14 ಏಪ್ರಿಲ್ 2009

ನನ್ನೆರಡು ಮಾತು


ಬಹಳ ದಿನಗಳ ನಂತರ ಸರಿ ಸುಮಾರು ನಾಲ್ಕೈದು ತಿಂಗಳುಗಳ ನಂತರ ಏನಾದರೊಂದಿಷ್ಟನ್ನು ಗೀಚಿಬಿಡಲೆಂದು ಕುಳಿತಿದ್ದೇನೆ. ಬರೆಯುವುದು ನನ್ನ ಹಕ್ಕು, ಓದಿ ತಿರಸ್ಕರಿಸುವುದು ನಿಮ್ಮ ಪಾಲಿನ ಕರ್ಮ. ಯಾರಾದರು ಓದಲೇಬೇಕೆಂದು ನಾನು ಬರೆಯುವುದಿಲ್ಲ. ಬರವಣಿಗೆ ನನ್ನೊಳಗಿರುವ ಹಲವಾರು ತಲೆಗೆಟ್ಟ ಊಹಾಪೋಹಗಳನ್ನು ಹೊರಹಾಕಲು ನಾನು ಬಳಸುವ ಒಂದು ಸಾಧನವಷ್ಟೆ. ನಾನು ಇಂದು ಬರೆಯಲು ಹೊರಟಿರುವ ವಿಷಯ ತುಂಬ ಸೂಕ್ಷ್ಮವೆನಿಸಿದರೂ ಅಷ್ಟೂ ಹಗುರವೆನಿಸುವಂತದ್ದಲ್ಲ. ಇಲ್ಲಿ ನಿಮ್ಮ ಮುಂದಿಡುತ್ತಿರುವ ವಿಚಾರಗಳು ನನ್ನ ತಲೆಯೊಳಗೆ ಕಳೆದ ೧೦-೧೫ ವರ್ಷಗಳಿಂದ ಕೊರೆಯುತ್ತಿದ್ದವು. ಕೆಲವು ದಿನಗಳ ಹಿಂದೆ ನಾನು ನನಗೆ ಬಂದಿದ್ದ ಒಂದು ಇಮೇಲ್ ಅನ್ನು ನನ್ನ ಸ್ನೇಹಿತರಿಗೆ ಕಳುಹಿಸಿದ್ದರಿಂದ ಉಂಟಾದ ಒಂದು ಪರಿಸ್ತಿತಿಯ ಬಗ್ಗೆ ಯೋಚಿಸುವಾಗ ನನ್ನೊಳಗೆ ಬಂದು ಅಳಿಸಿಹೋದ ಕೆಲವು ಅಂಶಗಳನ್ನು ಇಲ್ಲಿ ಪ್ರಸ್ತಾಪಿಸುತಿದ್ದೇನೆ. ದೇಶಾಭಿಮಾನವೆಂದರೇನು? ಇದನ್ನು ಆ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬನೂ ಪಾಲಿಸಬೇಕೆಂಬ ನಿಯಮವೆಷ್ಟು ಸರಿ, ಆ ದೇಶ ಹೇಗಿದ್ದರೂ ಸರಿ ಹಾಗೆ ಪ್ರೀತಿಸಬೇಕೆಂಬುದು ಇದರ ಅರ್ಥವೇ? ಅದನ್ನು ಉತ್ತಮಗೊಳಿಸುವುದು ಅದರ ಹಿಂದಿನ ಉದ್ದೇಶವೇ? ದೇಶದ ವಿರುದ್ದ ಮಾತನಾಡಿದರೇ ತಪ್ಪೇ? ಅಲ್ಲಿರುವು ಕೊರತೆ ಅನಿಷ್ಟತನದ ಬಗ್ಗೆ ಮಾತನಾಡುವುದು ಅಪಮಾನವೇ? ಹೀಗೆ ಹುಟ್ಟಿಕೊಂಡ ನನ್ನ ಪ್ರಶ್ನೆಗಳು ಕಡೆಗೆ, ಪ್ರೀತಿ, ಪ್ರೇಮ, ವಿವಾಹ, ಮಾನವೀಯ ಮೌಲ್ಯಗಳನ್ನೆಲ್ಲ ಒಮ್ಮೆ ಪ್ರಶ್ನಿಸತೊಡಗಿತು.


ಗಂಡ ಮಾಡಿದ್ದನ್ನೆಲ್ಲಾ ಸಹಿಸಬೇಕಾದದ್ದು ಪತ್ನಿಯ ಧರ್ಮವಂತೆ, ಇದು ಸರಿಯಾ? ಅಥವಾ ಹೆಂಡತಿಯನ್ನು ಪ್ರೀತಿಸುವ ಗಂಡ ತನ್ನ ಹೆಂಡತಿ ಏನು ಮಾಡಿ ಬಂದರೂ ಅವಳನ್ನು ಪ್ರೀತಿಸಬೇಕೆಂಬುದೆಷ್ಟು ಸರಿ? ದಿಡೀರನೆ ನನಗನಿಸಿದ್ದು ಇಷ್ಟು, ಒಬ್ಬ ವ್ಯಕ್ತಿ, ಭಾರತದಲ್ಲಿ ಹುಟ್ಟಿದ್ದಾನೆಂದರೇ ಅವನು ಭಾರತೀಯನೆಂಬುದನ್ನು ಅವನ ಹೆಸರಿನ ಮುಂದೆ ಬಳಸಬಹುದೇ ವಿನಾಃ ಅವನು ಭಾರತೀಯತೆಯ ಪ್ರತೀಕವೆಂದು ಭಾವಿಸಲಾಗುವುದಿಲ್ಲ. ಇದು ಮನುಷ್ಯನಲ್ಲಿ ಮಾತ್ರ ಹುಟ್ಟುವ ಅಥವಾ ಕಂಡುಬರುವ ಒಂದು ಗುಣ. ಒಬ್ಬ ಮನುಷ್ಯನನ್ನು ಜೈವಿಕವಾಗಿ (bilologically) ಪರೀಕ್ಷೀಸಿದಾಗ ಎಲ್ಲ ಭಾರತೀಯನ ದೈಹಿಕ ಮಟ್ಟ, ನೋಟಗಳು ಒಂದೇ ರೀತಿ ಎನಿಸಬಹುದು ಆದರೇ ಅವನ ಮನಸ್ತಿತಿಯ ವಿಷಯಕ್ಕೆ ಬಂದಾಗ ಇದು ಸತ್ಯಕ್ಕೆ ಬಹಳ ದೂರವಿರುತ್ತದೆ. ಇದಕ್ಕೆ ಸಾಮಾಜಿಕ ಪರಿಸರದ ಜೊತೆಗೆ ಆಂತರಿಕ ಬೆಳವಣಿಗೆಗಳು ಬಹು ಮುಖ್ಯವಾಗುತ್ತವೆ. ಒಂದೇ ಮನೆಯಲ್ಲಿ ಹುಟ್ಟಿದ ಅಷ್ಟೂ ಜನ ಬೇರೆ ಬೇರೆ ಯೋಚಿಸುವುದೇಕೆಂದಾಗ ಸಿಗುವ ಉತ್ತರವೇ ಇದು. ಅದೇ individualism. ಒಂದು ವ್ಯಕ್ತಿಯಲ್ಲಿಯೇ ಎಷ್ಟೋಂದು ಬದಲಾವಣೆಗಳಿರುವಾಗ, ವಿಭಿನ್ನತೆಗಳು ಇರುವಾಗ ಇಡೀ ದೇಶದ ಪ್ರತೀಕ ನೀನೆಂದರೇ ಅದು ಹೇಗೆ ಸಾಧ್ಯ? ಚಂದ್ರಲೋಕಕ್ಕೆ ಹೋಗಿ ಬಂದ ಆರ್ಮ್ಸ್ಟ್ರಾಂಗ್ ಮತ್ತು ಚಂದ್ರನನ್ನು ಚಂದ್ರದೇವನೆಂದು ಪೂಜಿಸುವ ನನ್ನೂರಿನ ಒಬ್ಬ ರೈತನನ್ನು ಒಂದೇ ಎಂದು ಪರಿಗಣಿಸುವುದು ಎಷ್ಟೂ ಸರಿ?ಅದು ಅವನ ವೈಯಕ್ತಿಕ ಆಸಕ್ತಿಗೆ ಸಂಬಂಧಪಟ್ಟದೆಂಬುದನ್ನು ನಮ್ಮ ಹಲವಾರು ಮಿತ್ರರೇಕೆ ಅರ್ಥೈಸಿಕೊಳ್ಳುತ್ತಿಲ್ಲ?


