14 ನವೆಂಬರ್ 2011

ಈ ಮಾತುಗಳನ್ನು ಹೇಳಲು ಅಥವಾ ಬರೆಯಲು ನಾನೆಷ್ಟು ಯೋಗ್ಯನೆಂದು ನನಗೆ ತಿಳಿದಿಲ್ಲ
, ಆದರೂ ಸ್ವಾತಂತ್ರ್ಯದ ಹೆಸರನ್ನು ಬಳಸಿಕೊಂಡು, ನನಗೂ ಬರೆಯುವ ಹಕ್ಕಿದೆಯೆಂದು ಬರೆಯುತಿದ್ದೇನೆ. ನಾವು, ಭಾರತೀಯರಾಗಿ ಬಹಳಷ್ಟು ಮೆರೆಯುತ್ತೇವೆ, ಹೆಮ್ಮೆ ಪಡುತ್ತೇವೆ, ನಮ್ಮಲ್ಲಿ ಹಿಂದೆ ಅದಿತ್ತಂತೆ, ಇದಿತ್ತಂದೆ ಎಂದು. ನನ್ನೂರಿನಲ್ಲಿಯೂ ಬಹಳಷ್ಟು ಬಾರಿ ನಾನು ಕೇಳಿದ್ದೇನೆ, ಇದೆಲ್ಲವೂ ನಮ್ಮ ತಾತನ ಆಸ್ತಿಯಂತೆ, ಅವರು ಕಳೆದರಂತೆ! ನಮ್ಮೂರಿನಲ್ಲಿ ಅಗಾಧ ಸಂಪತಿತ್ತಂತೆ, ಕಳೆದರಂತೆ, ದೋಚಿದರಂತೆ. ಈ ಅಂತೆ ಕಂತೆಗಳ ಮಾತನ್ನು ನಾವು ಸ್ವಲ್ಪ ಬದಿಗಿಟ್ಟು ನೋಡಬೇಕಾಗುತ್ತದೆ. ನಮ್ಮಲ್ಲಿರುವುದಕ್ಕೊಂದು ಲೆಕ್ಕ ಪತ್ರ ಬೇಡವೇ? ಹಿಂದೆ ಇರಲಿಲ್ಲ ಬೇಡ ಆದರೇ ಇವತ್ತಿಗೂ ಅದನ್ನು ಇಟ್ಟಿಕೊಳ್ಳಬಾರದೇ? ಅದಕ್ಕೂ ಮೀರಿ ನಮ್ಮಲ್ಲಿ ನಡೆಯುವ ಯಾವೊಂದು ಆಚರಣೆಗಳನ್ನು ಎಲ್ಲಿಯೂ ದಾಖಲಿಸದೇ ಹೋದದ್ದು ಒಂದು ದುರಂತ. ನಮ್ಮಲ್ಲಿ ಪುರಾಣಗಳ ಬಗ್ಗೆ, ಇತಿಹಾಸದ ಬಗ್ಗೆ, ಕಥೆಗಳನ್ನು ಹೇಳುವವರು ಹೆಚ್ಚು, ಆದರೇ ಬರೆದವರು ಬಹಳ ಕಡಿಮೆ. ನಾವೆಷ್ಟೇ ಮಾತನಾಡಿದರೂ ಕೇಳಿಸಿಕೊಂಡವರು ಅದನ್ನು ನೆನಪಿನಲ್ಲಿಟ್ಟುಕೊಂಡು ಮುಂದಿನ ಪೀಳಿಗೆಗೆ ರವಾನಿಸುವುದು ಅಷ್ಟಕಷ್ಟೇ! ಮುಂದಿನ ಪೀಳಿಗೆಯ ವಿಚಾರ ಬದಿಗಿಡಿ, ಕೆಲವರು ಅವರ ಮೇಲಧಿಕಾರಿ, ಅವರ ಬಾಸ್ ಹೇಳಿದ ಮಾತನ್ನೇ ಜೊತೆಯವರಿಗೆ ತಿಳಿಸುವುದಿಲ್ಲ. ಜೊತೆಯಲ್ಲಿರುವವರು ಬುದ್ದಿವಂತರಾಗುವುದು ಅದೆಷ್ಟೊ ಮಂದಿಗೆ ಇಷ್ಟವೇ ಆಗುವುದಿಲ್ಲ. ನನ್ನ ಪಿ ಎಚ್ ಡಿಯ ಸಮಯದಲ್ಲಿ ಕೆಲವು ಮಂದಿ ಆ ರೀತಿ ವರ್ತಿಸಿದ್ದಾರೆ. ನಾನು ನನ್ನ ಥೀಸಿಸ್ ಮೈಸೂರು ವಿವಿಗೆ ಕೊಡುವ ಮುನ್ನವೇ ನನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದೆ. ಜ್ನಾನ ಎಂದಿಗೂ ಒಬ್ಬರಿಂದ ಒಬ್ಬರಿಗೆ ಪಸರಬೇಕು. ಇನ್ನೊಬ್ಬರನ್ನು ಗೇಲಿ ಮಾಡುವುದೇ ಬದುಕಾಗಬಾರದು. ಇರುವ ಒಳ್ಳೆಯದನ್ನು ಕಲಿಯೋಣ, ಕಲಿತಿರುವುದನ್ನು ಇತರರೊಂದಿಗೆ ಹಂಚಿ ಬದುಕೋಣ.
