27 ಜೂನ್ 2012

ಕನಸಲ್ಲಿಯೂ ಮೆರೆದ ವಾಸ್ತವಿಕತೆ!!!





ಕಳೆದವಾರ ಮಲಗಿದ್ದಾಗ ಇದ್ದಕ್ಕಿದ್ದ ಹಾಗೆಯೇ, ಎಚ್ಚರವಾಯಿತು, ನಿಧಾನವಾಗಿ ಕಣ್ಣು ಬಿಟ್ಟು ನೋಡಿದೆ. ಕತ್ತಲಾಗಿತ್ತು, ಆದರೇ ಕಣ್ಣಿನ ಅಂಚಿನಲ್ಲಿ ನೀರಿತ್ತು. ಇದೇನು ಕಣ್ಣೀರು, ಕನಸಿನಲ್ಲಿ ಅತ್ತಿದ್ದೀನಾ? ಅಂಥಹ ಕನಸು ಏನು ಬಿತ್ತು ಎಂದು ಹಿಂದಕ್ಕೆ ತಿರುಗಿದೆ. ಇತ್ತೀಚಿನ ದಿನಗಳಲ್ಲಿ ನಾನು ಮಾತನಾಡುವಾಗ ಹಲವಾರು ಬಾರಿ, ಸಾವಿನ ಬಗ್ಗೆ ಮಾತನಾಡಿದ್ದೇನೆ, ನಾನು ಸತ್ತರೇ? ಇಂಥಹ ಕುತೂಹಲ ನನಗೂ ಇದೆ, ನಾನು ಸತ್ತರೆ ಯಾರೆಲ್ಲ ಅಳಬಹುದು, ಎಷ್ಟು ಜನ ಸೇರಬಹುದು? ನನ್ನನ್ನು ಹೊಗಳುವವರೆಷ್ಟು, ದೂರುವವರೆಷ್ಟು? ಇದರ ನಡುವೆಯೇ ಈ ಕನಸ್ಸು ಬಿದ್ದಿದ್ದು ಅಚ್ಚರಿ ಎನಿಸಿತು. ಕನಸಿನ ಎಳೆಯನ್ನು ಬಿಡಿಸುತ್ತಾ ಹೋದೆ. ನಾನು ಬೈಕಿನಲ್ಲಿ ಆಫೀಸಿಗೆ ಬರುತ್ತಿರುವಾಗ, ದಾರಿ ಮಧ್ಯದಲ್ಲಿ ಯಾವುದೋ ಲಾರಿ ನನಗೆ ಡಿಕ್ಕಿ ಹೊಡೆದು ನಾನು ಒದ್ದಾಡುತ್ತಿದ್ದೆ. ನನ್ನನ್ನು ಅಲ್ಲಿಯೇ ಇದ್ದವರು ಆಸ್ಪತ್ರೆಗೆ ಸೇರಿಸಿದರು. ಅದು ನಾಗರಭಾವಿಯ ಪನೇಷಿಯಾ ಆಸ್ಪತ್ರೆ, ನಾನು ಜ್ನಾನ ತಪ್ಪಿದ್ದೇನೆ, ಆಸ್ಪತ್ರೆಗೆ ದಾಖಲು ಮಾಡಬೇಕು, ನನ್ನ ಕಡೆಯವರು ಯಾರೂ ಇಲ್ಲ. ನನ್ನ ಮೊಬೈಲ್ ನಲ್ಲಿರುವ ನಂಬರುಗಳನ್ನು ತೆಗೆಯಲು ನೋಡುತ್ತಾರೆ ಮೊಬೈಲ್ ಚೂರು ಚೂರಾದಂತಿದೆ, ಆದರು ಆನ್ ಆಯಿತು. ಆದರೇನು ಪ್ರಯೋಜನ, ಮೊಬೈಲಿಗೆ ಕೋಡ್ ಕೊಟ್ಟಿದ್ದೇನೆ, ಅದನ್ನು ಉಪಯೋಗಿಸಲು ಬರುತ್ತಿಲ್ಲ. ಅಲ್ಲಿ ನಿಂತಿದ್ದವರು ನನ್ನನ್ನು ಬೈಯ್ಯುತ್ತಿದ್ದಾರೆ. ಹೇಗೆ ಕಂಡು ಹಿಡಿಯುವುದು ಇವನು ಯಾರ ಕಡೆಯವನು ಎನ್ನುವಾಗಲೇ, ನನ್ನ ಗಾಡಿಯಲ್ಲಿದ್ದ ನನ್ನ ಆಫೀಸಿನ ಅಕ್ಷೆಸ್ ಕಾರ್ಡು ಸಿಗುತ್ತದೆ. ಅದರ ಹಿಂದೆ ಇಂದ ನಂಬರನ್ನು ತೆಗೆದು ಆಫೀಸಿಗೆ ಕರೆ ಮಾಡುತ್ತಾರೆ.

ನಮ್ಮ ಕಾರ್ಡಿನಲ್ಲಿರುವ ನಂಬರು ಗ್ಲೋಬಲ್ ಎಡ್ಜ್ ಕಛೇರಿಯದ್ದು, ಅಂತೂ ಕುಮಾರ್ ರವರಿಗೆ ನನ್ನ ಅಪಘಾತದ ವಿಷಯ ತಲುಪುತ್ತದೆ. ತಲುಪಿದರೇನು ಬಂತು ನೋಡಲೇನು ಆತುರದಲ್ಲಿ ಬರುವುದಿಲ್ಲ. ಅಯ್ಯೋ ಪಾಪವೆಂದು ಸುಮ್ಮನಾಗುತ್ತಾರೆ. ಆಸ್ಪತ್ರೆಯಲ್ಲಿ ನಾನು ಒಬ್ಬನೇ, ನಾನು ಸತ್ತಿದ್ದೇನೆಂಬುದರ ಅರಿವು ಅಲ್ಲಿದ್ದವರಿಗಿಲ್ಲ. ಪೋಲಿಸರು ಅಲ್ಲಿಗೆ ಆಗಮಿಸುತ್ತಾರೆ. ಹೌದಾ? ಮುಗಿತು, ಇಷ್ಟೇ ಪೋಲಿಸರ ಕೆಲಸ, ಬದುಕಿದಿದ್ದರೇ ನಾಲ್ಕು ಕಾಸಾದರೂ ಸಿಕ್ಕುತ್ತಿತ್ತು, ಈಗ ಅದೆಲ್ಲವೂ ಇಲ್ಲಾ. ಪೋಲಿಸರು ಮೊದಲು ಖಾತರಿ ಮಾಡಿಕೊಳ್ಳುತ್ತಾರೆ. ಕುಡಿದು ಸತ್ತಿಲ್ಲವೆನ್ನುವುದು ತೀರ್ಮಾನವಾದ ತಕ್ಷಣ ಲಾರಿ ಡ್ರೈವರಿನ ಬಳಿಗೆ ಹೋಗುತ್ತಾರೆ, ಅವರ ಜೇಬು ತುಂಬಿಸುವ ಕೆಲಸವೂ ನಡೆಯುತ್ತದೆ. ಯಾರು ಸತ್ತರೂ ಅತ್ತರೂ ಕೆಟ್ಟರೂ ಹಳೇ ಸಿನೆಮಾದಲ್ಲಿ ಬರುವ ವಜ್ರಮುನಿ, ಸುಧೀರ್, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು ತರಹ ನಮ್ಮ ಪೋಲಿಸರು, ಡಾಕ್ಟರುಗಳು, ಕೆಲವು ಅಧಿಕಾರಿಗಳು. ನನ್ನ ಕಡೆಯವರು ಯಾರೂ ಇಲ್ಲವೆಂದು ತಿಳಿದು ಒಂದು ಮೂಲೆಗೆ ನನ್ನ ಶವವನ್ನು ತಳ್ಳುತ್ತಾರೆ. ವಿಚಿತ್ರವೆಂದರೇ ನಾನು ಸತ್ತಿರುವುದು ಅವರಿಗೆ ಇನ್ನೂ ತಿಳಿದಿಲ್ಲ, ತಿಳಿದಿಲ್ಲವೋ ಅಥವಾ ತಿಳಿಯದಂತೆ ನಾಟಕವಾಡುತ್ತಿದ್ದರೋ ನನಗೆ ತಿಳಿದಿಲ್ಲ. ನಮ್ಮ ಆಫೀಸಿಗೆ ಮತ್ತೊಮ್ಮೆ ಫೋನ್ ಮಾಡುತ್ತಾರೆ, ಆ ಸಮಯಕ್ಕೆ ಕುಮಾರ್ ಆಫೀಸ್ ಬಿಟ್ಟಿರುತ್ತಾರೆ, ಈಗ ಹೇಗೆ ಕಂಡು ಹಿಡಿಯುವುದೆಂದು ಪರದಾಡುತ್ತಿರುವಾಗಲೇ, ಕನ್ನಡ ನ್ಯೂಸ್ ಚಾನೆಲ್ ಗಳಲ್ಲಿ ಸುದ್ದಿ ಮೂಡುತ್ತದೆ.

ಸುದ್ದಿ ತಿಳಿದ ತಕ್ಷಣ ಕೆಲವು ಸ್ನೇಹಿತರು, ನೆಂಟರು ಬರುತ್ತಾರೆ. ಶವ ತೆಗೆದುಕೊಳ್ಳುವ ಸಮಯದಲ್ಲಿ ಅವರಿವರು ನಾಲ್ಕು ಕಾಸು ಖರ್ಚು ಮಾಡುತ್ತಾರೆ. ಅಂತೂ ಇಂತೂ ಶವವನ್ನು ನನ್ನೂರಿಗೆ ಸಾಗಿಸಿ ನನ್ನ ತಂದೆ ತಾಯಿಯರು ಅಳುತ್ತಾ ನನ್ನ ಶವ ಸಂಸ್ಕಾರವನ್ನು ಮುಗಿಸುತ್ತಾರೆ. ಮುಗಿದ ಮೇಲೆ ಮನೆಯಲ್ಲಿದ್ದ ನೆಂಟರು, ಬಂಧು ಭಾಂಧವರು, ನಮ್ಮಪ್ಪನನ್ನು ವಿಚಾರಿಸುತ್ತಾ ಹೋಗುತ್ತಾರೆ. ಯಾವುದಾದರೂ ಎಲ್..ಸಿ ಇತ್ತಾ? ಬೇರೆ ಏನಾದರೂ ಇನ್ಸುರೆನ್ಸ್ ಮಾಡಿಸಿದ್ದನಾ? ಆಸ್ಪತ್ರೆಯಲ್ಲಿ ಹೆಚ್ಚು ಖರ್ಚು ಆಯ್ತಾ? ಅವರ ಆಫೀಸಿನವರು ಯಾರಾದರೂ ಬಂದಿದ್ದರಾ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಬೀಳುತ್ತವೆ. ನಮ್ಮಪ್ಪನಿಗೆ ಏನು ಹೇಳಬೇಕು, ಏನು ಮಾತನಾಡುವುದು ಏನು ತೋಚುವುದಿಲ್ಲ. ಆಸ್ಪತ್ರೆಯಲ್ಲಿ ಖರ್ಚು ಏನೂ ಆಗಲಿಲ್ಲ, ಆಸ್ಪತ್ರೆಗೆ ತರುವ ಮುಂಚೆಯೇ ಜೀವ ಹೋಗಿತ್ತಂತೆ, ಅವನ ಸ್ನೇಹಿತರು ಎಲ್ಲವನ್ನೂ ನೋಡಿಕೊಂಡು ಇಲ್ಲಿಗೆ ತಂದಿದ್ದಾರೆ, ಒಳ್ಳೆಯ ಹುಡುಗರು ಅವರು ಇದ್ದಿದ್ದಕ್ಕೇ ಆಯ್ತು, ಇಲ್ಲ ಅಂದಿದ್ದರೇ ಕಷ್ಟ ಆಗುತ್ತಿತ್ತು ಅಂತಾ ಕಣ್ಣು ಒರೆಸಿಕೊಳ್ಳುತ್ತಾರೆ.

ಬಂದಿದ್ದವರು ಸುಮ್ಮನಿರುವುದಿಲ್ಲವಲ್ಲ, ನಮ್ಮವರೆಲ್ಲರೂ ಅಷ್ಟೇ ಗಮನಿಸಿ ನೋಡಿ, ಬಹಳ ವ್ಯಾವಹಾರಿಕವಾಗಿ ಮಾತನಾಡುತ್ತಾರೆ. ಆಗಬೇಕಿರುವುದೇನು, ಯಾವುದು ಮುಖ್ಯ ಅದನ್ನೇ ಹೆಚ್ಚು ಚರ್ಚಿಸುತ್ತಾರೆ. ಸತ್ತು ಹೋದವನ ತಿಕ ಅತ್ತಲೋ ಇತ್ತಲೋ ಎಂಬುದೊಂದು ಗಾದೆ ಮಾತು. ಸತ್ತ ಮೇಲೆ ಅವನ ಬಗ್ಗೆ ಯೋಚಿಸಿ ಏನೂ ಬರುವುದಿಲ್ಲ. ಮಾಡುವುದರ ಬಗ್ಗೆ ಯೋಚಿಸಬೇಕು. ಏನಾದರೂ ಚೀಟೀ ಗೀಟೀ ಹಾಕಿದ್ದನಾ ನೋಡಬೇಕಿತ್ತು, ಬ್ಯಾಂಕಿನಲ್ಲಿ ಏನಾದರೂ ಇಟ್ಟಿದ್ದಾನಾ ನೋಡಬೇಕಿತ್ತು ಎನ್ನುತ್ತಾರೆ. ನನ್ನ ಅನೇಕಾ ಸ್ನೇಹಿತರಿಗೆ ಕೋಪ ಬರುತ್ತದೆ. ಅವನು ಸತ್ತಿದ್ದಾನೆ, ಪಾಪ ಅವರಿಗೆ ಸಮಾಧಾನ ಮಾಡುವುದನ್ನು ಬಿಟ್ಟು ದುಡ್ಡಿನ ಬಗ್ಗೆ ಮಾತನಾಡ್ತಾರಲ್ಲ ಎನ್ನುತ್ತಾರೆ. ಆದರೇ ಅದು ಆ ಕ್ಷಣದ ಅನಿವಾರ್ಯತೆಯೆಂಬುದು ಹುಡುಗರಿಗೆ ಅರಿವಾಗುವುದಿಲ್ಲ. ಅವರು ಮುಂದುವರೆಸುತ್ತಾರೆ, ಆಫೀಸಿನವರು ಯಾರು ಬಂದಿರಲಿಲ್ಲವೇ? ಆಫೀಸಿನಲ್ಲಿ ಕೇಳಬೇಕಿತ್ತು. ಅವರು ಮಾಡಿಸಿರ‍್ತಾರೆ, ನಮ್ಮ ಬೆಮ್ಮತ್ತಿ ಸುಜಾತನ ಮಗ ಸತ್ತಾಗ ನೋಡ್ಲಿಲ್ವಾ ಹತ್ತು ಲಕ್ಷ ಬಂತಂತೆ, ನಮ್ಮ ಅಣ್ಣಯ್ಯಣ್ಣನ ಗಿರಿಜೆ ಗಂಡ ಸತ್ತಾಗಲೂ ಅಲ್ವಾ ಮೂರು ಲಕ್ಷ ಕೊಟ್ಟರು. ಆಫೀಸಲ್ಲಿ ಪೋಲಿಸು ಕೇಸು ಗೀಸು ಅಂತಾ ಹೆದರ‍್ಕೊಂಡು ಕೊಡ್ತಾರೆ. ಅದಕ್ಕೆ ಪಕ್ಕದ್ದಲ್ಲಿದ್ದವನು, ಇಲ್ಲಾ ಆಕ್ಸಿಡೆಂಟ್ ಗೆಲ್ಲಾ ಕೊಡಕ್ಕಿಲ್ಲ. ಅದಕ್ಕೆ ಆ ಲಾರಿಯವನ ಹತ್ತಿರ ಏನಾದರೂ ಸಿಕ್ಕಿದರೇ ಅಷ್ಟೇ, ಇಲ್ಲಂದ್ರೇ ಕೇಸು ನಡೆಸ್ಕೊಬಹುದು.

ಅದರ ಮಧ್ಯೆ ನಮ್ಮಜ್ಜಿ ಬಂದು ಹೇಳ್ತಾರೆ. ಅಯ್ಯೋ ಬಿಡಿ ಅವನೇ ಇಲ್ಲಾ ಅಂದಮೇಲೆ ದುಡ್ಡು ತಗೊಂಡು ಏನು ಮಾಡೋದು. ಸಂಬಳ ಕಮ್ಮಿ ಅಂತಾ ಪರದಾಡ್ತಾ ಇದ್ದ. ಅದರಲ್ಲೂ ಅಲ್ಲಿ ಇಲ್ಲಿ ಸ್ವಲ್ಪ ಉಳಿಸಿದ್ದರಲ್ಲೇ, ಟಿವಿ, ಫ಼್ರ‍ಿಡ್ಜ್, ವಾಷಿಂಗ್ ಮೆಷಿನ್ ಏನೇನೋ ತಂದ. ಕಳೆದ ಸಲ ಬಂದಾಗಲೂ ಅದೇ ಹೇಳ್ತಾ ಇದ್ದ, ಅವ್ವಾ ಸಂಬಳ ಸಾಲದಿಲ್ಲ, ಈಗ ಮದುವೆ ಮಾಡ್ಕೊಂಡು ಸಂಸಾರ ಮಾಡೋಕೆ ಆಗುತ್ತಾ? ನೀನೇ ಅರ್ಥ ಮಾಡಿಕೋ? ಮದುವೆ ಆಗೋಕೆ ಇಲ್ಲಾ ಅಂದ್ರು ಐದು ಲಕ್ಷ ಬೇಕು, ಬ್ಯಾಂಕಲ್ಲಿ ಐವತ್ತು ಸಾವಿರ ಇಲ್ಲ ಏನು ಮಾಡಲೀ ಅಂದ. ಐದು ಲಕ್ಷ ಯಾಕೆ ಮದುವೆಗೆ ಅಂದಿದ್ದಕ್ಕೆ, ಅಯ್ಯೋ ಬೀಗರ ಊಟಕ್ಕೆ ಬೇಕಲ್ಲವಾ, ಹತ್ತು ಕ್ವಿಂಟಲ್ ಮಟನ್ ಅಂದ್ರೂ ಮೂರು ಲಕ್ಷ, ಇನ್ನೂ ಬಟ್ಟೇ ಬರೇ ಅಂದ್ರೇ? ಹದಿನೇಳು ಜನ ಅಜ್ಜಿಯಂದಿರು, ಅವರ ಮಕ್ಕಳು, ಮೊಮ್ಮಕ್ಕಳು, ಊರಿನವರು, ಅಪ್ಪನ ಕಡೆಯವರು ಕಮ್ಮಿ ಜನನಾ? ಎಂದಿದ್ದ. ಎಂದರು. ಬ್ಯಾಂಕಲ್ಲೂ ಏನು ದುಡ್ಡು ಇಟ್ಟಿಲ್ಲ ಬಿಡಿ.

ಅದೇ ಸಮಯಕ್ಕೇ ಬೆಂಗಳೂರಿನಿಂದ ಬಂದಿದ್ದ ಕೆಲವು ಹುಡುಗರು ಹೊರಡಲು ತಯರಾಗುತ್ತಾರೆ, ಬರ್ತೀವಿ ಅಂಕಲ್ ಆಗಿದ್ದು ಆಯ್ತು ಏನೂ ಮಾಡೋಕೆ ಆಗಲ್ಲವೆನ್ನುತ್ತಾರೆ. ಅಲ್ಲಿದ್ದ ಬಹಳ ಸ್ನೇಹಿತರು ಹೊರಡುತ್ತಾರೆ. ಅವರನ್ನು ನೋಡಿದ ನಮ್ಮಜ್ಜಿ ಮತ್ತು ಕೆಲವರು ಪಾಪಾ ಈ ಹುಡುಗರು ಬಹಳ ಕಷ್ಟ ಪಟ್ಟಿದ್ದಾರೆ. ಅಲ್ಲಿಂದ ಅವರಿಲ್ಲ ಅಂದ್ರೇ ಕಷ್ಟ ಆಗ್ತಿತ್ತು ಎಂದರು. ಅಲ್ಲಿದ್ದ ಯಾರೋ ಕೇಳಿದರು ನೀವು ಅವನ ಜೊತೆ ಕೆಲಸ ಮಾಡ್ತೀರೇನಪ್ಪಾ? ಹುಡುಗರು, ಇಲ್ಲಾ ನಾವು ಜೊತೆಯಲ್ಲಿ ಓದಿದವರು ಎಂದರು. ಅವರು ಮಾತು ಮುಂದುವರೆಸುತ್ತಾ, ನೋಡ್ರಪ್ಪಾ, ಅವನು ಕೆಲಸ ಮಾಡ್ತ ಇದ್ದ ಜಾಗಕ್ಕೆ ಸ್ವಲ್ಪ ಹೋಗಿ ಮಾತಾಡಿ. ದುಡ್ಡಿನ ಆಸೆಗೆ ಅಂತಾ ಅಲ್ಲ, ಅಪ್ಪ ಅಮ್ಮ ಇಬ್ಬರೂ ವಯಸ್ಸಾಗಿದ್ದಾರೆ, ಅವರಿಗೂ ರಿಟೈರ್ಡ್ ಆಗಿದೆ. ಪಾಪಾ ಏನು ಮಾಡ್ತಾರೆ ಮುಂದಕ್ಕೆ ಅಲ್ವಾ? ವಯಸ್ಸಿಗೆ ಬಂದ ಮಕ್ಕಳು ಹೋದರೇ ಬದುಕೋಕೆ ಆಗುತ್ತಾ? ಒಬ್ಬನೇ ಮಗಾ ಬೇರೆ, ಜೊತೆಯಲ್ಲಿ ಯಾರಾದರೂ ಇದ್ದಿದ್ದರೇ ನೋಡ್ಕೊತಾ ಇದ್ರು ಈಗ ಯಾರು ನೋಡ್ಕೊತಾರೆ ಅಲ್ವಾ? ನಾವೇನು ಇಲ್ಲೇ ಇರೋಕೆ ಆಗುತ್ತಾ. ಸ್ವಲ್ಪ ಆಫಿಸಿನವರ ಜೊತೆ ಮಾತಾಡೀ.

ನಮ್ಮಪ್ಪನನ್ನು ನೋಡಿ, ಅದ್ಯಾರೋ ಪ್ರೋಫೆಸರು, ಸಿ.ಎಂ. ಜೊತೆ ಇದಾರೆ ಅಂತೀದ್ರಲ್ಲಾ ಗೌಡ್ರೇ ಅಂದರು. ಹೂಂ ಕೆ.ವಿ..ರಾಜು ಅಂತಾ ಅವರ ಬಗ್ಗೆ ಆಗ್ಗಾಗ್ಗೆ ಹೇಳ್ತಾನೇ ಇದ್ದ, ಅವರಿಂದಾನೇ ಅಲ್ಲಿಗೆ ಸೇರ್ಕೊಂಡಿದ್ದು, ಅಲ್ಲಿಲ್ಲ ಅಂದಿದ್ರೇ, ಚೆನ್ನಾಗಿಯೇ ಇರ‍್ತಿದ್ದ ಎಂದರು. ಪಕ್ಕದ್ದಲ್ಲಿದ್ದ ವಿಜಿ ಮತ್ತು ನಂದ ನಗಲಾರದೇ ಇದ್ದರೂ ಅವರೆಲ್ಲಾ ಗಿತ್ತೋದೋರು, ಅವರೆಲ್ಲಾ ಎಲ್ಲಿ ಸಹಾಯ ಮಾಡ್ತಾರೆ, ಕೆಲಸ ಮಾಡಿಸಿಕೊಳ್ಳುವುದಕ್ಕೆ ಮಾತ್ರ ಎಂದರು. ಆದರೂ, ಅಲ್ಲಿ ಕೇಳಬಹುದಲ್ವಾ, ಅವರ ಆಫರ್ ಲೆಟ್ಟರ್ ಅಲ್ಲಿ ಇರುತ್ತೇ, ಎಲ್ಲಾ ಕಂಡಿಷನ್ಸ್, ಕವರೇಜ್ ಇರುತ್ತೆ, ಹೀಗೆ ಎಲ್ಲವನ್ನು ಚರ್ಚಿಸತೊಡಗಿದರು. ಅವನ ಆಫರ್ ಲೆಟ್ಟರ್ ಎಲ್ಲಿದೆ ಹುಡುಕಿ, ನೋಡೋಣ, ಅವನ ಲ್ಯಾಪ್ ಟಾಪ್ ನಲ್ಲಿ ಇರುತ್ತೇ ನೋಡಿದರೇ ಸಿಗಬಹುದು ಎಂದು ಹುಡುಕಿದರು. ಆಫರ್ ಲೆಟ್ಟರ್ ಅನ್ನೋ ಸುದ್ದಿನೇ ಇರಲಿಲ್ಲ. ಅಲ್ಲಿಂದ ಬಂದು ಡೆವಲಪ್ ಫೌಂಡೇಶನ್ ನಲ್ಲಿ ವಿಚಾರಿಸಿದರು. ಇಲ್ಲಿ ಚರ್ಚಿಸಿದ ಮೇಲೆ ತಿಳಿದು ಬಂದ ವಿಷಯವೇನೆಂದರೇ, ಹರೀಶನಿಗೆ ಆಫರ್ ಲೆಟ್ಟರ್ ಕೊಟ್ಟಿಲ್ಲ, ಅವನು ಕಾನೂನು ಪ್ರಕಾರ ನೋಡಿದರೇ ಇಲ್ಲಿ ಕೆಲಸ ಮಾಡುತ್ತಿದ್ದ ಎನ್ನುವುದಕ್ಕೆ ಯಾವುದೇ ಸಾಕ್ಷಿಯಿಲ್ಲ, ತಿಂಗಳು ತಿಂಗಳು ಸಂಬಳ ತೆಗೆದುಕೊಂಡಿಲ್ಲವೇ? ನೀವು ಸಂಬಳಕೊಟ್ಟಿದ್ದೀರಾ ಎಂದು ಕೇಳಿದರೇ, ಅದು ಗ್ಲೋಬಲ್ ಎಡ್ಜ್ ನಿಂದ ಕೊಟ್ಟಿರುವುದು, ಅಲ್ಲಿ ನಮೂದಿಸಿರುವುದು ಕನ್ಸಲ್ಟೆಂಟ್ ಕೆಲಸಕ್ಕಾಗಿ, ಅಂದರೇ ಅದು ಖಾಯಂ ಕೆಲಸವೂ ಅಲ್ಲಾ, ಅದಕ್ಕಾಗಿ ಅವನು ದಿನ ನಿತ್ಯ ಕೆಲಸಕ್ಕೆ ಬರುತ್ತಿದನೆಂಬುದಕ್ಕೆ ಸಾಕ್ಷಿಯೂ ಇಲ್ಲ.

ಇದೆಲ್ಲವನ್ನೂ ಕೇಳಿದ ನನ್ನ ಸ್ನೇಹಿತರು, ಹೇಳಿದರು, ಹೌದು ಮಗಾ, ಎಲ್ಲರೂ ಇರುವಾಗ ಮಾತ್ರ. ನಾವು ಚೆನ್ನಾಗಿರುವಾಗ ಎಲ್ಲರೂ ಇರ‍್ತಾರೆ. ನೋಡು, ಹರೀಶ ಹೇಳ್ತಾ ಇದ್ದ, ಕೆವಿರಾಜು ಹಾಗೆ, ಕುಮಾರ್ ಹೀಗೆ, ಭಾರತ ಅಧೋಗತಿಗೆ ಇಳಿದಿದೆ, ಡೆವಲಪ್ ಮೆಂಟ್ ಫೌಂಡೇಶನ್ ಇಂದ ಒಳ್ಳೇ ಸಂಶೋಧನೆ ಮಾಡಿ ಹಾಗೆ ಮಾಡ್ತಿನಿ ಹೀಗೆ ಮಾಡ್ತಿನಿ, ನಮ್ಮ ನೀತಿ ನಿಯಮ ಆದರ್ಶ ಇಟ್ಟು ಬದುಕಬೇಕು. ನಮ್ಮ ಜನಕ್ಕೆ ಏನು ಬೇಕು ಅನ್ನೋದನ್ನು ತಿಳ್ಕೊಂಡು ಅವರಿಗೆ ಅದನ್ನು ಕೊಡಬೇಕು. ಏನೇನೋ ಹೇಳ್ತಾ ಇದ್ದ, ಈಗ, ಅವರ ಅಪ್ಪ ಅಮ್ಮನಿಗೆ ನಾಲ್ಕು ಕಾಸು ಕೊಡೋಕೂ ತಯಾರಿಲ್ಲ ಇವರ ಆಫೀಸು. ದುಡಿಯೋ ಸಮಯದಲ್ಲಿ, ಬೆಳ್ಳಿಗ್ಗೆ ಒಂಬತ್ತರಿಂದ ರಾತ್ರಿ ಒಂಬ್ಬತ್ತರ ತನಕ ದುಡಿದಿದ್ದಾನೆ. ಈಗ ನೋಡಿದರೇ ಅವನು ದುಡಿದಿರೋದಕ್ಕೆ ತಿಂಗಳು ತಿಂಗಳು ಸಂಬಳ ಕೊಟ್ಟಿದ್ದೀವಿ ಬಿಡೀ. ಎನ್ನುತ್ತಾರೆ. ಡೆವಲಪ್ ಮೆಂಟ್ ಫೌಂಡೇಶನಿನಲ್ಲಿಯೇ ದುಡ್ಡಿಲ್ಲ ಇನ್ನೂ ನಾವು ಅವನಿಗೆ ಕೋಡೋದು ಎಲ್ಲಿಂದ ಎನ್ನುತ್ತಾರೆ. ನೋಡೋಣ ಸರ್ಕಾರದಿಂದ ಏನಾದರೂ ಕೋಡಿಸೋಕೆ ಆಗುತ್ತಾ ಎನ್ನುತ್ತಾರೆ. ಸರ್ಕಾರದಿಂದ ದುಡ್ಡೂ ಬರೋ ಅಷ್ಟೋತ್ತಿಗೆ ಇವರ ಸರ್ಕಾರ ಇರುತ್ತಾ ಮಗಾ?

