15 ಮೇ 2017

ಹರಟೆ ಹೊಡೆಯುವುದಕ್ಕೆ ವಿಷಯವೇಕೆ?

ನಮ್ಮನ್ನೂ ಕೆಲವೊಮ್ಮೆ ಬಹಳ ಕಾಡುವ ಪ್ರಶ್ನೆ, ಜೀವನವೆಂದರೇನು? ಜೀವನದ ಉದ್ದೇಶವೇನು? ಯಾಕೆ ಬದುಕುತ್ತಾ ಇದ್ದೀವಿ? ಹೇಗೆ ಬದುಕಬೇಕು? ನಾನು ಬದುಕುತ್ತಿರುವುದು ಸರಿಯಾ? ಅವರು ಬದುಕುವುದು ಸರಿಯಾ? ಅಥವಾ ಇವರದ್ದೂ ಸರಿನಾ? ಒಮ್ಮೊಮ್ಮೆ ನಮ್ಮ ಜೀವನ ನಮಗೆ, ಅವರ ಜೀವನ ಅವರಿಗೆ ಎನಿಸಿದರೂ, ಮನಸ್ಸು ಅದನ್ನು ಅಲ್ಲಿಗೆ ಬಿಡುವುದಿಲ್ಲ. ಬೇರೆಯವರ ಜೊತೆಗೆ ಹೋಲಿಕೆ ಮಾಡುತ್ತಲೇ ಇರುತ್ತದೆ. ಹೋಲಿಕೆ ಮಾಡಿದಾಗ ಎರಡು ಅಂಶ ಬೆಳಕಿಗೆ ಬರುತ್ತದೆ. ಮೊದಲನೆಯದು, ನನ್ನದೇನು ಜೀವನ, ಅವರದ್ದೂ ಜೀವನವೆಂದರೆ, ಹಾಗೆ ಇರಬೇಕು ಅಂತಾ. ಎರಡನೆಯದು, ಥೂ ಜೀವನ ಇಷ್ಟೇನಾ? ಕೇವಲ ಕಾರು, ಬೈಕು, ಮನೆ, ಸೈಟು, ದುಡ್ಡು, ಕುಡಿತ, ಮೋಜು ಮಸ್ತಿ? ಜೀವನದಲ್ಲಿ ಮೌಲ್ಯ ಮುಖ್ಯ, ಆ ತರ ಬದುಕೋದಾ, ಛೇ ಛೇ ಅನಿಸುತ್ತೆ. ಇದೆರಡು ದ್ವಂಧ್ವದೊಳಗೆ ನನ್ನಂತ ಜೀವಿಗಳು ಒದ್ದಾಡಿದರೆ, ಅನೇಕರಿಗೆ ಇದೊಂದು ವಿಷಯವೇ ಅಲ್ಲಾ? ಅಥವಾ ಈ ಪ್ರಶ್ನೆ ಏಳುವುದೇ ಇಲ್ಲಾ, ಎದ್ದರೂ ಅದು ಮಬ್ಬು ಬೆಳಕಿನ ಬಾರುಗಳಲ್ಲಿ ಮಾತ್ರ. 

ಅದೇನೆ ಇರಲಿ ಈಗ ಬರಯುವುದಕ್ಕೆ ಹೋಗಿದ್ದು, ಇತ್ತೀಚಿನ ನನ್ನ ಜೀವನದ ಆಗು ಹೋಗುಗಳ ಕುರಿತು. ಮೊನ್ನೆಯಿಂದ ಖುಷ್ವಂತ್ ಸಿಂಗ್‍ರವರ ಡೆತ್ @ಮೈ ಡೋರ್‍ಸ್ಟೆಪ್ ಪುಸ್ತಕ ಓದುತ್ತಿದ್ದೇನೆ. ಅಲ್ಲಿನ ನವಿರಾದ ಹಾಸ್ಯ ನನ್ನನ್ನು ಅನೇಕ ಚಿಂತನೆಗಳಿಗೆ ಹಚ್ಚಿದೆ. ನಾನು ಬಹಳ ಹಾಸ್ಯವನ್ನು ಇಷ್ಟಪಡುವ ವ್ಯಕ್ತಿಯಾಗಿದ್ದವನು. ಆಗಿದ್ದವನೂ ಎಂದರೇ? ಈಗ ಏನಾಗಿದ್ದೀಯಾ? ನನಗೆ ಅರಿವಿಲ್ಲದೆ ನನ್ನ ಜೀವನ ಕ್ರಮ, ನನ್ನ ಚಿಂತನೆಗಳು, ಆಲೋಚನೆಗಳು, ನನ್ನನ್ನು ಹಾಸ್ಯದಿಂದ, ನಗುವಿನಿಂದ ತುಂಬಾ ದೂರ ತಲ್ಲಿವೆ. ಆದರ್ಶಗಳು, ಭೌದ್ಧಿಕ ತತ್ವಗಳು, ಅದು ಇದು, ಮಣ್ಣು ಮಸಿಯೆಂದು ನಿಜವಾದ ನಗುವನ್ನು ಸವಿಯಲಾಗದ ಸ್ಥಿತಿಗೆ ತಲುಪಿದ್ದೇನೆ. ಎಲ್ಲದರಲ್ಲಿಯೂ ಕೊಂಕು ಹುಡುಕುವಂತೆ, ಆಕಾಶವೇ ಕಳಚಿದಂತೆ ವರ್ತಿಸಿದ್ದೇನೆ. ಇದು ಹೇಗೆ ಸಾಧ್ಯವೆನ್ನುವಷ್ಟೂ. ಉದಾಹರಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಪೋಸ್ಟ್‍ಗಳು ಎಲ್ಲರನ್ನು ಮೆಚ್ಚಿಸಲು, ಒಳ್ಳೆಯವನಂತೆ ಬರೆದಿದ್ದೇನೆ. ಮಾತು ತೆಗೆದರೆ, ಜೀವನದ ಆದರ್ಶ, ಉದ್ದೇಶಗಳು, ಸಹಾಯ ಮನೋಧರ್ಮ, ಸೇವೆ, ಬದಲಾವಣೆ, ಇವುಗಳನ್ನು ಬಿಟ್ಟರೆ, ಅಲ್ಲೊಂದು, ನಗು, ಖುಷಿ, ಸಂತೋಷ ಇಲ್ಲವೇ ಇಲ್ಲ. 

