26 ಅಕ್ಟೋಬರ್ 2010

ಸ್ನೇಹವೆಂದಿಗೂ ನಿಸ್ವಾರ್ಥವೇ ಸರಿ.....!!!!!

ನಾನು ಆಗ್ಗಾಗ್ಗೆ ಹೇಳುತ್ತಲೇ ಇರುತ್ತೇನೆ, ಪ್ರೀತಿಯೆಂಬುದು ಸ್ವಾರ್ಥದಿಂದ ತುಂಬಿದೆ, ನಿಸ್ವಾರ್ಥ ಪ್ರಿತಿಯ ಅವಶ್ಯಕತೆ ಜಗತ್ತಿನ ಏಳಿಗೆಗೆ ಬಹಳ ಮುಖ್ಯವಾಗಿದೆ. ನಿಸ್ವಾರ್ಥ ಪ್ರೀತಿ, ಸೌಹಾರ್ದತೆಯನ್ನು ತರಲು, ಗಾಂಧೀಜಿ, ಬುದ್ದ, ಏಸು ಎಲ್ಲರೂ ಪ್ರಯತ್ನಿಸಿದರು. ಆದರೇ ಪ್ರಯತ್ನಿಸಿದಷ್ಟೂ ದೂರಕ್ಕೆ ಹೋಗಿ ಇಂದೂ ಮರೀಚಿಕೆಯಾಗಿದೆ. ನನ್ನ ಜೀವನದಲ್ಲಿಯೂ ಒಮ್ಮೊಮ್ಮೆ ಇಂಥಹ ಸನ್ನಿವೇಶಗಳಿಂದ, ಜನರಿಂದ ಮೋಸವಾಗಿರುವುದು ಸಾಮನ್ಯವೆನಿಸಿದರೂ, ನಾನೆಂದು ಪ್ರೀತಿಸುವುದರಿಂದ ಹಿಂಜರಿದಿಲ್ಲ. ಒಬ್ಬರಿಗೆ ಸಹಾಯಮಾಡುವ ಮುನ್ನವೇ ಅವರಿಂದ ಏನಾದರೂ ಸಿಗುವುದೇ? ಅಥವಾ ನಾನು ಸಹಾಯ ಮಾಡಿದರೇ ಅದರಿಂದಾಗುವ ಉಪಯೋಗವೇನು? ಎಂದು ಲೆಕ್ಕಾಚಾರ ಹಾಕುವ ಮಂದಿ ಬಹಳಷ್ಟಿದ್ದಾರೆ. ಅಂತಹ ಜನರ ನಡುವೆಯೂ ಅಪರೂಪಕ್ಕೊಮ್ಮೆ ಅಪರೂಪದ ಸ್ನೇಹಿತರು ಸಿಗುತ್ತಾರೆ. ಅವರು ನಿಮಗಾಗಿ ಏನು ಬೇಕಿದ್ದರೂ ಮಾಡಲು ಸಿದ್ದರಿರುತ್ತಾರೆ, ಅದೊಂದು ನಿಸ್ವಾರ್ಥ ಪ್ರೀತಿ, ಆದರೇ ನಿಮ್ಮ ಹೆಜ್ಜೆ ತಪ್ಪಿಟ್ಟ ಮರುಕ್ಷಣವೇ ಎಚ್ಚರಿಸುತ್ತಾರೆ, ಹೆದರಿಸುತ್ತಾರೆ. ಅವರಿಗೆ ನಿಮ್ಮ ಜೀವನ ಪೂರ್ತಿ ಕೃತಜ್ನರಾಗಿದ್ದರೂ ಕಡಿಮೆಯೇ ಸರಿ. ಅಂಥವರ ಪಟ್ಟಿಗೆ ಸೇರುವ ನನ್ನ ಕೆಲವು ಗೆಳತಿಯರಿದ್ದಾರೆ, ಮೊದಲನೆಯವಳು ರೆಜಿನಾ, ಮೈಸೂರಿನಲ್ಲಿಯೇ ಹುಟ್ಟಿ ಬೆಳೆದಿರುವ ರೆಜಿನಾಳಿಗೆ, ಸ್ನೇಹಿತರೂ, ಕಷ್ಟದಲ್ಲಿರುವವರೆಂದರೇ ಎಲ್ಲಿಲ್ಲದ ಕಾಳಜಿ. ಇಂಥಹವಳೊಬ್ಬಳು ನನಗೆ ಸ್ನೇಹಿತೆಯಾಗಿರುವುದು ನಿಜಕ್ಕೂ ನಾನು ಹೆಮ್ಮೆ ಪಡುವಂತಹದ್ದೆ, ನನಗೆ ಅವಳು ಪರಿಚಯವಾಗಿ ಎರಡು ವರ್ಷವಾಗಿದೆ. ಈ ಎರಡು ವರ್ಷದಲ್ಲಿ ನಾನು ಅವಳಿಂದ ಕಲಿತಿರುವ ವಿಷಯಗಳು ಹಲವಾರು. ಅವಳು ಬಡವರಿಗೆ, ಇಲ್ಲದವರಿಗೆ, ದೀನರಿಗೆ, ಸಹಾಯ ಮಾಡುವುದರಲ್ಲಿ, ಪರಿಸರದ ಬಗೆಗೆ, ಕೃಷಿ, ಅದರಲ್ಲಿಯೂ ಸಾವಯವ ಕೃಷಿ ಬಗೆಗೆ ಅವರಿಗೆ ಇರುವ ಧ್ಯೇಯ ಮೆಚ್ಚಲೇ ಬೇಕಾದ್ದದ್ದು. ಬೆಳ್ಳಿಗ್ಗೆಯಿಂದ ಸಂಜೆಯವರೆಗು ಕಚೇರಿಯಲ್ಲಿ ಕೆಲಸ ಮಾಡಿ ಬಂದು, ಸಂಜೆ ಅಂಗವೈಕಲ್ಯವಿರುವ ಮಕ್ಕಳಿಗೆ ಮನೆ ಪಾಠವನ್ನು ಉಚಿತವಾಗಿ ಹೇಳಿಕೊಡುತ್ತಾಳೆ. ದುಡ್ಡು ಕೊಟ್ಟರೂ ನಿಗವಹಿಸಿಕೊಂಡು ಪಾಠ ಹೇಳಿಕೊಡದ ಜನರಿರುವಾಗ ಉಚಿತವಾಗಿ ಅದೂ ಬುದ್ದಿ ಮಾಂಧ್ಯ ಮಕ್ಕಳಿಗೆ ಪಾಠ ಹೇಳಿಕೊಡುವುದು ನನಗಂತೂ ಹೆಮ್ಮೆಯ ವಿಷಯ. ರೆಜಿನಾ ಆಗ್ಗಾಗ್ಗೆ, ಅವರ ಸಂಸ್ಥೆಯವರು ನಿರ್ಮಿಸಿರುವ ಸಂಶೋಧನ ಕೇಂದ್ರಕ್ಕೆ, ಹೋಗುತ್ತಿರುತ್ತಾರೆ. ಮಹಾದೇವಪುರದಲ್ಲಿರುವ ಅವರ ಕ್ಷೇತ್ರ ಕೇಂದ್ರದಲ್ಲಿ ಅವರು ಲವಲವಿಕೆಯಿಂದ ಎಲ್ಲಾ ತರಬೇತಿ ಶಿಬಿರವನ್ನು ನಡೆಸಿಕೊಡುವುದಂತೂ ನಿಜಕ್ಕೂ ಖುಷಿ ನೀಡುತ್ತದೆ.
ಅವರು ನಡೆಸುವ ಶಿಬಿರ ತನ್ನ ಉದ್ದೇಶವನ್ನು ತಲುಪಲೇಬೇಕೆಂದು ಹಟಹಿಡಿದು, ಎಲ್ಲಾ ವರ್ಗದವರನ್ನು ತಂದು ಸಾವಯವ ಕೃಷಿ ಬಗೆಗೆ ಅರಿವು ಮೂಡಿಸುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳು, ರೈತರು, ಉದ್ಯೋಗಿಗಳು ಹೀಗೆ ಎಲ್ಲಾ ವಿಧದವರನ್ನು ಮುಖ್ಯವಾಹಿನಿಗೆ ತರುತ್ತಿದ್ದಾರೆ. ಎಂದೂ ಅವಳ ಮುಖದಲ್ಲಿ ನೊಂದ ಅಥವಾ ದಣಿದ ಭಾವನೆಯನ್ನೇ ನಾನು ಕಂಡಿಲ್ಲ. ನಾನು ಅವಳನ್ನು ರೇಗಿಸುತ್ತಿರುತ್ತೇನೆ, ಇಷ್ಟೆಲ್ಲಾ ಶಕ್ತಿ ನಿನಗೆ ಎಲ್ಲಿಂದ ಬರುತ್ತದೆ, ನಿನ್ನಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ನನಗೂ ಸ್ವಲ್ಪ ನೀಡು ಎಂದು. ತಾಳ್ಮೆ ಸಹನೆಯ ವಿಷಯದಲ್ಲಿಯಂತೂ ಅವಳನ್ನು ಮೀರಿಸುವ ಮತ್ತೊಬ್ಬ ಹೆಣ್ಣನ್ನು ನಾನು ಕಂಡಿಲ್ಲ. ಇದೆಲ್ಲದಕ್ಕಿಂತಲೂ ಬಹಳ ಮೆಚ್ಚುಗೆಯಾಗುವ ವಿಷಯ ಅವಳು ಅವರ ಮಗನನ್ನು ಬೆಳೆಸುವ ರೀತಿ ಅಚ್ಚರಿಯುಂಟಾಗಿಸುತ್ತದೆ. ಎಂಟನೆಯ ತರಗತಿ ಓದುತ್ತಿರುವ ಅವರ ಮಗನನ್ನು ಸ್ನೇಹಿತನಂತೆಯೇ ಕಾಣುತ್ತಾಳೆ. ಎಲ್ಲವನ್ನು ಚರ್ಚಿಸುತ್ತಾರೆ, ಮಗನೂ ಅಷ್ಟೇ ಎಂಟನೆಯ ತರಗತಿಯ ತುಂಟತನವಿಲ್ಲ, ಕುತೂಹಲವಿದೆ, ತಿಳಿಯಬೇಕೆಂಬ ಹಂಬಲವಿದೆ.
