30 ಜುಲೈ 2009

ನನ್ನೊಳಗೆ ನಾನಾಗೆ ಉಳಿದ ನಿನ್ನತನ........!!!

ಹಳೆಯ ನೆನಪುಗಳನ್ನು ಮರೆತವನು, ಅಥವಾ ನೆನಪುಗಳೆಂಬುದನ್ನೆ ಮನಸ್ಸಿಗೆ ತರದವನು ನಿಜಕ್ಕೂ ಸುಖಿಯೆನಿಸುತ್ತದೆ ನನಗೆ. ಸದಾ ಇಲ್ಲ ಸಲ್ಲದ ನೆನಪುಗಳಿಂದಲೇ ಮನಸ್ಸು ಹಗುರಾಗುತ್ತದೆ, ಮರುಗುತ್ತದೆ, ಕರಗುತ್ತದೆ, ಹಗುರಾಗುತ್ತದೆ, ಬಿಕ್ಕಳಿಸುತ್ತದೆ, ಆಕಳಿಸುತ್ತದೆ, ಹುಚ್ಚನಂತೆ ನಗುತ್ತದೆ, ನಗಿಸುತ್ತದೆ, ಎಲ್ಲವೂ ಅರೆ ಕ್ಷಣದಲ್ಲಿ, ಕ್ಷಣಾರ್ಧದಲ್ಲಿ, ಅರಿವಿಲ್ಲದಂತೆ ನಡೆದುಹೋಗುತ್ತದೆ, ಅಲ್ಲಿ ಚಿಂತಿಸುವುದಕ್ಕೂ ಸಮಯವಿಲ್ಲ, ಚಿಂತನೆಗೂ ಬಿಡುವಿಲ್ಲ. ಮುಂಜಾನೆ ಮೂರು ಮುಕ್ಕಾಲಿಗೆ ಎಚ್ಚರವಾಗಿ ಕಣ್ಣು ಬಿಟ್ಟು ನೋಡಿದರೇ ನಾ ಕಂಡದ್ದೆಲ್ಲಾ ಕನಸೆಂದು ಮಗ್ಗುಲು ಬದಲಾಯಿಸಿ ಮಲಗಬೇಕು. ಕನಸಿಗೂ, ನನಸಿನ ನೆನಪುಗಳಿಗೂ ಒಂದಕ್ಕೊಂದು ಸಂಬಂಧವಿದೆಯಾ? ಎರಡೂ ಒಂದೇಯಾಗಿದೆಯಾ? ನನಗದೊಂದು ತಿಳಿದಿಲ್ಲ.ನೆನೆಪಂದರೇನು, ಸದಾ ನನ್ನನ್ನು ಕಾಡುತ್ತದೆ ಎನಿಸಿದರೂ, ನನ್ನೊಳಗೆ ಹೊಸ ಹುರುಪನ್ನು ಹುಟ್ಟಿಸಿ ನನ್ನನ್ನು ಹೊಸ ಮನುಷ್ಯನನ್ನಾಗಿಸುತ್ತದೆ ಎನ್ನುವುದು ಸತ್ಯ. ಇವೆಲ್ಲಾ ಹೇಗೆ, ಸಾಧ್ಯವೆನ್ನುವುದೇ ನನ್ನ ಮುಂದಿರುವ ಅದನ್ನು ತಮ್ಮಗಳ ಮುಂದಕ್ಕಿಡುತ್ತಿರುವ ಪ್ರಶ್ನೆ. ಮೊನ್ನೆ ಎಲ್ಲಿಯೋ ಬರೆದಿದ್ದ ಒಂದು ಉಕ್ತಿಯನ್ನು ಓದಿದಾಗ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆಯಾಯಿತು. "ಕೊಲೆಗಾರನನ್ನು ಕ್ಷಮಿಸಬಲ್ಲೆ, ಆದರೇ ನಂಬಿಕೆ ದ್ರೋಹಿಯನ್ನು ಸಹಿಸಲಾರೆ".
ನಾನು ಈ ಸಾಲನ್ನು ನೆನೆದು ಮನೆಗೆ ಬಂದರೇ, ನನಗೆ ಇದೇನೆಂಬುದು ಅರ್ಥವಾಗುತ್ತಿಲ್ಲ, ಆದರೂ ನನ್ನನ್ನು ಬಾಧಿಸತೊಡಗಿತ್ತು. ಇದು, ಕೊಲೆಗಿಂತ ಘೋರ ಅಪರಾಧ ಮತ್ತೊಂದಿಲ್ಲವೆಂದರೇ, ನಂಬಿಕೆ ದ್ರೋಹ ಅದಕ್ಕಿಂತ ದೊಡ್ಡದು. ಕಾರಣವಿಷ್ಟೇ, ಕೊಲೆ ಮಾಡಿದ ಮೇಲೆ ಆ ಜೀವ ಕೊಲೆಗಾರನನ್ನು ಎಂದೆಂದಿಗೂ ತಿರುಗಿ ಕಾಣುವುದಿಲ್ಲ. ಆದರೇ, ಮೋಸ ಮಾಡಿದವನು, ಬೆನ್ನಿಗೆ ಚೂರಿ ಹಾಗಿದವನು, ನಂಬಿಸಿ ಕೈಕೊಟ್ಟು ಹೋದವನು, ನಂಬಿಕೆಯ ಮೇಲೆ ಭಾವನೆಗಳ ಜೊತೆ ಆಟವಾಡಿ ದೂರಾದವನು, ಇವರೆಲ್ಲರೂ ಅಷ್ಟೇ, ಕ್ಷಮೆಗೆ ಅನರ್ಹರು. ಇಲ್ಲಿ, ಆಗುವ ಬದಲಾವಣೆ ರಾತ್ರೋ ರಾತ್ರಿ ಆಗುತ್ತದೆ. ನಿನ್ನೆಯವರೆಗೂ ಚೆನ್ನಾಗಿದ್ದ ಗೆಳತಿ, ಮಾರನೆ ಬೆಳ್ಳಿಗೆ ಹೊತ್ತಿಗೆ ಮಾತನ್ನೇ ನಿಲ್ಲಿಸಿರುತ್ತಾಳೆ. ನನ್ನೊಂದಿಗೆ, ಕಳೆದ ನನ್ನಲ್ಲಿದ್ದ ನನ್ನ ಎಲ್ಲಾ ಕನಸುಗಳನ್ನು ದೋಚಿ ಹೋದಳೇನೋ, ನಾನು ಎಂಬ ಇಷ್ಟೆತ್ತರದ ದೇಹ ಒಮ್ಮೆಗೆ ಹೇಳ ಹೆಸರಿಲ್ಲದಂತೆ, ಕರಗಿ, ಕರಕಲು ಮಸಿಯಾಗಿ ಮಣ್ಣಾಗಿ ಹೋಗುತ್ತದೆ. ಇವೆಲ್ಲವೂ ಆಗುವುದು ಕೇವಲ ಅರೆಗಳಿಗೆಯಲ್ಲಿ. ಜೊತೆಯಲ್ಲಿ ಹೆಣೆದ ಕನಸುಗಳು, ಕುಳಿತು ಒಟ್ಟಿಗೆ ನೆಕ್ಕಿದ ಐಸ್ ಕ್ರೀಂ, ದೂರದ ಬೆಟ್ಟದಿಂದ ಸೂರ್ಯಹುಟ್ಟುವಾಗಿನಿಂದ ದಿಗಂತದಲ್ಲಿ ಅವನು ಕಣ್ಮರೆಯಾಗುವ ತನಕ, ಕಣ್ಣಲ್ಲಿ ಕಣ್ಣಿಟ್ಟು ನಾನೆಂಬುದನ್ನು ಮರೆತು ನಿನ್ನೊಳಗೆ ಬೆರೆತು ಹೋದ ದಿನಗಗಳವೆಲ್ಲವೂ ಮಾಸಿಹೋಗುವುದಕ್ಕೆ ಇಲ್ಲಾ ನೀನು ಅವುಗಳನ್ನು ದೋಚಿಹೋಗುವುದಕ್ಕೆ ಹಿಡಿದಿದ್ದು ಕೇವಲ ಅರೆಗಳಿಗೆ. ಇಂತಹದ್ದು ಉಂಟಾ? ಅಥವಾ ಹೀಗೂ ಉಂಟೇ? ಎಂದು ನನ್ನನ್ನು ನಾನು ಕೇಳಲು ತ್ರಾಣವಿಲ್ಲದೇ, ನಿಂತ ನಿಲ್ಲಲ್ಲೇ ಸತ್ತು ಹೋಗಿದ್ದಾಗ ಎಚ್ಚರಾದೀತೆ. ಸತ್ತಮೇಲೆ ಉಳಿಯುವುದೇನು ಇಲ್ಲವೆನ್ನುವುದು ನಂಬುಗೆ, ಬದುಕಿಯೂ ಸತ್ತಂತೆ ಬದುಕುವುದಿದೆಯಲ್ಲ ಅದಕ್ಕಿಂತ ನರಕಯಾತನೆ ಮತ್ತೊಂದಿಲ್ಲ, ಮೋಸ ಹೋದ ಮನಸ್ಸು, ಕಳೆದು ಹೋದ ಕನಸುಗಳು, ನಂಜಿಹೋದ ಭರವಸೆಗಳು, ಎಲ್ಲದರೊಂದಿಗೆ ಹೊಡೆದಾಡುತ್ತಿದ್ದ ಮನಸ್ಸು ಎಲ್ಲದಕ್ಕೂ ಹೊಂದಿಕೊಳ್ಳುವಂತೆ ತಿರುಗಿದ ದಿನವಂತೂ ಹೇಳತೀರದು. ಸತ್ತರೂ ಸರಿಯೇ, ಸೋತರೂ ಸರಿಯೇ ಆದರೇ, ನಮ್ಮ ವಿರುದ್ದ ಮನಸ್ಸುಗಳೊಂದಿಗೆ, ಹೊಂದದ ಪರಿಸ್ಥಿತಿಯೊಂದಿಗೆ ಬದುಕುವುದು ಅಸಾಧ್ಯ ಸಾಧನೆ. ಅಥವ ನಿರರ್ಥಕ ಬದುಕು.
ಮೋಸಕ್ಕೆ ಹುಟ್ಟಿಲ್ಲಾ, ಮೋಸಕ್ಕೆ ಸಾವಿಲ್ಲ, ಇದು ಇಂದು ನಿನ್ನೆಯದಲ್ಲ, ನನಗೊಬ್ಬನಿಗೆ ಮೀಸಲಾದುದು ಅಲ್ಲಾ, ಸರ್ವರಿಗೂ ಸಮಪಾಲು ಎನಿಸಿದರೂ ಒಬ್ಬೊಬ್ಬರಿಗೆ ಹೆಚ್ಚು ನನಗೆ ಸಿಕ್ಕಂತೆ ಬಂಪರ್ ಸಿಕ್ಕರೂ ಸಿಗಬಹುದು, ಕೆಲವೊಬ್ಬರಿಗೆ ಕಡಿಮೆ ಸಿಗಬಹುದು, ಕೆಲವರಿಗೆ ಸಿಗದೇ ಇದ್ದರೂ ಇರಬಹುದು. ಮೋಸಕ್ಕೆ ಮೋಸವುಂಟಾ? ಮೋಸ ಮಾಡುವವರಿಗೂ ಮೋಸವಾಗುತ್ತದೆಯಾ? ಆಗಲೇ ಬೇಕು, ಅವರಿಗೆ ಮೋಸ ಮಾಡಲು ಭೂಲೋಕದಲ್ಲಿ ಇಲ್ಲದಿದ್ದರೂ ಪರಲೋಕದಲ್ಲಿರುವ ದೇವರಿಲ್ಲವೇ, ಎಂದು ಮನಸ್ಸಿಗೆ ನೆಮ್ಮದಿ ತರಲು ಪ್ರಯತ್ನಿಸುತ್ತೇನೆ. ಇಲ್ಲಾ, ಅದು ಆಗುವುದೆಂತು, ಆಗುವುದಾದರೂ ಹೇಗೆ, ದಿನ ನಿತ್ಯ ನಿನ್ನಯ ಪೂಜೆ ಮಾಡಿಯೇ, ಅವಳನ್ನು ಕಾಣಲು ಹೊರಡುತ್ತಿದ್ದದ್ದು, ಮರಳಿ ದಿನ ಮುಗಿಯುವ ಮುನ್ನ ನಿನ್ನಯ ಮುಂದೆ ಪ್ರಾರ್ಥನೆ ಮಾಡಿ ಮಲಗುತ್ತಿದ್ದೆ. ಒಮ್ಮೊಮ್ಮೆ ಅವಳು ತಡವಾಗಿ ಬಂದರೇ, ನನ್ನ ಮೊಬೈಲ್ ತೆಗೆಯದಿದ್ದರೂ ನಿನ್ನನ್ನೇ ಕೇಳುತ್ತಿದ್ದೆ, ಅಯ್ಯೊ ದೇವರೇ, ಏನಾಯಿತು ಅವಳಿಗೆ, ಅಪ್ಪ ಅಮ್ಮನ ಭಯದಿಂದ ಹೀಗಿರಬಹುದೆಂದು ಸುಮ್ಮನಿರುತಿದ್ದೆ. ಹುಡುಕಾಟಿಕೆಗೆ, ಇಂದು ಸಿಗುವುದಿಲ್ಲವೆಂದರೂ, ದೇವರೆ ಅವಳಿಗೆ ಒಮ್ಮೆ ನನ್ನೊಂದಿಗೆ ಬರುವ ಮನಸ್ಸು ಕೊಡು ಎನ್ನುತ್ತಿದ್ದೆ. ನಿನ್ನಿಂದಲೇ ಅವಳು ನನಗೆ ದೊರೆತದ್ದು ಎಂದು, ನಿನಗೆ ವಾರಕ್ಕೊಮ್ಮೆ ಪೂಜೆ ಮಾಡಿಸಿ, ಬರಿಗಾಲಲ್ಲಿ ನಡೆದು ಬರುತ್ತಿದೆ, ಆ ದಿನಕ್ಕೆಂದು ಕುಡಿಯುವುದು, ಸೇದುವುದು, ಮಾಂಸಹಾರಿ ಇವೆಲ್ಲವನ್ನೂ ದೂರವಿಟ್ಟಿದ್ದೆ. ಆದರೇ, ಇಂದು ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಲೂ ನೀನು ಅವಳನ್ನು ಬೆಂಬಲಿಸಿರಬೇಕು. ನನಗೆ ಕೇಡುಗಾಲ ಶುರುವಾಯಿತೆಂಬುದನ್ನು ನೀನು ಅವಳಿಗೆ ತಿಳಿಸಿರಲೇಬೇಕು, ಮನುಷ್ಯರ ಕೇಡುಗಾಲ ಅರಿಯಲು ನಿನ್ನನ್ನು ಬಿಟ್ಟರೇ, ಮತ್ತ್ಯಾರಿಗೆ ಸಾಧ್ಯ?
ಇದಾದ ಮರುಕ್ಷಣವೇ, ಯೋಚನೆ ಬದಲಾಗುತ್ತದೆ, ದೇವರು ಎಲ್ಲಿದ್ದಾನೆ? ಯಾರು ದೇವರು? ಯಾರಿಗೆ ಯಾರು ಶಿಕ್ಷೆ ಕೊಡುವವರು? ಸಹಸ್ರ ಸಹಸ್ರ ಅಮಾಯಕರನ್ನು ಬಾಂಬ್ ಹಾಕಿ ಕೊಲೆಗೈಯ್ಯುವವರಿಗೆ, ಪಾಪ ಪ್ರಜ್ನೆಯೆಂಬುದಿದೆಯೇ? ಸತ್ತ ಹೆಣವನ್ನು ಮುಂದಿಟ್ಟುಕೊಂಡು, ಲಂಚಕೋರುವ ಡಾಕ್ಟರುಗಳು, ಪೋಲಿಸರು, ಬಸ್ ಗಳಲ್ಲಿ, ಹೆಂಗಸಿನ ಕೊರಳಲ್ಲಿ ಮಾಂಗಲ್ಯ ಸರ ಕದಿಯುವ ಕದೀಮರು, ತಿಂಗಳಿಡಿ ದುಡಿದು ಬರುತ್ತಿರುವಾಗ ಸಂಬಳದ ಹಣವನ್ನೆಲ್ಲಾ ಕದ್ದು ಹೋಗುವ ಕಳ್ಳರು, ಲಂಚವೇ ದೇವರೆಂದು ಬಡವರ ರಕ್ತ ಹೀರುವ ಅಧಿಕಾರಿಗಳು, ಹೆಂಡತಿಗೆ ಹೊಡೆದು ಬಡಿದು ಹಿಂಸೆ ಕೊಟ್ಟು ಸಾಯಿಸಲು ಹಿಂದೆ ಮುಂದೆ ನೋಡದ ಪಾಪಿಗಳು, ನ್ಯಾಯ ಕೇಳಲು ಅಥವಾ ಆದ ಅನ್ಯಾಯವನ್ನು ಸರಿ ಪಡಿಸಿಕೊಳ್ಳಲು ಬರುವ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುವವರು, ಏನೂ ಅರಿಯದ ನಾಲ್ಕಾರು ವರ್ಷದ ಮಕ್ಕಳ ಮೇಲೆ ಎಸಗುವ ಅತ್ಯಾಚಾರ, ಗಂಡ ಕಳೆದು ಹೆಣ್ಣುಮಗಳನ್ನು ಒಂಟಿಯಾಗಿ ಬಿಡಲು ಬಯಸದ ನೀಚ ಗಂಡಸುತನವುಳ್ಳವರು, ಪರೀಕ್ಷೆಯೆಂಬುದನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳನ್ನು ಗುಲಾಮರಾಗಿಸಿಕೊಳ್ಳುವ ಪ್ರೋಫೆಸರ್ ಗಳು, ಗುರು ದೇವೋ ಭವವೆನಿಸಿಕೊಳ್ಳುವವರು, ಮಳೆಯಿಂದಾಗಿ ಜಮೀನು ಮುಳುಗಡೆಯಾಗಿದೆಯೆಂದು ಹೋದಾಗ ಲಂಚ ಕೇಳುವ ಅಧಿಕಾರಿಗಳು, ಮುಳುಗಡೆಯಾದ ಜಮೀನಿನಲ್ಲಿ ಏನೇನು ಇಲ್ಲದಿದ್ದರೂ ಹಣಕೊಟ್ಟವರ ಭೂಮಿಯಲ್ಲಿ ಬಂಗಾರವೇ ಹೋಯಿತೆಂದು ಬರೆದು ಕೊಡುವವರು, ಹಣ ಕೊಟ್ಟರೇ ಬೇಕಾದಷ್ಟು ಮಾರ್ಕ್ಸ್ ಹಾಕಿಸಿಕೊಡುವ ಬ್ರೋಕರ್ ಗಳು, ಹೋಟೆಲ್ ನಲ್ಲಿ ಕ್ಯಾಮೆರಾ ಇಟ್ಟು ಸಿ.ಡಿ.ಮಾಡಿ ಧಂದೆ ನಡೆಸುವವರು, ಆಪತ್ತಿನಲ್ಲಿ, ಮಧ್ಯರಾತ್ರಿಯಲ್ಲಿ ಪರದಾಡುತ್ತ ಆಟೋ ಹುಡುಕುವಾಗ ಹತ್ತು ಪಟ್ಟು ಹೆಚ್ಚು ಕೇಳುವ ಆಟೋ ಡ್ರೈವರ್ ಗಳು, ಕಾಲೇಜು ಹುಡುಗರೆಂದಾಕ್ಷಣ ಬಸ್ ನಿಲ್ಲಿಸದೇ ಹೋಗುವ ಬಸ್ ಡ್ರೈವರ್ ಗಳು, ಸಾಲದ ಭಾಧೆಯಿಂದ ಸತ್ತ ರೈತರ ಹೆಸರನ್ನು ನೂರಾರು ಬಾರಿ ತೋರಿಸಿ ಅವರ ಮನೆ ಮಂದಿಯೆಲ್ಲಾ ತಲೆ ತಗ್ಗಿಸುವ ಹಾಗೆ ಮಾಡುವ ನಮ್ಮ ಟಿ.ವಿ.ಚಾನೆಲ್ ಗಳು, ಅಪ್ಪಿ ತಪ್ಪಿ ರಾತ್ರಿ ಸಿಕ್ಕರೇ ಜೇಬಿನಲ್ಲಿರುವ ಹಣವೆಲ್ಲವನ್ನು ಕಿತ್ತು ಕಳುಹಿಸುವ ಪೋಲಿಸರು, ಮನ ಬಂದಂತೆ ಸೇಡು ತೀರಿಸಿಕೊಳ್ಳಲು, ಸ್ವಪ್ರತಿಷ್ಠೆ ಮೆರೆಯುಲು ಬರೆಯುವ ಲೇಖಕರು, ಹಣ ಕೊಟ್ಟರೇ ಯಾರೀಗೂ ಕೆಲಸ ಕೊಡಿಸುವ ರಾಜಕಾರಣಿಗಳು, ಎಲೆ ಬದಲಾಯಿಸುವಂತೆ ಪಕ್ಷ ಬದಲಾಯಿಸಿ ಮರು ಚುನಾವಣೆ ಮಾಡುವ ನೀಚ ರಾಜಕಾರಣಿಗಳು, ಜೊತೆಯಲ್ಲಿ ಕೆಲಸ ಮಾಡುವವರ ವಿರುದ್ದ ಇಲ್ಲಸಲ್ಲದ ದೂರನ್ನು, ಚಾಡಿಯನ್ನು ಹಬ್ಬಿಸುವವರು, ಸದಾ ಪಕ್ಕದ ಮನೆಯವರ ಕೆಡುಕನ್ನೆ ಬಯಸುವವರು, ಬಿಟ್ಟಿ ದುಡ್ಡಿಗೆ ಕನಸುಕಾಣುವವರು, ಅನಾಥಾಶ್ರಮವೆಂದು ದುಡ್ಡು ಹೊಡೆಯುವವರು, ವಿಧವಾ ಪಿಂಚೆಣಿಯನ್ನು ನುಂಗಿ ನೀರು ಕುಡಿಯುವವರು, ಇಪ್ಪತ್ತು ಮೂವತ್ತು ವರ್ಷ ಸಾಕಿ ಸಲಹಿದ ಅಪ್ಪ ಅಮ್ಮಂದಿರನ್ನು ದಿಕ್ಕರಿಸಿ ದೂರ ಹೋಗುವ ಮಕ್ಕಳಿಗೆ, ಅಣ್ಣ ತಮ್ಮ ಎಂದು ಹಣ ಪಡೆದು ಹಿಂದುರಿಗಿಸದೇ ಹೋಗುವ ಆಪ್ತ ಶತ್ರುಗಳು, ಇರುವ ತನಕ ಪ್ರಾಣ ಕೊಟ್ಟು ಕಾಪಾಡಿದ ಗೆಳೆಯನನ್ನು ನೀಚನೆಂದು ದೂರಿ ಹೋಗುವ ಗೆಳತಿಯರು, ಅವರ ಮನೆಯಲ್ಲೇ ಉಂಡು ತಿಂದು ಬೆಳೆದು ಕಡೆಗೆ ಅವರ ಮನೆಯಲ್ಲಿದ್ದುದ್ದೆಲ್ಲವನ್ನೂ ದೋಚುವ ಪರಮ ಪಾಪಿಗಳು, ಅಪ್ಪನ ಜೇಬಿನಲ್ಲಿ ಹಣ ಕದ್ದು,ಕದ್ದೇ ಇಲ್ಲವೆಂದು, ಕದ್ದಿದ್ದರೂ, ಅದು ನನಗಲ್ಲದೇ ಮತ್ತಾರಿಗೆ ಆ ಹಣವೆಂದು ವಾದಿಸುವ ನೀಚ ಮಕ್ಕಳು,ಒಂದು ಗಂಟೇಯೂ ಪಾಠ ಮಾಡದೇ, ನಲ್ವತ್ತು ಸಾವಿರದಷ್ಟು ಸಂಬಳವನ್ನು ದೋಚುತ್ತಿರುವ ಕೆಲವು ಪ್ರೋಫೆಸರ್ ಗಳು, ಏನೇನೂ ಮಾಡದೇ, ಲಕ್ಷಾಂತರ ರೂಪಾಯಿಯನ್ನು ಯೋಜನೆಗೆಂದು ಸಂಶೋಧನೆಗೆಂದು ಪಡೆಯುತ್ತಿರುವವರು, ಅಣ್ಣ ತಮಂದಿರೆಂದು ಬೊಗಳೆ ಹೊಡೆದರೂ, ಸದಾ ಅವರ ಮನೆ ಹಾಳಾಗಲಿ ಎಂದು ಹಾರೈಸುವ ಸಹೋದರರು, ಇವರಾರಿಗೂ ಇಲ್ಲವೇ ಪಾಪ ಪ್ರಜ್ನೆ?
ಪಾಪಪ್ರಜ್ನೆ ಇದ್ದರೂ ಮಾಡುತ್ತಿರಬೇಕೆಂದರೇ ಅದಕ್ಕೆ ಅವರು ನಂಬಿರುವ ದೇವರ ಕುಮ್ಮಕ್ಕು ಇರಲೇಬೇಕಲ್ಲವೆ? ದೇವರಿಲ್ಲವೆಂದು ಬೀಗುವವರು ಕಡಿಮೆ ಮಂದಿ. ದೇವರಿದ್ದಾನೆಂದು ಕೊಂಡಾಡುವರು ಅತಿ ಹೆಚ್ಚು, ನಾನಾ ಹೆಸರಿರಲಿ, ಎಲ್ಲರಿಗೂ ದೇವರೆಂಬುವನಿದ್ದಾನೆ ಅವನು ಹೇಳಿಯೇ ಈ ಕೆಲಸಗಳನ್ನು ಮಾಡಿಸುತ್ತಿದ್ದಾನೆಂಬುದು ಅವರ ವಾದ. ತಾವು ಮಾಡಿದ ಪಾಪವೆಲ್ಲವನ್ನು ಕಳೆದುಕೊಳ್ಳುವುದಕ್ಕೆಂದು ಒಂದೊಂದು ಪಶ್ಚತ್ತಾಪದ ದಾರಿಯನ್ನು ತೋರಿಸಿದ ಭಗವಂತ ಯಾರೆಂಬುದು ನನಗಂತೂ ತಿಳಿದಿಲ್ಲ. ಆದರೂ, ಈ ಭಗವಂತನನ್ನು ಸೃಷ್ಟಿಸಿದಾತನೇ, ಪಶ್ಚತಾಪವನ್ನು ಸೃಷ್ಟಿಸಿರಬೇಕು. ತಪ್ಪು ಮಾಡುವುದು ಹರಕೆ ಕಟ್ಟುವುದು ಅದನ್ನು ತೀರಿಸುವುದು ಮತ್ತದೇ ತಪ್ಪುಗಳನ್ನು ಮಾಡುವುದು ನಿವಾರಣೆ ಮಾಡಿಸುವುದು. ನಾನಿಲ್ಲಿ ಸರಿ ತಪ್ಪು ಎನ್ನುವುದನ್ನು ಯಾವುದೇ ಮಾನದಂಡವನ್ನಿರಿಸಿಕೊಂಡು ಹೇಳುತ್ತಿಲ್ಲ, ನನ್ನ ಪೂರ್ತಿ ಮಾತುಗಳು, ಕೇವಲ ಪಾಪ ಪ್ರಜ್ನೆ ಎನ್ನುವ ಅಥವಾ ಬೇರೆಯವರ ಜೀವನದ ಜೊತೆಗೆ ಆಡುವ, ಆಡಿದರೂ ಅದನ್ನು ಒಪ್ಪಿಕೊಳ್ಳದ ಬಿಗಿವಂತ ನಾಗರೀಕರಿಗೆ ಮಾತ್ರ. ಅಪರೂಪಕ್ಕೊಮ್ಮೆ ತಪ್ಪು ಮಾಡುವವರಿಗೆ, ಅಥವಾ ಮೋಸ ಹೋಗುವವರಿಗೆ ಅದರಿಂದ ನೋವಾಗಬಹುದು, ಸದಾ ತಪ್ಪನ್ನೆ ಮಾಡುವವರು, ಅಥವಾ ತಪ್ಪೇ ಜೀವನವನ್ನು ರೂಡಿಸಿಕೊಂಡವರಿಗೆ ನೋವಾದಿತೆ? ಮೊದಲ ಬಾರಿ ಪಿ.ಯು.ಸಿಯಲ್ಲಿ ಫೇಲಾದಾಗ ಮುಖ ತೋರಿಸುವುದಕ್ಕೆ, ಹಿಂಜರಿಯುತ್ತಿದ್ದೆ, ಫೇಲಾದೆನೆಂಬ ಕೊರಗಿತ್ತು. ಎರಡನೇ ಬಾರಿಗೆ ಅದರ ಅರಿವೇ ಮರೆತುಹೋಗಿತ್ತು, ಅದು ಅಲ್ಲದೇ, ನನ್ನ ಡಿಗ್ರೀ ಸಮಯದಲ್ಲಿ, ನನ್ನ ಸ್ನೇಹಿತರಿಗೆ ಫೇಲಾಗಿದ್ದೇವೆಂದು ಹೇಳಿಕೊಳ್ಳುವುದೇ ಒಂದು ಹೆಮ್ಮೆಯ ಸಂಗತಿಯಾಗಿತ್ತು. ಕೆಲವೊಮ್ಮೆ, ನನ್ನಂಥಹ ಕುಡುಕರಿಗೆ, ಕುಡಿತವೇ, ಜೀವನದ ಅತಿ ಅಗಮ್ಯ ವೃತ್ತಿಯೆಂದು ಬಿಂಬಿಸಿ ಮೆರೆಸುವ ಚಟವುಂಟಾಗುತ್ತದೆ. ನನ್ನಂಥ ಮುಟ್ಠಾಳರಿಗೆ, ಕುಡಿತದಿಂದ, ಮನೆ ಮಠ, ಕಳೆದುಕೊಂಡ, ಹೆಂಡತಿ ಮಕ್ಕಳು ಬೀದಿಗೆ ಬಂದ ದೃಶ್ಯಗಳು ಕಾಣುವುದಿಲ್ಲ, ಕಂಡರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮನ್ನು ಅವುಗಳು ಕಾಡುವುದಿಲ್ಲವೇಕೆ, ಸಮಜಾಯಿಸಿ ಕೆಲವೊಮ್ಮೆ ಉತ್ತರ ಕೊಡುತ್ತೇವೆ, ಮತ್ತೊಮ್ಮೆ, ಅದು ನಮ್ಮ ಆಂತರಿಕ ವಿಷಯವೆನ್ನುತ್ತೇವೆ. ನನ್ನ ಕುಡಿತ, ನನ್ನು ಮೋಜು, ನನ್ನ ಮೋಹ, ವ್ಯಾಮೋಹ, ದಾಹ ಪ್ರತಿಯೊಂದು ನನಗರಿಯದ, ಅಥವ ನನ್ನ ಜೊತೆ ಬೆರೆತು ಬಾಳುವ ಹಲವಾರು ಜೀವಗಳಿಗೆ ಕೆಡುಕನ್ನು ತರುತ್ತದೆಂಬುದನ್ನು ನೆನೆಯುವುದಿಲ್ಲ.
ತಪ್ಪು ಮಾಡುವುದನ್ನು ನಿಲ್ಲಿಸಲು ಬಯಸುವುದಿಲ್ಲ ಮನಸ್ಸು, ಅದರಲ್ಲಿ ನಮಗೆ ಅರಿಯದ ನಮ್ಮ ಅಹಂ ತುಂಬಿರುತ್ತದೆ, ನಾನು ಎಂಬ ನಾನತ್ವ ಹೆಚ್ಚಿರುತ್ತದೆ. ಏನು ಮಾಡಿದರೂ ನಾನು ಎಂಬುವನು ಕಿರೀಟದಿಂದ ಕೆಳಗಿಳಿಯುವುದಿಲ್ಲ, ನಾನು ಸೋಲುವುದೇ? ನಾನು ಬಾಗುವುದೇ? ಅಸಾಧ್ಯವೆನಿಸುತ್ತದೆ. ಕೆಟ್ಟದ್ದಾದರೂ ಸರಿಯೇ, ಒಲಿತಾದರೂ ಸರಿಯೇ, ನಾನು ಜಯಿಸಲೇಬೇಕು. ಅಹಂ ನಿಂದಾಗಿ ಇದುವರೆಗೆ ಎಂಥೆಂಥವರೂ ಏನಾದರೆಂಬುದನ್ನು ತಿಳಿದಿದ್ದರೂ, ಅಹಂ ನಿಂದ ಹೊರಬರುವ ಸಾಹಸ ಮಾಡುವುದಿಲ್ಲ. ಇಷ್ಟಕ್ಕೂ ಅಹಂನೊಂದಿಗೆ ಬದುಕುವಾಗ ಏನನ್ನು ಸಾಧಿಸುತ್ತಾರೆಂಬುದು ನನಗೆ ತಿಳಿದಿಲ್ಲ. ಮನ ಬಿಚ್ಚಿ ನಗುವುದಿಲ್ಲ, ಮನ ಬಿಚ್ಚಿ ಅಳುವುದಿಲ್ಲ, ಒಳ್ಳೆಯದನ್ನು ಮನಸಾರೆ ಪ್ರೀತಿಸಿ ಆನಂದಿಸುವುದಿಲ್ಲ, ಸುಂದರವಾಗಿದ್ದರೇ ಅದನ್ನು ಹೊಗಳುವುದಿಲ್ಲ, ಪ್ರಶಂಸಿಸುವುದಿಲ್ಲ. ನಾನು ಮಾಡಿದ್ದೇ ಸರಿಯೆಂದು ಮುನ್ನುಗುವುದನ್ನು ಬಿಟ್ಟರೇ ಮತ್ತೇನು ಮಾಡುವುದಿಲ್ಲ. ನಾನು ನನ್ನ ಜೀವನದಲ್ಲಿ ಹತ್ತು ಹುಡುಗನನ್ನು ಪ್ರೀತಿಸಿದೆ, ಕಾಡಿಸಿದೆ, ಮೋಹಿಸಿದೆ, ನಾನು ಹತ್ತಾರು ಹುಡುಗಿಯರ ಜೊತೆ ಅಲೆದಾಡಿದೆ, ಮೋಹಿಸಿದೆ, ಎಂದು ಮೆಚ್ಚಿ ಮೆರೆದಾಡುವವರಿಗೆ, ಆಂತರಿಕೆ ಪ್ರೀತಿಯೆಂಬುದು, ಅಥವಾ ಮೋಸದ ಎಳೆಯಲ್ಲಿನ ನೋವಿನ ಶಬ್ದ ಕೇಳುವುದುಂಟೇ? ಪ್ಲರ್ಟಿಂಗ್ ಎನ್ನುವುದೇ ಸ್ವೆಚ್ಚೆ ಎನ್ನುವುದನ್ನು, ಅಥವಾ ಸ್ವಾತಂತ್ರ್ಯದ ಪ್ರತೀಕ ಎನ್ನುವಂತೆ ಬಿಂಬಿಸುವ ಜನರಿರುವ ತನಕ, ಭಾವನ ಲೋಕದಲ್ಲಿ ನೆಮ್ಮದಿ ನೆಲೆಸಲು ಬಂದೀತೆ? ಏನು ಮಹಾ ಆದದ್ದು, ಎನ್ನುವಂತೆ, ಅಥವಾ ಏನೂ ಆಗಿಲ್ಲವೆನ್ನುವಂತೆ, ಈ ಬೀದಿಯಲ್ಲಿ ಹೊಡೆದರೇ ಆ ಬೀದಿಯಲ್ಲಿ ಹೊಸ ಮನುಷ್ಯನಾಗಿ ಬರುವವಂತವನಿಗೆ, ಈ ಮೇಲಿನ ಸಾಲುಗಳು ಅರ್ಥವಿಲದಂತವಾಗುವುದು ಸರಿಯೇ? ಆದರೇ, ತಿಂಡಿ ತಿನ್ನಲು ಕುಳಿತ ತಟ್ಟೆಯಲ್ಲಿ ಉಳಿದ ನೀರನ್ನು ಟೇಬಲ್ಲಿನ ಮೇಲೆ ಚೆಲ್ಲಿ ಅದರಿಂದ ಅಂದ ಚೆಂದದ ರಂಗೋಲಿ ಬಿಡಿಸಲು ಹಾತೊರೆಯುವ ಮನಸ್ಸುಳ್ಳ ವ್ಯಕ್ತಿಗಳಿಗೆ ಸಾಮಾನ್ಯವೆಂದು ಒಪ್ಪಲು ಸಾಧ್ಯವಾಗುವುದಿಲ್ಲ. ಒಂದು ಮಧ್ಯರಾತ್ರಿ, ಎರಡು ಗಂಟೆಯ ವೇಳೆಗೆ ನಿನಗೆ ನಾನು ಫೋನ್ ಮಾಡಿ ನನಗೆ ಒಂದು ಕೆಟ್ಟ ಸ್ವಪ್ನ ಬಿತ್ತು ಅಂತಾ ಹೇಳಿದೆ, ನೆನಪಿದೆಯಾ? ನಾನು ನೀನು ದೇವರ ಬಳಿ ಹೋಗಿ, ದೇವರೇ, ನಮಗೆ ಈ ಜನ, ಈ ಜಿಗಿಜಿಗಿ, ಸದಾ ಗುಯ್ಯ್ ಎನ್ನುವ ಟ್ರಾಫಿಕ್, ಬೆಳಿಗ್ಗೆ ರಾತ್ರಿ ದುಡಿಮೆ, ಹಸಿವು, ನರಕ, ಮೋಸ, ವಂಚನೆ, ಮರುಕ, ದುಃಖ, ಯಾರೋ ಮಾಡುವ ತಪ್ಪಿಗೆ ನಾವು ತೆರುವೆ ದಂಡ, ಅಳು, ಸಾಮಾಜಿಕ ಪ್ರತಿಷ್ಟೆ, ಹೆಸರು, ಮರ್ಯಾದೆಯೆಂಬ ಮುಖವಾಡ, ಇವೆಲ್ಲವೂ ಇಲ್ಲದ ಸ್ಥಳಕ್ಕೆ ನಮ್ಮನ್ನು ಬಿಡು, ನಮಗೆ ಹಸಿವು ಆಗಬಾರದು, ದಾಹವೆನಿಸಬಾರದು, ನಿನ್ನಂತೆಯೇ, ಇರಬೇಕು, ಆದರೇ, ಕನಸುಗಳು ಇರಬೇಕು, ದನಿವಾಗಬಾರದು, ದುಡಿಮೆಯಿರಬಾರದು, ಒಂದು ಬಗೆಯ ಮಕ್ಕಳಾಟವೆನಿಸಿದರೂ ಸರಿಯೇ ಇದು ನಮಗೆ ಬೇಕು ಎಂದು ಕೇಳಿದೆವು.
ದೇವರು, ಈ ಬಗೆಯ ಅರ್ಜಿ ಇದುವರೆಗೂ ಒಂದು ಬಂದಿರಲಿಲ್ಲ, ನಿಮ್ಮದೇ ಮೊದಲದ್ದು, ಆಗಲಿ ತಪಸ್ಸು, ನೀವು ಸ್ವರ್ಗಕ್ಕೆ ಬರಬೇಡಿ, ಅಲ್ಲಿಯೂ ಇತ್ತೀಚೆಗೆ, ಲಂಚ, ಮಂಚ, ಹೆಚ್ಚಾಗಿದೆ, ನಿಮಗೆ ನನ್ನ ಸೂಚನೆಯೆಂದರೇ, ಒಂದು ಸುಂದರವಾದ ಮರುಭೂಮಿ, ಜನಜಂಗುಳಿಯಿಲ್ಲ, ಪಕ್ಕದಲ್ಲಿಯೇ ಸುಂದರವಾದ ಓಯಾಸಿಸ್, ನಿಮಗೆ ಬೇಕಾದ ಮರುಭೂಮಿಯ ಹಣ್ಣುಗಳು ಹಸಿವೆ ಇಲ್ಲವೆಂದಾಗ ಉನ್ನಲು ತಿನ್ನಲು ಏನು ಬೇಕು? ಎಂದನು. ನಮಗೂ ಅದು ಸರಿಯೆಂದು ಅಲ್ಲಿಗೆ, ಹೋದೆವು, ನನಗೆ ಮರಳಲ್ಲಿ ಆಡುವುದು, ಗೂಡು ಕಟ್ಟುವುದು, ನನ್ನವಳ ಮುಖವನ್ನೇ ನೋಡುತ್ತಾ ಇರುವುದು. ಒಂದು ದಿನ ಗೂಡು ಕಟ್ಟಲು ನನ್ನನು ಬಿಟ್ಟು ನಮ್ಮ ಓಯಾಸಿಸ್ ಬಿಟ್ಟು ಇನ್ನೊಂದು ಓಯಾಸಿಸ್ ಬಳಿಗೆ ನನ್ನವಳು ಹೋಗಿದ್ದಳು. ನಾನು ಹುಡುಕಿ ಹುಡುಕಿ ಬಂದಾಗ, ಅಲ್ಲಿಗೆ ಹೋದದ್ದು ಯಾಕೆ ಎನ್ನಲು, ಅಯ್ಯೊ ಅಲ್ಲಿ ಕುಳಿತು ಕುಳಿತು ಬೇಸರವಾಗಿತ್ತು ಅದಕ್ಕೆ ಬಂದೆ ಎಂದಳು. ಅಷ್ಟೊತ್ತಿಗೆ ಎಚ್ಚರವಾಯಿತು. ಇದನ್ನು ಅವಳಿಗೆ ಹೇಳಿದ ತಕ್ಷಣ, ಅಯ್ಯೊ ಕರ್ಮವೇ, ಎಂಥಹ ಘೋರ ಕನಸು, ಮರುಭೂಮಿಯಲ್ಲಿ ಅದು ಬರಿ ನಿನ್ನ ಮುಖವನ್ನು ನೋಡಿ ಬದುಕೋದಾ ಇದಕ್ಕಿಂತ ನರಕ ಮತ್ತೊಂದು ಇದ್ಯಾ? ಈ ಮಾತು ಇಂದು ಸತ್ಯವಾಯಿತು. ನನ್ನ ಜೊತೆ ಬದುಕುವುದಕ್ಕಿಂತ ಮಹಾ ಪಾಪ ಮತ್ತೊಂದಿಲ್ಲವೆನ್ನುವುದನ್ನು ನಿರೂಪಿಸಿ ಹೋದಳು.

