22 ನವೆಂಬರ್ 2011

ದೈನತೆಯ ಬದುಕಿಗೆ ಧನ್ಯತೆ ಇದ್ದೇ ಇರುತ್ತದೆ!!

ನಾನು ಈ ಕ್ಷಣದಲ್ಲಿ ಈ ಬರವಣಿಗೆಯನ್ನು ಬರೆಯಲೇ ಬೇಕಾದದ್ದು, ಅವಶ್ಯಕತೆ ಮತ್ತು ಅನಿವಾರ್ಯತೆ ಕೂಡ ಹೌದು. ನನಗೆ ಇಂದು ಪಿ ಎಚ್ ಡಿ ಸಿಕ್ಕಿರುವ ಸಂಭ್ರಮವೊಂದೆಡೆಯಾದರೆ, ಮತ್ತೊಂದೆಡೆ ಇದೆಲ್ಲವೂ ಆಗಿದ್ದು ಒಂದು ಕನಸೆಂಬಂತೆ ನನ್ನ ಕಣ್ಣುಗಳನ್ನು ನಾನೆ ನಂಬಲಾರದೇ ಕುಳಿತಿದ್ದೇನೆ. ಈ ದಿನಗಳಲ್ಲಿ ಯಾವುದೂ ಸಾಧನೆಯಲ್ಲ, ಎಲ್ಲವೂ ಸಾಧನೆ. ಪಿ ಎಚ್ ಡಿ ಮಾಡುವುದು ಅಂಥಹ ವೀಶೇಷವೇನಲ್ಲ. ಆದರೂ ಒಮ್ಮೊಮ್ಮೆ ಇದೊಂದು ಜೀವನದ ಸಾಧನೆಯ ಮೆಟ್ಟಿಲು ಎನಿಸುತ್ತದೆ. ಬಂದ ಡಾಕ್ಟರೇಟ್ ನಿಂದ ಬೀಗುವುದಕ್ಕಲ್ಲ. ಆದರೇ ಒಂದು ಪಿ ಎಚ್ ಡಿ ಅದೆಷ್ಟೋ ಜನರ ಮನಸ್ಸಿಗೆ ಮುದ ನೀಡುತ್ತದೆಂಬ ಒಲವಿನಿಂದ. ನಾನು ಪಿ ಎಚ್ ಡಿ ಮಾಡಲು ಹೋರಟಾಗ ಅನೇಕ ಮಂದಿ ಬೇಡವೆಂದಿದ್ದರೂ ಕೆಲವರು ಮಾಡೆಂದು ಪ್ರೋತ್ಸಾಹಿಸಿದ್ದರು. ಅವರವರ ಭಾವಕ್ಕೆ ತಕ್ಕಂತೆ ನನಗೂ ಅವರ ಅಭಿಪ್ರಾಯಗಳನ್ನು ಹಂಚಿದ್ದರು. ಕೆಲವರು ಮೈಸೂರು ವಿವಿ ಯಾಕೆ? ವಿದೇಶ ನೋಡು ಎಂದಿದ್ದರು, ಇನ್ನೂ ಕೆಲವರು ಆ ಗೈಡ್ ಯಾಕೆ ಎಂದಿದ್ದರು? ಟಾಪಿಕ್ ಬದಲಾಯಿಸು ಎಂದಿದ್ದರು! ಹೀಗೆ ಎಲ್ಲ ಬಗೆಯ ಉಚಿತ ಸಲಹೆಗಳು ಬಂದಿದ್ದವು. ಹೊಸದರಲ್ಲಿ ನಾನು ಎರಡು ವರ್ಷಕ್ಕೆ ಮುಗಿಸಬಹುದೆಂಬ ನಿರೀಕ್ಷೆಯಲ್ಲಿದ್ದೆ ಆದರೇ ಮುಗಿಯುವಾಗ ನಾಲ್ಕು ವರ್ಷ ತುಂಬಿತ್ತು.

ಅದೇನೇ ಇರಲಿ, ಶುರುವಾಗಿದ್ದ ಉತ್ಸಾಹ ಮುಗಿಯುವ ಹಂತದಲ್ಲಿರಲಿಲ್ಲ. ಕನಸುಗಳನ್ನು ಹೊತ್ತು ಹೋದ ನನಗೆ ಅಂತಿಮವಾಗಿ ಒಂದು ಪದವಿ ಸಿಕ್ಕಿದೆಂಬ ಸಮಧಾನ ಒಂದನ್ನು ಬಿಟ್ಟರೆ ನಾನು ಮಾಡ ಹೋರಟಿದ್ದನ್ನು ಮಾಡಲಿಲ್ಲವೆಂಬ ಕೊರಗು ಇದ್ದೇ ಇದೆ. ನಾನು ಶುರುವಿನಲ್ಲಿ ನನ್ನ ಪಿ ಎಚ್ ಡಿ ಒಂದು ಮಾದರಿಯಾಗಬೇಕು, ವಿಜ್ನಾನಕ್ಕೆ ಪರಿಸರಕ್ಕೆ ಒಂದು ಉತ್ತಮ ಕೊಡುಗೆಯಾಗಬೇಕೆಂದು ಬಯಸಿದ್ದೆ. ಕಡೆ ಕಡೆಗೆ ನನಗೆ ನನ್ನ ಡಿಗ್ರಿ ಸಿಕ್ಕರೇ ಸಾಕೆನ್ನುವ ಮಟ್ಟಕ್ಕೆ ತಲುಪಿದ್ದೆ. ಕೆಲವೊಮ್ಮೆ ಈ ಡಿಗ್ರಿಯೂ ಸಾಕು, ಈ ಜೀವನವೂ ಸಾಕೆನ್ನುವ ಜಿಗುಪ್ಸೆ ಮೂಡಿತ್ತು. ಬೇಡವೇ ಬೇಡವೆಂದು ಬಿಟ್ಟು ಬಿಡಲು ನಿರ್ಧರಿಸಿದ್ದೆ. ಆದರೇ ಆ ಕ್ಷಣದಲ್ಲಿ ನನ್ನ ಕೈ ಬಿಡದೆ ಕೆಲವರು ಸಹಾಯ ಮಾಡಿದರು. ನಾನು ಯಾವುದೇ ಕೆಲಸ ಮಾಡುವ ಮುನ್ನ, ಧರ್ಮಸ್ಥಳಕ್ಕೆ ಹೋಗಿ ಬರುವುದು ನನ್ನ ನಂಬಿಕೆ. ನಾನು ನಂಬಿರುವ ದೇವರು ನನಗೆ ಉತ್ತಮ ಮಾರ್ಗವನ್ನು ತೋರಿಸುತ್ತಾನೆ, ಶಕ್ತಿಯನ್ನು ನೀಡುತ್ತಾನೆಂಬುದು ನನ್ನ ವಿಶ್ವಾಸ. ಆ ದೇವರು ನನ್ನನೆಂದು ಕೈ ಬಿಟ್ಟಿಲ್ಲ. ದೇವರು ಇಡಿಸುವ ಹೆಜ್ಜೆ ನನ್ನದು ಅವನ ಅನುಮತಿಯಿಲ್ಲದೆ ಒಂದು ಹುಳ್ಳುಕಡ್ಡಿಯೂ ಸರಿಯದೆಂಬ ನಂಬಿಕೆ ನನ್ನದು. ದೇವರು ಎಲ್ಲರಿಗೂ ಇದ್ದಾನೆ, ವೀರಪ್ಪನ್ ಅಂಥಹ ಕ್ರೂರಿಯೂ ದೇವರನ್ನು ನಂಬುತಿದ್ದನೆಂಬುದು ಕೆಲವರ ವಾದವಾಗುತ್ತದೆ. ಅದೇನೆ ಇರಲಿ, ನನಗೆ ಪಿ ಎಚ್ ಡಿ ಬಂದಿರುವುದು ಹೆಮ್ಮೆಯ ವಿಷಯವಂತೂ ಅನಿಸಿಲ್ಲ. ಇದು ನಾನು ನಂಬಿದ ದೇವರು ಕೊಟ್ಟ ಭಿಕ್ಷೆ, ನನ್ನ ಸ್ನೇಹಿತರು ನನಗೆ ಮಾಡಿದ ಸಹಾಯ. ಆ ಸಹಾಯಕ್ಕೆ ನಾನು ಚಿರ ಋಣಿ. ಒಂದು ಒಳ್ಳೆಯ ಮನಸ್ಸಿನಿಂದ ನಿಸ್ವಾರ್ಥದಿಂದ ಸಹಾಯವನ್ನು ಬೇಡಿದಾಗ ಸರ್ವರು ನಿಮಗೆ ಸಹಾಯ ಮಾಡುತ್ತಾರೆಂಬುದಕ್ಕೆ ನನ್ನ ಪಿ ಎಚ್ ಡಿಯೊಂದು ನಿದರ್ಶನ.