ಕಡಿಮೆ ಸಂಬಳ ಸಿಕ್ಕಿದರೂ ಸರ್ಕಾರಿ ಕೆಲಸ ಉತ್ತಮ್ಮ ಅಂತಾ ಅವರಪ್ಪ ಹೇಳ್ತಾ ಇದ್ದಿದ್ದು ಸರಿನೇ ಆಯ್ತಲ್ವಾ? ಕೆಲಸ ಏನು ಮಾಡ್ತೀವಿ ಅನ್ನುವಷ್ಟೇ ಮುಖ್ಯ ಎಲ್ಲಿ ಮಾಡ್ತೀವಿ ಯಾರ ಜೊತೆ ಮಾಡ್ತೀವಿ ಅನ್ನೋದು ಕೂಡ ಕನೋ ಎಂದರು. ನೋಡು ಗಾರ್ಮೇಂಟ್ಸ್ ಅಲ್ಲಿ ಕೆಲಸ ಮಾಡುವವರನ್ನ ನೋಡು, ಬರೋದು ಐದು ಸಾವಿರ ಸಂಬಳ ಹೇಗೆ ಇರ‍್ತಾರೆ, ಅವರ ಹತ್ತಿರ ಹೇಗೆ ಹೋದರೂ ಐವತ್ತು ಸಾವಿರ ದುಡ್ಡಿರುತ್ತೇ ಕನೋ. ಅವರ ಸಂಬಳದ ಹತ್ತು ಪಟ್ಟು, ನಾವು ನಮ್ಮ ಸಂಬಳದ ಹತ್ತು ಪಟ್ಟು ಸಾಲ ಮಾಡಿರ್ತಿವಿ. ಅವರು ನೋಡು ಪ್ರತಿಯೊಬ್ಬರೂ ಯಾವ್ದೋ ಒಂದು ಇನ್ಸುರೆನ್ಸ್ ಮಾಡಿಸಿರ‍್ತಾರೆ. ಇವನು ಒಂದು ಇನ್ಸುರೆನ್ಸ್ ಮಾಡಿಸಿಲ್ವಲ್ಲೋ. ಫ್ಯಾಕ್ಟರಿಲೀ ಕೆಲಸ ಮಾಡುವಾಗ ಸತ್ತರೂ ಅವರು ಎರಡು ಲಕ್ಷ ಆದರೂ ಕೊಡ್ತಾರೆ ಆದರೇ ಈ ನನ್ಮಕ್ಳು ನಾಲ್ಕು ಕಾಸು ಬಿಚ್ಚಿಲಿಲ್ಲವಲ್ಲೋ? atleast ಅವನ ಶವ ನೋಡೋಕೆ ಬರಬಹುದಿತ್ತು ಅಲ್ವಾ? ಅದಕ್ಕೇ ಮಗಾ ಜನ ಜಾಸ್ತಿ ಓದಿದವರು, ದೇಶ ಉದ್ದಾರ ಮಾಡ್ತೀನಿ ಅಂತಾ ಹೋಗೋರು ಸಾಮಾನ್ಯ ಮನುಷ್ಯರ ಭಾವನೆಗೆ ಬೆಲೆ ಕೊಡಲ್ಲ, ಅವರಿಗೆ ದೊಡ್ಡೋರು ಮಾತ್ರ ಕಣ್ಣಿಗೆ ಕಾಣ್ತಾರೆ, ಸಣ್ಣವರು ಕಾಣಲ್ಲ. ಅವರು ಮಾತನಾಡುತ್ತಿರುವಾಗಲೇ ನನ್ನ ಕಣ್ಣಲ್ಲಿ ನೀರು ಬಂದಿದ್ದು. ನಾವು ನಮ್ಮ ಮನೆಯವರ ನೆಮ್ಮದಿಗೆ ಕನಸು ಕಾಣುವುದನ್ನು ಬಿಟ್ಟು ದೇಶದ ಬಗ್ಗೆ ಕಂಡರೇ ಅರ್ಥವಿರುವುದಿಲ್ಲ, ಆದ್ದರಿಂದ ನಾನು ಡೆವಲಪ್ ಮೆಂಟ್ ಫೌಂಡೇಶನ್ ಕೆಲಸ ಬಿಟ್ಟು, ನೆಮ್ಮದಿಯ ಬದುಕನ್ನು ಕಟ್ಟಿಕೊಡುವ ಸಂಸ್ಥೆಗೆ ಸೇರಲು ನಿರ್ಧರಿಸಿದ್ದೇನೆ.

12 ಜೂನ್ 2012

ನಿನ್ನಯ ಅರ್ಥಪೂರ್ಣ ಬದುಕಿಗೆ ನನ್ನ ಅರ್ಥ ಪೂರ್ಣ ಶುಭಕಾಮನೆಗಳು...!!!

ನಾನು ಏನನ್ನೋ ಬರೆಯುತ್ತಿದ್ದವನು ದಿಡೀರನೇ, ಫೇಸ್ ಬುಕ್ ನೋಡಿದೆ, ಅಲ್ಲಿ ಮಂಜೇಸ್ ಹುಟ್ಟಿದ ದಿನವನ್ನು ತೋರಿಸುತ್ತಿತ್ತು. ಹದಿನೈದು ದಿನಗಳ ಹಿಂದೆ ನೆನಪು ಮಾಡಿಕೊಂಡಿದ್ದೇ, ನಾನು ಮಂಜೇಶ್ ಮತ್ತು ಅಭಿನಂದನ್ ಗೆ ತಪ್ಪದೇ ಶುಭಾಷಯಕೋರಬೇಕೆಂದು ಆದರೇ, ಬಹಳ ತಡವಾದೆ. ಇದು ಮೊದಲನೆಯ ಬಾರಿಯಲ್ಲ. ಜನ್ಮ ದಿನದಂದು ಶುಭಾಷಯ ಕೋರಲಿಲ್ಲವೆಂದು ಬಹಳಷ್ಟು ಜನರ ಜೊತೆಗೆ ಜಗಳಮಾಡಿಕೊಂಡಿದ್ದೇನೆ. ಮೊನ್ನೆಯೂ ಅದೇ ರೀತಿಯ ಘಟನೆ ನಡೆಯಿತು. ಜೂನ್ ಒಂದನೇಯ ತಾರಿಖಿನಂದು ನಮ್ಮೂರ ಹಬ್ಬವಿತ್ತು. ಊರಿನಲ್ಲಿ ಹುಡುಗರೆಲ್ಲರೂ ಸೇರುವುದು, ನಂದ ಮತ್ತು ಕುಮಾರನ ಹುಟ್ಟಿದ ದಿನ ಜೂನ್ ಎರಡಾಗಿರುವುದರಿಂದ ಜೂನ್ ಒಂದರ ರಾತ್ರಿ ಅವರ ಜನ್ಮ ದಿನವನ್ನು ಆಚರಿಸೋಣವೆಂದು ನಂದ ಮತ್ತು ಕುಮಾರ ಇಬ್ಬರಿಗೂ ಹೇಳಿದ್ದೆ. ನಂದ ಆ ದಿನ ಬರಲಿಲ್ಲ, ಕುಮಾರ ಬಂದಿದ್ದ. ಕುಮಾರನ ಪಕ್ಕದಲ್ಲಿಯೇ ಕುಳಿತಿದ್ದೆ, ರಾತ್ರಿ. ಅದೇ ಸಮಯಕ್ಕೆ ನಂದನೂ ಫೋನ್ ಮಾಡಿದ್ದ. ಇಬ್ಬರಿಗೂ ಶುಭಾಷಯ ಕೋರಲಿಲ್ಲ. ಬೆಳ್ಳಿಗ್ಗೆ ಎದ್ದು ಬಹಳ ಬೇಸರವಾಯಿತು. ಜೊತೆಯಲ್ಲಿಯೇ ಕುಳಿತ್ತಿದ್ದರೂ ಅವರ ಜನುಮದಿನವನ್ನು ಆಚರಿಸಲಿಲ್ಲವಲ್ಲ. ಅದೂ ಹತ್ತು ಹನ್ನೆರಡು ಹುಡುಗರಿದ್ದರು. ಅವರೆಲ್ಲರೂ ಶುಭಕೋರಿದಿದ್ದರೇ ಎಂಥಹ ರೋಮಾಂಚನ ವಾತಾವರಣವನ್ನು ನಿರ್ಮಿಸಬಹುದಿತ್ತು. ಇದು ನನ್ನ ಬೇಜವಬ್ದಾರಿತನವೆನಿಸುತ್ತದೆ.
ಆದ್ದರಿಂದ ಇದೇ ಸಮಯವನ್ನು ಬಳಸಿಕೊಂಡು ಮಂಜೇಶನ ಬಗ್ಗೆ ನಾಲ್ಕು ಸಾಲುಗಳನ್ನು ಗೀಚುತ್ತೇನೆ. ಮಂಜೇಶನನ್ನು ನಾನು ಮೊದಲಿಗೆ ಕಂಡದ್ದು, ನನ್ನ ಪಿಯು ಬದುಕಿನ ಮೊದಲ ದಿನಗಳಲ್ಲಿ. ಅವನು ಅಂದಿಗೇ ಒಬ್ಬ ಬುದ್ದಿವಂತೆ ಮತ್ತು ಕೇವಲ ನನ್ನ ಕ್ಲಾಸ್ ಮೇಟ್. ನಾನು ಮೊದಲ ಸ್ವಲ್ಪ ದಿನಗಳು, ಮನೆಯಿಂದ ಬಾಕ್ಸ್ ತೆಗೆದುಕೊಂಡು ಹೋಗುತ್ತಿದ್ದೆ. ಸರ್ಕಾರಿ ಶಾಲಾ ಮೈದಾನದಲ್ಲಿ ಕುಳಿತು ಎಲ್ಲರೂ ಒಟ್ಟಿಗೆ ತಿಂಡಿ ತಿನ್ನುತ್ತಿದ್ದೆವು. ಬಾಕ್ಸ್ ತರುತ್ತಿದ್ದವರು ಮುಂದಿನ ಸಾಲಿನವರು, ಹೆಚ್ಚಿನ ಮಟ್ಟಿಗೆ ಗಾಂಧಿಗಳು ಎನ್ನಬಹುದು. ಅವರ ವಿರೋಧವೇನೇ ಇದ್ದರೂ ನಾನು ಅವರನ್ನು ಹಾಗೇಯೇ ಕರೆಯುತ್ತಿದ್ದೇನೆ. ನಿಮಗೆ ಬೇಸರವೆನಿಸಬಹುದು, ಆ ದಿನಗಳಲ್ಲಿ ನಾನು ಸ್ವಲ್ಪ ಮುಂದುವರೆದಿದ್ದೆ, ಅಂದರೇ, ಪ್ರಬುದ್ದತೆಯ ಕಡೆಗೆ ದಾಪುಗಾಲು ಹಾಕಿದ್ದೆ. ಪಿಯುಸಿಯಲ್ಲಿದ್ದಾಗ ನನ್ನೆಲ್ಲಾ ಯೋಚನೆಗಳು ಸಾಕಷ್ಟು ಮಟ್ಟಿಗೆ ಕುಡಿಯುವುದು, ಸೇದುವುದು, ಪಿಯುಸಿ ಫೇಲಾಗಿ ದುಡ್ಡು ಮಾಡುವುದರ ಬಗ್ಗೆಯೇ ಯೋಚಿಸುತ್ತಿದ್ದೆ. ಆಗ, ಊಟದಲ್ಲಿದ್ದ ಸಮಯದ್ದಲ್ಲಿ, ಬೆಳ್ಳಿಗ್ಗೆ ನಡೆದಿರುತ್ತಿದ್ದ ಎರಡು ಕ್ಲಾಸುಗಳ ಬಗ್ಗೆ, ಅಥವಾ ನಿನ್ನೆ ಲ್ಯಾಬಿನಲ್ಲಿ ನಡೆದಿರುವ ಘಟನೆಗಳ ಬಗ್ಗೆ, ಪ್ರಭದೇವ, ಪುರುಷೋತ್ತಮ ಹೇಳಿರುವ ಡೈಲಾಗುಗಳನ್ನು ಹಾಗೆಯೇ ಹೇಳುತ್ತಿದ್ದ ಒಬ್ಬ ವ್ಯಕ್ತಿಯೇ ಈ ಮಂಜೇಶ್ ಎಂಬುವನು. ಅವನು ಬಹಳ ಬುದ್ದಿವಂತ ಕನ್ನಡ ಮಾಧ್ಯಮದಿಂದ ಬಂದಿದ್ದರೂ ಬಹಳ ಶ್ರಮ ಹಾಕಿ ಓದುತ್ತಿದ್ದ, ಬಹಳ ಚುರುಕಾಗಿದ್ದ. ಅವನು ವಿಜ್ನಾನವಲ್ಲದೇ ಕಲಾ ವಿಭಾಗಕ್ಕೆ ಸೇರಿದಿದ್ದರೇ ನಿಜಕ್ಕೂ ಐಎಎಸ್ ಮಾಡುತ್ತಿದ್ದನೆಂಬುದು ನನ್ನ ಅಭಿಪ್ರಾಯ. ಪಿಯುಸಿಯಲ್ಲಿ ಆಗೊಮ್ಮೆ ಈಗೊಮ್ಮೆ ನಮ್ಮ ರೂಟಿನ ಬಸ್ಸಿನಲ್ಲಿ ಬರುತ್ತಿದ್ದ. ಇಲ್ಲದಿದ್ದರೇ ಅವನು ಸೋಮವಾರಪೇಟೆಯ ಬಸ್ಸಿನಲ್ಲಿ ಹೋಗುತ್ತಿದ್ದ.
ನನಗೂ ಓದುವ ಹುಡುಗರಿಗೂ ಆಗಿಬರುತ್ತಿರಲಿಲ್ಲ. ಆದ್ದರಿಂದ ನಾನು ಹೆಚ್ಚೇನೂ ಮಾತನಾಡಿಸುತ್ತಿರಲಿಲ್ಲ. ನಗು ಮುಖದಿಂದ ಅವನು ಎಲ್ಲರನ್ನು ಮಾತನಾಡಿಸಿದರು, ನಾನು ಅವನನ್ನು ಅಷ್ಟೇ ನಗು ಮುಖದಿಂದ ಮಾತನಾಡಿಸಿರುವುದು ಕಣ್ಣಿಗೆ ಸಿಗುತ್ತಿಲ್ಲ. ಎರಡನೆಯ ಪಿಯುಸಿಯ ಸಮಯದಲ್ಲಿ, ಟ್ಯೂಷನ್ನಿಗೆ ಹೋಗುವ ಸಮಯದಲ್ಲಿ, ಆಗ್ಗಾಗ್ಗೆ ಮಾತಿಗೆ ಸಿಗುತ್ತಿದ್ದ. ಅವನೊಂದಿಗೆ ನಮ್ಮ ಬ್ಯಾಚಿನ ಲ್ಯಾಬಿಗೆ ಬರುತ್ತಿದ್ದರಿಂದ, ಲ್ಯಾಬರೇಟರಿ, ರೆಕಾರ್ಡು, ನೋಟ್ಸ್ ಬಿಟ್ಟರೇ ಮತ್ತೇನೂ ಇರಲಿಲ್ಲ. ಅದೇ ಸಮಯಕ್ಕೆ ನನಗೆ ಬಿಂಧ್ಯಾ ಮತ್ತು ಸೌಮ್ಯಳ ಮೇಲೆ ನನಗೆ ತಿಳಿಯದ ಒಂದು ಶತ್ರುತ್ವ ಬೆಳೆದಿತ್ತು. ಮಂಜೇಶ ಅವರ ಜೊತೆಯಲ್ಲಿ ಚೆನ್ನಾಗಿದ್ದ ಕಾರಣ, ಮಂಜೇಶ, ವಿನೇಶನನ್ನು ಮಾತನಾಡಿಸುವುದನ್ನು ಕಡಿಮೆ ಮಾಡಿದ್ದೆ. ಮನುಷ್ಯನ ಸ್ವಭಾವವೇ ಹಾಗೆ, ನಾವು ಇಷ್ಟಪಟ್ಟವರು ಹೇಗಿದ್ದರೂ ಒಪ್ಪಿಕೊಳ್ಳುತ್ತೇವೆ, ಇಷ್ಟವಿಲ್ಲದೇ ಇದ್ದರೇ ಅಮೃತವೂ ಪಾಶಾನದಂತೆನಿಸುತ್ತದೆ. ಅದಾದ ಮೇಲೆ ಅವನನ್ನು ಒಂದು ದಿನ ಮೈಸೂರಿನಲ್ಲಿ ಕಂಡಿದ್ದೆ. ರಾಮಸ್ವಾಮಿ ಸರ್ಕಲ್ ನಿಂದ ಕೆಳಕ್ಕೆ ನಡೆದುಬರುವಾಗ ಸಿಕ್ಕಿದ್ದ, ಬಿಎಡ್ ಮಾಡುತ್ತಿದ್ದೇನೆಂದು ಹೇಳಿದ ನೆನಪನ್ನು ಬಿಟ್ಟರೇ ಮತ್ತಾವ ನಂಟು ಉಳಿದಿರಲಿಲ್ಲ.
ಇದಾದ ಬಹಳ ವರ್ಷಗಳ ತರುವಾತ ನಮ್ಮ ಭೇಟಿಯಾದದ್ದು, 2007ರಲ್ಲಿ. ಆ ಸಮಯದಲ್ಲಿ ನಮ್ಮೆಲ್ಲಾ ಪಿಯುಸಿ ಹುಡುಗರನ್ನು ಮತ್ತೆ ಸೇರಿಸಲು ಪ್ರಯತ್ನಿಸತೊಡಗಿದೆವು. ನನಗಿಂದಿಗೂ ನೆನಪಿದೆ, ಆ ದಿನಗಳು ನನಗೆ ಬಹಳ ಮುದ ನೀಡಿದ ಕ್ಷಣಗಳು. ನಾನು ನಂದಗೋಪಾಲ, ಬಿಸಿಲೆ ಘಾಟಿನಲ್ಲಿ ನಿಂತಿದ್ದೇವು, ಅಲ್ಲಿಗೆ ಒಂದು ಐದಾರು ಹುಡುಗರು ಕೂಗಾಡುತ್ತ ಬಂದರು. ಅವರು ಬರುವುದನ್ನು ಕಂಡು ನಾನು ನಂದನಿಗೆ ಹೇಳಿದೆ, ಇಂಥಹ ರೋಮಾಂಚಕ ಸ್ಥಳ ದರಿದ್ರ ಜನರು ನೆಮ್ಮದಿಯಾಗಿ ನಿಲ್ಲುವುದಕ್ಕೂ ಬಿಡುವುದಿಲ್ಲವೆಂದು. ಅಲ್ಲಿಂದ ಹೊರಡುವಾಗ ಒಬ್ಬನನ್ನು ಕಂಡೆ, ಎಲ್ಲೋ ಕಂಡ ನೆನಪು, ವಿಜಯ್ ಕುಮಾರ್ ಎಂದೆ. ಅವನೇ, ನಮ್ಮ ಬಜಾರ್ ಭೀಮಾ, ವಿಜಯ್ ಕುಮಾರ. ಅದಾದ ಸ್ವಲ್ಪ ದಿನದಲ್ಲಿಯೇ ಎಲ್ಲರೂ ಒಬ್ಬರಾದ ಮೇಲೊಬ್ಬರಂತೆ ಸಿಕ್ಕಿದರು. ನೇರವಾಗಿಯಲ್ಲದೇ ಇದ್ದರೂ, ಫೋನಿನಲ್ಲಿ ಮಾತನಾಡತೊಡಗಿದೆವು. ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಸೇರಿದೆವು ಕೂಡ. ಅದಕ್ಕೂ ಮುಂಚೆ, ಒಮ್ಮೆ ಊರಿಗೆ ಹೋಗಿದ್ದಾಗ ಮಂಜೇಶನಿಗೆ ಫೋನ್ ಮಾಡಿ ಊರಿಗೆ ಬರುವಂತೆ ಹೇಳಿದೆ. ಅವನಿಗೆ ನಮ್ಮೂರ ದಾರಿ ತಿಳಿದಿರಲಿಲ್ಲ, ಆದ್ದರಿಂದ ಶಿರಂಗಾಲ ದಾಟಿ ಮುಂದಕ್ಕೆ ಬರುತ್ತಿರು, ನಾನು ಬರುತ್ತೇನೆಂದು ಹೇಳಿ ಹೊರಟೆ. ನಾನು ಗಾಡಿಯಲ್ಲಿ ಹೋಗುತ್ತಿರುವಾಗ, ಯಾರೋ ಒಬ್ಬ ಆ ಕಡೆಯಿಂದ ಸುಜ಼ುಕಿ ಸಮುರಾಯಿಯಲ್ಲಿ ಬರಲೋ ಬೇಡವೋ ಎನ್ನುವ ವೇಗದಲ್ಲಿ ಬರುತ್ತಿದ್ದ. ಜೊತೆಯಲ್ಲೊಂದು ಬ್ಯಾಗು, ಬೆಂಗಳೂರಿನಲ್ಲಿಯಾದರೇ ಸೇಲ್ಸ್ ಎ಼ಕ್ಸಿಕುಟಿವ್ ಅಲ್ಲಿಯಾದರೇ ಒಂದು ಸ್ಕೂಲ್ ಮಾಸ್ಟರು ಅಥವಾ ಎಲ್ ಐಸಿಯವನು. ಇವನು ಮುಂದಕ್ಕೆ ಹೋದಮೇಲೆ ನೆನಪಾಯಿತು, ಅಯ್ಯೋ ಇದು ನಮ್ಮ ಮಂಜೇಶ ಎಂದು. ಅಂದು ಜೊತಯಲ್ಲಿ ಕುಳಿತು ಸಿಗರೇಟು ಸೇದಿದೆವು. ಅವನ ಇತಿಹಾಸವನ್ನೆಲ್ಲ ಹೇಳಿದ, ಅವನು ಚಿಂತನೆ ಮಾಡುವ ರೀತಿ ಬಹಳ ಮೆಚ್ಚುಗೆಯಾಯಿತು.
ವಿಚಿತ್ರವೆಂದರೇ ಅವನು ನನಗಿಂತ ನಮ್ಮಪ್ಪನಿಗೆ ಒಳ್ಳೆಯ ಸ್ನೇಹಿತನಾದ. ಅವರಿಬ್ಬರ ಆಲೋಚನ ಕ್ರಮಗಳು ಒಂದೇ ರಿತಿಯದ್ದಾಗಿದೆ. ನಮ್ಮಪ್ಪನಿಗೆ ಸರ್ಕಾರಿ ಕೆಲಸವೆಂದರೇ ಪ್ರಾಣ. ಸರ್ಕಾರಿ ಕೆಲಸದಲ್ಲಿರುವವರು ಬಹುಬೇಗ ಸ್ನೇಹಿತರಾಗುತ್ತಾರೆ. ಅದಕ್ಕೋ ಏನೋ ಅವರಿಬ್ಬರು ಒಳ್ಳೆಯ ಸ್ನೇಹಿತರಾದರು. ಇನ್ನೊಂದು ವಿಚಿತ್ರವೆಂದರೇ, ಮಂಜೆಶನ ತಂದೆ ಯೋಚಿಸುವುದು ನನ್ನ ರೀತಿಯಲ್ಲಿ. ಅವರು ಅದ್ಬುತಾ ಸ್ನೇಹಿತರಾಗುವ ಗುಣಗಳನ್ನು ಹೊಂದಿದ್ದಾರೆ. ಅದಾದ ಮೇಲೆ ನನ್ನ ಹಲವಾರು ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾನೆ, ಸಹಾಯ ಮಾಡಿದ್ದಾನೆ. ಹಣಕಾಸಿನಲ್ಲಿಯೂ ಸಹಾಯ ಮಾಡಿದ್ದಾನೆ. ನಾನು ಅವರ ಮನೆಯಲ್ಲಿ ಬಹಳ ದಿನ ಉಳಿದಿದ್ದೇನೆ, ಅಥಿತಿ ಸತ್ಕಾರವೆಂದರೇ ನಿಜಕ್ಕೂ ಅದು. ಅದೆಷ್ಟು ಪ್ರೀತಿಯಿಂದ ಕಾಣುತ್ತಾರೆಂದರೇ ನೀವು ಅನುಭವಿಸಿಯೇ ತೀರಬೇಕು. ಅವನ ಬಗ್ಗೆ ನನಗಿಂತ ವಿಜಿಗೆ ಬಹಳ ಹೆಮ್ಮೆ. ಅವನು ಹೇಳುತ್ತಿರುತ್ತಾನೆ, ಮಂಜೇಶನದ್ದು ಬಹಳ ಅಚ್ಚುಕಟ್ಟಿನ ಬದುಕು, ಚೆನ್ನಾಗಿ ಕಟ್ಟಿಕೊಂಡಿದ್ದಾನೆ. ಸ್ವಲ್ಪವೂ ಏರು ಪೇರಾಗದಂತೆ ಬಹಳ ಎಚ್ಚರಿಕೆ ವಹಿಸುತ್ತಾನೆಂದು. ನನ್ನದು ತದ್ವಿರುದ್ದ ಜೀವನ ಶೈಲಿಯಾಗಿರುವುದರಿಂದ ನಾನು ಒಮ್ಮೊಮ್ಮೆ ಹಿಯಾಳಿಸುತ್ತೇನೆ.
ಮಂಜೇಶನದ್ದು ಸುಖ ಸಾಂಸಾರಿಕ ಚಿತ್ರ. ಹಳೇ ಸಿನೆಮಾದಲ್ಲಿ ಬರುತ್ತಿದ್ದ ಹೀರೋ ತರಹ, ಸ್ವಲ್ಪ ಆರೋಗ್ಯದ ಸಮಸ್ಯೆ ಇರೋ ಅಪ್ಪಾ, ಮುಗ್ದ ಅಮ್ಮಾ, ಮುತ್ತಿನಂಥಹ ಹೆಂಡತಿ, ಚಿನ್ನದಂಥಹ ಮಗು. ಕೈತುಂಬಾ ಸಂಬಳ. ಬೆಳ್ಳಿಗ್ಗೆ ಆರು ಮೂವತ್ತಕ್ಕೆ ಏಳು, ನಿತ್ಯಕರ್ಮಗಳನ್ನು ಮುಗಿಸು, ಪೇಪರ್ ಓದು, ಹೊಟ್ಟೆ ಮುಂದೆ ಬಂದಿರುವುದಕ್ಕೆ ಹೋಗಿ ಬ್ಯಾಡ್ಮಿಟನ್ ಆಡು, ಬಂದು ಹೊಟ್ಟೆ ತುಂಬಾ ತಿನ್ನು, ಸ್ಕೂಲಿಗೆ ಹೋಗು, ಹೊಟ್ಟೆ ಮಾಸ್ಟರು ಬಂದರು, ಕುಳ್ಳ ಮಾಸ್ಟರು ಬಂದರು ಎಂದು ಮಕ್ಕಳು ಅರುಚುತ್ತಾವೆ. ಬಿಸಿ ಊಟ, ಮಣ್ಣು ಮಸಿ ಅಂತಾ ಪಾಠ ಮಾಡು, ಐದು ಗಂಟೆಗೆ ಮನೆ ಸೇರು, ಹೆಂಡತಿ ಕೈ ಕಾಫಿ ಕುಡಿ, ಮಗಳೊಂದಿಗೆ ಆಟವಾಡು, ಹೊಟ್ಟೆ ತುಂಬಾ ಉಂಡು ಮಲಗು. ಸಿಗರೇಟು ಸೇದುವುದಿಲ್ಲ, ಕುಡಿಯುದಿಲ್ಲ, ಯಾವುದೇ ಕೆಟ್ಟ ಚಟವೂ ಇಲ್ಲ ಕೆಟ್ಟ ಬುದ್ದಿಯೂ ಇಲ್ಲ. ತನ್ನದೇ ಸಾಂಸಾರಿಕ ಕೋಟೆಯೋಳಗೆ ತಿಂದು ಹೊಟ್ಟೆ ಬೆಳಸುವುದನ್ನು ಮಾಡುತ್ತಿದ್ದಾನೆ. ಯಾರದ್ದೇ ಮನೆಯ ಕಾರ್ಯಕ್ರಮಗಳಿಗೂ ತಪ್ಪದೇ ಹೋಗುತ್ತಾನೆ. ಕಷ್ಟಪಟ್ಟು ಕೆಇಎಸ್ ಮಾಡಿದ್ದಾನೆ. ದೇವರು ಅವನನ್ನು ಮತ್ತು ಅವನ ಕುಟುಂಬವನ್ನು ಚೆನ್ನಾಗಿಡಲೆಂದು ಹಾರೈಸುತ್ತೇನೆ. ಮಂಜೇಶನ ಬಗ್ಗೆ ಬರೆಯುತ್ತೇನೆಂದು ಹೊರಟು ನನ್ನಯ ಬಗ್ಗೇಯೇ

07 ಜೂನ್ 2012

ನಿನಗಾಗಿ ಬರೆದ ನಾಲ್ಕು ಸಾಲುಗಳು....

ನಿನಗೆ ಖುಷಿಯಾದರೂ ಸರಿ, ಬೇಸರವಾದರೂ ಸರಿ,

ನನ್ನೆಲ್ಲಾ ಭಾವನೆಯನ್ನು ಸುರಿಯಬೇಕು ನಿನ್ನೆಡೆಗೆ,

ಬೈಯ್ಯುವ ನೆಪದಲ್ಲಿಯಾದರೂ ನನ್ನ ನೆನಪಿಸಿಕೊ ದಿನವೆಲ್ಲಾ,

ಕೋಪವಾದರೇನೂ ಖುಷಿಯಾದರೇನೂ ಎರಡೂ ನನ್ನಯ ಮೇಲಲ್ಲವೇ,

ಈಶ್ವರಪ್ಪನೇ ಹೇಳಲಿಲ್ಲವೇ, ಗೆಲ್ಲುವುದು ಮುಖ್ಯ ಮೂಲ ಬಿಜೆಪಿಯೋ, ವಲಸಿಗರೋ ಅದು ಎರಡನೆಯದ್ದು...


ನಿನ್ನ ನೋಡಲು ಮನ ತವಕಿಸುತಿದೆ,

ನಿನ ನೋಡುವಾಸೆ ನನ್ನೆದೆಯೊಳಗೆ ಹೆಮ್ಮರವಾಗುತ್ತಿದೆ,

ನಿನ್ನೊಂದಿಗೆ ಎರಡು ತಾಸು ಕೂರುವಾಸೆ ಕೈಗೂಡುವುದೆಂದು,

ನನ್ನೆರಡು ಸಾಲುಗಳಿಗೆ ಗೊಳ್ಳೆಂದು ನೀನಗುವುದೆಂದು


ನಾ ಏನಾದರೂ ಅದು ನಿನಗೋಸ್ಕರ

ಪ್ರೇಮಿ ಆದದ್ದೂ ನಿನಗೋಸ್ಕರ

ಕವಿಯಾದದ್ದು ನಿನಗೋಸ್ಕರ


ನನ್ನೆಲ್ಲವೂ ನೀನೇ,

ನನ್ನ ತನು ಮನವೆಲ್ಲವೂ ನೀನೇ

ನಾ ಬರೆಯುವುದು, ನಾ ಉಸಿರಾಡುವುದು ನಿನಗಾಗಿಯೇ,

ನನ್ನ ಉಸಿರಲ್ಲಿ ಹರಿದಾಡುವ ಹೆಸರು ನೀನೇ,

ನಾ ಮಲಗಿದ್ದ ಕ್ಷಣದಲ್ಲಿ ಕನವರಿಸುವ ಹೆಸರೂ ನೀನೇ...


ನನ್ನ ಮೊಂಡತನವಲ್ಲ ಅದು, ನನ್ನಲಿರುವ ಬಾಲ್ಯ,

ನಿನ್ನ ಬಿಟ್ಟಿರಲಾರದ ಪ್ರೀತಿ, ಸದಾ ನಿನ್ನೊಂದಿಗಿರಬೇಕೆಂಬ ಹಂಬಲ,

ನಿನ್ನ ಕಾಡಿಸಿಯೋ ಪೀಡಿಸಿಯೋ ನನ್ನೆಡೆಗೆ ಸೆಳೆಯುವ ಕಾತುರ

ಬಲಿ ಕೊಟ್ಟಾದರೂ ಸರಿ, ನಾ ಸತ್ತಾದರೂ ದೇವರ ವಶಿಸಿಕೊಳ್ಳಬೇಕೆಂಬುದು ಭಕ್ತನ ಆಸೆ,

ನನ್ನದೂ ಅಷ್ಟೇ ಅತ್ತಾದರೂ ಸರಿ, ಅಳುಕಾದರೂ ಸರಿ ನಿನ್ನ ಪ್ರೀತಿಯ ಪಡೆಯಬೇಕೆಂಬ ಸೆಲೆತ


ನಿಜಕ್ಕೂ ನಾನು ಕವಿಯಲ್ಲ, ಕವಿಯಾದದ್ದು ನಿನ್ನ ಬಣ್ಣಿಸುತ್ತಾ

ಮುಂಚೆ ಬರೆದಿಟ್ಟ ಸಾಲುಗಳಲ್ಲ ಇವುಗಳು ನಿನ್ನೊಡನೆ ಮಾತನಾಡುವಾಗ

ನಿನ್ನ ನೆನಪಿನ ಹೊತ್ತಿಗೆಯ ತೆಗೆದು ಮೆಲುಕುಹಾಕುವಾಗ ಬರೆಯುವ ಸಾಲುಗಳು,


ಕವಿಯಾಗುವೆನು ನಿನ್ನಯ ಚೆಲುವ ಬಣ್ಣಿಸಲು

ಲೇಖಕನಾಗುವೆನು ನಿನ್ನಯ ಒಳ್ಳೆತನವ ಬರೆಯಲು

ಭಕ್ತನಾಗುವೆನು ನಿನ್ನ ಪ್ರೀತಿಯ ಪೂಜಿಸಲು

ಅಭಿಮಾನಿಯಾಗುವೆನು ನಿನ್ನಯ ಆರಾಧಿಸಲು,

ಹುಳು ಮಾನವ ನಾನು ಅದಕ್ಕಲ್ಲವೇ ಇಷ್ಟೆಲ್ಲಾ ಆಸೆ ಕನಸುಗಳು


ನೀ ನನ್ನ ಹೊಗಳಿದರೂ ಬೈದರೂ ಎಲ್ಲದ್ದಕ್ಕೂ ನೀನೇ ಕಾರಣ

ಸರಿ ತಪ್ಪುಗಳಿಗೆ ದೇವರೇ ಕಾರಣ

ನನ್ನ ಪ್ರೀತಿಯ ವಿಷಯಗಳಿಗೆ ನೀನೇ ಕಾರಣ

ಹುಚ್ಚನಂತೇ ಪ್ರೀತಿಸಿದ್ದು ನಾನಲ್ಲ

ಪ್ರೀತಿಸಿಕೊಂಡಿದ್ದು ನೀನು, ನೀನಿಲ್ಲದಿದ್ದರೇ ನನ್ನ ಪ್ರೀತಿಗೆ ಬೆಲೆಯೆಲ್ಲಿತ್ತು ಹೇಳು?

ಬರೆದಿದ್ದು ನಾನಲ್ಲ ಬರೆಸಿಕೊಂಡಿದ್ದು ಆ ನಿನ್ನ ಮೋಹಕ ಚೆಲುವು,

ಆ ಚೆಲುವೆ ಇಲ್ಲದಿದ್ದರೇ ಈ ಪದಗಳೆಲ್ಲಿಂದ ಹುಟ್ಟಾವು?

ಪಿಯುಸಿ ಬದುಕಿನ ನಾಲ್ಕು ಪುಟಗಳು....!!!!!!!!

ಮೊನ್ನೆ ಭಾನುವಾರ ನಾನು ವಿಜಿ, ಸುನಿಲನ ಮದುವೆ ಬೀಗರ ಊಟ ಮುಗಿಸಿಕೊಂಡು ಕುಳಿತು ಹರಟುತ್ತಿರುವಾಗ ದಿಡೀರನೆ ಹೊಳೆದದ್ದು ನಮ್ಮ ಪಿಯುಸಿ ಹುಡುಗರೆಲ್ಲರನ್ನೂ ಮತ್ತೊಮ್ಮೆ ಸೇರಿಸಬಾರದೆಂಬ ಆಸೆ ಶುರುವಾಯಿತು. ನಾನು ಮತ್ತು ವಿಜಿ ಬಹಳಷ್ಟೂ ಸಲ ತುಂಬಾ ಯೋಜನೆಗಳನ್ನು ರೂಪಿಸಿರುವುದು ಕ್ಷಣ ಮಾತ್ರದಲ್ಲಿ. ಮುಂಚೆಯೂ ಅಷ್ಟೇ ಈಗಲೂ ಅಷ್ಟೇ, ಅದೆಷ್ಟೋ ಬಾರಿ ನಮ್ಮ ಲಾಂಗ್ ರೈಡ್ ಗಳು, ಮತ್ತು ದೂರದ ಟ್ರಿಪ್ ಗಳು ಕ್ಷಣ ಮಾತ್ರದಲ್ಲಿ ರೂಪುಗೊಂಡಿವೆ. ಕುಡಿಯುತ್ತ ಕುಳಿತಿದ್ದು, ಮರು ನಿಮಿಷವೇ, ಮಡೀಕೇರಿಗೆ ಹೋರಟಿದ್ದೇವೆ, ನಮ್ಮೂರಿಗೆ ಹೋಗಿದ್ದೇವೆ, ಚಿಕ್ಕಮಗಳೂರಿಗೆ, ಮೈಸೂರಿಗೆ, ಹೀಗೆ ಹತ್ತು ಹಲವು ಯಶಸ್ವಿ ಓಡಾಟಗಳು ನಮ್ಮ ನೆನಪಿನ ಹೊತ್ತಿಗೆಯಲ್ಲಿವೆ. ಅದರಂತೆಯೇ ಮೊನ್ನೆಯೂ ಶುರುವಾಗಿದ್ದು ಈ ನಮ್ಮ ಚಟುವಟಿಕೆ. ಜೂನ್ ಒಂದರಂದು ನಮ್ಮೂರಿನ ಊರ ಹಬ್ಬವಿದೆ. ಆದ್ದರಿಂದ ಆ ದಿನವೇ ಎಲ್ಲರನ್ನೂ ಸೇರಿಸುವ ಕೆಲಸ ಯಾಕೆ ಮಾಡಬಾರದೆಂದು ಯೋಚಿಸಿ, ನಿರ್ಧರಿಸಿದೆವು. ಅದಾದ ಹತ್ತೇ ನಿಮಿಷದಲ್ಲಿ ಎಲ್ಲರಿಗೂ ಫೋನ್ ಮಾಡಿದ್ದಾಯಿತು. ಎಲ್ಲರೂ ಒಪ್ಪಿದ್ದೂ ಆಯಿತು. ನಾನು ಅದಕ್ಕೆ ಒಂದು ಹಿನ್ನಲೆಯನ್ನು ಕಳೆದ ಬ್ಲಾಗ್ ನಲ್ಲಿ ಬರೆದಿದ್ದೆ. ಅದನ್ನು ನೀವು ಓದಿರಬಹುದು.

ನಾನು ನನ್ನ ಪಿಯುಸಿ ಜೀವನದ ಬಗ್ಗೆ ಅಲ್ಪ ಸ್ವಲ್ಪ ತಿಳಿಸಿಕೊಡಲು ಬಯಸುತ್ತೇನೆ. ಅದು ೧೯೯೮ ರ ಮೇ ತಿಂಗಳು, ನನ್ನ ಹತ್ತನೇ ತರಗತಿಯ ಪರೀಕ್ಷೆಯ ಫಲಿತಾಂಶ ಬಂದಿತ್ತು. ನಮ್ಮ ಹೊಸ ಮನೆಯ ತಳಪಾಯ (foundation) ಹಾಕಿದ್ದೇವು. ಸಿಮೇಂಟಿಗೆ ನೀರು ಹಾಕುವುದು ನನ್ನ ಕಾರ್ಯವಾಗಿತ್ತು. ಅದು ಆರದಂತೆ ಕಟ್ಟೆ ಕಟ್ಟಿ ಸೈಕಲಿನಿಂದ ಹೇರಬೇಕಿತ್ತು. ಒಮ್ಮೊಮ್ಮೆ ನನಗೆ ಆಶ್ಚರ್ಯವಾಗುತ್ತದೆ, ನಾನು ಚಿಕ್ಕವನಿದ್ದಾಗ ಎಷ್ಟೆಲ್ಲಾ ಕೆಲಸ ಮಾಡುತ್ತಿದೆಯೆಂದು. ಈಗ ಕಾಫಿ ಕುಡಿದ ಲೋಟವನ್ನು ಎತ್ತಿಡುವುದಿಲ್ಲ ಇಂಥಹ ಸೋಮಾರಿತನವನ್ನು ನನಗೆ ಆ ಬ್ರಹ್ಮ ಅದು ಹೇಗೆ ಅನುಗ್ರಹಿಸಿದನೆಂಬುದೇ ಅಚ್ಚರಿ. ನಾನು ಸೈಕಲ್ ಹತ್ತಿ ಶಾಲೆಗೆ ಹೋಗಿ ನನ್ನ ಹಣೆಬರಹವನ್ನು ತಿಳಿಯಲು ಹೋದೆ. ತುಂಬಾ ಸತ್ಯ ಹೇಳಬೇಕೆಂದರೇ ನನ್ನ ಇಡೀ ಜೀವನದಲ್ಲಿಯೇ ಮೊದಲನೇ ಬಾರಿ ನಾನು ನನ್ನ ರಿಸಲ್ಟ್ ನೋಡಿದ್ದು! ಆ ಹಿಂದಿನ ಎಲ್ಲಾ ರಿಸಲ್ಟ್ ಅನ್ನು ನಮ್ಮಪ್ಪನೇ ನೋಡಿರುತ್ತಿದ್ದರು ಅಥವಾ ನನ್ನ ಯಾರಾದರೂ ಕ್ಲಾಸ್ ಮೇಟ್ಸ್ ಹೇಳುತ್ತಿದ್ದರು. ಮೊದಲನೇ ಬಾರಿಗೆ ನೋಡುವಾಗ ಅಲ್ಲಿ ಪಾಸಾಗಿರುವವರ ನಂಬರ್ ಹಾಕಿರುತ್ತಾರಾ? ಫೇಲ್ ಆಗಿರುವವರ ನಂಬರ? ಎನ್ನುವುದೇ ಅನುಮಾನವಾಯಿತು. ಅಂತೂ ಪಕ್ಕದಲ್ಲಿರುವ ನನ್ನ ಅನೇಕಾ ಪರಿಚಯಸ್ಥ ಮುಖಗಳನ್ನು ನೋಡಿದೆ. ಏನಾಯ್ತು ಎಂದು ಕೇಳಿದರೇ, ಮೂರು ಹೋಗಿದೆ, ಎರಡು ಹೋಗಿದೆ, ಎಲ್ಲಾ ಡಮಾರು, ಇಂಥಹ ಉತ್ತರಗಳು. ಯಾರೊಬ್ಬರ ಮುಖದಲ್ಲಿಯೂ ಆತಂಕವಿಲ್ಲ,. ನನಗೆ ಆಗಲೇ ಅನಿಸತೊಡಗಿತ್ತು, ಸೋತಾಗ ಯಾವತ್ತೂ ಹಿಂಜರಿಯಬಾರದು. ಸೋಲನ್ನು ಧೈರ್ಯದಿಂದ ಒಪ್ಪಿಕೊಳ್ಳಬೇಕು. ನಾನು ನಾಲ್ಕು ಕೀಮೀ ದೂರ ಸೈಕಲ್ ಹೊಡೆಯುವಾಗೆಲ್ಲ ನನ್ನ ಮುಂದಿನ ಯೋಜನೆಗಳ ಬಗ್ಗೆ ಯೋಚಿಸುತ್ತಿದ್ದೆ, ಮುಂದೆ ಏನು ಮಾಡಬೇಕೆಂಬುದನ್ನು ಯೋಜಿಸತೊಡಗಿದ್ದೆ. ಶಾಲೆಯಿಂದ ಕೊಣನೂರಿನಲ್ಲಿಯೇ ಸೈಕಲ್ ನಿಲ್ಲಿಸಿ, ಕುಶಾಲನಗರದ ಅಜ್ಜಿಯ ಮನೆಗೆ ಹೋಗುವುದು, ಅಲ್ಲಿಂದ ವಿರಾಜಪೇಟೆಯ ನಮ್ಮ ಚಿಕ್ಕಮ್ಮನ ಮನೆಗೆ ಹೋಗುವುದು, ಸ್ವಲ್ಪ ವರ್ಷ ಅವರ ಕಾಫಿ ವರ್ಕ್ಸ್ ನಲ್ಲಿ ಕೆಲಸ ಮಾಡುವುದು, ಅಮೇಲೆ ಒಂದು ವ್ಯಾನು ತೆಗೆಯುವುದು, ದೊಡ್ಡ ಸಾಹುಕಾರನಾಗುವುದು. ಹೀಗೆ ಏನೇನೋ ತಲೆಯಲ್ಲಿ ಓಡಾಡತೊಡಗಿತ್ತು. ಅಪ್ಪನಿಗೆ ಮುಖ ತೋರಿಸುವ ಧೈರ್ಯವಂತೂ ಇರಲಿಲ್ಲ. ಅವರಿಗೆ ನಮ್ಮ ಕಷ್ಟವು ತಿಳಿದಿರಲಿಲ್ಲ.

ಶಾಲೆಯ ಆವರಣದೊಳಕ್ಕೆ ನುಂಗಿದೆ. ಸೈಕಲ್ ಸ್ಟಾಂಡಿನಲ್ಲಿ ಸೈಕಲ್ ನಿಲ್ಲಿಸಿ ರಿಸಲ್ಟ್ ಬೋರ್ಡಿನ ಕಡೆಗೆ ಹೊರಟೆ. ನನಗಿಂದಿಗೂ ನೆನಪಿದೆ, ಕಣ್ಣಿಗೆ ಕಟ್ಟಿದ ಹಾಗಿದೆ ಆ ದಿನ. ನಮ್ಮ ಶಾಲೆಯನ್ನು ನೋಡಿರುವ ಅನೇಕರಿಗೆ ಇದನ್ನು ವರ್ಣಿಸುವ ಅವಶ್ಯಕತೆಯಿಲ್ಲ. ತಿಳಿಯದಿದ್ದವರಿಗೆ ತಿಳಿಸಬೇಕು. ನನ್ನೆಲ್ಲಾ ಸ್ನೇಹಿತರಿಗೂ ನನ್ನ ಶಾಲೆಯನ್ನು ತೊರಿಸಿದ್ದೇನೆ! ಶಾಲೆಯ ಮುಂದೆ ಮೈದಾನವಿದೆ, ಅಲ್ಲೊಂದು ಸಿಮೇಂಟಿನಲ್ಲಿ ಕಟ್ಟಿಸಿರುವ ವೇದಿಕೆಯಿದೆ, ಅದಕ್ಕೆ ಒರಗಿಕೊಂಡಂತೆಯೇ, ಶಾಲೆಯ ಆಫೀಸ್ ರೂಂ ಮತ್ತು ಆ ದಿನಗಳ ಹತ್ತನೇಯ ಎ ಸೆಕ್ಷನ್ ಕೊಠಡಿಯಿದೆ. ಅದೇ ರೂಮಿನಲ್ಲಿ ನಾವು ಕುಳಿತುಕೊಳ್ಳುತ್ತಿದ್ದೇವು. ವರ್ಷವಿಡೀ ಪಾಠ ಕೇಳಿದ ಆ ರೂಮಿನಲ್ಲಿಯೇ ನಮ್ಮ ರಿಸಲ್ಟ್. ಅದು ಅದೃಷ್ಟದ ಕೊಠಡಿಯೋ? ಲತ್ತೆಯೋ? ತಿಳಿದಿಲ್ಲ. ಆ ರೂಮಿನಲ್ಲಿ ಮನ ಬಂದಂತೆ ಕುಣಿದಿದ್ದೆವು, ಆಡಿದ್ದೇವು, ಹೊಡೆಸಿಕೊಂಡಿದ್ದೇವು, ಕಿರು ಪರೀಕ್ಷೆಗಳಲ್ಲಿ ಧುಮುಕಿ ಹೊಡೆದಿದ್ದೇವು. ಅಂತೂ ಕಿಟಕಿಯ ಬಳಿಗೆ ಹೋದೆ, ರಿಸಲ್ಟ್ ಶೀಟುಗಳನ್ನು ಅಂಟಿಸಿಗ ಹಲಗೆ ದೂರದಲ್ಲಿಯೇ ಇತ್ತು. ಹೊರಗಡೆ ಹಾಕಿದರೇ ಹರಿದು ಹಾಕುತ್ತಾರೆಂಬ ಭಯ ಮಾಸ್ಟರುಗಳಿಗೆ, ಅಂಕೆಗಳು ಮಂಜಾಗಿ ಕಾಣುತ್ತಿದ್ದವು. ನಾನು ಕೆಳಗಡೆಯಿಂದಲೇ ನೋಡಿದೆ, ಜಸ್ಟ್ ಪಾಸಾಗಿರುವ ಪಟ್ಟಿ ಇತ್ತು. ನಂತರದ ಪಟ್ಟಿ ಮೂರನೇ ದರ್ಜೆ ಇದು ನನ್ನದೇ! ಆ ಸಾಲಿನಲ್ಲಿ ನಮ್ಮ ತರಗತಿಯ ಅನೇಕರ ಹೆಸರುಗಳಿದ್ದವು. ನನ್ನ ಕಣ್ಣು ನಾನೇ ನಂಬಲಿಲ್ಲ. ಖುಷಿಯಾಯಿತು, ಬಹಳ ಬೇಸರವಾಯಿತು. ನನಗೆ ಓದಲೂ ಏನೇನೂ ಇಷ್ಟವಿರಲಿಲ್ಲ. ಮತ್ತೇ ಓದಬೇಕು? ದೇವರೇ ನಾನು ನಿನ್ನನ್ನು ಪಾಸು ಮಾಡೆಂದು ಕೇಳಿರಲಿಲ್ಲ. ನನ್ನ ಕನಸುಗಳಿದ್ದದ್ದು, ನಾನು ನಾಲ್ಕಾರು ಲಾರಿಗಳ, ವ್ಯಾನುಗಳ ಮಾಲಿಕನಾಗಬೇಕೆಂಬುದು. ಅದು ನುಚ್ಚು ನೂರಾಗಿತ್ತು.

ನನಗೆ ವ್ಯಾಪಾರ ವ್ಯವಹಾರಗಳಲ್ಲಿ ಬಹಳ ಆಸ್ಥೆಯಿತ್ತು. ಇಂದಿಗೂ ಅಷ್ಟೇ, ಜಮೀನು, ಕೃಷಿ, ವ್ಯಾಪಾರದಲ್ಲಿರುವ ಆಸೆ ಈ ಪಟ್ಟಣದ ಕೂಲಿ ಕೆಲಸದಲಿಲ್ಲ. ಮನೆಗೆ ಬಂದೊಡನೆ ನನ್ನನ್ನು ನಮ್ಮಪ್ಪ ಕೇಳತೊಡಗಿದರು. ಏನು ಓದುತ್ತಿಯಾ ಎಂದು. ನನ್ನಾಣೆ ಹೇಳುತ್ತೀನಿ ನಾನು ಅಂದಿಗೆ ಶತ ಮೂರ್ಖ ಇಂದಿಗೂ ಮೂರ್ಖನೇ ಬಿಡಿ. ನಾನು ಎಲ್ಲಿಗೇ ಸೇರುತ್ತೇನೆ, ಏನನ್ನು ಓದುತ್ತೇನೆಂಬುದರ ಅರಿವೇ ಇರಲಿಲ್ಲ. ಹಾಸನದ ವೆಂಕಟೇಶ್ವರ ಕಾಲೇಜು ಎನ್ನುತ್ತಿದ್ದರು, ವಿರಾಜಪೇಟೆ, ಗೋಣಿಕೊಪ್ಪ, ಮೈಸೂರು, ಕುಶಾಲನಗರ ಹೀಗೆ ಎಲ್ಲಾ ಊರುಗಳ ಕಾಲೇಜುಗಳನ್ನು ಹೇಳಿದರು. ನನಗೆ ವಿರಾಜಪೇಟೆಗೆ ಸೇರಬೇಕೆಂಬುದೇ ಕನಸು, ಅಲ್ಲಿಗೆ ಸೇರಿದರೇ ಕಾಲೆಜಿಗೆ ಹೋಗುವುದರ ಜೊತೆಗೆ ವ್ಯಾಪಾರ ವ್ಯವಹಾರ ಕಲಿಯಬಹುದು ಎಂದು. ನಮ್ಮಪ್ಪನಿಗೆ ಓದುವವರು ಬರೀ ಓದಲೇ ಬೇಕು. ಇದರ ಮಧ್ಯೆ ಕುಶಾಲನಗರಕ್ಕೆ ಸೇರಿದರೇ ನಮ್ಮ ತಾತನ ಮುದ್ದಿನಿಂದ ಹಾಳಾಗುತ್ತಾನೆಂಬುದು ನಮ್ಮಪ್ಪನ ವಾದ. ಕುಶಾಲನಗರಕ್ಕೆ ಸೇರಲು ನನಗೂ ಆಸೆ, ಆದರೇ ಅಲ್ಲಿ ನಮ್ಮ ತಾತ ವ್ಯವಸಾಯಕ್ಕೆ ಹಾಕುತ್ತಾರೆ, ವ್ಯವಸಾಯ ಮನೆ ಮಕ್ಕಳೆಲ್ಲಾ ಸಾಯ ಅನ್ನುವ ಹಾಗೆ ಗದ್ದೆ ಉತ್ತು ಬರುವುದು ಅಷ್ಟೊಂದು ಹಣ ಕೊಡುವುದಿಲ್ಲ ಎನ್ನುವುದು ನನ್ನ ನಂಬಿಕೆ. ಇಷ್ಟೇಲ್ಲಾ ಒದ್ದಾಟದ ನಡುವೆ ಕೊನೆಯದಾಗಿ ಆಯ್ಕೆಯಾದದ್ದು ನಮ್ಮ ದಿ ಗ್ರೇಟ್ ಕನ್ನಡ ಭಾರತಿ ಕಾಲೇಜು, ಕುಶಾಲನಗರ.

ಕಾಲೇಜಿನ ಬಹುತೇಕ ಮಾಸ್ಟರುಗಳು ನಮ್ಮ ಮಾವನಿಗೆ ಪರಿಚಯವಿದ್ದರು. ಅವರೆಲ್ಲರೂ ಬೆಟ್ಟದಪುರ ಕಡೆಯವರಾಗಿದ್ದರಿಂದ ನಮ್ಮ ಅತ್ತೆ ಹೊಸೂರಿನವರಗಾಗಿದ್ದರಿಂದ ಹೆಚ್ಚು ಕಡಿಮೆ ನೆಂಟರೇ ಆಗಿದ್ದರು. ಆ ದಿನಗಳಲ್ಲಿ ಕೆಬಿ ಕಾಲೇಜು ದೊಡ್ದ ಮಟ್ಟದ ಹೆಸರು ಮಾಡಿತ್ತು. ಅಲ್ಲಿ ಸೀಟು ಸಿಗುವುದೇ ಕಷ್ಟವೆನ್ನುವ ಮಟ್ಟಕ್ಕಿತ್ತು. ಆದ್ದರಿಂದ, ನಮ್ಮ ತಾತ ನನ್ನನ್ನು ಕಾಲೇಜಿನ ಬೋರ್ಡ್ ಮೆಂಬರು ಮತ್ತು ಆ ದಿನದಲ್ಲಿ ಕಾಂಗ್ರೇಸ್ಸಿನ ಮುಖ್ಯ ಪುಟದಲ್ಲಿದ್ದ ಚಂದ್ರಕಲಾ ಅವರ ಮನೆಗೆ ಕರೆದೊಯ್ದರು. ಅವರ ಮನೆಗೆ ಹೋದಾಗ ಅವರು ನಮ್ಮ ತಾತನಿಗೆ ನೀಡಿದ ಗೌರವ ನೀಡಿ ಬೆರಗಾಗಿ ಹೋದೆ. ನಮ್ಮ ತಾತನ ಜೊತೆ ಮಾತನಾಡುವಾಗ ಅವರು ನಿಂತೆ ಇದ್ದರು. ಸೋಮವಾರಪೇಟೆ ತಾಲ್ಲೂಕಿಗೆ ಶಾಸಕರಾಗಲಿರುವ ಚಂದ್ರಕಲಾ ನಮ್ಮ ತಾತನಿಗೆ ಇಷ್ಟೊಂದು ಗೌರವ ಕೊಡುವುದೇ? ಆ ದಿನ ನಮ್ಮ ತಾತ ಮಾತನಾಡಿದ ಇಂಗ್ಲೀಷ್ ನನ್ನನ್ನೇ ಬೆಚ್ಚಿ ಬೀಳಿಸಿತು. ಆ ಮಟ್ಟಗಿನ ಇಂಗ್ಲೀಷ್ ಅನ್ನು ನಾನು ನಂತರ ಕೇಳಿದ್ದು ನನ್ನ ಬಿಎಸ್ಸಿ ಸಮಯದಲ್ಲಿ ಗ್ಯಾಲ್ವಿನ್ ವಿಲ್ಸನ್ ಬಾಯಿಂದ. ನಮ್ಮ ತಾತನಲ್ಲಿದ್ದ ಅನೇಕಾ ಗುಣಗಳನ್ನು, ನಾವಾರು ಗುರುತಿಸಲೇ ಇಲ್ಲ. ಅದೊಂದು ಅದ್ಬುತಾ ವ್ಯಕ್ತಿತ್ವ. ಅವರ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ.