ಮುನ್ನುಡಿ ಅತಿಯಾಯಿತು. ನನ್ನದು ಯಾವಾಗಲೂ ಇದೇ ಸಮಸ್ಯೆ. ವಿಷಯಕ್ಕಿಂತ ಮುನ್ನುಡಿ ಹೆಚ್ಚು. ಅದನ್ನೇ ಬೆಳೆಸುತ್ತಾ ಹೋಗಿದ್ದೇನೆ. ವಾರಾಂತ್ಯದಲ್ಲಿ ನನ್ನ ಪಿಯುಸಿ ಗೆಳೆಯ ಶಂಕರ ಮಗಳ ನಾಮಕರಣಕ್ಕೆಂದು ಕುಶಾಲನಗರಕ್ಕೆ ಹೋಗಿದ್ದೆ. ಇದಕ್ಕೂ ಮುನ್ನಾ 2007ರಲ್ಲಿ ಒಮ್ಮೆ ನಾವೆಲ್ಲಾ ಸೇರಿದ್ದವು, ಸೇರಿದ್ದೆವು ಎಂದರೇ, ಅದಾದ ನಂತರವೂ ಅನೇಕ ಬಾರಿ ಸೇರಿದ್ದೇವೆ. ಆದರೇ, ಈ ಹತ್ತು ವರ್ಷಗಳಲ್ಲಿ ನಮ್ಮೆಲ್ಲರ ಆಲೋಚನೆಗಳು, ಜೀವನ ಶೈಲಿ, ಜೀವನದ ಪಾಠ ಅಥವಾ ಜೀವನದ ಬಗ್ಗೆ ಇರುವ ವಿವರಣೆಗಳು ಅದೆಷ್ಟು ಬದಲಾಗಿದ್ದಾವೆಂದು ಅಚ್ಚರಿಯಾಯಿತು. ಇಲ್ಲಿ ಯಾರನ್ನೂ ದೂರುತ್ತಿಲ್ಲ, ಯಾರ ಹೆಸರನ್ನು ಬಳಸುತ್ತಿಲ್ಲ ಮತ್ತೂ ಬಳಸುವುದೂ ಇಲ್ಲ. ಕೇವಲ 35 ವರ್ಷಗಳನ್ನು ದಾಟುವ ವೇಳೆಗೆ ಜೀವನದ ಸಾರವೇ ಆರಿಹೋಗಿದೆ, ಉತ್ಸಾಹವೇ ನಲುಗಿದೆ ಎನಿಸಿತು. ಇದು ನನ್ನ ವೈಯಕ್ತಿಕ ಅಭಿಪ್ರಾಯ. 

ಮನಸ್ಸು ನಿರಂತರ ಲವಲವಿಕೆಯಿಂದ ಇರಬೇಕಾಗುತ್ತದೆ. ಹೊರಗಿನ ಜಗತ್ತಿಗೂ, ಮನಸ್ಸಿಗೂ ಹೆಚ್ಚು ಸಂಬಂಧವಿರಬಾರದೆಂಬುದು ನನ್ನ ಅನಿಸಿಕೆ. ಅಂದರೇ, ಜಗತ್ತಿನಲ್ಲಿ ಏನು ನಡೆದರೂ ನಾವು ತಲೆ ಕೆಡಿಸಿಕೊಳ್ಳುವುದು ಬೇಡವೆಂಬುದೋ? ತಲೆ ಕೆಡಿಸಿಕೊಳ್ಳುವುದೆಂದರೇನು? ಕೆಡಿಸಿದರು ಎಂದರೇನು? ಕೆಟ್ಟಿದೆ ಎಂದರೆ ಉಪಯೋಗಿಸುವ ಮಾದರಿಯಲಿಲ್ಲ. ಉಪಯೋಗಿಸಲು ಅರ್ಹವಲ್ಲ, ಯೋಗ್ಯವಲ್ಲ. ಕಾರು ಕೆಟ್ಟಿದೆ, ಉಪಯೋಗಿಸುವುಕ್ಕೆ ಆಗುವುದಿಲ್ಲ. ಹೌದಾದರೇ, ನಾವು ಹೊರಗಿನ ವಿಷಯಗಳಿಗೆ ತಲೆ ಕೆಡಿಸಿಕೊಂಡರೆ, ನಿಮ್ಮ ತಲೆಯನ್ನು, ಅಥವಾ ಒಳಗಿರುವ ಮೆದುಳನ್ನು ಅಥವಾ ಅಲ್ಲಿಯೇ ಇರುವ ಬುದ್ದಿಯನ್ನು ನಾವು ಉಪಯೋಗಿಸಲು ಬರುವುದಿಲ್ಲ. ಆದರೆ, ಇಡೀ ಜಗತ್ತಿನಲ್ಲಿ ಆಗುತ್ತಿರುವ ಎಲ್ಲಾ ವಿದ್ಯಮಾನಗಳು ನಮ್ಮ ತಲೆಯೊಳಗೆ ನಡೆಯುತ್ತಿವೆ ಎನ್ನುವ ಭ್ರಮೆಯಲ್ಲಿ ಮುಳುಗಿದ್ದೇವೆ. ಮುಳುಗಿರುವುದರಿಂದ ತಲೆಯೊಳಗಿರುವ ಬುದ್ದಿ ನೀರು ಕುಡಿದು ನಿಗರಿಹೋಗಿದೆ, ನಿಗರಿಹೋಗಿದೆ ಎಂದರೆ ಸತ್ತು ಹೋಗಿದೆ. ಮಾನಸಿಕವಾಗಿ ಮನುಷ್ಯ ಸತ್ತ ಮೇಲೆ ಅವನ ದೇಹ ಮಾತ್ರ ಇರುತ್ತದೆ. 

ಜಗತ್ತಿನಲ್ಲಿ ಅನೇಕರು ದೈಹಿಕವಾಗಿ ಬದುಕಿದ್ದಾರೆ ಹೊರತು ಮಾನಸಿಕವಾಗಿ ಅಲ್ಲವೇ ಅಲ್ಲ. ಮಾನಸಿಕವಾಗಿ ಸತ್ತು ಅಥವಾ ಕೋಮಾ ಸ್ಥಿತಿಗೆ ತಲುಪಿದ್ದಾರೆ. ನಮ್ಮ ಮೊನ್ನೆಯ ಕೂಟದಲ್ಲಿ ನಡೆದದ್ದು ಅದೇ. ಸೇರಿದ್ದವರು ಆರೆಂಟು ಜನರು, ಯಾಕೆ ಸೇರಿದ್ದೀವಿ? ಏನು ಮಾತನಾಡಿದ್ದೇವೆ? ಏನು ನಡೆಯುತ್ತಿದೆ ಎಂಬುದರ ಅರಿವೇ ಇರಲಿಲ್ಲ. ಅರಿವಿಲ್ಲವೆಂದರೇ, ಕುಡಿದು ಟೈಟಾಗಿ ಅಂತಾಗಲಿ ಅಥವಾ ಗಾಂಜಾ, ಡ್ರಗ್ ಹಾಕಿದ್ದೀವಿ ಎಂದಲ್ಲ. ಒಂದು ಕಾರ್ಯಕ್ರಮಕ್ಕೆ ಬಂದರೂ ಮತ್ತಾವುದೋ ತಲೆಯೊಳಗೆ ಕೊರೆಯುತ್ತಿರುವುದು. ಇಲ್ಲಿದ್ದೂ ಇಲ್ಲದ ಹಾಗೆ ಇರುವುದು. 

ಹೌದು, ಅದರಲ್ಲಿ ತಪ್ಪೇನು, ಭಾನುವಾರ ಆದಮೇಲೆ ನಾಳೆ ಸೋಮವಾರ ಆಫೀಸಿಗೆ ಹೋಗಬೇಕು. ಮನೆಯಲ್ಲಿ ಹೆಂಡತಿಯೊಬ್ಬಳೇ ಇದ್ದಾಳೆ. ಮಕ್ಕಳ ಶಾಲೆ ಆರಂಭವಾಗುವ ದಿನಗಳು ಬಂದಿವೆ. ನಾಳಿದ್ದು ಚೀಟಿ ಕಟ್ಟಬೇಕು. ಕಾರ್ ಸರ್ವಿಸ್ ಆಗಿಲ್ಲ. ಮಳೆ ಬಿದ್ದಿದೆ. ವಾಪಸ್ ಬೆಂಗಳೂರು ತಲುಪಬೇಕು, ಲೇಟಾದರೆ? ನಾಮಕರಣಕ್ಕೂ ಬರಬೇಕಿತ್ತಾ? ಬಂದಿದ್ದು ಆಯ್ತು. ಈಗ ಏನು ಮಾಡುವುದು? ಎರಟು ಸೌಟು ಮಾಂಸಕ್ಕೆ ಅಷ್ಟು ದೂರದಿಂದ ಬರಬೇಕಿತ್ತಾ? ಇಲ್ಲಾ ಇಲ್ಲಾ ಸ್ನೇಹ ಮುಖ್ಯ. ಒಬ್ಬರು ಕರೆದಿದ್ದಾರೆ ಎಂದರೆ ಅದಕ್ಕೆ ಮರ್ಯಾದೆ ಕೊಟ್ಟು ಬರಬೇಕು. ಅಲ್ಲಿಂದ ಬಂದಿದ್ದೇವೆ, ನಮಗೆ ಇನ್ನೂ ಚೆನ್ನಾಗಿ ವ್ಯವಸ್ಥೆ ಮಾಡಬೇಕಿತ್ತು. ಏನ್, ಗುರೂ ಇನ್ನೂ ಎಷ್ಟು ವರ್ಷ ಬೇರೆಯವರು ವ್ಯವಸ್ಥೆ ಮಾಡಲಿ ಅಂತಾ ಕೇಳೋದು? ಒಂದು ಬಸ್ ಚಾರ್ಜ್‍ಗೆ, ಒಂದು ಕಾಫೀ ಟೀ ಗೆ ನೀನು ಬಿಲ್ ಕೊಡು ನೀನು ಕೊಡು ಎನ್ನುವದಾ? ಇಪ್ಪತ್ತು ವರ್ಷದ ಗೆಳೆತನ, ಹತ್ತಾರ ವರ್ಷದಿಂದ ದುಡಿತಾ ಇದ್ದೀವಿ, ಒಂದು ದಿನ ನಾಲ್ಕು ಜನಕ್ಕೆ ಒಂದು ಹೋಟೆಲ್, ಒಂದು ಬಾಟಲಿ ವಿಸ್ಕಿ, ಒಂದೆರಡು ಪ್ಲೇಟ್ ಚಿಕನ್, ಮಟನ್, ಒಂದು ಪ್ಯಾಕ್ ಸಿಗರೇಟು, ಇಷ್ಟೂ ಕೋಡೋಕೆ ಆಗಲ್ವಾ? ದುಡ್ಡಿಲ್ಲವಾ? ಇದೆ, ಆದರೆ ಸುಮ್ಮನೆ ಯಾಕೆ ಖರ್ಚು ಮಾಡಬೇಕು. ಇಲ್ಲ ದುಡ್ಡು ಇಲ್ಲ, ದುಡಿಮೆ ಕಮ್ಮಿ. ತುಂಬಾ ಕಮಿಟ್‍ಮೆಂಟ್ಸ್. ಬರೋ ಸಂಬಳ ಯಾವುದಕ್ಕೂ ಸಾಲುತ್ತಿಲ್ಲ. ಎಷ್ಟು ದುಡಿದರೂ ನಿಲ್ಲುತ್ತಿಲ್ಲ. ನಿಲ್ಲುತ್ತಿಲ್ಲವೋ ಅಥವಾ ಸಾಲುತ್ತಿಲ್ಲವೋ ತಿಳಿಯುತ್ತಿಲ್ಲ. 

