21 ಆಗಸ್ಟ್ 2017

ಬಯಸದೆ ಬಂದ ಭಾಗ್ಯಕ್ಕೆ ನಾ ಋಣಿ!!!




ಸರಿ ಸುಮಾರು ಒಂಬತ್ತು ವರ್ಷಗಳ ಹಿಂದೆ, ಅಂದರೇ,ಪ್ರಪಂಚ ಜಾಗತೀಕರಣದತ್ತ ಮುನ್ನುಗ್ಗುತ್ತಿದ್ದ ವರ್ಷ ೨೦೦೦ ಎಂಬುದು ಅದರ ಹೆಸರು, ನೆನಪಿಸಿಕೊಂಡರೆ ಕಣ್ಣು ಒದ್ದೆಯಾಗುತ್ತವೆ. ಅದೊಂದು, ನೋವಾ? ದುಃಖವಾ? ಸಂಕಟವಾ? ಅಥವಾ ನೀವೆಲ್ಲಾ ಹೇಳುವ ಕೆಟ್ಟ ಸಮಯವಾ? ಅದೊಂದು ಉತ್ತರವಿಲ್ಲದ ಪ್ರಶ್ನೆಯಾಗಿದೆ. ಆ ಪ್ರಶ್ನೆಗಳಿಗೆ ಇಂದಿಗೂ ಉತ್ತರ ದೊರಕಿಲ್ಲ, ಅದಕಿಂತ ಮಿಗಿಲಾಗಿ ಉತ್ತರ ಹುಡುಕುವ ಗೋಜಿಗೆ ಹೋಗಿಲ್ಲ. ಈ ಅಂಕಣವನ್ನು ಬರೆಯಲು ಹೊರಡುವ ಮುನ್ನಾ, ಅಂತಹ ಸಿದ್ದತೆ ಏನು ಮಾಡಿಕೊಂಡು ಹೊರಟಿಲ್ಲ. ನನ್ನ ಭಾವನೆಗಳ ವಿಷಯಕ್ಕೆ ಬಂದಾಗ ನಾನೆಂದು ಸಿದ್ದತೆ ಮಾಡಿಕೊಂಡು ಬರೆದಿಲ್ಲ. ಅಂತರಾಳದಲ್ಲಿ ಉದಯಿಸಿದ ಪ್ರತಿ ಪದಗಳನ್ನು ತಮ್ಮ ಮುಂದಿರಿಸಿದ್ದಿನಿ ಯಾವುದು ಸರಿ ಯಾವುದು ತಪ್ಪೆನ್ನುವ ತಕರಾರಿಗೆ ಹೋಗಿಲ್ಲ. ಇದು ನಾನು ಬಹಳ ಸಂಯಮದ ಅಥವಾ ಬಹಳ ನೇರ ನಡೆಯವನೆಂದು ತೋರಿಸುವುದಕ್ಕಲ್ಲ. ನನ್ನೊಳಗಿರುವ ಕೆಲವು ಪ್ರಶ್ನೆಗಳಿಗೆ ನೇರ ಉತ್ತರ ಹುಡುಕಲು ಹೊರಟಾಗ, ಪ್ರಶ್ನೆಗಳು ನೇರವಿದ್ದರೆ ಉತ್ತಮವೆನ್ನುವುದು ನನ್ನ ಅನಿಸಿಕೆ. ಈಗ ಸಮಯ ಮುಂಜಾನೆ ಮೂರು ಘಂಟೆ ಮೂವತ್ತು ನಿಮಿಷ, ಇಂಥಹ ಮಧ್ಯರಾತ್ರಿ ಬರೆಯಲು ಹೊರಟಾಗ ನನಗನಿಸಿದ್ದು, ಅಲ್ಲಾ ನನಗೆ ನಿದ್ದೆ ಬರುತ್ತಿಲ್ಲಾ, ಅದನ್ನ ಒಪ್ಪಿಕೊಳಬಹುದು. ಆದರೇ ಅದಕ್ಕೊಸ್ಕರವಾಗಿ ಈ ಸರಿ ಹೊತ್ತಿನಲ್ಲಿ ಬರೆಯಲು ಹೊರಟಿರುವುದು! ನಾನು ಮೂರ್ಖನೆಂಬುದು ಬಹಳ ವರ್ಷಗಳ ಹಿಂದೆಯೇ ತೀರ್ಮಾನವಾಗಿದೆ. ಆದರೂ ಇದನ್ನು ಮತ್ತೆ ಮತ್ತೆ ಸಾಕ್ಷಿ ಸಮೇತ ಸಾಬೀತುಪಡಿಸುವ ಅನಿವಾರ್ಯತೆಯಾದರು ಏನಿದೆ?ಇದನ್ನು ಬರೆಯಲು ನನ್ನ ತಲೆಯೊಳಗೆ ಕೊರೆಯುತ್ತಿರುವ ಎಕೈಕ ವಿಷಯ ನನ್ನ ಸ್ನೆಹಿತ ವರ್ಗದಲ್ಲಿ ಮೂಡಿರುವ "ನಾನು ಅದೃಷ್ಟವಂತನೆಂಬ ಕಲ್ಪನೆಯಿರುವುದು". ನನ್ನ ಅನೇಕ ಸ್ನೇಹಿತರು ಇದನ್ನು ಆಗ್ಗಾಗ್ಗೆ ನೇರವಾಗಿ ಮತ್ತು ಹಿಂದೆಯಿಂದಲೂ ಬಳಸುತ್ತಿರುತ್ತಾರೆ. ಅವರಿಗೆ ಉತ್ತರಿಸಲು ಇದನ್ನು ಬರೆಯದೇ ಇದ್ದರೂ ನನ್ನೊಳಗೆ ಇರುವ ಈ ಪ್ರಶ್ನೆಗೆ ಉತ್ತರ ಸಿಕ್ಕೀತೇನೋ ಎಂಬ ವಿಶ್ವಾಸದಿಂದ ಬರೆಯುತ್ತಿದ್ದೇನೆ.

ಈ ೨೦೦೦ ಇಸವಿಯೆಂಬ ವರ್ಷವನ್ನು ನೆನೆದರೆ ನನ್ನ ಮೈ ಒಂದು ಬಗೆಯ ಕಂಪನ ಮಿಡಿಸುತ್ತದೆ. ಅದು ಅಂತಹ ಘೋರ ವರ್ಷವೆಂದರೂ ತಪ್ಪಾಗುವುದಿಲ್ಲ. ಬಾನುಗೊಂದಿಯೆಂಬ ಚಿಕ್ಕ ಹಳ್ಳಿಯ ಕೆಳ ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದ ನಾನು, ಇಂದು ಕೊಲೊಂಬೊಗೆ ಅಂತರಾಷ್ಟ್ರೀಯ ವಿಜ್ನಾನಿಗಳ ಕಮ್ಮಟಕ್ಕೆ ಹೋಗುತ್ತಿದ್ದೇನೆ. ಅದೂ ಒಂದೂ ನಯಾ ಪೈಸೆ ಖರ್ಚಿಲ್ಲದೆ, ಸಕಲ ಸವಲತ್ತುಗಳನ್ನು ನೀಡಿ ನನ್ನ ಆಮಂತ್ರಿಸಿದೆ. ನಾನು ಓದಲು ಹೋಗುತ್ತಿದ್ದಾಗ ನನ್ನೂರಿಗೆ ಬಸ್ ಇರಲಿಲ್ಲ. ಬಸ್ ಮುಖ ನೋಡಲು ನಾವು ಮೂರು ಮೈಲಿ ನಡೆದು ಹೋಗಬೇಕಿರುತ್ತಿತ್ತು. ಅಂಥಹ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಬಂದ ನಾನು ಇಂದು ವಿಮಾನದಲ್ಲಿ ಹೋಗುತ್ತಿದ್ದೇನೆಂದರೆ ನನ್ನನ್ನು ನಾನೇ ನಂಬಲು ಯೋಚಿಸಬೇಕಾಗುತ್ತದೆ, ಅದಲ್ಲದೆ ನನಗೆ ಏನೋ ಒಂದು ಬಗೆಯ ಸಂತೋಷವುಂಟಾಗುತ್ತಿದೆ. ಉತ್ತಮ ಕುಟುಂಬದಿಂದ ಬಂದ ಕೆಲವರಿಗೆ ವಿಮಾನಯಾನ ಈ ಕಾಲದಲ್ಲಿ ಏನ್ ಮಹಾ ಎನಿಸಲುಬಹುದು. ಆದರೇ ಊರಿಗೆ ಟಾರ್ ರಸ್ತೆಯೂ ಇಲ್ಲದ ಮಣ್ಣಿನ ರಸ್ತೆಯಲ್ಲಿ ಬರಿಗಾಲಲ್ಲಿ ನಡೆದು ಓದಿ ಬಂದ ನಾನು ಮೊದಲ ಬಾರಿ ಆಕಾಶದಲ್ಲಿ ಹಾರುವ ಉಕ್ಕಿನ ಹಕ್ಕಿಯಲ್ಲಿ ಹಾರುತ್ತಿರುವುದು ನಿಜಕ್ಕೂ ನನಗೆ ಬಹಳ ಸಂತೋಷ ತಂದಿದೆ. ಅದರಲ್ಲಿಯೂ ಒಬ್ಬ ಆಹ್ವಾನಿತ ಯುವ ವಿಜ್ನಾನಿಯಾಗಿ ಹೋಗುತ್ತಿರುವುದು ನನ್ನ ಅದೃಷ್ಟವಾ? ಇದು ನನ್ನೊಳಗಿರುವ ಪ್ರಶ್ನೆ. ಕೇವಲ ಹತ್ತು ವರ್ಷಗಳ ಹಿಂದೆ ಎರಡು ರೂಪಾಯಿಯಿದ್ದ ವ್ಯಾನ್ ಚಾರ್ಜ್ ಅನ್ನು ಮೂರು ರೂಪಾಯಿ ಮಾಡಿದ್ದಾಗ ನಾನು ನಡೆದು ಹೊಗಿದ್ದೆ. ಈ ವ್ಯಾನ್ ಗಳಲ್ಲಿ ಓಡಾಡುವ ತಂಟೆಯೇಬೇಡವೆಂದಿದ್ದೆ. ಅಂತಹ ನಾನು ಇಂದು ಕನಿಷ್ಟವೆಂದರೂ ನನ್ನ ಸಕಲವೆಲ್ಲವನ್ನೂ ನೋಡಿಕೊಂಡರೂ ಲಕ್ಷ ರೂಪಾಯಿ ಖರ್ಚನ್ನು ಯಾರೋ ನನಗೆ ಕೊಟ್ಟು ನನ್ನ ನಾಲ್ಕು ಮಾತನ್ನು ಕೇಳುತ್ತಾರೆಂದರೆ ಇದನ್ನು ನಿಮ್ಮ ಭಾಷೆಯಲ್ಲಿ ಏನು ಕರೆಯುವಿರಿ?

