25 ನವೆಂಬರ್ 2011

ಅವರವರ ನಂಬಿಕೆ ಅವರವರ ಭಾವಕ್ಕೆ ಬಿಟ್ಟಿದ್ದು!!!

ಕೆಲವೊಮ್ಮೆ  ಏನಾದರೂ ಬರೆಯಬೇಕೆನಿಸುತ್ತದೆ. ಆದರೇ ಏನು ಬರೆಯುವುದೆಂಬುದೇ ದೊಡ್ಡ ಚಿಂತೆಯಾಗುತ್ತದೆ. ಬರೆಯಲೇಬೇಕೆಂದು ನಿರ್ಧರಿಸಿದ ಮೇಲೆ ಬರೆಯಲೇಬೇಕಲ್ಲವೇ? ಏನನ್ನೋ ಗೀಚಿದರೇ, ಬರವಣಿಗೆಯನ್ನು ತಿರುವಿ ಹಾಕುವವರು ಸಿಗುವುದಿಲ್ಲ! ನನ್ನ ಬರವಣಿಗೆಯನ್ನು ಯಾರಾದರೂ ಓದುತ್ತಾರೆಂಬ ಭರವಸೆ ನನಗೂ ಇಲ್ಲ ಬಿಡಿ! ಆದರೂ ನಾಳೆ ನಾನು ಬರೆದ ಸಾಲುಗಳನ್ನು ನಾನೇ ಮೆಲಕು ಹಾಕುವಾಗ ಇದು ಯಾವ ತಲೆ ಕೆಟ್ಟವನು ಬರೆದಿದ್ದಾನೆ, ಅಥವಾ ನಾನು ಇಷ್ಟು ಕೆಟ್ಟದ್ದಾಗಿ ಬರೆಯುತ್ತೀನಾ? ಎಂದು ನನ್ನ ಮೇಲೆ ನನಗೆ ಜಿಗುಪ್ಸೆ ಬರಬಾರದಲ್ಲ. ಆದ್ದರಿಂದ, ಅಳೆದು ತೂಗಿ ಬರೆಯುತ್ತಿದ್ದೇನೆ. ಬರವಣಿಗೆಯ ತೂಕ ಓದಿದ ಮೇಲೆಯೇ ತಿಳಿಯುವುದು. ನಾನೆಂದು ಆ ಕೆಲಸ ಮಾಡಿದವನಲ್ಲವೆಂದು ತಮಗೂ ತಿಳಿದಿದೆ. ಇದ್ದಿದ್ದನ್ನು ನೇರವಾಗಿ ಹೇಳಿ ನಿಮ್ಮೆಲ್ಲರ ಹತ್ತಿರನೂ ಒಮ್ಮೊಮ್ಮೆಯಾದರೂ ಬೈಗುಳ ತಿಂದಿದ್ದೇನೆ. ಸರಿ ಈಗ ವಿಷಯಕ್ಕೆ ಬರುವ ಸಮಯ, ಇದ್ದಕ್ಕಿದ್ದ ಹಾಗೆ, ನನ್ನ ಬ್ಲಾಗ್ ನೋಡಿ, ಏನ್ರೀ, full acknowledgement ಹಾಕಿದ್ದೀರಾ ಎಂದರು. ನಾನು ಹೌದು ಎಂದೆ. ನನಗೆ ಇಷ್ಟ ಆಗಲಿಲ್ಲ, silly and unmatured ಅನ್ಸುತ್ತೆ  ಎಂದರು. ಏನು ಮಾಡುವುದು ನಾನೂ ಇನ್ನು ಮೆಚುರ್ ಆಗಿಲ್ಲವಲ್ಲ ಎಂದೆ

ನೀವು ಹಿಂದೆ ದೇವರನ್ನು ನಂಬುವುದಿಲ್ಲ ಅಂತಾ ಇದ್ರಿ ಅಲ್ವಾ ಎಂದರು. ನಾನು ಹೌದು ಎಂದೆ, ಅವರು ಮತ್ತೆ ಈಗ ಇದ್ದಕ್ಕಿದ್ದ ಹಾಗೆ ಭಕ್ತಿ ಉಕ್ಕಿ ಹರಿತಾ ಇದೆ. ಇದು ಕೇವಲ ಇವರೊಬ್ಬರು ಕೇಳಿದ ಪ್ರಶ್ನೆಯಲ್ಲ. ಬಹಳಷ್ಟು ಜನರು ನನ್ನನ್ನೇ ಕೇಳಿದ್ದಾರೆ, ಎದುರುಗಡೆ, ಹಿಂದುಗಡೆಯೂ ಮಾತನಾಡಿದ್ದಾರೆ. ನಾಟಕ ಆಡ್ತಾನೆ, ಎನ್ನುವಷ್ಟರ ಮಟ್ಟಿಗೆ ಮಾತುಗಳು ಬಂದಿವೆ. ಹೌದು ಮನುಷ್ಯನ ಜೀವನದಲ್ಲಿ ಬದಲಾವಣೆ ನಿರಂತರ. ದಿನ ದಿನಕ್ಕೂ ಬದಲಾಗಲೇ ಬೇಕು. ಕೆಲವರು ಅದನ್ನು ಅಬಿವೃದ್ದಿ ಎನ್ನುತ್ತಾರೆ ಮತ್ತೆ ಕೆಲವರು ಬದಲಾವಣೆ ಎನ್ನುತ್ತಾರೆ. ಅದೆಲ್ಲವೂ ಅವರವರ ಭಾವಕ್ಕೆ ಬಿಟ್ಟಿದ್ದು.

ನಾನು ನನ್ನನ್ನು ಬಹಳಷ್ಟು ಬಾರಿ ನನ್ನ ಕಣ್ಣುಗಳಿಂದ ನನ್ನ ಮನಸ್ಸಿನ ಕನ್ನಡಿಯಿಂದ ನೋಡಿಕೊಂಡಿದ್ದೇನೆ. ನನ್ನ ದಿನ ದಿನದ ನಡುವಳಿಕೆಗಳನ್ನು ಗಮನಿಸುತ್ತಾ ಬೆಳೆಯುತ್ತಿದ್ದೇನೆ/ಬದುಕುತಿದ್ದೇನೆ. ಏನಾದರೂ ಏರು ಪೇರಾದರೂ ನನಗಂತಹ ದೊಡ್ಡ ಪೆಟ್ಟು ಆಗುವುದಿಲ್ಲ. ಆದ್ದರಿಂದ ನಾನೇ ಗಮನಿಸಿದಂತೆ ನನ್ನ ಮನಸ್ಸಿಗೆ ಬೇಸರವಾದರೂ ಕೇವಲ ನಿಮಿಷಗಳಲ್ಲಿ ನಾನು ಅದರಿಂದ ಹೊರಕ್ಕೆ ಬಂದಿರುತ್ತೇನೆ. ನಿಮಗೆ ಮುಂಚಿತವಾಗಿಯೇ ಆಗುವುದರ ಅರಿವಿದ್ದರೇ ನೀವು ಹೆಚ್ಚು ದುಃಖ ಪಡುವುದಿಲ್ಲವೆಂಬುದು ನನ್ನ ವಾದ. ಯಾಕೆಂದರೇ ಬಹಳಷ್ಟು ಬಾರಿ ನಿಮ್ಮ ಮನಸ್ಸು ಅದಕ್ಕೆ ಹೊಂದಿಕೊಂಡಿರುತ್ತದೆ. ವಯಸ್ಸಿಗೆ ಬಂದ ಮಗ ಸತ್ತಾಗ ನೋವು ಅಧಿಕವಾಗಿರುತ್ತದೆ, ಯಾಕೆಂದರೇ ಅದು ಅನಿಶ್ಚಿತವಾಗಿ ಬಂದದ್ದು. ನಿನ್ನೆಯ ತನಕ ಜೊತೆಯಲ್ಲಿದ್ದ ಗೆಳತಿ ಇಂದು ಬೆಳ್ಳಿಗ್ಗೆ ಕಣ್ಮರೆಯಾದಾಗ ಹೃದಯ ಒಡೆದು ಬರುತ್ತದೆ. ಆದರೇ, ಕಾಲೇಜು ಮುಗಿದು ಹೋಗುವ ದಿನ ನಮಗೆ ಅಂಥಹ ನೋವಾಗುವುದಿಲ್ಲ, ನಾವೇ ಕೆಲಸ ಬಿಡುವಾಗ ನೋವಾಗುವುದಿಲ್ಲ. ಯಾಕೆಂದರೇ ನಾವು ಕೆಲಸ ಬಿಡುತ್ತಿದ್ದೇವೆಂಬುದು ನಮಗೆ ಮುಂಚಿತವಾಗಿಯೇ ತಿಳಿದಿರುತ್ತದೆ. ನಾನು ಬರೀ ಪೀಠಿಕೆಯಲ್ಲಿಯೇ ನಿಮ್ಮನ್ನು ಮುಗಿಸುತ್ತಿದ್ದೇನೆಂದು ಭಾವಿಸಬೇಡಿ.