21 ಜುಲೈ 2009

ನಾನು ಎಂದರೇ! ನನ್ನತನವೆಂದರೇ?


ಇಲ್ಲಿ ಬರೆದಿರುವುದರಲ್ಲಿ ಹೆಚ್ಚಿನವು ಕಲ್ಪನೆಯಿಂದ ಬಂದದ್ದು, ಇಲ್ಲಿ ಹೇಳಿರುವುದೆಲ್ಲಾ ಸತ್ಯವೆಂದು ದಯವಿಟ್ಟು ಪರಿಗಣಿಸಬೇಡಿ, ನನ್ನೊಳಗಿರುವ ಗೊಂದಲಮಯ ವಿಚಾರಗಳನ್ನು ಹತ್ತಿಕ್ಕಲು ಬರೆದಿದ್ದೇನೇ ಹೊರತು, ನನ್ನನ್ನು ಸಮರ್ಥಿಸಿಕೊಳ್ಳುವುದಕ್ಕಾಗಲೀ, ಇತರರನ್ನು ದೂರುವುದಕ್ಕಾಗಲೀ ಬರೆದಿರುವುದಲ್ಲ, ನಾನು ಏನೆಂಬುದು ಸಂಪೂರ್ಣವಾಗಿ ನನಗೆ ತಿಳಿಯದಿರುವುದರಿಂದ ನನ್ನ ಬಗ್ಗೆ ನಾನು ಹುಡುಕುತ್ತಿರುವ ನನ್ನತನದ ಬಗ್ಗೆ ಅಥವಾ ಸದಾ ಬೀಗುವ ನಾನು ಎಂಬುದರ ಬಗ್ಗೆ ಸ್ವಲ್ಪ ತರ್ಕಿಸಿದ್ದೇನೆ. ಈ ಪ್ರಶ್ನೆಗಳು ಕೆಲವೊಮ್ಮೆ ನಿಮ್ಮನ್ನು ಕಾಡಿದ್ದಿರಬಹುದು, ಅಥವಾ ತಮಗೆ ಉತ್ತರ ಸಿಕ್ಕಿದ್ದರೂ ಇರಬಹುದು, ಅಥವಾ ಆ ಗೋಜಿಗೆ ಹೋಗದೇ ಸಂತೋಷವಾಗಿದ್ದರೂ ಇರಬಹುದು. ಅದು ನನಗೆ ಬಹುಮುಖ್ಯವೆನಿಸುವುದಿಲ್ಲ. ಹೀಗೆ ಓದಿ ಹಾಗೆ ಮರೆತರೇ, ಅಥವಾ ಈ ಅಂಕಣವನ್ನು ಪೂರ್ಣವಾಗಿ ಓದುವ ತನಕ ತಮಗೆ ಸಂಯಮವಿದ್ದರೇ ಅಷ್ಟೇ ಸಾಕು. ಓದಿದ ಮೇಲೆ ನನ್ನ ಮೇಲೆ ಅನುಮಾನ ಬಂದರೂ ಅದನ್ನು ನನ್ನ ಬಳಿಯಲ್ಲಿ ಕೇಳದಿದ್ದರೇ ಸಂತೋಷ. ನೀವು ನನಗೆ ಸಂತೋಷವಾಗುವಂತೆ ನಡೆದುಕೊಳ್ಳುತೀರಾ ಎಂಬ ನಂಬಿಕೆ ನನಗಿದೆ.

ನಾನೆಂದರೇ ಏನೆಂಬುದು ನನಗೆ ಒಂದಿಷ್ಟೂ ತಿಳಿದಿಲ್ಲ, ತಿಳಿಯುವ ಸಾಹಸವಂತೂ ಮಾಡಿದ್ದೇನೆ, ಮಾಡಿ ಸೋತಿದ್ದೇನೆಂದರೇ ತಪ್ಪಾಗುವುದು, ಗೆದ್ದಿದ್ದೇನೆಂದರೆ ಮಹಪರಾಧವಾಗುವುದು. ನಾನು ಎಂಬುದು ನನಗೆ ಸಂಬಂಧಪಟ್ಟ ವಿಷಯವಾದರೂ ನಾನು ನನಗೆ ನಾನಾಗಿಯೇ ಕಂಡುಕೊಂಡಿದ್ದೇನೆ. ಒಬ್ಬ ಮಗನಾಗಿ, ಒಮ್ಮೊಮ್ಮೆ ಕೇವಲ ಅಮ್ಮನ ಮಗನಾಗಿ ಅಪ್ಪನ ಪರಮ ವೈರಿಯಾಗಿ, ಕೆಲವೊಮ್ಮೆ ಅಪ್ಪನ ಪ್ರೀತಿಯ ಮಗನಾಗಿ ಅಮ್ಮನ ದಾರಿ ತಪ್ಪಿದ ಮಗನಾಗಿ ಕಾಣಿಸಿದ್ದೇನೆ. ತಂಗಿಗೆ ಆದರ್ಶ ಅಣ್ಣನಾಗಿ ಕಂಡರೂ ಒಮ್ಮೊಮ್ಮೆ ಅವಳಿಗೆ ಜನ್ಮಜನ್ಮಾಂತರದ ಶತ್ರುವೆನಿಸಿದ್ದೇನೆ. ಅಕ್ಕನಿಗೆ ನಾನೇ ಅವಳ ಪ್ರಿಯಮಿತ್ರನೆಂದು ನಡೆದು ಕೊಂಡದ್ದು ಇದೆ, ಅವಳಿಂದ ಥೂ ದೂರ ಹೋಗು ನನ್ನೊಂದಿಗೆ ಮಾತನಾಡಬೇಡವೆನ್ನುವಂತೆ ಉಗಿಸಿಕೊಂಡದ್ದು ಇದೆ.ಅವನು ನನ್ನ ತಮ್ಮನೇ ಅಲ್ಲವೆನ್ನುವಷ್ಟರ ಮಟ್ಟಿಗೆ ವೈರತ್ವವನ್ನು ಸಾಧಿಸಿದ್ದು ಇದೆ. ಚಿಕ್ಕಂದಿನಿಂದ ಮುದ್ದು ಮಾಡಿ ನನ್ನ ತುಂಟ ಮಾತುಗಳನ್ನು ಸವಿಯುತಿದ್ದ ಅಜ್ಜ ಅಜ್ಜಿಯರು ನನ್ನ ಮೊಮ್ಮಗ ಹಾಳಾಗಿ ಹೋದ ಎನ್ನುವಂತೆ ಬಾಳಿದ್ದೇನೆ. ಜೊತೆಯಲ್ಲಿ ಓದಿದ ನನ್ನ ಹಲವಾರು ಮಿತ್ರರಿಗೆ ಕೆಲವೊಮ್ಮೆ ಆತ್ಮೀಯ ಗೆಳೆಯನಾದರೂ ಹಲವಾರು ಬಾರಿ ಮುನಿಸಿ ದೂರಾಗಿ ಹೋಗುವವರೆಗೂ, ಬೇರೆಯವರ ಬಳಿಯಲ್ಲಿ ನನ್ನ ಬಗ್ಗೆ ಚಾಡಿ ಹೇಳಿ ನನ್ನನ್ನು ಹುಟ್ಟು ನೀಚನೆನಿಸುವ ತನಕವೂ ನನ್ನ ದೂರ್ತ ಮನಸನ್ನು ತೋರಿಸಿದ್ದೇನೆ. ನನ್ನ ಗೆಳತಿಯನ್ನು ಗಾಢವಾಗಿ ಪ್ರೀತಿಸಿ ನಿನಗಾಗಿಯೇ ನಾನು ಹುಟ್ಟಿರುವುದು ಬದುಕಿರುವುದೆಂದು ಆಣೆ ಭಾಷೆಮಾಡಿದ್ದರೂ, ಅವಳೊಡನೆ ಜಗಳವಾಡಿ ಅವಳು ಕಣ್ಣೀರಿಟ್ಟಾಗ ಅವಳ ಕಾಲಿಗೆ ಬಿದ್ದು ಕ್ಷಮೆ ಕೇಳುವ ಮಟ್ಟಕ್ಕೂ ಹೋಗಿದ್ದೇನೆ.ಅವಳು ನನ್ನನ್ನು ಬಿಟ್ಟು ಏಕಾಂಗಿಯಾದಾಗ ನನಗೆ ಬದುಕೆಂಬುದು ಇಲ್ಲವೇ ಇಲ್ಲವೆನ್ನುವಂತೆ ಕೊರಗಿದ್ದೇನೆ, ನನ್ನೊಳಗೆ ಅತ್ತಿದ್ದೇನೆ. ನೀನು ನಂಬಿಸಿ ನನ್ನನ್ನು ಕಾರಣವನ್ನು ಹೇಳದೇ ಹೋದದ್ದಕ್ಕೆ ಮರುಗಿದ್ದೇನೆ. ದೂರಿದ್ದೇನೆ, ದೂಷಿಸಿದ್ದೇನೆ. ನಿನ್ನನ್ನು ದೇವತೆಯಂತೆ ಬಿಂಬಿಸಿ ಕವನ ಬರೆದ ಕೈಗಳು ನೀನೊಬ್ಬ ನಡತೆಗೆಟ್ಟವಳು ಎನ್ನುವ ತನಕ ಹೋಗಿವೆ, ನನ್ನ ಭಾವನೆಗಳಿಗೆ ಅರ್ಥ ಬಂದದ್ದು ನಿನ್ನಿಂದ ಎಂದು ಭಾವಿಸಿದ್ದ ಅಂತರಾಳ, ನೀನು ನನ್ನ ಭಾವನೆಗಳೊಂದಿಗೆ ಆಡಿ ಹೋದವಳೆಂದು ನಿಟ್ಟುಸಿರು ಬಿಟ್ಟಿದೆ.

ನಾನು ಎಂದರೇ, ಏನು? ಯಾರು? ಚಿಕ್ಕವನಿದ್ದಾಗ ಕಾಲುವೆಯಲ್ಲಿ ಸ್ನಾನ ಮಾಡಲೂ ಹೋಗಿ, ಹೆದರಿಕೊಂಡು ಜ್ವರ ಬಂದು ಅಮ್ಮ ನನ್ನನ್ನು ಶನಿದೇವರ ದೇವಸ್ಥಾನಕ್ಕೆ ತಾಯಿತಿ ಕಟ್ಟಿಸಲು ಕರೆದೊಯ್ದಾಗ, ಶನಿದೇವರು ಪೂಜಾರಿಯ ಮೈಮೇಲೆ ಬಂದಿದೆ ಎಂದಾಗ ನನ್ನ ಜೀವವೇ ಹೋದಂತಾಗಿ ಭಯದಿಂದ ನಡುಗಿ ನಿಂತು ದೇವರನ್ನು ಬೇಡುತ್ತಿದ್ದನಲ್ಲ ಅವನೇನಾ ನಾನು? ನನಗೆ ಶನಿಕಾಟವಿದೆಯೆಂದು ಅಮ್ಮನ ನಂಬಿಕೆಯೊಂದಿಕೆ ನನ್ನ ನಂಬಿಕೆಯನ್ನು ಬೆಳಸಿ ಮುಂಜಾನೆ ಐದಕ್ಕೆ ಎದ್ದು ಅಮ್ಮನ ಜೊತೆ ತಣ್ಣೀರು ಸ್ನಾನ ಮಾಡಿ ಅರಳಿ ಮರ ಸುತ್ತಿ ಬರುತ್ತಿದವನಾ? ಅಥವಾ ಈ ದೇವರು, ದಿಂಡಿರು ಎಂದು ಮರ ಸುತ್ತುವುದು, ಮೈಮೇಲೆ ಬರುವುದೆಲ್ಲಾ ಜನರನ್ನು ಮೋಸಗೊಳಿಸಲು ಮಾಡುತ್ತಿರುವ ಧಂಧೆ ಎಂದು ಅವರನ್ನು ನೇರ ದೂರಿ ಬಂದೆನಲ್ಲ ಅವನೇನಾ ನಾನು? ಪ್ರತಿ ವರ್ಷವೂ ಏಪ್ರಿಲ್ ತಿಂಗಳಂದು, ಮುಂಜಾನೆಗೆ ಎದ್ದು ಬೇಲೂರಿಗೆ ಹೋಗಿ ಅಲ್ಲಿನ ಕೆರೆಯಲ್ಲಿ ಮುಳುಗೆದ್ದು ಪೂಜೆ ಮಾಡಿಸಿಕೊಂಡು ಬರುತ್ತಿದ್ದವನು, ಈಗ ಬೇಲೂರಿಗೆ ಹೋದರೂ ಪೂಜೆ ಮಾಡಿಸದೇ ಅಲ್ಲಿನ ಚಿತ್ತಾರಗಳ, ಕೆತ್ತನೆಗಳ ಬಗ್ಗೆ ಫೋಟೋ ತೆಗೆದು ಬರುವಂತೆ ಆಯಿತಲ್ಲಾ ನನ್ನ ಮನಸ್ಸು, ಅವನೇನಾ? ಅಮ್ಮ, ಬೆಳಿಗ್ಗೆ ಎಬ್ಬಿಸುವಾಗ, ಕಡ್ಡಾಯವಾಗಿ ಬಲದೇ ಮಗ್ಗಿಲಿಗೆ ತಿರುಗಿ ಎದ್ದು ದೇವರ ಫೋಟೋ ನೋಡಿ ಕೈಮುಗಿದು ದೇವರನ್ನು ಮನಸಾರೇ ಬೇಡಿ ದಿನ ಆರಂಭಿಸುತ್ತಿದ್ದವನು ನಾನಾ? ಅಥವಾ ಇರುವ ಕೋಣೆಯಲ್ಲಿ ಒಂದೇ ಒಂದು ದೇವರ ಫೋಟೋ ಇರುವುದಿರಲಿ, ದೇವರೆಂಬುವದರ ಬಗ್ಗೆ ನಿರಾಸಕ್ತಿ ಹೊಂದಿದವನು ನಾನಾ? ಪರೀಕ್ಷೆ ಎಂಬುದು ಸಮೀಪಿಸುವಾಗ ಅಯ್ಯೋ ದೇವರೇ ಈ ಪರಿಕ್ಷೆಯಿಂದ ನನ್ನನ್ನು ಪಾರುಮಾಡು ಎಂದು ಬೇಡಿದವನು ನಾನಾ? ಪರೀಕ್ಷೆ ಬರೆದು ಮುಗಿದ ಮೇಲೆ ಅಯ್ಯೋ ದೇವರೇ ನನ್ನನ್ನು ಪಾಸು ಮಾಡು ಎಂದು ಬೇಡಿದವನು ನಾನಾ? ನಾನು ಹಗಲಿರುಳು ಓದಿ ಬಂದದ್ದಕ್ಕೆ ಈ ಮಟ್ಟಕ್ಕೆ ಬಂದೆ ಎಂದು ಬೀಗಿದವನು ನಾನಾ?

