08 ಸೆಪ್ಟೆಂಬರ್ 2015

ಕಲಿಕೆಯಲ್ಲಿ ಎಲ್ಲರೂ ಶಿಷ್ಯರೇ ಎಂದೆಂದಿಗು ಶಿಷ್ಯರೇ! ನನಗೆ ನೀವೆಲ್ಲರೂ ಗುರುಗಳೇ, ಎಂದೆಂದಿಗೂ ಗುರುಗಳೇ.

ನಮಸ್ಕಾರ ಮೊದಲಿಗೆ ಶಿಕ್ಷಕರ ದಿನಾಚಾರಣೆಯ ಶುಭಾಶಯಗಳು ಮತ್ತು ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡು ಮಕ್ಕಳ ಭವಿಷ್ಯ ರೂಪಿಸುವುದಕ್ಕೆ ನಿಂತಿರುವ ಪ್ರಪಂಚದ ಎಲ್ಲಾ ಶಿಕ್ಷಕರಿಗೂ ನನ್ನ ಅನಂತ ವಂದನೆಗಳು. ಹರೀಶ ಬರೆಯುವುದನ್ನೆ ನಿಲ್ಲಿಸಿದ, ಅವನಲ್ಲಿದ್ದ ಸರಕು ಖಾಲಿಯಾಯಿತು, ಇದೆಲ್ಲಾ ಮೂರು ದಿನದ ಬದುಕು ಎಂದು ನೀವು ಭಾವಿಸಿ, ನಿರ್ಧರಿಸುವ ಮುನ್ನವೇ, ಬರವಣಿಗೆ ಮತ್ತೊಮ್ಮೆ ಉಸಿರು ತುಂಬವ ಪ್ರಯತ್ನ ಮಾಡಿದ್ದೇನೆ. ಇನ್ನು ಮುಂದೆ ನನ್ನೆಲ್ಲಾ ಹೆಜ್ಜೆಗಳು ಬರವಣಿಗೆಯ ಮೂಲಕ ನಿಮ್ಮನ್ನು ಸೇರಲು/ ಸೇರಿಸಲು ಬಯಸುತ್ತೇನೆ. ಇಲ್ಲಿಯವರೆಗೂ ಅವರಿವರ ಕಾಲೆಳೆದು ನಿಮ್ಮ ಮುಂದೆ ಬರುತ್ತಿದ್ದ ಅಕ್ಷರಗಳು ಇನ್ನು ಮುಂದೆ ತಟಸ್ಥವಾಗಿರುತ್ತವೆಂದು ತಿಳಿಸುತ್ತೇನೆ. ತಟಸ್ಥವೆಂದರೇ, ಯಾರನ್ನೂ ಹಿಯಾಳಿಸದೇ ನನ್ನ ವಿಚಾರಗಳನ್ನು ಪ್ರಸ್ತಾಪಿಸುತ್ತೇನೆಂದರ್ಥ.
ಮೊದಲ ಸಾಲುಗಳು ನಿಮ್ಮ ಕಿವಿಗೆ ಮುಟ್ಟಿದ ತಕ್ಷಣವೇ ನೀವು ಈ ಲೇಖನದ ವಿಷಯವೇನೆಂದು ನಿರ್ಧರಿಸಿದ್ದೀರೆಂಬುದು ಗೊತ್ತು, ಅದಲ್ಲದೇ ಲೇಖನದ ತಲೆಬರಹವೇ ತಿಳಿಸಿದೆ ಒಳಗಿರುವ ತಿರುಳು ಗುರುಗಳ ಬಗ್ಗೆಯೆಂದು. ಗುರುಗಳಲ್ಲಿ ಒಳ್ಳೆಯವರು, ಕೆಟ್ಟವರೆಂಬವರಿಲ್ಲ, ಗುರುಗಳೆಂದರೇ ಗುರುಗಳು. ಗುರುಗಳಿಗೆ ಸಾಟಿಯಾದವರು ಮತ್ತೊಬ್ಬರಿಲ್ಲ. ತಾಯಿ ಹೇಗೆ ತನ್ನ ಮಗುವೇ ನನ್ನ ಸರ್ವಸ್ವ ಎನ್ನುವಳೋ ಹಾಗೇಯೇ ಗುರುವೂ ಅಷ್ಟೇ ತನ್ನ ಶಿಷ್ಯರೇ ಶ್ರೇಷ್ಠ ಎನ್ನುವವರು. ಪೀಠಿಕೆ ಅತಿಯಾಯಿತು ವಿಷಯಕ್ಕೆ ಬರೋಣ. ನಾನು ಹುಟ್ಟಿದ್ದು ಕುಶಾಲನಗರದ ಆಸ್ಪತ್ರೆಯಲ್ಲಿ, ಎಲ್ಲಾ ದಾದಿಯರು ಊಟಕ್ಕೆ ಹೋಗಿದ್ದ ಸಮಯದಲ್ಲಿ ಮಧ್ಯಾಹ್ನ ೧೨.೫೫ಕ್ಕೆ ಆತುರಾತುರವಾಗಿ ಯಾರ ನೆರವಿಲ್ಲದೇ ಅಮ್ಮನ ಹೊಟ್ಟೆಯಿಂದ ಹೊರಬಂದನಂತೆ. ಅದಕ್ಕೆ ಇರಬೇಕು, ನಾನು ಯಾರ ಸಹಾಯವಿಲ್ಲದೇ ಬದುಕಬಲ್ಲೇ ಎಂಬ ಅಹಂ ನನ್ನ ಬೆನ್ನತ್ತಿತ್ತು, ಇತ್ತೀಚೆಗೆ ಅದು ಅಳಿಸಿಹೋಗುತ್ತಿದೆ, ನೀವಿಲ್ಲದೇ ನಾನಿಲ್ಲವೆಂಬ ಅರಿವಾಗಿದೆ.
ನಾನು ಹುಟ್ಟಿದ ನಾಲ್ಕು ವರ್ಷದ ನಂತರ ನನಗೆ ಶಿಕ್ಷಣ ಪರಿಚಯವಾಯಿತು, ಅಥವಾ ನನ್ನನ್ನು ಶಿಕ್ಷಣಕ್ಕೆ ಪರಿಚಯಿಸಲಾಯಿತು. ಇಲ್ಲಿ ಬರುವ ಎಲ್ಲಾ ಸಾಲುಗಳು ನನ್ನ ನೆನಪಿನ ಹೊತ್ತಿಗೆಯಿಂದು ಹೆಕ್ಕಿ ತೆಗೆದದ್ದು, ಇಲ್ಲಿ ಸರಿ ತಪ್ಪುಗಳಿಗೆ ಸ್ಥಳವಿಲ್ಲ. ಮನಸ್ಸಿಗೆ, ಅದರಲ್ಲಿಯೂ ನನ್ನ ಮನಸ್ಸಿಗೆ ಕಂಡದ್ದು ಮಾತ್ರ ಪ್ರಸ್ತುತ. ಇರುವ ಸಾಲುಗಳನ್ನು ಹಾಗೆಯೇ ಓದಿಕೊಳ್ಳಿ, ನಿಮ್ಮ ಸ್ವಂತ ಅಭಿಪ್ರಾಯಗಳನ್ನು ಸೇರಿಸಬೇಡಿ. 
ನನ್ನ ಮೊದಲ ಗುರು ಸರೋಜ ಟೀಚರ್ ಅಥವಾ ಸರೋಜಕ್ಕ.. ಇವರು ನಮ್ಮೂರು, ಬಾನುಗೊಂದಿಯಲ್ಲಿದ್ದ ಅಂಗನವಾಡಿಯ ಉಸ್ತುವಾರಿ ಟೀಚರ್. ಅವರಿಗಿದ್ದ ಶ್ರದ್ದೆ, ಮಕ್ಕಳ ಬಗೆಗಿನ ಕಾಳಜಿ, ಊರು, ಕಲೆ, ಸಂಸ್ಕೃತಿಯ ಕಡೆಗಿದ್ದ ಪ್ರೀತಿ ಅಗಾಧವಾದದ್ದು. ನಮ್ಮೂರಿನಲ್ಲಿ ರಾಜ್ಯ ಮಟ್ಟದ ಜಾನಪದ ಮೇಳ ನಡೆಸಿದ್ದರು, ಅದೂ ಎಂಬತ್ತರ ದಶಕದಲ್ಲಿಯೇ. ಅವರು ಹೇಳಿಕೊಡುತ್ತಿದ್ದ ರೀತಿಯೇ ಹಾಗಿರುತ್ತಿತ್ತು. ಕಥೆ, ಪದ್ಯ ಹೇಳುವಾಗ ತಲ್ಲೀನರಾಗುತ್ತಿದ್ದರು, ಮಕ್ಕಳೊಂದಿಗೆ ಮಕ್ಕಳಾಗುತ್ತಿದ್ದರು. ಅವರು ಅಂದು ಹೇಳಿಕೊಟ್ಟ, ಅಕ್ಷರ, ಕಾಗುಣಿತ, ಮಗ್ಗಿ, ಪದ್ಯಗಳು ನನ್ನನ್ನು ಬಹಳ ಆವರಿಸಿದವು. ನಾನು ಪ್ರಾಥಮಿಕ ಶಾಲೆಗೆ ಸೇರಿದ ನಂತರವು ಶಿಶುವಿಹಾರಕ್ಕೆ ಹೋಗಿ ಸಮಯ ಕಳೆಯುತ್ತಿದ್ದೆ. ಊಟದ ಸಮಯ ಒಂದರಿಂದ ಎರೆಡಿರುತ್ತಿತ್ತು, ಅಂಗನವಾಡಿ ಒಂದೂವರೆಗೆ ಬಿಡುತ್ತಿತ್ತು, ಅರ್ಧಗಂಟೆ ಅಲ್ಲಿಗೆ ಹೋಗಿ ಸಮಯ ಕಳೆಯುತ್ತಿದ್ದೆ. ಬಾಲ್ಯದಲ್ಲಿ ಪ್ರತಿ ಕ್ಷಣವನ್ನು ಆನಂದಿಸುವಂತೆ ಮಾಡಿದ ಸರೋಜ ಟೀಚರ್ ನನ್ನ ಜೀವನದಲ್ಲಿಯೇ ಮರೆಯದ ಮಾಣಿಕ್ಯವಾಗಿದ್ದಾರೆ.
ಅಲ್ಲಿಂದ ನಂತರ ದೂಡಿದ್ದು, ನಮ್ಮೂರಿನ ಪ್ರಾಥಮಿಕ ಶಾಲೆಗೆ, ನಾನು ಇದೇ  ಶಾಲೆಯಲ್ಲಿ ಒಂದರಿಂದ ಏಳನೆಯ ತರಗತಿಯವರೆಗೂ ಓದಿದೆ. ಈ ಏಳು ವರ್ಷದ ಸಮಯದಲ್ಲಿ ಬಹಳಷ್ಟು ಮಂದಿ ಶಿಕ್ಷಕರು ಬಂದರು. ಕೆಲವು ಶಿಕ್ಷಕರು ನಮ್ಮನ್ನು ಗೇಲಿ ಮಾಡಿದರು, ಹಲವು ಮಾಸ್ಟರನ್ನು ನಾವು ಗೇಲಿ ಮಾಡಿದೆವು. ಅದೇನೇ ಇದ್ದರೂ, ಆ ಸಮಯಕ್ಕೆ ಕೆಲವು ಶಿಕ್ಷಕರು ನಮ್ಮ ನೆಚ್ಚಿನ ಗುರುಗಳಾದರು. ಬಾನುಗೊಂದಿಯೆಂಬ ಸುಂದರ ಗ್ರಾಮ, ಕೊಣನೂರಿನಿಂದ ನಾಲ್ಕು ಕೀಮೀ ದೂರವಿದ್ದು, ಅಲ್ಲಿಗೆ ಯಾವ ಬಸ್ಸು ಸೌಕರ್ಯವೂ ಇರಲಿಲ್ಲ. ಎಲ್ಲರೂ ನಡೆದುಕೊಂಡು ಅಥವಾ ಬೈಸಿಕಲ್ಲಿನಲ್ಲಿ ಬರಬೇಕಿತ್ತು, ಸ್ಕೂಟರು, ಕಾರು ದೂರದ ಮಾತು ಅಲ್ಲಾ ದೂರದ ದೃಶ್ಯ. ಅದರಂತೆಯೇ ನಮ್ಮೂರಿನಿಂದ ಕೊಣನೂರಿಗೆ ಹೋಗುವವರೂ ಅಷ್ಟ, ನಟರಾಜ ಎಕ್ಸ್ಪ್ರೇಸ್  ನಲ್ಲಿಯೇ ಹೋಗುತ್ತಿದ್ದದ್ದು. ನಮ್ಮಪ್ಪ ಕೂಡ ಸೈಕಲ್ಲಿನಲ್ಲಿಯೇ ತಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಸುಮಾರು, ಮೂವತ್ತು ವರ್ಷ ಸೈಕಲ್ ನಮ್ಮಪ್ಪನ ಜೀವನದ ಅವಿಭಾಜ್ಯವಾಗಿತ್ತು. ಅದನ್ನು ಮತ್ತೊಮ್ಮೆ ವಿವರಿಸುತ್ತೇನೆ.