ದೇವರ ವಿಷಯವನ್ನು ಕುರಿತು ಮಾತನಾಡುತ್ತೇನೆ. ಇದು ಸಂಪೂರ್ಣ ನನ್ನ ಈ ದಿನದ ನಂಬಿಕೆ, ಇಲ್ಲಿ ಯಾವುದೇ ಪೂರ್ವಾಗ್ರಹವಿಲ್ಲ. ಅಥವಾ ಅದರ ಬಗ್ಗೆ ಕೀಳರಿಮೆಯಾಗಲಿ ಅಥವಾ ಹೆಮ್ಮೆಯಾಗಲಿ ತೋರಿಸುವುದಿಲ್ಲ. ಚಿಕ್ಕವನಿದ್ದಾಗ ನಾನು ದೇವರಿಗೆ ಪೂಜೆ ಮಾಡುತ್ತಿದ್ದೆ, ಹೆಚ್ಚಿನ ಸಲ ಅಮ್ಮ ಅಪ್ಪನ ಒತ್ತಾಯಕ್ಕೆ, ನಮ್ಮ ಮನೆಗಳಲ್ಲಿ ದಿನ ನಿತ್ಯ ಪೂಜೆ ಮಾಡಲೇ ಬೇಕೆಂಬ ನಿಯಮವೇನು ಇಲ್ಲದಿದ್ದರೂ ಸಂಜೆ ದೀಪ ಹಚ್ಚಿ, ಓದುವುದಕ್ಕೆ ಕುಳಿತುಕೊಳ್ಳುವುದು ನಿಯಮವಾಗಿ ಮಾರ್ಪಾಡಾಯಿತು. ಆದರೂ ಪರೀಕ್ಷೆಯ ಸಮಯದಲ್ಲಿ ದೇವರಿಗೆ ಹರಕೆ ಕಟ್ಟುವುದು, ಪೂಜೆ ಮಾಡಿಸಿಕೊಂಡು ಬರುವುದು. ವರ್ಷಕ್ಕೊಮ್ಮೆ ಮನೆದೇವರಿಗೆ ಹೋಗಿ ಬರುವುದು, ಧರ್ಮಸ್ಥಳ ನೋಡುವುದು ಹೀಗೆ ನನಗೆ ಅರಿವಿಲ್ಲದಂತೆಯೇ ದೇವರೆನ್ನುವ  ದೇವರು ನನ್ನೊಳಗೆ ಪ್ರವೇಶ ಪಡೆದಿದ್ದ.