ತಾತಾ ನನ್ನೆದುರು ಕುಳಿತು ಸರಾಯಿಯ್ ಕುಡಿಯುತಿದ್ದಾಗ, ನಮ್ಮೂರಿನ ಹಲವರು ಕುಡಿದು ಬೀದಿಯಲ್ಲಿ ಜಗಳವಾಡುತಿದ್ದಾಗ ಅಪಹಾಸ್ಯದಿಂದ ಅವರನ್ನು ರೇಗಿಸಿ, ಕುಡಿದು ಸಾಯ್ತಾ ಇದ್ದಿರಲ್ಲೋ ಮುಠ್ಠಾಳರ ಅದರಲ್ಲೇನಿರುತ್ತೋ? ಎನ್ನುತ್ತಿದ್ದವನು, ಕುಡಿದು, ಕುಣಿದು ಕುಪ್ಪಳಿಸಿದಾಗ ನನ್ನೊಳಗಿನ ಆತ್ಮ ಜಾಗೃತಗೊಂಡು ಮಂಕೆ ನೀನು ಮಾಡುತ್ತಿರುವುದೇನೆಂದು ಎಚ್ಚರಿಸಿದಾಗ ಅದರಿಂದ ದೂರ ಹೋದೆನಲ್ಲ ಅವನಾ? ನಮ್ಮೂರಿನ ಹರಿಜನ ಕೇರಿಯ ಕೆಲವು ಹೆಂಗಸರು ಕುಡಿದು ಬೈಯ್ಗುಳ ಸುರಿಮಳೆಗಯ್ಯುವಾಗ ಥೂ ಇದೆಂತಾ ಹೆಂಗಸು ಎನ್ನುತ್ತಿದ್ದನಲ್ಲ ಅವನೇನಾ ನಾನು? ಅಥವಾ ಕಾಲೆಜಿಗೆ ಸೇರಿದಾಗ ನನ್ನ ಜೊತೆಗಾರರು(ಹುಡುಗಿಯರು) ಕುಡಿದಾಗ ಮಹಿಳೆಯೆಂದರೇ ಹೀಗಿರಬೇಕು, ಅವರಿಗೆ ಬೇಕಾದುದನ್ನು ಅವರು ಪಡೆದು ಅನುಭವಿಸಬೇಕೆಂದು ಬಯಸಿತ್ತಲ್ಲ ಮನಸ್ಸು ಅದು ನಾನಾ? ಅಯ್ಯೋ ನನ್ನನ್ನು ಇಂಟರ್ನಲ್ ನಲ್ಲಿ ನನ್ನ ಮಾರ್ಕ್ಸ್ ಕಡಿಮೆಯಾಗುತ್ತದೆಂದು ಉಪನ್ಯಾಸಕರ ಕಣ್ಣಿಗೆ ಬೀಳದೇ ಮರೆಯಾಗಿ ಓಡಾಡುತ್ತಿದ್ದವನು, ಪ್ರಪಂಚದ ವಿಷಯ ನನಗೇಕೆ, ಅದರಲ್ಲಿ ನನಗೆ ಆಸಕ್ತಿ ಇಲ್ಲ ನನ್ನ ಕೆಲಸ ಓದಿ ಪಾಸಾಗುವುದಷ್ಟೇ ಎಂದು ಸಾಗಿಸಿದ ದಿನಗಳಿವೆ. ಮರುದಿನವೇ, ಉಪನ್ಯಾಸಕ ವಿರುದ್ದ ತಿರುಗಿಬಿದ್ದು, ಹೋದರೇ ಹೋಯಿತು ಈ ಮಾರ್ಕ್ಸು ಈ ಡಿಗ್ರೀ ಯಾರಿಗೆ ಬೇಕು ಎಂದು ಕುಲಪತಿಗಳಿಗೆ ದೂರು ನೀಡಲು ಹೋದದ್ದು ಇದೆ. ಓದಿ ಉದ್ದಾರವಾಗುವುದು ಅಷ್ಟರಲ್ಲಿಯೇ ಇದೆ, ಓದದೇ ಬದುಕಿದವರಿಲ್ಲವೇ? ಈ ಪುಸ್ತಕಗಳು ಯಾರೋ ಅವರ ತೀಟೆ ತೀರಿಸಿಕೊಳ್ಳಲು ಬರೆದಿದ್ದಾರೆ ಇದಕ್ಕೆಲ್ಲಾ ಕೊನೆ ಹೇಳಬೇಕೆಂದು ಎಸೆದು ಇನ್ನು ಮುಂದೆ ಕಾಲೆಜಿಗೆ ಗುಡ್ ಬೈ ಎಂದು ಕೆಲಸಕ್ಕೆ ಹೋದವನು, ಮರಳಿ ಬಂದು ಕಾಲೇಜು ಸೇರಿ ಹೆಚ್ಚು ಓದಬೇಕು, ಓದು ಎಂಬುದಿರುವುದು ನನ್ನ ಸ್ವಂತ ಬುದ್ದಿಯನ್ನು ವಿಕಸನಗೊಳ್ಳಲಿರುವುದೇ ಹೊರತು, ಪರರ ಜೊತೆಗೆ ನನ್ನನ್ನು ಹೋಲಿಸಿನೋಡುವುದಕ್ಕಲ್ಲವೆಂದವನು ನಾನಾ?

ಜಾತಿಯೆಂಬುದೇ, ಬಹುಮುಖ್ಯ ಅದೊಂದು ಜೀವನದ ಮಹತ್ತರ ಬೇಡಿಕೆಗಳಲ್ಲಿ, ಒಂದು ನಮ್ಮ ಸನಾತನಿಯವಾದದ್ದು, ಅದನ್ನು ಕಡೆಗನಿಸಬಾರದ್ದು, ಅದನ್ನು ಪಾಲಿಸಬೇಕೆಂದು, ನಮ್ಮ ಗುರುತು ಎಂಬುದೊಂದಿದ್ದರೇ, ಅದು ನಮ್ಮ ಜಾತಿಯಿಂದಲೇ ಎಂಬ ಪುಂಡರ ಭೋಧನೆಗೆ ಸಿಲುಕಿ ನನ್ನನ್ನು ನಾನು ಜಾತಿಯ ಕುರುಡು ಆರಾಧಕನಂತೆ ನಟಿಸಿದ್ದು ನಾನಾ? ಅದು ಅತಿರೇಕಕ್ಕೆ ಹೋಗಿ, ಒಕ್ಕಲಿಗರ ಸಂಘಕ್ಕೆ ಸದಸ್ಯತ್ವ ಪಡೆಯಲು ಹೋದದ್ದು ನಾನಾ? ಅಥವಾ ಈ ಜಾತಿ, ಈ ಧರ್ಮ ಇವೆಲ್ಲಾ ನಮ್ಮ ಸಮಾಜಕ್ಕೆ ಅಂಟಿರುವ ಕ್ಯಾನ್ಸರ್ ಹುಣ್ಣುಗಳು ಇವುಗಳನ್ನು ಬುಡಸಮೇತ ಕೀಳದ ಹೊರತು ಆರೋಗ್ಯಕರ ಸಮಾಜ ಕಲ್ಪಿಸಲಾರದೆಂದು, ಜಾತಿಯ ಬಗ್ಗೆ ಧರ್ಮದ ಬಗ್ಗೆ ಮಾತನಾಡುವವರನ್ನು ದೂರವಿಟ್ಟು ಒಬ್ಬನೇ ಹೊರಟವನು ನಾನಾ? ಇದಕ್ಕೊಂದು ಉದಾಹರಣೆಯಾಗಿ ನನ್ನ ಕಾಲೇಜಿನಲ್ಲಿ ನಡೆದುದ್ದನ್ನು ಹೇಳುತ್ತೇನೆ. ನಾನು ಜ್ನಾನ ಭಾರತಿಯಲ್ಲಿದ್ದಾಗ, ಇಂದಿಗೂ ಅದರ ಪರಿಸ್ಥಿತಿ ಬದಲಾಗಿಲ್ಲ, ಅದು ಬದಲಾಗುವುದು ಇಲ್ಲ. ಎರಡು ಬಣದವರು ವಿದ್ಯಾರ್ಥಿಗಳ ಮನಸ್ಸಲ್ಲಿ ಜಾತಿ ಬೀಜ ಬಿತ್ತಿ ಉಪಯೋಗಿಸುತ್ತಿದ್ದರು. ನನ್ನನ್ನು ಬಳಸಿಕೊಂಡರೆಂದರೇ ತಪ್ಪಿಲ್ಲ, ಆ ದಿನಗಳಲ್ಲಿ, ನಾನು ಅವರ ಮಾತನ್ನು ತಪ್ಪಿದರೇ ನನ್ನ ಡಿಗ್ರೀ ಹೋಗುವುದೆಂದು ಹೆದರಿಸಿದ್ದರು, ಅದು ನೇರ ಬೆದರಿಕೆಯಲ್ಲ! ಒಂದು ಬಗೆಯ ಭಾವನಾತ್ಮಕ ಬೆದರಿಕೆಗಳು,ಇನ್ನೊಂದೆಡೆ ನಮ್ಮನ್ನು ಬ್ಲಾಕ್ ಮೇಲ್ ಮಾಡುವಂತವುಗಳು. ನಮ್ಮ ಜಾತಿಯವನಾಗಿ ಹೀಗೆ ಆಡ್ತೀಯಾ ಅಂತಾ! ನಾನು ಜಾತಿ ಕಟ್ಟಿಕೊಂಡೂ ಏನಾಗ್ಬೇಕು ಸರ್ ನಮಗೆ ಎಂದರೇ, ಅಯ್ಯೋ ನಿನ್ನ ಏನ್ ಮಾತಾಡ್ತೀಯಾ ನೀನು, ಎಂದು ದೇಶದ ರಾಜಕಾರಣವನ್ನೆ ನಮ್ಮ ಕಿವಿಗೆ ತುಂಬಲು ನೋಡಿದರು. ಇನ್ನೊಂದು ಬಣದವರು ನೀವು ಜಾತಿಯತೆ ಮಾಡ್ತಿರಾ, ಜಾತಿ ಅಂತಾ ಹೋದರೇ, ನಿನ್ನ ಓದು ಏನಾಗುತ್ತೇ ಗೊತ್ತಾ ಎಂದು, ಅವರು ಹೇಳಿದ್ದನ್ನು ಕಾಗದದಲ್ಲಿ ಬರೆದುಕೊಡಿ, ಅವರ ವಿರುದ್ದ ಒಂದು ಲಿಖಿತ ದೂರು ಕೊಡಿ, ಅವರನ್ನು ನಾಳೆಯಿಂದಲೇ ಕುರ್ಚಿಯಿಂದ ಇಳಿಸೋಣವೆಂದು ಪೀಡಿಸತೊಡಗಿದರು. ನನಗಂತೂ ದಿನ ಕಳೆಯುವುದು ಆಗುತ್ತಿರಲಿಲ್ಲ, ಯಾರು ಸಿಕ್ಕರು , ಕಾಗದ ಬರೆದು ಕೊಡು, ದೂರು ಕೊಡು ಎಂದು ನನ್ನನ್ನು, ನನ್ನ ಸ್ನೇಹಿತರಿಗೂ ತಿಳಿಸು ಎಂದು ಕಾಡುವುದೇ ಆಯಿತು. ಯಾರೊಬ್ಬರೂ ಓದಿನ ಬಗೆಗೆ, ಸಮಾಜದ, ಪರಿಸರದ ಕಡೆ ಪಕ್ಷ ನಮ್ಮ ವಿದ್ಯಾರ್ಥಿಗಳ ಬಗೆಗೂ ಮಾತನಾಡುತ್ತಿರಲಿಲ್ಲ. ಕಟ್ಟ ಕಡೆಗೆ, ನನಗೇ ಬೇಸರ ಬಂದು, ಇದು ಹೀಗೆ ಮುಂದುವರೆದರೇ, ನಾನು ಕುಲಪತಿಗಳ ಬಳಿಗೆ ಹೋಗುತ್ತೇನೆ, ನನ್ನ ಈ ಕೊಳಕು ಡೀಗ್ರೀ ನೂ ಬೇಡ, ಇವರ ಸಹವಾಸನೂ ಬೇಡ, ಎಂದು ಹೇಳಿದ ವಿಷಯ ಇಬ್ಬರಿಗೂ ತಿಳಿದು, ಇಬ್ಬರೂ ನನ್ನ ಶತ್ರುಗಳಾದರು. ಈಗಲೂ ನಾನು ಓದಿದ ಆ ವಿಭಾಗಕ್ಕೆ ಹೋಗಲು ಹಿಂಜರಿಕೆ, ಮತ್ತು ಅಸಹ್ಯವಾಗುತ್ತದೆ. ಇಡೀ ವ್ಯವಸ್ಥೆಯೇ ಹೀಗಿರುವಾಗ ನಾನೊಬ್ಬ ದೂರಿದರೇ ಏನು ಲಾಭವಾದೀತು. ನಾನು ಈ ಪರಿಸ್ಥಿಯಲ್ಲಿದ್ದಾಗ ಅದನ್ನು ಬಳಸಿಕೊಂಡು ನನ್ನ ಬಗ್ಗೆ ಅಪಪ್ರಚಾರ ಮಾಡಿದ ನನ್ನ ಸ್ನೇಹಿತರ ಮಾರ್ಕ್ಸ್ ಕಾರ್ಡುಗಳಲ್ಲಿ ಮಾರ್ಕ್ಸ್ ನನಗಿಂತ ಬಹುಪಾಲು ಹೆಚ್ಚು ಪಡೆದರು. ನಾನು ಆ ಅಂಕಪಟ್ಟಿಗಳಿಂದ ಏನೂ ಲಾಭ ಪಡೆದಿಲ್ಲವೆನ್ನುವುದು ಸೋಜಿಗದ ಸಂಗತಿ.

ಇದೊಂದು ಗೊಂದಲವೋ? ದ್ವಂದ್ವವೋ ತಿಳಿದಿಲ್ಲ. ಒಮ್ಮೊಮ್ಮೆ ಗೊಂದಲವೆನಿಸಿದರೂ ಮತ್ತೊಮ್ಮೆ ಇದು ಗೊಂದಲವಲ್ಲ, ದ್ವಂದ್ವವೆನಿಸುತ್ತದೆ. ಕೇವಲ ಎರಡು ದಿಕ್ಕುಗಳಿದ್ದಾಗ, ದ್ವಂದ್ವವೆನಿಸುವುದು ಸಹಜ. ಆದರೇ, ಕತ್ತಲೆಯ ಕೋಣೆಯಲ್ಲಿ ಒಬ್ಬನೇ ಉಳಿದಾಗ, ಎಲ್ಲ ದಿಕ್ಕುಗಳು ಒಂದೇ ತೆರನಾಗಿ ಕಾಣುತ್ತದೆ. ಅಸಲಿಗೆ ಅಲ್ಲಿ, ದಿಕ್ಕುಗಳೆಂಬುದೇ ಇರುವುದಿಲ್ಲ, ಎತ್ತ ನೋಡಿದರೂ ಒಂದೇ ತೆರನಾಗಿ ಕಾಣುತ್ತದೆ, ಏನೂ ತೋಚದ, ಎಲ್ಲೋ ಕಳೆದು ಹೋದ ಭಾವನೆ ಮೂಡುತ್ತದೆ. ಬದುಕೆಂಬುದು ಕೊನೆಯ ಘಟ್ಟದಲ್ಲಿದೆ ಎನಿಸುವುದು ಒಂದು ಬಗೆಯಾದರೇ, ಜೀವನ ಮುಗಿದು ಹೋಯಿತೆಂದು, ಅಥವಾ ಜೀವನದಲ್ಲಿ ನಾನು ಮುಳುಗಿ ಹೋದೆ ಎಂಬ ಕೊರಗು ಉಂಟಾಗುತ್ತದೆ. ಇದು ಸರಿ ಅದು ತಪ್ಪು ಎಂದು ಚಿಂತಿಸುಲು ಯತ್ನಿಸುವ ಮನಸ್ಸು ಒಮ್ಮೆ ಮೂಡಿದರೂ, ಮತ್ತೊಮ್ಮೆ, ಜೀವನ ಬಂದ ಹಾಗೆ ಸ್ವೀಕರಿಸುವುದನ್ನು ಬಿಟ್ಟು ಅದನ್ನು ನಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವ ಶಕ್ತಿಯನ್ನು ಕೊಟ್ಟವಾರಾರು ಎನ್ನುವ ಪ್ರಶ್ನೆ ಮೂಡುತ್ತದೆ. ಜೀವನ ನನ್ನದು ನನ್ನ ಆಸೆಗೆ ನನ್ನ ಮನಸ್ಸಿಗೆ ತಕ್ಕಂತೆ ಯೋಚಿಸಿ ಅದನ್ನು ರೂಪಿಸಿಕೊಳ್ಳುವ ಹಕ್ಕು ನನಗಿಲ್ಲವೇ, ನನ್ನ ಬದುಕಿನ ಮೇಲೆ, ನನ್ನ ದೇಹದ ಮೇಲೆ ನನ್ನ ಹಕ್ಕು ಸಾಧಿಸುವುದನ್ನು ತಡೆಯಲು ಅನ್ಯರಿಗೆ ಹಕ್ಕನ್ನು ಕೊಟ್ಟವರಾರು? ನನ್ನಿಷ್ಟಕ್ಕೆ ತಕ್ಕಂತೆ, ಬಟ್ಟೆ ತೊಡುವುದು, ಗಡ್ಡ ಬಿಡುವುದು, ತಲೆ ಕೂದಲು ಬಾಚುವುದಕ್ಕೂ ಬಿಡುವುದಿಲ್ಲವಲ್ಲ, ನಾನು ಹೀಗೆ ಇರುತ್ತೇನೆ, ಯಾರ ಮಾತನ್ನು ಕೇಳುವುದಿಲ್ಲ. ಕೇಳುವ ಅನಿವಾರ್ಯತೆ ನನಗಿಲ್ಲವೆಂದರೂ, ಅದರಂತೆ ಹಲವು ತಿಂಗಳುಗಳು ಬದುಕಿದರೂ, ಮತ್ತದೆ ಏಕಾತನತೆ ಕಾಡುತ್ತದೆ, ಮರಳಿ ಮಣ್ಣಿಗೆಯೆಂಬಂತೆ, ಅದೇ ಹಳೆಯ ಶೈಲಿಗೆ ಹೋಗೋಣವೆನಿಸುತ್ತದೆ. ನನ್ನ ಮೇಲೆ ಹಿಡಿತ ಸಾಧಿಸಲೂ ಯಾರಾದರೂ ಹವಣಿಸಿದರೇ, ಪ್ರಯತ್ನಿಸಿದರೇ, ಅವರಿಗೆ ಸಿಗದಂತೆ, ನನ್ನನ್ನು, ನನ್ನತನವನ್ನು ಉಳಿಸಿಕೊಳ್ಳಲು ಹೋರಾಡತೊಡುಗುತ್ತದೆ. ಇದು ನಾನು, ನಾನು ಎಂದು ಬೊಬ್ಬೆ ಹೊಡೆಯುತ್ತದೆ. ಮರುಗಳಿಗೆಯಲ್ಲಿಯೇ, ಅದು ಬದಲಾಗಿ, ಜೀವನವೆಂಬುದು ಶಾಶ್ವತವಾ? ಈ ಹೋರಾಟ ಈ ಜಂಜಾಟವೆಲ್ಲಾ ಅನವಶ್ಯಕತೆಯೆನಿಸುತ್ತದೆ.

ಬಾಳೆಂಬ ಪಯಣದಲ್ಲಿ, ನಾನೊಬ್ಬ ಸಹ ಪಯಣಿಗನಾಗಿ ಪಯಣಿಸುತ್ತಿದ್ದೇನೆ, ಇದು ಮುಗಿದ ನಂತರ ನಾನು ಇಳಿದು ಹೋಗಲೇ ಬೇಕು, ನಾನು ಈಗ ಕುಳಿತಿರುವ ಸ್ಥಳ ನಿನ್ನೆ ಮತ್ತಾರೋ ಕುಳಿತದ್ದು, ನಾಳೆ ಇನ್ಯಾರಿಗೋ ಅದನ್ನು ಬಿಟ್ಟು ಹೋಗುತ್ತೇನೆ. ಅದಕ್ಕಾಗಿ ಈ ಹೋರಾಟ, ಈ ನೂಕಾಟವೇಕೆ? ಎನಿಸುತ್ತದೆ.ಆದರೂ, ಒಮ್ಮೊಮ್ಮೆ, ಈ ಜೀವನವೆಂಬುದರಲ್ಲಿ, ನಾನು ಇಲ್ಲೇ ಉಳಿದು ಹೋಗುವವನಂತೆ, ಸಾಧಿಸಿ ತೋರಬೇಕೆಂದು, ದುಡಿಮೆಗೆ, ಸಾಮಾಜಿಕ ಕಾಳಜಿಗೆ ಮುಳುಗುತ್ತೇನೆ. ನಾನು ಈ ಸಮಾಜದಿಂದ ಪಡೆದು ಮೇಲಕ್ಕೆ ಬಂದಿದ್ದೇನೆ ಅದನ್ನು ಬಡ್ಡಿ ಸಮೇತ ಹಿಂದಿರುಗಿಸಬೇಕು ನನಗೆ ಯಾರ ಹಂಗು ಬೇಡ, ಇಲ್ಲಿಂದ ನಾನು ಏನನ್ನು ಹೊತ್ತು ಹೋಗುವುದಿಲ್ಲ, ನನ್ನಿಂದ ಸಾಧ್ಯವಾದಷ್ಟನ್ನು ಇಲ್ಲಿಗೆ ನೀಡಿ ಹೋಗಬೇಕು. ಬದುಕನ್ನು ಅರ್ಥಪೂರ್ಣವಾಗಿಸಬೇಕೆಂದು ಬಯಸುತ್ತೇನೆ. ಅರ್ಥವೆಂದರೇನು? ಈ ಅರ್ಥ ನನ್ನಿಂದ ನಾನು ಮಾಡಿದ್ದು. ಅಥವಾ ನನ್ನ ಪೂರ್ವಜರು ಮಾಡಿದ್ದಿರಬೇಕು. ಅದು ಅವರ ಜೀವನಕ್ಕೆಂದು ಮಾಡಿದ್ದೇ ಹೊರತು ನಾನು ಅದನ್ನು ಪಾಲಿಸಲೇಬೇಕೆಂಬ ನಿಯಮವೇನು? ಜೀವನವೆಂಬುದು ಸ್ವಂತಿಕೆಯ, ಆಸಕ್ತಿಯ ವಿಷಯ. ಒಂದು ರೈಲಿನಲ್ಲಿ ಪಯಣಿಸುವಾಗ, ಒಬ್ಬ ಮೇಲಿನ ಹಾಸಿಗೆಯಲ್ಲಿ ಮಲಗಲು ಬಯಸುತ್ತಾನೆ, ಮತ್ತೊಬ್ಬ ಕಿಟಕಿಯ ಬದಿಯಲ್ಲಿ ಕೂರಲು ಬಯಸುತ್ತಾನೆ, ಫುಟ್ ಬೋರ್ಡ್ ಸಿಕ್ಕರೂ ಸಾಕೆಂದು ಬಯಸುವವರೂ, ಸೀಟು ಸಿಕ್ಕರೂ ಬಿಟ್ಟು ಫುಟ್ ಬೋರ್ಡ್ ಬಳಿ ನಿಲ್ಲಲು ಬಯಸುವವರು, ನಿಂತೆ ಪಯಣಿಸಲು ಹೊರಡುವವರು ಹೀಗೆ ಅವರಿಚ್ಚೆಯಂತೆ ಅವರಿಗೆ ದೊರಕಿದಂತೆ ರೂಪಿಸಿಕೊಳ್ಳುತ್ತಾರೆ. ಅಲ್ಲಿ ಕೆಲವರು ಇದು ನನ್ನದು ಎಂದು ವಾದಿಸುತ್ತಾ, ಜಗಳವಾಡುತ್ತ ಕಳೆಯುತ್ತಾರೆ. ಹಾಗಿರುವಾಗ ನಾನೇಕೆ, ಯಾರೋ ಎಂದೋ ಬರೆದು ಹೋದ ಜೀವನ ಪದ್ದತಿಯನ್ನು ಅನುಕರಿಸಬೇಕೆನಿಸುತ್ತದೆ. ನಾನು ನಿನ್ನೆಯ ಬಗ್ಗೆ ಅಥವಾ ಕಳೆದು ಹೋದ ದಿನಗಳ ಬಗ್ಗೆ, ನನ್ನ ಬದುಕಿನಲ್ಲಿ ಬಂದು ಹೋದ ಪಾತ್ರಗಳ ಬಗ್ಗೆ ಚಿಂತಿಸುವುದನ್ನು ಮರೆತಿದ್ದೇನೆ. ಬಿಡದೇ ಕಾಡುವ ನೆನಪುಗಳು ಬಹಳ ಕಡಿಮೆಯೆಂದರೂ ತಪ್ಪಿಲ್ಲ.

ನಾನು ಇಂದಿನ ಈ ದಿನದ ಬಗ್ಗೆ ಇದನ್ನು ಸದುಪಯೋಗಿಸಿಕೊಳ್ಳುವುದರ ಬಗ್ಗೆ ಹೆಚ್ಚಿನ ಗಮನವಹಿಸುತ್ತೇನೆ. ಇಳಿದು ಹೋದ ನನ್ನ ಸಹ ಪಯಣಿಗನನ್ನು ಕಾಯುವುದನ್ನು ನಿಲ್ಲಿಸಿದ್ದೇನೆ. ಅವನ ಪಾತ್ರ ಮುಗಿಯುತು. ನಾನಾಗೆ ಅವನನ್ನು ಇಳಿಸಲಿಲ್ಲ. ಅವನಿಗೆ ಬೇಸರ ಬಂದು ಹೋದಳೋ ಅಥವಾ ನನ್ನ ಸಂಗಡ ಸಿಗದ ಆಂತರಿಕ ಸಂತೋಷವನ್ನು ಬೇರೆಡೆ ಹುಡುಕಿ ಹೋದಳೋ ಹೋದರೇ ಹೋಗಲಿ, ಹೋದದ್ದು ಆಯಿತು ಮತ್ತೆ ಅವಳು ನನ್ನ ಬಾಳಲ್ಲಿ ಬರಲಿ ಎಂಬ ಬಯಕೆ ಎನಗಿಲ್ಲ. ಬಂದರೂ ಅವಳಿಗೆ ಕೊಟ್ಟ ಸ್ಥಾನವನ್ನು ಮತ್ತೆ ಕೊಡುತ್ತೇನೆಂದು ಭರವಸೆ ಕೊಡಲಾರೆ. ನಾನು ನಿನಗಿಂತ ಬಹಳ ದೂರಕ್ಕೆ ಸಾಗಿದ್ದೇನೆ. ನೀನು ಬಯಸುವ ಆ ಮಧುರ ದಿನಗಳು ನನಗಿಲ್ಲ. ಹಾಗೆಂದು ಈಗ ನಡೆಯುತ್ತಿರುವ ದಿನಗಳು ಅಪ್ರಿಯವೆನಿಸುವುದಿಲ್ಲ. ನನ್ನ ಜೊತೆಯಲ್ಲಿ ಇನ್ನೂ ಹಲವಾರು ಸಹಪಯಣಿಗರು ಇದ್ದಾರೆ ಅವರಿಗೆ, ಅವರಿಂದ ನನಗೆ ಸಿಗುತ್ತಿರುವ ಸಂತೋಷ ಸಾಕು. ನೀನು ಬಿಟ್ಟು ಹೋದಾಗ ನನ್ನ ಬಾಳಿಗೆ ಆಗಮಿಸಿದ, ಅಥವಾ ನೀನು ಕುಳಿತಿದ್ದ ಸ್ಥಳದಲ್ಲಿ ಈಗ ಕುಳಿತಿರುವವರನ್ನು ನಾನು ಎದ್ದೇಳಿ ಎನ್ನಲಾರೆ. ನಿನಗೆ ನಿನ್ನ ಜೀವನದ ಆಯ್ಕೆಗಳು ಮುಖ್ಯವಾಗುವಂತೆ ನನಗೂ ಮುಖ್ಯವಾಗುತ್ತವೆ. ಪ್ರೀತಿ ಪ್ರೇಮ, ಸ್ನೇಹ ಸಂಭಂಧಗಳು ಶಾಶ್ವತವೆಂದೂ ಸಾವಿರ ಸಾವಿರ ಹೇಳಬಹುದು, ನನಗೆ ಎರಡು ಕಡೆಯಿಂದ ಒಂದೇ ಮಟ್ಟದಲ್ಲಿ ತಲ್ಲೀನತೆಯಿದ್ದರೇ ಮಾತ್ರ ಅಲ್ಲಿ ಒಂದು ಗಮ್ಯತೆ ಮೂಡುತ್ತದೆ. ನಾನು ಮಾತನಾಡುವ ಮಾತಿಗೆ ಬೆಲೆ ಬರುವುದು ಕೇಳುಗರಿದ್ದರೇ ಮಾತ್ರ, ಕೇಳುಗರು ನಿದ್ದೆ ಹೋದರೂ ನಾನು ಮಾತನಾಡುತ್ತಿದ್ದರೇ, ಅದು ಕೇವಲ ರಾಜಕಾರಣಿಗಳ ಬುಡುಬುಡುಕೆ ಮಾತುಗಳಾಗುತ್ತವೆ.