ಪ್ರಾಥಮಿಕ ಶಾಲೆಯಲ್ಲಿ ನಡೆದ ಅಥವಾ ಇದ್ದ ಶಿಕ್ಷಕರಲ್ಲಿ, ರಂಗಸ್ವಾಮಿ ಎಂಬ ಮಾಸ್ಟರು ಒಬ್ಬರು. ಅವರನ್ನು ಹಳೇ ಮೇಷ್ಟ್ರೂ ಎನ್ನುತ್ತಿದ್ದರು. ಅದು ಯಾಕೆಂಬುದು ನನಗೆ ಇಂದಿಗೂ ಗೊತ್ತಿಲ್ಲ. ನಮಗೆ ಮತ್ತೊಬ್ಬರು ವಾಸು ಮಾಸ್ಟರಿದ್ದರು, ಅವರನ್ನು ಬಹಳ ಹುಡುಗರು ಹೊಸ ಮಾಸ್ಟರ್ ಎನ್ನುತ್ತಿದ್ದರು. ಆದ್ದರಿಂದಲೇ, ಒಬ್ಬರು ಹೊಸ ಮಾಸ್ಟರ್ ಮತ್ತೊಬ್ಬರು ಹಳೇ ಮಾಸ್ಟರ್ ಆಗಿದ್ದಿರಬೇಕು. ಇದ್ದವರೇ ಇಬ್ಬರು ಮಾಸ್ತರ್, ರಂಗಸ್ವಾಮಿ ಮಾಸ್ಟರಿಗೆ ಮಧ್ಯಾಹ್ನ ಊಟ ಆದ್ಮೇಲೆ ಮಲಗುವ ಅಭ್ಯಾಸ. ನಮ್ಮ ಹತ್ತಿರ ಐದು, ಹತ್ತು ಪೈಸೆ ಚಂದಾ ಎತ್ತಿ, ಆ ಕಾಲದಲ್ಲಿ ಬೆಂಚು ಇರಲಿಲ್ಲ, ಮಣೆಗಳಿದ್ದವು, ಆ ಮಣೆಗಳನ್ನು ಜೋಡಿಸಿ ಮಲಗಿಸುವುದು ಏಳನೇಯ ಕ್ಲಾಸಿನ ಹುಡುಗರ ಕೆಲಸ. ವಾಸು ಮಾಸ್ಟರ್ ಬಂದಿಲ್ಲದೇ ಇದ್ದರೇ ಆ ದಿನ ಹಬ್ಬವೋ ಹಬ್ಬ ಮತ್ತು ಮೂರು ಗಂಟೆಗೆ ಸ್ಕೂಲು ಬಾಗಿಲು ಬಂದ್.
ವಾಸು ಮಾಸ್ಟರ್ ಬಹಳ ಶಿಸ್ತಿನ ಮನುಷ್ಯ. ಅವರು ಬಂದರೇ ಬಹುತೇಕ ಮಕ್ಕಳ ಚಡ್ಡಿ ಒದ್ದೆಯಾಗುತ್ತಿತ್ತು. ನಮ್ಮಪ್ಪ ಮಾಸ್ಟರುಗಳು ಬಹಳ ರಾಜಕೀಯ ಮಾಡುತ್ತಾರೆಂದು ಮಾತನಾಡುತ್ತಿದ್ದದ್ದು ಆಗ್ಗಾಗೆ ಕಿವಿಗೆ ಬೀಳುತಿರುತ್ತಿತ್ತು ಆದರೇ ಅರ್ಥವಾಗುತ್ತಿರಲಿಲ್ಲ. ಈಗ ತಿರುಗಿ ನೋಡಿದರೆ ಅರ್ಥವಾಗುತ್ತದೆ ಆದರೇ ಕಾಲ ಮೀರಿದೆ. ವಾಸು ಮಾಸ್ಟರ್ ಗಣಿತ ಹೇಳಿಕೊಟ್ಟಿದ್ದು ಅದರಲ್ಲಿಯೂ ಮಗ್ಗಿ ಎರಡನೆಯ ಕ್ಲಾಸಿನಲ್ಲಿಯೇ ಇಪ್ಪತ್ತರ ತನಕ ಮಗ್ಗಿ ಕಲಿತಿದ್ದೆ. ನಾನು ಶಾಲೆಯಲ್ಲಿ ಏಟು ತಿಂದಿರುವುದು ಬಹಳ ಕಡಿಮೆ. ಬುದ್ದಿವಂತ ಅಂತಾ ಅಲ್ಲಾ, ನನ್ನ ಜೊತೆಯಿದ್ದವರೆಲ್ಲಾ ದಡ್ಡಶಿಖಾಮಣಿಗಳು. ಒಂದು ದಿನ ನಾನು ಒಂದನೆಯ ಅಥವಾ ಎರಡನೆಯ ಕ್ಲಾಸಿನಲ್ಲಿದ್ದಾಗ ವಾಸು ಮಾಸ್ಟರ್ ಕರೆಸಿದರು, ನನ್ನ ಕೈ ಕಾಲು ನಡುಕ, ಭಯದಿಂದ ಹೋದೆ. ಅವರು ಏಳನೆಯ ಕ್ಲಾಸಿನಲ್ಲಿದ್ದರು, ಸಾಲು ಸಾಲು ಹುಡುಗರು ದಢೂತಿಗಳು ಕಿವಿ ಹಿಡಿದು ಕಾಲು ಬಗ್ಗಿಸಿ ಕುಳಿತಂತೆ ನಿಂತಿದ್ದರು. ವಾಸು ಮಾಸ್ಟರ್ ನನ್ನನ್ನು ಕರೆದು, ಹೇ, ಬಾರೋ ಇಲ್ಲಿ ಎಂದರು ನನಗೋ ಪುಕ ಪುಕ! ಹರೀಶ ಹದಿನಾಲ್ಕರ ಮಗ್ಗಿ ಹೇಳೋ, ನಾನು ಒಂದೇ ಉಸಿರಿನಲ್ಲಿ ಹದಿನಾಲ್ಕೊಂದ್ಲ ಹದಿನಾಲ್ಕು....ಹದಿನಾಲ್ಕ್ ಹತ್ರ ನೂರ ನಲ್ವತ್ತು ಎಂದೆ. ಸುಮಾರು ಇಪ್ಪತ್ತೈದು ವರ್ಷದ ಹಿಂದಿನ ಘಟನೆ ನನಗೆ ಈಗ ಕಣ್ಣು ಮುಚ್ಚಿದರು ಹದಿನಾಲ್ಕರ ಮಗ್ಗಿ ತಲೆಯಲ್ಲಿ ಅಚ್ಚಾಗಿದೆ. ಹೇಳಿದ ನಂತರ ಹುಡುಗರು ಎದ್ದು ನಿಲ್ಲಿಸಿದರು. ನನ್ನನ್ನು ಮುಂದೆ ಕರೆದು, ಅವರ ಮೂಗು ಹಿಡಿದು ಕೆನ್ನೆಗೆ ಬಾರಿಸು ಎಂದರು. ಮಗ್ಗಿ ಹೇಳುವುದಕ್ಕಿಂತ ಕಷ್ಟದ ಕೆಲಸ ಅವರಿಗೆ ಹೊಡೆಯುವುದು. ದಡೂತಿಗಳಿಗೆ ಹೊಡೆಯುವಾಗ ಮಾಸ್ಟರಿರುತ್ತಾರೆ, ಮಾಸ್ಟರು ಹೋದ ಮೇಲೆ, ನನಗೆ ಬಾರಿಸಿದರೇ! ನಾನು ಹಾಗೇಯೇ ನಿಂತಿದ್ದೆ, ಮಾಸ್ಟರು ಗದರಿದರು, ಹೋಡಿತಿಯೋ ಇಲ್ಲಾ ನಾನು ಬಾರಿಸಲೋ? ಮಗ್ಗಿ ಹೇಳುವುದಕ್ಕಿಂತ ವೇಗವಾಗಿ ಎಲ್ಲರಿಗೂ ಹೊಡೆದು ಅಲ್ಲಿಂದ ಕಾಲ್ಕಿತ್ತೆ.
ವಾಸು ಮಾಸ್ಟರು ವರ್ಗವಾಗಿ ಹೋದ ಮೇಲೆ ಶಾಲೆಗೆ ಬಂದದ್ದು ನಾಗೇಶಯ್ಯ ಮತ್ತು ನರಸಿಂಹ ಮೂರ್ತಿ ಮಾಸ್ಟರುಗಳು. ನಾಗೇಶಯ್ಯ ಸಂಸ್ಕೃತ, ಹಿಂದಿ ಮಾಸ್ಟರು, ಅವರು ಕನ್ನಡ ಪದ್ಯಗಳನ್ನು ಹಾಡುವ ರೀತಿಗೆ ಇಡೀ ಬಾನುಗೊಂದಿಯೇ ತಲೆತೂಗಿತ್ತು. ಆ ರಾಗ, ತನ್ಮಯತೆ ಅಬ್ಬಾ! ಎಂಥಹ ತಾತ್ವಿಕ ಮನಸ್ಸೆಂದರೇ ಅವರು ಎಂಥಹ ಸನ್ನಿವೇಶದಲ್ಲಿಯೂ ಕೋಪ ತಾಳಿದವರಲ್ಲ. ಅವರ ಜೊತೆಗೆ ಸ್ವಲ್ಪ ದಿನಕ್ಕೆ ಕೃಷ್ಣಮೂರ್ತಿ ಎಂಬವರು ಬಂದಿದ್ದರು, ಅವರೋ, ಅವರ ಪಾಠಕ್ಕಿಂದ ಕೈಯಲ್ಲಿರುತ್ತಿದ್ದ ದೊನ್ನೆಯೇ ಮಾತನಾಡುತ್ತಿತ್ತು. ಅವರಿಂದ ನನಗೂ ಒಂದೆರೆಡು ಬಾರಿ ಕಜ್ಜಾಯ ಸಿಕ್ಕಿದೆ. ನಾಗೇಶಯ್ಯ ಮತ್ತು ಕೃಷ್ಣಮೂರ್ತಿ ಮಾಸ್ಟರುಗಳು ಹೇಳಿಕೊಟ್ಟ ಪದ್ಯ, ರವಿ ಮೂಡುವನು ರವಿ ಮೂಡುವನು, ಹಾರುತಿಹುದು ಏರುತಿಹುದು ನೋಡು ನಮ್ಮ ಬಾವುಟ ಅವಿಸ್ಮರಣೀಯ. ಅದರ ನಡುವೆಯಲ್ಲಿ ಸುಂದರ್ ಎಂಬ ಮಾಸ್ತರು ಬಂದರು ಹೋದರು. ಅವರು ರಂಗೋಲಿ ಪ್ರಿಯರು. ಸದಾ ರಂಗೋಲಿ ಬಿಡಿಸುವುದು, ಆದ್ದರಿಂದಲೇ ಏನೋ, ಅವರು ಹುಡುಗಿಯರಿಗೆ ಪ್ರಿಯರಾದರು.  ಆದರೂ, ನಮ್ಮಿಂದ ದೂರ ಉಳಿಯಲ್ಲಿ ಯಾಕೆಂದರೇ ನಮ್ಮನ್ನು ಆಟವಾಡಲು ಬಿಡುತ್ತಿದ್ದರು, ನಮಗೆ ಆಟವೇ ಪ್ರಪಂಚವೆನಿಸುತ್ತಿದ್ದ ವಯಸ್ಸು. 
ಆರನೇಯ ತರಗತಿ ಮತ್ತು ಏಳನೆಯ ತರಗತಿಯ ಸಮಯಕ್ಕೆ ಸುಶೀಲ ಟೀಚರ್ ಮತ್ತು ಲೋಕೇಶ್ ಮಾಸ್ಟರ್ ಬಂದರು. ಇವರು ಆಗ ತಾನೇ ಕೆಲಸಕ್ಕೆ ಸೇರಿದ್ದರಿಂದ ಹುಮ್ಮಸ್ಸು, ಛಲವಿತ್ತು. ನಮಗೆ ಬಹಳ ಆಶಾದಾಯಕವಾಗಿ ಕಂಡರು. ಓದಿನ ಮಹತ್ವ, ಓದುವ ಪರಿ, ಒಟ್ಟಾರೆ ಜೀವನದ ಗಂಬೀರತೆಯ ಕಡೆಗೆ ಏಳನೆಯ ತರಗತಿಯಲ್ಲಿಯೇ ತಿರುಗುವಂತೆ ಮಾಡಿದ್ದು ಇವರಿಬ್ಬರು.