ನನ್ನ ಹತ್ತನೇ ತರಗತಿ ಮುಗಿದು, ಪಿ.ಯು.ಸಿ.ಗೆ ಸೇರಿದಾಗ ನನಗೆ physics, chemistry, biolgy ಪದಗಳಿಗೆ ಪರ್ಯಾಯ ಅರ್ಥ ಗೊತ್ತಿರಲಿಲ್ಲ. ಆಂಗ್ಲ ಮಾಧ್ಯಮದಿಂದ, ಪೇಟೆಯಿಂದ, ಬಂದ ಹುಡುಗರ ಮುಂದೆ ಮೊದಲೇ ಕುಳ್ಳಗೆ ಕೇವಲ ನಾಲ್ಕಡಿ ಇದ್ದ ನಾನು, ನಿಂತರೂ ಕೂತಂತೆ ಕಾಣುತಿದ್ದೆ. ಅವರ ಮುಂದೆ ನಿಲ್ಲಲು ನನ್ನೊಳಗೆ ಏನೋ ಒಂದು ಬಗೆಯ ಅಂಜಿಕೆ ಇರುತಿತ್ತು. ಓದು ಅನ್ನುವುದು ನನ್ನ ಶತ್ರುವಿನ ಕೆಲಸವೆಂದು ಬಗೆದು, ನನ್ನ ಹಳ್ಳಿ ಭಾಷೆ ಮಾತನಾಡುವ ಕನ್ನಡ ಮಾಧ್ಯಮದಿಂದ ಬಂದವರ ಗೆಳೆತನ ಮಾಡಿಕೊಂಡೆ. ನನ್ನ ಭಾಷೆಯ ಶೈಲಿಯನ್ನು ಮೆಚ್ಚಿಕೊಂಡವರೆಲ್ಲ ನನ್ನ ಗೆಳೆಯರಾದರು. ಮಾತಾಡುವುದರಲ್ಲಿ ನಾನೆಂದು ಹಿಂದೆ ಬಿದ್ದವನಲ್ಲ ಇಂದಿಗೂ ಕೂಡ. ಅಂತೂ ಇಂತೂ ಓದುವುದು ಯಾವುದೋ ಜನ್ಮದ ಪಾಪದ ಫಲವಾಗಿ ಈ ಜನ್ಮದಲ್ಲಿ ಸಿಕ್ಕಿದೆ, ಅದಕ್ಕೆ ಮುಕ್ತಿ ಕೊಡಿಸಲೇ ಬೇಕೆಂದು ನಿರ್ಧರಿಸಿದೆ. ಆದರೂ ನಾನು ಪ್ರಾಮಾನಿಕವಾಗಿ ಕಾಲೇಜಿಗೆ ಹೋಗಿ ಓದಲು ಪ್ರಯತ್ನಿಸಿದ್ದು ಉಂಟು. ಆದರೇ ನಮ್ಮ ಮನಸ್ಥಿತಿಯನ್ನು ಅರಿತು ಪಾಠ ಮಾಡುವ ಸೌಜನ್ಯ ನಮ್ಮ ಉಪನ್ಯಾಸಕರಿಗೆ ಇದ್ದಂತೆ ಕಾಣಲಿಲ್ಲ. ಅವರು, ತಮ್ಮ syllabus ಮುಗಿಸುವುದೊಂದೆ ತಮ್ಮ ಕೆಲಸವೆಂಬಂತೆ ವರ್ತಿಸುತಿದ್ದರು. ನಮ್ಮ ದಡ್ಡತನಕ್ಕೆ ಆರ್ಟ್ಸ್ ತೆಗೆದು ಹೋದುವುದು ಉತ್ತಮವೆಂದೂ ನಮಗೆ ಕಿವಿಮಾತನ್ನು ಹೇಳಿದ್ದರು. ವಿದ್ಯಾಬ್ಯಾಸವೆಂಬುದು ಹುಟ್ಟಿನಿಂದ ಬರಬೇಕು, ಇಲ್ಲದಿದ್ದಲ್ಲಿ ಆಂಗ್ಲಮಾಧ್ಯಮಕ್ಕೆ ಸೇರಿ ನಂತರ ಪಡೆದುಕೊಳ್ಳಬೇಕೆಂದು ತಿಳಿಸಿಕೊಟ್ಟರು. ಅಂತೂ ಇಂತೂ ಎಲ್ಲ ಉಪನ್ಯಾಸಕರೂ ತೀರ್ಮಾನಿಸಿ, ಕಿರು ಪರೀಕ್ಷೆಯಲ್ಲಿ ಫೇಲಾದವರಿಗೆ ೨೫ ಬಾರಿ ಉತ್ತರವನ್ನು ಬರೆಯಬೇಕು ಎಂದರು. ಇದು ಕಾಲೇಜು ಜೀವನದ ಬಗ್ಗೆ ಏನೇನೋ ಕನಸುಗಳನ್ನು ಹೊತ್ತು ಬಂದ ನಮಗೆ ಬಾರಿ ಮಟ್ಟದಲ್ಲೆ ನೋವುಂಟುಮಾಡಿತ್ತು. ಈ ಮನೆಗೆಲಸಗಳೆಲ್ಲಾ ಬಾರಿ ದುಬಾರಿಯಾಗಿ ಕಂಡು ಕಡೆಗೆ ವಿದ್ಯೆಯೆಂಬುದು ನಮಗಲ್ಲ, ಅದರಲ್ಲೂ ವಿಜ್ನಾನ ನಮಗಲ್ಲ, ನಮಗೆ ಕಲಾ ವಿಭಾಗವೇ ಸರಿಯೆನಿಸತೊಡಗಿತ್ತು.