ಆದರೂ ನನಗೆ ಅರಿಯದಂತೆ ನನ್ನೊಳಗೆ ಬಂದು ನನ್ನನ್ನು ಹೊಸ ಜಗತ್ತಿಗೆ ಕರೆದೊಯ್ದವಳೆಂದರೇ ನಿಸರ್ಗ. ಅವಳ ಮೋಹಕ್ಕೆ ಸಿಳುಕಿದೆನೆಂದರೇ, ಅವಳು ಉಬ್ಬಿ ಹೋದಾಳು! ಇಲ್ಲವೆಂದರೇ, ನನಗೆ ನಾನೇ ಮೋಸ ಮಾಡಿಕೊಂಡಂತಾಗುತ್ತದೆ. ಜೀವನದಲ್ಲಿ ಅವನಿಲ್ಲದಿದ್ದರೇ, ಅವಳಿಲ್ಲದಿದ್ದರೇ ಎಂದು ಎಲ್ಲರೂ ಹೇಳುವಂತೆ, ಹುಟ್ಟಿನಿಂದಲೇ ಬೆಳೆದು ಬಂದ ನಿಸರ್ಗದೆಡೆಗಿನ ಮೋಹ ನನ್ನನ್ನು ಬದಲಾಯಿಸಿತೆಂದರೂ ತಪ್ಪಲ್ಲ. ಪ್ರತಿ ಬಾರಿಯೂ ನಾನು ನನ್ನಯ ಬಗ್ಗೆ ಬರೆಯುತ್ತಲೇ ಇದ್ದೇನೆ, ಆದರೇ ಒಮ್ಮೆಯೂ ನಿನ್ನಯ ಬಗ್ಗೆ ಬರೆದಿರಲಿಲ್ಲ, ನನ್ನ ಬರವಣಿಗೆಗಗಳಲ್ಲಿ ಆಗೊಮ್ಮೆ ಈಗೊಮ್ಮೆ ಬಂದ ಹೋದರೂ, ಸಂಪೂರ್ಣವಾಗಿ ಬರೆದಿರಲಿಲ್ಲ, ಮೊದಲ ಬಾರಿಗೆಂಬಂತೆ ನಿನ್ನಯ ಬಗ್ಗೆಯೇ ಬರೆಯುತ್ತೇನೆ. ನಾನು ಬರೆಯುತ್ತೇನೆ, ಎನ್ನುವುದಕ್ಕಿಂತ ನೀನು ಬರೆಸಿಕೊಳ್ಳುತ್ತಿದ್ದೀಯಾ ಎಂದರೇ ತಪ್ಪಲ್ಲ. ನನ್ನ ಬರವಣಿಗೆಗಳು ಮೊದಲು ಶುರುವಾದದ್ದು ನಿನ್ನಯ ಬಗೆಗಿನ ನನ್ನ ಪ್ರೇಮವನ್ನು ಪ್ರಕಟಿಸುವುದಕ್ಕೆಂಬುದು ನಿನಗೆ ತಿಳಿದಿದೆ. ಆದರೇ, ನಂತರ ನಾನು ನಿನಗೆ ಬೇಡವೆನಿಸಿದರೂ ಬೇಡದ ಹತ್ತು ಹಲವು ವಿಷಯಗಳನ್ನು ಅರೆಬೆಂದ ಮಡಿಕೆಯಂತೆ ಅರ್ಧ ಬರೆದು ನಿಲ್ಲಿಸಿದೆ. ನೀನು ಯಾರು? ನಿನಗೊಂದು ಹೆಸರಿಡಲೇ, ನಾ ಇಟ್ಟ ಹೆಸರು ನಿನಗೆ ಮೆಚ್ಚುಗೆಯಾದಿತೇ? ನನಗೆ ಅದು ತಿಳಿಯುವುದಿಲ್ಲ.

ನಾನು ನಿನ್ನ ಸಂಪೂರ್ಣ ಗುಣಗಾನ ಮಾಡಲಾರೆ, ನೀನು ನನ್ನ ಬದುಕಲ್ಲಿ ಬಂದು, ನನ್ನಲ್ಲಾದ ಬದಲಾವಣೆಯ ಒಂದು ಮುಖವನ್ನು ತೋರಿಸುವ ಪ್ರಯತ್ನ ಮಾಡುತ್ತೇನೆ. ತಪ್ಪಿದ್ದರೇ, ಮುನಿಸಿ ನನ್ನಿಂದ ದೂರಾಗಬೇಡ. ಖುಷಿಯಾದರೇ, ಅಪ್ಪಿ ಮುದ್ದಾಡಲೂ ಬೇಡ ಸಂತೋಷ ತಡೆಯಾರದೇ ಎದೆ ಒಡೆದು ಸತ್ತರೂ ಸತ್ತೆ ನಾನು. ನೀನು ನನ್ನ ಬಾಳಿಗೆ ಬಂದಾಗ ನನ್ನ ಬಾಳು ಬರುಡಾಗಿತ್ತು. ಆದ್ದರಿಂದಲೇ, ನನಗೆ ನೀನು ಮೆಚ್ಚುಗೆಯಾದದ್ದು. ದಿನ ನಿತ್ಯ ಕುಡಿದು ಬದುಕಿ, ಹತ್ತಾರು ಸಿಗರೇಟು ಸೇದಿ ಕೆಮ್ಮಿ ಸಾಯುತ್ತಿದ್ದವನನ್ನು ಸಿಗರೇಟಿನಿಂದು ದೂರ ಮಾಡಿ ಸಾಧಿಸಿದ ಶಕ್ತಿ ನಿನ್ನದು. ಕುಡಿತವೆಂಬುದು ನನ್ನ ಮನೆಯ ದೇವರೆಂದು ನಂಬಿ ಅದರಂತೆ ದಿನ ಸಂಜೆ ಆರು ಗಂಟೆಯಾಗುವುದನ್ನೇ ಕಾಯುತ್ತಿದ್ದವನೂ ಕೂಡ ಕುಡಿತದಿಂದ ದೂರಾಗುವಂತೆ ಮಾಡಿದ್ದು ನಿನ್ನ ಮಹಿಮೆಯೇ ಸರಿ. ಜೀವನ ಪರ್ಯಂತ ಅದನ್ನು ಬಿಡದಿದ್ದರೂ ಪ್ರಾಮಾಣಿಕವಾಗಿ ಕೆಲವು ತಿಂಗಳುಗಳ ಮಟ್ಟಿಗೆ ನಾನು ಬಿಟ್ಟದ್ದು ಸತ್ಯ.

ಮೂಗಿನ ಮೇಲೆ ಕೋಪ ತರಿಸಿಕೊಂಡು ರೇಗುತಿದ್ದವನನ್ನು ನಿನ್ನನ್ನು ಕಂಡಾಗ ನಿನ್ನೊಡನೆ ಮಾತನಾಡುವಾಗ ಅದೆಷ್ಟೂ ತಲ್ಲೀನನಾಗುತ್ತೇನೆಂದರೇ ನನಗೆ ಅಚ್ಚರಿ.ಆದರೂ ನಿನ್ನಿಂದ ನಾನು ದೂರಾಗಿ ಉಳಿದಿದ್ದು ಮತ್ತೊಮ್ಮೆ ಬಂದಾಗ ನನ್ನಲ್ಲಿ ಏನೇನೂ ಬದಲಾವಣೆ ಆಗದಿದ್ದರೂ ನಿನ್ನಲ್ಲಾದ ಬದಲಾವಣೆಗೆ ನಾನು ತತ್ತರಿಸಿ ಹೋಗಿದ್ದೆ. ನೀನು ನನಗೆ ಕೊಟ್ಟ ವಿವರಣೆ ಸರಿಯಿತ್ತಾದರೂ, ಅದರಿಂದ ನನಗೆ ಸಮಾಧಾನಕ್ಕಿಂತ ಆದ ನೋವೇ ಹೆಚ್ಚು. ನಮ್ಮ ಜೀವನವೆಂಬುದು ಒಂದು ಗಡಿಯಾರವೆಂದುಕೊಂಡರೇ, ನಾನೆಂಬುದು ದೊಡ್ಡ ಮುಳ್ಳು (ಗಂಟೆ), ನಮ್ಮ ಜೀವನದಲ್ಲಿ ಬರುವ ಜನರು ಅಲ್ಲಿರುವ ನಿಮಿಷದ, ಅಥವಾ ಸೆಕೆಂಡು ಮುಳ್ಳುಗಳಂತೆ. ನಮ್ಮ ಜೀವನದ ಗಂಟೆ ಬದಲಾಗುವುದಕ್ಕೆ ಒಂದು ಗಂಟೆ ಹಿಡಿದರೇ ಅವರ ಜೀವನ ನಮಗಿಂತ ೬೦ ರಷ್ಟೂ ಹೆಚ್ಚು ಬದಲಾಗಿರುತ್ತದೆ, ಕೆಲವರದ್ದು ೩೬೦ ಬಾರಿಯಷ್ಟು ಮುಂದಕ್ಕೆ ಹೋಗಿರುತ್ತದೆ. ಅದಕ್ಕಾಗಿಯೇ, ನಮ್ಮ ಜೀವನದಲ್ಲಿ ಹೈಸ್ಕೂಲ್ ಸಮಯದಲ್ಲಿ ಬಂದು ಹೋದ, ಅಥವಾ ಕಳೆದು ಹೋದ ಗೆಳತಿಯನ್ನು ಹಲವಾರು ವರ್ಷ ಕಳೆದ ಮೇಲೂ ಅದೇ ದೃಷ್ಟಿಯಂತೆ ನೋಡಲು ಬಯಸುತ್ತದೆ ನಮ್ಮ ಮನಸ್ಸು, ಆದರೇ ಅವರ ಮಕ್ಕಳು ಈ ವೇಳೆಗೆ ಹೈಸ್ಕೂಲ್ ಓದುತ್ತಿರುತ್ತಾರೆ. ನಮ್ಮ ಹಳೆಯ ನೆನಪುಗಳು ಅವರ ಸ್ಮೃತಿಪಟಲದಲ್ಲಿ ಮಂಕಾಗಿರುತ್ತವೆ, ಕೆಲವೊಮ್ಮೆ ಅಳಿಸಿಹೋಗಿದ್ದರೂ ಆಶ್ಚರ್ಯವಿಲ್ಲ.

ನಾನು ನಮ್ಮೂರಿನ ಕಟ್ಟೆಯ ಮೇಲೆ ನನ್ನ ಶಾಲೆಯ ದಿನಗಳಲ್ಲಿ ಕುಳಿತು ನೋಡುತ್ತಿದ್ದ ನದಿಗೂ ಇಂದೂ ಕುಳಿತು ನೋಡುವ ನದಿಗೂ ಸಾಕಷ್ಟು ವ್ಯತ್ಯಾಸವಾಗಿದೆ. ನನ್ನ ಮನಸ್ಸು ಇನ್ನೂ ನನ್ನ ಐದನೇ ತರಗತಿಯಲ್ಲಿ ಕುಣಿದು, ಮರಳಲ್ಲಿ ಮಲಗಿ ಮೈಗೆಲ್ಲಾ ಮರಳನ್ನು ಮೆತ್ತಿಸಿಕೊಂಡು ಮತ್ತೆ ನದಿ ನೀರಿಗೆ ಬೀಳಲು ಬಯಸುತ್ತದೆ. ಆದರೇ ನದಿ ಅದಕ್ಕೆ ಅವಕಾಶಕೊಡುವುದಿಲ್ಲ. ನನ್ನ ಆ ವಯಸ್ಸಿನ ಅಂದರೇ ಇಂದಿನ ಐದನೇ ವಯಸ್ಸಿನ ಹುಡುಗರು ನನ್ನ ಸ್ಥಾನವನ್ನು ವಹಿಸಿದ್ದಾರೆ. ಇದು ನಮ್ಮದು ನೀನು ವಯಸ್ಸಾದವನು ನಮ್ಮಿಂದ ದೂರವಿರು ಎಂದು ದೂಡುತ್ತಾರೆ.ನಾನು ಅವರ ಆಟಗಳನ್ನು ನೋಡುತ್ತಾ ಅಲ್ಲೇ ಮರಳಿನ ದಿಂಡಿನ ಮೇಲೆ ಕುಳಿತರೇ, ನಾನು ಅವರ ಮನೆಯವರಿಗೆ ಹೋಗಿ ಚಾಡಿ ಹೇಳುತ್ತೇನೆಂದು ಅನುಮಾನಿಸಿ ನೋಡುತ್ತಾರೆ. ಇವೆಲ್ಲವೂ ಗೊಂದಲಮಯವೇ ಸರಿ. ನಾನು ನಿನ್ನನ್ನು ಬಯಸಿ ಮರಳಿ ಮರಳಿ ನಿನ್ನಲ್ಲಿಗೆ ಬರಲು ಇಚ್ಚಿಸುತ್ತೇನೆ ಆದರೇ ನೀನು ನನ್ನುನ್ನು ದೂಡಲು ಪ್ರಯತ್ನಿಸುತ್ತೀಯಾ? ನಿಸರ್ಗವೆಂದರೇ ಇದೇನಾ?

ನೀನು ನನಗೆ ಬೇಕಿರುವುದೆಲ್ಲವನ್ನು ಕೊಟ್ಟೆ, ನೀನು ಕೊಟ್ಟೆ ಎನ್ನುವುದಕ್ಕಿಂದ ನಾನು ಬಳಸಿಕೊಂಡೆ, ಬಳಸಿಕೊಳ್ಳುವುದಕ್ಕಿಂತ ಬಸಿದುಕೊಂಡೆ. ನನ್ನ ಈ ಎಲ್ಲ ಬದಲಾವಣೆಗಳನ್ನು ಅಥವಾ ಜೀವನದ ಎಲ್ಲ ಆಗೂ ಹೋಗುಗಳನ್ನು ಬದಲಾವಣೆ, ಪರಿವರ್ತನೆ, ಎಂದು ವಿಭಿನ್ನಾ ಹೆಸರುಗಳನ್ನು ಕೊಟ್ಟವರಿದ್ದಾರೆ. ನನಗೆ ಅವೆಲ್ಲಾ ಅಷ್ಟು ಸಮಂಜಸವೆನಿಸುವುದಿಲ್ಲ. ಜೀವನದ ಪ್ರತಿಯೊಂದು ಹಂತದಲ್ಲಿಯೂ ಅದಕ್ಕೆ ತಕ್ಕಂತೆ ಆಟವಾಡುತ್ತೇವೆ, ಅದನ್ನು ಬೆಳವಣಿಗೆಯೆನ್ನಲು ಹೇಗೆ ಸಾಧ್ಯವೆನ್ನುವುದು ನನ್ನ ಪ್ರಶ್ನೆ. ಚಿಕ್ಕವನಿದ್ದಾಗ ಆಡುತ್ತಿದ್ದ ಆಟಗಳಲ್ಲಿ, ಮರಕೋತಿ, ಕಬ್ಬಡ್ಡಿ, ಮರಳಲ್ಲಿ ಮನೆ ಕಟ್ಟುವುದು, ಇವೆಲ್ಲಾ ಇಂದು ನಾನು ಆಡಲೂ ಹೋದರೇ ನನಗಿಂತ ಇಪ್ಪತ್ತು ವರ್ಷ ಚಿಕ್ಕ ಮಕ್ಕಳ ಜೊತೆಯಲ್ಲಿ ನಾನು ಸೋತು ಮುಖ ಊದಿಸಿಕೊಂಡು ಬರಬೇಕಾದೀತು. ಅದರಂತೆಯೇ, ನಾನು ನನಗಿಂತ ಬಹಳ ಚಿಕ್ಕವಯಸ್ಸಿನ ಕಿರಿಯವರನ್ನು ಇಪ್ಪತ್ತರ ಮಗ್ಗಿ ಹೇಳು ಎಂದು ಪೀಡಿಸಿ ನಿನಗೆ ಅಷ್ಟೂ ತಿಳಿಯುವುದಿಲ್ಲವೇ ಎಂದರೇ ಮುಟ್ಠಾಳತನದ ಪರಮಾವಧಿ ಎನಿಸುವುದು. ಅವರವರ ಪಾತ್ರಗಳನ್ನು ಅವರವರು ಆ ಸನ್ನಿವೇಶಕ್ಕೆ ತಕ್ಕಂತೆ ಆಡಿ ಹೋಗಬೇಕು, ಯಾರನ್ನೋ ಅನುಕರಣೆ ಮಾಡಲೂ ಹೋಗಿ ಹಾಗೆ ಆಗದಿದ್ದಾಗ ನೊಂದು ಸಾಯುವುದು ಅಷ್ಟು ಹಿತವಲ್ಲ.. ನಿಮ್ಮ ಜೀವನ ನಿಮ್ಮ ಅನಿಸಿಕೆ ನಿಮಗೆ ಬಿಟ್ಟದ್ದು ಇದು ನನ್ನೊಳಗೆ ಕೊರೆಯುತ್ತಿದ್ದ ಕೆಲವು ಹುಳುಗಳು...ಇದನ್ನು ಕುರಿತು ಮತ್ತೇ ಚರ್ಚೆ ಮಾಡಲು ಬರಬೇಡಿ....


15 ಜುಲೈ 2009

ನನ್ನೊಳಗೆ ಅವಿತು ಹೋಗುವ ಮುನ್ನ ನಿಮ್ಮ ಮಡಿಲಿಗೆ!!!!-3


ದೊಡ್ಡೆಗೌಡರ ತಂದೆಗೆ ಮೂವರು ಮಡದಿಯರು, ರಸಿಕತೆಯಿಂದ ಮದುವೆಯಾಗದಿದ್ದರೂ, ಅದೇಕೋ ಮದುವೆಯಾಗಿದ್ದರು. ಮದುವೆಯಾದ ಮೇಲೆ ಅದಕೊಂದು ಅರ್ಥಕೊಡುವುದಕ್ಕಾಗಿಯೇ ಮೊದಲನೆಯ ಹೆಂಡತಿಗೆ ಒಂಬತ್ತು ಹೆಣ್ಣು ಮಕ್ಕಳು, ಎರಡನೆಯವರಿಗೆ ೪ ಗಂಡುಮಕ್ಕಳು, ೩ ಹೆಣ್ಣುಮಕ್ಕಳು, ಮತ್ತು ಮೂರನೆ ಮುದ್ದಿನ ಹೆಂಡತಿಗೆ ೫ ಜನ ಗಂಡುಮಕ್ಕಳು ಜನಿಸಿದ್ದವು. ಮೂರನೆ ಹೆಂಡತಿಯ ಮೊದಲ ಮಗನೇ ದೊಡ್ಡೇಗೌಡ. ಒಟ್ಟೂ ಇಪ್ಪತ್ತೊಂದು ಮಕ್ಕಳ ತಂದೆ ಎನಿಸಿಕೊಂಡ, ಚೆಲುವೇಗೌಡ ಹೇಳಿಕೊಳ್ಳುವಷ್ಟೂ ಆಗರ್ಭನೇನೂ ಅಲ್ಲ. ಒಟ್ಟು ೫೦ಎಕರೆಯಷ್ಟೂ ಜಮೀನಿದ್ದರೂ, ಅದರ ಬಗ್ಗೆ ಅವರೆಂದು ತಲೆ ಹಾಕಲಿಲ್ಲ. ಊರು ಸುತ್ತುವುದು, ದನಗಳ ಸಂತೆ, ಜಾತ್ರೆ, ಇವುಗಳಲ್ಲಿಯೇ ಅವರ ಜೀವನ ಮುಗಿದಿತ್ತು. ಮನೆಯಲ್ಲಿ ಅದು ಬಡತನವೋ ಅಥವಾ ಜೀವನವೇ ಅದೋ ಎಂಬುದರ ಗೋಜಿಗೆ ಹೋಗಲಿಲ್ಲ. ಹೆಣ್ಣು ಮಕ್ಕಳೆಲ್ಲಾ ಬಹುಬೇಗ ಮದುವೆಯಾದರು, ಗಂಡು ಮಕ್ಕಳು ಭೂತಾಯಿಯನ್ನು ನಂಬಿ ಗೇಯ್ಯಲು ನಿಂತರು. ದೊಡ್ಡೇಗೌಡರಿಗೆ ಚಿಕ್ಕಂದಿನಿಂದಲೂ ಸಂಸಾರ ತಾಪತ್ರಯಗಳ ಬಗ್ಗೆ ಅಷ್ಟು ಆಸಕ್ತಿಯಿರಲಿಲ್ಲ. ಅವರಿಗೆ ಅಪ್ಪನಂತೆಯೇ ಊರು ಸುತ್ತಾಡುವುದು ಮೈಗೂಡಿದಂತಿತ್ತು. ಚಿಕ್ಕವರಿರುವಾಗ,ಕೋಳಿ ಕೂಗುವ ಮುನ್ನ ಮನೆ ಬಿಟ್ಟರೇ, ಮರಳಿ ಮನೆ ಸೇರುತಿದ್ದದ್ದು, ಸೂರ್ಯ ಮುಳುಗಿದ ಮೇಲೆ. ಭಯವೆಂಬುದು ಅವರ ಜನ್ಮಕ್ಕೆ ಒಗ್ಗಿರಲಿಲ್ಲ.

ಊರಿನ ಸುತ್ತಾ ಮುತ್ತಾ ಇಂದಿನಂತಿರಲಿಲ್ಲ, ಇಡೀ ಊರಿನಲ್ಲಿದ್ದದ್ದು, ೧೨ ಮನೆಗಳು ಮಾತ್ರ. ಆದರೂ ಜನಸಂಖ್ಯೆ ಮೂನ್ನೂರರಷ್ಟಿತ್ತು. ಒಂದೊಂದು ಮನೆಯಲ್ಲಿಯೂ, ಸರಾಸರಿ ಮೂವತ್ತು ಜನರಿದ್ದರು. ಊರೆಂಬುದು ಕಾಡಿನಿಂದ ಹೊರತಾಗಿರಲಿಲ್ಲ. ಊರು ಕಾಡು ಒಂದೆ ಎನ್ನುವುದಕ್ಕಿಂತ ಕಾಡಿನೊಳಗೆ ಮನೆಗಳಿದ್ದವು. ಮನೆಯ ಹಿಂದಿನ ಹಿತ್ತಲಿನಲ್ಲಿ ರಾತ್ರಿಯಲ್ಲಿ ಕಾಡು ಹಂದಿಗಳು ನುಗ್ಗುತ್ತಿದ್ದವು. ಕಾಡಿನಲ್ಲಿ, ಅನೇಕ ಕಾಡುಮೃಗಗಳಿರುತ್ತಿದ್ದವು. ಅಂದೂ ಇವುಗಳನ್ನು ಪ್ರಾಣಿಗಳು ಎನ್ನುತ್ತಿದ್ದರೂ, ಕಾಲ ಬದಲಾದಂತೆ ಮೃಗಗಳೆಂದು ಕರೆಯಲಾದವು. ಪ್ರಾಣಿಸಂಗ್ರಹಾಲಯವೆನ್ನುವ ಪದ ಕೊಡುವ ಮುದವನ್ನು ಮೃಗಾಲಯವೆನ್ನುವ ಪದ ಕೊಡಲಾರದು. ಕರಡಿ, ಚಿರತೆ, ಜಿಂಕೆ, ಆನೆ, ಹೀಗೆ ಹತ್ತು ಹಲವು ಪ್ರಾಣಿಗಳು ಆ ಕಾಡಿನಲ್ಲಿದ್ದವು. ಬೇಟೆಯೆಂದರೇ, ಮಲೆನಾಡಿನಂತೆ ಕೋವಿ ಹಿಡಿದು ಹೋಗುತ್ತಿರಲಿಲ್ಲ. ಬಲೆ ಹಾಕಿ, ಮೊಲ, ಜಿಂಕೆ, ಸಾರಗ ಹಿಡಿಯುವುದು, ಭರ್ಜಿ, ಈಟಿಯಿಂದ ಕೊಲ್ಲುವುದು. ಜೇನು ಬಸಿಯುವುದು ಸಾಮಾನ್ಯದವುಗಳು. ಅಷ್ಟೆಲ್ಲಾ ಪ್ರಾಣಿಗಳಿದ್ದು, ಅವುಗಳ ಹಾವಳಿ ತಿಳಿದಿದ್ದರೂ ಆ ಊರಿನಲ್ಲಿ ಒಂದೇ ಒಂದು ಕೆಟ್ಟ ಸಂಗತಿಗಳು ನಡೆಯುತ್ತಿರಲಿಲ್ಲ. ಅದಕ್ಕೆ ದೊಡ್ಡೇಗೌಡರ ಉತ್ತರವೇ ಬೇರೆ, ಆ ದಿನಗಳಲ್ಲಿ ಕಾಡು ಪ್ರಾಣಿಗಳಿಗೆ ಸಿಕ್ಕಿ ಸತ್ತವರ ಸುದ್ದಿಗಳು ಬಹಳ ಕಡಿಮೆಯಿರುತ್ತಿದ್ದವು, ಯಾಕೆಂದರೇ, ಅಂದು ಇಂದಿನಂತೆ ಅವುಗಳಿಗೆ ಮನುಷ್ಯನನ್ನು ತಿನ್ನಲೇಬೇಕೆಂಬ ದುರ್ದು ಇರಲಿಲ್ಲ. ಅಲ್ಲಿಯೇ ಸಾಕಷ್ಟು ಆಹಾರ ಸಿಗುತ್ತಿತ್ತು. ಇಲ್ಲದಿದ್ದರೇ, ಕಾಡಿನಲ್ಲಿ ಶತಮಾನಗಳಿಂದಲೂ ಮನುಷ್ಯರು ಬದುಕಲೂ ಬಂದೀತೆ? ನಾಗರಹೊಳೆ, ಬಂಡಿಪುರದಲ್ಲಿ ಇಂದಿಗೂ ಕಾಡು ಜನರು ಇದ್ದಾರೆಂದು ಹೇಳುತ್ತಾರೆ. ನಮ್ಮ ಹಾಸನ ಜಿಲ್ಲಾ ಗಡಿಯಲ್ಲಿನಲ್ಲಿದ್ದ ಮಲೆಕುಡಿ ಜನಾಂಗ ಈಗ ನಶಿಸಿಹೋಗಿದೆ. ಪ್ರಾಣಿ ಮತ್ತು ಮನುಷ್ಯರಿಬ್ಬರೂ ಸಮಾನರೆಂಬುದನ್ನು ಅವುಗಳು ಅರಿತಿದ್ದವು. ಇಲ್ಲದಿದ್ದರೇ, ದೇವರ ವಾಹನಗಳಾಗಿ ಪ್ರಾಣಿಗಳು ಬರುತ್ತಿದ್ದವೆ? ಚಾಮುಂಡೇಶ್ವರಿಯ ವಾಹನವಾಗಿ ಹುಲಿಯೇ ಬರಬೇಕೆಂದರೇ? ಇವೆಲ್ಲಾ ಆ ದೈವ ನಿಯಮ.

ಹೀಗೆ ಗೌಡರ ಮನಸ್ಸು ವಿಕಾಸನಗೊಳ್ಳುವುದಕ್ಕೆ ಪರಿಸರದೊಂದಿಗಿನ ಅವರ ನಿಕಟ ಸಂಬಂಧವೇ ಕಾರಣವೆಂದರೂ, ಗೌಡರು ಮಾತ್ರ ನಾನು ಏನನ್ನೋ ಹುಡುಕುತ್ತಾ ಹೋದೆ ಅದು ಸಿಗಲೇ ಇಲ್ಲವೆನ್ನುತ್ತಾರೆ. ಅವರು ಮುಂಜಾನೆ ಮುಸುಕಿನಲ್ಲೇ ಎದ್ದು ಹೊರಡುತಿದ್ದರು. ಹಳ್ಳಿ ಮುಸುಕಿಗೆ ಎದ್ದು, ಗಂಡಸರು ದನಗಳನ್ನು ಹಟ್ಟಿಯಿಂದ ಹೊರಕ್ಕೆ ಕಟ್ಟಿಹಾಕಿ, ಎತ್ತುಗಳನ್ನು ಉಳುವುದಕ್ಕೆಂದು ಹೊಲಗಳಿಗೆ ಹೋಗುತ್ತಿದ್ದರು. ಮನೆಯಲ್ಲಿನ ಹೆಂಗಸರು ಎದ್ದು ಕೊಟ್ಟಿಗೆಗಳಿಗೆ ಹೋಗಿ ಹಾಲು ಕರೆದು ಬಂದು, ಕೊಟ್ಟಿಗೆ ಶುಚಿಮಾಡಿದ ನಂತರ ಮನೆ ಮುಂದಿನ ಬೀದಿಯನ್ನು ಗುಡಿಸಿ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ತಿಪ್ಪೆಗೆ ಹಾಕಿ ಬರುತ್ತಿದ್ದರು. ಆಗ, ಹಾಲು ಮಾರುವುದಾಗಲೀ, ಕೊಳ್ಳುವುದಾಗಲೀ ಇರಲೇ ಇಲ್ಲ. ಎಷ್ಟು ಕರೆಯುವ ಹಸು ಎಮ್ಮೆಗಳು ಇದ್ದರೂ ಅವುಗಳು ಮನೆಯಲ್ಲಿರುವು ಮಕ್ಕಳ ಬಾಣಂತದಲ್ಲಿಯೇ ಮುಗಿಯುತ್ತಿದ್ದವು.