ಆ ಗಂಬೀರತೆ ಬಹಳ ದಿನ ಉಳಿಯಲಿಲ್ಲ. ಯಾಕೆಂದರೇ, ಎಂಟನೆಯ ತರಗತಿಗೆ ಕೊಣನೂರಿಗೆ ಸೇರಿದೆವು. ನಮ್ಮೂರಿನಿಂದ ನಾಲ್ಕು ಕೀಮೀ ನಡೆದು, ದಾರಿ ಉದ್ದಕ್ಕೂ ಅವರಿವರನ್ನು ರೇಗಿಸಿ, ಸೈಕಲ್ ಚಕ್ರದ ಗಾಳಿ ಬಿಟ್ಟು ಬೇಕಿರುವುದಕ್ಕಿಂತ ಬೇಕಿಲ್ಲದಿರುವುದನ್ನು ಹೆಚ್ಚು ಮಾಡಿದೆವು. ನಾನು ಕನ್ನಡ ಮಾಧ್ಯಮದಿಂದ ಬಂದವನು. ನಮ್ಮಪ್ಪ ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಸಿದರು. ನನಗೋ ತಲೆ ಬುಡು ಅರ್ಥವಾಗುತ್ತಿರಲಿಲ್ಲ. ಹೈಸ್ಕೂಲಿನಲ್ಲಿ ಒಳ್ಳೊಳ್ಳೆ ಶಿಕ್ಷಕರಿದ್ದರು, ನನಗೆ ನೆನಪಿದೆ, ಶಿವಣ್ಣ ಎಂಬ ಹೆಡ್ ಮಾಸ್ಟರ್ ವರ್ಗಾವಣೆಯಾದಗ ನಾನು ಎಂಟನೆಯ ತರಗತಿಯಲ್ಲಿ, ಕೊಣನೂರು ಬಂದ್ ಮಾಡಿದ್ದೇವು. ಒಬ್ಬ ಶಿಕ್ಷಕನ ವರ್ಗಾವಣೆ ರದ್ದತಿಗೆ ಬಂದ್ ಮಾಡಬೇಕೆಂದರೇ ನಿಮಗೆ ಅರ್ಥವಾಗಿರಬೇಕು ಅವರ ಕಾರ್ಯವೈಖರಿ.
ಕನ್ನಡ ಚಂದ್ರಶೇಖರಯ್ಯ ಅವರ ಜ್ನಾನಭಂಡಾರ ಪದವಿ ವಿದ್ಯಾರ್ಥಿಗಳಿಗೆ ಮಾಡುವಷ್ಟಿತ್ತು. ಇಂಗ್ಲೀಷ್ ವಿಜಯಲಕ್ಷ್ಮಿ ಅವರ ಇಂಗ್ಲೀಷ್ ಯಾವ ಪ್ರೋಫೆಸರಿಗೂ ಕಡಿಮೆಯಿರಲಿಲ್ಲ. ಚೆನ್ನಯ್ಯರ ಸಮಾಜ ವಿಜ್ನಾನ, ಚಂದ್ರೇಗೌಡರ ಜೀವಶಾಸ್ತ್ರ, ನಿಂಗೆಗೌಡ ಮತ್ತು ಪುರುಷೋತ್ತಮರ ಗಣಿತ, ಸುಬ್ಬರಾಯರ ಇಂಗ್ಲೀಷ್ ಅದರಲ್ಲಿಯೂ ಅವರು ಮಾಡಿದ ಭೀಷ್ಮ ಪಾಠ, ಅದರ ನಡುವೆ ಸಿಇಸಿ ಅವರ ಇಂಗ್ಲೀಷ್, ಜಯಣ್ಣ ಅವರ ಪೀಟೀ ಹಹಹ. ನಾಗಮಣಿ ಅದೆಷ್ಟು ಸರಳವಾಗಿ ಹಿಂದಿ ಪಾಠ ಮಾಡಿದರೆಂದರೇ, ಹಿಂದಿ ಸಿನೆಮಾ ನೋಡಿದರೂ ಇಂದು ಅರ್ಥವಾಗುವುದಿಲ್ಲ ಅಂದು ನಾನು ಕಲಿಯಲಿಲ್ಲ. ಇದೆಲ್ಲದರ ನಡುವೆ ನಮ್ಮ ಪೋಲಿತನ ಜನನ ತಾಳಿತು. ನಾನು ಶಾಲೆಗಿಂತ, ಬೈರೋಜಿ ಮಾಸ್ಟರ್ ಮತ್ತು ಅವರ ಮಗಳು ಹೆಸರು ಮರೆತಿದ್ದೇನೆ, ಅವರು ಇಂಗ್ಲೀಷ್ ಮಾಧ್ಯಮ ಕಷ್ಟವೆನ್ನುವುದನ್ನು ತೊಡೆದು ಹಾಕುವ ಮಟ್ಟಕ್ಕೆ ಪಾಠ ಮಾಡಿದರು. ಪಾಸು ನಪಾಸು ಎನ್ನುವ ಆಟದಲ್ಲಿ ಅದೃಷ್ಟವಂತನಂತೆ ನಾನು ೪೯.೫% ಅಂಕ ತೆಗೆದು ಪಾಸಾದೆ. ಕಡಿಮೆ ಅಂಕ, ಪಾಸಾಗಿದ್ದೇ ಹೆಚ್ಚು ನನಗೆ. ಅದೆಷ್ಟೂ ಫೇಲಾಗುತ್ತೀನೋ ಎನಿಸಿತ್ತು. 
ಹತ್ತನೆಯ ತರಗತಿ ಪಾಸಾಗಿದ್ದು ಖುಷಿಯಾದರೇ, ಮತ್ತೆ ಓದಬೇಕಲ್ಲಾ ಎನ್ನುವುದು ದುಃಖದ ಸಂಗತಿಯಾಗಿತ್ತು. ಅಲ್ಲಿ ಇಲ್ಲಿ ಎಂದು ಕೊನೆಗೆ ಪ್ರೀತಿಯ ಕನ್ನಡ ಭಾರತಿ (ಕೆಬಿ) ಕಾಲೇಜು, ಕುಶಾಲನಗರಕ್ಕೆ ಬಿದ್ದೆ. ಬಿದ್ದೆನೋ ದೂಡಿದರೋ ಎರಡು ವರ್ಷ ಓದುವ ಪಿಯುಸಿಯನ್ನು ಮೂರು ವರ್ಷ ಓದಿದೆ. ಅಲ್ಲಿದ್ದ ಎಲ್ಲಾ ಗುರುಗಳು ಅತ್ಯುತ್ತಮರು. ಮಕ್ಕಳಿಗೆ ಪಾಠ ಮಾಡುವುದಕ್ಕೆ ಹಾತೊರೆಯುತ್ತಿದ್ದರು. ಕನ್ನಡ ಸೋಮಶೇಖರ್ ಅವರ ಜ್ನಾನ ಕುಸುಮ ನಮ್ಮನ್ನು ಮೀರಿತ್ತು, ಇಂಗ್ಲೀಷ್ ಉಮಾಶಂಕರ್ ಬಹಳ ದೂರದಿಂದ ಬರುತ್ತಿದ್ದರು. ಯುವರಾಜ್ ಹೆಸರಿಗೆ ತಕ್ಕಂತೆ ಗಾಂಭೀರ್ಯದಿಂದ, ಪ್ರಭುದೇವ ರಸಾಯನವನ್ನು, ಪ್ರಸನ್ನ ಮೂರ್ತಿ ಗಣಿತವನ್ನು, ಹೇಮಲತಾ ಜೀವಶಾಸ್ತ್ರವನ್ನು ಭೋಧಿಸಿದರು. ಹಳ್ಳಿಯಿಂದ ಬಂದಿದ್ದ ನನಗೆ ಬಹಳ ಇರಿಸುಮುರುಸಾಗಿತ್ತು, ಓದುವುದು ಕಬ್ಬಿಣದ ಕಡಳೆಯಾಯಿತು. ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೂ ಆಗಲೇ ಇಲ್ಲ. ಉಢಾಫೆತನ ನನ್ನನ್ನು ಆವರಿಸತೊಡಗಿತ್ತು, ದಿನ ಕಳೆದಂತೆ, ಅದು ವಿಕೋಪಕ್ಕೆ ಹೋಗಿತ್ತು. ನಮ್ಮ ಯಾವ ಗುಣಗಳು ರಾತ್ರೋ ರಾತ್ರಿ ಆದದ್ದಲ್ಲ, ಮುಂಜಾನೆ ಐದು ಗಂಟೆಗೆ ಏಳುವುದು ಇರಬಹುದು, ಎಂಟಾದರೂ ಏಳದೇ ಇರುವುದಿರಬಹುದು. ಇವೆಲ್ಲವೂ ದಿನ ದಿನ ಬೆಳೆಯುತ್ತಾ ಹೋದವುಗಳು. ಸೋಮಾರಿತನ ಹುಟ್ಟಿನಿಂದ ಬಂದದ್ದಲ್ಲ. ಅದಿರಲಿ, ಮುಂದಿನ ಮಾತಿಗೆ ಹೋಗೋಣ. 
ನನಗೆ ಓದುವುದರಲ್ಲಿ ಆಸಕ್ತಿ ಕುಂದತೊಡಗಿತು, ನಮ್ಮ ಉಪನ್ಯಾಸಕರು ಅವರ ಅಳೆತೆ ಮೀರಿ ನಮಗೆ ಪಾಠ ಹೇಳಿಕೊಡುತ್ತಿದ್ದರು, ಆದರೇ ನಾನು ಕಲಿಯಲು ಸಿದ್ದನಿರಲಿಲ್ಲ. ಎಷ್ಟು ಬಾರಿ ಕೇಳಿದರೂ ಹೇಳುವ ತಾಳ್ಮೆ ಅವರಿಗಿತ್ತು, ಕೇಳುವ ವಿನಯ ನನಗೆ ಬರಲಿಲ್ಲ. ಅಂತೂ ಪರೀಕ್ಷೆಯಲ್ಲಿ ನಪಾಸಾದೆ. ಫೇಲಾಗುವ ತನಕ ಫೇಲಿನ ಅಥವಾ ಸೋಲಿನ ಮುಖ ನಮಗೆ ತಿಳಿದಿರಲಿಲ್ಲ. ಫೇಲಾದ ದಿನದಿಂದಲೇ ಹೊಸ ಪ್ರಪಂಚ ಅರಿವಾಯಿತು. ಎಲ್ಲರೂ ನನಗೆ ರಾಜ ಮರ್ಯಾದೆ ನೀಡುವವರು, ಜೊತೆಯಲ್ಲಿ ನಿಂತು ಮಾತನಾಡುವ ಧೈರ್ಯವೂ ಇಲ್ಲ ಅವರಿಗೆ! ಆದ್ದರಿಂದ ನಾನು ಬಂದರೇ ಅವರೇ ದೂರ ಸರಿಯುತ್ತಿದ್ದರು. ಆಗ, ನನ್ನ ಮನಸ್ಸಿಗೆ ತೋಚಿದ್ದು ನಮ್ಮ ಗುರುಗಳ ಶ್ರಮ. ಅವರು ಪಾಠ ಮಾಡುವಾಗ ನಾನು ತೋರಿದ ನಿರ್ಲಕ್ಷ್ಯ ನನ್ನ ಜೀವನವನ್ನು ಆಹುತಿ ಮಾಡಿಸಿಕೊಳ್ಳುತ್ತಿತ್ತು. ಆ ಸಮಯಕ್ಕೆ ನನಗೆ ಗುರುವಾದವನು ಗ್ಯಾರೇಜ್ ಕೃಷ್ಣ, ನನಗೆ ಬುದ್ದಿ ಹೇಳಿ ಮತ್ತೇ ಓದುವಂತೆ ಒತ್ತಾಯಿಸಿದ ಮನವೊಳಿಸಿದ. ನಾನು ಆಗ ಹೋಗಿ ಬಿದ್ದದ್ದು ನಮ್ಮ ಗಣಿತ ಉಪನ್ಯಾಸಕ ಪ್ರಸನ್ನಮೂರ್ತಿಯವರ ಮಡಿಲಿಗೆ. ಪ್ರಸನ್ನ ಮೂರ್ತಿಯವರು ಅದೆಷ್ಟರ ಮಟ್ಟಿಗೆ ಪಾಠ ಹೇಳಿದರೆಂದರೇ ಹೃದಯದ ಮಾತುಗಳೆನಿಸಿದೆವು. ಕಷ್ಟದ ಗಣಿತ ಸುಲಭವಾಗತೊಡಗಿತು, ಮತ್ತೆ ಪಾಸಾದೆ. ಪಾಸಾದ ನಂತರ, ಸ್ವಲ್ಪ ದಿನಗಳ ಮಟ್ಟಿಗೆ ನಾನು ಪ್ರಸನ್ನ ಮೂರ್ತಿಯವರ ಸಲಹೆ ಪಡೆದೆ. ಯುವರಾಜ ಕಾಲೇಜು ಸೇರಿದೆ.