ಎಲ್ಲವೂ ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತಿವೆ. ಕಾಲೇಜು ದಿನಗಳು. ಅಪ್ಪನಿಂದ 50 ರೂಪಾಯಿ ಕಡಿಮೆ ಬಂದರೆ, ಗೊಣಗುತ್ತಿದ್ದ ದಿನಗಳು, ಮುಖ ತಿರುಗಿಸಿಕೊಂಡು ಬೈಯುತ್ತಿದ್ದೆ. ಕಡಿಮೆ ದುಡ್ಡು ಕೊಟ್ಟರೆ ಓದುವುದು ಹೇಗೆ? ಮಾರ್ಕ್ ತೆಗೆಯುವುದು ಹೇಗೆ? ಹಣಕ್ಕೂ ಅಂಕಕ್ಕೂ ಏನು ಸಂಬಂಧ? ಬಂದ ಕಡಿಮೆ ಸಂಬಳದಲ್ಲಿ ಯಾವುದೇ ದುಶ್ಚಟವಿಲ್ಲದೆ ಹೊರಗಡೆ ಒಂದು ಟೀಯನ್ನು ಕುಡಿಯದೆ ಬೆಳೆಸಿದ ಅಪ್ಪನೆಲ್ಲಿ. ಕಂಠಪೂರ್ತಿ ಕುಡಿದು ಬಿದ್ದ ಮಗನೆಲ್ಲಿ? ಯಾರಿಗೂ ಕೈಚಾಚದ ಅಪ್ಪನೆಲ್ಲಿ, ಹೆಂಡಕ್ಕೆ, ಸಿಗರೇಟಿಗೆ, ಮೋಜಿಗೆ ಬೇರೆಯವರ ಮುಂದೆ ಸ್ವಂತಿಕೆ ಬಿಟ್ಟು ಗೋಗರೆಯುವ ಮಗನೆಲ್ಲಿ. ಮಾತು ಹಾದಿ ತಪ್ಪಿತು, ನಾನು ದಾರಿ ತಪ್ಪಿದ್ದೆ. ತಪ್ಪಿದ್ದೆ! ಈಗ? ನೀವು ಹೇಳಬೇಕು.

ಲವಲವಿಕೆಯಿಂದ ದುರಂತದೆಡೆಗೆ ಸಾಗುತ್ತಿದ್ದ ಬರವಣಿಗೆಯನ್ನು ಸರಿ ಮಾಡುತ್ತಿದ್ದೆನೆ. ಈ ಬರವಣಿಗೆಯನ್ನು ಬರೆಯುತ್ತಿರುವ ಉದ್ದೇಶವೊಂದೆ. ನಾವು ಮಾತನಾಡುತ್ತಿರುವ ನಡುವೆ ಗೆಳೆಯ ವಿಜಿ ಹೇಳಿದ, ನೀನು ಬರೆಯುವುದನ್ನು ಯಾಕೆ ನಿಲ್ಲಿಸಿದೆ, ಅದನ್ನು ಮುಂದುವರೆಸೆಂದು. ಅವನೇನೂ ನನ್ನ ಬರವಣಿಗೆಯನ್ನು ಓದುವುದಿಲ್ಲ ಬಿಡಿ. ಆದರೂ, ಆ ಮಾತು ನನಗೆ ಹಿಡಿಸಿತು. ಮನಸ್ಸಿಗೆ ಶಕ್ತಿ ತುಂಬುವ ವಿಷಯಗಳಲ್ಲಿ ಸಾಹಿತ್ಯ ಮತ್ತು ಸಂಗೀತ ಬಹಳ ಮುಖ್ಯ. ಓದುವುದು, ಬರೆಯುವುದು ಮತ್ತು ಉತ್ತಮ ಸಂಗೀತ ಕೇಳುವುದು ನಿಮ್ಮನ್ನು ನಿರಂತರವಾಗಿ ಜೀವಂತವಾಗಿಸುತ್ತವೆ. ಓದುವುದರಿಂದ ನಿಮ್ಮ ಬೌದ್ಧಿಕ ಮಟ್ಟ ಹೆಚ್ಚುತ್ತದೆ, ಸಂಗೀತ ಮನಸ್ಸನ್ನು ನೆಮ್ಮದಿಯತ್ತ ತಳ್ಳುತ್ತದೆ. ನಮ್ಮೊಳಗೆ ಖುಷಿಯಿಲ್ಲದೆ ಇರುವಾಗ ಹೊರಗಡೆಯಿಂದ ಅದನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಜನರು ಯಾಕೆ ಕುಡಿಯುತ್ತಾರೆ, ಯಾಕೆ ಸೇದುತ್ತಾರೆ ಮತ್ತು ಯಾಕೆ ಗಾಸಿಪ್ ಮಾಡುತ್ತಾರೆ. ನನ್ನ ಪ್ರಕಾರ ಗಾಸಿಪ್ ಕೂಡ ಒಂದು ಚಟ. ಕೆಲವರಿಗೆ ಬೇರೆಯವರ ಬಗ್ಗೆ ಮಾತನಾಡದೆ ಇದ್ದರೆ ನೆಮ್ಮದಿಯಿರುವುದಿಲ್ಲ. ನಮ್ಮ ಅನೇಕಾ ಹಳ್ಳಿಗರು ಇದಕ್ಕೆ ದಾಸರಾಗಿದ್ದಾರೆ. ವ್ಯಸನಿಗಳು. ಕೆಲವರಿಗೆ ಕೆಟ್ಟದ್ದು ಮಾಡುವುದು, ಮನೆ ಹಾಳು ಮಾಡುವುದು ಚಟ, ಅವರು ಅದಕ್ಕೆ ವ್ಯಸನಿಗಳಾಗಿರುತ್ತಾರೆ. ಅವರ ಇತಿಹಾಸವೆಲ್ಲ ಅದೊಂದೆ ಕಾರ್ಯವಾಗಿರುತ್ತದೆ ಅಥವಾ ಆ ಕಾರ್ಯವೇ ಇತಿಹಾಸವಾಗಿರುತ್ತದೆ.

ನನ್ನ ಬರವನಿಗೆಯೂ ಅಷ್ಟೇ, ಇದನ್ನು ಯಾರಾದರೂ ಓದಲಿ ಎಂದು ಬರೆಯುವುದಿಲ್ಲ. ನಾನು ಬರೆಯುವುದು ನನ್ನ ಆತ್ಮ ತೃಪ್ತಿಗಾಗಿ. ಬರವಣಿಗೆ ನನ್ನನ್ನು ಜೀವಂತವಾಗಿಸುತ್ತದೆ. ಬರೆದು ಎಷ್ಟೋ ವರ್ಷದ ನಂತರ ತಿರುಗಿ ಓದಿದರೆ, ನಗು ಬರುತ್ತದೆ, ಅಳು ಬರುತ್ತದೆ, ಬೇಸರವೂ ಆಗುತ್ತದೆ. ಒಮ್ಮೊಮ್ಮೆ ಥೂ ಅಸಹ್ಯವೆನಿಸುತ್ತದೆ. ಆದರೂ ಅದೆಲ್ಲವೂ ನಡೆದದ್ದು, ಅದನ್ನು ಅಳಿಸಲಾಗದು. ಬರೆಯದೇ ಇದ್ದರೆ ಅವೆಲ್ಲವೂ ಮಾಸಿ ಹೋಗಿರುತ್ತದೆ. ನಮ್ಮ ಬಗ್ಗೆ ನಾವು ಆದಷ್ಟು ಬೆತ್ತಲಾಗಿರಬೇಕು. ನಾವು ನಮ್ಮನ್ನು ನಗ್ನವಾಗಿರಿಸಿದರೆ, ನಮ್ಮ ಬೆನ್ನು ನೋಡಿ ಅಯ್ಯೋ ಬೆತ್ತಲು ಎನ್ನುವವರು ಕಮ್ಮಿಯಾಗುತ್ತಾರೆ. ಲೇಖನ ಎಲ್ಲಿಂದ ಎಲ್ಲಿಗೋ ಹೋಗುತ್ತಿದೆ ಎಂದು ಗಾಬರಿಯಾಗಬೇಡಿ ಮತ್ತು ಓದುವುದನ್ನು ನಿಲ್ಲಿಸಬೇಡಿ. ಇಲ್ಲಿ ಯಾವ ವಿಷಯ ಬಂದರು ಅದು ನಿಮಗೆ ಹೊಸತೆಂಬುದು ನನಗೆ ಗೊತ್ತು. ಮತ್ತೆ ನೀವು ನಿಮ್ಮ ಆಲೋಚನಾ ಕ್ರಮವನ್ನು ಈ ಓದು ಮುಗಿಯುವವರೆಗೂ ಕೈಬಿಡಿ. ಉದಾಹರಣೆಗೆ ನಾವು ಯಾವುದೇ ಬರಹವನ್ನೂ ಓದುವಾಗ, ಓದುವ ಒಂದು ನಿರ್ದಿಷ್ಠ ಕ್ರಮವನ್ನು ಅನುಸರಿಸುತ್ತಾ ಬಂದಿದ್ದೇವೆ. ಅದು ಇರಲೇ ಬೇಕೆಂಬ ನಿಯಮವಿಲ್ಲ, ಇದ್ದರೂ ಅದನ್ನು ಅನುಸರಿಸಲೇಬೇಕೆಂಬ ಕಡ್ಡಾಯವಿಲ್ಲ. 