ದೊಡ್ಡೆಗೌಡರೂ, ಹುಡುಗನಾಗಿದ್ದಾಗ, ಮುಸುಕಿಗೆ ಎದ್ದು, ನಿನ್ನೆ ರಾತ್ರಿ ಬಿಟ್ಟಿದ್ದ ಬಲೆಯಲ್ಲಿ ಮೀನು ಹೆಚ್ಚಾಗಿ ಬಿದ್ದಿದ್ದರೇ, ಅವುಗಳನ್ನು ಅಲ್ಲೇ ಹತ್ತಿರದ ಅವರ ಮೆಣಸಿನ ಹೊಲದಲ್ಲಿ ಹಾಕಿ ಒಂದೆರಡನ್ನು ತನ್ನೊಂದಿಗೆ ತೆಗೆದುಕೊಂಡು ಅವಗಳ ಸಿಪ್ಪೆ ಎರೆದು ಕಾಡಿನೊಳಗಿನಿಂದ ಬೆಟ್ಟ ಹತ್ತುತ್ತಿದ್ದರು.ಅಲ್ಲಿ ಬೆಂಕಿ ಹಚ್ಚಿ ಮೀನುಗಳನ್ನು ಸುಟ್ಟು ತಿಂದು ಬಲೆ ಬೀಸಿದ ಜಾಗದಲ್ಲಿ, ಮೊಲ ಸಿಕ್ಕರೇ ಹಿಡಿದು ತಿಂದು, ಕಾಡು ಇಲಿಗಳನ್ನು ಹಿಡಿಯಲು ನೋಡುತಿದ್ದರು. ಕೆಲವೊಮ್ಮೆ ಕಡ್ಡಿ ಜೇನು, ಸಿಗುತ್ತಿತ್ತು. ಹೆಜ್ಜೇನು ಕಸಿಯಲು ಪ್ರಯತ್ನಿಸಿದ್ದರೂ, ಅದು ಅವರಿಂದ ಆಗುವುದಿಲ್ಲವೆಂದು ಸುಮ್ಮನಿರುತ್ತಿದ್ದರು. ಆದರೇ, ಅವರಿಗೆ ಸುಮಾರು, ೯ ವರ್ಷದವರಿರುವಾಗಲೇ ಆಗಿನ್ನು ಕಂಬಳಿಯ ನದಿಗೆ ಕಟ್ಟೆ ಕಟ್ಟಿರಲಿಲ್ಲ. ನದಿಯಲ್ಲಿ ದೊಡ್ಡ ಬಾಳೆ ಮೀನು ಸುಮಾರು ೬ಕೆ.ಜಿ. ಬರುತಿತ್ತು ಅಂಥಹದ್ದನ್ನು ಒಂದು ಸಣ್ಣ ಬಲೆಯಿಂದ ಹಿಡಿದು ತಂದಿದ್ದರು. ಅದನ್ನು ನೋಡಿದ ಊರಿನ ಜನ ಅವರನ್ನು ಅನುಮಾನದಿಂದ ಗೌರವ ಕೌತುಕಗಳಿಂದ ಕಾಣತೊಡಗಿದರು. ಇಂಥಹ ನೂರಾರು ಸಾವಿರಾರು ಕಥಗಳು ದೊಡ್ಡೆಗೌಡರ ಬಾಲ್ಯದಲ್ಲಿ ನಡೆದಿವೆ. ಹತ್ತರ ವಯಸ್ಸಿನಲ್ಲಿಯೇ ಅವರು ಮುನ್ನೂರು ಅಡಿ ಎತ್ತರದ ಮರಗಳನ್ನು ಏರುತ್ತಿದ್ದರು. ಜೇನು ಕಸಿಯುವುದು ಅವರಿಗೆ ಕಲೆಯಾಗಿ ಬೆಳೆದಿತ್ತು. ಒಂದೇ ಒಂದು ಜೇನ್ನೊಣವೂ ಕಚ್ಚಿಲ್ಲ.ಆಷಾಡದಲ್ಲಿ ನದಿ ತುಂಬಿ ಹರಿಯುತ್ತಿದ್ದರೂ ಲೆಕ್ಕಿಸದೇ ಈ ದಡದಿಂದ ಆ ದಡಕ್ಕೇ ಈಜುತಿದ್ದರು. ಅವರ ಲೆಕ್ಕಾಚಾರಗಳು ಕೈಕೊಟ್ಟ ಸನ್ನಿವೇಶಗಳು ಬಹಳ ಕಡಿಮೆಯಾಗಿತ್ತು. ನಿಸರ್ಗದ ವಿಚಾರದಲ್ಲಿ, ನದಿಯಲ್ಲಿನ ಮೀನುಗಳ ವಿಷಯದಲ್ಲಿ, ಕಾಡಿನ ಮರಗಿಡಗಳ, ಪ್ರಾಣಿಗಳ ವಿಷಯದಲ್ಲಿ ಅದೊಂದು ಭಂಡಾರವಾಗಿಯೇ ಬೆಳೆಯಿತು.

ಅವರು ಬೆಟ್ಟದ ಮೇಲಿದ್ದ ಬಸವಣ್ಣನನ್ನು ವಹಿಸಿಕೊಂಡಿರುವುದರಿಂದ ಇದು ಸಾಧ್ಯವೆಂಬುದು ಹಲವರ ಅಭಿಪ್ರಾಯ. ಅವರು ಹಗಲಿರುಳೆನ್ನದೇ ಕಾಡಿನಲ್ಲಿ ಅಲೆದಾಡಿದ್ದರಿಂದ ಅಲ್ಲಿನ ಭೂತವೋ, ಕಾಳಿಯೋ ಅವರ ಮೈಯಲ್ಲಿ ಆಡುತ್ತದೆಂದು ಚಿಕ್ಕಂದಿನಲ್ಲಿ, ಅವರನ್ನು ಹತ್ತಿರದ ಊರುಗಳ ಮಂತ್ರವಾದಿಗಳಿಗೆ ಕರೆದೊಯ್ದಿದ್ದರು. ತಡೆ ಹೊಡೆಸುವುದು ನವಗ್ರಹ ಶಾಂತಿ ಮಾಡಿಸುವುದು ನಡೆಯಿತು. ಮನೆದೇವರಿಗೆ ಹೋಗಿ ಮುಡಿಕೊಟ್ಟು ಬಂದರು. ಕಟ್ಟ ಕಡೆಗೆ ಇವರ ಬಗ್ಗೆ ಆಸೆಯನ್ನು ತೊರೆದರು. ಇರುವ ಇಪ್ಪತೊಂದು ಮಕ್ಕಳಲ್ಲಿ ಇವರನ್ನೇ ಪೂರ್ಣಮಟ್ಟದಲ್ಲಿ ಕಾಣಲೂ ಬಂದೀತೆ? ದೊಡ್ಡೇಗೌಡರು ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ಮನೆ ತೊರೆದು ಹೊರಟರು. ಎಲ್ಲಿ ಹೋದರು ಎಲ್ಲಿ ಇದ್ದರೆಂಬುದರ ಸುಳಿವೇ ಇರಲಿಲ್ಲ. ಅವರು ಮರಳಿ ಬಂದದ್ದು ಅವರ ಇಪ್ಪತ್ತೆರಡೇನೇ ವಯಸ್ಸಿನಲ್ಲಿ. ಅಂದರೇ ಒಂಬತ್ತು ವರ್ಷಗಳು ಅವರು ಅನೇಕಾ ಊರುಗಳನ್ನು ಸುತ್ತಾಡಿ ಬಂದಿದ್ದರು. ಆ ಸಮಯಕ್ಕೆ ಸರಿಯಾಗಿ ಅವರ ನೆಚ್ಚಿನ ತಾಣಗಳಾದ ಅವರೂರಿನ ನದಿ, ಬೆಟ್ಟ, ಕಾಡು ಪರಿಸರ ಎಲ್ಲವೂ ಬದಲಾಗತೊಡಗಿತ್ತು. ಮನೆಯಲ್ಲಿನ ಎಲ್ಲ ಅಣ್ಣ ತಮ್ಮಂದಿರೂ ಮದುವೆಯಾಗಿ ಅಪ್ಪ ತೀರಿದ ನಂತರ ಬೇರೆ ಬೇರೆಯಾಗಿ ಸಂಸಾರ ನಡೆಸುತಿದ್ದರು. ಕಂಬಳ ನದಿಗೆ ಕಟ್ಟೆ ಕಟ್ಟಿ ಮುಂದಿನ ಹಲವಾರು ಊರುಗಳಿಗೆ ನೀರೊದಗಿಸುವ ಯೋಜನೆ ನಡೆಯುತ್ತಿತ್ತು. ಮೊದಲು ಹರಿಯುತ್ತಿದ್ದ ನದಿಯನ್ನು ಕೆಲಸದ ಸಲುವಾಗಿ ಬೇರೊಂದು ಮಾರ್ಗ ಬದಲಾಯಿಸಿದ್ದರು. ಮನುಷ್ಯನ ದುರಾಸೆಯ ಚಿತ್ರಗಳು ಅಂದಿನಿಂದಲೇ ಅವರ ಕಣ್ಣಲ್ಲಿ ಕಾಣತೊಡಗಿದವು. ನೆಪ ಬರಿಯ ನದಿಯನ್ನು ಬದಲಾಯಿಸುವುದಾದರೂ ಅಲ್ಲಿನ ಮರಗಳನ್ನು ಕಡಿದು ಸಾಗಿಸುವುದು ಮೊದಲಾಯಿತು. ಬೆಲೆ ಬಾಳುವ ಮರಗಳೆಲ್ಲಾ ಹೋಗುವುದಲ್ಲದೇ, ಕೆಲಸಗಾರರಾಗಿ ಬಂದಿದ್ದ ಜನರು ರಾತ್ರಿಯಾಯಿತೆಂದರೇ ಕಾಡಿಗೆ ನುಗ್ಗಿ ಬೇಟೆಯೆಂಬ ಹೆಸರಲ್ಲಿ ಅಲ್ಲಿದ್ದ ಪ್ರಾಣಿಗಳನ್ನೆಲ್ಲಾ ಹೊಡೆದು ತಿಂದರು.

ಊರಿನಲ್ಲಿರಲು ಗೌಡರ ಮನಸ್ಸು ಯಾಕೋ ಒಗ್ಗುತ್ತಿರಲಿಲ್ಲ. ಅವರಿಗೆ ಏನೋ ಒಂದು ಕೊರತೆಯಿದೆ ಎನಿಸುತಿತ್ತು. ಇಡೀ ದೇಶವೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿತ್ತು. ಆದರೇ ಕಂಬಳಿ ಮಾತ್ರ ನಿದ್ದೆಯಿಂದ ಏಳಲೇ ಇಲ್ಲ. ಈ ಊರಿನ ಜನರು ಅಣೆಕಟ್ಟೆಯಿಂದ ಎಲ್ಲೆಲ್ಲಿ ಸಾಧ್ಯವೋ ಆ ಜಾಗವನ್ನೆಲ್ಲಾ ಸಮ ಮಾಡೀ ವ್ಯವಸಾಯಕ್ಕೆ ಅಣಿಮಾಡತೊಡಗಿದರು. ದೇಶಕ್ಕೇ ಸ್ವಾತಂತ್ರ್ಯ ಬಂತಂತೆ ಎಂದು ಒಮ್ಮೇ ಹೇಳಿದ್ದನ್ನು ಬಿಟ್ಟರೇ ಸ್ವಾತಂತ್ರ್ಯದ ಬಗ್ಗೆ ಇತ್ತೀಚಿನ ತನಕ ಊರಿನವರಿಗೆ ತಿಳಿದಿರಲಿಲ್ಲ. ಈಗಲೂ ಅಷ್ಟೇ ಸ್ವಾತಂತ್ರ್ಯ ದಿನವೆಂದರೇ, ಮಕ್ಕಳು ಸಾಲಾಗಿ ಊರು ಸುತ್ತಾ ಮೆರವಣಿಗೆ ಬರುತ್ತಾರೆ ಚಾಕೊಲೇಟ್ ಕೊಡುತ್ತಾರೆ. ಅದಕ್ಕಾಗಿ ಆಟವಾಡಿಸುತ್ತಾರೆ. ಮಕ್ಕಳಿಗೆ ಬಹುಮಾನವಾಗಿ ಶಾಲೆಗಳಲ್ಲಿ ಒಂದು ಲೋಟ, ಪ್ಲೇಟು, ಬಟ್ಟಲು ಇವುಗಳನ್ನು ಕೊಡುತ್ತಾರೆ. ಒಮ್ಮೆ ದೊಡ್ಡೇಗೌಡರು, ಮೇಷ್ಟ್ರೇ ಮಕ್ಕಳು ಗೆದ್ದದ್ದಕ್ಕೆ ಈ ಪಾತ್ರೆ ಪಗಡೆ ಕೊಡುತ್ತೀರಲ್ಲ ಯಾಕೆ ನಾಳೆಯಿಂದ ಅಡುಗೆ ಮಾಡಿಕೊಂಡಿರಿ ಶಾಲೆಗೆ ಬರಬೇಡಿ ಅಂತಲೋ ಎಂದರು. ಅದಕ್ಕೆ ಮೇಷ್ಟ್ರು ಇಲ್ಲ ಯೆಜಮಾನ್ರೇ ಮಕ್ಕಳಿಗೆ ಪೆನ್ನು, ಪೆನ್ಸಿಲ್ ಕೊಟ್ಟರೇ ಎರಡೇ ದಿನಕ್ಕೆ ಮುರಿದು ಹಾಳುಮಾಡುತ್ತಾರೆ, ಎಂದರು.ಗೌಡರು ಮೇಷ್ಟ್ರ ಜಾಣ್ಮೆಗೆ ತಲೆತೂಗಲೇ ಬೇಕಾಯಿತು. ಆ ಊರಿನಲ್ಲಿ ಸ್ವಾತಂತ್ರ್ಯದ ಬಗ್ಗೆಯಾಗಲೀ ದೇಶದ ಬಗ್ಗೆಯಾಗಲೀ, ಅಥವಾ ಇಂದಿನ ರಾಜಕಾರಣಿಗಳ ಬಗ್ಗೆಯಾಗಲೀ ಅಂಥಹ ಕುತೂಹಲ ಕೆರಳಿಸುವಂತದ್ದು ಏನು ಇಲ್ಲ. ಊರಿನ ಕೆಲವು ಮಂದಿ ಪುಡಾರಿಗಳಾಗಿ ಎರಡು ಮೂರು ಪಕ್ಷದ ಬಿತ್ತಿ ಚಿತ್ರಗಳನ್ನು ಹಾಕುತ್ತಾರೆ. ಚುನಾವಣ ಸಮಯದಲ್ಲಿ ಅವರ ಜೇಬಿಗೆ ದುಡ್ಡು ಬಿಟ್ಟುಕೊಂಡು ಜನರಿಗೆ ಮೂರು ದಿನ ಬಾಡೂಟ ಮಾಡಿಸಿ, ಲೋಕಲ್ ಸರಾಯಿ ಕುಡಿಸಿದರೇ ಮುಗಿಯಿತು. ಯಾರು ಗೆದ್ದರೂ ಸೋತರು ಅವರಿಗೆ ಚಿಂತೆಯಿಲ್ಲ.

ನಾನು ಕುಳಿತಿರುವಲ್ಲಿಗೆ, ಊರಿನ ಮಧ್ಯ ವಯಸ್ಸನ್ನು ದಾಟಿದ ಒಬ್ಬರು ಬಂದು ಅಯ್ಯಾ ಎಂದರು. ನಾನು ಅವರ ಮುಖವನ್ನೊಮ್ಮೆ ನೋಡಿದೆ, ನಿನ್ನೆ ಬೆಳ್ಳಿಗ್ಗೆ ಅಂಗಡಿಗೆ ಸಿಗೆರೇಟು ಕೊಳ್ಳಲು ಹೋದಾಗ ನೋಡಿದ ಮುಖವೆನಿಸಿತು. ತಾತ ಅವರ ಮುಖವನ್ನು ನೋಡಿ, ಏನೋ ಸುಬ್ಬನ ಸವಾರಿ ನಮ್ಮನೆ ತನಕ? ಎಂದರು. "ಅಯ್ಯಾ ನಮ್ಮನೆ ಬಿಳಿ ಹಸ ನಿಲ್ಲುತಾನೆ ಇಲ್ಲ, ಆಸ್ಪತ್ರೆಗೆ ಹೊಡ್ಕೊಂಡು ಹೋಗಿದ್ದೆ ಮೂರು ದಪಾ," ಅಂದರು? ನನಗೆ ಸ್ವಲ್ಪ ದಿಗಿಲಾಯಿತು, ಇವರು ಆಡುತ್ತಿರುವ ಭಾಷೆ ಯಾವುದು? ಆಸ್ಪತ್ರೆಗೆ ಹೊಡೆದುಕೊಂಡು ಹೋದ ಹಸು ನಿಲ್ಲುತ್ತಿಲ್ಲ ಅಂದರೇ!?. ನನ್ನ ಮುಖದಲ್ಲಿ ಮೂಡಿದ ಬದಲಾವಣೆಯನ್ನು ಗಮನಿಸಿ, ಇರು ಮಗಾ ಹೇಳ್ತಿನಿ ಅಂದರು. "ಸರಿ ಏನ್ ಮಾಡ್ಬೇಕೋ ಸುಬ್ಬಾ? ನಾಳೆ ಹೊತ್ತು ಮೂಡೋ ಹೊತ್ತಿಗೆ ಬಂದು ಹೋಗು" ಎಂದರು. ಅವನು, "ಅಯ್ಯಾ ಒಸಿ ನೆಸೆ", ಎಂದು ಹಳ್ಳು ಕಿರಿದ. ನೆಸೆ ಡಬ್ಬಿಯನ್ನು ಕುಟ್ಟಿ, ಬೆರಳಿನಿಂದ ತೆಗೆದು ಮೂಗಿನ ಒಳಕ್ಕೆ ಎರಡು ಬೆರಳನ್ನು ತೂರಿಸುವಂತೆ ಮಾಡಿದ. ಕ್ಷಣಾರ್ಧದಲ್ಲಿ, ದಬ ದಬನೇ ಸೀನತೊಡಗಿದ. ಬೀದಿಯಲ್ಲಿ ಆಡುತ್ತಿದ್ದ ಮಗು ಬೆಚ್ಚಿ ಬಿದ್ದಿತೇನೋ ಎಂದು ಮಗುವನ್ನು ನೋಡಿದೆ. ಯಾರೇ ಕೂಗಾಡಲೀ,ಊರೇ ಹೋರಾಡಲೀ ಎನ್ನುವಂತೆ ಅದರ ಪಾಡಿಗೆ ಅದು ಆಡುತ್ತಿತ್ತು. ನೆಸೆ ಸಿಕ್ಕಿದ ಮೇಲೆ, ಮಾತಿಗೆ ಸಿದ್ದನಾಗುವವನಂತೆ ಜಗ್ಗಲಿಯ ಮೇಲೆ ಆಸೀನನಾದ. ಅಯ್ಯಾ ಕುಳ್ಳಣ್ಣನ ಮಗ ಲಕ್ಸ್ಮಂಗೆ ಹೆಣ್ಣಿನ ಕಡೇರೋ ಬಂದಿದ್ರು, ಎಂದ. ಅದು ಒಂದು ಬಗೆಯ ಅಪಹಾಸ್ಯವೋ, ಅಥವಾ ಆಶ್ಚರ್ಯವೋ ತಿಳಿಯಲಿಲ್ಲ. ಬರಲೀ ಬಿಡೋ ಹುಡುಗ ಮದ್ವೆ ಆಗ್ಬಾರ್ದ?ಎಂದರು. ನೀವು ಸರಿ, ಆಗಲೀ ಬಿಡಿ, ಊರಿಗೆ ಮೂರು ಊಟ ಸಿಗ್ತದೆ, ಎಂದ. ಅವನು ನಮ್ಮ ನಾಗಣ್ಣನ ವಾರಿಗೆಯವನು, ನಾಗಣ್ಣನ ಹುಡುಗ ಹತ್ತನೇ ಕ್ಲಾಸು ಕಣಯ್ಯ, ಎಂದ. ನನಗೆ ಹೊಳೆಯಿತು, ಹುಡುಗನಿಗೆ ವಯಸ್ಸಾಗಿದೆ, ಹುಡುಗನೆನಿಸಿಕೊಳ್ಳುವ ವಯಸ್ಸು ದಾಟಿದೆ!. ಊರಿನ ಚರಂಡಿ ಕಾಮಗಾರಿಯಲ್ಲಿ ನಡೆದಿರುವ ಬಾರಿ ಹಗರಣದ ಬಗ್ಗೆ ಹೇಳಿ, ಅದೊಂದು ವಿರೋಧ ಪಕ್ಷದವರ ಕೈವಾಡದಿಂದಲೇ ಮಾಡಿರುವಂತಿದೆ. "ಚರಂಡಿ ಕೆಲಸಕ್ಕೆ ಹತ್ತು ಸಾವಿರ ಬಿಲ್ ಮಾಡವರೇ, ಆಗಿರೋದು ಬರೀ ಎರಡು ಸಾವರ ಅಷ್ಟೆಯಾ!" ಅಂದ. "ಹೋದ ಸತಿ, ನೋಡಿದ್ರ ಸ್ಕೂಲಿಗೆ ಕಾಪೌಂಡ್ ಕಟ್ಟ್ಸಕೆ ಅಂತಾ ೩೦ಸಾವರ ತಗೊಂಡ್ರು ಈ ವರ್ಸ ಬಿದ್ದೇ ಹೋಗಯ್ತೆ, ಎಲ್ಲನೂ ಹಿಂಗೆ ಇವರ್ದು, ಇವರು ಮಾತ್ರ ತಿಂದು ತೇಗಬೇಕು, ಬೇರೆಯವರು ತಿನ್ನೊಗಿಲ್ಲ, ನಮ್ಮ ವಠಾರದವಕ್ಕೆ ಅವೆಲ್ಲಾ ಅರ್ಥ ಆಗಕಿಲ್ಲ, ಅವರ ಮನೆ ತವೆ ಹೋಗಿ, ನಿಂತ್ಕತವೆ". ನನಗೆ ತಲಬುಡ ಅರ್ಥ ಆಗಲಿಲ್ಲ. ಗೌಡರು ನಿನಗೆ ಬೇಕಾ, ಆ ಗುತ್ತಿಗೆ ಕೆಲಸ? ಮಾಡಿಸ್ತೀಯಾ? ಎಂದದ್ದಕ್ಕೆ ನನ್ ಕೈಯ್ಯಲ್ಲಿ ಆಗುತ್ತಾ ಎಂದ. ಸರಿ ನಡಿ ಊರ ಉಸಾಬರಿ ಯಾಕೆ ನಿಂಗೆ ಎಂದರು.

ನಾಲ್ಕ ಗಂಟೆ ಸಮಯಕ್ಕೆ, ಗೌಡರು ನನ್ನನ್ನು ಕರೆದುಕೊಂಡು, ಹೊರಟರು. ಬಾ ಇಲ್ಲೇ ಬರೋಣ ಅಂತಾ. ನದಿ ದಂಡೆಯಿಂದ ಹೊರಟು, ಅವರ ಬಾಲ್ಯದಿಂದ ಇಲ್ಲಿನ ತನಕ ಆದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಹೇಳಿದರು.ನಾನು ಕುತೂಹಲಕ್ಕಾಗಿ ಸುಬ್ಬಣ್ಣ ಹೇಳಿದ್ದನ್ನು ಕೇಳಿದೆ. ಊರಿನಲ್ಲಿ, ಬಹುಸಂಖ್ಯೆಯಲ್ಲಿ, ಒಕ್ಕಲಿಗರೇ ಇದ್ದರೂ, ಅವರಲ್ಲಿ ಎರಡು ಪಂಗಡಗಳಿವೆ, ಈ ಒಳಜಗಳ, ಆ ಎರಡು ಪಂಗಡಗಳ ನಡುವೆ. ಅನ್ಯೋನ್ಯತೆ ಎಣಿಸಿದರೂ, ಈ ಶೀತಲ ಸಮರವನ್ನು ಊರಿನ ಪ್ರಮುಖರು, ಉಪಯೋಗಿಸಿಕೊಂಡು ಅದನ್ನು ಆರದಂತೆ, ಬಳಸಿಕೊಳ್ಳುತ್ತಾರೆ. ಸ್ವಲ್ಪ ದೂರದ ನಂತರ, ಅಲ್ಲೇ ನಿಲ್ಲುವಂತೆ ಹೋಗಿ, ಒಂದು ಹಂಬನ್ನು ಕಿತ್ತು ತಂದರು, ಜೊತೆಗೆ ಒಂದೆರಡು ಗಿಡಗಳನ್ನು ತಂದರು. ನಾನು ಅದನ್ನು ನೋಡಿ, ಓ, ಈ ಹಂಬು ಔಷಧೀಗಾ ಎಂದೆ? ಗೌಡರು, ನಿನಗೆ ಗೊತ್ತಾ ಎಂದರು. ನನ್ನ ಓದಿನ ಬಗ್ಗೆ ಸ್ವಲ್ಪ ಹೇಳಿದೆ, ಈ ಗಿಡಗಳು ಅದರ ಮದ್ದು ಅದು ಇದು ಅಂತಾ ನನ್ನ ಬುದ್ದಿವಂತಿಕೆ ತೋರಿಸತೊಡಗಿದೆ. ಗೌಡರಿಗೆ ನನ್ನ ಮೇಲೆ ಇದ್ದಕ್ಕಿದ್ದ ಹಾಗೆ ಒಂದು ಬಗೆಯ ಹೆಮ್ಮೆ ಬಂದಂತನಿಸಿತು. ನಾನು ಹೇಳಿದೆ, ತಾತ, ನಿಜ ಹೇಳಬೇಕೆಂದರೆ, ಇವೆಲ್ಲಾ ಕಾಲೇಜಿನಲ್ಲಿ ಕಲಿಯಲೇ ಬೇಕು ಎನಿಸೋದಿಲ್ಲ ಎಂದೆ. ನೀನು ಹೇಳೋದು ಒಂದು ಲೆಕ್ಕದಲ್ಲಿ ಸರಿನೇ, ಎಂದರು. ಮನುಷ್ಯ ಪ್ರಕೃತಿಯ ವಿರುದ್ದ ನಡೆದರೆ ಅದು ಸಾಹಸ ಅಂದುಕೊಳ್ಳುತ್ತಾನೆ. ನದಿ ಹರಿಯೋದರ ವಿರುದ್ದ ಈಜುವುದು, ದೊಡ್ದ ಬಂಡೆಗಳನ್ನ ಏರುವುದು, ಹೀಗೆ ಅವೆಲ್ಲವೂ ಚೆಂದವೇ ಸರಿ. ಆದರೇ ನಿಸರ್ಗದ ನಿಯಮದ ವಿರುದ್ದ ಹೋಗುವುದು ಎಷ್ಟು ಸರಿ? ನನಗೆ ಅರ್ಥವಾಗಲಿಲ್ಲವೆಂಬುದು ಅವರಿಗೆ ತಿಳಿಯಿತು. ಈಗ, ಈ ಗಿಡದಿಂದ ಉಪಯೋಗವೇನು? ಗೊತ್ತಾ? ಇಲ್ಲವೆಂದು ತಲೆಯಾಡಿಸಿದೆ.

ಆಗಲೇ ಸುಬ್ಬಣ್ಣ ಬಂದಿದ್ದನಲ್ಲ, ಅವನ ಹಸುವಿಗೆ, ಸೂಜಿ ಚುಚ್ಚಿಸಿದರೂ ಕೂಡ, ಗರ್ಭ ನಿಲ್ಲುತ್ತಿಲ್ಲವಂತೆ. ಇವರುಗಳು ಎಲ್ಲವನ್ನು ಯಾಂತ್ರಿಕತೆಯಿಂದ ನೋಡುತ್ತಾರೆ. ಇಲ್ಲ, ಆರ್ಥಿಕತೆಯಿಂದ ನೋಡುತ್ತಾರೆ. ಪ್ರಾಣಿಗಳು ನಮ್ಮಂತೆಯೇ ಬದುಕುವ ಜೀವಿಗಳೆಂದು ತಿಳಿಯುವುದಿಲ್ಲ ಇವರಿಗೆ. ಅವುಗಳಿಗೂ, ದೈಹಿಕ ಆಸೆ ಇರುತ್ತದೆನಿಸುವುದಿಲ್ಲವಾ? ಈ ಪ್ರಶ್ನೆಗಳು ನನ್ನ ವಯಸ್ಸಿನ ಮಿತಿಗೆ ಮೀರಿದ್ದು ಎಣಿಸಿ ಅಲ್ಲಿಗೆ ತಡೆದರು. ನಾನು ಅವರನ್ನು ಮುಂದುವರೆಸಿ ಎನ್ನಲಿಲ್ಲ. ಆದರೂ, ಅವರ ಭಾವುಕತೆ ನನ್ನನ್ನು ತಲ್ಲಣಗೊಳಿಸಿತ್ತು. ಆಧುಣಿಕರಣದಿಂದಾಗಿ ನಾವು ಪ್ರಾಣಿಗಳ ನೈಸರ್ಗಿಕವಾದ ಬಹುಮುಖ್ಯವಾದ ಬೇಡಿಕೆಯನ್ನು ನಾಶಗೊಳಿಸಿದ್ದೇವೆ. ನಾನು ಚಿಕ್ಕವನಿದ್ದಾಗ, ಆದ್ರಾ ಮಳೆಯಲ್ಲಿ ಬೀದಿನಾಯಿಗಳು ಮೈಮರೆತು ಅಂಟಿಕೊಂಡಿರುವುದನ್ನು ಕಂಡು ಥೂ, ಚೀ ಎಂದು ಮುಖ ತಿರುಗಿಸಿಕೊಂಡು ಹೋಗುತಿದ್ದೆ. ಆದರೇ, ಅವೆಲ್ಲವೂ, ಮನುಷ್ಯನಂತೆಯೇ, ದೈಹಿಕ ಕಾಮನೆಗಳು ಎಣಿಸಿರಲಿಲ್ಲ. ತಾತನ ಮನಸ್ಸಿನಲ್ಲಿರುವ ವಿಚಾರಗಳು, ನನ್ನ ಬುದ್ದಿವಂತಿಕೆಯಿಂದ ಅರಿಯಲು ಸಾಧ್ಯವೇ ಇಲ್ಲವೆಂದು ತೀರ್ಮಾನಿಸಿದೆ.