ಯುವರಾಜ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿದ್ದ ಕಾಲೇಜು, ಆ ಸಾವಿರ ಹುಡುಗರ ನಡುವೆ ನಾನು ಅಲ್ಪ ಸ್ವಲ್ಪ ಪ್ರಸಿದ್ದಿಯಾದೆ. ಯುವರಾಜ ಕಾಲೇಜಿನ ರಘುನಾಥ ಸರ್ ಅವರ ಎಲ್ಲೆ ಮೀರಿ ಸಹಾಯ ಮಾಡಿದರು. ಧೈರ್ಯ ತುಂಬಿದರು, ನನ್ನ ಪಿಎಚ್ ಡಿ ಮುಗಿಯುವ ತನಕ ಕಾಪಾಡಿದರು. ಅದೇ ಸಮಯದಲ್ಲಿ ಹತ್ತಾರು ಉಪನ್ಯಾಸಕರು ಪಾಠ ಹೇಳಿದರು, ಧೈರ್ಯ ತುಂಬಿದರು, ಅವರಲ್ಲಿ ಬಹಳ ಮುಖ್ಯವಾದವರು, ಅಜಯ್ ಕುಮಾರ್ ಮತ್ತು ಭದ್ರೇಗೌಡರು. ನನಗೆ ಪರಿಸರ ವಿಜ್ನಾನದಲ್ಲಿ ಆಸಕ್ತಿಯಿದ್ದದ್ದು ಸತ್ಯ, ಆದರೇ ಆ ದಿನಗಳಲ್ಲಿ ಪರಿಸರ ವಿಜ್ನಾನ ನಿರಾಸಕ್ತಿ ಮತ್ತು ಅಪ್ರಯೋಜಕವೆಂದು ನನ್ನ ಅನೇಕ ಸ್ನೇಹಿತರು ಭಾವಿಸಿದ್ದರು ಕೀಳರಿಮೆಯನ್ನು ತುಂಬಿದ್ದರು. ಆಗ ನಾನು ನನ್ನ ವಿಷಯಗಳನ್ನು ಬದಲಾಯಿಸಬೇಕೆಂದು ನಿರ್ಧರಿಸಿದೆ. ನಾನು ಪಿಯುಸಿನಲ್ಲಿ ತೆಗೆದಿರುವ ಮೂರು ಮತ್ತೊಂದು ಮಾರ್ಕ್ ಗೆ ಅಲ್ಲಿ ಸೀಟು ಸಿಕ್ಕಿದ್ದೆ ಹೆಚ್ಚೆಂದರು, ಹಲವರು. ಆದರೂ, ನಾನು ನಮ್ಮ ಅಪ್ಪನನ್ನು ಕರೆದುಕೊಂಡು ಹೋಗಿ ಸಿಕ್ಕಸಿಕ್ಕಿದವರನ್ನೆಲ್ಲಾ ಮಾತನಾಡಿಸಿದೆ, ಬೇಡಿದೆ, ಬಹುಶಃ ಅದು ನನ್ನ ಮನಸ್ಸಿನಲ್ಲಿ ಶಾಶ್ವತವಾಯಿತು, ಯಾರನ್ನೂ ಕೇಳಬಾರದು, ಕೇಳಿದರೆ ಅವರು ಮಾಡಿಕೊಡುವುದಿಲ್ಲವೆಂದು. ಆ ಸಮಯಕ್ಕೆ ಸಹಾಯ ಮಾಡಿದವರುಗಳು, ಎಸ್ ಆರ್ ಸ್ಟುಡಿಯೂ ರಘು, ಮಹಾರಾಣಿ ಕಾಲೇಜು ತಮ್ಮಣ್ಣಗೌಡ, ವಿದ್ಯಾವರ್ಧಕ ಕಾಲೇಜಿನ ಮಹೇಶ್, ಮುಕ್ತ ವಿವಿಯ ವಿವೇಕಾನಂದ ಹೀಗೆ ಹತ್ತು ಹಲವರು. ಅಜಯ್ ಕುಮಾರರಿಗೆ ಭದ್ರೇಗೌಡರ ಮುಖಾಂತರ ವಿಷಯ ತಲುಪಿ ನನ್ನನ್ನು ಕರೆದರು. ಕರೆದು ಹೇಳಿದರು, ವಿಷಯ ಯಾವುದೆಂಬುದು ಮುಖ್ಯವಲ್ಲ, ನೀನು ಹೇಗೆ ಓದುತ್ತೀಯಾ ಎಂಬುದು ಮುಖ್ಯ. ಪರಿಸರ ವಿಜ್ನಾನ ಇಂದಿಗೆ ನಿನಗೆ ಕಳಪೆಯೆಂತೆ ಕಂಡರೂ, ಅದು ಜೀವನಕ್ಕೆ ಮತ್ತು ಪ್ರಪಂಚಕ್ಕೆ ಬಹಳ ಪ್ರಾಮುಖ್ಯವಿರುವ ವಿಷಯ, ತಲೆ ಕೆಡಿಸಿಕೊಳ್ಳದೇ ಓದಿ, ಎಂಎಸ್ಸಿ ಮಾಡು, ಸೂಟ್ ಕೇಸಿನಲ್ಲಿ ದುಡ್ಡು ಬರುತ್ತದೆ ಎಂದರು.
ನಾನು ಬಿಎಸ್ಸಿ ಸಾಕೆನಿಸುವಾಗ ಇವರು ಎಂಎಸ್ಸಿ ಎಂದದ್ದು ಹಿಡಿಸಲಿಲ್ಲ. ಆದರೂ ಓದಿಗೆ ತಲೆ ಹಚ್ಚಿದೆ. ನಮ್ಮ ತಂದೆಗೆ ನಾನು ಬಿಎಸ್ಸಿ ಮಾಡುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಅವರು ಜೀವನದಲ್ಲಿ, ನಿರುದ್ಯೋಗ ಕಷ್ಟ ಅನುಭವಿಸಿದ್ದರಿಂದ, ನಾನು ಪಿಯುಸಿಯಲ್ಲಿ ಒಳ್ಳೆ ಮಾರ್ಕ್ ತೆಗೆದು ಮಾಸ್ಟರಾಗಬೇಕೆಂದಿದ್ದರು. ನಾನು ತೆಗೆದಿರುವ ಅಂಕಕ್ಕೆ ಅರ್ಜಿಯನ್ನೇ ಕೊಡುವುದಿಲ್ಲ, ಇನ್ನೂ ಸೀಟು ಕೊಟ್ಟಾರೆ!? ನಂತರ ಬಿಎಸ್ಸಿ ಸಿಬಿಜ಼ೆಡ್ ಓದಿಯಾದರೂ ಬಿಎಡ್ ಮಾಡಲೆಂಬುದು ಮಗದೊಂದಾಸೆ, ನನಗೆ ಪಿಯುಸಿಯ ಜೀವಶಾಸ್ತ್ರ ಸಾಕೆನಿಸಿತ್ತು, ಏನಾದರೂ ಹೊಸತು ಬೇಕೆನಿಸಿತ್ತು. ಆ ಮೂರು ವರ್ಷ ನನ್ನ ಮನಸ್ಸಿಗೆ ಅದೆಷ್ಟು ಬೇಕೋ ಅಷ್ಟನ್ನು ಓದಿದೆ, ಕಥೆ, ಕಾದಂಬರಿ, ವಿವೇಕಾನಂದರ ಕೃತಿ ಶ್ರೇಣಿಗಳು, ನನ್ನ ಓದು ಯಾವ ಮಟ್ಟಕ್ಕೆ ಬಂತೆಂದರೆ, ನಮ್ಮಪ್ಪ ನಿರ್ಧರಿಸಿದರು, ಇವನ ಹಾದಿ ಮಠದೆಡೆಗೆಂದು. ಸನ್ಯಾಸತ್ವದ ಹೊಸ್ತಿಲಿಗೆ ಬಂದು ನಿಂತಿದ್ದೆ. ಓಳಕ್ಕೆ ಹೋಗಲಿಲ್ಲ, ಸನ್ಯಾಸತ್ವ ವಿರುದ್ದ ಗುಣವಾಗಿ ಬದಲಾದೆ, ಮುಂದೊಮ್ಮೆ ಅದು ದೊಡ್ಡ ಪ್ರಮಾದವೂ ಆಯಿತು, ಅದನ್ನು ಮುಂದೆ ವಿವರಿಸುತ್ತೇನೆ. ನಾನು ಕಾಲೇಜಿನಲ್ಲಿ ಪ್ರಸಿದ್ದಿಯಾದೆ ಎನ್ನುವುದನ್ನು ತಿಳಿಸಿದ್ದೆ. ಇದಕ್ಕೆ ಮೊದಲ ಕಾರಣ, ನಾನು ಕುಡುಕ ಎಂದು, ವಿಪರ್ಯಾಸವೆಂದರೇ, ನಾನು ಪಿಯುಸಿಯಲ್ಲಿ ಕುಡಿದು ಮಾಡಿದ ರಂಪ ರಾಮಾಯಣ ಬಿಎಸ್ಸಿಯಲ್ಲಿ ಜಾದೂ ಮಾಡಿತ್ತು, ಜಗಜಾಹಿರಾಗಿತ್ತು. ಬಿಎಸ್ಸಿಯಲ್ಲಿ ನಾನು ಹೆಚ್ಚು ಕುಡಿಯಲಿಲ್ಲ, ನಾನು ಬಹಳ ಶಿಸ್ತಿನ ಜೀವನವನ್ನೇ ಪಾಲಿಸಿದೆ. ಮುಂಜಾನೆ ಬೇಗ ಏಳುವುದು, ಜಿಮ್ ಹೋಗುವುದು, ಓದುವುದು, ಎಲ್ಲರೊಡನೆ ಬೆರೆಯುವುದು ಇದೆಲ್ಲವು ಇದ್ದವು. ನನಗೆ ಬಿಎಸ್ಸಿಯಲ್ಲಿ ರಘುನಾಥ್ ಮತ್ತು ಶ್ರೀಕಂಠಸ್ವಾಮಿಯವರು ಬಹಳ ಸಹಾಯ ಮಾಡಿದರು, ಮನೆಗೆ ಕರೆದು ಪಾಠ ಹೇಳಿಕೊಟ್ಟರು, ಅವರ ಪ್ರಿತಿಗೆ ನಾನು ಎಂದಿಗೂ ದಾಸ. ರಘುನಾಥ್ ರವರು ನನಗೆ ನೇತ್ರದಾನಕ್ಕೆ ನೋಂದಾಯಿಸಲು ನನ್ನನ್ನೇ ಆಯ್ದುಕೊಂಡರು, ಇದು ಕಾಲೇಜಿನ ಎಲ್ಲರು ನನಗೆ ಪರಿಚಯವಾಗಲು ಮತ್ತು ನಾನು ಸಾರ್ವಜನಿಕ ಸೇವೆ ಮಾಡಬಲ್ಲ ವ್ಯಕ್ತಿ ಎನಿಸಿತು. ಪ್ರಕಾಶ್ ಮತ್ತು ಪ್ರತಿಮಾ ನಮಗೆ ಮೊದಲ ವರ್ಷದ ಪರಿಸರ ವಿಜ್ನಾನ ಮಾಡಿದರು. ಪ್ರಕಾಶ್ ಆಗ ಪಿಎಚ್ ಡಿ ಮಾಡುತ್ತಿದ್ದರು, ಅವರನ್ನು ಅದೆಷ್ಟು ಗೋಳಾಡಿಸಿದೆವೆಂದರೇ ಈಗ ಅಯ್ಯೋ ಎನಿಸುತ್ತದೆ. ಪ್ರಕಾಶ್ ನಡೆದುಕೊಂಡು, ಕಷ್ಟಪಟ್ಟು ಗಂಗೋತ್ರಿಯಿಂದ ಬಂದರೂ, ನಾನು ಹಾಸ್ಟೆಲಿನಿಂದ ಹೋಗಿರುತ್ತಿರಲಿಲ್ಲ, ತಾತ್ಸಾರವಿತ್ತು. ನಂತರ ಸುರೇಶ್ ಬಂದರು, ಅವರು ಬಹಳ ಮುತುವರ್ಜಿಯಿಂದ ಬೋಧಿಸಿದರು.
