04 ಜೂನ್ 2017

ವಿಶ್ವ ಪರಿಸರ ದಿನದ ದೊಂಬರಾಟ!!!

ನಾನು ಬೇಕೆಂದೆ ಪರಿಸರ ದಿನದ ದೊಂಬರಾಟವೆಂದು ಶಿರ್ಷಿಕೆಯನ್ನು ನೀಡಿದ್ದೇನೆ. ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸುತ್ತೇವೆ. ಸರ್ಕಾರಿ, ಖಾಸಗಿ, ಅಂತಾ ಬೇಧ ಭಾವವಿಲ್ಲದೆ ಎಲ್ಲರೂ ಆಚರಿಸುತ್ತಾರೆ. ಆಚರಿಸುವಾಗ ನಿಮಗೆ ಕಣ್ಣಿಗೆ ಕಾಣುವ ದೃಶ್ಯಗಳು ಎರಡೋ ಮೂರೋ. ಮೊದಲನೆಯದಾಗಿ, ಒಂದಿಷ್ಟು ಗಿಡಗಳನ್ನು ನೆಡುವುದು. ಎರಡನೆಯದಾಗಿ, ಒಂದು ಜಾಗೃತಿ ಅಭಿಯಾನ, ಮೂರನೆಯದು ಒಂದು ಜಾಥಾ, ಒಂದಿಷ್ಟು ಸ್ಲೋಗನ್‍ಗಳು. ಮತ್ತೆ ಪತ್ರಿಕೆಯಲ್ಲಿ ಸುದ್ಧಿ. ಇದನ್ನು ಬಿಟ್ಟು ಬೇರೇನೂ ಕಾಣುತ್ತಿಲ್ಲ ನನಗೆ. ಅದಕ್ಕೂ ಮೀರಿದರೆ ಒಂದು ಸಮ್ಮೇಳನ ನಡೆಸಬಹುದು. ಇದರಲ್ಲಿ ತಪ್ಪೇನು? ಮಾಡಬೇಕಲ್ಲವೇ? ಪರಿಸರ ನಾಶವಾಗಿದೆ, ಅದನ್ನು ಉಳಿಸೋದು ಬೇಡವೇ?

ಪರಿಸರ ದಿನವನ್ನು ಆಚರಿಸುತ್ತಿರುವ ಮತ್ತು ಸಸಿಗಳನ್ನು ನೆಡುತ್ತಿರುವ ಎಲ್ಲರಿಗೂ ನನ್ನ ನೇರ ಪ್ರಶ್ನೆಗಳು. ಪ್ರತಿ ವರ್ಷವೂ ನೀವು, ಸರ್ಕಾರ ಸೇರಿ ಸಸಿಗಳನ್ನು ನೆಡುತ್ತಾ ಬಂದಿದ್ದೀರಿ, ಅವುಗಳೆಲ್ಲಾ ಏನಾದವು? ಜೂನ್ 5ರಂದು 1 ಲಕ್ಷ, 5 ಲಕ್ಷ, ಹತ್ತು ಲಕ್ಷ ಎಂದೆಲ್ಲಾ ಹೇಳುತ್ತಿದ್ದೀರಲ್ಲಾ, ಅವುಗಳು ಬೆಳೆದು ಮರವಾಗಬೇಕಿತ್ತು. ಯಾಕೆ ಆಗಲಿಲ್ಲ? ಗಿಡ ನೆಡುವಾಗಲೇ ನಿಮಗೆ ಗೊತ್ತು, ಎಲ್ಲವೂ ಬೆಳೆಯುವುದಿಲ್ಲವೆಂದು, ಯಾಕೆಂದರೆ, ಸಸಿ ನೆಟ್ಟ ಮೇಲೆ, ಅದರ ಪೋಷಣೆ ನೀವು ಮಾಡುವುದಿಲ್ಲ. ನೀರು, ಗೊಬ್ಬರ ಹಾಕುವುದಿಲ್ಲ. ಇದು ಪರಿಸರ ದಿನವನ್ನು ಆಚರಿಸಲು ನೆಡುವ ಗಿಡಗಳು ಅಷ್ಟೆ. 