ಕಾಲೇಜಿನ ಕಡೆಗೆ ತಲೆ ಹಾಕಿ ಮಲಗಿದರೆ ನಿದ್ದೆ ಬರುವುದಿಲ್ಲವೆಂಬಷ್ಟು ಬೇಸರವಾಗಿತ್ತು.ಕ್ಲಾಸಿನಲ್ಲಿದ್ದ ಸಮಾನ ಮನಸ್ಕರ ತಂಡವನ್ನು ರಚಿಸಿ,ನಮ್ಮ ಆರ್ಥಿಕ ವ್ಯವಸ್ಥೆಯನ್ನಾದರಿಸಿ ಹತ್ತಿರವಿದ್ದ ಆಕರ್ಷಣೆಯ ತಾಣಗಳನ್ನು ನೋಡತೊಡಗಿದೆವು. ಬೆಟ್ಟದಪುರ ಬೆಟ್ಟ, ವೀರಭೂಮಿ, ನಿಸರ್ಗಧಾಮ ಹೀಗೆ ಹತ್ತು ಹಲವನ್ನು ಸುತ್ತಾಡಿ ಅದಕ್ಕೆ ಚಾರಣವೆಂಬ ಹೆಸರನ್ನು ಕೊಟ್ಟೆವು. ಟ್ಯೂಷನ್ ಬಿಟ್ಟು ಬಹಳ ದಿನಗಳೇ ಆಗಿದ್ದವು, ಫೇಲ್ ಆಗೋದು ಖಚಿತವಾದ ಮೇಲೆ ಸುಮ್ಮನೆ ಅಲ್ಲಿ ಕುಳಿತು ಸಮಯ ವ್ಯರ್ಥ ಮಾಡುವುದು ಬೇಡವೆಂದು ತೀರ್ಮಾನಿಸಿ, ಕಂಡ ಕಂಡ ಕಡೆಗಳಲ್ಲಿ ಕ್ರಿಕೇಟ್ ಆಟವಾಡಲು ಹೊರಟೆವು. ಅದರಿಂದ ಮಹಾನ ಸ್ಥಳೀಯ ಕ್ರೀಕೆಟ್ ಪಂಟರುಗಳೆಲ್ಲ ಪರಿಚವಾದರ. ಕೆಲವು ಬಾರಿ ನಮ್ಮ ಅಪ್ಪನ ಜೊತೆ ನಿಂತಾಗಲೂ ಟೂರ್ನಿಗೆ ಹೋಗಿಲ್ವ ಎಂದು ಕೇಳಿ ಅಪ್ಪನ ಆರೈಕೆಯನ್ನು ಹೆಚ್ಚಿಸಿದ್ದಾರೆ. ಅಪ್ಪ ಮನೆಗೆ ಬಂದು ಅಮ್ಮನ ಮುಂದೆ ನನ್ನ ಗುಣಗಾನ ಮಾಡಲು ಸಹಕರಿಸಿದ್ದಾರೆ. ಆ ಸಮಯಕ್ಕೆ ಸರಿಯಾಗಿ, ನಾನೊಂದು ಹುಡುಗಿಯನ್ನು ಇಷ್ಟಪಟ್ಟು ಅವಳ ಹಿಂದೆ ಅಲೆದು, ಅಲೆದು, ಕೊನೆಗೆ ಅವಳು ಬೆರೊಬ್ಬನನ್ನು ಪ್ರೀತಿಸುತ್ತಾಳೆಂದು ತಿಳಿದು ನಿಂತಾಗ, ನನ್ನ ಆತ್ಮೀಯ ಗೆಳೆಯರು ನಮ್ಮ ಸಂಘ ಬಿಟ್ಟು ಹೋಗದಂತೆ ಆ ದೇವರು ನೀಡಿದ ಕಾಣಿಕೆಯಿದು ಎಂದು ಸಮಧಾನ ಮಾಡಿದ್ದಾರೆ. ಎಲ್ಲದ್ದಕ್ಕೂ ಒಂದು ಕೊನೆಯಿರಬೇಕಲ್ಲ, ಅಂತೂ ಜೂನ್ ೫ ೨೦೦೦ ಮರೆಯಲಾರದ ದಿನ ನನಗೆ, ಪಿ.ಯು.ಸಿ. ಫಲಿತಾಂಶ ಹೊರಕ್ಕೆ ಬಂತು. ಮೊದಲೇ ನಿರೀಕ್ಷಿಸಿದ್ದಂತೆ, ನಾಲ್ಕು ಢಮಾರ್ ಆಗಿದ್ದವು. ಓದೆಂಬ ಮಾಯಾಲೋಕಕ್ಕೆ ನಾವು ಎಂದು ಪ್ರವೆಶಪಡೆಯುವುದಿಲ್ಲವೆಂದು ತೀರ್ಮಾನಿಸಿದೆ.

ಫೇಲ್ ಆಗುವವರೆಗೂ ಅತಿ ಉತ್ಸಾಹದಿಂದ ಮೆರೆಯುತಿದ್ದ ನನ್ನ ಮನಸ್ಸು, ಯಾವುದೋ ಪ್ರಪಾತಕ್ಕೆ ಬಿದ್ದಂತೆ ಆಡತೊಡಗಿತ್ತು. ನಾನು ಫೇಲ್ ಆದ ನಂತರ ನನ್ನ ಸುತ್ತ ಮುತ್ತಲಿನ ಜನರಲ್ಲಿ ಉಂಟಾದ ದಿಡೀರ್ ಬದಲಾವಣೆ ಕಂಡು ನಾನು ಕಂಗಾಲಾಗಿ ಹೋದೆ. ನನ್ನ ಮಾತನಾಡಿಸಲು ಹಿಂಜರಿಯುವಷ್ಟು ನಾನು ದೃಷ್ಟನಾದೆ. ನನ್ನೊಡನೆ ಅವರ ಮಕ್ಕಳನ್ನು ಆಡಲು ಹೋಗಬಾರದು, ಅವನಿಗೆ ಮಾಡುವುದಕ್ಕೆ ಕೆಲಸವಿಲ್ಲ, ನೀವು ಅವನ ರೀತಿ ಗ್ಯಾರೇಜ್ ಪಾಲಾಗುತ್ತೀರಿ, ಎಂದು ಅವರ ಮಕ್ಕಳಿಗೆ ಹಿತವಚನ ಭೋಧಿಸಿದರು. ಇದೇ ಸಮಯಕ್ಕೆ ನನ್ನ ಅಪ್ಪ, ನನ್ನ ಬಗ್ಗೆ ಇದ್ದ ಎಲ್ಲ ಆಸೆಗಳನ್ನು ಗಾಳಿಗೆ ತೂರಿ ಅವನು ಮನೆಗೆ ಬರುವ ಅವಶ್ಯಕತೆಯಿಲ್ಲವೆಂದು ನನ್ನ ಅಮ್ಮನಿಗೆ ಹೇಳಿದ್ದರು. ನಾನು ಆಗ ಅಜ್ಜಿ ಮನೆಯಲ್ಲಿದ್ದೆ, ಗ್ಯಾರೇಜ್ ಕೃಷ್ಣ ನನ್ನ ಆತ್ಮೀಯ, ಅವನಿಲ್ಲದೆ ಇದ್ದರೆ ನಾನು ನನ್ನ ಜೀವನದ ಅಂತಿಮ ಕ್ಷಣಗಳನ್ನು ಎಂದೋ ಅನುಭವಿಸಿತಿದ್ದೆ ಎನಿಸುತ್ತದೆ. ಅಮ್ಮ ನನ್ನನ್ನು ನೋಡಲು ಬಂದಾಗ ಅವಳ ಕಣ್ಣಲ್ಲಿದ್ದ ನೀರನ್ನು ನೋಡಿ, ಹೇಳಿದೆ, ಇಂದು ಅತ್ತರೇ ಏನು ಬರುವುದಿಲ್ಲ, ಇಂಗ್ಲೀಷ್ ಮೀಡಿಯಮ್ ಬೇಡವೆಂದರೂ ಸೇರಿಸಿದ್ದು ನಿಮ್ಮ ಪತಿದೇವರು ತಾನೇ, ಎಂದು ನನ್ನನ್ನು ನಾನು ಸಮರ್ಥಿಸಲೆತ್ನಿಸಿದೆ. ಆದರೂ ಯಾವುದೊ ಪಾಪ ಪ್ರಜ್ನೆ ನನ್ನನ್ನಾವರಿಸಿತು. ನಾನು ಮಾಡಿದು ತಪ್ಪೆನ್ನುವುದು ನನಗೆ ತಿಳಿದಿತ್ತು. ಇದು ನನ್ನ ತಂದೆ ತಾಯಿಗೆ ಮಾಡಿದ ಮೋಸವಲ್ಲ, ನನ್ನಿಂದ ನನಗೆ ಬಗೆದುಕೊಂಡ ದ್ರೋಹವೆಂಬುದರಲ್ಲಿ ಅನುಮಾನವೇ ಇರಲಿಲ್ಲ. ಮನುಷ್ಯ ಎಷ್ಟೇ ಅಧೀನನಾದರೂ ಅವನು ಅಷ್ಟು ಸುಲಭಕ್ಕೆ ತಾನಿರುವ ಸ್ಥಿತಿಯನ್ನು ಸ್ವೀಕರಿಸಲು ಸಿದ್ದವಿರುವುದಿಲ್ಲ. ಇದು ಅವನಿಗೆ ತಿಳಿಯದೇ ಮಾಡುತಿದ್ದಾನೆಂಬುದನ್ನು ನಾನು ಸುತರಾಂ ಒಪ್ಪುವುದಿಲ್ಲ. ಇದು ಅವನ ಉಡಾಫೆತನ ಮತ್ತು ಬೇಜವಬ್ದಾರಿತನವಷ್ಟೆ. ಪ್ರತಿಯೊಬ್ಬ ಮನುಷ್ಯನು ತನ್ನ ಇಂಚಿಂಚೂ ಬದಲಾವಣೆಯನ್ನು ಗಮನಿಸುತ್ತಲೇ ಇರುತ್ತಾನೆ. ಅದು ಪೂರಕವಾದಾಗ ಮಾತ್ರ ಅದನ್ನು ಬಹಿರಂಗಪಡಿಸುತ್ತಾನೆ, ಅದು ಮಾರಕವೇನಿಸಿದರೆ ಅವನೆಂದು ಅದರ ತಂಟೆಗೆ ಹೋಗುವುದಿಲ್ಲ. ಹೋಗುವುದಿರಲಿ ಅದನ್ನು ಪರಿಗಣಿಸುವುದೂ ಇಲ್ಲ.