ಭೂವಿಜ್ನಾನದಲ್ಲಿ ಸ್ವಲ್ಪ ರಾಜಕೀಯವಿತ್ತು, ನಾವು ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಅನಂತ ಬಹಳ ಅನುಭವಿಗಳು ಮತ್ತು ಅಷ್ಟೇ ಅದ್ಬುತವಾಗಿ ಪಾಠ ಮಾಡುತ್ತಿದ್ದರು. ಮಹದೇವಯ್ಯ ಬಹಳ ಒಳ್ಳೆಯ ವ್ಯಕ್ತಿ ಕುಡಿತಕ್ಕೆ ಬಲಿಯಾದರು. ರಸಾಯನ ಶಾಸ್ತ್ರದಲ್ಲಿ ಪದ್ಮಾಜಿಯವರ ಪಾಠ ಕೇಳುವುದೇ ಒಂದು ಆನಂದ. ನಾವು ಮೂರನೇ ವರ್ಷದಲ್ಲಿದ್ದಾಗ, ವಸ್ತು ಪ್ರದರ್ಶನ ಮಾಡಿದ್ದೆವು, ಆ ಸಮಯದಲ್ಲಿ ಸುರೇಶ್ ನಮ್ಮನ್ನು ಹುರಿದುಂಬಿಸಿ ಬಹಳ ಅಚ್ಚುಕಟ್ಟಾಗಿ ಮಾಡಿಸಿದರು. ಇಂಗ್ಲೀಷ್ ಬೋಧಕರು ಅದ್ಬುತವೆನಿಸುವಂತೆ ಪಾಠ ಮಾಡುತಿದ್ದರು, ಅದರಲ್ಲಿಯೂ ಒಥೆಲ್ಲೋ, ಕಾಂತಾಪುರ ಮನದಲ್ಲಿ ಹಸಿರಾಗಿದೆ. ಅವರಲ್ಲಿದ್ದ ತಾಳ್ಮೆ, ಸಮಯ ಪ್ರಜ್ನೆ, ವಿದ್ಯಾರ್ಥಿಗಳಿಗೋಸ್ಕರ ತುಡಿಯುವ ಮನಸ್ಸು ಅವಿಸ್ಮರಣೀಯ. ವಿದ್ಯಾರ್ಥಿಗಳು ಗುರುಗಳಿಗೆ ಹೊಡೆಯುವುದಕ್ಕೆ ಮನಸ್ಸು ಮಾಡುವ ಹೀನ ಮನಸ್ಸು ಹೇಗೆ ಬರುತ್ತದೆ ಎನಿಸುತ್ತದೆ. ತಮ್ಮದಲ್ಲದ ಮಕ್ಕಳಿಗೆ ಕೇವಲ ಕೆಲಸಕ್ಕಲ್ಲದೇ ದುಡಿಯುವ ಅಪ್ರತಿಮ ಮಾನವ ಜೀವಿಗಳು ಗುರುಗಳು.
ಯಾಕೋ ನಾನು ಜಾಸ್ತಿ ಬರೆಯುತಿದ್ದೀನಿ, ಮತ್ತು ಓದುವ ಆಸಕ್ತಿ ಕುಂದುವಂತಿದೆ. ಬರವಣಿಗೆ ತಾನಾಗಿಯೇ ಓದಿಸಿಕೊಳ್ಳುವಂತಿರಬೇಕು, ನಿರಾಸಕ್ತಿ ಸೃಷ್ಟಿಸುವಂತಿರಬಾರದು. ಕಳೆದು ಹತ್ತು ನಿಮಿಷಗಳನ್ನೇ ಬಲಿಕೊಟ್ಟಿದ್ದೀರಾ ಇನ್ನು ಮುಂದಿನ ಐದು ನಿಮಿಷ ತಾಳ್ಮೆಯಿಂದ ಓದುವುದಕ್ಕಾಗುವುದಿಲ್ಲವೇ? ಆಗುತ್ತದೆ. ಸರಿ ಮುಂದಿನ ವಿಷಯಕ್ಕೆ ಬರೋಣ, ಬಿಎಸ್ಸಿ ಬಹಳ ಘಟನೆಗಳಿವೆ ಅದರಲ್ಲಿ ಒಂದನ್ನು ಮಾತ್ರ ಹೇಳುತ್ತೇನೆ. ನಾನು ಮೊದಲೇ ಹೇಳಿದ ಹಾಗೆ ಬಿಎಸ್ಸಿಯಲ್ಲಿ ಜೀವನವನ್ನು ಬಹಳ ಗಂಬೀರವಾಗಿ ತೆಗೆದುಕೊಂಡಿದೆ. ಎಲ್ಲವನ್ನೂ ಕಲಿಯಲು ಬಯಸಿದ್ದೆ. ಮೊದಲಿಗೆ ನಾನು ರಸಾಯನ ಶಾಸ್ತ್ರ (ಕೆಮಿಸ್ಟ್ರೀ)ಯಲ್ಲಿ ಎಂಎಸ್ಸಿ ಮಾಡಬೇಕೆಂದು ಬಯಸಿದ್ದೆ. ಅದಕ್ಕಾಗಿ ಬಹಳ ಓದುತ್ತಿದ್ದೆ, ಪರೀಕ್ಷೆಯ ದಿನ ನೋಡುವಾಗ ಹೆಚ್ಚು ಮಾರ್ಕ್ ತೆಗೆಯುವುದಕ್ಕೆ ಕಷ್ಟ ಎಂದು, ಅರ್ಧ ಬರೆದು ಅಡ್ಡಗೆರೆ ಎಳೆದು ಬಂದೆ. ಪರಿಸರ ವಿಜ್ನಾನದ ಪರೀಕ್ಷೆಯ ದಿನ ನಾನು ಮತ್ತು ಸ್ನೇಹಿತ ಸುನೀಲ್ ಎದ್ದು ಹೋಗಲು ಸಿದ್ದವಾದೆವು, ಏನು ಬರೆಯದೇ, ಅವನು ಎದ್ದು ಹೊರಗೆ ಹೋದ ನಾನು ಕುಳಿತು ಬರೆಯುತ್ತಲೇ ಇದ್ದೆ. ನಂತರ ಹಿಂದಿರುಗಿದರೇ ಸುನೀಲ್ ಇಲ್ಲ! ನಾನು ಹೊರಕ್ಕೆ ಬಂದೆ. ಫಲಿತಾಂಶದ ದಿನ ನಾನು ಊರಿನಲ್ಲಿದ್ದೆ, ಗದ್ದೆ ಕೆಲಸ, ಅಮ್ಮ ಹೇಳಿದರು, ನಿನ್ನ ಫ್ರೆಂಡ್ ಫೋನ್ ಮಾಡಿದ್ದ, ರಿಸಲ್ಟ್ ಬಂದಿದೆಯಂತೆ. ನಾನು ಎರಡು ಅಥವಾ ಮೂರು ಢಮಾರ್ ಎಂದು ಫೋನ್ ಮಾಡಿದರೇ, ಎಲ್ಲವೂ ಪಾಸ್! ಎಲ್ಲರಿಗೂ ಅಚ್ಚರಿ ನಾನು ಸೇರಿದಂತೆ. ಮೂರು ವರ್ಷವೂ ಪ್ರಥಮ ದರ್ಜೆಯಲ್ಲಿ ಪಾಸಾದೆ.
ಜೀವನದಲ್ಲಿ ಒಂದು ಹಂತ ಮುಗಿದ ಮೇಲೆ ಮತ್ತೊಂದು, ಹಿಂದಿನ ಹಂತವೇ ಚೆನ್ನಾಗಿತ್ತು ಎನಿಸುತ್ತದೆ. ಅರ್ಥವಾಗಲಿಲ್ಲ ಅಲ್ವಾ? ಜೀವನ ಒಂದು ರೀತಿ ಕ್ಯಾಂಡೀ ಕ್ರಶ್ ತರಹ, ಮೊದಲು ಉತ್ಸಾಹವಿರುತ್ತದೆ, ಹಂತ ಮೇಲಕ್ಕೆ ಹೋದಂತೆ ಕಷ್ಟವೆನಿಸುತ್ತದೆ. ಒಮ್ಮೊಮ್ಮೆ ಹಿಂದಿನ ಹಂತದ ಆಟವನ್ನೇ ಆಡೋಣವೆನಿಸುತ್ತದೆ, ಅದಕ್ಕೆ ಬಹಳಷ್ಟು ಜನ ಭೂತಕಾಲವನ್ನು ಪ್ರೀತಿಸುವುದು. ಪಾಸಾದೆ, ಎಂಎಸ್ಸಿ ಒಂದೇ ದಾರಿ! ಇಲ್ಲವೆಂದರೇ ಕೆಲಸ. ಬೆಂಗಳೂರಿಗೆ ಬಂದೆ ಕೆಲಸ ಹುಡುಕುವ ಕಾಯಕ ಅಂಟುಬಿತ್ತು. ನೀವು ಈಗ ನೋಡುತ್ತಿರುವ ಬೆಂಗಳೂರು ಬೇರೆ, ೨೦೦೪ರ ಬೆಂಗಳೂರು ಬೇರೆ. ಆಗ ನನ್ನ ತಲೆಗೆ ಬಂದದ್ದು, ಮೆಡಿಕಲ್ ರೆಪ್, ರೇಪ್ ಅಲ್ಲಾ, ರೆಪ್ರೆಸೆಂಟೇಟಿವ್. ಅದೆಲ್ಲ ಉದ್ಯೋಗದ ಕುರಿತು ಬರೆಯುವಾಗ ಹೇಳುತ್ತೇನೆ. ಕೆಲವು ನಾಟಕೀಯ ಬೆಳವಣಿಗೆಯ ನಂತರ, ಬೆಂಗಳೂರು ವಿವಿಯಲ್ಲಿ ಪರಿಸರ ವಿಜ್ನಾನ ವಿಭಾಗದ ವಿದ್ಯಾರ್ಥಿಯಾದೆ. ವಿವಿಗೆ ಸೇರಿದ್ದೆಲ್ಲಾ ಉದ್ದುದ್ದುದ್ದುದ್ದ ಕಥೆಯಿದೆ, ಅದನ್ನು ಮುಂದೂಡಿರುತ್ತೇನೆ. ಮುಂದೂಡುವುದೇನು ಹೊಸತಲ್ಲ ನನಗೆ. ನಾನು ಮೊದಲೇ ಹೇಳಿದಂತೆ ಹಳ್ಳಿಯಿಂದ ಬಂದವನು, ಇಂಗ್ಲೀಷ್ ಬಾರದವನಾಗಿದ್ದೆ, ಈಗಲೂ ಬರುವುದಿಲ್ಲ, ಸ್ವಲ್ಪ ಸಂಭಾಳಿಸುವಂತಾಗಿದೆ. ನಾನು ಮೈಸೂರಿನಲ್ಲಿ ಎಂಎಸ್ಸಿ ಮಾಡಬೇಕಿತ್ತು, ಅಲ್ಲಿ ಮಾಡಲಿಲ್ಲವೆಂಬ ಕೊರಗು ಸ್ವಲ್ಪ ದಿವಸಕ್ಕಿತ್ತು. ಕೆಲವು ಗೊಂದಲಗಳ ನಡುವೆ ನನಗೆ ಮೈಸೂರಿನಲ್ಲಿ ಸೀಟು ಸಿಗಲಿಲ್ಲ. ನಾನು ಈಗ ಹಿಂದಿರುಗಿ ನೋಡಿದರೇ, ಬೆಂಗಳೂರಿಗೆ ಬಂದದ್ದು ನನ್ನ ಭವಿಷ್ಯದ ಭಾಗ್ಯವಾಯಿತು. ಸಿದ್ದರಾಮಯ್ಯರ ಭಾಗ್ಯ ನನಗೆ ಹತ್ತು ವರ್ಷದ ಹಿಂದೆಯೇ ಲಭಿಸಿತ್ತು.