ಚಂದ್ರಕಲಾ ಅವರು, ಅವರ ನೆಂಟರೇ ಆದ ಅಖಿಲಾ ಎಂಬ ಹುಡುಗಿಯನ್ನು ಕರೆದರು. ಅವಳು ಕೆಬಿ ಕಾಲೇಜಿನಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿದ್ದಳು. ಇವರಿಗೆ ಒಂದು ಸೀಟನ್ನು ಮಾಡಿಕೊಡು ಎಂದರು. ಅವಳು ನನ್ನ ಅಂಕಪಟ್ಟಿ ನೋಡಿ ಆಗುವುದಿಲ್ಲವೆಂದಳು. ವಿಜ್ನಾನ ವಿಭಾಗವೆನ್ನುವಾಗ ಪ್ರಯತಿಸೋಣವೆಂದಳು. ಡೋನೆಶನ್ ಕಡಿಮೆ ಮಾಡಿಸಲು ನಮ್ಮ ತಾತ ಪ್ರಯತ್ನಿಸಿ ಅರ್ಧ ಕಟ್ಟುವಂತೆ ಒಪ್ಪಿಸಿದರು. ನಾನು ಮೊದಲನೆಯ ದಿನ ಅಲ್ಲಿ ಅರ್ಜಿ ತರಲು ಹೋಗಿದ್ದೆ. ಹೋದವನೇ, ನಮ್ಮ ಮಾವನ ಹೆಸರು ಹೇಳಿದಾಗ ಅಲ್ಲಿಯೇ ಅಖಿಲಾ ಅರ್ಜಿಯನ್ನು ನೀಡಿ ಅದನ್ನು ಭರ್ತಿಮಾಡಿದ ನಂತರ ಹಿಂದಿರುಗಿಸಲು ಹೇಳಿದಳು. ನನಗೆ ಅರ್ಜಿ ತುಂಬಿಸಲು ಸರಿಯಾಗಿ ಅರ್ಥವಾಗಲಿಲ್ಲ. ಪಕ್ಕದಲ್ಲಿಯೇ ಕುಳಿತಿದ್ದ ಒಬ್ಬಾತನನ್ನು ಕೇಳಿದೆ. ಅವನೋ, ಕಪ್ಪಗೆ ದಡೂತಿಯಂತಿದ್ದ. ಅವನು ನನ್ನನ್ನು ವಿಚಾರಿಸತೊಡಗಿದ. ನನ್ನೂರನ್ನು ಹೇಳುತ್ತಲೇ, ನಮ್ಮೂರ ಪುಟ್ಟೇಗೌಡರ ಮಗ ಕುಮಾರ ಅವನಿಗೆ ಸ್ನೇಹಿತನಂತೆ. ಅವನು ಬಿಇ ಓದಿದ್ದಾನೆಂದು ಕೆಲವರು ಹೇಳುತ್ತಿದ್ದರು, ಕೆಲವರು ಅವನು ಓದೇ ಇಲ್ಲವೆನ್ನುತ್ತಿದ್ದರು. ನನಗೆ ಅವನ ಬಗ್ಗೆ ಹೆಚ್ಚೇನೂ ತಿಳಿಯದಿದ್ದರೂ ಬಹಳ ತಿಳಿದವನಂತೆ ನಟಿಸಿದೆ. ಅವನು ನನ್ನನ್ನು ಕೇಳಿದ, science ? Arts? ನಾನು science ಎಂದೆ. ಮಿಕ್ಕಿದ್ದೆಲ್ಲವನ್ನೂ ಅವನೇ ಭರ್ತಿ ಮಾಡಿದ. ಅದರಲ್ಲಿದ್ದ, Physcis, Chemistry....ಇದಾವುದು ಅರ್ಥವಾಗಿರಲಿಲ್ಲ. ಭರ್ತಿ ಮಾಡಿದವನ ಹೆಸರು ಚನ್ನಕೇಶವ ಮೂರ್ತಿ, ಕೆಬಿ ಕಾಲೇಜಿನ ಪಿಟಿ ಮಾಸ್ಟರು.

ಇದಾದ ನಂತರ ಅಲ್ಲಿ ಇಲ್ಲಿ ಚಂಗಲು ಎತ್ತಿದೆ. ಕಾಲೇಜಿಗೆ ಸೇರುವ ದಿನ ಬಂದೇ ಬಿಟ್ಟಿತು. ನಾನು ನಮ್ಮ ಮಾವನನ್ನು ಕರೆದುಕೊಂಡು ಹೋದೆ. ನಮ್ಮ ಮಾವ ಓದಿರುವುದು ನಾಲ್ಕನೇಯ ಕ್ಲಾಸು. ಆ ಸತ್ಯ ಯಾರಿಗೂ ಗೊತ್ತಿಲ್ಲ. ಡಿಗ್ರೀ ಓದಿರಬಹುದು ಎನ್ನಬೇಕು ಆ ಮಟ್ಟಕ್ಕೆ ಅವನು ನಡೆದುಕೊಳ್ಳುತ್ತಾನೆ. ಕಾಲೇಜಿನ ಬಳಿಗೆ ಹೋದ ತಕ್ಷಣವೇ, ಅವನು ನನ್ನನ್ನು ಒಬ್ಬರ ಬಳಿಗೆ ಕರೆದುಕೊಂಡು ಹೋದ. ಅವನು ನೋಡಲು ಕಪ್ಪಿದ್ದರೂ ಲಕ್ಷಣವಾಗಿದ್ದ. ನಮ್ಮ ಮಾವ ಅವನಿಗೆ ನನ್ನ ಪರಿಚಯ ಮಾಡಿಸಿದ, ಅವನು ರಾಗ ಎಳೆದು, ಹೇಳಿದ ನಾನು ನಿಮಗೆ ತರಗತಿ ತೆಗೆದುಕೊಳ್ಳುತ್ತೇನೆ, ಚೆನ್ನಾಗಿ ಓದಬೇಕು ಎಂದು. ಪ್ರವೇಶ ಪಡೆಯುವ ಸಮಯಕ್ಕೆ ಫೋಟೋ ಬೇಕು ಎಂದರು. ನನ್ನಲ್ಲಿ ಫೋಟೋ ಇರಲಿಲ್ಲ. ಬಡ್ಡೀ ಮಕ್ಕಳು ನನ್ನನ್ನು ಓಡಿಸಿದರು. ನಾನು ಅಲ್ಲಿಂದ ಓಡಿಹೋಗಿ ಓಡಿಸ್ಸಿ ಕಲರ್ ಲ್ಯಾಬ್ ನಲ್ಲಿ ಫೋಟೋ ತೆಗೆಸಿಕೊಂಡು ಬಂದೆ. ಬಂದ ನಂತರ ಗೊತ್ತಾದದ್ದು ಫೋಟೋ ಇಲ್ಲದಿದ್ದರೂ ನಡೆಯುತಿತ್ತು ಎಂದು. ಆಗಲಿ ನನ್ನ ಫೋಟೋ ಕಾಲೇಜಿನ ರಿಜಿಸ್ಟರಿಗೆ ಅಂಟಿಸಲಾಯಿತು. ಗುರುತಿನ ಚೀಟಿಯನ್ನು ಕೊಟ್ಟರು. ಅಲ್ಲಿಗೆ ಮೊದಲ ಹಂತದ ಚುನಾವಣೆ ಮುಗಿಯಿತು.

ನಂತರ ಶುರುವಾಗಿದ್ದೇ ಕಥೆ, ನಾನು ನನ್ನೂರಿನಿಂದ ಒಡಾಡುವುದೋ? ಕುಶಾಲನಗರದಿಂದ ಎರಡು ಕೀಮೀ ದೂರವಿದ್ದ ಗುಮ್ಮನಕೊಲ್ಲಿಯಿಂದ ಓಡಾಡುವುದೋ? ಎಂಬುದು ಸಮಸ್ಯೆಗೆ ಬಂತು.ಸ್ವಲ್ಪ ದಿನ ಬಾನುಗೊಂದಿಯಿಂದ ಓಡಾಡತೊಡಗಿದೆ. ಶನಿವಾರ ಮಾತ್ರ ಬೆಳ್ಳಿಗ್ಗೆ ಒಂಬತ್ತು ಗಂಟೆಗೆ ಕಾಲೇಜು ಇರುತ್ತಿತ್ತು. ಮಿಕ್ಕಿದ ದಿನಗಳು ಹತ್ತು ಗಂಟೆಗೆ ಶುರುವಾಗುತ್ತಿತ್ತು. ಮೂರು ದಿನಗಳು ಲ್ಯಾಬೊರೇಟರಿ ಇರುತ್ತಿತ್ತು. ಆ ದಿನಗಳಲ್ಲಿ ಸ್ವಲ್ಪ ತಡವಾಗುತ್ತಿತ್ತು. ನಾನು ಬಸ್ ಹಿಡಿದು ಕೊಣನೂರು ತಲುಪಿ ಅಲ್ಲಿಂದ ಮತ್ತೆ ನನ್ನೂರಿಗೆ ಹೋಗುವಷ್ಟರಲ್ಲಿ ಕತ್ತಲಾಗುತ್ತಿತ್ತು. ಆಗ ಕುಶಾಲನಗರ ಮತ್ತು ಕೊಣನೂರಿಗೆ ಸಾಕಷ್ಟೂ ಬಸ್ಸುಗಳಿರಲಿಲ್ಲ. ಸಂಜೆ ನಾಲ್ಕು ಗಂಟೆಗೆ ಬಸ್ ಹೋದರೇ ಆರು ಗಂಟೆಯ ತನಕ ಕಾಯಬೇಕಿತ್ತು. ನಾನು ಕಾಲೇಜಿಗೆ ಬಂದ ಮೊದಲನೆಯ ದಿನ ನನ್ನ ಪಕ್ಕದಲ್ಲಿ ಅಕ್ಬರ್ ಆಲಿ ಎಂಬ ಮಹಾ ಪ್ರಜೆ ಕುಳಿತಿದ್ದ. ನಾನು ಕಂಡ ಅಮಾಯಕ ಪ್ರಜೆಗಳಲ್ಲಿ ಅಕ್ಬರ್ ಆಲಿಯೂ ಒಬ್ಬ. ಅದೆಷ್ಟೂ ಮುಗ್ದತೆಯಿತ್ತು ಎಂದರೇ, ಅವನು ಕನ್ನಡ ಮಾಧ್ಯಮದಲ್ಲಿ ಮತ್ತು ಅಲ್ಪ ಸ್ವಲ್ಪ ಉರ್ದು ಓದಿಕೊಂಡಿದ್ದವನನ್ನು ಇಲ್ಲಿ ವಿಜ್ನಾನ ವಿಭಾಗಕ್ಕೆ ಸೇರಿಸಿದ್ದರು. ಅವನಿಗೆ ಆಸೆಯಿತ್ತು ಆದರೇ ಬಹಳ ಹಿಂಜರಿಗೆ, ಕೀಳರಿಮೆ, ಭಯವಿತ್ತು. ಹೀಗೆ ಒಂದೆರಡು ದಿನಗಳಲ್ಲಿ ನನಗೆ ಲೋಕೇಶನ ಪರಿಚಯವಾಯಿತು. ನಾವಿಬ್ಬರೂ ಒಂದೇ ಬಸ್ಸಿನಲ್ಲಿ ಓಡಾಡಬೇಕಿದ್ದರಿಂದ ಬೇಗ ಪರಿಚಯವಾಗಿದ್ದಲ್ಲದೇ, ಬಹುತೇಕ ಸಮಾನ ಮನಸ್ಕರಾಗಿದ್ದೇವು. ಒಳ್ಳೆಯ ಸ್ನೇಹಿತರಾಗುವುದರಲ್ಲಿ ಅನುಮಾನವಿರಲಿಲ್ಲ. ಅಂತೇಯೇ ಒಳ್ಳೆಯ ಸ್ನೇಹಿತರೂ ಆದೆವು. ಪಿಯುಸಿಯ ಸ್ನೇಹ ನನಗೆ ಬಹಳ ಮೆಚ್ಚುಗೆಯಾಗುತ್ತದೆ. ನಾನು ಕಳೆದ ಎರಡು ವರ್ಷಗಳಲ್ಲಿ ಒಮ್ಮೆಯೂ ನಮ್ಮ ಮನೆಯವರ ವಿಷಯವನ್ನು ಮಾತನಾಡಿಲ್ಲ. ಯಾರ ಮಗಾ, ಹಿನ್ನಲೆ ಏನು? ಯಾವುದೂ ಬೇಕಿಲ್ಲ. ಅಲ್ಲಿ ಬೇಕಿರುವುದು ಕೇವಲ ಸ್ನೇಹ. ನೀನು ಎಂಥವನು? ನೀನು ನನ್ನ ಭಾವನೆಗಳಿಗೆ ಹೇಗೆ ಸ್ಪಂದಿಸುತ್ತೀಯಾ? ಇಷ್ಟೇ ನಮ್ಮ ಸ್ನೇಹದ ಬುನಾದಿ.

ಕಾಲೇಜು ಶುರುವಾದ ಕೆಲವೇ ದಿನಗಳಲ್ಲಿ ಕೊನೆಯ ಬೆಂಚಿಗೆ ಲಗ್ಗೆ ಹಾಕಿದೆ. ನಾನು ಎತ್ತರದಲ್ಲಿ ಬಹಳ ಕುಳ್ಳನಾಗಿದ್ದರೂ ಅದನ್ನು ಒಪ್ಪುವ ಮನಸ್ಥಿತಿ ಇರಲಿಲ್ಲ. ನನ್ನ ಹೈಸ್ಕೂಲು ದಿನಗಳಲ್ಲಿಯೂ ಅಷ್ಟೇ ಹಿಂದಿನ ಸಾಲೇ ಬೇಕು ನನಗೆ. ಮಾಸ್ಟರುಗಳು ದಿನ ನನ್ನನ್ನು ಕರೆದು ಮುಂದಕ್ಕೆ ಕೂರಿಸಿದ್ದರೂ ಮತ್ತೆ ಹಿಂದಿನ ಸಾಲಿಗೆ ಹೋಗುತ್ತಿದ್ದೆ. ಅಂತೂ ಇಂತೂ ಕೊನೆಯ ಸಾಲಿನಲ್ಲಿ ಕೂರುವ ನನ್ನ ಹಕ್ಕನ್ನು ನಾನು ಉಳಿಸಿಕೊಂಡೆ. ಅಲ್ಲಿಂದ ಶುರುವಾಗಿದ್ದು ನಮ್ಮ ಆಟಗಳು. ಎಲ್ಲರನ್ನೂ ರೇಗಿಸುವುದು, ಚೇಡಿಸುವುದು. ಮಾಸ್ಟರುಗಳಿಗೆ ಬೆಲೆಯಿಲ್ಲ. ಪಾಠ ಮಾಡುತ್ತಿದ್ದರೇ ಹರಟೆ ಹೊಡೆಯುವುದು. ಇದು ಎಷ್ಟರ ಮಟ್ಟಿಗೆ ಹೋಯಿತೆಂದರೇ, ಕ್ಲಾಸಿನಲ್ಲಿ ನಾಳೆ ನಡೆಯುವ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ವಿಚಾರ ಮಾತನಾಡುತ್ತಿದ್ದರೂ ಕೂಡ ನಾವು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆ ಮಟ್ಟಗಿನ ಉಢಾಫೆತನ, ಉದ್ದಡತನ ಅದೆಲ್ಲಿಂದ ನಮಗೆ ಬಂತೆಂಬುದೇ ತಿಳಿಯಲಿಲ್ಲ. ನಾನಂತೂ ಪಿಯುಸಿಯೇ ನನ್ನ ಕೊನೆಯ ಅಧ್ಯಾಯವೆಂಬುದು ನನ್ನ ತೀರ್ಮಾನವಾಗಿತ್ತು. ಸಾಧ್ಯವಾದಷ್ಟೂ ಖುಷಿಯಾಗಿರಬೇಕೆಂಬುದು ನನ್ನ ಅನಿಸಿಕೆಯಾಗಿತ್ತು. ನನ್ನ ಪಿಯುಸಿ ಜೀವನದಲ್ಲಿ ಮೂರ್ನಾಲ್ಕು ಅಧ್ಯಾಯಗಳಿವೆ. ಮೊದಲನೆಯದು ನಾನು ಊರಿನಿಂದ ಬಸ್ಸಿನಲ್ಲಿ ಓಡಾಡುವುದು. ಎರಡನೆಯದು, ಕ್ಲಾಸಿನಲ್ಲಿ ನಡೆಯುತ್ತಿದ್ದ ನಮ್ಮ ಆಟೋಟಗಳು, ತಲೆ ಹರಟೆಗಳು, ಮೂರನೆಯದು ಕ್ಲಾಸಿನಿಂದ ಹೊರಗೆ ಕುಶಾಲನಗರದಲ್ಲಿ ನಡೆಸುತ್ತಿದ್ದ ದರ್ಬಾರುಗಳು, ನಾಲ್ಕನೆಯದು ನಮ್ಮ ಅಜ್ಜಿ ಮನೆಯಲ್ಲಿದ್ದು ನಡೆಸುತ್ತಿದ್ದ ಪರಾಕ್ರಮಗಳು, ಐದನೆಯದು ನಾನು ಪಿಯುಸಿಯಲ್ಲಿ ಫೇಲಾದ ಮೇಲೆ ನಡೆದ ಘಟನೆಗಳು.

ಮೊದಲನೆಯ ಅಧ್ಯಾಯಯದ ತುಣುಕುಗಳನ್ನು ನಿಮ್ಮ ಮುಂದಿಡುತ್ತೇನೆ. ನಾನು ಊರಿನಿಂದ ಓಡಾಡುವಾಗ ನನಗೆ ಓದಲು ಸಮಯ ಸಿಗುತ್ತಿರಲಿಲ್ಲ. ನಾನು ಅದೇಕೆ ಅದನ್ನು ಆಯ್ಕೆ ಮಾಡಿಕೊಂಡೆನೆಂಬುದು ತಿಳಿಯಲಿಲ್ಲ. ಆರು ಗಂಟೆಗೆ ಏಳುವುದು ಸ್ನಾನ ಮಾಡಿ ಊಟ ತಿಂಡಿ ಇಲ್ಲದೆಯೇ ಹೋಗುವುದು ಕೆಲವು ದಿನಗಳು ಏನನ್ನೋ ತಿಂದು ಹೋಗುವುದು. ನಾನು ಸರಿಯಾಗಿ ತಿಂದ ನೆನಪೇ ಇಲ್ಲ. ಜೇಬಿನಲ್ಲಿ ಕಾಸು ಇರುತ್ತಿರಲಿಲ್ಲ. ಅದರ ಜೊತೆಗೆ ಸೇದುವುದು, ಕುಡಿಯುವುದು ಪರಿಚಯವಾಗಿತ್ತು. ನಿಜಕ್ಕೂ ಹೇಳುತ್ತೇನೆ, ವಯಸ್ಸಿನ ಮಕ್ಕಳಿಗೆ ಹಣದ ಅನಿವಾರ್ಯತೆ ಅದೆಷ್ಟೂ ಬೇಕೆನಿಸುತ್ತದೆಯೆಂದರೇ ಹೇಳತೀರದು. ಮತ್ತು ಆ ಸಮಯದಲ್ಲಿರುವ ಕೀಳರಿಮೆ ಅಷ್ಟಿಷ್ಟಲ್ಲ. ನಾನು ನನ್ನ ಬಗ್ಗೆ ನಿಜಕ್ಕೂ ಹೆಮ್ಮೆ ಪಡುವುದು ನನ್ನ ಪಿಯುಸಿ ಜೀವನದ ಬಗ್ಗೆ ಮಾತ್ರ. ನನಗೆ ಈಗ ಬಹಳ ಉಢಾಫೆತನ, ಹಣದ ಬೆಲೆ ನಿಜಕ್ಕೂ ಗೊತ್ತಿಲ್ಲ, ವಸ್ತುಗಳ ಬಗ್ಗೆ ಅಂತೂ ಕಾಳಜಿ ಇಲ್ಲವೇ ಇಲ್ಲ. ಆ ದಿನಗಳಲ್ಲಿ ನನ್ನ ಬಳಿಯಿದ್ದ ಕೆಲವೇ ಕೆಲವು ಬಟ್ಟೆಗಳನ್ನು ಒಂದು ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಂಡೂ ಐರಾನ್ ಮಾಡುತ್ತಿದ್ದೆ. ಒಂದೇ ಒಂದು ಡಬ್ಬಲ್ ಲೈನ್ ಇರುತ್ತಿರಲಿಲ್ಲ. ನಾನ್ನು ಮತ್ತು ಲೋಕೇಶ ಇಬ್ಬರೂ ಪೈಪೋಟಿಯಲ್ಲಿ ಐರಾನ್ ಮಾಡಿ ಬರುತ್ತಿದ್ದೇವು. ಬಸ್ಸಿನ್ನಲ್ಲಿ ಓಡಾಡುವಾಗ ಬಸ್ಸಿನ ಕಂಡಕ್ಟರ್ ಗಳಿಗೆ ಬಹಳ ಕಾಡಿಸುತ್ತಿದ್ದೇವು. ನಮ್ಮ ಬಸ್ಸಿನಲ್ಲಿ ಬರುತ್ತಿದ್ದ ಎಲ್ಲಾ ಹುಡುಗ ಹುಡುಗಿಯರಿಗೂ ನಮ್ಮ ಪರಿಚಯವಿತ್ತು. ಡಿಗ್ರೀ ಕಾಲೇಜು, ಸರ್ಕಾರಿ ಕಾಲೇಜು, ಪಾಲಿಟೆಕ್ನಿಕ್ ಗೆ ಬರುತ್ತಿದ್ದವರೆಲ್ಲರು ನಮಗೆ ಪರಿಚಯವಿದ್ದರು.

ಆ ದಿನಗಳಲ್ಲಿ ಕ್ರಿಕೇಟ್ ಹುಚ್ಚು ಅಷ್ಟಿಷ್ಟಿರಲಿಲ್ಲ, ನಾನು ಹೆಚ್ಚಿನ ಕಾಲ ಲೋಕೇಶನ ಊರಾದ ಶಿರಂಗಾಲದಲ್ಲಿಯೇ ಕಳೆಯುತ್ತಿದ್ದೆ. ನಾವು ಕೆಲವೊಮ್ಮೆ ಓದುವುದಕ್ಕೆಂದು ಸಿದ್ದತೆಯನ್ನು ಮಾಡಿದ್ದೇವು, ಆದರೇ ಹೆಚ್ಚಿನ ಕಾಲ ಕ್ರಿಕೇಟ್ ಆಡುವುದರಲ್ಲಿಯೇ ಕಳೆದೆವು. ನಮ್ಮೂರಿನ ಹಲವಾರು ಜನರಿಗೆ ಅವನು ಗೊತ್ತಿತ್ತು ಮತ್ತು ಅವರೂರಿನ ಅನೇಕರಿಗೆ ನಾನು ತಿಳಿದಿತ್ತು. ನನ್ನನ್ನು ಬಹುತೇಕ ಹುಡುಗರು ಶಿರಂಗಾಲದವನೆಂದು ತಿಳಿದಿದ್ದರು. ಆ ದಿನಗಳಲ್ಲಿ ಮೊಬೈಲ್ ಇರಲಿಲ್ಲ. ನಾವು ಹಿಂದಿನ ದಿನವೇ ತಿರ್ಮಾನ ಕೈಗೊಂಡು ನಾಳೆ ಯಾವ ಬಸ್ಸಿಗೆ ಬರಬೇಕೆಂದು ತೀರ್ಮಾನಿಸುತ್ತಿದ್ದೆವು. ಅದರಂತೆಯೇ ಅವನು ಆ ಬಸ್ಸಿನ ವೇಳೆಗೆ ಅಲ್ಲಿ ಇರದಿದ್ದರೇ ನಾನು ಇಳಿದು ಅವನಿಗೆ ಕಾಯುತ್ತಿದ್ದೆ. ಶೆಟ್ಟಿ ಬಹಳ ಬುದ್ದಿವಂತ, ಅವನಿಗೆ ವ್ಯವಹಾರ ವ್ಯಾಪಾರ ಹೇಳಿ ಮಾಡಿಸುತ್ತಿತ್ತು. ನಾನು ಈಗಲೂ ಹೇಳುತ್ತೇನೆ ನಿನಗೆ ಎಂಬಿಎ ಸರಿ ಹೋಗುತ್ತಿತ್ತು ಎಂದು. ಆದರೇ ಅವನ ಲೆಕ್ಕಚಾರಗಳೇ ಬೇರೆ ಇರುತ್ತಿದ್ದವು ನೀವು ಅವಗಳನ್ನು ಕೇಳಿದರೇ ಅವನ ಮುಖವನ್ನು ನೋಡುವುದಿಲ್ಲ ಅಂಥಹ ವ್ಯಕ್ತಿ. ಅವನು ಯಾರ‍್ಯಾರ ಮೇಲೋ ಪೈಪೋಟಿ ನಡೆಸುತ್ತಿದ್ದ. ಅವರ ನೆಂಟರೆಲ್ಲರಿಗಿಂತ ಹೆಚ್ಚೂ ಓದಬೇಕು ಸಾಧಿಸಬೇಕೆಂಬುದು ಅವನ ಕನಸಾಗಿತ್ತು. ನಮ್ಮೂರಿನಲ್ಲಿ ಆಯೋಜಿಸಿದ್ದ ಕ್ರಿಕೇಟ್ ಟೂರ್ನಿಯಲ್ಲಿ ಆಡಿ ಬಹುಮಾನವನ್ನು ಗೆದ್ದ.

ನಾನು ಲೋಕಿ ಕೊಣನೂರಿನ ಮಾರುತಿ ಮಿನಿ ಟಾಕೀಸ್ ಹಲವಾರು ಬ್ಲೂ ಸಿನೆಮಾಗಳನ್ನು ನೋಡಿದ್ದೇವೆ. ಆ ದಿನಗಳಲ್ಲಿ ಅದು ಮಹಾ ಪಾಪ ಈಗಲೂ ಮಹಾ ಪಾಪ ಬಿಡಿ. ಕೊಣನೂರಿನ ಬಸ್ ಸ್ಟಾಂಡ್ ಎದುರುಗಡೆಯಲ್ಲಿಯೇ ಇತ್ತು ಮಾರುತಿ ಟಾಕೀಸ್ ಅದು ಮಹಡಿಯ ಮೇಲೆ, ಇಡೀ ಜಗತ್ತಿಗೆ ಕಾಣುತ್ತಿತ್ತು. ಅದರ ಪಕ್ಕದಲ್ಲಿಯೇ ಇದ್ದ ಎಳನೀರು ಅಂಗಡಿಯ ಅರವಿಂದ ನನಗೆ ಸ್ನೇಹಿತ. ಅವನು ಹತ್ತನೆಯ ತರಗತಿಯಲ್ಲಿ ಧುಮಕಿ ಹೊಡೆದು ಅಂಗಡಿಯ ಸಾಹುಕಾರನಾಗಿದ್ದ. ಅವನು ನಮಗೆ ಎಲ್ಲಾ ಚಿತ್ರಗಳ ವಿಮರ್ಶೆ ನೀಡುತ್ತಿದ್ದ. ಅವನು ಹೇಳಿದರೇ ಮಾತ್ರ ಹೋಗುತ್ತಿದ್ದೆವು. ಅವನ ಅಂಗಡಿಯ ಹತ್ತಿರ ನಿಂತಿದ್ದು ಹತ್ತೇ ಸೆಕಂಡುಗಳಲ್ಲಿ ಮೇಲೇರುತ್ತಿದ್ದೆವು. ಇಳಿಯುವಾಗಲೂ ಅಷ್ಟೇ ಅದೆಷ್ಟು ಬೇಗ ಇಳಿಯುತ್ತಿದ್ದೆವೆಂದರೇ ಹೇಳತೀರದು. ಕುಶಾಲನಗರದಲ್ಲಿ ಕಾವೇರಿ ವಿಡಿಯೋ ಕೂಡ ಆ ಹೊತ್ತಿಗೆ ಬಹಳ ಪ್ರಸಿದ್ದಿ ಹೊಂದಿತ್ತು. ಆದರೇ ನಾವೇಕೆ ಒಂದು ದಿನವೂ ಅಲ್ಲಿಗೆ ಹೋಗಲಿಲ್ಲವೆಂಬುದು ನಿಗೂಢ. ಅಲ್ಲಿಗೆ ಹೋಗುವುದು ಬಹಳ ಸುಲಭವಗಿತ್ತು ಆದರೂ ನಾವು ಕೊಣನೂರಿನಲ್ಲಿಯೇ ನೋಡಿದೆವು. ಒಮ್ಮೆ ವಿಜಿಯನ್ನು ಕರೆದುಕೊಂಡು ಹೋಗಿದ್ದೆ. ನನ್ನೂರಿನ ಅನೇಕ ಹುಡುಗರು ನನ್ನನ್ನು ಕೇಳಿದ್ದರೂ ಕೂಡ. ಅಲ್ಲಿ ಹೋಗಿ ಸಿನೆಮಾ ನೋಡುವುದು ಪೋಲಿತನದ ಕೆಲಸವಾಗಿತ್ತು. ನಾನು ಪೋಲಿಯೆಂಬುದು ಎಂದೋ ತೀರ್ಮಾನವಾಗಿತ್ತು.