ನಾನು ಎಲ್ಲಿಯೋ ಶುರು ಮಾಡಿ ಮತ್ತೆಲ್ಲಿಗೋ ಕರೆದೊಯ್ದದಕ್ಕೆ ಕ್ಷಮೆಯಿರಲಿ. ಈಗ ಹೇಳ ಹೊರಟದ್ದು, ನಾವು ದಿನ ನಿತ್ಯನ ಕಾಣುವ ಅನುಭವಿಸುವ ವಿಷಯಗಳನ್ನು, ವಿಚಾರಗಳನ್ನು ಬರೆದಿಡುವುದರ ಬಗೆಗೆ. ನನ್ನೂರು ನನ್ನ ಬಾಲ್ಯದಲ್ಲಿ ಹೇಗಿತ್ತೆಂಬುದನ್ನು ನನ್ನ ಒಂದು ಬರಹದಲ್ಲಿ ಸಂಪೂರ್ಣವಾಗಿ ಹೇಳಿದ್ದೇನೆ. ಆದರೇ ನಾನು ಮಾತನಾಡುವಾಗ ಅದೆಷ್ಟೋ ವಿಚಾರಗಳನ್ನು ಮರೆತು ಹೇಳುವುದುಂಟು. ನನ್ನೂರಿನ ಬಗ್ಗೆ ನನ್ನ ಸ್ನೇಹಿತರಿಗೆ ಹೇಳಿರುವುದಕಿಂತ ಅವರು ಓದಿ ತಿಳಿದುಕೊಂಡಿರುವವರು ನನ್ನೂರಿಗೆ ಬಂದೊಡನೆಯೇ ಕೇಳುತ್ತಾರೆ, ಮತ್ತು ಅದನ್ನು ಅಲ್ಲಿನ ಸ್ಥಳ ಪುರಾಣಕ್ಕೆ ನಂಟುಮಾಡಿಕೊಳ್ಳುತ್ತಾರೆ. ಇತಿಹಾಸವನ್ನು ಹೆಕ್ಕಿ ನೋಡಿದರೇ ಭಾರತದ ಬಗೆಗೆ ಭಾರತೀಯರು ಬರೆದಿರುವುದು ಬಹಳ ಕಡಿಮೆ. ಹೊರಗಿನಿಂದ ಬಂದವರು ಬರೆದಿರುವುದೇ ಹೆಚ್ಚು. ಹೊರಗಿನವನು, ಅವನ ದೃಷ್ಟಿಕೋನದಿಂದ ನೋಡಿರುತ್ತಾನೆ. ಆದ್ದರಿಂದಲೇ ಬಹುತೇಕ ವಿದೇಶಿ ಚರಿತ್ರಕಾರರಿಗೆ ಭಾರತ ಅಂಧಕಾರದಲ್ಲಿ ಮುಳುಗಿದ್ದ ದೇಶವೆನಿಸುತ್ತದೆ. ನನ್ನೂರು ಹೊರಗಿನಿಂದ ಬಂದವನಿಗೆ ಹಳ್ಳಿ, ಹಿಂದುವರೆದ ಗ್ರಾಮವೆನಿಸುತ್ತದೆ. ಏಕೆಂದರೇ ನೀವು ಬಾನುಗೊಂದಿಯನ್ನು, ಬೆಂಗಳೂರಿಗೆ ಹೋಲಿಕೆ ಮಾಡಿ ನೋಡಿರುತ್ತೀರಾ! ಅದಕ್ಕಾಗಿಯೇ ಒಬ್ಬರು ಇನ್ನೊಬ್ಬರನ್ನು ಹೋಲಿಸಿ ನೋಡುವಾಗ ಬೇಸರವಾಗುವುದು. ತಂದೆ ತಾಯಂದಿರು ತಮ್ಮ ಮಕ್ಕಳನ್ನು ಪಕ್ಕದ ಮನೆಯವರ ಮಕ್ಕಳೊಂದಿಗೆ ಹೋಲಿಸಿದಾಗ ಬೇಸರ ಉಂಟಾಗುತ್ತದೆ. ತಾನು ತನ್ನ ಜೀವನವನ್ನು ತನ್ನ ಅನುಭವದಿಂದಲೇ ಅನುಭವಿಸಬೇಕು, ಇದು ಭಾರತ. ಆದರೇ ಅವನ ಅನುಭವಗಳನ್ನು ಪುಸ್ತಕದಲ್ಲಿಟ್ಟರೇ ಮುಂದೆಂದೊ ಯಾರಿಗಾದರೂ ಅನುಕೂಲವಾಗಬಹುದು.
ಪುಸ್ತಕಗಳು ಎಲ್ಲ ಸಮಯದಲ್ಲಿಯೂ ಉಪಯೋಗಕ್ಕೆ ಬರುವುದಿಲ್ಲ. ಅವರು ಅವರ ಯೋಗ್ಯತೆಗೆ ತಕ್ಕಂತೆ, ಅನುಭವಕ್ಕೆ ತಕ್ಕಂತೆ ಬರೆದಿಡುತ್ತಾರೆ. ಆದರೇ ಸಮಯದಲ್ಲಿದ್ದ, ಕ್ಷಣಗಳು ಮಾತ್ರ ನಮ್ಮ ಆ ದಿನಗಳಿಗೆ ಕರೆದೊಯ್ಯಬಹುದು. ಆದ್ದರಿಂದ, ನಾವು ಮಾತನಾಡುವ ವಿಷಯಗಳು ಬರವಣಿಗೆಯಾಗಿ ಮಾರ್ಪಾಡಾಗಳೆಂದು ಬಯಸುತ್ತೇನೆ. ಬ್ಲಾಗ್ ಯುಗದಲ್ಲಿ ಬರವಣಿಗೆಗಳಿಗೆ ಬರವಿಲ್ಲವಾದರೂ, ವಿಷಯಗಳಿಗೆ ನೀಡುವ ಮನ್ನಣೆ ಮುಖ್ಯವಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...