ನನ್ನ ಬೆಳವಣಿಗೆಗೆ ಸಹಕಾರಿಯಾದದ್ದು, ನನ್ನ ಜೊತೆಯಲ್ಲಿದ್ದ ಎಲ್ಲಾ ಸ್ನೇಹಿತರು, ಉಪನ್ಯಾಸಕರು, ಸಂಶೋಧಕರು ಮತ್ತು ಆಡಳಿತ ಸಿಬ್ಬಂದಿವರ್ಗ. ಸೋಮಶೇಖರ್, ನಂದಿನಿ, ನಾಗರಾಜ್, ಪ್ರಕಾಶ್, ವೆಂಕಟೇಶಣ್ಣ, ಪರಮೇಶ್ ನಾಯ್ಕ್, ಸುನೀತಾ, ಶ್ರೀಧರ್ ಬಾಬು, ದೇವರಾಜು, ಮನಮೋಹನರಾಯರು, ಅಯ್ಯಂಗಾರರು, ಚೆಲುವಣ್ಣ, ಹೀಗೆ ಎಲ್ಲರ ಜೊತೆಗೆ ಹಾಸ್ಟೇಲ್ಲಿನ ನನ್ನ ಸೀನಿಯರ್ ದ್ವಾರಕೀಶ್, ಅಶೋಕ್, ಲಿಂಗರಾಜು, ಕಾಂತರಾಜು ಹೀಗೆ ಹತ್ತಾರು ಜನ ನನಗೆ ಎಲ್ಲಾ ರೀತಿಯ ಧೈರ್ಯ ತುಂಬಿದರು. ಇಂಗ್ಲೀಷ್ ಭಾಷೆ, ಬರವಣಿಗೆ, ಓದುವುದು, ವಿಚಾರ ವಿನೀಮಯ ಅದರಲ್ಲಿಯೂ ಸಮಾಜದ ಬಗ್ಗೆಯ ಕಾಳಜಿ ಹುಟ್ಟಿತು. ಮೂರನೆಯ ಸೆಮಿಸ್ಟರ್ ಬರುವ ಸಮಯಕ್ಕೆ ನಾವು ಪ್ರಾಜೆಕ್ಟ್ ಮಾಡಬೇಕಾಗಿ ಬಂತು. ಆಗ, ನಾಗರಭಾವಿಯಲ್ಲಿರುವ ಐಸೆಕ್ ಸಂಸ್ಥೆಯಿಂದ ಪರಿಸರ ಅರ್ಥಶಾಸ್ತ್ರ ಬೋಧಿಸಲು ವಿಜ್ನಾನಿಗಳು ಬರುತ್ತಿದ್ದರು. ನಮಗೆ ಯಾವಗಲೂ ಇರುವುದಕ್ಕಿಂತ ಇಲ್ಲದೇ ಇರುವುದರ ಬಗ್ಗೆಯೇ ಗೌರವ, ಪ್ರಿತಿ ಹೆಚ್ಚು, ಅದರಂತೆಯೇ, ನಾವು ಎರಡು ವರ್ಷ ಕೇಳಿದ ಉಪನ್ಯಾಸಕರ ಮಾತುಗಳು ಬೋರ್ ಆಗತೊಡಗಿದವು. ಐಸೆಕ್ ರವರ ಪಿಪಿಟಿ ನಮಗೆ ಹಿಡಿಸಿತು. ಅವರು ಪಾಠ ಮಾಡುವ ರೀತಿ, ಉದಾಹರಣೆಗಳು ಜೀವನಕ್ಕೆ ಸನಿಹವಾದವು. ನಾನು ನನ್ನ ಎಂಎಸ್ಸಿ ಪ್ರಾಜೆಕ್ಟ್ ಮಾಡುವುದು ಐಸೆಕ್ ಅಲ್ಲೆಂದು ನಿರ್ಧರಿಸಿದೆ. ನಾನು ಮೊದಲಿಗೆ ಹೋಗಿ ವೆಂಕಟಾಚಲ ಅವರಿಗೆ ನನ್ನ ಆಸೆಯನ್ನು ವ್ಯಕ್ತಪಡಿಸಿದೆ. ಕೊನೆಯ ಎರಡು ಕ್ಲಾಸುಗಳನ್ನು ಪ್ರೋ. ಕೆವಿ ರಾಜು ತೆಗೆದುಕೊಳ್ಳುತ್ತಾರೆ, ಅವರೊಂದಿಗೆ ಮಾತನಾಡಿ ಅವರು ನಮ್ಮ ವಿಭಾಗದ ಮುಖ್ಯಸ್ಥರು ಎಂದರು. ನಮ್ಮ ಸೀನಿಯರ್ ಕೆವಿ ರಾಜುರವರ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದರು. ಅದೊಂದು  ಡಿಸೆಂಬರ್ ತಿಂಗಳ ಒಂದು ಶನಿವಾರ,  ನಾವು ಕ್ಲಾಸಿನಲ್ಲಿ ಕುಳಿತಿದ್ದಾಗ, ಆರು ಅಡಿಗೂ ಎತ್ತರದ ಒಂದು ವ್ಯಕ್ತಿಯ ಆಗಮನವಾಯಿತು. ಅವರ ಗಡಸು ದ್ವನಿ, ವಿಮಾನದಲ್ಲಿ ಮಾತನಾಡುವವರಂತೆಯೇ ಇತ್ತು. ಆ ಒಂದು ಗಂಟೆಯಲ್ಲಿ ನಮ್ಮ ತಲೆಗೆ ಬಿಟ್ಟ ಹುಳು ಇಂದು ಬೆಳೆದು ಅನಕೊಂಡವಾಗಿದೆ. ಅದು ನನ್ನ ಜೀವನದ ಎಚ್ಚರಿಕೆಯ ಗಂಟೆ ಮತ್ತು ಜೀವನಕ್ಕೆ ಹೊಸ ಆಯಾಮ ಕೊಟ್ಟ ಕ್ಷಣ.
ನಾನು ಕ್ಲಾಸ್ ಮುಗಿದ ಮೇಲೆ ಕೆವಿ ರಾಜುರವರ ಹಿಂದೆಯೇ ಹೋದೆ, ನನ್ನೊಂದಿಗೆ ಇನ್ನೂ ನಾಲ್ಕು ಜನ ಸ್ನೇಹಿತರು. ಪ್ರೋಫೇಸರ್ ಬಂದಿರುವುದು ಹಳೇಯ ಒಂದು ಕೈನೆಟಿಕ್ ನಲ್ಲಿ! ಅಚ್ಚರಿ, ಅಷ್ಟೇ ಸಂತಸ. ಯಾವುದೇ ವ್ಯಕ್ತಿ ಮನಸ್ಸಿಗೆ ಹತ್ತಿರವಾಗುವುದು ಅವರುಗಳ ಸರಳತೆಯಿಂದ ಆ ಸರಳತೆ ಅವರಲ್ಲಿತ್ತು. ಅಲ್ಲಿಂದ ನಂತರ ಐಸೆಕ್ ಗೆ ಹೋಗಿ ಮಾತನಾಡಿಕೊಂಡು ಬಂದೆವು. ಅವರ ಆದರ್ಶಗಳು, ಮಾತುಗಳು, ನಡೆತೆ ಬಹಳ ನಿಷ್ಠುರವೆನಿಸಿದರೂ, ವಿದ್ಯಾರ್ಥಿಗಳ ಬದುಕನ್ನು ಬದಲಾಯಿಸಬಳ್ಳ ಸಾಮರ್ಥ್ಯವಿದೆ. ಎಂಥಹ ಕತ್ತೆಯನ್ನು ಕುದುರೆ ಮಾಡಬಲ್ಲ ಶಕ್ತಿಯಿದೆ. ಅವರ ಮಾತುಗಳು ಎಂಥಹವರ ಅಹಂ ಅನ್ನು ಕೆಣಕಿದರೂ, ಬದಕಲ್ಲಿ ಬೆಳೆಯಬೇಕೆನ್ನುವವರಿಗೆ ಮೃಷ್ಟಾನ್ನವಾಗುತ್ತದೆ. ಇದೆಲ್ಲವೂ ಪಿಠೀಕೆಯಾದ ಮೇಲೆ ಸ್ವಲ್ಪ ನೇರ ವಿಷಯವನ್ನು ತಿಳಿಸುತ್ತೇನೆ. ಕೆವಿ ರಾಜು ಅವರು, ಎಲ್ಲರಿಗೂ ಹೇಳುವ ಮೊದಲ ಕೆಲಸ ಅಥವಾ ವಿಷಯ ನೀವು ಏನನ್ನೇ ಮಾಡಬೇಕಾದರೂ ನಿಮ್ಮ ಊರಿನಲ್ಲಿ ಮತ್ತು ನಿಮ್ಮ ಮನೆಯಲ್ಲಿ ಮಾಡಿ. ಉದಾಹರಣೆಗೆ, ನಾನು ಹವಮಾನ ವೈಪರೀತ್ಯ ಅಥವಾ ಕ್ಲೈಮೇಟ್ ಛೇಂಜ್ ಬಗ್ಗೆ ಪ್ರಪಂಚಕ್ಕೆ ತಿಳಿಸಬೇಕೆಂದರೇ ಮೊದಲು ನನ್ನಜ್ಜಿಗೆ ಅರ್ಥ ಮಾಡಿಸಬೇಕು. ಅಷ್ಟು ಸರಳವಾಗಿ ನಮ್ಮ ಮಾತುಕತೆ ಇರಬೇಕೆಂಬುದು ಅವರ ಅನಿಸಿಕೆ. 
ಅಯ್ಯೋ ನಾನು ನಾಲ್ಕು ದಿನಗಳಿಂದ ಇದನ್ನು ಬರೆಯುತ್ತಿದ್ದೇನೆ, ಆದರೇ ಇನ್ನೂ ಮುಗಿಸಲಾಗುತ್ತಿಲ್ಲ. ನನ್ನ ಜೀವನದಲ್ಲಿ ಸ್ವಲ್ಪ ಬದಲಾವಣೆ ಬಂದಿದೆ. ಆದರೂ ಈ ನನ್ನ ಸೋಮಾರಿತನ ಮಾತ್ರ ಬದಲಾಗುತ್ತಿಲ್ಲ. ಅಂತೂ ಐಸೆಕ್ ನಲ್ಲಿ ಪ್ರಾಜೆಕ್ಟ್ ಮಾಡಲು ಅನುಮತಿ ಸಿಕ್ಕಿತು, ಮಾಡಿ ಮುಗಿಸಿದೆವು. ಅದನ್ನು ಮತ್ತೊಂದು ಲೇಖನದಲ್ಲಿ ಪ್ರಸ್ತಾಪಿಸುತ್ತೇನೆ. ಅದೇ ಸಮಯದಲ್ಲಿ ನನಗೆ ಮತ್ತೊಂದು ಅವಕಾಶ ಸಿಕ್ಕಿತು, ಜಾಣ ಎಂಬದೊಂದು ಪತ್ರಿಕೆ. ಒಮ್ಮೆ ಮುಂಜಾನೆ, ಫಿಸಿಕ್ಸ್ ಕ್ಯಾಂಟೀನಿನಲ್ಲಿ ಕುಳಿತಿದ್ದಾಗ ಒಂದು ಪತ್ರಿಕೆ, ವಾರ ಪತ್ರಿಕೆ ಕಣ್ಣಿಗೆ ಬಿತ್ತು. ಅದರಲ್ಲಿ ಬರವಣಿಗೆಗಳು ಬೇಕೆಂದು ಕೇಳಿದ್ದರು, ನಾನು ಅವರಿಗೆ ಫೋನಾಯಿಸಿ, ಒಪ್ಪಿಗೆ ಪಡೆದೆ, ಸುಮಾರು ಆರು ತಿಂಗಳು ಬರೆದುಕೊಟ್ಟೆ. ಮುಂದಿನ ದಿನಗಳಲ್ಲಿ ಪತ್ರಿಕೆಯೇ ಮುಚ್ಚಿ  ಹೋಯಿತು.
ಎಂಎಸ್ಸಿ ಮುಗಿಯುವ ಮುನ್ನವೇ ಕೆಲಸ ಹುಡುಕಲು ಶುರು ಮಾಡಿದೆವು. ವಿದ್ಯಾರ್ಥಿಗಳಲ್ಲಿ ಭರವಸೆ ತುಂಬಬೇಕಿರುವುದು ಗುರುಗಳ ಮತ್ತು ಹಿರಿಯ ವಿದ್ಯಾರ್ಥಿಗಳ ಕರ್ತವ್ಯ. ಆದರೇ, ಪರಿಸರ ವಿಜ್ನಾನ ವಿಭಾಗದಲ್ಲಿ ನಕಾರಾತ್ಮಕವಾಗಿ ತಲೆ ತುಂಬಿದವರೇ ಹೆಚ್ಚು. ಆದ್ದರಿಂದ ಒಡನೆಯೇ ಯಾವುದೋ ಕೆಲಸ ಸಿಕ್ಕರೇ ಸಾಕು, ನಾನು ನಿರುದ್ಯೋಗಿಯಾಗಬಾರದೆಂದು ನಿರ್ಧರಿಸಿ, ಕೊನೆಗೆ ಫುಡ್ ವರ್ಲ್ಡ್ ನಲ್ಲಿಯಾದರೂ ಕೆಲಸ ಸಿಗಲೆಂದು ಬಯಸಿದೆನು. ಅಂತೂ ಕೊನೆಗೆ ಡ್ರೀಮ್ ಸ್ಕೂಲ್ ಫೌಂಡೇಶನ್ ಎಂಬದೊಂದು ಎನ್ ಜಿಓನಲ್ಲಿ ಕೆಲಸ ಸಿಕ್ಕಿತು.