ಓದುವ ಕ್ರಮ ಯಾವುದು, ಅದಕ್ಕೊಂದು ಮೊದಲಿರಬೇಕು. ಉದ್ದೇಶವಿರಬೇಕು, ಕಂಟಿನ್ಯೂಟಿ ಇರಬೇಕು, ವಾಸ್ತವಕ್ಕೆ ಹತ್ತಿರ ಇರಬೇಕು, ವಿಷಯಕ್ಕೆ ಬದ್ದವಾಗಿರಬೇಕು, ಅದಕ್ಕೊಂದು ಅರ್ಥಪೂರ್ಣ ಕೊನೆಯಿರಬೇಕು. ಇದೆಲ್ಲವೂ ಯಾಕಿರಬೇಕು? ನಿಮ್ಮ ಮನಸ್ಸಿನ ಖುಷಿಗಾಗಿ. ಕಥೆಯಲ್ಲಿ ನಾಯಕನೇ ಗೆಲ್ಲಬೇಕು, ನಾಯಕಿ ಸುಂದರಿಯಾಗಿರಲೇ ಬೇಕು. ಒಳ್ಳೆಯವರಿಗೆ ಕಷ್ಟ ಬಂದು ಕೊನೆಗೆ ಒಳ್ಳೆಯದೇ ಗೆಲ್ಲಬೇಕು. ನಮ್ಮ ಸುತ್ತ ಮುತ್ತಲಿನ ಪರಿಸರ ಹಾಗಿಲ್ಲ, ಬದಲಾವಣೆಯಾಗಿದೆ, ಆಗುತ್ತಲೇ ಇದೆ. ಕೆಟ್ಟದ್ದು ಗೆಲ್ಲಬೇಕೆಂಬ ಹಟ ನನಗಿಲ್ಲ. ನಾನು ಪ್ರಯಾಣದ ಗುರಿಗಿಂತ ಪ್ರಯಾಣದ ದಾರಿಯನ್ನು ಪ್ರೀತಿಸುವವನು. ಇರಲಿ, ನಮ್ಮ ಪಿಯುಸಿ ಗೆಳೆಯರ ಕೂಟದ ವಿಷಯಕ್ಕೆ ಬರೋಣ. ನಾವು ಪಿಯುಸಿ ಓದಿದ್ದು 1998-2000 ರ ಸಾಲಿನಲ್ಲಿ, ಅದಾದ ನಂತರ ಆರೇಳು ವರ್ಷ ಪರಿಚಯವೇ ಇಲ್ಲದವರ ಹಾಗೆ ಬದುಕಿದ್ದೆವು. ಬದುಕುವ ಪ್ರಮೇಯವೊಂದಿತ್ತು, ಓದು, ಕೆಲಸ, ಸಂಪಾದನೆ ಹೀಗೆ. ಎಲ್ಲರೂ ಓದು ಮುಗಿಸಿ, ಕೆಲವರು ಮದುವೆಯೂ ಆಗಿ ಅಥವಾ ಆಗುವ ಸಮಯಕ್ಕೆ ಅರ್ಧಕ್ಕೆ ಅರ್ಧ ಜನರು ಜೊತೆಯಾದವು. ಶುರುವಿನ ದಿನಗಳಲ್ಲಿ ಉತ್ಸಾಹ ಉಕ್ಕಿ ಹರಿಯುತ್ತಿತ್ತು. ಆಗ್ಗಾಗ್ಗೆ ಸಿಗುವುದು, ಸೇರುವುದು, ಮಾತುಕತೆ, ಚರ್ಚೆ, ಹಳೆಯ ನೆನಪುಗಳ ಮೆಲುಕು ಹೀಗೆ ಸಾಗುತ್ತಿದ್ದ ದಿನಗಳು ಮಾಸುತ್ತ ಬಂದವು. ರಾತ್ರಿ ಹನ್ನೆರಡು ಒಂದು ಗಂಟೆಯ ವರೆಗೂ ನಡೆಯುತ್ತಿದ್ದ ವಾಟ್ಸಪ್ ಚರ್ಚೆಗಳು, ಕಿತ್ತಾಟ, ತುಂಟತನ ಕ್ರಮೇಣ ನಿಂತೆ ಹೋದವು. ಏಳು ಗಂಟೆಗೆ ಸೇರೋಣವೆಂದರೆ ಐದು ಗಂಟೆಗೆ ಬರುತ್ತಿದ್ದವರು ಈಗ ಹತ್ತು ಹನ್ನೊಂದಾದರೂ ಬರುವುದಿಲ್ಲ. ಇನ್ನೂ ಸ್ವಲ್ಪ ಸಮಯ ಇರೋಣವೆನ್ನುವ ಮಂದಿ ಈಗ ಬೇಗ ಹೋಗೋಣ ಲೇಟ್ ಆಗುತ್ತಿದೆ ಎಂದು ಹೊರಟೆವು. ಈ ಬದಲಾವಣೆಯಾಗಿದ್ದು ಏಕೆ? ಹೇಗೆ? ಇದರ ಸಾಧಕ ಬಾಧಕಗಳೇನು? ಇದು ಕೇವಲ ನಮ್ಮ ಅಂದರೇ ಪಿಯುಸಿ ಗೆಳೆಯೊರೊಟ್ಟಿಗೆ ಮಾತ್ರವೇ? ಬೇರೆ ಕಡೆ ಹೀಗಿಲ್ಲವೇ? ಎಲ್ಲಾ ಕಡೆಯಲ್ಲಿಯೂ ಹೀಗೆಯೇ ಇದೆ, ಜೀವನದ ಆಸಕ್ತಿ ಕುಂದುತಿದೆ. ಉತ್ಸಾಹ ಬತ್ತಿ ಹೋಗಿದೆ. ಯಾವುದನ್ನು ಆಸ್ವಾದಿಸಲು ಮನಸ್ಸು ಬರುತ್ತಿಲ್ಲ. ಸ್ವಲ್ಪ ದುಡ್ಡು ಮಾಡಬೇಕು ಎನಿಸುತ್ತಿದೆ ಆದರೇ ಅದೂ ಕೈಗೂಡುತ್ತಿಲ್ಲ. ದುಡ್ಡು ಮಾಡಬೇಕೋ? ಉಳಿಸಬೇಕೋ? ಗೊತ್ತಿಲ್ಲ.

ಜೀವನವೇ ಹೀಗೆ, ಮೊದಲ ಸ್ವಲ್ಪ ದಿನವಿದ್ದ ಉತ್ಸಾಹ ಸಾಯುತ್ತ ಬರುತ್ತದೆ. ಜೀವನದ ಉಲ್ಲಾಸಕ್ಕೆ ಉತ್ಸಾಹಕ್ಕೆ ನಿರಂತರ ನೀರು ಗೊಬ್ಬರ ಹಾಕುತ್ತಿರಬೇಕು. ಅನೇಕಾ ಕನಸುಗಳು ಕನಸುಗಳಾಗಿಯೇ ಉಳಿಯುವುದು ನಾವು ಅವುಗಳನ್ನು ಮರೆಯುವುದಕ್ಕೆ. ಕನಸುಗಳ ಜೊತೆಯಲ್ಲಿರಬೇಕು, ಆ ಕನಸುಗಳು ನಮ್ಮನ್ನು ಎಚ್ಚರಿಸುತ್ತಿರಬೇಕು. ಕನಸುಗಳು ಎಚ್ಚರಿಸುವಂತ ಕನಸುಗಳಾಗಿರಬೇಕು. ಗೊರಕೆ ಹೊಡೆದು ಮಲಗಿಸುವಂತವಾಗಬಾರದು. ಗೆಳೆತನವೂ ಅಷ್ಟೆ ಬೆಳೆಸಿ, ಪೋಷಿಸಿ, ಪ್ರೋತ್ಸಾಹಿಸುವಂತಿರಬೇಕು. ಕಾಟಾಚಾರದ ಗೆಳೆತನ ಸೂಳೆಗಾರಿಕೆಗಿಂತ ಕೀಳೆಂಬುದು ನನ್ನ ಅನಿಸಿಕೆ. ಒಬ್ಬರಿಗೊಬ್ಬರು ಸಹಾಯ ಮಾಡಲೇಬೇಕೆಂಬ ನಿಯಮವಿಲ್ಲ ಆದರೇ ದುರುಪಯೋಗಪಡಿಸಿಕೊಳ್ಳಬಾರದೆಂಬ ನೈತಿಕತೆ ಇರಬೇಕು. ಅಪರೂಪಕ್ಕೊಮ್ಮೆ ಸಿಗುತ್ತೇನೆ, ಇವರಿಂದ ನನಗೇನು? ಎನ್ನುವ ಅಹಂ ಇರಬಾರದು. ನಂಬಿಕೆಯಿಲ್ಲದ ಗೆಳೆತನ ಹಾದರಕ್ಕೂ ಸಮವಿಲ್ಲ. ಅದು ಗೆಳೆತನವೇ ಅಲ್ಲವೆಂಬುದು ನನ್ನ ದೃಢ ನಿರ್ಧಾರ. ಹೂವಿನೊಂದಿಗೆ ನಾರು ಸೇರುವಂತೆಯೇ ಗೆಳೆತನ, ಯಾರೋ ಒಬ್ಬ ಗೆಳೆಯನ ಹೆಸರಿಂದ ನಮಗೆ ಹೆಸರು ಬರುತ್ತದೆ. ನಾವು ಯಾರ ಸ್ನೇಹಿತರು ಅಥವಾ ನಮ್ಮ ಸ್ನೇಹಿತರು ಯಾರು ಎನ್ನುವುದರ ಮೇಲೆ ಕೂಡ ಸಮಾಜ ನಮ್ಮನ್ನು ಅಳೆಯುತ್ತದೆ. ನಮಗೆ ಸಾವಿರ ಸ್ನೇಹಿತರಿರಬಹುದು, ಸಮಯಕ್ಕೆ ಬರುವ ಆಗುವ ಗೆಳೆಯರು ಕೆಲವೇ ಕೆಲವರು. ಸಂಸಾರ, ಕೆಲಸ, ಸಂಪಾದನೆ ಅದೂ ಇದು ಎಂದು ಸಬೂಬು ಹೇಳಿ ಆ ಗೆಳೆಯರ ಸಂಖ್ಯೆಯನ್ನು ಕಡಿಮೆಗೊಳಿಸಿಕೊಳ್ಳುತ್ತೇವೆ. 