ನಾನು ಎರಡು ವರ್ಷ ಕಳೆದ ಮೇಲೂ ಪಿ ಎಚ್ ಡಿ ಮಾಡುವುದನ್ನು ನಿಲ್ಲಿಸುವ ತೀರ್ಮಾನ ಕೈಗೊಂಡಿದ್ದೆ. ಮನಸ್ಸಿನ ಯಾವುದೋ ಮೂಲೆಯಲ್ಲಿ ಎನೋ ಒಂದು ಬಗೆಯ ಕೊರಗು ನೋವು ನನ್ನನ್ನು ಕಾಡುತ್ತಲೇ ಇತ್ತು. ಕೇವಲ ಡಿಗ್ರಿಗಾಗಿ, ಮಾನವೀಯತೆ, ಸ್ವಾಭಿಮಾನ ಬಿಟ್ಟು ಉಪಯೋಗಕ್ಕೇ ಬಾರದ, ನಾಲ್ಕು ಜನರಿಗೆ ಅನುಕೂಲವಾಗದ ನಿನ್ನ ಡಿಗ್ರಿಗೆ ಏನು ಬೆಲೆಯೆಂಬುದು ನನ್ನಂತರಳಾವನ್ನು ಕೆದುಕುತ್ತಲೇ ಇತ್ತು. ನಾನು ಹೊರಗೆಷ್ಟೇ ಖುಷಿಯಾಗಿದ್ದರೂ ಪಿ ಎಚ್ ಡಿ ವಿಷಯ ಬಂದಾಗ ನನಗೆ ಪಾಪ ಪ್ರಜ್ನೆ ಕಾಡುತ್ತಿತ್ತು. ಎಲ್ಲರನ್ನೂ ಆಡಿಕೊಳ್ಳುವ ಗೇಲಿ ಮಾಡುವ ನಾನು, ಮಾಡುತ್ತಿರುವುದಾದರೂ ಏನೆಂಬುದು, ನನ್ನನ್ನು ಕುಬ್ಜನನ್ನಾಗಿಸುತ್ತಿತ್ತು. ಮೊದಲಿಗೆ ಎನ್ವಿರಾನ್ ಮೆಂಟಲ್ ಫ಼್ಲೋಸ್ ಎಂಬ ವಿಷಯವನ್ನು ಕೈಗೆತ್ತಿಕೊಂಡಾಗ, ದೇಶದಲ್ಲಿಯೇ ಯಾರೂ ಮಾಡದ ವಿಷಯದ ಮೇಲೆ, ಎಲ್ಲರೂ ಕಷ್ಟವೆನ್ನುವ ವಿಷಯದ ಮೇಲೆ ನಾನು ಸಂಶೋಧನೆ ಮಾಡಲು ಹೊರಟಿರುವುದು ಹೆಮ್ಮೆಯ ವಿಷಯವೆನಿಸಿತ್ತು. ಆದರೇ ಆ ಹೆಮ್ಮೆಯಾಗಿದ್ದ ವಿಷಯ ಕೇವಲ ಆರು ತಿಂಗಳಿನಲ್ಲಿಯೇ ನನ್ನ ಕನಸಿನ ಗೋಪುರವನ್ನು ಒಡೆದುಹಾಕಿತ್ತು. ನಾನು ಇಂದು ಮೆಟ್ಟಿಲು ಏರಿದ ಮೇಲೆ ಯಾರನ್ನಾದರೂ ಗೇಲಿ ಮಾಡಿದರೇ ಅದು ನಂಬಿಕೆ ದ್ರೋಹವಾದೀತು. ಆದ್ದರಿಂದ ಇಲ್ಲಿ ಯಾರನ್ನು ಗೇಲಿ ಮಾಡುವುದಿಲ್ಲ, ಅನೇಕರಿಂದ ನನಗೆ ಅನ್ಯಾಯವಾಗಿದೆ, ಕೆಲವರು ನಾನು ಏನನ್ನು ಮಾಡುವುದು ಬೇಡವೆನ್ನುವ ಮಟ್ಟಿಗೆ ವಿಷ ಕಾರಿದ್ದಾರೆ. ಅಂಥವರ ಹೆಸರನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ, ಅವರೆಲ್ಲರನ್ನು ಆ ದೇವರು ನೋಡಿಕೊಳ್ಳಲಿ.

ನಾನು ಇಲ್ಲಿ ಬರೆಯುವುದು ನನ್ನ ವಿದ್ಯಾಬ್ಯಾಸಕ್ಕೆ ಸಹಾಯ ಮಾಡಿದವರ ಬಗೆಗೆ ಮಾತ್ರ. ನಾನು ಮೊದಲೇ ಹೆಳಿದಂತೆ ನನಗೆ ಬಂದಿರುವ ಈ ಡಿಗ್ರಿ ಸಲ್ಲಬೇಕಿರುವುದು, ನನ್ನ ದೇವರಿಗೆ ಮತ್ತು ನನ್ನ ಸ್ನೇಹಿತರಿಗೆ. ನಾನು ಕೈಚೆಲ್ಲಿ ಕುಳಿತ ಸಮಯದಲ್ಲಿ, ನನ್ನ ನೆರವಿಗೆ ಬಂದವರು, ನಂದ ಮತ್ತು ವಿಜಯ್, ಅವರಿಬ್ಬರೂ ಪ್ರೋತ್ಸಾಹಿಸಿ ನನ್ನ ಫೀಲ್ಡ್ ಸರ್ವೇ ಮಾಡದೇ ಇದ್ದಿದ್ದರೇ ನನಗೆ ಇಂದಿಗೆ ನಿಮ್ಮ ಮುಂದಿರುವ ಅರ್ಹತೆ ಇರುತ್ತಿರಲಿಲ್ಲ. ನಂತರ ನನ್ನ ಡಿಗ್ರಿಗೆ ಮುಖ್ಯ ಕಾರಣರಾದವರು, ಬೆಂಗಳೂರು ವಿವಿಯ ರಿಸರ್ಚ್ ವರ್ಗ. ಪವಿತ್ರ, ದುರ್ಗೇಶ್, ಕುಮಾರ್, ಖಯೂಮ್ ಮತ್ತು ವಿಜಯ್. ಎಷ್ಟರ ಮಟ್ಟಿಗೆ ಸಹಾಯ ಮಾಡಿದರೆಂದರೇ ಅವರ ಪದವಿಗೆ ಕೆಲಸ ಮಾಡುತ್ತಿರುವ ಮಟ್ಟಿಗೆ ನನಗೆ ಸಹಾಯ ಮಾಡಿದ್ದಾರೆ. ಅವರನ್ನು ನಾನೆಂದು ಮರೆಯುವಂತಿಲ್ಲ. ಅದಾದ ನಂತರ ನನಗೆ ಅತಿಯಾಗಿ ಸಹಾಯ ಮಾಡಿದ್ದು, ಡಾ|| ಲೆನಿನ್ ಬಾಬು, ನಾನು ಬರೆಯುತ್ತಿದ ಹಾಗೇಯೇ ಅವರು ಅದನ್ನು ಓದಿ, ತಿದ್ದಿಕೊಡುತ್ತಿದ್ದರು, ಅವರ ಜೊತೆಯಲ್ಲಿಯೇ ಡಾ|| ರೆಜಿನಾ ಅವರು ಸಹ ಅತಿ ಹೆಚ್ಚಿನ ಮಟ್ಟದಲ್ಲಿ ನನಗೆ ಸಹಾಯ ಮಾಡಿದರು. ಡಾ|| ಬೇಲಾ ಅವರು ನನಗೆ ಅದೆಷ್ಟರ ಮಟ್ಟಿಗೆ ವಿಷಯವನ್ನು ಅರ್ಥೈಸಿದರೆಂದರೇ ಪ್ಲಾಂಕ್ಟನ್ ವಿಷಯದಲ್ಲಿ ಎಬಿಸಿಡಿ ಬಾರದ ನನಗೆ ಕೊನೆಯಲ್ಲಿ ನಾಲ್ಕು ಸಾಲು ಬರೆಯುವ ಮಟ್ಟಿಗೆ ಪ್ರೋತ್ಸಾಹಿಸಿದರು. ಈ ಎಲ್ಲದರ ನಡುವೆ, ಸವಿತಾ ನನ್ನ ಥೀಸಿಸ್ ಓದುವುದರಿಂದ, ಎಲ್ಲ ಸಲಹೆಗಳನ್ನು ಕೊಟ್ಟು ಸಹಕರಿಸಿದರು. ಇದೆಲ್ಲದರ ನಡುವೆ, ಮೀನುಗಾರಿಕೆ ಇಲಾಖೆಯಲ್ಲಿ ಪರಿಚಯರಾದ ಅದರಲ್ಲೂ ನನ್ನ ಸ್ನೇಹಿತ ದ್ವಾರಕೀಶ್, ನನ್ನ ಅಣ್ಣನ ಸ್ಥಾನದಲ್ಲಿ ನಿಂತು ಎಲ್ಲರನ್ನು ಪರಿಚಯ ಮಾಡಿಸಿ ಸಹಾಯ ಮಾಡಿಸಿದರು, ಅವರ ಜೊತೆಗೆ ಕಿರಣ್, ನವೀನ, ಸೀನಪ್ಪ, ಮಗದ ಹೀಗೆ ಅದೆಷ್ಟೋ ಮಂದಿ ಮೀನುಗಾರಿಕೆ ಇಲಾಖೆಯವರು ನನಗೆ ಸ್ನೇಹಿತರಾದರು. ಜೊತೆಜೊತೆಯಲ್ಲಿಯೇ ನನಗೆ ಆರ್ಥಿಕ ಸಹಾಯವನ್ನು, ನನ್ನ ಸ್ನೇಹಿತ ಮಂಜೇಶ್, ನಮ್ಮಪ್ಪ ನಮ್ಮ ಅಕ್ಕ ಭಾವ ನೀಡಿ ಸಹಕರಿಸಿದರು. ಶ್ರ‍ೀಕಂಠಸ್ವಾಮಿಯ ಶಿಷ್ಯರಾದ ಶಿವಕುಮಾರ್ ಮತ್ತು ವಿವೇಕ್ ಬಹಳಷ್ಟು ಸಹಾಯ ಮಾಡಿದರು. ನಾನು ಮೈಸೂರಿನಲ್ಲಿದ್ದಷ್ಟು ದಿನ ಆಶ್ರಯ ನೀಡಿದವರು ಅನಿಲ್ ಮತ್ತು ರಾಜಣ್ಣ. ನಾನು ನನ್ನ ಥೀಸಿಸ್ ಗೆ ಮ್ಯಾಪ್ ಗಳು ಬೇಕೆಂದು ಒದ್ದಾಡುತ್ತಿರುವಾಗ ಸಹಾಯಕ್ಕೆ ಬಂದವನು ಕೃಷ್ಣಮೂರ್ತಿ, ಅವನಿಗೂ ನನಗೂ ದೊಡ್ಡ ಮಟ್ಟದ ಸ್ನೇಹವಿರಲಿಲ್ಲ, ನಮ್ಮ ಹಾಸ್ಟೇಲ್ ನಲ್ಲಿದ್ದ ಎನ್ನುವ ಸಲುಗೆಯಿದ್ದ, ಸಹಾಯ ಬೇಡಿದೆ, ಅರ್ಧ ದಿನದಲ್ಲಿ ಕುಳಿತು ಹತ್ತು ಮ್ಯಾಪ್ ಗಳನ್ನು ಮಾಡಿಕೊಟ್ಟ.