ಆ ದೇವರ ಬಗ್ಗೆ ಒಂದು ಭಯ, ಮತ್ತೊಂದೆಡೆ ಬೇಡಿದ್ದನ್ನು ನೀಡುವವನು ಎನಿಸತೊಡಗಿತು. ಅದನ್ನೇ ನಂಬಿ ಬಹಳಷ್ಟು ದಿನ ಅಲೆದಿದ್ದು ಆಯಿತು. ಓದದೇ ಇದ್ದರೂ ಪಾಸು ಮಾಡು ಎಂದು ಹರಕೆ ಕಟ್ಟುವುದು, ಕ್ರಿಕೇಟ್ ಆಡಿಕೊಂಡು, ಬೇಡದ ಸಿನೆಮಾ ನೋಡಿಕೊಂಡು, ಹೆಂಡ ಸಿಗರೇಟು ಎಂದು ಕಾಲ ಕಳೆದು ಪರೀಕ್ಷೆಯ ಹಿಂದಿನ ದಿನ ಹರಕೆ ಕಟ್ಟುವುದು, ದೇವರು ಎಂಬುವನೊಬ್ಬನಿದ್ದರೇ ನನ್ನನ್ನು ಪಾಸ್ ಮಾಡಲಿ ಎಂದು ದೇವರಿಗೆ ಸವಾಲು ಹಾಕುವುದು. ಅಯ್ಯೋ ದೇವರೇ ನೀನೆ ನನ್ನ ಕೈ ಬಿಟ್ಟರೇ ಮತ್ತಾರು ಎಂದು ಗೋಗರೆಯುವುದು ಇವೆಲ್ಲವೂ ಮನಸ್ಸಿನೊಳಗೆ ಹರಿದಾಡತೊಡಗಿದವು.


ಇವೆಲ್ಲದರ ನಡುವೆ, ಒಮ್ಮೊಮ್ಮೆ ದೇವರೆಂಬುವನು ಎಲ್ಲಿದ್ದಾನೆಂಬ ದೊಡ್ಡ ಪ್ರಶ್ನೆ ಎದುರಾಗತೊಡಗಿತು. ನಾನು ಇಲ್ಲಿ ಯಾವುದೇ ಇಸ್ಂ ಆಗಲೀ ಐಡಿಯಾಲಾಜಿಯಿಂದಾಗಲಿ ಮಾತನಾಡುತ್ತಿಲ್ಲ. ಇಲ್ಲಿ ಬರೆಯುತ್ತಿರುವುದೆಲ್ಲವೂ ನನ್ನ ಸ್ವಂತ ಅನುಭವ. ಇಂಥಹ ಪ್ರಶ್ನೆಯನ್ನು ಹುಡುಕುವ ಸಮಯದಲ್ಲಿ, ದೇವರಿಗೆ ಪೂಜೆ ಮಾಡುವುದು, ಇಲ್ಲದ ದೇವರ ಬಗ್ಗೆ ಕಥೆ ಕಟ್ಟಿ ಜನರನ್ನು ಭಯ ಬೀಳಿಸಿವುದು ಬಹಳ ವಿಚಿತ್ರವೆನಿಸತೊಡಗಿತು. ಜೊತೆಯಲ್ಲಿ ಬದುಕುವ ಸ್ನೇಹಿತರನ್ನೇ ನಂಬದ ಜನರು ಕಾಣದ ದೇವರ ಮೇಲೆ ನಂಬಿಕೆಯಿಡುವುದು, ಅವನ ಮೇಲೆ ಆಣೆ ಮಾಡುವುದು. ಅವನು ನೋಡಿಕೊಳ್ಳಲಿ ಎನ್ನುವುದು. ದೇವರ ಗುಡಿ ಒಡೆಯುವಾಗ ದೇವರೇಕೆ ಬರುವುದಿಲ್ಲ, ಮಸೀದಿ ಒಡೆಯುವಾಗ ಅಲ್ಲಾ, ಚರ್ಚ್ ಒಡೆಯುವಾಗ ಏಸು ಯಾಕೆ ಬರಲಿಲ್ಲವೆಂದು ಎಲ್ಲ ಧರ್ಮದ ಎಲ್ಲ ದೇವರುಗಳ ಮೇಲೆ ಅನುಮಾನ ಬರತೊಡಗಿತು. ಅಂಧಕಾರದಲ್ಲಿ ಸಮಾಜ ಮುಳುಗಿದೆ ಎನಿಸತೊಡಗಿತು. ದೇವರ ಹೆಸರಿನಲ್ಲಿ, ಸಂಸ್ಕೃತಿ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಜನರನ್ನು ಮೋಸ ಮಾಡಿದ್ದಾರೆ. ದೇವರೆನ್ನುವವನೊಬ್ಬನಿದ್ದರೇ ಹೀಗೆ ಆಗುತ್ತಿರಲಿಲ್ಲವೆನಿಸಿತ್ತು. ಎಂದು ಪೂಜೆ ಪುರಸ್ಕಾರದಿಂದ ದೂರ ಹೋದೆ.