ಭಾರತದಲ್ಲಿದ್ದರೂ ಪಾಕಿಸ್ತಾನ ಗೆದ್ದಾಗ ಕುಣಿದಾಡುವವರ ಬಗ್ಗೆ ನಮ್ಮಲ್ಲಿ ಸಹಿಸಲಸಾಧ್ಯವಾದ ಒಂದು ಕೋಪ ಅಸಹ್ಯಮೂಡುತ್ತದೆ. ಮಸೀದಿಯಲ್ಲಿ ಲಾಡೇನ್ ಫೋಟೋ ನೋಡಿದಾಗ ಅವರನ್ನು ಕೊಂದು ಬಿಡಲು ಹೊರಡುತ್ತೇವೆ. ಮಿಸನರೀಸ್ ಎಂದಾಕ್ಷಣ ಪಾಶ್ಚಿಮಾತ್ಯದ ಬಗ್ಗೆ ಇನ್ನಿಲ್ಲದ ಒಂದು ಅಸೂಯೆ ನಮ್ಮಲ್ಲಿದೆ. ಇರಾನ್ ಮೇಲೆ ಬಾಂಬ್ ಹಾಕಿದಾಗ ನಮ್ಮ ಊರುಗಳಲ್ಲಿ ಅಯ್ಯೋ ಎನ್ನುತ್ತೇವೆ. ನಮ್ಮೂರಿಗೆ ಬೆಂಕಿ ಬಿದ್ದು ಸತ್ತಾಗ ಅಮೇರಿಕಾದವರು, ಪಾಕಿಸ್ತಾನದವರು, ನಮ್ಮ ಬಗ್ಗೆ ಕೊರಗುತ್ತಾರಾ? ನಾನಿಲ್ಲಿ ನನ್ನ ದೇಶವನ್ನು ಹಿಯಾಳಿಸುತ್ತಿಲ್ಲ ಅಂತೇಯೇ ಬೇರಾವ ದೇಶವನ್ನು ಹೊಗಳುತ್ತಲೂ ಇಲ್ಲ. ನಮ್ಮವರು ಅಮೇರಿಕಾದಲ್ಲಿ ಹೋಗಿ ನೆಲೆಸಿ ಅಲ್ಲಿ ಕನ್ನಡ ರಾಜ್ಯೋತ್ಸವ ಮಾಡುವಾಗ ಕುಣಿದು ಕುಪ್ಪಳಿಸುತ್ತೇವೆ. ಆದರೇ ತಮಿಳಿಗರು ಕರ್ನಾಟಕದಲ್ಲಿ ತಮಿಳು ಮಾತನಾಡಿದ ತಕ್ಷಣ ಹೊಡೆದು ಬೀಳಿಸಬೇಕೆಂದು ಕೂಗಾಡುತ್ತೇವೆ. ನನ್ನ ನೇರ ಪ್ರಶ್ನೆ ಇಷ್ಟೇ, ಕನ್ನಡ ಮಾತನಾಡಿದವನೆಲ್ಲಾ ಕನ್ನಡಿಗನಾಗಲೂ ಸಾಧ್ಯವಾ? ಭಾರತದಲ್ಲಿದ್ದ ಮಾತ್ರಕ್ಕೆ ಅವನಲ್ಲಿ ಭಾರತೀಯತೆ ಇದೆಯಾ? ಮನುಷ್ಯತ್ವವನ್ನರಿಯದ ಹೊರತು ಯಾರನ್ನು ಪ್ರೀತಿಸಲಾರ. ಒಂದು ಭಾಷೆ, ದೇಶ, ಧರ್ಮ ಇವೆಲ್ಲಾ ಜೀವನದ ಮಾರ್ಗ. ಅದು ಬರೀ ಮಾತಿನಿಂದ ಬರುವಂತದ್ದಲ್ಲ. ವಿದ್ಯೆಗೂ, ಶಿಕ್ಷಣಕ್ಕೂ, ಶೈಕ್ಷಣಿಕ ಅರ್ಹತೆಗೂ ಬಹಳ ವ್ಯತ್ಯಾಸವಿದೆ. ಒಂದೇ ಶಾಲೆಯಲ್ಲಿ ಪಾಠ ಮಾಡುವ ಹತ್ತು ಮೇಶ್ಟ್ರುಗಳಲ್ಲಿ ನಮಗಿಷ್ಟವಾಗುವವರು ಒಬ್ಬರೋ ಇಬ್ಬರೋ ಅಷ್ಟೇ. ಎಲ್ಲರೂ ಸಮಾನ ವಿದ್ಯೆ, ಬುದ್ದಿಯೊಂದಿಗೆ ಇದ್ದರೂ ಕೂಡ, ನಮ್ಮ ಪ್ರೀತಿಗಳಿಸುವಲ್ಲಿ ಸಫಲರಾಗುವವರೂ ಕಡಿಮೆ ಜನ. ಒಂದೊಂದು ಜಾತಿಗೆ ಹತ್ತು ಹಲವು ಮಠ, ಮಂದಿರಗಳನ್ನು ಮಾಡಿಕೊಂಡು, ಹೊಡೆದಾಡಿಸಿ ಕಲೆಗೈಯ್ಯುವುದು ನಮ್ಮಲ್ಲಿ ಕಾಣುವಷ್ಟು ಹೊರಗೆಲ್ಲು ಇಲ್ಲವೆನಿಸುತ್ತದೆ. ಪೆಸಿಫಿಕ್ ದೀಪದಲ್ಲಿ ಮನುಷ್ಯರನ್ನು ತಿಂದು ಬದುಕುತಿದ್ದ ಲಕ್ಷಾಂತರ ಅಲೆಮಾರಿಗಳನ್ನು ನಾಗರೀಕ ಸಮಾಜಕ್ಕೆ ತಂದು ನಿಲ್ಲಿಸಿದವರು ಅಮೇರಿಕಾದವರು. ಅವರಿಂದ ನಾವು ಇಂಥಹದನ್ನು ಮಾಡಬಹುದೆಂಬುದನ್ನು ಕಲಿಯಲೇ ಇಲ್ಲ. ಅವರಿಂದ ಬರೀ ಕೆಟ್ಟದ್ದನ್ನು ಮಾತ್ರ ಕಲಿತಿ, ಧೋಭಿಯ ನಾಯಿ ಮನೆಯಲ್ಲಿಯೂ ಇಲ್ಲ, ನದಿ ಹತ್ತಿರನೂ ಇಲ್ಲ ಅನ್ನೋ ಹಾಗೆ ಆಗಿದೆ ನಮ್ಮ ಕಥೆ.


ನನ್ನ ಜೀವನದಲ್ಲಿ ನಾನೆಂದು ನನ್ನ ಕುಟುಂಬದವರ ಬಗ್ಗೆ ಹೆಮ್ಮೆಪಡುವುದಾಗಲೀ ಅಥವಾ ಕೀಳರಿಮೆಯನ್ನುಂಟು ಮಾಡಿಕೊಳ್ಳುವುದಾಗಲಿ ಮಾಡಿಲ್ಲ. ಇದಕ್ಕೆ ಮೂಲ ಕಾರಣ ನಾನು ಬೆಳೆದು ಬಂದ ರೀತಿಯೆಂದರೆ ತಪ್ಪಾಗದು. ಹಳ್ಳಿಗಳಿಂದ ಬೆಳೆದು ಬರುವ ಅಥವಾ ಬಂದಿರುವ ಹಲವಾರು ಸ್ನೇಹಿತರಿಗೆ ಹಳ್ಳಿಗಾಡಿನ ಜನಸಾಮಾನ್ಯರ ಬದುಕು ಅರಿವಾಗಿರುತ್ತದೆ. ಆದರೆ, ಪಟ್ಟಣ್ಣದಲ್ಲೇ ಬೆಳೆದು ಬಂದು ನಗರವಾಸಿಗಳಿಗೆ ಹಳ್ಳಿಯೆಂದರೆ ಒಂದು ಚಿಕ್ಕ ಊರು, ಅಲ್ಲಿ ತಂಪಾಗಿ ಹರಿಯುವ ನದಿ, ಸೊಂಪಾಗಿ ಬೆಳೆದ ಮರಗಳು, ಹೀಗೆ ಎಲ್ಲವೂ ಅವರ ಕಾಲ್ಪನಿಕ ಚಿತ್ರಗಳಷ್ಟೆ. ಅಲ್ಲಿನ ಬದುಕು ಅವರ ಮನಸ್ಥಿತಿಯನ್ನು ಅರಿಯಲು ಹೋಗಿರುವುದಿಲ್ಲ ಮತ್ತು ಅದರ ಅವಶ್ಯಕತೆಯೂ ತಲೆದೋರಿರುವುದಿಲ್ಲ. ಇನ್ನು ಬಹಳ ಮಂದಿ ಹಳ್ಳಿಗಳಿಗೆ ಹೋದಾಗ ಅಲ್ಲಿನ ಭೌತಿಕ ವ್ಯವಸ್ಥೆ ಕಂಡು ಬೆಚ್ಚಿದ್ದಾರೆ. ಅವರಿಗೆ ಹಳ್ಳಿಗಳು ನಗರದಲ್ಲಿನ ಕೊಳಚೆ ಪ್ರದೇಶಗಳಂತೆ ಕಂಡಿರುತ್ತವೆ ಹೊರತು ಮಿಕ್ಕಾವ ಅಂಶಗಳು ಗಣನೆಗೆ ಬರುವುದಿಲ್ಲ. ಹಾಗೇಯೇ, ಧರ್ಮದ ಬಗ್ಗೆ, ದೇಶದ ಬಗ್ಗೆ ಕೂಗಾಡುವ ನಮ್ಮ ಹಲವಾರು ಮಿತ್ರರು ಅದರ ಒಳವನ್ನು ಕಂಡಿರುವುದಿಲ್ಲ. ಅಲ್ಲಿರುವ ಭಯಾನಕತೆಯ ಬಿಸಿ ಅವರಿಗೆ ತಾಕಿರುವುದಿಲ್ಲ. ಕುಡಿಯಲು ನೀರಿಲ್ಲದೇ, ತಿನ್ನಲು ಅನ್ನವಿಲ್ಲದೇ, ಅನಾರೋಗ್ಯದಿಂದ ಸಾಯುತ್ತಿರುವ ನಮ್ಮ ಭಾರತ ಅವರಿಗೆಂದು ಕಾಣುವುದೇ ಇಲ್ಲ. ಅದನ್ನ್ನೆಲ್ಲಾ ಹೇಳಿದರೇ ನಮ್ಮ ದೇಶದವನಾಗಿ ನಮ್ಮ ಬಗ್ಗೆಯೇ ಹಿಯಾಳಿಸುವುದು ನೀಚತನವೆನಿಸುತ್ತದೆ. ನಂಬಿಕೆಯ ಹೆಸರಿನಲ್ಲಿ, ಸ್ವಾತಂತ್ರ್ಯದ ಹೆಸರಿನಲ್ಲಿ, ಸುಳಿಗೆ ಮಾಡುವ ಪವೃತ್ತಿ ಹೆಚ್ಚಾಗಿರುವುದು ಅವರಿಗೆ ಕಾಣುವುದಿಲ್ಲ. ಸ್ವಾಭಿಮಾನದ ಬಗ್ಗೆ ಮಾತನಾಡುವವರೂ ಪ್ರತಿಯೊಬ್ಬನು ದುಡಿದಾಗ ಮಾತ್ರ ಉದ್ದಾರವೆಂಬುದನ್ನು ಅರಿಯುವುದೇ ಇಲ್ಲ. ೨೦-೨೨ ವರ್ಷಗಳು ಕಾಲೇಜಿಗೆ ಹೋಗಿ ಓದಿದದವರೂ ಕೂಡ, ನಂತರ ಕೈಕಟ್ಟಿ ಕುಳಿತು ಗಂಡನ ಸಂಪಾದನೆಯಲ್ಲಿ ಕಾಲಹರಣ ಮಾಡುವುದು, ಇವೆಲ್ಲಾ ಅವರಿಗೆ ಕಾಣುವುದಿಲ್ಲ.


ಅನೈತಿಕತೆ ನಡುವೇ ಜೀವನದ ಜೋಕಾಲಿಯ ಕುಣಿಕೆ ಮುರಿದು ಬೀಳುವಷ್ಟು ವೇಗವಾಗಿ ನಮ್ಮ ಜೀವನ ಚಕ್ರ ನಡೆಯುತ್ತಿದೆ. ಯಾರನ್ನೂ ನಂಬಲಾರದ ಮನಸ್ತಿತಿಯೊಂದಿಗೆ ಬದುಕುತಿದ್ದೇವೆ. ಧರ್ಮ, ಜಾತಿ, ಸ್ವಾರ್ಥ, ಭಾಷೆ, ಲಿಂಗ ತಾರತಮ್ಯ, ಅತ್ಯಾಚಾರ, ಅನಾಚಾರ ಇವೆಲ್ಲಾ ನಮ್ಮನ್ನು ಕಿತ್ತು ತಿನ್ನುತ್ತಾ, ಸಾಮಾನ್ಯ ಮನುಷ್ಯ ಆತ್ಮಹತ್ಯೆ ಮಾಡಿಕೊಳ್ಳಲು ಸ್ವಾತಂತ್ರವಿಲ್ಲದಂತೆ ಬಂದು ನಿಂತಿದೆ. ವ್ಯಕ್ತಿ ಸ್ವಾತಂತ್ರ್ಯ ಎನ್ನುವ ಪದ ಎಲ್ಲ ಕಡೆ ಸುಳಿದು, ಸಾಂಸಾರಿಕ ನೌಕೆ ಯಾವಾಗೆಂದರೇ ಆಗ ಮುರಿದು ಬೀಳುವ ಹಂತಕ್ಕೆ ತಲುಪಿದೆ. ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದು ಬಂದ ನನ್ನ ತಾಯಿಗೆ, ಪಟ್ಟಣದಲ್ಲಿ ಇರುವ ಹುಡುಗಿಯರ ರೀತಿ ಆಸೆ ಆಕಾಂಕ್ಷೆಗಳು ಇರುವುದಿಲ್ಲವಾ! ಇರಲಿಲ್ಲವಾ! ನನ್ನಮ್ಮನನ್ನು ಬಹಳ ಸಾರಿ ಈ ಮಾತು ಕೇಳಿದ್ದೇನೆ. ಅವಳೆಂದು ತನ್ನದೂ ಗುಲಾಮ ಕೆಲಸವೆನ್ನುವುದಿಲ್ಲ . ಅಪ್ಪ ಇಷ್ಟೇಲ್ಲಾ ಕಷ್ಟಪಟ್ಟು ನಮಗೆ ಅಂತಾ ಮಾಡುತ್ತಿರುವಾಗ ನನಗೆ ಗುಲಾಮಗಿರಿ ಅಂತಾ ಯಾಕೆ ಅನ್ನಿಸುತ್ತೇ ಹೇಳು? ನಿನಗೆ, ನಿನ್ನನ್ನು ಪ್ರೀತಿಸುವ ಮನಸ್ಸು ಸಿಕ್ಕಿದೇ ,ಎನಿಸಿದರೇ, ಅದಕ್ಕೆ ಸಮನಾದದ್ದು ಇಡೀ ಜಗತ್ತಿನಲ್ಲೇ ಇಲ್ಲ. ಒಂದು ಪ್ರೀತಿಸುವುವ ಮನಸ್ಸಿದ್ದರೇ ಸಾಕು, ಬೇರೆ ಏನು ಬೇಕು ಎನಿಸುವುದಿಲ್ಲ. ನಿನ್ನನ್ನು ಸಂಪೂರ್ಣ ಅರ್ಥಮಾಡಿಕೊಳ್ಳುವ ಮನಸ್ಸಿಗಾಗಿ ಬದುಕಿ ನೋಡು, ಅದರಲ್ಲಿ ಸಿಗುವ ಸುಖ ಬೇರೆಲ್ಲೂ ಸಿಗುವುದಿಲ್ಲ. ಆದರೇ, ಆ ಮಾತು ನಮ್ಮಮ್ಮನಿಗೆ ಮಾತ್ರ ಇಷ್ಟ ಅನಿಸುತ್ತದೆ. ನನಗೆ ಆ ಭಾಗ್ಯ ಸ್ವಲ್ಪ ದೂರಾನೇ ಉಳಿಯಿತು. ಸದಾ ಭಯದ ನೆರಳಲ್ಲಿ ಬದುಕುವ ದಿನ ಹತ್ತಿರಾಗಿ ಬಿಟ್ಟಿತ್ತು.. ಅಭದ್ರತೆ ಅನ್ನೋದು ಅಂದರೇ,ಎನಿಸುತ್ತದೆ.