ಎರಡನೆಯ ಪ್ರಶ್ನೆ, ನಿಮ್ಮಗಳ ಪ್ರಕಾರ ಪರಿಸರವೆಂದರೇನು? ಪರಿಸರವೆಂದರೆ, ಕೇವಲ ಮರಗಳು ಮಾತ್ರವೇ? ಗಿಡ ನೆಡುವುದು ಮಾತ್ರವೇ ಪರಿಸರ ಸಂರಕ್ಷಣೆಯೇ? ಪರಿಸರ, ಪ್ರಕೃತಿ, ನಿಸರ್ಗ ಅದನ್ನು ಇಷ್ಟು ಸರಳಿಕರಿಸಿದರೆ ಹೇಗೆ? ಪರಿಸರ ದಿನದಂದು ಗಿಡ ನೆಡುವುದು ಬಿಟ್ಟು ಬೇರೇನೂ ಯೋಚಿಸುವುದಿಲ್ಲ. ವಿಚಿತ್ರವೆಂದರೆ, ನಮ್ಮ ಸರ್ಕಾರ, ಅದಕ್ಕೆಂದೆ ಇರುವ ಇಲಾಖೆಗಳು (ಪರಿಸರ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ), ವಿಶ್ವ ವಿದ್ಯಾಲಯಗಳು, ಎನ್‍ಜಿಓಗಳು ಸಹಾ ಇದನ್ನೇ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ನಡೆಯುತಿರುವ ಸೀಡ್ ಬಾಲ್, ಅಂದರೆ ಬೀಜದ ಉಂಡೆಗಳನ್ನು ಮಾಡಿ ಕಾಡಿಗೆ ಎಸೆಯುವುದು. ಇದು ಬಹಳ ಬಾಲಿಷವೆನಿಸುತ್ತದೆ ನನಗೆ. ಒಂದು ಪರಿಸರಕ್ಕೆ ಹೊಂದಿಕೊಳ್ಳುವ ಪ್ರಬೇಧ ಯಾವುದು, ಯಾವ ಮಣ್ಣಿಗೆ ಅದು ಬೇಕು, ಬೇಡ, ಎನ್ನುವ ಅಂದಾಜಿಲ್ಲದೆ, ನೀವು ನಿಮ್ಮ ಸೀಡ್ ಬಾಲ್ ಎಸೆದು ಬಂದರೆ ಏನಾಗಬೇಕು. ಪ್ರತಿಯೊಂದು ಪರಿಸರಕ್ಕೂ, ತನ್ನದೇ ಆದ ಸಾಮಥ್ರ್ಯವಿರುತ್ತದೆ (ಕೆಪಾಸಿಟಿ). ಪ್ರತಿಯೊಂದು ಜಾತಿಯ ಮರ ಗಿಡಗಳು ತನ್ನದೇ ಆದ ವಾತಾವರಣದಲ್ಲಿ ಬೆಳೆಯುತ್ತವೆ. ನೀವು ದಿಡೀರನೇ ಹೋಗಿ ಅಲ್ಲಿ ಲಕ್ಷಾಂತರ ಬೇರೆ ಜಾತಿಯ ಬೀಜಗಳನ್ನು ಎಸೆದರೆ ಅಲ್ಲಿನ ಪರಿಸರ ಏನಾಗಬಹುದು? ಹೀಗೆ ಕೋಟ್ಯಾಂತರ ಸಸಿಗಳನ್ನು ನೆಡುತ್ತಾ ಹೋಗಿ ಅವೆಲ್ಲವೂ ಬೆಳೆದು ಬಿಟ್ಟರೆ ನಾವು ಯಾವ ಕಾಲಕ್ಕೆ ಹೋಗಬಹುದು?

