21 ನವೆಂಬರ್ 2011


ಒಮ್ಮೊಮ್ಮೆ ಜನರ ನಡುವಳಿಕೆಗಳು ನಮ್ಮನ್ನು ಬಹಳ ಬೇಸರಗೊಳಿಸುತ್ತವೆ. ಸಹಾಯಮಾಡುವುದಕ್ಕೆ ಹೋದವರು ಮತ್ತೊಮ್ಮೆ ಸಹಾಯವನ್ನೇ ಮಾಡಬಾರದೆಂಬಂತೆ ಮಾಡಿಬಿಡುತ್ತವೆ. ನೀರಲ್ಲಿ ಮುಳುಗುತ್ತಿರುವವನನ್ನು ಉಳಿಸಲು ಹೋಗಿ ತಾನು ಸಾಯುವಂತೆಯೋ, ಹಾದಿಯಲ್ಲಿ ಹೋಗುವ ಮಾರಮ್ಮನನ್ನು ಮನೆಗೆ ಕರೆದಂತೆಯೋ ಆಗಿ ಬಿಡುತ್ತದೆ. ಮೊನ್ನೆ ಇಂಥಹದ್ದೆ ಒಂದು ಸನ್ನಿವೇಶ ನನಗೂ ಒದಗಿಬಂತು, ಅನುಭವಿಸಿದೆ, ಅದನ್ನು ಆನಂದಿಸುವ ಸರದಿ ತಮ್ಮದು. ಆಫೀಸಿಗೆಂದು ಬರುತ್ತಿದ್ದೆ, ಮಲ್ಲೇಶ್ವರದ ಹದಿನೇಳನೆ ಕ್ರಾಸಿನಿಂದ ಬರುವುದು ನಂತರ, ಎಂಈಎಸ್ ಕಾಲೇಜು ಪಕ್ಕದಲ್ಲಿ ಬರುವುದು ನನ್ನ ದಿನಚರಿ. ಬರುವ ದಾರಿಯಲ್ಲಿ ಒಬ್ಬ ಅಜ್ಜ ನನ್ನ ಬೈಕ್ ಅನ್ನು ಅಡ್ಡ ಹಾಕಿದರು. ಆರೋಗ್ಯ ಸರಿಯಿಲ್ಲ ಅಲ್ಲಿಯ ತನಕ ಬಿಡಿ ಎಂದರು. ನಾನು ಹೋಗುವುದು ಹದಿನಾಲ್ಕನೇ ಕ್ರಾಸಿನ ತನಕ ಮಾತ್ರವೆಂದೆ. ನಾನು ಗೀತಾಂಜಲಿ ಹತ್ತಿರ ಹೋಗಬೇಕೆಂದರು. ನಾನು ಆ ಮಾರ್ಗವಾಗಿ ಹೋಗುವುದಿಲ್ಲ ನನ್ನ ಆಫೀಸಿರುವುದು ಇಲ್ಲೇ ಮುಂದಿನ ರಸ್ತೆಯಲ್ಲಿ ಎಂದೆ. ಆ ಮನುಷ್ಯ ದೇವರ ಹೆಸರನ್ನು ಹೇಳುತ್ತಾ ಕುಳಿತೇ ಬಿಟ್ಟರು. ರಾಘವೇಂದ್ರ ಕಾಪಾಡು ತಂದೆ ಎಂದರು. ದೇವರ ಹೆಸರು ಹೇಳಿ ಕುಳಿತಿದ್ದರಿಂದ ನನಗು ಸ್ವಲ್ಪ ಕನಿಕರ ಬಂದಿರಬಹುದು. ಕುಳಿತ ಎರಡೇ ನಿಮಿಷದಲ್ಲಿ, ನನಗೆ ಸರ್ಜರಿಯಾಗಿದೆ, ಎದೆಯಲ್ಲಿ ನೋವಿದೆ ಎನ್ನತೊಡಗಿದರು. ಅಯ್ಯೋ ಹಣೆಬರಹವೇ! ಈ ಮನುಷ್ಯನಿಗೆ ಏನಾದರೂ ಆದರೇ? ಭಯವೆನಿಸತೊಡಗಿತು. ರಸ್ತೆ ಬೇರೆ ಚೆನ್ನಾಗಿರಲಿಲ್ಲ. ಆ ವಿಷಯಕ್ಕೆ ಬಂದರೇ, ಬೆಂಗಳೂರಿನಲ್ಲಿ ಯಾವ ರಸ್ತೆ ಚೆನ್ನಾಗಿದೆ! ಎನ್ನುವ ಪ್ರಶ್ನೆಯೂ ಹುಟ್ಟಬಹುದು. ನಾನು ಅವರಿಗೆ ಹೇಳತೊಡಗಿದೆ, ಮುಂದಿನ ಬಸ್ ಸ್ಟಾಪ್ ವರೆಗೆ ಬಿಡುತ್ತೇನೆ. ಆನಂತರ ನೀವು ಬಸ್ಸಿನಲ್ಲಿ ಹೋಗಿ ಎಂದು. ಆ ಮನುಷ್ಯ ತನ್ನ ಎದೆಯಲ್ಲಿರುವ ಗಾಯವನ್ನೇ ತೋರುವಂತೆ ಮಾಡತೊಡಗಿದರು!!

ನನಗಂತೂ ಆ ಕ್ಷಣ ಅಸಹ್ಯ, ಭಯ ಬೇಸರ ಎಲ್ಲವೂ ಒಮ್ಮೇಗೆ ಬಂದಹಾಗಾಯಿತು. ದಾರಿ ಹೋಕನಿಗೆ ಸಹಾಯ ಮಾಡಲು ಹೋಗಿ, ಈಗ ಅವನನ್ನು ಅವನಿಗೆ ಕೆಲಸವಿರುವಲ್ಲಿಗೇ ಕರೆದೊಯ್ಯಬೇಕಾ? ಮಾನವನ ದುರಾಸೆಗೆ, ದುರುಪಯೋಗಕ್ಕೆ, ಇದಕ್ಕಿಂತ ಒಳ್ಳೆಯ ಉದಾಹರಣೆ ಸಿಗಲಾರದೆನಿಸಿತು. ಜನರು ಬೆಂಗಳೂರಿನಂಥಹ ನಗರಗಳಲ್ಲಿ ಜನರಿಗೆ ಸಹಾಯ ಮಾಡುವುದಕ್ಕೆ ಯಾಕೆ ಹಿಂಜರಯುತ್ತಾರೆಂಬುದಕ್ಕೆ ಕ್ಷಣಾರ್ಧದಲ್ಲಿಯೇ ಉತ್ತರೆ ದೊರಕಿತು. ಅಲ್ಲಾ ಮಾರಾಯರೇ, ಆಟೋದಲ್ಲಿ ಹೋಗಬಹುದಲ್ಲ ಎನ್ನುವ ನನ್ನ ಪ್ರಶ್ನೆಗೆ ಮನುಷ್ಯ ಮೌನವಹಿಸಿದ್ದರು. ಇದು ಯಾಕೋ ಅತಿಯಾಯಿತೆನಿಸಿ, ಸ್ವಾಮಿ ಆಟೋದಲ್ಲಿ ಹೋಗಿ ಎಂದರೇ, ಇಲ್ಲ ಆಟೋ ಅಲ್ಲಿಯ ತನಕ ಬರುವುದಿಲ್ಲವೆಂದರು. ನಾನು ನಿಮ್ಮನ್ನು ಆಟೋಗೆ ಹತ್ತಿಸುತ್ತೇನೆ, ಇಳಿಯಿರಿ ಎಂದರೇ ಇಳಿಯುವುದಿಲ್ಲವೆಂದು ಹಠಮಾಡತೊಡಗಿದರು.

ಅಯ್ಯೋ ನನ್ನ ಹಣೆಬರಹವೇ! ಎಂದು ಸ್ವಲ್ಪ ದೂರ ಮುನ್ನುಗ್ಗುವ ಮುಂಚೆಯೇ ದಾರಿ ತೋರಿಸಲು ಶುರು ಮಾಡಿದರು. ಹೀಗೆ ಹೋಗಿ, ಇಲ್ಲಿ ಎಡಕ್ಕೆ ಅಲ್ಲಿ ಬಲಕ್ಕೆ, ಕಡೆಯದಾಗಿ ನಾನು ನಿಮ್ಮನ್ನು ಎಲ್ಲಿಗೆ ಬಿಡಬೇಕು ಸ್ವಾಮಿ ಎನ್ನುವಾಗ, ಗೀತಾಂಜಲಿ ಹತ್ತಿರವೆಂದರು. ದೇವರೇ! ಸ್ವಾಮಿ ನನ್ನ ಆಫೀಸಿರುವುದು, ಹದಿನಾಲ್ಕನೇಯ ಕ್ರಾಸಿನಲ್ಲಿ ನೀವು ಹೇಳುತ್ತಿರುವಲ್ಲಿಗೆ ಇಲ್ಲಿಂದ ಮೂರು ಕೀಲೋಮೀಟರ್ ನಾನು ಆಫೀಸಿಗೆ ಹೋಗಬೇಕು. ಯಾಕೆ ಹೀಗೆ ಮತ್ತೊಬ್ಬರಿಗೆ ತೊಂದರೆ ಕೊಡುತ್ತೀರಾ? ಅರ್ಥವಾಗುವುದಿಲ್ಲವೇ? ಎಂದರೇ ಮತ್ತೆ ನಿರಾಳ ಮೌನ. ಸ್ವಾಮಿ ನಾನೇ ನಿಮಗೆ ಆಟೋಗೆ ದುಡ್ಡು ಕೊಡುತ್ತೇನೆ ಇಳಿಯಿರಿ ಎಂದರೂ ಇಳಿಯುವುದಿಲ್ಲವೆಂದರು. ಅಯ್ಯೋ, ಯಾಕ್ರಿ ಇಳಿದು ಆಟೋದಲ್ಲಿ ಹೋದರೇನು ಬಂತು ನಾನೇ ನಿಮಗೆ ದುಡ್ಡೂ ಕೋಡುತ್ತೇನಲ್ಲ. ಇಲ್ಲಾ ಆಟೋಗೆಲ್ಲಾ ದುಡ್ಡೂ ಬೇಡ, ನೀವು ಅಲ್ಲಿಗೆ ಬಿಟ್ಟು ಹೋಗಿ ಎಂದರು. ಎಲ್ಲಿಗೆ ಎಂದೆ. ಮಲ್ಲೇಶ್ವರಂ ಸರ್ಕಲ್ ತನಕ ಬಿಡಿ ಸಾಕೆಂದರು. ನಾನು ನನ್ನ ಮೂರ್ಖತನವನ್ನು ಶಪಿಸುತ್ತಾ, ಗಾಡಿ ಓಡಿಸತೊಡಗಿದೆ. ಸ್ವಲ್ಪವೇ ದೂರ ಹೋದಾಕ್ಷಣ, ಮನುಷ್ಯ ಕಿರುಚತೊಡಗಿದ, ನಿಧಾನವೆನ್ನತೊಡಗಿದರು. ಇನ್ನೆಷ್ಟು ನಿಧಾನ, ಹಿಂದುಗಡೆಯಿಂದ ಗಾಡಿಗಳು ಹಾರ್ನ್ ಮಾಡತೊಡಗಿದರು. ಒಂದು ಗುಂಡಿಯನ್ನು ಇಳಿಸುವಂತಿಲ್ಲ, ನನ್ನ ಭುಜದ ಮೇಲೆ ಕೈಹಾಕಿ ಅದುಮತೊಡಗಿದರು.