ಕೆಲವೊಮ್ಮೆ ಇಂತಹ ಸಣ್ಣ ವಿಷಯಗಳನ್ನೆಲ್ಲಾ ಬರೆಯಬೇಕೇ? ಎನಿಸುವುದುಂಟು. ಬರೆಯುವುದಿರಲಿ ಇದನ್ನೆಲ್ಲಾ ಚರ್ಚಿಸಬೇಕಾ ಎನಿಸಿದರು ತಪ್ಪಿಲ್ಲ. ಜೀವನವೇ ಹಾಗೆ ಯಾವುದನ್ನು ಚಿಂತಿಸಬೇಕು? ಯಾವುದಕ್ಕೆ ಮನ್ನಣೆ ಕೊಡಬೇಕು? ಯಾವುದನ್ನು ಕಡೆಗಣಿಸಬೇಕು? ಯಾರೊಂದಿಗಿರಬೇಕು? ಬೇಡ? ಹೀಗೆ ಪ್ರಶ್ನೆಗಳೊಂದಿಗೆ ಸೆಣೆಸಾಡುತಿರುತ್ತದೆ. ಅರ್ಥವಿಲ್ಲದ ವಿಷಯಕ್ಕೆ, ತಲೆ ಕೆಡಿಸಿಕೊಳ್ಳುವ ಮನಸ್ಸು ಬಹಳ ಗಂಬೀರ ವಿಷಯವನ್ನು ತಾತ್ಸಾರವಾಗಿ ಕಾಣುತ್ತದೆ. ಯಾವುದೋ ದೇಶದ ಯಾವುದೋ ಮೂಲೆಯಲ್ಲಿರುವ ಬಡತನದ ಬಗ್ಗೆ ಅಯ್ಯೋ ಎನ್ನುವ ಬಾಯಿ, ಹಾದಿಯಲ್ಲಿ ಅಥವಾ ಪ್ರಯಾಣಿಸುವ ರೈಲಿನಲ್ಲಿ ತೆವುಳುತ್ತ ಬರುವ ಬಿಕ್ಷುಕನಿಗೆ ಬೈಯ್ಯುತ್ತದೆ. ಎಂದೋ ನಾನು ಮಾಡಿರುವ ಸಹಾಯವನ್ನು ಸದಾ ನೆನೆಯಬೇಕೆನಿಸುತ್ತದೆ. ಬೇರೆಯವರು ನನಗೆ ಮಾಡಿದ ಸಹಾಯವನ್ನು ಮರೆತು, ಅದೇನು ಮಹಾ ಸಹಾಯವೆನ್ನುತ್ತದೆ. ಬಂದ ಹಾದಿ ಮರೆತುಹೋಗಿರುತ್ತದೆ. ಕಷ್ಟದ ದಿನಗಳಾಗಿರಲಿ, ಸುಖದ ದಿನಗಳಾಗಿರಲಿ. ಎಲ್ಲವೂ ಒಂದೆ. ಯಾವುದೂ ಶಾಶ್ವತವಲ್ಲವೆಂದು ತಿಳಿದಿದ್ದರೂ, ಎಲ್ಲವೂ ಶಾಶ್ವತವೆಂಬಂತೆ ಯುದ್ದಕ್ಕಿಳಿಯುತ್ತದೆ. 

ಈ ವಾದ, ವಿವಾದ, ಘರ್ಷಣೆ, ಗಲಾಟೆ ಎಲ್ಲವೂ ಯಾವುದಕ್ಕೆ? ಏನನ್ನು ಪಡೆಯುವುದಕ್ಕೆ? ಏನನ್ನು ಕೊಂಡು ಹೋಗುವುದಕ್ಕೆ? ವಿದ್ಯಾವಂತ, ಅವಿದ್ಯಾವಂತ, ಹಳ್ಳಿಗ, ನಗರದವ, ಬಡವ, ಬಲ್ಲಿಗ ಎಲ್ಲರಿಗು ಅರಿತಿರುವ ಸತ್ಯವೊಂದಿದೆ. ಅದನ್ನು ಎಲ್ಲರೂ ನಂಬುತ್ತಾರೆ, ನಂಬಿ ಬದುಕನ್ನು ಸವೆಸುತ್ತಾರೆ. ಅದೆಂದರೆ, ನಾವು ಇರುವುದು ನಾಲ್ಕು ದಿವಸ ಮಾತ್ರ. ನಮ್ಮ ಸೇವೆ ಮುಗಿದ ಮೇಲೆ ಎಲ್ಲವನ್ನೂ ಬಿಟ್ಟು ಹೋಗಲೆಬೇಕು. ಹೋಗುವ ಮುನ್ನಾ ಯಾಕೀ ಕಿತ್ತಾಟ, ಚೀರಾಟ? ಹೊಡೆದಾಟ? ಬಡಿದಾಟ? ಇದು ವೈರಾಗ್ಯದ ಮಾತಲ್ಲ. ಅನಿವಾರ್ಯದ ಮಾತು. ಈ ದೇಶದ ಪ್ರಜೆ ಬೇರೆ ದೇಶದ ಬಗ್ಗೆ ಕಿಡಿ ಕಾರುತ್ತಾನೆ. ಅಲ್ಲಿಯವ ಇಲ್ಲಿನ ಬಗ್ಗೆ. ಒಂದು ಜಾತಿಯವ ಮತ್ತೊಂದು ಜಾತಿಯವನ ಮೇಲೆ ಎರಗಿ ಬೀಳುತ್ತಾನೆ, ಅವನ ಜಾತಿಯವ ಇವನ ಮೇಲೆ. ಭಾಷೆಯೂ ಅಷ್ಟೆ, ಧರ್ಮವೂ ಅಷ್ಟೆ. ಮನಸ್ಸು ಎರಡೇ ಎರಡು ನಿಮಿಷದ ಶಾಂತಿಗೆ, ನೆಮ್ಮದಿ ಹಾತೊರೆಯುತ್ತದೆ. ಕುಡಿದಾದರೂ ಸರಿ, ಸೇದಿಯಾದರೂ ಸರಿ, ನನಗೆ ನೆಮ್ಮದಿ ಕೊಡಿಸು ಎಂದು ಗೋಗರೆಯುತ್ತದೆ. 

ಮಾತು ಎಲ್ಲಿಂದ ಎಲ್ಲೆಲ್ಲಿಗೋ ಹೋಗಿ ಬಂತು. ಇರಲಿ, ಮನಸ್ಸು ಅಷ್ಟೆ ಗೊಂದಲದ ಗೂಡಾಗಿದೆ. ತಲೆಯೊಳಗೆ ನೂರೆಂಟು ಹುಳುಗಳಿವೆ. ಆ ಹುಳುಗಳು ಹೇಗೆ ಬಂದೋ, ಎಲ್ಲಿಂದ ಬಂದೊ? ಯಾಕೆ ಬಂದೋ? ಒಂದೂ ಗೊತ್ತಿಲ್ಲ. ಅವುಗಳು ಹುಳುವಾ? ನೊಣವಾ? ರೆಕ್ಕೆ ಇರುವುದಾ? ಗೊತ್ತಿಲ್ಲ. ನಮಗೆ ಗೊತ್ತಿರುವ ಪದವೊಂದೆ ಗೊತ್ತಿಲ್ಲ. ಯಾಕೋ ಬೇಜಾರು, ಗೊತ್ತಿಲ್ಲ. ಸುಸ್ತಾಗುತ್ತಿದೆ ಗೊತ್ತಿಲ್ಲ ಯಾಕೊ? ಮನಸ್ಸಿಗೆ ಬೇಕಿದ್ದ ನಿರಾಳತೆ ಸಿಗುತ್ತಿಲ್ಲ. ಪ್ರಶ್ನೆಗಳಿವೆ ಉತ್ತರವಿಲ್ಲ, ಉತ್ತರ ಹುಡುಕುವ ಸಂಯಮವಿಲ್ಲ. ಆ ಉತ್ತರಗಳು ನಮಗೆ ನೆಮ್ಮದಿ ಕೊಟ್ಟರೆ ಉತ್ತರವೆನಿಸುತ್ತವೆ, ಇಲ್ಲದೇ ಹೋದರೆ ಅವುಗಳು ಉತ್ತರವೇ ಎನಿಸುವುದಿಲ್ಲ. ಮನುಷ್ಯನಿಗೆ ಮನಸ್ಸಿಗೆ ನೆಮ್ಮದಿ ಅನಿಸೋದಿಲ್ಲವೆಂದರೆ ಮುಗಿಯಿತು ಅದನ್ನು ಒಪ್ಪವುದೇ ಇಲ್ಲ, ಮನಸ್ಸಿಗೆ ಮುದವಾಗಿದ್ದರೆ ಮಾತ್ರ ಅದನ್ನು ಒಪ್ಪವುದು. ಈಗ ನಿಮ್ಮ ಮನಸ್ಸಿಗೂ ಅಷ್ಟೆ ಈ ಮಾತುಗಳು ಇಷ್ಟವಾಗುವುದಿಲ್ಲ. ಏಕೆಂದರೆ ನಿಮಗೆ ಇದು ಮುದ ನೀಡುವುದಿಲ್ಲ. ಯಾವುದೋ ನ್ಯೂನ್ಯತೆಗಳನ್ನು ನಿಮ್ಮ ಮನಸ್ಸು ಹುಡುಕತೊಡಗುತ್ತದೆ. ಅದೇನೆ ಇರಲಿ ಈ ಮಾತುಗಳನ್ನು ಇಲ್ಲಿಗೆ ನಿಲ್ಲಿಸುತ್ತೇನೆ. ಮುಂದಿನ ಬರವಣಿಗೆ ಸೋಲಿನ ಸರಮಾಳೆಯನ್ನು ಓದಲು ರೆಡಿ ಇರಿ.
ನಿಮ್ಮವ, ಹರೀಶ್ ಬಾನುಗೊಂದಿ, 15/05/2017

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...