಥಾಸಂಕಲನದಲ್ಲಿ ಐದು ಕಥೆಗಳು ವಿಭಿನ್ನಾ ಮಾದರಿಯಲ್ಲಿರುವುದು. 

ದೇವರ ಕಾಡಿನಲ್ಲಿ, ಸಾಹಸಮಯ, ಸಮಾಜಮುಖಿಯ ಆಶಯಗಳಿದ್ದರೆ. ಡಾಲರ್ ಸಿಕ್ಕ ಕಥೆಯಲ್ಲಿ, ಹಾಸ್ಯಪ್ರಜ್ಞೆ ಎದ್ದು ಕಾಣುತ್ತದೆ, ಹಾಸ್ಯದಿಂದಲೇ ನೀತಿಯನ್ನು ರವಾನಿಸಿರುವುದು ಮೆಚ್ಚುಗೆಯಾಗುತ್ತದೆ. ಅನಂತದಲ್ಲಿ ವೈಜ್ಞಾನಿಕತೆಯ ಜೊತೆಗೆ ಸಾಂಪ್ರಾದಾಯಿಕತೆಯನ್ನು ಜೋಡಿಸಿರುವ ರೀತಿ ಅಚ್ಚರಿಯ ಜೊತೆಗೆ ಯಾವುದೋ ಬೇರೆ ಜಗತ್ತಿನಿಂದ ಭೂಮಿಯನ್ನು ನೋಡುವ ಕಾಲ್ಪನಿಕ ಜಗತ್ತನ್ನು ಕೊಡುತ್ತದೆ. ಹೊನ್ನಂಗಿಡಿ, ನಮ್ಮ ಬಾಲ್ಯವನ್ನು, ನಮ್ಮ ಸಂಸ್ಕøತಿ, ಸಂಪ್ರದಾಯವನ್ನು ಸೂಚಿಸಿ, ಭಾವನಾತ್ಮಕತೆಗೆ ದೂಡುತ್ತದೆ. ಕೊನೆಯದಾಗಿ, ಮಿಂಚಿನಬಳ್ಳಿ ಸಸ್ಪೆನ್ಸ್ ಕಥೆಯೆಂದರೂ ತಪ್ಪಿಲ್ಲ, ಜಿಎಂ, ಬಿಟಿ ವಿಚಾರಗಳನ್ನು ಇಟ್ಟುಕೊಂಡು ಅಲ್ಲೊಂದು ನಿಗೂಢತೆಯನ್ನು ಕಾಪಾಡುತ್ತಾ ಹೋಗುವುದು ಓದುಗನನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದೆಲ್ಲದರ ಹಿಂದಿರುವ ಪರಿಸರ ಕಾಳಜಿಗೆ ಧನ್ಯವಾದಗಳು. ಓದಲೇಬೇಕಾದ ಪುಸ್ತಕವೆನ್ನುವುದಕ್ಕಿಂತ ಬೇರೆ ಆಯಾಮದಲ್ಲಿ ಮಂಡನೆಯಾಗಿರುವುದು ಸಂತಸ. ತಮ್ಮ ಮುಂದಿನ ಎಲ್ಲಾ ಸಾಹಿತ್ಯ ಕೃಷಿಗಳಿಗೂ ಶುಭವಾಗಲಿ ಸರ್. 

ಅನ್ಯವಾರ್ತೆ: ಬಿಡುವ ಹಾದಿಯಲಿ!!

ಅನ್ಯವಾರ್ತೆ: ಬಿಡುವ ಹಾದಿಯಲಿ ಹರೀಶ್‌ ಬಾನುಗೊಂದಿ ಈ ಲೇಖನವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಯತ್ನಿಸುತ್ತಿದ್ದೆ. ಬರೆಯುವ ಪ್ರಯತ್ನ ಮಾಡಿರಲಿಲ್ಲ. ಇದಕ್ಕೆ ಎರಡು ...