ಭೂಮಿ ಇರುವುದು ಮನುಷ್ಯನಿಂದ ಅವನ ಬುದ್ದಿವಂತಿಕೆಯಿಂದ ಯಾವ ದೇವರು ಆಚರಣೆಗಳೆಲ್ಲ ಮೋಸವೆನ್ನುವ ಸ್ಥಿತಿ ತಲುಪಿದೆ. ಕೆಲವೊಮ್ಮೆಯಂತು ಮನೆಯಲ್ಲಿ ಪೂಜೆ ಮಾಡೆಂದರೇ ದೂರ ನಡೆದು ನಿಲ್ಲುತ್ತಿದ್ದೆ. ಮನೆಯವರೆಲ್ಲರೂ ಕೋಪದಿಂದ,ಬೇಸರದಿಂದ ಅತಿ ಹೆಚ್ಚು ಓದಿದರೇ ಹೀಗೆ ಆಗುವುದು, ದುರಹಂಕಾರದ ಪರಮಾವಧಿ ಎನ್ನುವ ಮಟ್ಟಕ್ಕಿಳಿದೆ. ಇದೆಲ್ಲದಕ್ಕೂ ಥಿಯರಿಗಳಿವೆ, ಇಸಂ ಗಳಿವೆ. ಬಹಳ ನೇರ ನಡೆಯಲ್ಲಿ ಹೇಳುವುದಾದರೇ ಇದೆಲ್ಲವೂ ನನ್ನೊಳಗೆ ಮೂಡಿದ್ದು. ಇದರ ವಿಷಯವಾಗಿ ಹಲವಾರು ಬಾರಿ ನನ್ನ ಅನೇಕ ಸ್ನೇಹಿತರೊಡನೆ ಹಂಚಿಕೊಂಡಿದ್ದೇನೆ. ನನ್ನಿಂದಲೇ ಎಲ್ಲವೂ, ಮನುಷ್ಯನಿಂದಲೇ ದೇವರಿರುವುದು, ಮನುಷ್ಯನೇ ಇಲ್ಲದಿದ್ದಲ್ಲಿ ದೇವರನ್ನು ಪೂಜಿಸುವವರು, ಆರಾಧಿಸುವವರು ಎಲ್ಲಿದ್ದರು? ಯಾರಿದ್ದರು? ಎಂದು ಹುಂಬದಿಂದ ಬೀಗುತ್ತಿದ್ದೆ.