ನನ್ನ ರೆಜಿನಾ ವಿಷಯದಲ್ಲಿ ಹೇಳಬೇಕೆಂದರೇ, ರೆಜಿನಾಳಿಂದ ಕಲಿತ್ ವಿಷಯಗಳು, ತಾಳ್ಮೆಯಿಂದರಬೇಕು, ಜೀವನದಲ್ಲಿ ಒಳ್ಳೆಯದನ್ನು ಬಯಸುವ ಮನಸ್ಸಿದ್ದರೇ ಸದಾ ಒಳ್ಳೆಯದಾಗುತ್ತದೆ. ಏನನ್ನು ಬಯಸದೇ ಸಹಾಯ ಮಾಡಬೇಕು. ಈ ಜನ್ಮದಲ್ಲಿ ಎಷ್ಟೂ ಸಾಧ್ಯವೋ ಅಷ್ಟೂ ಸಹಾಯ ಮಾಡಬೇಕು. ನಾವು ಆದಷ್ಟೂ ಬೇಡುವುದನ್ನು ನಿಲ್ಲಿಸಬೇಕು. ಯಾವುದಕ್ಕೂ ಯಾರ ಬಳಿಯಲ್ಲಿಯೂ ಬೇಡಬಾರದು. ನಮ್ಮ ಕೆಲಸವನ್ನೂ ನಾವೇ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಅನಿವಾರ್ಯತೆವಿಲ್ಲದ ಹೊರತು ಬೇಡಬಾರದು. ಸಂಯಮ, ಶಾಂತಿ, ಸಹನೆ, ಪ್ರೀತಿ, ಸ್ನೇಹ ಇವೂ ಬಾಳಿನ ಮುಖ್ಯ ವಸ್ತುಗಳು.
ಎರಡನೆಯ ವ್ಯಕ್ತಿ ಪವಿತ್ರಾ, ಪವಿತ್ರಾ ನನ್ನ ಜೊತೆಯಲ್ಲಿ ಎಂಎಸ್ಸಿ ಓದಿದವಳು. ನಮ್ಮ ಸ್ನೇಹ ಆರು ವರ್ಷದ್ದಾದರೂ ಇತ್ತೀಚಿನ ದಿನಗಳಲ್ಲಿ ಹೊಂದಾಣಿಕೆ ಜಾಸ್ತಿ ಆಗಿರುವುದು ಸತ್ಯ. ಇಡೀ ತರಗತಿಯೇ ನನ್ನ ವಿರುದ್ದ ದನಿಯೆತ್ತಿದ ಸಮಯದಲ್ಲಿ ನನ್ನ ನೆರವಿಗೆ, ಬೆಂಬಲಕ್ಕೆ ಬಂದವಳು ಪವಿತ್ರ. ನಾವು ಕಾಲೇಜಿನಲ್ಲಿ ಮಾಡಿದ ಎಲ್ಲಾ ಸಮಾರಂಭಗಳು, ಪ್ರವಾಸಗಳು, ಯಶಸ್ವಿಯಾಗಲು ಕಾರಣವಾದದ್ದು ನನ್ನ ಜೊತೆಗಿದ್ದು ಸಹಕರಿಸಿದ ಪವಿತ್ರಾಳಿಂದ. ಅವಳು ಶ್ರಮ, ನೆರವು, ಒಳ್ಳೆತನ ಯಾರಿಗೂ ತಿಳಿದಿರಲಿಲ್ಲ. ಅವಳು ಎಲೆ ಮರೆಯ ಕಾಯಿಯಂತೆಯೇ ಇದ್ದಳು. ಇಂದಿಗೂ ಅಷ್ಟೇ ನನ್ನ ಪಿಎಚ್ ಡಿ ವಿಷಯದಲ್ಲಿಯೂ ಅಷ್ಟೇ ನನಗೆ ಸಹಾಯ ಮಾಡಿ ನನ್ನನ್ನು ಬೆಂಬಲಿಸಿದ್ದು, ರೆಜಿನಾ ಮತ್ತು ಪವಿತ್ರಾವೆಂದರೇ ತಪ್ಪಿಲ್ಲ. ಇವರಿಬ್ಬರು ಇಲ್ಲದಿದ್ದರೇ ನಾನು ಪಿಎಚ್ ಡಿಯನ್ನು ಮಾಡುತ್ತಿದ್ದೆನಾ ಎನ್ನುವಷ್ಟೂ ಅನುಮಾನ ಬರುತ್ತದೆ. ಹಲವು ಬಾರಿ ಹೇಳಿದ್ದೇನೆ, ಈ ಪಿಎಚ್ ಡಿಯಲ್ಲಾ ಬೇಕಾ ಎಂದು. ಪವಿತ್ರಾನ ವಿಷಯದಲ್ಲಿಯೂ ಅಷ್ಟೇ ಅವಳ ಒಳ್ಳೆತನವನ್ನು ದುರುಪಯೋಗಪಡೆದುಕೊಳ್ಳುವವರೇ ಹೆಚ್ಚು. ವಿಭಾಗದಲ್ಲಿ ಪವಿತ್ರಾ ಕಷ್ಟಪಟ್ಟು ಕೆಲಸ ಮಾಡಿದರೂ ಅದರ ದುರುಪಯೋಗ ಪಡೆದು ಅವರ ಹೆಸರು ಹಾಕಿಸಿಕೊಂಡು ಮೆರೆಯುವವರೇ ಹೆಚ್ಚು. ಇದು ಸಾಮಾನ್ಯ ಸಂಗತಿಯಾಗಿ ಹೋಗಿದೆ. ಇನ್ನೊಬ್ಬರ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವುದು. ಅಲ್ಲಿ ನೈತಿಕತೆಯ ವಿಷಯವೇ ಬರುವುದಿಲ್ಲ. ಅವರಿಗೆ, ನೀತ ನಿಯತ್ತು, ನೈತಿಕತೆ, ಧರ್ಮ ಅಧರ್ಮವೆಂಬುದು ಕಾಣಿಸುವುದಿಲ್ಲ. ಸ್ನೇಹವೆಂಬ ಪದಕ್ಕೂ ಅರ್ಥವಿರುವುದಿಲ್ಲ.

1 ಕಾಮೆಂಟ್‌:

  1. I am truly happy to see your blog not because it contains praises for me but because you have seen good in people like me and other friends...
    I appreciate!!!

    In all this, I wish to say that I have learnt some things from you... Its a continuous exchange. As you say... Friendship only gives and never expects anything in return.

    True to your words, I honour friendship a lot and am crazy about my pals!!!

    Keep going and may you always be an INSPIRING WRITER!!!intermixed with humour!!! I enjoy your humour quotes here and there....

    I still have not forgotten what you wrote on the Ombathu gudda experience.Ha Ha... when you write and a reader reads, YOUR WORDS REMAIN AND LINGER ON....in the minds and hearts of your readers :)

    Thanks again though I know I do not deserve so much applause.

    Cheers and God bless!!!
    Regina

    ಪ್ರತ್ಯುತ್ತರಅಳಿಸಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...