ಎರಡನೇಯ ಆವೃತ್ತಿಯಲ್ಲಿ ನಾನು ನನ್ನಜ್ಜಿಯ ಮನೆಯಲ್ಲಿದ್ದೆ. ನಮ್ಮ ಮಾವ ಬೇಡವೆಂದರೂ ನಮ್ಮ ಕಾಲೇಜಿಗೆ ಬರುತ್ತಿದ್ದ ಕೆಲವು ಸೀನಿಯರ‍್ಸ್ ಗಳನ್ನು ಪರಿಚಯ ಮಾಡಿಸಿದ್ದ. ಅವರ ಬೆಂಬಲವೂ ಚೆನ್ನಾಗಿತ್ತು. ನನ್ನ ತಲೆ ಆ ಸಮಯದಲ್ಲಿ ನಿಲ್ಲುತ್ತಿರಲಿಲ್ಲ. ಕಾಲು ಕೆರೆದು ಜಗಳವಾಡುವುದೂ ರೂಢಿಯಾಗಿಬಿಟ್ಟಿತ್ತು. ಕ್ರೀಕೇಟ್ ಆಡುವಾಗಂತೂ ಜಗಳವಾಡದ ದಿನವೇ ಇರುತ್ತಿರಲಿಲ್ಲ. ಈಗ ನೆನಪಿಸಿಕೊಂಡರೇ ಬಹಳ ಬೇಸರವೆನಿಸುತ್ತದೆ. ಕ್ಲಾಸಿನಲ್ಲಿಯೂ ಅಷ್ಟೇ ಜಗಳವಾಡುವುದು, ಹುಡುಗರನ್ನು ರೇಗಿಸುವುದು, ಹೆದರಿಸುವುದು ಇವೆಲ್ಲವನ್ನೂ ಏಕೆ ಮಾಡಿದೆ? ನನ್ನೆಲ್ಲಾ ಚಟಗಳು ಬಲವಾಗಿದ್ದು ಆ ದಿನಗಳಲ್ಲಿ, ನಾನು ಹೆಚ್ಚೆಚ್ಚು ಕುಡಿಯತೊಡಗಿದೆ, ವಿಪರೀತ ಸಿಗರೇಟು ಸೇದತೊಡಗಿದೆ. ಅದೆಲ್ಲವನ್ನು ಅದೇಕೆ ಮಾಡಿದೆನೆಂದರೆ ಉತ್ತರವಿಲ್ಲ. ಶಿವರಾತ್ರಿಯಂದು ಕುಡಿದು ಗಲಾಟೆ ಮಾಡಿಕೊಂಡೆ, ಕುಡಿದು ಕುಶಾಲನಗಾರದ ಸರ್ಕಾರಿ ಶಾಲೆ ಮೈದಾನದಲ್ಲಿ ಬಿದ್ದಿದ್ದೆ. ಕುಡುಕನೆಂಬ ಹೆಸರು ಬಳುವಳಿಯಾಗಿ ಬಂದದ್ದು ಅಂದೆ. ನನಗಿಂದಿಗೂ ಸ್ಪಷ್ಟವಾಗಿ ನೆನಪಿದೆ, ಅಂದು ಮಾರ್ಚ್ ತಿಂಗಳ 20ನೇ ತಾರಿಖು 2000ದ ಇಸವಿ, ಶಿವರಾತ್ರಿಯ ದಿನ. ನನಗೆ ಆಗ, ನಮ್ಮ ಕ್ಲಾಸಿನವರಲ್ಲದೇ ಆರ್ಟ್ಸ್ ಮತ್ತು ಕಾಮರ್ಸ್ ಹುಡುಗರೂ ಸ್ನೇಹಿತರಾಗಿದ್ದರು. ನಮ್ಮ ಕ್ಲಾಸಿನಲ್ಲಿ ಕುಡಿಯುವವರ ಸಂಖ್ಯೆ ಬಹಳ ಕಡಿಮೆಯಿತ್ತು, ಅದೇ ವರ್ಷದ ಹೊಸ ವರ್ಷದ ದಿನ ಅವರೆಲ್ಲರೂ ಪರಿಚಯವಾಗಿದ್ದರು. ಅವರೊಂದಿಗೆ ಶಿವರಾತ್ರಿಯಂದು ಸಂಜೆ ಒಂಬತ್ತರ ಸುಮಾರಿಗೆ ಕಾಳೇಘಾಟ್ ಬಾರಿನಲ್ಲಿ ಕುಡಿಯುವುದಕ್ಕೆ ಕುಳಿತು ಮುಗಿಯುವಾಗ ರಾತ್ರಿ ಒಂದು ಗಂಟೆಯಾಗಿತ್ತು. ಅಲ್ಲಿಂದ ಬಂದವರು ಕುಣಿಯುತ್ತಾ, ಸರ್ಕಾರಿ ಶಾಲೆ ಮೈದಾನವನ್ನು ತಲುಪಿದೆವು. ಬರುವ ಮಧ್ಯದಲ್ಲಿ ಯಾರೋ ಒಬ್ಬ ನಮ್ಮನ್ನು ದುರುಗುಟ್ಟಿ ನೋಡಿದನೆಂದು ಅವನೊಂದಿಗೆ ಜಗಳವಾಡಿ ಬಂದೆವು. ಮೈದಾನಕ್ಕೆ ಬಂದವನು, ಯತೀಶ ಕುಡಿಯುತ್ತಿದ್ದ ಒಂದು ಫುಲ್ ಬಾಟಲಿ ರಮ್ ಅನ್ನು ಕಿತ್ತುಕೊಂಡು ಗಟ ಗಟ ಎಂದು ಕುಡಿದುಬಿಟ್ಟೆ, ಕುಡಿದನ್ನು ಬಿಟ್ಟರೇ ಮತ್ತೇನೂ ನೆನಪಿಲ್ಲ ನನಗೆ. ಮುಂಜಾನೆ ಎದ್ದು ನೋಡಿದರೇ, ಮೈಮೇಲೆಲ್ಲ ವಾಂತಿಯ ಗುರುತುಗಳು, ನನಗೆ ನನ್ನ ಮೇಲೆ ಅಸಹ್ಯವೆನಿಸತೊಡಗಿತ್ತು, ಅಲ್ಲಿಂದ ಬರಿಗಾಲಲ್ಲಿ ನಡೆದು ಹಾಸ್ಟೇಲ್ ತಲುಪಿದೆ, ಸ್ವಲ್ಪ ಹೊತ್ತು ಕುಳಿತು ನಂತರ ನದಿಯ ದಂಡೆಗೆ ಹೋದೆ. ಸ್ನಾನ ಮಾಡಲೂ ತ್ರಾಣವಿರಲಿಲ್ಲ. ಅದು ಹೇಗೆ ನಡೆದುಕೊಂಡು ಮನೆ ಸೇರಿದೇನೋ ನೆನಪಿಲ್ಲ, ಬಂದವನ ರೂಮಿನಲ್ಲಿ ಮಲಗಿದೆ. ಮನೆಯಲ್ಲಿ ಆ ವೇಳೆಗೆ ನಾನು ಕುಡಿದು ಜಗಳ ಮಾಡಿಕೊಂಡಿರುವ ವಿಷಯ ತಲುಪಿತ್ತು. ಅಜ್ಜಿ ಮತ್ತು ಅಮ್ಮಾ ಕ್ಲಾಸು ತೆಗೆದುಕೊಂಡರು.

ನಾನು ಕುಡಿದು ಜಗಳ ಮಾಡಿಕೊಂಡಿದ್ದ ವಿಷಯವನ್ನು ಮನೆಗೆ ತಲುಪಿಸಿದ್ದು, ಅಂಗಡೀ ಕಿರಣನ ತಾಯಿ. ಸ್ವಲ್ಪ ದಿನಗಳ ಹಿಂದೆ ಕಿರಣನಿಗೆ ಹೊಡೆದಿದ್ದೆವು. ಅವನು ನಮ್ಮ ನೆಂಟರ ಹುಡುಗಿಯ ಹಿಂದೆ ಸುತ್ತಾಡುತ್ತಿದ್ದಾನೆಂದು ತಿಳಿದು, ಕೂಡ್ಲೂರಿನ ಸೋಮಾ ಬಂದು ನನ್ನನ್ನು ಕೇಳಿದ, ನಿಮ್ಮೂರಿನ ಹುಡುಗ ಹೀಗೆ ಮಾಡುತ್ತಿದ್ದಾನೆ, ಏನು ಮಾಡಲಿ ಎಂದು. ಅದಕ್ಕೆ ನಾನು, ನಾನು ಸೇರುತ್ತೇನೆಂದು ಹೇಳಿ ಜೊತೆಯಲ್ಲಿ ಹೊಡೆದಿದ್ದೆವು. ಇದನ್ನೇ ಬಳಸಿಕೊಂಡ ಅವನು ನನ್ನ ಬಗ್ಗೆ ಮನೆಯಲ್ಲಿ ಚೆನ್ನಾಗಿಯೇ ಪುಂಗಿ ಊದಿಸಿದ್ದ. ನಮ್ಮಮ್ಮ ಬಂದವರು, ನನ್ನನ್ನು ದೇವರ ಮನೆಗೆ ಕರೆದೊಯ್ದು, ಆಣೆ ಪ್ರಮಾಣ ಮಾಡಿಸತೊಡಗಿದರು. ಆ ಸಮಯದಲ್ಲಿ ನಮ್ಮಜ್ಜಿ ಹೇಳಿದ ಮಾತು ಮತ್ತು ಅವರು ಅದನ್ನು ನಿಭಾಯಿಸಿದ ರೀತಿ ಅದ್ಬುತವೆನಿಸುತ್ತದೆ. ನಾನು ಹಿಂದೆ ಮುಂದೆ ಯೋಚಿಸುತ್ತಿದ್ದೆ, ಸುಮ್ಮನೆ ಪ್ರಮಾಣ ಮಾಡಿ ನಾಳೆ ದಿನ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ನಾನು ಸುಮ್ಮನೆ ಮಾತು ಕೊಟ್ಟು ಪಜೀತಿಗೆ ಸಿಕ್ಕಿ ಹಾಕಿಕೊಂಡಿರುವುದು ಕೇವಲ ಒಂದು ವಿಷಯದಲ್ಲಿ, ಅದು ಪ್ರೀತಿಯ ವಿಷಯದಲ್ಲಿ ಮಾತ್ರ. ಬೇರೆಯವರಿಗೆ ಆಗುವುದಿಲ್ಲವೆನ್ನಬಹುದು, ಆದರೇ ಹುಡುಗಿಯರ ವಿಷಯದಲ್ಲಿ ಮಾತ್ರ ನಾನು ಪಜೀತಿಗೆ ಸಿಕ್ಕಿಹಾಕಿಕೊಂಡಿದ್ದೇನೆ. ನಾವು ಒಂದನ್ನು ಹೇಳಿದರೇ ಈ ಹುಡುಗಿಯರ ಮತ್ತೊಂದಾಗಿ ಅರ್ಥೈಸಿಕೊಳ್ಳುತ್ತಾರೆ. ಮದುವೆಯ ವಿಷಯದಲ್ಲಿಯಾದರೂ ಸರಿ ಪ್ರೇಮೆ ಸಲ್ಲಾಪವಾದರೂ ಸರಿ. ನೇರವಾಗಿ ನಾನು ನಿನ್ನನ್ನು ಮದುವೆಯಾಗುವುದಿಲ್ಲವೆಂದು ಯಾವ ಹುಡುಗಿಯ ಎದುರುಗಡೆಯಲ್ಲಿಯೂ ಹೇಳಲಾಗುವುದಿಲ್ಲ. ಅದರಂತೆಯೇ ಅವರಲ್ಲಿ ಏನಾದರೂ ಕೊಂಕಿದ್ದರೂ ಹೇಳಲಾಗುವುದಿಲ್ಲ. ಸ್ವಲ್ಪ ರೇಗಿದರೂ ಅಲ್ಲಿ ಮಹಬಾರತವಾಗುತ್ತದೆ. ಹೋಗಲಿ ಬಿಡಿ. ಅಜ್ಜಿ ಬಂದು ಅಮ್ಮನಿಗೆ ಹೇಳಿದರು, ನೋಡು ನೀನು ಆಣೆ ಪ್ರಮಾಣ ಮಾಡಿದ ಮಾತ್ರಕ್ಕೆ ಅವನು ಅದನ್ನೆಲ್ಲಾ ನಿಲ್ಲಿಸುವುದಿಲ್ಲ. ಒಳ್ಳೆಯ ಮಾತಿನಿಂದ ಹೇಳು, ಹೀಗೆಲ್ಲಾ ಮಾಡಬೇಡ, ಅಪ್ಪನ ಮರ‍್ಯಾದೆ ವಿಷಯ ಹಾಗೇ ಹೀಗೆ ಎಂದು ಒಂದತ್ತು ನಿಮಿಷ ಕಥೆ ಹೇಳಿದರು. ಆ ವಯಸ್ಸಿನಲ್ಲಿ, ಅದನ್ನೆಲ್ಲ ಕೇಳುವ ತಾಳ್ಮೆಯಾರಿಗಿತ್ತು. ನಾನು ಯೋಚನೆ ಮಾಡಿದೆ, ನನಗೆ ಚಿಂತೆ ಇದ್ದದ್ದು ಅಪ್ಪನದ್ದಲ್ಲ, ನಮ್ಮಮ್ಮನದ್ದು, ಅವರಿಗೆ ಮೊದಲೇ ಉಷಾರಿರಲಿಲ್ಲ. ನನ್ನ ಬಗ್ಗೆ ಯೋಚನೆ ಮಾಡಿ ಹಾಸಿಗೆ ಹಿಡಿದರೆಂಬ ಭಯವಾಯಿತು. ನನಗೆ ಇಂದಿಗೂ ಅಷ್ಟೇ ನಮ್ಮಮ್ಮನದ್ದೇ ಚಿಂತೆ, ಅವರು ಒಬ್ಬರೇ ಕುಳಿತು ಯೋಚನೆ ಮಾಡುತ್ತಾರೆ. ತಿಂಗಳಲ್ಲಿ ಹದಿನೈದು ದಿವಸ ಹಾಸಿಗೆ ಹಿಡಿದಿರುತ್ತಾರೆ. ಅಂತೂ ಅಲ್ಲಿಂದ ತಪ್ಪಿಸಿಕೊಂಡೆ ಎನಿಸಿತು. ಕುಡಿಯುವುದನ್ನು ನಿಲ್ಲಿಸಲಿಲ್ಲ, ಆದರೆ ಎಚ್ಚರಿಕೆ ವಹಿಸಿದೆ. ಜಗಳವಾಡುವುದನ್ನು ಕಡಿಮೆಮಾಡಿದೆ.

ಆ ದಿನಗಳಲ್ಲಿ ಅನುಭವಿಸಿದ ನರಕಯಾತನೆ ಹೇಳತೀರದು. ಜನರು ಕುಡಿಯುತ್ತಾರೆ, ಆದರೇ ನನ್ನನ್ನು ಕುಡುಕನೆಂದು ಕರೆಯುತ್ತಾರೆ. ಇದೆಂಥಹ ವಿಚಿತ್ರವೆನಿಸಿತ್ತು. ನನ್ನೊಂದಿಗೆ ಕುಡಿದ ಹತ್ತು ಹದಿನೈದು ಹುಡುಗರೆಲ್ಲರೂ ಸಾಚಾಗಳು, ನಾನು ಮಾತ್ರ ಕುಡುಕನಾದೆ. ಜನರ ಬಗ್ಗೆ ಬಹಳ ಅಸಹ್ಯವೆನಿಸಿತ್ತು. ಅದಾದ ಮೇಲೆ ಹನ್ನೆರಡು ಶಿವರಾತ್ರಿ ನಡೆದಿದೆ, ಇಲ್ಲಿಯ ತನಕವೂ ಒಂದೇ ಒಂದು ಶಿವರಾತ್ರಿಯ ದಿನ ಕುಡಿದಿಲ್ಲ ನಾನು. ನಾನು ಆ ಒಂದು ದಿನ ನಡೆದುಕೊಂಡ ರೀತಿಗೆ ಇಂದಿಗೂ ಮರುಗುತ್ತೇನೆ, ಇಂದಿಗೂ ಅಷ್ಟೇ ಬಹಳ ಎಚ್ಚರಿಕೆಯಿಂದ ಇದ್ದೇನೆ. ಜನರು ನಾವು ಕೆಳಗೆ ಬಿದ್ದಾಗ ಬಹಳ ಕೆಟ್ಟದ್ದಾಗಿ ನಡೆಸಿಕೊಳ್ಳುತ್ತಾರೆ, ಅವರಿಗೆ ಮಾತ್ರವೇ ಮಾನ, ಮರ‍್ಯಾದೆ, ಗೌರವ, ಸ್ವಾಭಿಮಾನವಿರುವುದೆಂದು ಬಿಂಬಿಸಿಕೊಳ್ಳುತ್ತಾರೆ. ನಾನು ಅಂದು ಅವರಾರಿಗೂ ಬೈಯ್ಯಲಿಲ್ಲ, ಆದರೇ ದೇವರಲ್ಲಿ ಕ್ಷಮೆ ಕೇಳಿದೆ, ಯಾಕೆ ನನ್ನನ್ನು ಹೀಗೆ ಮಾಡಿದೆ ಎಂದೆ. ನನ್ನದು ತಪ್ಪಿತ್ತು. ಯಾವುದೇ ಆಗಲೀ ಇತಿ ಮಿತಿಯಲ್ಲಿದ್ದರೇ ಮರ‍್ಯಾದೆ. ನಾನು ಮಿತಿ ಮೀರಿದ್ದೆ, ನನ್ನ ಅಹಂಗೆ ಕೊನೆಯಿರಲಿಲ್ಲ. ನಾನು ಬದಲಾದೆ, ಬುದ್ದಿ ಕಲಿತೆ, ಬುದ್ದಿ ಕಲಿತೆ ಎನ್ನುವುದಕ್ಕಿಂತ ಪರಿಸ್ಥಿತಿ ಕಲಿಸಿತೆಂದರೂ ಸರಿಯೇ...ಒಮ್ಮೊಮ್ಮೆ ನನಗೆ ಎನಿಸುತ್ತದೆ, ಆ ದಿನ ನನ್ನ ಜೊತೆ ಕುಡಿದವರು, ನನ್ನನ್ನು ಕುಡುಕನೆಂದು ಗೇಲಿ ಮಾಡಿದವರೆಲ್ಲಾ ಸುದ್ದಿಯೇ ಇಲ್ಲದಂತಿದ್ದಾರೆ. ನನ್ನನ್ನು ಕಂಡರೇ ಮಾತನಾಡಲು ಹಿಂಜರಿಯುತ್ತಾರೆ, ಅನುಮಾನವೂ ಇದೆ, ಒಂದು ಇವನು ನಿಜಕ್ಕೂ ಬದಲಾದನಾ? ಎಂದು, ಮತ್ತೊಂದು ಇದೆಲ್ಲಾ ಹಣೆಬರಹವಾ ಎಂದು..ಅವಮಾನವಾದಾಗ ಮಾತ್ರ ಬೆಳೆಯುತ್ತೇವೆ, ಅದನ್ನು ಒಳ್ಳೆಯ ದಾರಿಯಲ್ಲಿ ತೆಗೆದುಕೊಳ್ಳಬೇಕು, ಸೇಡಾಗಿ ಬೆಳಸಬಾರದು. ಸೋಲಿಗೆ ಕೊನೆಯಿಲ್ಲ, ಗೆಲುವಿಗೂ ಕೊನೆಯಿಲ್ಲ. ನಂಬಿಕೆಯ ಮೇಲೆ ನಿಂತಿರುತ್ತದೆ, ಬದುಕು, ನಮ್ಮ ಬದುಕಿನ ಎಲ್ಲಾ ಆಗು ಹೋಗುಗಳಿಗೆ ಕಾರಣ ಮೂವರು. ಒಂದು ನಾವು, ಮತ್ತೊಂದು ಪರಿಸ್ಥಿತಿ ಮಗದೊಂದು ಕಾಣದ ಕೈ.

ಬಾಲ್ಯವೆಂಬ ಹಾಸ್ಯದ ಹೊನಲಲ್ಲಿ ಮಿಂದ ನೆನಪುಗಳು....!!!

