21 ಜೂನ್ 2010

ಊರೆಂಬುದು ವಿನಾಶದ ಹಾದಿಯಲಿ!!!

ನಮಗೆ ಬಹಳಷ್ಟು ಸಾರಿ ಕಾಡುವ ಏಕೈಕ ಪ್ರಶ್ನೆ ನಾವು ಬದುಕುತ್ತಿರುವುದು ಎಲ್ಲಿ?ಎಂಥಹ ದೇಶದಲ್ಲಿ? ಎಂಥಹ ಸಮಾಜದಲ್ಲಿ?ಜನತೆ ಏಕೆ ಈ ಮಟ್ಟಿಗಿನ ಅಧೋಗತಿಗೆ ಇಳಿದಿದ್ದಾರೆ? ಅಲ್ಪ ಸ್ವಲ್ಪವೂ ಕೂಡ ನೈತಿಕತೆ, ಜವಬ್ದಾರಿ, ನೀತಿ ನಿಯತ್ತು ಇಲ್ಲದೇ ಹೀಗೆಕೆ? ಅದರಲ್ಲಿಯೂ ಹಳ್ಳಿಯ ಜನತೆಯಲ್ಲಿ ಇದು ಇಷ್ಟೊಂದು ತೀವ್ರತೆಯಲ್ಲಿ ಆಗುವುದಕ್ಕೆ ಕಾರಣವೇನು? ಇಂಥಹ ಸರಳ ಕೊಳಕು ಪ್ರಶ್ನೆ ನನಗೆ ಬಹಳಷ್ಟು ಬಾರಿ ಕಾಡಿದ್ದರೂ ಇತ್ತೀಚೆಗೆ, ಊರಿಗೆ ಹೋಗಿ ಬಂದಮೇಲೆ ಕಾಡುತ್ತಿರುವುದು ಹೆಚ್ಚು.ನನ್ನೂರಿನ ಬಗ್ಗೆ ಬಹಳ ಹಿಂದೆ ಸುಂದರವಾಗಿ ಬಣ್ಣಿಸಿದ್ದೆ, ಅದರ ಮತ್ತೊಂದು ರೂಪವೇ ಇಂದಿನ ಬಾನುಗೊಂದಿ.ನಮ್ಮೂರಿನ ಸೌಂದರ್ಯಕ್ಕೆ ಅತಿಮುಖ್ಯವಾಗಿದ್ದ, ನನ್ನೂರಿನ ಕಟ್ಟೆ, ಕಾವೇರಿ ನದಿಗೆ ೧೯೦೩ರಲ್ಲಿ ಕಟ್ಟಿದ್ದು, ಅದರ ಹಿನ್ನೀರಿನಲ್ಲಿ ಬಹಳ ರುಚಿಕರವಾದ ಮೀನುಗಳು ಸಿಗುತ್ತಿದ್ದವು, ಹಾಗೆಯೇ ಪಕ್ಕದಲ್ಲಿಯೇ ಇದ್ದ, ಚಿಕ್ಕಹೊಳೆ, ಹಳ್ಳ, ಹಳೆ ಕಾಲುವೆಯಲ್ಲಿ, ಕಣ್ಣಿಗೆ ಬಹಳ ಮುದು ನೀಡುವ ಪಕ್ಷಿಗಳು ಇದ್ದವು. ಇತ್ತೀಚೆಗೆ ನಾನು ಹಿಂದೆಂದೂ ಕಾಣದ ಪಕ್ಷಿಗಳು ಬರುತ್ತಿದ್ದವು.ಇದೆಲ್ಲದರ ಸವಿಯನ್ನು ನನ್ನ ಹಲವಾರು ಮಿತ್ರರು ಆನಂದಿಸಿದ್ದಾರೆ, ಅವರು ನನ್ನೂರಿಗೆ ಬಂದಾಗ ನಮ್ಮ ಮನೆಗಿಂತಲೂ ನದಿ ದಂಡೆಯಲ್ಲಿ, ಕಟ್ಟೆಯ ಮೇಲೆ ಕಾಲ ಕಳೆದು ಅದನ್ನುಉ ಸವಿದಿರುವುದೇ ಹೆಚ್ಚು. ಇಂಥಹ ಸೊಬಗಿದ್ದ ಊರು, ಇದ್ದಕ್ಕಿದ್ದ ಹಾಗೆ ಅಧೋಗತಿಗೆ ಇಳಿದಿದೆ ಎಂದರೇ, ನಂಬಲು ಅಸಾಧ್ಯ. ಮೊದಲನೆಯದಾಗಿ, ನಮ್ಮೂರಿನಲ್ಲಿ ಮರಳು ಎತ್ತುವುದು ಅತಿರೇಕಕ್ಕೆ ಹೋದದ್ದು. ನಾವು ಚಿಕ್ಕವರಿದ್ದಾಗಿನಿಂದಲೂ ಮರಳು ತೆಗೆಯುತ್ತಿದ್ದರೂ, ಅದು ಕೇವಲ ಬೇಸಿಗೆಯ ನಾಲ್ಕು ತಿಂಗಳಿನಲ್ಲಿ ನಡೆಯುತ್ತಿತ್ತು, ಆದರೇ, ಈಗ ೩೬೫ ದಿನಗಳು, ದೋಣಿಗಳಿಂದ ತೆಗೆಯಲಾರಂಬಿಸಿದರು.

ಮೊದಲಿನ ದಿನಗಳಲ್ಲಿ ಮರಳಿನ ಬೇಡಿಕೆ ಹೆಚ್ಚಾದ್ದರಿಂದ, ಜನರೇ ಮುಳುಗಿ ಮರಳು ಎತ್ತುತ್ತಿದ್ದರು. ಅದು ಆರೋಗ್ಯಕ್ಕೆ ಅದೆಷ್ಟು ಹಾನಿಕರವೆಂಬುದನ್ನು ಮರೆತು ಕೇವಲ ದುಡ್ಡಿನ ಆಸೆಗೆ ಬಲಿಯಾಗುತ್ತಿದ್ದರು.ಕಳೆದ ಎರಡು ವರ್ಷದಿಂದ ದೋಣಿಯಲ್ಲಿ ಹೋಗಿ ತೆಗೆಯುವುದು ಸಾಮಾನ್ಯವಾಗಿತ್ತು, ಆದರೇ ಈ ಬಾರಿ ನೋಡುವಾಗ, ದೋಣಿಗೆ ಮೋಟಾರು ಇರಿಸಿ ಮರಳು ಎತ್ತುವುದನ್ನು ಕಂಡು ನಿಬ್ಬೆರಗಾದೆ. ಇಂಥಹ ದುಸ್ಸಾಹಸಕ್ಕೆ ಕೈ ಹಾಕುವ ಮನಸ್ಸು ಹೇಗೆ ಬಂತು, ಇಡೀ ಮರಳನ್ನು ಒಂದೇ ಬಾರಿಗೆ ತೆಗೆದು ಬಿಡಬೇಕೆಂಬ ದುರಾಸೆ ಆದರೂ ಏಕೆ?ಚಿನ್ನದ ಮೊಟ್ಟೆಯ ಕಥೆಯಂತೆ, ಇಡೀ ನದಿಯನ್ನು ಸರ್ವನಾಶ ಮಾಡುತ್ತಿರುವುದನ್ನು ಕಂಡು ಬಹಳ ಬೇಸರಗೊಂಡೆ. ಕೇವಲ ಒಂದು ತಿಂಗಳಲ್ಲಿ ನದಿಯಲ್ಲಿದ್ದ ಅಷ್ಟೂ ಮರಳನ್ನು ಖಾಲಿ ಮಾಡಬಹುದೆಂದರೇ ನೀವೆ ಊಹಿಸಿಕೊಳ್ಳಿ ಅದರ ದುಷ್ಪರಿಣಾಮ. ಇದೆಲ್ಲದರ ಜೊತೆಗೆ, ನಮ್ಮೂರಿನ ಕಟ್ಟೆಯಲ್ಲಿ ಒಂದು ಜಲವಿದ್ಯುತ್ ಕಾರ್ಯಗಾರ ಶುರುವಾಗಲಿದೆ. ಜಲವಿದ್ಯುತ್ ಮಾಡುವುದು ಅನುಕೂಲಕರವಾದ ಸಂಗತಿ, ಆದರೇ ಅದರ ಲಾಭ ನಷ್ಟವನ್ನೂ ತಿಳಿಯಬೇಕಲ್ಲವೇ? ಇದರ ಕುರಿತು ಯಾರಲ್ಲಿಯೂ ಸಂಪೂರ್ಣ ಚಿತ್ರಣವಿಲ್ಲ. ಒಬ್ಬರೂ ೩ಮೆಗಾ ವ್ಯಾಟ್ ಎಂದರೇ, ಮತ್ತೊಬ್ಬರೂ, ೪, ಮಗದೊಬ್ಬ ೧೪, ೧೩ ಹೀಗೆ ಒಬ್ಬೊಬ್ಬರ ಬಾಯಿಯಲ್ಲಿಯೂ ಒಂದೊಂದು ಅಂಕಿಗಳು ಉದುರುತ್ತವೆ. ಹೋಗಲಿ, ಸಾಮಾನ್ಯರಿಗೆ ತಿಳಿಸುವ ಕಾಳಜಿಯೂ ಇಲ್ಲದ ಕಂಪನಿಯವರು.

ನಾನು ಅಲ್ಲಿದ್ದವರನ್ನು ಕೇಳಿದರೇ, ಯಾರಿಗೂ ಅದರ ಬಗ್ಗೆ ಅರಿವಿಲ್ಲ. ಊರಿನ ನಾಲ್ಕು ಜನರನ್ನು ಕೇಳೋಣವೆಂದು ಬಂದರೇ, ಇವರ ಮನೆಯಿಂದಲೇ ವಿದ್ಯುತ್ ತಯಾರಿಸುವವರಂತೆ, ದೇಶಕ್ಕೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ವಿದ್ಯುತ್ ಬರಲಿ ಬಿಡಿ ಎನ್ನುತ್ತಾರೆ. ಅಲ್ಲಾ ಮಾರಾಯ ವಿದ್ಯುತ್ ಬರಲಿ ಬೇಡ ಅಂತ ಅಲ್ಲ, ಎಷ್ಟು ವಿದ್ಯುತ್ ಬರುತ್ತೇ? ಅದರಿಂದ ಊರಿಗೆ ಏನು ಲಾಭ? ಆ ವಿದ್ಯುತ್ ಅನ್ನು ಯಾರಿಗೆ ಮಾರುತ್ತಾರೆ?ಏನ್ ಕಥೆ? ಎಂದರೇ ಯಾರಿಗೋ ಒಳ್ಳೆದು ಆಗಲಿ ಬಿಡು, ಎನ್ನುತ್ತಾರೆ. ಇಂಥಹ ಮಹಾನ್ ಪುರುಷರು ಸಿಗುತ್ತಾರಾ? ಅದೇ ಜನ ಒಂದು ದಿನ ತಡವಾಗಿ ಗದ್ದೆಗೆ ನೀರು ಹಾಯಿಸು ಎಂದರೇ ಅಥವಾ ನಾನು ನೀರು ಬಿಟ್ಟ ಮೇಲೆ ನೀನು ನೀರು ಬಿಡು ಎಂದರೇ ಪಕ್ಕದ ಮನೆಯವನ ಜೊತೆಯಲ್ಲಿ ದಿನಗಟ್ಟಲೇ ಜಗಳ ಮಾಡುತ್ತಾನೆ. ಇಂಥಹ ಜನ, ತಾವೆಲ್ಲರೂ ಒಗ್ಗಟ್ಟಾಗಿ ನಿಂತು ಉತ್ಪಾದಿಸುವ ವಿದ್ಯುತ್ ಅನ್ನು ನಮಗೂ ನೀಡಬೇಕೆಂದು ಕೇಳುವುದಿಲ್ಲ, ಆಗುವ ಹಾನಿಗೆ ನಷ್ಟ ತುಂಬಿಕೊಡು ಎಂದು ಕೇಳುವುದಿಲ್ಲ, ಯಾಕೆಂದರೇ, ಅಲ್ಲಿರುವ ಜಮೀನು ಯಾರದ್ದೊ ಆಗಿರುತ್ತದೆ, ಅವನು ಬಡವನಾಗಿರುತ್ತಾನೆ. ಅರ್ಧ ಎಕರೆ ಜಮೀನು ಇರುವ ಹಿಡುವಳಿದಾರ ಇಂಥವರ ವಿರುದ್ದ ದನಿಯೆತ್ತಲಾರ.