ಇದು ಎಲ್ಲರ ಜೀವನದಲ್ಲಿಯೂ ಇದ್ದೇ ಇದೆ, ಆದರೇ ನನ್ನ ಜೀವದನದಲ್ಲಿ ನಾನು ಅತಿಯಾಗಿ ಮಾಡಿದ ತಪ್ಪು ಇದು. ಯಾವುದೇ ಸಂಸ್ಥೆಗೆ ಕೆಲಸಕ್ಕೆ ಸೇರಿದಾಗ ಅದರ ಬಗ್ಗೆ ನೆಗಟಿವ್ ಆಗಿ ಹೇಳುವವರೇ ಹೆಚ್ಚಿರುತ್ತಾರೆ. ನಾನು ಡಿಎಸ್ ಎಫ಼್ ಗೆ ಸೇರಿದಾಗಲೂ ಇಂಥಹದ್ದೇ ಆಯಿತು. ಅದರ ಜೊತೆಗೆ ಕೆಲಸದಲ್ಲಿ ಯಾವ ಬೆಳವಣಿಗೆಯೂ ಇಲ್ಲವೆನಿಸಿತು. ನಾನು ಮೂರ್ನಾಲ್ಕು ತಿಂಗಳು ಕೆಲಸ ಮಾಡಿದೆ. ಅಲ್ಲಿದ್ದ, ಮೈಥಿಲಿ ಮತ್ತು ಸಾಬೂ ಬಹಳ ಒಳ್ಳೆಯವರು, ಕ್ರೈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದವರು. ನಾನು ಐಸೆಕ್ ನಲ್ಲಿ ಆರು ತಿಂಗಳು ಕೆಲಸ ಅಂದರೇ ಪ್ರಾಜೆಕ್ಟ್ ಕೆಲಸ ಮಾಡಿದ್ದರಿಂದ, ಮುಂದಿನ ದಿನದ ಎಲ್ಲಾ ನನ್ನ ಬಾಸ್ ಗಳು ಕೆವಿ ರಾಜುವಂತಿರಬೇಕೆಂದು ನಿರೀಕ್ಷೆಮಾಡತೊಡಗಿದೆ. ನಾವೆಲ್ಲರೂ ಅಷ್ಟೇ, ಬೇರೆಯದರ ಜೊತೆಗೆ ಹೋಲಿಕೆ ಮಾಡುವುದು, ಇರುವುದನ್ನು ಅನುಭವಿಸದೇ, ಸ್ವೀಕರಿಸದೇ ನೊಂದುಕೊಳ್ಳುವುದು. ಕಡೆಗೆ ನಮ್ಮ ಅಪ್ಪ ಅಮ್ಮನನ್ನು ಬೇರೆಯವರ ಜೊತೆಗೆ ಹೋಲಿಕೆ ಮಾಡಿ, ನಮ್ಮ ತಂದೆ ತಾಯಿಯರು ನನ್ನ ಯೋಗ್ಯತೆಗೆ ತಕ್ಕವರಲ್ಲವೆಂದು ನಿರ್ಧರಿಸಿಬಿಡುತ್ತೇವೆ. ನಾನು ಹಾಗೆಯೇ ಮಾಡಿದೆ, ಆದ್ದರಿಂದ ಐಸೆಕ್ ಬಹಳ ಉತ್ತಮ ಸ್ಥಳವೆನಿಸಿತ್ತು. ದಿಡೀರನೇ, ಐಸೆಕ್ ಗೆ ಬಂದು ಯಾವುದಾದರೂ ಕೆಲಸವಿದೆಯೇ ಎಂದು ವಿಚಾರಿಸಿದೆ. ಆ ದಿನ ನೋಡಿದರೇ ಕೆಲಸಕ್ಕೆ ಸಂದರ್ಶನ ನಡೆಯುತ್ತಿತ್ತು. ನನ್ನ ಬಯೋಡಾಟ ನೀಡಿ, ಒಳಗೆ ಹೋಗಿ ಪರೀಕ್ಷೆ ಬರೆದೆ. ಮಧ್ಯಾಹ್ನವಾಗುವಾಗ ನಾನು ಆಯ್ಕೆಯಾಗಿರುವುದು ಖಚಿತವಾಗಿತ್ತು. ಏನು ಕೆಲಸ ಎಂತೂ ಯಾವುದೂ ಗೊತ್ತಿಲ್ಲ. ಫೀಲ್ಡ್ ಇನ್ವೆಸ್ಟಿಗೇಟರ್ ಕೆಲಸ. ಫೀಲ್ಡ್ ವರ್ಕ್ ನನಗೆ ಬಹಳ ಇಷ್ಟ, ಆದರೇ ಇದರಲ್ಲೇನೋ ನಾನು ದಾರಿ ತಪ್ಪುವಂತೆನಿಸಿತು. ನಾನು ನೇರ ಹೋಗಿ, ಮಧುಶ್ರೀ ಶೇಖರ್ ಬಳಿ ನನ್ನ ಅಳುವನ್ನು ತೋಡಿಕೊಂಡೆ. ನನಗೆ ಈ ಕೆಲಸ ಮಾಡುವುದಕ್ಕೆ ಇಷ್ಟವಿಲ್ಲ, ನನಗೆ ಸಂಶೋಧನೆ, ಬರವಣಿಗೆ ಇಷ್ಟವೆಂದೆ. ಅವರು, ಮಗೂ ಈಗ, ಈ ಕೆಲಸ ಮಾತ್ರವಿರುವುದು, ಆದ್ದರಿಂದ ನನ್ನ ಬಳಿಯಲ್ಲಿ ಒಂದು ಚಿಕ್ಕ ಪ್ರಾಜೆಕ್ಟ್ ಇದೆ ಅದನ್ನು ಒಂದು ಹದಿನೈದು ದಿನಗಳ ನಂತರ ಕೈಗೆತ್ತಿಕೊಳ್ಳುತ್ತೇನೆ, ಆಗ ಬಂದು ನನ್ನನ್ನು ಭೇಟಿ ಮಾಡು ಎಂದರು.
ನಾನು ಬಂದ ದಾರಿಗೆ ಸುಂಕವಿಲ್ಲವೆಂದು ನಡೆದೆ. ಆ ನಡುವೇ, ಉಮೇಶ, ಪುಟ್ಟಸ್ವಾಮಯ್ಯನವರ ಜೊತೆಗೆ ಕೆಲಸಕ್ಕೆ ಆಯ್ಕೆಯಾದ. ಇದು ಮನುಷ್ಯನ ಮತ್ತೊಂದು ದುರ್ಗುಣ. ಹೋಲಿಕೆ ಹೋಲಿಕೆ ಹೋಲಿಕೆ, ಕೀಳರಿಮೆ... ನಾನು ಉಮೇಶನನ್ನು ಹೋಲಿಕೆ ಮಾಡತೊಡಗಿದೆ, ಅಯ್ಯೋ ಅವನಿಗೆ ಕೆಲಸ ಸಿಕ್ಕಿತು?! ನಾನು ಕಳಪೆಯೇ? ಆದರ್ಶಕ್ಕೆ ಬಿದ್ದು, ನಾನು ಸಮಾಜ ಮುಖಿ ಪ್ರಾಜೆಕ್ಟ್ ಮಾಡಿದ್ದೆ, ಅವನು ವೈಜ್ನಾನಿಕ, ಕ್ಲೈಮೇಟ್ ಚೇಂಜ್ ಬಗ್ಗೆ ಅಧ್ಯಯನ ನಡೆಸಿದ್ದ. ಬಿಡು, ಏನೋ ಒಂದು ಆಗುತ್ತದೆ, ಇದು ನನ್ನ ಎಂದಿನ ಡೈಲಾಗ್. ಅದರಂತೆಯೇ, ಮತ್ತೆ ಡಿಎಸ್ ಎಫ್ ಗೆ ಹೋದೆ. ಒಮ್ಮೆ ಅಲ್ಲಿರಬಾರದೆಂದು ನಿರ್ಧರಿಸಿದರೇ ಅಲ್ಲಿರುವುದು ನಿಜಕ್ಕೂ ಕಷ್ಟದ ಕೆಲಸ. ನನಗೆ ಆಗಿದ್ದು ಅಷ್ಟೇ. ನಾನು ಅಲ್ಲಿ ನೆಮ್ಮದಿಯಿಂದ ಮನಸ್ಸಾರೆ ಕೆಲಸ ಮಾಡುವುದು ಬಹಳ ಕಷ್ಟವೆನಿಸಿತ್ತು. ಮತ್ತೆ ಐಸೆಕ್ ಹಿಂದೆ ಬಿದ್ದೆ, ಪದೇ ಪದೇ ಮಧುಶ್ರೀ ಅವರನ್ನು ಭೇಟಿಯಾದೆ. ಉಮೇಶ ನನಗೆ ಬಂದು ಮಾತನಾಡೋ ಎಂದು ಒತ್ತಾಯಿಸಿದ. ಉಮೇಶ ನನಗೆ ಗುರುವಂತೆ ಕಾಣತೊಡಗಿದ. 
ನನ್ನದೊಂದು ಕೆಟ್ಟ ಅಭ್ಯಾಸ ನಾನು ಬೇಗ ಯಾರೊಂದಿಗು ಹೊಂದಿಕೊಳ್ಳುವುದಿಲ್ಲ. ನಾನು ಐಸೆಕ್ ಸೇರಿದ ಶುರುವಿನಲ್ಲಿ, ನನಗೆ ಕಂಪ್ಯೂಟರ್ ಇರಲಿಲ್ಲ, ಕಂಪ್ಯೂಟರ್ ಲ್ಯಾಬಿಗೆ ಹೋಗಬೇಕು, ಲೈಬ್ರರಿಗೆ ಹೋಗಬೇಕು, ವಿಷಯ ಇಷ್ಟಪಡುವಂತಿದ್ದರೂ, ವಾತಾವರಣ ಅದರಲ್ಲಿಯೂ ಪಿಎಚ್ ಡಿ ಮಾಡುತ್ತಿದವರ ಮುಂದೆ ನನ್ನ ಕೀಳರಿಮೆ ಎದ್ದು ಕಾಣುತ್ತಿತ್ತು. ಅದೆಷ್ಟರ ಮಟ್ಟಿಗೆ ಎಂದರೇ, ಬಿಟ್ಟು ಹೋಗೋಣವೆನಿಸಿಬಿಟ್ಟಿತು. ಕೇವಲ ಒಂದೇ ತಿಂಗಳಲ್ಲಿ! ನನಗಿನ್ನೂ ನೆನಪಿದೆ, ಅದೊಂದು ದಿನ ಮಧುಶ್ರೀ ಮೇಡಮ್ ನನ್ನನ್ನು ಹುಡುಕಿ, ನಾನು ಮನೆಗೆ ಹೋಗಿರುವುದು ತಿಳಿದು ಗಾಬರಿಯಾಗಿದ್ದಾರೆ. ಅವರಿಗೆ ಕೆವಿ ರಾಜು ಅವರ ಭಯ ಎಲ್ಲಿ ಇವನು ಕೆಲಸ ಮಾಡದೇ ಮರ್ಯಾದೆ ಕಳೆದುಬಿಡುತ್ತಾನೆಂದು. ಮರು ದಿನ ಬಂದಾಗ ನನಗೆ ಒಂದು ಕೆಲಸ ಹಚ್ಚಿದರು, ಅದನ್ನು ಎಷ್ಟು ಅಚ್ಚು ಕಟ್ಟಾಗಿ ಮಾಡಿದೆನೆಂದರೇ ಖುದ್ದು ಕೆವಿರಾಜು ಮೆಚ್ಚುಗೆ ಪಡಿಸಿದರು. ಮಧುಶ್ರಿ ಅವರಿಗೆ ನನ್ನ ಮೇಲೆ ಅಪಾರ ನಂಬಿಕೆ ಮತ್ತು ವಿಶ್ವಾಸ ಬಂತು. ನನ್ನ ಸೋಮಾರಿತನದಿಂದ ಅವರಿಗೆ ಬೇಸರ ತರಿಸಿರುವುದು ಸತ್ಯಾವಾದರು ನನ್ನನ್ನು ತಮ್ಮ ಮಗನಂತೇ, ಬೇಟಾ ಬೇಟಾ ಎಂದು ಪ್ರೊತ್ಸಾಹಿಸಿದರು. ಪಿಎಚ್ ಡಿ ಮಾಡುವುದಕ್ಕೆ ಮೊದಲು ಹುರಿದುಂಬಿದವರು ಅವರೇ.