ಅದೇನೋ ಗೊತ್ತಿಲ್ಲ ಈ ಮೂರ‍ನಾಲ್ಕು ದಿನಗಳಿಂದ ಅತಿಯಾಗಿ ಬರೆಯುತ್ತಿದ್ದೇನೆ. ನಾನು ಒಮ್ಮೊಮ್ಮೆ ಹೀಗೆ ಒಂದೇ ಸಮನೇ ಬರೆಯುವುದು ಕೆಲವೊಮ್ಮೆ ನಿಲ್ಲಿಸಿಬಿಡುವುದು. ಅದೇಕೆ ನಾನು ಹೀಗೆ ಆಡುತ್ತೇನೆಂದರೇ ನನ್ನ ಬಳಿಯಲ್ಲಿ ಉತ್ತರವಿಲ್ಲ. ನನ್ನ ಗೆಳತಿಯೂ ಹೀಗೆ ಕೇಳುತ್ತಿರುತ್ತಾಳೆ. ನೀನು ಮೆಂಟಲ್? ಒಮ್ಮೊಮ್ಮೆ ಪ್ರೀತಿ ಉಕ್ಕಿ ಹರಿಯುತ್ತದೆ, ಮತ್ತೊಮ್ಮೆ ನಾನು ಬದುಕಿದ್ದೀನಿ ಎಂಬುದರ ಅರಿವೇ ಇಲ್ಲದಂತೆ ಮಾಯವಾಗುತ್ತೀಯಾ? ಯಾಕಿಷ್ಟು ಉಢಾಫೆತನ ನನ್ನ ಬಗ್ಗ? ಎನ್ನುತ್ತಾಳೆ. ನನಗೂ ತಿಳಿದಿರುವುದಿಲ್ಲ ಅದು, ಉಢಾಫೆತನವೊ? ಅಥವಾ ನಾನು ನಿಜವಾಗಿಯೂ ಬಿಡುವಿಲ್ಲದೇ ಹಾಗೆ ಮಾಡುತ್ತೇನಾ? ಅದೇನೆ ಇರಲಿ. ಅನುಭವಿಸುವವಳು ಅವಳು. ನಾನು ಮುಖ್ಯವಾಗಿ ಬರೆಯುವುದಕ್ಕೆ ಹೋದದ್ದು, ನನ್ನ ಬಾಲ್ಯದ ದಿನಗಳನ್ನು ಕುರಿತಾಗಿ. ನನಗೆ ನಮ್ಮ ಬಾಲ್ಯದ ದಿನಗಳ ಬಗ್ಗೆ ಬಹಳ ಪ್ರಿತಿಯಿದೆ. ಎಲ್ಲರಿಗೂ ಇರಬಹುದು, ಆದರೇ ನನ್ನ ಬರವಣಿಗೆಯನ್ನು ಓದಿದ ಮೇಲೆ ಹೌದೆನಿಸಬಹುದೆಂಬ ಭಾವನೆಯೊಂದಿಗೆ ಶುರು ಮಾಡುತ್ತಿದ್ದೇನೆ. ನಾನು ಮನೆಯಲ್ಲಿ ಒಬ್ಬನೇ ಮಗನಾಗಿ ಬೆಳೆದೆ. ಆ ದಿನಗಳಲ್ಲಿ ನನಗೊಬ್ಬ, ಅಣ್ಣನೋ, ತಮ್ಮನೋ ಇರಬೇಕಿತ್ತೆನಿಸುತ್ತಿತ್ತು. ಈಗ ಅಣ್ಣ ತಮ್ಮಂದಿರ ಜಗಳ, ವೈಮನಸ್ಯ ನೋಡಿದರೇ ನಾನು ಒಬ್ಬನೇ ಹುಟ್ಟಿದ್ದು ಒಳ್ಳೆಯದ್ದೇ ಆಯಿತೆನಿಸುತ್ತದೆ. ನಾನು ನನಗೆ ನೆನಪಿರುವ ಹಾಗೆ, ನನ್ನ ಶಿಶುವಿಹಾರದ ದಿನಗಳಿಂದಲೂ ನನ್ನ ಬಾಲ್ಯದ ದಿನಗಳು ಬಹುತೇಕ ನೆನಪಿದೆ. ನಾನು ಹುಟ್ಟಿನಿಂದಲೂ ಬಹಳ ಭಾವಜೀವಿ. ನಾನು ಮೊದಲೇ ಹೇಳಿದಂತೆ ಹೆಚ್ಚೆಂದರೇ ಒಂದತ್ತು ಜನರಿಗೆ ನೋವುಂಟು ಮಾಡಿರಬಹುದು, ಆದರೂ ಉದ್ದೇಶಪೂರ್ವಕವಾಗಿ ಮಾಡಿಲ್ಲ. ಪರಿಸ್ಥಿತಿಯ ಒತ್ತಡಕ್ಕೆ ಮಣಿದು ದ್ರೋಹ ಮಾಡಿರುವುದು ಒಂದಿಬ್ಬರಿಗೆ.
ಚಿಕ್ಕಂದಿನಲ್ಲಿ ನನಗೆ ಶಾಲೆಗಿಂತ ಶಿಶುವಿಹಾರವೆಂದರೇ ಬಹಳ ಇಷ್ಟವೆನಿಸುತ್ತಿತ್ತು. ಶಾಲೆಗೆ ಸೇರಿದರೂ, ಮಧ್ಯಾಹ್ನ ಊಟಕ್ಕೆ ಬಿಟ್ಟೊಡನೆಯೇ ಶಿಶುವಿಹಾರಕ್ಕೆ ಓಡೋಡಿ ಬರುತ್ತಿದ್ದೆ. ಶಿಶುವಿಹಾರ ನಮ್ಮ ಮನೆಯ ಎದುರಿನಲ್ಲಿಯೇ ಇದ್ದ ರಾಮಮಂದಿರದಲ್ಲಿತ್ತು. ಈಗ ಶಾಲೆಯ ಪಕ್ಕದಲ್ಲಿ ನಡೆಸುತ್ತಿದ್ದಾರೆ. ಆ ದಿನಗಳಲ್ಲಿ ಶಿಶುವಿಹಾರ ನಡೆಸುತ್ತಿದ್ದದ್ದು, ನಮ್ಮೂರಿನ ಸರೋಜ(ಕ್ಕ), ಅವರು ನಿಜಕ್ಕೂ ನಾನು ಕಂಡ ಅದ್ಬುತಾ ಶಿಕ್ಷಕಿಯರಲ್ಲೊಬ್ಬರೆಂದರೇ ತಪ್ಪಿಲ್ಲ. ಅವರು ಹೇಳಿ ಕೊಡುತ್ತಿದ್ದ, ಮಗ್ಗಿ, ಪಾಠ, ಹಾಡುಗಳು, ಅದನ್ನು ಅವರು ಅನುಭವಿಸಿ, ಕುಣಿದು ಕುಪ್ಪಳಿಸಿ ಹೇಳಿಕೊಡುತ್ತಿದ್ದ ರೀತಿ ಎಲ್ಲರನ್ನೂ ಹಿಡಿದು ನಿಲ್ಲಿಸುತ್ತಿತ್ತು. ನಾನು ಶಾಲೆಯಿಂದ ಊಟಕ್ಕೆ ಬಂದೊಡನೆ ಶಿಶುವಿಹಾರಕ್ಕೆ ಹೋಗಿ, ಅರ್ಧ ಗಂಟೆ ಕುಣಿದು, ಹಾಡು ಹೇಳಿ ನಂತರ ಊಟ ಮಾಡಿ ವಾಪಾಸ್ಸಾಗುತ್ತಿದ್ದೆ. ಅವರು ಇಂದಿಗೂ ನಾನು ಊರಿಗೆ ಹೋದರೇ ಅಕ್ಕರೆಯಿಂದ ಮಾತನಾಡಿಸುತ್ತಾರೆ. ನಮ್ಮಮ್ಮನನ್ನು ಆಗ್ಗಾಗ್ಗೆ ವಿಚಾರಿಸುತ್ತಿರುತ್ತಾರಂತೆ.
ಹಾಗೇಯೇ ಶಾಲೆಯಲ್ಲಿ ಓದುವಾಗ ಮೂರನೇಯ ತರಗತಿಯವರೆಗೆ ಯೋಗಿ ನಮ್ಮ ಜೊತೆಯಲ್ಲಿ ಓದುತ್ತಿದ್ದ. ಅದಾದ ನಂತರ ಅವನು ಮೈಸೂರಿಗೆ ಹೋದ. ಆ ಸಮಯದಲ್ಲಿ ಅವರ ಅಣ್ಣ ಫಾಲಾಕ್ಷ, ಕೊಪ್ಪದಲ್ಲಿ ಕಾನ್ವೆಂಟ್ ನಲ್ಲಿ ಓದುತ್ತಿದ್ದ. ನಮ್ಮದು ಸರ್ಕಾರಿ ಕನ್ನಡ ಶಾಲೆ, ಕೊಪ್ಪ ಕಾನ್ವೆಂಟ್ ಎಂದರೇ ನಮಗೆ ಆಕ಼್ಷಫರ್ಡ್ ಇದ್ದ ಹಾಗೆನಿಸಿತ್ತು. ಶಾಲೆಯ ಪಕ್ಕದಲ್ಲಿ ಶನಿದೇವರ ದೇವಸ್ಥಾನವಿದೆ. ಮಾರಯ್ಯ ಅಲ್ಲಿನ ಪೂಜಾರಿ. ಅವರ ತಮ್ಮನ ಮಗ ವರ ನಮ್ಮ ಕ್ಲಾಸಿನಲ್ಲಿ ಓದುತ್ತಿದ್ದ. ತಡೆ ಒಡೆಯುವುದು, ನಿಂಬೆ ಹಣ್ಣು ಮಂತ್ರಿಸುವುದು, ದೆವ್ವ ಭೂತ ಬಿಡಿಸುವುದೆಲ್ಲ ನಡೆಯುತ್ತಿತ್ತು. ನಮಗೆ ಆಗೆಲ್ಲ ತಿಂಗಳ ಕಿರುಪರೀಕ್ಷೆ ಇರಲಿಲ್ಲ. ಅವರಿಗೆ ಇಷ್ಟ ಬಂದಾಗ ಕೊಡುತ್ತಿದ್ದರು. ಯೊಗಿ ಬಹಳ ಚೆನ್ನಾಗಿ ಓದುತ್ತಿದ್ದ, ಅವನು ವರ, ಮಹೇಶ, ಪ್ರಕಾಶ, ಲಿಂಗರಾಜು ಈ ಹುಡುಗರಿಗೆ ತೋರಿಸದೇ ಇದ್ದರೇ ನಿಂಬೆಹಣ್ಣು ಮಂತ್ರಿಸಿ ನಿನಗೆ ಮಾತು ಬಾರದಂತೆ ಮಾಡುತ್ತೇನೆಂದು ಹೆದರಿಸುತ್ತಿದ್ದರು. ಬಹಳಷ್ಟು ಜನರು ಹೇಳುತ್ತಾರೆ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂದು, ನಾನು ಅದನ್ನು ಒಪ್ಪುವುದಿಲ್ಲ. ನೀವು ಗಮನಿಸಿ ನೋಡಿ, ಜೀವನದಲ್ಲಿ ಅತಿ ಮುಂದುವರೆದವರೆಲ್ಲರೂ ಹುಟ್ಟಿನಿಂದ ದಡ್ಡರೂ, ನೊಂದಿರುವವರು. ಆ ನೋವಿನ ಫಲವೇ ಅವರನ್ನು ಎತ್ತರಕ್ಕೆ ಬೆಳೆಸುತ್ತದೆ. ಯೋಗಿ ಮೈಸೂರಿಗೆ ಹೋದ ಮೇಲೆ ಏನಾದನೆಂಬುದು, ಅವನು ಹತ್ತನೆಯ ತರಗತಿಯಲ್ಲಿ ಪಾಸಾದ ಮೇಲೆ ಗೊತ್ತಾಯಿತು. ಅದೇ ಸಮಯದಲ್ಲಿ, ವೇಣು, ವೀಣಾ, ವೇದಾ ಎಂಬ ಮೂವರು ಮೈಸೂರಿಗೆ ಹೋದರು, ಅವರೆಲ್ಲರೂ ಯೋಗಿ ಅವರ ನೆಂಟರು. ಮೈಸೂರಿಗೆ ಹೋಗಿ ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಆಸೆಯಿಂದ ಮೈಸೂರು ಸೇರಿದ ಮೂರು ಕುಟುಂಬಗಳು. ವಿಚಿತ್ರವೆಂದರೇ, ಮೂರು ಕುಟುಂಬದಿಂದಲೂ ಅತಿಯೇನೂ ಓದಲಿಲ್ಲ.
ನಮ್ಮ ಓದು ಸರ್ವೇ ಸಾಮಾನ್ಯವಾಗಿ ನಡೆದಿತ್ತು. ನಮ್ಮ ಅಪ್ಪ ಎಪ್ಪತ್ತರ ದಶಕದಲ್ಲಿಯೇ, ಬಿಎ ಓದಿದ್ದರು. ಅವರು ಬಹಳ ಶಿಸ್ತಿನ ವ್ಯಕ್ತಿ. ನಮ್ಮ ಇಡೀ ಕುಟುಂಬದಲ್ಲಿಯೇ ಅವರಿಗೆ ಹೆಚ್ಚಿನ ಗೌರವವಿತ್ತು. ಅವರನ್ನು ನೋಡಿದರೇ ಬಹಳ ಜನ ಹೆದರುತ್ತಿದ್ದರು, ಅವರು ಒಮ್ಮೆ ಹೇಳಿದರೇ ಬದಲಾಯಿಸುವ ಪ್ರಮೇಯವೇ ಇರಲಿಲ್ಲ. ಇಂದಿಗೂ ಅದನ್ನು ಪಾಲಿಸುತ್ತ ಬಂದಿದ್ದಾರೆ. ಯಾವುದೇ ಕೆಟ್ಟ ಚಟಗಳಿರಲಿಲ್ಲ. ಚಿಕ್ಕಂದಿನಲ್ಲಿ ನನಗೆ ಅಲ್ಪ ಸ್ವಲ್ಪ ಓದುವುದನ್ನು ಹೇಳಿಕೊಡುತ್ತಿದ್ದರು. ನಾನು ಅದರಿಂದಾಗಿ, ಎಬಿಸಿಡಿಯನ್ನು, ಇಪ್ಪತ್ತರವರೆಗೆ ಮಗ್ಗಿಯನ್ನು, ಕಾಗುಣಿತವನ್ನು ನನ್ನ ಎರಡನೇಯ ಕ್ಲಾಸಿನಲ್ಲಿಯೇ ಕಲಿತಿದ್ದೆ. ಒಂದು ದಿನ ಇದ್ದಕ್ಕಿದ್ದ ಹಾಗೆ ವಾಸು ಮಾಸ್ಟರು ನನ್ನನ್ನು ಅವರು ಪಾಠ ಮಾಡುತ್ತಿದ್ದ, ಏಳನೆಯ ತರಗತಿಗೆ ಕರೆದರು. ನಾನು ಬಾಗಿಲ ಬಳಿಯಲ್ಲಿ ನಿಂತೆ, ಸಾ ಎಂದೆ. ಅವರೆಂದರೇ ಎಲ್ಲರೂ ಗಡ ಗಡ ಎನ್ನುತ್ತಿದ್ದರು. ಚೆನ್ನಾಗಿ ಪಾಠ ಮಾಡುತ್ತಿದ್ದರು ಕೂಡ. ನಾನು ಬಾಗಿಲ ಬಳಿಯಲ್ಲಿ ನಿಂತು ನೋಡಿದರೇ, ನಾಲ್ಕೈದು ಜನ ದಾಂಡಿಗರು ಮಂಡು ಊರಿಕೊಂಡು ಕಿವಿ ಹಿಡಿಯುತ್ತಿದ್ದರು. ಅಂಥಹ ಶಿಕ್ಷೆಯೇ ಇಲ್ಲ ಬಿಡಿ ಈಗ. ನನ್ನನ್ನು ಒಳಗೆ ಕರೆದು ಹದಿನಾಲ್ಕರ ಮಗ್ಗಿ ಹೇಳು ಎಂದರು, ನಾನು ಸ್ವಲ್ಪ ಭಯದಿಂದಲೇ ಶುರು ಮಾಡಿಕೊಂಡು ಹೇಳಿ ಮುಗಿಸಿದೆ.
ಎರಡನೆಯ ಕ್ಲಾಸಿನ ಹುಡುಗ, ಹದಿನಾಲ್ಕರ ಮಗ್ಗಿ ಹೇಳುವುದು ನಿಜಕ್ಕೂ ಹೆಮ್ಮೆಯ ವಿಷಯ. ಅದಾದ ಮೇಲೆ ಎಲ್ಲರಿಗೂ ಮೂಗು ಹಿಡಿದು ಕೆನ್ನೆಗೆ ಹೊಡೆಯಲು ಹೇಳಿದರು. ನನಗೆ ಹೊಡೆಯಲು ಭಯ. ಅವರುಗಳ ಮುಖವನ್ನು ನೋಡದೇ ಹೊಡೆದು ಓಡಿ ಬಂದು ನನ್ನ ಕ್ಲಾಸಿಗೆ ಸೇರಿಕೊಂಡೆ. ಆ ದಾಂಡಿಗರೆಲ್ಲರೂ ಏಳನೆಯ ತರಗತಿಯವರು, ಮೂರು ದಿನದ ಹಿಂದೆಯಷ್ಟೇ ಪಕ್ಕದ ಊರಾದ ಸೀಗೋಡಿನ ಹುಡುಗರ ಜೊತೆ ಜಗಳವಾಡಿ, ಅವರ ಕಣ್ಣಿಗೆ ಮೆಣಸಿನ ಪುಡಿ ಹಾಕಿ ಬಂದಿದ್ದರು. ನಾನು ಆಟೋಟಗಳಲ್ಲಿ ಮುಂದಿರಲಿಲ್ಲ. ಆದರೇ, ಓದುವುದರಲ್ಲಿ, ಇತರೇ ಚಟುವಟಿಕೆಗಳಾದ, ನಾಟಕ, ಹಾಡು ಹೇಳುವುದು, ಬರೆಯುವುದು, ಕಂಠಪಾಟ ಸ್ಪರ್ಧೆಗಳಲ್ಲಿ ಮುಂದಿರುತ್ತಿದ್ದೆ. ಒಂದರಿಂದ ಏಳನೇಯ ತರಗತಿಯವರೆಗೂ ವರ್ಷಕ್ಕೆ ಹತ್ತು ಬಹುಮಾನವನ್ನಾದರೂ ದೋಚುತ್ತಿದ್ದೆ. ನನಗಿಂದಿಗೂ ನೆನಪಿದೆ, ವಾಸು ಮಾಸ್ಟರು ಹೋದಮೇಲೆ, ನಾಗೇಶಯ್ಯ ಎಂಬುವರು ಬಂದಿದ್ದರು. ಅದ್ಬುತವಾಗಿ ಪಾಠ ಮಾಡುತ್ತಿದ್ದರು. ನಂತರ ಲೋಕೇಶ್ ಮಾಸ್ಟರು ಬಂದರು ವಯಸ್ಸಿನಲ್ಲಿ ಬಹಳ ಚಿಕ್ಕವರಿದ್ದರು, ಮದುವೆಯಾಗಿರಲಿಲ್ಲ. ಅವರು ಬಂದ ಹೊಸತರಲ್ಲಿ ನೀವೆಲ್ಲಾ ಏನಾಗುತ್ತೀರಾ? ಎಂದರು. ಅದು ನನಗೆ ನಿಜಕ್ಕೂ ತಮಾಷೆಯೆನಿಸುತ್ತದೆ. ಏನಾಗಬೇಕೆಂಬುದರ ಅಲ್ಪ ಕಲ್ಪನೆಯೂ ನಮಗಿಲ್ಲ. ನಾನು ಎಂಎಸ್ಸಿಯಲ್ಲಿದ್ದಾಗ ಕೂಡ ಈ ಮಾತಿಗೆ ನಾನು ನಕ್ಕಿದ್ದೆ. ನಾನು ಮೊದಲನೆಯ ದಿನ ಹೋಗಿ SP ಆಗುತ್ತೇನೆ ಎಂದೆ, ರಾತ್ರಿ ಇಡೀ ಯೋಚಿಸಿದೆ, ಪೋಲಿಸು ಕೆಲಸ ಸರಿ ಇಲ್ಲವೆನಿಸಿತು. ಮಾರನೇಯ ಬೆಳ್ಳಿಗೆ ಹೋಗಿ ಹೇಳಿದೆ, ಸಾ ನಾನು SP ಆಗುವುದಿಲ್ಲ JE ಆಗುತ್ತೇನೆಂದು. ಅವರು ನಕ್ಕು ಹೇಳಿದರು, ನೀವು ಏನೇನು ಹೇಳಿದ್ದಿರೋ ಅದನ್ನು ಇಲ್ಲಿ ಬರೆದಿಟ್ಟಿದ್ದೇನೆ, ಮುಂದೊಂದು ದಿನ ತೆಗೆದು ನೋಡಬಹುದು ಎಂದು.
ಲೋಕೇಶ್ ಮಾಸ್ಟರು ಬಂದು ನಮಗೆ ಬೆಳ್ಳಿಗ್ಗೆ ಎದ್ದು ಓಡಿದರೇ ಆರೋಗ್ಯವಂತರಾಗಿರುತ್ತಾರೆ, ಆದ್ದರಿಂದ ನೀವು ಓಡಬೇಕು ಎಂದರು. ಚಿಕ್ಕಂದಿನಲ್ಲಿ ಏನು ಹೇಳಿದರೂ ಮಾಡುತ್ತೇವೆ, ಬಹಳ ಹುಮ್ಮಸ್ಸಿನಿಂದ ಏಳುವುದನ್ನು ಅಭ್ಯಾಸ ಮಾಡಿದೆವು. ನಾಲ್ಕು ಗಂಟೆಗೆ ಏಳುವುದು, ಎಲ್ಲಾ ಹುಡುಗರನ್ನು ಎಬ್ಬಿಸುವುದು, ಎಲ್ಲರೂ ಒಟ್ಟಿಗೆ ಸೇರಿ, ಓಡುವುದು, ಬಂದಮೇಲೆ, ಕೋಕೊ ಆಡುವುದು, ಒಂಟಿ ಕಾಲಲ್ಲಿ ಜೂಟಾಟ ಆಡುವುದು ಆಮೇಲೆ ಮನೆಗೆ ಹೋಗುವುದು. ನಾನು ಬಹಳ ಕುಳ್ಳಗಿದ್ದೆ, ಓದುವುದರಲ್ಲಿ ಚುರುಕಿದ್ದೆ. ಆ ಸಮಯದಲ್ಲಿ ನನ್ನ ಕಿರಿಯರಾದ, ನಂದಿನಿ ಮತ್ತು ಶೀಲಾ ಎಂಬ ಎರಡು ಹುಡುಗಿಯರಿಗೆ ನನ್ನ ಮೇಲೆ ಏನೋ ಒಂದು ಬಗೆಯ ಅಭಿಮಾನವಿತ್ತು. ನನ್ನ ವಿಷಯಕ್ಕಾಗಿ ಅವರಿಬ್ಬರು ಜಗಳವಾಡಿ ಮುನಿಸಿಕೊಂಡಿದ್ದು ನನಗಿಂದಿಗೂ ನೆನಪಿದೆ. ಆ ವಯಸ್ಸಿನಲ್ಲಿ ಅದೇನು? ಪ್ರೀತಿಯಾ? ಆಕರ್ಷಣೆಯಾ? ನನಗಿಂದಿಗೂ ತಿಳಿದಿಲ್ಲ.
ನನ್ನ ಪ್ರೈಮರಿ ದಿನಗಳಲ್ಲಿ ರಂಗಪ್ಪ ಎನ್ನುವ ಒಬ್ಬ ಮಾಸ್ತರಿದ್ದರು. ಹಳೇ ಮಾಸ್ಟರೆಂದು ಹೆಸರುವಾಸಿಯಾಗಿದ್ದರು. ಅವರು ಮಧ್ಯಾಹ್ನ ಊಟವಾದಮೇಲೆ, ಮೂರು ಹಲಗೆಗಳನ್ನು ಜೋಡಿಸಲಿ ಹೇಳಿ ಒಂದು ಗಂಟೆಗಳ ಕಾಲ ಮಲಗುತ್ತಿದ್ದರು. ಅದನ್ನು ನೆನಪಿಸಿಕೊಂಡರೇ ಇಂದಿಗೂ ನಗು ಬರುತ್ತದೆ. ಏಳನೇಯ ಕ್ಲಾಸಿನ ಹುಡುಗರಿಗೆ ಹೇಳಿ, 10, 25, 50 ಪೈಸೆಗಳನ್ನು ವಸೂಲಿ ಮಾಡಿ ಬೀಡಿ ಸೇದುತ್ತಿದ್ದರು. ಆ ಸಮಯದಲ್ಲಿಯೇ ವಾಸು ಮಾಸ್ಟರು ಬಂದದ್ದು. ನಾವು ಶುರುವಿನಲ್ಲಿ ವಾಸು ಮಾಸ್ಟರನ್ನು ಹೊಸ ಮಾಸ್ಟರು, ಹಳೇ ಮಾಸ್ಟರು ಎನ್ನುತ್ತಿದ್ದೆವು. ಸ್ವಲ್ಪ ದಿನಗಳ ಮಟ್ಟಿಗೆ ಸುಂದರ್ ಮಾಸ್ಟರ್ ಎಂಬುವರು ಬಂದರು. ಅವರು ಬಹಳ ದಪ್ಪವಿದ್ದರು, ಆ ದಿನಗಳಲ್ಲಿ ನಮ್ಮೂರಿಗೆ ಬರುವುದೇ ದೊಡ್ಡ ಸಮಸ್ಯೆ, ಬಸ್ಸಿರಲಿಲ್ಲ, ಆಗಿನ ಸಂಬಳ ಪಾಪ ಬೈಕ್ ತೆಗೆದುಕೊಳ್ಳುವ ಸ್ಥಿತಿಗೆ ಸಾಕಾಗುತ್ತಿರಲಿಲ್ಲ. ಸೈಕಲ್ ಹಾಕಿಕೊಂಡು, ನಡೆದುಕೊಂಡು ಬರುತ್ತಿದ್ದರು. ಅದಾದ ನಂತರ ಬಂದದ್ದು, ನರಸಿಂಹ ಮಾಸ್ಟರು, ಅವರು ಹಳೆಯ ಲೂನಾದಲ್ಲಿ ಬರುತ್ತಿದ್ದರು. ಅವರ ಮಗ ಉಮೇಶ ಕೊಣನೂರಿಗೆ ಸೇರಿದ ಮೇಲೆ ನನ್ನ ಸ್ನೇಹಿತನಾದ. ಹಿಂದೆ ಶಾಲೆಗಳಲ್ಲಿ ರಾಷ್ಟ್ರಗೀತೆಯನ್ನು ಬಹಳ ಶಿಸ್ತುಬದ್ದವಾಗಿ ಹಾಡೀಸುತ್ತಿದ್ದರು, ಸರಿಯಾಗಿ ರಾಗ ಬಾರದಿದ್ದರೇ ಎರಡು ಮೂರು ಬಾರಿ ಹಾಡಬೇಕಿತ್ತು. ಅಂದು ಕೂಡ ಹಾಗೆಯೇ ಆಯಿತು, ನಾವು ಎತ್ತು ಉಚ್ಚೆ ಉಯ್ಯಿದ ಹಾಗೆ ಒಂದೇ ಸಮನೇ ಹಾಡಿಕೊಂಡು ಹೋದೆವು. ನಾಗೇಶಯ್ಯನವರು ರಾಗವಾಗಿ ಹೇಳಿ, ಜಯ ಜಯ ಜಯಜಯಹೇ ಎಂದರು. ಅದೇ ಸಮಯಕ್ಕೆ ನರಸಿಂಹಯ್ಯನವರು ತಮ್ಮ ಕೈಯಿಂದ ಪ್ಯಾಂಟನ್ನು ಕೆರೆದುಕೊಳ್ಳುತ್ತಾ ಜಯ ಜಯ ಜಯ ಜಯಹೇ ಅನ್ನಬೇಕೂ ಕನ್ರೋ ಪ್ಯಾಪ್ ಮುಂಡೇವಾ... ಎಂದರು. ಅವರು ಆ ದಿನದಂದು ಗೀಟೀರು ಬಾರಿಸಿಕೊಂಡು ಹೇಳಿದ್ದು, ಇಂದಿಗೂ ಉಳಿದಿದೆ, ನನ್ನೆಲ್ಲಾ ಪ್ರೈಮರಿ ಸ್ಕೂಲಿನ ಸ್ನೇಹಿತರು ನೆನಪಿಸಿಕೊಂಡು ನಗುತ್ತಾರೆ.
ಆ ಸಮಯದಲ್ಲಿ ನಮ್ಮೂರಿನಲ್ಲಿ ಟ್ಯೂಷನ್ ಮಾಡುವುದಕ್ಕೆ ಒಬರು ವೆಂಕಟೇಶ್ ಎಂಬುವರಿದ್ದರು. ಅವರು ಕೊಣನೂರಿನ ಕಾವೇರಿ ಹೈಸ್ಕೂಲಿನಲ್ಲಿ ಪಿಟಿ ಮಾಸ್ಟರಾಗಿದ್ದರು. ಒಳ್ಳೆಯ ಮನುಷ್ಯ, ಬಹಳ ಜಿಪುಣ. ಅವರು ಇಂದಿಗೂ ಬದಲಾಗಿಲ್ಲ. ಬಹಳ ಶಿಸ್ತಿನ ಮನುಷ್ಯರಾಗಿದ್ದರು. ನಮ್ಮೂರಿನವರು ಅವರನ್ನು ಕರೆದು ತಂದು, ಒಂದು ರೂಮನ್ನು ಮಾಡಿಸಿ, ಊರಿನ ಮಕ್ಕಳಿಗೆ ಪಾಠ ಮಾಡುವಂತೆ ಕೇಳಿದ್ದರು. ತಿಂಗಳಿಗೆ ಹತ್ತು ರೂಪಾಯಿಯಂತೆ ಅವರು ಪಾಠ ಮಾಡುತ್ತಿದ್ದರು. ನನಗೆ ನೆನಪಿರುವ ಪ್ರಕಾರ ಅಲ್ಲಿಗೆ ನಲ್ವತ್ತು ಮಕ್ಕಳು ಬರುತ್ತಿದ್ದರು, ರಾಮ ಮಂದಿರದಲ್ಲಿ ಪಾಠ ಮಾಡುತ್ತಿದ್ದರು. ನಲ್ವತ್ತು ಮಕ್ಕಳಲ್ಲಿ ಸರಿಯಾಗಿ ದುಡ್ಡು ಕೊಡುತ್ತಿದ್ದದ್ದು ಕೇವಲ ಹತ್ತು ಮಕ್ಕಳು ಮಾತ್ರ. ಅವರು ನಮಗೆಲ್ಲರಿಗೂ ಕಲಿಸಲು ಪಟ್ಟ ಪ್ರಯತ್ನ ಅಷ್ಟಿಸ್ಟಲ್ಲ.ಬೆಳ್ಳಿಗ್ಗೆ ಏಳು ಗಂಟೆಯಿಂದ ಒಂಬತ್ತರವರೆಗೆ ಪಾಠ ನಡೆಯುತ್ತಿತ್ತು. ಸಂಜೆ ಐದು ವರೆಯಿಂದ ಏಳುವರೆಯ ವರೆಗೆ. ಎಲ್ಲರೂ ಮುಖ ಕೈಕಾಲು ಮುಖ ತೊಳೆದು ಹಣೆಗೆ ವಿಭೂತಿ ಬಳಿದುಕೊಂಡು ಬರಬೇಕಿತ್ತು. ನಿಮಗೆಲ್ಲರಿಗೂ ಆಶ್ಚರ್ಯವಾಗಬಹುದು, ಮುಖ ತೊಳೆಯುವುದು ಒಂದು ವಿಷಯವಾ? ಎಂದು ನಮ್ಮಲ್ಲಿ ಅನೇಕಾ ಹುಡುಗರು, ಸರಿಯಾಗಿ ಮುಖವನ್ನೇ ತೊಳೆಯುತ್ತಿರಲಿಲ್ಲ, ಮುಖಕ್ಕೆ ನಾಲ್ಕು ಹನಿ ನೀರು ತಗಳಿಸಿಕೊಂಡು ಬಂದು ಬಿಡುತ್ತಿದ್ದರು. ಎಲ್ಲರ ಕಾಲುಗಳನ್ನು ನೋಡಿ ಕಾಲಿಗೆ ಎರಡು ಬಿಗಿದು ವಾಪಸ್ಸು ಕಳುಹಿಸುತ್ತಿದ್ದರು. ಸಮಯವನ್ನು ನೋಡಿ, ಇನ್ನು ಮೂರು ನಿಮಿಷದಲ್ಲಿ ವಾಪಸ್ಸು ಬರಬೇಕು ಎನ್ನುತ್ತಿದ್ದರು, ಓಡಿದವನು ಓಡುತ್ತಲೇ ಹೋಗಿ, ವಾಪಸ್ಸು ಓಡಿ ಬರುತ್ತಿದ್ದ. ಅವರು ನಮ್ಮೂರಿನಲ್ಲಿದ್ದ ಹುಡುಗರಿಗೆ ಇಡಿಸಿದ್ದ ಭಯ ಮೆಚ್ಚಲೇ ಬೇಕು. ಎಲ್ಲರೂ ಮಗ್ಗಿಯನ್ನು ಹೇಳಬೇಕು, ಪ್ರಾರ್ಥನೆ ಮಾಡಬೇಕು, ಕಾಗುಣಿತ ಹೇಳಬೇಕು, ಪಾಠವನ್ನು ಓದಬೇಕು, ಡಿಕ್ಟೇಷನ್ ತೆಗೆದುಕೊಳ್ಳಬೇಕು, ನಾನು ಇಂದಿಗೂ ಅವರು ಸಿಕ್ಕಾಗ ಹೇಳುತ್ತೇನೆ, ಆದರೇ ಈಗ ಅವರು ಸರ್ಕಾರಿ ಕೆಲಸದಲ್ಲಿದ್ದಾರೆ ನೆಮ್ಮದಿಯ ಬದುಕು ಆದರೇ ಆ ಮಟ್ಟಗಿನ ಶಿಸ್ತಿಲ್ಲ.
ಇದೆಲ್ಲವೂ ಶಾಲೆಯೊಳಗಿನ ಕಥೆಯಾದರೇ, ಶಾಲೆಯ ಹೊರಗಿನ ಕಥೆಯೇ ಬೇರೆ. ನನಗೆ ಜಮೀನೆಂದರೇ ಒಂದು ಬಗೆಯ ಆಸಕ್ತಿಯಿತ್ತು. ನಾನು ಮನೆಯಲ್ಲಿ ಕುಳಿತುಕೊಳ್ಳುವುದು ಓದುವುದು ಎಂದರೇ ಅಲರ್ಜಿ. ಮನೆಯಲ್ಲಿ ಹೋಂವರ್ಕ್ ಕೂಡ ಮಾಡುತ್ತಿರಲಿಲ್ಲ. ಬೆಳ್ಳಿಗ್ಗೆ ಶಾಲೆಗೆ ಹೋಗುವ ಸಮಯದಲ್ಲಿ ಅಮ್ಮನ ಎದುರು ಅಳುತ್ತಿರುತ್ತಿದ್ದೆ, ಅಮ್ಮ ಅಥವಾ ಅಕ್ಕ ನನ್ನ ಹೋಂವರ್ಕ್ ಮಾಡುತ್ತಿದ್ದರು. ಮುಂಜಾನೆ ಎದ್ದ ಕೂಡಲೇ ಅಮ್ಮ ಬಿಸಿ ಬಿಸಿ ಕಾಫಿ ಕೊಡುತ್ತಿದ್ದರು. ನಾನು ಐದನೇ ಕ್ಲಾಸಿನಿಂದಲೇ ಕಾಫಿ ಮಾಡುವುದನ್ನು ಕಲಿತೆ. ಆಗ ಸೀಮೆ ಎಣ್ಣೆ ಸ್ಟವ್ ಇರುತ್ತಿತ್ತು. ನಮ್ಮನೆಯಲ್ಲಿರುವ ಸ್ಟವ್ ನಮ್ಮಪ್ಪ ಓದುವ ಸಮಯದಲ್ಲಿ ತೆಗೆದುಕೊಂಡದ್ದು. ಕಾಫಿ ಕುಡಿದು ಗದ್ದೆಯ ತನಕ ಹೋಗಿ, ಅಲ್ಲಿಂದ ಕಟ್ಟೆಯ ಬಳಿಗೆ ಹೋಗಿ ಬರುತ್ತಿದ್ದೆ. ದಿನಕ್ಕೊಮ್ಮೆಯಾದರೂ ನಾನು ನದಿಯನ್ನು ನೋಡಲೇ ಬೇಕಿತ್ತು. ನಮ್ಮೂರಿನಲ್ಲಿ ನದಿಯ ಬಗ್ಗೆ ಅತಿಯಾದ ಒಲವು ಬೆಳೆಸಿಕೊಂಡದ್ದು ನಾನೊಬ್ಬನೇ ಎನಿಸುತ್ತದೆ. ನದಿ ದಂಡೆಗೆ ಹೋಗುವುದು, ಹೊಂಗೆಯ ತೋಪಿನಲ್ಲಿ ಸಮಯ ಕಳೆಯುವುದು, ನದಿಗೆ ಅಡವಾಗಿ ಕಟ್ಟಿರುವ ಕಟ್ಟೆಯ ಮೇಲೆ ಕುಳಿತುಕೊಳ್ಳುವುದು ಇದೆಲ್ಲವೂ ನನಗೆ ಎಲ್ಲಿಲ್ಲದ ಸಂತೋಷವನ್ನು ನೀಡುತ್ತಿತ್ತು. ನಮ್ಮಮ್ಮನಿಗೆ ತಿಳಿದ ದಿನ ಹರಿಕಥೆ ಮಾಡುತ್ತಿದ್ದರು. ಮಕ್ಕಳು ಆ ಕಡೆಯಲ್ಲ ಹೋಗಬಾರದು, ಸೋಕು ಆಗುತ್ತದೆ, ಅಲ್ಲಿ ಹೆಣ ಸುಡುತ್ತಾರೆಂಬುದು ಅವರ ನಂಬಿಕೆ. ನಮ್ಮ ಚಿಕ್ಕಪ್ಪನ ಮಕ್ಕಳು ಬಹಳ ಬುದ್ದಿವಂತರು, ಅವರ ಅಪ್ಪ ರೈತನಾಗಿದ್ದರಿಂದ ವ್ಯವಸಾಯದ ವಿಷಯವನ್ನು ಚೆನ್ನಾಗಿ ತಿಳಿದಿದ್ದರು. ಅವರು ಆ ದಿನಗಳಲ್ಲಿ ನನ್ನನ್ನು ಗೇಲಿ ಮಾಡುತ್ತಿದ್ದರು, ವಿಪರ್ಯಾಸವೆಂದರೇ ಅವರೆಲ್ಲ ಬೆಂಗಳೂರು ಸೇರಿದ್ದಾರೆ, ಊರಿನ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ನಾನು ನನ್ನೂರೆಂದರೇ ಪ್ರಾಣವೆನ್ನುತ್ತೇನೆ.