ಆ ದಿನ ಅಮ್ಮನನ್ನು ಕಂಡು ಹೊರಬರುವಾಗ ನನ್ನ ಕಣ್ಣುಗಳು ತುಂಬಿ ಬಂದರೂ, ನಾನು ಅದನ್ನು ತೋರಿಸುವ ಸ್ಥಿತಿಯಲ್ಲಿರಲಿಲ್ಲ. ಈ ಸಮಾಜ ಗಂಡು ಎನ್ನುವ ಪ್ರಾಣಿಯನ್ನು ಒಂದು ಕಲ್ಲಿನಂತೆಯೆ ಬಿಂಬಿಸಿದೆ. ನೀನು ಗಂಡಸು ಅಳಬಾರದು, ನಿನ್ನ ಕಣ್ಣಲ್ಲಿ ಅಳು ಬರಬಾರದು, ನೀನು ಹುಟ್ಟಿರುವುದು ಆಳುವುದಕ್ಕೆ ಅಳುವುದಕ್ಕಲ್ಲ, ಹೀಗೆ ಹತ್ತು ಹಲವು ಅಮುಚಿತ ಸಲಹೆಗಳನ್ನು ಬಾಲ್ಯದಿಂದಲೂ ನಮ್ಮಲ್ಲಿ ಬಿತ್ತಿರಿತ್ತಾರೆ. ಈ ಬೆಳವಣಿಗೆ ನಮ್ಮ ಭಾವನೆಗಳ ಮೇಲೆ ಅದೆಷ್ಟರ ಮಟ್ಟಿಗೆ ಸವಾರಿ ಮಾಡುತ್ತದೆಂದರೆ ನಾವು ನಮ್ಮ ಭಾವನೆಗಳನ್ನು ಬಂಧಿಸಿಡಬೇಕು ಅದನ್ನು ಎಂದು ವ್ಯಕ್ತಪಡಿಸಲೇಬಾರದೆಂಬ ತಪ್ಪು ಕಲ್ಪನೆಯನ್ನು ಸೃಷ್ಟಿಸಿಬಿಡುತ್ತದೆ. ಅಳು ಮನುಷ್ಯನ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಮಾರ್ಗವೆಂಬುದನ್ನು ನಾಗರೀಕ ಸಮಾಜ ಮರೆತು ಬಹಳ ದಿನಗಳೇ ಕಳೆದಿವೆ. ಈ ನಿಟ್ಟಿನಲ್ಲಿ ಹುಡುಗಿಯರು ಅದೃಷ್ಟವಂತರೂ ಅವರ ಭಾವನೆಗಳನ್ನು ವ್ಯಕ್ತಪಡಿಸಲು ತಮ್ಮ ಕಣ್ಣೀರನ್ನು ಹರಿಸಬಹುದು, ನಮಗೆ ಆ ಅವಕಾಶವಿಲ್ಲವೇ ಇಲ್ಲ. ಇತ್ತೀಚೆಗೆ ಶ್ರೀಕಾಂತ್ ಕ್ರೀಕೆಟ್ ಸ್ಟೇಡಿಯಂ ನಲ್ಲಿ ಅತ್ತಾಗಲೂ ಕೆಲವರು ಇದನ್ನೇ ಹೇಳಿದ್ದರು.ಗಂಡಸಾಗಿ ಹೆಂಗಸಿನಂತೆ ಅಳುವುದಾ! ಮೊದಲು ಮನುಷ್ಯ ನಂತರ ಲಿಂಗಬೇಧವೆಂಬುದನ್ನು ನಮ್ಮ ಜನತೆ ಒಪ್ಪಿಕೊಳ್ಳಲು ಸಿದ್ದವಿಲ್ಲ. ಹೆಣ್ಣು ಗಂಡು ಅನ್ನೋ ಬೇಧಭಾವವನ್ನು ಮೆರೆಸಿ ಬಾಳುವುದರಲ್ಲಿ ಹಲವು ಮಹಿಳಾ ಮಣೀಯರು ಸಾಧನೆಯನ್ನು ಮೆರೆದಿದ್ದಾರೆ. ಹೀಗೆ ಎಲ್ಲಾ ವಿಷಯಗಳಲ್ಲಿಯೂ ಗಂಡಸು, ಹೆಂಗಸು ಎಂದು ವಿಂಗಡಣೆ ಮಾಡಿ, ಪ್ರತಿ ಸಂಸಾರದಲ್ಲಿಯೂ ಗಲಭೆಯಾಗುವ ಮಟ್ಟಕ್ಕೆ ಮಾಡಿ ಕುಳಿತ್ತಿದ್ದಾರೆ. ಇಂದೂ ಇದು ಯಾವ ಮಟ್ಟಕ್ಕೆ ಬೆಳೆದಿದೆಯೆಂದರೇ ಸುಖವಾಗಿದ್ದ ಸಂಸಾರಗಳು, ಸ್ವಾಭಿಮಾನದ ಹೆಸರಲ್ಲಿ, ಸ್ತ್ರೀ ಧೋರಣೆಯ ಹೆಸರಲ್ಲಿ ಬಿರುಕನ್ನುಂಟುಮಾಡಿವೆ. ಪ್ರಾಣಿಗಳ ಕಣ್ಣಲ್ಲೇ ಕಣ್ಣೀರು ಬರುವಾಗ ನಮ್ಮ ಕಣ್ಣಲ್ಲಿ ಕಣ್ಣೀರು ಬರದ ಮಟ್ಟಕ್ಕೆ ನಮ್ಮ ಮೇಲೆ ನಿಯಂತ್ರಣ ಮಾಡುವುದನ್ನ ಕಂಡರೇ ನನಗೆ ಮೈ ಬಿಸಿಯಾಗುತ್ತದೆ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ತಡೆಯುವುದು, ಹೀಗೆ ನಗಬೇಕು, ಇಷ್ಟೇ ನಗಬೇಕು, ಹೀಗೆ ಪ್ರತಿಯೊಂದಕ್ಕು ಪರಿಮಿತಿ ಇಟ್ಟಿರುವ ಈ ವ್ಯವಸ್ಥೆಯನ್ನು ಕಂಡು ಅಳಲಾರದೆ ನಗಲಾರದೆ ಚಿಂತಿಸುತ್ತೆನೆ. ಇವರು ಆಧುನೀಕರಣದ ಹೆಸರಲ್ಲಿ, ಎಲ್ಲದಕ್ಕೂ ಮಿತಿ ಹಾಕಿ ಬೇಡದೇ ಇರುವುದನ್ನು ಹೆಚ್ಚಿಸಿ ಕುಣಿಯುತ್ತಿರುವುದು ಏಕೆಂಬುದು ನನಗೆ ತಿಳಿದಿಲ್ಲ.

ಅಮ್ಮನ ಕಂಡು ಬಂದ ನಂತರ ಕೃಷ್ಣ ಹೇಳಿದ, "ಯಾಕೋ ಬಿಡು ಮಾರಾಯಾ? ಚಿಂತೆಯಾಕೆ ಮಾಡುತ್ತಿಯಾ? ಈಗ ಚಿಂತಿಸಿದರೆ ಏನು ಬರುತ್ತೆ? ಮೊದಲೇ ಇದರ ಬಗ್ಗೆ ಚಿಂತಿಸಿದರೆ ಪಾಸಾಗುತ್ತಿದ್ದೆ, ಈಗ ಚಿಂತಿಸಿ ಏನು ಬರುವುದಿಲ್ಲ. ಅದು ಸರಿಯೇ ಎನಿಸಿತು. ಇದಾದ ಮೇಲೆ ನನ್ನ ಸಂಬಂಧಿಕರಲ್ಲಿ, ನನ್ನ ಅಪ್ಪನಲ್ಲಿ ಉಂಟಾದ ಬದಲಾವಣೆಯಿಂದಾಗಿ, ನನ್ನ ಹುಟ್ಟೂರಿಗೆ ಮುಖ ತೋರಿಸುವ ಧೈರ್ಯ ನನ್ನಿಂದ ಬರಲಿಲ್ಲ. ಅದು ಅಂಜಿಕೆಯೋ, ನಾಚಿಕೆಯೋ, ಅಧೈರ್ಯವೋ, ಇಂದಿಗೂ ತಿಳಿದಿಲ್ಲ. ಆದರೇ, ಸತತ ಹತ್ತು ತಿಂಗಳುಗಳು ನಾನು ನನ್ನ ಸರ್ವಕುಟುಂಬದಿಂದ, ಸಂಬಂಧಿಕರಿಂದ ಹೊರಗಿದ್ದೆ.