ಅಭದ್ರತೆಯ ಭಯದ ನೆರಳಲ್ಲಿ ಬದುಕುವುದೆಂದರೇ ಅದಕ್ಕಿಂತ ಧುರ್ವಿಧಿ ಮತ್ತೊಂದಿಲ್ಲ. ನಾಳೇ ಸಾವು ನನ್ನನ್ನು ಕೊಲ್ಲುತ್ತದೆಂಬ ಭಯ, ನಾಳೆ ನನ್ನ ಕೆಲಸ ಹೋಗೇ ಹೋಗುತ್ತದೆಂಬ ಭಯ, ಮುಂದಿನ ತಿಂಗಳು ಮನೆ ಖಾಲಿ ಮಾಡಿ ಹೋಗುತ್ತೇನೆಂದಾಗ ಮನೆ ಮಾಲಿಕ ನಡೆದುಕೊಳ್ಳುವ ರೀತಿ ಇವೆಲ್ಲ ನಮ್ಮ ಜೀವನದ ಅಭದ್ರತೆಯ ಪ್ರತೀಕಗಳು. ಅಲ್ಲಿ ಉಂಟಾಗುವ ಭಯವೆಂದರೆ ಅದೊಂದು ಭಯಂಕರ ಯಾತನೆಯ ಕ್ಷಣಗಳು. ಜೀವದ ಗೆಳತಿ ಎನಿಸಿಕೊಂಡಿದ್ದವಳು, ನಾನಿದ್ದು, ಇನ್ನೊಬ್ಬನೊಡನೆ ಸುತ್ತಾಡುತ್ತಾ ಪ್ರೀತಿಯ ನಾಟಕವಾಡುವಾಗ ಆಗುವ ವ್ಯಥೆಯಿದೆಯಲ್ಲಾ ಅದಕ್ಕಿಂತ ಇನ್ನೊಂದು ನರಕವನ್ನು ಆ ಭಗವಂತನಿಂದಲೂ ಸೃಷ್ಟಿಸಲಾಗುವುದಿಲ್ಲ. ಅದನ್ನು ತಿಳಿದು, ಅವಳು ಪ್ರೀತಿಯ ನಾಟಕವಾಡುತ್ತಿರುವುದನ್ನು ಕಂಡು, ಅವಳಿಂದ ದೂರಾಗಲು ಸಿದ್ದವಿಲ್ಲದ ಮನಸ್ತಿತಿಯಿದೆಯೆಲ್ಲಾ ಅದೊಂದು ಜೀವಂತ ಶವದ ಪ್ರತಿರೂಪ. ಯಾರನ್ನೂ ನಂಬದ, ಯಾರ ಜೊತೆಗೂ ಹೋಗದ, ಒಬ್ಬಂಟಿಯಾಗಿಯೂ ಜೀವಿಸಲಾರದ ಯಾತನೆಯೆಂದರೇ, ಜೀವಿಯ ಕೊನೆ ಕ್ಷಣಗಳೆನಿಸುವಂತಹುಗಳು. ಪ್ರೀತಿಯ ಮೊಸಕ್ಕೆ ಸಿಳುಕದ ಮುನ್ನ ನನ್ನಲ್ಲಿ ಹಲವಾರು ಆಲೋಚನೆಗಳಿದ್ದವು. ಪ್ರೀತಿ ಎಂದ ಕೂಡಲೇ, ಪ್ರತಿಯೊಬ್ಬನೂ ಪೊಸ್ಸೆಸ್ಸಿವ್ ಆಗಲೂ ಕಾರಣವೇನೆಂದು ನಾನು ಬಹಳ ಯೋಚಿಸುತಿದ್ದೆ. ನನಗೆಂದೂ ಅದರ ಅರ್ಥ ಹುಡುಕುವ ಗೋಜು ಬರಲೇಯಿಲ್ಲ. ಪ್ರೀತಿಸುವ ವ್ಯಕ್ತಿಯೆಂದರೇ ಎಲ್ಲವನ್ನೂ ಅವನಿಗೆ ಅಥವಾ ಅವಳಿಗೆ ಯಾಕೆ ಹೇಳಬೇಕು? ಅವಳಿಗೂ ತನ್ನ ಸ್ವಂತಿಕೆಯ ಬದುಕು ಬೇಡವೇ? ಅವಳನ್ನು ಪ್ರೀತಿಯ ನೆಪಹೇಳಿ ತಡೆಯುವುದು ಏಕೆಂದು? ಆದರೇ ನನ್ನ ನಂಬಿಕೆಗೆ ಕಲ್ಲು ಬಿದ್ದ ದಿನ ಮಾತ್ರ ನನಗೆ ಅರ್ಥವಾಗಿದ್ದು, ಪೊಸ್ಸೆಸ್ಸಿವ್ ಎಂಬುವುದು ಎಷ್ಟು ಅವಶ್ಯಕತೆಯೆಂದು. ಒಬ್ಬ ವ್ಯಕ್ತಿಗೆ ನೀವು ಸರ್ವಸ್ವವನ್ನು ಕೊಟ್ಟರೂ ಅವರಲ್ಲಿ ಕಿಂಚಿತ್ತೂ ಪ್ರೀತಿ ಹುಟ್ಟಿಸಲಾಗುವುದಿಲ್ಲ, ಅದು ಅವರ ಮನಸ್ಸು ಬಲವಂತದಿಂದ ಅಲ್ಲಿ ಏನು ಹುಟ್ಟುವುದಿಲ್ಲ, ಹುಟ್ಟಿದರೂ ಅದು ಬೆಳೆಯುವುದಿಲ್ಲ, ಬೆಳೆದರೂ ಅದು ನಿಮಗೆ ನೆರಳಾಗುವುದಿಲ್ಲ. ಇದು ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ದೇಶದ ವಿಷಯದಲ್ಲಿಯೂ ಅಷ್ಟೇ, ಧರ್ಮದ ವಿಷಯದಲ್ಲಿಯೂ ಅಷ್ಟೇ. ತನ್ನಲ್ಲಿ ನಂಬಿಕೆಯಿಲ್ಲದವನಿಗೆ ಬೇರಾವುದರ ಮೇಲೂ ನಂಬಿಕೆ ಇರುವುದಿಲ್ಲ, ತನ್ನಲ್ಲಿ ಪ್ರೀತಿಯಿಲ್ಲದವನಿಗೆ ಬೇರಾವುದರಲ್ಲೂ ಪ್ರೀತಿಯಿರುವುದಿಲ್ಲ. ನೀವು ಇನ್ನೊಬ್ಬನನ್ನು ಹೊಡೆದು ಬಡಿದು ನಿಮ್ಮ ಧರ್ಮದಲ್ಲೇ ಉಳಿ ಎಂದರೇ ಅವನು ಉಳಿಯಬಹುದು, ಹೆಸರೂ ಬದಲಾಯಿಸಬಹುದು ಆದರೇ ಅವನಿಂದ ಅದರ ಪಾಲನೆಯಾಗುವುದಿಲ್ಲ. ಪ್ರೀತಿಯಲ್ಲಿಯೂ ಅಷ್ಟೇ, ನೀವು ನಿಮ್ಮತನವನ್ನೆಲ್ಲಾ ಧಾರೆ ಎರೆದರೂ ಪ್ರೀತಿಸುವ ಮನಸ್ಸಿಲ್ಲದವರು ಅಲ್ಲಿ ಉಳಿಯುವುದಿಲ್ಲ. ಅವರ ಗಮನ ಮತ್ತೊಬ್ಬನ/ಳ ಕಡೆಗೆ ಹೋಗುತ್ತದೆ. ಅದಕ್ಕೆ ಕಾರಣಗಳು ಸಾವಿರಾರು. Possessiveness, freedom, independent life, self respect, self earning, ಹೀಗೆ……..


ಯಾವುದನ್ನು ಬಲವಂತದಿಂದ ಪಡೆಯಲಾಗುವುದಿಲ್ಲ, ಎಲ್ಲವೂ ತನ್ನೊಳಗಿನಿಂದ ಹುಟ್ಟಿ ಬರಬೇಕು. ಅಭಿಮಾನ ಪ್ರೀತಿ, ಭಾವನೆಗಳೆಲ್ಲಾ ತನ್ನೊಳಗೆ ಹುಟ್ಟುವಂತವುಗಳು. ಕನ್ನಡ ಮಾತನಾಡಿದ ಮಾತ್ರಕ್ಕೆ ಕನಡದ ಸಂಸ್ಕೃತಿಯ ಪ್ರತೀಕವೆಂದು ಬಯಸಬೇಡಿ. ಕನ್ನಡದ ಬಗ್ಗೆ ಇತಿಹಾಸದ ಬಗ್ಗೆ ನಮ್ಮ ಆಗುಹೋಗುಗಳ ಬಗ್ಗೆ ಮೊದಲು ತಿಳಿದು ನಂತರ ತಮ್ಮ ಅಭಿಮಾನ ತೋರಿಸಿ. ಭಾರತವೆಂದ ಮಾತ್ರಕ್ಕೇ ಅದೂ ಅಂದಿನಿಂದ ಇಂದಿನವರೆಗೂ ಹಾಗೆ ಇದೆಯೆಂದಲ್ಲ. ಕೋಟ್ಯಂತರ ರಾಜ ಮಹರಾಜರೂ ಆಳಿದ್ದಾರೆ. ಅವರಿಗೆ ತಕ್ಕಂತೆ ಬದಲಾಯಿಸಿದ್ದಾರೆ, ಯಾವುದು ಶಾಶ್ವತವಲ್ಲ. ಶಾಶ್ವತವೆಂಬುದೆರಡೇ, ಮೊದಲ ಪ್ರೀತಿಯ ನೆನಪು. ಮೊದಲ ಪ್ರೀತಿಯ ಸೋಲು. ಅವೆರಡೂ ಶಾಶ್ವತ. ಅದೆಂದಿಗೂ ಮಾಸುವುದಿಲ್ಲ.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...