ಇಂಥಹ ಸಮಯದಲ್ಲಿ, ನನ್ನೊಳಗೆ ನನಗೆ ಕಾಡಿದ ಹಲವಾರು ಪ್ರಶ್ನೆಗಳು, ಇಡೀ ಭೂಮಂಡಲದಲ್ಲಿ ಅಥವಾ ಭಾರತದಲ್ಲಿ ಅದೆಷ್ಟೋ ಮಂದಿ ದೇವರನ್ನು ನಂಬಿದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ದೇವರನ್ನೇ ನಂಬಿ ಬದುಕನ್ನು ಸಾಗಿಸುತ್ತಿದ್ದಾರೆ. ಅವರೆಲ್ಲರೂ ಮೂರ್ಖರ? ಯಾರೋ ಒಬ್ಬರು ಇಬ್ಬರು ಅಥವಾ ಒಂದು ಕೋಟಿ ಎರಡು ಕೋಟಿ ಜನರು ದಡ್ಡರಿರಬಹುದು, ಆದರೇ ಇಡೀ ಭೂಮಂಡಲವೇ, ಜಗತ್ತಿನ ವಿಸ್ಮಯಕ್ಕೆ ಬೆರಗಾಗಿದೆ ಎಂದರೇ? ಯಾವುದೋ ಶಕ್ತಿ ನಮ್ಮನ್ನು ಆಳುತ್ತಲೇ ಇರಬೇಕು ಅಥವಾ ಅದು ನಮ್ಮನ್ನು ನಡೆಸುತ್ತಲೇ ಇರಬೇಕು. ಇದೆಲ್ಲದರ ಹಿಂದೆ ಏನೋ ಇದೆ, ಅದನ್ನು ಅರಿಯಬೇಕೆಂದರೇ ಅದರ ಬಗ್ಗೆ ನಂಬಿಕೆ ಬೆಳೆಸಿಕೊಳ್ಳಬೇಕು. ನಂಬಿಕೆ ಮತ್ತು ಶ್ರದ್ದೆಯಿಲ್ಲದೇ ಏನನ್ನು ಕಲಿಯಲಾಗುವುದಿಲ್ಲ. ಅದರಂತೆಯೇ, ನಾನು ನನ್ನನ್ನೇ ಪ್ರಶ್ನಿಸತೊಡಗಿದೆ, ಎಲ್ಲವನ್ನೂ ಪ್ರಶ್ನಿಸುತ್ತಾ ಹೋದರೇ, ಸರಿ ತಪ್ಪೆಂದು ಅನುಮಾನಿಸುತ್ತಾ ಹೋದರೇ ನಿಮಗೆ ಅಲ್ಲಿರುವುದನ್ನು ಗಮನಿಸಲಾಗುವುದಿಲ್ಲ.

ನನ್ನ ಮನಸ್ಸಿಗೆ ಆ ದಿನಗಳಲ್ಲಿ ತಟ್ಟನೇ ಹೊಳೆದಿದ್ದು, ಮದರ್ ತೆರೆಸಾರವರ ಒಂದು ಮಾತು ದೊಡ್ಡ ಮಟ್ಟಿಗೆ ನನ್ನೊಳಗೆ ನಾಟಿತ್ತು, ನೀವು ಯಾರನ್ನಾದರೂ ಸರಿ ತಪ್ಪೆಂದು ತಿರ್ಮಾನಿಸುತ್ತಾ ಹೋದರೇ ಅವರನ್ನು ಪ್ರೀತಿಸಲು ಸಮಯವಿರುವುದಿಲ್ಲವೆಂದು. ಹೌದು ನನ್ನ ವಿಷಯದಲ್ಲಿ ಅದು ನೂರಕ್ಕೆ ನೂರು ಸತ್ಯವೆನಿಸಿತು. ನಾವು ಮನುಷ್ಯರು, ಒಬ್ಬರನ್ನು ಮತ್ತೊಬ್ಬರು ಪ್ರೀತಿಸಬೇಕು, ಅದನ್ನು ಯಾವುದೇ ಬೈಬಲ್ ಆಗಲಿ, ಕುರಾನ್ ಆಗಲೀ ಗೀತಾಸಾರವಾಗಲಿ ಬರೆದು ತೋರಿಸಬೇಕಿಲ್ಲ. ನಾನು ಯಾರಿಗೂ ಮೋಸ ಮಾಡುವುದಿಲ್ಲ, ಎಲ್ಲರನ್ನೂ ಪ್ರೀತಿಸುತ್ತೇನೆಂಬುದನ್ನು ನಾನು ಅರಿಯುವಂತೆ ಮಾಡುತ್ತಿರುವುದು ಆ ದೇವರೊಬ್ಬನೆ. ಅವನನ್ನು ನಂಬು ನಿನಗೆ ನೆಮ್ಮದಿ ಕೊಡುವ ದೇವಸ್ಥಾನಕ್ಕೆ ಹೋಗು, ಅದು ನಿನ್ನ ಹಿಂದಿನಿಂದ ಬಂದಿರುವ ಪದ್ದತಿ. ನಾನು ಓದಿದ ಮಾತ್ರಕ್ಕೆ, ಬೆಳೆದ ಮಾತ್ರಕ್ಕೆ ನಮ್ಮ ಮನೆಯಲ್ಲಿ ಹಿಂದಿನಿಂದ ಬಂದಿರುವ ಆಚರಣೆಯನ್ನು ದೂರ ಮಾಡಲಾಗುವುದಿಲ್ಲ. ಈ ವಿಷಯದಲ್ಲಿ ನಾನು ಬಹಳ ಸ್ಪಷ್ಟವಾಗಿದ್ದೇನೆ.