ದೇಶ ಸುತ್ತಿನೋಡು, ಕೋಶ ಓದಿ ನೋಡು, ಅಂತಾ ಗಾದೆ ಇದೆಯಲ್ಲ. ಹಾಗೆ ಅದು ಒಂದರಿಂದ ಏನೂ ಬರಲ್ಲ, ಓದಲೂ ಬೇಕು, ನೋಡಲೂ ಬೇಕು. ಮೊದಲರ್ಧದಲ್ಲಿ ಗೌಡರು ಊರೂರು ಸುತ್ತಾಡಿದರು. ನಂತರ ಮನೆಯಲ್ಲಿ ಅವರ ಮಕ್ಕಳು, ಮೊಮ್ಮಕ್ಕಲು ಓದುವ ಎಲ್ಲ ತರಹದ ಪುಸ್ತಕಗಳನ್ನು ಓದಿದರು. ಈ ಮುದಕನಿಗೆ ನೋಡು ಈ ವಯಸ್ಸಿನಲ್ಲಿ ಓದುವ ಚಪಲ ಎಂದು ಜನ ರೇಗಿಸಿದರು. ಅವರಿಗೆ ಹತ್ತು ಭಾಷೆ ತಿಳಿಯುತ್ತಿತ್ತು. ಕನ್ನಡ, ಹಿಂದಿ, ಮಲಯಾಲಂ, ತೆಲುಗು, ತಮಿಳು, ತುಳು, ಕೊಡವ, ಅರೆ-ಭಾಷೆ ಕನ್ನಡ, ಹವ್ಯಕ ಕನ್ನಡ, ಇಂಗ್ಲೀಷ್ ಬರುತ್ತಿದ್ದವು. ಅವರು ಕೊಡಗಿನ ಕಾಫಿ ತೋಟದಲ್ಲಿ ಹತ್ತಾರು ವರ್ಷವಿದ್ದರು. ಇಂದಿಗೂ ವಿರಾಜಪೇಟೆ, ಗೋಣಿಕೊಪ್ಪಲಿನಲ್ಲಿ ಕೆಲವು ಎಸ್ಟೇಟ್ ಮಾಲಿಕರು ಇವರನ್ನು ನೆನೆಯುತ್ತಾರೆ. ಕೇರಳದ ಕಣ್ಣೂರಿನ ಟೀ ತೋಟದಲ್ಲಿ ಕೆಲಸಮಾಡಿದ್ದಾರೆ. ತೀರ್ಥಹಳ್ಳಿಯಲ್ಲಿದ್ದಾಗ ಹವ್ಯಕ ತಿಳಿದಿತ್ತು. ಹೀಗೆ ಅವರಿಗೆ ಭಾಷೆ ಬರುತ್ತಿದ್ದರಿಂದ ಅವರು ದಕ್ಷಿಣ ಭಾರತವನ್ನೂ ಸಂಪೂರ್ಣ ಅಲೆದಾಡಿದ್ದಾರೆ. ಅಲ್ಲಿನ ಜನರನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ಅಲ್ಲಿನ ಜನರ ಜೀವನದಲ್ಲಿ ಆದ ಬದಲಾವಣೆಗಳನ್ನು ನೇರವಾಗಿ ಕೆಲವೂಮ್ಮೆ ವಾರ್ತೆಗಳಿಂದ, ದಿನಪತ್ರಿಕೆಗಳಿಂದ ನೋಡಿದ್ದಾರೆ. ಅವರು, ಪಶ್ಚಿಮ ಘಟ್ಟಗಳು ಕರಗಿ ಬರಡಾದದ್ದನ್ನು ಕಂಡಿದ್ದಾರೆ. ಅವರ ವರ್ಣನೆ ನಮ್ಮ ವಿಜ್ನಾನಕ್ಕೆ ನಿಲುಕುವಂತಿಲ್ಲ ಎನಿಸಿತು. ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿನ ವಿಶೇಷತೆಗಳನ್ನು ಬಣ್ಣಿಸುತ್ತಾರೆ. ವನ್ಯಮೃಗಗಳನ್ನು ಹತ್ತಿರದಿಂದ ನೋಡಿದ್ದಾರೆ. ಕಾಡು ಜನರ ಜೊತೆ ಓಡಾಡಿದ್ದಾರೆ. ಚಾರ್ಮಾಡಿ, ಶಿರಡಿ, ತಡಿಯೆಂಡ್ ಮೋಲ್, ಪುಷ್ಪಗಿರಿ, ಬ್ರಹ್ಮಗಿರಿ, ವಯನಾಡ್, ಮದುಮಲೈ, ನಾಗರಹೊಳೆ, ಬಂಡಿಪುರ, ಬಿಳಿಗಿರಿ, ಮಹದೇಶ್ವರ ಬೆಟ್ಟ, ಸತ್ತಿ, ಎಲ್ಲವನ್ನು ಬರೀ ಗಾಲಲ್ಲಿ ನಡೆದು ಬಂದಿದ್ದಾರೆ. ಇದೊಂದು ಪವಾಡವೇ ಸರಿಯೆಂದು ನಮಗನಿಸಿದ್ದರೂ ಅವರಿಗೆ ಅದರಲ್ಲಿ ಹೆಚ್ಚಿನದೇನೂ ಅನಿಸುವುದಿಲ್ಲ. ಅವರು ಓದಿರುವುದು ಅಷ್ಟೇ, ಮಾರ್ಕ್ಸ್, ಡಾರ್ವಿನ್,ಲೆನಿನ್,ಟಾಗೋರ್,ಟಾಲ್ಸ್ ಟಾಯ್, ಜಿಡ್ಡೂ ಕೃಷ್ಣಮೂರ್ತಿ, ಹೀಗೆ ಎಲ್ಲರನ್ನೂ ಓದಿದ್ದಾರೆ ಅವರ ಬಗ್ಗೆ ಅವರಲ್ಲಿರುವ ವಿಶ್ಲೇಶಣೆಗಳು ನನಗೆ ಬಹಳ ಮೆಚ್ಚುಗೆಯಾದವು.

"ತಾತ ನಿಮಗೆ ಬರವಣಿಗೆ ಬರುತ್ತದೆ, ನೀವು ನಿಮ್ಮ ವಿಚಾರಗಳನ್ನೆಲ್ಲಾ ಯಾಕೆ ಬರೆಯಬಾರದಿತ್ತು? ನಿಮ್ಮ ಅನುಭವಗಳು ಈ ಮಾಹಿತಿ ಎಷ್ಟು ಅನುಕೂಲ ಆಗುತ್ತೆ ನಮ್ಮ ಜನಕ್ಕೆ" ಎಂದೆ. ಯಾವ ಜನರ ಬಗ್ಗೆ ಹೇಳ್ತಾಯಿದ್ದೀಯಾ ನೀನು? ನಮ್ಮ ಜನ ಅನ್ನಿಸಿಕೊಳ್ಳೋ ಇವರು ಹುಟ್ಟು ಸೋಮಾರಿಗಳು, ನಾನು ಬರೆದರೂ ಅದನ್ನ ಓದುವುದಿಲ್ಲ, ಏನು ಬರೆದವರೆ ಅಂತಾ ಹಾಗೆ ಹೇಳು ಅದನ್ನೇಲ್ಲಾ ಓದೋಕೆ ಸಮಯ ಇಲ್ಲ ಅಂತಾರೆ. ನೀನು ಹೇಳಿದ್ದಕ್ಕೆ, ಹೇಳ್ತಿನಿ ಕೇಳು. ನೀನು ಗಿಡಗಳ ಬಗ್ಗೆ, ಔಷಧಿಗಳ ಬಗ್ಗೆ ತಿಳ್ಕೊಳ್ಳೋಕೆ ಅಂತಾ ಊರೂರು ಅಲೆದಿದ್ದಿಯಾ, ನಮ್ಮೂರಿನಲ್ಲಿರುವ ಒಬ್ಬನೇ ಒಬ್ಬ ಇದರ ಬಗ್ಗೆ ತಿಳ್ಕೊಬೇಕು ಅಂತಾ ನನ್ನ ಹತ್ತಿರ ಕೇಳಿಲ್ಲ.ಈ ಸುಬ್ಬಣ್ಣನೇ ನೋಡು, ಇಲ್ಲದೇ ಇರೋ ರಾಜಕೀಯ ಮಾತಾಡಿ ಹೋದ, ಆ ಔಷಧಿ ಗಿಡ ನನಗೂ ತೋರಿಸಿ ಅಂತಾ ಕೇಳಲಿಲ್ಲ. ಎಲ್ಲರಿಗೂ ಸಿದ್ದವಾಗಿರೋ ಊಟ ಬೇಕು, ಇದು ಇವತ್ತಿನ ಪರಿಸ್ಥಿತಿ. ಆ ದಿನಗಳಲ್ಲಿ ನಾನು ಕಾಡು ಮೇಡು ಅಲೆದು ಬಂದೆ. ನನಗೆ ಅದರಿಂದ ಏನು ಲಾಭ ಬರುತ್ತೆ ಅಂತಾ ಅಲ್ಲ ಅಲ್ಲಿ ನನಗೆ ಸಂತೋಷ ಇತ್ತು. ಸಂತೋಷ ಅಂದರೇ, ಏನು? ಅದು ಆಸ್ತಿ ಮಾಡಿ, ಹೆಸರು ಮಾಡಿ ಬರೋದಾ? ಅದು ಆತ್ಮ ಸಂತೃಪ್ತಿ. ಅದು ನಿನ್ನೊಳಗೆ ಇರುತ್ತೆ, ಇನ್ನೊಬ್ಬರ ಹಿಂದೆ ಹರಸಿ ಹೋಗೋದಲ್ಲ. ತಿಳುವಳಿಕೆ ಅನ್ನೋದನ್ನ ಹೆಚ್ಚಿಸಿಕೊಳ್ಳಬೇಕು ಅದು ಇನ್ನೊಬ್ಬರಿಗೆ ಅನುಕೂಲ ಆಗಲಿ ಅಂತಾ ಅಲ್ಲ, ನಿನ್ನ ಮನಸ್ಸಿಗೆ ನೆಮ್ಮದಿ ಸಿಗಲಿ ಅಂತಾ. ನಾನು ನನ್ನ ಇಳಿವಯಸ್ಸಿನಲ್ಲಿ ಓದುವಾಗ ಸ್ವತಃ ನನ್ನ ಮಕ್ಕಳೇ ಕೇಳಿದರು, ನೀವು ಈ ವಯಸ್ಸಲ್ಲಿ ಅದೆಂತ ಪುಸ್ತಕನೆಲ್ಲಾ ಓದುತ್ತಾ ಕೂರೋದಾ? ಅವರಿಗೇನು ಗೊತ್ತು ಪುಸ್ತಕ ಓದುವುದರಲ್ಲೇನಿದೆ ಅಂತಾ.ಓದದೇ ಕೂಡ ಬದುಕಬಹುದು, ಬರೆಯದೇ ಕೂಡ ಬದುಕಬಹುದು. ಜನ ಸ್ವಂತಿಕೆಯಿಂದ ಬದುಕೋದನ್ನ, ಬದುಕುವ ಶೈಲಿಯನ್ನ ಕಲಿಬೇಕು. ಅವರನ್ನ ಇವರನ್ನ ನೋಡೀ ಅನುಕರಣೆ ಮಾಡೊದಲ್ಲ. ಬರವಣಿಗೇನೂ ಅಷ್ಟೇ, ಈ ಬರವಣಿಗೆ ಅಂತಾ ಬರೀತಿರಲ್ಲ ಅವರೆಲ್ಲಾ ಜನರ ಮೇಲೆ ಸವಾರಿ ಮಾಡುವ ಮಹಾ ದೊರೆಗಳೆ! ನೈಜತೆ ಎಲ್ಲಿ ಇರುತ್ತೇ ಹೇಳು? ಮನೆ ಒಳಗೆ ಕುಳಿತು, ನೀನು ಮಲೆಕುಡಿ ಜನಾಂಗದವರ ಬಗ್ಗೆ ಬರೆಯೋಕೆ ಆಗುತ್ತಾ, ಆ ಜನರ ಜೀವನದ ಬಗ್ಗೆ ಬರೆಯೋಕೆ ಆಗುತ್ತಾ? ಬರವಣಿಗೆ ಅಂದರೇ ಕಲ್ಪನೆ ಅನ್ನುತ್ತಾರೆ ಜನ, ಅದರಲ್ಲಿ ನನಗೆ ನಂಬಿಕೆಯಿಲ್ಲ. ಬರವಣಿಗೆ ಅಂದರೇ, ಅದು ಆ ದಿನದ ಆ ಸಮಾಜದ ಆಗೂ ಹೋಗುಗಳಿಗೆ ಕನ್ನಡಿ ಹಿಡಿದಂತಿರಬೇಕು.ನಮ್ಮ ಬರವಣಿಗೆಗಳು ಮುಂದಿನ ಪೀಳಿಗೆಗೆ ಮಾಹಿತಿ ನೀಡುವಂತಿರಬೇಕು. ನೀನು ಎಲ್ಲರಂತೇಯೇ ಬರೆದು ಕೂಡಬೇಡ. ದೇಶ ನೋಡು, ಪುಸ್ತಕ ಓದು, ಎಂದರು.ಇಲ್ಲ ತಾತ ನಾನು ಬರೆಯೋದಿಲ್ಲ ಅಷ್ಟು ಹೆಚ್ಚು ಓದುವುದು ಇಲ್ಲ. ನಾನು ಹುಟ್ಟು ಸೋಮಾರಿ ಎಂದೆ. "ಪರ್ವಾಗಿಲ್ಲ ಸತ್ಯ ಹೇಳ್ತಿಯಾ" ಅಂದರು. ಮನೆಯಿಂದ ಪೋನ್ ಮಾಡಿ ಅಪ್ಪ ಉಗಿದಿದ್ದರಿಂದ ಅಲ್ಲಿಂದ ಬೆಳ್ಳಿಗ್ಗೆ ಹಾಲಿನ ವ್ಯಾನ್ ಹತ್ತಿ ಹೊರಟೆ.

14 ಜುಲೈ 2009

ನನ್ನೊಳಗೆ ಅವಿತು ಹೋಗುವ ಮುನ್ನ ನಿಮ್ಮ ಮಡಿಲಿಗೆ!!!!---2


ದೊಡ್ಡೇಗೌಡ ಊರಿನ ಹಿರಿಯರಲ್ಲಿ ಒಬ್ಬರು. ಅವರಿಗೆ ಈಗ ವಯಸ್ಸು ಸುಮಾರು ನೂರು ದಾಟಿದೆಯೆಂದು, ಅವರ ವಯಸ್ಕರೆಲ್ಲರೂ ಬಹುಬೇಗ ಶಿವನ ಪಾದ ಸೇರಿದರು. ಬೇಗ ಎಂದರೇ ಯಾರೊಬ್ಬರೂ ಮರಿ ಮಕ್ಕಳನ್ನು ಕಾಣದೇ ಹೋದವರಿಲ್ಲ ಆದರೂ ಅದೆಲ್ಲಾ ದೊಡ್ಡೇಗೌಡರ ಲೆಕ್ಕದಲ್ಲಿ ಬಹಳ ಚಿಕ್ಕ ವಯಸ್ಸು. ಅವರ ವಯಸ್ಸಿನ ಲೆಕ್ಕಾಚಾರವೆಂದರೇ, ನಮ್ಮೂರ ಕೆರೆ ಕಟ್ಟಿಸಿದ ವರ್ಷ, ನಮ್ಮೂರ ಹೊಳೆಗೆ ಒಡ್ಡು ಕಟ್ಟಿಸಿದ ವರ್ಷ, ಅಡಿಕೆ ತೋಟ ಮಾಡಿದ ವರ್ಷ ಅಥವಾ ನಮ್ಮ ಸಣ್ಣಣ್ಣನ ಮದುವೆಯಾದ ವರ್ಷ. ಇವುಗಳ ಲೆಕ್ಕಾಚಾರ ಹಾಕಲು ನಾನು ಮತ್ತೊಂದು ಗೆಜೆಟರ್ ನನ್ನೇ ಹುಡುಕಬೇಕಾಯಿತು. ಅವರಲ್ಲಿ ಕ್ಯಾಲೆಂಡರ್ ಎಂಬುದರ ಗುರುತೇ ಇರಲಿಲ್ಲ. ಇದ್ದಿದ್ದರೂ ಅದನ್ನು ಉಪಯೋಗಿಸುವ ಮನಸ್ಸು ಮಾಡುತ್ತಿರಲಿಲ್ಲ. ಅವರಿಗೆ ನಮ್ಮ ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರ್ ಗಳ ಬಗ್ಗೆ ಅಷ್ಟೂ ಭರವಸೆಯಿರಲಿಲ್ಲ. ಒಂಟಿಕೊಪ್ಪಲ್ ಪಂಚಾಂಗ ನೋಡಿಸಬೇಕು ಇಲ್ಲವೇ ದೊಡ್ಡಯ್ಯನವರ ಬಳಿಗೆ ಹೋಗಬೇಕು. ದೊಡ್ಡಯ್ಯನವರೆಂದರೇ ಸುತ್ತಾ ಹಳ್ಳಿಗೆ ಶಂಕರಾಚಾರ್ಯರೆಂದು. ಆದರೂ, ಅವರ ಭಾಷೆಗಳು ಇವರಿಗೆ ಅರ್ಥವಾಗುವುದಷ್ಟರಲ್ಲಿಯೇ ಇತ್ತು. ದೊಡ್ಡೇಗೌಡರೆಂದರೇ, ಕೆಲವರಿಗೆ ಬಹಳ ಮರ್ಯಾದೆ ಇನ್ನೂ ಕೆಲವರಿಗೆ ಅದೊಂದು ಪಿಠೀಲು. ಎಂದರೇ, ಅವರು ಕಂಡವರನ್ನು ಮುಗ್ದವಾಗಿ ಕೂರಿಸಿ ಮಾತನಾಡಿಸುವುದು ಇಂದಿನ ನಮ್ಮ ಪೀಳಿಗೆಯವರಿಗೆ ಕೊರೆಯುವುದೆನಿಸುತಿತ್ತು. ನಾನು ಹೋದಾಗ ಮೊದಲೆರಡು ದಿನಗಳು ಅವರ ಹತ್ತಿರಕ್ಕೆ ಸುಳಿಯಬೇಡವೆಂದು ನನ್ನ ವಯಸ್ಸಿನ ಹುಡುಗರಾದ, ರಮೇಶ ಮತ್ತು ರವಿ. ಆದರೂ ನನ್ನ ಕುತೂಹಲಕ್ಕಾಗಿ ಒಂದು ಮಧ್ಯಾಹ್ನ ಅವರ ಬಳಿ ಕುಳಿತು ಕೇಳತೊಡಗಿದೆ. ಅವರು ನನ್ನ ಓದಿನ ಬಗ್ಗೆ ಮತ್ತು ನನ್ನ ಕೆಲಸದ ಬಗ್ಗೆ ಕೇಳಿದಾಗ ಅವರಿಗೆ ಅರ್ಥೈಸುವ ಸಾಮರ್ಥ ನನ್ನಲಿಲ್ಲವೆಂಬುದು ಸಾಬಿತಾಯಿತು. ಒಬ್ಬ ವಿಜ್ನಾನಿ ಅಥವಾ ಒಬ್ಬ ವಿದ್ಯಾವಂತನೆನೆಸಿಕೊಂಡವನು, ತನ್ನ ಸರಳ ಭಾಷೆಯಲ್ಲಿ ತನ್ನ ಜನರಿಗೆ ಹೇಳಲಾಗದ ನನ್ನ ವಿದ್ಯಾಬ್ಯಾಸ ಕುರಿತು ನನಗೆ ಒಂದು ಬಗೆಯ ಜಿಗುಪ್ಸೆ ಮೂಡಿತು. ಪರಿಸರ ವಿಜ್ನಾನವನ್ನು ನಾನು ಓದುತಿದ್ದೇನೆಂದಾಗ, ಅದರ ವಿವರಣೆ ಕೇಳಬಯಸಿದಾಗ, ಅವರಲ್ಲಿದ್ದ ಕಾಳಜಿ, ಕುತೂಹಲ ನನ್ನನು ಮೂಕನಾಗಿಸಿದವು. ನನ್ನ ಹರುಕು ಮುರುಕು ಕನ್ನಡ ಮಿಶ್ರಿತ, ಗ್ರಾಮೀಣ ಮತ್ತು ಪಟ್ಟಣ ಮಿಶ್ರಿತ ಭಾಷೆಯಲ್ಲಿ ಅವರಿಗೆ ಸಮಾಧಾನಪಡಿಸತೊಡಗಿದೆ. ಅವರು ನಮ್ಮ ಓದುಗ, ವಯಸ್ಕರಂತೆ, ಅದರಿಂದ ಲಾಭ ನೀರೀಕ್ಷಿಸುವ ಪ್ರಶ್ನೆಗಳನ್ನು ಹಾಕಲಿಲ್ಲ.


ವಿದ್ಯಾವಂತ ವಯಸ್ಕರು ನಮ್ಮ ವಿದ್ಯಾಬ್ಯಾಸದ ಬಗ್ಗೆ ಕೇಳುವ ಸಾಮಾನ್ಯ ಪ್ರಶ್ನೆಗಳು, ಇದನ್ನು ಓದಿದರೇ, ಹೇಗೆ ಪರ್ವಾಗಿಲ್ವಾ? ಉದ್ಯೋಗಾವಕಾಶಗಳು ಹೇಗಿವೆ? ಪರಿಸರ ವಿಜ್ನಾನ ವಿದೇಶದಲ್ಲಿ ಬಹಳ ಬೇಡಿಕೆಯಿದೆಯಂತೆ? ನೀವು ಕಂಪನಿಗಳಲ್ಲಿ ಯಾಕೆ ಕೆಲಸಕ್ಕೆ ಸೇರಿಲ್ಲ? ಒಳ್ಳೆ ಸಂಭಳ ಸಿಗುತ್ತಿತ್ತಲ್ಲವೇ? ನಿಮ್ಮ ಓಡಾಟಕ್ಕೆಲ್ಲಾ ನಿಮ್ಮ ಕಂಪನಿಯೇ ಕೊಡುತ್ತದೇಯೇ? ಇಂಥಹ ಒಂದೇ ಒಂದು ಪ್ರಶ್ನೆ ಬಾರದೇ, ಅದರ ಬಗ್ಗೆ ಕುತೂಹಲವನ್ನು ತೋರದೇ, ಪರಿಸರ ಅನ್ನೋದು ದೇವರ ಇನ್ನೊಂದು ರೂಪವೆಂದರು. ನನಗೆ ಇವರು ಹೇಳುತ್ತಿರುವುದೇನೆಂಬುದು ಅರ್ಥವಾಗಲಿಲ್ಲ. ದೇವರೆಂದರೇ, ಇವರು ವಾರಕ್ಕೊಮ್ಮೆ ಸ್ನಾನ ಮಾಡಿ ಹಣೆಗೆ ವಿಭೂತಿ ಬಳಿದುಕೊಂಡು ಮಾಡುವ ದೇವರ? ಹರಕೆ ಕಟ್ಟಿ ಹಂದಿ ಕೊಡುವ ದೇವರ ಇದ್ಯಾರು? ಆದರೂ ಅವರ ಮಾತುಗಳು ನನಗೆ ಏನೋ ಒಂದು ಬಗೆಯ ಒಗಟಾಗಿ ಕಾಣತೊಡಗಿತು. ತಾತ ದೇವರು ಅಂದರೇ, ಹೇಗೆ ಎಂದೆ? ದೇವರೆಂದರೇ ಹೇಗೆಂದರೇ ನಾನು ಏನು ಹೇಳಲಿ ಮಗಾ? ನಾನು ನೀನು ಇಬ್ಬರೂ ಮನುಷ್ಯರೇ ಅಲ್ಲವಾ? ನಾನು ನಿನಗಿಂತ ಮುಂಚಿತವಾಗಿ ಹುಟ್ಟಿದ್ದೇನೆ ಹೊರತು ಜಗತ್ತನ್ನೆಲ್ಲಾ ಅರೆದು ಕುಡಿದಿದ್ದೇನಾ? ಈ ಒಂದು ಮಾತು ಅವರ ಬಗೆಗೆ ನನ್ನೊಳಗೆ ಒಂದು ಅತ್ತ್ಯುನ್ನತ ಗೌರವ ಸ್ಥಾನವನ್ನು ಅಲಂಕರಿಸಿತು.


ಏನನ್ನೋ ನೆನೆದವರಂತೆ ಸ್ವಲ್ಪ ಸಮಯ ಸುಮ್ಮನಿದ್ದು, ಮತ್ತೆ ಮುಂದುವರೆಸಿದರು. ಪರಿಸರ, ನಿಸರ್ಗ, ನೆಲ,ಜಲ, ಕಾಡು, ಮರ ಗಿಡ ಇವೆಲ್ಲಾವೂ ಕೆಲವೊಮ್ಮೆ ದೇವರುಗಳಾಗಿ ನಮ್ಮನ್ನು ಕಾಪಾಡುತ್ತವೆ, ಕೆಲವೊಮ್ಮೆ ಅವುಗಳು ನಮ್ಮ ರಕ್ಕಸರಂತೆ ನಮ್ಮನ್ನು ದಹಿಸುತ್ತವೆ. ಅದು, ಬರಗಾಲವಾಗಿರಬಹುದು, ಪ್ರವಾಹವಾಗಿರಬಹುದು, ಅದರ ಜೊತೆ ಹೊಡೆದಾಡಲೂ ಬಂದೀತೆ? ಹಾಗೆಂದವರೇ, ಒಮ್ಮೆ ಕಣ್ಣು ಮುಚ್ಚಿ ಮೈಮರೆತವರಂತೆ ಕಾಣುತ್ತಾರೆ. ಇದೇನು ಭಾವಪರಾವಶತೆ? ಆಶ್ಚರ್ಯವಾಯಿತು, ದುಗುಡವೂ ಆಯಿತು. ಕಣ್ಣಲ್ಲಿ ನೀರಿದೆ, ಯಾವುದೋ ಗಾಢ ಧ್ಯಾನದಿಂದ ಎದ್ದವರಂತೆ, ಇಲ್ಲ ಯಾರೋ ಅವರ ಮನಸ್ಸನ್ನು ಕಲಕಿದಂತೆನಿಸಿತು. ನನ್ನಿಂದ ಏನಾದರೂ ತಪ್ಪಾಯಿತಾ? ಅಥವಾ ಯಾರದರೂ ಬಂದರಾ? ಸುತ್ತಲೂ ನೋಡಿದೆ, ಬೀದಿಯಲ್ಲಿ ಎದುರು ಮನೆಯವರ ಮಗುವೊಂದು ಮಣ್ಣಿನಲ್ಲಿ ಆಡುತ್ತಿತ್ತು. ಅದರ ವೇಷ ಭೂಷಣದಿಂದಲೇ ಭಾರತದ ಚಿತ್ರಣವನ್ನು ಅರಿಯಬಹುದಿತ್ತು. ಗಂಗಾ ನದಿಯಂತೆ ಹರಿಯುತ್ತಿರುವ ಅವನ ಮೂಗಿನನಿಂದ ಸುರಿದ ಸಿಂಬಳದ ಕುರುಹು ಕೆನ್ನೆಯ ಮೇಲೆಲ್ಲ ಇತ್ತು. ಯಾರೂ ಹೊಡೆದದ್ದಕ್ಕೋ ಅಥವಾ ಅವನಿಂದ ಯಾರು ಏನನ್ನು ದೋಚಿದರೋ, ಕಣ್ಣಿನಿಂದ ಹರಿದ ಬ್ರಹ್ಮಪುತ್ರನ ಗುರುತು ಕೆನ್ನೆಯ ಮೇಲೆಲ್ಲ ಹರಿದಾಡಿತ್ತು.ಕೆನ್ನೆಯ ಮೇಲೆ ಎಂದು ನಿಮಗೆ ಹೇಳಿದೆ, ಅಲ್ಲಿ ಕೆನ್ನೆಯೊಂದಿತ್ತು ಎನಿಸಲಿಲ್ಲ ನನಗೆ. ಕೆನ್ನೆಯಂತಿದ್ದ ಜಾಗವಿತ್ತು.ಅದು ದೇಶ ಕಂಡ ಬಡತನವೆಲ್ಲಾ ಮುದ್ದಾಗಿ ಸೊಂಪಾಗಿ ಬೆಳೆಯಬೇಕಿದ್ದ ಎಳೆ ಕಂದಮ್ಮನಲ್ಲಿದ್ದಂತಿತ್ತು. ಮೈ ಮೇಲೆ ಗಾಂಧಿವಾದಿಯಂತೆ ಅಲ್ಲದಿದ್ದರೂ ಬಟ್ಟೆಯನ್ನು ತ್ಯಜಿಸಲು ಸಿದ್ದನಿದ್ದೇನೆ, ಎನ್ನುವಂತೆ ಮೇಲಂಗಿ ಮಾತ್ರವಿತ್ತು. ಚಡ್ಡಿಯೆಂಬುದನ್ನು ಹಾಕಿದ ನೆನಪು ಅವನಿಗೆ ಇದ್ದಂತೆ ಕಾಣಲಿಲ್ಲ. ಸ್ನಾನವೆಂಬುದನ್ನು ತೊರೆದಿದ್ದ ಮಗುವೋ? ಅಥವ ಅದನ್ನು ಹೆತ್ತವರು ಅವನನ್ನು ಮಡಿಗುಡಿಯೆಲ್ಲಾ ವೈದಿಕ ಧರ್ಮದ ಪಾಲಿಸುವವರಿಗೆ ಮಾತ್ರ, ನಮಗೆ ಅವುಗಳೆಲ್ಲಾ ಬೇಡವೆನ್ನುವಂತೆ, ಮಗುವಿನ ಕಾಲುಗಳು ಮಣ್ಣಿಗೆ ಸವಾಲೆಸಿಯುವ ಬಣ್ಣಕ್ಕೆ ತಿರುಗಿದ್ದವು. ಇದು ಈ ಒಂದು ಮಗುವಿನ ಪರಿಸ್ಥಿತಿಯಲ್ಲ. ಕರ್ನಾಟಕದ ಬಹುತೇಕ ಹಳ್ಳಿಗಳ ಮಕ್ಕಳ ಸನ್ನಿವೇಶಗಳು ಹೀಗೆ ಇರುತ್ತಿದ್ದವು. ಆಂಧ್ರ, ತಮಿಳುನಾಡಿನಲ್ಲಿಯೂ ಇದು ಸಾಮಾನ್ಯ ಸಂಗತಿ. ಆದರೇ, ಕೇರ‍ಳದಲ್ಲಿ ಇಂಥಹ ದೃಶ್ಯಗಳು ಅಪರೂಪವಾಗುತ್ತವೆ.