ಈಗಲೂ ಅವರ ಬಳಿಗೆ ಹೋಗುವುದಿಲ್ಲ ಅದು ಬೇರೆ ವಿಷಯ. ಆದರೇ ಅವರೇ ನನ್ನೆಡೆಗೆ ಬರುತ್ತಿರುವುದು ನನಗೆ ಒಂದು ಬಗೆಯ ತಾತ್ಸಾರ ಮೂಡಿಸುತ್ತದೆ.ಹಳ್ಳಿಯ ವಾತಾವರಣದಲ್ಲಿ ಬಡಕುಟುಂಬದಿಂದ ಬೆಳೆದು, ೭೦ರ ದಶಕದಲ್ಲೆ ಪದವೀಧರನಾಗಿದ್ದ ನನ್ನ ತಂದೆಯ ಮುಂದೆ ನಿಲ್ಲಲು ನನಗೆ ಧೈರ್ಯ ಬರಲಿಲ್ಲ. ಆ ಮನೆ, ಆ ಊರು ನನ್ನಿಂದ ದೂರವೇ ಉಳಿದಿತ್ತು. ಜಗತ್ತೆಲ್ಲ ಕನಸಿನ ಸೋಗಿನಲ್ಲಿ ಮಲಗಿರುವಾಗ, ನಡು ರಾತ್ರಿಯಲ್ಲಿ, ನಾನು ನನ್ನ ಅಂತರಾಳದಲ್ಲಿ ಕುದಿಯುತ್ತಿದ್ದ ಜ್ವಾಲಮುಖಿಯನ್ನು ನಂದಿಸಲು ಯತ್ನಿಸಿ ಕೊರಗಿ ಕೊರಗಿ ಸೊರಗುತ್ತಿದ್ದೆ. ಈ ಅವಮಾನ, ಅಪಮಾನ, ಇವೆಲ್ಲಾ ನಾನೆ ತಂದುಕೊಂಡವದಾದರೂ, ಕೇವಲ ಒಂದು ಸೋಲಿಗೆ, ಒಂದು ತಪ್ಪಿಗೆ, ಈ ಜಗತ್ತಿಗೆ ನಾನು ಬೇಡದವನಾದೆನೆಂದರೆ! ಇದೆಂತ ಜಗತ್ತು? ಇಲ್ಲಿ ಓಡುವ ಕುದುರೆಗೆ ಮಾತ್ರ ಬೆಲೆಯೆನಿಸುತ್ತದೆ. ಹದಿನಾರು ವರ್ಷ ಹೊಗಳಿ, ಬೆಳೆಸಿದ ಜನ, ಒಮ್ಮೆ ಎಡವಿದ ಮಾತ್ರಕ್ಕೆ ನನ್ನನ್ನು ಬದಿಗೆ ತಳ್ಳಿ ಮುನ್ನುಗ್ಗುತ್ತಿರುವುದನ್ನು ಕಂಡು ಈ ನಾಗರೀಕ ಜನತೆಯ ಮೇಲೆ ನನಗೆ ಅಸಹ್ಯ ಹುಟ್ಟಿಸತೊಡಗಿತು. ಮನುಷ್ಯ ಸೋತು, ಸೋತು, ಸೊರಗಿ ಇನ್ನೇನು ಜೀವನದ ಕೊನೆಯ ಕ್ಷಣಗಳಲ್ಲಿದ್ದೆನೆಂದು ಎನಿಸಿದಾಗ, ತನ್ನೊಳಗೆ ತನಗರಿಯದ ಆಶಾಕಿರಣ ಮೂಡತ್ತದೆ. ಅದು ಗೆದ್ದೇ ಗೆಲ್ಲುತೇನೆಂಬ ಭರವಸೆಯಲ್ಲ, ಗೆಲ್ಲದಿದ್ದರೆ ನಿನ್ನ ಬದುಕಿಲ್ಲ ನೀನು ಸಾಯುತ್ತೀಯ ಎಂಬ ಎಚ್ಚರಿಕೆ.ಅಂದು ನನಗೆ ಆದದ್ದು ಅದೇ. ಗೆಲ್ಲಲೇ ಬೇಕು, ನಿನಗೆ ಓದು, ನಿನ್ನ ಗುರುತು ಈ ಸಮಾಜದಲ್ಲಿ ಉಳಿಸಲಿಲ್ಲವೆಂದರೆ ಈ ಜಗತ್ತು ನಿನಗೆಂದೂ ಚಿಂತಿಸುವುದಿಲ್ಲ. ೩೭ ಮಿಲ್ಲಿಯನ್ ವರ್ಷಗಳ ಈ ಮಾನವ ಸಂತಾನದಲ್ಲಿ ನೀನು ಏನೇನು ಅಲ್ಲಾ, ತಿಳಿದಿಕೊ ನೀನು ಸತ್ತರೂ ಬದುಕಿದರೂ ಇಲ್ಲಿನ ಜೀವನ ನಿರಂತರ. ನೀನು ಬದುಕುತ್ತಿರುವುದು ನಿನಗಾಗಿ, ನಿನ್ನಿಂದ, ನಿನಗೋಸ್ಕರೆ. ಈ ಮಾತುಗಳು ನನ್ನಲ್ಲಿ ಮೂಡಿ ನಾನು ಗೆಲ್ಲಲೇಬೇಕು, ಅಂದುಕೊಂಡಿದ್ದನ್ನು ಸಾಧಿಸಲೇಬೇಕು. ಹೊರಟೆ ಅಂದು ಹೊರಟ ನನ್ನ ಸವಾರಿ ಇಂದಿಗೂ ನಿಂತಿಲ್ಲ.

ಆ ನಡುವೆ, ನಾನು ಗ್ಯಾರೆಜ್ ಮಾಡಬೇಕು, ವಾಹನಗಳನ್ನು ತೆಗೆಯಬೇಕೆಂದು ಬಯಸಿದ್ದೆ. ಅದರ ತಳಬುಡವೂ ತಿಳಿಯದೇ, ಅದನ್ನು ಅರ್ಧಕ್ಕೆ ಬಿಟ್ಟು, ಕೃಷಿ ಚಟುವಟಿಕೆಗೆ ಹೋದೆ. ಅದು ಯಾಕೋ ನನಗೆ ಸರಿ ಹೊಂದಲಿಲ್ಲ. ಅಂತೂ ಇಂತೂ ಪಿ.ಯು.ಸಿ. ಎಂಬ ಮಹಾಯುದ್ದದಲ್ಲಿ ಗೆದ್ದು ಬಂದೆ, ನನ್ನ ನಾಲ್ಕು ವಿಷಯಗಳು ಪಾಸಾಗಿದ್ದವು. ಅಂಕಗಳನ್ನು ಕೇಳಿ ಮೂರ್ಛೇ ಹೋಗುವುದು ಬೇಡ. ಆರ್ಟ್ಸ್ ತೆಗೆದುಕೊಂಡು, ಅಲ್ಲೇ ಓದುತ್ತಿನಿ ಎಂದು ಕೇಳಿದ್ದಕ್ಕೆ, ಅಪ್ಪ ಹೀನ ಮಾನವಾಗಿ ಬೈಯ್ದು ಮೈಸೂರಿಗೆ ಹೋಗಿ ಓದಿ ಹಾಳಾಗು ಎಂದರು. ಅವರಿಚ್ಚೆಯಂತೆಯೇ ಮೈಸೂರಿನ ಯುವರಾಜ ಕಾಲೇಜು ಸೇರಿದೆ, ಹಾಸ್ಟೆಲ್ ಕೂಡ ಸಿಕ್ಕಿತು. ಆದರೇ ಆ ಕಾಲೇಜು ಹುಡುಗರು ಮಾತ್ರ ನನಗೆ ಹಿಡಿಸಲಿಲ್ಲ. ನನಗೆ ಅವರು ತುಂಬಾ ಭಾಲೀಷರಂತೆ ಕಾಣುತಿದ್ದರು. ಅವರ ಮಕ್ಕಳಾಟದ ಜೋಕ್ ಗಳು ಅವರೇ ಮಾಡಿ ಅವರೇ ನಗುವಂತಿದ್ದವು. ಇವರ ಸಹವಾಸವೇ ಬೇಡವೆಂದು ರೂಮಿನಲ್ಲಿ ಓದತೊಡಗಿದೆ. ಸಹವಾಸವೆಂಬಂತೆ ನನಗೆ ಆಗ ಸಿಕ್ಕ ಕೆಲ ಸ್ನೇಹಿತರು ನನ್ನ ಮತಾಂಧತೆಯನ್ನು ಕಂಡು, ಮೊದಲು ಸ್ವಲ್ಪ ಓದಿ ತಿಳಿದಿಕೋ ಎಂದು ತಿಳಿಸಿದರು. ಅದನ್ನು ನಾನು ಬಹಳ ಗಂಭೀರವಾಗಿ ಪರಿಗಣಿಸಿ, ಓದತೊಡಗಿದೆ. ನನ್ನ ವಿಷಯಕ್ಕೆ ಸಂಭಂಧಪಟ್ಟದ್ದನ್ನು ಓದುವುದಕಿಂತ ಬರೀ ಧರ್ಮ, ಆಧ್ಯಾತ್ಮಿಕತೆ, ವೈಚಾರಿಕತೆಯ ಪುಸ್ತಕಗಳನ್ನು ಓದುವುದನ್ನು ಕಂಡ ನನ್ನ ಮಿತ್ರರೂ ಗಾಬರಿಯಾಗತೊಡಗಿದರು. ಸಂಜೆಯಲ್ಲಿ ಕುಡಿದು ಕುಣಿದಾಡುತಿದ್ದ ನನ್ನನ್ನು ಅವರೆಂದೂ ಗಂಭಿರವಾಗಿ ಪರಿಗಣಿಸಿರಲಿಲ್ಲ. ಇವನೊಬ್ಬ ಕುಡಿದು ಕುಣಿದು ಮಲಗಲು ಬಂದಿರುವವನು, ಇವನ ಸ್ನೇಹವೇ ಒಲಿತಲ್ಲವೆಂಬ ತೀರ್ಮಾನಗಳು ಅವರಲ್ಲಿದ್ದವು. ಸಂಜೆಯಾದರೇ ಕುಡಿಯಲು ಅಲೆಯುತ್ತಿದ್ದ ನನ್ನನ್ನು ಕುಡಿದ ಮೇಲೆ ನನ್ನ ಬಾಯಿಂದ ಬರುವ ಮಾತುಗಳನ್ನು ಕೇಳಲು ನನ್ನನ್ನು ಕರೆದು ಮಜ ತೆಗೆದುಕೊಳ್ಳತೊಡಗಿದ್ದರು. ಇದು ನನಗೆ ತಿಳಿದಿದ್ದರೂ ಸ್ನೇಹದ ಹೆಸರಿನಲ್ಲಿ ಈ ಬಗೆಯ ಆನಂದ ಪಡುವ ಅವರ ಮೇಲೆ ನನಗೆ ಕನಿಕರವಿತ್ತು. ನನ್ನೊಳಗೆ ಆಗುತ್ತಿದ್ದ ಬದಲಾವಣೆ ಯಾರಿಗೂ ಕಾಣುತ್ತಿರಲಿಲ್ಲ. ನಿಜ ಹೇಳಬೇಕೆಂದರೆ,ನಮ್ಮ ಕ್ಲಾಸಿನಲ್ಲಿದ್ದ ಅನೇಕ ಹುಡುಗ ಹುಡುಗಿಯರಿಗೆ ನನ್ನ ಹೆಸರು ಹಾಜರಿ ಕರೆಯುವಾಗ ತಿಳಿದಿತ್ತೆ ವಿನಾಃ, ನಾನೇ ಅದು ಎಂದು ತಿಳಿದಿರಲಿಲ್ಲ ಕೊನೆಗೂ ತಿಳಿಯಲಿಲ್ಲ. ಆದರೇ ನಾಗಪ್ಪ ಅಪಹರಣ, ಕಾವೇರಿ ಬಂದ್, ಕಾಲೇಜು ಬಂದ್ ದಿನಗಳಲ್ಲಿ ನನ್ನ ಹೆಸರು ಕಾಲೇಜು ಆವರಣದಲ್ಲಿ ಮಿಂಚುತ್ತಿತ್ತು. ಯಾರ್ಯಾರಿಗೆ ಲ್ಯಾಬ್ ಇದೆ ಅವರೆಲ್ಲ ಬಂದು ಮಗ ಪ್ಲೀಸ್ ಇವತ್ತು ರೆಕಾರ್ಡ್ ಬರೆದಿಲ್ಲ ಕ್ಲಾಸ್ ಬಿಡಿಸಿ ಎಂದು ಗೊಗರೆಯುತಿದ್ದರು. ಅಂತೂ ಇಂತೂ ನನ್ನ ಬಗ್ಗೆ ಯಾರಲ್ಲೂ ಒಳ್ಳೆಯ ಅಭಿಪ್ರಾಯವಿರಲಿಲ್ಲ, ನನಗೂ ಇರಲಿಲ್ಲವೆನೋ! ಮೊದಲ ಬಾರಿ ಫಲಿತಾಂಶ ಬಂದಾಗ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಕ್ಲಾಸಿನಲ್ಲಿ ಎಂದೂ ಕೂರದ, ಎಂದೂ ಓದದ ಇವನು ಮೊದಲ ದರ್ಜೆಯಲ್ಲಿ ಪಾಸಾಗಿದ್ದಾನೆ! ನಾವು ದಿನ ನಿತ್ಯ ೧೦೦% ಹಾಜರಾತಿಯಿದ್ದವರೂ ಫೇಲ್! ಮೊದಲ ಬಾರಿಗೆ ಅವರ ಮಾತುಗಳು ನಾನು ಪಾಸಾಗಿದ್ದು ಆಶ್ಚರ್ಯ ಮತ್ತು ಅದೃಷ್ಟವೆಂದು ಕಂಡವು. ನನಗೂ ಅದು ಇರಬಹುದೆನಿಸಿತು. ಆದರೇ ಇದು ಎರಡನೇ ವರ್ಷ ಮತ್ತು ಮೂರನೇ ವರ್ಷ ಪುನರಾವರ್ತಿಯಾದಾಗ ಅದೃಷ್ಟವೊಂದೆ ಈ ಮಟ್ಟಕ್ಕೆ ಬರಲು ಸಾಧ್ಯವಿಲ್ಲವೆಂಬುದು ನನ್ನ ಜೊತೆಗ್ ಕೆಲವು ಸ್ನೇಹಿತರಿಗೂ ತಿಳಿಯಿತು.

ನಾನು ಅವರು ಎಣಿಸಿದಂತೆ ಸಂಜೆ ಕುಡಿಯುತಿದ್ದದ್ದು ನಿಜವೇ ಸರಿ, ಆದರೇ ಅವರೆಲ್ಲ ಮಲಗಿ ಕನಸಿನಲ್ಲಿರುವಾಗ ನಡುರಾತ್ರಿಯಲ್ಲಿ, ಕೆಲವೊಮ್ಮೆ ರಾತ್ರಿಯಿಡಿ ಓದುತ್ತಿದ್ದದ್ದು ಯಾರಿಗು ತಿಳಿದಿಲ್ಲ. ನನ್ನ ರೂಂ ಮೇಟ್ ಒಮ್ಮೊಮ್ಮೆ ಹೇಳುತಿದ್ದ, ಮಗಾ ನೀನು ಹಗಲು ಧರ್ಮ, ಕಥೆ ಕಾದಂಬರಿ ಓದುತ್ತಿಯಾ ರಾತ್ರಿ ಇವೆಲ್ಲಾ ಓದುತ್ತೀಯಾ ಹುಚ್ಚು ಹಿಡಿದು ಆಸ್ಪತ್ರೆ ಪಾಲಾದರೆ ನಿಮ್ಮನೆಗೆ ಏನು ಹೇಳುವುದು? ನಾನು ನಕ್ಕು ಹೇಳ್ತಾ ಇದ್ದೆ, ಈಗ ನಾನು ಹುಚ್ಚ ಅಲ್ಲ ಅಂತಾನಾ ನಿನ್ನ ಮಾತು? ಮಿತ್ರರೇ, ನಾನು ನನ್ನ ಕಾಲೇಜು ಜೀವನದಲ್ಲಿ ನಿದ್ದೆಗೆಟ್ಟ ಹಲವಾರು ರಾತ್ರಿಗಳನ್ನು ಕಳೆದಿದ್ದೇನೆ. ಅದೆಂದೂ ನಾನು ಮಾಡುತ್ತಿರುವುದನ್ನು ಓದುತ್ತಿರುವುದನ್ನು ಹೇಳಲಿಲ್ಲ, ನನಗೆ ನನ್ನ ಜೀವನದ ಬಗ್ಗೆ ಇದ್ದಷ್ಟೂ ಕಾಳಜಿ ಬೆರೆಯವರ ಮೇಲೆ ಇರಲಿಲ್ಲ. ನಾನು ಸರಿಯಾಗದೆ, ಲೋಕವನ್ನು ಉದ್ದಾರ ಮಾಡುವುದು ಸಾಧ್ಯವಿಲ್ಲವೆಂಬುದು ನನ್ನ ನಂಬಿಕೆಯಿತ್ತು. ನಾನು Self motivation ನಲ್ಲಿ ನಂಬಿಕೆಯಿಟ್ಟು ಬದುಕುತ್ತಿರುವವನು. ಬೇರೆಯವರ ಜೀವನ ರೂಪಿಸುತ್ತೆನೆಂದು ಹೊರಡುವ ಯಾರನ್ನು ನಾನು ನಂಬುವುದಿಲ್ಲ. ನನ್ನ ಜೊತೆ ಮೂರು ವರ್ಷವಿದ್ದು ನನ್ನು ನೋಡುತಿದ್ದ ನನ್ನ ಸ್ನೇಹಿತ ಮೂರು ವರ್ಷದಲ್ಲಿ ಮೂರು subject ಪಾಸ್ ಮಾಡಿಕೊಳ್ಳಲಿಲ್ಲ. ಇದು ಅದೃಷ್ಟವೋ!