ಮಧುಶ್ರೀಯವರು ನನಗೆ ಬೇಕಿದ್ದ ಎಲ್ಲಾ ಸ್ವತಂತ್ರ್ಯವನ್ನೂ ನೀಡಿದರು. ಆ ಸಮಯದಲ್ಲಿ ನಾನು ಜೊತೆಯಲ್ಲಿ ಕೆಲಸ ಮಾಡಿದವರೆಲ್ಲರಿಂದಲೂ ಬಹಳಷ್ಟು ಕಲಿತೆ ಅವರಲ್ಲಿ ಪ್ರಮುಖರು, ಲೆನಿನ್, ಸುನಿಲ್ ನಾಟಿಯಾಲ್, ಬಿಬು ಪ್ರಸಾದ್, ನೈನನ್, ಗಾಯತ್ರಿದೇವಿ, ಮಾನಸಿ, ಲತಾ, ಪದ್ಮರವರು. ಇನ್ನೂ ಅನೇಕರಿದ್ದಾರೆ ಅವರೆಲ್ಲರ ಹೆಸರು ಸೇರಿಸುತ್ತಾ ಹೋದರೇ ಇದು ಇಂದಿಗೆ ಮುಗಿಯುದಿಲ್ಲ. ಆ ಸಮಯದಲ್ಲಿಯೇ ನಾನು ಪಿಎಚ್ ಡಿ ಮಾಡುವುದಕ್ಕೆ ನಿರ್ಧರಿಸಿದೆ, ಮೊದಲಿಗೆ ಆಸ್ಟ್ರೇಲಿಯಾದಲ್ಲಿ ಮಾಡುವುದೆಂಬ ಆಸೆಯಿತ್ತು. ಬಹಳಷ್ಟು ಅರ್ಜಿಯನ್ನು ಹಾಕಿದೆ. ಮತ್ತದು ದಿನ ದಿನಕ್ಕೇ ಮುಂದೂಡುತ್ತಲೇ ಬಂತು, ಆ ನಡುವೆ ಕೆಲವರ ಸಲಹೆಯಂತೆ ಇಲ್ಲಿಯೇ ಯಾವುದಾದರೊಂದು ವಿವಿಯಲ್ಲಿ ರಿಜಿಸ್ಟರ್ ಮಾಡಿಸು ನಂತರ ಸುಲಭವಾಗುತ್ತದೆ, ಇಲ್ಲವಾದರೇ ಇಂಗ್ಲೀಷ್ ಪರೀಕ್ಷೆಗಳಾದ, ಟೋಫೆಲ್, ಜಿಆರ್ ಐ, ಬೇಕೆಂದರು. ಅವರ ಸಲಹೆಯಂತೆ, ನಾನು ಮೈಸೂರು ವಿವಿಯನ್ನು ಆಯ್ದುಕೊಂಡೆ. ಅದರ ನಡುವೆ ಐಸೆಕ್ ನಲ್ಲಿಯೂ ಪ್ರಯತ್ನಪಟ್ಟೆ. ಐಸೆಕ್ ನಲ್ಲಿ ಮಾಡಿದರೇ, ಅದು ಡೆವೆಲಪ್ ಮೆಂಟ್ ವಿಷಯದ ಪಿಎಚ್ ಡಿ ಆದ್ದರಿಂದ ನೀನು ಪರಿಸರ ವಿಜ್ನಾನದಲ್ಲಿ ಮಾಡೆಂದರು.
ಆಗ ನಾನು ಬಂದದ್ದು ನಮ್ಮ ಗುರುಗಳಾದ ಶ್ರೀಕಂಠಸ್ವಾಮಿಯವರ ಬಳಿಗೆ. ಹಿಂದಿರುಗಿ ನೋಡಿದರೆ ನನ್ನ ಪೆದ್ದುತನ ಹಾರಾಡುತ್ತಿದೆ. ನಾನು ಪಿಎಚ್ ಡಿಗೆ ಸೇರುವುದಕ್ಕೆ, ಇಲ್ಲ ಸಲ್ಲದ ಬೇಕಿಲ್ಲದ ಎಲ್ಲಾ ಸಂಪರ್ಕಗಳನ್ನು ಉಪಯೋಗಿಸಿ ಅವರಿಂದ ರೆಕ್ಮಂಡೇಶನ್ ಮಾಡಿಸಿದೆ. ಅದು ನಮ್ಮ ತಾಲ್ಲೂಕು ಶಾಸಕ, ಎಂಎಲ್ ಸಿ ಮರಿತಿಬ್ಬೇಗೌಡ, ಶಾಸಕರಾದ ಶಂಕರಲಿಂಗೇಗೌಡರ ತನಕ...ಅಚ್ಚರಿ ಮತ್ತು ನಗು. ನಾನು ಪಿಎಚ್ ಡಿಗೆ ಸೇರಿದ್ದು, ೨೦೦೭ರಲ್ಲಿ. ಮುಂದಿನ ವರ್ಷ ಎಂದರೇ ೨೦೦೮ರ ಅಕ್ಟೋಬರ್ ತಿಂಗಳಲ್ಲಿ ಹೈದರಾಬಾದಿನ ಐರಾಪ್ ಸಂಸ್ಥೆಗೆ ಸೇರಿದೆ. ದಿನೇಶ್ ಕುಮಾರ ಜೊತೆ ಕೆಲಸ ಮಾಡುವಾಗ ಇಲ್ಲಿನ ತನಕ ಇದ್ದ ನನ್ನೆಲ್ಲಾ ಗುರುಗಳು ಬಾಸ್ ಗಳು ಕಳಪೆಯೆನಿಸತೊಡಗಿದರು. ಯಾರೂ ಕಳಪೆಯಿಲ್ಲ, ಅದು ನನ್ನ ಊಹೆ ಮತ್ತು ಭ್ರಮೆಯಷ್ಟೇ! ನಾನು ಶ್ರೀಕಂಠಸ್ವಾಮಿಯವರ ಜೊತೆ ಜಗಳ ಮಾಡಿಕೊಂಡು ನಿಮ್ಮ ಪಿಎಚ್ ಡಿ ಬೇಡವೆಂದೆ. ಪಾಪ ಅವರು ಅಂದು ನನ್ನ ಮೇಲೆ ಕೋಪ ತೀರಿಸಿಕೊಂಡಿದ್ದರೇ ಪಿಎಚ್ ಡಿ ನನ್ನ ಕನಸಾಗುತ್ತಿತ್ತು.
ದಿನೇಶ್ ಜೊತೆ ಕೆಲಸ ಮಾಡುವಾಗ ವಿಷಯದ ಕಡೆಗೆ ಪ್ರಪಂಚವೆಲ್ಲಾ ನೋಡುವ ದಿಕ್ಕನ್ನೇ ಬದಲಾಯಿಸುವ ಶಕ್ತಿ ಅವರ ಅನಾಲಿಸಿಸ್ ಗೆ ಇತ್ತು. ಬಹಳ ಶ್ರಮಜೀವಿ, ಅವರಿಂದ ಕಲಿತಿದ್ದು ಬಹಳವಿದೆ. ಅವರ ಜೊತೆಯಲ್ಲಿದ್ದ, ಸಿವಮೋಹನ, ನಿತಿನ್, ಬಿನು ಕುಮಾರ್, ಶ್ರೀನಿವಾಸ್, ನಿರಂಜನ್, ಮಾಧವಿ, ಶರೀಫ್ ಎಲ್ಲರೂ ಅಪ್ರತಿಮರು.
ನನಗೆ ೨೦೧೦ ರ ಸಮಯಕ್ಕೆ ಪಿಎಚ್ ಡಿಯ ಮೇಲೆ ಮತ್ತೆ ಪ್ರೀತಿ ಬಂತು. ಆದ್ದರಿಂದ, ಐರಾಪ್ ಬಿಡುವ ನಿರ್ಧಾರ ಮಾಡಿದೆ. ಶುರುವಿನಲ್ಲಿ ಶ್ರೀಕಂಠಸ್ವಾಮಿಗಳು ಕೋಪ ತೋರಿದರೂ, ನನ್ನ ಪೇಪರ್ ಗಳು, ಬರವಣಿಗೆಗಳು ಅವರ ಮೆಚ್ಚುಗೆ ಪಡೆದವು. ಅವರ ಬಾಯಿಯಿಂದಲೇ ಬಹಳಷ್ಟು ಬಾರಿ ಹೇಳಿದ್ದಾರೆ ಒಳ್ಳೆ ಕೆಲಸಗಾರ ಆದರೇ ದುರಹಂಕಾರಿಯೆಂದು. ಪಿಎಚ್ ಡಿ ಯಶಸ್ವಿಯಾಗುವುದಕ್ಕೆ, ಹಲವಾರು ಜನರ ಸಹಾಯ ಸಹಾಕಾರವಿದೆ, ಅದರಲ್ಲಿ, ನಂದ, ವಿಜಿ, ಮಾರುತಿ, ರೆಜಿನಾ, ಬೇಲಾ, ದುರ್ಗೇಶ್, ಪವಿತ್ರ ರೆಡ್ದಿ, ಕುಮಾರ್, ವಿಜಯ್, ಲೆನಿನ್, ವೆಂಕಟೇಶ್,  ಉಮೇಶ್, ಮಾನಸಿ, ಸವಿತಾ ಮುಖ್ಯವಾದವರು.

ಅಲ್ಪ ಹಣಕ್ಕೆ, ನಾನು ಆರ್ಘ್ಯಂನಲ್ಲಿ ಕೆಲಸ ಮಾಡಿದೆ. ಅಲ್ಲಿ ನಾಗ ಶ್ರೀನಿವಾಸ್, ಮೋಹನ್, ವಿಜಯ್, ಮನೋಹರ್ ಹೀಗೆ ಹತ್ತು ಹಲವರಿಂದ ಬಹಳಷ್ಟೂ ಕಲಿತೆ.

ಜೀವನಕ್ಕೆ ಮತ್ತೊಂದು ಆಯಾಮ ಕೊಟ್ಟಿದ್ದ್, ಡೆವಲಪ್ ಫೌಂಡೇಶನ್ ಕೆಲಸ. ಅಲ್ಲಿ ಕೆಲಸ ಮಾಡುವಾಗ ಅದೆಷ್ಟು ಬುದ್ದಿ ಜೀವಿಗಳು, ವೈಚಾರಿಗಳೊಡನೆಯ ಸಂಪರ್ಕ ನನ್ನನ್ನು ಮತ್ತೊಂದು ಹಂತಕ್ಕೆ ಕರೆದೊಯ್ಯಿತು. ಅಲ್ಲಿನ ಬಾಸ್ ಎಂಪಿ ಕುಮಾರ ಬಣ್ಣಿಸಲಾಗದ ವ್ಯಕ್ತಿತ್ವ, ಅವರು ಕೋಟ್ಯಾಂತರ ರೂಪಾಯಿಯ ವಹಿವಾಟು ನಡೆಸುವ ಕಂಪನಿಯ ಮುಖ್ಯಸ್ಥರಾಗಿದ್ದು ಅವರ ಸರಳತೆ ಮತ್ತು ಸಾಮಾಜಮುಖಿ ಕೆಲಸದಲ್ಲಿನ ಬದ್ದತೆ ನನ್ನನ್ನು ಆಕರ್ಷಿಸಿತು. ಅದೇ ಸಮಯದಲ್ಲಿ ನನತೆ ನಂಟು ಬೆಳೆದ ಮತ್ತು ನಾನು ಕಲಿತವರ ಹೆಸರನ್ನು ಪ್ರಸ್ತಾಪಿಸುವುದು ಅವಶ್ಯಕ, ವಿದ್ಯಾ, ಚೈತ್ರ, ಅಶ್ವಿನಿ, ನಾಡ್ಕರ್ನಿ, ಎನ್ ಎಸ್ ಎಸ್ ನಾರಾಯಣ, ನಲ್ಲತಂಬಿ, ಶೇಖರ್, ಬಾಲ, ವಿನಯಚಂದ್ರ, ಸಂದೀಪ್, ಚಂದ್ರ ಪ್ರಿಂಟರ್,  ದೇಶಪಾಂಡೆ, ಹೀಗೆಯೇ ಸಾವಿರಾರು ಜನರು ನನ್ನ ಸಂತೋಷಕ್ಕೆ ನೆಮ್ಮದಿಗೆ ದಾರಿ ಮಾಡಿಕೊಟ್ಟಿದ್ದೀರಿ. ನಿಮ್ಮ ಹೆಸರು ಇಲ್ಲಿ ಪ್ರಸ್ತಾಪವಾಗಿಲ್ಲವೆಂದರೇ ನನ್ನ ಹೃದಯದಲ್ಲಿಲ್ಲವೆಂದು ಅರ್ಥೈಸಿಕೊಳ್ಳಬೇಡಿ.

ನಾನು ನನ್ನ ಸಂಸ್ಥೆಯ ಹುಟ್ಟಿನ ಬಗ್ಗೆ ತಿಳಿಸಿಲ್ಲ, ಅದಕ್ಕೆ ಮುಖ್ಯ ಕಾರಣರಾದವರಲ್ಲಿ, ಅಭಿನಂದನ್, ನನ್ನ ತಂದೆ, ನನ್ನ ಭಾವ, ಬಿನು ಕುಮಾರ್, ಶರೀಫ್, ರೆಜಿನಾ, ಪದ್ಮನಾಭ, ಇಕೊ ಅಗ್ರಿ ಸಂಸ್ಥೆ, ಬೆಟ್ಟಪ್ಪ, ತ್ರೀಚೂರಿನ ದೀಷ್ಣ ಸಂಸ್ಥೆ, ಮತ್ತೂ ನನ್ನೆಲ್ಲಾ ಶತ್ರುಗಳು (ಇದ್ದರೇ) ಮತ್ತು ಮಿತ್ರರು. ಈ ಲೇಖನ ಬಹಳ ದಿನಗಳ ನಂತರ ಬರೆದಿರುವುದರಿಂದ ಸ್ವಲ್ಪ ವ್ಯಾಕರಣ ಮತ್ತು ಓಟದ ತಪ್ಪುಗಳಿರಬಹುದೆಂಬುದು ನನ್ನ ಅನಿಸಿಕೆ, ಅವುಗಳನ್ನು ತಿದ್ದುಕೊಂಡು ಓದಿಕೊಳ್ಳೆಬೇಕು. ನನ್ನ ಈ ದಿನದ ಬದುಕಿಗೆ ಸಹಕರಿಸಿರುವ ಎಲ್ಲರಿಗೂ ನಾನು ಚಿರ ಋಣಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...