ಮಕ್ಕಳೆಂದರೇ, ಬರೀ ಸಮವಸ್ತ್ರ ಧರಿಸಿ ಶಾಲೆಗೆ ಹೋಗುತ್ತಿರುವ, ಅಮ್ಮನ ಎದೆಹಾಲು ಕುಡಿಯುತ್ತಿರುವ, ಮಕ್ಕಳೆಲ್ಲರೂ ಒಟ್ಟಿಗೆ ಸೇರಿ ಆನಂದಿಸುತ್ತಿರುವ ದೃಶ್ಯವನ್ನೇ ಸದಾ ನೋಡುವ ಪಟ್ಟಣಿಗರಿಗೆ ಇಂಥವುಗಳು ಕಾಣಿಸುವುದಿಲ್ಲ. ನಾನು ನನ್ನ ಜೊತೆಗಾರ ಸಿಂಬ್ಬಂದಿಯವರೊಂದಿಗೆ ಹಳ್ಳಿಗಳಿಗೆ ಹೋದಾಗ ಅವರೆಲ್ಲರೂ ವ್ಯಥೆಪಟ್ಟು ಅಯ್ಯೋ ಪಾಪವೆಂದು, ಮರುಗಿ ಮಗುವಿನ ಫೋಟೋ ತೆಗೆದುಕೊಳ್ಳುವಾಗ ನಾನು ನನ್ನ ಪಾಡಿಗೆ ಇರುತ್ತಿದ್ದೆ. ಅದನ್ನು ಕಂಡ ಕೆಲವರು ಹರೀಶ್ ನಿಮಗೆ ಏನೂ ಅನ್ನಿಸುವುದಿಲ್ಲವಾ ಎನ್ನುತ್ತಿದ್ದರು.ಅದು ಸರಿಯೇ, ಅನ್ನಿಸಿದರೇ ಏನು ಮಾಡಲಿ ನನ್ನಿಂದ ಏನು ಸಾಧ್ಯವಾಗುತ್ತದೆ? ಮರುಗಬಹುದು, ಕೊರಗಬಹುದು ಅದನ್ನು ಬಿಟ್ಟರೇ? ಮರುಕ್ಷಣವೇ ಎನಿಸುತ್ತಿತ್ತು, ಏನಾದರೂ ಮಾಡಲೇಬೇಕೆಂದು.ಅದರ ಪ್ರತಿಕ್ರಿಯೆಯೇ ಸಿಇಇಕೊ ಆರಂಭಿಸಿದ್ದು.ಆದರೂ ನಾನು ಬೆಳೆದದ್ದು ಹಳ್ಳಿಯಲ್ಲಿ, ನನ್ನ ಬಾಲ್ಯದ ನೆನಪುಗಳು ಚೆನ್ನಾಗಿ ನೆನಪಿವೆ. ನನ್ನ ಜೊತೆಗಾರರೂ ಕೆಲವರು ಹೀಗೆ ಇರುತಿದ್ದರು. ಅವರಲ್ಲಿ ಬಡತನವಿರಲಿಲ್ಲ, ಆದರೇ,ಅದೇನೋ ಒಂದು ಬಗೆಯ ತಾತ್ಸಾರ, ಜೀವನದ ಬಗ್ಗೆಯ ನಿರ್ಲಕ್ಷತನ ತುಂಬಿ ತುಳುಕಾಡುತಿತ್ತು. ಅದಕ್ಕೆ ಕಾರಣ ಹುಡುಕುವ ಸ್ಥಿತಿ ನನ್ನದಲ್ಲ, ಅದನ್ನು ನಾನು ಬೇರೆಯಾಗಿಯೂ ನೋಡಿರಲಿಲ್ಲ. ನಮ್ಮ ಮನೆಯಲ್ಲಿನ ಶಿಕ್ಷಣ ಮತ್ತು ಜೀವನ ಶೈಲಿ ಮಿಕ್ಕ ಸ್ನೇಹಿತರ ಮನೆಗಿಂತ ಭಿನ್ನವಾಗಿತ್ತು. ಅದಕ್ಕೆ ಕಾರಣ ಅಪ್ಪ ವಿದ್ಯಾವಂತೆರೆಂದರೇ ತಪ್ಪಿಲ್ಲ. ನಾನು ಮಣ್ಣಿಗೆ ಆಡಲು ಹೋಗುವುದು ಬಂದು ಅಪ್ಪ ಅಮ್ಮ ಇಬ್ಬರ ಕೈಯಿಂದಲೂ ಗೂಸಾ ತಿನ್ನುವುದು ನನ್ನ ದಿನಚರಿಯಾಗಿತ್ತು. ಆದರೇ, ನಾನು ಕೈ ಕಾಲು ತೊಳೆಯದೇ ಮನೆ ಒಳಕ್ಕೆ ಕಾಲಿಡುವುದು ಅಸಾಧ್ಯವಾಗಿತ್ತು, ಒಂದು ಅಮ್ಮ ಹೊಡೆಯುತ್ತಾಳೆಂಬ ಭಯ ಮತ್ತೊಂದು ಅಮ್ಮ ಮನೆಯನ್ನು ಇಡುತ್ತಿದ್ದ ರೀತಿ. ನಮ್ಮೂರಿನಲ್ಲಿ ನಾನು ಕಂಡಿದ್ದ ಕೇಲವೇ ಕೆಲವು ಮನೆಗಳು ಬಹಳ ಚೊಕ್ಕಟವಾಗಿದ್ದವು. ಅವುಗಳಲ್ಲಿ ನಮ್ಮ ಮನೆಯೂ ಒಂದು. ಆದರೇ, ಕೊಳಕಾಗಿ ಬೆಳೆಯಲು ಆಶಿಸಿಸದವನು ನಾನೆಂದರೂ ಸರಿಯೇ. ಇಡೀ ಊರಿನ ಹುಡುಗರೆಲ್ಲರೂ ಮಣ್ಣಿನಲ್ಲಿ ಆಡಿ, ನದಿ ದಂಡೆಯಲ್ಲಿ ಕುಣಿದು, ಕುಪ್ಪಳಿಸಿ, ಮರಕೋತಿ ಆಡಲೂ ಹೋಗಿ ಕೈ ಮುರಿದುಕೊಂಡು ಮನೆಯಲ್ಲಿ ಪರಿಕ್ಷೆ, ಶಾಲೆಯೆಂಬ ಕೊರಗಿಲ್ಲದಿರುವಾಗ ನಾನು ಮಾತ್ರ ಮನೆಯಲ್ಲಿ ಕುಳಿತಿರುವುದು ಸಾಧ್ಯವಾಗಲಿಲ್ಲ.


ನಾನು ನನ್ನ ನೆನಪಿನ ಪುಟಗಳಿಂದ ಹೊರಬರುವುದನ್ನೇ ಕಾಯುತಿದ್ದ ಗೌಡ್ರು ಕೇಳಿದರೂ, "ಏನು ಕನಸಾ, ಹಳೆಯ ನೆನಪುಗಳಾ?". "ಇಲ್ಲ ತಾತ, ಆ ಮಗುವನ್ನು ನೋಡಿದೆ ಅಲ್ವಾ ಹಾಗೆ ನನ್ನ ಬಾಲ್ಯ ನೆನಪಾಯಿತು" ಎಂದೆ. "ಹೌದು ಮಗಾ, ನಮ್ಮ ಮನಸ್ಸು ವಿಚಿತ್ರ ಅನ್ಸುತ್ತೇ ಅಲ್ವಾ?" ಉತ್ತರ ಹೇಳುವ ತಾಕತ್ತು ನನಗಿದೆಯಾ? ವಿಚಿತ್ರವೆನ್ನಿಸುವುದು ಸತ್ಯ, ಆದರೇ ಅದಕ್ಕೆ ಕಾರಣ? "ಹೌದು ತಾತ" ಎಂದೆ. ತಾತ ಮುಂದುವರೆಸಿದರು, "ಮಗಾ, ನನಗೀಗ ನೂರು ದಾಟಿರಬಹುದು. ಬಿಳಿಯ ದೊರೆಗಳ ಕಾಲವನ್ನು ಕಂಡಿದ್ದೇನೆ, ರಾಜರನ್ನು ಕಂಡಿದ್ದೇನೆ, ರಾಜರೇ ನಾವೆಂದು ಬೀಗುತ್ತಿರುವ ಹೊಲಸು ರಾಜಕಾರಣಿಗಳನ್ನು ಕಂಡಿದ್ದೇನೆ. ಆದರೂ, ನನಗೆ ನಾನೇನೆಂಬುದು ಅರ್ಥವಾಗದೇ ಉಳಿದಿದೆ. ನನ್ನ ಬಳಿಗೆ ಕುಳಿತು ಮಾತನಾಡಲು ಹಿಂಜರಿಯುತಿದ್ದ ಕಾಲವೊಂದಿತ್ತು. ಅಂದು ನಾನು ಬಹಳ ಬುದ್ದಿವಂತನೆನಿಸಿಕೊಂಡಿದ್ದೆ ಅನ್ನುವುದಕ್ಕಿಂತ ನಾನು ಯಾರಿಗೂ ಎಂದಿಗೂ ತಲೆಬಾಗಿದವನಲ್ಲ. ಯಾರನ್ನು ನನಗೆ ತಲೆಬಾಗಿ ಎಂದು ಕೇಳಿದವನಲ್ಲ. ಆದ್ದರಿಂದ ಈ ಹುಚ್ಚನ ಸಹವಾಸವೇ ಬೇಡವೆನ್ನುತ್ತಿದ್ದರು. ನಾನು ಹಾಗೆಯೇ ಬದುಕಿದವನು. ಈಗಲೂ ಅಷ್ಟೇ ನನ್ನೊಂದಿಗೆ ಮಾತನಾಡಲು ಅಂಜುತ್ತಾರೆ ನನ್ನ ಮಾತುಗಳು ಅರ್ಥವಾಗುವುದಿಲ್ಲವೆನ್ನುತ್ತಾರೆ. ಕೆಲವರು ತಲೆ ತಿನ್ನುವ ಮುದುಕನೆನ್ನುತ್ತಾರೆ. ಮತ್ತೆ ಕೆಲವರು ಅವನಿಗೆ ದೈವಕೃಪೆಯಿದೆ, ಯಾವುದೋ ಕಾಣದ ಶಕ್ತಿಯೊಂದಿಗೆ ಮಾತನಾಡುತ್ತಾನೆಂಬುದನ್ನು ನಂಬಿದ್ದಾರೆ.............................................................................................................................. ಮುಂದಿನ ಸಂಚಿಕೆಗೆ,

08 ಜುಲೈ 2009

ನನ್ನೊಳಗೆ ಅವಿತು ಹೋಗುವ ಮುನ್ನ ನಿಮ್ಮ ಮಡಿಲಿಗೆ!!!!


ಏನಪ್ಪಾ ಇತ್ತೀಚೆಗೆ ನಮ್ಮನ್ನ ಮರೆತೆ ಬಿಟ್ಟೆ, ಇಷ್ಟೆ ಅಲ್ವಾ ಜನ ತೀಟೆ ತೀರಿದ ಮೇಲೆ ಅವಳ ಸಂಘಯಾಕೆ? ಈ ಮಾತನ್ನು ನನಗೆ ಕಳೆದ ಒಂದು ವಾರದಲ್ಲಿ ಕಡಿಮೆಯೆಂದರೂ, ದಿನಕ್ಕೊಬ್ಬರಂತೆ ಕೇಳಿದ್ದಾರೆ. ನನ್ನ ಬಗ್ಗೆ ನನಗೆ ಸ್ವಲ್ಪ ಅನುಮಾನ ನಾನ್ ಯಾವಾಗ ಇವರ ಜೊತೆ ತೀಟೆ ತೀರಿಸಿಕೊಳ್ಳುವ ಆಟಕ್ಕೆ ಹೋಗಿದ್ದೆ ಅಂತಾ! ಅದರ ಜೊತೆಗೆ ಭಯ ಬೇರೆ ನಾಳೆ ದಿನ ನಾನು ಮದುವೆಯಾದ ಮೇಲೂ ಹೀಗೆ ಹೇಳಿದರೆ ಗತಿ ಏನು ಅಂತಾ? ಅದು ಅಲ್ಲದೇ ಈಗ ಸಲಿಂಗ ಕಾಮಿಗಳಿಗೆ ಬೇರೆ ಪೂರ್ತಿ ಹಕ್ಕು ಸಿಕ್ಕಿದೆ. ಗಂಡಸರ ಎಸ್.ಎಂ.ಎಸ್ ಬಂದರೂ ಕಷ್ಟ ತುಂಬಾ ಸರಳವಾಗಿ ನೀವೂ ಹಾಗೇನಾ? ಎಂದು ಬಿಡುತ್ತಾರೆ. ಹೋಗಲಿ ಬಿಡಿ ಆ ಬಗೆಯ ಆಸೆಗಳೆನೂ ನನಗಿಲ್ಲ. ಮೊದಲೇ ಹೇಳಿದಂತೆ ಇತ್ತೀಚೆಗೆ ಕನ್ನಡ ಸಾಹಿತ್ಯ ಓದುವುದು ಹೆಚ್ಚಾಗಿದ್ದರಿಂದಲೋ ಏನೋ, ನನ್ನ ಸಂಶೋಧನೆಯ ಬಗ್ಗೆ ಬರೆಯೋಣವೆಂದರೂ ಕನ್ನಡದ ಬಗ್ಗೆ, ಇಲ್ಲವೇ, ಕನ್ನಡದಲ್ಲಿ ಬರೆಯತೊಡಗುತ್ತಿದ್ದೇನೆ. ಅದೇನೂ ಮಹಾ ಅಂತ ಅನ್ನಬೇಡಿ, ಕನ್ನಡ ಅನ್ನೊದು, ಅಥವಾ ಮಾತೃಭಾಷೆ ಅನ್ನೋದು ಒಂದು ಬಗೆಯ ಕಾಡುಜೇನಿನ ಹಾಗೆ, ಅದನ್ನು ಸವಿದರೇ ಗೊತ್ತು, ಎಷ್ಟು ತಿಂದರೂ ಹೊಟ್ಟೆ ತುಂಬುವುದಿಲ್ಲ, ಹಾಗೆಯೇ ಕನ್ನಡದ ವಿಷಯದಲ್ಲಿಯೂ ಅಷ್ಟೆ ಆ ಪದಗಳು ಆ ಸರಳತೆ, ಇವೆಲ್ಲಾ ಅದೆಷ್ಟೂ ಮುದನೀಡುತ್ತವೆನಿಸುತ್ತದೆ. ನನ್ನ ಜೀವನದಲ್ಲಿ ನಡೆದ ಒಂದು ಊರಿನ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೆತ್ನಿಸುತ್ತಿದ್ದೇನೆ. ನನಗೆ ನೇರ ಹೇಳುವುದನ್ನು ಬಿಟ್ಟರೇ ಈ ಕಥೆ ಹೇಳುವುದು ಸರಿಹೊಂದುವುದಿಲ್ಲ, ಆದರೂ ಹೇಳಲೇಬೇಕೆಂಬ ಹಟ ನನ್ನದು ಓದುವುದಿಲ್ಲವೆಂದು ಪಣತೊಟ್ಟರೇ ನಾನು ನಿಮ್ಮ ಶತ್ರುವಾಗಲಾರೆ.


ಅದೊಂದು ಪುಟ್ಟ ಹಳ್ಳಿ, ಇದೇನು ಯಾರು ಕಥೆ ಬರೆಯೋಕೆ ಶುರು ಮಾಡಿದರೂ ಬರೀ ಪುಟ್ಟ ಹಳ್ಳಿಯ ಬಗ್ಗೆಯೇ ಹೇಳುತ್ತಾರಲ್ಲವೆಂದುಕೊಳ್ಳಬೇಡಿ. ನನ್ನಂತ ಸಣ್ಣ ಮನುಷ್ಯ ಚಿಕ್ಕ ಊರಿನ ಬಗ್ಗೆ ಸಣ್ಣ ಕಥೆಗಳನ್ನು ಮೀರಿ ಇನ್ನೇನು ಬರೆಯಲಾದೀತು. ಅದೇನೆ ಇರಲಿ, ಆ ಊರಿನ ಹೆಸರೇ ನಿಮ್ಮನ್ನು ಆಕರ್ಷಿಸುವಂತಿದೆ, ಅದು ನಿಮ್ಮನ್ನು ಆಕರ್ಷಿಸದಿದ್ದರೂ ನನ್ನನ್ನು ತುಂಬಾ ಗಾಢ ಚಿಂತನೆಯಲ್ಲಿ ಮುಳುಗಿಸಿತ್ತು. ಆ ಊರಿನ ಹೆಸರು ಕಂಬಳಿ, ಆ ಊರಿನ ಹೆಸರು ಕೇಳಿದ ತಕ್ಷಣ ನನಗೆ ನೆನಪಾದ ಒಂದು ಚುಟುಕು ಹೇಳುತ್ತೇನೆ. ಪ್ರಿಯತಮೆ ಹೇಳಿದಳು ಪ್ರಿಯತಮನಿಗೆ,
ಪ್ರಿಯ ಈ ಊರಿನಲ್ಲಿ ಬಹಳ ಚಳಿ ಚಳಿ,
ಚೆನ್ನಾಗಿರುತ್ತಿತ್ತು ಇದ್ದಿದ್ದರೆ ಒಂದು ಕಂಬಳಿ,
ಅದಕ್ಕವನೆಂದ,
ಅದಕ್ಕೇನು ಪ್ರಿಯ ನಿನ್ನ ಚಳಿ ಹೋಗಲಾಡಿಸುವೆ ಇಲ್ಲದಿದ್ದರೂ ಕಂಬಳಿ,
ನೀನೊಮ್ಮೆ come ಬಳಿ.
ಎಂದನಂತೆ,


ಅದು ಸರಿಯೇ, ಮೈ ಶಾಖ ಹೆಚ್ಚಿಸಲು ಕಂಬಳಿ ಏನು ಬೇಕಿಲ್ಲವಲ್ಲ. ಈ ಊರಿಗೆ ಕಂಬಳಿ ಹೆಸರು ಬಂದಿದ್ದು ಹೇಗೆ ಎಂದು ಎಲ್ಲರನ್ನೂ ಕೇಳಿದೆ, ಇಲ್ಲಿ ಕಂಬಳಿ ಮಾಡುವವರಿದ್ದರೆಂಬುದು ನನ್ನ ನಂಬಿಕೆಯಾಗಿತ್ತು, ಇಲ್ಲ ಇಲ್ಲಿ ಅಂಥವುದ್ಯಾವುದೂ ಇರಲಿಲ್ಲ. ಆ ಊರಿನ ಮೂರು ಕಡೆಯಿಂದಲೂ ಬೆಟ್ಟದ ತಪ್ಪಲಿನಿಂದ ಆವರಿಸಿದ್ದು, ಅಲ್ಲಿ ಮಂಜು ಕಂಬಳಿಯಂತೆ ಕವಿಯುತಿತ್ತು ಮತ್ತು ಕಾಡು ಕಂಬಳಿಯಂತಿತ್ತು ಎಂಬುದು ಅವರ ವಿವರಣೆ. ಆದರೇ, ನಾನು ಹೋದಾಗ ಆ ಊರಿನಲ್ಲಿ ಕಾಡಿತ್ತೆಂಬುದರ ಕುರುಹು ಉಳಿದಿರಲಿಲ್ಲ. ಬರೀ ಬೋಳಾದ ಗುಡ್ಡಗಳಿದ್ದವು. ಆದರೂ ಏನೋ ಒಂದು ಬಗೆಯ ಆಕರ್ಷಣೆ ಅಲ್ಲಿತ್ತು. ಹೋದ ಊರಿನ ಚರಿತ್ರೆ ಹಿಡಿದು ಆ ಊರಿನ ಬಗ್ಗೆ ಆದಷ್ಟೂ ವಿಷಯಗಳನ್ನು ಸಂಗ್ರಹಿಸುವುದು ನನ್ನ ಚಟಗಳಲ್ಲಿ ಒಂದು. ಬಂದಿದ್ದು ಬಂದಾಗಿದ್ದೆ, ಊರನ್ನು ಸಂಪೂರ್ಣ ಸುತ್ತಾಡೋಣವೆಂದು ನನ್ನ ನೆಂಟರನ್ನು ಕೇಳಿದೆ. ಈ ಊರಿನಲ್ಲೇನಿದೆ, ಸುತ್ತಾ ಗುಡ್ಡಗಳು, ಆ ನದಿ ಬಿಟ್ಟರೇ ಎಂದರು. ಸರಿಯೆಂದು, ಊರಿನ ಅಂಗಡಿಯ ಬಳಿಗೆ ಹೋದವನು, ಸಿಗರೇಟು ಕೊಂಡು ಹೊರಟೆ.


ಹಳ್ಳಿಗಳಲ್ಲಿ, ನನಗೆ ಖುಷಿಯಾಗುವ ವಿಷಯವೆಂದರೇ, ಅಲ್ಲಿ ಅಪರಿಚಿತರೆನಿಸಿದವರ ಸಂಪೂರ್ಣ ವಿವರಣೆ ಪಡೆಯುವುದು. ನಾನು ಅಂಗಡಿಯ ಬಳಿಗೆ ಹೋದಾಗ, ನಾನು ಕೇಳಿದ ಸಿಗರೇಟ್ ಇರಲಿಲ್ಲ, ಯಾವೂರೋ ತಮ್ಮದು? ನಾನು ಹಿಂತಿರುಗಿ ನೋಡಿದೇ ಆಕಾಶವಾಣಿಯಲ್ಲ ಇದು, ಅಲ್ಲಿಯೇ ಇದ್ದ ಒಂದು ಮಧ್ಯಮ ವಯಸ್ಕನ ದ್ವನಿ. ನನ್ನೂರು ಬಾನುಗೊಂದಿ ಎಂದೆ, ಹಳ್ಳಿಗರ ಜಾಣ್ಮೆ ಮೆಚ್ಚಲೇ ಬೇಕು. ಊರಿನ ಹೆಸರು ಕೇಳಿದ ತಕ್ಷಣವೇ, ಹೋ ನೀವು ದೊಡ್ಡೇಗೌಡರ ಮನಗೆ ಬಂದಿರೋದಾ? ಏನ್ ಆಗ್ಬೇಕು ಅವರು ನಿಮಗೆ ಅದು ಇದು ಅಂತಾ ಶುರು ಆಗಿ ಕಡೆಗೆ, ನಮ್ಮಪ್ಪ, ಅಮ್ಮ ಅಜ್ಜ ಅಜ್ಜಿಯ ಬಗ್ಗೆ ಮಾತು ಮುಂದುವರೆಸುವ ಸಾಹಸ ಮಾಡಿದರು. ನಾನು ಈ ಪುಣ್ಯಾತ್ಮನ ಕೈಯ್ಯಿಗೆ ಸಿಕ್ಕರೆ ಎಲ್ಲರ ತಲೆಯನ್ನು ಕೆಡಿಸುವ ನನ್ನ ತಲೆಗೆ ಹುಳು ಸೇರುತ್ತದೆಂದು ಹೊರಟೆ.
ಆ ಊರಿನ ಗುಡ್ಡ ಹತ್ತಿ ನೋಡಿದಾಗಲೇ ಅಲ್ಲಿನ ವಿಸ್ಮಯ ನನಗೆ ಅರಿವಾಗಿದ್ದು, ಅದೊಂದು ಸುಂದರ ತಾಣ. ನಿಜಕ್ಕೂ ಆ ಬೆಟ್ಟದ ಮೇಲೆ ನಿಂತು ನೋಡಿದರೇ, ಹರಿಯುವ ನದಿ, ಅಲ್ಲಿನ ಮರಗಳ ತೋಪು, ಮನಮೋಹಕವಾಗಿತ್ತು. ಅಲ್ಲಿ ಹಿಂದೆ ಗಂಧದ ಮರಗಳಿದ್ದವೆಂಬುದಕ್ಕೇ ಸಾಕ್ಷಿಯಾಗಿ ಅದನ್ನು ಕಡಿದ ಜಾಗದಲ್ಲಿ ಮತ್ತೆ ಮೊಳೆತ ಗಿಡಗಳಿದ್ದವು. ಊರು ಬದಲಾಗಿದ್ದು ಕೇಲವೇ ವರ್ಷಗಳಲ್ಲಿ, ಅಂದರೇ, ಎಂಬತ್ತೈದರಿಂದ ಸುಮಾರು ತೊಂಬತ್ತೈದರ ವರೆಗೆ ಕೇವಲ ಹತ್ತು ವರ್ಷಗಳಲ್ಲಿ, ನಿಸರ್ಗದ ಮಡಿಲಾಗಿದ್ದ ಕಂಬಳಿ, ಮಂಜಿನಿಂದ ತಂಪಾಗಿರುತ್ತಿದ್ದ ಕಂಬಳಿ, ಬೇಸಿಗೆಯ ದಳಕ್ಕೆ ಕುಸಿದು, ಕಂಬಳಿ ಹುಳುಗಳ ಗೂಡಾಯಿತು. ಈ ಮಟ್ಟಿಗಿನ ಬದಲಾವಣೆ ಆಗಲೂ ಸಾಧ್ಯವೇ?