ಪರಿಸರವೆಂದರೆ, ಕೇವಲ ಮರಗಳು ಮಾತ್ರವಲ್ಲ, ಅಲ್ಲಿರುವ ಸಣ್ಣ ಹುಳ್ಳು ಕೂಡ ಪರಿಸರದ ಪಾಲುದಾರ. ಒಂದು ಎರೆಹುಳು, ಒಂದು ಚಿಟ್ಟೆ, ಒಂದು ಕೀಟ, ಒಂದು ಕಪ್ಪೆ, ಹಾವು, ಹಲ್ಲಿ, ಹಕ್ಕಿ, ಹದ್ದು ಹೀಗೆ ಕಣ್ಣಿಗೆ ಕಾಣುವ, ಕಾಣದ ಎಲ್ಲವೂ ಪರಿಸರದಲ್ಲಿವೆ. ನಾವು ಕೇವಲ ಮರವನ್ನು ಬೆಳೆಸುತ್ತಾ ಹೋದರೆ ಮುಂದೊಂದು ದಿನ ಪರಿಸರಕ್ಕೆ ಮಾರಕವಾಗಬಹುದು. ಪರಿಸರ ತನ್ನಿಂದ ತಾನು ಬೆಳೆಯುವ, ಬೆಳೆಸುವ ಸಾಮಥ್ರ್ಯವನ್ನು ಹೊಂದಿರುತ್ತದೆ. ಅದರ ಸಂಕೀರ್ಣಗಳು ನಮಗೆ ತಿಳಿದಿರುವುದಿಲ್ಲ. ನಮ್ಮ ಮೂಗಿನ ನೇರಕ್ಕೆ ನಮಗೆ ತಿಳಿದಿರುವುದನ್ನೇ ಅಥವಾ ಕಣ್ಣಿಗೆ ಕಾಣುವುದನ್ನೆ ಸತ್ಯವೆಂದು ನಂಬಿ, ಮನಸ್ಸಿಗೆ ತೋಚಿದ ಹಾಗೆ ಮಾಡುವುದು ಸರಿಯಿಲ್ಲ. ಪರಿಸರ ದಿನದಂದು ಸಮಗ್ರವಾಗಿ ಆಲೋಚಿಸುವುದನ್ನು ಕಲಿಯಬೇಕು ಮತ್ತು ಅನುಸರಿಸಬೇಕಿದೆ. ಪರಿಸರವೆಂದರೆ, ಎಲ್ಲವೂ ಸೇರುತ್ತದೆ, ನೀರು, ನೆಲ, ಗಾಳಿ, ಸರ್ವ ಜೀವಿಗಳು ಕೂಡ. ವಿಚಿತ್ರವೆಂದರೆ, ನಾವುಗಳು ಎಲ್ಲವನ್ನು ಬಿಡಿ ಬಿಡಯಾಗಿ ನೋಡುತ್ತಾ, ಅವುಗಳನ್ನು ವಿಂಗಡಿಸಿದ್ದೇವೆ. 

ಇತ್ತೀಚಿನ ದಿನಗಳಲ್ಲಿ ಬಹಳ ಚಾಲ್ತಿಯಲ್ಲಿರುವ ಮತ್ತೊಂದು ವಿಷಯ, ಜಾಗತಿಕ ತಾಪಮಾನ. ಹೌದು, ತಾಪಮಾನ ಏರಿದೆ, ಒಪ್ಪಿಕೊಳ್ಳೋಣ. ಉಷ್ಣಾಂಶ ಜಾಸ್ತಿಯಾಗಿದೆ, ಮಳೆ ಕಡಿಮೆಯಾಗಿದೆ, ಕೆಲವು ಕಡೆ ಜಾಸ್ತಿಯಾಗಿದೆ. ಒಟ್ಟಾರೆ ಏರು ಪೇರಾಗಿದೆ. ಇದಕ್ಕೆ ಕಾರಣವೇನು? ಕೇವಲ ಕಾಡು ನಾಶ ಮಾತ್ರವೇ? ಅಥವಾ ಮರಗಳನ್ನು ಬೆಳೆಸಿದ ತಕ್ಷಣ ಸರಿಹೋಗುವುದೆ? ನಮ್ಮ ಜೀವನ ಶೈಲಿ ಬದಲಾಗುತ್ತಿದೆ ಮತ್ತು ಬದಲಾಗಿದೆ. ಮಾಲಿನ್ಯ ಮಿತಿ ಮೀರಿದೆ. ಮನುಷ್ಯನ ದುರಾಸೆಗೆ, ಕೆರೆಗಳು, ಭಾವಿಗಳು, ನದಿಗಳು ಕೊಳಚೆ ಗುಂಡಿಗಳಾಗಿವೆ. ಮನೆಯೊಳಗೆ ಸೆಖೆಯಿಂದ ಇರಲಾರದೆ ಒದ್ದಾಡಿದರೆ, ಹೊರಗೆ ಬಂದರೆ ಬಿಸಿಲಿನ ದಗೆ, ಧೂಳು ಸಾಕಪ್ಪ ಎನಿಸಿಬಿಡುತ್ತೆ. ಮನೆಗೊಂದು ಕಾರು, ಎರಡೋ ಮೂರೋ ಬೈಕುಗಳು ಸಾಮಾನ್ಯವಾಗತೊಡಗಿವೆ. ಮಳೆ ನೀರು ಬಿದ್ದರೂ ಕಾಂಕ್ರೀಟ್ ನಿಂದಾಗಿ ಭೂಮಿ ಒಳಕ್ಕೆ ಹೋಗದ ರೀತಿ ಮಾಡಿದ್ದೇವೆ. ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಕನಿಷ್ಟ ಐದಾದರೂ ಪಿಎಚ್‍ಡಿ ಮಾಡಬಹುದು. 