ನನ್ನೊಳಗೆ ಕೋಪ ಕುದಿಯತೊಡಗಿತು, ಅದೇನೋ ಗೊತ್ತಿಲ್ಲ, ಇತ್ತೀಚೆಗೆ ಕೋಪವೇ ಬರುವುದಿಲ್ಲ. ಬಂದರೂ ಹಿಂದಿನಷ್ಟು ವೇಗವಾಗಿಯೂ ಅಥವಾ ದಿಡೀರನೇ ಬರುವುದಿಲ್ಲ. ಅದೆಷ್ಟು ನಿಧಾನವಾಗಿ ಗಾಡಿ ಓಡಿಸಿಕೊಂಡು ಬಂದೆನೆಂದರೇ, ಹೂವಿಗೂ ನೋವಾಗದಷ್ಟೂ ಮೃದುವಾಗಿ ಬಂದೆ, ಬಂದವನು, ಅಲ್ಲಿ ಕಾಣುತ್ತಿರುವುದೇ ಮಲ್ಲೇಶ್ವರಂ ಸರ್ಕಲ್ ಎಂದರೇ, ಆಗಲೂ ಮನುಷ್ಯ ಇಳಿಯುತ್ತಿಲ್ಲ. ಇಲ್ಲಾ, ಇಲ್ಲಿಯವರೆಗೂ ಬಂದಿರುವ ನೀವು, ಅಲ್ಲಿ ಗೀತಾಂಜಲಿಯ ಹತ್ತಿರಕ್ಕೆ ಬಿಡಿ ಎಂದರು. ನನಗಂತು ಮೈಕೈಯೆಲ್ಲಾ ಉರಿದು ಹೋಯಿತು. ಥೂ ದರಿದ್ರ ಬದುಕೇ, ಮಾಡುವ ಕೆಲಸ ಬಿಟ್ಟು ಹೀಗೆ ಮಾಡಿಕೊಂಡು ಓಡಾಡುತ್ತೀಯಾ? ಎನಿಸಿತು.ಅಲ್ಲಿಂದ ಸೇತುವೆಯ ಅಡಿಯಿಂದ ಮುನ್ನುಗ್ಗಿ, ಗೀತಾಂಜಲಿಯ ಹತ್ತಿರಕ್ಕೆ ಬಿಟ್ಟೆ.

ಅವರು ಅಲ್ಲಿಯೇ ಒಂದು ಆಸ್ಪತ್ರೆಯನ್ನು ತೋರಿಸಿದರು, ಅದರ ಬಾಗಿಲಿಗೆ ನಿಲ್ಲಿಸುವಂತೆ ಕೇಳಿದರೂ, ನಾನು ನಾಲ್ಕು ಹೆಜ್ಜೆ ಮುಂದಕ್ಕೆ ನಿಲ್ಲಿಸಿದೆ. ಮನುಷ್ಯ ಕೋಪಗೊಂಡಂತೆ ಕಾಣಿಸಿತು. ದೇವರೇ! ಎಲ್ಲವನ್ನೂ ನೀನೆ ಮಾಡಿಸುತ್ತಿರುವೆಂಬುದು ನನ್ನ ಬಲವಾದ ನಂಬಿಕೆ. ಆದರೇ, ಇಂಥಹ ಕೆಲಸವನ್ನೇಕೆ ಮಾಡಿಸುತ್ತೀಯಾ??? ಜನರು, ಅದೆಷ್ಟು ಬಾರಿ ನಮ್ಮ ಒಳ್ಳೆತನವನ್ನು ದುರುಪಯೋಗಪಡಿಸಿಕೊಳ್ಳುತಾರೆಂಬುದಕ್ಕೆ ಇದೊಂದು ನಿದರ್ಶನ. ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದೆಂಬುದು ಸಹಾಯದ ವಿಷಯದಲ್ಲಿ, ಅಪ್ಪಟ ಸತ್ಯ, ನಾನು ಅದನ್ನೇ ನಂಬಿ ಬದುಕುವವನು. ಆದರೇ, ಈ ಬಗೆಯ ಸಹಾಯ ಮಾಡಿದಾಗ, ಅಥವ ಅವರು ನಮ್ಮನ್ನು ದುರುಪಯೋಗ ಪಡಿಸಿಕೊಂಡಾಗ ಎಲ್ಲಿಲ್ಲದ ಅಸಮಾಧಾನವುಂಟಾಗುತ್ತದೆ. ನನ್ನ ಶ್ರಮಕ್ಕೆ, ಅಥವಾ ಒಳ್ಳೆಯವರಿಗೆ ಒಳ್ಳೆಯತನಕ್ಕೆ ಸಹಾಯ ಮಾಡುವ ಯೊಗ್ಯತೆ ನನಗಿಲ್ಲವೆಂಬ ಕೊರಗುಂಟಾಗುತ್ತದೆ.