ಎಲ್ಲರೂ ಒಂದೇ ರೀತಿಯಲ್ಲಿರಬೇಕೆನ್ನುವುದನ್ನು ನಾನು ಒಪ್ಪುವುದಿಲ್ಲ, ನಾಗರೀಕತೆ, ಅನಾಗರೀಕತೆ, ನಂಬಿಕೆ, ವಿಶ್ವಾಸ ಇವೆಲ್ಲವೂ ಅವರವರ ಭಾವಕ್ಕೆ ಬಿಟ್ಟಿರುದು. ಆದರೇ, ಅದು ಯಾವೊಬ್ಬ ವ್ಯಕ್ತಿಯ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಬಾರದು. ಇದು ಜಾತಿಯ, ಧರ್ಮದ ವಿಷಯದಲ್ಲಿಯೂ ಅಷ್ಟೇ! ಜಾತಿಯನ್ನು ಯಾರೂ ಮೇಲಿಟ್ಟಿ ನೋಡಬಾರದು, ಅದು ಅವರವರ ಆಚರಣೆಗೆ ಬಿಟ್ಟಿದ್ದು. ಜಾತಿಯತೆ ಮಾಡುವುದು ಅಥವಾ ಧರ್ಮದಿಂದ ಮತ್ತೊಬ್ಬನನ್ನು ನೋಡುವುದು ಮಹಪರಾಧ. ನಾನು ದೇವಸ್ಥಾನಕ್ಕೆ ಹೋಗುವುದು ನನ್ನ ವ್ಯಕ್ತಿಗತ ಅಭಿಪ್ರಾಯ, ಅದನ್ನು ನನ್ನ ಹೆತ್ತವರು ಕೇಳುವ ಹಾಗಿಲ್ಲ. ಆದರೇ, ನಾನು ಯಾವುದೋ ಧರ್ಮದ ವಿರುದ್ದ ಮಾತನಾಡುವುದಕ್ಕೆ ನನಗೆ ಹಕ್ಕಿಲ್ಲ, ನನ್ನ ಸ್ನೇಹಿತನಾದವನು ನನಗೆ ಉಗಿದು ಹೇಳಬಹುದು. ವಿಷಯ ವ್ಯಾಪ್ತಿಗೆ ಮೀರಿದೆ ಎನಿಸುತ್ತದೆ. ನಾನು ಹೇಳ ಹೊರಟಿದ್ದು, ದೇವರ ಮೇಲೆ ನನಗೆ ನಂಬಿಕೆ ಯಾಕೆ ಬಂತೆನ್ನುವುದಕ್ಕೆ.