ಜಾಗೃತಿಯ ವಿಷಯಕ್ಕೆ ಬರೋಣ. ಜಾಗೃತಿ, ಅರಿವು, ತರಬೇತಿ ಯಾರಿಗೆ ಬೇಕೂ ಸ್ವಾಮಿ? ಯಾರು ದಡ್ಡರೂ ಹೇಳಿ? ಎಲ್ಲರಿಗೂ ತಿಳಿದಿದೆ, ಪರಿಸರದ ಮಹತ್ವ. ಆದರೂ ಬೇಜವಬ್ದಾರಿತನ, ಎಲ್ಲರನ್ನೂ ಆವರಿಸಿದೆ. ಉಢಾಫೆತನವೆಂದರೂ ತಪ್ಪಿಲ್ಲ. ಎಸಿ ರೂಮಿನಲ್ಲಿ ಕುಳಿತು ಬಡವರ ಬಗ್ಗೆ ಚರ್ಚಿಸೋದು, ಪಿಜ್ಜಾ ತಿನ್ನುತ್ತಾ ಕೃಷಿಯ ಬಗ್ಗೆ ಮಾತನಾಡೋದು, ಇವಲ್ಲಾ ಹಳೆಯ ಉದಾಹರಣೆಗಳು. ಪರಿಸರ ಸಂರಕ್ಷಣೆ ಎಲ್ಲರಿಗೂ ತಲುಪುವ ಸಲುವಾಗಿ ಪರಿಸರ ಶಿಕ್ಷಣವನ್ನು ಜಾರಿಗೆ ತಂದಿದೆ. ಮೂರನೆಯ ತರಗತಿ ಮಗು ಕೂಡ ಪರಿಸರ ಸಂರಕ್ಷಣೆಯ ಕುರಿತು ಉದ್ದುದ್ದ ಬಾಷಣ ಮಾಡುತ್ತದೆ, ಪ್ರಬಂಧ ಬರೆಯುತ್ತದೆ. ಆದರೆ, ಜೀವನದಲ್ಲಿ ಅಳವಡಿಕೆಯಿಲ್ಲ. ಪರಿಸರ ಸಂರಕ್ಷಣೆಯ ಕಾರ್ಯಕ್ರಮ ನಡೆದ ಮೇಲೆ, ಆವರಣವನ್ನೂ ಶುಚಿಗೊಳಿಸುವುದಿಲ್ಲ. ಪರಿಸರ ದಿನಾಚರಣೆಗೆ ಎಷ್ಟೊಂದು ಬ್ಯಾನರ್‍ಗಳು, ಪತ್ರಿಕೆಗಳು, ನೀರಿನ ಬಾಟಲಿಗಳು ವೆಚ್ಚವಾಗುವುದಿಲ್ಲ ಹೇಳಿ. 

ಪರಿಸರ ಸಂರಕ್ಷಣೆ ಜೀವನದ ಮಾರ್ಗವಾಗಿರಬೇಕು. ಒಂದು ದಿನ, ಸಾರ್ವಜನಿಕ ವಾಹನದಲ್ಲಿ ಹೋಗೋಣವೆಂದು ನಿರ್ಧರಿಸಿದರೆ ಸಾಕು. ನೀರಿನ ಬಾಟಲಿಯನ್ನು ತಮ್ಮೊಂದಿಗೆ ಕೊಂಡೊಯ್ಯಿರಿ. ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಅಥವಾ ಕಡಿಮೆ ಮಾಡಿ. ಅವಶ್ಯಕತೆಯಿಲ್ಲದೆ ಇರುವಾಗ ನೀರು, ಬೆಳಕು, ಗಾಳಿಯನ್ನು ಉಪಯೋಗಿಸಬೇಡಿ. ಪೇಪರ್ ಬಳಕೆ ಕಡಿಮೆ ಮಾಡಿ. ದಿನ ಪತ್ರಿಕೆ ಒಂದು ದಿನ ಮುದ್ರಿಸುವುದನ್ನು ನಿಲ್ಲಿಸಿ, ಆನ್‍ಲೈನ್‍ಗೆ ಹೋಗಿ. ಪರಿಸರ ಕಾಳಜಿ ತೋರಿಕೆಯಲ್ಲರಿಬಾರದು, ಅಳವಡಿಕೆಯಲ್ಲಿರಬೇಕು. ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಅನುವರಿಸುವಂತಿರಬೇಕು, ಆಡಿಕೊಳ್ಳುವಂತಾಗಬಾರದು. ಪರಿಸರ ದಿನ ದೊಂಬರಾಟವಾಗದೇ ಸಂರಕ್ಷಣೆಯ ಮಾರ್ಗವಾಗಲಿ. 

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...