ಅಲ್ಲಿಂದ ಬಂದು ಬೆಂಗಳೂರು ವಿ.ವಿ.ಯಲ್ಲಿ ಸೇರಿದೆ, ಹಳ್ಳಿಯಿಂದ ಬಂದ ನನ್ನ ಮಾತುಗಳು ಪೇಟೆ ಹುಡುಗಿಯರೇ ಹೆಚ್ಚಿದ್ದ ಕ್ಲಾಸಿಗೆ ಮುಜುಗರ ತಂದಿಟ್ಟಿತು. ಭಾಷೆಯಿದ್ದರೆ ದೇಶವನ್ನೆ ಆಳಬಹುದೆಂಬುದು ಅವರ ಅಭಿಪ್ರಾಯವಾಗಿತ್ತು. ಯಾರೊಬ್ಬರೂ ಕನ್ನಡದಲ್ಲಿ ಮಾತನಾಡಲೂ ಹಿಂಜರಿಯುತಿದ್ದರು. ನನ್ನೊಡನೆ ಕನ್ನಡದಲ್ಲೆ ಮಾತಾಡಬೇಕೆಂದು ತೀರ್ಮಾನಿಸಿ ಕಡೆಗೆ ಒಪ್ಪಿದರು. ನಾನು ಹೆಚ್ಚು ಸಮಯ ಕ್ಲಾಸಿನಲ್ಲಿ ಕಳೆಯದೇ, ನಮ್ಮ ವಿಷಯಕ್ಕೆ ಸಂಭಂಧಪಡದ ಪುಸ್ತಕಗಳನ್ನು ಓದುತಿದ್ದದ್ದು ಅವರಿಗೆ ಇರಿಸುಮುರಿಸು ಮಾಡಿತ್ತು. ನಾನು ಸುಮ್ಮನೆ ಕಾಲಹರಣ ಮಾಡುವುದಕ್ಕೆಂದು ಸೇರಿದ್ದೇನೆಂದು ನನ್ನೆದುರೇ ಕೆಲವರು ಹೇಳಿದ್ದರು. ವಿಪರ್ಯಾಸವೆಂದರೆ, ಅಂದು ಹೇಳಿದ್ದ ಮಹಮಣಿಯರು ಇಂದು ನಮ್ಮ ಕ್ಷೇತ್ರದಲ್ಲಿಲ್ಲದೇ ಬೇರೆ ರಂಗದಲ್ಲಿದ್ದಾರೆ. ನಾನು ಮೊದಲ ಸೆಮಿಸ್ಟರ್ ನಲ್ಲಿ ಪಾಸಾದಾಗಳು ಅಷ್ಟೇ, ಇವನು ಬಕೆಟ್ ಹಿಡಿದು ಎಲ್ಲರಿಗೂ ಗಿಲೀಟ್ ಮಾಡಿ ಮಾರ್ಕ್ಸ್ ತೆಗೆದಿದ್ದಾನೆಂದು ಹೇಳಿದ್ದರು. ಅದು ನಾಲ್ಕು ಸೆಮಿಸ್ಟರ್ ನಲ್ಲಿ ಮುಂದುವರೆದು, ಕೊನೆಗೆ ನಮ್ಮ ಉಪನ್ಯಾಸಕ ವರ್ಗದವರನ್ನು ಹೀನಾಮಾನವಾಗಿ ಬೈಯ್ಯುವಾಗ ಇವರೆಲ್ಲ ನನ್ನನ್ನು ಕಂಡು, ಇವನು ಹುಚ್ಚನೇ ಸರಿ ಅವರು ಇವನನ್ನ ಫೇಲ್ ಮಾಡಿದರೇ ಏನು ಮಾಡ್ತಾನೆ ಅಂತ ಕೇಳಿದ್ದರು. ಅವರಿಗಿದ್ದ ಆ ಭಯ ನನಗಿರಲಿಲ್ಲ, ಆದ್ದರಿಂದಲೇ ವಿಭಾಗದಲ್ಲಿದ್ದ ಹಲವಾರು ಕೊರತೆಗಳ ಬಗ್ಗೆ, ಕೊಳೆತ ವ್ಯವಸ್ಥೆಯ ಬಗ್ಗೆ ದ್ವನಿಯೆತ್ತ ತೊಡಗಿದೆ. ನಮ್ಮ ಸಮಾಜ ವ್ಯವಸ್ಥೆಯೇ ಹಾಗಿರುವಾಗ ನನಗೆ ಅಲ್ಲಿ ಅಷ್ಟು ಸಹಕಾರ ಸಿಗಲಿಲ್ಲ. ಒಂದು ನನ್ನ ವಿರುದ್ದ ಉಪನ್ಯಾಸಕರಿಗೆ ಚಾಡಿ ಹೇಳಿ ಮೆಚ್ಚುಗೆ ಪಡೆದವರಿದ್ದರು, ಇನ್ನೊಂದು ನಾನೆಲ್ಲಿ ಪ್ರಖ್ಯಾತಿಯಾಗಿ ಅವರಿಗೆಲ್ಲಿ ತೊಂದರೆಯಾಯಿತೆಂಬ ಮಾನಸಿಕ ವೇದನೆಯವರಿದ್ದರು. ಅಂತೂ ಹನ್ನೆರಡು ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಕೊಳೆತ ವ್ಯವಸ್ಥೆಯ ವಿರುದ್ದ ದ್ವನಿಯೆತ್ತಿದವನಾಗಿದ್ದೆ. ಅದರ ಫಲಿತಾಂಸವಾಗಿ ನಮಗೆ ಅಂದು ಹಲವಾರು ಉಪಯೊಗಗಳು ಸಿಕ್ಕವು. ಆದರೆ, ಅದು ನನ್ನೊಬ್ಬನಿಂದ ಶುರುವಾಗಿ ನನ್ನೊಂದಿಗೆ ಕೊನೆಯಾದದ್ದು ವಿಪರ್ಯಾಸ.

ನಾನು ಕಥೆ ಕಾದಂಬರಿ ಓದುತ್ತ ಕಾಲ ಕಳೆಯುತ್ತಿದ್ದೆ ಎಂದೂ ಹೇಳಿದ ನನ್ನ ಮಾಹಾನ್ ಗೆಳೆಯರೂ ನಾನು ಹಾಸ್ಟೇಲ್ ನಲ್ಲಿ ಕಳೆಯುತಿದ್ದ ಜೀವನವನ್ನು ಕಾಣಲೇ ಇಲ್ಲ. ತಿಳಿಯುವ ಗೋಜಿಗೂ ಹೋಗಲಿಲ್ಲ. ಬಿಡುವಿನ ವೇಳೆಯಲ್ಲಿ ಕೆಲಸಕ್ಕೆ ಹೋದದ್ದು, ರೂಪಾಯಿ ಉಳಿಸಲು ಕೀಲೋ ಮೀಟರ್ ನಡೆದದ್ದು ಇವೆಲ್ಲಾ ಅವರ ನೆನಪಿಗೆ ತಾಕುವುದೇ ಇಲ್ಲ. ನಂತರ ಪಿ.ಎಚ್.ಡಿ ಎಂದೂ ಮೈಸೂರು ವಿ.ವಿ.ಗೆ ಕಾಲಿಟ್ಟಾಗಲೂ ಅಷ್ಟೇ ರಾಜಕೀಯದಿಂದ ಸೀಟು ಸಿಕ್ಕಿದೆಯೆಂದು ಮೂಗು ಮುರಿದವರಿದ್ದರು. ಇಂದು ಲಂಕ ಪ್ರವಾಸ ಒಂದು ರೂಪಾಯಿ ಖರ್ಚಿಲ್ಲದೆ ಹೋಗುತ್ತಿರುವಾಗಲೂ ಇದು ಅದೃಷ್ಟ ರಾಜಕಾರಣದ ಹೆಸರು ಹೇಳಿರುವ ನಿಮಗೆ ನನ್ನ ಹಲವು ಪ್ರಶ್ನೆಗಳಿವೆ.

ಒಂದು ಕಾಲದಲ್ಲಿ ಓದು ಎಂಬುದು ಶತ್ರುವಿನ ಕೆಲಸವೆಂದು ಭಾವಿಸಿದ್ದ ನಾನು, ಇಂದು ಓದದೆ ಇದ್ದರೇ ನೀನು ಬದುಕುವುದಿಲ್ಲ ನಿನ್ನ ಬದುಕು ನಿಂತಿರುವುದು ನಿನ್ನ ಓದಿನ ಮೇಲೆ ಎಂಬ ತೀರ್ಮಾನಕ್ಕೆ ಬಂದಿದ್ದೆನೆ. ಇಂತಹ ಬದಲಾವಣೆಯನ್ನು ಒಪ್ಪಿಕೊಳ್ಳಲು ಹಲವು ಮಂದಿ ಸಿದ್ದರಿಲ್ಲ. ಈ ಭೂಮಿಯೂ ಕೂಡ ಬದಲಾಗುತ್ತಿರುತ್ತದೆ, ಅದನ್ನು ಅರಿಯದೇ ನಾವು ಎಷ್ಟೊಂದು ಬದಲಾದ, ಮುಂಚೆ ಹೀಗಿರಲಿಲ್ಲ, ಹಾಗಿರಲಿಲ್ಲವೆಂದು ಮೂಗು ಮುರಿಯುತ್ತೇವೆ. ಮಾನಸಿಕವಾಗಿ ಬದಲಾಗದೆ ಕೇವಲ ದೈಹಿಕವಾಗಿ ಬದಲಾದರೇ ಅದನ್ನು ಬದಲಾವಣೆಯೆಂದು ಹೇಗೆ ಕರೆಯುತ್ತಿರಿ? ಹುಟ್ಟಿನಿಂದ ಸಾಯುವ ತನಕವೂ ತಾನು ಬದಲಾಗದೇ ಹೀಗೆ ಇರುತ್ತೇನೆಂಬುವವರನ್ನು ತಾವು ಮಹಾನ್ ಎಂದು ಕರೆಯಬಹುದು ಆದರೆ ನನಗೆ ಅವನು ಮನುಷ್ಯನಂತೇ ಕೂಡ ಕಾಣುವುದಿಲ್ಲ. ಮನುಷ್ಯನೆಂದೊಡನೆ ಎಲ್ಲಾ ನ್ಯೂನ್ಯತೆಗಳು ಇರುತ್ತವೆ ಮತ್ತು ದಿನ ದಿನಕ್ಕೆ ಬದಲಾವಣೆ ಅನಿವಾರ್ಯವಾಗುತ್ತದೆ. ಮಾನವ ಪರಿಸರದಲ್ಲಾದ ಬದಲಾವಣೆಗೆ ಹೊಂದಿಕೊಳ್ಳಲು ಕನಿಷ್ಠ ಒಂದು ಮಿಲ್ಲಿಯನ್ ವರ್ಷ ಹಿಡಿಯುತ್ತದೆ ಅದೇ ಪರಿಸರಕ್ಕೆ ಇತರೆ ಜೀವಿಗಳು ಹೊಂದಿಕೊಳ್ಳಲು ಕೇವಲ ಒಂದು ವರ್ಷ ಸಾಕಾಗುತ್ತದೆ. ಒಂದನ್ನೆ ನಂಬಿ ಅದಕ್ಕೆ ಗಂಟುಹಾಕಿಕೊಂಡು ಜೀವನ ನಡೆಸುವುದು ನನಿಂದಾಗುವುದಿಲ್ಲ. ಇದನ್ನು ನನ್ನ ಹುಚ್ಚಾಟವೆಂದು ನೀವು ತೀರ್ಮಾನಿಸಿದರೆ ಅದು ನಿಮ್ಮ ವಿವೇಚನೆಗೆ ಬಿಟ್ಟದ್ದು. ನಾನು ಈ ಬಗೆಯ ಹಲವಾರು ಪ್ರಯೋಗಗಳನ್ನು ನನ್ನ ಮೇಲೆ ನಡೆಸುತ್ತಾ ಜೀವನ ನಡೆಸುತ್ತಿದ್ದೇನೆ.