ನಾನು, ಮೊದಲೇ ಹೇಳಿರುವಂತೆ ಎಲ್ಲಾ ದೇವಸ್ಥಾನಗಳು, ನನಗೆ ಖುಷಿ ನೀಡುವುದಿಲ್ಲ. ನನಗೆ ಧರ್ಮಸ್ಥಳ, ಬೇಲೂರು ಸಂತೋಷ ಕೊಡುವಷ್ಟು ಬೇರೆಲ್ಲೂ ಕೊಡುವುದಿಲ್ಲ. ಅದರಂತೆಯೇ ನಮ್ಮೂರ ಪಕ್ಕದಲ್ಲಿರುವ ರಾಮನಾಥಪುರ ದೇವಸ್ಥಾನದ ಪೂಜಾರಿಗಳನ್ನು ಕಂಡರೇ ಬರುವಷ್ಟೂ ಕೋಪ ಮತ್ತೆಲ್ಲೂ ಬರುವುದಿಲ್ಲ. ಅಯೋಗ್ಯರೆಂದರೇ, ಥೂ ಎನಿಸುವಷ್ಟು ಅಯೋಗ್ಯರು. ದೇವರಿಲ್ಲ, ಎಲ್ಲವೂ ನಾನೇ ಅಥವಾ ನನ್ನ ಆತ್ಮಭಿಮಾನ, ನನ್ನ ಮೇಲೆ ನನಗಿರುವ ಆತ್ಮ ವಿಶ್ವಾಸದಿಂದ ಪ್ರಪಂಚವನ್ನೇ ಅಲ್ಲಾಡಿಸಬಹುದೆಂಬುದು ಬಹಳ ನಿರ್ದಿಷ್ಟವಾಗಿ ಭ್ರಮೆ ಎನಿಸಿದೆ. ನಾನು ಇದನ್ನು ನಿಮಗೆ ಹೇಳಿದರೇ, ಉಪದೇಶವೆನಿಸುತ್ತದೆ. ಆದರೇ, ಕುಳಿತು ಆಲೋಚಿಸಿ ನೋಡಿ, ನಮ್ಮ ಕೈಯ್ಯಾರೆ ನಾವು ಏನನ್ನು ಮಾಡಲಾಗುವುದಿಲ್ಲ. ಹತ್ತು ವರ್ಷ ಓದಿರುವು ಮನುಷ್ಯ ಪರೀಕ್ಷೆ ದಿನ ಆರೋಗ್ಯ ತಪ್ಪಿ ಬಿದ್ದರೇ, ನಿಮ್ಮ ಕೈಯಲ್ಲಿ ಎಲ್ಲವೂ ಇದ್ದಿದ್ದರೇ ಅದನ್ನು ತಪ್ಪಿಸಬಹುದಿತ್ತು!

ನಾನು ಇಲ್ಲಿ ದೇವರ ಪರವಾಗಿಯೋ ಅಥವಾ ಯಾವುದೋ ಒಂದು ವರ್ಗದ ಪರವಾಗಿಯೋ ವಾದ ಮಾಡುತ್ತಿಲ್ಲ. ನಾವೆಷ್ಟೇ ಮೇಲೆ ಹೋದರೂ, ನಮ್ಮ ಬೇರು ಬಹಳ ಮುಖ್ಯವಾಗುತ್ತದೆ. ಅಂತಿಮವಾಗಿ ನಿಮ್ಮ ಆತ್ಮ ತೃಪ್ತಿ ಮುಖ್ಯವಾಗುತ್ತದೆ. ಎಲ್ಲವನ್ನೂ ವಸ್ತುವಿನಿಂದಲೇ ಗೆಲ್ಲುತ್ತೇನೆಂಬುದು ಶುದ್ದ ಮೂರ್ಖತನ. ಹಣ, ಆಸ್ತಿ, ಹೆಸರು ಗಳಿಕೆ ನಿಮಗೆ ನೆಮ್ಮದಿ ಕೊಡುವುದಿಲ್ಲ. ನೆಮ್ಮದಿ ಕೊಡುವುದು ಒಬ್ಬರಿಗೆ ಸಹಾಯ ಮಾಡಿದಾಗ ಮಾತ್ರ. ಒಬ್ಬರೂ ಯಾವುದೇ ಸಂಕೋಚವಿಲ್ಲದೆ ನೀವು ಮಾಡಿದ ಸಹಾಯವನ್ನು ನೆನೆದಾಗ ಮಾತ್ರ. ನಾನು ನನ್ನ ನೆಮ್ಮದಿಯ ಬದುಕನ್ನು ಆ ನಿಟ್ಟಿನಲ್ಲಿ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...