ನನ್ನ ಬಾಲ್ಯದ ದಿನಗಳಲ್ಲಿ ಹೆಚ್ಚು ಖುಷಿ ಕೊಟ್ಟಿದ್ದು ನನ್ನಜ್ಜಿಯ ಮನೆಯಲ್ಲಿ ಕಳೆದ ದಿನಗಳು. ನನ್ನ ತಾತನ ಜೊತೆಗೆ ಕಳೆದ ಕ್ಷಣಗಳು. ನನ್ನ ತಾತನ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ. ನಾನು ಪ್ರತಿ ವಾರ ಅಥವಾ ಹದಿನೈದು ದಿನಕ್ಕೊಮ್ಮೆಯಾದರೂ ನನ್ನಜ್ಜಿಯ ಮನೆಗೆ ಹೋಗುತ್ತಿದ್ದೆ. ನಾನು ಚಿಕ್ಕವನಿದ್ದಾಗಲಿಂದಲೂ ಬಹಳ ಚುರುಕಿನವನೆಂದು ಎಲ್ಲರೂ ಹೇಳುತ್ತಾರೆ, ನನಗೆ ಅದರ ಬಗ್ಗೆ ನಂಬಿಕೆಯಿಲ್ಲ. ನಾನು ಗುಮ್ಮನಕೊಲ್ಲಿಗೆ ಶನಿವಾರ ಮಧ್ಯಾಹ್ನ ಹೋದರೇ, ಭಾನುವಾರ ಬೆಳ್ಳಿಗ್ಗೆ ವ್ಯಾನಿಗೆ ಹತ್ತಿ ಬರುತ್ತಿದ್ದೆ. ಶನಿವಾರವಿದ್ದ ಸಂತೋಷ ಸೋಮವಾರವಿರುತ್ತಿರಲಿಲ್ಲ. ಗುಮ್ಮನಕೊಲ್ಲಿಯಲ್ಲಿ ನನ್ನ ಜೊತೆಗೆಂದು ನವೀನ, ಸೂರಿ, ದೀನೇಶ್, ಕುಮಾರ ಹೀಗೆ ದೊಡ್ಡ ಹಿಂಡೇ ಇರುತ್ತಿತ್ತು. ಮೊದಲ ದಿನಗಳಲ್ಲಿ ಗೋಲಿ ಆಟ, ಬೇಲೆ ಆಡುವುದು, ಕಾಸಿನ ಆಟಗಳೇ ಹೆಚ್ಚಿದ್ದವು. ಹೈಸ್ಕೂಲಿಗೆ ಬಂದ ಮೇಲೆ ಕ್ರೀಕೇಟ್ ಆಟ ಶುರುವಾಯಿತು. ಆ ದಿನಗಳಲ್ಲಿ ನೂರು ಇನ್ನೂರರ ತನಕ ದುಡ್ಡಿನ ಆಟವಾಡುತ್ತಿದ್ದೆವು. ಜೇಬಲ್ಲಿ ಕಾಸಿಲ್ಲದಿದ್ದರೇ, ಸಿಗರೇಟು ಪ್ಯಾಕಿನಿಂದ ಮಾಡಿದ ಟಿಕ್ಕಿ ಆಟವಾಡುತ್ತಿದ್ದೆವು. ಬೇಸಿಗೆಯ ರಜೆ ಬಂದ ತಕ್ಷಣ ಕುಶಾಲನಗರ ತಲುಪುತ್ತಿದ್ದೆ. ನಮ್ಮಜ್ಜಿಯ ಮನೆಯ ಪಕ್ಕ ನಮ್ಮ ತಾತನ ತಮ್ಮಂದಿರ ಮನೆ, ಮೂರು ಮನೆಗಳಿಂದ ಸೇರಿ ಒಂದತ್ತಿಪ್ಪತ್ತು ಹುಡುಗರು ಸೇರುತ್ತಿದ್ದೆವು. ನಮ್ಮ ಮನೆಯವರು ನಾಲ್ಕು ಜನ, ರಮಿತಕ್ಕ, ಸುನಿತಾ, ಅನಿತಾಕ್ಕ, ರತನ್, ಮಹೇಶಣ್ಣ, ಕುಮಾರ, ಪ್ರದೀಪ, ನವೀನ, ಹೀಗೆ ಎಲ್ಲರೂ ಸೇರಿದರೇ ಅದೆಷ್ಟು ಆಟಗಳೋ ಲೆಕ್ಕಕ್ಕಿಲ್ಲ.
ನಮ್ಮ ತಾತನ ಮನೆಯಲ್ಲಿ, ಮಾವಿನ ಮರ, ಹಲಸಿನ ಮರ, ಸೀಬೆ ಮರಗಳಿದ್ದವು. ಪಕ್ಕದ ಅಜ್ಜಿಯ ಮನೆಯಲ್ಲಿ ಜ್ಯೂಸ್ ಹಣ್ಣಿನ ಗಿಡವಿತ್ತು, ಚಕೋತ, ಸಪೋಟವಿತ್ತು. ಮೈನ್ ರೋಡಿನಲ್ಲಿದ್ದ ಇನ್ನೊಬ್ಬ ಅಜ್ಜಿಯ ಮನೆಯಲ್ಲಿ, ಗೇರು ಹಣ್ಣು, ಸಪೋಟ, ಸೀಬೆ ಹಣ್ಣು, ದಾಳಿಂಬೆ, ಗೋಡಂಬಿ, ಕಿತ್ತಲೆ ಹಣ್ಣುಗಳು ಸಿಗುತ್ತಿದ್ದವು. ಎಲ್ಲರ ತೋಟಕ್ಕೆ ಲಗ್ಗೆ ಹಾಕುವುದು, ಹಣ್ಣು ತಿನ್ನುವುದು ಇದೇ ಆಗುತ್ತಿತ್ತು. ಅಲ್ಲಿಂದ ಹೋಗಿ ಲಿಫ್ಟ ಇರಿಗೇಷನ್ ನೀರು ಬರುತ್ತಿದ್ದ ತೊಟ್ಟಿಯಲ್ಲಿ ಸ್ನಾನ ಮಾಡುತ್ತಿದ್ದೆವು. ಅಲ್ಲಿಯೂ ಇಲ್ಲದಿದ್ದರೇ ಒಮ್ಮೊಮ್ಮೆ ಹೊಳೆಗೆ ಹೋಗಿ ಸ್ನಾನ ಮಾಡಿ ಬರುತ್ತಿದ್ದೆವು. ಹೊಳೆಗೆ ಹೋದ ದಿನ ಮನೆಯಲ್ಲಿ ಅಭಿಷೇಕ ನಡೆಯುತ್ತಿತ್ತು. ಆ ದಿನದ ಸೌಭಾಗ್ಯವೇ ಭಾಗ್ಯ ಮನೆಯಲ್ಲಿ ಹತ್ತು ಹಸುಗಳಿದ್ದವು. ಅಜ್ಜಿ ಹಾಲು ಕರೆಯುವ ಸಮಯಕ್ಕೆ ಹೋಗಿ ಹಸಿ ಹಾಲನ್ನು ಕರೆದ ತಕ್ಷಣ ಬಿಸಿಬಿಸಿಯಾಗಿರುವುದನ್ನೇ ಕುಡಿಯುತ್ತಿದ್ದೆ. ನಮ್ಮ ಮನೆಯಲ್ಲಿ ಹಸುವಿನ ಹಾಲು ಆಗಿದ್ದರಿಂದ ಪಕ್ಕದ ಮನೆಯಲ್ಲಿಗೆ ಹೋಗಿ ಎಮ್ಮೆಯ ಹಾಲನ್ನು ತಂದು ಕಾಫಿ ಕುಡಿಯುತ್ತಿದ್ದೆ. ಎಲ್ಲರೂ ನನ್ನನ್ನು ನೋಡಿ ಹೇಳುತ್ತಿದ್ದರು, ಈ ಧೀಮಾಕಿಗೆ ಏನು ಕಡಿಮೆ ಇಲ್ಲವೆಂದು. ಅದು ಇಂದಿಗೂ ಹೇಳುತ್ತಾರೆ. ನನಗೂ ಅನಿಸುತ್ತದೆ, ನನ್ನ ಧಿಮಾಕಿಗೇನು ಕಡಿಮೆ ಎಂದು.
ರಜೆ ಮುಗಿಸಿ ಬಾನುಗೊಂದಿಗೆ ಬಂದರೇ ಇಲ್ಲಿ ಬಹಳ ಬೇಸರವೆನಿಸುತ್ತಿತ್ತು. ನಮ್ಮೂರಿನ ಪರಿಸರ ಚೆನ್ನಾಗಿದೆ, ಹುಡುಗರು, ಜನರು ಸರಿ ಇಲ್ಲ. ಇದು ಹಿಂದಿನಿಂದಲೂ ನನ್ನ ಮನಸ್ಸಿಗೆ ಬಂದಿರುವ ತಿರ್ಮಾನ. ನಾನು ನನ್ನೂರಿನ ಜನರ ಜೊತೆ ಹೆಚ್ಚು ಬೆರೆತಿಲ್ಲ. ಅವರ ನಡುವಳಿಕೆಗಳು ನನಗೆ ಹಿಡಿಸುವುದಿಲ್ಲ. ಬಹಳ ಸಣ್ಣ ಬುದ್ದಿಯ ಜನರು. ತಲೆಯಲ್ಲಿ ನಾಲ್ಕು ಕಾಸಿನ ಬುದ್ದಿ ಇಲ್ಲದಿದ್ದರೂ, ನ್ಯಾಯವಾಗಿ ದುಡಿಯದಿದ್ದರೂ ನಾಯಕರಾಗಬೇಕೆನ್ನುವ ಆಸೆ. ಒಂದು ನೀತಿ ಇಲ್ಲ, ನಿಯತ್ತು ಇಲ್ಲ. ನಾವು ಹಿಂದಿನಿಂದ ಬಡತನದಲ್ಲಿ ಬೆಳೆದು ಮೇಲೆ ಬಂದಿರುವುದನ್ನು ಸಹಿಸಲಾರದ ಅದೆಷ್ಟೋ ಮಂದಿ ಇದ್ದಾರೆ. ಅದೇನೆ ಇರಲಿ, ನಾನು ನನ್ನೂರ ಪರಿಸರಕ್ಕೆ ಋಣಿಯಾಗಿದ್ದೇನೆ. ಊರಿಗೆ ಬಂದರೇ, ಇಲ್ಲಿ ಸಪ್ಪೆ ಸಪೆ ಎನಿಸುತ್ತಿತ್ತು. ನನಗೆ ಅಂತ ಒಳ್ಳೆಯ ಸ್ನೇಹಿತರಿರಲಿಲ್ಲ, ಚಿಕ್ಕಪ್ಪನ ಮಕ್ಕಳು ನಾನು ಮೇಲೆ ಬಿದ್ದು ಹೋದರೂ ಅವರು ನನ್ನನ್ನು ದಾಯಾದಿಗಳಂತೆಯೇ ನೋಡುತ್ತಿದ್ದರು. ಇದ್ದಿದ್ದರಲ್ಲಿ, ಪಾಂಡು, ಗೋಪಿ, ವರ, ರಮೇಶ ಹೀಗೆ ಒಂದತ್ತು ಹುಡುಗರು ನನ್ನ ಜೊತೆ ಮೊನ್ನೆ ಮೊನ್ನೆಯ ತನಕವಿದ್ದರು. ಈಗ ಅವರೆಲ್ಲರೂ ರಾಜಕೀಯಕ್ಕೆ ಧುಮುಕಿದ್ದಾರೆ, ಆದ್ದರಿಂದ ನಾನು ಅವರಿಂದ ದೂರಾಗಿದ್ದೇನೆ. ನನಗೆ ಯಾವುದೇ ಒಂದು ಪಕ್ಷಕ್ಕೆ ನನ್ನನ್ನು ಗುರುತುಪಡಿಸಿಕೊಳ್ಳುವುದು ಇಷ್ಟವಿಲ್ಲ. ಊರಲ್ಲಿ ನೇರಳೆ ಹಣ್ಣು ಇರುತ್ತಿತ್ತು, ಮುಂಜಾನೆ ಎದ್ದು ನೇರಳೆ ಹಣ್ಣನ್ನು ಕೀಳಲು ಹೋಗುತ್ತಿದ್ದೆ. ಜೇಬು ತುಂಬಾ ನೇರಳೆ ಹಣ್ಣು ತುಂಬಿಕೊಂಡು ನದಿದಂಡೆಗೆ ಹೋಗಿ ಕುಳಿತು ತಿಂದು ಬರುತ್ತಿದ್ದೆ.
ಏಳನೇಯ ತರಗತಿಯ ವೇಳೆಗೆ ನಾನು ಈಜುವುದನ್ನು ಕಲಿತಿದ್ದೆ, ಒಂದು ದಿನ ಕಟ್ಟೆಯ ಮೇಲೆ ಸ್ನಾನ ಮಾಡಿ ನಿಂತಿದ್ದೆ. ನಮ್ಮೂರಿನ ಸೂರಿ ಎಂಬುವನು ನನ್ನನ್ನು ಹಾಗೆಯೇ ತಲ್ಲಿಬಿಟ್ಟ, ನಲ್ವತ್ತು ಅಡಿಗೂ ಹೆಚ್ಚು ಆಳವಿದ್ದ ನೀರಿಗೆ ದಿಡೀರನೇ ಬಿದ್ದ ನಾನು, ಬಹಳ ಗಾಬರಿಯಾದೆ, ಹೆದರಿಕೊಂಡೆ, ಅದೇ ಕಡೇ ಅದಾದ ಮೇಲೆ ನೀರಿಗೆ ಇಳಿಯುವ ಸಾಹಸ್ಸವನ್ನೇ ಮಾಡಲಿಲ್ಲ. ನಂತರ ಎಲ್ಲಿಯೋ ಶಾಸ್ತ್ರ ಕೇಳಿದ್ದಾಗ, ನೀರಿನಲ್ಲಿ ಗಂಡಾಂತರವಿದೆ ಎಂದರು. ಇದು ಒಂದು ಕಾರಣ ಸೇರಿ, ನದಿ ದಂಡೆ ಊರಲ್ಲಿ ಹುಟ್ಟಿದ ನನಗೆ ನದಿ ದಂಡೆಯಲ್ಲಿ ಕೂರುವುದೇ ಖಾಯಂ ಆಯಿತು, ಇಂದಿಗೂ ಈಜುವುದಕ್ಕೆ ಬರುವುದಿಲ್ಲ. ನದಿ ದಂಡೆಯಲ್ಲಿದ್ದರೂ ಕೂಡ ನಮಗೆ ನೀರಿನ ಸಮಸ್ಯೆ ಜಾಸ್ತಿಯೇ ಇತ್ತು. ಮೋಟಾರು ಇಟ್ಟು ಪಂಪ್ ಮಾಡುವಷ್ಟು ಸ್ಥಿತಿವಂತರಾಗಿರಲಿಲ್ಲ. ಆ ದಿನದಲ್ಲಿದ್ದ ಮೋಟಾರುಗಳು ಪ್ಯಾಕಿಂಗ್ ಹಾಕುವಂತವುಗಳು, ಈ ವಿಷಯ ಪಟ್ಟಣದಲ್ಲಿ ಬೆಳೆದ ಅನೇಕರಿಗೆ ತಿಳಿದಿರುವುದಿಲ್ಲ. ಭಾವಿಗೆ ಅಥವಾ ಕಾಲುವೆಗೆ ಮೋಟಾರು ಇಡಿಸಿ ಅಲ್ಲಿಂದ ನೀರನ್ನು ಎತ್ತುತ್ತಿದ್ದೆವು. ಆ ಮೋಟಾರುಗಳು ದೈತ್ಯವಾಗಿರುತ್ತಿದ್ದವು. ಅವುಗಳನ್ನು ಸ್ಟಾರ್ಟ್ ಮಾಡುವ ಮುನ್ನಾ 20-30ಬಿಂದಿಗೆ ನೀರನ್ನು ತುಂಬಬೇಕಿತ್ತು. ನಿಜಕ್ಕೂ ಹೇಳುತ್ತೇನೆ, ಮೋಟಾರು ವಿಷಯಗಳಲ್ಲಿ ನಮ್ಮ ದೊಡ್ಡಪ್ಪ ಚಿಕ್ಕಪ್ಪಂದಿರಿಗೆ ಇದ್ದ ಜ್ನಾನವನ್ನು ನೋಡಿ ನಾನೇ ತಬ್ಬಿಬ್ಬಾದೆ. ಅವರುಗಳು ಓದಿಲ್ಲ, ಬರೆಯಲೂ ಬರುವುದಿಲ್ಲ, ಆದರೇ, ಆ ಮೇಷಿನ್ ಗಳ ಮೇಲೆ ಅವರಿಗಿದ್ದ ಜ್ನಾನ ಅಷ್ಟಿಷ್ಟಲ್ಲ. ಅವರ ಜಮೀನಿಗೂ, ನಮ್ಮೂರ ಕಟ್ಟೆಗೂ ಕಡಿಮೆ ಎಂದರೇ ಒಂದು ಕೀಮೀ ಆಗುತ್ತದೆ, ಅವರು ಅವರ ಜಮೀನಿನಲ್ಲಿ ನಿಂತು ಕಟ್ಟೆಯಮೇಲೆ ಹರಿಯುತ್ತಿರುವ ನೀರಿನ ಮಟ್ಟವನ್ನು ಹೇಳುತ್ತಾರೆ. ಅವರ, ಜ್ನಾನ ಸಂಪತ್ತನ್ನು ಮೆಚ್ಚಲೇಬೇಕು.
ನಾನು ಚಿಕ್ಕವನಿದ್ದಾಗ, ನಮ್ಮೂರಿನಲ್ಲಿ, ಪ್ರತಿ ವರ್ಷ ಎಲ್ಲಾ ಬೀದಿಗಳನ್ನು ಹರಾಜು ಹಾಕುತ್ತಿದ್ದರು. ಆ ರಸ್ತೆಯಲ್ಲಿ ಓಡಾಡುವ ದನಗಳ ಸಗಣಿಯು ಟೆಂಡರ್ ನಲ್ಲಿ ಗೆದ್ದವರಿಗೆ ಸೇರುತ್ತಿತ್ತು. ನಮ್ಮೂರಿನಲ್ಲಿ ಮುಖ್ಯವಾಗಿ, ನಮ್ಮ ಜಮೀನಿಗೆ ಹೋಗುವ ಮೂಡಲಗದ್ದೆ ಓಣಿ, ಕಟ್ಟೆಗೆ ಹೋಗುವ ರಸ್ತೆ, ಸಿದ್ದಾಪುರ ಗೇಟಿಗೆ ಹೋಗುವ ರಸ್ತೆ, ಮತ್ತು ಹೊಳೆಗೆ ಹೋಗುವ ಓಣಿ ಇದ್ದವು. ಹೊಳೆಗೆ ಹೋಗುವ ಓಣಿಯಲ್ಲಿ ಸಗಣಿ ಎತ್ತುವುದಂತು ಪೂರ್ವಜನ್ಮದ ಪಾಪವೇ ಸರಿ. ದಾರಿ ಉದ್ದಕ್ಕೂ ಮನುಷ್ಯರ ಸಗಣಿಯೂ ಇರುತ್ತಿತ್ತು. ಆಗೆಲ್ಲಾ ಮನೆಗಳಲ್ಲಿ, ಅಷ್ಟೇನೂ ಟಾಯ್ಲೆಟ್ ಗಳು ಇರಲಿಲ್ಲ, ಊರಿನ ಅರ್ಧ ಜನರು ಆ ಬೀದಿಯನ್ನು ಗಬ್ಬೆಬ್ಬಿಸುತ್ತಿದ್ದರು. ಈಗಲೂ ಊರಿನಲ್ಲಿ ಬಹುತೇಕ ಮನೆಗಳಿಗೆ ಟಾಯ್ಲೆಟ್ ಇಲ್ಲ, ಎಷ್ಟು ಹೇಳಿದರೂ ಊರಿನವರು ಅದರ ಬಗ್ಗೆ ಗಮನ ಹರಿಸುವುದಿಲ್ಲ. ಅಪ್ಪಿ ತಪ್ಪಿ ರಾತ್ರಿ ಹೊತ್ತು ಹೊಟ್ಟೆ ಕೆಟ್ಟರೇ ಊರಿನಿಂದ ಹೊರಕ್ಕೆ ಓಡಿ ಬರಬೇಕು, ಹೆಂಗಸರು, ಮಕ್ಕಳು, ಮಳೆಗಾಲದಲ್ಲಿ ಪರದಾಡಬೇಕು. ಬೇರೆಲ್ಲಾ ವಿಚಾರಗಳಿಗೆ ಹಣ ಖರ್ಚುಮಾಡುವ ಇವರು, ಅದ್ಯಾಕೋ ಇದರ ಬಗ್ಗೆ ಆಸಕ್ತಿ ತೋರಿಲ್ಲ. ಸರ್ಕಾರದಿಂದ ಬಂದ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ನಾನು ಊರಿಗಾಗಿ ಒಂದು ಸಾಮೂಹಿಕ ಶೌಚಾಲಯವನ್ನು ನಿರ್ಮಿಸುವ ಯೋಚನೆಯನ್ನು ಇಟ್ಟುಕೊಂಡಿದ್ದೇನೆ, ಆ ದೇವರ ಕೃಪೆಯಿದ್ದು, ನಮ್ಮೂರ ರಸ್ತೆಗಳ ಹಣೆಬರಹ ಚೆನ್ನಾಗಿದ್ದರೇ ಆದೀತು.

ವಿಷಯಕ್ಕೆ ಬರೋಣ, ನಮ್ಮಪ್ಪ ನಮ್ಮ ಜಮೀನಿಗೆ ಹೋಗುವ ರಸ್ತೆಯನ್ನು ವಹಿಸಿಕೊಂಡು ಬಂದರು, ನಾನು ಕುಕ್ಕೆಯನ್ನು ಹೊತ್ತಿಕೊಂಡು ಸಗಣಿ ಎತ್ತಬೇಕಾದ ಪರಿಸ್ಥಿತಿ ಬಂತು. ನನಗೆ ನಾಚಿಕೆಯಾಗುತ್ತಿತ್ತು, ಊರೊಳಗಿನಿಂದ ಕುಕ್ಕೆ ಹೊತ್ತುಕೊಂಡು ಹೋಗುವುದು, ನಮ್ಮಮ್ಮನಿಗೆ ಗೋಗರೆಯುತ್ತಿದ್ದೆ. ಅಮ್ಮ ಬೇಡವೆಂದು, ಆಗಿನ್ನೂ ಏಳನೆಯ ತರಗತಿ, ಹೈಸ್ಕೂಲಿಗೆ ಹೋಗುವಾಸೆ, ಆರನೇಯ ಕ್ಲಾಸಿನ ಹೆಣ್ಣು ಮಕ್ಕಳಿಗೆ ಲೈನ್ ಹಾಕುತ್ತಿದ್ದೆ. ಇದೆಲ್ಲದ್ದಕ್ಕೂ ಅಡ್ಡಿಯಾಗಿತ್ತು. ಆ ಸಮಯಕ್ಕೆ ನನಗೆ ಹೊಳೆದಿದ್ದು, ಬೇರಿಂಗ್ ಗಾಲಿಯನ್ನು ಉಪಯೋಗಿಸಿಕೊಂಡು, ಗಾಡಿ ಮಾಡೂವುದು. ನಾಲ್ಕು ಬೇರಿಂಗ್ ಗಾಲಿಯನ್ನು ತೆಗೆದುಕೊಂಡು, ಗಾಡಿ ಮಾಡಲು ಕುಳಿತೆ, ನಮ್ಮಪ್ಪ ಅದನ್ನು ಕಿತ್ತು ಅಟ್ಟದ ಮೇಲಕ್ಕೆ ಎಸೆದರು. ಸಗಣಿಯನ್ನು ಕೈಯಿಂದ ಎತ್ತುವುದು ಯಾರೆಂದು, ಅಂಗಡಿಯಿಂದ ಖಾಲಿಯಾದ ಎಣ್ಣೆ ಡಬ್ಬವನ್ನು ತಂದು ಅದರ ತಗಡನ್ನು ಕತ್ತರಿಸಿ, ಹದವಾಗಿ ಮಾಡಿಕೊಂಡೆ, ನಮ್ಮಪ್ಪ ನನಗೆ ಉಗಿದರು. ಸಗಣಿಯನ್ನು ಮುಟ್ಟುವುದಕ್ಕೆ ಹಿಂಜರಿಯುತ್ತೀಯಾ, ಅನ್ನ ಸಿಗದೇ ಹೋಗುತ್ತೀಯಾ ಉಷಾರು ಎಂದರು. ವಿಚಿತ್ರವೆಂದರೇ, ಇದಾದ ಮೂರು ವರ್ಷದ ನಂತರ ನಮ್ಮೂರಿನ ಬೇರೆ ಹುಡುಗರು ಅದೇ ಟಿನ್ ಅನ್ನು ಉಪಯೋಗಿಸಿಕೊಂಡು, ಬೇರಿಂಗ್ ಗಾಡಿಯಲ್ಲಿ ಸಗಣಿ ಎತ್ತುವುದನ್ನು ಕಂಡು ನಮ್ಮಪ್ಪ ಹೇಳಿದರು, ನೋಡು ಆ ಹುಡುಗರನ್ನು ಬುದ್ದಿವಂತರು, ಸ್ವಲ್ಪವೂ ಶ್ರಮವಿಲ್ಲದ ಹಾಗೆ ಮಾಡಿಕೊಂಡಿದ್ದಾರೆ ಅದು ಬುದ್ದಿವಂತಿಕೆ ಎಂದರೆ, ಅಂದರು. ಆಗಲೇ ತಿಳಿದಿದ್ದು, ಹಿತ್ತಲ ಗಿಡ ಮದ್ದಲ್ಲವೆಂದು. ನಾನು ಎಲ್ಲಿಂದಲೋ ಶುರು ಮಾಡಿ ಎಲ್ಲಿಗೋ ತಂದು ನಿಲ್ಲಿಸಿದ್ದೇನೆ, ಯಾವುದಾದರೇನು, ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂಬುದು ನನ್ನ ಆಸೆ, ಅದನ್ನು ಮಾಡಿಯಾಗಿದೆ. ಉಣಬಡಿಸುವುದು ನನ್ನ ಧರ್ಮ ನಾನು ಮಾಡಿದ್ದೇನೆ, ಇಷ್ಟವಿದ್ದರೇ ಉನ್ನಬಹುದು ಬೇಡವೆಂದರೇ ನಿಮ್ಮ ದಾರಿ ನಿಮಗೆ ನಮ್ಮ ದಾರಿ ನಮಗೆ.

06 ಜೂನ್ 2012

ಒಳ್ಳೆಯದು ಹುಟ್ಟಿನಿಂದ ಬರುವುದಿಲ್ಲ, ಅದನ್ನೂ ರೂಢಿಸಿಕೊಳ್ಳಬೇಕು, ನಮ್ಮೊಂದಿಗೆ ಬೆಳಸುತ್ತಾ ಹೋಗಬೇಕು!!!!!!!