ಮೇಲೆ ಹೆಸರಿಸಿದ ಯಾರೊಬ್ಬರಿಗೂ, ನನ್ನ ಟಾಪಿಕ್ ಬಗ್ಗೆ ಏನೂ ತಿಳಿದಿರಲಿಲ್ಲ, ಇದಕ್ಕೆ ಮುಂಚೆ ನಾನು ಅವರಿಗೆ ಯಾವೊಂದು ಸಹಾಯವನ್ನು ಮಾಡಿದವನಲ್ಲ. ಆದರೂ ಇವರೆಲ್ಲರೂ ತಮ್ಮದೇ ಥೀಸಿಸ್ ಎನ್ನುವ ಮಟ್ಟಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡರು, ಇದು ಇಂದಿಗೂ ನನಗೆ ಕೌತುಕದ ವಿಷಯ. ಇವರೆಲ್ಲರೂ ನನಗೇಕೆ ಇಷ್ಟೊಂದು ಸಹಾಯ ಮಾಡಿದರು? ಆ ದೇವರು ಇವರಿಗೆ ಆ ಮನಸ್ಸನ್ನು ನೀಡಿದನಾ? ಅಥವಾ ಇವರಲ್ಲಿರುವ ದೊಡ್ಡಗುಣವಾ? ನನ್ನ ಬಗೆಗೆ ಇವರಲ್ಲಿರುವ ಸ್ನೇಹವಾ? ನಾನು ಡಿಗ್ರಿ ಬಂದಾಗಿನಿಂದ ನಾನು ಅನುಭವಿಸಿದ ಕಹಿ ನೆನಪುಗಳ ಬಗ್ಗೆ ಚಿಂತಿಸುತ್ತಲೇ ಇಲ್ಲಾ, ಇವರೆಲ್ಲರೂ ಮಾಡಿದ ಸಹಾಯದ ಬಗೆಗೆ ಚಿಂತಿಸುತ್ತಿದ್ದೇನೆ. ನನ್ನ ಅಜ್ಜಿ ಹೇಳುವಂತೆ, ಅವನು ಬರೆದಂತೆ ಎಲ್ಲವೂ ನಡೆಯಲೇ ಬೇಕು, ಎಲ್ಲವೂ ನಿರ್ಧಾರವಾಗಿರುತ್ತದೆ. ನಾವು ಕೇವಲ ನಟನೆಗೆ ಮಾತ್ರ. ಎಲ್ಲವನ್ನೂ ಅವನು ಕೊಟ್ಟಮೇಲೂ ಅವನನ್ನು ಬೇಡುವುದೇಕೆ, ನಮ್ಮ ಸುತ್ತಮುತ್ತಲಿರುವ ಅದೆಷ್ಟೋ ಸಹೃದಯವಂತರು ನಮ್ಮ ನೆರವಿಗಿರುತ್ತಾರೆ ಅವರೆಲ್ಲರನ್ನೂ ದೇವರೇ ನಮ್ಮಲ್ಲಿಗೆ ಅಟ್ಟಿರುತ್ತಾನೆ, ಅವರ ಸಹಾಯವನ್ನು ಒಳ್ಳೆಯ ಕಾರ್ಯಕ್ಕೆ ಮಾತ್ರ ಬೇಡಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...