ಒಂದು ಕಾಲದಲ್ಲಿ ಆರ್.ಎಸ್.ಎಸ್.ನೊಂದಿಗೆ ಸೇರಿ ಚಡ್ಡಿ ಹಾಕಿಕೊಂಡು ದಿನ ಬೆಳ್ಳಿಗ್ಗೆ ಪಥ ಚಲನೆ ನಡೆಸುತಿದ್ದೆವು. ಭಾರತವೆನ್ನಕೂಡದು ಹಿಂದೂಸ್ಥಾನ್ ಎನ್ನಬೇಕೆಂದು, ಮೇರಾ ಭಾರತ್ ಮಹಾನ್ ಘೋಷಣೆ ಕೂಗುತ್ತಿರುತ್ತಿದ್ದೆ. ದಿನ ಸಂಜೆ ದೇವಸ್ಥಾನದ ಅಂಗಳದಲ್ಲಿ ಕುಳಿತು ಕಾಲ ಕಳೆಯುತ್ತಿದ್ದವನು, ಕಾಲ ಕಳೆದಂತೆ ಅದನ್ನು ದಾಟಿ ಬಂದು ದೇವಸ್ಥಾನವೆಂದರೇ ಅಲರ್ಜಿಯೆಂಬ ಮಟ್ಟಕ್ಕೆ ಬಂದು ನಿಂತೆ. ಇದನ್ನು ನನ್ನ ಕೆಲವು ಮಿತ್ರರು, ಹೆಚ್ಚು ಓದಿದರ ಪರಿಣಾಮವೆಂದರು. ಇದಕ್ಕೆ ಒಂದು ಸೂಕ್ತ ಉದಾಹರಣೆ ನಿಮಗಿಲ್ಲಿ ಅವಶ್ಯಕತೆಯಿದೆ, ನಮ್ಮೂರಿನ ಪಕ್ಕದಲ್ಲಿ ರಾಮನಾಥಪುರವೆಂಬ ಊರಿದೆ. ಅಲ್ಲಿನ ಸುಬ್ರಹ್ಮಣ್ಯ ದೇವಸ್ಥಾನ ಬಹಳ ಪ್ರಸಿದ್ದಿ ಕೂಡ. ಪ್ರತಿ ವರ್ಷಕ್ಕೊಮ್ಮೆ, ಅಲ್ಲಿ ಷಸ್ಠಿಯಂದು ಜಾತ್ರೆ ಕೂಡ ನಡೆಯುತ್ತದೆ. ಇತ್ತೀಚೆಗೆ ಉದ್ಭವ ದೇವರುಗಳಿಗೆ ಬರವಿಲ್ಲ. ನಾನು ಚಿಕ್ಕಂದಿನಲ್ಲಿದ್ದಾಗ ಆ ಸುತ್ತಮುತ್ತಲಿನ ಪ್ರದೇಶಕ್ಕೆಲ್ಲ ಇದೊಂದೆ ಸುಬ್ರಹ್ಮಣ್ಯ ದೇವಸ್ಥಾನವಿತ್ತು. ಭಕ್ತರ ಸಂಖ್ಯೆ ಹೆಚ್ಚಾದ್ದರಿಂದ, ಕೂಡಿಗೆ, ಕುಶಾಲನಗರ ಹೀಗೆ ಹಲವಾರು ಕಡೆ ಉದ್ಬವ ಮೂರ್ತಿಗಳ ಉದಯವಾಗಿದೆ. ಅಂದು ಆ ದೇವಸ್ಥಾನಕ್ಕೆ ಅಮ್ಮನ ಜೊತೆ ಹೋಗಿದ್ದೆ, ಅಮ್ಮನಿಗೆ ಪೂಜೆ ಪುರಸ್ಕಾರಗಳಲ್ಲಿ ಬಹಳ ಶ್ರದ್ದೆ, ಇಂದಿಗೂ ಕಡಿಮೆಯೆಂದರೂ ವಾರಕ್ಕೆ ಮೂರು ದಿನ ಒಪ್ಪತ್ತು ಮಾಡುತ್ತಾಳೆ. ಮಗನಿಗೆ ಒಳ್ಳೆ ಬುದ್ದಿ ಕೊಡುವೆಂಬುದೇ ಅವಳ ಎಂದಿನ ಬೇಡಿಕೆ. ಆ ದೇವರು ಅವಳಿಂದ ದಿನನಿತ್ಯ ಅರ್ಜಿ ಸ್ವೀಕರಿಸುತಿದ್ದಾನೆಯೇ ಹೊರತು ಅದನ್ನು ಕಾರ್ಯರೂಪಕ್ಕೆ ತರುತ್ತಿಲ್ಲ, ತರಲು ನಾನು ಸಹಕರಿಸುತ್ತಲೂ ಇಲ್ಲ. ಆ ದಿನ ಅಲ್ಲಿ ಪೂಜ ಸಾಮಗ್ರಿಗಳನ್ನು ಹಿಡಿದು ಒಳನಡೆದೆ, ೫ ರೂಪಾಯಿ ಕೇಳಿದ ಪೂಜಾರಿ, ನನ್ನ ಬಳಿ ಚಿಲ್ಲರೆಯಿಲ್ಲ ಎಂದು ೫೦ ರೂಪಾಯಿ ಕೊಡಲು ಹೋದರೆ ದಯವಿಟ್ಟು ಚಿಲ್ಲರೆ ಕೊಟ್ಟು ಸಹಕರಿಸಿ ಎಂದು ನೇತಾಕಿದ್ದ ಬೋರ್ಡ್ ಕಣ್ಣಿಗೆ ಕಂಡಿತು. ಹೊರ ಬಂದು ಚಿಲ್ಲರೆ ಪಡೆದು ಬರುವ ತನಕ ಅವನು ನನ್ನ ತೆಂಗಿನ ಕಾಯಿ ಕಡೆಗೆ ಮುಖ ಹಾಕಿರಲಿಲ್ಲ. ಅಂದು ಅವನ ಜನ್ಮ ಜಾಲಾಡಬೇಕೆನಿಸಿದರೂ ಅಮ್ಮ ಇದ್ದುದ್ದರಿಂದ ಹೊರ ಬಂದೆ. ಇದಾದ ನಂತರ ನನ್ನ ಮನಸಲ್ಲಿ ನಮ್ಮ ದೇವಸ್ಥಾನ, ದೇವರು , ಆಚರಣೆ ಇವೆಲ್ಲಾ ಬೇರೆ ಬೇರೆ ರೂಪದಲ್ಲಿ ಕಂಡು ನನ್ನನ್ನು ದೇವಸ್ಥಾನದಿಂದ ಬಲು ದೂರಕ್ಕೆ ಕರೆದೊಯ್ದವು. ಇಂಥಹ ಬದಲಾವಣೆ ನಡೆದದ್ದು ಒಂದೆರಡು ದಿನಗಳಲ್ಲಿ ಅಲ್ಲ, ಅದಕ್ಕೆ ವರುಶಗಳು ಕಳೆದಿವೆ. ಇದನ್ನು ಒಪ್ಪಿಕೊಳ್ಳಲು ಸ್ವತಃ ನನ್ನ ತಂದೆ ತಾಯಿಗಳೇ ಸಿದ್ದರಿಲ್ಲ.

ಈ ಬಗೆಯ ಚಿಂತನೆಗಳಿಂದ, ವಾಸ್ತವಿಕತೆಯ ನಿಟ್ಟಿನಿಂದ ನೋಡಿ ನಾನು ಬದಲಾಗುತ್ತ ಬರುತ್ತಿರುವುದನ್ನು ಹಲವು ಬಗೆಗಳಿಂದ ನೋಡಿ ವರ್ಣಿಸುತ್ತಾರೆ. ಆದರೇ, ನನಗೆ ನನಗನಿಸಿದ ಮಾರ್ಗದಲ್ಲಿ ನಡೆಯುವುದೇ ಸರಿಯೆಂದು ಕಾಣುವುದರಿಂದ ಅವರ ಮಾತಿಗೆ ಸೊಪ್ಪು ಹಾಕಲು ಹೋಗಿಲ್ಲ. ನನ್ನ ಇಂದಿನ ಈ ಬದಲಾವಣೆಯನ್ನು ನೀವು ಅದೃಷ್ಟವೆನ್ನುವಿರೋ! ಆಶ್ಚರ್ಯವೆನ್ನುವಿರೋ ಅದು ನಿಮಗೆ ಬಿಟ್ಟದ್ದು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...