ಅದೆಲ್ಲಾ ಹೋಗಲಿ ಎಂದರೇ, ಎರಡು ಲಕ್ಷ ರೂಪಾಯಿಗೆ, ನಾಲ್ಕೈದು ಎಕರೆ ಊರಿನ ಜಮೀನು, ಗೋಮಾಳ, ಅಲ್ಲಿದ್ದ ಮರಮುಟ್ಟು ಎಲ್ಲವನ್ನು ಕಳೆದುಕೊಳ್ಳಲು ತಯಾರಿದ್ದಾರೆ. ಇದಕ್ಕೆ ಮುಖ್ಯ ಕಾರಣ ನನ್ನ ಬಳಿಯಲ್ಲಿ ದನವಿಲ್ಲ, ಅಥವಾ ಆ ಸ್ಥಳದಲ್ಲಿ ನಾನು ದನ ಮೇಯಿಸುವುದಿಲ್ಲ, ಯಾರಿಗೋ ಆಗುವುದರ ಬದಲು ಮುಳುಗಡೆಯಾಗಲಿ ಎನ್ನುವ ನೀಚತನವೂ ತುಂಬಿರುತ್ತದೆ.

ಹಳ್ಳಿಯವನು ಎಂದಿಗೂ ವಿಶಾಲ ಹೃದಯದಿಂದ ನೋಡುವುದಿಲ್ಲ. ಅವನದು ಬಹಳ ಸಣ್ಣತನದ ಬುದ್ದಿ, ಅವನಿಗೆ, ಅವನು ಮತ್ತು ಪಕ್ಕದ ಮನೆಯವನು ಅಷ್ಟೇ ಪ್ರಪಂಚ. ಊರು ಮುಳುಗಿದರೂ, ಹಾಳಾದರೂ ಸರಿ ಪಕ್ಕದ ಮನೆಯವನು ನನಗಿಂತ ೫ ನಿಮಿಷ ಮುಂಚಿತವಾಗಿ ಸತ್ತರೆ ಸಾಕೆಂದು ಬಯಸುತ್ತಾನೆ. ಇಂಥಹ ನೀಚ ಬುದ್ದಿ, ಬಂದಿದ್ದಾದರೂ ಹೇಗೆ? ಇಡೀ ಊರು ಒಂದು ಎಂದು ಬೀಗುತ್ತಿದ್ದವ ರಾತ್ರೋ ರಾತ್ರಿ ಈ ಕೆಳಮಟ್ಟಗಿನ ಕೊಳಕುತನಕ್ಕೆ ಇಳಿಯಲು ಕಾರಣ? ಸ್ವಾರ್ಥವೆಂಬುದು ಉತ್ತುಂಗಕ್ಕೆ ಏರಿದ್ದ? ನಾನು ಕಂಡಂತೆ ನಮ್ಮೂರು ಎಂದರೇ ಒಗ್ಗಟ್ಟು ಊರಿಗಾಗಿ ಏನು ಬೇಕಾದರೂ ಮಾಡುವ ಜನ ಎನ್ನುತ್ತಿದ್ದವರು, ಊರನ್ನು ಮಾರಿಕೊಳ್ಳಲು ನಿಂತಿದ್ದು, ವಿನಾಶಕ್ಕೆ ವಿಪರೀತಿ ಬುದ್ದಿ ಎನ್ನುವುದನ್ನು ಸಾಬೀತುಪಡೀಸಲೇ??

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...