 
ಇಂಥಹದ್ದೇ, ಸನ್ನಿವೇಶಗಳು, ಬೆಂಗಳೂರು ವಿವಿಯಿಂದ ನಾಗರಭಾವಿಗೆ ಬರುವ ಹಾದಿಯಲ್ಲಿ ನಡೆಯುತ್ತವೆ, ನೀವು ಆ ರಸ್ತೆಯಲ್ಲಿ ಗಮನಿಸಿದ್ದೇ ಆದರೇ, ಜ್ನಾನಭಾರತಿಯಿಂದ ಬರುವಾಗ, ಮೊದಲು ಗಾಂಧಿಭವನ ಸಿಗುತ್ತದೆ. ಆದಾದ ನಂತರ ಮೊದಲಿಗೆ ಲಾ ಕಾಲೇಜು ಹಾಸ್ಟೇಲು ಸಿಗುತ್ತದೆ. ಹಾಸ್ಟೇಲ್ ದಾಟಿ ಬಂದರೇ, ನಂತರ ಕಾಲೇಜು ಸಿಗುತ್ತದೆ. ಕ್ಯಾಂಪಸ್ಸಿನ ಒಳಗೆ ಎಲ್ಲವೂ ಇದೆ. ಆದರೇ ಹಾಸ್ಟಲ್ಲಿಗೆ ಒಂದು ಗೇಟು, ಕಾಲೇಜಿಗೆ ಮತ್ತೊಂದು ಗೇಟಿದೆ. ಎರಡು ಗೇಟಿಗೆ, ಹೆಚ್ಚೆಂದರೇ, ಇನ್ನೂರು ಮೀಟರು ದೂರವಿರಬಹುದೆನ್ನಿ. ಅನೇಕ ಬಾರಿ, ಅಲ್ಲಿನ ವಿದ್ಯಾರ್ಥಿಗಳು, ಹೋಗಿ ಬರುವ ಗಾಡಿಗಳಲ್ಲಿ, ಡ್ರಾಪ್ ಕೇಳುತ್ತಾರೆ. ಹತ್ತಿ ಮೂರು ನಿಮಿಷದೊಳಗೆ ಅವರು ಇಳಿಯುವ ಸ್ಥಳ ಬಂದಿರುತ್ತದೆ. ಕೇವಲ ಇನ್ನೂರು ಮೀಟರು ದೂರಕ್ಕೆ, ನೀವು ನಿಮ್ಮ ಗಾಡಿಯನ್ನು ಎರಡು ಬಾರಿ ನಿಲ್ಲಿಸಿ ಅವರಿಗೆ ಸಹಾಯ ಮಾಡಬೇಕು. ಜನರನ್ನು ದುರುಪಯೋಗ ಪಡಿಸಿಕೊಳ್ಳುವುದೆಂದರೇ ಇದೇಯಲ್ಲವೇ? ನಾನು ಮೊದಲಿನ ದಿನಗಳಲ್ಲಿ ಅವರಿಗೆ ಗಾಡಿ ನಿಲ್ಲಿಸುತ್ತಿದ್ದೆ. ಪಾಪ ನಾಗರಭಾವಿ ಸರ್ಕಲ್ಲಿಗಿರಬೇಕೆಂದು. ನಂತರ ಅದನ್ನು ಮಾಡುವುದಿಲ್ಲವೆಂದು ತೀರ್ಮಾನಿಸಿದೆ. ಈಗ ಅದೆಷ್ಟೋ ಮಂದಿ, ನಾಗರಭಾವಿಗೆ ಬರುವವರಿದ್ದರೂ ಅವರು ಇದರಿಂದ ವಂಚಿತರಾಗುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...