ಎಂಬತ್ತರ ಸುಮಾರಿಗೆ ಊರಿನಲ್ಲಿ ಇದ್ದದ್ದು, ೭೦ ಮನೆಗಳು ಈಗ ದುಪ್ಪಟ್ಟಾಗಿವೆ, ೧೪೦ ಮನೆಗಳಿವೆ. ಮೊದಲು ಒಂದು ಭಾಗದಲ್ಲಿ ನದಿ ಹರಿಯುತ್ತಿದ್ದು, ಆ ನದಿ ನೀರನ್ನು ಏತಗಳ ಮೂಲಕ ನೀರಾವರಿಗೆ ಬಳಸುತಿದ್ದರು. ಏತ ನೀರಾವರಿಯೆಂದರೇ ಕೆಲವರಿಗೆ ತಿಳಿದಿರುವುದಿಲ್ಲ. ಭಾವಿಯಿಂದ ನೀರೆತ್ತುವ ಸಾಧನ. ಕೆಲವೊಮ್ಮೆ ಎತ್ತುಗಳನ್ನು ಕಟ್ಟಿ, ಅನೂಕೂಲತೆಯಿಲ್ಲದವರು ಮನೆ ಮಂದಿ ಸೇರಿ ನೀರೆತ್ತಲೂ ತೊಡಗುತ್ತಿದ್ದರು. ಇಂಥಹ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಆಗಮಿಸಿದ್ದು, ಹಾರಂಗಿ ಜಲಾಶಯದ ನೀರು. ಕಾಲುವೆ ತೋಡಿ, ಇದ್ದ ಹೊಲವನ್ನು ಗದ್ದೆಗಳಾಗಿ ಪರಿವರ್ತಿಸುವ ಕೆಲಸ ರಭಸವಾಗಿ ನಡೆಯಿತು. ಆರಂಭದ ದಿನಗಳಲ್ಲಿ, ಹೊಲ ಭತ್ತ ಬೆಳೆಯುತ್ತಿದ್ದ ರೈತರು ಕ್ರಮೇಣ ತಮ್ಮ ಜಮೀನಿನ್ನಲಿದ್ದ ಮರಗಳನ್ನು ಕಡಿದು ಗದ್ದೆಯಾಗಿಸತೊಡಗಿದರು. ಅವರ ಕಣ್ಣುಗಳಲ್ಲಿ ದುಡ್ಡು ಸಂಪಾದನೆಯ ಕನಸು ಅವರನ್ನು ಮೀರಿ ಬೆಳೆಯತೊಡಗಿತ್ತು. ಮರ ಕಡಿದು ಮಾಡುವುದೇನು, ಮರ ಇದ್ದರೂ ಅದನ್ನು ಕಡಿಸಿ, ಮಂಚ ಕುರ್ಚಿ ಮಾಡಿಸಲು ಹಣ ಕೊಡುವವರಾರು? ಅಲ್ಲಿದ್ದ, ಹೊನ್ನೆ, ಬೀಟೆ, ತೇಗದ ಮರಗಳು, ಹೇಳ ಹೆಸರಿಲ್ಲದಂತೆ, ಬಿಟ್ಟಿಯಾಗಿಯೇ ದೋಚಲಾಯಿತು. ಹೊರಗಿನ ಪ್ರಪಂಚವನ್ನೇ ಕಾಣದ, ಕಂಬಳಿ ಎಂಬ ಊರಿಗೆ ದೂರದ ಊರಿನವರೆಲ್ಲಾ ಬಂದು ಅಲ್ಲಿದ್ದ ಸಂಪತ್ತನ್ನು ದೋಚುವುದರಲ್ಲಿ ಸಿರಿವಂತರಾಗತೊಡಗಿದರು.ಆದರೇ, ಊರಿಗೆ ನೀರು ಬಂದರೇ, ನಾವೆಲ್ಲಾ ರಾತ್ರೋ ರಾತ್ರಿ ಶ್ರೀಮಂತರಾಗುವೆಂಬ ಭ್ರಮೆಯಲ್ಲಿ ಕಂಬಳಿ ಹೊದ್ದು ಮಲಗಿದವರು ಕಂಬಳಿಯ ಜನರು.


ನನಗೆ ಆಶ್ಚರ್ಯವಾದ ವಿಷಯಗಳಲ್ಲಿ ಒಂದನ್ನು ನಾನು ನಿಮಗೆ ಹೇಳುವುದಕ್ಕೆ ಇಷ್ಟಪಡುತ್ತೇನೆ. ಅದೆಂದರೇ, ಆ ಊರಿನ ಹಬ್ಬಗಳು, ಮತ್ತು ಆಚರಣೆಗಳು. ಊರಿನ ಇತಿಹಾಸವನ್ನು ಬಣ್ಣಿಸುವಾಗ ಅವರ ಕಣ್ಣುಗಳಲ್ಲಿ ಕಾಣುವ ಸಂತೋಷಕ್ಕೆ ಮಿತಿಯಿಲ್ಲ ಅದರಂತೆಯೇ ಅವರು ಕಳೆದು ಹೋದ ದಿನಗಳಿಗೆ ಚಿಂತಿಸುವುದಿಲ್ಲ ಆದರೇ ಅದರ ನೆನಪು ಅವರನ್ನು ಕಾಡದೇ ಬಿಡುವುದಿಲ್ಲ. ನಮ್ಮ ಕೈಯ್ಯಲ್ಲಿ ಏನೂ ಇಲ್ಲವೆನ್ನುವುದನ್ನು ಅವರು ಒಪ್ಪಿದರೂ, ಇವೆಲ್ಲಾ ನಾವು ಬಯಸಿದ್ದಲ್ಲವೆನ್ನುತ್ತಾರೆ. ಕಾಣದ ದೇವರ ಕಡೆಗೆ ಕೈತೋರಿ ಎಲ್ಲ ಅವನು ಬಯಸಿದಂತೆ ನಡೆಯಿತೆನ್ನುತ್ತಾರೆ. ಮರುಗಳಿಗೆಗೆ, ಇವೆಲ್ಲಾ ನಾವೇ ನಮಗೆ ಮಾಡಿಕೊಂಡ ದ್ರೋಹವೆಂದು ಮರುಗುತ್ತಾರೆ. ಎಲ್ಲವನ್ನೂ ಒಗಟಾಗಿ ಆಡುತ್ತಾರೆನಿಸಿದರೂ ಅವರೊಳಗಿರುವ ನೋವನ್ನು ಹೊರಹಾಕಲು ಪದಗಳು ಸಿಗುತ್ತಿಲ್ಲವೆಂಬುದು ನನಗೆ ಅರ್ಥವಾಯಿತು. ಅಂಥಹ ನೋವುಂಟು ಮಾಡಿದ್ದೇನೆಂದು ನಾನು ಮರುಪ್ರಶ್ನೆ ಹಾಕಲಿಲ್ಲ, ಹಾಕಿದಿದ್ದರೇ ಇಂದು ನೀವು ನನ್ನನ್ನು ನೋಡಲಾಗುತ್ತಿರಲಿಲ್ಲವೆಂಬುದು ನನ್ನ ಅಭಿಪ್ರಾಯ.


ಹಿಂದಿನ ಜೀವನ ಇಂದಿನಷ್ಟು ದುಸ್ತರವಾಗಿರಲಿಲ್ಲ, ಊರಿಗೆ ಬಸ್ಸು, ಕಾರು ಇರಲಿಲ್ಲ, ಅದಕ್ಕೂ ಮಿಗಿಲಾಗಿ, ರಸ್ತೆಯೆಂಬುದೇ ಇರಲಿಲ್ಲ, ಕಾಡು ರಸ್ತೆಯೇ ಅವರಿಗೆ ಆಧಾರ. ಎತ್ತಿನ ಗಾಡಿಯ ಓಡಾಟ ಸಾಮಾನ್ಯವಾಗಿದ್ದರೂ, ಬಹಳ ಮಂದಿ ಬರಿಗಾಲಲ್ಲಿ ನಡೆದು ಹೋಗುತ್ತಿದ್ದರು. ಒಕ್ಕಲಿಗರೇ ಹೆಚ್ಚಿದ್ದ ಊರಿನಲ್ಲಿ, ಹರಿಜನರ ಕಾಲೋನಿ ಊರಿನಿಂದ ಹೊರಕ್ಕಿದ್ದದ್ದು ಬಿಟ್ಟರೇ ಮಿಕ್ಕ, ಮಡಿವಾಳರು, ನಾಯಕರು, ಆಚಾರರು, ಊರಿನ ಮಧ್ಯೆಯೇ ಇದ್ದರು. ಜಾತಿ ವ್ಯವಸ್ತೆಯೆಂಬುದು ಅವರೊಂದಿಗೆ ಬೆಳೆದು ಬಂದ ಒಂದು ಪದ್ದತಿಯಾಗಿತ್ತೆ ಹೊರತು ಅದನ್ನು ಬೆಳೆಸಿಕೊಂಡು ಹೋಗುವುದೇ ಅವರ ಗುರಿಯಾಗಿರಲಿಲ್ಲ.ಷಷ್ಠಿ ಶುರುವಾದರೇ ಮುಗಿಯಿತು, ಊರಿನ ಗಂಡಸರು ದನಗಳ ಜಾತ್ರೆಯ ನೆಪದಲ್ಲಿ, ಮೊದಲ ತಿಂಗಳು ರಾಮನಾಥಪುರ ನಂತರ, ಚುಂಚನಕಟ್ಟೆ, ಅನಂತರ ಹಾಸನದ ಜಾತ್ರೆ ಮುಗಿಸಿಯೇ ಮನೆ ಸೇರುತ್ತಿದ್ದದ್ದು. ಅದರಿಂದ ಅವರೇನೂ ಸಾವಿರಾರು ರೂಪಾಯಿ ಲಾಭ ಗಳಿಸುತ್ತಿರಲಿಲ್ಲ. ಆದರೂ, ಅದೊಂದು ಮೋಜೆನಿಸಿತ್ತು. ಅಲ್ಲಿಂದ ಬರುವ ವೇಳೆಗೆ ಮನೆಯಲ್ಲಿ ಬೆಳೆದ ಮಕ್ಕಳು, ಸುಗ್ಗಿಯ ಸ್ವಾಗತಕ್ಕಿರುತ್ತಿದ್ದರು. ಬಂದವರೇ, ಕಾಲಿಗೆ ಗೆಜ್ಜೆ ಕಟ್ಟಿ, ಕೋಲಾಟವಾಡುತ್ತಿದ್ದರು. ಊರಿನ ಮಧ್ಯಭಾಗದಲ್ಲಿ, ಅರಳಿಮರವಿತ್ತು, ಅದಕ್ಕೆ ಕಟ್ಟೇಯೇನೂ ಇರಲಿಲ್ಲ. ಆದರೂ ಮಾಗಿ ಚಳಿ ಮುಗಿದ ಮೇಲೆ, ಭರಣಿ ಮಳೆ ಬೀಳುವ ತನಕವೂ ಊರಿನ ಜನರೆಲ್ಲಾ ಅಲ್ಲೇಯೇ ಮಲಗುತ್ತಿದ್ದರು. ಅಂದರೇ, ದಂಪತಿಗಳ ನಡುವಿನ ರಾತ್ರಿ ಕಾರ್ಯಚಟುವಟಿಕೆಗಳು? ಇಂಥಹ ಮರುಳು ಮರುಳು ಪ್ರಶ್ನೆ ಯಾಕಾದರೂ ಬರುತ್ತದೆ ನಿಮ್ಮ ತಲೆಯಲ್ಲಿ?......................................................................................................................ಮುಂದಿನ ಸಂಚಿಕೆಗೆ

ಓದು ಎಂಬ ಮಹಾ ಮಾಂತ್ರಿಕನ ಬೆನ್ನು ಸವರುತ್ತಾ!!!


ಕೆಲವು ದಿನಗಳಿಂದ ಏನನ್ನು ಬರೆಯದೇ ಸುಮ್ಮನಿದ್ದೆ, ಅದಕ್ಕೆ ನನ್ನದೇ ಆದ ಕಾರಣಗಳು ಇವೆ. ಅವೆಲ್ಲಾ ಇಲ್ಲಿ ನಿಷ್ಪ್ರಯೋಜಕವಾಗುತ್ತದೆ. ಹೀಗೆ ಏನೂ ಬರೆಯದೇ ಇದ್ದ ನನ್ನನ್ನು ನನ್ನ ಆತ್ಮೀಯ ಮಿತ್ರರು ಕೇಳಿದರು, ಹರೀ ಏನು ಬರೆದಿಲ್ವಾ ಹೊಸದಾಗಿ ಎಂದು. ನನಗೆ ಸ್ವಲ್ಪ ದಿಗಿಲೆನಿಸಿತ್ತು ಕೂಡ. ಇವರು ನನ್ನನ್ನು ಕೇಳುತ್ತಿದ್ದಾರೋ ಅಥವಾ ಗೇಲಿ ಮಾಡುತ್ತಿದ್ದಾರೋ ಎಂದು. ನನ್ನ ಸ್ನೇಹಿತರ ಮೇಲೆ ಅನುಮಾನ ಪಡದಿದ್ದರೂ ನನ್ನ ಮೇಲೆ ಸ್ವಲ್ಪ ಮಟ್ಟಿಗೆ ಅನುಮಾನ ಬಂತು. ನಾನು ಬ್ಲಾಗ್ ಬರೆಯಲು ಶುರು ಮಾಡಿದ ದಿನಗಳಲ್ಲಿ ನನ್ನ ಸ್ನೇಹಿತರಿಗೆ ಅದರ ಲಿಂಕ್ ಕಳುಹಿಸಿ ಇದನ್ನು ಓದಿನೋಡಿ ಎಂದು ಗೊಳುಯ್ಯಿತ್ತಿದ್ದೆ, ಅದಕ್ಕೆಂದು ಹೀಗೆ ಚೇಡಿಸಿರಬಹುದೇ? ಅದೇನೆ ಇರಲಿ ಇತ್ತೀಚೆಗಂತೂ ನನ್ನ ಬ್ಲಾಗ್ ಓದಿ ಎಂದು ಯಾರಿಗೂ ಹೇಳಲು ಹೋಗುವುದಿಲ್ಲ. ಯಾಕೆಂದರೇ ಅಲ್ಲಿ ಬರೆಯುವುದೆಲ್ಲ ನನ್ನ ಮೂಗಿನ ನೇರಕ್ಕೆ ಮತ್ತು ನನ್ನ ಮನಸ್ಸಿನ ಇಷ್ಟಕ್ಕೆ, ಅದು ಓದಿದ ಮೇಲೆ ಅವರೊಂದಿಗೆ ವಾದ ಮಾಡುವುದಾಗಲೀ ನನ್ನ ಬರವಣಿಗೆಯನ್ನು ಸಮರ್ಥಿಸಿಕೊಳ್ಳುವುದಾಗಲಿ ಬರಲೇಬಾರದೆಂಬುದು ನನ್ನ ಆಶಯ. ನಿನ್ನ ತಲೆಹರಟೆ ಬಿಟ್ಟ ನೇರ ವಿಷಯಕ್ಕೆ ಬರುವುದೇ ಇಲ್ಲವಲ್ಲವೆನ್ನಬೇಡಿ. ಬ್ಲಾಗ್ ಬರೆಯದೇ ಉಳಿದಿದ್ದಕ್ಕೆ ಕಾರಣವನ್ನು ಕೊಡಲೇಬೇಕು. ನಾನು ಕುಡಿದು ಬಿದ್ದಿದ್ದರಿಂದ ಬರೆಯಲು ಸಮಯವಿರಲಿಲ್ಲವೆನ್ನಬೇಡಿ. ಕುಡಿತದ ವಿಷಯಬಂದರೇ, ಈಗಲೂ ಹೋಗಿಬಿಡೋಣವೆನಿಸುತ್ತದೆ, ನಿಮ್ಮ ಬೈಗುಳಗಳಿಗೆ ಬಲಿಯಾಗುವ ಆಸೆ ನನಗಿಲ್ಲ. ಹದಿನೈದು ದಿನಗಳಿಂದ ದೃಡನಿಶ್ಚಯಮಾಡಿ ಕೆಲವು ಪುಸ್ತಕಗಳನ್ನು ಓದುತಿದ್ದೆ, ಅವುಗಳಲ್ಲಿ ಮುಖ್ಯವಾದವೆಂದರೇ, ಕಾರಂತರ ಗೆದ್ದ ದೊಡ್ಡಸ್ತಿಕೆ, ನಾವು ಕಟ್ಟಿದ ಸ್ವರ್ಗ, ಅಪೂರ್ವ ಪಶ್ಚಿಮ, ಸ್ವಪ್ನದ ಹೊಳೆ. ಅನಂತಮೂರ್ತಿಯವರ ಅವಸ್ಥೆ ಮತ್ತು ಮಾತು ಸೋತ ಭಾರತ.


ಕಾರಂತರು ಮತ್ತು ಅನಂತಮೂರ್ತಿಯವರ ಈ ಬರವಣಿಗೆಗಳು ನನ್ನನ್ನು ಬರೆಯದಂತೆ ತಡೆದವೆಂದರೇ ತಪ್ಪಿಲ್ಲ. ಅವರು ಬಳಸಿರುವಂತಹ ಪದಪುಂಜಗಳು, ವಿಚಾರಧಾರೆ, ವಿಷಯಗಳು ನನ್ನ ಆಂತರ್ಯವನ್ನು ಕಲಕಿವೆ. ಅಂತಹದ್ದೇನಪ್ಪ ಬರೆದಿರೋದು ಮಹಾ ಎನ್ನಬೇಡಿ, ನನ್ನಂತಹ ಮುಟ್ಠಾಳನಿಗೆ ಹೀಗನಿಸಿರಬೇಕಿದ್ದರೇ ಇನ್ನು ನೀವು ಓದಿದರೇ ಏನಾಗಬಹುದೆಂಬುದು ನನ್ನ ಚಿಂತೆ. ಸಾಹಿತ್ಯ ಕ್ಷೇತ್ರಕ್ಕೆ ನಾನು ಪ್ರವಾಸಿಯಿದ್ದ ಹಾಗೆ ನನಗೆ ಅದರಲ್ಲಿನ ಏನೇನೂ ತಿಳಿಯದು ಕೆಲವು ಪುಸ್ತಕಗಳನ್ನು ಓದಿದ್ದು ಬಿಟ್ಟರೇ ಮತ್ತೇನು ತಿಳಿದಿಲ್ಲ. ಭಾಷೆ ಎಂಬುದು ಎಷ್ಟ ಶಕ್ತಿಯುತವಾದದ್ದೆಂಬುದಕ್ಕೆ ಇವರುಗಳ ಬರಹಗಳೇ ಸಾಕ್ಷಿ. ಬಳಸಿದ ಪದಗಳನ್ನೇ ಬಳಸಿ ಬಳಸಿ ಅದೇ ಮರ ಸುತ್ತಾಡಿ, ಚಂದ್ರನನ್ನು ಗೆಳತಿಗೆ ಹೋಲಿಸಿ, ನಿಸರ್ಗ ಬಾನು, ಭೂಮಿ, ನೀರು, ತೀರ ಇವುಗಳಲ್ಲಿಯೇ ನಮ್ಮನ್ನು ಸುತ್ತಾಡಿಸುವ ನಮ್ಮ ಹಲವಾರು ಲೇಖಕರು ಈ ಬಗೆಯ ಪ್ರಯತ್ನವನ್ನೇಕೆ ಬಳಸುವುದಿಲ್ಲವೆಂಬುದು ನನ್ನ ಆತಂಕ. ಕನ್ನಡ ಶಬ್ದಕೋಶದಲ್ಲಿ ಎಂತೆಂಥಹ ಪದಗಳಿವೆಂಬುದನ್ನು ಅರಿಯಬೇಕಾದರೇ, ಅವುಗಳನ್ನೇ ಒದಬೇಕು. ಕಥೆಯನ್ನು ಮನದಲ್ಲಿಟ್ಟು ಓದುವುದಾದರೇ, ನಮ್ಮ ವಾರಪತ್ರಿಕೆಗಳು ಸಾಕು. ಕಥೆಗಳಿಗೆಂದು ನಾನು ಯಾವ ಪುಸ್ತಕವನ್ನು ಓದುವುದಿಲ್ಲ.ನಮ್ಮ ಜೀವನವೇ ಕಾದಂಬರಿಯಾಗಿರುವಾಗ ಇನ್ನು ಬೇರೊಬ್ಬರು ಬರೆದ ಕಾಲ್ಪನಿಕ ಕಥೆಯಲ್ಲೇನೂ ಸ್ವಾರಸ್ಯವಿರುವುದಿಲ್ಲ.

ಏನೇನೋ ಹೇಳಿ ತಲೆಗೆ ಹುಳ ಬೀಟ್ಟೆ ಅಂದುಕೊಳ್ಳಬೇಡಿ.ನಾನು ಬರೆಯೋಕೆ ಹೋದದ್ದು ಒಂದು ಮುಖ್ಯವಾದ ವಿಷಯದ ಬಗ್ಗೆ ಅದರ ಹೆಸರು ಆಸಕ್ತಿ. ಇದೊಲ್ಲೆ ಕರ್ಮವೇ ನೀನು ಆಸಕ್ತಿ ಬಗ್ಗೆ ಹೇಳುವಾಗ ನಮಗೆ ನಿನ್ನ ಬ್ಲಾಗ್ ಓದೋ ಆಸಕ್ತಿನೇ ಕಡಿಮೆಯಾಯಿತಲ್ಲ ಎಂದರೇ ನಾನು ಬಹಳ ಖುಷಿಪಡ್ತೇನೆ.ಕಾರಣವಿಷ್ಟೆ, ಇದು ನಮ್ಮ ವೈಯಕ್ತಿಕ ಆಸಕ್ತಿ ಅಭಿಪ್ರಾಯಗಳಿಗೆ ಸಂಬಂಧಿಸಿದ್ದರೂ ಅದು ಪರೋಕ್ಷವಾಗಿ ಬೇರೆಯರೊಂದಿಗೆ ಬೆರೆತಿರುತ್ತದೆ. ಉದಾಹರಣೆಗೆ, ಸಿನೆಮಾದವರು, ಲೇಖಕರು, ರಾಜಕಾರಣಿಗಳು ಇವರೆಲ್ಲರೂ ಅಷ್ಟೇ ಅವರ ಪ್ರತಿಯೊಂದು ಚಟುವಟಿಕೆಗಳನ್ನು ಸಮಾಜ ಹದ್ದಿನ ಕಣ್ಣಿಟ್ಟು ನೋಡುತ್ತಿರುತ್ತದೆ. ಅವರಿಗೊಂದು ವೈಯಕ್ತಿಕ ಜೀವನವಿರುತ್ತದೆಂಬುದನ್ನು ನಾವು ನೆನಪಿಸಿಕೊಳ್ಳುವುದಿಲ್ಲ. ಅದನ್ನೇ ಹೊಂಚಿಹಾಕಿ ಸಮಯ ಸಾಧಿಸುವವರೆಂದರೇ ನಮ್ಮ ಪತ್ರಕರ್ತರು. ಪತ್ರಿಕೋದ್ಯಮ. ಸಣ್ಣ ಪುಟ್ಟ ಹೇಳಿಕೆಗಳನ್ನು ದೊಡ್ಡದು ಮಾಡಿ ಜನರನ್ನು ರೊಚ್ಚಿಗೆಬ್ಬಿಸಿ ರಂಗು ರಂಗಾಗಿಸುವಲ್ಲಿ ನಿಪುಣರೆಂದರೇ ಇವರಿಗೆ ಸಮನಾರು ಇಲ್ಲ.

ದಿನನಿತ್ಯ ನಮ್ಮ ಬಾಯಿಯಿಂದ ಸಾಮಾನ್ಯವಾಗಿ ಹೊರಬರುವ ವಿಷಯಗಳಲ್ಲಿ ಸರ್ವೇಸಾಮಾನ್ಯವಾದದ್ದೊಂದಿದೆ, ಅದು ಇವರಿಂದ ಸಮಾಜಕ್ಕೇನು ಉಪಯೋಗ ಹೇಳು? ಒಬ್ಬ ರಾಜಕಾರಣಿ ಟ್ರಾಫಿಕ್ ಗೆ ಅಡಚಣೆ ಮಾಡಿದರೇ ಸಾಕು, ಥೂ ಈ ರಾಜಕಾರಣಿಗಳು ನಮ್ಮ ಬಗ್ಗೆ ಸ್ವಲ್ಪನೂ ಯೋಚಿಸುವುದೇ ಇಲ್ಲ, ಅರ್ಧ ಗಂಟೆ ಎಷ್ಟು ಜನಕ್ಕೆ ತೊಂದರೆ ಕೊಡ್ತಾರಪ್ಪ ಎನ್ನುತ್ತೇವೆ. ಕೆಲವರು ಈ ಕ್ರಿಕೇಟ್ ನಿಂದ ಏನು ಲಾಭ ಅವರು ದೇಶಕ್ಕೆ ಮಾಡಿರೋದು ಏನು? ಇನ್ನು ಕೆಲವರು ಈ ಸಿನೆಮಾದವರಿಂದ ಏನು ಲಾಭ? ಮೊನ್ನೆ ಹೀಗೆ ಮಾತನಾಡುತ್ತಿರುವಾಗ ನನ್ನ ಸ್ನೇಹಿತ ಹೇಳ್ತಾ ಇದ್ದ ಮಗ ಸಿನೆಮಾದಲ್ಲಿ ಅವರು, ತಮ್ಮ ಸ್ವಂತ ತೀಟೇಗೆ ಅಂತಾ ನಾಯಕಿಯರನ್ನ ಹಾಕಿಕೊಂಡು ಮಜ ತಗೊತಾರೆ ನಾವ್ಯಾಕೆ ನೋಡ್ಬೇಕು? ಅಂತಾ. ಅದೂ ಒಂದು ರೀತಿ ಸರಿನೇ ಅನ್ನು ಅಂದೆ. ಆದರೇ ಈ ವಿಷಯ ಬಂದಾಗ ನನಗೆ ಕೋಪ ಬರೋದು ಈ ಸಿನೆಮಾದವರ ಮೇಲೆ ಬಿಟ್ಟರೇ ನಮ್ಮ ಪತ್ರಕರ್ತರ ಮೇಲೆ. ಅದೇನು ನಮ್ಮ ಮೇಲೆ ಸೇಡು ತೀರಿಸಿಕೊಳ್ಳೋಕೆ ಅಂತಾನೆ ಸಿನೆಮಾ ತೆಗಿತಾರೇನೋ ಅನ್ಸುತ್ತೆ ಕೆಲವೊಂದು ಸಿನೆಮಾ ನೋಡಿದಾಗ.ಇನ್ನು ಬೇಸರವಾಗಿ ದಿನಪತ್ರಿಕೆ ಬಿಚ್ಚಿದರೇ, ಅದರಲ್ಲಿ ಏನೇನೂ ಇರುವುದಿಲ್ಲ, ಇವೆಲ್ಲಾ ಕಾರಣಗಳಿಂದಾನೇ ಕುಡುಕರ ಸಂಖ್ಯೇ ಹೆಚ್ಚಾಗಿದ್ದು ಅನ್ಸುತ್ತೆ.
ನಾನು ಹೇಳೋಕೆ ಹೋದ ವಿಷಯವೆನೆಂದರೇ, ಯಾರಿಂದ ಸಮಾಜಕ್ಕೆ ಒಳ್ಳೆಯದು ಎಂಬುವುದನ್ನು ಕುರಿತು. ಒಂದು ಕ್ಷೇತ್ರವನ್ನೆ ಹೀಗೆ ಬೈಯ್ದು ಹಿಯಾಳಿಸುವುದರಿಂದ ಅದೇನು ಸಿಗುತ್ತದೆಂಬುದು ನನಗೂ ಅರ್ಥವಾಗಿಲ್ಲ. ನಾನು ಮೊನ್ನೆ ಓದಿದ ಮೇಲೆ ನಿಮ್ಮ ಜೊತೆ ಹಂಚಿಕೊಳ್ಳಬೇಕೆನಿಸಿದ ಎರಡು ವಿಷಯಗಳಿವು, ಮೊದಲನೆಯದು, ಕುವೆಂಪುರವರ ಬಗ್ಗೆ ತೇಜಸ್ವಿಯವರು ಬರೆದಿರುವುದು. ಒಮ್ಮೆ ಕಾಲೇಜು ಬಂದ್ ಮಾಡುವಾಗ ವಿದ್ಯಾರ್ಥಿಗಳು ಕುವೆಂಪು ಅವರ ಮನೆಗೆ ನುಗ್ಗಿ ದಾಂಧಳೆ ಮಾಡಿದ್ದು. ಮತ್ತೊಂದು ಅನಂತಮೂರ್ತಿಯವರ ಮನೆಗೆ ನುಗ್ಗಿ ದಾಂಧಳೆ ಮಾಡಿದ್ದು. ಇದು ಎಂತಹ ಅವಿವೇಕಿತನವೆನಿಸುತ್ತದೆ. ದಿನಕ್ಕೆರಡು ಮೂರು ಬಂದ್ ಗಳು, ಜಾತಗಳು, ಸಾರ್ವಜನಿಕರಲ್ಲಿ ಎಷ್ಟು ಅಹಿತಕರ ಸನ್ನಿವೇಶವನ್ನೇರ್ಪಡಿಸುತ್ತದೆಂಬುದರ ಅರಿವಿಲ್ಲದೇ ಸದಾ ಕೂಗಾಡೀ, ರೇಗಾಡಿದರೇನು ಬಂತು. ಸಂಪೂರ್ಣ ವ್ಯವಸ್ಥೆಯೇ ಹದಗೆಟ್ಟಿ ಕುಳೀತಿರುವಾಗ. ಕನ್ನಡ ಪದಗಳ ಗಂಧವೇ ತಿಳಿಯದ ಪುಡಾರಿಗಳು ಮಹಾನ್ ಲೇಖಕರೆನಿಸಿಕೊಂಡು, ಕನಡವೇ ಸತ್ಯ ಕನಡವೇ ನಿತ್ಯವೆಂದು ಬದುಕಿದವರ ಮೇಲೆ ಹಲ್ಲೆ ಮಾಡಲೆತ್ನಿಸಿದಾಗ ಈ ಸಮಾಜದ ಕ್ರೂರತೆ ಅರ್ಥವಾಗುತ್ತದೆ. ನಮ್ಮಿಂದ ಸಮಾಜಕ್ಕೆ ಆಗುತ್ತಿರುವ ಉಪಯೋಗವೇನೆಂಬುದರ ಬಗ್ಗೆ ಕಿಂಚಿತ್ತೂ ಯೋಚಿಸದ ನನ್ನ ಪ್ರಿಯ ಮಿತ್ರರೂ ಸದಾ ಸಮಾಜಕ್ಕೆ ಅವರಿವರಿಂದ ಆಗುತ್ತಿರುವ ಸಮಸ್ಯೆಗಳನ್ನು ಅಥವಾ ಆಗದೇ ಇರುವ ಅನುಕೂಲಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸುವುದೆಂದು?

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...