ನಾನು ಬಹಳ ಬೆಳೆದಿದ್ದೇನೆಂದು ಹೇಳುವುದಿಲ್ಲ ನನಗೆ ಬೆಳವಣಿಗೆಯ ಬಗ್ಗೆ ಅಂತಹ ಒಲವಿಲ್ಲ. ನಾನು ಜೀವನವನ್ನು ನೋಡುವ ರೀತಿಯೇ ಬೇರೆ. ನನಗೆ ಜೀವನವೆಂದರೇ ಆತ್ಮ ಸಂತೃಪ್ತಿ, ಅದು ವಸ್ತುಗಳಿಂದ ಬರುವುದಲ್ಲ. ಜೀವನ ನಿಂತ ನೀರಲ್ಲ, ಅದು ಹರಿಯುತ್ತಿರಬೇಕು. ಒಮ್ಮೊಮ್ಮೆ ನೀರೇ ಬರಿದಾಯಿತೆನ್ನುವ ಮಟ್ಟಕ್ಕೆ ಹೋಗಬಹುದು, ಮತ್ತೊಮ್ಮೆ ಧುಮ್ಮಿಕ್ಕಿ ಹರಿಯಲೂಬಹುದು. ಕಷ್ಟಗಳು ಅಷ್ಟೇ ಖುಷಿಯೂ ಅಷ್ಟೇ. ಎಲ್ಲವೂ ಇರಬೇಕು. ಇನ್ನೇನು ಜೀವನ ಮುಗಿದೇ ಹೋಯಿತು, ನೇಣುಹಾಕಿಕೊಂಡು ಸಾಯುವುದು ಮೇಲೂ ಎನ್ನುವ ಮಟ್ಟಕ್ಕೆ ಬಂದ ದಿನಗಳನ್ನು ಆನಂದಿಸಿದ್ದೇನೆ, ಸ್ವೀಕರಿಸಿದ್ದೇನೆ. ಜೀವನದಲ್ಲಿ ಇದಕ್ಕಿಂತ ಸಂತೋಷದ ದಿನಗಳು ಬರುವುದಿಲ್ಲ, ಇದೇ ನನ್ನ ಕೊನೆಯ ಕ್ಷಣಗಳಾಗಲೀ ಎನ್ನುವ ದಿನಗಳನ್ನೂ ಅಷ್ಟೇ ಸಮನಾಗಿ ಸ್ವೀಕರಿಸಿದ್ದೇನೆ. ಕೈಲಾದಷ್ಟು ಓದಬೇಕು, ಅಮೇಲೆ ಒಂದು ಕೆಲಸ, ಒಂದಿಷ್ಟು ಹಣ, ಒಂದಿಷ್ಟು ಹೆಸರು, ಕಾಲ ಮೇಲೆ ಕಾಲು ಹಾಕಿ ಅನ್ನ ತಿನ್ನುವ ದಿನಗಳು ಈ ಬಗೆಯ ದಿನಚರಿ ನನ್ನದಲ್ಲ. ಅಂಥಹ ದಿನಗಳು ಬರುವುದೇ ಬೇಡ. ಬಹಳಷ್ಟು ಜನರು ನನ್ನನ್ನು ಹುಚ್ಚನೆಂದೇ ಕರೆಯುತ್ತಾರೆ. ನೀನು ಮೆಂಟಲ್? ಎನ್ನುತ್ತಾರೆ. ಅವರೆಲ್ಲರಿಗೂ ನನ್ನ ಉತ್ತರ ಹೌದು. ಹುಚ್ಚಿನ್ನಲ್ಲಿ ಒಂದು ಕಿಕ್ ಇದೆ. ಅದಿದ್ದರೇ ಮಾತ್ರ ಜೀವನ. ಇಲ್ಲದಿದ್ದರೇ ನಿಂತ ನೀರಾಗುತ್ತದೆ.
ಒಂದು ಕೆಲಸಕ್ಕೆ ಸೇರಿ ಮೂವತ್ತು ನಲವತ್ತು ವರ್ಷಗಳು ಅದೇ ಮೆಷಿನ್ನಿನ ಮುಂದೆ ನಿಂತ ಕೂಲಿ ಮಾಡಿದರೇನು ಬಂತು, ನಿಮಗೆ ಕೂಲಿ ಸಿಗಬಹುದೇ ವಿನಾಃ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ. ಬೆಂಗಳೂರಿನಿಂದ ಮೈಸೂರಿಗೆ ವಾರಕ್ಕೊಮ್ಮೆ ಎಸಿ ಕಾರಿನಲ್ಲಿ ಹೋದರೇನು ಮಜಾ, ಜನಜಂಗುಳಿಯ ರೈಲಿನಲ್ಲಿ ನಿಂತು ಬರುವುದರ ಮಜಾ ಸಿಗುವುದಿಲ್ಲ. ವಿದೇಶವೆಲ್ಲಾ ಸುತ್ತಾಡಿ ಬಂದರೇನು ಬಂತು, ನನ್ನೂರ ನದಿ ದಂಡೆಯಲ್ಲಿ ಕುಳಿತು ಸಿಗರೇಟು ಸೇದುವ ಮಜಾ ಸಿಗುವುದೇ? ಖುಷಿ ಇರುವುದು ನಿರಂತರದಲ್ಲಿ. ಉಬ್ಬು ತಗ್ಗುಗಳಲ್ಲಿ, ಎಲ್ಲವೂ ಸಲೀಸಾದ ರಸ್ತೆಯಲ್ಲಿ ಅಲ್ಲಾ. ಮುಂಜಾನೆ ಟಿವಿಯಲ್ಲಿ ಒಂದು ಜಾಹಿರಾತು ಬರುತ್ತಿತ್ತು. ಕೋಕೋ ಕೋಲಾದ್ದು, ಕ್ರೀಕೇಟ್ ಆಡುವಾಗ ಟಾಸ್ ಹಾಕಲು ಕಾಸಿಲ್ಲದೇ ಕೋಲಾದ ಮುಚ್ಚಳವನ್ನು ಚಿಮ್ಮುತ್ತಾರೆ. ನನಗೆ ನನ್ನ ಬಾಲ್ಯದ ದಿನಗಳು ನೆನಪಾದವು. ನಿಜಕ್ಕೂ ಹೌದು ಆ ದಿನಗಳಲ್ಲಿ ಇಡೀ ಊರಿನಲ್ಲಿ ಯಾರ ಬಳಿಯಲ್ಲಿಯೂ ಅಷ್ಟೇನೂ ಹಣವಿರಲಿಲ್ಲ. ನಾವು ಕ್ರೀಕೇಟ್ ಆಡುವ ಸಮಯದಲ್ಲಿ ಒಂದೇ ಒಂದು ನಾಣ್ಯವೂ ಇರುತ್ತಿರಲಿಲ್ಲ. ಅಲ್ಲಿಯೇ ಬಿದ್ದಿದ್ದ ಕಲ್ಲನ್ನೂ, ಹೆಂಚಿನ ಚೂರನ್ನು ಟಾಸ್ ಹಾಕಲು ಬಳಸುತ್ತಿದ್ದೇವು. ಅಂಥಹ ಬಡತನವೇ? ಇಪ್ಪತ್ತು ರೂಪಾಯಿಯ ಬಾಲು ತರಲು, ಎಲ್ಲರ ಬಳಿಯಿಂದಲೂ ಒಂದು ಎರಡು ರೂಪಾಯಿ ಚಂದ ಎತ್ತಬೇಕಿತ್ತು. ಅದರಲ್ಲಿ ಎಷ್ಟೋ ಹುಡುಗರು ಕೊಡುತ್ತಲೇ ಇರಲಿಲ್ಲ. ಕ್ರೀಕೇಟ್ ಟೂರ್ನಿಯಾದರೇ ಹೋಗುವುದಕ್ಕೆ ಪ್ರವೇಶ ಶುಲ್ಕಕ್ಕೆ ಹಣವಿರುತ್ತಿರಲಿಲ್ಲ. ನನಗಿಂದಿಗೂ ನೆನಪಿದೆ, ನಾನು ಪಿಯುಸಿಗೆ ಬರುವಾಗ ಕೊಣನೂರಿನಿಂದ ಸರಗೂರು ಗೇಟಿನ ತನಕ ವ್ಯಾನಿನಲ್ಲಿ ಬರಬೇಕಿತ್ತು. ಎ಼ಕ್ಸ್ ಪ್ರೆಸ್ ಬಸ್ಸುಗಳು ಅಲ್ಲಿ ನಿಲ್ಲಿಸುತ್ತಿರಲಿಲ್ಲ. ಆಗ ಒಂದು ರೂಪಾಯಿ ಇಂದ ವ್ಯಾನು ಚಾರ್ಜ್ ಅನ್ನು ಎರಡು ರೂಪಾಯಿ ಮಾಡಿದ್ದಕ್ಕೆ ಎರಡು ಕಿಮೀ ನಡೆದುಬರುತ್ತಿದ್ದೆ.
ಮೈಸೂರಿನಲ್ಲಿದ್ದ ಸಮಯದಲ್ಲಿಯೂ ಅಷ್ಟೇ, ಸಿಟಿ ಬಸ್ಟಾಂಡ್ ತನಕ ನಡೆದುಹೋಗುತ್ತಿದ್ದೆವು. ಶಂಕರ ಇದ್ದದ್ದು ನಾಮದಾರಿ ಹಾಸ್ಟಲ್ ನಲ್ಲಿ ನಾನು ಅಲ್ಲಿಯ ತನಕವೂ ನಡೆದು ಹೋಗುತ್ತಿದ್ದೆ. ಅಲ್ಲಿಯ ತನಕವೇ ಏನು, ಭೋಗಾಧಿಯಲ್ಲಿದ್ದ ಮಾರುತಿ ಟೆಂಟ್ ತನಕವೂ ನಡೆದುಹೋಗುತ್ತಿದ್ದೆ. ಇದು ನಾನೊಬ್ಬ ಮಾಡುತ್ತಿದ್ದೆ ಎನ್ನುವ ಅರ್ಥವಲ್ಲ. ಕೇವಲ ಹತ್ತು ವರ್ಷಗಳ ಹಿಂದೆ ಹಣಕ್ಕೆ ಅಷ್ಟೊಂದು ಬೆಲೆಯಿತ್ತು. ಜನರು ಬಹಳ ಎಚ್ಚರಿಕೆಯ ಜೀವನ ಮಾಡುತ್ತಿದ್ದರು. ನನ್ನ ಹೈಸ್ಕೂಲು ಜೀವನದಲ್ಲಿ ಪ್ರತಿ ಗುರುವಾರ ಕೊಣನೂರು ಸಂತೆ ನಡೆಯುತಿತ್ತು. ಇಪ್ಪತ್ತು ರೂಪಾಯಿ ಕೊಡುತ್ತಿದ್ದರು, ಒಂದು ವಾರಕ್ಕೆ ಬೇಕಿರುವ ತರಕಾರಿಯನ್ನು ತರುತ್ತಿದ್ದೆ. ಈಗ ಮೂರು ಸಿಗರೇಟು ಬರುವುದಿಲ್ಲ. ಎರಡು ರೂಪಾಯಿಗೆ ಅರ್ಧ ಮಸಾಲ ಪೂರಿ ತಿನ್ನುತ್ತಿದೆ. ಅದೇ ಅಂಗಡಿಯಲ್ಲಿ ಹತ್ತು ವರ್ಷಗಳಲ್ಲಿ ಹನ್ನೆರಡು ರೂಪಾಯಿಯಾಗಿದೆ. ಇದು ಯಾವ ವೇಗದಲ್ಲಿ ಬದಲಾಗಿದೆಯೆಂಬುದು ಅರಿವಾಗುತ್ತಿಲ್ಲ. ನಮ್ಮೂರ ಹಬ್ಬದಲ್ಲಿ ಇರುವ 208 ಮನೆಗಳಿಂದ 300ರಷ್ಟು ಆಡು/ಕುರಿಗಳನ್ನು ಕಡಿದಿದ್ದಾರೆ. ಇಷ್ಟೇಲ್ಲಾ ಖರ್ಚು ಮಾಡುವ ಅವಶ್ಯಕತೆ ಇತ್ತಾ ಎಂದರೇ ಬರುವ ಉತ್ತರ, 2012ಕ್ಕೆ ಪ್ರಳಯವಾಗುತ್ತದೆ ತಿನ್ನೋನ ಬಿಡು ಎಂದು. ಮೂರು ಕಾಸಿಗೆ ಪ್ರಯೋಜನವಿಲ್ಲದ ತಿಳಿಗೇಡಿ ಜ್ಯೋತಿಷಿಗಳು, ಮಾಧ್ಯಮದವರು ಜನರಿಗೆ ಈ ಬಗೆಯ ಭಾವನೆಯನ್ನು ಮೂಡಿಸಿದ್ದಾರೆ. ಇರುವುದು ಇನ್ನೂ ಕೆಲವೇ ದಿನಗಳು ಅದೆಷ್ಟು ಸಾಧ್ಯವೋ ಅಷ್ಟನ್ನೂ ಹಾಳು ಮಾಡಲು ನಮ್ಮ ಜನ ಸಿದ್ದರಾಗಿದ್ದಾರೆ.
ಇದರ ಜೊತೆಗೆ ನಾನು ನಿಮಗೊಂದು ವಿಷಯವನ್ನು ತಿಳಿಸಬೇಕಿದೆ. ನಾನು ನನ್ನ ಜೀವನದಲ್ಲಿ ಅತಿ ಹೆಚ್ಚು ಪ್ರೀತಿಸುವ ಎರಡು ಜೀವಗಳೆಂದರೆ ನನ್ನ ಅಜ್ಜಿಯಂದಿರು. ಮೊದಲನೆಯದು, ನನ್ನ ಅಮ್ಮನ ತಾಯಿ ಮತ್ತು ಎರಡನೇಯದು ನಮ್ಮ ಅಜ್ಜಿಯ ಅಕ್ಕ. ಇವರಿಬ್ಬರು ಅಕ್ಕ ತಂಗಿಯರು ನನ್ನ ಬದುಕನ್ನು ಬರೆದುಕೊಟ್ಟವರು. ಅದನ್ನು ಬಿಟ್ಟರೇ ನನ್ನ ಜೀವದ ಗೆಳತಿ. ನನ್ನೆಲ್ಲಾ ಏಳಿಗೆ ಯಶಸ್ಸು ಇವರಿಗೆ ಸಲ್ಲಬೇಕು. ನಾನು ಬಹಳ ಚಿಕ್ಕಂದಿನಿಂದಲೂ ನನ್ನಜ್ಜಿಯನ್ನು ಗಮನಿಸಿದ್ದೇನೆ. ಅವರು ನನ್ನ ಪರವಾಗಿ ನಿಂತಿದ್ದಾರೆ. ಪ್ರೋತ್ಸಾಹಿಸಿದ್ದಾರೆ. ಆ ಕಾಲದವರಾಗಿದ್ದರೂ, ಇಂದಿನ ವಿದ್ಯಮಾನಗಳ ಬಗ್ಗೆ ಬಹಳ ತಿಳಿದುಕೊಂಡಿದ್ದಾರೆ. ಅವರು ಅವರ ಜೀವನದಲ್ಲಿ ಅನುಭವಿಸಿರುವ ಕಷ್ಟಗಳ ಮುಂದೆ ನಾನು ಅನುಭವಿಸಿರುವುದು ತೃಣ ಮಾತ್ರ. ನನ್ನ ದೊಡ್ಡಜ್ಜಿ ಹಸ್ತರೇಖೆ ನೋಡಿ ಭವಿಷ್ಯ ಹೇಳುತ್ತಾರೆ. ನಾನು ಜ್ಯೋತಿಷ್ಯವನ್ನು ನಂಬುವುದು ಇವರೊಬ್ಬರ ಮಾತನ್ನು ಮಾತ್ರ. ಇವರು ನಮ್ಮಜ್ಜಿ ಎನ್ನುವುದಕ್ಕೆ ಅಲ್ಲಾ. ಅವರು ಹಣಕ್ಕಾಗಿ ಅದನ್ನು ಮಾಡುತ್ತಿಲ್ಲ. ಯಾರಿಂದಲೂ ಹಣವನ್ನು ಬಯಸುವುದಿಲ್ಲ. ಮತ್ತು ಅವರು ಹೇಳಿರುವ ಎಲ್ಲಾ ಮಾತುಗಳು ಇಲ್ಲಿಯ ತನಕ ನನ್ನ ಜೀವನದಲ್ಲಿ ಸತ್ಯವಾಗಿದೆ.
ನಾನು ಹತ್ತನೇಯ ತರಗತಿಯಲ್ಲಿ ಓದುತ್ತಿದ್ದೆ. ನಾನು ಪಾಸಾಗುವುದಿಲ್ಲವೆಂಬ ತೀರ್ಮಾನಕ್ಕೆ ಬಂದಿದ್ದೆ. ಆ ಸಮಯದಲ್ಲಿ ಅವರು ಕರೆದು ಹೇಳಿದರು, ಏನೂ ಯೋಚನೆ ಮಾಡಬೇಡ, ಎಲ್ಲವೂ ಸರಿ ಹೋಗುತ್ತದೆ ನೀನು ಪಾಸಾಗುತ್ತೀಯಾ ಎಂದು. ನನ್ನ ಅದೃಷ್ಟವೋ ಅವರ ಮಾತಿನ ಅರ್ಥವೋ ನಾನು ಪಾಸಾಗಿದ್ದೆ. ಇದಾದ ನಂತರ ಅದೇ ರೀತಿಯಲ್ಲಿ ಹೇಳಿದ್ದರೂ ಕೂಡ ಪಿಯುಸಿಯಲ್ಲಿ ಅವರು ಸ್ವಲ್ಪ ಹಿಂಜರಿದು ಹೇಳಿದರು, ನೀನು ಸರಿಯಾಗಿ ಓದುತ್ತಿಲ್ಲ, ಪಾಸಾಗುವುದು ಕಷ್ಟವೆಂದು. ನಾನು ಫೇಲಾದೆ. ಇದಾದ ನಂತರದ ದಿನಗಳಲ್ಲಿ ಅವರು ಹೇಳಿದರು, ನೀನು ಓದುತ್ತೀಯಾ, ಹೆಚ್ಚು ಓದುತ್ತೀಯಾ, ಪಾಸಾಗುತ್ತೀಯಾ ಹೋಗು ಯೋಚನೆ ಮಾಡಬೇಡವೆಂದು. ಆ ದಿನಗಳಲ್ಲಿ ಅವರು ಹೇಳಿದ ಅನೇಕ ಮಾತುಗಳು ನನಗೆ ಇಂದಿಗೂ ನೆನಪಿದೆ. ನಾನು ಪಿಯುಸಿಯನ್ನು ಮತ್ತೆ ಕಟ್ಟಲು ಮನಸ್ಸಿರಲಿಲ್ಲ. ವಿದ್ಯೆಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದೆ. ಬೇರೆ ಏನಾದರೂ ವ್ಯಾಪಾರ ಮಾಡಬೇಕೆಂಬುದು ನನ್ನಾಸೆಯಾಗಿತ್ತು. ಅದು ಕೈಗೂಡಲಿಲ್ಲ. ನಾನು ಇಷ್ಟೊಂದು ಓದುತ್ತೇನೆಂದು ನನಗೆ ಕನಸಿನಲ್ಲಿಯೂ ತಿಳಿದಿರಲಿಲ್ಲ. ಪಿಯುಸಿ ಪಾಸಾದ ಮೇಲೂ ನಾನು ಓದನ್ನು ನಿಲ್ಲಿಸುವ ಪ್ರಯತ್ನ ಮಾಡಿದೆ. ಆ ಸಮಯದಲ್ಲಿ ವಿಡೀಯೋಕಾನ್ ಕಂಪನಿಗೆ ಸೇರುವುದಕ್ಕೆಂದು ಸಿದ್ದಪಡಿಸಿದ್ದ ನನ್ನ ಬಯೋ ಡೇಟ ನನ್ನಲ್ಲಿದೆ. ಇದರ ಜೊತೆಯಲ್ಲಿಯೇ ಬೆಂಗಳೂರಿನಲ್ಲಿ ಆ ದಿನಗಳಲ್ಲಿ ನಮ್ಮ ಕುಟುಂಬದಲ್ಲಿ ದೊಡ್ಡ ಹೆಸರು ಮಾಡಿದ್ದ ನಾರಯಣ ಗೌಡರ ಕಂಪನಿಗೆ ಹೋಗಿ ಕೆಲಸ ಸೇರುವುದೆಂದು ತೀರ್ಮಾನಿಸಿದ್ದೆ. ಇದಾವುದೂ ಕೈಗೂಡಲಿಲ್ಲ. ಬಿಎಸ್ಸಿ ಆದ ಮೇಲೆ ಕೂಡ ನಾನು ಓದುವುದಿಲ್ಲವೆಂದು ಕೆಲಸ ಮಾಡಲು ಬಂದಿದ್ದೆ, ಅದೂ ಕೈಗೂಡಲಿಲ್ಲ. ಎಂಎಸ್ಸಿ ಮುಗಿದ ಮೇಲೆ ಸಾಕು ಏನಾದರೂ ಕೆಲಸ ಮಾಡಿಕೊಂಡಿರಬೇಕೆಂದು ತೀರ್ಮಾನಿಸಿದ್ದೆ, ಆದರೇ ಪಿಎಚ್ ಡಿ ಕಡೆಗೆ ವಾಲಿದೆ. ಪಿಎಚ್ ಡಿ ಮುಗಿದ ಮೇಲೆ ಸಾಕೆಂದು ಸುಮ್ಮನಿದ್ದರೂ ಮೊನ್ನೆ ಹೋಗಿ ಗಾಂಧಿ ಅಧ್ಯಯನಕ್ಕೆ ಸೇರ್ಪಡೆಯಾದೆ. ಇದೆಲ್ಲವೂ ಆದ್ದದ್ದು ನನ್ನಿಂದ ಅಲ್ಲಾ, ಕಾಣದ ಕೈ ಆಡಿಸಿದೆ.
ಅದರಂತೆಯೇ, ಆ ದಿನಗಳಲ್ಲಿ ನಾನು ಬಹಳ ಜಗಳ ಮಾಡಿಕೊಳ್ಳುತ್ತಿದ್ದೆ. ಮತ್ತು ನನಗೆ ಯಾರೂ ಅಷ್ಟೇನೂ ಮರ್ಯಾದೆ ನೀಡುತ್ತಿರಲಿಲ್ಲ. ಅಜ್ಜಿ ನನಗೆ ಹೇಳಿದ್ದರು. ನೀನು ಮುಂದೆ ಬಹಳ ಒಳ್ಳೆಯ ಮನುಷ್ಯನಾಗುತ್ತೀಯಾ, ಹೆಚ್ಚು ಜನರನ್ನು ಸಂಪಾದಿಸುತ್ತೀಯಾ ಎಂದು. ನನಗೆ ಆಶ್ಚರ್ಯವೆಂದರೇ ಈ ಒಳ್ಳೆಯತನ ನನಗೆ ಎಲ್ಲಿಂದ ಬಂತು? ನಾನು ಸತ್ಯವಾಗಿಯೂ ಒಳ್ಳೆಯವನಲ್ಲ, ಒಳ್ಳೆಯವನಾಗಿ ಬೆಳೆದವನಲ್ಲ. ನನ್ನಲ್ಲಿ ಇಂದು ಬದಲಾವಣೆಯಾಗಿದೆ. ನನಗೆ ಹಣ ಮುಖ್ಯವಲ್ಲ. ಪ್ರೀತಿ ವಿಶ್ವಾಸ ಮಾತ್ರ ಮುಖ್ಯ. ಸಮಾಜಕ್ಕೆ, ದೇಶಕ್ಕೆ, ಜನರಿಗೆ ಕೈಲಾದ ಸಹಾಯ ಮಾಡಬೇಕು, ಜಾತಿ, ಧರ್ಮ, ಮೇಲು ಕೀಳು ಮುಖ್ಯವಲ್ಲ. ಹಿರಿಯರಿಗೆ ಮರುಗುತ್ತೇನೆ, ಗೌರವಿಸುತ್ತೇನೆ. ಒಂದೆರಡು ಹುಡುಗಿಯರಿಗೆ ಮೋಸ ಮಾಡಿದ್ದೇನೆಂಬ ದುಃಖವಿದೆ. ನಾನು ಈ ದಿನಗಳಲ್ಲಿ ಹಣ ಸಂಪಾದನೆ ಮಾಡಿದವರು, ಹೆಚ್ಚು ಓದಿದವರ ಬಗ್ಗೆ ಅತಿಯಾಗಿ ಮಾತನಾಡುವುದಕ್ಕೆ ಬಯಸುವುದಿಲ್ಲ. ನಾನು ಪಿಎಚ್ ಡಿ ಮಾಡಿರುವುದು ದೊಡ್ಡದು ಎನಿಸುತ್ತಿಲ್ಲ. ಪಿಎಚ್ ಡಿ ಎಂಬುದು ಹತ್ತು ವರ್ಷದ ಹಿಂದೆ ಕಷ್ಟಪಟ್ಟು ಮಾಡಬೇಕಿದ್ದ ವಿದ್ಯೆ. ಆದರೇ, ಇತ್ತೀಚೆಗೆ ಬಂದಿರುವ ಥೀಸಿಸ್ ಗಳನ್ನು ನೋಡಿದರೇ, ಪಿಎಚ್ ಡಿ ಮಾಡಿ ಅವರು ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೇ ನಮ್ಮೂರಲ್ಲಿ ಟ್ರಾಕ್ಟರ್ ಓಡಿಸುವವನು ಉತ್ತಮ ಎನಿಸುತ್ತದೆ. ನೀವು ಇತ್ತೀಚೆಗೆ ಯಾರನ್ನೇ ಮಾತನಾಡಿಸಿ ನೋಡಿ, ಅವರಿಗೆ ಒಂದು ಸೈದಂತಿಕ ಹಿನ್ನಲೆ ಇರುವುದಿಲ್ಲ. ಒಂದು ಸಿದ್ದಾಂತ, ಒಂದು ನೀತಿ, ನಿಯಮ, ಒಂದು ಆಳವಾದ ಜ್ನಾನ, ವಿಷಯದ ಬಗ್ಗೆ ಒಲವು ಏನೂ ಇರುವುದಿಲ್ಲ.
ಸರಿಯಾಗಿ ನಾಲ್ಕು ನಿಮಿಷ ಒಂದು ವಿಷಯದ ಬಗ್ಗೆ ಮಾತನಾಡುವ ಸರಕು ಇರುವುದಿಲ್ಲ, ಅವರೆಲ್ಲಾ ಉಪನ್ಯಾಸಕರು, ಪ್ರೋಫೆಸರುಗಳು. ನಾಚಿಕೆಯಾಗುತ್ತದೆ. ನಾನು ಬಹಳ ಮಂದಿಯನ್ನು ನೋಡಿದ್ದೇನೆ, ಅವರ ಕಳಪೆ ಮಟ್ಟದ ರಾಜಕೀಯವನ್ನು ನೋಡಿದರೇ ನಮ್ಮೂರ ಗ್ರಾಮ ಪಂಚಾಯ್ತಿಯೇ ಉತ್ತಮೆ. ದೇಶ ಅವನತಿಯ ಹಾದಿಯತ್ತ ಸಾಗುತ್ತಿದ್ದೆ. ನಿನ್ನೆ ಪರಿಸರ ವಿಜ್ನಾನದ ದಿನ, ಸುನಿಲ್ ಒಂದು ಎಸ್ ಎಂಎಸ್ ಮಾಡಿದ್ದ, ಬಹಳ ಚೆನ್ನಾಗಿತ್ತು. ಕೊನೆಯ ಮರ ಕಡಿಯುವ ದಿನ, ನದಿಯಲ್ಲಿ ಕೊನೆಯ ಹನಿ ಹರಿಯುವ ದಿನ, ಪ್ರಪಂಚದ ಕೊನೆಯ ಮೀನನ್ನು ಹಿಡಿಯುವ ದಿನ ನಾವು ಎಚ್ಚೆತ್ತುಕೊಳ್ಳುತ್ತೀವಾ? ಎಂದು. ಹೌದು, ಜನರಿಗೆ ಪರಿಸರದ ಜೊತೆ, ಸ್ನೇಹಿತರ ಜೊತೆಗೆ ಭಾವನಾತ್ಮಕ ಸಂಭಂಧ ಕಡಿಮೆಯಾಗುತ್ತಿದೆ. ನಮ್ಮೂರಿನ ಹಬ್ಬವನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಮ್ಮ ಮನೆಗೆ 150ಕ್ಕೂ ಹೆಚ್ಚು ಜನರು ಬಂದಿದ್ದರು. ಇಡೀ ಊರಿಗೆ 5ಸಾವಿರದಷ್ಟು ಜನ ಸೇರಿತ್ತು. ಇನ್ನೂ ಭಾವನೆಗಳಿಗೆ ಬೆಲೆ ಇದೆ. ಇಲ್ಲಿ ನಾನು ನಂದಗೋಪಾಲನನ್ನು ಕರೆದಾಗ, ನಾಲ್ಕು ಸೌಟು ಬಾಡು ತಿನ್ನುವುದಕ್ಕೆ ಅಲ್ಲಿಯ ತನಕ ಬರಬೇಕಾ? ಎಂದ. ಇದು ನಾಲ್ಕು ಸೌಟು ಮಾಂಸಕ್ಕೆ ಕರೆಯುವುದಲ್ಲ, ಅನ್ನವಿಲ್ಲವೆಂದು ಕರೆಯುವುದಿಲ್ಲ. ಎಲ್ಲರೂ ಒಂದು ಕಡೆ ಸೇರುವುದಕ್ಕೆ ಒಂದು ಅವಕಾಶವಷ್ಟೇ.
ನನ್ನನ್ನು ಬಹಳಷ್ಟೂ ಜನರು ರೇಗಿಸುತ್ತಾರೆ, ಎಲ್ಲರ ಮದುವೆಗೂ ಹೋಗುತ್ತೀಯಾ ನೀನು ಎಂದು. ನಾನು ಇದನ್ನು ನನ್ನ ತಂದೆಯಿಂದ ಕಲಿತದ್ದು. ನಮಗೆ ಯೋಗ್ಯತೆ ಇರುವುದರಿಂದ ಅವರು ನಮ್ಮನ್ನು ಕರೆಯುತ್ತಾರೆ. ನಾವು ದೇವರುಗಳು ಎಂದಲ್ಲ, ಅಥವಾ ನಾವು ಬಾರದಿದ್ದರೇ ಅವರು ಮದುವೆಯಾಗುವುದಿಲ್ಲವೆಂದಲ್ಲ. ನಮ್ಮ ಉಪಸ್ಥಿತಿ ಅವರಿಗೆ ಖುಷಿ ಕೊಡುತ್ತದೆ. ನಮ್ಮ ಉಪಸ್ಥಿತಿಯಿಂದ ಒಬ್ಬರೂ ಸಂತೋಷಪಡುತ್ತಾರೆಂದರೇ ಹೋಗುವುದರಲ್ಲಿ ತಪ್ಪೇನು. ಒಳ್ಳೆಯದು ಹುಟ್ಟಿನಿಂದ ಬರುವುದಿಲ್ಲ, ಅದನ್ನೂ ರೂಢಿಸಿಕೊಳ್ಳಬೇಕು, ನಮ್ಮೊಂದಿಗೆ ಬೆಳಸುತ್ತಾ ಹೋಗಬೇಕು.

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...